ಸೋಮವಾರ, ಮಾರ್ಚ್ 31, 2014

ಏಕಾಂತದ ತಲ್ಲಣದಲ್ಲಿ ತೇಲುವ ಹಾಯಿದೋಣಿ - 'ಕೋಯಾದ್'


-ಚರಿತಾ



   ಭೂಮಿ- ಆಕಾಶ- ಮನಸ್ಸು -ಎಲ್ಲವನ್ನೂ ಆವರಿಸಿಕೊಂಡಂತಿರುವ ನೀರು...ನಿರಂತರ ಹರಿವಿನ ನದಿಯ ಒಡಲಿನಿಂದಲೇ ಹುಟ್ಟುಪಡೆದಂತೆ ಅಲೆಗಳನ್ನು ತಬ್ಬಿ ತೊಡರುವ ಪುಟ್ಟ ಹಾಯಿದೋಣಿ... ಆ ದೋಣಿಯ ಮಗನಂತಿರುವ ಆತ..ತನ್ನಪ್ಪನಿಂದ ಬಳುವಳಿಯಾಗಿ ಬಂದ ಆಸ್ತಿಯೆಂದರೆ ಈ ದೋಣಿಯೊಂದೆ. ಬಾಲ್ಯದಲ್ಲೆ ಅಮ್ಮನನ್ನು ಕಳೆದುಕೊಂಡವನಿಗೆ ಈ ನದಿಯ ಅಗಾಧತೆ ಮತ್ತು ದೋಣಿಯ ಮೈಸೆಳವು ಅಮ್ಮನ ಅಪ್ಪುಗೆಯಷ್ಟೇ ಆಪ್ತ.. ಇದು ಅಸ್ಸಾಮಿನ 'ಮಿಶಿಂಗ್' ಎಂಬ ಬುಡಕಟ್ಟು ಭಾಷೆಯ ಸಿನಿಮಾ  'ಕೋಯಾದ್' (ನಿರ್ದೇಶಕಿ : ಮಂಜು ಬೋರಾಹ್). ಮೊದಲು ಕೆಲಹೊತ್ತು ತಡವರಿಸುವ ನಿರೂಪಣೆ ನಿಧಾನವಾಗಿ ನದಿಯ ಹರಿವಿನೊಂದಿಗೆ ನಿಮ್ಮನ್ನೂ ಸೆಳೆದುಕೊಳ್ಳುತ್ತದೆ. 

   ಮತ್ತೊಂದು ಮದುವೆಯ ಆತುರದಲ್ಲಿರುವ ಗಂಡನಿಂದ ದೂರಾಗಿ, ಮಗನೊಂದಿಗೆ ತನ್ನ ತವರಿಗೆ ಮರಳುವ ಅವಳು, ತನ್ನಷ್ಟಕ್ಕೆ ತಾನಿರಲು ಬಿಡದ ಜನರ ಕೊಳಕು ದಾಹಕ್ಕೆ ಬಲಿಯಾಗಿ ನದೀಪಾಲಾಗುತ್ತಾಳೆ. ಅವಳ ಒಬ್ಬನೇ ಮಗ ಪೌಕಾಮ್ ತನ್ನ ಮಲತಾಯಿಯ ನಿರ್ಲಕ್ಷ್ಯದ ನಡುವೆಯೇ ಮನಸುಕೊಟ್ಟು ಕಲಿತದ್ದೆಂದರೆ -  ನದಿಯಲ್ಲಿ ತೇಲಿಬರುವ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಿ ಬದುಕುವುದು. ಅಪ್ಪನಿಂದ ಪಡೆದದ್ದೂ ಆ ದೋಣಿಯೊಂದನ್ನೆ. ಅಂತೆಯೆ ಅದೇ ಅವನ ಸರ್ವಸ್ವ.


   ಬಾಲ್ಯದಿಂದಲೇ ಮನುಷ್ಯ ಸಂಬಂಧಗಳ ಜಟಿಲತೆ, ಕುಟಿಲತೆಗಳ ಕಹಿಯನ್ನು ಕಂಡವನು ಅವನು. ಬಹುಷಃ ಅವನ ಪಾಲಿಗೆ ಒದಗಿಬಂದ ಒಂದೇ ನೆಮ್ಮದಿಯೆಂದರೆ, ಅವನ ಹೆಂಡತಿಯ ಪ್ರೀತಿ. ದುಡಿಮೆಯೊಂದನ್ನೆ ಗುರಿಯಾಗಿಸಿಕೊಂಡ ಪೌಕಾಮ್ ಗೆ ತನ್ನ ದೊಡ್ಡ ಮಗನನ್ನು ಡಾಕ್ಟರ್ ಮಾಡುವಾಸೆ. ಅದಕ್ಕಾಗಿ ಗಾಳಿ, ಮಳೆ, ಹಗಲು-ರಾತ್ರಿ ಎನ್ನದೆ ನದಿಯೊಡಲಲ್ಲಿ ತನ್ನ ದೋಣಿಯ ಜೊತೆ ತೇಲುತ್ತಾನೆ.. ಅವನೆಡೆಗೆ ತೇಲಿಬರುವ ಮರದ ದಿಮ್ಮಿಗಳೇ ಅವನ ಪಾಲಿನ ಖಜಾನೆ.

   ಅವನ ಮೈಮನಸ್ಸೆಲ್ಲವೂ ನದಿಯ ಅಗಾಧ ಹರಿವಿನಂತೆ ಮೌನ ಮತ್ತು ಗಂಭೀರ. ಇಡೀ ಚಿತ್ರದ ಮುಕ್ಕಾಲು ಪಾಲು ಇಂಥ ಗಂಭೀರ ಹರಿವಿನ ಜೊತೆಗೇ ಸಾಗುತ್ತದೆ. ಅವನಿಗೆ 'ಮಾತು' ಬರುವುದು ಅವನ ಆಳದ ಗಾಯಗಳು ಕಲಕಿ, ರಾಡಿಯಾದಾಗ ಮಾತ್ರ. ತಾನು ಅತಿಯಾಗಿ ನೆಚ್ಚಿದ ನಂಟಿನಿಂದಲೂ ನೆಮ್ಮದಿ ದೂರವೆನಿಸಿದಾಗ ಪೌಕಾಮ್ ಮಾತಾಡತೊಡಗುತ್ತಾನೆ. ಅದೂ ಚೀತ್ಕಾರ, ರೋದನೆಯ ದನಿಯಲ್ಲಿ ಹುಟ್ಟಿದ ಮಾತುಗಳು..


   ತಾನೇ ಒಂದು ನದಿಯಂತೆ ನಿರಂತರ ಹರಿಯುತ್ತ ಮುಕ್ಕಾಲು ಜೀವನ ಸವೆಸಿರುವ ಇವನು, ತನ್ನ ಕೊನೆಗಾಲದಲ್ಲಿ ನಿಮಿಷಮಾತ್ರ ಜೋರಾಗಿ ಉರಿದು ಆರಿಹೋಗುವ ಎಣ್ಣೆಬತ್ತಿದ ದೀಪದಂತೆ ಕಾಣುತ್ತಾನೆ. ಇಡೀ ಚಿತ್ರದ ತುಂಬ ಹರಡಿಕೊಂಡಿರುವ ಮಬ್ಬುಗತ್ತಲಿನಂಥ ಮೌನ ಕೊನೆಗೆ ಇವನ ಆರ್ತತೆಯ ಏಕಾಂತದಲ್ಲಿ ಕಪ್ಪಗೆ ಹೆಪ್ಪುಗಟ್ಟುತ್ತದೆ.. ನೋಡುಗನೊಳಗೆ ಆ ಆಕ್ರಂದದ ಅಲೆಗಳು ಹರಡಿಕೊಳ್ಳುತ್ತವೆ...

   ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಮಾರಕ ಯಾತನೆಯಂಥ ಮೌನದ ಹೊದಿಕೆಯಲ್ಲೇ ಅರ್ಥಮಾಡಿಸುತ್ತದೆ ಈ ಚಿತ್ರ. ಇಡೀ ಚಿತ್ರದ 'ಮೂಡ್' ಕಟ್ಟಿಕೊಡುವಲ್ಲಿ ಶ್ರಮಿಸಿರುವುದು ಇಲ್ಲಿನ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ಪೌಕಾಮ್ ನ ಒಳಹೊರಗನ್ನು ಅತ್ಯಂತ ಸಮರ್ಥವಾಗಿ ಚಿತ್ರಸಲಾಗಿದೆ. ಆದರೆ, ಕೊನೆಗೂ ನನ್ನಲ್ಲಿ ಉಳಿದ ಪ್ರಶ್ನೆಗಳು ಇವು : ಸಂಬಂಧಗಳ ಸ್ವಾರ್ಥ, ಜಾಳುತನದಿಂದ ಬೇಸತ್ತು ಬದುಕಿನ ಬಗೆಗೆ ಗಾಢ ನಿರಾಸೆ ತಳೆಯುವ ಪೌಕಾಮ್ ಗೆ ತನ್ನ ಹೆಂಡತಿಯ ಅಗಾಧ ಪ್ರೀತಿ ಯಾಕೆ ಆಸರೆಯೆನಿಸಲಿಲ್ಲ? ತನ್ನ ಗಂಡನನ್ನು ತನಗಿಂತಲೂ ಹೆಚ್ಚು ನೆಚ್ಚಿಕೊಂಡವಳ ಪ್ರೀತಿ, ಕಾಳಜಿ ಯಾಕೆ ಅವನಿಗೆ ಬದುಕಿನ ಏಕೈಕ ಸೌಂದರ್ಯದಂತೆ ಭಾಸವಾಗಲಿಲ್ಲ? ಹೆಂಡತಿಯ ಅಸ್ತಿತ್ವ ಕೇವಲ ಭೌತಿಕ ನೆಲೆಯದ್ದಾಗಿ ಮಾತ್ರ ಉಳಿದುಬಿಟ್ಟಿದ್ದು ಯಾಕೆ? ...

   ಇದು 'ಭಾರತೀಯ ರಿವಾಜು'ಗಳನ್ನು ಹೊದ್ದುಕೊಂಡ ಗಂಡಸಿನ ಮನಸ್ಥಿತಿಯಂತೆ ಕಾಣುತ್ತದೆ. ತನ್ನ ತಾಯಿಯ ದುರದೃಷ್ಟಕರ ಹಣೆಬರಹ ಕಂಡಿದ್ದವನಿಗೆ ತನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಹೆಂಡತಿ ಯಾಕೆ ಆತ್ಮಸಖಿಯಾಗಲಿಲ್ಲ? ಇದು ನನ್ನ ಮಟ್ಟಿಗೆ ಆದರ್ಶದ ಕನವರಿಕೆಯೂ ಇರಬಹುದೇನೊ! 

   ಯಾಕೋ  ಅವನ ಏಕಾಂತದ ತಲ್ಲಣಗಳ ಸುಳಿಯಲ್ಲಿ ಅವಳ ಪ್ರೀತಿಯ ದೋಣಿ ಒಂಟಿಯಾದಂತೆ ನನಗನಿಸಿತು.

ಬುಧವಾರ, ಮಾರ್ಚ್ 26, 2014

ಲೈಂಗಿಕ ಅಲ್ಪಸಂಖ್ಯಾತೆ ರೇವತಿ ‘ರಂಗ ಪ್ರವೇಶ'

-ಮಂಜುಶ್ರೀ ಎಂ. ಕಡಕೋಳ
 ಸೌಜನ್ಯ: ಪ್ರಜಾವಾಣಿ















ಲೈಂಗಿಕ ಅಲ್ಪ­ಸಂಖ್ಯಾತೆ ಎ. ರೇವತಿ ತಮ್ಮದೇ ಆತ್ಮಕಥೆ ‘ಬದುಕು ಬಯಲು’ ನಾಟಕದ ಮೂಲಕ ರಂಗ­ಪ್ರವೇಶ ಮಾಡಲಿದ್ದಾರೆ.
ರೇವತಿ ಅವರ ಆತ್ಮಕಥೆ ‘ದಿ ಟ್ರೂತ್ ಎಬೌಟ್‌ ಮಿ’ ಅನ್ನು ಇಂಗ್ಲಿಷಿ­ನಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿತ್ತು. ಈ ಕೃತಿ­ಯನ್ನು ‘ಬದುಕು ಬಯಲು’ ಹೆಸರಿನಲ್ಲಿ ಕನ್ನಡಕ್ಕೆ ಲೇಖಕಿ ದು. ಸರಸ್ವತಿ ಅನುವಾದಿ­ಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ‘ಜನಮನದಾಟ’ ತಂಡ­ದಲ್ಲಿ ಮಾರ್ಚ್‌ 5­­ರಿಂದ ರಿಹರ್ಸಲ್‌ ಆರಂಭಿಸಿ­ರುವ ರೇವತಿ, ತಮ್ಮದೇ ಆತ್ಮಕಥೆಯ ನಾಟಕ ರೂಪಕ್ಕೆ ಬಣ್ಣ ಹಚ್ಚುತ್ತಿರುವ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
* ರಂಗ ಪ್ರವೇಶದ ಆಸೆ ಮೊಳೆತದ್ದು ಹೇಗೆ?
–ಬಾಲ್ಯದಲ್ಲೇ ನನಗೆ ಅಭಿನಯದ ಬಗ್ಗೆ ಒಲವಿತ್ತು. ಶಾಲೆಯಲ್ಲಿ ನಾಟಕ­ಗಳಲ್ಲಿ ಅಭಿನಯಿಸಿದ್ದೆ. ‘ಸಂಗಮ’­ದಲ್ಲಿ­ದ್ದಾಗ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳನ್ನು ಕಲೆ ಮೂಲಕ ಜನರಿಗೆ ಸುಲಭ­ವಾಗಿ ತಲುಪಿ­ಸಬಹುದು ಎಂಬುದನ್ನು ಅರಿತಿದ್ದೆ.
‘ಬದುಕುಬಯಲು’ ನಾಟಕ ನೋಡಿ­ದಾಗ, ನನ್ನ ಪಾತ್ರ­ವನ್ನು ಬೇರೆ ಯಾರೋ ಅಭಿನಯಿಸುವು­ದ­ಕ್ಕಿಂತ ನಾನೇ ಅಭಿನಯಿಸಿದರೆ ಹೇಗೆ ಅಂತ ಪ್ರಶ್ನಿಸಿ­ಕೊಂಡೆ. ಈ ವಿಚಾರವನ್ನು ನಿರ್ದೇಶಕ ನೀನಾಸಂ ಗಣೇಶ್ ಅವ ರೊಂದಿಗೆ ಹಂಚಿ­ಕೊಂಡೆ.  ಅವರು ತಮ್ಮ ತಂಡಕ್ಕೆ ನನಗೆ ಪ್ರವೇಶ ನೀಡಿದರು.
* ನಿಮ್ಮದೇ ಆತ್ಮಕಥೆಯಲ್ಲಿ ನೀವೇ ಅಭಿನಯಿಸು­ತ್ತಿರು­ವುದು ಹೇಗನ್ನಿಸುತ್ತೆ?
–ಖುಷಿ ಅನ್ನಿಸುತ್ತೆ. ‘ನೀನಾಸಂ’ಗೆ ಬರಬೇಕು ಅಂತ ತುಂಬಾ ಸಲ ಅಂದು­ಕೊಂಡಿದ್ದೆ. ಆದರೆ, ಅದು ಈ  ರೀತಿ ಈಡೇರಿದೆ. ನಾಟಕದಲ್ಲಿ ರೇವತಿ ಪಾತ್ರ­ವನ್ನು ನಾನೇ ಮಾಡುತ್ತಿರುವುದರಿಂದ ಭಾವನೆಗಳನ್ನು ಸರಾಗವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯ­ವಾ­ಗು­ತ್ತಿದೆ.
* ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳ ಬಿಂಬಕ್ಕೆ ರಂಗ­­ಮಾಧ್ಯಮವನ್ನೇ ಆಯ್ಕೆ ಮಾಡಿದ್ದು ಏಕೆ?
–ಮಾತು, ಬರಹಕ್ಕಿಂತ ರಂಗ­ಭೂಮಿ ಮೂಲಕ ಸುಲಭವಾಗಿ ಜನ­ರನ್ನು ತಲು­ಪ­­ಬಹುದು. ಲೈಂಗಿಕ ಅಲ್ಪ­ಸಂಖ್ಯಾತರ ಬಗ್ಗೆ ಸಮಾಜ­ದಲ್ಲಿ ಇನ್ನೂ ಆರೋಗ್ಯ­ಕರ ಮುಕ್ತಭಾವ ಬಂದಿಲ್ಲ. ಈ ಮೊದಲು ‘ಬದುಕು­ಬಯಲು’  ನಾಟಕ ನೋಡಿದ ಅನೇಕರು ಪೂರ್ವ­ಗ್ರಹ­ ಬಿಟ್ಟು ನಮ್ಮನ್ನು ಸಾಮಾನ್ಯ­­­ರಂತೆಯೇ ನೋಡುವಂತಾ­ಗಿದೆ. ಈ ಬದಲಾವಣೆ  ಸಾಧ್ಯ­ವಾಗಿದ್ದು ನಾಟಕ­ದಿಂ ದಲೇ. ಹಾಗಾಗಿ, ರಂಗಭೂಮಿಯನ್ನೇ ಆಯ್ದು­ಕೊಂಡೆ.
* ನಾಟಕದ ಸಂದೇಶವೇನು?
–ಲೈಂಗಿಕ ಅಲ್ಪಸಂಖ್ಯಾತರೂ  ಮನುಷ್ಯರೇ. ಅವರಲ್ಲೂ ಮನಸ್ಸಿದೆ ಎನ್ನುವ ಸಂದೇಶ ಸಮಾಜಕ್ಕೆ ತಲುಪ­ಬೇಕು.
* ‘ಜನಮನದಾಟ’ ತಂಡದ ಜತೆ ನಿಮ್ಮ ಒಡನಾಟ  ಹೇಗಿದೆ?
–ತಂಡದಲ್ಲಿ ನಾನೂ ಸೇರಿದಂತೆ ಒಟ್ಟು 13 ಮಂದಿ ಇದ್ದೇವೆ. ಇಲ್ಲಿ ನನ್ನನ್ನು ಎಲ್ಲರೂ ಹೆಣ್ಣೆಂದೇ ಗುರು­ತಿಸು­ತ್ತಾರೆ. ಇತರ ಮಹಿ­ಳೆ­­ಯ­ರೊಂದಿಗೆ ಹೇಗೆ ಇರು ತ್ತಾರೋ ನನ್ನ ಜತೆಯೂ ಹಾಗೇ ಇರು­ತ್ತಾರೆ. ಇದು ನನಗೆ ಸಂತಸ ನೀಡಿದೆ ಎಂದು ಮಾತು ಮುಗಿಸಿದರು ರೇವತಿ.
‘ಬದುಕು ಬಯಲು’ ನಾಟಕ  58 ಪ್ರದರ್ಶನ ಕಂಡಿದೆ. ರೇವತಿ ಅಭಿ­ನಯದ ನಾಟಕ ಏ. 18ರಿಂದ ಪ್ರದ­ರ್ಶನವಾಗಲಿದೆ. ಜುಲೈನಲ್ಲಿ ಬೆಂಗ­ಳೂ­ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ­ಕದ 100ನೇ ಪ್ರದರ್ಶನ ನಡೆಯಲಿದೆ.  ನಾಟಕ ಪ್ರದರ್ಶನ–ಮಾಹಿತಿಗೆ ಮೊಬೈಲ್: 99002 57750
ಏನಂತಾರೆ ನಿರ್ದೇಶಕರು?
‘ರೇವತಿ ನಮ್ಮ ತಂಡಕ್ಕೆ ಬರುತ್ತೇನೆ ಅಂದಾಗ ಆಶ್ಚರ್ಯ, ಸಂತಸ ಒಟ್ಟಿಗೇ ಆಯಿತು. ಅವರು ನಮ್ಮ ಜತೆ ಬಂದಿ­ದ್ದಾರೆ ಅನ್ನೋದಕ್ಕಿಂತ ಅವರ ಜತೆಯೇ ನಾವಿದ್ದೇವೆ ಅನ್ನೋದು ಸೂಕ್ತ.  ನಾಟ­ಕದ ರಿಹರ್ಸಲ್‌ನಲ್ಲಿ ಅವರು ಇತರ­ರಂತೆ ಅಭಿ­ನ­ಯಿಸಲು ಪ್ರಯ­ತ್ನಿ­ಸುತ್ತಿದ್ದರು.
ಆದರೆ, ನಿಮ್ಮದೇ ಪಾತ್ರ. ಹಾಗಾಗಿ, ಅಭಿನಯ ಬೇಡ. ನೀವು ಇರು­ವಂತೆಯೇ ಇದ್ದರೆ ಚೆನ್ನ ಎಂದೆ. ಅದನ್ನ­ವರು ತಿದ್ದಿ­ಕೊಂಡು ಸಹಜ­ವಾಗಿಯೇ ನಾಟಕ­ದಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿದ್ದಾರೆ. ಕನ್ನಡ ರಂಗಭೂಮಿ­ಯಲ್ಲಿ ಲೈಂಗಿಕ ಅಲ್ಪ-­ಸಂಖ್ಯಾತೆ­ಯೊಬ್ಬರು ಪೂರ್ಣ ಪ್ರಮಾಣದ ನಾಯಕಿಯಾಗಿ ಬಹುಶಃ ಇದೇ ಮೊದಲ ಬಾರಿ ಅಭಿನ­ಯಿ­ಸು­ತ್ತಿ­ದ್ದಾರೆ ಎನ್ನುತ್ತಾರೆ  ನಿರ್ದೇಶಕ ಎಂ. ಗಣೇಶ.

ಮಂಗಳವಾರ, ಮಾರ್ಚ್ 25, 2014

ಕಲೆಯಲ್ಲಿ ಸಂಕೋಲೆ
























* ಎಚ್ ಎ ಅನಿಲ್ ಕುಮಾರ್

ಸೌಜನ್ಯ: ವಿಜಯ ಕರ್ನಾಟಕ

ಒಂದು ಮ್ಯೂಸಿಯಮ್ಮನ್ನು ಒಳಹೊಕ್ಕು ಅಲ್ಲಿರುವ ಕಲಾಕೃತಿಗಳನ್ನು ನೋಡಿದಾಗ ಕೇವಲ ಕುಂಚದ ಮಹಿಮೆ, ಬಣ್ಣಗಳ ಸಂಯೋಜನೆ, ಭಾವಗಳ ಆಟವನ್ನಷ್ಟೇ ನೋಡುವುದಲ್ಲ. ಅದರಿಂದ ಕಂಗಳಿಗೆ ತೃಪ್ತಿಯಾಗಬಹುದು, ನಿಜ. ಆದರೆ, ಅದರ ಹಿಂದಿನ ಮನಃಸ್ಥಿತಿಯನ್ನೂ ನಾವು ಗ್ರಹಿಸಬೇಕು. ಏಕೆಂದರೆ ಈ ಪ್ರತಿಭೆಯ ಲೋಕದಲ್ಲೂ ಬಿಳಿ ತೊಗಲಿನವರ ಮೇಲಾಟವಿದೆ; ವರ್ಣೀಯರ ಪಾಲಿನ ಸಂಕೋಲೆಗಳಿವೆ; ಗುಲಾಮಗಿರಿಯ ಚಿಹ್ನೆಗಳಿವೆ. ಮೇಲ್ನೋಟಕ್ಕೆ ಮುದ ನೀಡುವ ಮ್ಯೂಸಿಯಂಗಳ ಆಳದಲ್ಲಿ ಅನೇಕ ಅಮಾನವೀಯ ಅಂಶಗಳಿವೆ ಎಂದರೆ ನೀವು ನಂಬಲೇಬೇಕು.

  ಇಪ್ಪತ್ತೈದು ವರ್ಷಗಳ ಹಿಂದೆ ಭೋಪಾಲದ 'ಮ್ಯೂಸಿಯಂ ಆಫ್ ಮ್ಯಾನ್' ಅನ್ನು ನಾನು ಕಲಾವಿದ್ಯಾರ್ಥಿಯಾಗಿ ನೋಡಿದಾಗ ಕಲಾವಿದರಿರಲಿ, ಶ್ರೀಸಾಮಾನ್ಯನೂ ಗಾಬರಿ ಪಡುವಂತಹ ದೃಶ್ಯಗಳನ್ನಲ್ಲಿ ಕಂಡೆ. ಭಾರತದ ಪ್ರಮು ಬುಡಕಟ್ಟು ಜನರ ಮನೆಗಳನ್ನು ಅಲ್ಲಿ ಪುನರ್ಸೃಷ್ಟಿಸಲಾಗಿತ್ತು. ಅಸಲಿ ಬುಡಕಟ್ಟಿನ ಸಂಸಾರಸ್ಥರು ತಮ್ಮ ಅಸು ಆವರಣದಲ್ಲಿ ತೊಡುತ್ತಿದ್ದರು ಎಂದು ಭಾವಿಸಲಾದ ವಸ್ತ್ರಗಳನ್ನು ತೊಟ್ಟು ಮಾನವ ಸಂಗ್ರಹಾಲಯದ ತಮ್ಮ ತಮ್ಮ ಬುಡಕಟ್ಟಿನ ಮನೆಗಳ ಮುಂದೆ ಪಹರೆ ಕಾಯುತ್ತಿದ್ದರು. ಪ್ರತಿ ಸಂಸಾರವೂ ಮೂರು ತಿಂಗಳ ಕಾಲ ಅಲ್ಲಿ 'ವೀಕ್ಷಿತ'ರಾಗಿ (ಪ್ರಾಣಿ ಸಂಗ್ರಹಾಲಯದ ಪಶು-ಪಕ್ಷಿಗಳಂತೆ) ಆ ಮನೆಗಳ ಒಡೆಯರಾಗಿ ವೀಕ್ಷಕರ ಕಣ್ಣಿಗೆ ಆಹಾರವಾಗಲು ವಂತಿಗೆ ಪಡೆಯುತ್ತಿದ್ದರು. ನಮ್ಮ ಗೆಳೆಯರಲ್ಲಿ ಕೆಲವರು ಅಂತಹುದೇ ಕುಟುಂಬದಿಂದ ಬಂದವರಾಗಿದ್ದರು. ಒಂದೆರೆಡು ತಲೆಮಾರುಗಳ ಹಿಂದೆಯಷ್ಟೇ ವಾಸ್ತವವಾಗಿದ್ದದ್ದು ಈಗ ಸಂಗ್ರಹಾಲಯವಾಗಿ ಬಿಟ್ಟಿತ್ತು! ಒರಿಸ್ಸಾದ ಮಾನವ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿರುವ ಸಂಗ್ರಹಿತ ಗೃಹವು ನನ್ನ ಬಾಲ್ಯದ ನಮ್ಮ ಮನೆಯನ್ನು ಹೋಲುತ್ತಿತ್ತು! ನಾವು ಬದುಕಿದ ವಾತಾವರಣವನ್ನೇ ನಮ್ಮ ಜೀವಮಾನದಲ್ಲಿ ಸಂಗ್ರಹಾಲಯವನ್ನಾಗಿ ಮಾಡಿದರೆ ಅದು ಗುಲಾಮಗಿರಿಯ ಮೊದಲ ಹೆಜ್ಜೆಯಾಗಿ ಬಿಡುತ್ತದೆ.

ಮಕ್ಕಳು ಪ್ರಾಣಿ ಸಂಗ್ರಹಾಲಯವನ್ನು ನೋಡಲು ಏಕೆ ನಿರಾಸಕ್ತರಾಗುತ್ತಾರೆ ಎಂದು ಜಾನ್ ಬರ್ಜರ್ ಭಾವಿಸುತ್ತಾನೋ ಅಂತಹ ಪರಿಕಲ್ಪನೆಯಲ್ಲೂ ಇಂಥದೇ ಕಾರಣವಿದೆ. ಎಡ್ಡಿ ಚೇಂಬರ್ಸ್‌ ಎಂಬ ಬ್ರಿಸ್ಟಲ್‌ನ ಕಲಾ ವಿದ್ವಾಂಸ, ಕ್ಯುರೇಟರ್ ಲಂಡನ್ನಿನ ಟೇಟ್ ಮಾಡರ್ನ್ ಸಂಗ್ರಹಾಲಯವನ್ನು ಕುರಿತು ಅದು 'ವೈಟ್ ವಾಷ್' ಆಗಿದೆ ಎನ್ನುತ್ತಾನೆ. ಅಲ್ಲಿನ ಅನರ್ಘ್ಯ ಕಲಾಕೃತಿಗಳನ್ನು ಕಾವಲು ಕಾಯುವವರೆಲ್ಲ ಬಿಳಿಯರು. ಅದೇ ಕಟ್ಟಡದ ಕೆಫೆಯಲ್ಲಿ ತಿಂಡಿತೀರ್ಥವನ್ನು ಬಡಿಸುವವರೆಲ್ಲ ಕರಿಯರು ಎಂದು ಆತ ತನ್ನ ಬರವಣಿಗೆಯಲಿ (ಕನೊಟೇಷನ್ಸ್) ನಿರೂಪಿಸುತ್ತಾನೆ. ಬಿಳಿಯರು ಸಂಗ್ರಹಾಲಯದ ಒಡೆತನ ಸ್ಥಾಪಿಸುವುದರ ಮೂಲಕ ಹೇಗೆ ನಮ್ಮನಿಮ್ಮನ್ನೆಲ್ಲ 'ವೈಟ್ ವಾಷ್' ಮಾಡಿಬಿಟ್ಟಿದ್ದಾರೆ ಅಥವಾ ಬಿಳಿಯ-ಸಾರ್ವಭೌಮತ್ವವನ್ನು ಹೇಗೆ ಸ್ಥಾಪಿಸಿದ್ದಾರೆ ಎಂದು ಭಾವಪೂರ್ಣವಾಗಿ ನಿರೂಪಿಸಿದ್ದಾನೆ. ನಮ್ಮ ಕಲ್ಲಿನ ಬಸವನನ್ನು ಬ್ರಿಟಿಷ್ ಕ್ರಿಸ್ಟಿಯಾನ ಕಾವಲು ಕಾಯುತ್ತಿದ್ದದ್ದು ನನ್ನ ಕೆಡುಕು ಮನಸಿಗಂತೂ ವಸಾಹತೀಕರಣೋತ್ತರದ ಸವ್ವಾಸೇರಿನ ವಿಷಯವಾಗಿ ಖುಷಿ ಕೊಟ್ಟಿದ್ದಂತೂ ನಿಜ.

ಸಂಗ್ರಹಾಲಯಗಳನ್ನು ಭೇಟಿ ಮಾಡುವಾಗ ಒಂದು ವಿಷಯ ಗಮನಿಸಿ: ಯಾವ ಸಂಗ್ರಹಾಲಯಗಳಲ್ಲಿ ಬೇರೆ ದೇಶಗಳ ಕಲಾಕೃತಿಗಳನ್ನೂ ಸಂಗ್ರಹಿಸಿರುತ್ತಾರೋ ಅಲ್ಲೆಲ್ಲ ಇತರ ದೇಶಗಳನ್ನು ಗುಲಾಮಗಿರಿಗೆ ಒಡ್ಡಿರುವ ನಿದರ್ಶನಗಳಿರುತ್ತವೆ. ಎಲ್ಲೆಲ್ಲಿ ತಮ್ಮದೇ ದೇಶಗಳ ಸಾಂಸ್ಕತಿಕ ವಸ್ತುಗಳನ್ನು ಶೇಖರಿಸಿರುತ್ತಾರೋ (ಈಜಿಪ್ಟಿನ ಸಂಗ್ರಹಾಲಯದ ಮಮ್ಮಿಗಳಂತೆ) ಅಲ್ಲೆಲ್ಲ ವಿದೇಶೀ ರಾಜ್ಯಾಡಳಿತಕ್ಕೆ ಪ್ರತಿರೋಧ ಒಡ್ಡಿರುವುದನ್ನು ಕಾಣಬಹುದು. ಉದಾಹರಣೆಗೆ ಲಂಡನ್ನಿನ 'ವಿಕ್ಟೋರಿಯಾ ಆಲ್ಬರ್ಟ್ ಸಂಗ್ರಹಾಲಯ'. ರಸ್ತೆರಸ್ತೆಗಳಲ್ಲೂ ಕಂಡುಬರುವ ನಮ್ಮ ಕಲ್ಲಿನ ಬೀದಿ ಬಸವ, ಚಿತ್ರಕಲಾ ಪರಿಷತ್ತಿನಲ್ಲಿ ಕಾಸಿಗೊಂದು ಕೊಸರಿಗೊಂದು ಮಾರಾಟವಾಗುವ ಸಾಂಪ್ರದಾಯಿಕ ಹಾಗೂ ಬುಡಕಟ್ಟು ಚಿತ್ರಕಲೆಗಳೆಲ್ಲ ಅಲ್ಲಿ ಘನಗಾಂಭೀರ್ಯದಲ್ಲಿ 'ಮ್ಯೂಸಿಯಂ ಪೀಸ್'ಗಳಾಗಿ ವಿರಾಜಿಸುತ್ತಿರುತ್ತವೆ. ಈ ನಿಟ್ಟಿನಿಂದ ಸಂಗ್ರಹಾಲಯಗಳು ಮೊದಲಿಗೆ ಶೋಷಣೆಯ ಸಂಕೇತ. ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿ ಕೆ ವೆಂಕಟಪ್ಪ, ಕೆ ಕೆ ಹೆಬ್ಬಾರ್ ಅವರುಗಳ ಕಲಾಕೃತಿಗಳ ಜೊತೆ ರಾಜಾರಾಂ ಎಂಬ ಅನಾಮಿಕ ಶಿಲ್ಪಿಯ ಕೃತಿಗಳೂ ಇವೆ. ಮೊದಲ ಇಬ್ಬರು ಪರಿಚಿತರಾಗಿದ್ದರೆ ಕೊನೆಯವರು ಯಾರ ವಿಮರ್ಶೆಯಲ್ಲೂ ಪ್ರಸ್ತುತವಿರದ, ಕಲಾವಿದರಿಗೇ ಪರಿಚಯವಿರದ ಕಲಾವಿದ! ಇಂತಹ ಕಲಾವಿದ ಸಂಗ್ರಹಯೋಗ್ಯವಾದುದರ ಹಿಂದೆ ನಮ್ಮ ಕಂಗಳನ್ನು ಸಮಕಾಲೀನವಾಗಿ ವಸಾಹತೀಕರಿಸುವ ದಬ್ಬಾಳಿಕೆಯೂ ಇಲ್ಲದಿಲ್ಲ.

ವೆಂಕಟಪ್ಪ ಸಂಗ್ರಹಾಲಯದ ಕಾರ್ಯವಿಧಾನದ ಪ್ರಕಾರ ಏಳು ದಶಕಗಳ ಸ್ವತಂತ್ರ ಕರ್ನಾಟಕದಲ್ಲಿ ಮೂಡಿಬಂದವರು ಕೇವಲ ಹೆಬ್ಬಾರ್, ವೆಂಕಟಪ್ಪ ಹಾಗೂ ರಾಜಾರಾಂ ಎಂದಂತಾಯಿತು. ಇಂತಹ ಆಯ್ಕೆಯ, ನಿರಾಕರಣದ ಪ್ರಕ್ರಿಯೆಯಲ್ಲಿ ಆಡಳಿತದ ಅಜ್ಞಾನದಿಂದುಂಟಾದ ಜ್ಞಾನಕೇಂದ್ರೀಯ ಗುಲಾಮಗಿರಿ ಇದೆ. ಲಂಡನ್ನಿನ 'ಇಂಪೀರಿಯಲ್ ವಾರ್ ಮ್ಯೂಸಿಯಂ' ಹಾಗೂ ಬ್ರಿಸ್ಟಲ್‌ನ 'ಸ್ಲೇವ್ ಮ್ಯೂಸಿಯಂ'ಗಳನ್ನು 'ನೋಡಿ' ಹೊರಬರುವವರಲ್ಲಿ ಬಹುಜನ ತೇವಗೊಂಡ ಕಂಗಳೊಂದಿಗೆ ಕಂಡುಬರುತ್ತಾರೆ. ವ್ಯಕ್ತಿಯನ್ನು ವಸ್ತುವಿನಂತೆ ಭಾವಿಸುವುದು ಗುಲಾಮಗಿರಿಯ ಮೊದಲ ಹಂತವಾದರೆ, ಆತನ ಅಂತಹ ನರಳಿಕೆಯ ಇತಿಹಾಸಕ್ಕೊಂದು ಸಂಗ್ರಹಾಲಯವನ್ನು ರೂಪಿಸುವುದು ತಪ್ಪೊಪ್ಪಿಗೆಯ ಕ್ರಮ ಎಂಬ ನಂಬಿಕೆ ಇದೆ. ಭಾರತೀಯನಾಗಿ ನಾವು ನಮ್ಮ ಪೂರ್ವೇತಿಹಾಸವನ್ನು ಸ್ಮರಿಸಿಕೊಳ್ಳುವಾಗ ಗಾಂಧಿಯಂತಹವರ ಮೂಲಕ ಸ್ವಾದಿಷ್ಟಗೊಳಿಸಬಹುದು ಆದರೆ ಜರ್ಮನ್ ಪ್ರಜೆಯೊಬ್ಬ ಹಿಟ್ಲರನ ಹೆಸರಿನಲ್ಲಿ ಹಾಗೆ ಮಾಡಲಾರ. ಬದಲಿಗೆ 'ಆಸ್ವಿಝ್'ನಲ್ಲಿ ನಡೆದ ನರಮೇಧಕ್ಕೊಂದು ಸಂಗ್ರಹಾಲಯವನ್ನು ನಿರ್ಮಿಸಿ, ಅಲ್ಲಿ ಸತ್ತ ಯಹೂದಿಗಳ, ಸಲಿಂಗಕಾಮಿಗಳ, ಜಿಪ್ಸಿಗಳ ಪಾದರಕ್ಷೆಗಳನ್ನು ಯಥಾವತ್ ಚೌಕಟ್ಟಿನಲ್ಲಿರಿಸಬಹುದು, 'ತಪ್ಪೊಪ್ಪಿಗೆಯ' ರೂಪದಲ್ಲಿ. ಅಂದರೆ ಗುಲಾಮಗಿರಿಯ ಪ್ರಕ್ರಿಯೆಯನ್ನು ಸಂಗ್ರಹಾಲಯವು ತಪ್ಪಿಸಿಕೊಳ್ಳಲು ಸಾಧ್ಯವಿರುವುದು ಸಮಾಜದ ಸಾಧನೆಗಿಂತಲೂ ದುರಂತಗಳಿಗೆ ತಪ್ಪಿತಸ್ಥ ಭಾವವನ್ನು ಉದ್ದೀಪಿಸುವ ಸಂಗ್ರಹಾಲಯಗಳನ್ನು (ಜಲಿಯನ್ ವಾಲಾಬಾಗ್, ಬಾಬ್ರಿ ಮಸೀದಿ, ಗೋಧ್ರಾ ಇತ್ಯಾದಿಗಳ ಸಂಗ್ರಹಾಲಯಗಳು) ಸ್ಥಾಪಿಸುವುದರ ಮೂಲಕ ಮಾತ್ರವೇ?

ಇಂತಹ ತಪ್ಪೊಪ್ಪಿಗೆ ಇಲ್ಲೇ ಹತ್ತಿರದಲ್ಲಿ ನಮ್ಮ ವೆಂಕಟಪ್ಪ ಗ್ಯಾಲರಿಯಿಂದ ಹೊರಬರುವ ಕಲಾಭಿಮಾನಿಗಳಲ್ಲೂ ಉದ್ದೀಪಗೊಂಡಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ. 'ಆಯೆ'್ಕ, 'ನಿರಾಕರಣೆ' ಮುಂತಾದುವು ಏಕತ್ರ (ಕಲಾ) ಇತಿಹಾಸ ನಿರ್ಮಾಣದ ಹೀನಸುಳಿಗಳು. ಬದಲಿಗೆ ಐವತ್ತು- ನೂರು ಕರ್ನಾಟಕದ ಕಲಾವಿದರ ತಲಾ ಅರ್ಧ ಡಜನ್ ಕೃತಿಗಳು ವೆಂಕಟಪ್ಪ-ಹೆಬ್ಬಾರರ ಕಲಾಮನೆಗಳನ್ನು ಆವರಿಸಿಕೊಂಡರೆ ಅದು ಕೇವಲ ಸಾಮಾಜಿಕ ನ್ಯಾಯವಾಗುವುದಿಲ್ಲ, ಅದು ಅಂತಃಸ್ಥ ಗುಲಾಮಗಿರಿಯಿಂದ ಬಿಡುಗಡೆ ಹೊಂದುವ ಹೊಸ ಹೆಜ್ಜೆಗಳೂ ಆಗಬಹುದು. ವ್ಯಕ್ತಿಗಳನ್ನು ಗುಲಾಮರನ್ನಾಗಿಸಿ ಒಬ್ಬೊಬ್ಬ ವ್ಯಕ್ತಿಗಳನ್ನು ಒಂದೊಂದು ಬಂದೂಕಿನ ಬದಲಿಗೆ, ಮೂರು ಕಾಸಿನ ಬದಲಿಗೆ ಮಾರಾಟ ಮಾಡಿದ ದಾಖಲೆಗಳನ್ನು ಪ್ರದರ್ಶಿಸುವುದು ಏನನ್ನು ಸಾರುತ್ತದೆ (ಬ್ರಿಸ್ಟಲ್ ಸಂಗ್ರಹಾಲಯದಲ್ಲಿ ಇಂತಹ ಪಟ್ಟಿಯಿದೆ)? ಈ ಶೋಧನೆಯಲ್ಲೊಂದು ವಿಶೇಷವಿದೆ: ಅಲ್ಲಿ ಪ್ರದರ್ಶಿತವಾಗುವ ದಾಖಲೆಗಳೆಲ್ಲ (ಒಂದು ಬಂದೂಕಿನ ಬದಲಿಗೆ ಒಬ್ಬ ಗುಲಾಮ ಹೆಂಗಸು ಅಥವ ಕೆ ವೆಂಕಟಪ್ಪನವರು ಪೆನ್ಸಿಲ್ ಬಳಸಿ ಬರೆದಿರುವ ದಿನಚರಿಯ ಪುಟಗಳು) 'ಆಯ್ಕೆ'ಯ ಶೂಲದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಡೆರಿಡನ ನಿರ್ವಚನ ವಾದದ ಪ್ರಕಾರ ವೆಂಕಟಪ್ಪನವರ ಒಂದು ದಿನಚರಿಯ ಪುಟದ ಆಯ್ಕೆ ಎಂಬುದು ಆರ್ ಎಂ ಹಡಪದ, ರುಮಾಲೆ ಚೆನ್ನಬಸಪ್ಪ, ಕೆ ಟಿ ಶಿವಪ್ರಸಾದ್ ಅಂತಹವರ ಒಟ್ಟಾರೆ ಜೀವನಸಾಧನೆಯ ಕೃತಿಗಳ ನಿರಾಕರಣೆಯೂ ಹೌದು!

ಸಂಗ್ರಹಾಲಯಗಳು ಸಮಕಾಲೀನ ಗುಲಾಮಗಿರಿಯ ಸಂಕೇತವಾಗಿರುವುದಕ್ಕೆ ಕಾರಣ ಸಂಗ್ರಹಾಲಯ ಇತಿಹಾಸದ ವಂಶವಾಹಿನಿ ಗುಣವೇ. ಸಂಗ್ರಹಾಲಯವೆಂಬುದು ವಸಾಹತೀಕರಣದ ಪ್ರಕ್ರಿಯೆ. ಮೊದಲಿಗೆ ಅವುಗಳು ಅರಮನೆ-ಗುರುಮನೆಗಳಾಗಿದ್ದು, ಕೆಲವರಿಂದ ಕೆಲವರಿಗೆ ಮಾತ್ರ ಪ್ರದರ್ಶಿತವಾಗುತ್ತಿದ್ದ ಕೆಲವೇ ಕೃತಿಗಳ ಪೂರ್ವೇತಿಹಾಸ ಸಂಗ್ರಹಾಲಯದ ಇತಿಹಾಸಕ್ಕಿದೆ. ಕರೋಲ್ ಡಂಕನ್ ಎಂಬ ಕಲಾ ವಿಮರ್ಶಕಿಯ ಪ್ರಕಾರ ಸಂಗ್ರಹಾಲಯವನ್ನು ನೋಡಿಬರುವ ಕ್ರಮವು ಒಂದು 'ಆಚರಣೆ' ಇದ್ದಂತೆ. ರಾಜರನ್ನು ಶ್ರೀಸಾಮಾನ್ಯನು ಭೇಟಿ ಮಾಡುವಾಗ ಅರಮನೆಯಲ್ಲಿ ಹೇಗೆ ನಿರ್ದಿಷ್ಟವಾಗಿ ವಸ್ತ್ರಸಜ್ಜಿತನಾಗಿ, ಸೂತ್ರಬದ್ಧವಾಗಿ ನಡೆದಾಡಬೇಕಿತ್ತೋ ಅಂತಹುದೇ 'ಆಚರಣೆ'ಯನ್ನು ಸಂಗ್ರಹಾಲಯಗಳಲ್ಲಿ ನಾವು ಮಾಡುತ್ತೇವೆ. ಕೃತಿಗಳನ್ನು ಮುಟ್ಟುವಂತಿಲ್ಲ, ಮುಟ್ಟಿದರೆ ಅಲಾರಂ ಗಂಟೆ ಬಡಿದುಕೊಳ್ಳುತ್ತದೆ, ಸಂಕೀರ್ಣವಾದ ಕಟ್ಟಡ ಸಂಕಿರಣದಲ್ಲಿ ಕೃತಿವೀಕ್ಷಣೆ ಮಾಡುವಾಗ 'ಮ್ಯೂಸಿಯಂ ಫಟೀಗ್' ಅನಿವಾರ್ಯ. ಒಂದಷ್ಟು ಕೃತಿಗಳನ್ನು ನೋಡಿದ ಮೇಲೆ, ಮಿಕ್ಕಿದ್ದೆಲ್ಲವೂ ಅಗೋಚರವಾಗುತ್ತದೆ ಎಂಬುದು ಇದರ ಫಟಿಂಗ ಅರ್ಥ. ಇವೆಲ್ಲವನ್ನೂ ಮತ್ತೂ ಇಂತಹವನ್ನು ಆಚರಣೆ (ರಿಚ್ಯುಯಲ್) ಎನ್ನುವುದು.

ಸಂಗ್ರಹಾಲಯಗಳನ್ನು ಏಕೆ ನಾವು ನಿರ್ದಿಷ್ಟ ರೀತಿಯ ಆಚರಣೆಯಲ್ಲಿ ವೀಕ್ಷಿಸುತ್ತೇವೆ ಎಂದು ಕರೋಲ್ ಡಂಕನ್ ವಿವರಿಸುವ ಜಾಣತನದ ಪ್ರಶ್ನೋತ್ತರದ ಹಿಂದೆ ಅದು ದಷ್ಟಿ ಹಾಗೂ ಕಣ್ಣನ್ನು ಗುಲಾಮಗಿರಿಗೆ ಒಳಪಡಿಸುವ ಪ್ರಶ್ನೆಯನ್ನು ತಡೆಹಿಡಿವ ಹುನ್ನಾರವಿದೆ. ಸಂಗ್ರಹಾಲಯವು ಕಲಾಕೃತಿಗಳನ್ನು, ಜ್ಞಾನಕೇಂದ್ರೀಯ ವಸ್ತುಗಳನ್ನು ನಮ್ಮ ಗ್ರಹಿಕೆಗೆ ಬಿಡಿಸಿಡುವುದಿಲ್ಲ. ಯಾವುದನ್ನು ನೋಡಬೇಕು ಎಂದು ಸಂಗ್ರಹಾಲಯವು ನಮ್ಮ ಪರವಾಗಿ ಆಯ್ಕೆ ಮಾಡುವುದೂ ಒಂದು ಜಾಹೀರಾತು ಇದ್ದಂತೆ. ಯಾವುದನ್ನು ನೋಡಬೇಕು ಎಂಬುದರ ಒಳಗೇ ಹೇಗೆ ನೋಡಬೇಕು ಎಂಬುದೂ ನಿರ್ದಿಷ್ಟವಾಗಿ ಬಿಟ್ಟಿರುತ್ತದೆ ಎಂಬ ಅಂಶವೇ ಸಮಕಾಲೀನ ದೃಶ್ಯ ಸಂಸ್ಕೃತಿಯ ಗುಲಾಮಗಿರಿಯ ಒಂದು ಅಧ್ಯಾಯವಾಗಿದೆ. 'ಟ್ವೆಲ್ವ್ ಇಯರ್ಸ್ ಎ ಸ್ಲೇವ್' ಸಿನಿಮಾ ಗುಲಾಮಗಿರಿಯ ಕಥೆಯೊಂದನ್ನು ತಪ್ಪಿತಸ್ಥ, ಅಪಾಲಜೆಟಿಕ್ ಧ್ವನಿಯಲ್ಲಿ ಪ್ರಸ್ತುತಪಡಿಸಿ, ಬಹುಮಾನಕ್ಕೆ ಭಾಜನವಾದುದರ ಹಿಂದೆಯೇ, ಅದಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸುತ್ತಲೇ ಸ್ಟೀವ್ ಮ್ಯಾಕ್ವಿನ್ ಹೇಳಿದ್ದು- 'ಇನ್ನೂ ಜೀವಂತವಿರುವ ಎರಡು ಕೋಟಿ ಗುಲಾಮರಿಗಾಗಿ ಈ ಆಸ್ಕರ್' ಎಂದು. ಈ ಹೇಳಿಕೆಯ ಹಿಂದೆ ಸಂಗ್ರಹಾಲಯಗಳ ದೃಶ್ಯ-ಗುಲಾಮಗಿರಿಯ ಸೂಚನೆ ಇದೆ. 

ಗುಲಾಮಗಿರಿ ಎಂಬುದು ಭವಿಷ್ಯತ್ ಕಾಲದಿಂದ ಬರುವ ಒತ್ತಡಗಳಿಗೆ ಈಗಲೇ ತಲೆ ಬಾಗಿಬಿಡುವ ಕ್ರಿಯೆ. ಅದರಿಂದ ಬಿಡುಗಡೆ ಎಂದರೆ ಕ್ಷೀಣ ಪ್ರತಿರೋಧವನ್ನಾದರೂ ಅಭಿವ್ಯಕ್ತಿಸುವ ಕ್ರಮ. ಇಂತಹ ನಿರೀಕ್ಷೆಗಳಲ್ಲಿ ಫಲ ಅನಿವಾರ್ಯವೇನಲ್ಲ. ಆದ್ದರಿಂದಲೇ 'ಎಲ್ಗಿನ್ ಮಾರ್ಬಲ್ಸ್' ಎಂದೇ ಖ್ಯಾತವಾಗಿರುವ ಗ್ರೀಕ್ ಶಿಲ್ಪಗಳ ಕಥೆ ಗಮನಿಸಿ. ಬ್ರಿಟಿಷ್ ವಸಾಹತುಶಾಹಿಗಳು ಗ್ರೀಕ್ ಶಿಲ್ಪಗಳನ್ನು ಗ್ರೀಸಿನಿಂದ ಸಾಗಿಸಿ ವಿಕ್ಟೋರಿಯ ಆಲ್ಬರ್ಟ್ ಸಂಗ್ರಹಾಲಯದಲ್ಲಿರಿಸಿದ್ದರು. ಅದನ್ನು ಹಿಂಪಡೆಯಲು (ನಮ್ಮ ಕೊಹಿನೂರ್ ವಜ್ರದಂತೆ) ಶತಾಯುಗತಾಯ ಯತ್ನಿಸಿ ಹಿಂಪಡೆದದ್ದು ಈಗ ದಂತಕಥೆ. ಭಾರತೀಯ ಕೃತಿಗಳನ್ನು ಅಲ್ಲಿನ ಸಂಗ್ರಹಾಲಯಗಳಿಂದ ಹಿಂದಿರುಗಿಸುವಂತೆ ಬ್ರಿಟಿಷರನ್ನು ಒಪ್ಪಿಸಿಬಿಟ್ಟೆವು ಎಂದಿಟ್ಟುಕೊಳ್ಳಿ. ಅವುಗಳನ್ನು ಹಿಂಪಡೆದ ನಂತರ ಅವರಷ್ಟೇ ಮುತುವರ್ಜಿಯಿಂದ ಅವುಗಳನ್ನು ನಾವು ಸಂಗ್ರಹಿಸಿಡಬಲ್ಲೆವೇ ಎಂಬ ವಾಸ್ತವಿಕ ಪ್ರಶ್ನೆ ಬೃಹದಾಕಾರವಾಗಿ ಚರ್ಚೆಗೊಳಗಾಗುತ್ತದೆ. ಈ ಚರ್ಚೆಯ ಅಂತ್ಯ ಏನೇ ಇರಲಿ, ಇದು ಮತ್ತೊಂದು ಮುಖ್ಯ ಅಂಶವನ್ನು ನಿರಂತರವಾಗಿ ತಡೆದಿರಿಸುತ್ತಿರುತ್ತದೆ. ಅಲ್ಲಿಂದ ಹಿಂಪಡೆದ ನಮ್ಮ ವಸ್ತುಗಳನ್ನು ಸಂಗ್ರಹಿಸಿಡುವ ಬದಲಿಗೆ, ಅದೇ ಗುಲಾಮಗಿರಿಯ ಸ್ಮತಿಯಾಚೆಗೆ ರಕ್ಷಿಸಿಡುವ ಕ್ರಮ ಯಾವುದು? ಎಂಬ ಪ್ರಶ್ನೆಯನ್ನು ನಾವು ಕೇಳಲು ನಿರಾಕರಿಸುತ್ತೇವೆ. ಏಕೆಂದರೆ ನಮ್ಮ ಮನೋಸ್ಥಿತಿಯು ವಿಕ್ಟೋರಿಯಾಆಲ್ಬರ್ಟ್ ಸಂಗ್ರಹಾಲಯವನ್ನು ಕಟ್ಟಿದ ಕ್ಷಣದ ಮನೋಭಾವಕ್ಕಿಂತಲೂ ಭಿನ್ನವೇನಲ್ಲ. ಡಿ ಆರ್ ನಾಗರಾಜ್ ಹೇಳುವಂತೆ, 'ಮೆಕಾಲೆಯ ಮಕ್ಕಳಾಗುವ ಚಟ'ವು ನಮ್ಮ ಬೆನ್ನು ಹತ್ತಿದೆ.

ಕೊನೆಯದಾಗಿ, ಗುಲಾಮಗಿರಿ ಸಮಕಾಲೀನವಾಗಿ ಅತ್ಯಂತ ಸೂಕ್ಷ್ಮವೂ ಸೂಚ್ಯವೂ ಆಗಿದೆ, ಅದು ಇಲ್ಲವೇ ಇಲ್ಲವೆಂಬಷ್ಟು. ನಾರ್ಮನ್ ಬ್ರೈಸನ್ ಹೇಳುವ ಒಂದು ವಿಷಯವು ಇದನ್ನು ಸ್ಪಷ್ಟಗೊಳಿಸುತ್ತದೆ. ಕಲಾಪ್ರಕಾರಗಳಲ್ಲಿ ಸ್ಟಿಲ್ ಲೈಫ್ ಚಿತ್ರಗಳು (ವಸ್ತುಗಳ ಚಿತ್ರಣ), ಭಾವಚಿತ್ರಗಳಿಗಿಂತಲೂ, ನಿಸರ್ಗ ಚಿತ್ರಗಳಿಗಿಂತಲೂ ತಾವು ಕೀಳು ಎಂದು ಈಗಾಗಲೇ ಒಪ್ಪಿಕೊಂಡುಬಿಟ್ಟಿವೆ. ಈ ಮನೋಸ್ಥಿತಿಯನ್ನು ಆತ 'ಅನೊರೆಕ್ಸಿಕ್' ಎನ್ನುತ್ತಾನೆ. ಉಳಿದೆರೆಡರ ಸಮಕ್ಕೆ ಈ ಸ್ಟಿಲ್ ಲೈಫ್ ಪ್ರಕಾರವನ್ನು ಎಳೆದು ತಂದು ನಿಲ್ಲಿಸಲು ಮೊದಲಿಗೆ ನಾವು ಮಾಡಬೇಕಾದ ಕೆಲಸವೆಂದರೆ ತನ್ನ ಅಂಚಿನ ಪರಿಸ್ಥಿತಿಯನ್ನು ಮನಸಾರ ಸ್ವೀಕರಿಸುವ ಮನೋಭಾವವನ್ನು ಸ್ಥಿರ-ಚಿತ್ರಗಳಿಂದ ತೊಡೆಯುವುದು ಹೇಗೆ ಎಂಬುದು. ಸಂಗ್ರಹಾಲಯಗಳ ಹೊರಗೂ ಕಲಾಕೃತಿಗಳ ಅಸ್ತಿತ್ವ ಸಾಧ್ಯವಾಗಿಸಿದಲ್ಲಿ ಇದು ಸಾಧ್ಯ. ಆಗ ಕಲೆಯನ್ನು 'ವಸ್ತು'ಗಳ ರೂಪದಲ್ಲಿ ಸೃಷ್ಟಿಸುವುದನ್ನು ನಿಲ್ಲಿಸಿ 'ಕ್ರಿಯಾತ್ಮಕ ಕ್ರಿಯೆಗಳ' ರೂಪಗಳಲ್ಲಿ ಸೃಷ್ಟಿಸಬೇಕಾಗುತ್ತದೆ. ಸಮಕಾಲೀನ ಕಲಾಕೃತಿಗಳು ಹೀಗೆ ಸೃಷ್ಟಿಗೊಳ್ಳುತ್ತಿವೆ ಕೂಡ. ಆದರೆ ಆಧುನಿಕ ಮನೋಭಾವದ ಸಂಗ್ರಹಾಲಯಗಳಿಗೆ ಈ ಸುದ್ದಿ ಇನ್ನೂ ತಲುಪಿಲ್ಲವಷ್ಟೆ. ಸೃಜನಶೀಲ ಗುಲಾಮಗಿರಿಯು ಸ್ಟಾಕ್‌ಹೋಂ ಸಿಂಡ್ರೋಮ್‌ನಿಂದ (ಅಪಹರಣಕಾರನಿಗೇ ಸಹಾನುಭೂತಿ ವ್ಯಕ್ತಪಡಿಸಿ ಬಿಡುವುದು) ನರಳುತ್ತಿರುವ ಕಾಲಘಟ್ಟ ನಮ್ಮದು.

ವಿಶ್ವಕೋಶ: ಪರಿಷ್ಕರಣೆ ಅಗತ್ಯ

-ಅಭಿಮತ› ವಾಚಕರವಾಣಿ 
ಸೌಜನ್ಯ: ಪ್ರಜಾವಾಣಿ
‘ಕನ್ನಡ ಜಾನಪದ ವಿಶ್ವಕೋಶ: ಅಗತ್ಯ ಅನಿ­ವಾರ್ಯತೆ’ ಬಗ್ಗೆ ಡಾ. ಜಿ.ಆರ್. ತಿಪ್ಪೇಸ್ವಾಮಿ ಅವರು ಬರೆದ ಬರಹವನ್ನು (ಪ್ರ.ವಾ ಮಾ. 23, ಪುಟ 7) ಓದಿದೆ. ಅವರು ಮುಖ್ಯವಾಗಿ  ಕೆಲವು ಅಂಶಗಳನ್ನು ಗಮನಕ್ಕೆ ತಂದಿದ್ದಾರೆ. (1) ಮೂವತ್ತು ವರ್ಷಗಳ ಹಿಂದೆ ಡಾ. ಚಂದ್ರಶೇಖರ ಕಂಬಾರರ ಸಂಪಾ­ದಕತ್ವ­ದಲ್ಲಿ ತಯಾರಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟ­ವಾಗಿದ್ದ ‘ಕನ್ನಡ ಜಾನಪದ ವಿಶ್ವಕೋಶಗಳ ಸಂಪುಟ 1 ಮತ್ತು 2’ ಅನ್ನು ಜರೂರಾಗಿ ಮರು­ಮುದ್ರಿಸ­ಬೇಕು. (2) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಂಪನಾ ಅಧ್ಯಕ್ಷ­ರಾಗಿದ್ದ ಸಮಯದಲ್ಲಿ ಶುರುವಾದ ‘ಕನ್ನಡ ಜಾನಪದ ವೈದ್ಯ ವಿಶ್ವಕೋಶ’ದ ರಚನೆಯನ್ನು ಈಗಲಾದರೂ ಮುಗಿಸಿ ಪ್ರಕಟಿಸುವುದು.
(3) ಕನ್ನಡ ವಿಶ್ವವಿದ್ಯಾಲ­ಯವು ವಿವಿಧ ಜಾನಪದ ವಿಶ್ವಕೋಶಗಳನ್ನು ಪ್ರಕಟಿಸಿದೆ ಎಂಬ ಮಾತು. (4) ಇವುಗಳನ್ನು ಗಮನ­ದಲ್ಲಿಟ್ಟು­ಕೊಂಡು ಜಾನಪದ ವಿಶ್ವವಿದ್ಯಾಲಯವು ತನ್ನ ‘ಜಾನ­ಪದ ವಿಶ್ವಕೋಶ’ಗಳ ಯೋಜನೆಯನ್ನು ನಿರ್ವಹಿಸ­ತಕ್ಕದ್ದು ಎಂಬರ್ಥದ ಮಾತು.
ಅವರ ಈ ಅಭಿಪ್ರಾಯ­ಗಳಿಗೆ ನನ್ನ ಪ್ರತಿಕ್ರಿಯೆ: (1) ಚಂದ್ರಶೇಖರ ಕಂಬಾರರ ಸಂಪಾದಕತ್ವದಲ್ಲಿ ಮೂವತ್ತು ವರ್ಷಗಳ ಹಿಂದೆ ಪ್ರಕಟವಾದ ‘ಕನ್ನಡ ಜಾನಪದ ವಿಶ್ವಕೋಶ’­ಗಳನ್ನು ಹಾಗೆಯೇ ಮರು ಮುದ್ರಿಸುವುದರಲ್ಲಿ ಅರ್ಥವಿಲ್ಲ. ಅವುಗಳ ಮರುಪರಿಶೀಲನೆ ನಡೆದು ನಂತರ ಅವುಗಳು ಮರು ಮುದ್ರಣವಾಗಬೇಕು. (2) ಹಂಪನಾ ಕಾಲದಲ್ಲಿ ಶುರುವಾದ ‘ಜಾನಪದ ವೈದ್ಯ ವಿಶ್ವಕೋಶ’ದ ಕೆಲಸ ಅರ್ಧಂಬರ್ಧ ಆಗಿದ್ದರೆ ಅದೂ ಸಹ ಮರುಪರಿಶೀಲನೆ­ಯಾಗಿ, ಮತ್ತೆ ಬರೆಯ­ಬೇಕಾದದ್ದು ಇದ್ದರೆ ಬರೆದು ನಂತರ ಪ್ರಕಟವಾಗಬೇಕು. (3) ಕನ್ನಡ ವಿ.ವಿಯಲ್ಲಿ ‘ಜಾನಪದ ಕಲೆಗಳ ವಿಶ್ವಕೋಶ’ವೊಂದನ್ನು ಬಿಟ್ಟರೆ ಜಾನಪದಕ್ಕೆ ಸಂಬಂಧಿಸಿದಂತೆ ಯಾವುದೇ ಕೋಶಗಳು ಪ್ರಕಟವಾಗಿಲ್ಲ. ಧರ್ಮ, ಕರಕುಶಲಕಲೆ, ಭಾಷೆ, ವೈದ್ಯ ಮುಂತಾದ ವಿಷಯಗಳಲ್ಲಿ ವಿಶ್ವಕೋಶಗಳು ಮಾತ್ರ ಪ್ರಕಟವಾಗಿವೆ.
ಆದರೆ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಕುಲಪತಿ (1996) ಆಗಿದ್ದಾಗ ಹಮ್ಮಿಕೊಂಡು ಸಿದ್ಧವಾಗಿದ್ದ ‘ಪುರಾಣ ವಿಶ್ವಕೋಶ’ ಮತ್ತು ‘ಗ್ರಾಮದೇವತೆಗಳ ವಿಶ್ವಕೋಶ’ಗಳು ಇಷ್ಟು ವರ್ಷವಾದರೂ ಪ್ರಕಟವಾಗಲಿಲ್ಲ. ‘ಗ್ರಾಮದೇವತೆಗಳು ವಿಶ್ವಕೋಶ’ ಸಿದ್ಧತೆಗಾಗಿ ಇಪ್ಪತ್ತು ವರ್ಷಗಳ ಹಿಂದೆ ಇಡೀ ರಾಜ್ಯದಾದ್ಯಂತ ಜಾನಪದ ತಜ್ಞರು ಶ್ರಮಿಸಿ ಮಾಹಿತಿಯನ್ನು ಸಂಗ್ರಹಿಸಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದರು. ಅದರ ಸಂಪಾದನ ಕಾರ್ಯವನ್ನು ಹಿರೇಮಠ, ಬಿಳಿಮಲೆ, ಬೇವಿನಕಟ್ಟೆ, ಬೋರಲಿಂಗಯ್ಯ ಹೀಗೆ ಹಲವಾರು ವಿದ್ವಾಂಸರು ಮಾಡಿದ್ದರು. ಆದರೆ ಅವರವರ ವೈಯಕ್ತಿಕ ಜಗಳದಿಂದಾಗಿ ಇದುವರೆಗೂ ಈ ಗ್ರಾಮದೇವತೆಗಳ ಕೋಶ ಹೊರಗೆ ಬರಲೇ ಇಲ್ಲ.
ಇದಕ್ಕೆ ವಿಶ್ವವಿದ್ಯಾಲಯ ಖರ್ಚು ಮಾಡಿದ ಹಣ ಲಕ್ಷಾಂತರ ರೂಪಾಯಿಗಳು. ಹಾಗೆಯೇ ಓ.ಎಲ್‌. ನಾಗಭೂಷಣ­ಸ್ವಾಮಿ, ಮೋಹನ ಕುಂಟಾರ, ಗಾಯಕವಾಡ ಇವರ ನೇತೃತ್ವದಲ್ಲಿ ಸಿದ್ಧಗೊಂಡ ‘ಪುರಾಣ ವಿಶ್ವಕೋಶ’ ಕೂಡ  ಹೊರಬರಲೇ ಇಲ್ಲ. ಇದಕ್ಕೂ ವಿಶ್ವವಿದ್ಯಾ­ಲಯ ಖರ್ಚು ಮಾಡಿದ ಹಣ ಲಕ್ಷಾಂತರ ರೂಪಾಯಿಗಳು.
ಹೀಗೆ ಪರಿಷತ್ತು ಮತ್ತು ಕನ್ನಡ ವಿಶ್ವವಿದ್ಯಾಲಯಗಳ ವಿಶ್ವಕೋಶಗಳಿಗೆ ಬಂದ ಗತಿಯೇ ಜಾನಪದ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೋಶಗಳಿಗೂ ಬರುವುದಿಲ್ಲ ಎಂಬುದು ಏನು ಗ್ಯಾರಂಟಿ? ಸರ್ಕಾರದ ಹಣ ಮಾತ್ರ ಹೀಗೆ ದಂಡದ ಸಂಬಳಕ್ಕೆ, ಕಾಲಹರಣಕ್ಕೆ ಎಲ್ಲಾ ಕಡೆ ದುರ್ವ್ಯಯವಾಗುತ್ತಿರುವುದು ವಿಷಾದನೀಯ.
–ಕನ್ನಡ ವಿಶ್ವವಿದ್ಯಾಲಯದ ಗ್ರಾಮದೇವತೆಗಳ ವಿಶ್ವಕೋಶದ ಸಿದ್ಧತೆಯಲ್ಲಿ ಮಾಹಿತಿ ನೀಡಿದ
ಒಬ್ಬ ಮಾಹಿತಿದಾರ

ಸೋಮವಾರ, ಮಾರ್ಚ್ 24, 2014

ಕನ್ನಡ ಜಾನಪದ ವಿಶ್ವಕೋಶ ಅಗತ್ಯ– ಅನಿವಾರ್ಯತೆ

ಡಾ. ಜಿ. ಆರ್. ತಿಪ್ಪೇಸ್ವಾಮಿ


ಸೌಜನ್ಯ: ಪ್ರಜಾವಾಣಿ
  ಸಮಾಜದಲ್ಲಿ ಬದಲಾವಣೆಯಾದಂತೆ ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ, ಭಾಷಾ ಕ್ಷೇತ್ರಗಳಲ್ಲೂ ಬದಲಾವಣೆ ಸಹಜ. ಹಾಗಾಗಿ, ಅವುಗಳ ವ್ಯಾಪ್ತಿಯೂ ಹಿರಿದಾಯಿತು. ಹೀಗಿದ್ದಾಗ ಒಂದೊಂದು ವಿಷಯಕ್ಕೂ ಒಂದೊಂದು ಕೋಶದ ಅಗತ್ಯತೆ ಕಾಣಿಸಿತು. ಎಷ್ಟೆಲ್ಲ ಕೋಶಗಳು ಬಂದಿದ್ದರೂ ಕನ್ನಡದಲ್ಲಿ ವಿಶ್ವಕೋಶಗಳ ಅವಶ್ಯಕತೆ ಕಾಣಿಸಿತು. ಇದನ್ನ ಮನಗಂಡೇ ಕನ್ನಡ ಸಾಹಿತ್ಯ ಪರಿಷತ್ತು ೭೯ರಲ್ಲಿ ‘ಕನ್ನಡ ಜಾನಪದ ವಿಶ್ವಕೋಶ’ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿತ್ತು. ಕರ್ನಾಟಕ ಏಕೀಕರಣವಾಗಿ ೨೫ ವರ್ಷಗಳು ಸಂದ ಸಂದರ್ಭ ಅದು.
ಕನ್ನಡ ಎಂ.ಎ. ಪದವೀಧರರು ಜಾನಪದವನ್ನು ವಿಶೇಷವಾಗಿ ಅಭ್ಯಾಸ ಮಾಡಿದವರು- ಅತ್ಯಂತ ಕಡಿಮೆ ಸಂಬಳದಲ್ಲಿ ಚಂದ್ರಶೇಖರ ಕಂಬಾರರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದರು.
ನಾಡಿನ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದವನ್ನು ಶೈಕ್ಷಣಿಕ ಶಿಸ್ತಾಗಿ ಬೋಧಿಸಲು ಆರಂಭಿಸಿದ್ದ ಕಾಲ ಅದು. ಅದರ ಪ್ರಭಾವದಿಂದಾಗಿ ಶಿಷ್ಟ ಸಾಹಿತ್ಯದಲ್ಲಿ ಜಾನಪದವನ್ನು ಶೋಧಿಸುವ ತವಕದಲ್ಲಿ ವಿಶ್ವವಿದ್ಯಾನಿಲಯಗಳ ವಿದ್ವಾಂಸರ ಗಮನ ಹರಿದಿತ್ತು. ಹಾಗಾಗಿ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ವಡ್ಡಾರಾಧನೆ, ಪಂಚತಂತ್ರ, ಈಸೋಪನ ಕಥೆಗಳು, ಸ್ತ್ರೀನೀತಿ ಕಥೆಗಳು, ಪಂಚವಿಂಶತಿ ಕಥೆಗಳು, ನೋಂಪಿಯ ಕಥೆಗಳು, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ರಾಜಾವಳಿಕಥಾಸಾರ - ಇವೆಲ್ಲವೂ ಇಲ್ಲಿ ಅಧ್ಯಯನದ ವಸ್ತುವಾದವು, ಆಕರಗಳಾದವು. ಹಾಗಾಗಿ ಕರ್ನಾಟಕ ಜಾನಪದದ ಶ್ರೀಮಂತಿಕೆಯನ್ನು ಕನ್ನಡಿಗರ ಸಾಂಸ್ಕೃತಿಕ ಮಹತ್ವವನ್ನು ಈ ಜಾನಪದ ವಿಶ್ವಕೋಶ ಸಾರುವಂತಾಯಿತು. ಆದ್ದರಿಂದ ಇದಕ್ಕೆ ಸಾಹಿತ್ಯಕ ಮಹತ್ವಕ್ಕಿಂತಲೂ
ಸಾಂಸ್ಕೃತಿಕ ಮಹತ್ವವೇ ಹೆಚ್ಚಾಯಿತು.

ಜಾತ್ಯತೀತ ರಾಷ್ಟ್ರವೆನಿಸಿದ್ದರೂ ಭಾರತದಲ್ಲಿ ಜಾತಿಗಳು ಪ್ರಧಾನ ಪಾತ್ರ ವಹಿಸುತ್ತವೆ. ನಮ್ಮ ಸಂಸ್ಕೃತಿ ಯಾವುದು ಎಂಬುದರ ಹುಡುಕಾಟಕ್ಕೆ ಮೊದಲು ಹಚ್ಚಿದ್ದೆ ವಸಾಹತುಶಾಹಿ ಆಳ್ವಿಕೆ. ಅಂಥ ಸಂದರ್ಭವನ್ನು ಗಮನಿಸಲು ಎಡ್ಗರ್‌ಥರ್ಸ್ಟನ್ ಅವರ ‘ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ’ ಸಂಪುಟಗಳನ್ನು ಆಕರಗಳಾಗಿ ಬಳಸಿಕೊಳ್ಳಲಾಯಿತು. ದಮನಿತ, ನಿರ್ಲಕ್ಷಿತ ಜೀವನ ವಿವರಗಳನ್ನ ಶೋಧಿಸುವ ಸಲುವಾಗಿ ಜಾನಪದ ಆಕರಗಳತ್ತ ಸಂಶೋಧಕರ ಗಮನಹರಿಯಿತು. ಹಾಗಾಗಿ ಪುರಾಣ ವ್ಯಕ್ತಿಗಳು, ಅಂದಿನ ಸಂದರ್ಭಗಳು, ಆ ಸಂಬಂಧದ ಆಚರಣೆಗಳು ಹಾಗೂ ಪುರಾಣ ಕಲ್ಪನೆಗಳನ್ನು ಅರ್ಥೈಸುವಂಥ ಬರಹಗಳೂ ಈ ಕೋಶದಲ್ಲಿ ಸೇರ್ಪಡೆಗೊಂಡವು. 
ಇಂಥ ಬರಹಗಳಿಗೆ ವೆಟ್ಟಮ್‌ಮಣಿಯವರ ‘ಪುರಾಣಿಕ್ ಎನ್‌ಸೈಕ್ಲೋಪೀಡಿಯಾ ಮಾದರಿಯಾಯಿತು. ಜಾನಪದ ವಿಷಯಗಳು ನಾನಾ ನಿಟ್ಟಿನಿಂದ ಸಂಗ್ರಹಗೊಂಡು ಅದರ ಅಧಿಕೃತತೆಗಾಗಿ ಕ್ಷೇತ್ರಕಾರ್ಯವೂ ಅನಿವಾರ್ಯವಾಗಿ ಲೇಖನಗಳು ಗಟ್ಟಿಗೊಂಡಿರುವುದನ್ನು ಗಮನಿಸಬಹುದು. ಇದರ ಸ್ವರೂಪವನ್ನು ಗಮನಿಸಿದ ಎ.ಕೆ.ರಾಮಾನುಜನ್ ಅವರು ‘ಭಾರತೀಯ ಭಾಷೆಗಳಲ್ಲಿಯೇ ಇದು ಪ್ರಥಮ, ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ದಾಖಲೆ ಎಂದರು.
ಪರಿಷತ್ತು ಇನ್ನೊಂದು ಕೋಶದ ಅಗತ್ಯವನ್ನು ಆ ದಿನಗಳಲ್ಲಿ ಕಂಡುಕೊಂಡಿತು. ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಮುಖ್ಯವೆನಿಸುವ ‘ಕರ್ನಾಟಕ ಜನಪದ ವೈದ್ಯಕೋಶ’ ಬೃಹತ್ ಯೋಜನೆಯ ಸಿದ್ಧತೆಯಲ್ಲೂ ಅದು ತೊಡಗಿತು. ರಾಜ್ಯದ ಯಾವ ವಿಶ್ವವಿದ್ಯಾನಿಲಯವಾಗಲಿ ರೂಪಿಸಿ ಕಾರ್ಯಗತಗೊಳಿಸಲು ಆಲೋಚಿಸಿರದ ವಿಶಿಷ್ಟ ಯೋಜನೆ ಇದು.
ಇದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಕೆಲವೇ ಕೆಲವು ಲೇಖನಗಳು, ಪುಸ್ತಕಗಳು ಪ್ರಕಟಗೊಂಡಿದ್ದವಾದರೂ ಈ ಕ್ಷೇತ್ರದಲ್ಲಿ ಆಗಿರುವ ಕೆಲಸ ತೀರಾ ಕಡಿಮೆ. ಈ ಕೊರತೆಯನ್ನು ತುಂಬುವುದಕ್ಕಾಗಿ ಜನಪದ ವೈದ್ಯಕೋಶದ ನಿರ್ಮಾಣ ಒಂದು ಆತ್ಮವಿಶ್ವಾಸದ ಪ್ರಯತ್ನವಾಯಿತು. ಇಂಥ ವಿಶಿಷ್ಟ ಯೋಜನೆಗೆ ಕ್ಷೇತ್ರಕಾರ್ಯ ಸಹಾಯಕರನ್ನು ತರಬೇತುಗೊಳಿಸುವ ಉದ್ದೇಶದಿಂದ ಜಾನಪದ ತಜ್ಞರಿಂದ ಮತ್ತು ವೈದ್ಯರಿಂದ ಜನಪದ ವೈದ್ಯದ ಬಗೆಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಈ ಉಪನ್ಯಾಸಗಳಿಂದ ಮಾರ್ಗದರ್ಶನ ಪಡೆದವರು ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಜನಪದ ವೈದ್ಯದ ಬಗೆಗೆ ಸಾಧ್ಯವಾದಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಪರಿಷತ್ತಿಗೆ ಕಳುಹಿಸುವುದರ ಮೂಲಕ ಸೇವೆ ಸಲ್ಲಿಸಿದ್ದಾರೆ. ಈ ರೀತಿ ಸಂಗ್ರಹಗೊಂಡ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತರಲು ಪರಿಷತ್ತು ಸಿದ್ಧತೆಯನ್ನೂ ನಡೆಸಿತ್ತು.
ಈ ಪ್ರಯತ್ನದಲ್ಲಿರುವಾಗಲೇ ಜನಪದ ವೈದ್ಯಕೋಶದ ಕೆಲಸ ವೈದ್ಯರು ಮಾಡುವಂಥದ್ದು ಎಂಬ ಅಭಿಪ್ರಾಯ ಮೂಡಿತು. ಆಗ ಪರಿಷತ್ತು ‘ಆಯುರ್ವೇದಕ್ಕೂ ಜನಪದ ವೈದ್ಯಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ಈ ಕೋಶದ ಉದ್ದೇಶವೇ ಸಾಂಸ್ಕೃತಿಕ ದಾಖಲೆ ಸ್ಥಾಪಿಸುವಂಥದ್ದು ಎಂದು ಸ್ಪಷ್ಟೀಕರಣ ನೀಡಿತಾದರೂ ಕ್ಷೇತ್ರಕಾರ್ಯ ಸ್ಥಗಿತಗೊಂಡಿತು. ಈವರೆಗೆ ಸಂಗ್ರಹ ಮಾಡಿರುವ ಮಾಹಿತಿಯನ್ನು ಪುಸ್ತಕ ರೂಪದಲ್ಲಾದರೂ ಹೊರತಂದು ಅದನ್ನು ಒಂದು ಸಾಂಸ್ಕೃತಿಕ ದಾಖಲೆಯಾಗಿಸಬೇಕೆಂಬ ಉದ್ದೇಶವನ್ನು ಈಡೇರಿಸುವ ಹಂಬಲ ಪರಿಷತ್ತಿಗಿತ್ತು.
ಸಂಪಾದಕರ ಆದೇಶದಂತೆ ಈ ಯೋಜನೆಗೆ ನಿಯೋಜನೆಗೊಂಡಿದ್ದ ಸಂಶೋಧಕರು ಹಲವಾರು ವಿಷಯಗಳನ್ನು ಅಸಂಖ್ಯಾತ ಕಾರ್ಡುಗಳಲ್ಲಿ ಬರೆದದ್ದೂ ಆಯಿತು. ಅದರ ಫಲವಾಗಿ ರೂಪುಗೊಂಡ ಈ ಸಮೃದ್ಧವಾದ ಮಾಹಿತಿ ಪರಿಷತ್ತಿನ ಕಪಾಟುಗಳನ್ನು ಸೇರಿದ್ದೂ ಆಯಿತು. ಆದರೆ ಈವರೆವಿಗೂ ಆ ಮಾಹಿತಿ ಹೊರಬರಲೇ ಇಲ್ಲ!
ಹಂಪನಾ ಅವರು ಹಮ್ಮಿಕೊಂಡಿದ್ದ ಈ ಬೃಹತ್ ಯೋಜನೆ ಈವರೆಗೂ ಕಾರ್ಯರೂಪಕ್ಕೆ ಬಾರದೆ ಇರುವುದು ಆಶ್ಚರ್ಯದ ಸಂಗತಿ.
ಇದರ ನಂತರ ಮದ್ರಾಸ್ ಏಷಿಯನ್ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಂಡ ಜಾನಪದ ವಿಶ್ವಕೋಶದ ಸಾಧನೆ ಮತ್ತೊಂದು ಮೈಲಿಗಲ್ಲು. ಅಲ್ಲಿ ಇಂಗ್ಲಿಷ್ ಒಳಗೊಂಡಂತೆ ಮಲಯಾಳಂ, ತೆಲುಗು, ಕನ್ನಡ ಭಾಷೆಗಳಿಗೆ ಸಂಬಂಧಿಸಿದ ದ್ರಾವಿಡ ಭಾಷಾಕೋಶವನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲಾಗುತ್ತಿತ್ತು. ದ್ರಾವಿಡ ಭಾಷೆಗಳ ಜಾನಪದ ಕೋಶವನ್ನು ಇದರೊಂದಿಗೆ ಕೈಗೆತ್ತಿಕೊಳ್ಳಬೇಕು ಎಂಬ ನಿರ್ಧಾರವನ್ನು ಪ್ರಕಟಿಸಿತು. ಈ ಎರಡೂ ಪ್ರಧಾನವಾದ ಯೋಜನೆಗಳೇ. ಆ ಸಂಸ್ಥೆಗೆ ಜಪಾನ್ ಸರ್ಕಾರದ ಸಹಯೋಗವಿತ್ತು.

ನಾಲ್ಕು ಭಾಷೆಗಳ ಅರ್ಥಕೋಶ, ಜಾನಪದ ಕೋಶವನ್ನು ಮಾಡಲು ನಾಲ್ಕು ಸರ್ಕಾರಗಳನ್ನು (ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು) ಕೇಳಿದಾಗ ಅದರಲ್ಲಿ ಮೊದಲು ಸ್ಪಂದಿಸಿದ್ದು ಕರ್ನಾಟಕ ಸರ್ಕಾರ. ಈ ಎರಡೂ ಯೋಜನೆಗಳಿಗೂ ಅದು ವಾರ್ಷಿಕ ಅನುದಾನ ನೀಡಿತು. ಹಾಗಾಗಿ ಅಲ್ಲಿ ಕನ್ನಡ ಜಾನಪದ ಕೋಶದ ಇಂಗ್ಲಿಷ್ ಅವತರಣಿಕೆಯ ಕೆಲಸ ಶುರುವಾಯಿತು. ಇದನ್ನು ಶುರು ಮಾಡಿದವರು ಮರಿಯಪ್ಪ ಭಟ್ಟರ ನಂತರ ಬಂದ ಶಂಕರ ಕೆದಿಲಾಯ ಅವರು. ಆ ಎರಡೂ ಯೋಜನೆಗಳನ್ನು ಆ ಸಂಸ್ಥೆಯಲ್ಲಿ ನಿರ್ವಹಿಸುತ್ತಿದ್ದರು. ಆಗ ಇಂಗ್ಲಿಷ್ ಅವತರಣಿಕೆ ಜಾನಪದ ಕೋಶ ಪ್ರತ್ಯೇಕವಾಗಿ ಆಗಬೇಕೆಂದೂ ಎರಡನ್ನೂ ಅವರೊಬ್ಬರೇ ನಿಭಾಯಿಸುವುದು ಕಷ್ಟವೆಂಬ ಅಭಿಪ್ರಾಯ ಮೂಡಿತು.
೧೯೮೫ರಲ್ಲಿ ಏಷಿಯನ್ ಅಧ್ಯಯನ ಸಂಸ್ಥೆಗೆ  ಈ ಕಾರ್ಯಕ್ಕಾಗಿ ಕೃಷ್ಣಮೂರ್ತಿ ಹನೂರು ಬರುತ್ತಾರೆ. ಆದರೆ ಅಲ್ಲಿ ತಮಿಳು, ಮಲಯಾಳಂ, ತೆಲುಗು ಕೋಶಗಳ ಕೆಲಸ ಶುರುವಾಗಿರಲಿಲ್ಲ. ವಿದ್ವಾಂಸರೂ ಬರಲಿಲ್ಲ. ಸರ್ಕಾರವೂ ನೆರವು ನೀಡಲಿಲ್ಲವಂತೆ. ಹಾಗಾಗಿ ಕನ್ನಡ ಜಾನಪದ ಕೋಶದ ಇಂಗ್ಲಿಷ್ ಅವತರಣಿಕೆಯ ಕೆಲಸ ಆರಂಭವಾಯಿತು. ಕೃಷ್ಣಮೂರ್ತಿ ಹನೂರು ಈ ಕೋಶದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
ಈ ಕೋಶದಲ್ಲಿ ಸಮಗ್ರ ಕನ್ನಡ ಜಾನಪದದ ಪರಿಚಯವಿರುವ ಹಲವಾರು ಲೇಖನಗಳು ಸೇರ್ಪಡೆಗೊಂಡವು. ಎಚ್.ಎಲ್.ನಾಗೇಗೌಡರೂ ಒಂದು ಕೋಶವನ್ನು ಹೊರತಂದರು. ನಂತರ ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ವಿಷಯ ವಿಶ್ವಕೋಶ ಜಾನಪದ ಸಂಪುಟವನ್ನು ಬಿಡುಗಡೆ ಮಾಡಿತು. ಕನ್ನಡ ವಿಶ್ವವಿದ್ಯಾಲಯದಿಂದಲೂ ವಿವಿಧ ರೀತಿಯ ಜಾನಪದ ಕೋಶಗಳು ಹೊರಬಂದವು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಬಂದ ವಿಶ್ವಕೋಶಗಳಲ್ಲಿ ಇಲ್ಲಿದ್ದಂತಹ ಜಾನಪದ ವಿದ್ವಾಂಸರು ಒಂದಲ್ಲಾ ಒಂದು ವಿಧದಲ್ಲಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಜಾನಪದ ವಿಶ್ವವಿದ್ಯಾನಿಲಯದಿಂದ ಹತ್ತು ಸಂಪುಟಗಳಲ್ಲಿ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

ಇದೇ ಮಾರ್ಚ್ ೧೭ರಂದು ಉದ್ಘಾಟನೆಗೊಂಡಿರುವ ‘ಕನ್ನಡ ಜಾನಪದ ವಿಶ್ವಕೋಶ ಯೋಜನೆ’ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಬಿಡುಗಡೆಗೊಂಡಿರುವ ‘ಜಾನಪದ ವಿಶ್ವಕೋಶ’ಗಳಿಗಿಂತ ಭಿನ್ನವಾಗಿರುತ್ತದೆಂದು ಜಾನಪದ ಆಸಕ್ತರು ನಿರೀಕ್ಷಿಸಬಹುದೆ? ಇಷ್ಟಾದರೂ ಈ ಪರಿಯ ಕೆಲಸಗಳು ಮೇಲಿಂದ ಮೇಲೆ ನಡೆಯಬೇಕು ಎನ್ನುವ ಒತ್ತಾಸೆಗಳೇನೊ ಕೇಳಿಬರುತ್ತಿವೆ. ಆದರೆ ಕೆಲಸ ಆದ ಮೇಲೆ ಅವನ್ನು ಸಂಬಂಧಿಸಿದವರೇ ಗಮನಿಸುವುದಿಲ್ಲ. ಪಠ್ಯ ವಿಷಯಗಳಲ್ಲೂ ಅವು ಸೇರ್ಪಡೆಯಾಗುವುದಿಲ್ಲ. ಇದು ನಮ್ಮ ಶೈಕ್ಷಣಿಕ ವಲಯದ ದುರಂತ! ಈ ಕೋಶಗಳು ನಿರೀಕ್ಷಿಸಿದ ಮಟ್ಟದಲ್ಲಿ ವಿದ್ಯಾರ್ಥಿಗಳ ಕೈಗೂ ಎಟಕುವುದಿಲ್ಲ. ಸಾಂಸ್ಥಿಕವಾಗಿ ಮಾಡಿದ ಕೆಲಸಗಳೇ ಹೀಗಾದರೆ ಗತಿಯೇನು?
ಇಂಥ ಜಾನಪದ ವಿಶ್ವಕೋಶಗಳು ಪುನರ್‌ಮುದ್ರಣಗೊಳ್ಳುವ ವ್ಯವಸ್ಥೆಯೂ ಆಗಿಲ್ಲ. ಇನ್ನೂ ಹತ್ತು ವರ್ಷ ಕಳೆದರೆ ಇವು ಬರೀ ಪಳೆಯುಳಿಕೆಗಳಾಗಿ ಉಳಿಯಬಹುದು ಅಷ್ಟೆ. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರು  ನನೆಗುದಿಗೆ ಬಿದ್ದಿರುವ ಕನ್ನಡ ಜಾನಪದ ವೈದ್ಯಕೋಶ ಯೋಜನೆಯನ್ನು ಕೈಗೆತ್ತಿಕೊಂಡು ಪ್ರಕಟಿಸುವ ವ್ಯವಸ್ಥೆ ಮಾಡಬೇಕು. ಕನ್ನಡ ಜಾನಪದ ಕೋಶ ಯೋಜನೆಯ ಎರಡು ಸಂಪುಟಗಳೊಂದಿಗೆ ಇತರ ಕೋಶಗಳನ್ನು ಪುನರ್ ಮುದ್ರಿಸುವ ವ್ಯವಸ್ಥೆ ಜರೂರಾಗಿ ನಡೆಯಬೇಕು. ಅದರ ಮೂಲಕ ಜಾನಪದ ವಿಶ್ವವಿದ್ಯಾಲಯಕ್ಕೆ ಇದು ಮಾದರಿಯಾಗಬೇಕು.

ಬುಧವಾರ, ಮಾರ್ಚ್ 19, 2014

ಪದಗಳ ತಿರುಳು ಮತ್ತು ಚಹರೆ

ಕೆ.ವಿ.ನಾರಾಯಣ
ಸೌಜನ್ಯ:ವಿಜಯ ಕರ್ನಾಟಕ
ಪದವಿರಲಿ ಎದೆಯಲಿ
ಒಂದು ಪದ ಎಂದಮೇಲೆ ಅದಕ್ಕೊಂದು ಅರ್ಥವಿರಲೇಬೇಕು. ಹೀಗಾಗಿಯೇ ಅದು, 'ಪದಾರ್ಥ ಚಿಂತಾಮಣಿ'. ಹಾಗೆ ನೋಡಿದರೆ ಒಂದಲ್ಲ, ಪದವೊಂದಕ್ಕೆ ಹಲವು ಅರ್ಥಗಳಿರುತ್ತವೆ. ಅದು ಸಮಯ-ಸಂದರ್ಭದ ಮೇಲೆ ಅವಲಂಬಿತ. ಆದರೆ, ಎಷ್ಟೋ ಸಲ ನಾವು ಅರ್ಥವನ್ನೇ ತಿಳಿದುಕೊಳ್ಳದೆ, ಬಿಡುಬೀಸಾಗಿ ಕೆಲವು ಪದಗಳನ್ನು ಬಳಸುತ್ತಿರುತ್ತೇವೆ. ಈಗ ಇಂಥ ಪಾಡು ಪಡುತ್ತಿರುವ ಪದವೆಂದರೆ 'ಅರಾಜಕತೆ' ಮತ್ತು ಅದರ ಇನ್ನಿತರ ರೂಪಗಳು. ಆದರೆ, ಹೀಗಾದಾಗ ನಮ್ಮ ತಿಳಿವಿನ ದಾರಿಗಳು ಮುಚ್ಚಿಹೋಗಿರುತ್ತವೆ. 'ಅರಾಜಕತೆ'ಯ ನೆಪದಲ್ಲಿ ಪದಗಳ ಆಳ-ಅಗಲಗಳನ್ನು ತಿಳಿಯೋಣ ಬನ್ನಿ.
**

ಪದಗಳಿಗೆ ತಿರುಳು ಇರುವಂತೆ ಒಂದು ಚಹರೆಯೂ ಇರುತ್ತದೆ. ಕೆಲವೊಮ್ಮೆ ನಾವು ಪದಗಳನ್ನು ಅವುಗಳ ತಿರುಳನ್ನು ತಿಳಿಯದೆ ಬಳಸುತ್ತಿರುತ್ತೇವೆ. ಹಾಗೆಯೇ ಅವುಗಳ ಚಹರೆಯನ್ನೂ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಅಂತಹ ಒಂದೆರಡು ನಿರೂಪಣೆಗಳನ್ನು ನಿಮ್ಮ ಮುಂದೆ ಇರಿಸುತ್ತೇನೆ.

ಒಂದು ಹಳೆಯ ಕತೆಯೊಂದಿಗೆ ಮೊದಲು ಮಾಡುತ್ತೇನೆ (ಕತೆಯಲ್ಲ; ದಿಟವಾಗಿ ನಡೆದದ್ದು. ಆದರೆ ಹೇಳುವ ರೀತಿಯಲ್ಲಿ ಇದು ಕತೆಯ ಹಾಗೆ ಇದೆ). ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದ ಹಿರಿಯ ಬರಹಗಾರ ಮಾಸ್ತಿಯವರೊಡನೆ ಮಾತಾಡುತ್ತಿದ್ದಾಗ ಇದು ನಡೆದದ್ದು. ಮಾಸ್ತಿಯವರು 'ಜೀವನ' ಪತ್ರಿಕೆಯ ಸಂಪಾದಕರಾಗಿ ಬರೆಯುತ್ತಿದ್ದ ಟಿಪ್ಪಣಿಗಳ ಹಿಂದಿದ್ದ ರಾಜಕೀಯ ನಿಲುವುಗಳ ಬಗೆಗೆ ಮಾತು ಬಂತು. ನಾನು 'ನಿಮ್ಮದು ಲಿಬರಲ್ ನಿಲುವು ಆಗಿತ್ತಲ್ಲವೆ' ಎಂದು ಕೇಳಿದೆ. ಆಗವರು 'ಲಿಬರಲ್ ಎಂದರೇನು' ಎಂದು ಕೇಳಿದರು. ನಾನು 'ಉದಾರವಾದಿ ನಿಲುವು' ಎಂದು ಹೇಳಿದೆ. ಅದಕ್ಕವರು 'ಉದಾರವಾದಿ ಎಂದರೇನು' ಎಂದು ನನ್ನನ್ನೇ ಕೇಳಿದರು. ಗೊತ್ತಿದ್ದೂ ಗೊತ್ತಿದ್ದೂ ನನ್ನನ್ನು ಈ ಹಿರಿಯರು ಪೇಚಿಗೆ ಸಿಲುಕಿಸುತ್ತಿದ್ದಾರೆಂದು ತಿಳಿದು ನಾನು 'ಉದಾರವಾದಿ ಎಂದರೆ ಲಿಬರಲ್ ಎಂಬ ಪದಕ್ಕೆ ಸಾಟಿಯಾಗಿ ಬಳಕೆಯಲ್ಲಿದೆಯಲ್ಲವೇ' ಎಂದು ಕೇಳಿದೆ. 'ಅದು ಸರಿ. ನೀವು ಆ ಪದವನ್ನು ಬಳಸುತ್ತಿದ್ದೀರಿ ಎಂದರೆ ಅದರ ತಿರುಳು ನಿಮಗೆ ಗೊತ್ತಿರಬೇಕಲ್ಲವೇ? ಹಾಗಾಗಿ ಉದಾರವಾದಿ ಎಂದರೇನು ಎಂಬುದನ್ನು ನನಗೆ ತಿಳಿಯುವಂತೆ ಹೇಳಿ' ಎಂದರು. ನಾನು ಮಾತಾಡದೆ ಕುಳಿತದ್ದನ್ನು ಕಂಡು. 'ಇಂಗ್ಲ್ಲಿಶಿನವರು ಬಳಸಿದ ಅಂತ ತಿಳಿದು ನೀವು ಒಂದು ಪದ ಕಟ್ಟಿ ಬಳಸಲು ಮೊದಲು ಮಾಡುತ್ತೀರಿ. ಅದರ ತಿರುಳು ನಿಮ್ಮ ತಿಳಿವಿಗೆ ಬಾರದಿದ್ದರೂ ಪದದ ಹಿಂದೆ ಅವಿತು ಅದನ್ನು ಬಳಸುತ್ತೀರಿ ಅಲ್ಲವೇ?' ಎಂದು ಕೆಣಕಿದರು. ನಾನು ಮಾಸ್ತಿಯವರನ್ನು ಉದಾರವಾದಿ ಎಂದು ಬಣ್ಣಿಸಿದಾಗ ಅದು ಕೇವಲ ವಿವರಣೆಯ ಮಾತು ಮಾತ್ರ ಆಗಿರಲಿಲ್ಲ. ಆ ಹೊತ್ತಿಗೆ ಉದಾರವಾದಿಯಾಗಿರುವುದು ಎಂದರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವವರ ನಿಲುವು ಎಂಬ ನನ್ನ (ಹಾಗೆಯೇ ನನ್ನಂತೆ ಹಲವರ) ತಿಳುವಳಿಕೆಯೂ ಅಲ್ಲಿ ನೆಲೆಯೂರಿತ್ತು. ಮಾಸ್ತಿಯವರು ನನ್ನ ಆ ತಿಳುವಳಿಕೆಯನ್ನು ಕೆದಕಲು ಈ ಹಾದಿಯನ್ನು ಹಿಡಿದಿದ್ದರು.


ಈ ಮಾತುಕತೆಯ ಬಳಿಕವೂ ನಾನು ಇಂಗ್ಲಿಶ್ ಪದವೊಂದಕ್ಕೆ ಕನ್ನಡದಲ್ಲಿ (ಸಂಸ್ಕತದ) ಪದವೊಂದನ್ನು ಸುಮ್ಮನೆ ಬಳಸುವುದರಲ್ಲಿ ತಪ್ಪಿದೆಯೆಂಬ ತಿಳುವಳಿಕೆಯನ್ನು ಪಡೆಯಲಿಲ್ಲ. ಆದರೆ ಪದಕ್ಕೆ ಪದವನ್ನು ಸಾಟಿ ಮಾಡಿಕೊಳ್ಳುವಾಗ ಕೇವಲ ಒಂದು ಪದವನ್ನು ಮಾತ್ರ ಕಟ್ಟಿಕೊಳ್ಳುತ್ತಿರುವುದಿಲ್ಲ; ಅದರೊಡನೆ ಆ ಪದದ ತಿರುಳಿನ ಬಗೆಗೆ ಒಂದು ನಿಲುವನ್ನೂ ಪಡೆದುಕೊಂಡಿರುತ್ತೇವೆ ಎನ್ನುವುದನ್ನು ಅರಿತುಕೊಳ್ಳಲು ಬಹಳ ವರುಶಗಳೇ ಹಿಡಿದವು. ಅಲ್ಲದೆ, ಇಂಗ್ಲಿಶಿನ ಪದಕ್ಕೆ (ಹಾಗೆ ನೋಡಿದರೆ ಯಾವುದೇ ನುಡಿಯ ಪದಕ್ಕೆ) ಒಂದು ಚರಿತ್ರೆ ಇರುತ್ತದೆ. ಆ ಚರಿತ್ರೆಯೆ ಅದರ ಚಹರೆ. ಆ ಚಹರೆಯನ್ನು ಬಿಟ್ಟುಕೊಟ್ಟು ಸುಮ್ಮನೆ ಒಂದು ಹೊಸ ಪದವನ್ನು ಕನ್ನಡದಲ್ಲಿ ಜಾರಿಗೆ ತಂದರೆ ಅದರಿಂದ ನಮ್ಮ ಚಿಂತನೆ ಮತ್ತು ಅದನ್ನು ಅನುಸರಿಸಿದ ಮಾತುಕತೆಗಳು ಹಳ್ಳ ಹಿಡಿಯುತ್ತವೆ ಎಂದು ಅರಿಯಬೇಕಾಗಿದೆ.

ಇಂತಹದೇ ಇನ್ನೊಂದು ಈಚಿನ ಪ್ರಸಂಗವನ್ನು ನೋಡೋಣ. ಕೆಲ ದಿನಗಳ ಹಿಂದೆ ಅನಾರ್ಕಿ, ಅನಾರ್ಕಿಸ್ಟ್, ಅನಾರ್ಕಿಸಿಮ್ ಎಂಬ ಪದಗಳು ಮತ್ತೆಮತ್ತೆ ಕೇಳಿಬಂದವು; ಹಾಗೆಯೇ ಬರಹಗಳಲ್ಲೂ ಕಂಡುಬಂದವು. ಅರವಿಂದ ಕೇಜ್ರಿವಾಲರು ತಮ್ಮ ಗೆಳೆಯರೊಡನೆ ಹಕ್ಕೊತ್ತಾಯ ಮಾಡಲು ದೆಹಲಿಯ ಬೀದಿಯಲ್ಲಿ ಕುಳಿತಾಗ ಅವರ ನಡೆಯನ್ನು ಒಪ್ಪದವರು ಅವರನ್ನು ಅನಾರ್ಕಿಸ್ಟ್ ಎಂದರು; ಕೇಜ್ರಿವಾಲರೇ ತಮ್ಮನ್ನು ತಾವು ಹಾಗೆಂದು ಬಣ್ಣಿಸಿಕೊಂಡದ್ದೂ ಉಂಟು. ಆಡಳಿತದ ಚುಕ್ಕಾಣಿ ಹಿಡಿದವರೇ ಹೀಗೆ ಹಕ್ಕೊತ್ತಾಯ ಮಾಡುತ್ತಾ ಕುಳಿತದ್ದು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ. ಸಂಸತ್ತಿನಲ್ಲಿ, ರಾಜ್ಯಗಳ ಮೇಲ್ಮನೆಗಳಲ್ಲಿ ಸದಸ್ಯರು ಕೂಗಾಡುವುದು, ಇತರರು ಮಾತಾಡುವಾಗ ಅಡ್ಡಿ ಮಾಡುವುದು, ಮೈಕು ಕಿತ್ತುಕೊಳ್ಳುವುದು, ಗುದ್ದುವುದು, ಬಟ್ಟೆ ಹರಿದುಕೊಳ್ಳುವುದು ಇವೆಲ್ಲವನ್ನೂ ಮಾಡಿದಾಗ ಅಂತಹ ನಡವಳಿಕೆಯನ್ನು ಬಣ್ಣಿಸುವ ವರದಿಗಾರರು 'ಅರಾಜಕತೆ' ಎಂಬ ಪದವನ್ನು ಬಿಡುಬೀಸಾಗಿ ಬಳಸಿದ್ದಾರೆ. ಕನ್ನಡದ ಸುದ್ದಿಹಾಳೆಗಳು, ಟಿವಿ ವರದಿಗಳು ಈ ಪದವನ್ನು ಬಳಸಿದ್ದನ್ನು ಓದಿದ್ದೇವೆ; ಕೇಳಿದ್ದೇವೆ. ಹೀಗೆ ನಡೆದುಕೊಳ್ಳುವ ಕಾಲ ಬಂತಲ್ಲ, ಇನ್ನು ಎಲ್ಲ ಮುಗಿದ ಹಾಗೆಯೇ ಎಂಬ ಸಿನಿಕತನವನ್ನೂ ನಮ್ಮಲ್ಲಿ ಹಲವರು ಬೆಳೆಸಿಕೊಳ್ಳುತ್ತಿದ್ದಾರೆ.

ಅನಾರ್ಕಿಸಂ ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಸಂಸ್ಕತದ ಅರಾಜಕತೆ ಎಂಬ ಪದವನ್ನು ಬಳಸುವುದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಇದು ಕೇವಲ ಒಂದು ಸಾಟಿ ಪದವಾಗಿ ಮಾತ್ರ ಉಳಿದಿಲ್ಲ. ಈ ಪದವನ್ನು ಬಳಸುವಾಗ ಅದು ಕೇವಲ ಒಂದು ವರ‌್ತನೆಯ ಬಣ್ಣನೆ ಎಂದು ತಿಳಿಯುವ ಹಾಗಿಲ್ಲ. ಏಕೆಂದರೆ ಅಂತಹ ವರ‌್ತನೆಯನ್ನು ಅರಾಜಕ ಎಂದು ಬಣ್ಣಿಸುವವರು ಹಾಗೆ ವರ್ತಿಸುವುದನ್ನು ತಾವು ಒಪ್ಪುವುದಿಲ್ಲ ಎಂಬುದನ್ನೂ ಹೇಳುತ್ತಿರುತ್ತಾರೆ. ಅಂದರೆ ಅರಾಜಕತೆ ಎನ್ನುವುದು ನಾವು ಬಯಸುವ ನಡವಳಿಕೆಯಲ್ಲ ಎಂಬುದು ಬಹುಮಟ್ಟಿಗೆ ಹಲವರ ತಿಳುವಳಿಕೆಯಾಗಿರುತ್ತದೆ.

ರಾಜ, ರಾಜಕ, ಅರಾಜಕ, ಅರಾಜಕತೆ ಇವು ಬಳಕೆಯಲ್ಲಿರುವ ಪದಗಳು (ಅರಾಜ ಎಂಬ ಪದ ಇರಬಹುದಾದರೂ ಕನ್ನಡದಲ್ಲಿ ಅದರ ಬಳಕೆಯನ್ನು ನಾನು ಕಂಡಿಲ್ಲ). ಅರಾಜಕ ಎಂಬ ಪದದಲ್ಲಿ ರಾಜ ಎಂಬ ಪದ ಇದ್ದರೂ ನೇರವಾಗಿ ಆ ಪದಕ್ಕೂ ಅರಾಜಕತೆಗೂ ನಂಟು ಇಲ್ಲ. ಅನಾರ್ಕಿ ಎಂಬ ಪದಕ್ಕೆ ಸಾಟಿಯಾಗಿ ಅರಾಜಕ ಪದವನ್ನು ಆಯ್ದುಕೊಂಡು ಬಳಸುವಾಗ ನಾವು ಕೇವಲ ಒಂದು ಪದವನ್ನು ಮಾತ್ರ ಆಯ್ದುಕೊಳ್ಳದೇ ಅದರ ಜತೆಗೆ ಒಂದು ನಿಲುವನ್ನೂ ಆಯ್ದುಕೊಂಡು ಬಿಟ್ಟಿದ್ದೇವೆ. ಅರಾಜಕತೆ ಎನ್ನುವುದನ್ನು ನಾವು ಬಯಸುವುದೂ ಇಲ್ಲ; ಅದನ್ನು ಒಪ್ಪುವುದೂ ಇಲ್ಲ ಎನ್ನುವುದೇ ಆ ನಿಲುವು. ನಮ್ಮ ಸುತ್ತ ಮಾತುಗಳ ಲೋಕವನ್ನೇ ಕಟ್ಟುವ ಜನರೂ ಈ ನಿಲುವನ್ನೇ ಗಟ್ಟಿ ಮಾಡುವವರಾಗಿದ್ದಾರೆ.


ದಿಟಕ್ಕೂ ಅನಾರ್ಕಿ ಎಂದರೇನು? ಯಾರು ಅನಾರ್ಕಿಸ್ಟರು? ಯಜಮಾನಿಕೆ ನಡೆಸುವವರು, ಅಧಿಕಾರ ಹೊಂದಿರುವವರು ತಮ್ಮ ಯಜಮಾನಿಕೆಗೆ, ಅಧಿಕಾರಕ್ಕೆ ಇರುವ ತಳಹದಿಗಳೇನು ಎಂಬುದನ್ನು ಸಾಬೀತು ಮಾಡಬೇಕು. ಅದು ಅವರ ಹೊಣೆ. ಅದು ತಮಗೆ ತನ್ನಿಂದ ತಾನೇ ಒದಗಿ ಬಂದಿದೆ ಎಂದೋ ಯಾರೂ ತಮ್ಮನ್ನು ಪ್ರಶ್ನಿಸುವಂತಿಲ್ಲ ಎಂದು ವಾದಿಸಿದರೆ ಆಗ ಅದನ್ನು ನಿರಾಕರಿಸುವ ನಡೆ ಬೇಕಾಗುತ್ತದೆ. ಹೀಗೆ ಯಜಮಾನಿಕೆ ಮಾಡುವವರನ್ನು, ಅಧಿಕಾರ ನಡೆಸುವವರನ್ನು ನಿಮಗೆ ಈ ಹಕ್ಕನ್ನು ಯಾರು ಕೊಟ್ಟರು ಎಂದು ಕೇಳುವುದು; ನಿಮ್ಮ ಯಜಮಾನಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳುವುದೇ ಅನಾರ್ಕಿಸಂ. ಯಜಮಾನಿಕೆ ನಡೆಸುವರು ಹಕ್ಕುಗಳನ್ನು ಕಿತ್ತುಕೊಂಡಾಗ, ಏರುಪೇರನ್ನು ಹುಟ್ಟಿದಾಗ ಹಾಗೆ ಮಾಡಲು ಅವರಿಗೆ ಯಾರು ಅನುಮತಿ ಕೊಟ್ಟವರು ಎಂದು ಕೇಳುವವರೇ ಅನಾರ್ಕಿಸ್ಟ್. ಅಂದರೆ ಎಲ್ಲೆಲ್ಲಿ ಹಿಡಿತವಿಲ್ಲದ ಯಜಮಾನಿಕೆ ಇರುವುದೋ, ಎಲ್ಲಿ ಯಜಮಾನಿಕೆ ನಡೆಸುವವರೇ ತಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಮೆರೆಯುತ್ತಾರೋ ಅಲ್ಲ್ಲೆಲ್ಲಾ ಅನಾರ್ಕಿಸ್ಟರು ಇದ್ದೇ ಇರುತ್ತಾರೆ.

ಕೊಂಚ ಹಳೆಯ ಕತೆಯನ್ನು ನೋಡಿ. ವೈದಿಕತೆ, ಆಚರಣೆಗಳು ಎದುರಾಳಿಗಳಿಲ್ಲವೆಂದು ಮೆರೆದಾಗ, ರಾಜತ್ವಕ್ಕೆ ಲಗಾಮುಗಳಿಲ್ಲದೇ ಹೋದಾಗ ಈ ಎರಡೂ ಬಗೆಯ ಯಜಮಾನಿಕೆಗಳ ಎದುರು ನಿಂತವರು ಅನಾರ್ಕಿಸ್ಟರೇ ಅಲ್ಲವೇ? ಅವರು ನಿಯಮಗಳನ್ನು ಮೀರಿದರು; ಅಚ್ಚುಕಟ್ಟ್ಟಾಗಿರುವುದನ್ನು ತಲೆಕೆಳಗು ಮಾಡಿದರು. ಯಜಮಾನಿಕೆಗೆ ಸವಾಲು ಎಸೆದರು. ಹಾಗೆ ನೋಡಿದರೆ ಎಲ್ಲ ಕಾಲಗಳಲ್ಲೂ ಒಂದಲ್ಲ ಒಂದು ಬಗೆಯ ಅನಾರ್ಕಿಸಂ ಇದ್ದದ್ದೇ. ಎಲ್ಲ ಕಾಲಗಳಲ್ಲೂ ಅನಾರ್ಕಿಸಂ ಎಂಬುದು ಯಜಮಾನಿಕೆಯನ್ನು ಮುರಿಯುವುದರಲ್ಲಿ ಗೆಲುವು ಕಂಡಿತೋ ಇಲ್ಲವೋ ಎಂಬುದನ್ನು ನಿಕ್ಕಿಯಾಗಿ ಹೀಗೇ ಎಂದು ಹೇಳಲು ಬರುವುದಿಲ್ಲ. ಆದರೆ ಅದು ಎಲ್ಲ ಕಾಲಗಳಲ್ಲೂ ತಾನು ಇದ್ದೇನೆಂದು ತೋರಿಸಿಕೊಂಡಿರುವುದಂತೂ ದಿಟ.

ಅನಾರ್ಕಿಸಂ ದಾರಿಯೋ ಇಲ್ಲವೇ ಗುರಿಯೋ? ಅಂದರೆ ಯಜಮಾನಿಕೆಯನ್ನು ಮುರಿದು ಅದರ ಬದಲಾಗಿ ಅದರ ಜಾಗದಲ್ಲಿ ತಲೆ ಎತ್ತ ಬೇಕಾದ ನೆಲೆಗಳನ್ನು ಅನಾರ್ಕಿಸಂ ತನ್ನ ಗುರಿಯನ್ನಾಗಿ ಇರಿಸಿಕೊಂಡಿರುತ್ತದೋ ಇಲ್ಲವೇ ಯಜಮಾನಿಕೆಗೆ ಸವಾಲು ಹಾಕಲು ಬೇಕಾದ ಒಳ ಮತ್ತು ಹೊರದಾರಿಗಳನ್ನು ಮಾತ್ರ ಹುಡುಕುತ್ತಿರುತ್ತದೋ? ಚರಿತ್ರೆಯುದ್ದಕ್ಕೂ ಅನಾರ್ಕಿಸಂ ಈ ಎರಡೂ ನೆಲೆಗಳಲ್ಲಿ ಕಂಡುಬಂದಿದೆ. ಅನಾರ್ಕಿಸಂ ಎಂಬುದು ಬದಲಿ ನೆಲೆಯಾಗಿದ್ದರೆ, ಅಂದರೆ ಅದೊಂದು ಗುರಿ ಎಂದುಕೊಂಡರೆ ನಮ್ಮ ಚರಿತ್ರೆಯಲ್ಲಿ ಅದೊಂದು ಈಡೇರದ ಬಯಕೆಯಾಗಿಯೇ ಕಂಡುಬರುತ್ತದೆ. ಬಿಡುಗಡೆ ಮತ್ತು ಕಟ್ಟುಪಾಡುಗಳೆರಡೂ ಇದ್ದು ಹೊರಗಿನ ಯಾವ ಒತ್ತಾಯವಾಗಲೀ ಇರದ ಮತ್ತು ಒತ್ತಾಯವನ್ನು ಹೇರುವ ಯಜಮಾನಿಕೆಯಾಗಲೀ ಇಲ್ಲದಿರುವ ನೆಲೆಯನ್ನು ಅನಾರ್ಕಿಸಂ ಬಯಸುತ್ತದೆ. ಒಂದು ವೇಳೆ ಅನಾರ್ಕಿಸಂ ಒಂದು ದಾರಿ ಎನ್ನುವುದಾದರೆ ಅದು ಯಜಮಾನಿಕೆಯ ನೆಲೆಗಳಿಗೆ ಎಚ್ಚರಿಕೆಯನ್ನು ನೀಡುವ, ಅದು ಹದ್ದು ಮೀರದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿರುತ್ತದೆ ಎಂದುಕೊಳ್ಳಬೇಕಾಗುತ್ತದೆ.

ಇದೆಲ್ಲವನ್ನೂ ನೋಡಿದಾಗ ಯಾರಾದರೂ ಅನಾರ್ಕಿಸ್ಟ್ ಆಗಿದ್ದರೆ ಇಲ್ಲವೇ ಹಾಗೆಂದು ತಮ್ಮನ್ನು ತಾವು ಕರೆದುಕೊಂಡರೆ ನಾವು ಅವರನ್ನು ಬುಡಮೇಲುಕಾರರೆಂದು, ಅಚ್ಚುಕಟ್ಟಾಗಿರುವ ಜೋಡಣೆಯನ್ನು ಹಾಳುಗೆಡಹುವವರೆಂದು, ನಿಯಮಗಳ ಪಾಲನೆಗೆ ಸೊಪ್ಪುಹಾಕದವರೆಂದು ತಿಳಿಯಬೇಕಾಗಿಲ್ಲ ಎನ್ನುವುದು ಗೊತ್ತಾಗುತ್ತದೆ. ಅನಾರ್ಕಿ ಇಲ್ಲವೇ ನಾವು ಬಣ್ಣಿಸುವಂತೆ ಅರಾಜಕತೆ ಎನ್ನುವುದು ಗೊಂದಲ, ಗೋಜಲುಗಳಿಗೆ ಸಾಟಿಯಾದ ಪದವಲ್ಲ. ಗೊಂದಲ ಹುಟ್ಟಿಸುವವರಿಗೆ, ದೊಂಬಿ ಮಾಡುವವರಿಗೆ ಗುರಿಗಳಿರುವುದಿಲ್ಲ. ಆದರೆ ಆನಾರ್ಕಿಸಂ ಎನ್ನುವುದು ಒಂದು ರಾಜಕೀಯ ಚೌಕಟ್ಟು. ಕೇವಲ ದೊಂಬಿ ಮಾತ್ರ ಅದರ ಗುರಿಯಾಗಲಾರದು.


ಮಂದಿಯಾಳ್ವಿಕೆಯ ಏರ್ಪಾಟಿನಲ್ಲಿ, ಅಂದರೆ ಪ್ರಜಾಪ್ರಭುತ್ವದಲ್ಲಿ ನಾವು ಒಪ್ಪದ ನಿಲುವನ್ನು ಮುಂದಿಡಲು ಚರ್ಚೆ, ಮಾತುಕತೆ ಇವೇ ಮುಂತಾದ ದಾರಿಗಳಿವೆ; ಅದಕ್ಕಾಗಿಯೇ ಏರ್ಪಾಟಾದ ಸದನಗಳಿವೆ ಎಂದು ಹೇಳುವುದುಂಟು. ಇವರು ಅನಾರ್ಕಿಯನ್ನು ಒಪ್ಪದವರು. ದಿಟ, ಮಾತಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಬೇರೆಯವರ ಮಾತು ಕೇಳಿಸಿಕೊಳ್ಳುವ ಹೊಣೆ ಎಲ್ಲರಿಗೂ ಇಲ್ಲವಲ್ಲ. ಮಾತುಕತೆ, ಚರ್ಚೆಗಳ ಗುರಿ, ಸದನಗಳ ನಡಾವಳಿಗಳು ಸಹಮತವನ್ನು ಬಲಪಡಿಸುವುಕ್ಕಾಗಿ ಇರಬೇಕು. ಆದರೆ ಅಲ್ಲೆಲ್ಲಾ ಅಂತಹ ಸಹಮತ ಉಂಟಾಗುವುದನ್ನು ತಪ್ಪಿಸುವುದೇ ಗುರಿಯಾದರೆ ಏನು ಮಾಡುವುದು. ಯುದ್ಧ ತಪ್ಪಿಸಲು ಸಂಧಿಗಾಗಿ ಬಂದ ಕೃಷ್ಣ ಬರುವ ಮೊದಲೇ 'ಕಾಳಗವನ್ನು ಬಲಿದು ಬಹೆನು' ಎಂದು ಮಾತು ಕೊಟ್ಟು ಬಂದಿದ್ದರೆ ಸಂಧಿ ನಡೆಯುವುದು ಎಲ್ಲಿಂದ? ಅಂದರೆ ಕಾಲಕಾಲಕ್ಕೆ ಮಂದಿಯಾಳ್ವಿಕೆಯ ಏರ್ಪಾಟು ಹುಟ್ಟುಹಾಕುವ ಅಧಿಕಾರ ಕೇಂದ್ರಗಳ ಹಿಂದಿನ ಅತಾರ್ಕಿಕತೆಗಳನ್ನು ಬಯಲು ಮಾಡಬೇಕಾಗುತ್ತದೆ. ಅವುಗಳಿಗೆ ಆ ಅಧಿಕಾರ ಬಂದುದೆಲ್ಲಿಂದ ಎಂದು ಕೇಳಬೇಕಾಗುತ್ತದೆ. ಅದಕ್ಕಾಗಿಯೇ ಅನಾರ್ಕಿಸಂನ ದಾರಿಗಳು ತೆರೆದುಕೊಳ್ಳುತ್ತವೆ.


ಹಾಗಿದ್ದರೆ ಈ ಬರಹದ ಗುರಿ ಏನು? ಇದೆಲ್ಲವನ್ನೂ ಹೇಳಿದ್ದು ಅನಾರ್ಕಿಸಂನ ಬಗೆಗೆ ವಕಾಲತ್ತು ಮಾಡುವುದಕ್ಕಾಗಿ ಅಲ್ಲ. ಒಂದು ಪದವನ್ನು ಬಳಸುವಾಗ ಅದು ನಮ್ಮ ಬದುಕಿನಲ್ಲಿ ಯಾಕೆ ನೆಲೆಗೊಂಡಿದೆ ಎಂಬುದನ್ನು ತಿಳಿಯದೇ ಬಳಸುವುದು ಸರಿಯಲ್ಲ ಎಂದು ಹೇಳುವುದು. ಅಲ್ಲದೆ ಪದಗಳ ಮೊರೆ ಹೊಕ್ಕು ಅವುಗಳ ಹಿಂದೆ ಅವಿತುಕೊಂಡು ನಮ್ಮ ತಿಳಿವನ್ನು, ತಿಳಿವಿನ ದಾರಿಗಳನ್ನು ಮುಚ್ಚಿಕೊಳ್ಳುವುದು ಸರಿಯಲ್ಲ ಎಂದು ಅರಿತುಕೊಳ್ಳುವುದು ಈ ಬರಹದ ಗುರಿ.
***

ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ನಮ್ಮೊಳಗೆ ಜಾಗೃತವಾಗುತ್ತಿದ್ದಂತೆ ವ್ಯವಸ್ಥೆ, ಆಡಳಿತ ಮತ್ತು ಅರಾಜಕತೆ ಕುರಿತ ಆಲೋಚನೆಗಳು ಏಳುತ್ತವೆ. ಸದ್ಯದ ರಾಜಕೀಯ ಚಿತ್ರಣದಲ್ಲಿ ಅರಾಜಕತೆಯ ಕುರಿತು ಹಲವು ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ದಶಕಗಳ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಭಿನ್ನ ವಿಚಾರಧಾರೆಗಳ ಇಬ್ಬರು ನಾಯಕರು ಆ ಕಾಲದಲ್ಲಿ ಅರಾಜಕತೆಯನ್ನು ಹೇಗೆ ಗ್ರಹಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ನೋಡಬಹುದು.

ಗಾಂಧಿ ಪ್ರತಿಪಾದನೆ
ಗಾಂಧೀಜಿಯ ಸತ್ಯಾಗ್ರಹವನ್ನು ಅರಾಜಕತೆಯ ಅಸ್ತ್ರವನ್ನಾಗಿ ಅನೇಕ ಇತಿಹಾಸಕಾರರು ಗುರುತಿಸುತ್ತಾರೆ. ಕೆನಡಾದ ಲೇಖಕ ಜಾರ್ಜ್ ವುಡ್‌ಕಾಕ್, ಗಾಂಧಿ ತಮ್ಮನ್ನು ಅರಾಜಕತೆಯ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು ಎನ್ನುತ್ತಾರೆ. ಗಾಂಧೀಜಿ ಅವರ ಹೇಳಿಕೆಯನ್ನೇ ಇಲ್ಲಿ ಉಲ್ಲೇಖಿಸಬಹುದು: 'ದುಷ್ಟ ವ್ಯವಸ್ಥೆ ಯಾವುದೇ ಉದ್ದೇಶದಿಂದಾದುದಲ್ಲ. ಅದು ಸಾಮಾಜಿಕ ಪಿಡುಗಿನ ಫಲ. ಉದಾಹರಣೆಗೆ ಮಾರುತಕ್ಕೆ ಸಮುದ್ರದಲ್ಲಿ ಅಲೆಗಳನ್ನು ಉಕ್ಕಿಸುವ ಉದ್ದೇಶವೇನಿರುವುದಿಲ್ಲ. ಆದರೆ ಮಾರುತದ ಪರಿಣಾಮದಿಂದಾಗಿ ಅಲೆಗಳು ಉಕ್ಕುತ್ತವೆ. ಹಾಗೆಯೇ, ದುಷ್ಟವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದರೆ ಅದಕ್ಕೆ ಕಾರಣವಾಗುವ ಪೂರ್ವಸ್ಥಿತಿಯೇ ಇಲ್ಲದಂತೆ ಮಾಡುವುದು'.

'ವ್ಯಕ್ತಿಗೆ ಆತ್ಮ ಎಂಬುದಿರುತ್ತದೆ. ಆದರೆ ವ್ಯವಸ್ಥೆ ಆತ್ಮವಿಲ್ಲದ ಯಂತ್ರವಿದ್ದಂತೆ. ಹಿಂಸೆಯಿಂದಲೇ ಅದರ ಅಸ್ವಿತ್ವವನ್ನು ಉಳಿಸಿಕೊಳ್ಳುತ್ತದೆ. ಹಿಂಸೆಯಿಂದ ವ್ಯವಸ್ಥೆಯನ್ನು ದೂರ ಮಾಡುವುದು ಕಷ್ಟ' ಎಂದು ಹೇಳುತ್ತಿದ್ದ ಅವರು ಅಹಿಂಸೆಯ ಮಾರ್ಗ ಅನುಸರಿಸಲು ಅರಾಜಕತೆಯೂ ಬೇಕು ಎಂಬ ನಿಲುವನ್ನು ತಾಳಿದ್ದರು.


ಸಾಮೂಹಿಕ ವಿಮೋಚನೆಯತ್ತ ಗಾಂಧಿ ಆಸಕ್ತಿಯತ್ತ ವಾಲಿದ್ದು ಕೂಡ ವ್ಯಕ್ತಿವಾದಿ ಅರಾಜಕತೆ ಚಿಂತನೆಯಿಂದ. ವ್ಯಕ್ತಿಯೊಬ್ಬ ಆತ್ಮಸಾಕ್ಷಿಯೇ, ವ್ಯವಸ್ಥೆಯೊಂದರ ಸಮರ್ಥ ಸ್ವರೂಪ ಎಂಬುದು ಅವರ ನಿಲುವಾಗಿತ್ತು. ಸ್ವರಾಜ್ಯ ಕಲ್ಪನೆಯ ವ್ಯಕ್ತಿಗತವಾದದ ಒಲವಿನಿಂದಾಗಿಯೇ ಅವರು ಸಂಸದೀಯ ರಾಜಕಾರಣ, ರಾಜಕೀಯ ಪಕ್ಷಗಳ ಬಗ್ಗೆ ಒಲವು ತೋರಿಸಿರಲಿಲ್ಲ. ಅಂದಹಾಗೆ, ಗಾಂಧಿ ಅವರ ಈ ಆಲೋಚನೆಗಳನ್ನು ಪ್ರಭಾವಿಸಿದ್ದು ಪ್ರಸಿದ್ಧ ಲೇಖಕ ಲಿಯೋ ಟಾಲ್‌ಸ್ಟಾಲ್ ಅವರ 'ದಿ ಕಿಂಗ್‌ಡಮ್ ಆಫ್ ಗಾಡ್ ವಿತಿನ್ ಯೂ' ಕೃತಿ.
***

ಕ್ರಾಂತಿಕಾರಿಯ ಸ್ವಾತಂತ್ರ್ಯದ ಮಾರ್ಗ
ಗಾಂಧಿ ಅಹಿಂಸೆಯ ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದ್ದ ಕಾಲದಲ್ಲೇ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದ ಹುರುಪಿನಲ್ಲಿದ್ದರು. ಅವರಲ್ಲಿ ಒಬ್ಬರು ಭಗತ್ ಸಿಂಗ್. ಪಾಶ್ಚಾತ್ಯ ಕಲ್ಪನೆಯಾಗಿದ್ದ ಕಮ್ಯುನಿಸಂ ಮತ್ತು ಅರಾಜಕತೆಯಿಂದ ಅವರು ಆಕರ್ಷಿತರಾಗಿದ್ದರು. ಆ ಕಾಲದಲ್ಲಿ ಹೋರಾಟಗಾರರನ್ನು ಪ್ರಭಾವಿಸಿದ್ದ ಮಿಖೈಲ ಬಕುನಿನ್, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್, ಲಿಯೋನ್ ಟ್ರಾಟ್‌ಸ್ಕಿಯವರನ್ನು ಓದಿಕೊಂಡಿದ್ದರು. ಅರಾಜಕತೆಯನ್ನು ಕುರಿತು ಪಂಜಾಬಿ ಪತ್ರಿಕೆ 'ಕೀರ್ತಿ'ಯಲ್ಲಿ 1928ರಲ್ಲಿ ಸರಣಿ ಲೇಖನಗಳನ್ನು ಬರೆದರು. ಈ ಲೇಖನಗಳಲ್ಲಿ ಅವರು, 'ಜನ ಅರಾಜಕತೆ ಎಂಬ ಪದದ ಬಗ್ಗೆಯೇ ಆತಂಕವಿಟ್ಟುಕೊಂಡಿದ್ದಾರೆ. ಅರಾಜಕತೆ ಎಂಬ ಪದವನ್ನು ತಪ್ಪಾಗಿ ಬಳಸಲಾಗಿದೆ. ಭಾರತದ ಕ್ರಾಂತಿಕಾರಿಗಳನ್ನು ಅರಾಜಕತೆಯ ಪ್ರತಿನಿಧಿಗಳು ಎಂದು ಜರೆದಿದ್ದಾರೆ. ಈ ಮೂಲಕ ನಮ್ಮನ್ನು ಕುಖ್ಯಾತರೆಂದು ದೂಷಿಸಲಾಗುತ್ತಿದೆ. ಅರಾಜಕತೆ ಎಂದರೆ ಆಳುವವನ ಗೈರು, ಆಳುವ ವ್ಯವಸ್ಥೆಯೊಂದನ್ನು ರದ್ದು ಮಾಡುವುದು. ಹಾಗೆಂದು ನಿಯಮಗಳೇ ಇಲ್ಲದಿರುವುದು ಎಂದಲ್ಲ. ಅರಾಜಕತೆಯ ಅಂತಿಮ ಗುರಿ ಸಂಪೂರ್ಣ ಸ್ವಾತಂತ್ರ ್ಯ. ಅದರ ಪ್ರಕಾರ ಯಾರೂ ದೇವರು, ಧರ್ಮವನ್ನು ಒಪ್ಪಿಕೊಂಡವರಾಗಿರುವುದಿಲ್ಲ. ಹಣ, ಅಧಿಕಾರಗಳ ವ್ಯಾಮೋಹಿಗಳಾಗಿರುವುದಿಲ್ಲ. ಬಂಧಿಸುವ ಸರಪಳಿಗಳಾಗಲಿ, ಸಂಸ್ಥೆಯಾಗಲೀ ಇರುವುದಿಲ್ಲ' ಎಂದು ಬರೆದಿದ್ದರು.
***

ದಿ ಸೀಕ್ರೆಟ್ ಏಜೆಂಟ್
20ನೇ ಶತಮಾನದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ಬರೆದ 'ದಿ ಸೀಕ್ರೆಟ್ ಏಜೆಂಟ್' ಭಯೋತ್ಪಾದನೆಯ ಜೊತೆಗೆ ಅರಾಜಕತೆಯನ್ನು ಕುರಿತು ವಿವಿಧ ಚಿಂತನೆಗಳನ್ನು ನಮ್ಮ ಮುಂದಿಡುತ್ತದೆ.

ಗ್ರೀನ್‌ವಿಚ್‌ನಲ್ಲಿರುವ ರಾಯಲ್ ಅಬ್ಸರ‌್ವೇಟರಿಯನ್ನು ಸ್ಫೋಟಿಸುವುದಕ್ಕೆ ಸೀಕ್ರೆಟ್ ಏಜೆಂಟನೊಬ್ಬ ಯೋಜಿಸುವ ಉದ್ದೇಶದ ಸುತ್ತ ಕಾದಂಬರಿಯನ್ನು ಹೆಣೆದಿದ್ದಾನೆ ಕಾನ್ರಾಡ್. ಈ ಮೂಲಕ ಆಳುವ ವರ್ಗಕ್ಕೆ ಘಾಸಿ ಉಂಟುಮಾಡುವುದು ಉದ್ದೇಶ. ತನ್ನ ಗೆಳೆಯರೊಂದಿಗೆ ಸೇರಿ ಈ ಉದ್ದೇಶಕ್ಕಾಗಿ ತಯಾರಿ ನಡೆಸುತ್ತಾರೆ.

ಕಾನ್ರಾಡ್ ಅರಾಜಕತೆಯ ರಾಜಕೀಯ ಕ್ರಾಂತಿಯನ್ನು ಹುಚ್ಚು ನಿಲುವಿನಂತೆ ನೋಡದೆ, ಯುವಕರು ಅತಿ ಎನ್ನಿಸುವ ಇಂಥ ರಾಜಕೀಯ ನಿಲುವಿನತ್ತ ಹೇಗೆ ವಾಲುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಯತ್ನ ಮಾಡಿದ್ದಾನೆ. 100 ವರ್ಷಗಳ ಹಿಂದೆಯೇ ಬಂದ ಈ ಕಾದಂಬರಿ, ಆ ಹೊತ್ತಿಗೆ ರಾಜಕೀಯ ಸ್ಥಿತ್ಯಂತರಗಳ ಕುರಿತು ಸೂಕ್ಷ್ಮವಾದ, ಘನವಾದ ಆಲೋಚನೆಗಳ ಮೂಲಕ ಗಮನ ಸೆಳೆದಿತ್ತು.