ಶನಿವಾರ, ಸೆಪ್ಟೆಂಬರ್ 29, 2012

ಜಾನಪದ ವಿವಿ: ಚಲನಶೀಲತೆಗೆ ಎಡೆ ಇರಲಿ

(ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಜಾನಪದ ವಿಶ್ವವಿದ್ಯಾಲಯ ಹಿಂದಿನ ಕನಸು ನಾಳಿನ ನನಸು ಎನ್ನುವ ಪುಸ್ತಕವನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಕನ್ನಡದ ಚಿಂತಕರು ಜಾನಪದ ವಿವಿಯನ್ನು ರೂಪಿಸುವ ಕುರಿತು ಮಾತನಾಡಿದ್ದಾರೆ. ಈ ಕೃತಿಯಲ್ಲಿನ ದೇವನೂರು ಮಹಾದೇವ ಅವರ ಬರಹವನ್ನು ಬ್ಲಾಗ್ ಓದಿಗೆ ಪ್ರಕಟಿಸಲಾಗುತ್ತಿದೆ.- ಅರುಣ್)
 
-ದೇವನೂರು ಮಹಾದೇವ
 ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯವೇ ಜಾನಪದದ ನಾಡಿಮಿಡಿತ. ಅದಕ್ಕನುಗುಣವಾಗಿ ಜಾನಪದ ಅಧ್ಯಯನ ವಿಷಯಗಳನ್ನು ರೂಪಿಸಬೇಕು. ಮಾನಸಿಕ, ಕೌಟುಂಬಿಕ, ಭಿನ್ನ ಭಿನ್ನ ಗುಂಪುಗಳ ಸಮಾಜದ ಸಂಬಂಧದ ಸ್ವಸ್ಥತೆಗೆ-ಶಾಪ, ಬೈಗುಳ, ಗಾದೆ ಮಾತುಗಳ ರೂಪದ ಅಭಿವ್ಯಕ್ತಿ catharsis element ನ್ನು ಕೇಂದ್ರವಾಗಿಟ್ಟುಕೊಂಡು ವಿಷಯಗಳ ವಿಂಗಡಣೆ ಮಾಡುತ್ತಾ ಹೋಗಬೇಕು. We need badly ಇದನ್ನೇ. ಇದು ಇವತ್ತಿನ ಸಮಾಜದ ಅಗತ್ಯವಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೆ, ಜಾನಪದ ಅಧ್ಯಯನ ಆಗಲೇಬೇಕು.
 ಜಾನಪದವನ್ನು ಸರಕಾಗಿಯೇ ನೋಡುತ್ತಿದ್ದೇವೆ. ಇದರಿಂದ ಹೊರ ಬರಬೇಕಾಗಿದೆ. ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಪದವೀಧರರಿಗೆ ಕೀಳಿರಿಮೆ Inferiority ಇದ್ದರೆ ಇಂಗ್ಲೀಷ್ ಪದವೀಧರರಿಗೆ ಒಣ ಪ್ರತಿಷ್ಠೆ ಇರುವುದು ಕಂಡುಬರುತ್ತದೆ.
ಆದಿಮ  ಮನಸ್ಸು ಆದಿಮ ಬದುಕಿಗೆ ಜಾಗತಿಕ ಆಯಾಮ ಇರುವುದರಿಂದ ಜಾನಪದವನ್ನು ಉನ್ನತ ಶಿಕ್ಷಣದಲ್ಲೇ ಉಳಿಸಬೇಕು. ಜಾನಪದವನ್ನು ಉಳಿಸಬೇಕು ಎನ್ನುವುದಕ್ಕಿಂತ ಅದರ ಚಲನಶೀಲತೆಗೆ ಒತ್ತು ಕೊಡುವುದು ಲೇಸು.
 
ಸಂಘಟನೆ-ವಿಘಟನೆ; ಐಕ್ಯತೆ-ಛಿದ್ರತೆ ಈ ಪ್ರಕ್ರಿಯೆಗಳು ಈ ಪರಂಪರಾ ಜ್ಞಾನದಲ್ಲಿ ಅಂತರ್ಗತವಾಗಿ ಬಂದಿದೆ ಎಂಬುದನ್ನು ಗಮನಿಸಬೇಕು. ದೇಹ-ಮನಸ್ಸು- ಸಮಾಜ- ಜಗತ್ತು ಈ ನೆಲೆಯಲ್ಲಿ ಸಂಘಟನೆ-ವಿಘಟನೆ ಪ್ರಕ್ರಿಯೆಗಳ ಬಗೆಗೆ ವಿಚಾರ ಮಾಡುವುದು ಸೂಕ್ತ.
 ಜಾನಪದವನ್ನು ಈ ನೆಲದ ಪಳೆಯುಳಿಕೆಗಳಾಗಿ ನೋಡದೆ ಅದಕ್ಕೆ ಭೌತಿಕವಾದ, ಸಾಮಾಜಿಕವಾದ ಬೆಲೆ ಪ್ರತಿಷ್ಠೆ,ಗೌರವ ತಂದುಕೊಡಬೇಕು.
 ಯಕ್ಷಗಾನ Form ಮತ್ತು ಕಲಾವಿದರು-ಶಿಷ್ಟರು::ಯೋಗಿಗಳು
  ಜನಪದ Form ಮತ್ತು ಕಲಾವಿದರು-ಪರಿಶಿಷ್ಟರು::ಜೋಗಿಗಳು
  ಯಕ್ಷಗಾನದಂತ ವಿಜೃಂಬಿಸುವ ಕಲೆಗಳನ್ನು ತಡವಾಗಿ ವಿಶ್ವವಿದ್ಯಾಲಯ ಆವರಣಕ್ಕೆ ಬರಮಾಡಿಕೊಳ್ಳುವುದು ಸಮಂಜಸವಾಗಿ ಕಾಣುತ್ತದೆ.
  ಜೋಗಿಹಾಡು- ಸಂವಹನದ ದೃಷ್ಟಿಯಿಂದ- ಹೆಣ್ಣು ಪ್ರಧಾನವಾಗಿ, ಗಂಡು ಪ್ರಧಾನ (Attitude)  ವಾಗಿ ಹಾಡುವ ಪರಿಕ್ರಮ ಬೆರಗುಗೊಳಿಸುವಂಥದು. ಚಕ್ಕಳದ ಗೊಂಬೆ ಪೇಂಟಿಂಗ್- ಅದ್ಭುತ, ಮೆಚ್ಚುಗೆಗೆ ಅರ್ಹವಾದುದು. ಇವುಗಳ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಬೇಕು.
 
 ಈ ಕಾಲಮಾನಕ್ಕೆ ಯಾವುದು ಲಾಭದಾಯಕ? ಎಂಬುದನ್ನು ಲಕ್ಷ್ಯದಲ್ಲಿಟ್ಟುಕೊಂಡು, Attitude  ಬೆಳೆಸಿಕೊಂಡು ಕೆಲಸ ಮಾಡಬೇಕು. ಆಗ ಆ Stigma ಹೋಗುವುದು ಸಾದ್ಯ. ಜಾನಪದದಲ್ಲಿ ಒಳ್ಳೆಯದೂಇದೆ, ಕೆಟ್ಟದ್ದೂ ಇದೆ. ಅನಿಷ್ಟಗಳನ್ನು ಕಡಿಮೆ ಮಾಡಿ, ಇಲ್ಲವೆ ದೂರ (eradicate) ಮಾಡಿ ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯವನ್ನು ಸಾಧಿಸಬೇಕು.
   ಮೈಲಾರಲಿಂಗನ ಆರಾಧನೆಯ ಸಂಪ್ರದಾಯದಲ್ಲಿ ಮಾನಸಿಕ ಸಮಾಧಾನಕ್ಕಾಗಿ ಭಕ್ತಾದಿಗಳು ತಮ್ಮನ್ನು ತಾವು ಹಿಂಸೆಗೆ ಗುರಿಪಡಿಸಿಕೊಳ್ಳುತ್ತಾರೆ. ಯಾವ ಬಗೆಯ ಹಿಂಸೆ ಅವರಿಗೆ ಸಮಾಧಾನ ನೀಡುವುದೋ ಅದನ್ನು ಅವರು ಸಂಪ್ರದಾಯದ ಹೆಸರಲ್ಲಿ ಉಳಿಸಿಕೊಂಡು ಬಂದಿದ್ದಾರೆ. ದೇವರು ಮೈದುಂಬುವುದು, ಮೈಮೇಲೆ ದೇವರನ್ನು ಬರಿಸಿಕೊಳ್ಳುವ ಕ್ರಮ ಅದನ್ನು ದೃಢೀಕರಿಸುತ್ತದೆ.
ದಿ:೦೬.೧೧.೨೦೧೦

ಶುಕ್ರವಾರ, ಸೆಪ್ಟೆಂಬರ್ 14, 2012

ಮನೆ ಮನೆಗೆ ಬರುವ ರಾಮಾಯಣ ಪಾತ್ರಗಳು


 
-ಸಿದ್ಧರಾಮ ಹಿರೇಮಠ.


ಕೂಡ್ಲಿಗಿ ಪಟ್ಟಣದ ತುಂಬೆಲ್ಲ ಮನೆ ಮನೆಗಳಿಗೆ ಈಗ ರಾಮಾಯಣದ ಪಾತ್ರಗಳು ಸಂಚರಿಸುತ್ತಿವೆ. ಹನುಮಂತ, ರಾಕ್ಷಸಿ, ಜಾಂಬವಂತ, ರಾಮ, ಸೀತೆ ಮುಂತಾದ ಪಾತ್ರಗಳು ಸಜೀವವಾಗಿ ಮನೆಗಳ ಮುಂದೆ ಪ್ರತ್ಯಕ್ಷಗೊಂಡು ಪ್ರೇಕ್ಷಕರ ಮನ ತಣಿಸುತ್ತಿವೆ. ಇವರೇ ಹಗಲು ವೇಷಗಾರರು.

ಮನೆಗಳಲ್ಲಿ ಟಿವಿ ಬಂದು ಮಕ್ಕಳೆಲ್ಲ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳ ಮುಂದೆ ಕುಳಿತಿರುವಾಗ, ನಮ್ಮದೇ ನೆಲದ ರಾಮಾಯಣದ ಕತೆಗಳನ್ನು ಕಿರಿಯರಿಂದ ಹಿರಿಯರವರೆಗೆ ಪರಿಚಯಿಸುತ್ತಿರುವ ಹಗಲು ವೇಷಗಾರರು ಸದ್ದಿಲ್ಲದೇ ನಮ್ಮ ಸಂಸ್ಕೃತಿಯ ಕುರುಹನ್ನು ಉಳಿಸುತ್ತ ಸಾಗಿದ್ದಾರೆ. ತಲೆತಲಾಂತರದಿಂದ ಒಂದೇ ವೃತ್ತಿಯನ್ನು ಅವಲಂಬಿಸಿ ಬಂದಂತಹ ವೃತ್ತಿಗಳಲ್ಲಿ ಹಗಲುವೇಷವೂ ಒಂದಾಗಿದೆ. ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ, ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸಿ ಹೊಟ್ಟೆ ಹೊರೆಯುವ ಕಾಯಕ ಹಗಲು ವೇಷಗಾರರದು.
 
 
   ತಾಲೂಕಿನಾದ್ಯಂತ ವರ್ಷವಿಡೀ ಹಗಲುವೇಷ ಹಾಕಿ ಪೌರಾಣಿಕ ನಾಟಕಗಳ ತುಣುಕುಗಳನ್ನು ತೋರಿಸುತ್ತ ತಮ್ಮ ಹೊಟ್ಟೆ ಹೊರೆಯುತ್ತಾರೆ. ಇವರಿಗೆ ಯಾವುದೇ ರೀತಿಯ ವೇದಿಕೆ, ವಿದ್ಯುತ್, ಧ್ವನಿವರ್ಧಕದ ವ್ಯವಸ್ಥೆ ಬೇಕಾಗಿಲ್ಲ. ಬೀದಿಯಲ್ಲಿ, ಮನೆಗಳ ಮುಂದೆ ತಮ್ಮ ಕಲಾಪ್ರದರ್ಶನ ಮಾಡುವುದಷ್ಟೇ ಇವರಿಗೆ ಗೊತ್ತಿರುವುದು. ಇದು ಇವರಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದು. ಮೂಲತ: ಇವರದು ತಾಲೂಕಿನ ನಾಣ್ಯಾಪುರವಾದರೂ ಅದನ್ನು ಬಿಟ್ಟು ಕೂಡ್ಲಿಗಿ ಸೇರಿ ೨೦ ವರ್ಷಗಳೇ ಕಳೆದಿವೆ. ತಮ್ಮ ಜನಾಂಗದ ಹಲವಾರು ಜನ ಬೇರೆ, ಬೇರೆಕಡೆ ಹೊರಟುಹೋಗಿದ್ದು, ತಾವು ಮಾತ್ರ ಕೂಡ್ಲಿಗಿಯಲ್ಲೇ ನೆಲೆಸಿರುವುದಾಗಿ ಜಂಬಣ್ಣ ಹೇಳುತ್ತಾನೆ.
 
 
   ಪ್ರತಿ ಗ್ರಾಮದಲ್ಲೂ ಇವರು ೬ ದಿನ ನೆಲೆ ನಿಲ್ಲುತ್ತಾರೆ. ೬ ದಿನ ಇವರು ವಿವಿಧ ವೇಷಗಳನ್ನು ಧರಿಸಿ ಪೌರಾಣಿಕ ಪಾತ್ರಗಳನ್ನು ಮನಮುಟ್ಟುವಂತೆ ಅಭಿನಯಿಸುತ್ತಾರೆ. ೬ನೇ ದಿನ ಮುಸ್ಲಿಂ ಜನಾಂಗದ ಪಾತ್ರವನ್ನು ಧರಿಸಿ, ಒಂದು ಚಲನಚಿತ್ರ ಗೀತೆಯನ್ನು ಅಳವಡಿಸಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಬಣ್ಣವನ್ನು ಹಚ್ಚಿಕೊಂಡು, ಅದಕ್ಕೆ ತಕ್ಕಂತೆ ನೃತ್ಯ, ಸಂಭಾಷಣೆಗಳನ್ನು ಹೇಳುವುದೂ ಇವರಿಗೆ ಕರಗತವಾಗಿರುತ್ತದೆ. ಸಂಭಾಷಣೆಗಳನ್ನು ತಮ್ಮ ಅಜ್ಜಂದಿರ ಕಾಲದಿಂದಲೂ ಬಂದ ಪುಸ್ತಕಗಳಿಂದ ಕಲಿಯುತ್ತೇವೆ ಎಂದು ತಿಳಿಸುತ್ತಾರೆ. ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸವಾಗಿರುವ ಇವರಿಗೆ ಶಾಶ್ವತವಾದ ನೆಲೆ ದೊರೆತಿಲ್ಲ. ಇವರ ಮಕ್ಕಳಿಗಾಗಿಯೇ ಆಶ್ರಯ ಕಾಲೊನಿಯಲ್ಲಿ ಪ್ರಾಥಮಿಕ ಶಾಲೆಯೊಂದನ್ನು ತೆರೆಯಲಾಗಿದೆ. ಮಕ್ಕಳು ಶಾಲೆಗೆ ಹೋಗುತ್ತವೆ. ಇವರಿಗೆ ಇದೇ ಕಾಯಕ.
 
   ಪ್ರತಿ ಮನೆಯವರು ಎಷ್ಟು ಕೊಡುವರೋ ಅದನ್ನೇ ಸಂತೋಷದಿಂದ ಪಡೆದು ಮುಂದಿನ ಗ್ರಾಮಕ್ಕೆ ತೆರಳುತ್ತಾರೆ. ತಬಲ, ಹಾರ್ಮೋನಿಯಂ ಇವರ ಪಕ್ಕವಾದ್ಯಗಳು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳು, ಶಿಶುನಾಳ ಶರೀಫರ ತತ್ವಪದಗಳು, ದಾಸರ ಕೀರ್ತನೆಗಳನ್ನೂ ಸುಮಧುರವಾಗಿ ಹಾಡುತ್ತಾರೆ. ಬೇರೆ ಯಾವ ಕಾಯಕವೂ ಗೊತ್ತಿರದ ಇವರು ಮನೆ ಮುಂದೆ ಬಂದಾಗ ಸಂತೋಷದಿಂದ ಕಾಣಿಕೆ ನೀಡಿ, ಅಷ್ಟನ್ನು ಮಾತ್ರ ಇವರು ಬಯಸುವುದು.

ಈ ಬಾರಿ ಇವರು ಅಭಿನಯಿಸುತ್ತಿರುವುದು ಶೂರ್ಪನಖಿ ಗರ್ವಭಂಗ. ಗಜಲಂಕಿಣಿಯಾಗಿ ಕೆ.ವೀರೇಶ, ಆಂಜನೇಯನಾಗಿ ಡಿ.ಕೃಷ್ಣ, ರಾವಣನಾಗಿ ಜಂಬಣ್ಣ, ಜಾಂಬವಂತನಾಗಿ ದುರುಗಪ್ಪ ಅಭಿನಯಿಸುತ್ತಿದ್ದಾರೆ. ಇವರಿಗೆ ಪಕ್ಕವಾದ್ಯದವರಾದ ಹಾರ್ಮೋನಿಯಂನ್ನು ಕೆ.ಸೀತಾರಾಂ, ತಬಲ ಡಿ.ಜಂಬಣ್ಣ ನುಡಿಸುತ್ತಾರೆ. ನಾಯಕನಾಗಿ ಡಿ.ಈರಣ್ಣ ಇದ್ದಾರೆ. ಗ್ರಾಫಿಕ್‌ನಲ್ಲಿ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳನ್ನು ಮಕ್ಕಳಿಗೆ ತೋರಿಸುವುದಕ್ಕಿಂತಲೂ ಜೀವಂತ ಪಾತ್ರಗಳೇ ಕಣ್ಣೆದುರಿನಲ್ಲಿರುವುದನ್ನು ಮಕ್ಕಳಿಗೆ ತೋರಿದರೆ ಇನ್ನೂ ಒಳ್ಳೆಯದಲ್ಲವೇ?