ಭಾನುವಾರ, ಜನವರಿ 22, 2012

ಹಳ್ಳಿಗಳ `ಗ್ರಾಮ ಚರಿತ್ರೆ ಕೋಶ' ಸಂಗ್ರಹ

ಎಂ. ಮಹೇಶ

ದಾವಣಗೆರೆ: ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜನಪದ ವಿಶ್ವವಿದ್ಯಾಲಯವು `ಗ್ರಾಮ ಚರಿತ್ರೆ ಕೋಶ` ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ರಾಜ್ಯದ 36 ಸಾವಿರ ಹಳ್ಳಿಗಳ ಚರಿತ್ರೆ ಹಾಗೂ ಮಾಹಿತಿಯನ್ನು ದಾಖಲು ಮಾಡಲು ಕಾರ್ಯಕ್ರಮ ರೂಪಿಸಿದೆ.

ವಿವಿ ವತಿಯಿಂದ ಈಗಾಗಲೇ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ 98 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲಾಗಿದೆ. ವಿವಿಯಿಂದ ನೇಮಿಸಲ್ಪಟ್ಟ ಆರು ಮಂದಿ ಸಂಶೋಧನಾ ಸಹಾಯಕರು ಆಯಾ ಗ್ರಾಮಗಳಿಗೆ ಸಂಬಂಧಿಸಿದ ಇತಿಹಾಸ, ಅಂಕಿ, ಅಂಶ, ಸಾಂಸ್ಕೃತಿಕ ಹಿನ್ನೆಲೆಯನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಮಹತ್ವದ ಯೋಜನೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹ ರೂ 10 ಲಕ್ಷ ಸಹಾಯಧನ ನೀಡಿದೆ.

ಜನಪದ ನಿಂತಿರುವುದೇ ಹಳ್ಳಿಗಳ ಮೇಲೆ. ಹಳ್ಳಿಗಳಲ್ಲಿನ ಭಾಷೆ, ಸಂಸ್ಕೃತಿ, ಸೊಗಡು, ನಡವಳಿಕೆಗಳು, ಆಚರಣೆಗಳು, ಸಂಪ್ರದಾಯಗಳು ಮೊದಲಾದವುಗಳನ್ನು ಜನಪದ ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

ಆದರೆ, ಬಹುತೇಕ ಹಳ್ಳಿಗಳಲ್ಲಿನ ಇತಿಹಾಸ ಸಮರ್ಪಕವಾಗಿ ದಾಖಲಾಗಿಲ್ಲ. ಇಂತಹ ಜನಪದ ಸಂಪತ್ತನ್ನು ದಾಖಲೀಕರಣಗೊಳಿಸುವ ಉದ್ದೇಶದಿಂದ `ಗ್ರಾಮ ಚರಿತ್ರೆ ಕೋಶ` ಯೋಜನೆ ರೂಪಿಸಲಾಗಿದೆ. ಈ ನೆಲದ ಬದುಕು, ಚರಿತ್ರೆಯನ್ನು ಅಲ್ಲಿನ ಹಿರಿಯರಿಂದ ಹಾಗೂ ಲಭ್ಯ ದಾಖಲೆಗಳಿಂದ ತಿಳಿದು ದಾಖಲಿಸಲಾಗುವುದು. ಗ್ರಾಮಗಳ ಚರಿತ್ರೆಯನ್ನು ಈ ಮೂಲಕ ಪುನರ್ ನಿರ್ಮಾಣ ಮಾಡುವ ಆಶಯ ವಿವಿಯದ್ದು. ಇದರಿಂದ, ಮುಂದಿನ ಪೀಳಿಗೆಗೆ ಮಾಹಿತಿಯು ಸಹ ದೊರೆಯಲಿದೆ.

ಹೀಗಾಗಿ, ಇದೊಂದು ಅತ್ಯಂತ ಜವಾಬ್ದಾರಿಯ ಕಾರ್ಯಕ್ರಮವಾಗಿದೆ. ಇದೇ ಮೊದಲ ದೊಡ್ಡ ಪ್ರಮಾಣದಲ್ಲಿ ಇತಿಹಾಸ ದಾಖಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಜನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ `ಪ್ರಜಾವಾಣಿ`ಗೆ ತಿಳಿಸಿದರು.

36 ಸಾವಿರ ಹಳ್ಳಿಗಳಲ್ಲಿ ಚರಿತ್ರೆ ಜತಗೆ, ಗ್ರಾಮೀಣ ಬದುಕು, ಸಾಧಕರ ಪರಿಚಯ, ಪಾರಂಪರಿಕ ಕಲೆ ಮತ್ತು ಜ್ಞಾನ ಪರಂಪರೆಯು ಲಭ್ಯವಾಗಲಿದೆ. ಅಲ್ಲಿನ ಕುಂದು ಕೊರತೆಗಳಿಗೆ ಕನ್ನಡಿ ಹಿಡಿದಂತೆ ಆಗುತ್ತದೆ. ಅಲ್ಲದೇ ಅವುಗಳನ್ನು ದೂರವಾಗಿಸಬಲ್ಲ ಪರಿಹಾರಗಳು, ಎಲ್ಲ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಮತ್ತು ಗಣಕೀಕರಣ ಮಾಡಲಾಗುವುದು. ಇದರಿಂದ ಎರಡು ಮಾರ್ಗದಲ್ಲಿ ಆಸಕ್ತರಿಗೆ ಮಾಹಿತಿ ದೊರೆಯುತ್ತದೆ. ಅಲ್ಲದೇ, ಸರ್ಕಾರಕ್ಕೂ ಸಲ್ಲಿಸಲಾಗುವುದು.

ವಿವಿಯು ಆರಂಭಿಸಲಿರುವ ವಿವಿಧ ಕೋರ್ಸ್‌ಗಳಿಗೆ ಪರಾಮರ್ಶನ ಪುಸ್ತಕಗಳೂ ಆಗಲಿವೆ. ಈ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಒಟ್ಟು 3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಸುಮಾರು ರೂ 8.47 ಕೋಟಿ ಅನುದಾನ ಕೋರಿದ್ದೇವೆ. ಹಂತ ಹಂತವಾಗಿ ಅನುದಾನ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ದೇಸಿ ಜ್ಞಾನ ಪರಂಪರೆ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ರಾಜ್ಯದಲ್ಲಿ ಒಟ್ಟು 6 ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗುವುದು. ಈ `ಗ್ರಾಮ ಚರಿತ್ರೆ ಕೋಶ` ಯೋಜನೆಯಿಂದ ಉದ್ಯೋಗದ ಅವಕಾಶಗಳು ಸಹ ದೊರೆಯಲಿವೆ. ಕೇವಲ ಇತಿಹಾಸದ ಆಸಕ್ತರಿಗೆ ಮಾತ್ರವಲ್ಲದೇ ಇತರರಿಗೂ ಅವಕಾಶ ದೊರೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕಾ.ತ. ಚಿಕ್ಕಣ್ಣ ಹಾಗೂ ಡಾ.ಗೋವಿಂದರಾಜು ಅವರ ನೇತೃತ್ವದಲ್ಲಿ ಮಾಹಿತಿ ದಾಖಲೀಕರಣ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ವಾರ್ತೆ

ಭಾನುವಾರ, ಜನವರಿ 15, 2012

ಬಹುರೂಪಿ ಸಂಕ್ರಾಂತಿ



(ಈ ಬರಹವನ್ನು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನಿನ್ನೆ (15.01.2012) `ಹಲವು ಸಂಕ್ರಾಂತಿ' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾಗಿತ್ತು. ಹಾಗಾಗಿ ಸಂಪಾದಕರಿಗೆ ಕೃತಜ್ಞತೆಗಳು. ಅದೇ ಬರಹವನ್ನು ಇಲ್ಲಿ ಪ್ರಕಟಿಸುತ್ತಿರುವೆ)

ಡಾ.ಅರುಣ್ ಜೋಳದಕೂಡ್ಲಿಗಿ.

ಸಂಕ್ರಾಂತಿಯು ರೈತರೊಂದಿಗೆ, ಬೆಳೆದ ಬೆಳೆಯೊಂದಿಗೆ, ತಮಗೆ ಹೆಗಲುಕೊಡುವ ಎತ್ತು, ದನ ಕರುಗಳೊಂದಿಗೆ, ಭೂಮಿಯೊಂದಿಗೆ, ನದಿ ಹೊಳೆಯೊಂದಿಗೆ ಬೆಸೆದುಕೊಂಡಿದೆ. ಈ ಎಲ್ಲವುಗಳೂ ಸೂರ್ಯ ಪಥ ಬದಲಿಸಿದಂತೆ, ತಾವೂ ಪಥ ಬದಲಿಸುತ್ತಿವೆ. ಈ ಬದಲುವಿಕೆ ಸಂಭ್ರಮಿಸುವಂತಿಲ್ಲದೆ, ನೋವ ಕೊಡುವಂತಿದೆ, ಸಂಕಟವ ಹೆಚ್ಚಿಸುವಂತಿದೆ. ಹಾಗಾಗಿ ಸಂಕ್ರಾಂತಿಯ ನೆನಪೆಂದರೆ, ಈಗದು ರೈತಪರಿವಾರದ ದುಸ್ಥಿತಿಯ ನೆನಪೂ ಕೂಡ.
ರೈತ ಸಂಭ್ರಮಿಸುವ ಖುಷಿಯಲ್ಲಿಲ್ಲ. ತಾನು ಉತ್ತಿ ಬಿತ್ತುವ ನೆಲ ತನ್ನ ಕೈ ಹಿಡಿದೀತೆಂಬ ಭರವಸೆ ಕರಗುತ್ತಿದೆ. ನೆಲ ತನ್ನ ಕೈಬಿಡುವ ಆತಂಕ ಕೆಲವರದಾದರೆ, ತನ್ನ ನೆಲವ ಕದ್ದೊಯ್ಯುತ್ತಿರುವ ಹಗಲುಗಳ್ಳರ ಕನಸಾಗಿ ಬೆಚ್ಚುವ ಸ್ಥಿತಿ ಹಲವರದ್ದು. ಬಿತ್ತಿದ ಬೆಳೆ ಬದುಕ ನೀಗಿಸಲು ಸೋಲುತ್ತಿರುವುದೂ, ಬೆನ್ನಮೇಲಿನ ಸಾಲದ ಭಾರ ಕುಗ್ಗಿಸುತ್ತಿರುವುದೂ, ಕಣ್ಣೆದುರು ನೇಣು ಹಗ್ಗ ಹಣಕಿಸುತ್ತಿರುವುದೂ ಸದ್ಯದ ಬಹುಪಾಲು ರೈತರ ಅನುಭವ. ಹೀಗಿರಲು ಕೃಷಿ ಸಮೃದ್ಧಿಯೇ ಕನಸಾದಾಗ ಅದರ ಸಾಂಕೇತಿಕತೆಯ ಹಬ್ಬ ಯಾವತೆರನದ್ದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಸದ್ಯದ ಸಂಕ್ರಮಣ ಯಾವ ಸಮೃದ್ಧಿಯ ಸಂಕೇತ? ಯಾರ ಸಮೃದ್ಧಿಯ ಸಂಕೇತ ಎನ್ನುವ ಪ್ರಶ್ನೆಗಳೂ ಕಾಡದಿರವು.


ನಿಸರ್ಗದಲ್ಲಾಗುವ ಬದಲಾವಣೆಗೆ ಜನಸಮುದಾಯ ತೋರುವ ಸ್ಪಂದನೆ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು, ಮತ್ತೊಂದರಲ್ಲಿ ಇಡುವುದರ ಸಾಂಕೇತಿಕ ಸಂಭ್ರಮವಿದು. ಹನ್ನೆರಡು ರಾಶಿ, ಮಾಸಗಳ ಕಾರಣ ವರ್ಷಕ್ಕೆ ಹನ್ನೆರಡು ಸಂಕ್ರಾಂತಿಗಳೇ ಸಂಭವಿಸುತ್ತವೆ. ಇವುಗಳಲ್ಲಿ ಎರಡನ್ನು ಮಾತ್ರ ಮುಖ್ಯವೆಂದು ಭಾವಿಸಲಾಗುತ್ತದೆ. ಸೂರ್ಯ ಮಿಥುನದಿಂದ ಕರ್ಕಾಟಕಕ್ಕೆ ಪ್ರವೇಶಿಸುವುದು ಒಂದಾದರೆ, ಧನುವಿನಿಂದ ಮಕರಕ್ಕೆ ಸಂಕ್ರಮಿಸುವುದು ಮತ್ತೊಂದು. ಇವೆರಡೂ ಸೂರ್ಯನ ದಾರಿಯ ಮಾರ್ಗಸೂಚಿಗಳು. ಒಂದು ದಕ್ಷಿಣಾಯನವಾದರೆ, ಮತ್ತೊಂದು ಉತ್ತರಾಯಣ. ಈ ಬಗೆಗಿನ ಪುರಾಣ ಐತಿಹ್ಯಗಳು ಹಲ ಬಗೆಯ ಕಥನಗಳನ್ನು ಹುಟ್ಟಿಸಿವೆ.

ಇದರಲ್ಲಿ ತಿಲಾಸುರನ ವಧೆಯ ಕಥೆ ಜನಪ್ರಿಯ. ಬ್ರಹ್ಮನಿಂದ ವರ ಪಡೆದ ತಿಲಾಸುರನೆಂಬ ರಾಕ್ಷಸ ಲೋಕಪೀಡಕನಾಗುತ್ತಾನೆ. ಆಗ ‘ಮಕರ’ ‘ಕರ್ಕ’ ಎಂಬ ಮಹಿಳೆಯರ ಸಹಾಯ ಪಡೆದು ಸೂರ್ಯ ಆತನನ್ನು ಸಂಹರಿಸುತ್ತಾನೆ. ಮಕರ ತಿಲಾಸುರನ ಹೊಟ್ಟೆಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಆಗ ಮಕರನ ಸಾಹಸ ಮೆಚ್ಚಿ ಸೂರ್ಯ ‘ನಿನ್ನನ್ನು, ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ’ ಎಂದು ಹರಸಿದನಂತೆ. ಹೀಗೆ ಎಳ್ಳು ಬೀರುವ ಆಚರಣೆ ಬಂದದ್ದಾಗಿಯೂ, ಮಕರ ಸಂಕ್ರಮಣ ಎಂಬ ಹೆಸರು ಜನರಲ್ಲಿ ಉಳಿದದ್ದಾಗಿಯೂ ಈ ಕಥೆ ಹೇಳುತ್ತದೆ.

ರಾತ್ರಿಯೇ ಹೆಚ್ಚಾಗಿ, ಹಗಲು ಕಡಿಮೆ ಇರುವ ಚಳಿಗಾಲಕ್ಕಿದು ಇಳಿಗಾಲ. ಹಗಲು ಹಿಗ್ಗಿಕೊಂಡು, ರಾತ್ರಿ ಕುಗ್ಗಿಕೊಳ್ಳುವ, ಶೀತವು ಶಾಖಕ್ಕೆ ಅಂಜಿ ಹಿಂದೆ ಸರಿಯುವ ಕಾಲಮಾನವಿದು. ಹೀಗಾಗಿಯೇ ಜನಪದರು ‘ ಸಂಕ್ರಾಂತಿಗೆ ಚಳಿ ಕಡಿಮೆಯಾಗಿ, ಶಿವರಾತ್ರಿಗೆ ಶಿವ ಶಿವ ಅಂತ ಮಾಯವಾಯ್ತೆ’ ಎಂದದ್ದಿದೆ. ಹಾಗಾಗಿ ಚಳಿಯಲ್ಲಿ ಮುದುಡಿಕೊಂಡ ದೇಹ ಮನಸ್ಸುಗಳನ್ನು ಬಿಸಿಲಿಗೆ ಬೆಚ್ಚಗಾಗಿಸುವ, ಹೈದರಾಬಾದ್ ಕರ್ನಾಟಕದವರಿಗೆ ಬರಲಿರುವ ಬಿಸಿಲಿನ ತಾಪದ ನೆನಪಿಸಿ ಬೆವರಿಳಿಸುವ ಹಬ್ಬ ಈ ಸಂಕ್ರಮಣ.

ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು , ಮುಂತಾದವುಗಳ ಮಿಶ್ರಣವನ್ನು ತಯಾರಿಸುವುದೂ, ಅದನ್ನು ಎಳ್ಳುಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ. ಇದು ಎಲ್ಲಾ ಕಡೆಗೂ ಸಾಮಾನ್ಯವಾಗಿದೆ. ಇದನ್ನೇ ವೈದ್ಯರು ‘ಚಳಿಗಾಲದಲ್ಲಿ ದೇಹದಲ್ಲಿರುವ ಎಣ್ಣೆ ಅಂಶ(ಪ್ಯಾಟ್) ದೇಹವನ್ನು ಬಿಸಿಯಾಗಿಡಲು ಹೆಚ್ಚು ಖರ್ಚಾಗಿ ಕಡಿಮೆಯಾಗುತ್ತದೆ. ಹಾಗಾಗಿ ಎಣ್ಣೆ ಅಂಶವಿರುವ ಎಳ್ಳು, ಒಣಕೊಬ್ಬರಿ, ನೆಲಗಡಲೆ ಜತೆ ಬೆಲ್ಲ ಸಕ್ಕರೆಯನ್ನು ತಿನ್ನುವುದು ಒಳ್ಳೆಯದು’ ಎನ್ನುವ ಅಭಿಪ್ರಾಯ ತಾಳುತ್ತಾರೆ

ಸಂಕ್ರಾಂತಿಯ ಆಚರಣೆ ಕರ್ನಾಟಕದಾದ್ಯಂತ ಒಂದೇ ತೆರನಾಗಿಲ್ಲ. ಹಲವು ವೈವಿದ್ಯಗಳೊಂದಿಗೆ ನಡೆಯುತ್ತಿದೆ. ಸಂಕ್ರಾಂತಿ ಕರ್ನಾಟಕ ಹಲವು ಕಡೆ ತನ್ನದೇ ಪ್ರಾದೇಶಿಕ ಪರಕುಗಳನ್ನು ಈಗಲೂ ಉಳಿಸಿಕೊಂಡಿದೆ. ಕರ್ನಾಟಕದ ಕೆಲ ಭಾಗಗಳಲ್ಲಿ ಸಂಕ್ರಾಂತಿಯ ಹೆಸರನ್ನೂ ಕೇಳದ ಹಳ್ಳಿಗಳಿವೆ. ಅಲ್ಲೆಲ್ಲಾ ರೈತ, ಹೊಲ, ಸುಗ್ಗಿಯನ್ನು ನೆನಪಿಸುವ ಬೇರೆ ಬೇರೆ ಆಚರಣೆಗಳಿವೆ. ಜಾನುವಾರುಗಳನ್ನು ಗೌರವಿಸುವ ಬಸವ ಜಯಂತಿಯಂತಹ ಹಬ್ಬಗಳೂ ಇವೆ. ಹಾಗಾಗಿ ಇಲ್ಲಿ ಒಂದು ಸಂಕ್ರಾಂತಿಗಿಂತ ಹಲವು ಸಂಕ್ರಾಂತಿಗಳಿವೆ.

ಸಂಕ್ರಾಂತಿಯಂದು ಹೋರಿಗಳನ್ನು ಕಿಚ್ಚಾಯಿಸುವ ಸಂಪ್ರದಾಯ ಹೆಚ್ಚಿದೆ. ತುಮಕೂರು, ಮಂಡ್ಯ ಮೈಸೂರು ಚಾಮರಾಜನಗರ ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಎತ್ತು, ಆಕಳಗಳನ್ನು ಸಿಂಗರಿಸುವ ಪರಿ ನೋಡಲು ಮೋಹಕವಾಗಿರುತ್ತದೆ. ಎತ್ತುಗಳೂ ಚಳಿಯಿಂದ ಬಿಡಿಸಿಕೊಂಡು ಕಾವೇರಲಿ, ಎತ್ತಿನ ದೇಹದಲ್ಲಿನ ಕ್ರಿಮಿಗಳು ನಾಶವಾಗಲಿ, ಒಳ್ಳೆಯ ರಾಸುಗಳಿಗೆ ರಾವು ಬಡಿಯದಿರಲಿ ಎನ್ನುವ ಹಿನ್ನೆಲೆಯೂ ಈ ಆಚರಣೆಗೆ ಇದ್ದಂತಿದೆ. ಹೀಗೆ ಕಿಚ್ಚಾಯಿಸುವ ಸಂಪ್ರದಾಯಗಳೂ ಪ್ರಾದೇಶಿಕವಾಗಿ ಭಿನ್ನವಾಗಿವೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಮನೆಗಾಗಿ ದುಡಿದು ತೀರಿದ ಎತ್ತುಗಳ ಸಮಾಧಿಗೆ ಪೂಜೆ ಮಾಡುವ ಆಚರಣೆಯಿದೆ. ಇಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತಾರೆ. ವಿಶೇಷವೆಂದರೆ ಹಬ್ಬಕ್ಕೆ ಮಾಡಿದ ಕಿಚಡಿಯನ್ನೇ ಆ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಅಂದು ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ. \
ಎತ್ತು, ದನ, ಕರು, ಹಸುಗಳಿಗೆ ಕಾಟ ಕೊಡುವ ಪ್ರಾಣಿಗಳನ್ನು ಹಿಡಿದು ಬೆದರಿಸಿ ಓಡಿಸುವ ಆಚರಣೆಗಳಿವೆ. ಇದು ಕಾಡುಪ್ರಾಣಿಗಳು ಜಾನುವಾರುಗಳ ಮೇಲೆ ಕಣ್ಣು ಹಾಕಬಾರದೆಂಬ ಬೆದರಿಕೆ ಹುಟ್ಟಿಸುವ ತೆರನದ್ದು. ಕರ್ನಾಟಕದಲ್ಲಿಯೇ ವಿಶಿಷ್ಠವಾದ ಆಚರಣೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿತ್ತು. (ಕದಂಬರ ದೊರೆ ಈ ಊರಿಗೆ ಬಂದದ್ದರ ಕಾರಣ ಕದಂಬಳ್ಳಿ ಎಂಬ ಹೆಸರಿತ್ತು ಎಂದು ಕ.ರಾ.ಕೃ ಹೇಳುತ್ತಾರೆ) ಈ ಹಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈಚೆಗೆ ಮೂರ‍್ನಾಲ್ಕು ವರ್ಷದಿಂದ ಪ್ರಾಣಿದಯಾ ಸಂಘದವರ ದೂರಿನ ಮೇರೆಗೆ, ಈ ಆಚರಣೆಗೆ ಹೈಕೋರ್ಟ ನಿಶೇದಾಜ್ಞೆ ಹೊರಡಿಸಿದೆ. ಸಂಕ್ರಮಣದಲ್ಲೀಗ ಪೋಲಿಸರ ಕಾವಲಿರುತ್ತದೆ. ಈಗಲೂ ಬಲೆ ತೆಗೆದುಕೊಂಡು ಕಾಡಿಗೆ ಹೋಗುವ ಆಚರಣೆಯಿದೆ.

ಸಂಕ್ರಮಣವು ಕರ್ನಾಟಕದ ಆಹಾರ ವೈವಿದ್ಯಗಳನ್ನು ಅದರೆಲ್ಲಾ ರುಚಿಗಳೊಂದಿಗೆ ಒಟ್ಟಿಗೆ ತರುತ್ತದೆ. ಆ ವರ್ಷ ಬೆಳೆದ ಬೆಳೆಗಳ ವೈವಿದ್ಯಗಳನ್ನೆಲ್ಲಾ ಬಳಸಿಕೊಳ್ಳುವಷ್ಟು ವಿಭಿನ್ನವಾದ ಅಡುಗೆ ಮಾಡಲಾಗುತ್ತದೆ. ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಗೋದಿ ಪಾಯಸ, ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳಚ್ಚಿದ ಸಜ್ಜೆ, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ, ಕಲಬೆರಕೆ ಸೊಪ್ಪುಸಾರು, ಆಗಲಕಾಯಿ ಪಲ್ಯ, ತಾರಾವರಿ ಉಪ್ಪಿನಕಾಯಿಗಳು, ಮೊಸರು ಬಾನ, ಗುರೆಳ್ಳು ಚೆಟ್ನಿ, ಸೌತೆ, ಮೂಲಂಗಿ, ಗಜ್ಜರಿಯ ಪಚಡಿ, ಮೆಂತೆಸೊಪ್ಪು ಈರುಳ್ಳಿಯ ಕಲಬೆರಕೆ, ಎಲ್ಲಾ ತರಕಾರಿಗಳನ್ನು ಹಾಕಿ ಮಾಡುವ ಬರ್ತ, ಕುಂಬಳಕಾಯಿ ಬರ್ತ, ಕೆಂಪು ಮೆಣಸಿನಕಾಯಿ ಚಟ್ನಿ, ಹೀಗೆ ಹೇಳುತ್ತಾ ಹೋದರೆ ಬಾಯಿಯಲ್ಲಿ ನೀರೂರುತ್ತದೆ. ಪ್ರಾದೇಶಿಕವಾಗಿ ಆಯಾ ಭಾಗದ ಬೆಳೆಗಳನ್ನು ಆಧರಿಸಿದ ವೈವಿದ್ಯದ ರುಚಿಯನ್ನು ಸಂಕ್ರಮಣ ಒಂದುಗೂಡಿಸುತ್ತದೆ. ಈ ಎಲ್ಲಾ ಅಡುಗೆಯನ್ನು ಬುತ್ತಿಕಟ್ಟಿಕೊಂಡು ಹೊಳೆ ದಡಕ್ಕೋ, ನದಿ ತಟಕ್ಕೋ ಹೋಗಿ ಊಟ ಮಾಡುವುದೂ ಸಹ ರುಚಿಯನ್ನು ಹೆಚ್ಚಿಸುತ್ತದೆ.

ಮಾಗಡಿ ತಾಲೂಕಿನ ಭಾಗದಲ್ಲಿರುವ ಇಲ್ಲಿಗ ಸಮುದಾಯವು ಸಂಕ್ರಾಂತಿಯನ್ನು ಸಂಕುರಾತಿ ಎನ್ನುತ್ತಾರೆ. ಹಸಿ ಮಣ್ಣಿನಿಂದ ಸಂಕುರಾತಿ ಅಮ್ಮನ ಕೋಟೆ ಕಟ್ಟಿ, ನಾಲ್ಕು ಆರತಿ ಮಾಡಿ ಆರತಿಗೊಂದರಂತೆ ನಾಲ್ಕು ಕೋಳಿ ಬಲಿ ಕೊಟ್ಟು. ಹಸುವಿನ ಕೆಚ್ಚಲಿನಿಂದ ಉಣ್ಣೆ ತೆಗೆದು ಅನ್ನಕ್ಕೆ ಹಾಕಿ ಬೇಯಿಸುತ್ತಾರೆ. ಇದನ್ನು ಉನ್ನಿ ಅನ್ನ ಎಂದು ಕರೆಯುತ್ತಾರೆ. ಈ ಅನ್ನವನ್ನು ದನದ ಹಿಂಡಿನ ಮೇಲೆ ಚೆಲ್ಲುತ್ತಾರೆ. ತುಮಕೂರು ಮುಂತಾದ ಕಡೆ ಊರ ಹೊರಗೆ ಜೇಡಿ ಮಣ್ಣಿನಿಂದ ಪಿರಮಿಡ್ಡಿನಾಕಾರದಲ್ಲಿ ಗುಡಿ ಕಟ್ಟುತ್ತಾರೆ. ಅದನ್ನು ಕಾಟುಮ್ ರಾಯ್, ಕಾಟ್ ಮೆಟ್ರಾಯ್, ಸಂಕ್ರಾತೆಮ್ಮಾ ಅಂತೆಲ್ಲಾ ಕರೆಯುತ್ತಾರೆ. ಅದನ್ನು ಕಾರೆಗಿಡದ ರಂಬೆ ಸಿಕ್ಕಿಸಿ ,ಉಗುನಿ ಹೂ ಮುಡಿಸಿ ಸಿಂಗರಿಸಿ ದನಗಳನ್ನು ತಂದು ಪೂಜಿಸುತ್ತಾರೆ. ಇವೆಲ್ಲಾ ದನಗಾರ ಸಂಸ್ಕೃತಿಯ ನೆನಪುಗಳನ್ನು ತರುತ್ತವೆ.
ಸೂರ್ಯನು ಎಕ್ಕೆ ಗಿಡದಲ್ಲಿ ನೆಲೆಸಿದ್ದಾನೆಂಬ ನಂಬಿಕೆಯ ಕಾರಣ, ಕೆಲವೆಡೆ ಸಂಕ್ರಮಣಕ್ಕೆ ಎಕ್ಕೆ ಗಿಡದ ಎಲೆಗಳನ್ನು ತಲೆಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ. ಈ ಹಬ್ಬದಲ್ಲಿ ಕೆಲವೆಡೆ ಪ್ರಸಿದ್ಧ ಗೋವಿನ ಹಾಡು ಹೇಳುವ ಪರಂಪರೆ ಇದೆ. ಉತ್ತರ ಭಾರತದಿಂದ ಬಂದ ಈ ಆಚರಣೆ, ಹುಲಿ ಪುಣ್ಯಕೋಟಿ ಹಸುವನ್ನು ತಿನ್ನಲು ನಿರಾಕರಿಸಿ, ಬೆಟ್ಟದ ಮೇಲಿಂದ ಹಾರಿದ ದಿನದ ನೆನಪನ್ನು ತರುತ್ತದೆ. ಎಳ್ಳನ್ನು ಶನಿದೇವರೆಂದು ಬಾವಿಸುವುದೂ ಇದೆ. ಹಾಗಾಗಿ ದೇವರಿಗೆ ಎಳ್ಳಿನ ದೀಪ ಹಚ್ಚಿದರೆ ಶನಿ ದೂರಾಗಿ ನಿರಾಳವಾಗುವ ನಂಬಿಕೆಯೂ ಕೆಲ ಕಡೆ ಇದೆ.

ಆಂದ್ರಕ್ಕೆ ಹೊಂದಿಕೊಂಡ ಹಳ್ಳಿಗಳಲ್ಲಿ ರಾಮನು ರಾವಣನನ್ನು ಕೊಂದು ಸೀತೆಯನ್ನು ಪಡೆದ ದಿನವೆಂದು ನಂಬಿದ್ದಾರೆ. ಗತಿಸಿದ ಹಿರಿಯರು ಮನೆಗೆ ಮರಳುತ್ತಾರೆಂಬ ವಾಡಿಕೆಯೂ ಇದೆ. ಕೊಡಗಿನ ಮೇರರ ಸಮುದಾಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕಾವೇರಿ ಸಂಕ್ರಮಣ ಮಾಡುವುದೂ ಇದೆ. ಉತ್ತರ ಕರ್ನಾಟಕದಲ್ಲಿ ಇದು ಸಸ್ಯಾಹಾರಿ ಹಬ್ಬವಾದರೆ, ದಕ್ಷಿಣ ಕರ್ನಾಟಕದಲ್ಲಿ ಸಂಕ್ರಮಣ ಮಾಂಸಾಹಾರಿ ಹಬ್ಬ. ಚಾಮರಾಜ ನಗರ ಮುಂತಾದ ಕಡೆ ಸೇಲಂ ಕೊಯಮತ್ತೂರು ಭಾಗದ ಪ್ರಭಾವವಿದ್ದರೆ, ಬಾಗೇಪಲ್ಲಿ, ಶಿರುಗುಪ್ಪ ಮುಂತಾದ ಕಡೆ ಆಂದ್ರದ ಗಡಿ ಜಿಲ್ಲೆಗಳ ಪ್ರಭಾವವಿದೆ. ಚಾಮರಾಜ ನಗರದಲ್ಲಿ ಮಕ್ಕಳನ್ನು ಕೂರಿಸಿ ಎಳ್ಳೆರೆಯುವ ಆಚರಣೆ ಇದೆ. ಇದರಲ್ಲಿ ಹಸಿ ಉಪ್ಪುಕಡಲೆ, ಎಲಿಚಿ ಹಣ್ಣು (ಬೋರೆಹಣ್ಣು, ಸಂಕ್ರಾಂತಿ ಗಿಡ ಎಂತಲೂ ಕರೆಯುತ್ತಾರೆ) ನಾಣ್ಯಗಳನ್ನು ಬೆರೆಸಿ ತಲೆಮೇಲಿಂದ ಎರೆಯುತ್ತಾರೆ.

ನದಿ ದಡಗಳಿಗೆ, ಹೊಳೆ ದಂಡೆಗಳಿಗೆ, ಹಳ್ಳದ ಬದುವುಗಳಿಗೆ ಈ ಹಬ್ಬ ಜನರನ್ನು ಕರೆತರುತ್ತದೆ. ಎಳ್ಳೆಣ್ಣೆ ಹಚ್ಚಿ ಜನ ನೀರಿಗಿಳಿದು ಸ್ನಾನ ಮಾಡಿ ಸೂರ್ಯ ನಮಸ್ಕಾರ ಮಾಡುತ್ತಾರೆ. ಇದಕ್ಕೆ ಸಂಕ್ರಾಂತಿಯ ಕರಿ ಕಳೆಯುದು ಎನ್ನುವ ಹೆಸರಿದೆ. ಹೀಗೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡದಿದ್ದರೆ ಸಂಕ್ರಾಮಪ್ಪ ದೇವರು ಬಂದು ಮೈ ಮೂಸಿ ನೋಡಿ ಶಾಪ ಕೊಡುತ್ತಾನೆಂಬ ನಂಬಿಕೆ ಸಿರುಗುಪ್ಪ ಭಾಗದಲ್ಲಿದೆ. ಹೀಗಾಗಿ ಹೊಳೆ ದಂಡೆ, ನದಿ ದಡಗಳಿರದ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬದ ತೀವ್ರತೆ ಕಡಿಮೆ.



ಉತ್ತರ ಕನ್ನಡದ ಕೆಲವೆಡೆ ಹುಲುಸಾಗಿ ಬೆಳೆ ಬಂದ ಗದ್ದೆಗೆ ದೃಷ್ಠಿಯಾಗದಿರಲೆಂದು ಸಂಕ್ರಮಣದಲ್ಲಿ ಸಂದರ್ಭದಲ್ಲಿ ಬೆಚ್ಚನ್ನು ನಿಲ್ಲಿಸುವುದಿದೆ. ಇದನ್ನು ಬೆಚನ್ ಸಂಕ್ರಾಂತಿ ಎನ್ನುತ್ತಾರೆ . ಕೊಡಗಿನ ಅಂಚಿನ ಭಾಗದ ಕೆಲವೆಡೆ ಎತ್ತುಗಳಿಗೆ ನೊಗ ಕಟ್ಟಿ ಬೇಸಾಯ ಆರಂಭಿಸುವ ಅನುಕರಣೆ ಮಾಡುವಿಕೆಯೂ ಇದೆ. ಇದನ್ನವರು ಬಿಸು ಸಂಕ್ರಾಂತಿ ಎನ್ನುತ್ತಾರೆ. ಸಂಕ್ರಾಂತಿ ಮೂಲತಃ ಸೂರ್ಯನ ಆರಾಧನೆಯ ಹಬ್ಬವಾದರೂ, ಸೂರ್ಯನನ್ನು ಹೆಣ್ಣು ದೇವತೆಯೆಂದು ಆರಾಧಿಸುವಿಕೆ ಕೆಲವೆಡೆ ಕಾಣುತ್ತದೆ. ಸಂಕ್ರಾಂತಿಯನ್ನೆ ಸಂಕ್ರಾತಮ್ಮನ ಪೂಜೆ, ಸಂಕ್ರಾತಮ್ಮನ ತಿದ್ದುದು ಅಂತೆಲ್ಲಾ ಮಂಡ್ಯ, ತುಮಕೂರು ಭಾಗದಲ್ಲಿ ಕರೆಯುತ್ತಾರೆ. ಹಾಗಾಗಿ ಗಂಗೆಯಲ್ಲಿ ಮೀಯುವುದೂ ಕೂಡ ಇದರ ಪ್ರಭಾವವೇ ಇರಬೇಕು. ಇನ್ನು ಇದರ ಸಾಂಕೇತಿಕವಾಗಿ ಸಂಕ್ರಾಂತಿಗೆ ಕೆಲವೆಡೆಗಳಲ್ಲಿ ಹೆಣ್ಣುದೇವಿಯ ಜಾತ್ರೆಗಳೂ ನಡೆಯುತ್ತವೆ.

ಇಂದು ಮಾರುಕಟ್ಟೆ ರೂಪಿತ ಏಕರೂಪಿ ಸಂಕ್ರಾಂತಿಯ ಆಕಾರವನ್ನು ನಗರ ಕೇಂದ್ರಗಳಲ್ಲಿ ಜನಪ್ರಿಯಗೊಳಿಸುತ್ತಿದೆ. ಹಾಗಾಗಿ ಮನೆಯಲ್ಲಿ ಎಳ್ಳು ಬೆಲ್ಲದ ಮಿಶ್ರಣಕ್ಕಿರುವ ತರಾವರಿ ರುಚಿಗಳು ಇಲ್ಲವಾಗಿ, ಅಂಗಡಿಗಳಲ್ಲಿ ಸಿಗುವ ಎಳ್ಳುಬೆಲ್ಲದ ಮಿಶ್ರಣವೇ ಎಲ್ಲ ಕಡೆ ಹರಿದಾಡುತ್ತದೆ. ಈಗ ಗ್ರಾಮೀಣ ಪ್ರದೇಶದಲ್ಲಿ ಸಾಗುವಳಿ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದೆ. ತುಂಡು ಹಿಡುವಳಿಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಎತ್ತುಗಳನ್ನು ಹೊಂದುವಿಕೆಯ ಪ್ರಮಾಣದಲ್ಲೂ ಇಳಿಮುಖವಾಗುತ್ತಿದೆ. ಬೆಳೆಗಳಲ್ಲಿನ ವೈವಿದ್ಯತೆಗಳು ನಾಶವಾಗಿ ಏಕ ಮಾದರಿಯ ವಾಣಿಜ್ಯ ಬೆಳೆಗಳು ಹೆಚ್ಚಿವೆ. ಹಾಗಾಗಿ ಹಸು ಕರು ಎತ್ತುಗಳಿಗೆ ಬೇಕಾಗುವ ಮೇವಿನ ಬೆಳೆಗಳು ಇಲ್ಲವಾಗುತ್ತಿವೆ. ದನ ಕರುಗಳು ತಿರುಗಾಡಿ ಮೇಯಲು ಗೋಮಾಳಗಳು ಸೈಟುಗಳಾಗುತ್ತಿವೆ, ಈ ಕಾರಣಗಳಿಂದಾಗಿ ಜಾನುವಾರುಗಳ ಸಾಕುವಿಕೆಯೆ ಕಷ್ಟವಾಗಿ ಅವುಗಳ ಪ್ರಮಾಣ ಇಳಿಯುತ್ತಿದೆ. ಇಂತಹ ಬದಲಾವಣೆ ಸಂಕ್ರಾಂತಿ ಹಬ್ಬದ ಆಚರಣೆಯಲ್ಲೂ ಸಹಜವಾಗಿ ಬದಲುಗೊಳಿಸಿದೆ.

ಗುರುವಾರ, ಜನವರಿ 5, 2012

ಐದು ರೂ ನಾಣ್ಯಗಳು ಒಡವೆಗಳಾದ ಕಥೆ



ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಹಳ್ಳಿಯ ರೈತರಿಗೆ, ಕೂಲಿಕಾರರಿಗೆ ಬಂಗಾರವೆಂಬುದು ಗಗನ ಕುಸುಮವಾಗಿದೆ. ಅದಕ್ಕವರು ಪರ್ಯಾಯಗಳನ್ನು ಅವರದೇ ರೀತಿಯಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೆಣ್ಣುಮಗಳು ಕಂಡಕ್ಟರ್ ಬಳಿ ಇರುವ ಕಂದು ಬಣ್ಣದ ಐದು ರೂನ ಹೊಸ ನಾಣ್ಯಗಳನ್ನು ಕೇಳಿದರು. ಕಂಡಕ್ಟರ್ ನೋಟು ಪಡೆದು ಇರುವ ಹತ್ತಾರು ನಾಣ್ಯಗಳನ್ನು ಕೊಟ್ಟರು. ನಾನು ಕುತೂಹಲದಿಂದ ನಾಣ್ಯಗಳು ಯಾಕೆ ಎಂದು ವಿಚಾರಿಸಿದೆ. ಆಯಮ್ಮ ಒಂದು ಮಾಂಗಲ್ಯಸರ ಮಾಡಿಸ್ಬೇಕ್ರಿ ಎಂದರು. ಕಾರಣ ಕೇಳಿದರೆ ಐದು ರೂಪಾಯಿಯ ನಾಣ್ಯವನ್ನು ಕರಗಿಸಿ ಒಡವೆ ಮಾಡಿಸಿದರೆ ಥೇಟ್ ಬಂಗಾರದ ಬಾಯಿ ಬಡಿಯುವಂತಾಗುತ್ತವೆ. ಅವಕ್ಕೆ ಬಂಗಾರದ ನೀರು ಕುಡಿಸಿದರಂತೂ ಗುರುತಿಸಲಾರದಷ್ಟು ಬಣ್ಣ ತಾಳುತ್ತವೆ ಎನ್ನುವುದು ಆಯಮ್ಮನ ನಿಲುವು.

ನಂತರ ನಮ್ಮೂರಲ್ಲಿ ಈ ಸಂಗತಿ ಕೇಳಿದಾದ ಚೈನು, ಉಂಗುರ, ಮೂಗುತಿ, ಕಳಸ ಮುಂತಾದ ರೂಪಾಂತರಗಳಿಗೆ ಐದು ರೂ ಒಳಗಾದದ್ದು ತಿಳಿಯಿತು. ಐದು ರೂಪಾಯಿಯ ಕಾರಣಕ್ಕೆ ಗಂಡ ಹೆಂಡತಿಯನ್ನು ಬಿಟ್ಟ ಪ್ರಸಂಗವೊಂದನ್ನು ಹೇಳಿದರು. ಮದುವೆಯಲ್ಲಿ ಗಂಡಿಗೆ ಕೊಡುವ ಉಂಗುರವನ್ನು ಐದು ರೂ ನಾಣ್ಯದಿಂದ ಮಾಡಿಸಿ ಕೊಟ್ಟಿದ್ದಾರೆ. ಅದು ವರ್ಷದ ನಂತರ ಹಿತ್ತಾಳೆಯ ಕಂದು ಬಣ್ಣಕ್ಕೆ ತಿರುಗಿದೆ. ಆಗ ಗಂಡನ ಮನೆಯವರು ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಐದು ರೂಪಾಯಿಯನ್ನು ಕರಗಿಸಿ ಮಾಡಿಸಿದ್ದು ಎಂದು ಗೊತ್ತಾಗಿದೆ. ಬಂಗಾರದ ಉಂಗುರ ಮಾಡಿಸಿಕೊಂಡು ಮನೆಗೆ ಬಾ ಎಂದು ಗಂಡ ಹೆಂಡತಿಯನ್ನು ತವರಲ್ಲಿ ಬಿಟ್ಟು ಹೋಗಿದ್ದಾನೆ. ಇಂತದೇ ಕಥೆಗಳು ಐದು ರೂ ನಾಣ್ಯದ ಸುತ್ತ ಸುತ್ತುವರಿದಿವೆ.

ಇದರ ಹಿಂದೆ ಬಂಗಾರ ಕೊಳ್ಳಲಾಗದ ಅಸಾಹಯಕತೆ, ಒಡವೆಗಳನ್ನು ತೊಡಬೇಕೆಂಬ ಹಪಾಹಪಿ ಇದ್ದಂತಿದೆ. ಹಾಗಾಗಿ ಹಳ್ಳಿಗಳಲ್ಲಿ ಹೊಸ ಐದು ರೂ ನಾಣ್ಯವನ್ನು ಕೂಡಿಡುವ ಸ್ಪರ್ಧೆ ಏರ್ಪಟ್ಟಿದೆ. ನನ್ನ ಬಳಿ ಹತ್ತು ನಾಣ್ಯಗಳಿವೆ, ನನ್ನಲ್ಲಿ ಇಪ್ಪತ್ತು ನಾಣ್ಯಗಳಿವೆ ಎಂಬಂತಹ ಮಾತುಕತೆಗಳು ನಡೆಯುತ್ತಿವೆ. ಹೀಗೆ ಐದು ರೂ ನಾಣ್ಯಗಳನ್ನು ಸಂಗ್ರಹಿಸಿಡುವುದು ಒಂದು ಹವ್ಯಾಸವೆ ಆಗಿದೆ. ಕೆಲವು ಅಂಗಡಿಯವರು ಈ ನಾಣ್ಯಗಳನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರುವುದೂ ಇದೆ. ಇನ್ನು ಅಕ್ಕಸಾಲಿಗರು (ಬಂಗಾರದ ಕೆಲಸ ಮಾಡುವವರು) ಈ ನಾಣ್ಯದ ಒಡವೆಗಳನ್ನು ಮಾಡಿ ಮಾರುವುದೂ ಇದೆ. ಹೀಗೆ ಐದು ರೂಪಾಯಿ ನಾಣ್ಯವು ಜನಸಮುದಾಯದಲ್ಲಿ ಒಡವೆಗಳಾಗಿ ಬೇರೆಯದೇ ರೀತಿಯ ಸಂಬಂಧವನ್ನು ಪಡೆಯುತ್ತಿದೆ.

ನಾಣ್ಯವನ್ನು ಕರಗಿಸಿ ಒಡವೆಗಳನ್ನು ಮಾಡಿಕೊಡಲು ಅಕ್ಕಸಾಲಿಗರು ಈ ನಾಣ್ಯಗಳ ಬೆಲೆಗಿಂತ ಹೆಚ್ಚು ಪಟ್ಟು ಹಣ ಪಡೆಯುತ್ತಾರೆ. ನಮ್ಮೂರಿನಲ್ಲೊಬ್ಬ ಇಪ್ಪತ್ತು ನಾಣ್ಯಗಳನ್ನು ಕರಗಿಸಿ ಚೈನ್ ಮಾಡಿಸಲು ಆರುನೂರು ರೂಗಳನ್ನು ಕೊಟ್ಟಿದ್ದಾನೆ. ನಾಣ್ಯಗಳ ಬೆಲೆ ನೂರು ರೂ ಆದರೆ, ಅದನ್ನು ಚೈನು ಮಾಡಿಸಲು ಆರುನೂರು. ಹೀಗೆ ನಾಣ್ಯಗಳಿಂದ ಒಡವೆ ಮಾಡಿಸಿಕೊಳ್ಳುವವರಲ್ಲಿ ಹೆಚ್ಚಿನವರು ಬಡವರು, ರೈತರು, ಕೆಳಸಮುದಾಯಗಳ ಜನ. ಕೆಲವು ಬುಡಕಟ್ಟುಗಳಲ್ಲಿ ನಾಣ್ಯಗಳನ್ನು ಪೋಣಿಸಿ ಸರ ಮಾಡಿಕೊಳ್ಳುವುದು ಪವಿತ್ರವೂ ಆಗಿದೆ. ಹಾಲಕ್ಕಿಗಳಲ್ಲಿ, ಸಿದ್ದಿಗಳಲ್ಲಿ ಲಂಬಾಣಿ ಸಮುದಾಯಗಳಲ್ಲಿ ಇಂತಹ ಸರಗಳನ್ನು ಈಗಲೂ ನೋಡಬಹುದು.

ಇದೇನು ಹೊಚ್ಚ ಹೊಸ ಸಂಶೋಧನೆಯಲ್ಲ, ಹಿಂದಿನಿಂದಲೂ ಇದೆ. ಕಾಸು, ದುಡ್ಡು, ದಮ್ಮಡಿ, ಇದ್ದ ಕಾಲದಲ್ಲೂ ಅವುಗಳನ್ನು ಕರಗಿಸಿ ಒಡವೆಗಳನ್ನು ಮಾಡಿಸಿಕೊಳ್ಳುತ್ತಿದ್ದರಂತೆ. ಅಂತೆಯೇ ಕಾಸಿನ ರಸ ಎಂಬ ಒಡವೆ ಹುಟ್ಟಿದ್ದೇ ಕಾಸಿನಿಂದ ಸರ ಮಾಡಿಕೊಳ್ಳಬಹುದೆಂಬ ಜನರ ಸಂಶೋಧನೆಯಿಂದ. ನಾಣ್ಯಕ್ಕೆ ಬಳಸುವ ಹಿತ್ತಾಳೆ ತಾಮ್ರವು ಶುದ್ಧವಾಗಿರುತ್ತದೆ, ಅದು ಕಲಬೆರಕೆಯಾಗಿರುವುದಿಲ್ಲ, ಅದು ಬಣ್ಣ ಕಳೆದುಕೊಳ್ಳುವುದಿಲ್ಲ ಎನ್ನುವುದು ಜನರು ನಂಬಿಕೆ.

ನಾಣ್ಯಗಳನ್ನು ಕೂಡಿಡುವುದರ ಹಿಂದೆ ಹಳ್ಳಿಗಳಲ್ಲಿ ಕಾಲಕಾಲಕ್ಕೆ ನಾನಾ ಬಗೆಯ ಕಥನಗಳು ಹುಟ್ಟುತ್ತವೆ. ಇಪ್ಪತ್ತು ಇಂದಿರಾಗಾಂಧಿ ಚಿತ್ರಗಳಿರುವ ಐವತ್ತು ಪೈಸೆ ನಾಣ್ಯಗಳನ್ನು ಕೂಡಿಸಿ ಕೊಟ್ಟರೆ ಒಂದು ಲಕ್ಷ ರೂಪಾಯಿ ಕೊಡುವುದಾಗಿ ಕಥೆ ಚಾಲ್ತಿಯಲ್ಲಿತ್ತು. ಹಡಗಿನ ಚಿತ್ರ ಇರುವ ಐವತ್ತು ಪೈಸೆ ನಾಣ್ಯದಲ್ಲಿ ಓಸಿ ನಂಬರಿರುತ್ತದೆ ಎಂದು ಬುಗಿಲೆದ್ದಿತ್ತು. ಈ ಬಗೆಯಲ್ಲಿ ನಾಣ್ಯಗಳನ್ನು ಕುರಿತ ಜಾನಪದವೇ ಸೃಷ್ಠಿಯಾಗುವುದನ್ನು ನೋಡಬಹುದು.

ಒಂದು ಕಡೆ ಲೋಕಾಯುಕ್ತರ ದಾಳಿಗೆ ಸಿಕ್ಕ ಅಧಿಕಾರಿಗಳ ಕೆ.ಜಿಗಳ ಲೆಕ್ಕದಲ್ಲಿ ಬಂಗಾರದ ಸಂಗ್ರಹದ ಮಾಹಿತಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಮತ್ತೊಂದೆಡೆ ಬಂಗಾರದಲ್ಲಿ ಕುರ್ಚಿ ಮೇಜು ಚೆಂಬು ಗಂಗಾಳ ಚಮಚ ಕಿರೀಟ ಮಾಡಿಸಿಕೊಂಡು ಮೆರೆವ ಜನರಿದ್ದಾರೆ. ಇವರುಗಳ ನಡುವೆಯೇ ಐದು ರೂ ನಾಣ್ಯಗಳ ಕೂಡಿಟ್ಟುಕೊಂಡು ಒಡವೆಗಳ ಮಾಡಿಸಿಕೊಂಡು ಖುಷಿ ಪಡುವ ಜನರಿದ್ದಾರೆ, ಇದು ನಮ್ಮ ಕಣ್ಣೆದುರಿನ ವೈರುಧ್ಯದ ಚಿತ್ರ.