ಶುಕ್ರವಾರ, ಫೆಬ್ರವರಿ 6, 2015

ಸಂಗೊಳ್ಳಿ ರಾಯಪ್ಪನ ಲಾವಣಿ ಪದ






ಎ ಸಿಂಹದಂಥಾ ಸಂಗೊಳ್ಳಿ ರಾಯಾ
ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ
ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ
ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ
ಸೃಷ್ಟಿಯೊಳಗ ಹುಟ್ಟಿಬಂದ ಶ್ರೇಷ್ಠನಾಗಿ ಹೋಗಿದಾನ
ದುಷ್ಟ ರಾವಣಾಸುರನ ಲಂಕಾ ಸುಟ್ಟಾಂಗ
ಹಿಂಗ ಸಂಪಗಾಂವಿ ಬೀಡಿ ಕಚೇರಿ ಸುಟ್ಟಾನ ಕಲಿಕಿದೊಳಗ|| ೧ ||
ಜಾತಿಲಿಂದ ಕುರಬರ ಬೀರಾ, ರೂಪದಲ್ಲಿ ಸೂರ್ಯ ಚಂದ್ರಾ
ಪಂಚ ಪಾಂಡವರೊಳಗ ಭೀಮ ಹುಟ್ಟಿ ಬಂದಾಂಗ
ಗುಡಗ-ಸಿಡ್ಲ-ಮಿಂಚ-ಗದ್ನಿ ಹೊಡದಾಂಗ
ವಯಾ-ವರುಷೆ ಇಪ್ಪತ್ನಾಲ್ಕ ಹನಮಂತ ದೇವರ ಇದ್ದೋ ಬಲಕ
ಗುಣದಲ್ಲಿ ಬಾಳ ನಂಬಿಗಿವಂತ ರಾಮದೇವರಂಗ
ಕತ್ತಿ ಹಿಡಿಯತಿದ್ದೊ ರಣದಲ್ಲಿ ವೀರಭದ್ರದೇವರಂಗ
ರಾಯಣ್ಣನ ದನಿ ಗವಿಯೊಳಗ ಹುಲಿ ಗದ್ನಿ ಹೊಡದಂಗ|| ೨ ||
ಏ ಸಣ್ಣಂದಿರತ ಅವನ ಬಣ್ಣ ಚೊಕ್ಕ ಲಿಂಬಿಬಣ್ಣಾ
ಹೋಕ ಹೊಳಕ ಹೋಳಿ ಕಾಮ ದೇವರಂಗ
ಕಕ್ಕೇರಿ ಬಿಷ್ಟೆವ್ವನ ಹಸ್ತ ಅವನ ತೆಲಿಯಮ್ಯಾಗ
ಕಿತ್ತೂರ ಅರಸರ ಪ್ರೀತಿ ಬಾಳ ಹಳಬಕಿ ನೇಮಿಸ್ಯಾರ ರಾಯಪ್ಪಗ
ಹಡಿಯಬೇಕ ಇಂಥ ಮಕ್ಕಳನ ಭೂಮಿಯ ಮ್ಯಾಗ
ಕೆಚ್ಚೆದೆಯ ಕರ್ಣನಂತವನ ರಣದಾಗ
ಇಂಥವರ ಪೂಜ್ಯವಂತರಾಗತಾರ ಲೋಕದೊಳಗ|| ೩ ||
ಕುಲಕರ್ಣಿ ಬಾಳಪ್ಪನಕೂಡ ಪಹಿಲೆ ಕದನಹುಟ್ಟಿತಪ್ಪ
ಜಳಕ ಮಾಡುವಾಗ ಮಲಪುರಿ ಹೊಳೆಯಾಗ
ಉಟ್ಟಿರುವ ಧೋತರ ಒಗಿಯಂದೋ ರಾಯಪ್ಪಗ
ರಟ್ಟಿ ಹಿಡಿದ ಮುನಗಸತಾನ ರಾಯಪ್ಪಗ
ಜುಟ್ಟ ಹಿಡಿದ ಎಬ್ಬಸತಾನ ರಾಯಣ್ಣನಾಗ
ಕೂಟ್ಟಿ ಮಾತಾ ಹೇಳಬಾರದೋ ರಾಯಪ್ಪ ನನಗ
ರಾಯಣ್ಣ ಜನಿವಾರ ಹರದ ಒಗದಾನ ಹೊಳಿಯೊಳಗ|| ೪ ||
ಏ ಇಷ್ಟೆ ಘಾಸಿಯಾಗಿ ಹಾರುವಾ ನಡಿಗ್ಯಾನಾಗ
ಸಿಟ್ಟಿಗೇರಿ ಮನಿಗಿ ಹೋಗಿ ನಡಿಸ್ಯಾನ ಮೋಸ
ಕುನಸ ಇಟ್ಟೋ ಕುಲಕರ್ಣಿ ಕುರಬನ ಮ್ಯಾಗ
ರಿಪೋರ್ಟ ಬರಿಯತಾನ ಕುಂತ ಚಾವಡ್ಯಾಗ
ಸರಕಾರ ಚಾಕರಿ ಸರಿಯಂಗ ಮಾಡ ಒಲ್ಲ ಊರಾಗ
ದಂಗೆ ದರೋಡಿ ಮಾಡತಾನ ಬಲ್ಲಂಗ
ಬಡಿಲಾಕ ಬರತಾನ ನಮ್ಮ ಮೈ ಮ್ಯಾಗ|| ೫ ||
ರಾಯಣ್ಣಜ್ಜ ರೋಗಣ್ಣಗ ಮೂರನೂರ ಕೂರಿಗಿ ಜಮೀನಾ
ಕಿತ್ತೂರ ದೇಸಾಯರ ಕಡೆಯಿಂದ ಗಳಸಿದ ವತನಾ
ಇದಕ ಸರಿಯಾಗಿ ಪಾಳೆಕುಂಡ್ರುಸುದು ಮಾಡರಿ ಹುಕುಮಾ
ಸಿಟ್ಟಿನಿಂದ ರಿಪೋರ್ಟ ಬರದಾನೋ ದುಷ್ಟತಾನಾ
ತಿಳಿಯಗೊಡದ ಬಂದಮಾಡ್ಯಾನ ಕಾಗದವನಾ
ಕಾಗದಾ ಬರದಾನ ಕುಲಕರ್ಣಿ ತನ್ನ ಕೆಡಗಾಲಕತಾನಾ
ರಾಯಪ್ಪನ ಕರದ ಕೊಡತಾನ ಹುಕುಮವನಾ|| ೬ ||
ಏ ರಾಯಪ್ಪ ಬಾರಪ್ಪ ನನ್ನ ಕಡೆ ಏನ ತಪ್ಪ
ತಾಯಿ-ಮಕ್ಕಳಂಗ ಇರೂನ ನಾವ ಕಡೆತನಕ
ಏನ ತಪ್ಪ ಮಾಡಿದರ ಒಪ್ಪಿಗೋಬೇಕ ನಮ್ಮ ಮನಕ
ಸಣ್ಣಂಗ ಮಾತಾಡಿ ಕಾಗದಾ ಕೈಯಾಗ ಕೊಡತಾನ
ಸಂಪಗಾಂವಿ ಕಚೇರಿಗೆ ಇದನ ಒಯ್ಯಬೇಕ
ಎಲ್ಲೆಲ್ಲಿ ನಿಂದರದ ಹೋಗಬೇಕ ತುರತದಿಂದ
ಸುಭೇದಾರ ಸಾಹೇಬರ ಕೈಯಾಗ ಕೊಡಬೇಕ|| ೭ ||
ಕುಲಕುಲ ನಕ್ಕೊಂತ ರಾಯಪ್ಪ ಕುಲಕರ್ಣಿಗೆ ಹೇಳ್ಯಾನ
ಹಿಂತಾ ಮತ ಹತ್ತ ಹೇಳರಿ ದಿನ ದಿನಕ
ರೀತಿ ಹಿಡದ ನಡೆಯಬೇಕ ಕಡಿಯತನಕ
ತಪ್ಪ ತಡಿ ಮಾಡಿದರ ಗಪ್ಪನ ಇರಾಂವ ನಾನಲ್ಲ
ಜಪ್ಪಿಸಿ ಜಿಗಿಯತೀನ ಮ್ಯಾಗ ಆಕಾಶಕ
ವೈರಿಯ ಕಂಡರ ಜಿಗ್ಯಾಂವ ಹನುಮನಂಗ
ವೈರಿಗಳನ ಕಳಸತೀನ ಯಮಲೋಕಕ|| ೮ ||
ಏ ರಿಪೋರ್ಟ ಹಾಕಿದ ಕಿಸಿಯಕ
ರಪಾಟ ಬಂದೋ ಮನೆತನಕ
ಬಾಗಿ ನಮಸ್ಕಾರ ಮಾಡ್ಯಾನ ತಾಯಿಪಾದಕ
ಟಪಾಲ ಒಯ್ಯತೀನಿ ತಾಯಿ ಸಂಪಗಾಂವಿತನಕ
ಹಸವ ಆಗೇತೆವ್ವಾ ದವಡಮಾಡಿ ಎಮ್ಮಿ ಹಿಂಡ
ಸಕ್ಕರಿ ಹಾಕಿ ಹಾಲ ಕೊಡವ್ವ ಕುಡಿಲಾಕ
ಹೊಡಮಳ್ಳಿ ಬರತೀನ ಸಂಜಿ ಆರಕ|| ೯ ||
ಬಿಗವಾರಿ ಚೊಣ್ಣಾ ಹಾಕಿದಾನ ರಾಯಾ
ಬಗ್ವಿ ಅಂಗಿ ತೊಟ್ಟಿದಾನ ಮಲಮಲ ಪಟಕಾ
ಕ್ಯಾಮಿ ಎದ್ದಿ ಬಹಳ ಜುಳಕ ಕಾಣತಾನ
ಹನುಮಂತ ಹಾರಿದಂಗ ಲಂಕಾಕ ರಾಯಣ್ಣಾಗ
ತಾಸಿನೊಳಗ ಪಂಚಗಾಂವಿ ಹೊಕ್ಕ ಸುಭೇದಾರರಂತೇಕ
ರಿಪೋರ್ಟ ಒಗದ ನಿಂತಾನ ಸುಮ್ಮಕ
ಹೆಬ್ಬುಲಿ ನಿಂತಂಗ ನಿಂತ ಸಾಹೇಬರ ಹಂತೇಕ|| ೧೦ ||
ಏ ಲಕೋಟಿ ಒಡದಾರ ಸಾಹೇಬರಾ
ರಿಪೋರ್ಟದೊಳಗಿನ ಮಜಕೂರಾ
ಓದಿ ನೋಡಿ ಹಲ್ಲ ತಿಂದಾನ ಕರಕರಾ
ಹಿಂಗ ಚಾಕರಿ ಮಾಡು ಧರ್ಮ ಏನ ಹಳಬರಾ
ಮೂರ ನೂರ ಕೂರಿಗಿ ಜಮೀನಕ
ಹುಕುಂ ಆಗೇದ ಸರಕಾರ‍್ದು ಜೋರ‍್ದಾರಾ
ಕೊಡದಿದ್ರ ಬಿಡುವದಿಲ್ಲೊ ಕಾಯ್ದೇಶೀರಾ|| ೧೧ ||
ಟೊನ್ನಿ ಸುಭೇದಾರ ನಿನ್ನ ಬಂಡತಾನಾ
ನಡಿಯುವದಿಲ್ಲೋ ನನ್ನ ಮುಂದ ಸುಮ್ಮಸುಮ್ಮಕ
ನಾಳೆ ಬಂದ ಕೇಳ ಊರಾಗ ಸೂರ್ಯ ಉದಯಕ
ತಪ್ಪ ಇದ್ದರ ಗಪ್ಪನ ಹಾಕೋ ಲಕಾ ಪಕಾ
ಮೂರ ನೂರ ಕೂರಿಗಿ ಜಮೀನ ನಮ್ಮಜ್ಜ ರೋಗನ್ನಾ
ಲಢಾಯಿ ಮಾಡಿ ಗಳಿಸಿದ್ದಿದೆಯೋ ಜಾತಿ ವತನಾ
ಇಂಗ್ರೇಜಿ ಸರಕಾರ ಕೊಟ್ಟದ್ದು ತೋರಿಸಬೇಕ ಏನಾ|| ೧೨ ||
ಏ ಇಷ್ಟೆ ಮಾತ ಕೇಳಿ ಸುಭೇದಾರ ಎದ್ದ
ಪೋಲಿಸರಿಗೆ ಕೊಟ್ಟಿದಾನ ಹುಕುಮವನಾ
ಓದ ಲಕಾಪಕ ಹಾಕರಿ ಈ ಕುರುಬನಾ
ಹ್ಯಾಂಗ ಮಾತಾಡತಾನ ಈ ಕೆಟ್ಟ ಭೇಮಾನಾ
ಅನ್ನ-ನೀರ ಕೊಡಬ್ಯಾಡ್ರಿ ಇಡ್ರಿ ಮೂರದಿನಾ
ಕೈ ಕಾಲಿಗೆ ಹಾಕರಿ ಮೊದಲ ಬೇಡಿಗಳನಾ
ಬರದ ಕೊಟ್ಟ ಕಾಗದಾ ಲೇಕ ಹುಕುಮವನಾ|| ೧೩ ||
ಒತ್ತರಮಾಡಿ ಪೋಲಿಸರು ಸುತ್ತಗಟ್ಟಿ ನಿಂತಾರಾಗ
ಕತ್ತಿ ಮಗನ ಸತ್ತ ಹೋದಿ ನಮ್ಮ ಹೊಡತಕ
ಬೇಡಿ ಹಾಕಲಾಕ ಬಂದಾರೋ ಕೈಗೆ ಎಕದಮಕ
ರಾಮಪ್ಪ ಆಗ ಕಣ್ಣ ಕಿಸದ ಆ ಜನರೀಗಾಗ
ಚಣ್ಣ ಹರಿಯುವಂಗ ಒದ್ದೀನಿ ಅಂತಾನವರಿಗಿ
ದೂರ ಸರದ ನಿಂದರ್ರಿ ಬಂದೀರಿ ಸನಿಯಾಕ
ಮುಂದಾಗಿ ನಡೀರಿ ಬರತೀನಿ ನಾನ ಪೋಲೀಸ ಸ್ಥಳಕ|| ೧೪ ||
ಏ ಜೇಲಿನೊಳಗ ಹಾಕಿದಾರ ರಾಯಣ್ಣನ
ಕೀಲಿ ಬಂದ ಮಾಡಿದಾರ ಬಂದೂಬಸ್ತಾನ
ಕಾವಲ ಮಾಡತಾರ ಪಾರಾ ಬೆಳತನಕಾ
ರಾಯಪ್ಪನ ಸುದ್ದಿ ತಗದ ಮಾತಾಡತಾರ ನಕ್ಕ
ಸಂಗೊಳ್ಳಿ ಹಳಬ ಬಹಳ ಬಿರಸರಿ ಬಾಳ ಭಾರೀ
ಸರಿ ಒಲ್ಲೋ ಯಾರ‍್ಯಾರಿಗಿ ಹಿಂದಕ ಮುಂದಕ
ಸಾಹೇಬಗ ಆಗೇತಿ ಇವನ ನೋಡ ಬಹಳ ಠಕ್ಕ|| ೧೫ ||
ಸಂಜಿ ತನಕ ದಾರಿ ನೋಡ್ಯಾನ ಕುಲಕರ್ಣಿ
ರಾಯಾ ಬರಲಿಲ್ಲಂತ ತಿಳಿದ ಮನದಾಗ
ಹೌಸ ಆದೋ ಕುಲಕರ್ಣಿ ತನ್ನ ಮನಕ
ಕೆಂಚವ್ವನ ಕರಸತಾನೋ ಚಾವಡಿತನಕ
ಹುಚ್ಚಮುಂಡೇ ಪಾಳೇ ಕೊಡಬೇಕ ಇಗಿಂದೀಗ
ಡುಬ್ಬದ ಮ್ಯಾಗ ಕಲ್ಲ ಹೇರಿಸ್ಯಾನ ಹೆಂತಾ ಸೊಕ್ಕ
ಸುದ್ದಿ ಹತ್ತಿ ಚನಬಸಪ್ಪ ಬಂದಾನ ಚಾವಡಿಗಾಗ|| ೧೬ ||
ಏ ಕತ್ತಿಮನಗ ಕುಲಕರ್ಣಿ ಎಂತಾ ಸೊಕ್ಕ
ಬಂತ ನಿನಗ ಅಳಗಾಲ ಆಗುವ ಕಾಲ
ಒದ್ದ ಮುರದೇನ ಸೂಳೆಯ ಮಗನ ಹಲ್ಲಾ
ಮುದಕಿ ಡುಬ್ಬದಮ್ಯಾಗ ಹೇರುದೇನ ಕಲ್ಲಾ
ಅನ್ಯಾಯ ಮಾಡಿದವರನ್ನ ನಮ್ಮ ಕಣ್ಣ ನೋಡ್ಯಾವ
ಮಣ್ಣಗೂಡಿ ಹೋಗಿದಾರ ಭೂಮಿಮ್ಯಾಲಾ
ಹಿಂಗ ಅದ್ದೂರಿ ಮಾಡಿದವು ಆಗತಾರ ಅಳಗಾಲಾ|| ೧೭ ||
ಹಿಂಗ ಜೇಲಿನೊಳಗ ರಾಯಪ್ಪ ಕೇಳಿ
ಕೂಗಾನ ಏಳತಾರ ಕಾವಲದವರೆಲ್ಲಾ
ಕೂಗಿ ಒಳಗ ನಿಂತ ಹೇಳತಾನ ಪೋಲೀಸರಿಗೆಲ್ಲಾ
ಜೇಲ ಮುರದ ಹೋಗತೀನ ಮಾಡಿರಿ ಕಾವಲಾ
ಬಂದೂಕ ನೆವರಿ ಹಿಡಕೊಂಡ ನಿಂದರ್ರಿ ಮ್ಯಾಲಾ
ಬಲಭೀಮನ ಹೆಸರ ತಕ್ಕೊಂಡ ಮ್ಯಾಲಕ ಹಾರ‍್ಯಾನ
ಕಕ್ಕೇರಿ ಬಿಷ್ಟವ್ವ ಬಂದ ನಿಂತಾಳ ಬೆನ್ನ ಮ್ಯಾಲಾ|| ೧೮ ||
ಏ ಎಡಗೈಯಿಂದ ಚಿಲಕ ಹಿಡದ ಬಲಗೈಯಿಂದಾ
ಹಂಚ ಗುದ್ದಿ ಮ್ಯಾಲಬಂದ ನಿಂತದಾನ ಹುಲಿಹಂಗಾ
ನೋಡಿ ಪೋಲಿಸರು ಓಡ್ಯಾಡ್ಯಾರ ಬಲ್ಲಂಗಾ
ಗೋಳಿ ಫಾಯರ ಮಾಡತಾರ ಸಿಕ್ಕಾಂಗಾ
ರಾಯಣ್ಣ ಮ್ಯಾಗ ನಿಂತಕೊಂಡ ಗಾಳಿಹಂಗ ಹಾರ‍್ಯಾನ
ಗಟ್ಟಿ ಉಳ್ಳವರಿದ್ದರ ಬಂದ ಹಿಡಿರ‍್ಯೋ ನನಗ
ಹಿಂಗ ಹೇಳಿ ಕೇಳಿ ಜಿಗದಹೋದಾನ ಆಗಿಂದಾಗ|| ೧೯ ||
ತಾಸ ಹೊತ್ತೇರುದರೊಳಗ ರಾಯಣ್ಣ
ಮಲ್ಪೂರಿ ಹೊಳಿಗಿ ಬಂದ ನೋಡ್ಯಾನ ತಿಳಿನೀರ
ಈಶ್ಯಾಡತಾನ ರಾಯಣ್ಣ ತನ್ನ ಮನಸಿಗಿ ಬಂದಾಂಗ
ತಾಸ ವ್ಯಾಳೆ ಈಶ್ಯಾಡಿ ಬಂದ ದಂಡಿಮ್ಯಾಗ
ಕುಂತಕೊಂಡ ಕ್ಯಾವಿ ಹಚ್ಯಾನ ಬಲ್ಲಾಂಗ
ಮೈಮ್ಯಾಗ ಅರವಿ ಹಾಕೊಂಡ ದಂಡಿಮ್ಯಾಗ
ತಳವಾರ ಫಕೀರ ಓಡಿಬಂದೋ ಅವಾಗ|| ೨೦ ||
ಏ ಸಲಾಮರೆಪ್ಪಾ ರಾಯಪ್ಪ ಇದ ಬಂದೀರೇನಪ್ಪಾ
ಊರಾಗ ಆದ ಸುದ್ದಿ ಗೊತ್ತಿಲ್ಲರೇನಪ್ಪಾ ನಿಮಗ
ಕುಲಕರ್ಣಿ ಕತಿ ಮಾಡ್ಯಾನ ನಿನ್ನೆ ರಾತ್ರ್ಯಾಗ
ಅವ್ವನ ಚಾವಡಿಗಿ ಕರಿಸಿ ಡುಬ್ಬದಮ್ಯಾಗ ಕಲ್ಲಹೇರಿಸಿ
ಪಾಳೆ ಕೊಡ ಅಂತ ಬೈದೋ ಬಲ್ಹಾಂಗ
ಬಾಹಳ ಬೇದ ಅಬರು ಕಳದೋ ಹಾರವಾ ಮಂದ್ಯಾಗ
ಹ್ಯಾಂಗ ಮಾಡಿದರ ಅಂವಗ ಬಂದಿತೋ ಬುದ್ಧೀಗ|| ೨೧ ||
ಅಷ್ಟರೊಳಗ ನಿನ್ನ ಗೆಳೆಯಾ ಸುದ್ದಿ ಕೇಳಿ ಓಡಿ ಬಂದ
ಕಲ್ಲ ತಗಸೀದ ಡುಬ್ಬದ ಮ್ಯಾಲಿಂದ ಆಗಿಂದಾಗ
ಸಿಕ್ಕಂಗ ಬೇದೋ ಹಾರುವಾನ ಆಗ ಚಾವಡ್ಯಾಗ
ಸುದ್ದಿ ಕೇಳಿ ರಾಯಾ ನಿನ್ನ ಮುರದ ಮುದ್ದಿ ಮಾಡತಾನ
ಹತ್ಯಾರ ತಗೊಂಡ ಹರಿಯಾನ ಹರಿ ಮರಿ ಹರದಂಗ
ದುರಗಿ ಮುಂದ ಬ್ಯಾಟಿ ಕಡದ ಒಗದಂಗ ಒಗಿಯತಾನ
ಹಿಂಗ ಹೇಳಿದಪ್ಪ ಚನಬಸಣ್ಣ ನಿನ್ನೆ ಸಂಜಿದಾಗ|| ೨೨ ||
ಏ ಇಷ್ಟ ಮಾತಕೇಳಿ ರಾಯಾಗ ಆ ಕ್ಷಣದಾಗ
ಬಾಣಾ ಹೊಡದಂಗಾತ ಅವನ ಎದಿಯಾಗ
ಚಕ್ರಕ್ವಾಟಿ ಲಡಾಯಿಯೊಳಗ ರಾಯಣ್ಣ
ಅಭಿಮನ್ಯು ಆಗಿ ಜಿಗಿದಾನ ಸಂಗೊಳ್ಳಿಗೆ
ಗುಂಡ ಬಡದ ಹುಲಿ ಸಿಟ್ಟಿಗೇರಿ ಹರಿದಂಗ
ಕಾಲಮೆಟ್ಟಿ ಸೀಳತೀನ ಹಾರುವಾನೀಗ
ಗದ್ನಿ ಹೊಡಿಯತಾನೋ ಹೆಬ್ಬುಲಿಯಂಗ|| ೨೩ ||
ಕುಲಕರ್ಣಿ ಬಾಳಪ್ಪ ಕುಂತಿದ್ದಪ್ಪ ಚಾವಡ್ಯಾಗ
ಸುದ್ದಿಕೇಳಿ ಓಡಿಹೋದ ಮನಿ ಒಳಗ
ನಡಗ ಹತ್ತಿ ನಿಂದರ ಒಲ್ಲ ನಡಮನಿಯಾಗ
ಉಚ್ಚಿ ರಾಡಿ ಮಾಡಿಕೊಂಡ ಕಚ್ಚಿ ಒಳಗ
ಹದಿನಾರೆತ್ತಿನ ಇದರ ಗ್ವಾದ್ನಿ ಒಳಗ ಡಬ್ಬಬಿದ್ದಾ
ಮ್ಯಾಗ ದಂಟ ಒಟ್ಟಿಸಿ ಕೊಂಡ ಯಾರಿಗಿ ಕಾಣದಂಗ
ಅವನ ಹೆಣತಿ ಬಂದ ಕುಂತಾಳ ಬಾಗಿಲದಾಗ|| ೨೪ ||
ಏ ಬರಾಟ ಬಂದೋ ಊರಾರ
ನೋಡತಾನ ಚಾವಡ್ಯಾಗ
ಕುಲಕರ್ಣಿ ಮನಿಗಿ ಹೋಗಿದಾನ ಆಗಿಂದಾಗ
ಹಾರುವಾನ ಹೆಣತಿ ಕುಂತಿದ್ದಳೋ ಆಗ
ಮನದಾಗ ಮಿಡುಕೂತ ಆಗ ಬಾಗಿಲದಾಗ
ನೀ ನಮ್ಮ ತಾಯಿ ಸರಿ ಹಾರುವಾ ಎಲ್ಲಿ ಹೋಗ್ಯಾನ್ರಿ
ಅಂಜಬ್ಯಾಡ ತಾಯಿ ಹೇಳಬೇಕ ನನಗ|| ೨೫ ||
ಹಡದಪ್ಪ ರಾಯಪ್ಪ ಹಕೀಕತ ಹೇಳಪ್ಪ
ಶಾಂತನಾಗಿ ಕುಂಡರಪ್ಪ ಮಂಚದ ಮ್ಯಾಲ
ಕುಡಿಲಾಕ ಕೊಡತೀನ ಸಕ್ಕರಿ ಹಾಲ
ಬೀಳತೀನಿಯಪ್ಪ ನಿನ್ನ ಪಾದದಮ್ಯಾಲ
ಗ್ವಾದನಿಮ್ಯಾಗ ನಿಂತನೋಡ್ಯಾನಂಟದಮ್ಯಾಲ
ಹೊಂಟ ಹೋಗಿದಾನ ಬಾಳ್ಯಾ ಮನಿಯಾಗಿಲ್ಲ
ಏನ ಕೈಗೆ ಸಿಗವಲ್ಲ ಬಾಳ್ಯಾ ನನಗೀಗ|| ೨೬ ||
ಏ ಸಿಕಾರಿ ಸಿಗದ ಸಿಂಹನ್ಹಂಗ
ಹೌಸ ಇಲ್ಲೋ ಮನದಾಗ
ಮನಿಗೆ ಬಂದ ಬಿದ್ದಾನ ತಾಯಿ ಪಾದಮ್ಯಾಲ
ಹಡದವ್ವ ಹಾರುವ ಕತಿ ಹೇಳ ನನಗೀಗ
ಸಮಾಧಾನ ಆಗವಲ್ಲದವ್ವ ತಾಯಿ ನನಗ
ನನ್ನ ಕೀರ್ತಿ ಜಗದಾಗ ಹಬ್ಬೇತೀಗ
ಇಂಗ್ರೇಜರನ ಓಡಸ್ತೀನಿ ಮತ್ತ ಬರದಂಗ|| ೨೭ ||
ಜಗಳ ಹುಟ್ಟುದು ಬ್ಯಾಡಂತ
ಮುಚ್ಚಿ ಇಟಗೊಂಡಳ ಕೆಂಚವ್ವ
ಬಚ್ಚಿ ಹೇಳವಳ್ಳ ಆಗ ರಾಯಪ್ಪಗ
ಬೆಂಕಿ ಹಚ್ಚಿ ಮಂದಿ ನಿನಗ ಸುಳ್ಳ
ಮೋಜನೋಡಿ ನಗಬೇಕಂತಾರ
ಜಾಜಿ ಮಲ್ಲಿಗಿ ವನಾ ಹಾಳ ಮಾಡಿದಂಗ
ಮಾಡತಾರ ಮಂದಿ ಮಾನು ಲೋಕದೊಳಗ|| ೨೮ ||
ಏ ಸಿಟ್ಟಿಗೇರಿದ ರಾಯಪ್ಪಗ
ಎಷ್ಟೇ ಹೇಳಿದರ ಕೇಳವಲ್ಲ
ನಾಟ ಒಲ್ಲದ ತಾಯಿ ಅವಂಗ
ಹಾಲ ಉಕ್ಕಿದಂಗ ಉಕ್ಕತೈತಿ ಮ್ಯಾಗಮ್ಯಾಗ
ಹತ್ಯಾರ ತಕ್ಕೊಂಡ ಕೈಯಾಗ ತಾಯಿಗೆಂತಾನ
ಹೇಳತಾನ ತಾಯಿಗೆ ನಾಡಿನ ಗೋಳವನಾ
ಹಾವಳಿ ಮಾಡಿ ಬರತೀನಿ ಸರಕಾರ ಅಂಜುವಂಗ|| ೨೯ ||
ಹದನಾರ ಎತಗೋಳ ಇದರಗ್ವಾದಿನಿ
ಕಟ್ಟಿದ್ದು ಅಪ್ಪ ಹಗ್ಗ ಹಚ್ಚಿ ಬಿಟ್ಟಾನಾಗ
ರಾವ ತುಂಬಿದ ಇದರ ಯಾರು ಇಲ್ಲದಂಗ
ರಾಮದುರ್ಗ ಪ್ಯಾಟ್ಯಾಗ ಕೈಗೆ ಬಂದ್ಹಾಂಗ
ಎಲ್ಲ ಎತಗೋಳ ಮಾರತಾನ ಬಲ್ಹಾಂಗ
ದೇಶದ ಚಿಂತಿಯೊಳಗ ಮರತಾನ ಮನಿಮಾರಾಗ
ರೂಪಾಯಿ ಎಣಸಿಕೊಂಡ ಹಾಕೊಂಡ ಹಮ್ಮಿನದಾಗ|| ೩೦ ||
ಏ ಒತ್ತರಮಾಡಿ ಬಂದಾನಪ್ಪಾ
ಹೊತ್ತ ಮುನುಗುದರೊಳಗ
ಹುಲಿ ಬಂದ ಹೊಕ್ಕಂಗಾತ ಸಂಗೊಳ್ಯಾಗ
ಏನ ಬಂಟ ಹುಟ್ಟಿದಪ್ಪಾ ನಮ್ಮೂರಾಗ
ಸಣ್ಣ ದೊಡ್ಡವರು ಗಂಡಸರು ಹೆಂಗಸರಾಗ
ಮಾತಾಡತಾರ ಕುಂತಗೊಂಡ ಕಟ್ಟಿಮ್ಯಾಗ
ರಾಯಣ್ಣ ಅದಾನ ಗಟ್ಟಿಕ ಅವರ ಅಜ್ಜನಂಗ|| ೩೧ ||
ಅತ್ತಿಮನಿ ಸೊಸ್ತ್ಯಾರ ಜಿತ್ತಲಿಂದ ಮಾತಾಡತಾರ
ಹತ್ತ ಹಡಿಯುದಕಿಂತ ಒಂದ ಮುತ್ತಹಡಿಯಾನ
ನಮ್ಮ ಊರ ಸಂಗೊಳ್ಳಿ ರಾಯಣ್ಣನಂತವನ
ಸಿಸ್ತದಿಂದ ಉಲ್ಲಾ ಮಾಡಿ ಪದಾಮಾಡ್ಯಾರ ಚಂದ
ಹಾಡತಾರ ಗಂಡು ಹೆಣ್ಣು ರಾಯಣ್ಣನಮ್ಯಾಗ
ರಾಯಣ್ಣ ದಂಡಕೂಡಿಸುತ ನಡದಾನ ನಾಡಿನಮ್ಯಾಗ
ಪಿರಂಗ್ಯಾರನ ಹೊಡೆಯತಾನ ಮುಂದಿನ ಸಂದಿನ್ಯಾಗ|| ೩೨ ||
ಏ ಕಲ್ಪಿಕದೊಳಗ ಚಿಕ್ಕನಂದಿ
ಕವಿತಾದೊಳಗ ಬಹಳಮಂದಿ
ಪದಗೋಳ ಮಾಡತಾರ ಚಂದಚಂದಾ
ಶ್ಯಾನಾರ ಕೇಳಿರೆಪ್ಪ ಪದಾ ಪ್ರೀತಿಯಿಂದಾ
ಇಲ್ಲಿಗೆ ಆತರೆಪ್ಪ ಒಂದ ಸಂದಾ
ಸಂಗೊಳ್ಳಿ ರಾಯಣ್ಣ ಇಂಗ್ರೇಜರನ ವಧಾಮಾಡಿದ
ಕಿತ್ತೂರ ನಾಡಿಗೆ ಕೀರ್ತಿ ತರುದು ಉಳಿತ ಮುಂದಾ|| ೩೩ ||
ರಚನೆ : ಚಿಕ್ಕನಂದಿ
ಕೃತಿ : 
ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ

ಕಾಮೆಂಟ್‌ಗಳಿಲ್ಲ: