ಭಾನುವಾರ, ಡಿಸೆಂಬರ್ 25, 2011

೨೦೧೧ ನೇ ಸಾಲಿನ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಬೆಳಗಲ್ ವೀರಣ್ಣ


ಸಿ. ಮಂಜುನಾಥ್, ಬಳ್ಳಾರಿ


ಸಾಂಸ್ಕೃತಿಕ ಪರಂಪರೆಯ ಸಂಪದ್ಭರಿತ ಜಿಲ್ಲೆ ಬಳ್ಳಾರಿ! ಕನ್ನಡದ ಕಲೆಯ ಬೀಡಾದ ಬಳ್ಳಾರಿ ಹಿಂದಿನಿಂದಲೂ ಸಂಗೀತ, ನಾಟಕ, ಜಾನಪದ ಕಲೆ ಮತ್ತು ಸಂಸ್ಕೃತಿಗಳ ತವರೂರಾಗಿದೆ. ಇಂತಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಗಮನ ಸೆಳೆಯುವ ಹೆಸರು ’ಜಾನಪದ ಶ್ರೀ’ ಬೆಳಗಲ್ ವೀರಣ್ಣ ಅವರದು. ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಬೆಳಗಲ್ ವೀರಣ್ಣ ಅವರು ನಶಿಸಿಹೋಗುತ್ತಿರುವ ಜನಪದ ಕಲೆಗಳಲ್ಲಿ ಒಂದಾಗಿರುವ ತೊಗಲುಗೊಂಬೆಯಾಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಮೂಲಕ ಕನ್ನಡ ನಾಡಿಗೆ, ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅನಕ್ಷರಸ್ತ ಸಿಳ್ಳೇಕ್ಯಾತ ಜನಾಂಗದಲ್ಲಿ ಹುಟ್ಟಿದ ವೀರಣ್ಣ ಅವರ ಪೂರ್ವಜರು ಮಹಾನ್ ಕಲಾವಿದರೇ ಆಗಿದ್ದರು. ತಂದೆ ದಿ. ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು ಅಲ್ಲದೆ ಬಯಲಾಟದ ಸ್ತ್ರೀ ಪಾತ್ರ ವೇಷಧಾರಿಯಾಗಿ ಹೆಸರು ಮಾಡಿದ್ದರು. ಇವರ ಅಜ್ಜ ಗಂಜಿ ಹನುಮಂತಪ್ಪ ಜ್ಯೋತಿಷ್ಯ ಹಾಗು ರಮಲ ಪಂಡಿತರು.

ಬಾಲಕ ವೀರಣ್ಣ ತಂದೆಯ ಬಯಲಾಟದ ವಿದ್ಯೆಯನ್ನು ರೂಢಿಸಿ ಕೊಂಡು ಹಳ್ಳಿಯ ಸುತ್ತಮುತ್ತಲಿನ ಭಜನೆ ಹಾಡುಗಾರಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಧ್ವನಿ ಹಾಗು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಗಮಕ ಕಲಾನಿಧಿ ದಿ. ಜೋಳದರಾಶಿ ದೊಡ್ಡನಗೌಡರು, ರಂಗ ಕರ್ಮಿ ಸಿಡಗಿನಮೊಳ ದಿ. ಚಂದ್ರಯ್ಯ ಸ್ವಾಮಿ ತಮ್ಮ ಕಂಪನಿಯ ನಾಟಕಗಳಿಗೆ ಹುಟ್ಟು ಕಲಾವಿದ ವೀರಣ್ಣನವರನ್ನು ಸೇರಿಸಿ ಕೊಂಡು ಪ್ರೋತ್ಸಾಹಿಸಿದರು.ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದು ಕೊಂಡ ವೀರಣ್ಣನವರು ಯಾವುದೇ ಶಾಲೆಗೆ ಹೋಗಿ ಅಕ್ಷರ ಕಲಿತವರಲ್ಲ. ಅವರು ಕಲಿತದ್ದೆಲ್ಲಾ ರಂಗಭೂಮಿ ಮತ್ತು ಬದುಕಿನ ಅನುಭವದ ಪಾಠದಿಂದ! ಗುರುವರ್ಯ ವೈ. ಎಂ. ಚಂದ್ರಯ್ಯಸ್ವಾಮಿ ಅವರು ಕಲಿಸಿದ ವಿದ್ಯೆಯೇ ವೀರಣ್ಣನವರ ಶಿಕ್ಷಣ! ಈ ಜ್ಞಾನವೇ ವೀರಣ್ಣ ಅವರನ್ನು ಪುರಾಣ ಮತ್ತು ಆಧುನಿಕ ಸಾಹಿತ್ಯವನ್ನು ಅರಿಯುವ ಶಕ್ತಿಯನ್ನು ನೀಡಿದೆ ಎಂದರೆ ಅತಿಶಯೋಕ್ತಿ ಅಲ್ಲ.


ರಂಗಭೂಮಿ ಸೇವೆ: ರಂಗಭೂಮಿಯ ನಂಟು ವೀರಣ್ಣ ಅವರನ್ನು ಸುಮ್ಮನೆ ಬಿಡಲಿಲ್ಲ. ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿಯುವಂತೆ ಮಾಡಿತು. ಶ್ರೀ ಹೊನ್ನಪ್ಪ ಭಾಗವತರ ಶ್ರೀ ಉಮಾ ಮಹೇಶ್ವರ ನಾಟ್ಯ ಸಂಘ, ಬಳ್ಳಾರಿಯ ಲಲಿತಮ್ಮ ಅವರ ಶ್ರೀ ಲಲಿತಕಲಾ ನಾಟ್ಯ ಸಂಘ, ಚಂದ್ರಯ್ಯ ಸ್ವಾಮಿಯವರ ಶ್ರೀ ನಟರಾಜ ನಾಟಕ ಮಂಡಳಿ ಸೇರಿದಂತೆ ಹಲವು ಕಂಪನಿಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸುವ ಮೂಲಕ ನಟನೆಯಲ್ಲಿ ಪಳಗಿದರು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕರಾಗಿ, ಹಾಸ್ಯನಟರಾಗಿ ಗಮನ ಸೆಳೆದರು.

ಹೆಸರು ತಂದು ಕೊಟ್ಟ ಶಕುನಿ: ದಿ. ಕಂದಗಲ್ಲು ಹನುಮಂತರಾಯರ ’ರಕ್ತರಾತ್ರಿ’ ನಾಟಕದ ಶಕುನಿ ಪಾತ್ರ ವೀರಣ್ಣ ಅವರಿಗೆ ಅಪಾರ ಯಶಸ್ಸನ್ನು ಜನಪ್ರಿಯತೆಯನ್ನು ತಂದುಕೊಟ್ಟ ಪಾತ್ರ. ’ಅಣ್ಣತಂಗಿ’ಯಲ್ಲಿ ಖಾಸಿಂನ ಪಾತ್ರ, ’ಟಿಪ್ಪು ಸುಲ್ತಾನ್’ ನಾಟಕದಲ್ಲಿ ಮೀರ್ ಸಾದಿಕ್‌ನ ಪಾತ್ರ ಭಾರಿ ಜನ ಪ್ರಿಯತೆಯನ್ನು ತಂದುಕೊಟ್ಟವು. ಹಲವು ನಾಟಕ ಕಂಪನಿಗಳಲ್ಲಿ ದುಡಿದ ಅನುಭವಿದ್ದ ವೀರಣ್ಣ ತಮ್ಮದೇ ಆದ ’ನಾಟಕ ಕಲಾ ಮಿತ್ರ ಮಂಡಳಿ’ ಕಂಪನಿಯನ್ನು ಆರಂಭಿಸಿ ಎರಡು ದಶಕಕ್ಕೂ ಹೆಚ್ಚಿನ ಕಾಲ ನಡೆಸಿದ್ದು ಉಲ್ಲೇಖಾರ್ಹ. ರಂಗಭೂಮಿಯಲ್ಲಿ ಸಿಹಿಗಿಂತ ಕಹಿಯನ್ನು ಹೆಚ್ಚು ಉಂಡಿದ್ದ ವೀರಣ್ಣ ಅವರು ೧೯೮೦ ರಲ್ಲಿ ಸರಕಾರದಿಂದ ಏನಾದರೂ ನೆರವು ದೊರೆಯ ಬಹುದೆಂಬ ಆಸೆ ಹೊತ್ತು ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ಬದಲಾದ ಪರಿಸ್ಥಿತಿಯಲ್ಲಿ ರಂಗಭೂಮಿಯಿಂದ ಜಾನಪದ ರಂಗಕ್ಕೆ ದಿಕ್ಕು ಬದಲಾಯಿಸಿದ್ದು ರೋಚಕ. ತಮ್ಮ ಪೂರ್ವಜರ ಕಲೆ ತೊಗಲುಬೊಂಬೆಯಾಟದತ್ತ ಮುಖ ಮಾಡಿದ್ದು ವೈಶಿಷ್ಟವೇ ಸರಿ! ಅಂದಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ವಿಜಯ ಸಾಸ್‌ನೂರ ಅವರು ಕರ್ನಾಟಕದ ಅಪರೂಪದ ಕಲೆಯಾದ ತೊಗಲು ಗೊಂಬೆಯಾಟವನ್ನು ಪುನರ್‌ಜೀವನ ಗೊಳಿಸಲು ಸಲಹೆ ನೀಡಿದರು. ಸಾಸ್‌ನೂರ್ ಅವರ ಮಾತುಗಳಿಂದ ಪ್ರೇರಿತರಾದ ವೀರಣ್ಣ ಅವರು ತಡಮಾಡಲಿಲ್ಲ. ತಕ್ಷಣ ಬಳ್ಳಾರಿ ಬಸ್ ಹತ್ತಿದರು. ತಮ್ಮ ಹತ್ತಿರದ ಸಂಬಂಧಿ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೊಗಲು ಬೊಂಬೆ ಕಲಾವಿದ ದಿ. ಹೂಲೆಪ್ಪನವರ ಸಹಕಾರದಿಂದ ಕೆಲವೇ ದಿನಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಮಾಯಣ ಕಥಾಪ್ರಸಂಗ ’ಪಂಚವಟಿ’ ತೊಗಲುಗೊಂಬೆಯಾಟ ಪ್ರದರ್ಶಿಸುವ ಮೂಲಕ ದಾಖಲೆಯನ್ನೆ ನಿರ್ಮಿಸಿದರು ವೀರಣ್ಣ!

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಕಮಲಾದೇವಿ ಚಟೋಪಾಧ್ಯಾಯ ಅವರು ನೀಡಿದ ಪ್ರೋತ್ಸಾಹ, ಆರ್ಥಿಕ ಸಹಾಯ ಮತ್ತು ಅಂದಿನ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಎಚ್. ಎಲ್. ನಾಗೇಗೌಡರ ಅತ್ಯುತ್ತಮ ಸಲಹೆ ಮತ್ತು ಪ್ರೋತ್ಸಾಹಗಳಿಂದ ವೀರಣ್ಣ ಅವರ ತೊಗಲುಗೊಂಬೆಯಾಟ ಸಮರ್ಥ ರೀತಿಯಲ್ಲಿ ನೆಲೆ ನಿಲ್ಲಲು ಕಾರಣವಾಯಿತು. ಇದೇ ಸಂದರ್ಭದಲ್ಲಿ ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳವನ್ನು ಆರಂಭಿಸಿದ ಬಳಿಕ ವೀರಣ್ಣ ಹಿಂತಿರುಗಿ ನೋಡಲೇ ಇಲ್ಲ. ಸಾಹಿತಿ ವೈ. ರಾಘವೇಂದ್ರ ರಾವ್ ಮತ್ತು ಸಂಡೂರಿನ ನಾಡೋಜ ವಿ.ಟಿ. ಕಾಳೆ ಅವರ ಸಹಾಯ ದೊರಕಿತು. ಬಳಿಕ ವೀರಣ್ಣನವರ ಪೂರ್ಣ ಕುಟುಂಬ ಗೊಂಬೆ ಕಲಾವಿದರಾಗಿ ರೂಪಗೊಂಡಿತು. ವೀರಣ್ಣ ಅವರ ಪತ್ನಿ ಶ್ರೀಮತಿ ಮಹಾಲಿಂಗಮ್ಮ, ಸಾಹಿತ್ಯ ಹಾಗು ಸಂಗೀತದಲ್ಲಿ ಎಂ. ಎ. ಪದವಿಗಳಿಸಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪುತ್ರ ಬಿ. ವಿ. ಪ್ರಕಾಶ್, ಮಕ್ಕಳಾದ ಬಿ.ವಿ. ಮಹೇಶ್, ಬಿ.ವಿ. ಮಲ್ಲಿಕಾರ್ಜುನ, ಬಿ.ವಿ. ಹನುಮಂತ ಹಾಗು ಮಗಳು ಲಕ್ಷ್ಮಿದೇವಿ ಗೊಂಬೆ ತಯಾರಿಕೆ, ಗೊಂಬೆಯಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ತಮ್ಮ ತಂದೆಗೆ ಶಕ್ತಿ ತುಂಬಿದವರು.ನಾಡಿನ ಹಿರಿಯ ವಿದ್ವ್ವಾಂಸರಾದ ಡಾ. ಎಂ.ಎಂ. ಕಲ್ಬುರ್ಗಿ ಮತ್ತು ಡಾ. ಎಚ್. ಜೆ ಲಕ್ಕಪ್ಪ ಗೌಡರು ವೀರಣ್ಣನವರಿಗೆ ಸಾಹಿತ್ಯವನ್ನೊದಗಿಸಿ ಹತ್ತು ಹಲವು ಪ್ರಯೋಗಗಳ ಯಶಸ್ವಿಗೆ ಕಾರಣರಾಗಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡ ಅವರು ಭಾರತ ಸ್ವತಂತ್ರ ಸಂಗ್ರಾಮ ತೊಗಲು ಗೊಂಬೆಯಾಟಕ್ಕೆ ಪ್ರೋತ್ಸಾಹಿಸಿದ ಪರಿಣಾಮ ವೀರಣ್ಣನವರ ಗೊಂಬೆಯಾಟ ಕೇವಲ ಪೌರಾಣಿಕ ಪ್ರಸಂಗಗಳಿಗೆ ಮೀಸಲಾಗದೆ ಐತಿಹಾಸಿಕ, ಮತ್ತು ಸಾಮಾಜಿಕ ಕಥಾ ಪ್ರಸಂಗಗಳನ್ನೊಳಗೊಂಡು ವ್ಯಾಪಕವಾಗಿ ಬೆಳೆಯಲು ಸಹಕಾರಿಯಾಯಿತು.

ಮುಖ್ಯವಾದ ಕಥಾ ಪ್ರಸಂಗಗಳು: ಭಾರತ ಸ್ವತಂತ್ರ ಸಂಗ್ರಾಮ, ಬಾಪು ಪ್ರವಾದಿ ಬಸವೇಶ್ವರ , ಕಿತ್ತೂರು ಚೆನ್ನಮ್ಮ ಪ್ರಸಂಗಗಳಲ್ಲದೆ ಜನತೆಯಲ್ಲಿ ಕೃಷಿ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಸಾಕ್ಷರತಾ ಆಂದೋಲನ, ಕಬ್ಬಿನ ಬೆಳೆ, ಕುಟುಂಬ ನಿಯಂತ್ರಣ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯ(ಆರ್.ಸಿ.ಎಚ್.), ಏಡ್ಸ್ ಜನಜಾಗೃತಿ, ಪಲ್ಸ್ ಪೋಲಿಯೋ.(ಪೋಲಿಯೋ ನಿಯಂತ್ರಣ), ಮಲೇರಿಯ, ಡೇಂಗ್ಯು ಜ್ವರ. ಮದ್ಯ ವ್ಯಸನ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತು ತಮ್ಮ ತೊಗಲು ಗೊಬೆಯಾಟದ ಮೂಲಕ ಜನರಿಗೆ ಅರಿವು ಮೂಡಿಸುವಲ್ಲೂ ವೀರಣ್ಣ ಸಫಲರಾಗಿದ್ದಾರೆ. ಅದರಲ್ಲೂ ಸ್ವಾತಂತ್ರ ಸಂಗ್ರಾಮ, ಮಹಾತ್ಮಾ ಗಾಂಧೀಜಿ, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲು ಗೊಂಬೆಯಾಟದ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳೆನಿಸಿವೆ. ಹಳೆಯ ಸಂಪ್ರದಾಯಿಕ ಕಲೆಯನ್ನು ಹೇಗೆ ಹೊಸ ಪ್ರಯೋಗಗಳಿಗೆ ಬಳಸಿಕೊಳ್ಳಬಹುದೆಂಬುದಕ್ಕೆ ಮೇಲಿನ ಈ ಪ್ರಯೋಗಗಳೇ ಸಾಕ್ಷಿಯಾಗಿವೆ.

ಸದಾ ಹೊಸತನ, ಪ್ರಯೋಗಗಳತ್ತ ಮುಖ ಮಾಡುವ ವೀರಣ್ಣ, ಗೌತಮ ಬುಧ್ದ, ವಿವೇಕಾನಂದ, ಅಂಬೇಡ್ಕರ್ ರೂಪಕಗಳನ್ನು ಸಿದ್ಧ ಪಡಿಸುವಲ್ಲಿ ನಿರತರಾಗಿದ್ದಾರೆ. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ’ಕಾನೀನ’, ಶ್ರೀ ರಾಮಾಯಣ ದರ್ಶನಂ ಕೃತಿಯ ’ಲಂಕಾದಹನಂ’ ರೂಪಕವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

ವಿದೇಶಗಳಲ್ಲೂ ಪ್ರದರ್ಶನ: ೨೦೦೮ರಲ್ಲಿ ಸ್ವಿಟ್ಝರ್‌ಲೆಂಡ್ ಪ್ರವಾಸ ಕೈಗೊಂಡು, ಜೂರಿಕ್ ನಗರದ ರೈಟ್ ಬರ್ಗ್ ಮ್ಯುಸಿಯಂನಲ್ಲಿ ೨೦೦೮ರ ಜೂ. ೨೪ ರಿಂದ ಜು. ೭ ರವರೆಗೆ ರಾಮಾಯಣದ ಪಂಚವಟಿ ಪ್ರಸಂಗದ ’ಸೀತಾಪಹರಣ’ದ ಪ್ರಸಂಗ ಮತ್ತು ’ಮಹಾತ್ಮಾ ಗಾಂಧೀಜಿ’ಯವರ ಕಥೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಇದೀಗ ಜರ್ಮನಿ ಪ್ರವಾಸ ಕೈಗೊಂಡಿರುವ ಬೆಳಗಲ್ ವೀರಣ್ಣ ಅವರು ಭಾರತದ ಗರಿಮೆ ಹಿರಿಮೆಯನ್ನು ಸಾರುತ್ತಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನ, ಅಪ್ನಾ ಉತ್ಸವ್ , ಚಂಡೀಗಢದ ಪಂಜಾಬ್ ವಿಶ್ವ ವಿದ್ಯಾಲಯ, ಗಾಂಧೀ ಸ್ಮೃತಿ ಮತ್ತು ದರ್ಶನ ಸಮಿತಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಸೇರಿದಂತೆ ಆಂಧ್ರ ಪ್ರದೇಶ, ತಮಿಳನಾಡು, ಕೇರಳ, ಬಿಹಾರ್, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಪ್ರಶಸ್ತಿ- ಪುರಸ್ಕಾರಗಳು: ವೀರಣ್ಣ ಅವರ ಪ್ರತಿಭೆ, ಸಾಧನೆಗೆ ಅರಸಿ ಬಂದ ಪ್ರಶಸ್ತಿ- ಪುರಸ್ಕಾರ ಸಮ್ಮಾನಗಳಿಗೆ ಲೆಕ್ಕವಿಲ್ಲ. ೧೯೯೨ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. , ೧೯೯೧ ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ., ೨೦೦೦ ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ., ೨೦೦೭ನೇ ಸಾಲಿನಲ್ಲಿ ’ಜಾನಪದ ಶ್ರೀ’ ಪ್ರಶಸ್ತಿ ಲಭಿಸಿವೆ. ಜತೆಗೆ ವೀರಣ್ಣ ಅವರು ಎರಡು ಅವಧಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಜಾನಪದ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ಸಲ್ಲಿಸಿರುವುದು ಗಮನಾರ್ಹ.

ಕೇಂದ್ರ ಸಂಗೀತ, ನಾಟಕ ಅಕಾಡೆಮಿಯ ೨೦೧೧ ನೇ ಸಾಲಿನ ಪುರಸ್ಕಾರಕ್ಕೆ, ಇತರೆ ಸಾಂಪ್ರದಾಯಿಕ/ಜಾನಪದ/ಬುಡಕಟ್ಟು ನೃತ್ಯ/ ತೊಗಲುಬೊಂಬೆಯಾಟ ಕ್ಷೇತ್ರದಲ್ಲಿ ದೇಶದ ೮ ಜನ ಪ್ರತಿಭಾವಂತ ಕಲಾವಿದರು ಆಯ್ಕೆಯಾಗಿದ್ದಾರೆ. ಈ ಎಂಟು ಜನರಲ್ಲಿ ಬಳ್ಳಾರಿಯ ಹಿರಿಯ ಪ್ರತಿಭಾವಂತ, ಸಾಧಕ ಬೆಳಗಲ್ಲು ವೀರಣ್ಣ ಅವರು ಸೇರ್ಪಡೆ ಕರ್ನಾಟಕ ಜಾನಪದಕ್ಕೆ, ಕನ್ನಡಿಗರಿಗೆ, ವಿಶೇಷವಾಗಿ ಬಳ್ಳಾರಿಗರಿಗೆ ಕೋಡು ಮೂಡಿಸಿದೆ.

ಗುರುವಾರ, ಡಿಸೆಂಬರ್ 22, 2011

ಸೊಲಬಕ್ಕನವರ ಜಾನಪದ ಪಾರ್ಕ


ನಾನೊಮ್ಮೆ ದಾರವಾಡದ ವಿಧ್ಯಾವರ್ದಕ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ಕಲಾವಿದರಾದ ಸೊಲಬಕ್ಕನವರ ಮಗಳು ವೇದಾರಾಣಿ ಅವರು ಮಾತಿಗೆ ಸಿಕ್ಕರು. ಅವರು ನನ್ನನ್ನು ಜಾನಪದ ಪಾರ್ಕ ನೋಡಲು ಬರುವಂತೆ ಒತ್ತಾಯಿಸಿದರು. ಅವರು ಹಾಗೆ ಕರೆಯಲು ನಾನು ಜಾನಪದ ಸೆಮಿನಾರೊಂದನ್ನು ತುಂಬಾ ಖಾರವಾಗಿ ವಿಶ್ಲೇಷಿಸಿ ಗೌರಿ ಲಂಕೇಶ ಪತ್ರಿಕೆಗೆ ಬರೆದ ಬರಹವೊಂದರ ಪ್ರಭಾವ ಕಾರಣವಾಗಿತ್ತು. ನಾನು ಜಾನಪದ ವಿಶ್ವವಿದ್ಯಾಲಯದ ಸ್ಥಳ ಶಿಗ್ಗಾಂವ ಪಕ್ಕದ ಕಾಡಗೋಡು ಹತ್ತಿರವೇ ಈ ಫಾರ್ಕು ಇರುವುದರಿಂದ ಎರಡನ್ನೂ ನೋಡಬಹುದೆಂದು ಹೋದೆ. ಪೂನ ಹೈವೆಗೆ ಹೊಂದಿಕೊಂಡಂತಿರುವ ಈ ರಾಕ್ ಗಾರ್ಡನ್ ಜನಾಕರ್ಶಕವಾಗಿದೆ.

ಜಾನಪದ ಕುರಿತು ಓದಿದ, ಜನಪದ ಕಲಾವಿದರೊಂದಿಗೆ ಒಡನಾಡಿದ ನನಗೆ ಜನಪದರ ಬದುಕೆ ಕಲಾಕೃತಿಯಾದದ್ದನ್ನು ನೋಡಿದ್ದು ಇದು ಮೊದಲು. ಈ ಪಾರ್ಕನ್ನು ನೋಡಲು ಜನವೋ ಜನ. ಇಷ್ಟೊಂದು ಜನರನ್ನು ಆಕರ್ಶಿಸಲು ಈ ಪಾರ್ಕಿನಲ್ಲಿರುವ ಶಕ್ತಿಯಾದರೂ ಏನು ಎಂದು ನೋಡಿದರೆ, ಅದು ಜನಬದುಕಿನದೇ ಕಲಾಕೃತಿಗಳು ಇಲ್ಲಿ ಜೀವತಳೆದದ್ದು. ಕಳೆದು ಹೋಗುತ್ತಿರುವ ಬದುಕನ್ನು ಹಿಡಿದು ತೋರಿಸುವಂತಿರುವ ಇಲ್ಲಿನ ಕಲಾಕೃತಿಗಳು ನೋಡುಗರೊಳಗೆ ಹೊಸ ಪುಳಕವೊಂದನ್ನು ಹುಟ್ಟಿಸುತ್ತವೆ. ಈ ಪಾರ್ಕನ ಹೆಸರು ರಾಕ್ ಗಾರ್ಡನ್, ಇದರ ಪ್ರವೇಶದಲ್ಲಿ ಎರಡು ಬಂಡಿ ಗಾಲಿಗಳನ್ನು ಜೋಡಿಸಿಡಲಾಗಿದೆ. ಒಂದು ಗಾಲಿಯನ್ನು ತೆರೆದರೆ ಒಳಗೆ ಪ್ರವೇಶ ತೆರೆದುಕೊಳ್ಳುತ್ತದೆ. ನಾನು ಹೋದಾಗ ಒಬ್ಬರಿಗೆ ಪ್ರವೇಶ ಧನ ಇಪ್ಪತ್ತು ರೂ.

ಇಲ್ಲಿ ಎತ್ತನ್ನು ಹೊಡೆಯುತ್ತಾ ಹೊಲ ಊಳುವ ರೈತರಿದ್ದಾರೆ, ಮನೆಮುಂದೆ ಕೂತು ಬದುಕಿನ ಬಗ್ಗೆ ಚಿಂತಿಸುವ ಹೆಣ್ಮಕ್ಕಳಿದ್ದಾರೆ, ಗುಡಿಯೊಂದರಲ್ಲಿ ಪಾಠ ಮಾಡುವ ಮಾಸ್ತರು ತನ್ಮಯತೆಯಿಂದ ಪಾಠ ಕೇಳುವ ಮಕ್ಕಳಿದ್ದಾರೆ, ಕತ್ತೆಯ ಮೇಲೆ ಬಟ್ಟೆಯ ಗಂಟನ್ನು ಹೇರಿಕೊಂಡು ತಾನೂ ಗಂಟೊಂದನ್ನು ಹೊತ್ತುಕೊಂಡು ನಡೆಯುತ್ತಿರುವ ಅಗಸಗಿತ್ತಿಯೂ, ಇಸ್ತ್ರಿ ಮಾಡುವ ಅಗಸನೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ, ಬಳೆತೊಡಿಸುವ ಬಳೆಗಾರ ಬಳೆಗಾರ್ತಿಯೂ ಇದ್ದಾರೆ, ಕೌದಿ ಹೆಣೆವ ಹೆಣ್ಮಕ್ಕಳಿದ್ದಾರೆ, ಕಂಬಳಿ ನೇಯುವ ನೇಕಾರರಿದ್ದಾರೆ, ರಾಗಿ ಬೀಸುತ್ತಿರುವ ಮಹಿಳೆಯರು ಬೀಸುವ ಕಾಯಕದಲ್ಲಿ ಮುಳುಗಿದ್ದಾರೆ, ಕಣದಲ್ಲಿ ಕಾಳು ಹೊಕ್ಕುವ ರೈತರಿದ್ದಾರೆ, ಬುಟ್ಟಿ ಹೆಣೆವವರೂ, ಕಸಬರಿಗೆ ಕಟ್ಟುವವರು, ಬಡಗಿಗಳು, ಕಮ್ಮಾರರು, ದಿನಸಿ ಮಾರುವ ಅಂಗಡಿಯವರು, ಆಡು ಕುರಿ ದನ ಕಾಯುವ ಹುಡುಗರು, ತರಾವರಿ ಆಕಳು ಎಮ್ಮೆಗಳು ಹೀಗೆ ಜನಬದುಕಿನ ಲೋಕವನ್ನೇ ಮರುಸೃಷ್ಟಿ ಮಾಡಿದ ನಿಜ ಬದುಕೊಂದು ನೋಡುಗರನ್ನು ದಿಗ್ಭ್ರಮೆ ಗೊಳಿಸುತ್ತದೆ.


ಈ ಕಲಾಕೃತಿಗಳು ತುಂಬಾ ಸೂಕ್ಷ್ಮವಾಗಿವೆ. ಜನವಸತಿಯಲ್ಲಿ ಸಹಜವಾಗಿರುವ ಪ್ರಾಣಿ ಜಗತ್ತನ್ನು ತರಲಾಗಿದೆ. ಹಾಗಾಗಿಯೇ ಇಲ್ಲಿ ಕೋಳಿ ಹುಂಜಗಳು ಸುತ್ತಾಡುವಂತಿವೆ. ಎಲ್ಲಾ ಜಾತಿಯ ಜನಸಮುದಾಯದ ಕುರುಹುಗಳೂ ಇಲ್ಲಿವೆ. ದನ ಕರುಗಳಂತೂ ಕೊಬ್ಬಿ ತಿವಿಯುತ್ತವೇನೋ ಎಂದು ನೋಡಿದಾಕ್ಷಣ ಹಿಂದಕ್ಕೆ ಸರಿಯುವಂತಹ ಭಾವವನ್ನು ಹೊಮ್ಮಿಸುತ್ತವೆ. ಬಡತನದ ಕುರುಹುಗಳಿವೆ, ಜನರ ಜಿಗುಟುತನದ ಗುರುತುಗಳಿವೆ.ಜನ ಜೀವನ ವಿಧಾನದ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಇಲ್ಲಿನ ಕಲಾಕೃತಿಗಳಲ್ಲಿ ಹಿಡಿಯಲಾಗಿದೆ. ಇದೆಲ್ಲವೂ ನಾವು ಜನಪದರ ಗೀತೆ, ಕಥೆ ಕೇಳಿದ ಅನುಭವಕ್ಕಿಂತ ಬೇರೆಯದೇ ಆದ ಅನುಭವವನ್ನು ಕೊಡುತ್ತದೆ. ಜಾನಪದ ವಸ್ತುಗಳನ್ನಾಧರಿಸಿದ ಮ್ಯೂಜಿಯಂಗಿಂತ ಈ ಜೀವಂತ ಜನರ ಕಲಾಕೃತಿಗಳು ಬೇರೆಯದೇ ಆದ ಲೋಕವೊಂದನ್ನು ತೆರೆದು ತೋರುತ್ತವೆ.

ಇಂದು ಕಲಾಕೃತಿಗಳೆಂದರೆ ರಿಯಲಿಸ್ಟಿಕ್, ಪೋಟ್ರೇಟ್ ಮಾದರಿಗಳು ತೀರಾ ಸವಕಲಾದ ಹಳೆ ಮಾದರಿಗಳು. ಅಂತಹ ಮಾದರಿಗಳನ್ನು ಮಾಡುವ ಕಲಾವಿದರು ತುಂಬಾ ಸಾಂಪ್ರದಾಯಿಕರು, ಅವರಿಗೆ ಮಾಡ್ರನ್ ಆರ್ಟ ಗೊತ್ತಿಲ್ಲದವರು ಎಂದು ಭಾವಿಸುತ್ತಾರೆ. ಹಾಗಾಗಿ ಕಲಾವಿದರು ಅಬ್ ಸ್ಟ್ರಾಕ್ಟ, ಮಾಡ್ರನ್ ಆರ್ಟನ ಮಾದರಿಗಳಿಗೆ ಮಾರು ಹೋಗುತ್ತಾರೆ. ಇಂತಹ ಹೊತ್ತಲ್ಲಿ ಕಲಾಶಾಲೆಯ ಮಾಸ್ತರರಾಗಿದ್ದ ಸೊಲಬಕ್ಕನವರ ಗ್ರಾಮೀಣ ಸೊಗಡಿನ ರಿಯಲಿಸ್ಟಿಕ್ ಪೊಟ್ರೆಟ್ ಮಾದರಿಯ ಕಲಾಕೃತಿಗಳಿಗೆ ಮಾರು ಹೋದದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಹುಲಸೋಗಿಯವರಾದ ತಿ.ಬಾ ಸೊಲಬಕ್ಕನವರ ಅವರದು ಒಂದು ರೀತಿಯ ಸವಾಲಿನ ಬದುಕು. ಕಾರಂತರು ಯಕ್ಷಗಾನವನ್ನು ಬೆಳೆಸಿದಂತೆ ದೊಟ್ಟಾಟ, ಸಣ್ಣಾಟಗಳನ್ನು ಬೆಳೆಸಬೇಕೆಂದು ಸ್ವತಃ ದೊಡ್ಡಾಟದ ವೇಷ ಧರಿಸಿದವರು. ಶ್ರೀಶೈಲ ಹುದ್ದಾರ ಮುಂತಾದ ಸಮಾನಾಸಕ್ತ ಗೆಳೆಯರನ್ನು ಸೇರಿಸಿಕೊಂಡು ಅವರು ದೊಡ್ಡಾಟಗಳನ್ನು ಸ್ವತಃ ಅಭಿನಯಿಸಿ, ಯುವ ತಂಡಗಳನ್ನು ಕಟ್ಟಿ ಬೇರೆ ಬೇರೆ ಕಡೆ ಹೋಗಿ ಪ್ರದರ್ಶನ ಕೊಟ್ಟು ಸಂಭ್ರಮಿಸಿದರು. ಕಾರಂತರಿಗೆ ಸಿಕ್ಕಂತಹ ಮೇಲ್ಜಾಜಿಯ ಬೆಂಬಲ ಸೊಲಬಕ್ಕನವರಿಗೆ ಸಿಕ್ಕಲಿಲ್ಲ. ಕಾರಣ ಇವರು ದೊಡ್ಡಾಟದ ಹುಚ್ಚಿಗಾಗಿ ಸಾಕಷ್ಟನ್ನು ಕಳೆದುಕೊಳ್ಳಬೇಕಾಗಿ ಬಂತು. ಈ ದಾರಿಯು ಅವರಿಗೆ ಹೂವಿನದಾಗದೆ, ಮುಳ್ಳಿನದಾಗಿತ್ತು. ನಾನು ಅವರೊಂದಿಗೆ ಮೂರು ಗಂಟೆಗಳ ಕಾಲ ಮಾತನಾಡಿದಾಗ ಇಂತಹ ಸಾಹಸದ ಕಥೆಗಳನ್ನು ನೋವಿನಿಂದಲೂ, ವಿಷಾದದಿಂದಲೂ, ತಿಳಿಹಾಸ್ಯ ಬೆರೆಸಿಯೂ ಹೇಳಿಕೊಂಡರು.

ಅವರ ಮಾತಿನಲ್ಲಿ ಜಾನಪದವನ್ನು ಉಳಿಸಬೇಕೆಂದು ಪ್ರಾಮಾಣಿಕವಾಗಿ ದುಡಿದು ಹೈರಾಣಾದ ದಣಿವು ಕಾಣುತ್ತಿತ್ತು. ಹಾಗಾಗಿ ಅವರ ಬದುಕಿನ ಕಥೆಯನ್ನು ಸಂಗ್ರಹಿಸಿ ಪುಸ್ತಕ ಮಾಡುವ ಆಸೆಯನ್ನು ಹೇಳಿಕೊಂಡೆ, ಆದರೆ ಅದಕ್ಕವರು ಉತ್ಸಾಹವನ್ನೇನೂ ತೋರಲಿಲ್ಲ. ಅವರು ಕಲಾವಿದರಾಗಿ ಅಮೂರ್ತ ಕಲಾಕೃತಿಗಳನ್ನು ಮಾಡಿದ್ದರೆ ಒಂದೊಂದು ಕಲಾಕೃತಿಗಳು ಲಕ್ಷಾಂತರ ರೂಗಳಿಗೆ ಮಾರಾಟವಾಗುತ್ತಿದ್ದವು. ಇಂದು ಬಾಂಬೆ ಕಲ್ಕತ್ತದಲ್ಲೋ ಅವರು ನೆಲೆಸಬಹುದಾಗಿತ್ತು. ಆದರೆ ಅವರು ಇದ್ದ ಕೆಲಸವನ್ನೂ ಬಿಟ್ಟು ತಮ್ಮ ಸ್ವಂತ ಊರಿಗೆ ಹಿಂತಿರುಗಿದಾಗ ಅವರಿಗೆ ಖಚಿತವಾದ ನಿಲುವುಗಳಿದ್ದವು. ಅವರು ತಮ್ಮ ಕಲಾಕೃತಿಗಳು ಯಾರದೋ ಸಿರಿವಂತಿಕೆಯ ತೋರಿಕೆಯ ಸಂಕೇತಗಳಾಗುವ ಬದಲು ಜನರ ಬದುಕಿನ ಅಂಶಗಳು ಕಾಣಬೇಕು, ಅದನ್ನು ಜನರೇ ನೋಡಿ ಖುಷಿಪಡಬೇಕು ಎಂದು ಕನಸು ಕಂಡರು. ಅದರಂತೆ ಅವರದೇ ಆದ ಕಲಾಕೃತಿಗಳ ಮಾದರಿಯನ್ನು ರೂಪಿಸಿಕೊಂಡರು. ಅದಕ್ಕೆ ಕೆಲ ಆಸಕ್ತ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರು. ಆ ಕನಸಿನ ಫಲವೇ ಇಂದು ನಾವು ನೋಡುತ್ತಿರುವ ಜಾನಪದ ಜೀವನವನ್ನು ಬಿಂಬಿಸುವ ಪಾರ್ಕ.

ಈಗ ನೂರಾರು ಜನರು ಜಾನಪದ ಪಾರ್ಕನ್ನು ನೋಡಲು ಬರುತ್ತಾರೆ. ಅದರಲ್ಲಿ ಬಹುಪಾಲು ಜನ ಹಳ್ಳಿಗರೇ ಇರುವುದೊಂದು ವಿಶೇಷ. ಹಾಗೆ ಬಂದ ಜನರನ್ನು ಮಾತನಾಡಿಸಿದಾಗ ತರಾವರಿ ಅಭಿಪ್ರಾಯಗಳು ವ್ಯಕ್ತವಾದವು. ಹಾನಗಲ್ ತಾಲೂಕು ಮೂಳೂರಿನ ಮಲ್ಲಮ್ಮ ಹೇಳುವಂತೆ ‘ಇದೆಲ್ಲಾ ಮರ‍್ತೋಗ್ತಿತ್ರಿ. ಇದನ್ನ ಈಗಿನ್ನ ಮಕ್ಳಿಗೆ ತೋರ‍್ಸಾಕ್ರಿ, ಹಿಂದಿನವ್ರು ಎಷ್ಟು ಕಷ್ಟಬಿದ್ದಾರ ಅಂತ ತಿಳಿತಾತ್ರಿ, ಎನ್ನುತ್ತಾರೆ. ಹಾವೇರಿ ತಾಲೂಕಿನ ಮೇವಂಡ್ರಿಯ ಹನುಮಂತಪ್ಪ ‘ದನದ ಕೊಟ್ಟಿಗಿ ಬಾಳ ಇಷ್ಟಾತ್ರಿ, ಇನ್ನು ಇಂಪ್ರ ಆಗ್ಬೇಕ್ರಿ, ಹಳೆ ಕಾಲದ್ದು ನೋಡತಕ್ಕದ್ ಬಿಡ್ರಿ, ರೊಟ್ಟಿ ಸುಡಾಡು ಎಲ್ಲಿ ಕಾಣ್ಳಿಲ್ರಿ..ಎಂದರು.
ಸವಣೂರು ತಾಲೂಕಿನ ಎಲುವಿಗಿ ಗ್ರಾಮದ ಶಾಂತಮ್ಮ ‘ಹಳೆ ಕಾಲದ ರೈತರು ಎಂಥ ದಂದೆ ಮಾಡ್ತುದ್ರು ಅಂಥದ್ನ ಮಾಡ್ಯಾರ, ಶಿಶುನಾಳ ಶರೀಫಜ್ಜನ್ನ, ಗೋವಿಂದಜ್ಜನ್ನ ಯಾಕ ಮಾಡಿಲ್ರಿ? ಗುಡಿಗೇರಿ ದ್ಯಾಮವ್ವನ್ನ ಮಾಡಬೇಕ್ರಿ, ಅಂದ್ರ ಎಲ್ಲಾ ನೋಡಿದಂಗಕ್ಕಾತಿ ಎನ್ನುತ್ತಾರೆ. ಗ್ರಾಮೀಣ ಭಾಗದ ಜನರು ಈ ಕಲಾಕೃತಿಗಳಲ್ಲಿ ತಮ್ಮ ಬದುಕಿನ ಪ್ರತಿಬಿಂಬವನ್ನು ಕಾಣುತ್ತಾರೆ.

ಇದನ್ನು ನೋಡಿದರೆ ಸೊಲಬಕ್ಕನವರ ಅಂದುಕೊಂಡ ಕನಸು ನನಸಾಗುತ್ತಿದೆ ಅನ್ನಿಸಿತು. ಹುಬ್ಬಳ್ಳಿಯ ಇಂಜಿನಿಯರಿಂಗ್ ಓದುವ ಒಂದಷ್ಟು ಹುಡುಗ ಹುಡುಗಿಯರು ಬಂದಿದ್ದರು. ಅವರುಗಳು ಸಾರ್ ಸಿಟಿ ಬೋರ್ ಹೊಡೆದಾಗ ಈ ಪಾರ್ಕಗೆ ಬಂದು ಹೋಗ್ತೀವಿ ಏನೋ ಒಂಥರಾ ಚೇಂಜ್ ಅನ್ಸುತ್ತೆ ಈ ಪಾರ್ಕ ಅಂದರು. ಇದು ಯುವಕ ಯುವತಿಯರನ್ನೂ ಆಕರ್ಶಿಸುತ್ತಿದೆ. ಇಲ್ಲಿನ ಕಲಾಕೃತಿಗಳು ಒಣಗಿಸಿಟ್ಟ ದೇಹಗಳಂತೆ ಒಮ್ಮೊಮ್ಮೆ ಭಯ ಹುಟ್ಟಿಸುತ್ತವೆ. ಈ ಕಾರಣಕ್ಕೆ ಮೃತ ದೇಹಗಳನ್ನು ಒಣಗಿಸಿಟ್ಟು ಜೋಡಿಸಿದ್ದಾರೆಯೇನೋ ಎನ್ನುವ ಭಾವ ಉಂಟಾಗುತ್ತದೆ. ಇದು ರೂಪಕವಾಗಿಯೂ ಮೃತಸ್ಥಿತಿಗೆ ಹೋಗುತ್ತಿರುವ ದೇಸಿ ಬದುಕಿನ ದಾರುಣ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ.

ಆಕರ್ಶಕ ಫ್ರೇಮುಗಳಲ್ಲಿ ಕಲಾಕೃತಿಯನ್ನು ರಚಿಸಿ ಬಂಧಿಸಿಡುವ ಮಾದರಿ ವಿರುದ್ಧ ಬಂಡೆದ್ದು ಸೊಲಬಕ್ಕನವರು ಮಾಡಿದ ಪ್ರಯೋಗ ನಿಜಕ್ಕೂ ಚಾರಿತ್ರಿಕವಾಗಿ ಮಹತ್ವದ ಸಂಗತಿ. ಈ ಮಾದರಿಯ ಪ್ರಭಾವವನ್ನು ಇಂದಿನ ಕಲಾ ವಿದ್ಯಾರ್ಥಿಗಳಲ್ಲಿ ಕಾಣುತ್ತಿದ್ದೇವೆ. ಅದೊಂದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಸೊಲಬಕ್ಕನವರ ಶ್ರಮವನ್ನು ಎಲ್ಲರೂ ಗೌರಿವಿಸುವಂಥದ್ದು.

ಗುರುವಾರ, ಡಿಸೆಂಬರ್ 8, 2011

ಬಳ್ಳಾರಿ ಜಿಲ್ಲೆಯ ಜಾನಪದ: ಹೊಸ ನಡಿಗೆ

ಡಾ. ಅರುಣ್ ಜೋಳದಕೂಡ್ಲಿಗಿ.

ಒಂದು ಜಿಲ್ಲೆಯ ಜಾನಪದ ಎಂದು ಕತ್ತರಿಸಿದಂತೆ ನೋಡುವ ಕ್ರಮ ಕನ್ನಡದಲ್ಲಿದೆ. ಅದು ಸರಿ ತಪ್ಪು ಎಂದು ನೋಡುವುದಕ್ಕಿಂತ, ಹಾಗೆ ನೋಡುವಾಗ ಇರಬೇಕಾದ ಎಚ್ಚರಗಳ ಅರಿವಿರಬೇಕಷ್ಟೆ. ಜಿಲ್ಲೆಯೊಂದರ ಸರಕಾರಿ ಗಡಿ ವ್ಯಾಪ್ತಿಯಲ್ಲಿ, ಜಾನಪದ ಎಂದು ಯಾವುದನ್ನು ಕರೆಯಲಾಗುತ್ತದೆಯೋ ಅದನ್ನು ಸೇರಿಸುವ ಮಾದರಿಯೊಂದು ಬಳಕೆಯಲ್ಲಿದೆ. ಹಾಗೆಂದ ತಕ್ಷಣ ಬೇರೆ ಜಿಲ್ಲೆಯಲ್ಲಿ ಈ ಬಗೆಯ ಜಾನಪದ ಇಲ್ಲವೆಂದಲ್ಲ. ಹೀಗೆ ಗುರುತಿಸುವಾಗ, ಜಾನಪದ ಎನ್ನುವ ಸಿದ್ದಗೊಂಡ ವ್ಯಾಖ್ಯಾನವನ್ನು ಬಳಸಿಯೂ, ಆ ಜಿಲ್ಲೆಗೆ ವಿಶೇಷವಾದ ಜಾನಪದದ ಲಕ್ಷಣಗಳನ್ನು ಹೇಳಲು ಸಾದ್ಯವಿದೆ. ಎರಡನೆಯದಾಗಿ ಜಾನಪದದ ಹೊಸ ನಡಿಗೆ ಯಾವ ದಾರಿಯಲ್ಲಿ ನಡೆಯುತ್ತಿದೆ, ಎಂದು ಗುರುತಿಸಿ ಅದು ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವ ಬಗೆಯ ಚಲನೆಯನ್ನು ಮಾಡುತ್ತಿದೆ, ಅದು ಬೇರೆ ಜಿಲ್ಲೆಗಳಿಗಿಂತ ಯಾವ ಬಗೆಯ ವಿಶಿಷ್ಠತೆಯನ್ನು ಹೊಂದಿದೆ , ಅದಕ್ಕೆ ಕಾರಣವಾದ ಸಾಂಸ್ಕೃತಿಕ ಹಿನ್ನೆಲೆ ಯಾವುದು ಎಂದು ನೋಡುವ ಸಾದ್ಯತೆಯೂ ಇದೆ.

ಈ ಬರಹದಲ್ಲಿ ಬಳ್ಳಾರಿ ಜಿಲ್ಲೆಯ ಸಮಗ್ರ ಜಾನಪದ ಸಂಗತಿಗಳ ಬಗ್ಗೆ ಗಮನಹರಿಸಿಲ್ಲ. ಬದಲಾಗಿ ಕೆಲವು ಬದಲಾದ ಸಂಗತಿಗಳನ್ನು ಆಧರಿಸಿ ಈ ಜಿಲ್ಲೆಯ ಜಾನಪದದ ಹೊಸ ನಡಿಗೆಯ ಬಗ್ಗೆ ಟಿಪ್ಪಣಿ ರೂಪದ ಬರಹವಿದು. ಇದು ಒಂದು ಜಿಲ್ಲೆಯ ಜಾನಪದ ಎಂದಾಗ ನೋಡಬಹುದಾದ ಒಂದು ಮಾದರಿ.
ನಾವು ಸಾಮಾನ್ಯವಾಗಿ ಜಾನಪದವನ್ನು ಸಾಹಿತ್ಯದ ಹಿನ್ನೆಲೆಯಲ್ಲಿ, ಜನಪದ ಕಲಾವಿದರ ಹಿನ್ನೆಲೆಯಲ್ಲಿ ನೋಡುತ್ತೇವೆ. ಇವು ಕೇವಲ ಜಾನಪದದ ಎರಡು ಸಂಗತಿಗಳು ಮಾತ್ರ. ಹಾಗೆ ನೋಡುವುದಾದರೆ, ಜನಪದ ಸಾಹಿತ್ಯದಲ್ಲಿಯೂ ಬದಲಾವಣೆಗಳಾಗಿವೆ. ಜನಪದ ಕಲಾವಿದರಲ್ಲಿಯೂ ಹೊಸ ಬದಲಾವಣೆಗಳನ್ನು ಗಮನಿಸಬಹುದು. ಜನಪದ ವೃತ್ತಿ ಕಸಬುಗಳಲ್ಲಿಯೂ, ಜನಪದ ವೈದ್ಯದಲ್ಲಿಯೂ, ಜನಪದ ಕ್ರೀಡೆಗಳಲ್ಲಿಯೂ ಒಂದು ಬಗೆಯ ಹೊಸ ಚಲನೆಯನ್ನು ಸೂಕ್ಷ್ಮವಾಗಿ ಗುರುತಿಸಬಹುದು.
ಜನಪದ ಸಾಹಿತ್ಯದ ಪಲ್ಲಟ
ಕಾಳಮ್ಮ ಜೋಗತಿಯು ಕರ್ನಾಟಕದ ಜೋಗತಿ ಪರಂಪರೆಗೆ ಹೊಸ ಆಯಾಮ ನೀಡಿದಾಕೆ. ಕಾಳಮ್ಮನ ನಂತರ ಮಂಜಮ್ಮ ಜೋಗತಿ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಬ್ಬರೂ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರು ತಮ್ಮ ಜೋಗತಿ ಹಾಡುಗಳ ಜತೆ ಕುಟುಂಬ ಕಲ್ಯಾಣ, ಆರೋಗ್ಯ ಇಲಾಖೆಯ ಹಾಡುಗಳನ್ನು ಹಾಡುವ ಮೂಲಕ ತಮ್ಮ ಕಾಲದ ಸಂಗತಿಗಳನ್ನು ಜನಪದ ಸಾಹಿತ್ಯದಲ್ಲಿ ತಂದರು. ಇಲ್ಲಿ ಈ ಹಾಡಿನ ಸಾಹಿತ್ಯವನ್ನು ಇಟಿಗಿ ಈರಣ್ಣ ಬರೆದಿದ್ದಾರೆ, ಅದೇ ಹಾಡುಗಳನ್ನು ಜೋಗತಿ ಲಯಕ್ಕೆ ಸೇರಿಸಿಕೊಂಡು ಕೆಲ ಬದಲಾವಣೆಗಳನ್ನು ಮಾಡಿಕೊಂಡು ಜನಪದ ಗೀತೆಯನ್ನಾಗಿಸಿದ್ದಾರೆ. ಕೆಲ ಪದಗಳು ಹೀಗಿವೆ:

ಹೆರಗೆಯ ಮಾಡ್ಸಾಣು ಬಾರೆ ಸಖಿ| ನಾವು
ಹೆರಗೆಯ ಮಾಡ್ಸಾಣು ಬಾರೆ ಸಖಿ|| ಪಲ್ಲವಿ||
ಪರಿಣಿತಳಾದ ದಾದಿಯ ಕೈಯಿಂದ|
ಪರಿ ಪರಿಯಾದ ಸಡಗರದಿಂದ|| ಅನುಪಲ್ಲವಿ||

ಪರಿಶುದ್ಧ ಗಾಳಿ ಪರಿಶುದ್ಧ ಬೆಳಕು|
ಪರಿಶುದ್ಧ ಪರಿಸರ ನೋಡುವಳು;
ಪರಿಶುದ್ಧ ಕೈಯಲ್ಲಿ ಪರಿಶುದ್ಧ
ಹೆರಿಗೇಯ ಪರಿಶುದ್ಧವಾಗೇ ಮಾಡುವಳು||

ಹೊಸ ಬ್ಲೇಡಿನಿಂದ ಹೊಕ್ಕಳ ಉರಿಯನ್ನು
ವಿಷವಾಗದಂತೆ ಕತ್ತರಿಸುವಳು ದಾದಿ|
ಹೊಸ ದಾರವನ್ನು ಮೂರಿಂಚು ದೂರ ಕಟ್ಟಿ |
ಹೊಸ ನಂಜು ಬರದಂತೆ ತಡೆಯುವಳು ದಾದಿ||

ಚಿಕ್ಕ ಸಂಸಾರದ ಬಗೆಗಿನ ಹಾಡೊಂದು ಹೀಗಿದೆ:

ಸಕ್ಕರೆಯ ರುಚಿಗಿಂತ| ಅಕ್ಕರೆಯ ದನಿಗಿಂತ||
ನಕ್ಕು ನಗಿಸುವ ನುಡಿಗಿಂತ|| ತಂಗೆಮ್ಮಾ
ಚಿಕ್ಕ ಸಂಸಾರ ಬಲು ಚೆಂದ ||
ಚಂದ್ರ ಸೂರ್ಯ ರಂಗ ಮಕ್ಕಳೆರಡು ಇರಲವ್ವಾ..

ಬಾಳಿನ ತುಂಬಾ ಬೆಳಕಮ್ಮ ತಂಗೆಮ್ಮಾ..
ಬಾಳು ಬಂಗಾರದ ಹೂವಮ್ಮ ತಂಗೆಮ್ಮಾ..
ರವಿಯಂತೆ ಮಗನಿರಲಿ..ಶಶಿಯಂತೆ ಮಗಳಿರಲಿ
ಮಗನಿಂದ ಮನೆಗೆ ಬೆಳಕಾಗ್ಲಿ|| ತಂಗೆಮ್ಮಾ
ಮಗಳಿಂದ ಮನೆಗೆ ತಂಪಾಗ್ಲಿ|| ತಂಗೆಮ್ಮಾ..

ಈ ಬಗೆಯ ಹಾಡುಗಳು ಜನಪದ ಸಾಹಿತ್ಯದ ಬದಲಾವಣೆಯನ್ನು ತೋರುತ್ತವೆ. ಇದೇ ರೀತಿಯಲ್ಲಿ ಜನಪದ ಹಾಡುಗಾರರ ಸಾಹಿತ್ಯದಲ್ಲಾದ ಬದಲಾವಣೆಯನ್ನು ಗುರುತಿಸುವ ಸಾದ್ಯತೆ ಇದೆ. ಈಚೆಗೆ ಕೊಟ್ಟೂರಿನ ಜನಪದ ಹಾಡುಗಾರ ಸುಣ್ಣಗಾರ ಹನುಮಂತಪ್ಪನಲ್ಲಿಗೆ ಹೋಗಿದ್ದೆ. ಆತ ಸದ್ಯದ ಕಾಲದ ಸಂಗತಿಗಳನ್ನು ಅದ್ಭುತವಾಗಿ ಹಾಡು ಕಟ್ಟಿ ಹಾಡುತ್ತಾನೆ. ಈ ಕಂಚಿನ ಕಂಟದ ಹಾಡುಗಾರ ಹಾಡುತ್ತಾ ಹಾಡುತ್ತಾ ಓಸಿ ಆಟದ ಬಗ್ಗೆ ಕಟ್ಟಿದ ಹಾಡನ್ನೂ ಹಾಡಿದ. ಈ ಲಾವಣಿ ಪದ ಹೀಗಿದೆ:

ಓಸಿ ಬಂದಿತವ್ವ | ಓಸಿ ಆಟ ಬಂತವ್ವಾ..
ಚೀಟಿಯ ಬರೆಸಿ ಜೇಬಿನ ಒಳಗೆ ಇಟ್ಟರು ನೋಡವ್ವಾ..
ದೇಶದೇಶಕೆ ಮೋಸ ಮಾಡಿತು ಎಂಥ ಓಸೆವ್ವಾ..
ರಾಶಿಗಟ್ಟಲೆ ಹಣವ ಕಟ್ಟಿ ಪಾಸಿ ಬಿದ್ದರವ್ವಾ.||ಓಸಿ ಬಂದಿತವ್ವ||

ಬಾಂಬೆಲಿಂದ ಸಾಹುಕಾರ ಫೋನು ಹಚ್ಯಾನವ್ವಾ..
ಹಳ್ಳಿಡಿಲ್ಲೀಗೆಲ್ಲಾ ಫೋನು ನಂಬರು ಕೈಗೆ ಕೊಟ್ಟನವ್ವಾ..
ಒಂಬಂತ್ತುವರಿಗೆ ಓಪನ್ ಕೇಳಾಕಉಪವಾಸ ಹೊಂಟನವ್ವಾ..
ಓಪನ್ ಕೇಳಿ ಟೋಪಿಗಿ ಎಳಿಯುತಾ.. ಮನೆಗೆ ಬಂದನವ್ವಾ..
ಕ್ಲೋಜಿನ ಸುದ್ದಿ ಕೇಳಿ ಉದಯಕೆ ಸಾಕಾಯಿತವ್ವಾ..
ಕೈಯೊಳು ಚೀಟಿ ಹರಿದು ಬಿಸಾಕಿ ಊಟಬಿಟ್ಟನವ್ವಾ||ಓಸಿ ಬಂದಿತವ್ವ||

ಒಂದು ಊರಲ್ಲಿ ಗಂಡ ಹೆಂಡರು ಇದ್ದರು ಕೇಳವ್ವಾ..
ಗಂಡಗೆ ಕಾಣದೆ ಓಸಿ ಕಟ್ಟೆಳು ನೋಡು ಕೆಟ್ಟ ದೈವ..
ಖರ್ಚಿಯ ತುಂಬಾ ಜ್ವಾಳ ಇದ್ದವು ದಿವಸ ಮಾರೆಳವ್ವಾ..
ಓಸಿಗೆ ಕಟ್ಟಿ ಖರ್ಚಿ ಬರಿದಾಯಿತು ಕೇಳರೀ ದೈವಾ..
ಬಂಗಾರ ಬೆಳ್ಳಿ ಒಳಗೆ ಮಾರೇಳು ಕೇಳೇ ಹಡೆದವ್ವಾ..
ಕೊರಳ ತಾಳಿ ಮಾರಿ ಕಟ್ಟೇಳು ಕಡೆಯದಾಯಿತ್ವಾ..
ಗಂಡಗೆ ಉತ್ತರ ಹೇಳಲಾರದೇ ತೂಗಿ ಕೆಟ್ಟ ಭಾವಾ..
ಚೀಟಿಗೆ ಬರೆದು ಕೊರಳಿಗೆ ಹೊರಳು ಹಾಕಿ ಸತ್ತಳವ್ವಾ..
ಗಂಡನು ಓದಿ ಕಂಡನು ವಾದಿ ಮಣ್ಣಗಿಟ್ಟನವ್ವಾ
ತನ್ನ ಕರ್ಮಕೆ ತಾನೇ ಸತ್ತಳು ವಿಧಿಎಳೆದಿತವ್ವಾ..
ಸತ್ತ ದಿನವೆ ತನ್ನ ಓಸಿ ಎದ್ದಿತು ಕೇಳೀರಿ ದೈವಾ.. ||ಓಸಿ ಬಂದಿತವ್ವ||

ಓಸಿಯೆಂಬುದು ಬಿಟ್ಟ ಇದನಾ ಬೇಸಾಯ ಮಾಡವ್ವಾ..
ರೈತನಿಂದಲೇ ಸಕಲ ಜೀವಕೆ ಅನ್ನವು ನೋಡವ್ವಾ..
ಓಸಿಯೆಂಬುದನು ಬಿಟ್ಟು ಇದನ ಬೇಸಾಯ ಮಾಡವ್ವಾ..
ಭೂಮಿ ಮನೆಗಳನು ಮಾರಿ ಕಟ್ಟಿದರೂ ಎಂಥಾ ಓಸೆವ್ವಾ..
ಹಂಡೇವು ಗಂಗಾಳ ಚರಿಗಿ ಗಂಗಾಳ ಮಾರಿ ಕಟ್ಟೆರವ್ವಾ..
ಎಲ್ಲದು ಮಾರಿ ನಿಲ್ಲದೆ ಹೊರಟನು ಮನೆ ಮನೆ ತಿರುಗುವಾ..
ಬೀಡಿ ಚಾವ ಮಂದಿ ಕೇಳತಾವ ನಾಚಿಕಿಲ್ಲದಾವಾ..
ಹೆಂಡರು ಮಕ್ಕಳು ಮರೆತರು ಇವರು ಕಾಟ ತಡೆಯರವ್ವಾ..
ಊರ ಹೊರಗಿನ ಗುಡಿಯ ನೋಡಿ ಹೋಗಿ ಮಲಗೆರವ್ವಾ..
ಬಳ್ಳಿಗನೂರು ಬಲ್ಲವನೆ ಬಲ್ಲ ಬಾರಿ ಹೇಳುವರವ್ವಾ..
ಕೊಟ್ಟೂರು ಹನುಮಣ್ಣನಲ್ಲಿ ಕಲಿಯಿರಿ ವಿದ್ಯಾದಾನವಾ.. ||ಓಸಿ ಬಂದಿತವ್ವ||

ಇದು ಜನಪದ ಕಲಾವಿದನೊಬ್ಬ ತನ್ನ ಕಾಲದ ಸಂಗತಿಗಳಿಗೆ ಪ್ರತಿಕ್ರಿಯಿಸಿದ ಬಗೆಯನ್ನು ಹೇಳುತ್ತಿದೆ. ಹಾಗೆ ನೋಡುವಾಗ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಓಸಿ ಆಟವೇ ಒಂದು ಬಗೆಯ ಜಾನಪದವನ್ನು ಹುಟ್ಟಿಸಿದ್ದನ್ನು ಗುರುತಿಸಲು ಸಾದ್ಯವಿದೆ. ನಾನು ಆ ಬಗ್ಗೆ ಕೆಂಡಸಂಪಿಗೆ ವೆಬ್ ಸೈಟ್‌ಗೆ ಸರಣಿ ಬರಹವನ್ನೇ ಬರೆದೆ, ಅದು ಪುಸ್ತಕವೂ ಆಗುತ್ತಿದೆ. ಇದನ್ನು ನೋಡಿದರೆ, ಓಸಿ ಇಲ್ಲಿಯ ಜನರ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ, ಇಂತಹ ಕೆಟ್ಟ ಪರಿಣಾಮವನ್ನು ನೋಡಿಯೇ ಅದರಿಂದ ದೂರವಿರಿ ಎನ್ನುವಂತೆ ಜನಪದ ಹಾಡುಗಾರನೊಬ್ಬ ಹಾಡು ಕಟ್ಟಿ ಹಾಡುತ್ತಾನೆ. ಇದು ಒಂದು ಉದಾಹರಣೆಯಷ್ಟೆ. ಹೀಗೆ ಇದೇ ಜಿಲ್ಲೆಯ ಜಾನಪದ ಗಾಯಕರ ಸಾಹಿತ್ಯವನ್ನು ನೋಡುತ್ತಾ ಹೋದರೆ ಅಲ್ಲಾಗಿರುವ ಬದಲಾವಣೆಯನ್ನು ಗಮನಿಸಲು ಸಾದ್ಯವಿದೆ.

ಜನಪದ ಕಲೆಗೆ ಮಹಿಳೆಯರ ಪ್ರವೇಶ

ಇಂದು ಕರ್ನಾಟಕದ ಜನಪದ ಕಲೆಯಲ್ಲಿ ಒಂದು ಮುಖ್ಯ ಪಲ್ಲಟ ಸಂಭವಿಸಿದೆ. ಅದೇನೆಂದರೆ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶ ಆಗುತ್ತಿರುವುದು. ಈ ಬಗೆಯ ಬದಲಾವಣೆಯು ಜನಪದ ಕಲೆಗಳನ್ನು ಹೊಸ ರೀತಿಯಿಂದ ನೋಡುವ ಒತ್ತಾಯವನ್ನು ತಂದಿವೆ. ಈ ಪ್ರಭಾವ ಬಳ್ಳಾರಿ ಜಿಲ್ಲೆಯಲ್ಲಿಯೂ ಆಗುತ್ತಿದೆ. ಬಳ್ಳಾರಿ ಭಾಗದಲ್ಲಿ ಬಯಲಾಟ ಪರಂಪರೆ ಈಗಲೂ ಇದೆ. ಬಯಲಾಟವೆಂದರೆ ಪುರುಷರದ್ದು ಎನ್ನುವ ವಾಡಿಕೆ ಬಲವಾಗಿದೆ. ಈ ನಂಬಿಕೆಯನ್ನು ಹುಸಿಗೊಳಿಸುವ ಹಾಗೆ ಕೂಡ್ಲಿಗಿ ಮತ್ತು ವಿರುಪಾಪುರದ ಮಹಿಳಾ ಕಲಾವಿದರು ಬಯಲಾಟವನ್ನು ಆಡುತ್ತಿದ್ದಾರೆ.

೫.೦೧.೨೦೧೧ ರಂದು ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡ ಜಿಲ್ಲಾ ಜಾನಪದ ಕಲಾಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಏರ್ಪಡಿಸಿತ್ತು. ಇದಕ್ಕಾಗಿ ಬಳ್ಳಾರಿ ಜಿಲ್ಲೆಯ ಬೇರೆ ಬೇರೆ ಭಾಗದ ಕಲಾವಿದರು ಬಂದಿದ್ದರು. ಈ ಮೇಳದಲ್ಲಿ ವಿರುಪಾಪುರದ ಮಹಿಳೆಯರ ಬಯಲಾಟ ವಿಶೇಷವಾಗಿ ಗಮನ ಸೆಳೆಯಿತು. ಕೂಡ್ಲಿಗಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ವಿರುಪಾಪುರ ಮೂಲತಃ ರಂಗ ಕಲಾವಿದರ ತವರು. ಇಲ್ಲಿನ ಬಯಲಾಟದ ಮಟ್ಟುಗಳು ಪ್ರಸಿದ್ದಿಯೂ ಕೂಡ. ಈ ರೀತಿಯ ಬಯಲಾಟದ ಪರಂಪರೆ ಇರುವ ಈ ಊರು ಮಹಿಳೆಯರು ಬಯಲಾಟವನ್ನು ಕಲಿಯಲು ಪ್ರೇರಣೆಯಾಯಿತು ಎನ್ನುತ್ತಾರೆ ತಂಡದ ನಾಯಕಿ ಅಂಜಿನಮ್ಮ. ಈ ತಂಡದಲ್ಲಿ ಹನ್ನೊಂದು ಜನ ಕಲಾವಿದರಿದ್ದಾರೆ. ಅಂಜಿನಮ್ಮ, ಗಂಗಮ್ಮ, ಕೆ.ನಾಗರತ್ನಮ್ಮ, ಯು.ಶಾರದ, ಕೆ.ದುರುಗಮ್ಮ, ಹೆಚ್. ನಾಗವೇಣಿ, ಡಿ.ಹಂಪಮ್ಮ, ರಂಗವೇಣಿ, ವಿಜಯಲಕ್ಷ್ಮಿ, ಬಿ. ಭಾಗ್ಯಮ್ಮ, ಬಿ.ನಾಗಮ್ಮ ಈ ತಂಡದ ಬಯಲಾಟದ ಕಲಾವಿದರು. ಹೀಗೆ ಬಯಲಾಟವನ್ನು ಮಹಿಳೆಯರು ಕಲಿತು ಪ್ರದರ್ಶಿಸುವುದು ಇದು ಮೊದಲ ಪ್ರಯತ್ನ.

ಹೀಗೆ ಕೂಡ್ಲಿಗಿಯ ಕೆಲವು ರಂಗನಟಿಯರು ಬಯಲಾಟದ ಪ್ರಯೋಗವನ್ನು ಮಾಡುತ್ತಿದ್ದಾರೆ, ವಿರುಪಾಪುರದ ಹೆಣ್ಣುಮಕ್ಕಳು ಬಯಲಾಟದ ಜತೆ ಡೊಳ್ಳು ಕಲೆಯನ್ನೂ ಕಲಿಯುತ್ತಿದ್ದಾರೆ. ಹೊಸಪೇಟೆಯ ಭಾಗ್ಯಲಕ್ಷ್ಮಿಯವರು ಸಖಿ ಎನ್ನುವ ಎನ್.ಜಿ.ಒ ದ ಮೂಲಕ ಕೆಲ ಹುಡುಗಿಯರಿಗೆ ಡೊಳ್ಳು ಬಾರಿಸುವುದನ್ನು ಕಲಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಮಹಿಳಾ ಡೊಳ್ಳು ಕಲಾತಂಡಗಳು ರೂಪುಗೊಳ್ಳುತ್ತಿರುವುದನ್ನು ನೋಡಬಹುದು.
ತೊಗಲು ಗೊಂಬೆಗೆ ಹೊಸ ಮೆರಗು
ಬಳ್ಳಾರಿ ಜಿಲ್ಲೆಯು ತೊಗಲು ಗೊಂಬೆ ಕಲಾವಿದರಿಗೆ ಹೆಸರಾದುದು. ಹಗರಿ ಬೊಮ್ಮನಹಳ್ಳಿಯ ಹತ್ತಿರದ ಯಡ್ರಾಮನಹಳ್ಳಿಯ ದೊಡ್ಡ ಬರಮಪ್ಪ ತೊಗಲು ಗೊಂಬೆ ಕಲೆಯನ್ನು ವಿದೇಶಗಳಿಗೂ ಹಬ್ಬಿಸಿದವರು. ಅವರ ಗರಡಿಯಲ್ಲಿ ಕಲಿತ ಬೆಳಗಲ್ಲು ವೀರಣ್ಣ ಈ ತೊಗಲುಗೊಂಬೆ ಕಲೆಯ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಬೆಳಗಲ್ಲು ವೀರಣ್ಣ ಅವರ ನಾಯಕತ್ವದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳವು ೨೦೧೦ ರ ನವೆಂಬರ್ ನಲ್ಲಿ ಅಂತರ ರಾಜ್ಯ ತೊಗಲುಗೊಂಬೆ ಉತ್ಸವವನ್ನು ನಡೆಸಿತು. ಈ ಉತ್ಸವದಲ್ಲಿ ಆಂದ್ರಪ್ರದೇಶದ ಶ್ರೀ ಛತ್ರಪತಿ ಶಿವಾಜಿ ತೊಗಲುಗೊಂಬೆ ಕಲಾತಂಡವು ರಾಮಾಯಣದ ಕಿಷ್ಕಿಂದಾಖಾಂಡ ಕಥಾ ಪ್ರಸಂಗವನ್ನು ಪ್ರದರ್ಶಿಸಿ ಗಮನಸೆಳೆದರು. ಈಚೆಗೆ ಬೆಳಗಲ್ಲು ವೀರಣ್ಣನ ತೊಗಲು ಗೊಂಬೆ ಆಟವನ್ನು ಜರ್ಮನಿಯಲ್ಲಿ ಪ್ರದರ್ಶನ ನೀಡಿ ಬಂದಿದ್ದಾರೆ. ಹೀಗೆ ಬಳ್ಳಾರಿ ಜಿಲ್ಲೆಯ ಜನಪದ ಕಲೆಯೊಂದು ದೂರದ ಜರ್ಮನಿಯಲ್ಲಿ ಪ್ರದರ್ಶಿಸುವುದು ಕೂಡ ಈ ನೆಲದ ಸಂಸ್ಕೃತಿಯನ್ನು ಸಾಗರದಾಚೆಗೆ ಒಯ್ಯುವ ಒಂದು ಮಹತ್ವದ ನಡಿಗೆ ಎಂದೇ ಬಾವಿಸಬಹುದು.
ಸಿಳ್ಳೇಕ್ಯಾತ, ಕಿಳ್ಳೇಕ್ಯಾತ, ಗೊಂಬೆರಾಮರು, ಕಟುಬರು, ಬುಂಡೆ ಬೆಸ್ತರು ಎಂದು ಈ ಸಮುದಾಯವನ್ನು ಕರ್ನಾಟಕದಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಈ ಅಲೆಮಾರಿ ಸಮುದಾಯ ಗೊಂಬೆಯಾಟದ ಜತೆ ಮೀನು ಹಿಡಿಯುವುದು, ಕೃಷಿಗೆ ತೊಡಗುವುದು, ಸಣ್ಣ ಪುಟ್ಟ ವ್ಯಾಪಾರವನ್ನೂ ಮಾಡುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೈಷ್ಣವ ಸಂಪ್ರದಾಯವು ಪ್ರವರ್ಧಮಾನಕ್ಕೆ ಬಂದಂತಹ ಸಂಧರ್ಭದಲ್ಲಿ ಆರ್ಯ ಮೂಲದ ಶ್ರೀರಾಮನನ್ನು, ದ್ರಾವಿಡ ಮೂಲದ ಹನುಮಂತನನ್ನು ಬಳಸಿಕೊಂಡು ಈ ವರ್ಗದವರು ಬದುಕಿದ ಚಾರಿತ್ರಿಕ ಪುರಾವೆಗಳಿವೆ.
ಹೀಗೆ ಬದುಕಿದವರು ಗೊಂಬೆರಾಮರು. ಈ ಸಮುದಾಯ ಇಂದು ಅತ್ಯಂತ ವೈವಿದ್ಯ ಹಾಗೂ ಸಂಕೀರ್ಣ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂದಿನ ಮೀಸಲಾತಿಯ ಸೌಲಭ್ಯದಲ್ಲಿ ಹರಿದು ಹಂಚಿ ಹೋಗಿರುವ ಈ ಸಮುದಾಯ ತಮ್ಮ ನಿಜವಾದ ಹಕ್ಕನ್ನು ಕಳೆದು ಕೊಂಡಿದ್ದಾರೆ. ಇಂದು ಆ ನಿಟ್ಟಿನಲ್ಲಿ ಸರಿಪಡಿಸುವ ಕೆಲಸ ಆಗಬೇಕಾಗಿದೆ. ಅವರಿಗೆ ಸಾಮಾಜಿಕ ನ್ಯಾಯ ಸಿಗಬೇಕಾಗಿದೆ.

ಹಗಲು ವೇಷಗಾರರ ‘ಹನುಮಾಯಣ’

‘ಹನುಮಾಯಣ’ ಇದು ಹಗಲು ವೇಷಗಾರರೇ ತಮ್ಮ ಕಲೆಯನ್ನು ಉಳಿಸಿಕೊಳ್ಳುವ ಶೋಧದಲ್ಲಿ ತೊಡಗಿಕೊಂಡಾಗ ಕಂಡುಕೊಂಡ ಪರ್ಯಾಯ. ಇಂದು ಭಜರಂಗದಳ, ಆರ್.ಎಸ್.ಎಸ್ ಗಳು ಹನುಮನನ್ನು ದೊಡ್ಡ ಐಕಾನ್ ಆಗಿ ಬಳಸಿಕೊಂಡು, ಹನುಮನನ್ನು ಆರಾಧಿಸುವ ದೊಡ್ಡ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿದೆ. ಆದರೆ ನಿಜಾರ್ಥದಲ್ಲಿ ಜನಪದರಲ್ಲಿ ಇರುವ ಹನುಮನೇ ಬೇರೆ. ರಾಮಾಯಣದಿಂದ ಎದ್ದು ಬಂದವನಲ್ಲ. ಅಲ್ಲಿಯದೇ ಸ್ಥಳೀಯ ಚರಿತ್ರೆಯಲ್ಲಿ ಹನುಮನ ಜೀವಂತಿಕೆ ಬೇರೆಯೇ ಇದೆ.
ಅಲ್ಪ ಸಂಖ್ಯಾತ ವೈದಿಕ ಸಮುದಾಯ ಕಟ್ಟಿದ ಹನುಮನ ಚಿತ್ರವನ್ನು ಬಹುಸಂಖ್ಯಾತ ತಳ ಸಮುದಾಯಗಳ ಹನುಮನ ನಂಬಿಕೆಯ ಲೋಕದ ಮೇಲೆ ಪ್ರಹಾರ ಮಾಡುತ್ತಿವೆ. ಜನಪದರು ಕಟ್ಟಿಕೊಂಡ ಹನುಮನ ನಂಬಿಕೆಯ ಜಗತ್ತನ್ನು ಇಂದು ವಿಶೇಷವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಈ ಹುಡುಕಾಟದ ಸಂದರ್ಬದಲ್ಲಿ ಸಿಕ್ಕ ಹನುಮಾಯಣ ಹಗಲುವೇಷಗಾರರ ಆಟ ಗಮನಸೆಳೆಯಿತು. ಇಲ್ಲಿ ಹನುಮ ರಾಮನ ಸೇವಕನಲ್ಲ ಅವನದೇ ಆದ ಸ್ವಂತ ಶಕ್ತಿಯನ್ನು ಉಳ್ಳ ವೀರ ಧೀರ.

ಇಲ್ಲಿ ರಾಮ ನೆಪ ಮಾತ್ರ. ಹನುಮನ ವ್ಯಕ್ತಿತ್ವದ ಮೂಲಕ ರಾಮನನ್ನು ನೋಡುವ ವಿಶಿಷ್ಟ ಪ್ರಯತ್ನ ಇಲ್ಲಿದೆ. ಈ ತಂಡದ ರಾಮುವನ್ನು ಮಾತನಾಡಿಸಿದಾಗ “ಹನುಮನನ್ನು ನಾವು ಕಂಡದ್ದು ಬೇರೇನೆ ಸಾರ್, ಆಗಾಗಿ ಹನುಮನನ್ನೇ ನಾಯಕನನ್ನಾಗಿಸಿ ನಾವೇ ಈ ನಾಟಕ ತಯಾರಿಸಿದ್ವಿ” ಎನ್ನುತ್ತಾರೆ. ಕಡ್ಡಿರಾಂಪುರದ ಕೆ.ರಾಮು ನೇತೃತ್ವದ ಶ್ರೀ ಹಂಪಿ ವಿರುಪಾಕ್ಷೇಶ್ವರ ಬುಡ್ಗಜಂಗಮ ಸಾಂಸ್ಕೃತಿಕ ಹಗಲು ವೇಷ ಕಲಾವಿದರ ಸಂಘ ಇಂದು ಹನುಮಾಯಣ ಮಾಡುತ್ತಾರೆ.

ಈ ತಂಡ ರಾಮಾಯಣದ ಕಿಷ್ಕಿಂದಾ ಕಾಂಡದ ಅವಶೇಷಗಳನ್ನು ಹೊಂದಿರುವ ಹಂಪಿ ಪ್ರದೇಶದಲ್ಲಿ ನೆಲೆಸಿದೆ. ಇದೂ ಸಹ ಹನುಮಾಯಣ ಹುಟ್ಟಲು ಕಾರಣವಾಗಿರಬೇಕು. ಇಲ್ಲಿಯ ವಾಲಿಕಾಷ್ಠ, ಸುಗ್ರಿವ ಗುಹೆ, ಸೀತಾ ಸೆರಗು, ರಾಮ ಲಕ್ಷ್ಮಣರ ಮಂದಿರಗಳು, ರಿಷಿಮುಖ, ವಾಲಿ, ತಾರ ಬೆಟ್ಟಗಳು ರಾಮಾಯಣದ ಚಿತ್ರಣಕ್ಕೆ ಸದ್ಯದ ಸಾಕ್ಷಿಗಳಂತೆ ಕಾಣುತ್ತವೆ. ಹನುಮಾಯಣದಲ್ಲಿ ಹನುಮನೇ ಹಿರೋ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಗೆ ಬಂದಿದ್ದು, ರಾಮ ಮತ್ತು ಹನುಮನ ಭೇಟಿ, ವಾಲಿ-ಸುಗ್ರೀವರ ಕಾಳಗ, ಈ ಕಾಳಗದಲ್ಲಿ ರಾಮನ ಪಾತ್ರ, ಮುಂತಾದ ಪ್ರಸಂಗಗಳಿಂದ ಹಿಡಿದು ಹನುಮಂತ ಸೇತುವೆ ನಿರ್ಮಿಸುವವರೆಗೂ ಈ ನಾಟಕ ವಿಸ್ತರಿಸಿಕೊಂಡಿದೆ.

ಬ್ರಷ್ಟಾಚಾರ ವಿರೋಧಿ ಜನಪದ ನಾಯಕರು

ಹಣ್ಣಾ ಹಜಾರೆಯವರು ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ್ದು, ಹಜಾರೆಯವರ ಹೋರಾಟದ ಹಿಂದಣ ಅಪಾಯಗಳನ್ನು ವಿದ್ವತ್ ಲೋಕ ವಿಮರ್ಶೆಗೆ ಒಡ್ಡಿದ್ದು, ಅಣ್ಣಾ ಅವರ ತಂಡವೇ ಒಡೆದ ಮನೆಯಾಗಿರುವುದೂ, ಸರಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ ಈಗ ಕಾರ್ಯಪ್ರವೃತ್ತವಾಗಿರುವುದೂ, ಎಲ್ಲವೂ ನಿಧಾನಕ್ಕೆ ನೆನಪಿನ ಪುಟ ಸೇರುತ್ತಿವೆ.
ನನಗೀಗ ಜನಪದ ಲೋಕದ ಹಣ್ಣಾ ಹಜಾರೆಗಳು ನೆನಪಾಗತೊಡಗಿದ್ದಾರೆ.ಅಂದರೆ ನಮ್ಮ ನಮ್ಮ ಹಳ್ಳಿಗಳಲ್ಲಿ, ನಮ್ಮ ನಡುವೆಯೇ ಇರುವ ಗ್ರಾಮೀಣ ಪ್ರದೇಶದ ಸಮಾನ್ಯ ಜನರು ಕೂಡ ಬ್ರಷ್ಟಾಚಾರವನ್ನು ವಿರೋಧಿಸಿ ತುಂಬಾ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದಾರೆ. ಅವರುಗಳು ಬ್ರಷ್ಟಾಚಾರ ಎನ್ನುವ ದೊಡ್ಡ ಬ್ಯಾನರಿನಡಿ ಹೋರಾಡದಿದ್ದರೂ, ಲಂಚ ವಿರೋಧಿ ವ್ಯಕ್ತಿತ್ವವನ್ನಂತೂ ರೂಪಿಸಿಕೊಂಡವರು. ಆದರೆ ಅಂತವರನ್ನು ಬೆಂಬಲಿಸಿ ಎಷ್ಟು ಜನ ಹಿಂದೆ ನಿಲ್ಲುತ್ತಾರೆ ಎಂದು ಕೇಳಿಕೊಂಡರೆ ಅದು ಮಾತ್ರ ಶೂನ್ಯ.
ಹಳ್ಳಿ ಜನ ಅದೇನು ಬ್ರಷ್ಟಾಚಾರವನ್ನು ವಿರೋಧಿಸಿಯಾರು? ಎಂದು ಕೆಲವರು ಮೂಗಿಮುರಿಯುವ ಸಾಧ್ಯತೆಯಿದೆ. ಅಥವಾ ಜಾನಪದ ಮತ್ತು ಬ್ರಷ್ಟಾಚಾರ ಎಂಬ ವಿಷಯವೊಂದನ್ನು ಕುರಿತು ಮಾತನಾಡಲು ಹೊರಟರೆ ಸಾಂಪ್ರದಾಯಿಕ ಜಾನಪದ ವಿದ್ವಾಂಸರು ಇದೇನು ತಲೆ ಕೆಟ್ಟ ಯೋಚನೆ ಎಂದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನನ್ನ ಕೆಲವು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳ ಸಮೂಹ ತೀರಾ ಚಿಕ್ಕದೇನಲ್ಲ. ವೃದ್ಧಾಪ್ಯ, ವಿಧವಾ ವೇತನ ಕೊಡುವ ಪೋಷ್ಟಮ್ಯಾನ್ ನಿಂದ ಇದು ಆರಂಭವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ ಕಛೇರಿ, ನೋಂದಣಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಮಾರುಕಟ್ಟೆ, ಪೋಲಿಸ್ ಇಲಾಖೆ ಇನ್ನು ಮುಂತಾದ ಇಲಾಖೆಯ ಅಧಿಕಾರಿಗಳ ಜತೆ ಜನರು ಒಡನಾಡುವ ಪ್ರಸಂಗ ಬರುತ್ತದೆ.
ನಾನಾ ಕಾರಣಗಳಿಗಾಗಿ ಈ ಇಲಾಖೆಯ ಅಧಿಕಾರಿಗಳು ರೈತರಲ್ಲಿ ಲಂಚ ಪಡೆದು ಅವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಇದು ಈಚೆಗೆ ತೀರಾ ಸಾಮಾನ್ಯ ಸಂಗತಿ. ಕೆಲವರು ಈ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಹೆದರಿ ಸಾಲ ಮಾಡಿಯಾದರೂ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಒಂದು ವರ್ಗವಿದೆ. ಇಂತಹ ವರ್ಗದಿಂದಾಗಿಯೇ ಬ್ರಷ್ಟಾಚಾರ ತನ್ನ ಬಾಹುಗಳನ್ನು ಚಾಚಿಕೊಳ್ಳಲು ಅನುವಾಗುತ್ತದೆ.

ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗವಿದೆ. ಅದು ಇಂತಹ ಅಧಿಕಾರಿಗಳ ಜತೆ ಲಂಚಕೊಡದಿರುವ ಬಗ್ಗೆ ಸೆಣಸಾಡುವ ವರ್ಗ. ಅವರ ಸಾಮಾನ್ಯ ತಿಳುವಳಿಕೆಯೆಂದರೆ ಸರಕಾರ ಸಂಬಳ ಕೊಡುವಾಗ ನಾವೇಕೆ ಅವರಿಗೆ ಹಣಕೊಡಬೇಕು ಎನ್ನುವುದು ಅವರ ವಾದ. ಅದೇನೆ ಆಗಲಿ ಒಂದು ಪೈಸೆಯನ್ನೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವೆ ಎಂದು ಅಲೆದಲೆದು ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೂ ಜಗ್ಗದಿದ್ದಾಗ ಭಿನ್ನರೀತಿಯಲ್ಲಿ ಪ್ರತಿರೋಧ ಒಡ್ಡಿ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವುದೂ ಉಂಟು. ಇನ್ನೂ ಮುಂದುವರೆದು ಅವರದೇ ರೀತಿಯ ಹೋರಾಟವನ್ನೂ ಸಹ ಮಾಡುತ್ತಾರೆ. ಇಂತಹ ಹೋರಾಟಗಳು ಎಲ್ಲೂ ದಾಖಲಾಗುವುದಿಲ್ಲವಷ್ಟೆ. ಇವರುಗಳೆಲ್ಲಾ ನಮ್ಮ ನಮ್ಮ ಹಳ್ಳಿಗಳಲ್ಲೇ ನೆಲೆಸಿರುವ ಹಣ್ಣಾ ಹಜಾರೆಗಳು ಎಂದು ನನಗೀಗ ಅನ್ನಿಸತೊಡಗಿದೆ. ಹೀಗೆ ಸೆಣಸಾಡಿದ ಕೆಲವು ಕಥನಗಳು ಹೀಗಿವೆ.

ಕಥನ: ಒಂದು
ಕೂಡ್ಲಿಗಿ ತಾಲೂಕಿನ ಹಳ್ಳಿಯೊಂದರಲ್ಲಿ ಬರಮಜ್ಜಿ ಎನ್ನುವ ಅಜ್ಜಿ ಇದ್ದಳು. ಅವಳು ವೃದ್ಧಾಪ್ಯ ವೇತನ ಪಡೆಯುವಾಗ ಪೋಷ್ಟಮ್ಯಾನ್‌ಗೆ ಕಮಿಷನ್ ಕೊಡುತ್ತಿರಲಿಲ್ಲ. ಅಜ್ಜಿ ಕೇಳುವ ಪ್ರಶ್ನೆ ನಿನಗೆ ಸರಕಾರ ಸಂಬಳ ಕೊಡಲ್ಲೇನು, ಮತ್ಯಾಕ ನಾ ಕೊಡ್ಲಿ ಎನ್ನುವುದು. ಈ ಜಿದ್ದಿಗಾಗಿ ಪೋಷ್ಟಮ್ಯಾನ್ ನಾಲ್ಕು ತಿಂಗಳಾದರೂ ಸಂಬಳ ಕೊಡದಿದ್ದಾಗ ಅಜ್ಜಿ ಅಂಚೆ ಕಚೇರಿಗೆ ಹೋಗಿ ಕೇಳಿದ್ದಾಳೆ. ಆಗ ಪೋಷ್ಟಮಾಷ್ಟರ್ ನೀನು ಹಣ ಕೊಡಲು ಬಂದಾಗ ಇರಲಿಲ್ಲ ಎಂದು ಹಣ ವಾಪಸ್ ಕಳಿಸಲಾಗಿದೆ, ನೀನು ತಾಲೂಕು ಕಚೇರಿಗೆ ಹೋಗಿ ಮತ್ತೆ ಬಿಲ್ ಹಾಕಿಸಿಕೊಂಡು ಬಾ ಎಂದು ಹೇಳಿದ್ದಾರೆ.
ಆಗ ಅಜ್ಜಿಗೆ ದಿಕ್ಕುತೋಚದೆ, ತಾಲೂಕು ಕಛೇರಿಗೆ ಅಲೆದಾಗ ಅಲ್ಲಿನ ಅಧಿಕಾರಿಗಳು ಅಜ್ಜಿಯನ್ನು ಲಂಚ ಕೇಳಿದ್ದಾರೆ. ಅಜ್ಜಿ ಅಲ್ಲಿಯೂ ಪೆಡಸಾಗಿಯೇ ಉತ್ತರಿಸಿದೆ. ಹೀಗಾಗಿ ಒಂದು ವಾರ ಅಜ್ಜಿಯನ್ನು ಅಲೆದಾಡಿಸಿದ್ದಾರೆ. ಅಜ್ಜಿಕೊನೆಗೆ ನಾನು ಸಾಯೋತನಕ ಈ ಕಚೇರಿ ಬಿಟ್ಟು ಹೋಗಲ್ಲ ಎಂದು ತಾಲೂಕು ಕಛೇರಿಯ ಮುಂದೆ ಕೂತಿದೆ. ಈ ಸುದ್ದಿ ಹೇಗೋ ತಹಶೀಲ್ದಾರರ ಕಿವಿಗೆ ಬಿದ್ದು, ಅವರೇ ಅಜ್ಜಿಯನ್ನು ಕುದ್ದಾಗಿ ವಿಚಾರಿಸಿ ಲಂಚ ಕೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅಜ್ಜಿಯ ವೇತನವನ್ನು ಬಿಡುಗಡೆಗೊಳಿಸಿದರು. ಆಗ ಪೋಷ್ಟಮ್ಯಾನ್ ಉದ್ದೇಶಪೂರ್ವಕವಾಗಿ ಅಜ್ಜಿಯ ವೇತನವನ್ನು ವಾಪಸ್ ಮರಳಿಸಿದ್ದಾನೆ ಎಂದು ತಿಳಿದು ತಹಶೀಲ್ದಾರ್ ಸಂಬಂದಿಸಿದ ಅಧಿಕಾರಿಗಳಿಂದ ಪೋಷ್ಟಮ್ಯಾನ್‌ನನ್ನು ತರಾಟೆಗೆ ತೆಗೆದುಕೊಳ್ಳುವಂತೆ ನೋಡಿಕೊಂಡರು. ಇದು ಮತ್ತೆ ಪುನರಾವರ್ತನೆ ಆಗಲಿಲ್ಲ.
ಕಥನ: ಎರಡು
ನಮ್ಮ ಭಾಗದಲ್ಲಿ ಬಿ.ಡಿ. ಗೌಡ ಎಂಬ ಗ್ರಾಮ ಲೆಕ್ಕಾಧಿಕಾರಿ ಇದ್ದ. ಈತನು ಹಣದಾಹಿ. ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಹಾ ಹಣ ಕೀಳುತ್ತಿದ್ದ. ಇದರಿಂದ ಜನ ಬೇಸತ್ತಿದ್ದರು. ಹಣಕ್ಕಾಗಿ ಅವರ ಹೊಲ ಇವರಿಗೆ, ಇವರ ಹೊಲ ಅವರಿಗೆ ಬದಲಾಯಿಸಿಬಿಡುವ ಮಟ್ಟಕ್ಕೂ ಇಳಿದಿದ್ದ. ಕರೆಮೂಗಜ್ಜ ಎಂಬ ಅಜ್ಜನಿದ್ದ. ಆತ ಕಡುಕೋಪಿಷ್ಟ. ತನ್ನ ಹೊಲದ ಪಹಣಿ ಕೊಡುವುದಾಗಿ ಬಿ.ಡಿ. ಗೌಡ ಅವರಲ್ಲಿ ಕೇಳಿದ. ಆತ ಎರಡು ಸಾವಿರ ಕೊಡುವುದಾಗಿ ಕೇಳಿದ್ದ. ಇದರಿಂದ ಕೆಂಡಾಮಂಡಲವಾದ ಮೂಗಜ್ಜ ನಾಳೆ ನಮ್ಮೂರಿಗೆ ಬನ್ನಿ ಕೊಡುತ್ತೇನೆಂದು ಹೇಳಿದನು.
ಮರುದಿನ ಗೌಡರು ಹಳ್ಳಿಗೆ ಬಂದರು. ಊರ ಮುಂದೆ ನೆರೆದ ಜನರ ಎದುರು ಮೂಗಜ್ಜ ಗೌಡರ ಬಳಿ ಬಂದು, ಗೌಡ್ರೆ ನನ್ನತ್ರ ಅಷ್ಟು ಹಣ ಇಲ್ಲ, ಮುಂದಿನ ತಿಂಗಳು ಕೊಡ್ತಿನಿ ಈಗ ಪಹಣಿ ಕೊಡ್ರಿ ಎಂದ. ಅದಕ್ಕೆ ಗೌಡ ಮುಂದಿನ ತಿಂಗಳೇ ಪಹಣಿ ಕೊಡುವೆ ಬಿಡು ಎಂದನು. ಇದರಿಂದ ಕೋಪಗೊಂಡ ಮೂಗಜ್ಜ ಕಾಲಲ್ಲಿ ಇರುವ ಚಪ್ಪಲಿಯನ್ನು ಕಿತ್ತು ಮುಖ ಮೋರೆ ನೋಡದಂತೆ ಹೊಡೆದೇ ಬಿಟ್ಟ. ಜನ ಮೂಗಜ್ಜನನ್ನು ಬಿಡಿಸುವ ಹೊತ್ತಿಗೆ ಗೌಡರು ಹಣ್ಣುಗಾಯಿ ನೀರುಗಾಯಿ ಆಗಿ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಆತ ಪಟ್ಟಣಕ್ಕೆ ಹೋಗಿ ಮೂಗಜ್ಜನ ಮೇಲೆ ಪೋಲಿಸ್ ಕಂಪ್ಲೇಟ್ ಕೊಟ್ಟನು. ಇದನ್ನು ಇಡೀ ಊರಿಗೆ ಊರೇ ಪೋಲಿಸ್ ಠಾಣೆ ಎದುರು ಧರಣಿ ಕೂತು, ಗೌಡರ ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದರು. ಇದರ ಪರಿಣಾಮ ಗೌಡರನ್ನು ಅಮಾನತ್ತಿನಲ್ಲಿಡಲಾಯಿತು. ಈ ಘಟನೆಯಿಂದಾಗಿ ಆ ಭಾಗದ ಗ್ರಾಮಲೆಕ್ಕಾಧಿಕಾರಿಗಳಿಗೆ ಒಂದು ಬಗೆಯ ಬಿಸಿ ತಟ್ಟಿದಂತಾಯಿತು.
ಇಂತಹ ಇನ್ನು ಇನೇಕ ಘಟನೆಗಳನ್ನು ಸೇರಿಸಬಹುದು. ಈ ಘಟನೆಗಳು ನಡೆದದ್ದು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ. ಅಂದರೆ ಜನಪದ ಕಲೆಯನ್ನೋ, ಜನಪದ ಗೀತೆ, ಕಥೆಯನ್ನಷ್ಟೇ ಜಾನಪದ ಎಂದು ನೋಡದೆ ಹೀಗೆ ಹೊಸ ನೆಲೆಯಲ್ಲಿಯೂ ಆಯಾ ಜಿಲ್ಲಾ ಗಡಿಯ ಒಳಗೇ ನಡೆದ ಪಲ್ಲಟಗಳನ್ನು ನೋಡಬಹುದಾಗಿದೆ.
ಗುರುಶಿಷ್ಯ ಪರಂಪರೆ :
ಜಾನಪದ ಕಲೆ ಕಲಿಸುವಿಕೆಗಾಗಿ ‘ಗುರು ಶಿಷ್ಯ ಪರಂಪರೆ’ಎನ್ನುವ ಯೋಜನೆಯಿದೆ. ಇದು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ. ಆಯಾ ಜನಪದ ಕಲೆಯ ಹಿರೀಕರನ್ನು ಗುರುತಿಸಿ, ಅವರನ್ನು ಗುರುವನ್ನಾಗಿಯೂ ಆಯಾ ಕಲೆಯನ್ನು ಆಸಕ್ತಿ ಇರುವ ಶಿಷ್ಯರನ್ನು ಒಳಗೊಂಡಂತೆ, ಆರು ತಿಂಗಳು ಕಾಲ ಕಲೆ ಕಲಿಯಲು ಗುರುಶಿಷ್ಯರಿಗೆ ಸಹಾಯಧನ ಇರುತ್ತದೆ. ಇದು ಜನಪದ ಕಲೆ ಉಳಿಸುವ ಮತ್ತು ಅದನ್ನು ಆಸಕ್ತಿ ಇರುವವರ ಮೂಲಕ ಮುಂದುವರೆಸುವ ಒಂದು ಯೋಜನೆ. ಆದರೆ ಈ ಯೋಜನೆ ಆಯಾ ಜನಪದ ಕಲೆಯನ್ನು ಆಯಾ ಸಮುದಾಯದಲ್ಲಿ ಮಾತ್ರ ಮುಂದುವರಿಯುವಂತೆ ಮಾಡಿ, ಒಂದು ಜಾತಿ ಸಮುದಾಯಕ್ಕೆ ಆಯಾ ಕಲೆಯನ್ನು ಗಂಟು ಹಾಕುತ್ತದೆಯೇ ಎನ್ನುವ ಭಯ ನನಗಿದೆ. ಈ ಯೋಜನೆ ಆಯಾ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಆಧರಿಸಿ ಅದು ಅನುಷ್ಠಾನಕ್ಕೆ ಬಂದಂತೆ ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೋರನೂರು ಕೊಟ್ರಪ್ಪ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ ಬಳ್ಳಾರಿ ಭಾಗದ ಜನಪದ ಕಲಾವಿದರಲ್ಲಿ ಕೊಟ್ರಪ್ಪ ಇವರ ಬಗ್ಗೆ ಒಳ್ಳೆಯ ಗೌರವವಿದೆ.
ಈ ಬಾರಿ ಮಂಜಮ್ಮನಿಗೆ ಮಹಾರಾಷ್ಟ್ರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಇವರು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಜೋಗತಿ ಕಲೆ ಕಲಿಸಲು ಅನುವುಮಾಡಿಕೊಟ್ಟಿದ್ದರು. ಹಾಗಾಗಿ ಮಂಜಮ್ಮ ನಾಲ್ಕು ಜನ ಶಿಷ್ಯರನ್ನು , ಒಬ್ಬ ಸಹಾಯಕರನ್ನು ತೆಗೆದುಕೊಂಡು ಜೋಗತಿ ಕಲೆಯನ್ನು ಮರಿಯಮ್ಮನಹಳ್ಳಿಯ ತಮ್ಮ ಮನೆ ಆವರಣದಲ್ಲಿ ಕಲಿಸಿದರು. ಈ ಆರು ತಿಂಗಳ ತರಬೇತಿ ಮುಗಿದು ಮೊನ್ನೆಯಷ್ಟೆ ಸಮಾರೋಪ ನಡೆಯಿತು. ಹಾಗೆ ಜೋಗತಿ ಕಲೆ ಕಲಿತ ಶಿಷ್ಯೆಯರು ದುರುಗಮ್ಮ, ಕೆ. ಮಂಜಮ್ಮ, ಎಲ್ಲಮ್ಮ, ಗೌರಮ್ಮ. ಸಹಾಯಕರಾಗಿ ಹಿರಿಯ ಜೋಗತಿ ರಾಮವ್ವ ಕಲೆ ಕಲಿಸಲು ನೆರವಾಗಿದ್ದಾರೆ.
ಗುರುಶಿಷ್ಯ ಪರಂಪರೆಯಲ್ಲಿ ದರೋಜಿ ಈರಮ್ಮನ ಮೂಲಕ ಬುರ್ರಕಥಾವನ್ನು ಕಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಂತೆಯೇ ಇಮಡಾಪುರದಲ್ಲಿ ಉರುಮೆ ವಾದನ ತರಬೇತಿ, ಹಂಪಾಪಟ್ಟಣದಲ್ಲಿ ಕುದುರೆ ಕುಣಿತ, ಬಡಲಡುಕಿನಲ್ಲಿ ತಗಲುಗೊಂಬೆಯಾಟ, ಕೂಡ್ಲಿಗಿ ಮತ್ತು ವಿರುಪಾಪುರದಲ್ಲಿ ಮಹಿಳೆಯರ ಡೊಳ್ಳುಕುಣಿತ ಕಲೆಗಳು ಗುರುಶಿಷ್ಯ ಪರಂಪರೆಯಲ್ಲಿ ಕಲೆಯನ್ನು ಕಲಿಸುವುದು ಮತ್ತು ಕಲಿಯುವುದು ನಡೆಯುತ್ತಿದೆ. ಇದರಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಜಾನಪದದ ಹೊಸ ತಲೆಮಾರೊಂದು ಹುಟ್ಟಿಕೊಳ್ಳಲು ಕಾರಣವಾಗುತ್ತಿದೆ.

ಅಂತರ್ಜಾಲದಲ್ಲಿ ಜಾನಪದ
ಕನ್ನಡದಲ್ಲಿ ಜಾನಪದಕ್ಕೆಂದೇ ಇರುವ ಬ್ಲಾಗ್ ಕನ್ನಡ ಜಾನಪದ. ಈ ಬ್ಲಾಗ್ ಆರಂಭಿಸಿ ಒಂದು ವರ್ಷವಾಗಿದೆ. ಈತನಕ ಅಂತರ್ಜಾಲ ವೀಕ್ಷಕ ಸಂಖ್ಯೆ ಹತ್ತು ಸಾವಿರ ದಾಟಿದೆ. ಇಲ್ಲಿಯತನಕ ಸುಮಾರು ನೂರಕ್ಕಿಂತ ಹೆಚ್ಚಿನ ಲೇಖನಗಳನ್ನು ಈ ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ. ಅಂತರ್ಜಾಲದಲ್ಲಿ ಕನ್ನಡ ಜಾನಪದದ ಬಗ್ಗೆ ಇಲ್ಲವೆ, ಇಲ್ಲವೆನ್ನುವಷ್ಟು ಮಾಹಿತಿಯ ಕೊರತೆ ಇದೆ. ಈಚೆಗಷ್ಟೆ ಜಾನಪದ ಅಕಾಡೆಮಿ, ಜಾನಪದ ವಿಶ್ವವಿದ್ಯಾಲಯ ತನ್ನದೇ ಆದ ವೆಬ್ ಸೈಟ್‌ನ್ನು ಹೊಂದಿವೆ. ಈ ಹಿಂದೆ ಅನ್ಯ ಭಾಷಿಗರು, ಹೊರಗಿನ ಕನ್ನಡಿಗರು, ಮಾದ್ಯಮದವರು ಗೂಗಲ್ ನಲ್ಲಿ ಕನ್ನಡ ಜಾನಪದದ ಬಗ್ಗೆ ಏನಾದರೂ ಹುಡುಕಿದರೆ ಬರುವ ಪಲಿತಾಂಶ ನಿರಾಸೆ ಹುಟ್ಟಿಸುತ್ತಿತ್ತು.

ಈಗ ಗೂಗಲ್ ಹುಡುಕಾಟದಾರರಿಗೆ ಕನ್ನಡ ಜಾನಪದ ಬ್ಲಾಗ್‌ನ ಎಲ್ಲಾ ಬರಹಗಳ ಲಿಂಕ್ ಸಿಕ್ಕುತ್ತವೆ. ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಈ ಬ್ಲಾಗ್‌ಗೆ ಬೇಟಿ ಕೊಡಬಹುದಾಗಿದೆ. ರಿoಟಚಿಜಚಿಡಿuಟಿ@gmಚಿiಟ.ಛಿom ಈ ಈಮೇಲ್ ವಿಳಾಸಕ್ಕೆ ಬರಹಗಳನ್ನೂ ಕಳಿಸಬಹುದಾಗಿದೆ.
ಬ್ಲಾಗ್‌ವಿಳಾಸ: ಇದಾಗಿದೆ. ಈ ಬ್ಲಾಗನ್ನು ಬಳ್ಳಾರಿ ಜಿಲ್ಲೆಯವರೆ ನಿರ್ವಹಿಸುವುದರಿಂದಾಗಿ, ಇದನ್ನು ಕೂಡ ಬಳ್ಳಾರಿ ಜಿಲ್ಲೆಯ ಹೊಸ ನಡಿಗೆಯಲ್ಲಿ ಗುರುತಿಸಬಹುದಾಗಿದೆ.

ವೃತ್ತಿ ಕಸಬುಗಳ ನಡಿಗೆ

ಬಳ್ಳಾರಿ ಜಿಲ್ಲೆಯ ಜನಪದ ವೃತ್ತಿ ಕಸಬುಗಳಲ್ಲಿಯೂ ಹೊಸ ಬಗೆಯ ಚಲನೆಗಳನ್ನು ಕಾಣಬಹುದಾಗಿದೆ. ಜೋಳದ ಕೂಡ್ಲಿಗಿ ಕಮ್ಮಾರ ಚಂದ್ರಪ್ಪನ ಮಾತುಗಳ ಮೂಲಕ ಆ ಚಲನೆಯನ್ನು ಗುರುತಿಸಬಹುದಾಗಿದೆ.
ಚಂದ್ರಪ್ಪ ಕಮ್ಮಾರಿಕೆ ಮತ್ತು ಬಡಿಗಿತನ ಎರಡನ್ನು ಮೂವತ್ತು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದ ಕೂಡ್ಲಿಗಿಯಲ್ಲಿ ಮಾಡುತ್ತಾ ಬಂದಿದ್ದಾನೆ. ಈಗ ಆತನೊಂದಿಗೆ ಆತನ ಇಬ್ಬರು ಮಕ್ಕಳು ಅದೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಕಮ್ಮಾರಿಕೆಗೆ ಒಂದೇ ಜಾತಿಗೆ ಸೀಮಿತವಾದ ಉದ್ಯೋಗವಲ್ಲ. ಅದು ಹಲವಾರು ಜಾತಿ ಧರ್ಮದವರನ್ನು ಒಳಗೊಂಡಿದೆ. ಹಾಗಾಗಿ ಒಂದೊಂದು ಊರಲ್ಲಿ ಬೇರೆ ಬೇರೆಯ ಜಾತಿಯವರು ಕಮ್ಮಾರಿಕೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕಮ್ಮಾರಿಕೆಯನ್ನು ಆಧರಿಸಿದ ರೈತಾಪಿ ಕೆಲಸಗಳಲ್ಲಿ ಕಮ್ಮಾರಿಕೆಯನ್ನು ನಿಲ್ಲಿಸುವಂತಹ ತೀವ್ರ ಬದಲಾವಣೆಗಳೇನು ಸಂಭವಿಸಿಲ್ಲ. ಹಾಗಾಗಿ ಜಾನಪದ ವಿದ್ವಾಂಸರು ವೃತ್ತಿ ಕಸಬುಗಳು ಅವನತಿಯ ಹಾದಿ ತಲುಪಿವೆ ಎನ್ನುವ ಮಾತು ಸ್ವಲ್ಪ ಮಟ್ಟಿಗೆ ಹುಸಿ ಎನ್ನಿಸಿತು.
ಬಹುತೇಕ ವೃತ್ತಿ ಕಸಬಿನಿಂದ ಸಂಕಷ್ಟ ಅನುಭವಿಸಿದವರು ಸಹಜವಾಗಿ ತಮ್ಮ ಮಕ್ಕಳು ಅದೇ ವೃತ್ತಿಯಲ್ಲಿ ಮುಂದುವರೆಯಲು ಇಷ್ಟಪಡುವುದಿಲ್ಲ. ಆದರೆ ಕಮ್ಮಾರ ಚಂದ್ರಪ್ಪ ಹೆಚ್ಚು ಓದದ ತನ್ನ ಮಕ್ಕಳನ್ನೂ ಕಮ್ಮಾರಿಕೆಯಲ್ಲಿಯೇ ಮುಂದುವರಿಯುವಂತೆ ತರಬೇತಿ ನೀಡುತ್ತಿದ್ದಾರೆ. ಚಂದ್ರಪ್ಪನದೇ ಮಾತಿನಲ್ಲಿ ಹೇಳುವುದಾದರೆ, ‘ಹಿಂದಿನ ಕಾಲ್ದಾಗ ಹಗ್ಲು ರಾತ್ರಿ ಕತ್ತಿ ಮಾಡಿದಂಗ ಮಾಡಿದ್ರು..ಹೊಟ್ಟಿಗೆ ಬಟ್ಟಿಗೆ ಸಾಕಾಗ್ತಿರ್ಲಿ್ಲ್ಲ..ಈಗ್ಲೇ ವಾಸಿ ದಿನ ಪೂರ್ತಿ ದುಡಿದ್ರೆ ಕಡಿಮೆ ಅಂದ್ರೂ ಆರುನೂರಾದ್ರೂ ಆಗ್ತಾತಿ..ಈಗಿನ ದುಬಾರಿ ಕಾಲ್ದಾಗೂ ನಾವು ಅರಾಮಾಗಿದಿವಿ’ ಎಂದರು. ಇದು ಹೇಗೆಂದು ಕೇಳುತ್ತಾ ಹೋದಂತೆ ಕಮ್ಮಾರಿಕೆಯ ಹೊಸ ಚಲನೆಗಳು ಕಾಣತೊಡಗಿದವು.
ಇಂದು ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸಕ್ಕೆ ಟ್ರಾಕ್ಟರ್ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಟ್ರಾಕ್ಟರ್ ಮಡಕೆ ಹೊಡೆಯಲು, ಹರಗಲು ಬಳಸುವ ಕುಳಗಳು ಮೊಂಡಾದಾಗ ಅವುಗಳನ್ನು ಅಣಿದು ಚೂಪು ಮಾಡಲು ಕಮ್ಮಾರರ ಹತ್ತಿರವೆ ಬರಬೇಕು. ಒಂದು ಟ್ರಾಕ್ಟರ್ ಕುಳವನ್ನು ಅಣಿಯಲು ಕಮ್ಮಾರರು ಇನ್ನೂರ ಐವತ್ತು ರೂಪಾಯಿಯ ಚಾರ್ಜಮಾಡುತ್ತಾರೆ. ಅಂದರೆ ಹತ್ತಾರು ಎತ್ತಿನ ಮಡಕೆ ಕುಳ ಅಣಿಯುವುದರಿಂದ ಬರುವ ಹಣ ಒಂದು ಟ್ರಾಕ್ಟರ್ ಮಡಕೆ ಅಣಿಯುವುದರಿಂದ ಬರುತ್ತದೆ. ಅಂದರೆ ಅತ್ಯಾಧುನಿಕ ಯಂತ್ರವಾದ ಟ್ರಾಕ್ಟರ್ ಕೂಡ ಕಮ್ಮಾರನ ಕುಲುಮೆಯನ್ನು ಆಶ್ರಯಿಸಿರುವುದು ಇದರಿಂದ ತಿಳಿಯುತ್ತದೆ.
ಹೀಗೆ ಅಧುನಿಕ ಎನ್ನುವ ಪರಿಕರಗಳು ಕುಲುಮೆಗೆ ಬರತೊಡಗಿರಿವುದರಿಂದ ಅದರ ಆದಾಯವೂ ಹೆಚ್ಚಿದೆ. ಹೀಗೆ ಸಾಂಪ್ರದಾಯಿಕ ವೃತ್ತಿ ಕಸಬುಗಳ ಹೊಸ ಚಲನೆಯನ್ನು ನೋಡುತ್ತಾ ಹೋದರೆ, ಅದರ ಆದಾಯದ ಹೊಸ ಮೂಲಗಳು ಹುಟ್ಟಿಕೊಂಡಿರುವುದು ಗೋಚರಿಸುತ್ತದೆ. ಇದೊಂದು ಘಟನೆಯಿಂದಾಗಿ ಎಲ್ಲಾ ವೃತ್ತಿಕಸಬುಗಳು ಲಾಭದಾಯಕವಾಗಿವೆ ಎಂದು ಹೇಳುತ್ತಿಲ್ಲ, ಅವರುಗಳು ಸಂಕಷ್ಟದಲ್ಲಿದ್ದಾರೆ. ಆದರೆ ಅವರೇ ಕಂಡುಕೊಂಡ ಹೊಸ ದಾರಿಗಳನ್ನು ಹುಡುಕುತ್ತಾ ಹೋದರೆ, ವೃತ್ತಿ ಕಸಬುಗಳಲ್ಲಾದ ಬದಲಾವಣೆ ಮತ್ತು ಹೊಸ ಚಲನೆಯ ಬಗ್ಗೆ ತಿಳಿಯಬಹುದು.
ಹೀಗೆ ಸ್ಥೂಲವಾಗಿ ಬಳ್ಳಾರಿ ಜಿಲ್ಲೆಯ ಜಾನಪದದ ಹೊಸ ನಡಿಗೆಯನ್ನು ಗುರುತಿಸಬಹುದಾಗಿದೆ. ಇನ್ನು ಇದನ್ನು ಬೇರೆ ಬೇರೆ ಸಂಗತಿಗಳ ಮೂಲಕವೂ ವಿಸ್ತರಿಸಲು ಅವಕಾಶವಿದೆ. ಈ ಬರಹದ ಮೊದಲಿಗೇ ಹೇಳಿದೆ ಇದೊಂದು ಟಿಪ್ಪಣಿ ರೂಪದ ಬರಹವೆಂದು. ಹಾಗಾಗಿ ಇಲ್ಲಿನ ಟಿಪ್ಪಣಿಗಳು ಜಿಲ್ಲೆಯೊಂದರ ಜಾನಪದ ಕುರಿತಂತೆ ಹೊಸ ಚಲನೆಯನ್ನು ಗುರುತಿಸಲು ಸಹಕಾರಿಯಾಗುತ್ತವೆ.

ಗುರುವಾರ, ಡಿಸೆಂಬರ್ 1, 2011

ಕುವೆಂಪು ಮತ್ತು ಜಾನಪದ

ಡಾ. ಎಂ. ಬೈರೇಗೌಡ



ಡಾ.ಎಂ. ಬೈರೇಗೌಡರು ಮೂಲತಃ ಜಾನಪದ ವಿದ್ವಾಂಸರು. ಅವರ ಇರುಳಿಗರ ಬಗೆಗಿನ ಸಂಶೋಧನೆ ಬಹಳ ಮುಖ್ಯವಾದ ಸಮುದಾಯ ಸಂಶೋಧನೆಗಳಲ್ಲಿ ಒಂದು. ಸೋರೆ ಬುರುಡೆ ಎನ್ನುವ ಮಕ್ಕಳ ನಾಟಕದ ಮೂಲಕ ಕನ್ನಡ ಜಾನಪದದಲ್ಲಿ ಲೋಕದೃಷ್ಟಿ ಕುರಿತ ಆಲೋಚನೆಯನ್ನು ಮೊದಲ ಹಂತದಲ್ಲಿ ಗಮನಸೆಳೆದವರು. ಅವರ ಆಸಕ್ತಿ ಹಲವು. ಪ್ರಕಾಶನ, ನಾಟಕ, ಸಾಹಿತ್ಯ ಕಾರ್ಯಕ್ರಮ ಮುಂತಾದವುಗಳ ಮೂಲಕ ಸದಾ ಕ್ರಿಯಾಶೀಲವಾಗಿರುವವರು. ಬೈರೇಗೌಡರು ಕನ್ನಡ ಜಾನಪದ ಒಂದು ವರ್ಷ ಪೂರೈಸಿದ್ದಕ್ಕೆ ಹಾರೈಸಿ, ಕನ್ನಡ ಜಾನಪದಕ್ಕೆ ಕುವೆಂಪು ಮತ್ತು ಜಾನಪದ ಬರಹ ಕಳಿಸಿದ್ದಾರೆ. ಇದು ಕುವೆಂಪುವನ್ನು ಜಾನಪದದ ಮಗ್ಗಲಿಂದ ನೋಡುವ ಒಂದು ಭಿನ್ನ ಬರಹ. ಬರಹ ಕಳಿಸಿದ್ದಕ್ಕಾಗಿ ಬೈರೇಗೌಡರಿಗೆ ಧನ್ಯವಾದಗಳು.



ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ರಾತ್ರಿಪೂರ ರಂಗಪ್ರಯೋಗಕ್ಕೆ (ರಂಗರೂಪ: ಕೆ. ವೈ. ನಾರಾಯಣಸ್ವಾಮಿ ನಿರ್ದೇಶನ: ಸಿ. ಬಸವಲಿಂಗಯ್ಯ ರಂಗಾಯಣ. ಮೈಸೂರು. ಏಪ್ರಿಲ್. ೨೦೧೦) ಒಡ್ಡಿದ ತರುವಾಯ ಕೆಲವು ಪ್ರೇಕ್ಷಕ ವಿಮರ್ಶಕರು ಕುವೆಂಪು ಅವರಲ್ಲಿ ಜಾನಪದ ಪ್ರಜ್ಞೆ ಗೈರು ಹಾಜರಿಯನ್ನು ಕುರಿತು ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಮೊದಲಿಗೆ ಡಾ. ರಹಮತ್ತರೀಕೆರೆ ಅವರ ಮಾತು: ಜಾನಪದವನ್ನು ಒಂದು ಬಗೆಯಲ್ಲಿ ನಿರಾಕರಿಸಿದ ಕುವೆಂಪು ಅವರ ಕಾದಂಬರಿ ಕುರಿತ ನಾಟಕಕ್ಕೆ ಜಾನಪದ ಪರಂಪರೆಯಿಂದ ಅರ್ಜುನ ಜೋಗಿಗಳು, ಸುಡುಗಾಡು ಸಿದ್ಧರು, ಹೆಳವರು ಇತ್ಯಾದಿ ಈ ನಿರೂಪಕ ಪಾತ್ರಗಳನ್ನು ಅಳವಡಿಸಿರುವುದು ಒಂದು ವಿಶೇಷ (ಸಂ|| ಸಿ. ಎಂ. ಸುರೇಶ ಸಂಸರಂಗ ಪತ್ರಿಕೆ, ಮದುಮಗಳು ವಿಶೇಷಾಂಕ ಸಂಪುಟ-೨ ಸಂಚಿಕೆ- ಮೇ-೧೦, ೨೦೧೦) ಎಂದಿದ್ದಾರೆ.

ಇದನ್ನೇ ಅನುಮೋದಿಸುವಂತಿರುವ ಹೊಸತಲೆಮಾರಿನ ಕಿರೋಶ ವಿಮರ್ಶಕ ಡಾ. ಅರುಣ್ ಜೋಳದಕೂಡ್ಲಿಗಿ ಅವರ ಮಾತು ಹೀಗಿದೆ:
ಮಲೆಗಳಲ್ಲಿ ಮದುವಗಳು - ನಾಟಕದಲ್ಲಿ ಸೂತ್ರಧಾರರಾಗಿ ಅರ್ಜುನ ಜೋಗಿಗಳು, ಸುಡುಗಾಡು ಸಿದ್ದರು ಹಾಗು ಹೆಳವರು ನಿರೂಪಿಸುತ್ತಾರೆ... ಯಾವ ಕುವೆಂಪು ತಮ್ಮ ಜೀವಿತಾವಧಿಯಲ್ಲಿ ಜಾನಪದವನ್ನು ಮೌಡ್ಯ ಎಂದು ಆ ಕಡೆಗೆ ಹೆಚ್ಚು ಒಲವು ತೋರಲಿಲ್ಲವೋ ಅದೇ ಜಾನಪದ ಕಣ್ಣೋಟದಿಂದ ಮಲೆಗಳಲ್ಲಿ ಮದುಮಗಳು ನಾಟಕವನ್ನು ನಿರೂಪೊಸಿದ್ದು ಹೆಚ್ಚು ಅರ್ಥ ಪೂರ್ಣ!

(ಮಲೆಗಳಲ್ಲಿ ಮದುಗಳು: ಸಾಂಸ್ಕೃತಿಕ ಮುಖಾಮುಖಿ, ಸಂಪಾದಕ. ರಹಮತ್ ತರೀಕೆರೆ. ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಣೆ ಹಂಪಿ)
ಹರಮತ್ ಮತ್ತು ಅರುಣ್ ಇವರ ಮಾತುಗಳನ್ನು ವಿಶ್ಲೇಷಣೆಗೆ ಹಚ್ಚುವ ಮುನ್ನ ಸ್ವತಃ ಕುವೆಂಪು ಜಾನಪದವನ್ನು ಗ್ರಹಿಸಿರುವ ಬಗೆ ಹೇಗಿತ್ತು ಎಂಬುದನ್ನು ನೋಡಬಹುದು:
ಜಾನಪದ ಸಾಹಿತ್ಯ ಇದೆಯಲ್ಲಾ ಅದು ನಿಜವಾಗಿಯೂ ನಮ್ಮ ದೇಶ ಯಾವ ಮತ ಮೌಢ್ಯವನೆಲ್ಲಾ ಪ್ರಚಾರ ಮಾಡಿತೋ ಆ ಮೌಢ್ಯವನೆಲ್ಲಾ ಸಂಗ್ರಹಿಸಿದೆ. ಜಾನಪದ ಸಾಹಿತ್ಯ ಸಂಗ್ರಹ ಮಾಡುವ ನೀವು ಸಂಗ್ರಹಮಾಡಿ. ಅದನ್ನೊಂದು ಸಂಗ್ರಹ ಕಲೆ ಅಂತ ಹೇಳಿ. ಆದರೆ ಈ ಜನ ಯಾವ ಮೌಢ್ಯ ಹಾಗೂ ಅವಿಚಾರಕ್ಕೆ ವಶವಾಗಿ ಈ ಬಗೆಯ ಜೀವನವನ್ನು ನಡೆಸಿದರು ಎಂಬುದನ್ನು ಮಾತ್ರ ನೀವು ಹೇಳದೆ ಬಿಡಬೇಡಿ. ಜನಪದ ಸಾಹಿತ್ಯದಲ್ಲಿ ತಾಯಿ-ಮಗ, ತಾಯಿ-ಮಗಳು, ಗಂಡ-ಹೆಂಡತಿ ಇವರ ಸಂಬಂಧವನ್ನು ಕುರಿತು ವಿಷಯಗಳು ಸಾಹಿತ್ಯಕವಾಗಿ, ಕಲೆಯಾಗಿ ಚೆನ್ನಾಗಿರಬಹುದು. ಆದರೆ ಅವುಗಳಲ್ಲಿರುವುದೆಲ್ಲ ನಿಜ ಎಂದು ತಿಳಿಕೊಬೇಡಿ. ಮತ-ಮೌಢ್ಯ-ಮೂಢನಂಬಿಕೆ-ಇವುಗಳನ್ನು ಹೇಳೋದು ಎಷ್ಟೇ ಸುಂದರವಾಗಿದ್ದರೂ, ಆ ನಂದನವನ್ನು ಸಾಹಿತ್ಯ ಸಲೇ ಬಾರದು
(ಉದಯವಾಣಿ. ದೀಪಾವಳಿ ಸಂಚಿಕೆ, ೧೯೮೩) ಹೀಗೆ ಜನಪದವನ್ನು ಒಂದು ಮಾನವ ಧರ್ಮವನ್ನಾಗಿ ವೈಚಾರಕ ನೆಲೆಯಲ್ಲಿ ಸ್ವೀಕರಿಸುತ್ತಾರೆ ಕುವೆಂಪು. ಜನಪದ ಸಾಹಿತ್ಯವನ್ನು ಕುರಿತು ಕುವೆಂಪು ಅವರ ಗ್ರಹಿಕೆಯನ್ನು ಒಂದು ರೂಪಕದಲ್ಲಿ ಹೇಳಬಹುದಾದರೆ, ಅದು ಹಳ್ಳಿಗರು ಅದಕು ಇದಕು ಎದಕು ’ಬಳಸುವ’ ಗಂಗವ್ವ ಗಂಗಾಮಾಯಿ’ ಎಂಬ ಹೋಡದ ನೀರು ಇದ್ದಂತೆ. ಅನಿವಾರ್ಯವಾಗಿ ಅದೇ ನೀರನ್ನು ಬಳಸಬೇಕಾದ ಸಂದರ್ಭ ಒದಗಿ ಬಂದಲ್ಲಿ ಆ ನೀರನ್ನು ಹಾಗೇ ಉಪಯೋಗಿಸಬೇಡಿ ಏಕೆಂದರೆ ಅದು ಎಲ್ಲ ಸಾಂಕ್ರಾಮಿಕ ರೋಗಗಳ ಜನ್ಮ ಸ್ಥಾನ. ಆದ್ದರಿಂದ ಆ ನೀರನ್ನು ಹೊತ್ತು ತಂದು ಚೆನ್ನಾಗಿ ಕಾಯಿಸಿ, ಕುದಿಸಿ, ಆರಿಸಿ, ಶೋಧಿಸಿ ಉಪಯೋಗಿಸಿ’ ಎನ್ನುತ್ತಾರೆ ಕುವೆಂಪು. ಹೀಗೆ ಕುವೆಂಪು ಅವರದು ಶೋಧನ ಪ್ರತಿಭೆ.
ಈ ಹಿನ್ನೆಲೆಯಲ್ಲಿ ನೋಡಿದರೆ ರಹಮತ್ ತರೀಕರೆ ಅವರೆಂದಂತೆ ಕುವೆಂಪು ಜಾನಪದವನ್ನು ಸಂಪೂರ್ಣವಾಗಿ ನಿರಾಕರಿಸಿದವರಲ್ಲ, ಮತ್ತು ಅರುಣ್ ಜೋಳದ ಕೂಡ್ಲಿಗಿ ಅವರೆಂದಂತೆ ಅದು ಸಂಪೂರ್ಣ ಮೌಢ್ಯ ಎಂದು ಒಲವು ತೋರದೆಯೂ ಇದ್ದವರಲ್ಲ ಆದರೆ ಅದರಲ್ಲಿರುವ ಬದುಕಿಗೆ ವಿರೋಧವಾದ ಮತ-ಮೌಢ್ಯ-ಮೂಢನಂಬಿಕೆ ಸಂಬಂಧಿಸಿದ ಅಂಶಗಳನ್ನು ಸಾರಾಸಗಟಾಗಿ ಒಪ್ಪದೆ ವೈಚಾರಿಕ ಒರೆಗಲ್ಲಿನಲ್ಲಿಟ್ಟು ಉಜ್ಜಿನೋಡಿ ಸ್ವಾಗತಿಸಿ’ ಎಂದು ಅವರು ಸಾರಿ ಸಾರಿ ಹೇಳುತ್ತಿದ್ದಾರೆ.


ಈ ನೆಲೆಯಲ್ಲಿ ಕುವೆಂಪು ಸಾಹಿತ್ಯವೆಂಬ ಆ ಹುಲಿಕಲ್ ನೆತ್ತಿಯನ್ನು ಹತ್ತಿ (ಮದುಮಗಳು) ಆ ಹೆಬ್ಬುಲಿಯ ಗರ್ಜನೆಯನ್ನು ಆಲಿಸುವದಾದರೆ, ಆ ಹುಲಿ ಬೇಟೆಗೆ ಹೋಗಿ ಕತ್ತಲಗಿರಿಯ ಅಳುವಿಗಿಳಿದು (ಹೆಗ್ಗಡಿತಿ) ಅವರ ಗರ್ಭದಲ್ಲಿ ಮುಲುಗುಡುವ ಜೀವನ ಜಾಲವನ್ನು ಕಣ್ಣಿಟ್ಟು ನೋಡುವುದಾದರೆ, ಅಂಥ ರಸಿಕ ಧೀರಂಗೆ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಮಲೆನಾಡಿನ ಸಮಸ್ತ ಜಾನಪದ ಬದುಕಿನ ಸೂಕ್ಷ್ಮ ಹಾಗೂ ಸ್ಥೂಲ ಸ್ವರೂಪ ಅನಾವರಣಗೊಳ್ಳುವುದನ್ನು ಕಾಣಬಹುದು. ಕುವೆಂಪು ಸಾಹಿತ್ಯವೆಂದರೆ ಅದು ಮಲೆನಾಡಿನ ಮಲೆಯ ಮಕ್ಕಳ (ಡಾ. ಚಂದ್ರಶೇಖರ ನಂಗಲಿ ಅವರೆದಂತೆ ಫೋಕ್ಎಸ್ಡಿಮ್)ಜಾನಪದ ವಾಙ್ಮಯ ಎಂತೋ ಅಂತೆಯೇ ಅದು ವಿಶ್ವಾತ್ಮಕ ನೆಲೆಯ ಸಾಹಿತ್ಯ ಸನ್ನಿಧಿಯೂ ಕೂಡ. ಆದರೆ ಅವಿಚಾರ ರಮಣೀಯವಾದ ಆ ಸಾಹಿತ್ಯ ರಾಶಿಯಲ್ಲಿ ಕುವೆಂಪು ಎಲ್ಲಿಯೂ ಅಪ್ಪಿತಪ್ಪಿಯೂ ಮತ-ಮೌಢ್ಯ-ಮೂಢನಂಬಿಕೆಗಳಿಗೆ ಇಂಬು ಕೊಟ್ಟವರಲ್ಲಿ ಈ ಮಾತಿಗೆ ನೆನಪಾದ ಒಂದೆರಡು ಉದಾಹರಣೆಗಳನ್ನು ನೋಡಿ:
ಹೆಗ್ಗಡತಿ ಕಾಂದಬರಿಯಲ್ಲಿ ’ಕರುಣೆ ಮೂಕಪ್ರಾಣಿಯ ಬಲಿದಾನಕ್ಕಿಂತಲೂ ಹೆಚ್ಚಿನ ಪೂಜೆ’ ಎಂದು ಹೇಳಿ ಭೂತಕ್ಕೆ ಬಲಿಕೊಡುತ್ತಿದ್ದ ಬಲೀಂದ್ರನೆಂಬ ಹೋತವನ್ನು ಹೂವಯ್ಯನು ಉಳಿಸಿದ ಅಧ್ಯಾಯದ ದೆಸೆಯಿಂದ ಮದುಮಗಳು ಕಾದಂಬರಿಯಲ್ಲಿ ನಾಯಿಗುತ್ತಿತನ್ನು ತೋಳೆತ್ತಿ ಕಣ್ಣಾಪಂಡಿತ ಕೊಟ್ಟಿದ್ದ ತಾಯಿತವನ್ನು ತಿಮ್ಮಿಗೆ ತೋರಿಸುತ್ತ ಅಲ್ಲದಿದ್ರೆ ನನ್ನ ಸಂಗಡ ನೀ ಇಷ್ಟು ಸುಲಭಕ್ಕೆ ಓಡಿಬರ್ತಿದ್ಯಾ? ಚುಟುಗಿ ಹಾಕಿ ಕರೆದ್ರೆ ನಾಯಿಬರಾಹಂತೆ? (ಅಧ್ಯಾಯ - ೨೨) ಎಂದು ತೋಳು ತೋರಿಸಿ ಬೀಗುತ್ತಿರಲು ತಿಮ್ಮಿ ಒಮ್ಮೆಗೆ ಗುತ್ತಿ ತತ್ತರಿಸಿ ಹೋಗುವಂತೆ ಹ್ಞೂ ಮತ್ತೆ! ನಿನ್ನ್ಹಾಂಗೇ ಅವನೂ (ಬಚ್ಚ) ತೋರಿಸಿದ್ದ ನಂಗೆ ಎಂದು ಗುತ್ತಿಯ ನೀರಿಳಿಸುವಳು. ಹೀಗೆ ಕುವೆಂಪು ಅವಕಾಶ ಸಿಕ್ಕಾಗಲೆಲ್ಲಾ ಮತ-ಮೌಢ್ಯ-ಮೂಢನಂಬಿಕೆಗಳ ಫಳಕಗಳಾದ ಅಂತ್ರ-ಮಂತ್ರ-ತಂತ್ರ-ಕಾಯಿಲೆಗಳನ್ನೆಲ್ಲಾ ಕುಟ್ಟಿ-ಪುಡಿ ಮಾಡಿ ತೊರುವರು. ಮತ ಮೌಢ್ಯ ನಂಬಕೆಗಳೆಂಬ ಸೀಮೆ ಜಾಲಿಯ ಮುಳ್ಳುಗಳನ್ನು ಸವರಿ ಹಾಕಿ, ವಿಚಾರದ ಕಿಡಿ ಹಾರುವಂತೆ ಮಾಡುತ್ತಾರೆ. ಹೀಗದ್ದೂ ಜಾನಪದಲ್ಲಿ ಸೀಮಿತ ದೃಷ್ಟಿಯುಳ್ಳ ನಮ್ಮ ವಿಮರ್ಶಕರು ಕುವೆಂಪು ಜಾನಪದವನ್ನು ನಿರಾಕರಿಸಿದವರು ಅದರಲ್ಲಿ ಅವರಿಗೆ ಒಲವಿರಲಿಲ್ಲ, ಎಂಬಂತ ವಿವೇಕರಹಿತ ಮಾತನಾಡುವುದು ಪೂರ್ವಕಲ್ಪಿತ ದೃಷ್ಟಿಯದಲ್ಲದೆ ಬೇರೆಯಲ್ಲ. ಇಂಥವರಿಗೆ ಜಾನಪದವೆಂದರೆ ಮ್ಯೂಜಿಯಂಗಳಲ್ಲಿ ಸಂಗ್ರಹಿಸಿದ ವಸ್ತುಪರಿಕರಗಳು, ಜಾತ್ರೆ ಉತ್ಸವ ಸಭೆ ಸಮಾರಂಭಗಳಲ್ಲಿ ಬಂದು ಕುಣಿವುದು ಹಾಡುವುದು ವೇಷ ಕಟ್ಟುವುದು ಎಂದಷ್ಟೇ ಭಾವನೆ ಇರಬಹುದು. ಆದರೆ ಕುವೆಂಪು ವಾಙ್ಞಯವೊಂದು ಜಾನಪದ ಕಡಲು. ಆ ಕಡಲ ಗರ್ಭದ ತಿಮಿಂಗಿಲಾದಿ ಮತ್ಸ್ಯಲೋಕದ ಅನುಭವ ಪಡೆಯಬೇಕಾದರೆ ಮುತ್ತುಮುಳುಗ (Peಚಿಡಿಟ ಆiveಡಿ)ನ ಎದೆಗಾರಿಕೆಯೇ ಬೇಕು. ಅದರಲ್ಲಿ ವಿಹರಿಸುವುದೆಂದರೆ ಹೊಸದಿಗಂತದೆಡೆಗೆ ಸಾಗಿ ಹೋದಂತೆ. ಒಣಗು ವಿಮರ್ಶಕರಿಗಲ್ಲಿ ’ಪುಗಲು’ ಎಡೆಯಿಲ್ಲ; ರಸಿಕ ಧೀರಂಗೆ ಮಾತ್ರ ಕಡಲ ಶಂಕರ. ಆ ಒಟ್ಟಂದದ ಸಾಗರ ಸಾಹಿತ್ಯದಲ್ಲಿ ಇದು ಜಾನಪದ, ಇದು ಶಿಷ್ಟಪದ, ಇದು ಪರಿಶಿಷ್ಟಪದ, ಇದು ಪಂಚಮ ಎಂಬಂಥ ’ಪಂಚಪಾತ್ರೆಯ ವಿಮರ್ಶೆಗೆ ಅಲ್ಲಿ ಅವಕಾಶವಿಲ್ಲ ಆದ್ದರಿಂದಲೇ ಪೂರ್ವಕಲ್ಪಿತ ಸೀಮಿತ ದೃಷ್ಟಿಯ ಇಂಥ ಕೆಲವು ವಿಮರ್ಶಕರು ಕುವೆಂಪು ಅವರ ದಲಿತ ಜೀವನ ಚಿತ್ರಣದಲ್ಲಿ ಅಥೆಂಟಿಸಿಟಿ ಗೈರು ಹಾಜರು ಎಂದೂ ಚಡವಡಿಸಿದ್ದುಂಟು.


ಕುವೆಂಪು ಅವರಲ್ಲಿರುವ ಸಂಧಿಗ್ಧತೆಗಳು, ಮಿತಿಗಳು, ವರ್ಗಹಿತಾಸಕ್ತಿಗಳು ದಲಿತ ಜೀವನ ಚಿತ್ರಣಕ್ಕೆ ಅಥೆಂಟಿಸಿಟಿಯನ್ನು, ಸಮತೋಲನವನ್ನು ತಂದುಕೊಡದೆ ಹೋಗುತ್ತದೆ (ಬಿ. ಕೃಷ್ಣಪ್ಪ ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ, ನೋಡಿ: ಸಂಪಾದಕ. ಎಚ್. ಎಸ್. ರಾಘವೇಂದ್ರರಾವ್, ಶತಮಾನ ಸಾಹಿತ್ಯ ವಿಮರ್ಶೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೦೧ ಪುಟ ೫೬೮) ಪ್ರೋ. ಬಿ. ಕೃಷ್ಣಪ್ಪನವರು ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆ ಕುವೆಂಪು ಬಗ್ಗೆ ಮಾಡಿದ ಈ ಕಾಮೆಂಟನ್ನೇ ಇವತ್ತಿಗೂ ಕೆಲವು ದಲಿತ ಪಂಡಿತ ವಿಮರ್ಶಕರು ತೆರೆಮೆರೆಯಲ್ಲಿ ಆಡುವುದು ಕೇಳಿಬರುತ್ತಿದೆ. ಆದರೆ ಕೃಷ್ಣಪ್ಪನವರು ಆಗ ಅವಸರದಲ್ಲಿ ಮಾಡಿದ ಆಕ್ಷೇಪಣೆ ಅನಿಸುತ್ತದೆ. ಅದಕ್ಕೆ ಕಾರಣವೂ ಇತ್ತು. ಏನೆಂದರೆ ಅದು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳ ನಡುವೆ ಬಿರುಕು ಬಿಡುತ್ತಿದ್ದ ಕಾಲ. ದಲಿತರ ಎಲ್ಲ ಸಂಕಷ್ಟಗಳಿಗೆ ಈ ಭೂಮಾಲೀಕ ವರ್ಗವೇ ಕಾರಣವೆಂದು ದಲಿತರು ನಂಬಿದ್ದು, ಅದು ಸ್ವಲ್ಪಮಟ್ಟಿಗೆ ನಿಜವೂ ಆಗಿದ್ದು, ಕುವೆಂಪು ಆಕಸ್ಮಿಕವಾಗಿ ಅಂಥ ಒಂದು ಭೂಮಾಲೀಕ ವರ್ಗದಲ್ಲಿ ಹುಟ್ಟಿ ಬಂದದ್ದು, ಇತ್ಯಾದಿ ಈ ಎಲ್ಲ ಕಾರಣಗಳಿಂದಾಗಿ ಕೃಷ್ಣಪ್ಪನವರ ಇಂಥ ಒಂದು ಟೀಕೆಗೆ ಗುರಿಯಾಗಬೇಕಾಯಿತು. ಇದರಿಂದ ಹಾನಿಯಾದದ್ದು ಕುವೆಂಪು ಅವರಿಗಲ್ಲ-ದಲಿತವರ್ಗಕ್ಕೆ ಯಾಕೆಂದರೆ ಶೂದ್ರವರ್ಗವನ್ನು ಛಿದ್ರಿಸಿ ಪುರೋಹಿಶಾಹಿ ತನ್ನ ಬೇಳೆ ಬೇಯಿಸಿಕೊಳ್ಳಲು ಅನುಕೂಲವೇ ಆಯಿತು-ಎಂಬುದನ್ನು ಆ ಮೇಲಿನ ಕನ್ನಡ ವಿಮರ್ಶೆ ಮನಗಂಡಿದೆ. ಆದ್ದರಿಂದ ಕುವೆಂಪು ಅವರ ಕಥೆ, ಕಾದಂಬರಿ, ಭಾವಗೀತೆ, ಮಹಾಕಾವ್ಯ ಮುಂತಾಗಿ ಎಲ್ಲೆಡೆ ದಲಿತ ಜಗತ್ತು ಅನಾವರಣಗೊಂಡಿರುವ ಪ್ರಮಾಣದಲ್ಲಿ ಅಥೆಂಟಿಕ್ಕಾಗಿ ಉಳಿದ ಯಾವುದೇ ಕನ್ನಡ ಲೇಖಕರಲ್ಲಿ, ದಲಿತ ಲೇಖಕರನ್ನು ಒಳಗೊಂಡಂತೆ, ಅಭಿವ್ಯಕ್ತಿ ಪಡೆಯಲಿಲ್ಲ ಎಂಬುದು ನಿರ್ವಿವಾದ. ಈ ಸದಾಸದ್ವಿವೇಕ ಕುವೆಂಪು ಅಧ್ಯಯನ ಸಂದರ್ಭದಲ್ಲಿ ಅಗತ್ಯ ಇರಬೇಕಾದ್ದು ಇಲ್ಲವಾದರೆ ಇಂಥ ಅನರ್ಥಗಳು ಹುಟ್ಟಿಕೊಳ್ಳುತ್ತವೆ.
ವ್ಯವದಾನವಿದ್ದರೆ, ಅವರ ಕರಿಸಿದ್ದ, ಮರಸುಬೇಟೆ, ಡೂಲಿ, ನಾಗಿ, ಮಂಜಣ್ಣ ಹೇಳಿದ ಸ್ಥಳಗತೆ- ಮುಂತಾದ ಕಥನ ಕವನಗಳು; ಶ್ರೀಮನ್ಮೂಕವಾಗಿತ್ತು; ಸಾಲದ ಮಗು, ಯಾರೂ ಅರಿಯದವೀರ, ಧನ್ವಂತರಿ ಚಿಕಿತ್ಸೆ ಮುಂತಾದ ಕಥೆಗಳು; ಬೆರಳ್ಗೆ ಕೊರಳ್, ಜಲಗಾರ ಮುಂತಾದ ನಾಟಕಗಳು; ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಚಿತ್ರಿತವಾಗಿರುವ ವಾನರ, ಜಾಂಬವ ಬುಡಕಟ್ಟುಗಳು; ಈ ಎಲ್ಲಕ್ಕಿಂತ ಹೆಚ್ಚಾಗಿ ಹೆಗ್ಗಡತಿ ಮತ್ತು ಮದುಮಗಳು ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ದಲಿತ ಜಗತ್ತ್ತು-ಇದನ್ನೆಲ್ಲ ಪರಾಂಬಂರಿಸಿ ನೋಡಬಹುದು. ದಲಿತರ ದಯನೀಯ ಬದುಕು ಮುಡುಗಟ್ಟಿ ನಿಂತಿರುವ ಕೆಲವು ಸನ್ನಿವೇಶಗಳನ್ನಿಲ್ಲ ಹೆಸರಿಸಬಹುದಾದರೆ; ಕೋಣೂರು ಬಿಡಾರದಲ್ಲಿ ಎತ್ತು ಹಾರಿದಂತೆ ಹಾರಿದ ಗಂಡ ಚೀಂಕ್ರನಿಂದ ಗರ್ಭಸ್ರಾವವಾಗಿ ಭಯಂಕರ ಸಾವು ಸಾಯುವ ಅವನ ಹೆಂಡತಿ ದೇಯಿ ಸನ್ನಿವೇಶ: ಹುಲಿಕಲ್ ನೆತ್ತಿ ಹತ್ತುವ ಸಂದರ್ಭದಲ್ಲಿ ಹುಲಿಯ ಆರ್ಭಟ ಕೇಳಿ ನಡುಗವ ತಿಮ್ಮಿ, ಎದೆ ಸೆಟೆದು ನಿಲ್ಲುವ ಗುತ್ತಿ; ಕೋಣೂರು ಬೀಡಾರದಲ್ಲಿ ಐತ-ಪೀಂಚಲು ಪರಸ್ಪರ ರಮಿಸಿ ಕೊಡುವ ಸನ್ನಿವೇಶ:
ಮಲೆನಾಡಿನ ದಟ್ಟಾರಣ್ಯದ ನಡುವೆ ಕಾರ್ಗತ್ತಲಲ್ಲಿ ಪೊಲೀಸರ ಕೈಯಿಂದ ತಪ್ಪಿಸಿ ಕತ್ತಲ ಕಾಡುಬಿದ್ದು ಹೊರಟ ನಾಯಿಗುತ್ತಿಯ ಘೋರ ವಿಸ್ಡಮ್ ಇತ್ಯಾದಿ ಮದುಮಗಳು ಕೃಯಿಯಲ್ಲಿ ಚಿತ್ರಿಕವಾಗಿರುವಂತೆ ಕನ್ನಡದ ಇನ್ನುಳಿದ ಸಾಹಿತ್ಯ ಕೃತಿಗಳಲ್ಲಿ ಈ ಪ್ರಮಾಣದ ದಲಿತ ಜೀವನ ಚಿತ್ರಣ ಉಂಟೇ ಎಂಬುದನ್ನು ಕನ್ನಡ ವಿಮರ್ಶೆ ಮರುಚಿಂತನೆಗೆ ಒಳಪಡಿಸಬೇಕು.
ಕುವೆಂಪು ಅವರಿಗೆ ಮಲೆನಾಡಿನ ಒಕ್ಕಲಿಗ ಭೂಮಾಲೀಕ ಸಮಾಜದ ಬಗ್ಗೆ ವರ್ಗ ಹಿತಾಸಕ್ತಿ ಇದೆ ಎಂಬ ಇನ್ನೊಂದು ಆರೋಪವಿದೆ. ಇದೂ ಕೂಡ ಸೀಮಿತ ದೃಷ್ಟಿಯ ಪೂರ್ವಕಲ್ಪಿತ ಟೀಕೆಯೆ ಹೊರತು ಬೇರೆಯಲ್ಲ ಏಕೆಂದರೆ ಹೆಣ್ಣು-ಹೊನ್ನು-ಮಣ್ಣು (ಆಸ್ತಿ) ಮುಂತಾದ ತಾರ್ಕಿಕ ಆಮಿಷಗಳಿಂದ, ಗುಹ್ಯಾತಿಗುಹ್ಯ ರೋಗರುಜಿನ, ಮತ-ಮೌಡ್ಯ-ಮೂಡನಂಬಿಕೆಗಳಿಂದ ಇಡಿಕಿರಿದ ಈ ಸಮಾಜದ ಚಾರಿತ್ರ್ಯವಧೆಗೆ ಕುವೆಂಪು ಅವರ ಹಾಗೆ ಕೊಡಲಿ ಎತ್ತಿದ ಇನ್ನೊಬ್ಬ ಲೇಖಕ ಸಿಕ್ಕುವುದು ದುರ್ಲಭ.
ಒಂದೆರಡು ನಿದರ್ಶನ ಹೇಳುವುದಾದರೆ; ಮನೆಮುರುಕು ಚಂದ್ರೇಗೌಡ ಜೀತದಾಳಿಗಿಂತ ಹೀನಾಯವಾಗಿ ಕಂಡು ಕೆಳಕಾನೂರಿನ ಬಡವ ಅಣ್ಣಯ್ಯಗೌಡನನ್ನು ಅವಮಾನಗೊಳಿಸಿ ಅಲ್ಲಿಂದ ಒಕ್ಕಲೆಬ್ಬಿಸುತ್ತಾನೆ. (ಹೆಗ್ಗಡತಿ). ಸಿಂಭಾವಿ ಭರಮೈ ಹೆಗ್ಗಡೆ ಕುಡುಕ, ಗುಹ್ಯರೋಗಪೀಡಿತ; ಹೂವಳ್ಳಿ ವೆಂಕಟಪ್ಪ ನಾಯಕವಿಧವೆ ನಾಗಕ್ಕನನ್ನು ಕೂಡಿಕೆ ಮಾಡಿಕೊಳ್ಳಲು ಹೆಣಗುವ ಸ್ತ್ರೀಲಂಪಟ; ಹಳೆಮನೆ ಸುಬ್ಬಣ್ಣ ಹೆಗ್ಗಡೆ ತನ್ನ ಹಂದಿ ವ್ಯಾರದಲ್ಲಿ ಒಂದು ಬಿಡಿಗಾಸೂ ಬಿಡದ ಲೊಭಿ; ಅವರ ಮಗ ತಿಮ್ಮಣ್ಣ ಹೆಗ್ಗಡೆ ಜೀತಕೇರಿ ಹೆಣ್ಣುಗಳ ಹಿಂದೆ ಬಿದ್ದ ಶ್ವಾನ ಸದೃಶಮನುಷ್ಯ; ಕೋಣೂರು ರಂಗಪ್ಪಗೌಡ ಜೀತಕೇರಿಯಲ್ಲೆ ಠಿಕಾಣಿ ಹೂಡುವ ಹಾದರಿಗ; ಬೆಟ್ಟಳ್ಳಿ ಕಲ್ಲೇಗೌಡರು ಜೀತದಾಳುಗಳನ್ನು ಕಂಬಕ್ಕೆ ಕಟ್ಟಿಸಿ ರಕ್ತ ವಸರುವಂತೆ ಸಾಬರಿಂದ ಹೊನ್ನಾಳಿ ವಡ್ತ ಕೊಡಿಸುವ ನಿರ್ಧಯಿ; ಅವರ ಮಗ ದೇವಯ್ಯ ಅಂತಕ್ಕನ ಮಗಳು ಕಾವೇರಿಯನ್ನು ಬಳಸಿಕೊಂಡ ವ್ಯಾಮೋಹಿ. ಹೀಗೆ ಕುವೆಂಪು ಪ್ರಜ್ಞಾಪೂರ್ವಕವಾಗಿಯೇ ಮಲೆನಾಡಿನ ಒಕ್ಕಲಿಗ ಸಮಾಜದ ಆಕ್ಷುದ್ರ ಜಗತ್ತಿನ ಒಳ-ಹೊರಗನ್ನು ಬಯಲಿಗೆಳೆಯುತ್ತಾರೆ. ಹೀಗಿರುವಾಗ ಅವರಲ್ಲಿ ಜಮೀನ್ದಾರರ ಬಗಗೆ ವರ್ಗ ಹಿತಾಸಕ್ತಿ ಉಂಟೆಂದು ಹೇಳುವುದು ಯಾವ ನ್ಯಾಯ.
ಕುವೆಂಪು ಅವರಿಗೆ ಮಹಿಳೆಯರ ಬಗ್ಗೆ ಎಣೆಯಿಲ್ಲದ ಗೌರವ, ಪೂಜ್ಯತಾಭಾವ. ’ನಾನು ಬಂದಿದ್ದೇನೆ ಹೇಮಿಯಗಂಡ’ ಎನ್ನುವವರೆಗೆ ಸ್ವರ್ಗದ ಬಾಗಿಲು ಅವರಿಗೆ ತೆರೆಯಲಿಲ್ಲವಂತೆ. (ನೋಡಿ ಅನುತ್ತರಾ-ಕವನ ಸಂಗ್ರಹದ ಯಕ್ಷಪ್ರಶ್ನೆ) ಲಂಪಟರೋ ಮನೆ ಮೂರುಕರೂ ಆದ ಈ ಮಲೆನಾಡಿನ ಒಕ್ಕಲಿಗ ಗೌಡರುಗಳೊಂದಿಗೆ ಒಗತನ ಮಾಡುವ ಮಹಿಳೆಯರಿಗೆ ನೆಮ್ಮದಿ ಎಂಬುದೇ ಇಲ್ಲ. ಉದಾ : ದಾಯಾದಿ ಪತ್ನಿ ನಾಗಮ್ಮನವರ ಆಸ್ತಿ-ಪಾಸ್ತಿಗೆ ಚಳ್ಳೆ ಹಣ್ಣು ತಿನ್ನಿಸಿ ಕಾನೂರಿನಿಂದ ಆಕೆಯನ್ನು ಹೊರಹಾಕುವ ಚಂದ್ರೇಗೌಡ, ನಡುವಯಸ್ಸು ಮೀರಿದ ಮೇಲೂ ಕೆಳಕಾನೂರಿನ ಬಡಕುಟುಂಬದ ತರುಣಿ ಸುಬ್ಬಮ್ಮನನ್ನು ಮದುವೆಯಾಗಿ, ಗಂಗೆಯಂತಹ ಗಯ್ಯಾಳಿ ಹೆಂಗಸಿನ ಸಹವಾಸ ಮಾಡಿ ಮರ್ಮರೋಗಕ್ಕೆ ತುತ್ತಾಗಿ ಮಡಿಯುತ್ತಾನೆ; ಸೇರೆಗಾರ ಶೆಟ್ಟಿ ತನ್ನ ನರಿಬುದ್ಧಿ ಬಳಸಿ ಸುಬ್ಬಮ್ಮನಲ್ಲಿ ಸುಖಪಟ್ಟು ಆಕೆ ಗರ್ಭಧರಿಸಿದ ಮೇಲೆ ಘಟ್ಟದ ಕೆಳಕ್ಕೆ ಹಾರಿ ಹೋಗುತ್ತಾನೆ; ಹೂವಯ್ಯನಿಗೆ ಒಲಿದ ಸೀತೆ, ಅನಿವಾರ್ಯವಾಗಿ ರಾಮಯ್ಯನನ್ನು ಮದುವೆಯಾಗಿ, ಅವನ ಆತ್ಮಹತ್ಯೆಯ ನಂತರ ಸಂನ್ಯಾಸಿನಿಯಾಗಿ ನಿಲ್ಲುತ್ತಾಳೆ. (ಹೆಗ್ಗಡತಿ) ಪುರುಷತ್ವವನ್ನು ಕಳೆದುಕೊಂಡ ಸಿಂಬಾವಿ ಭರಮೈ ಹೆಗ್ಗಡೆಯ ಹೆಂಡತಿ ಜಟ್ಟಮ್ಮ ಸಂತಾನಕ್ಕಾಗಿ ಪರಿತಪಿಸುತ್ತಾಳೆ; ಬದುಕು ಸಾಗಿಸಲು ದುರ್ಬರವಾದಾಗ ವಿಧವೆ ನಾಗತ್ತೆ ತನ್ನ ವಿಧವೆ ಸೊಸೆ ನಾಗಕ್ಕನನ್ನು ಹೂವಳ್ಳಿ ವೆಂಕಟಣ್ಣನಿಗೆ ಕೂಡಿಕೆ ಮಾಡಿಕೊಡುತ್ತಾಳೆ; ಬಲವಂತದ ಮದುವೆಗೆ ಒಪ್ಪದೆ ರಾತ್ರೋ ರಾತ್ರಿ ಮನೆ ಬಿಟ್ಟು ಮುಕುಂದಯ್ಯ ಮತ್ತು ಪೀಂಚಲು ಜೊತೆ ಹುಲಿಕಲ್ಲು ನೆತ್ತಿಗೆ ಹತ್ತುವ ಮದುವಗಳು ಚಿನ್ನಮ್ಮ ಆ ಮೊಮ್ಮಗಳ ಸ್ಥಿತಿಗೆ ಮಮ್ಮಲ ಮರುಗುವ ಇಳಿವಯಸ್ಸಿನ ಅವಳ ಅಜ್ಜಿ; ಬೆಟ್ಟಳ್ಳಿ ಕಲ್ಲೇಗೌಡರ ದರ್ಪದ ಎದುರು ನಿಲ್ಲಲಾರದ ಮಡದಿ ದೊಡ್ಡಮ್ಮ; ತನ್ನ ಸೊಸೆಯ ಕಾಲನ್ನೇ ತಿರಚಿಟ್ಟ ಮಂಜಪ್ಪ ಭಟ್ಟ; ಚಿಂಕ್ರ ಮತ್ತು ಲುಂಗಿಸಾಬಿ ಇವರ ಹತ್ಯಾಚಾರಕ್ಕೆ ಒಳಗಾಗಿ ಮಿಷನ್ ಸ್ನೂಲಿನ ಬಾವಿಗೆ ಹಾರಿಕೊಂಡು ಸತ್ತ ಅಮಾಯಕ ಹುಡುಗಿ ಕಾವೇರಿ-ಈ ಮುಂತಾದ ಪಾತ್ರಗಳು ಕುವೆಂಪು ಅವರ ಸ್ತ್ರೀ ಸಂವೇಧನೆಗೆ ಸಾಕ್ತಿ ನಿಲ್ಲುತ್ತವೆ.
ಬದುಕು ಮಾಯಾಗಾನ (ಒಚಿgieಚಿಟ ಒeಟoಜಥಿoಜಿ ಐiಜಿe)
ಪುಟ್ಟಪ್ಪನವರಿಗೆ ಪುನರ್ಜನ್ಮದಲ್ಲಿ, ಕರ್ಮಸಿದ್ದಾಂತದಲ್ಲಿ, ಅಘೋರಿಸಿದ್ಧರ ಪರಕಾಯ ಪ್ರವೇಶ ಮುಂತಾದ ವಿಚಾರದಲ್ಲಿ ನಂಬಿಕೆ ಇದೆ; ಅದು ಅವರ ವೈಚಾರಿಕ ನಿಲುವಿಗೆ ವ್ಯತಿರಿಕ್ತವಲ್ಲವೆ ಎಂಬ ಮಾತು ಬಹಳಕಾಲದಿಂದಲೂ ಕೇಳಿ ಬರುತ್ತಿದೆ. ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದು. ’ನೆನಪಿನ ದೋಣಿಯಲ್ಲಿ’ ಎಂಬ ಅವರ ಆತ್ಮ ಕಥನದಲ್ಲಿ ’ನನ್ನ ತಂದೆ ವೆಂಕಟಪ್ಪನವರೇ ನನ್ನ ಮಗ ಚೈತ್ರನಾಗಿ ಹುಟ್ಟಿರುತ್ತಾನೆ’ ಎನ್ನುತ್ತಾರೆ. ಮದುವಗಳು ಕಾದಂಬರಿಯಲ್ಲಿಯೂ ಒಂದೆರಡು ನಿದರ್ಶನಗಳಿವೆ. ಬಾಲೆ ಚಿನ್ನಮ್ಮನು ತನ್ನ ಅಜ್ಜಿಯ ಜೊತೆ ನೆಂಟರ ಮನೆಗೆ ಹೋಗುತ್ತಿರುವಾಗ ’ನನಗೆ ಹಿಂದಿನ ಜನ್ಮದಲ್ಲಿ ಮುಕುಂದ ಭಾವನೇ ಗಂಡನಾಗಿದ್ದನು’ ಎಂದು ಹೇಳುತ್ತಾಳೆ; ಹಳೇ ಮನೆ ಸುಬ್ಬಣ್ಣ ಹೆಗ್ಗಡೆಯ ಮಗ ದೊಡ್ಡಣ್ಣ ತಿರುಪತಿ ಯಾತ್ರೆಗೆಂದು ಹೋದವನು ದಾರಿಯಲ್ಲಿಯೇ ದುರ್ಮರಕ್ಕೀಡಾಗಲು ಅವನ ಶರೀರಕ್ಕೆ ಇನ್ನೂ ಕರ್ಮ ಸವೆಯದೆ ಅಂತರ್ ಪಿಶಾಚಿಯಾಗಿ ಅಲೆಯುತ್ತಿದ್ದು ಗೋಸಾಯಿ ಒಬ್ಬನ ಜೀವಧಾರಣೆ ಮಾಡುತ್ತದೆ. ಹಾಗೆಯೇ ರಂಗಮ್ಮನ ಗಂಡ ಅದೇ ದೊಡ್ಡಣ್ಣ ಹೆಗ್ಗಡೆಯು ಮುಕುಂದಯ್ಯನ ಭಾವ ದೇವಯ್ಯನ ಮಗನಾಗಿ ಪುನರ್ಜನ್ಮ ತಾಳಿರುವನೆಂದು. ಗಡ್ಡದಯ್ಯನು ಮುಕುಂದಯ್ಯನಿಗೆ ಹೇಳುತ್ತಾನೆ. ಆದರೆ ಗಡ್ಡದಯ್ಯ ಮುಂದಿನದು ಏನಾಗುತ್ತದೆ ಎಂಬುದರ ಬಗ್ಗೆ ಮಾತ್ರ ಬಾಯಿತೆರೆಯಲಾರ. ಇದೇ ಜಾನಪದ ಜೀವನದ ಮಾಯಗಾನ; ಅದೊಂದು ನಿಗೂಢ ವಿಶ್ವ ರಹಸ್ಯ ೪+೪=೮ ಎಂಬುವ ಲೆಕ್ಕಾಚಾರ ಇಲ್ಲಿಗೆ ಸಲ್ಲದು. ಕುವೆಂಪು ಸಾಹಿತ್ಯದ ಮ್ಯಾಜಿಕಲ್ ಮೆಲೋಡಿ ಎಂದರೆ ಈ ಪರಿಯ ಸೊಬಗು! ಇಂಥ ಸಾಪೇಕ್ಷ ಜಾನಪದ ಶ್ರದ್ಧಾನಂಬಿಕೆಗಳನ್ನು ಕುವೆಂಪು ಕಾದಂಬರಿಗಳಿಂದ ಮೈನಸ್ ಮಾಡಿದರೆ ಅಲ್ಲಿ ಉಳಿಯುವದೇನು? ಹೆಜ್ಜೇನು ಕಟ್ಟಿ ಮರಿ ಮಾಡಿಕೊಂಡು, ಜೇನುಹೀರಿ ಹಾರಿಹೋದ ಮೇಲೆ ಆ ರೋಕ್ಷ ವೃಕ್ಷದಲ್ಲಿ ಇಳಿಬಿದ್ದ ಶುಷ್ಕ ಜೇನು ರೊಟ್ಟಿಯಂತಷ್ಟೆ. ಇಂಥವುಗಳಿಗೆಲ್ಲ ಸಮಜಾಯಿಷಿ ಕೊಡಲುಂಟೇ ಹಾಗೆ ಮಾಡುವುದೆಂದರೆ ಒಣವೇದಾಂತ, ಶುಷ್ಕ ವೈಚಾರಿಕತೆ ಮರಳು ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇನೆಂಬ ಶುದ್ಧ ಮೂರ್ಖತನ. ಈ ಬಗ್ಗೆ ಇನ್ನಿಷ್ಟು ವಿಸ್ತಿರಿಸಿ ಹೇಳುವುದಾದರೆ. ದೇವಯ್ಯನ ತೊಟ್ಟಿಲು ಕಂದನನ್ನು ಕಂಡು ಸುಬ್ಬಣ್ಣ ಹೆಗ್ಗಡೆ ತನ್ನ ಮಗನ ನೆನಪು ತೆಗೆದರೆ, ಮತ್ತು ಅವರ ಸೊಸೆ ದೊಡ್ಡಣ್ಣನ ಹೆಂಡತಿ ರಂಗಮ್ಮ ಅದೇ ಮಗುವನ್ನು ಕಂಡು ತನ್ನ ಗಂಡನೇ ಇವನೆಂದು ಭಾವಿಸಿ ಮೈಮತೆತರೆ - ಇದೆಲ್ಲ ಜಾನಪದ ಪ್ರಪಂಚದಲ್ಲಿ ಸ್ವೀಕೃತವೆ ಅಲ್ಲವೇನು? ಹಾಗೆಂದು ಕುವೆಂಪು ಪುನರ್ಜನ್ಮದಲ್ಲಿ ಕರ್ಮಸಿದ್ಧಾಂತದಲ್ಲಿ, ಪರಕಾಯ ಪ್ರವೇಶ ಮುಂತಾದವುಗಳಲ್ಲಿ ನಂಬಿಕೆ ವುಳ್ಳವರಾಗಿದ್ದರು- ಎಂದು ’ಇಳಿಕೈದು’ ಮಾತಾಡಲುಂಟೆ? ವಾಸ್ತವವಾಗಿ ಇದೊಂದು ಮಾಯಲೋಕ. ಬದುಕಿನ ಭ್ರಮಣೆಗೆ ಕೊನೆ ಮೊದಲು ಎಂಬುದಿಲ್ಲವಲ್ಲ ಮದುಮಗಳು ಕಾದಂಬರಿಯ ಮೊದಲಿಗೆ ಸಾದರಪಡಿಸಿರುವಂತೆ ’ಇಲ್ಲಿ ಯಾವುದಕ್ಕೂ ಮೋದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ! ಆದ್ದರಿಂದ ಗಡ್ಡದಯ್ಯ ಹೇಳುವಂತೆ ನಾವು ಅರಿವಾಸೆಯ ಬಿಟ್ಟು ಇರುವಾಸೆಯ ತೊಡಬೇಕು. ಕುವೆಂಪು ಸಾಹಿತ್ಯ ಎಂದರೆ ಈ ಲೋಕದ ಬದುಕಿಗೆ ಹಿಡಿದ ಒಂದು ಸಾಗರೋಪಮ ಮಾಂತ್ರಿಕ ಪ್ರತಿಮೆ. ನೆಲಛಂದಸ್ಸಿನ ಈ ಮಾಂತ್ರಿಕತೆಯ ಇಲ್ಲವಾಗಿದ್ದರೆ, ಅವರ ಕಾದಂಬರಿಗಳು ರಕ್ತಮಾಂಸ ಇಲ್ಲದ ವೈದ್ಯವಿಜ್ಞಾನದ ಪ್ರಯೋಗಾಲಯದಲ್ಲಿರಿಸಿದ ಕಂಗಾಲ ಅಸ್ಥಿ ಪಂಜರಗಳ ತಾಗುತ್ತಿದ್ದವು ಕುವೆಂಪು ಕೂಗುವ ಕೂಗು ಕತ್ತಲಗಿರಿ ಕಣಿವೆಯಲ್ಲಿ ಮಾರ್ದನಿಸುತ್ತದೆ; ಹುಲಿಕಲ್ ನೆತ್ತಿಯಲ್ಲಿ ಅಬ್ಬರಿಸುತ್ತದೆ. ಅದನ್ನು ಆಲಿಸಿ ಆನಂದಿಸುವುದಕ್ಕೆ ಗುತ್ತಿ-ತಿಮ್ಮಿ, ಐಕ-ಪೀಂಚಲು ಇಂಥ ಅಡವಿ ಜೀವಿಗಳ ಎದೆಗಾರಿಕೆಯೇ ಬೇಕು. ಇಲ್ಲವಾದರೆ, ’ಕುವೆಂಪು ಒಂದು ಬಗೆಯಲ್ಲಿ ಜಾನಪದವನ್ನು ನಿರಾಕರಿಸಿದವರು; ಅದು ಮೌಢ್ಯವೆಂದು ಅವರು ಆ ಕಡೆಗೆ ಹೆಚ್ಚು ಒಲವು ತೋರಲಿಲ್ಲ’ ಎಂಬಂಥ ಅವಸರಿವೂ, ಅಸಂಬದ್ಧವೂ, ಅಪ್ರಭುದ್ಧವೂ ಆದ ಪ್ರತಿಕ್ರಿಯೆಗಳು ಹುಟ್ಟಿಕೊಳ್ಳುತ್ತವೆ ಒಕ್ಕಲು ಕಣದ ಮೇಟಿಗೆ ಕಟ್ಟಿದ ’ಬಡಿಹೋರ’ ಗಳಂತೆ ಸುತ್ತುವ ಇಂಥ ವಿಮರ್ಶಕರನ್ನು ಕಂಡು, ಕುವೆಂಪು ಮೈಮೇಳೆ ಬಂದವರಂತೆ ವರ್ತಿಸುವ ಆ ಕಾಡು ಕವಿಯ ಈಕಾಡು ವಿಮರ್ಶಕ ವಿ. ಚಂದ್ರಶೇಖರ ನಂಗಲಿಯವರು ’ಕುವೆಂಪು ಕಾದಂಬರಿಗಳಲ್ಲಿ ’ಏಕೈಕ’ವೆನ್ನಬಹುದಾದ ಕ್ರಿಯೆ-ಕಾಲ-ದೇಶಗಳಲ್ಲಿ..... ಈ ಕಾದಂಬರಿಗಳಿಗೆ ಪ್ರಾದೇಶಿಕ ಎಂಬ ಹಣೆಪಟ್ಟಿ ಹಚ್ಚಿರುವ ವಿಮರ್ಶೆಯ ವಾಗ್ವಿಲಾಸಗಳಿಗೆ ದಿಕ್ಕಾರವಿರಲಿ (ಕುವೆಂಪು ಕಾದಂಬರಿಗಳುಃ ಹೊಸ ಓದುತತ್ವ. ಹೊಸತು ಅಕ್ಟೋಬರ್ ೨೦೧೧) ಎಂದು ದೆಹಲಿಯ ಕರ್ನಾಟಕ ಸಂಘ ಏಪ್ರಿಲ್ ೨೦೧೧ರಲ್ಲಿ ನಡೆದಿ ಕುವೆಂಪು ಕುರಿತು ವಿಚಾರ ಸಂಕೀರಣದಲ್ಲಿ ಗುಡುಗಿರುವುದು ಆ ಗುಡುಗಿಗೆ ಈವರೆಗೆ ಯಾರೂ ಮಾರುತ್ತರಿಸದೆ ಇರುವುದೇ ಅವರ ಮಾತಿನ ಗುರುತ್ವವನ್ನು ಸಾದರಪಡಿಸುತ್ತದೆ.
ಕ್ರಿಯಾ-ಕಾಲ-ದೇಳೈಕ್ಯಗಳೆಂಬ ಟ್ರಿನಿಟಿಗಳೆಲ್ಲೆಮೀರಿ
ಪ್ರೊ. ವಿ. ಚಂದ್ರಶೇಖರ ನಂಗಲಿಯುವರೆಂದತೆ ಕುವೆಂಪು ಕಾದಂಬರಿಗಳು ಯಾವ ಕ್ರಿಯಾ-ಕಾಲ- ದೇಶಗಳಿಗೂ ಬದ್ಧವಾದುವುಗಳಲ್ಲಿ ಅವು ಪ್ರಾಚಿನ ಗ್ರೀಕ್ನ ಕಾಲೈಕ್ಯ (Uಟಿiಣಥಿ oಜಿ ಣime) ಸ್ಥಳಕ್ಕೆ (Uಟಿiಣಥಿ oಜಿ ಠಿಟಚಿಛಿe ಹಾಗೂ ಕ್ರಿಯೈಕ್ಯ (Uಟಿiಣಥಿ oಜಿ ಣime) ಎಂಬ ಟ್ರಿನಿಟಿ ಕಾವ್ಯ ತತ್ವಸಿದ್ದಾಂತಗಳಿಗೆ ಒಗ್ಗುವ ಕೃತಿಗಳಲ್ಲಿ, ಇದನ್ನರಿಯದೆ, ಮೇಬಾಲೆಯ ಮಕ್ಕಳಾದ ಕೆಲವು ವಿಮರ್ಶಕರು ಕುವೆಂಪು ಕಾದಂಬರಿಗಳು ಪ್ರಾದೇಶಿಕವಾದವುಗಳು; ಇಲ್ಲಿ ಕೇಂದ್ರ ಪ್ರಜ್ಞೆ ಎಂಬುದಿಲ್ಲ; ಕೇಂದ್ರ ಘಟನೆಯೇ ಇಲ್ಲ; ನಾಯಕನಿಲ್ಲ, ನಾಯಕಿಯಿಲ್ಲ; ಹಾಗಿಲ್ಲ, ಹಾಗಿಲ್ಲ, ಅದಿಲ್ಲ, ಇದಿಲ್ಲ ಎಂದು ಮುಂತಾಗಿ ಬಡಬಡಿಸುವರು. ಆದರೆ ಈ ವಿಶ್ವ ವ್ಯಾಪಾರದಲ್ಲಿ ಕೇಂದ್ರ ಪ್ರಜ್ಞೆ ಕೇಂದ್ರ ಘಟನೆ ಎಂಬುದೊಂದಿದೆಯೇ? ಇಲ್ಲ, ರೂಪಕದಲ್ಲಿ ಹೇಳುವುದಾದರೆ, ಕವಿ ಬೇಂದ್ರೆಯವರು ನಿರ್ವಚಿಸಿರುವಂತೆ ವಿಶ್ವ ವ್ಯಾಪಾರವೆಂಬುದೊಂದು ಅನಂತ ಪ್ರಣಯ:
ಉತ್ತರ ಧ್ರುವದಿಂ ದಕ್ಷಿಣ ಧ್ರುವಕ್ಕೂ
ಚುಂಬಕ ಗಾಳಿಯು ಬೀಸುತ್ತಿದೆ
ಸೂರ್ಯನ ಬಿಂಬಕ್ಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.
ಹೀಗೆ ಭೂಮಿ ಮೊದಲು ಗೊಂಡು ಸೂರ್ಯ ಚಂದ್ರಾದಿಗ್ರಹತಾರಾ ನಕ್ಷತ್ರಗಳೆಲ್ಲ ತಂತಮ್ಮ ಪಥದಲ್ಲಿ ಚಲಿಸುತ್ತ ಅನಂತಾಕಾಶದಲ್ಲಿ, ಅನಂತಕಾಲದಲ್ಲಿ ಸುಮ್ಮನೆ ಪ್ರವಾಹದೋಪಾದಿಯಲ್ಲಿ ಸುತ್ತುತಿವೆಯಷ್ಟೆ, ಇಲ್ಲಿ ’ಏಕೈಕ’ ಕ್ರಿಯಾ-ಕಾಲ-ಘಟನೆಗಳೆಂಬುವೇ ಇಲ್ಲ. ಇದೇ ತಾತ್ವಿಕತೆ ಕುವೆಂಪು ಕಾದಂಬರಿಗಳ ಭೂಮಿಕ. ಇದು ಅವರ ಆರಂಭದ ಸಾಹಿತ್ಯದಲ್ಲಿಯೇ ಮೈದೋರಿದ. ಉದಾಹರಣೆಗೆ ೧೯೩೬ ರಲ್ಲಿ ರಚಿತವಾದ ’ಕರಿಸಿದ್ಧ’ ಎಂಬ ಕಥನ ಕವನದ ಮುಕ್ತಾಯವನ್ನು ಗಮನಿಸಬಹುದು.
ಯಮನ ಕರಣಿಕನಾಗ ಕಾಲದೋಲೆಯ ಮೇಲೆ,
ಚಿತ್ರಗುಪ್ತನು ಬರೆದು ಚಿತ್ರಿಸಿದ ನಿಂತೆಂದು;
ಪಾರ್ಲಿಮೆಂಟನ ಲೊಬ್ಬ ಭಾಷಣವ ಮಾಡಿದನು.....
ವಂಗದೇಳದ ಕವಿಯು ನಾಟಕವ ನಾಡಿದನು.....
ಹಿಮಗಿರಿಯ ಮೇಲೊಬ್ಬ ಸಾಧುವಾದನು ಸಿದ್ಧ.....
ಜರ್ಮನಿಯ ದೇಶದಲಿ ನಡೆದಿದೆ ಮಹಾಯುದ್ಧ.....
ಕುಪ್ಪಳಿಯಕೆರೆಯಲ್ಲಿ ಬೈರ ಹುಡುಗನುಬಿದ್ದ.....
ಮಡಿದವಗೆ ಮರುಗಿದರು ಗಿಡ್ಡಿ, ಕರಿಸಿದ್ದ.....
ಹಂಡನಾಯಿಯು ಮರುಗಿ ಕಣ್ಣೀರು ಕರೆದಿತ್ತು.....
ಆಫ್ರಿಕದಿ ಕಂಬಿ ತಪ್ಪಿದ ರೈಲು ಬಿದ್ದಿತ್ತು.....
ಕಾಶಿಯಲ್ಲಿ ಹಾರುವವರು ಹೇಳುತ್ತಿರುವರು ವೇದ.....
ಚಿತ್ರಗುಪ್ತನಿಗಿದೆಯೆ ಮೇಲುಕೀಲನ ಭೇದ ?
ಹೀಗೆ ಯಮನ ಕರಣಿಕ ಚಿತ್ರಗುಪ್ತನಿಗೆ ಲೋಕ ಘಟನೆಗಳೆಲ್ಲ ಒಂದೇ ಸಮಾನ.
ಅಲ್ಲಿ ಬಿಡ ಗಿಡ್ಡಿ, ಕರಿಸಿದ್ದರ ಮಗ ಬೈರ ಹುಡುಗ ಕುಪ್ಪಳಿ ಕರೆಯಲ್ಲಿ ಮುಳಿಗಿ ಸತ್ತದ್ದು ಎಂತೋ ಅಂತೆಯೇ ಉಳಿದ ಲೋಕ ಘಟನೆಗಳು ಸಹ ಆ ಪೂರ್ಣದೃಷ್ಟಿಗೆ ಯಾವುದು ಸಣ್ಣದಲ್ಲ, ಯಾವುದೂ ದೊಡ್ಡದಲ್ಲ; ಅಲ್ಲಿ ಮೇಲು ಕೀಳೆಂಬ ಭೇದವಿಲ್ಲ. ಹಾಗೆಯೇ ಮದುಮಗಳು ಕಾದಂಬರಿಯಲ್ಲಿ ಚಿತ್ರತವಾಗಿರುವ ಸಿಂಬಾವಿ, ಲಕ್ಕುಂದ ಹೂವಳ್ಳಿ, ಕಲ್ಲೂರು, ಬೆಟ್ಟಳ್ಳಿ, ಮೇಗರವಳ್ಳಿ, ಹಳೆಮನೆ ಮುಂತಾದ ಊರು ಕೇರಿಗಳಲ್ಲಿ ಏಕಕಾಲಕ್ಕೆ ನಡೆಯುವ ಕ್ರಿಯಾ ಪರಂಪರೆಯನ್ನು ಕುವೆಂಪು ಅವರ ಸಮ್ಯಕ್ ದೃಷ್ಟಿ ಇದ್ದಲ್ಲಿ ಯೇಕೆಂದೇ ಕಂಡರಿಸಬಲ್ಲದು.
ಸಂಜಯನ ಕರ್ಣ ದೃಷ್ಟಿ
ಸಂಜಯನು ಕುರುಕ್ಷೇತ್ರ ರಣಭೂಮಿಯಲ್ಲಿ ಯಾರು ಯಾರು ಗೆದ್ದರು, ಯಾರು ಯಾರು ಸೋತರು, ಸತ್ತರು ಮುಂತಾದನೆಲ್ಲ ಎದುರಿಗೆ ಕಂಡವನಂತೆ ಧೃತರಾಷ್ಟ್ರನಿಗೆ ಬಣ್ಣಿಸಿ ಹೇಳುತ್ತಿದ್ದನು. ಹೀಗೆ ಎದುರಿಗೆ ಕಾಣದಿದ್ದರೂ ಕಂಡಂತೆ ಸಾಕ್ಷಾತ್ಕಾರಿಸಿಕೊಂಡು ವರ್ಣಿಸುವುದನ್ನು ’ಟಿಲಿಪತಿ’ ದೃಷ್ಟಿಎನ್ನಲಾಗುತ್ತದೆ. ಮಹಾನ್ ಲೇಖಕರೆದು ಇಂಥಪರಿಭಾವನೆ. ಕಾಲ ಪ್ರವಾಹದಲ್ಲಿ ವಿಸ್ಮೃತಿಗೆ ಹೋದ ಎಷ್ಟೆಷ್ಟೋ ಘಟನೆಗಳು ಸಾಗರಮಧ್ಯೆ ತೇಲುವ ದ್ವೀಪ ಸ್ತೋಮಗಳಂತೆ ತಟ್ಟನೆ ಕಣ್ ಗೋಚರವಾಗಬಹುದು. ಮಲೆನಾಡಿನ ಕೊಂಪಯೊಂದರಲ್ಲಿ ಕ್ರೈಸ್ತಮತ ಪ್ರಚಾರ ನಿರತ ಪ್ರಾದಿ, ಜೀವರತ್ನಯ್ಯ ಮಾಡುವ ಮತಾಂತರ ಬೋಧೆ ಎಂತೋ ಅಂತೆಯೇ ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡುವ ಹಿಂದೂ ಧರ್ಮದ ರ್ಶನ ಸಾರವೂ ಸಹ. ಅವರ ಭಾಷಣ ಚಿಕಾಗೋದಿಂದ ವಿಂದ್ಯ-ಹಿಮಾಚಲ ಪರ್ವತಗಳಲ್ಲೂ ಪ್ರತಿಧ್ವನಿಸುತ್ತದೆ-ಕಾಲ ದೇಶ ಮೀರಿ, ದೇವಯ್ಯನ ತೊಟ್ಟಿಲ ಕಂದನಲ್ಲಿ ತನ್ನ ಹಿರಿಯಮಗ ದೊಡ್ಡಣ್ಣನನ್ನು ಕಾಣುವ ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಹಾಗೂ ಆತೊಟ್ಟಿಲ ಕಂದನೇ ನನ್ನ ಗಂಡ ದೊಡ್ಡಣ್ಣನೆಮದು ಭ್ರಮಿಸುವ ರಂಗಮ್ಮ, ನೆಂಟರಮನೆ ದಾರಿಯಲ್ಲಿ ಹೋಗುತ್ತ ಮುಕುಂದ ಭಾವನೇ ತನ್ನ ಹಿಂದಿನ ಜನ್ಮದ ಗಂಡ ನೆಂದು ನೆನಪುತೆಗೆವ ಜಾತಿ ಚಿನ್ನಮ್ಮ-ಇವರೆಲ್ಲ ದೇಶಕಾಲಗಳನ್ನು ಒಂದೆಡೆಗೆ ಒಳಗೊಂಡು ಕಾಣುವವವರು. ಇಂಥ ಎಷ್ಟೋ ಸಂಗತಿಗಳು ಕುವೆಂಪು ಕಾದಂಬರಿಗಳಲ್ಲಿ ಚೆಲ್ಲುವರಿದು ತುಂಬಿವೆ ಆದಕಾರಣ ಅವರ ವಿಚಾರವಂತ ಶಿಷ್ಯಕೆ. ರಾಮದಾಸ್ ಒಮ್ಮೆ ಕುವೆಂಪು ಅವರನ್ನು ಕುರಿತು ’ನಿಮಗೆ ಪುನರ್ಜನಮ್ಮದಲ್ಲಿ ನಂಬಿಕೆ ಇದೆಯೇ? ಎಂದೇ ಕೇಳಿದರಂತೆ. ಅದಕ್ಕೆ ಕುವೆಂಪುನಕ್ಕು ’ಇದ್ದರೆ ಅದರಿಂದ ಲೋಕಕಲ್ಯಾಣಕ್ಕೆ ಯಾವಭಂಗವೂ ಇಲ್ಲ. ಅದು ಬದುಕಿನ ನಿಗೂಢತೆ, ಅದಿರಲಿ, ನೀವು ನನ್ನ ಮನುಜಮತ ವಿಶ್ವಾಸಥದ ಸಪ್ತ ಸೂತ್ರಗಳನ್ನು ಅನುಸರಿಸಿ ಶ್ರೇಯೋವಂತರಾಗಿರಿ’ ಎಂದರಂತೆ ಕೊನೆಯದಾಗಿ ಒಂದುಮಾತು ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿ ಡ್ಯಾಂಬಳಿ ಸ್ಥಾಪಿಸಲಾದ ವಿಶ್ವವಿದ್ಯಾನಿಲಯಕ್ಕೆ ಕುವೆಂಪು ಹೆಸರಿಡಬೇಕೆಂಬ ಪ್ರಸ್ತಾವ ಚರ್ಚೆಗೆ ಬಂದಾಗ ಕೆಲವರು ವ್ಯಕ್ತಿಯ ಹೆಸರು ಬೇಡ ಎಂದು ಆಕ್ಷೇಪ ಎತ್ತಿದ್ದಾರಂತೆ ಆವಿದಾದವೆದ್ದ ಸಂದರ್ಭದಲ್ಲಿಯೇ ಹಾಸನದ ವಿಚಾರವಾದಿ ಜ.ಹೋ. ನಾರಾಯನ ಸ್ವಾಮಿಯವರು ಕುವೆಂಪು ಅವರನ್ನು ಕಾಣಲು ಮೈಸೂರಿಗೆ ಹೋಗಿದ್ದರಂತೆ ಆ ದಿನ ಸಂಜೆ ವಾಕ್ ಹೋಗತ್ತಿದ್ದಾಗ ಜ.ಹೋ.ನಾ. ಅವರು ಹೀಗೇ ಮಾತಿನಮಧ್ಯೆ ಈ ವಿಚಾರವನ್ನೇತ್ತಿದರಂತೆ. ಅದಕ್ಕೆ ಕುವೆಂಪು ಕೊಂಚ ತಡೆದು ನಿಂತು ಧ್ಯಾನಿಸುತ್ತಾ, ಯಾವುದೋ ಶಕ್ತಿ ಆವಾಹನೆಗೊಂಡವರಂತೆ, ಬಲಗೈಯಿಂದ ತಮ್ಮ ಎದೆಯನ್ನು ತಟ್ಟಿಗೊಳ್ಳುತ್ತಾ, ಈತನ ಶಕ್ತಿ ಏನು ಎಂಬುದು ತಿಳಿಯಬೇಕಾದರೆ ಇನ್ನೂ ಐವತ್ತು ವರ್ಷಗಳು ಕಳೆಯಬೇಕು’ ಎಂದುಹೇಳಿ ಆಮೇಲೆ ಯಥಾ ಪ್ರಕಾರ ವಾಕಿಂಗ್ ಮುಂದುವರಿಸಿದರಂತೆ ಈ ಪ್ರಸಂಗವನ್ನು ಜ.ಹೋ. ನಾ ಅವರು ತಮ್ಮ ’ಚೈತನ್ಯರೂಪಿ ಕುವೆಂಪು’ ಎಂಬ ಕೃತಿಯಲ್ಲಿ ದಾಖಲಿಸುತ್ತಾರೆ. ಕುವೆಂಪು ಶತಮಾನೋತ್ಸವ (೨೦೦೪) ಆಚರಣೆ ಮೊದಲುಗೊಂಡು ಅವರು ಈ ಮಾತಿನ ಪ್ರತ್ಯಕ್ಷ ಅನುಭವ ನಮಗಾಗುತ್ತದೆ. ಈಗ ಕುವೆಂಪು ಮಲೆನಾಡಿನ ಒಂದು ಕಾಡು ಕಾಜಾಣ; ಅದರಗೂಡು ಹುಲಿಕಲ್ ನೆತ್ತಿಯಲಿ; ಅದರ ಹಾರಾಟ ಸಹ್ಯಾದ್ರಿ ಶ್ರೇಣಿಯಲಿ; ಅದರ ಕಣ್ಣೋಟ ಗಿರಿಕಂದರಿಗಳ ಚರಾಚರ ಜಾನಪದ ಬದುಕಿನತ್ತ ಕೀಲಿಸಿದೆ. ಅದರ ತಾರಸ್ವರದ ಕೂಗು ಅಲ್ಲಮ ನಿರ್ವಚಿಸಿರುವಂತೆ ಹಿಂದಣ ಅನಂತವನು ಮುಂದಣ ಅನಂತವನು ಒಂದುದಿನ ಒಳಗೊಂಡು ಕೇಳುತ್ತಿದೆ ನೋಡಾಗುಹೇಶ್ವರ!

ಮಂಗಳವಾರ, ನವೆಂಬರ್ 29, 2011

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆ



ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆಯಾದುದು ಸಂತಸದ ಸಂಗತಿ. ಕರ್ನಾಟಕ ಜಾನಪದ ಚರಿತ್ರೆಯಲ್ಲಿ ಇದೊಂದು ಚಾರಿತ್ರಿಕವಾದ ಘಟನೆ . ವೆಬ್ ಸೈಟ್ ಕಾಲ ಕಾಲಕ್ಕೆ ಅಪ್ ಡೇಟ್ ಆಗುವ ಮೂಲಕ ಜಾನಪದ ಜಗತ್ತಿನ ಸಂಗತಿಗಳನ್ನು ನಿರಂತರವಾಗಿ
ವೆಬ್ ಹುಡುಕಾಟಗಾರರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ.


ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆಗಿ ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ಬೆಳವಣಿಗೆಗೆ ಕಾರಣರಾದ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರ ಕ್ರಿಯಾಶೀಲತೆಯನ್ನು ಮೆಚ್ಚಬೇಕು. ಕನ್ನಡ ಜಾನಪದ ಬ್ಲಾಗ್ ನಲ್ಲಿ ವೆಬ್ ಸೈಟ್ ಲಿಂಕನ್ನು ಕೊಡಲಾಗಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆಗೆಯಾದ
ಈ ಸಂದರ್ಭದಲ್ಲಿ ಮಾನ್ಯ ಕುಲಪತಿಗಳಿಗೂ ಮತ್ತು ಅದಕ್ಕೆ ಕಾರಣರಾದ ತಾಂತ್ರಿಕ ವರ್ಗಕ್ಕೂ ಕನ್ನಡ ಜಾನಪದ ಬ್ಲಾಗ್ ಅಭಿನಂದನೆಗಳನ್ನು ತಿಳಿಸುತ್ತದೆ.

ಹಲಗೆ ವಾದ್ಯಕ್ಕೆ ಗತ್ತು ನೀಡುವ ತಳವಾರ ಹನುಮಂತಪ್ಪ




-ಸಿದ್ಧರಾಮ ಹಿರೇಮಠ.


ಕುಣಿಯುವ ಹುಮ್ಮಸ್ಸು ನೀಡು ಸಾಂಪ್ರದಾಯಿಕ ವಾದ್ಯಗಳಲ್ಲಿ ಹಲಗೆ ವಾದ್ಯವೂ ಒಂದು. ಚರ್ಮದಿಂದ ಸಿದ್ಧಪಡಿಸಿ, ಎರಡು ತೆಳು ಬಿದಿರಿನೊಂದಿಗೆ ಹಲಗೆಯನ್ನು ಬಾರಿಸತೊಡಗಿದರೆ ಎಂತಹವರಿಗೂ ಕುಣಿಯುವ ಹುಮ್ಮಸ್ಸು ಮೂಡಿಬಿಡುತ್ತದೆ. ಅದನ್ನೇ ತಂಡ ಕಟ್ಟಿಕೊಂಡು, ಅದಕ್ಕೊಂದು ಗತ್ತು ಮೂಡಿಸುತ್ತಿರುವವರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿರುವ ಹನುಮಂತಪ್ಪ ಒಬ್ಬರಾಗಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿರುವವರು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡ.


ವಂಶಪಾರಂಪರ್ಯವಾಗಿ ಹಲಗೆ ವಾದ್ಯವನ್ನು ನುಡಿಸುತ್ತಿರುವ ತಳವಾರ ಹನುಮಂತಪ್ಪನವರಿಗೆ ಗುರುಗಳೆಂದರೆ ಸಾರೆಪ್ಪರ ತಿಂದಪ್ಪ, ದುರುಗಪ್ಪ, ಸಾಲುಮನಿ ಮೂಗಪ್ಪ, ಬಿ.ಮರಿಯಪ್ಪ, ಉಚ್ಚಂಗಪ್ಪನವರಂತಹ ಹಿರಿಯರು ಹಲಗೆ ವಾದ್ಯವನ್ನು ನುಡಿಸುವುದನ್ನು ಕಲಿಸಿದರು. ದೇಸಿ ವಾದ್ಯವಾಗಿರುವ ಹಲಗೆ ಎಲ್ಲ ಕಾಲಕ್ಕೂ ಸೈ ಎನಿಸಿಕೊಂಡಿರುವಂತಹದು. ಮೊಹರಂ ಕುಣಿತದಿಂದ ಹೋಳಿ ಹುಣ್ಣಿಮೆಯ ಮೆರವಣಿಗೆಯವರೆಗೂ ಪಡ್ಡೆಗಳಿಗೆ ಥಟ್ಟನೆ ನೆನಪಾಗುವುದೇ ಹಲಗೆ ವಾದ್ಯ. ಹಲಗೆ ಒಂದೇ ಇರಲಿ, ಹತ್ತೇ ಇರಲಿ ಕುಣಿತ ಆರಂಭಗೊಂಡುಬಿಡುತ್ತದೆ.

ಇಂತಹ ವಾದ್ಯಕ್ಕೆ ಜಾನಪದ ಕಲೆಯ ರೀತಿಯಲ್ಲಿಯೇ ಅದಕ್ಕೊಂದು ಸ್ಥಾನ ದೊರಕಿಸಿಕೊಡಬೇಕೆಂದು ಹನುಮಂತಪ್ಪ ೨೦ ವರ್ಷಗಳ ಹಿಂದೆಯೇ ತನ್ನಂತಯೇ ಇತರ ೮ ಜನರ ತಂಡವನ್ನು ಕಟ್ಟಿದರು. ಹೀಗೆ ಕಟ್ಟಿದ ತಂಡಕ್ಕೆ ಶ್ರೀ ಮದಗಾಂಬಿಕಾ ಜಾನಪದ ಹಲಗೆ ವಾದ್ಯ ತಂಡವೆಂಬ ಹೆಸರು ಕೊಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ೨೦೦೬ರಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಸುವರ್ಣ ಸಾಂಸ್ಕೃತಿಕ ದಿಬ್ಬಣ, ಕನಕ ಜಯಂತಿ, ಹೊಸಪೇಟೆ, ಗಡಿಭಾಗವಾದ ಡಿ.ಹಿರೇಹಾಳ, ಚಿತ್ರದುರ್ಗದ ಶರಣರ ಮೇಳ, ಉಜ್ಜಯಿನಿ ರಥೋತ್ಸವ, ಕೊಟ್ಟೂರಿನ ರಥೋತ್ಸವ ಹೀಗೆ ಹಲವಾರು ರಥೋತ್ಸವ, ಕಾರ್ಯಕ್ರಮಗಳಲ್ಲಿ ತಮ್ಮ ತಂಡದ ಮೂಲಕ ಕೌಶಲ್ಯ ಮೆರೆದಿದ್ದಾರೆ. ಜಾನಪದ ಗಾಯಕ ಬಾನಂದೂರು ಕೆಂಪಯ್ಯನವರಿಂದಲೂ ಸೈ ಎನಿಸಿಕೊಂಡ ತಂಡ ಇವರದು.

೨೦೦೫ರಲ್ಲಿ ಹೊಸಪೇಟೆ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಗುರುವಂದನಾ ಮಹೋತ್ಸವದಲ್ಲಿ ಸೇವಾ ಪ್ರಶಸ್ತಿಯನ್ನು ತಂಡ ಪಡೆದುಕೊಂಡಿದೆ. ವಿವಿಧ ಸಂದರ್ಭಗಳಲ್ಲಿ ಪ್ರಶಂಸಾ ಪತ್ರಗಳನ್ನೂ ತಂಡ ಪಡೆದಿದೆ. ಹನುಮಂತಪ್ಪನವರ ತಂಡದಲ್ಲಿ ಪೂಜಾರ ಗಂಗಪ್ಪ, ಹನುಮಂತಪ್ಪ, ದುರುಗಪ್ಪ, ಮದರಾಸ ಬಸಪ್ಪ, ಮೈಲಪ್ಪರ ದುರುಗಪ್ಪ, ಜೆ.ಹುಚ್ಚಂಗಪ್ಪ, ದಂಡೆಪ್ಪರ ಅಂಜಿನಪ್ಪ, ಬೇವಿನಮರದ ಬಸಪ್ಪ ಇದ್ದಾರೆ. ಈ ತಂಡದಲ್ಲಿ ತರುಣರೂ ಇದ್ದಾರೆ.

ತಂಡದ ನಾಯಕತ್ವವನ್ನು ವಹಿಸಿರುವ ಹನುಮಂತಪ್ಪನವರಿಗೆ ಇದೀಗ ೬೫ರ ಹರೆಯ. ಏಕೆಂದರೆ ಯಾವುದೇ ಯುವಕನಿಗೂ ಕಡಿಮೆ ಇಲ್ಲದಂತೆ ಹನುಮಂತಪ್ಪ ಬಿಡುವಿಲ್ಲದಂತೆ ಹಲಗೆಯನ್ನು ನುಡಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ತಂಡಕ್ಕೆ ಮಾನ್ಯತೆ ನೀಡಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿದೆ. ಈ ತಂಡಕ್ಕೆ ವಸ್ತ್ರಭೂಷಣ, ವಾದ್ಯ ಪರಿಕರಗಳ ಅವಶ್ಯಕತೆಯಿದೆ. ಅವೆಲ್ಲವೂ ದೊರೆತಲ್ಲಿ ತಂಡ ಮತ್ತಷ್ಟು ಉತ್ಸಾಹದಿಂದ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಹನುಮಂತಪ್ಪನವರ ಹಲಗೆ ವಾದ್ಯ ತಂಡವನ್ನು ಸಂಪರ್ಕಿಸಲು ಬ್ಯಾಳಿ ವಿಜಯಕುಮಾರಗೌಡರ ಮೊಬೈಲ್ ಸಂ.೯೪೪೯೬೨೨೭೦೭ಗೆ ಸಂಪರ್ಕಿಸಬಹುದಾಗಿದೆ.

ಭಾನುವಾರ, ನವೆಂಬರ್ 27, 2011

ಶಿಯಾ ಮೊಹರಂ: ರಕ್ತಪಾತ ಮತ್ತು ಕಾವ್ಯ




ಮೊಹರಂ ಆಚರಣೆಗೆ ಇಂದಿನಿಂದ (ನ.27) ಚಾಲನೆ. ಡಿಸೆಂಬರ್ 6 ಮೊಹರಂ ಕಡೇ ದಿನ. ಅಂದಹಾಗೆ, ಈ ಮೊಹರಂ ಎನ್ನುವುದು ಒಂದು ಹಬ್ಬವಷ್ಟೇ ಅಲ್ಲ. ಅದು ರಕ್ತಪಾತ ಮತ್ತು ಕಾವ್ಯ ಎರಡನ್ನೂ ಒಳಗೊಂಡ ಒಂದು ವಿಶಿಷ್ಟ ಆಚರಣೆ.

ಶಿಯಾ-ಸುನ್ನಿ: ಇವು ಮುಸ್ಲಿಮರಲ್ಲಿರುವ ಎರಡು ಪಂಗಡಗಳ ಹೆಸರು. ಇವುಗಳ ನಡುವೆ ನಿಡುಗಾಲದ ಸಂಘರ್ಷವಿದೆ. ಇದೊಂದು ದಾಯಾದಿ ಕಲಹದ ಚರಿತ್ರೆ. ವಿಶೇಷವೆಂದರೆ, ಈ ಚರಿತ್ರೆಗೆ ರಕ್ತಪಾತದ ಮುಖವಿರುವಂತೆ ಕಾವ್ಯದ ಮುಖವೂ ಇದೆ ಮಹಾಭಾರತಕ್ಕಿರುವಂತೆ.

ಇದರ ಹಿನ್ನೆಲೆ ಹೀಗಿದೆ: ಮಹಮ್ಮದ್ ಪೈಗಂಬರರ ನಿಧನದ ಬಳಿಕ, ಅರಬ್ಬರು ಪೈಗಂಬರರ ಪಥದಲ್ಲೇ ನಡೆಯಬಲ್ಲ ಒಬ್ಬರನ್ನು ತಮ್ಮ ಖಲೀಫನಾಗಿ ಆಯ್ಕೆ ಮಾಡಿಕೊಳ್ಳಲಾರಂಭಿಸಿದರು.

ಇವರೇ ಸುನ್ನಿ (=ಪಥಿಕರು) ಎನಿಸಿಕೊಂಡರು. ಆದರೆ ಈ ವ್ಯವಸ್ಥೆ ಇನ್ನೊಂದು ಬಣಕ್ಕೆ ಸಮ್ಮತವಾಗಲಿಲ್ಲ. ಪೈಗಂಬರರ ಬಳಿಕ ಅರಬ್ಬರ ಆಧ್ಯಾತ್ಮಿಕ ನಾಯಕ ಹಾಗೂ ಖಲೀಫ ಆಗಬೇಕಿದ್ದುದು, ಅವರ ಅಳಿಯ ಅಲಿ ಎಂದು ಅವರ ಅಭಿಮತ.

ತಮ್ಮನ್ನು ಅಲಿಯವರ ಅನುಯಾಯಿಗಳೆಂದು ಘೋಷಿಸಿಕೊಂಡ ಅವರು ಜನರೇ ಆರಿಸಿದ ಖಲೀಫರನ್ನು ಒಪ್ಪಿಕೊಳ್ಳಲಿಲ್ಲ.

ಬದಲಿಗೆ ಅಲಿ ಹಾಗೂ ಅವರ ಮಕ್ಕಳಾದ ಹಸನ್-ಹುಸೇನರನ್ನೂ ಒಳಗೊಂಡಂತೆ 12 ಜನ ಇಮಾಮರನ್ನು ತಮ್ಮ ಆಧ್ಯಾತ್ಮಿಕ ನಾಯಕರೆಂದು ಸ್ವೀಕರಿಸಿದರು. ಅವರೇ ಶಿಯಾ (=ಅನುಯಾಯಿ)ಗಳು.

ಈ ತಾತ್ವಿಕ ಭಿನ್ನಮತವು ಪಂಗಡ ಭೇದಕ್ಕೆ ಕಾರಣವಾಗಿದ್ದರೆ ಸಮಸ್ಯೆಯಿರಲಿಲ್ಲ. ಶತಮಾನಗಳ ಕಾಲ ನಾಗರಿಕ ಕದನಗಳಿಗೂ ಕಾರಣವಾಯಿತು.

ಚರಿತ್ರೆಯಲ್ಲಿ ಅತಿ ಹಿಂಸಾತ್ಮಕ ತಿಕ್ಕಾಟಗಳು ನಡೆದಿರುವುದು, ದಾಯಾದಿಗಳ ನಡುವೆಯೇ ಎಂದು ತೋರುತ್ತದೆ. ಶೈವ-ವೈಷ್ಣವ ಸಂಘರ್ಷಗಳನ್ನು ನೆನಪಿಸುವ ಈ ಯಾದವಿ ಕಲಹಗಳು ಈಗಲೂ ನಿಂತಿಲ್ಲ.

ಶಿಯಾಗಳನ್ನು ಕೊಂದ ವರದಿಗಳು ಪಾಕಿಸ್ತಾನದಿಂದ ಈಗಲೂ ಬರುತ್ತಿರುತ್ತವೆ. ಇರಾನ್-ಇರಾಕ್ ಯುದ್ಧಗಳ ಕೆಲಸ ಮಾಡಿದ ಅಂಶಗಳಲ್ಲಿ ಈ ಬಣಭೇದವೂ ಒಂದಾಗಿತ್ತು. ಹೆಚ್ಚಿನ ಸಂಘರ್ಷಗಳಲ್ಲಿ ಹಲ್ಲೆಗೊಳಗಾಗಿದ್ದು ಶಿಯಾಗಳೇ. ಮಧ್ಯಕಾಲದ ಕರ್ನಾಟಕವೂ ಶಿಯಾ-ಸಂಘರ್ಷಗಳಿಗೆ ಸಾಕ್ಷಿಯಾಯಿತು.

ಕರ್ನಾಟಕಕ್ಕೆ ಶಿಯಾ ಪಂಥೀಯರ ಆಗಮನವು ಪ್ರಾಯಶಃ 14ನೇ ಶತಮಾನದಲ್ಲಿ ಶುರುವಾಯಿತು.

ಮಹಮದ್ ಬಿನ್ ತುಘಲಕನು ದಖನ್ನಿಗೆಂದು ನೇಮಿಸಿದ್ದ ರಾಜ್ಯಪಾಲ ಹಸನ ಗಂಗೂ ಒಬ್ಬ ಶಿಯಾ ಆಗಿದ್ದ. (ಇವನ ಹೆಸರಲ್ಲಿರುವ ಗಂಗೂ ಬಹಮನಿ ಎಂಬುದು ಗಂಗೂ ಬ್ರಾಹ್ಮಣ ಎಂಬ ಅವನ ನೆರವಿಗೆ ಬಂದ ಗೆಳೆಯನ ಹೆಸರೆಂದು ಹೇಳಲಾಗುತ್ತದೆ).
ಮುಂದೆ ಹಸನನು ದೆಹಲಿ ಆಳಿಕೆ ವಿರುದ್ಧ ಬಂಡೆದ್ದು, ಸ್ವಾತಂತ್ರ್ಯ ಘೋಷಿಸಿಕೊಂಡು, ಬಹಮನಿ ರಾಜ್ಯ ಸ್ಥಾಪನೆಗೈದನು.

ಬಹಮನಿ ರಾಜ್ಯವು ಪತನಗೊಂಡ ಬಳಿಕ ಅದರ ಹೊಟ್ಟೆಯೊಳಗಿಂದ ಬಿಜಾಪುರದ ಆದಿಲಶಾಹಿ, ಬೀದರಿನ ಬರೀದಶಾಹಿ, ಗೋಲ್ಕೊಂಡದ ಕುತುಬುಶಾಹಿ ಸುಲ್ತಾನರಲ್ಲಿ ಬಹುತೇಕ ಸುಲ್ತಾನರು ಶಿಯಾಗಳಾಗಿದ್ದರು.

ಶಿಯಾ-ಸುನ್ನಿ ಎನ್ನುವುದು ಜನ್ಮಜಾತವಾದ ಕುರುಹೇನಲ್ಲ. ಅದು ವೈಯಕ್ತಿಕ ನಿಷ್ಠೆಗೆ ಅನುಗುಣವಾಗಿ ಬದಲಾಗಬಲ್ಲದು. ಆದಿಲಶಾಹಿ ರಾಜ್ಯದ ಸ್ಥಾಪಕ ಯೂಸೂಫ್‌ಖಾನನು ಶಿಯಾ ಆಗಿದ್ದರೆ, ಅವನ ಮೊಮ್ಮಗ ಒಂದನೇ ಇಬ್ರಾಹಿಂ ಕಟ್ಟಾ ಸುನ್ನಿ.

ಇದೇ ಇಬ್ರಾಹೀಮನ ಮಗ 1ನೇ ಅಲಿ ಆದಿಲಶಹ ಅಪ್ಪನಿಷ್ಟಕ್ಕೆ ವಿರುದ್ಧವಾಗಿ ಶಿಯಾ ಆದನು. ಹೈದರಾಲಿ ಶಿಯಾ ಒಲವಿನವನಾದರೆ, ಅವನ ಮಗ ಫತೇಹ್ ಅಲಿಖಾನ್ ಟಿಪ್ಪು ಸುನ್ನಿ. ಶಿಯಾ ಹೆಸರುಗಳಲ್ಲಿ ಅಲಿ ಹಸನ್ ಹುಸೇನ್ ಎಂಬ ಹೆಸರುಗಳು ಸಾಮಾನ್ಯ.

ಟಿಪ್ಪು ಸುನ್ನಿಯಾದರೂ, ಅವನಿಗೆ ತನ್ನ ಹೆಸರಲ್ಲಿದ್ದ `ಅಲಿ` ಎಂಬ ಶಿಯಾ ಕುರುಹಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಗೋಲ್ಕೊಂಡದ ಕುತುಬಶಾಹಿ, ಹೈದರಾಬಾದಿನ ಆಸಫಜಾ ಸುಲ್ತಾನರ ಹಾಗೂ ಅವಧದ (ಲಖನೊ) ನವಾಬರ ಹೆಸರುಗಳಲ್ಲಿ ಕಡ್ಡಾಯವಾಗಿ `ಅಲಿ` ಶಬ್ದವಿದೆ.

ಈ ಮೂರೂ ರಾಜವಂಶಗಳ ಬಳ್ಳಿ ಹುಡುಕುತ್ತಾ ಹೋದರೆ, ಅದು ಶಿಯಾಗಳ ದೇಶವಾದ ಇರಾನನ್ನು ಮುಟ್ಟುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಸಹಪಾಠಿಯೂ ದಿವಾನರೂ ಆಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಶಿಯಾ ಆಗಿದ್ದರು.

ಅವರ ಅಜ್ಜ ಅಲಿ ಅಸಘರ್ ಇರಾನಿನಿಂದ ಬಂದವರಾಗಿದ್ದು, ಮೈಸೂರು ಒಡೆಯರಿಗೆ ಕುದುರೆ ಸರಬರಾಜು ಮಾಡುತ್ತ ಅಶ್ವದಳದ ತರಬೇತಿದಾರರಾಗಿದ್ದವರು. ಬೆಂಗಳೂರಿನಲ್ಲಿರುವ ಅಲಿಅಸ್ಕರ್ ರಸ್ತೆ ಅವರ ನೆನಪಿಗಾಗಿ ಇಟ್ಟಿದ್ದು.

ಸಮಸ್ಯೆ ಎಂದರೆ, ಶಿಯಾ ಸುನ್ನಿಗಳ ಮಧ್ಯ ಭುಗಿಲೇಳುತ್ತಿದ್ದ ಪಂಥೀಯ ಕದನಗಳು. ಬಹಮನಿ-ಆದಿಲಶಾಹಿ ಆಳ್ವಿಕೆಗಳಲ್ಲಿ ಮತೀಯ ಗಲಭೆಗಳೇನಾದರೂ ನಡೆದಿದ್ದರೆ, ಅವು ಹಿಂದೂ ಮುಸ್ಲಿಮರ ನಡುವೆ ಅಲ್ಲ; ಬದಲಿಗೆ ವಿದೇಶಿಯರ-ಸ್ಥಳೀಯರ ನಡುವೆ ಅಥವಾ ಶಿಯಾ-ಸುನ್ನಿಗಳ ನಡುವೆ. ಅವುಗಳ ಸ್ವರೂಪವೂ ವೈವಿಧ್ಯಮಯವಾಗಿರುತ್ತಿತ್ತು.

ಉದಾಹರಣೆಗೆ, ಶಿಯಾ ಒಲವಿನ ಸುಲ್ತಾನರು ನಮಾಜಿನ ಕರೆಯಲ್ಲಿ ಅಲಿಯವರ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳುತ್ತಿದ್ದರು ಅಥವಾ ಮಸೀದಿಯಲ್ಲಿ ನಮಾಜು ನಂತರದ ಪ್ರವಚನವನ್ನು ಪೈಗಂಬರರ ಅನುಯಾಯಿಗಳ ಹೆಸರ ಬದಲಾಗಿ, ಶಿಯಾಗಳ 12 ಇಮಾಮರ ಹೆಸರಲ್ಲಿ ಏರ್ಪಡಿಸುತ್ತಿದ್ದರು.

ಆಗ ಸುನ್ನಿಗಳಿಂದ ಪ್ರತಿರೋಧ ಭುಗಿಲೇಳುತ್ತಿತ್ತು. ನಿರ್ದಿಷ್ಟ ಪಂಥದ ಅಧಿಕಾರಿ ಅಥವಾ ಧಾರ್ಮಿಕ ಗುರು ದೊಡ್ಡ ಸ್ಥಾನ ಪಡೆದಾಗ, ಅವರ ಅನುಯಾಯಿಗಳ ದಬ್ಬಾಳಿಕೆ ಶುರುವಾಗಿ, ಆಡಳಿತದಲ್ಲಿ ಅರಾಜಕತೆ ಮೈದೋರುತ್ತಿತ್ತು.

ಆಗ ಸರ್ವ ಪಂಥಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಆಡಳಿತದಲ್ಲಿ ಸಮಾನತೆಯನ್ನು ಉಳಿಸಲು ಸುಲ್ತಾನರು ಹೆಣಗಾಡುತ್ತಿದ್ದರು.

2ನೇ ಇಬ್ರಾಹಿಮನ ಕಾಲದಲ್ಲಿ, ಸುನ್ನಿ ಧಾರ್ಮಿಕ ನಾಯಕರೊಬ್ಬರು, ಆಡಳಿತದ ಉನ್ನತ ಸ್ಥಾನಗಳಲ್ಲಿ ಶಿಯಾಗಳಿರಬಾರದು ಎಂದು ಅಪ್ಪಣೆ ಮಾಡಿದರು; ಆಗ ಸುಲ್ತಾನನು ಅವರನ್ನು ಕೂಡಲೇ ಮದೀನಾಕ್ಕೆ ತೆರಳುವ ವ್ಯವಸ್ಥೆ ಮಾಡುವ ಮೂಲಕ, ಬಿಜಾಪುರ ಬಿಟ್ಟುಹೋಗುವಂತೆ ನಿರೂಪ ಕೊಟ್ಟ ಪ್ರಸಂಗವು ನಡೆಯಿತು.

ಶಿಯಾ-ಸುನ್ನಿ ಘರ್ಷಣೆಗಳಲ್ಲೆಲ್ಲ ಭೀಷಣವಾದುದು, ಬಹಮನಿ ಮಹಮ್ಮದ್ ಗವಾನನ ಕೊಲೆ. ಪ್ರತಿಭಾವಂತನೂ ವಿದ್ವಾಂಸನೂ ಆಗಿದ್ದ ಗವಾನನು ಇರಾನಿನಿಂದ ಭಾರತಕ್ಕೆ ಪ್ರವಾಸ ಬಂದವನು. ಅವನ ಪ್ರತಿಭೆಗೆ ಬೆರಗಾಗಿ ಬಹಮನಿ ಸುಲ್ತಾನರು ಅವನನ್ನು ಪ್ರಧಾನಿಯಾಗಿಸಿದರು.

ಗವಾನ್ ನಿಜಕ್ಕೂ ದಕ್ಷ ಆಡಳಿತಗಾರನಾಗಿದ್ದ. ಆದರೆ ಅವನಲ್ಲಿ ತುಸು ಶಿಯಾ ಅಭಿಮಾನ ಹೆಚ್ಚಿತ್ತು. ಅವನ ಜನಪ್ರಿಯತೆ ಸಹಿಸದ ಸ್ಥಳೀಯ ಮುಸ್ಲಿಮರು, ಅವನ ವಿರುದ್ಧ ಪಿತೂರಿ ಮಾಡಿದರು. ರಾಜದ್ರೋಹ ಮಾಡುತ್ತಿದ್ದಾನೆ ಎಂದು ಶಂಕೆಪಟ್ಟ ಸುಲ್ತಾನನು ಗವಾನನ ಶಿರಚ್ಛೇದ ಮಾಡಿಸಿದನು.

ಬಳಿಕ ತನ್ನ ತಪ್ಪನ್ನರಿತು ಪರಿತಾಪದಿಂದ ತಾನೂ ನರಳಿ ಸತ್ತನು. ಆದರೆ ಗವಾನನ ಕೊಲೆ ಸೃಷ್ಟಿಸಿದ ರಾಜಕೀಯ ಅರಾಜಕತೆಯ ಸುನಾಮಿಯಲ್ಲಿ ಬಹಮನಿ ರಾಜ್ಯವು ಸಂಪೂರ್ಣ ಪತನಗೊಂಡಿತು.

ಸ್ವಾರಸ್ಯಕರವೆಂದರೆ, ಟಿಪ್ಪು ಸುನ್ನಿಯಾದರೂ ಶಿಯಾ ದ್ವೇಷಿಯಾಗಿರಲಿಲ್ಲ. ಅಲಿ ಕುರಿತು ಅವನಿಗೆ ಬಲುಭಕ್ತಿ. ಅವನು ಅಲಿಯವರ ಶೌರ್ಯಸೂಚಕ ಬಿರುದುಗಳನ್ನು ಶಸ್ತ್ರಗಳ ಮೇಲೆ ಕೆತ್ತಿಸಿದ್ದನು; ಪುಸ್ತಕ ಭಂಡಾರಗಳಿಗೆ ಹಸನ್ ಹುಸೇನರ ಹೆಸರನ್ನಿಟ್ಟಿದ್ದನು; 12 ಇಮಾಮರ ಹೆಸರಲ್ಲಿ ನಾಣ್ಯಗಳನ್ನು ಹೊರಡಿಸಿದನು;

ಇರಾನಿನ ರಾಜಕುಮಾರ ಶ್ರೀರಂಗಪಟ್ಟಣದಲ್ಲಿ ತನ್ನ ಅತಿಥಿಯಾಗಿರುವ ಹೊತ್ತಲ್ಲಿ ಇರಾನಿನ ಜತೆ ವಾಣಿಜ್ಯ ಸಂಬಂಧಗಳನ್ನು ಬಲಗೊಳಿಸುವ ಯೋಜನೆ ರೂಪಿಸಿದನು; ಇರಾನಿನ ದೊರೆ ಶಹಾನ ಬಳಿಗೆ ತನ್ನ ದೂತನನ್ನು ಅಟ್ಟಿದನು.

ಆದರೆ ಬ್ರಿಟಿಷರು ಜಾಣ್ಮೆಯಿಂದ ಈ ಹೊಸ ರಾಜತಾಂತ್ರಿಕ ಸಂಬಂಧದ ಕುಡಿಯನ್ನು ಶಿಯಾ ಸುನ್ನಿ ಭೇದ ಬಳಸಿ ಚಿವುಟಿ ಹಾಕಿದರು.

ತನ್ನ ವಿರುದ್ಧ ಬ್ರಿಟಿಷರ ಜತೆಗೆ ಕೈಜೋಡಿಸಿದ್ದ ಹೈದರಾಬಾದ್ ನಿಜಾಮರ ಜತೆ ರಕ್ತ ಸಂಬಂಧ ಬೆಳೆಸಲು ಟಿಪ್ಪು ಯತ್ನಿಸಿದಾಗಲೂ, ಇದೇ ಪಂಥೀಯ ತರತಮದ ನೆಲೆಯಲ್ಲಿ ಆಂಗ್ಲರು ಗೈದ ತಂತ್ರಗಾರಿಕೆ, ಅದನ್ನು ವಿಫಲಗೊಳಿಸಿತು.

ನಿಜಾಮರು ತನ್ನ ಹಗೆಗಳ ಬೆನ್ನು ಕಟ್ಟಿದ್ದುದರಿಂದ ಟಿಪ್ಪು ಶಿಯಾಗಳ ಮೇಲೆ ಕೊನೆಯ ದಿನಗಳಲ್ಲಿ ನಂಬಿಕೆ ಕಳೆದುಕೊಂಡನೇ? ತಿಳಿಯದು. ಈ ಸನ್ನಿವೇಶದಲ್ಲಿ ಕೆಲವು ಚಾರಿತ್ರಿಕ ವ್ಯಂಗ್ಯಗಳು ಎದ್ದು ಗೋಚರಿಸುತ್ತಿವೆ:

1. ತಮ್ಮ ಮತಭೇದಕ್ಕಾಗಿ ಚರಿತ್ರೆಯುದ್ದಕ್ಕೂ ಹಿಂಸೆ ಅನುಭವಿಸಿದ ಶಿಯಾಗಳ ಆಧ್ಯಾತ್ಮಿಕ ನಾಯಕರ ಚರಿತ್ರೆ ಕೂಡ ರಕ್ತಪಾತ ಮತ್ತು ಹಿಂಸೆಯ ಮೂಲಕವೇ ಆರಂಭವಾಗುತ್ತದೆ. ಅಲಿ, ಹಸನ್, ಹುಸೇನ್ ಮೂವರೂ ಹಗೆಗಳ ಪಿತೂರಿಯಿಂದ ಕೊಲ್ಲಲ್ಪಟ್ಟವರು.

ಅದರಲ್ಲೂ ಹುಸೇನ್ ಮತ್ತು ಅವರ ಕುಟುಂಬದವರು ಕೊಲೆಯಾದ ಕರ್ಬಲಾ ಯುದ್ಧವು, ಎಳೆಯ ಕೂಸುಗಳನ್ನೂ ಒಳಗೊಂಡಂತೆ ಭೀಕರ ನರಹತ್ಯೆಯಲ್ಲಿ ಮುಗಿಯಿತು. ಈ ಹುತಾತ್ಮರ ಸಾವಿನಾಚರಣೆಯನ್ನು ಶಿಯಾಗಳು ಆರಂಭಿಸಿದರು. ಅದುವೇ ಮೊಹರಂ.

2. ಟಿಪ್ಪು ಸುನ್ನಿಯಾಗಿದ್ದರೂ ಶಿಯಾಗಳ ನಾಯಕರಂತೆ ರಣರಂಗದಲ್ಲೇ ಕೊಲ್ಲಲ್ಪಟ್ಟನು.

3. ಅವನಿಗೆ ವಿಶ್ವಾಸಘಾತ ಮಾಡಿದ ಮಂತ್ರಿ ಮೀರಸಾದಿಕ್ ಶಿಯಾ ಪಂಥೀಯನಾಗಿದ್ದನು.

ಹಾಗೆ ಕಂಡರೆ, ಕರ್ನಾಟಕದಲ್ಲಿ ಶಿಯಾಗಳ ಸಂಖ್ಯೆ ತೀರಾ ಕಡಿಮೆ. ಧಾರ್ಮಿಕ - ಸಾಂಸ್ಕೃತಿಕ ಆಕ್ರಮಣಕ್ಕೆ ಒಳಗಾಗುವ ಅಭದ್ರತೆ ಅನುಭವಿಸುವ ಸಮುದಾಯಗಳಲ್ಲಿ ಸಹಜವಾಗಿರುವ ಪಂಥೀಯ ಒಗ್ಗಟ್ಟು ಶಿಯಾಗಳಲ್ಲೂ ಇದೆ.

ಅವರು ಕರ್ನಾಟಕದ ಅನೇಕ ಊರುಗಳಲ್ಲಿ ಗುಂಪಾಗಿ ನೆಲೆಸಿದ್ದಾರೆ. ಅವುಗಳಲ್ಲಿ ಗೌರಿಬಿದನೂರು ತಾಲೂಕಿನ ಅಲಿಪುರ, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಮುಖ್ಯ ನೆಲೆಗಳು.

ಕಟು ಸುನ್ನಿಯಾಗಿದ್ದ ಔರಂಗಜೇಬನು ಬಿಜಾಪುರವನ್ನು ಆಕ್ರಮಿಸಿಕೊಂಡಾಗ, ಕೆಲವು ಶಿಯಾಗಳು ದಕ್ಷಿಣದತ್ತ ಬಂದು ಈಗಿರುವ ಅಲ್ಲೆಪುರದಲ್ಲಿ ನೆಲೆನಿಂತರು. ಅಲ್ಲೆಪುರವು ಇರಾನಿನ ನೆರಳಚ್ಚಿನಂತಿಹ ಹಳ್ಳಿ.

ಅಲ್ಲಿ ಮೊಹರಮ್ಮಿನಲ್ಲಿ ಕರ್ಬಲಾ ಯುದ್ಧದ ಪ್ರತಿಕೃತಿಯನ್ನೇ ನಿರ್ಮಿಸಲಾಗುತ್ತದೆ. ದೊಡ್ಡಬಳ್ಳಾಪುರದಲ್ಲೂ ಹೈದರಾಲಿ ಕಟ್ಟಿಸಿಕೊಟ್ಟ ಶಿಯಾಗಳ ದೊಡ್ಡ ಸಂಕೀರ್ಣವಿದೆ.

ಅದರ ಎತ್ತರದ ಪೌಳಿಯೊಳಗಿರುವ ಮಸೀದಿ ಮತ್ತು ಆಶೂರಖಾನೆಗಳು, ಶಿಯಾಗಳು ತಮ್ಮ ಸಾಂಸ್ಕೃತಿಕ ವಿಶಿಷ್ಟತೆ ಉಳಿಸಿಕೊಂಡಿರುವ ಸಂಕೇತದಂತೆಯೇ, ಅಳಿವಿನಂಚಿನಲ್ಲಿರುವ ಜೀವಿಗಳಂತೆ ಬದುಕುತ್ತಿರುವ ದಾರುಣ ಗುರುತಿನಂತಿದೆ.

ಯಾಕೆಂದರೆ, ಅವರ ಆಚರಣೆಗಳಲ್ಲಿ ಬಹುಸಂಖ್ಯಾತ ಸುನ್ನಿಗಳು ಭಾಗವಹಿಸುವುದಿಲ್ಲ. ಮಾತ್ರವಲ್ಲ ಅವರನ್ನು ಧಾರ್ಮಿಕವಾಗಿ ಪರಕೀಯರಂತೆಯೂ ಸಾಂಸ್ಕೃತಿಕವಾಗಿ ಅಸ್ಪೃಶ್ಯರಂತೆಯೂ ಕಾಣುತ್ತಾರೆ. ನಿರ್ದಿಷ್ಟ ಧರ್ಮಕ್ಕೆ ಸೇರಿದವರೆಲ್ಲ ಒಂದಾಗಿರುತ್ತಾರೆ ಎಂಬುದು ಯಾವತ್ತೂ ದೊಡ್ಡ ಹುಸಿ.

`ಮೊಹರಂ` ಎಂದರೆ ನಿಷೇಧಿತ, ಅಶುಭ ಎಂದರ್ಥ. ಈ ಮಾಸದಲ್ಲಿ ಶಿಯಾಗಳು ಶುಭಕಾರ್ಯ ಮಾಡುವುದಿಲ್ಲ. ಕಪ್ಪು ಬಟ್ಟೆ ಧರಿಸಿ, ಮನೆಯ ಮೇಲೆ ಕಪ್ಪು ನಿಶಾನೆ ಹಾರಿಸುತ್ತಾರೆ.

ಎದೆ ಬಡಿದುಕೊಳ್ಳುತ್ತ ಶೋಕ ಆಚರಿಸುತ್ತಾರೆ; ಹುತಾತ್ಮರ ಹೆಸರಿನಲ್ಲಿ ಪಂಜಾ (ಹಸ್ತ) ಮತ್ತು ಆಲಂ (ಮೆರೆಸುವ ಚಿಹ್ನೆ)ಗಳಿಗೆ ಕಪ್ಪುಬಟ್ಟೆ ಉಡಿಸಿ ಆರಾಧಿಸುತ್ತಾರೆ; ಹುತಾತ್ಮರ ಶವಪೆಟ್ಟಿಗೆಯ (ಡೋಲಿ) ಮೆರವಣಿಗೆ ಮಾಡುತ್ತಾರೆ.

ಹೈದರಾಬಾದಿನ ಚಾರ್‌ಮಿನಾರ್ ಮೂಲತಃ ಮೊಹರಂ ಡೋಲಿಯ ಪ್ರತೀಕ. ಅದರ ಗೋಡೆಗಳ ಮೇಲೆ ಮೊಹರಂ ಚಿಹ್ನೆಗಳ ಶಿಲ್ಪವಿದೆ. ಗೋಲ್ಕೊಂಡ, ಹೈದರಾಬಾದುಗಳ ನಿಜಾಮರ ಹಾಗೂ ಲಖನೋದ ನವಾಬರ ಕಾಲಗಳಲ್ಲಿ ಶಿಯಾ ರಾಜಧರ್ಮವಾಗಿತ್ತು.

ಹೀಗಾಗಿ ಇಲ್ಲಿನ ಮೊಹರಂ ಆಚರಣೆಗಳಿಗೆ ರಾಗವೈಭವದ ಪರಂಪರೆಯಿದೆ. ಅವನ್ನು ನೋಡಲು ನಾನು ಹೈದರಾಬಾದ್ ಹಾಗೂ ಲಖನೋಗಳಿಗೆ ಹೋಗಿದ್ದುಂಟು.

ಅಲ್ಲಿನ ಮೆರವಣಿಗೆಗಳಲ್ಲಿ ಗಂಡಸರು, ಅದರಲ್ಲೂ ತರುಣರು ಆಯುಧಗಳಿಂದ ತಮ್ಮನ್ನು ಹೊಡೆದುಕೊಳ್ಳುವರು. ಅವರ ಮೈಯಿಂದ ಸುರಿವ ನೆತ್ತರಿಂದ ರಸ್ತೆಯೇ ಕೆಂಪಾಗುತ್ತದೆ. ಲಖನೋದಲ್ಲಿ ಮೆರವಣಿಗೆ ನಡೆದ ಬಳಿಕ ಇಡೀ ರಸ್ತೆಯನ್ನು ನೀರು ಹಾಕಿ ತೊಳೆಯಲಾಗುತ್ತದೆ.

ಹುತಾತ್ಮರ ನೆನಪಿನಲ್ಲಿ ದೇಹದಂಡನೆ ಮಾಡಿಕೊಳ್ಳುವವರನ್ನು ಕಂಡು ಮಹಿಳೆಯರು ಮೊಹರಂ ವೀರರನ್ನು ನೆನೆದು ಶೋಕಿಸುವರು. ಹಾದಿಬದಿಯಲ್ಲಿ ನಿಂತವರು ಈ ದೇಹದಂಡಕರನ್ನು ನಾನಾಬಗೆಯಲ್ಲಿ ಉಪಚರಿಸುವರು.

ಹೊಳವನಹಳ್ಳಿಯಲ್ಲಿ (2009) ಸುಮಾರು 500 ಜನ ಗಂಡಸರು-ಮಕ್ಕಳು, ತಮ್ಮ ಬೆನ್ನು ತಲೆ ಎದೆಗಳಿಗೆ ಹರಿತವಾದ ಆಯುಧಗಳಿಂದ ಹೊಡೆದುಕೊಂಡು `ಮಾತಂ` (ದುಃಖ) ಆಚರಿಸಿದರು.

ಮೆರವಣಿಗೆಯ ಬೀದಿಯೇ ರಕ್ತದ ಹಸಿವಾಸನೆಯಿಂದ ಉಸಿರುಕಟ್ಟಿಹೋಯಿತು. ಕರ್ನಾಟಕದ ಅನೇಕ ಕಡೆಯ ಮೊಹರಮ್ಮಿನಲ್ಲಿ ಶಿಯಾಗಳಲ್ಲದವರೂ ದೇಹದಂಡಿಸಿಕೊಳ್ಳುವ ಆಚರಣೆಗಳಿವೆ.

ಗೋಕಾಕ ಮತ್ತು ರಾಮದುರ್ಗ ತಾಲೂಕುಗಳಲ್ಲಿ ಮೈಗೆ ಚಾಬಕದಿಂದ ರಕ್ತಬರುವಂತೆ ಬಡಿದುಕೊಳ್ಳುವರು. ಅದನ್ನು `ಲಡ್ಡಾಡುವುದು` ಎನ್ನುವರು. ಧಾರ್ಮಿಕ ಆಚರಣೆಗಳಲ್ಲಿ ರಕ್ತಸುರಿಸುವ ಪ್ರಸಂಗಗಳು ಮೂರು ಬಗೆಯಲ್ಲಿವೆ.

1. ತಮ್ಮ ಪ್ರಿಯ ದೈವಕ್ಕೆ ತಮ್ಮನ್ನು ಬಲಿಪಶುವನ್ನಾಗಿ ಮಾಡಿ ಅರ್ಪಿಸಿಕೊಳ್ಳುವುದು. ಉದಾಹರಣೆಗೆ, ತಮ್ಮ ಶಿರವನ್ನು ಹರಿದು ಅರ್ಪಿಸುವ, ಅಂಗಾಂಗ ಕತ್ತರಿಸಿ ಸಮರ್ಪಿಸುವ ಆಚರಣೆಗಳು. ಮೈಲಾರಲಿಂಗನಿಗೂ ವೀರಭದ್ರನಿಗೂ ದೇಹದಂಡನೆ ಮಾಡಿಕೊಳ್ಳುವ ಭಕ್ತರೂ ಈ ನೆಲೆಯವರು.

2. ಪ್ರಿಯ ದೈವಕ್ಕೆ ಪ್ರಾಣಿಗಳನ್ನು ಬಲಿಗೊಡುವ ಆಚರಣೆಗಳು.

3. ತಮ್ಮ ಧಾರ್ಮಿಕ ನಾಯಕರು ಪಟ್ಟ ಹಿಂಸೆಯನ್ನು ತಾವೂ ಅನುಭವಿಸುವ ಮೂಲಕ ಅವರ ದುಃಖಕ್ಕೆ ಮಿಡಿಯುವ ಆಚರಣೆಗಳು. ಮೊಹರಂ ಮೂರನೆಯ ಮಾದರಿಯ ಆಚರಣೆ. ವಿಶೇಷವೆಂದರೆ, ಈ ದೇಹದಂಡನೆ ಮತ್ತು ರಕ್ತಪಾತದ ಆಚರಣೆಯ ಭಾಗವಾಗಿಯೇ ಕಾವ್ಯದ ಪರಂಪರೆಯೊಂದು ಸೃಷ್ಟಿಯಾಗಿರುವುದು.

ಮೊಹರಂ ತಿಂಗಳಲ್ಲಿ ಕೆಲವರು ಹುತಾತ್ಮರ ನೆನಪಿನಲ್ಲಿ ಕಾವ್ಯ ರಚಿಸುವರು. ಇಲ್ಲವೇ ಇತರರು ರಚಿಸಿದ ಕಾವ್ಯವನ್ನು ಹಾಡುವರು. ಈ ಶೋಕಕಾವ್ಯಕ್ಕೆ `ಮರ್ಸಿಯಾ` ಎನ್ನಲಾಗುತ್ತದೆ.

ಕೆಲವು ಕವಿಗಳು ತಾವು ಬರೆದ ಶೋಕಗೀತೆಗಳನ್ನು ಕಪ್ಪು ಪರದೆಯ ಮೇಲೆ ಬರೆಸಿ, ಬೀದಿಗಳಲ್ಲಿ ಕಟ್ಟುವ ಪದ್ಧತಿಯಿದೆ. ಲಖನೋ-ಹೈದರಾಬಾದುಗಳಲ್ಲಿ ಇಡೀ ತಿಂಗಳು ಇಂತಹ ಕಪ್ಪುಕಾವ್ಯದ ಪರದೆಗಳು ಇಳಿಬಿದ್ದಿರುತ್ತವೆ.

ಕರ್ನಾಟಕದ ಅನೇಕ ಉರ್ದು ಕವಿಗಳು ಮರ್ಸಿಯಾ ಬರೆದರು. ಈ ಮರ್ಸಿಯಾಗಳ ಪ್ರಭಾವ ಕನ್ನಡದಲ್ಲಿ ದುಃಖಗೀತೆಗಳ ಮೇಲಾಯಿತೋ, ಕನ್ನಡ ದುಃಖಗೀತೆಗಳ ಪ್ರಭಾವ ಮರ್ಸಿಯಾದ ಮೇಲಾಯಿತೋ, ತಿಳಿಯದು.

ಆದರೆ ಕನ್ನಡದ ಮೊಹರಂ ಹಾಡುಗಳಲ್ಲಿ, ಹುಸೇನ್ ಕಾಸಿಂ ಮುಂತಾದ ಕರ್ಬಲಾ ವೀರರ ಜತೆ, ಬಲಾಢ್ಯ ಹಗೆಯೆದುರು ಸೋತು ಜೀವ ಕಳೆದುಕೊಂಡ ಟಿಪ್ಪು, ಕಿತ್ತೂರ ಚನ್ನಮ್ಮ, ಸಂಗೊಳ್ಳಿರಾಯಣ್ಣ ಸಮೀಕರಣಗೊಂಡರು;

ಹಸನ ಹುಸೇನರನ್ನು ಕಳೆದುಕೊಂಡ ಬೀಬಿ ಫಾತಿಮಾರ ಜತೆ, ತಮ್ಮ ಮಕ್ಕಳನ್ನು ಕಳೆದುಕೊಂಡ `ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ` ಡಪ್ಪಿನಾಟದ ತಾಯಂದಿರು ಲಗತ್ತುಗೊಂಡರು; ಗಂಡನನ್ನು ಕಳೆದುಕೊಂಡ ಅಳುವ ಎಳೆಯ ವಿಧವೆ ಸಕೀನಾಳ ಜತೆ, ಅಭಿಮನ್ಯು ಮನ್ಮಥರನ್ನು ಕಳೆದುಕೊಂಡ ಉತ್ತರೆ ಮತ್ತು ರತಿಯರು ಏಕೀಭವಿಸಿದರು.

ಹಲಸಂಗಿಯ ಮಧುರಚೆನ್ನರ ಗೆಳೆಯರಾದ ಪಿ.ಧೂಲಾ, ಕಾಸಿಮನನ್ನು ಕುರಿತು ಬರೆದ `ಅರೇಬಿಯಾದ ಅಭಿಮನ್ಯು` ಗೀತೆ ಇಲ್ಲಿ ನೆನಪಾಗುತ್ತದೆ. ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಆಚರಿಸುವ ಮೊಹರಮ್ಮಿಗೆ ಅರಬಸ್ಥಾನದ ಚರಿತ್ರೆ ಪುರಾಣಗಳ ಸ್ಮೃತಿಗಳಿವೆ, ನಿಜ.

ಆದರೆ ಇಲ್ಲಿ ಶಿಯಾ-ಸುನ್ನಿ ಎಂಬ ಭೇದವಿಲ್ಲ; ಬದಲಿಗೆ ಶೋಕಪ್ರಧಾನ ಕಾವ್ಯವಿದೆ. ಆದರೆ ಅದು ಸಂಭ್ರಮವನ್ನು ಸೇರಿಸಿಕೊಂಡು ಸಂಪೂರ್ಣವಾಗಿ ಸ್ಥಳೀಕರಣಗೊಂಡಿದೆ; ಟಿಪ್ಪು, ಸುನ್ನಿಯಾಗಿ ಮೊಹರಂ ಆಚರಣೆಗಳನ್ನು ಉತ್ತೇಜಿಸಲಿರಲಿಕ್ಕಿಲ್ಲ; ಆದರೆ ಅವನ ಸಾವಿನ ದುರಂತವನ್ನು ವಸ್ತು ಮಾಡಿಕೊಂಡು ಕನ್ನಡದ ಮೊಹರಂ ಕವಿಗಳು ಹಾಡುಕಟ್ಟಿ ಹಾಡಿದರು;
ಮೊಹರಮ್ಮಿನ ಮೂಲ ಒಂದೇ ಧರ್ಮದೊಳಗಿನ ಎರಡು ಪಂಗಡಗಳ ನಡುವಣ ಮತಭೇದ; ಆದರೆ ಕನ್ನಡ ಮತ್ತು ಉರ್ದುಗಳಲ್ಲಿ ಏಕಕಾಲಕ್ಕೆ ಹಾಡು ಕಟ್ಟಿ ಹಾಡುವ ಮೊಹರಂ, ಹಿಂದೂ-ಮುಸ್ಲಿಮರ ಮಿಲನದ ಅಪೂರ್ವ ಸನ್ನಿವೇಶವಾಯಿತು.

ಅದರಲ್ಲೂ ರಾಯಚೂರು ಜಿಲ್ಲೆಯ ಅರವಲಿಯ ಬಿಜಲಿಯು ಮರ್ಸಿಯಾಗಳನ್ನು ಹಾಡುತ್ತಾ ಒಂದು ತಂಡವನ್ನು ಕರೆದುಕೊಂಡು ಮಟಮಾರಿಯ ದೈವವಾದ ವೀರಭದ್ರನ ಜಾತ್ರೆಗೆ ಹೋಗುತ್ತಿದ್ದನು. ವೀರಭದ್ರನ ಪುರಾಣದಲ್ಲಿಯೂ ಇರುವುದು ಶೈವ-ವೈಷ್ಣವ ಸಂಘರ್ಷ ತಾನೇ?

ಈ ರೂಪಾಂತರ ಮತ್ತು ವೈರುಧ್ಯಗಳನ್ನೆಲ್ಲ ಹೇಗೆ ಅರ್ಥಮಾಡಿಕೊಳ್ಳುವುದು? ಚರಿತ್ರೆಯ ಮೇಲೆ ವರ್ತಮಾನವು, ಮಾಡುವ ಸವಾರಿಯೆಂದೇ? ಸಂಘರ್ಷ ರಕ್ತಪಾತಗಳ ಮೇಲೆ ಕಾವ್ಯವು ತೀರಿಸಿಕೊಳ್ಳುತ್ತಿರುವ ಮುಯ್ಯಿ ಎಂದೇ? ಪುರಾಣವಾಗಲಿ ಚರಿತ್ರೆಯಾಗಲಿ ದೇಶಾಂತರಗೊಂಡರೆ ಅಥವಾ ಕಾಲಾಂತರಗೊಂಡರೆ, ಹೊಸ ಸಮಾಜದ ಬದುಕಿನಲ್ಲಿ ಅದು ಹಾದು ಅದು ಕಾವ್ಯವಾದರೆ, ಕಂಬಳಿಹುಳು ಚಿಟ್ಟೆಯಾದಂತೆ ಸಾಂಸ್ಕೃತಿಕ ಮರುಹುಟ್ಟನ್ನೇ ಪಡೆದುಬಿಡುತ್ತದೆ.

ಅದರ ಮೂಲಕ ಮೂಲವನು ಶೋಧಿಸುವುದೇ ವ್ಯರ್ಥ ಎನಿಸುವಷ್ಟು ಅದು ಸ್ವಾಯತ್ತತೆಯನ್ನು ಪಡೆದುಬಿಡುತ್ತದೆ.

ಕೊನೆಗೂ ಕಾವ್ಯವು ತನ್ನದೇ ಆದ `ಸತ್ಯ`ವನ್ನು ಹೇಳುವ ಹಕ್ಕನ್ನು ಚಲಾಯಿಸಿಬಿಡುತ್ತದೆ. ಜನರ ಮಾನಸದಲ್ಲಿ ಕೊನೆಗೂ ಉಳಿಯುವುದು ಕಾವ್ಯಸತ್ಯವೇ!

ಸೋಮವಾರ, ನವೆಂಬರ್ 21, 2011

ವರ್ಷ ತುಂಬಿದ ಕನ್ನಡ ಜಾನಪದ ಬ್ಲಾಗ್

ಕನ್ನಡ ಜಾನಪದ ಬ್ಲಾಗ್ ಜತೆಗಿನ ಪಯಣದ ಕಥೆ..

2010 ಸೆಪ್ಟಂಬರ್ 7 ಕ್ಕೆ ಬ್ಲಾಗ್ ಆರಂಭಿಸಿದ್ದೆ. ನವಂಬರ್ 7 ಕ್ಕೆ ಹದಿನಾಲ್ಕು ತಿಂಗಳು ತುಂಬಿದೆ. ಒಂದು ವರ್ಷ ಪೂರೈಸಿದ ಈ ಹೊತ್ತಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು. ಬ್ಲಾಗ್ ಆರಂಬಿಸಿ ಮೊದಲಿಗೆ ಉತ್ಸಾಹದಿಂದ ಬರೆದು ನಂತರ ಅಪ್ ಡೇಟ್ ಮಾಡುವುದನ್ನು ಮರೆಯುತ್ತಾರೆ. ಆ ಉತ್ಸಾಹವನ್ನು ನಿರಂತವಾಗಿಟ್ಟುಕೊಂಡು, ಬ್ಲಾಗ್ ಗೆ ಬರೆಯುವುದೂ ಕೂಡ ಒಂದು ಸವಾಲು. ಹಾಗಾಗಿ ಕನ್ನಡದಲ್ಲಿ ಸಾವಿರಾರು ಬ್ಲಾಗ್ ಗಳಿದ್ದರೂ ನಿರಂತರವಾಗಿ ಅಪ್ ಡೇಟ್ ಆಗುವ ಬ್ಲಾಗ್ ಗಳ ಸಂಖ್ಯೆ ಕಡಿಮೆ. ಅಂತಹ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಜಾನಪದವೂ ಒಂದು.

ಕಂಪ್ಯೂಟರ್ ಮುಟ್ಟಿದರೆ ಚೇಳು ಕಡಿದಂತಹ ಭಯವಾಗಿ, ಅದರಿಂದ ದೂರವೆ ಉಳಿದಿದ್ದ ನನಗೆ ಕಂಪ್ಯೂಟರ್ ಸಹವಾಸ ದೊರಕಿದ್ದು ಆಕಸ್ಮಿಕ. ವರ್ಡನೆಟ್ ಪ್ರಾಜೆಕ್ಟ(ಅಮೃತ ವಿವಿ ಕೊಯಮತ್ತೂರು) ನಲ್ಲಿ ಕೆಲಸ ಮಾಡಲು ಭಾರತಿದೇವಿಯ ಸಹಾಯ ಸಿಗದಿದ್ದರೆ, ಕಂಪ್ಯೂಟರ್ ಮತ್ತು ಅಂತರ್ಜಾಲದ ಸಹವಾಸ ಇನ್ನಷ್ಟು ದಿನ ಮುಂದೆ ಹೋಗುತ್ತಿತ್ತೋ ಏನೊ. ಹಾಗಾಗಿ ಭಾರತಿದೇವಿಯನ್ನು ಈ ಹೊತ್ತು ನೆನೆವೆ.

ಅಂತರ್ಜಾಲದಲ್ಲಿ ಕನ್ನಡ ಜಾನಪದ, ಕರ್ನಾಟಕ ಫೋಕ್ಲೋರ್ ಎಂದು ಹುಡುಕಿದರೆ ಬರುವ ಫಲಿತಾಂಶ ನಿರಾಸೆ ಹುಟ್ಟಿಸುತ್ತಿತ್ತು. ಹಾಗಾಗಿ ಜಾನಪದಕ್ಕೆಂದೇ ಬ್ಲಾಗ್ ಒಂದನ್ನು ಆರಂಭಿಸಿದರೆ ಹೇಗೆಂಬ ಯೋಚನೆ ಹೊಳೆದು ಅದು ಕಾರ್ಯರೂಪಕ್ಕೆ ಬಂತು. ನಂತರ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತು. ಈಗ ಕನ್ನಡ ಜಾನಪದ ಓದುವಿಕೆಯ ಸಂಖ್ಯೆ ಹತ್ತು ಸಾವಿರದ ಹತ್ತಿರ ಇದೆ. ಬ್ಲಾಗ್ ನಲ್ಲಿ ಪ್ರಕಟವಾದ ಬರಹಗಳ ಸಂಖ್ಯೆ ನೂರನ್ನು ದಾಟಿದೆ. ಇನ್ನು ಕನ್ನಡ ಜಾನಪದ ಪೇಸ್ ಬುಕ್ ನಲ್ಲಿ ಸಾವಿರಕ್ಕಿಂತ ಹೆಚ್ಚಿನ ಸ್ನೇಹ ಬಳಗವಿದೆ. ಈಗ ಗೂಗಲ್ ನಲ್ಲಿ ಕನ್ನಡ ಜಾನಪದ, ಕರ್ನಾಟಕ ಫೋಕ್ ಲೋರ್ ಎಂದು ಹುಡುಕಿದರೆ ಕನ್ನಡ ಜಾನಪದ ಬ್ಲಾಗ್ ನ ಅಷ್ಟೂ ಬರಹಗಳ ಲಿಂಕ್ ಸಿಕ್ಕುತ್ತದೆ, ಅದು ಸಮಾಧಾನಕರ ಸಂಗತಿ. ಹಾಗಾಗಿ ಈ ಹೊತ್ತು ಬ್ಲಾಗ್ ಪಯಣದಲ್ಲಿ ಸಿಕ್ಕವರನ್ನು ನೆನೆಯಬೇಕು.

ಬ್ಲಾಗ್ ಆರಂಭಿಸಿ ಸ್ವಲ್ಪ ದಿನಕ್ಕೆ ದೆಹಲಿಯಿಂದ ಪುರುಷೋತ್ತಮ ಬಿಳಿಮಲೆಯವರು ಪೋನ್ ಮಾಡಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು, ಜರ್ಮನಿಯಲ್ಲಿದ್ದ ಪ್ರೊ.ಬಿ.ಎ ವಿವೇಕ ರೈ ಅವರು ತಮ್ಮ ಬ್ಲಾಗ್ ನಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಟಿಪ್ಪಣಿ ಬರೆದು ಗಮನ ಸೆಳೆದರು. ಜಿ.ಎನ್.ಮೋಹನ್ ಅವರು ಜಾನಪದಕ್ಕೇ ಬ್ಲಾಗ್ ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚಿ ಮಾತನಾಡಿದರು, ನಂತರ ಅವಧಿಯಲ್ಲಿ ಕನ್ನಡ ಜಾನಪದದಲ್ಲಿ ಪ್ರಕಟವಾದ ಬರಹಗಳನ್ನು ಪ್ರಕಟಿಸಿ ಲಿಂಕ್ ತೋರಿಸಿದರು, ಅಂತೆಯೇ ಅವಧಿಯ ದಿನದ ಬ್ಲಾಗ್ ನಲ್ಲಿ ಟೀನಾ ಶಶಿಕಾಂತ ಅವರು ಜಾನಪದ ಬ್ಲಾಗ್ ಬಗ್ಗೆ ಉತ್ತಮ ಮಾತುಗಳನ್ನು ಬರೆದರು, ಹಾಗೆಯೇ ಅನೇಕ ಸ್ನೇಹಿತ/ತೆ ಬ್ಲಾಗಿಗರು ತಮ್ಮ ಬ್ಲಾಗ್ ಪಟ್ಟಿಯಲ್ಲಿ ಕನ್ನಡ ಜಾನಪದವನ್ನು ಸೇರಿಸಿ ಸಹಕರಿಸಿದ್ದಾರೆ, ಅವರೆಲ್ಲರನ್ನೂ ನೆನೆವೆ.

ಅರಣ್ಯ ಜಾನಪದ ಸೆಮಿನಾರ್ ಬಗ್ಗೆ ವಿಮರ್ಶಾತ್ಮಕ ಟಿಪ್ಪಣಿ ಬರೆದಾಗ ಯು.ಆರ್. ಅನಂತಮೂರ್ತಿ,ರಹಮತ್ ತರೀಕೆರೆ, ಬಿಳಿಮಲೆ , ಅಂಬಳಿಕೆ ಹಿರಿಯಣ್ಣ, ಬಂಜಗೆರೆ ಜಯಪ್ರಕಾಶ್ ಮುಂತಾದವರೆಲ್ಲಾ ಪ್ರತಿಕ್ರಿಯಿಸಿದರು. ಇದು ನನಗೆ ಬರೆಯಲು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿತು. ಇಲ್ಲಿನ ಎಲ್ಲಾ ಬರಹಗಳು ನನ್ನವಲ್ಲ, ಬದಲಾಗಿ ಹಲವರ ಬರಹಗಳು ಇಲ್ಲಿವೆ. ಕೂಡ್ಲಿಗಿಯ ಸಿದ್ದರಾಮ ಹಿರೇಮಠ, ಭೀಮಣ್ಣ ಗಜಾಪುರ, ಸ್ವರೂಪಾನಂದ, ಬಾಗಲಕೋಟೆಯ ಪ್ರಕಾಶ್ ಖಾಡೆ, ಪ್ರೊ.ವೀರಣ್ಣ ದಂಡೆ, ಬಸವರಾಜ ಮಲಶೆಟ್ಟರು, ಪ್ರೊ. ರಾಜೇಂದ್ರ ಚೆನ್ನಿ, ಹೆಚ್,ಎಸ್.ರೋಹಿಣಿ, ಮುಂತಾದವರ ಬರಹಗಳು ಇಲ್ಲಿ ಪ್ರಕಟವಾಗಿವೆ, ಅವರೆಲ್ಲರಿಗೂ ಧನ್ಯವಾದಗಳು.

ಇಲ್ಲಿನ ಕೆಲವು ಬರಹಗಳನ್ನು ಎರವಲು ಪಡೆದೂ ಪ್ರಕಟಿಸಲಾಗಿದೆ ತರೀಕೆರೆ ಸಾರ್ ಪ್ರಜಾವಾಣಿ ಅಂಕಣದ ಕೆಲವು ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಸಿರಾಜ್ ಅಹಮದ್, ಮೇಟಿ ಮಲ್ಲಿಕಾರ್ಜುನ ಅವರ ಡಿ.ಎನ್. ಶಂಕರಭಟ್ಟರ ಧೀರ್ಘ ಸಂದರ್ಶನವನ್ನು ಪ್ರಕಟಿಸಲಾಗಿದೆ. ಅಂತೆಯೇ ಜಾನಪದದ ಬಗ್ಗೆ ಪತ್ರಿಕೆಗಳಲ್ಲಿ ಬಂದ, ಬೇರೆ ಬೇರೆ ಬ್ಲಾಗ್ ಗಳಲ್ಲಿ ಪ್ರಕಟವಾದ ಕೆಲವಾದರೂ ಒಳ್ಳೆಯ ಬರಹಗಳನ್ನು ಇಲ್ಲಿ ಪ್ರಕಟಿಸಲು ಪ್ರಯತ್ನಿಸಲಾಗಿದೆ. ಅಂತಹ ಬರಹಗಳ ಎಲ್ಲಾ ಬರಹಗಾರರಿಗೂ ಧನ್ಯವಾದಗಳು. ಕನ್ನಡ ಜಾನಪದದಲ್ಲಿ ಪ್ರಕಟವಾದ ಕೆಲವು ಬರಹಗಳನ್ನು ಪ್ರಕಟಿಸಿದ ಅವಧಿ, ಲಡಾಯಿ ಪ್ರಕಾಶನ , ಕನ್ನಡ ನೆಟ್ ಮುಂತಾದ ತಾಣದ ಹಿಂದಿರುವವರನ್ನೂ ನೆನೆವೆ.

ಈ ಬ್ಲಾಗ್ ಗಾಗಿ ಗೊ.ರು.ಚನ್ನಬಸಪ್ಪ, ಪ್ರೊ.ಹಿರಿಯಣ್ಣ, ಡಾ.ಟಿ.ಆರ್. ಚಂದ್ರಶೇಖರ್, ಡಾ. ರಹಮತ್ ತರೀಕೆರೆ, ಕಿಕ್ಕೇರಿ ನಾರಾಯಣ ಮೊದಲಾದವರೊಂದಿಗೆ ಪ್ರಶ್ನೆಕಳುಹಿಸಿ ಉತ್ತರ ಪಡೆದ ಸಂದರ್ಶನ ಪ್ರಕಟಿಸಿದ್ದೇನೆ, ಆ ಎಲ್ಲಾ ಹಿರಿಯರನ್ನು ನೆನೆವೆ.

ಕೆಲ ದಿನಗಳ ಹಿಂದೆ ಕನ್ನಡ ಜಾನಪದದ ಜತೆ ಕರ್ನಾಟಕ ಪೋಕ್ ಲೋರ್ ಎಂದು ಇಂಗ್ಲೀಷ್ ನಲ್ಲಿ ಸೇರಿಸಿದೆ, ಈ ಸಲಹೆಯನ್ನು ನೀಡಿದವರು ನಟರಾಜ ಹುಳಿಯಾರ ಅವರು. ಕಾರಣ ಹೊರಗಿನವರು ಸಾಮಾನ್ಯವಾಗಿ ಕರ್ನಾಟಕ ಪೋಕ್ ಲೋರ್ ಎಂದು ಹುಡುಕುತ್ತಾರೆ, ಅಂತವರಿಗೂ ಈ ಬರಹದ ಲಿಂಕ್ ಗಳು ಸಿಗಲೆಂದು ಹೀಗೆ ಬದಲಾಯಿಸಲಾಯಿತು.

ಈ ಬ್ಲಾಗ್ ನಲ್ಲಿ ಬರೆದ ಬರಹಗಳು ಮಹತ್ವದ ಸಂಶೋಧನೆಗಳೇನೂ ಅಲ್ಲ, ಬದಲಾಗಿ ಜಾನಪದವನ್ನು ಹೊಸದಾಗಿ ವಿಶ್ಲೇಷಿಸಬಹುದಾದ ಕೆಲವು ಟಿಪ್ಪಣಿ ತರಹದ, ಪ್ರವೇಶಿಕೆಯ ರೂಪದ ಬರಹಗಳು. ಅಂತಹ ಬರಹಗಳ ವಿಸ್ತರಣಾ ರೂಪಗಳು ಜಾನಪದ ಹೊಸ ನಡಿಗೆ ಎನ್ನುವ ನನ್ನ ಹೊಸ ಪುಸ್ತಕದಲ್ಲಿ ಪ್ರಕಟವಾಗಲಿವೆ. ಜಾನಪದ ಕುರಿತ ಸೆಮಿನಾರು, ಚರ್ಚೆ ಸಂವಾದಗಳು ನಡೆವ ಬಗ್ಗೆ ನನಗೆ ದೊರಕಿದ ಕೆಲವಾದರೂ ಮಾಹಿತಿಗಳನ್ನು ಪ್ರಕಟಿಸಲಾಗಿದೆ.

ಬೀದರ್ ನಲ್ಲಿ ನಡೆದ ಅಖಿಲ ಭಾರತೀಯ ಜಾನಪದ ಸಮ್ಮೇಳನಕ್ಕೆ ಆಹ್ವಾನವಿಲ್ಲದೆ ಸ್ವ ಇಚ್ಚೆಯಿಂದ ತೆರಳಿ ನಾಲ್ಕು ದಿನ ಇದ್ದು ವರದಿ ಮಾಡಿದ್ದೇನೆ. ಕನ್ನಡ ಜಾನಪದ ಬ್ಲಾಗ್ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಸಣ್ಣ ಸೇರ್ಪಡೆಯಷ್ಟೆ. ಬ್ಲಾಗ್ ನ್ನು ವೆಬ್ ಸೈಟ್ ಮಾಡುವ ಆಲೋಚನೆಯೂ ಇತ್ತು. ಅದಕ್ಕೆ ತಗಲುವ ಹಣಕಾಸನ್ನು ಭರಿಸುವ ಶಕ್ತಿ ಸದ್ಯಕ್ಕೆ ಇಲ್ಲವಾದ್ದರಿಂದ ವೆಬ್ ಸೈಟ್ ಮಾಡುವ ಯೋಚನೆಯನ್ನು ಸ್ವಲ್ಪ ಮುಂದೂಡಿದ್ದೇನೆ. ಅಲ್ಲಿಯವರೆಗೂ ನಿರಂತರವಾಗಿ ಬ್ಲಾಗ್ ನಲ್ಲಿ ಬರವಣಿಗೆ ಮಾಡುತ್ತೇನೆ.

ಬ್ಲಾಗ್ ರೂಪಿಸುವಲ್ಲಿ ಜತೆಗಾತಿ ಕಾವ್ಯಳ ಸಹಕಾರ ದೊಡ್ಡದು. ವರ್ಷ ತುಂಬಿದ ಈ ಹೊತ್ತಿನಲ್ಲಿ ತಕ್ಷಣಕ್ಕೆ ನೆನಪಾಗದ ಹಲವಾರು ಗೆಳೆಯ ಗೆಳತಿಯರು ಸಹಕರಿಸಿದ್ದಾರೆ ಅವರೆಲ್ಲರನ್ನೂ ನೆನೆವೆ.

-ಅರುಣ್ ಜೋಳದಕೂಡ್ಲಿಗಿ, ಕನ್ನಡ ಜಾನಪದ ಬ್ಲಾಗಿಗ.

ಶನಿವಾರ, ನವೆಂಬರ್ 19, 2011

ಕರ್ನಾಟಕ ಜಾನಪದ ಅಕಾಡೆಮಿ ವೆಬ್‌ಸೈಟ್‌ಗೆ ಚಾಲನೆ



ಕರ್ನಾಟಕ ಜಾನಪದ ಅಕಾಡೆಮಿಗೆ ತನ್ನದೇ ಆದ ವೆಬ್ ಸೈಟ್ ಮಾಡುವುದು ಬಹು ಜನರ ನಿರೀಕ್ಷೆಯಾಗಿತ್ತು. ಅದೀಗ ಸಾದ್ಯವಾಗಿದೆ. ಇದೇ ನವಂಬರ್ 18 ರಂದು ಅಕಾಡೆಮಿಯ ವೆಬ್ ಸೈಟ್ ನ್ನು ಬಿಡುಗಡೆ ಮಾಡಲಾಗಿದೆ.
ಕೆಲವೇ ದಿನಗಳಲ್ಲಿ ಇದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು. ವೆಬ್‌ಸೈಟ್ ವಿಳಾಸ ಹೀಗಿದೆ: http://karnatakajanapadaacademy.org/



ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಅವರು ಇಲಾಖೆಯ ಆಯುಕ್ತ ಮನು ಬಳಿಗಾರ್, ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ ಅವರ ಉಪಸ್ಥಿತಿಯಲ್ಲಿ ವೆಬ್‌ಸೈಟ್ ಅನ್ನು ಸಾಂಕೇತಿಕವಾಗಿ ಈಚೆಗೆ ಉದ್ಘಾಟನೆ ಮಾಡಲಾಯಿತು. ವೆಬ್ ಸೈಟ್ ಚಾಲನೆಯು ಗೊ.ರು. ಚನ್ನಬಸಪ್ಪ ಅವರಿಗೆ ಸಲ್ಲಬೇಕಾದ ಗೌರವ. ಕಾರಣ ಇಂಥದ್ದೊಂದು ಬಹುದಿನದ ಕನಸನ್ನು ಅವರು ಈಡೇರಿಸಿದ್ದಾರೆ.ಈಗ ಮಾಡಬೇಕಾದ ಕೆಲಸವೆಂದರೆ ಕಾಲ ಕಾಲಕ್ಕೆ ವೆಬ್ ಸೈಟ್ ನ್ನು ಅಪ್ ಡೇಟ್ ಮಾಡುವುದು, ಮತ್ತು ಸಾದ್ಯವಾದಷ್ಟು ಜಾನಪದದ ಕುರಿತಂತೆ ಸಮಗ್ರ ಮಾಹಿತಿ ಸಿಗುವಂತೆ ಜಾಗರೂಕತೆಯಿಂದ ರೂಪಿಸಬೇಕಾಗಿದೆ.

ಇದನ್ನು ಅಭಿವೃದ್ಧಿಪಡಿಸಲು ಕನ್ನಡ ಗಣಕ ಪರಿಷತ್ತಿನ (ಕಗಪ) ತಂತ್ರಜ್ಞರಿಂದ ನೆರವು ಪಡೆಯಲಾಗಿದೆ. ವೆಬ್‌ಸೈಟ್‌ನ ನಿರ್ವಹಣೆ, ಕಾಲಕಾಲಕ್ಕೆ ಹೊಸ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಕಗಪ ತಂತ್ರಜ್ಞರೇ ನಿರ್ವಹಿಸಲಿದ್ದಾರೆ. ಆರಂಭಿಕ ಹಂತದಲ್ಲಿ ಒಂದು ಲಕ್ಷ ರೂಪಾಯಿ ಖರ್ಚಾಗಿದೆ, ವೆಬ್‌ಸೈಟ್ ನಿರ್ವಹಣೆಗೆ ಪ್ರತಿ ತಿಂಗಳು 10-15 ಸಾವಿರ ರೂಪಾಯಿ ಖರ್ಚಾಗುವ ಅಂದಾಜು ಇದೆ ಎಂದು ಪರಡ್ಡಿ ತಿಳಿಸಿದ್ದಾರೆ.

ಕನ್ನಡ ಜಾನಪದ ಬ್ಲಾಗ್ ಜಾನಪದ ಅಕಾಡೆಮಿಯ ವೆಬ್ ಸೈಟ್ ನ್ನು ತುಂಬು ಪ್ರೀತಿಯಿಂದ ಅಂತರ್ಜಾಲ ಲೋಕಕ್ಕೆ ಸ್ವಾಗತಿಸುತ್ತದೆ. ನಮ್ಮ ಬ್ಲಾಗ್ ಪಟ್ಟಿಯಲ್ಲಿ ಅಕಾಡೆಮಿ ವೆಬ್ ಸೈಟ್ ಲಿಂಕನ್ನು ಕೊಡಲಾಗಿದೆ, ಅವಶ್ಯವಿದ್ದವರು ಕನ್ನಡ ಜಾನಪದ ಬ್ಲಾಗ್ ಮೂಲಕವೂ ವೆಬ್ ಸೈಟ್ ನ್ನು ಪ್ರವೇಶಿಸಬಹುದು.

ಬುಧವಾರ, ನವೆಂಬರ್ 16, 2011

ಹೆಣ್ಣಿನ ಶೋಷಣೆ ವೈಭವೀಕರಿಸುವ ಅಗತ್ಯ ಇದೆಯೇ?

November 15, 2011 ರ ಪ್ರಜಾವಾಣಿ ಸಂಗತದಲ್ಲಿ ಪ್ರಕಟವಾದ ಬರಹ

ರೋಹಿಣಿ ಎಚ್.ಎಸ್.



`ಕೆರೆಗೆ ಹಾರ` ಒಂದು ಜನಪ್ರಿಯ ಜನಪದ ಕಥನಗೀತೆ. ಕಲ್ಲನಕೇರಿ ಮಲ್ಲನಗೌಡ ಕಟ್ಟಿಸಿದ ಕೆರೆಗೆ ನೀರು ಬರುವುದಿಲ್ಲ. ಜ್ಯೋತಿಷಿಗಳು ಹಿರಿಯ ಸೊಸೆಯನ್ನು ಕೆರೆಗೆ ಬಲಿ ಕೊಡಬೇಕು ಎಂದಾಗ `ಹಿರಿತನಕ್ಕೆ ಯಾರಿಲ್ಲ` ಎಂದುಕೊಂಡು, ಕಿರಿಯ ಸೊಸೆಯನ್ನು ಬಲಿಕೊಡಲು ಮುಂದಾಗುತ್ತದೆ ಕುಟುಂಬ.

ಅದನ್ನು ತಿಳಿದು ನೊಂದುಕೊಳ್ಳುವ ಕಿರಿ ಸೊಸೆ ಭಾಗೀರಥಿ ದಂಡಿಗೆ ಹೋದ ಪತಿ ಮಾದೇವರಾಯನನ್ನು ನೆನೆದು ಕಣ್ಣೀರು ಇಡುತ್ತಾಳೆ. `ಇಟ್ಟಂಗೆ ಇರಬೇಕು` ಎಂಬ ಗೆಳತಿಯ ಮಾತಿಗೆ ತಲೆದೂಗಿ ಕೆರೆಗೆ ಹಾರ (ಆಹಾರ) ವಾಗಲು ಮಾನಸಿಕವಾಗಿ ಸಿದ್ಧವಾಗುತ್ತಾಳೆ.

ದಂಡಿನಿಂದ ಮನೆಗೆ ಹಿಂತಿರುಗಿದ ಮಾದೇವರಾಯ ವಿಷಯ ತಿಳಿದು ಅದೇ ಕೆರೆಯಲ್ಲಿ ಬಿದ್ದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಘಟನೆಯನ್ನು ವೈಭವೀಕರಿಸುವಂತೆ `ಕೆರೆಗೆ ಹಾರ` ಜನಪದ ಕಥನಗೀತೆ ಇದೆ.

ಮಲ್ಲನಗೌಡ `ಊರ ಕೆರೆಗೆ ನೀರು ಬರಲಿ` ಎಂದು ತನ್ನ ಸೊಸೆಯನ್ನೇ ಬಲಿಕೊಟ್ಟಿದ್ದು ಮತ್ತು ಭಾಗೀರಥಿ ತನ್ನ ಬದುಕನ್ನು ಲೆಕ್ಕಿಸದೇ ಊರ ಕೆರೆಗೆ ನೀರು ಬರಲಿ ಎಂದು ಕೆರೆಗೆ ಹಾರವಾಗಿ ಊರವರ ಕಣ್ಣಲ್ಲಿ ದೊಡ್ಡವಳು ಎನಿಸಿಕೊಂಡಿದ್ದು ಈ ಕಥನದಿಂದ ಹೊಮ್ಮುವ ಸಾರಾಂಶ.

ಕೆಲವು ವರ್ಷಗಳ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಠ್ಯದಲ್ಲಿ ಈ ಕಥನಗೀತೆ ಇತ್ತು. ಇದೀಗ ಮೈಸೂರು ವಿಶ್ವವಿದ್ಯಾಲಯದ ಎರಡನೇ ಪದವಿ ತರಗತಿಗಳಿಗೆ ಇದು ಪಠ್ಯವಾಗಿದೆ. ಅದಕ್ಕೆ ಬರೆದಿರುವ ಟಿಪ್ಪಣಿಯಲ್ಲಿ `ಇದು ಭಾಗೀರಥಿಯ ತ್ಯಾಗ, ಬಲಿದಾನದ ಕತೆ` ಮತ್ತು `ಭಾಗೀರಥಿಯ ಪತಿ ಮಾದೇವರಾಯನ ಪತ್ನಿ ಮೇಲಿನ ಪ್ರೀತಿ ಬಿಂಬಿಸುವ ಕತೆ` ಎಂದು ಬಣ್ಣಿಸಲಾಗಿದೆ.

ಅದರಲ್ಲಿ ಎಲ್ಲಿಯೂ ಭಾಗೀರಥಿ ಕೆರೆಗೆ ಬಿದ್ದು ಹಾರವಾದ ತಕ್ಷಣ ನೀರು ಬರುವುದು ಮೂಢನಂಬಿಕೆ ಎಂಬುದರ ಬಗ್ಗೆ ಸೊಲ್ಲಿಲ್ಲ. ಕೆರೆಯಲ್ಲಿ ನೀರು ಬರಲಿಲ್ಲ ಎಂದು ಹೆಣ್ಣನ್ನು ಬಲಿಕೊಡುವ ಸಂಪ್ರದಾಯದ ಬಗ್ಗೆ ವಿರೋಧವಿಲ್ಲ.

ಈ ಜನಪದ ಕಥನಗೀತೆಯನ್ನು ಪಠ್ಯವಾಗಿ ಅಳವಡಿಸಿರುವುದು ತಪ್ಪಲ್ಲ. ಆದರೆ ತ್ಯಾಗ, ಬಲಿದಾನ ಎಂಬ ಪದಗಳನ್ನು ಬಳಸಿರುವುದು ಸರಿಯೇ? ಅದಕ್ಕೆ ಬದಲು ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಪದಕ್ಕೆ ಪದ ಜೋಡಿಸಿ ಎಷ್ಟು ಚೆಂದದ ಕಥನವನ್ನು ಜನಪದರು ಕಟ್ಟಿದ್ದಾರೆ ಎಂದು ಟಿಪ್ಪಣಿಯನ್ನು ಬರೆದಿದ್ದರೆ ಅದು ತಪ್ಪಾಗುತ್ತಿರಲಿಲ್ಲ.

ಈ ಘಟನೆ ತ್ಯಾಗ, ಬಲಿದಾನದ ಹೆಸರಲ್ಲಿ ನಡೆದಿರುವ ಹೆಣ್ಣಿನ ಶೋಷಣೆ ಎಂಬುದು ನೇರವಾಗಿಯೇ ಗೋಚರವಾಗುವ ಸತ್ಯ. ತ್ಯಾಗವನ್ನು ವೈಭವೀಕರಿಸಿ ಕೆರೆಗೆ ಹಾರ ನೀಡುವುದನ್ನು ಸಮರ್ಥಿಸಿಕೊಂಡಿರುವಂತೆ ಇರುವ ಈ ಟಿಪ್ಪಣಿ ವಿದ್ಯಾರ್ಥಿಗಳಲ್ಲಿ, ಹಿಂದೆ ಕೆರೆಗೆ ಆಹಾರವಾದ ತಕ್ಷಣ ನೀರು ಬರುವಂಥ ಪವಾಡಗಳು ನಡೆಯುತ್ತಿದ್ದವು ಮತ್ತು ಭಾಗೀರಥಿಯಂಥ ತ್ಯಾಗ ಜೀವಿಗಳ ಬದುಕು ಅನುಕರಣೀಯ ಎಂಬ ಭಾವ ಹುಟ್ಟಿಸಬಹುದು. ವಿದ್ಯಾರ್ಥಿಗಳಿಗೆ ಈಗ ಇಂಥವನ್ನು ಬೋಧಿಸಬೇಕೇ?

ಭಾಗೀರಥಿ ಕೆರೆಗೆ (ಕಾಲು ಜಾರಿ?) ಬಿದ್ದ ತಕ್ಷಣ ನೀರು ಬರಲು ಸಾಧ್ಯವೇ? ಕಾಕತಾಳೀಯವಾಗಿ ಅಂದು ನೀರು ಬಂದಿರಬಹುದು ಅಥವಾ ಆ ಘಟನೆ ನಡೆದ ನಂತರ ನಿಧಾನವಾಗಿ ಕೆರೆ ತುಂಬಿರಬಹುದು.

ಮಲ್ಲನಗೌಡ ಜಮೀನ್ದಾರನಾದ ಕಾರಣ ಅವನ ಸುತ್ತ ಇದ್ದ ಭಟ್ಟಂಗಿಗಳು (ಅವರಲ್ಲೊಬ್ಬ ಕೇಡಿಗ ಬುದ್ಧಿಯ ಕವಿ ಇದ್ದನೆಂದುಕೊಳ್ಳಬಹುದು) ಈ ಕಥನದ ಹುಟ್ಟಿಗೆ ಕಾರಣವಾಗಿರಬಹುದು. ಅದರಿಂದ ಭಾಗೀರಥಿಯ ಸಾವನ್ನು ಸಮರ್ಥಿಸಿಕೊಂಡಿರಬಹುದು.

ಇದಲ್ಲದೆ, ಹಿರಿಯ ಸೊಸೆಯನ್ನು ಜ್ಯೋತಿಷಿಗಳು ಆಹಾರವಾಗಿ ಕೊಡಿ ಎಂದು ಮೊದಲು ಸಲಹೆ ಇತ್ತಾಗ ಕುಟುಂಬ ಹಿಂಜರಿಯುತ್ತದೆ. ಯಾಕೆ? ಆಕೆ ಶ್ರೀಮಂತರ ಮನೆಯ ಹೆಣ್ಣುಮಗಳಿರಬಹುದೇನೋ? ಭಾಗೀರಥಿಯ ಪತಿ, `ಹೆಂಡತಿ ಸತ್ತಳು` ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಹೇಳಲಾಗಿದ್ದರೂ, ಅದರ ಹಿಂದೆ ಸೋದರರ ಆಸ್ತಿ ಕಲಹದಂಥ ವಿಚಾರಗಳು ಇದ್ದು ಅವನನ್ನು ದಾಯಾದಿಗಳು ಅದೇ ಕೆರೆಗೆ ತಳ್ಳಿದ್ದರೂ ಇರಬಹುದು.

ಜಮೀನ್ದಾರರ ಮನೆಯ ವಿಚಾರವಾದ ಕಾರಣ ಅದು ಬೇರೆ ರೀತಿಯ ತಿರುವು ಪಡೆದುಕೊಂಡಿರುವ ಸಾಧ್ಯತೆ ಇರುತ್ತದೆ. ಈ ಜನಪದ ಕಥನ ಹುಟ್ಟಲು ಇಂಥ ಹಲವು ಕಾರಣಗಳಿರಬಹುದು. ಹಾಡು ಕಟ್ಟಿದ ಜನಪದರ ಪ್ರತಿಭೆಯನ್ನು ಹೊಗಳುವುದು ಸರಿ. ಆದರೆ, ಘಟನೆಯ ಸಮರ್ಥನೆ ತಪ್ಪು.

ಈ ಸುಂದರ ಜನಪದ ಕಥನಗೀತೆಯ ಲಾಲಿತ್ಯದ ವರ್ಣನೆ ಬೇಕು. ಆದರೆ ಅದರ ಆಶಯದ, ಮೌಢ್ಯ ಪ್ರತಿಪಾದನೆಯ ವಿಚಾರ ಮಾಡದೆಯೇ ವಿದ್ಯಾರ್ಥಿಗಳಿಗೆ ಪಠ್ಯವಾಗಿ ನೀಡಿ ಸೂಕ್ತ ಟಿಪ್ಪಣಿ ಒದಗಿಸದೇ ಇರುವುದು ಬೇಜವಾಬ್ದಾರಿಯುತ ನಡವಳಿಕೆ ಅನಿಸುತ್ತದೆ.

ಇಂಥ ಮೂಢನಂಬಿಕೆಯನ್ನು ವೈಭವಿಸಿ ಸಿನಿಮಾ ಮಾಡುವ ಮಂದಿಯೂ ಹೆಣ್ಣಿನ ಮೇಲಿನ ದೌರ್ಜನ್ಯದ ಹುನ್ನಾರವನ್ನು ಮರೆ ಮಾಚುತ್ತಿದ್ದಾರೆ (ಭಾಗೀರಥಿಯ ಸ್ಥಾನದಲ್ಲಿ ತಮ್ಮ ಸ್ವಂತ ಮಗಳಿದ್ದಳೆಂದು ಕಲ್ಪಿಸಿಕೊಂಡರೆ ಹಾಗೆ ವೈಭವೀಕರಿಸಬಲ್ಲರೇ?).

ಅದು ಅವರಿಗೆ ಅಮರ ಪ್ರೇಮದ ಕಥೆಯಾಗಿ ಬಿಂಬಿತವಾಗುತ್ತದೆ. ಕೆರೆಗೆ ಬಲಿ ಕೊಟ್ಟರೆ ನೀರು ಬರುತ್ತದೆ ಎಂಬ ಮೂಢವಾದವನ್ನು ಇವರು ಈಗಲೂ ಒಪ್ಪುತ್ತಾರೆ ಎಂದರೆ ಇವರ ಬೌದ್ಧಿಕ ಮಟ್ಟ ಎಂಥದ್ದಿರಬೇಕು? ಕೆಲವು ವರ್ಷಗಳ ಹಿಂದೆ ಎಸ್. ಮಹೇಂದರ್ ನಿರ್ದೇಶನದ `ಗೌಡ್ರು` ಸಿನಿಮಾದಲ್ಲಿ ಕೂಡ ಗೌಡನ ಹೆಂಡತಿ ಕೆರೆಗೆ ಹಾರವಾಗುವ ಘಟನೆ ಇದೆ.

ನಂತರ ಎಸ್.ಮಹೇಂದರ್ ತಾವೇ `ಕೆರೆಗೆ ಹಾರ` ಹೆಸರನ್ನು ನೋಂದಾಯಿಸಿ ಸಿನಿಮಾ ಮಾಡಬೇಕೆಂದು ಹಂಬಲಿಸಿದ್ದರು. ಅದು ಈಡೇರಲಿಲ್ಲ. ಇಂಥ ಮೂಢನಂಬಿಕೆಗಳ ಕತೆಯನ್ನು ಮಹಿಳೆಯರ ತ್ಯಾಗದ ಹೆಸರಿನಲ್ಲಿ ವೈಭವಿಸಿ ಹೇಳುವ ಅಗತ್ಯ ಇಂದು ಇದೆಯೇ?

ಶನಿವಾರ, ನವೆಂಬರ್ 5, 2011

ಜಾನಪದ ವಿಶ್ವವಿದ್ಯಾಲಯ ದೃಢವಾದ ಹೆಜ್ಜೆಗಳನ್ನಿಡಬೇಕಿದೆ



ಈ ಬರಹ ಅಕ್ಟೋಬರ್ ತಿಂಗಳ ಮಯೂರದ-ವೇದಿಕೆ ವಿಭಾಗದಲ್ಲಿ ಪ್ರಕಟವಾಗಿದೆ. ಪ್ರಕಟವಾದ ನಂತರ ಒಳ್ಳೆಯ ಪ್ರತಿಕ್ರಿಯೆಯೂ ಬಂತು. ಬರಹ ಪ್ರಕಟಿಸಿದ ಸಂಪಾದಕರಿಗೆ ದನ್ಯವಾದಗಳು. ಬ್ಲಾಗ್ ನ ಓದಿಗಾಗಿ ಈ ಬರಹವನ್ನು ಇಲ್ಲಿ ಪ್ರಕಟಿಸುತ್ತಿರುವೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಚಾರಿತ್ರಿಕವಾಗಿ ಮುಖ್ಯ ಘಟನೆ. ಕಾರಣ ಅದು ಇತರ ವಿವಿಗಳಿಗಿಂತಲೂ ಭಿನ್ನ. ಬೇರೆ ವಿವಿಗಳಲ್ಲಿ ಎದುರಿಗೆ ವಿದ್ಯಾರ್ಥಿಗಳಿರುತ್ತಾರೆ, ಅವರು ಆಧುನಿಕ ಕಾಲದ ಚೌಕಟ್ಟಿನಲ್ಲಿ ಕೂರುವುದು ಹೇಗೆಂದು ಕಲಿಯುತ್ತಿರುತ್ತಾರೆ. ಈ ವಿವಿಯ ಎದುರಿಗೆ ಜನಸಾಮಾನ್ಯರಿರುತ್ತಾರೆ, ಅವರ ತಿಳುವಳಿಕೆಯ ಮೂಲಕವೆ, ಅವರ ಬದುಕನ್ನು ಹಸನು ಮಾಡುವುದು ಹೇಗೆಂದು ಹುಡುಕಬೇಕಾಗುತ್ತದೆ, ಅಂತೆಯೇ ಅವರ ತಿಳುವಳಿಕೆಯ ಚೌಕಟ್ಟಿಗೆ ಆಧುನಿಕತೆಯನ್ನು, ಸರಕಾರಿ ಯೋಜನೆಗಳನ್ನು ಎಡಮುರಿಗೆ ಕಟ್ಟಿ ಹೇಗೆ ಒಗ್ಗಿಸಬೇಕೆನ್ನುವುದನ್ನು ಶೋಧಿಸಬೇಕಾಗುತ್ತದೆ.

ಭಾರತದಲ್ಲಿ ಇದು ಮೊದಲ ವಿಶ್ವವಿದ್ಯಾಲಯ. ಹಾಗಾಗಿ ಅನುಕರಣೆಗೆ ಸಿದ್ಧ ಮಾದರಿಗಳಿಲ್ಲ. ಸ್ವತಃ ಈ ವಿವಿ ಹೊಸ ಮಾದರಿಗಳನ್ನು ಹುಟ್ಟಿಸಬೇಕಾಗಿದೆ. ಇದೊಂದು ದೊಡ್ಡ ಸವಾಲು. ಹಾಗಾಗಿ ಈ ವಿವಿ ರೂಪುಗೊಳ್ಳುವ ಬಗೆಗೆ ವಿಪರೀತ ಕುತೂಹಲಗಳೂ, ನಿರೀಕ್ಷೆಗಳು ಇವೆ. ಇಂತಹ ಒತ್ತಡವೇ ಜಾನಪದ ವಿವಿಯನ್ನು ದೃಢವಾದ ಹೆಜ್ಜೆಗಳನ್ನಿಡುವಂತೆ ಒತ್ತಾಯಿಸುತ್ತಿದೆ.


ಈ ಬರಹ ಬರೆವ ಹೊತ್ತಿಗೆ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಅಂಬಳಿಕೆ ಹಿರಿಯಣ್ಣ ಅವರನ್ನು ಮಾತಾಡಿಸಬೇಕಾಯಿತು. ಈಗ ವಿಶ್ವವಿದ್ಯಾಲಯ ಉದ್ಘಾಟನೆಗಾಗಿ ಕಾಯುತ್ತಿದೆ. ಬೇಕಾದ ತಯಾರಿಯೂ ನಡೆಯುತ್ತಿದೆ. ಜಾನಪದದ ಸಮಗ್ರ ಸರ್ವೇಕ್ಷಣೆಯ ಭಾಗವಾಗಿ ತಲಾ ಹತ್ತು ಸಂಪುಟಗಳಲ್ಲಿ ಜಾನಪದ ವಿಶ್ವಕೋಶ, ಜಾನಪದ ನಿಘಂಟು, ಗ್ರಾಮ ಮಾಹಿತಿಕೋಶ ಮತ್ತು ಭಾಷಾಂತರ ಯೋಜನೆಗಳನ್ನು ರೂಪಿಸುತ್ತಿರುವುದಾಗಿ ಅವರು ಹೇಳಿದರು.

ಬಹುಶಃ ಜಾನಪದ ವಿವಿಯ ಮೊದಲ ಹಂತದ ಮಹತ್ವಾಕಾಂಕ್ಷೆಯ ಯೋಜನೆಗಳು ಇವೆಂದು ತಿಳಿಯೋಣ. ಇದರಲ್ಲಿ ಕೆಲಮಟ್ಟಿನ ಪುನರಾವರ್ತನೆಯ ಸಂಭವವಿದೆಯಾದರೂ, ಆಗಬೇಕಾದ ಕೆಲಸವೂ ಹೌದು. ಈ ಯೋಜನೆಗಳೇ ವಿಶ್ವವಿದ್ಯಾಲಯದ ತೋರುಬೆರಳುಗಳು ಅಂದುಕೊಳ್ಳುವುದಾದರೆ, ಜಾನಪದ ವಿವಿ ಮಾಹಿತಿಗಳನ್ನು ಕಲೆಹಾಕುವಲ್ಲಿ, ಮತ್ತು ಅವುಗಳನ್ನು ಪುಸ್ತಕಗಳಾಗಿ ಅಚ್ಚು ಹಾಕಿಸುವಲ್ಲಿ, ಹೆಚ್ಚು ಉತ್ಸುಕವಾಗಿದೆ ಎಂದಂತಾಯಿತು.

ಈ ಹಿಂದೆ ಜಾನಪದ ವಿವಿಯನ್ನು ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಜಾನಪದ ವಿವಿ ಮಂಗಳೂರು, ದಾವಣಗೆರೆ, ದಾರವಾಡ, ಗುಲ್ಬರ್ಗಾಗಳಲ್ಲಿ ಆಯಾ ಭಾಗದ ಎಲ್ಲಾ ವಯೋಮಾನದ ವಿದ್ವಾಂಸರನ್ನು ಕರೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಮುಂದುವರೆದು ವಿವಿ ಆರಂಭಿಕ ಕೆಲಸಗಳನ್ನೂ ನಡೆಸಿದೆ. ಈ ಹೊತ್ತಲ್ಲಿ ಜಾನಪದ ವಿವಿಯನ್ನು ಮುಂದೆ ಹೇಗೆ ರೂಪಿಸಬಹುದು ಎನ್ನುವ ಸಾಧ್ಯತೆಗಳ ಬಗ್ಗೆ ಯೋಚಿಸಬಹುದು.

ಜಾನಪದ ವಿವಿ ಮುಖ್ಯವಾಗಿ ಎರಡು ನೆಲೆಗಳಲ್ಲಿ ರೂಪುಗೊಳ್ಳಬೇಕಿದೆ. ಅವುಗಳೆಂದರೆ ಸೈದ್ಧಾಂತಿಕ ನೆಲೆ ಮತ್ತು ಪ್ರಾಯೋಗಿಕ ನೆಲೆ. ಒಂದು: ವಿವಿ ತನ್ನದೇ ಆದ ಆಲೋಚನ ವಿನ್ಯಾಸವನ್ನು, ಸೈದ್ಧಾಂತಿಕ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದು ಬುಡಮಟ್ಟದ ಜನಸಮುದಾಯಗಳ ತಿಳುವಳಿಕೆಯ ಪಕ್ಷಪಾತಿಯಾಗಿರಬೇಕು. ಜನ ಸಾಮಾನ್ಯರ ಲೋಕದೃಷ್ಠಿಯನ್ನು ಆಧರಿಸಿ, ಗ್ರಾಮ ಜಗತ್ತಿನ ನಿಜದ ಬದುಕಿನ ನೆಲೆಯಲ್ಲಿ ಈ ಲೋಕದ ತಿಳಿವನ್ನು ಭಿನ್ನನೆಲೆಯಲ್ಲಿ ಅರ್ಥಮಾಡಿಸಬೇಕು. ಇದಕ್ಕಾಗಿ ಸಂಗ್ರಹಿತ ಜಾನಪದವನ್ನು ಮತ್ತೆ ಎದುರುಗೊಂಡು ಹೊಸದಾಗಿ ವಿಶ್ಲೇಷಿಸುವುದು, ಮುಖ್ಯವೆನಿಸುವ ಜಾನಪದವನ್ನು ಸಂಗ್ರಹಿಸುವುದು ಅಗತ್ಯವಿದೆ.

ಮೊದಲು ಜಾನಪದ ಕುರಿತ ವ್ಯಾಖ್ಯಾನಗಳನ್ನು ಈ ಕಾಲಕ್ಕೆ ಹಿಗ್ಗಿಸಬೇಕಿದೆ. ಹಳೆ ವ್ಯಾಖ್ಯಾನಗಳಿಗೆ ವಿವಿ ತನ್ನ ಕಾರ್ಯಸೂಚಿಯನ್ನು ರೂಪಿಸಿಕೊಂಡರೆ ಹೊಸತನ್ನು ನಿರೀಕ್ಷಿಸಲಾಗದು. ಜಾನಪದವೆಂದರೆ ಕಥೆ, ಗೀತೆ, ಗಾದೆ, ಒಗಟು, ಪ್ರದರ್ಶಕ ಕಲೆಗಳು ಎಂಬ ನಂಬಿಕೆ ಬಲವಾಗಿದೆ. ಅದು ಅನಕ್ಷರಸ್ತರದ್ದು, ಹಳ್ಳಿಗರದ್ದು, ಕೆಳಸಮುದಾಯಗಳದ್ದು, ಮೌಖಿಕವಾದದ್ದು ಮುಂತಾದ ಲಕ್ಷಣಗಳನ್ನು ಅದರ ಬೆನ್ನಿಗೆ ಬಿಗಿಯಾಗಿ ಕಟ್ಟಲಾಗಿದೆ. ಇವೆಲ್ಲಾ ಜಾನಪದದ ವ್ಯಾಪ್ತಿಗೆ ಬರುತ್ತವಾದರೂ ಇದಷ್ಟೆ ಅಲ್ಲ. ಇವುಗಳಾಚೆಗೆ ಬಹು ದೂರವನ್ನು ಜಾನಪದ ಕ್ರಮಿಸಿದೆ. ಈಗ ಗುರುತಿಸುವ ಜನಪದ ಪ್ರಾಕಾರಗಳಲ್ಲಿಯೂ ಹೊಸ ಚಲನೆ ಇದೆ.

ಈ ಹಿಂದೆ ಡೊಳ್ಳು ಕಲೆಯನ್ನು ಕುರುಬ ಸಮುದಾಯದ ಕಲೆಯೆಂದೂ, ಗಂಡು ಕಲೆಯೆಂದೂ ವಿಶ್ಲೇಷಿಸಲಾಗಿದೆ. ಈಗ ಬಹುಸಮುದಾಯಗಳಲ್ಲಿ ಆ ಕಲೆ ವಿಸ್ತರಿಸಿಕೊಂಡಿದೆ, ಹತ್ತಾರು ಮಹಿಳಾ ಡೊಳ್ಳು ತಂಡಗಳು ಹುಟ್ಟಿಕೊಂಡಿವೆ. ಹಾಗಾಗಿ ಅದರ ಹಿಂದಿನ ವಿಶ್ಲೇಷಣೆ ಈಗ ಬದಲಾಗಬೇಕಾಗುತ್ತದೆ. ಪುರುಷರ ಜನಪದ ಕಲೆಗಳನ್ನು ಇಂದು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಹೀಗೆ ಆಯಾ ಜನಪದ ಪ್ರಕಾರಗಳು ವಿಸ್ತರಿಕೊಂಡ ನೆಲೆಗಳನ್ನು ಆಧರಿಸಿ ಹೊಸ ಬಗೆಯ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಬೇಕಾದೆ.
ಇಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಅಧ್ಯಯನ ಮಾದರಿ ರೂಪುಗೊಳ್ಳುತ್ತಿದೆ. ಜಾನಪದ ವಿವಿಯೂ ಈ ಮಾದರಿಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಬಹುಶಿಸ್ತೀಯ ನೆಲೆಯಲ್ಲಿ ವಿವಿಯನ್ನು ರೂಪಿಸಬೇಕು. ಅಲ್ಲಿ ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅಭಿವೃದ್ಧಿ ಅಧ್ಯಯನ, ಮಹಿಳಾ ಅಧ್ಯಯನ, ಸಾಹಿತ್ಯ ಅಧ್ಯಯನ, ಭಾಷಾದ್ಯಯನ, ತಂತ್ರಜ್ಞಾನ, ವಿಜ್ಞಾನದಂತಹ ಅನ್ಯಜ್ಞಾನ ಶಿಸ್ತುಗಳ ಮೂಲಕ ಜಾನಪದವನ್ನು ಆನ್ವಯಿಕವಾಗಿ ನೋಡುವಂತಾದಲ್ಲಿ ಅದರ ವಿಸ್ತರಣೆಯಾಗುತ್ತದೆ.

ಅಂತೆಯೆ ಜಾನಪದದಲ್ಲಿ ಜಾತಿ ಶ್ರೇಣೀಕರಣದ ಬಿಗಿಯಾದ ಕಟ್ಟುಗಳಿವೆ, ಕೆಳಜಾತಿ ಕೆಳವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಮೇಲ್ಜಾತಿ ಮೇಲ್ವರ್ಗಗಳು ಕಟ್ಟಿದ ಆಚರಣೆ ನಂಬಿಕೆಯ ಲೋಕಗಳಿವೆ. ಮಹಿಳೆಯನ್ನು ದಮನಗೊಳಿಸುವ ಮಾದರಿಗಳಿವೆ, ಪ್ರಭುತ್ವವನ್ನು ಕೊಂಡಾಡುವಿಕೆ, ಮೌಢ್ಯವನ್ನು ಮುಂದುವರೆಸುವಿಕೆ , ಗುಲಾಮಿ ಪ್ರವೃತ್ತಿಯನ್ನು ಬೆಳೆಸುವಿಕೆ ಮುಂತಾದ ಕೇಡುಗಳನ್ನು ಬಿಡಿಸಿಕೊಂಡು ವಿಶ್ಲೇಷಣೆ ಮಾಡುವ ಸವಾಲು ಜಾನಪದ ವಿವಿಯ ಮುಂದಿದೆ. ಅದನ್ನು ಅದು ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕು. ಇದಕ್ಕೆ ಪ್ರತಿಯಾಗಿ ಜಾನಪದದಲ್ಲಿಯೇ ಪ್ರತಿರೋಧಕ ಅಂಶಗಲೂ ಇವೆ. ಜನಸಮುದಾಯಗಳು ಪ್ರತಿಸಂಸ್ಕೃತಿಯನ್ನು ಕಟ್ಟಿಕೊಂಡ ಮಾದರಿಗಳೂ ಇವೆ, ಬಹುಶಃ ಇಂತಹ ಮಾದರಿಗಳನ್ನು ಆಧರಿಸಿದ ವಿಶ್ಲೇಷಣೆಯ ಅಗತ್ಯ ಹೆಚ್ಚಿದೆ. ಜಾನಪದದಲ್ಲಿ ಬಹು ಸಂಸ್ಕೃತಿ, ಬಹುಪರಂಪರೆಗಳ ಆಶಯವಿರುವ ಕಾರಣ ಧಾರ್ಮಿಕ ಮೂಲಭೂತವಾದಿ ಚಿಂತನೆಗಳಿಗೆ ಯಾವತ್ತೂ ಪ್ರತಿರೋಧಕ ಶಕ್ತಿಯಾಗಿಯೇ ಜಾನಪದ ವಿವಿ ಕೆಲಸಮಾಡಬೇಕು.

ಹೊಸ ಕಾಲದ ಹೊಸ ಜಾನಪದ ಹುಟ್ಟುತ್ತಿದೆ, ಆದರೆ ಅದನ್ನು ಗುರುತಿಸುವಿಕೆ ಕನ್ನಡದಲ್ಲಿ ಅಷ್ಟು ಕ್ರಿಯಾಶೀಲವಾಗಿಲ್ಲ. ಜನರ ಒಡನಾಟಕ್ಕೆ ಬರುವ ಯಾವುದೇ ವಸ್ತು ಅಥವಾ ಸಂಗತಿ ಕೂಡ ಜಾನಪದವನ್ನು ಹುಟ್ಟಿಸುತ್ತದೆ. ಉದಾ: ಗ್ರಾಮೀಣ ಭಾಗದಲ್ಲಿರುವ ಓಸಿ ಅಥವ ಮಟ್ಕಾ ಎಂಬ ಜೂಜಾಟ ಹುಟ್ಟಿಸಿದ ಜಾನಪದ ಅಚ್ಚರಿಹುಟ್ಟಿಸುವಂತಿದೆ. ಮೊಬೈಲ್ ಕೂಡ ವಿಚಿತ್ರ ರೀತಿಯಲ್ಲಿ ಜಾನಪದವನ್ನು ಹುಟ್ಟಿಸುತ್ತಿದೆ. ಸಮೂಹ ಮಾದ್ಯಮಗಳಿಂದಾಗಿ ನವಮೌಖಿಕತೆ ಹುಟ್ಟುತ್ತಿದೆ. ಹೀಗೆ ಹೊಸಕಾಲ ಮತ್ತು ಹೊಸ ಸಂಗತಿಗಳ ಕಾರಣಕ್ಕೆ ಹುಟ್ಟಿದ ಜಾನಪದವನ್ನು ಈ ವಿವಿ ಗುರುತಿಸುವಂತಾಗಬೇಕು. ಅಮೇರಿಕ, ಜರ್ಮನ್, ಫಿನ್ಲೆಂಡ್ ಮುಂತಾದ ಕಡೆ ಜಾನಪದವನ್ನು ಈ ನೆಲೆಯಲ್ಲಿ ವಿಸ್ತರಿಸಲಾಗುತ್ತಿದೆ. ‘ಫೋಕ್‌ಲೋರ್ ಅಂಡ್ ದ ಇಂಟರ್‌ನೆಟ್ : ವರ್ನಾಕುಲರ್ ಎಕ್ಸಪ್ರೆಷನ್ ಇನ್ ಎ ಡಿಜಿಟಲ್ ವರ್ಲ್ಡ’ ‘ನಿವ್ಸ್‌ಲೋರ್: ಕಂಟೆಂಪರರಿ ಫೋಕ್ ಲೋರ್ ಆನ್ ದ ಇಂಟರ್‌ನೆಟ್’ ಮುಂತಾದ ಕೃತಿಗಳಲ್ಲಿ ಇಂತಹ ಪ್ರಯತ್ನವನ್ನು ಕಾಣಬಹುದು.

ಎರಡನೆಯದಾಗಿ ಜಾನಪದ ವಿವಿ ಪ್ರಾಯೋಗಿಕ ನೆಲೆಯಲ್ಲಿ ರೂಪುಗೊಳ್ಳುವ ಅಗತ್ಯವಿದೆ. ಅದು ಹೆಚ್ಚು ಪ್ರಸ್ತುತ ಕೂಡ. ಸೌಥ್ ಈಸ್ಟರ್ನ ಯುನಿಟೆಡ್ ಸ್ಟೇಟ್ಸನ ಫ್ಲೊರಿಡಾದ ಲರ್ಗೋದಲ್ಲಿ ೧೯೯೮ ರಲ್ಲಿ ಸ್ಥಾಪನೆಯಾದ ಫೋಕ್ ಯುನಿವರ್ಸಿಟಿ ಕೂಡ ಪ್ರಾಯೋಗಿಕ ನೆಲೆಯಲ್ಲಿ ಅಭಿವೃದ್ಧಿಯಾದದ್ದು. ಹಾಗಾಗಿ ಜನಸಮುದಾಯದ ಜ್ಞಾನವನ್ನು ಆಧರಿಸಿ ಆಧುನಿಕ ಮಾದರಿಗಳಿಗೆ ಪರ್ಯಾಯ ದೇಸಿ ಮಾದರಿಗಳನ್ನು ಸೃಷ್ಟಿಸುವ ಸಾದ್ಯತೆಗಳಿವೆ. ಏಕ ವಸ್ತುಗಳನ್ನು ಜಾಗತಿಕವಾಗಿ ಮಾರುವ ಮಾರುಕಟ್ಟೆಗೆ ಪರ್ಯಾಯವಾಗಿ ಬಹು ವೈವಿದ್ಯದ ಜನಪದ ಗ್ರಾಮೀಣ ಉತ್ಪನ್ನಗಳನ್ನು ಒಳಗೊಂಡ ದೇಸಿ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಬೇಕಿದೆ. ಈ ನೆಲೆಯಲ್ಲಿ ವೃತ್ತಿ ಕಸಬುಗಳು ಮತ್ತು ಗುಡಿ ಕೈಗಾರಿಕೆಗಳ ಚೇತರಿಕೆಗಾಗಿ ಶ್ರಮಿಸಬೇಕಿದೆ. ಜನಪದ ವೈದ್ಯವನ್ನು ಆಧುನಿಕ ಅಗತ್ಯಗಳಿಗೆ ಬದಲಿಸಿ ಪೋಕ್ ಡಾಕ್ಟರುಗಳನ್ನೂ, ಜನಪದರ ಮನೆಕಟ್ಟುವ ಮಾದರಿ, ಕೃಷಿ ಮುಂತಾದ ಮಾದರಿಗಳನ್ನಾಧರಿಸಿ ಎಂಜಿನಿಯರುಗಳನ್ನು ರೂಪಿಸಬೇಕಿದೆ.

ಸ್ಕ್ಯಾಂಡಿನೇವಿಯಾ ಮುಂತಾದ ದೇಶಗಳಲ್ಲಿ ಫೋಕ್ ಹೈಸ್ಕೂಲ್ ಕುರಿತಂತೆ ದೊಡ್ಡ ಚಳವಳಿ ನಡೆದಿದೆ. ನೂರಾರು ಪೋಕ್ ಹೈಸ್ಕೂಲುಗಳು ಆರಂಭವಾಗಿ ವಯಸ್ಕರ ಶಿಕ್ಷಣಕ್ಕೆ ಹೊಸ ದಿಕ್ಕು ದೆಸೆ ಸಿಕ್ಕಿದೆ. ಫೋಕ್ ಮೀಡಿಯಂ ಸ್ಕೂಲುಗಳು ಆರಂಭವಾಗಿವೆ. ಪೋಕ್ ಎಂಜಿನಿಯರಿಂಗ್, ಪೋಕ್ ಮೆಡಿಸನ್, ಪೋಕ್ ಪ್ಯಾಷನ್ ಡಿಸೈನಿಂಗ್, ಪೋಕ್ ಅಪ್ಲೈಡ್ ಸೈನ್ಸ್, ಪೋಕ್ ಹೋಟೆಲ್ ಮೇನೇಜ್‌ಮೆಂಟ್ ಮುಂತಾದ ಜಾನಪದವನ್ನು ಆಧರಿಸಿದ ಆಧುನಿಕ ಶೈಕ್ಷಣಿಕ ಕೋರ್ಸುಗಳು ಆರಂಭವಾಗಿವೆ. ಹೊಸ ಕಾಲದ ವಿದ್ಯಾರ್ಥಿಗಳು ಇದನ್ನು ಕಲಿಯುತ್ತಿದ್ದಾರೆ. ಅದಕ್ಕೆ ಪೂರಕವಾದ ಉದ್ಯೋಗಗಳು ಸೃಷ್ಟಿಯಾಗಿವೆ. ಹಾಗಾಗಿ ಬಹಳ ಮುಖ್ಯವಾಗಿ ಶೈಕ್ಷಣಿಕವಾಗಿಯೂ ಜಾನಪದವನ್ನು ಅಳವಡಿಸುವ ಅಗತ್ಯವಿದೆ. ಅದಕ್ಕೆ ಪೂರಕವಾದ ಉದ್ಯೋಗವಕಾಶಗಳನ್ನು ಸೃಷ್ಟಿಸುವಂತಹ ಹೊರ ಆವರಣವನ್ನು ರೂಪಿಸಬೇಕಿದೆ.


ಜಾನಪದ ವಿಶ್ವವಿದ್ಯಾಲಯ ಗ್ರಾಮೀಣ ಅಭಿವೃದ್ಧಿಯನ್ನು ಪ್ರಧಾನ ಆಶಯವನ್ನಾಗಿಸಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ನಗರಗಳತ್ತ ಮುಖಮಾಡಿ ವಲಸೆಹೋಗುತ್ತಿರುವ ಜನತೆಯನ್ನು ಹಳ್ಳಿಗಳಲ್ಲಿ ಹಿಡಿದಿಟ್ಟುಕೊಳ್ಳುವ ಆಕರ್ಷಕಣೆಯನ್ನು ಹೆಚ್ಚಿಸಬಹುದಾಗಿದೆ. ಸರಕಾರಿ ಉತ್ಸವ ಮುಂತಾದ ಕಡೆ ಜನಪದರು ಕಲಾಪ್ರದರ್ಶನ ನೀಡಿ ಹಲ್ಲು ಕಿರಿದು ಕೊಡುವ ಸಂಭಾವನೆಗಾಗಿ ಕಾಯುವ ಗುಲಾಮರನ್ನಾಗಿ ಮಾಡುವುದಕ್ಕಿಂತ, ಅವರನ್ನು ಸ್ವಾವಲಂಬಿಗಳಾಗಿ ಬದುಕ ಕಟ್ಟಿಕೊಳ್ಳಲು ಅನುವಾಗುವಂತೆ ಪ್ರಾಯೋಗಿಕ ನೆಲೆಗಳನ್ನು ಜಾನಪದ ವಿಶ್ವವಿದ್ಯಾಲಯವನ್ನು ವಿಸ್ತರಿಸಬೇಕಿದೆ

ಈಗ ನಾವು ಕೇಳಿಕೊಳ್ಳುವ ಪ್ರಶ್ನೆ, ಜಾನಪದವನ್ನು ಈ ಕಾಲಕ್ಕೆ ಮರು ಜೋಡಣೆ ಮಾಡಬಲ್ಲ ಕ್ರಿಯಾಶೀಲ ವಿದ್ವಾಂಸರು ವಿವಿಗೆ ಬರುತ್ತಾರೆಯೆ ಎನ್ನುವುದು. ಕುಲಪತಿಗಳಾದ ಪ್ರೊ. ಹಿರಿಯಣ್ಣನವರು ಜಾನಪದ ವಿವಿಯನ್ನು ಈ ಮೇಲಿನ ಆಶಯಗಳಿಗೆ ಪೂರಕವಾಗಿ ಕಟ್ಟುವ ಸಾಮರ್ಥ್ಯವಿರುವ ಯುವ ವಿದ್ವಾಂಸರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ವಹಿಸಬೇಕಿದೆ. ಪ್ರತಿಭೆಯಿಲ್ಲದೆ ಕೇವಲ ಅನ್ಯಪ್ರಭಾವ ಬಳಸಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವವರನ್ನು ದೈರ್ಯದಿಂದ ಹೊರಗಿಡುವ ಛಾತಿಯನ್ನೂ ತೋರಬೇಕಿದೆ. ಇದರಾಚೆಗೂ ಈಗಾಗಲೇ ಜಾನಪದದ ಹಳೆ ಮಾದರಿಗಳಿಂದ ಹೊರಬರದ ಅಧ್ಯಾಪಕರು ವಿವಿಗೆ ಬಂದರೆ, ಹಾಡು ಕತೆ ಸಂಗ್ರಹಿಸಿಕೊಂಡು ಹೆಚ್ಚೆಂದರೆ ವಿವಿಯನ್ನು ದೊಡ್ಡ ಮ್ಯೂಜಿಯಂ ಮಾಡುವ ಅಪಾಯವಿದೆ. ಇಂತಹ ಮಿತಿಗಳನ್ನು ಮೀರುವ ಹಾಗೆ ಜಾನಪದ ವಿವಿ ರೂಪಗೊಳ್ಳಬೇಕಾದ ಅಗತ್ಯವಿದೆ.
.