ಭಾನುವಾರ, ಡಿಸೆಂಬರ್ 4, 2016

ಲಿಂಗಾಂತರಿಗಳ ಹೋರಾಟದ ಕಥನ


-ಅರುಣ್ ಜೋಳದಕೂಡ್ಲಿಗಿ
21hpt04-480x321
ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ತಪ್ಪು ತಿಳುವಳಿಕೆಯನ್ನು ಪ್ರಸಾರ ಮಾಡಿದ ಟಿ.ವಿ 9 ಕುರಿತು ಟ್ರಾನ್ಸ್‍ಜೆಂಡರ್ ಸಮುದಾಯವು `ಸ್ಟಾಪ್ ಟ್ರಾನ್ಸ್ ಫೋಬಿಯಾ’ ಎನ್ನುವ ಅಭಿಯಾನವನ್ನು ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ 21 ಅಕ್ಟೋಬರ್ 2016 ರಂದು ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಟೌನ್ ಹಾಲ್ ವರೆಗೂ `ಟ್ರಾನ್ಸ್ ಜೆಂಡರ್ ಸಮುದಾಯದ ನಡಿಗೆ; ಸಮಾನತೆಯೆಡೆಗೆ’ ಎನ್ನುವ ಸ್ವಾಭಿಮಾನಿ ಹಕ್ಕೊತ್ತಾಯದ ಜಾಥಾವನ್ನು ಹಮ್ಮಿಕೊಂಡಿದ್ದರು. ಸಾವಿರಾರು ಲಿಂಗಾಂತರಿ ಸಮುದಾಯದ ಪ್ರತಿನಿಧಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಟ್ರಾನ್ಸ್ ಜೆಂಡರ್ ಸಮಿತಿ, ಕರ್ನಾಟಕ ಮಂಗಳಮುಖಿ ಸಂಘಟನೆ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಜೀವ, ಒಂದೆಡೆ, ಸಮರ, ಸಾರಥ್ಯ, ಸ್ವಾತಂತ್ರ್ಯ, ಮುಂತಾದ ಸಂಘಟನೆಗಳು ಈ ಹೋರಾಟವನ್ನು ಜಂಟಿಯಾಗಿ ಆಯೋಜಿಸಿದ್ದವು.

1111ಈ ಚಳವಳಿಯಲ್ಲಿ ತಮ್ಮ ಉಳಿವಿನ ಹೋರಾಟದಂತೆ ಲಿಂಗಾಂತರಿ ಸಮುದಾಯವು ಆತಂಕದಿಂದಲೂ, ಸಿಡಿದೆದ್ದ ಕೆಚ್ಚಿನಿಂದಲೂ ಕೂಗುತ್ತಾ ತಮ್ಮ ಹಕ್ಕೊತ್ತಾಯಗಳನ್ನು ಸರಕಾರಕ್ಕೆ ಸಲ್ಲಿಸಿದರು. ಈಚಿನ ಐದಾರು ವರ್ಷಗಳಲ್ಲಿ ಬೆಂಗಳೂರು ಒಳಗೊಂಡಂತೆ ಕರ್ನಾಟಕದಾದ್ಯಾಂತ ಇಂತಹ ಲಿಂಗಾಂತರಿ ಸಮುದಾಯದ ಪ್ರತಿಭಟನೆಗಳು ನಡೆದಿವೆ. ಈ ಎಲ್ಲಾ ಹೋರಾಟಗಳ ಒಂಟಿ ಧ್ವನಿಯೆಂದರೆ, `ನಮ್ಮನ್ನು ಘನತೆಯಿಂದ ಬದುಕಲು ಬಿಡಿ, ಘನತೆಯ ಬದುಕಿಗೆ ಅವಕಾಶ ಕೊಡಿ, ಮನುಷ್ಯರಂತೆ ನಮ್ಮನ್ನು ಭಾವಿಸಿ’ ಎನ್ನುವುದೇ ಆಗಿದೆ. ಜಾಗತಿಕ ನೆಲೆಯಲ್ಲಿಯೂ ಇದೇ ಬೇಡಿಕೆ ಮುಖ್ಯವಾಗಿದೆ.
1546365_552513911506058_1290251370_n

ಹೀಗೆ ಲಿಂಗಾಂತರಿ ಸಮುದಾಯವು ಇಂದು ಒಟ್ಟಾಗಿ ದೊಡ್ಡಮಟ್ಟದಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ. ತನ್ನ ಸಂವಿಧಾನಿಕ ಹಕ್ಕುಗಳನ್ನು ಗಟ್ಟಿಧ್ವನಿಯಲ್ಲಿ ಕೇಳುತ್ತಿದೆ. ಲಿಂಗಬದಲಾವಣೆ ತಮ್ಮ ತಪ್ಪಲ್ಲ ಸಹಜ ಜೈವಿಕ ಬದಲಾವಣೆ ಎನ್ನುವುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುತ್ತಿದೆ. ಜಾಗತಿಕವಾಗಿ ಈ ಹೋರಾಟಕ್ಕೆ ದೊಡ್ಡ ಚರಿತ್ರೆಯಿದೆ. ಭಾರತದಲ್ಲಿ ಮುಖ್ಯವಾಗಿ ತಮಿಳುನಾಡಿನ ಲಿಂಗಾಂತರಿಗಳ ಹೋರಾಟ ದೇಶಕ್ಕೇ ಮಾದರಿಯಾಗಿದೆ. ಇದೀಗ ಕರ್ನಾಟಕದ ಸಂದರ್ಭದಲ್ಲಿಯೂ ಈ ಬಗೆಯ ಲಿಂಗಾಂತರಿಗಳ ಹೋರಾಟ ಗಟ್ಟಿ ಸ್ವರೂಪವನ್ನು ಪಡೆಯುತ್ತಿದೆ. ಇಂತಹ ಲಿಂಗಾಂತರಿ ಸಮುದಾಯದ ಹೋರಾಟದ ಕಥನದ ಕೆಲವು ಎಳೆಗಳಲ್ಲಿ ಇಲ್ಲಿವೆ.
**
ದೇಶದಾದ್ಯಾಂತ ಗಂಡಿನಿಂದ ಹೆಣ್ಣಾಗಿ ಬದುಕುವವರನ್ನು ಹಿಜಿಡಾ, ಕೋತಿ, ಷಂಡ, ನಂಬರ್ ನೈನ್, ಗಂಡುಜೋಗ್ತಿ, ಹೀಗೆ ದೊಡ್ಡ ಪಟ್ಟಿ ಮಾಡುವಷ್ಟು ನುಡಿಗಟ್ಟುಗಳಿಂದ ಈ ಸಮುದಾಯವನ್ನು ಗುರುತಿಸಲಾಗುತ್ತಿದೆ. ಈ ಅವಮಾನದ ಬಿಡುಗಡೆಗಾಗಿ ಹಲವರು ಗೌರವಸೂಚಕಗಳಾದ ಶಿವಶಕ್ತಿ, ಅರವಣೀಸ್, ಮಂಗಳಮುಖಿ ಮುಂತಾದ ನುಡಿಗಟ್ಟುಗಳನ್ನೂ ಬಳಕೆಗೆ ತಂದರು. ವಿಪರ್ಯಾಸವೆಂದರೆ ಈ ನುಡಿಗಟ್ಟುಗಳೂ ಕಾಲಾನಂತರದಲ್ಲಿ ಅವಮಾನಿಸುವ ಪದಗಳಾಗಿ ಬದಲಾಗಿವೆ. ಸುಪ್ರಿಂ ಕೋರ್ಟ್ ಮಾನ್ಯ ಮಾಡಿದ ಥರ್ಡ್ ಜೆಂಡರ್ ನುಡಿಗಟ್ಟು ಕೂಡ ತರತಮದ್ದು. ಕಾರಣ ಗಂಡನ್ನು ಪ್ರಥಮಲಿಂಗ, ಹೆಣ್ಣನ್ನು ದ್ವಿತೀಯಲಿಂಗ, ಈ ಎರಡೂ ಅಲ್ಲದವರನ್ನು ತೃತೀಯ ಲಿಂಗವೆಂದು ಕರೆಯುವ ಈ ಪದ ಸಮಾಜದ ಶ್ರೇಣೀಕರಣಕ್ಕೆ ಪುಷ್ಟಿಯಾಗಿದೆ. ನಿಜವೆಂದರೆ ಜೈವಿಕವಾಗಿ ಹಾರ್ಮೋನ್ಸ್ ವೈಪರೀತ್ಯದಿಂದಾಗಿ ದೇಹದ ಒಳಗೆ ಒಂದು `ಲಿಂಗಾಂತರ’ ಪ್ರಕ್ರಿಯೆ ನಡೆಯುತ್ತದೆ. ಅದನ್ನು `ಟ್ರಾನ್ಸ್’ ಎನ್ನಬಹುದು. ಈ ನೆಲೆಯಲ್ಲಿ ಟ್ರಾನ್ಸ್ ಜೆಂಡರ್ ಎನ್ನುವುದು ಜೈವಿಕವಾಗಿ ವೈಜ್ಞಾನಿಕ ನುಡಿಗಟ್ಟು. ಇದೀಗ ಈ ಸಮುದಾಯವೂ ಜಾಗತಿಕವಾಗಿ ಈ ಪದವನ್ನು ಮಾನ್ಯ ಮಾಡುತ್ತಿದೆ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ `ಲಿಂಗಾಂತರಿ’ ಸಮೀಪವರ್ತಿ ಪದವಾಗಿದೆ.
1525108_10152125768833764_691664526_n

  `ಲಿಂಗಾಂತರಿ’ ಎಂದರೆ ಗಂಡು ಹೆಣ್ಣೆಂಬ ಎರಡು ಲಿಂಗಗಳ ನಡುವೆ ಅಂತರವನ್ನು ಕಾಯ್ದುಕೊಂಡು, ಈ ಎರಡರ ಲಕ್ಷಣಗಳನ್ನೂ ಒಳಗೊಂಡು, ಪ್ರತ್ಯೇಕ ಲಿಂಗದ ಗುಣಗಳನ್ನು ಹೊಂದಿದ ದೈಹಿಕ, ಮಾನಸಿಕ, ಲೈಂಗಿಕ ಸ್ಥಿತಿಯನ್ನು ತೋರ್ಪಡಿಸುವ ಒಂದು ಸಮುದಾಯ ಎಂದು ಹೇಳಬಹುದು. ಅಂದರೆ ಎರಡೂ ಲಿಂಗಗಳ ಅಂತರವಿರುವ, ಏಕಕಾಲಕ್ಕೆ ಎರಡೂ ಲಿಂಗಗಳ ಲಕ್ಷಣಗಳನ್ನು ಅಡಗಿಸಿಟ್ಟುಕೊಂಡ ಒಂದು ದೈಹಿಕ ಸ್ವರೂಪವಾಗಿದೆ. ಅಂತೆಯೇ ಗಂಡು ಹೆಣ್ಣು ಎಂಬ ಎರಡು ಲಿಂಗಗಳಿಗೆ ಆರೋಪಿಸಲಾದ ಗುಣಗಳನ್ನು ಪಾಲಿಸದ, ಅಥವಾ ಆ ಎಲ್ಲೆಗಳನ್ನು ಮೀರುವ ಒಂದರೊಳಗೊಂದು ಸಂಕರಗೊಂಡ ಲಕ್ಷಣಗಳನ್ನು ತೋರ್ಪಡಿಸುವ ಸಮುದಾಯ ಎಂತಲೂ ಗುರುತಿಸಬಹುದು.

ಲಿಂಗಾಂತರಿ ಸಮುದಾಯದಲ್ಲಿ ಗುರುತಿಸಬಹುದಾದ ಕೆಲವು ಗುಂಪುಗಳನ್ನು ಪರಿಶೀಲಿಸೋಣ. ಗಂಡಿನಿಂದ ಹೆಣ್ಣಾದ, ಹೆಣ್ಣಿನಿಂದ ಗಂಡಾದ ಮತ್ತು ಗಂಡಿನಲ್ಲಿ ಹೆಣ್ಣಿನ ಭಾವನೆಗಳೊಂದಿಗೆ, ಹೆಣ್ಣಿನಲ್ಲಿ ಗಂಡಿನ ಭಾವನೆಗಳೊಂದಿಗೆ ಬದುಕುವ ಸಮುದಾಯ, ಅಂತೆಯೇ ಹೆಣ್ಣು ಹೆಣ್ಣಿನೊಂದಿಗೆ, ಗಂಡು ಗಂಡಿನೊಂದಿಗೆ ಅದಲು ಬದಲಾದ ಲೈಂಗಿಕ ಇಚ್ಚೆಗಳನ್ನು ವ್ಯಕ್ತಪಡಿಸುವ ಮತ್ತು ಪೂರೈಸಿಕೊಳ್ಳುವ ಸಮುದಾಯ. ಹೀಗೆ ಲಿಂಗಾಂತರದ ಕಾರಣಕ್ಕೆ ಗಂಡು ಹೆಣ್ಣಿನ ಚೌಕಟ್ಟುಗಳಾಚೆಗೆ ರೂಪುಗೊಂಡ ಉಪ ಗುಂಪುಗಳನ್ನು ಲಿಂಗಾಂತರಿ ಸಮುದಾಯ ಎಂದು ಗುರುತಿಸಬಹುದು.
**
ಟ್ರಾನ್ಸ್‍ಜೆಂಡರ್ ಸಮುದಾಯವನ್ನು ಜಾಗತಿಕ ನೆಲೆಯಲ್ಲಿ ನೋಡಿದಾಗಲೂ ಗಂಡು-ಹೆಣ್ಣು ಲಿಂಗರಚನೆಯ ಸಾಮಾಜಿಕ ದೃಷ್ಟಿಕೋನದ ಕೆಂಗಣ್ಣಿಗೆ ತುತ್ತಾದ ದುಃಖದ ಕಥನಗಳೇ ತುಂಬಿವೆ. ಹಾಗೆ ನೋಡಿದರೆ ಈ ಹಾರ್ಮೋನ್ಸ್ ವೈಪರೀತ್ಯಕ್ಕೆ ಒಳಗಾದ ಸಮುದಾಯವನ್ನು ಜಾಗತಿಕವಾಗಿಯೂ ಒಂದೇ ತೆರನಾಗಿ ಕಂಡಿದೆ. ಅಂತೆಯೇ ಇಂತಹ ದೃಷ್ಟಿಕೋನವನ್ನು ಬದಲಾಯಿಸಲು ಜಾಗತಿಕವಾಗಿಯೂ ಈ ಸಮುದಾಯ ದೊಡ್ಡ ಮಟ್ಟದ ಹೋರಾಟಗಳನ್ನು ರೂಪಿಸಿದೆ. ನಿರಂತರವಾಗಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಅದೇ ಸಮುದಾಯ ಹಗಲಿರುಳು ಶ್ರಮಿಸಿದೆ. ಈ ಹೋರಾಟಗಳು ಗಂಡು ಹೆಣ್ಣು ಸಂರಚನೆಯ ಸಮಾಜದಾಚೆಯ ಹೊಸ ಜಗತ್ತನ್ನು ಕಣ್ಣೆದುರು ತಂದಿವೆ. ಗಂಡು ಹೆಣ್ಣಿಗೆ ಆರೋಪಿಸಿದ ಲಕ್ಷಣಗಳಿಗೆ ಲಗತ್ತಾಗದ ಮತ್ತೊಂದು ಸಮುದಾಯವೇ ಜಗತ್ತಿನಾದ್ಯಾಂತ ರೂಪುಗೊಂಡಿದೆ. ಜಾಗತಿಕವಾಗಿ ಈ ಸಮುದಾಯ ಹಲವು ಹಕ್ಕೊತ್ತಾಯಗಳನ್ನು ಮಂಡಿಸುತ್ತಿದೆ.
11

ಲಿಂಗ ಪರಿವರ್ತಿತ ಶಾಲಾ ಮಕ್ಕಳ ರಕ್ಷಣೆಗೆ ಕಾಯ್ದೆ
ಕ್ಯಾಲಿಫೋರ್ನಿಯಾದಲ್ಲಿ ಲಿಂಗ ಪರಿವರ್ತಿತ ವಿದ್ಯಾರ್ಥಿಗಳ ಹಕ್ಕನ್ನು ಕಾಪಾಡಲು ಮತ್ತು ಇವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುವಾಗುವಂತೆ ಆರಂಭಿಕವಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಈ ಕುರಿತಾದ School Succ1525108_10152125768833764_691664526_ness and Opportunity Act, (SSOA) ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯಿದೆ ಜಾರಿಗೆ ಸಾಕಷ್ಟು ವಿರೋಧ ಬಂದರೂ ಅದನ್ನು ಲೆಕ್ಕಿಸದೆ ಕಾಯಿದೆ ಜಾರಿ ಮಾಡುವಲ್ಲಿ ಈ ಭಾಗದ ಎಲ್.ಜಿ.ಬಿ.ಟಿ ಕಮ್ಯನಿಟಿ (ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್‍ಜೆಂಡರ್) ಸಾಕಷ್ಟು ಶ್ರಮಪಟ್ಟಿದೆ.

ಎಲ್ಜಿಬಿಟಿ ಸಮುದಾಯದ 40% ರಷ್ಟು ವಿದ್ಯಾರ್ಥಿಗಳು ಮನೆ ಇಲ್ಲದೆ ಅಲೆಯುತ್ತಿದ್ದಾರೆ. 6 ರಿಂದ 12 ನೇ ತರಗತಿ ಒಳಗಿನ 8,500 ಎಲ್ಜಿಬಿಟಿ ವಿದ್ಯಾರ್ಥಿಗಳಲ್ಲಿ 85% ಹಿಯಾಳಿಸುವುದರಿಂದ ಹಿಂಸೆಗೆ ಒಳಗಾಗಿದ್ದರೆ, 38% ರಷ್ಟು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಬಗೆಯ ಎಲ್ಜಿಬಿಟಿ ಸಮುದಾಯಕ್ಕೆ ಆಗುತ್ತಿರುವ ಹಿಂಸೆಯನ್ನು ವಿರೋಧಿಸಿ GLSEN (Gay, Lesbian and Straight Education Network)  ಸಂಸ್ಥೆಯು ಇದರ ವಿರುದ್ಧ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿತ್ತು.

ಲಿಂಗ ವೈಪರೀತ್ಯವನ್ನು ಅನುಭವಿಸುವ ಸಮುದಾಯಗಳು ಎಲ್ಲಾ ಬಗೆಯ ಹಿಂಸೆ, ಕಿರುಕುಳ, ಅವಮಾನಗಳನ್ನು ಎದುರಿಸಲು ಈ ಸಮುದಾಯ ಶಿಕ್ಷಿತರಾಗಬೇಕು, ಶಿಕ್ಷಣ ಮಾತ್ರ ಈ ಸಮುದಾಯ ತನ್ನನ್ನು ತಾನು ಬಿಡುಗಡೆಗೊಳಿಸಿಕೊಳ್ಳುವ ದಾರಿಗಳನ್ನು ತೆರೆಯಬಲ್ಲದೆಂದು ಕ್ಯಾಲಿಫೋರ್ನಿಯಾದ National Center for Transgender  Equality  ಅಭಿಪ್ರಾಯ ಪಟ್ಟಿತ್ತು. ಈ ಸಂಸ್ಥೆ 2010 ರಲ್ಲಿ ಮಾಡಿದ ಅಧ್ಯಯನದ ಪ್ರಕಾರ ಲಿಂಗ ಬದಲಾವಣೆಯ ಲಕ್ಷಣ ಕಾಣಿಸಿಕೊಂಡ ಶೇ 60 ರಷ್ಟು ಮಕ್ಕಳು ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆಂದು ತಿಳಿಸಿದೆ. ಅಂತೆಯೇ ಇವರ ಶಿಕ್ಷಣ ಕುಂಟಿತವಾಗುವುದೂ ಕೂಡ ಈ ಸಮುದಾಯ ಪ್ರಭಲವಾಗಿ ಹೋರಾಟ ಕಟ್ಟದಿರಲು ಕಾರಣವಾಗಿದೆ ಎಂದಿದೆ. ಓಅಖಿಇ ವರದಿಯನ್ನು ಆಧರಿಸಿಯೇ ಲಿಂಗ ಬದಲಾವಣೆಯ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಲಾಗಿದೆ.

ಅಂತೆಯೇ SSOA ಕಾಯ್ದೆಯು ಸಾಮಾನ್ಯ ಶಾಲೆಗಳು ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೊಳಿಸಿದೆ. ಯಾವುದೇ ಶಾಲೆಯಲ್ಲಿ ಲಿಂಗಬದಲಾವಣೆಯ ಲಕ್ಷಣಗಳಿರುವ ಮಕ್ಕಳಿಗೆ ಹಿಂಸಿ ಕೊಟ್ಟರೆ, ಅವಮಾನ ಮಾಡಿದರೆ, ಪ್ರತ್ಯೇಕವಾಗಿ ಗುರುತಿಸಿ ಹೊರಗಿಡುವ ಪ್ರಯತ್ನ ಮಾಡಿದರೆ ಅದು ಶಿಕ್ಷಾರ್ಹ ಅಪರಾದ ಎಂದು ಈ ಕಾಯಿದೆ ಹೇಳುತ್ತದೆ. ಪ್ರತಿಶಾಲೆಯಲ್ಲಿಯೂ ಈ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡಂತೆ, ವಿರಾಮ ಕೊಠಡಿಗಳನ್ನೂ ಮಾಡಬೇಕಾಗಿದೆ ಎಂದು ಹೇಳಿದೆ. ಅಂತೆಯೇ ಲಿಂಗವೈಪರೀತ್ಯದ ಸಹಜ ಪ್ರಕ್ರಿಯೆಗಳನ್ನು ಅರ್ಥಮಾಡಿಸುವ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವುದನ್ನು ಈ ಕಾಯಿದೆ ಕಡ್ಡಾಯಗೊಳಿಸಿದೆ. ವಿಶೇಷವೆಂದರೆ, California State Parent Teacher Association, or PTA  ಕೂಡಾ ಈ ಕಾಯಿದೆಯನ್ನು ಬೆಂಬಲಿಸಿದೆ.
1546365_552513911506058_1290251370_n

ವಿಶ್ವಲಿಂಗಾಂತರಿ ದಿನ
ಲಿಂಗಾಂತರಿ ಸಮುದಾಯವು ` Transgender Day of Remembrance’ ’ ಎಂದು ಕರೆದುಕೊಂಡಿದ್ದಾರೆ. ಲಿಂಗಬದಲಿ ಸಮುದಾಯಕ್ಕೆ ಜಾಗತಿಕವಾಗಿ ಒಂದೇ ಬಗೆಯ ನೋವಿದೆ, ಒಂದೇ ಬಗೆಯ ಹಿಂಸೆ ಇದೆ ಹಾಗಾಗಿ ಇದನ್ನು ವಿರೋಧಿಸಲು ಸಹಾ ಜಾಗತಿಕ ಹೋರಾಟಗಳನ್ನು ರೂಪಿಸಬೇಕಾದ ಅಗತ್ಯವನ್ನು ಇಂದು ಈ ಸಮುದಾಯ ಮನಗಂಡಿದೆ. ಹಾಗಾಗಿ ಜಾಗತಿಕ ನೆಲೆಯ ಸಂಕೇತಗಳ ಅಡಿಯಲ್ಲಿ ಈ ಸಮುದಾಯ ತನ್ನ ಅಸ್ಥಿತ್ವವನ್ನು ಕಂಡುಕೊಳ್ಳುತ್ತಿದೆ. ಇದರ ಭಾಗವಾಗಿಯೇ ನವೆಂಬರ್ 20 ನೇ ತಾರೀಕನ್ನು ಟ್ರಾನ್ಸ್ ಜೆಂಡರ್ ಡೇ ಎಂದು ಆಚರಣೆ ಮಾಡಲಾಗುತ್ತಿದೆ. ಈ ದಿನವನ್ನು ಭಾರತದಲ್ಲಿನ ಈ ಸಮುದಾಯಗಳೂ ಹೋರಾಟದ ಸಂಕೇತವಾಗಿ ಆಚರಿಸಲು ಆರಂಭಿಸಿವೆ.

ಅಮೇರಿಕಾದ ಆಫ್ರಿಕನ್ ಮೂಲದ ರಿತ ಹೆಸ್ಟರ್ ಎಂಬ ಟ್ರಾನ್ಸ್ ಮಹಿಳೆಯನ್ನು 1998 ರ ನವೆಂಬರ್ ನಂದು ಕೊಲೆಗೈಯಲಾಗುತ್ತದೆ. ಈ ಕೊಲೆಯನ್ನು ವಿರೋಧಿಸಿ ಅಮೇರಿಕಾದಾದ್ಯಾಂತ ಹೋರಾಟ ಚಳವಳಿಗಳು ನಡೆದವು. ಈ ಸಾವನ್ನು ನೆನಪಿಸಿಕೊಳ್ಳುವ ಭಾಗವಾಗಿ ನವೆಂಬರ್ 20ನ್ನು ರಾಷ್ಟ್ರೀಯ `ಟ್ರಾನ್ಸ್ ಜೆಂಡರ್ ಡೇ ಆಪ್ ರಿಮೆಂಬರನ್ಸ್’ ಎಂಬ ಹೆಸರಲ್ಲಿ ಆಚರಿಸಲಾಗುತ್ತದೆ.

ಲಿಂಗಾಂತರಿ ಬಾವುಟ
LONDON - JULY 05: A flag flies during the Gay Pride parade on July 5, 2008 in London. The parade consists of celebrities, floats, and performers celebrating the UK's largest gay and lesbian festival. (Photo by Mark Wieland/Getty Images)  (Photo by Mark Wieland/Getty Images)

LONDON - JULY 05: A flag flies during the Gay Pride parade on July 5, 2008 in London. The parade consists of celebrities, floats, and performers celebrating the UK's largest gay and lesbian festival. (Photo by Mark Wieland/Getty Images)  (Photo by Mark Wieland/Getty Images)
LONDON – JULY 05: A flag flies during the Gay Pride parade on July 5, 2008 in London. The parade consists of celebrities, floats, and performers celebrating the UK’s largest gay and lesbian festival. (Photo by Mark Wieland/Getty Images) (Photo by Mark Wieland/Getty Images)

ಟ್ರಾನ್ಸ್ ಜೆಂಡರ್ ಸಮುದಾಯದ ಹೋರಾಟಗಳಲ್ಲಿ ಬಾವುಟವೊಂದು ಹಾರಾಡುತ್ತಿದೆ. ಈ ಬಾವುಟವು ಈ ಸಮುದಾಯದ ಅನನ್ಯತೆಯನ್ನು ಸಾರುತ್ತಿದೆ. ಮೇಲೆ ಕೆಳಗೆ ಕ್ರಮವಾಗಿ ಎರಡು ನೀಲಿ, ಎರಡು ಗುಲಾಬಿ, ನಡುಮಧ್ಯೆ ಬಿಳಿ ಬಣ್ಣವನ್ನು ಒಳಗೊಂಡ ಈ ಬಾವುಟದ ರಚನೆಯು ಲಿಂಗಸಂಬಂಧಿ ಸಂಕರಶೀಲತೆಯನ್ನು ಸಂಕೇತಿಸುತ್ತದೆ. ಗಂಡು ಮಗುವಿನ ಸಂಪ್ರದಾಯಿಕತೆಯನ್ನು ನೀಲಿ ಬಣ್ಣ ಸೂಚಿಸುತ್ತದೆ. ಹೆಣ್ಣು ಮಗುವಿನ ಸಾಂಪ್ರದಾಯಿಕತೆಯನ್ನು ಗುಲಾಬಿ ಬಣ್ಣ ಸೂಚಿಸುತ್ತಿದೆ. ಅಂತೆಯೇ ನಡುವಿನ ಬಿಳಿ ಬಣ್ಣ ಲಿಂಗ ಬದಲಾದ ಅಥವಾ ತಟಸ್ಥ ಲಿಂಗಿಗಳನ್ನು ಸೂಚಿಸುತ್ತದೆ. ಇಂದು ಈ ಬಾವುಟವನ್ನು ಜಗತ್ತಿನಾದ್ಯಾಂತ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಕ್ಕೆ ಒಂದು ಸಾಂಕೇತಿಕವಾಗಿ ಬಳಕೆಯಾಗುತ್ತಿದೆ.

ಟ್ರಾನ್ಸ್ ಜೆಂಡರ್ ಮಹಿಳೆ ಮೋನಿಕಾ ಹೆಲ್ಮ್‍ಈ ದ್ವಜವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ಮೊದಲ ಬಾರಿಗೆ 2000 ರಲ್ಲಿ ಫೀನಿಕ್ಸ್ ಅರಿಜೋನ, USಂ ನಲ್ಲಿ ಒಂದು ಪ್ರೈಡ್ ಪೆರೇಡ್‍ನಲ್ಲಿ ಹಾರಿಸಲಾಯಿತು. ಹೆಲ್ಮ್ ಈ ಧ್ವಜ ಹಾರಿದ ಸಂದರ್ಭದಲ್ಲಿ `ಬೆಳಕಿನ ನೀಲಿ ಬೇಬಿ ಹುಡುಗರ ಸಾಂಪ್ರದಾಯಿಕ ಬಣ್ಣವಾಗಿದೆ, ನಸುಗೆಂಪು ಹುಡುಗಿಯರನ್ನು ಸೂಚಿಸುತ್ತದೆ, ಮಧ್ಯದ ಬಿಳಿ ಬಣ್ಣ ಯಾವುದೇ ಲಿಂಗ ಹೊಂದದ ಭಾವವಾಗಿದೆ. ಈ ಬಾವುಟ ಹಾರುತ್ತಿದ್ದರೆ, ನಮ್ಮ ಜೀವನದಲ್ಲಿ ಬದುಕುವ ಹಕ್ಕಿಗಾಗಿ ನಾವು ತಹತಹಿಸುತ್ತಿದ್ದೇವೆ ಎನ್ನುವುದನ್ನು ಸಾಂಕೇತಿಸುತ್ತದೆ’ ಎಂದು ಹೇಳಿದ್ದಾಳೆ.

ಲಿಂಗಬದಲಿ ಮಹಿಳಾ ಸಮುದಾಯ ಇತಿಹಾಸದಲ್ಲಿ ಮೊದಲ ಬಾರಿಗೆ, ಸ್ಯಾನ್ ಫ್ರಾನ್ಸಿಸ್ಕೊನ ಹಾರ್ವೆ ಮಿಲ್ಕ್ ಪ್ಲಾಜಾದಲ್ಲಿರುವ ಸಾಂಪ್ರದಾಯಿಕ ಸ್ತಂಭದಲ್ಲಿ ಟ್ರಾನ್ಸ್‍ಜೆಂಡರ್ ಗುರುತಿನ ಬಾವುಟವನ್ನು 2012 ರ ನವೆಂಬರ್ 20 ರಂದು ಹಾರಿಸಲಾಯಿತು. ಜಾಗತಿಕವಾಗಿ ನವೆಂಬರ್ 20 ಟ್ರಾನ್ಸ್‍ಜೆಂಡರ್ ನೆನಪಿನ ದಿನವನ್ನಾಗಿ ಆಚರಿಸಲು ಅಂದು ಈ ಸಮುದಾಯ ಜಗತ್ತಿನ ತನ್ನ ಸಮುದಾಯಕ್ಕೆ ಕರೆ ಕೊಟ್ಟಿದೆ.

ಲಿಂಗಾಂತರಿ `ಚಿಟ್ಟೆ’

ಜೆನ್ನಿಫರ್ ಫೆಲ್ಲಿನೆನ್ 2002 ರಲ್ಲಿ ಟ್ರಾನ್ಸ್ ಜೆಂಡರ್ ಸಂಕೇತವಾಗಿ ಪರ್ಯಾಯ ವಿನ್ಯಾಸ ರಚಿಸಿದಳು. ಅದು ಚಿಟ್ಟೆ. ಮನುಷ್ಯದೇಹದ ಲಿಂಗ ರೂಪಾಂತರವನ್ನು ಈ ಚಿಟ್ಟೆ ಸಾಂಕೇತಿಸುತ್ತದೆ ಎಂದು ಜೆನ್ನಿಫರ್ ಹೇಳಿಕೊಂಡಿದ್ದಾಳೆ. ಒಂದು ಗುಲಾಬಿ ಮತ್ತು ತಿಳಿ ನೀಲಿ ಯಿನ್ ಮತ್ತು ಯಾಂಗ್ ಚಿಹ್ನೆಯನ್ನು ಸೇರಿದೆ. ಈ ಚಿಟ್ಟೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಸಮುದಾಯದ ಸಂಗಾತಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಈ ಸಮುದಾಯದ ಕೋಮಲತೆಯನ್ನೂ ಬಿಂಬಿಸುವಂತಿದೆ.

ರಾಜಕೀಯ ಹಕ್ಕೊತ್ತಾಯಗಳು
ಲೈಂಗಿಕ ಅಲ್ಪಸಂಖ್ಯಾತರ ಗುಂಪು ಅಲಕ್ಷಿತವಾಗಿರುವ ಕಾರಣ, ಪ್ರತ್ಯೇಕ ರಾಜಕೀಯ ಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿವೆ. ಅಂತೆಯೇ `ಪಾರ್ಲಿಮೆಂಟರಿ ಫೋರಂ ಆನ್ ಟ್ರಾನ್ಸ್‍ಸೆಕ್ಸ್ವಲಿಜಮ್’ `ನ್ಯಾಷನಲ್ ಸೆಂಟರ್ ಫಾರ್ ಟ್ರಾನ್ಸ್‍ಜೆಂಡರ್ ಇಕ್ವಾಲಿಟಿ’ ಯಂತಹ ಸಂಘಟನೆಗಳು ಎಲ್.ಜಿ.ಬಿ.ಟಿ ಸಮುದಾಯದ ರಾಜಕೀಯ ಮೀಸಲಾತಿಗಾಗಿ ಜಾಗತಿಕ ಹೋರಾಟಗಳನ್ನೂ ನಡೆಸುತ್ತಿವೆ. ಈ ಹೋರಾಟಗಳು ದ್ವಿಲಿಂಗಿ ರಾಜಕಾರಣವನ್ನು ಪ್ರಶ್ನಿಸುತ್ತಾ, ತಮ್ಮ ರಾಜಕೀಯ ಪ್ರವೇಶವನ್ನು ಕೇಳುತ್ತಿದ್ದಾರೆ. ಈ ಕಾಲದ ಒಳಗಿಂದಲೇ ಹುಟ್ಟಿದ ಇಂತಹ ಪ್ರಶ್ನೆಯೊಂದನ್ನು ನಿರಾಕರಿಸುವಂತಿಲ್ಲ, ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಇದಕ್ಕೊಂದು ಚರಿತ್ರೆಯೂ ಇದೆ. ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಹಿಜ್ರಾ ಶಬನಂ ಮೌಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1998-2003 ರ ಅವಧಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವಳ ಬದುಕನ್ನು ಆಧರಿಸಿ ಸಿನೆಮಾವೊಂದು ಬಂದಿದೆ. ಮಧ್ಯಪ್ರದೇಶದ ಅತ್ಯಂತ ಹಳೆಯದಾದ ಪೌರಾಡಳಿತ ಸಂಸ್ಥೆಯಲ್ಲಿ ಹಿಜ್ರಾ ಮಿನಾಬಾಯಿ ಸೆಹೊರಾ ನಗರ ಮುನಿಸಿಪಾಲಿಟಿಗೆ ಅಧ್ಯಕ್ಷರಾಗಿದ್ದರು. 2000ರಲ್ಲಿ ಆಶಾದೇವಿ ಮಹಿಳಾ ಮೀಸಲಾತಿ ಕೋಟಾದಡಿ ಗೋರಕ್‍ಪುರದ ಮೇಯರ್ ಆಗಿ ಆಯ್ಕೆಯಾಗಿದ್ದರು. 2005ರಲ್ಲಿ 24 ವರ್ಷ ವಯಸ್ಸಿನ ಸೋನಿಯಾ ಅಜ್ಮೆರಿ 40,000 ಜನ ಹಿಜ್ರಾಗಳ ಪ್ರತಿನಿಧಿಯಾಗಿ ಗುಜಾರಾತ್‍ನ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆಗ ಅಲ್ಲಿನ ನ್ಯಾಯಾಲಯ ಆಶಾದೇವಿ ಗಂಡಸು ಎಂದು ತೀರ್ಪು ಕೊಟ್ಟಿದ್ದರಿಂದ ಸ್ಥಾನವನ್ನು ಕಳೆದುಕೊಂಡಿದ್ದರು. ಆನಂತರ ಅವರು ಕಾನೂನಾತ್ಮಕ ಹೋರಾಟ ಮಾಡಿ ತಮ್ಮ ಶಾಸಕಿ ಸ್ಥಾನವನ್ನು ಪುನಃ ಪಡೆದುಕೊಂಡಿದ್ದರು.
 ಭಾರತಕ್ಕೆ ಹೊಂದಿಕೊಂಡತಿರುವ ನೇಪಾಳ ಸರಕಾರವು 2013 ರಲ್ಲಿ `ಮೂರನೆ ಲಿಂಗ’ ಅಥವಾ `ಲೈಂಗಿಕ ಅಲ್ಪಸಂಖ್ಯಾತ’ ಸಮುದಾಯವು ಚುನಾವಾಣೆಗೆ ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ಅಧಿಕೃತವಾಗಿ ಘೋಷಿಸಿತ್ತು. ಹಾಗಾಗಿ 2013ರ ನೇಪಾಳದ ವಿಧಾನ ಸಭಾ ಚುನಾವಣೆಯಲ್ಲಿ 63 ಲೈಂಗಿಕ ಅಲ್ಪಸಂಖ್ಯಾತರು ಚುನಾವಣೆಗೆ ಸ್ಪರ್ಧಿಸಿದ್ದರು.

2013 ರಲ್ಲಿ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಲಿಂಗಾಂತರಿ ಬಿಂದಿಯಾ ರಾಣ ಮತ್ತು ವೀರೂ ಕೊಹ್ಲಿಯವರು ಚುವಾವಣೆಗೆ ಸ್ಪರ್ಧಿಸಿದ್ದರು. ಇದನ್ನು ಇಲ್ಲಿನ ಚುನಾವಣಾ ಆಯೋಗವು ಅಂಗೀಕರಿಸಿತ್ತು. “ರಾಷ್ಟ್ರದ ರಾಜಕಾರಣದಲ್ಲಿ ಭೂಮಾಲೀಕರು, ಉದ್ಯಮಿಗಳು ಹಾಗೂ ವೃತ್ತಿಪರ ರಾಜಕಾರಣಿಗಳ ಮಾಫಿಯಾ ಜಗತ್ತನ್ನು ಮುರಿಯುವ ನಿಟ್ಟಿನಲ್ಲಿ ನಮ್ಮಂಥವರು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿದೆ” ಎಂದು ಬಿಂದಿಯಾ ಅಭಿಪ್ರಾಯ ಪಟ್ಟಿದ್ದರು. ಅಂತೆಯೇ ವೀರೂಕೋಹ್ಲಿ ಚುನಾವಣೆ ಸ್ಪರ್ಧೆಗೆ ನೀಡಿದ ಕಾರಣ ವಿಶಿಷ್ಟವಾಗಿತ್ತು. “2004ರಲ್ಲಿ ನಮ್ಮ ಸಮುದಾಯದ ಸದಸ್ಯರೋರ್ವರು ಸಾವನ್ನಪ್ಪಿದ್ದರು. ಮೃತದೇಹವನ್ನು ಆಕೆಯ ತವರು ಪಂಜಾಬ್‍ಗೆ ತಲುಪಿಸಲು ನಾನು ನನ್ನ ಸ್ನೇಹಿತೆ ಹೋಗಿದ್ದೆವು. ಆಗ ವಿಮಾನ ನಿಲ್ದಾಣ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಅಧಿಕಾರಿಗಳು ನಮ್ಮನ್ನು ತುಂಬಾ ಅವಮಾನಿಸಿದ್ದರು. ಆ ನೋವಿನಿಂದ ಬೇಸತ್ತು ನಮ್ಮ ಸಮುದಾಯವನ್ನು ಬಲಪಡಿಸುವ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎನ್ನುತ್ತಾಳೆ.

ಇತ್ತೀಚೆಗೆ ಚತ್ತೀಸಗಡ ರಾಜ್ಯದ ರಾಯಗಡನಲ್ಲಿ ಮೇಯರ್ ಆಗಿ ಲಿಂಗಾಂತರಿ ಸಮುದಾಯದ ಮಧು ಕಿನ್ನರ್ ಆಯ್ಕೆಯಾಗಿದ್ದಾರೆ. ಇದು ಚತ್ತೀಸಗಡ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಚಾರಿತ್ರಿಕ ಸಂಗತಿ. ಆಡಳಿತ ಪಕ್ಷ ಬಿಜೆಪಿ ಇದ್ದಾಗಲೂ ಇದೇ ಪಕ್ಷದ ಮಹಾವೀರ್ ಗುರೂಜಿ ಅವರನ್ನು 4537 ಮತಗಳ ಅಂತರದಲ್ಲಿ ಸೋಲಿಸಿ 33168 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾಳೆ. ಈ ವಿಜಯವನ್ನು ದೇಶದಾದ್ಯಾಂತ ಲಿಂಗಾಂತರಿ ಸಮುದಾಯವು ಸಂಭ್ರಮಿಸಿತು. ಸುಪ್ರಿಂ ಕೋರ್ಟ್ ತೃತೀಯ ಲಿಂಗಿ ಎಂದು ಗುರುತಿಸಿದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೊದಲ ಲಿಂಗಾಂತರಿ ಮಧು.

ಹಿಜಿಡಾಗಳ ಸ್ಪರ್ಧೆ, ಗೆಲುವನ್ನು ದ್ವಿಲಿಂಗಿ ಸಮಾಜ ನೋಡುವ ನೋಟಕ್ರಮವೂ ಭಿನ್ನವಾಗಿದೆ. ಬಳ್ಳಾರಿಯ ನಗರಸಭೆ ಸದಸ್ಯೆಯಾಗಿ ಲಿಂಗಾಂತರಿ ಪರ್ವಿನಾಬಾನು ಆಯ್ಕೆಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಭಾಗದ ಹಿಜಿಡಾ ಸಮುದಾಯದಲ್ಲಿ ಪರ್ವಿನಾಬಾನು ಕುರಿತು ಆತಂಕ ವ್ಯಕ್ತಪಡಿಸುತ್ತಾರೆ. ಕಾರಣ ಪುರುಷ ಸದಸ್ಯರಿಗಿಂತ ಚೆನ್ನಾಗಿ ಕೆಲಸ ಮಾಡುವ ಬಾನುಗೆ ಈ ಗಂಡಸರು ಏನಾದರೂ ಮಾಡಿಬಿಟ್ಟಾರು ಎಂಬ ಭಯವಿದೆ. ಅಂತೆಯೇ ಈ ಸಮುದಾಯ ಬಜಾರು ಭಿಕ್ಷೆಗೆ ಹೋದಾಗ ವ್ಯಾಪಾರ ಮಳಿಗೆ/ಅಂಗಡಿಯವರು `ನಿಮ್ಮ ಸಮುದಾಯದ ಕಾರ್ಪೋರೇಟ್ ಗೆದ್ದಿದ್ದಾರಲ್ಲ ಮತ್ಯಾಕೆ ನೀವು ಭಿಕ್ಷೆಗೆ ಬರುತ್ತೀರಿ, ನಿಮ್ಮ ಕಾರ್ಪೋರೇಟ್‍ನ್ನ ಕೇಳಿ ಏನಾದ್ರೂ ಮಾಡ್ಕೊಳ್ರಿ’ ಎಂದು ಕೊಂಕು ನುಡಿಯುತ್ತಾರಂತೆ.

ಅಂತೆಯೇ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಒಬ್ಬ ಹಿಜಿಡಾ ವಿರುದ್ಧ ಸೋತ ಗಂಡಸರನ್ನು `ಒಬ್ಬ ಶಿಖಂಡಿ ಎದುರು ಸೋತವನು’ ಎಂದು ತುಚ್ಛವಾಗಿ ಕಾಣುವುದಿದೆ. ಹೀಗೆ ತುಚ್ಛವಾಗಿ ಕಾಣುವ ಕಾರಣಕ್ಕೆ ಸೋತ ಅಭ್ಯಾರ್ಥಿಯೇ ಹಿಜಿಡಾಗಳ ಮೇಲೆ ಸೇಡುತೀರಿಸಿಕೊಳ್ಳಬಹುದೆಂದು, ಬಳ್ಳಾರಿ ಭಾಗದ ಲೈಂಗಿಕ ಅಲ್ಪಸಂಖ್ಯಾತರಿಗೆ ಆತಂಕವಿದೆ. ಪರ್ವಿನಾ ಕಾರ್ಪೋರೇಟರ್ ಆದ ಮೇಲೆ ಅನಿಲ್ ಲಾಡ್ ನೆರವಿನೊಂದಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸುದ್ದಿ ಮಾಡಿದ್ದಳು.

ಕರ್ನಾಟಕದಲ್ಲಿ ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಅಂಬೇಡ್ಕರ್ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಂಗಳಮುಖಿ ಚಾಂದಿನಿ ನಾಮಪತ್ರ ಸಲ್ಲಿಸಿದ್ದರು. ಆಗ ಚಾಂದನಿ, `ನಮಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ನೀಡಿಲ್ಲ. ಸಮಾಜದ ಜನರು ನಮ್ಮನ್ನು ಸಮಾನರಂತೆ ಕಾಣಬೇಕಾಗಿದೆ. ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಮಂಗಳಮುಖಿಯರಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ’ ಹೇಳಿದ್ದರು. ಅಂತೆಯೇ ಮಂಗಳಮುಖಿ ಸೌಮ್ಯ ಕೂಡ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಬಿಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು.

ಭಾರತದ ಚುನಾವಣಾ ಆಯೋಗವು ಬಿಡುಗಡೆ ಮಾಡಿದ 2014 ರ ಮತದಾರರ ಸಂಖ್ಯೆಯಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆಯನ್ನು ಸೇರಿಸಿತ್ತು. ದೇಶದಲ್ಲಿ 81,45,91184 ರಷ್ಟು ಮತದಾರರಿದ್ದಾರೆ. ಪುರುಷರು 52.4% ರಷ್ಟಿದ್ದರೆ, ಮಹಿಳೆಯರು 47.6% ರಷ್ಟಿದೆ. `ಇತರೆ’ ವಿಭಾಗದಲ್ಲಿ ದಾಖಲಿಸಿಕೊಂಡ ಲೈಂಗಿಕ ಅಲ್ಪಸಂಖ್ಯಾತರು 0.0035% ರಷ್ಟಿದೆ. ಕರ್ನಾಟಕದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ 8,453 ರಷ್ಟಿದ್ದಾರೆ. ಇದು ಭಾರತದ 17 ರಾಜ್ಯಗಳಿಗೆ ಹೋಲಿಸಿದರೆ ಚುನಾವಣ ಆಯೋಗ ಮತದಾನದ ಹಕ್ಕು ನೀಡಿದಂದಿನಿಂದ `ಇತರೆ’ ವಿಭಾಗದಲ್ಲಿ ದಾಖಲಿಸಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೈಂಗಿಕ ಅಲ್ಪಸಂಖ್ಯಾತರು: ಕ್ರೀಡೆ

1999 ರಿಂದಲೂ ಓಲಂಪಿಕ್ ಕ್ರೀಡೆ ಆಯೋಜನೆಯಲ್ಲಿ ಇಂಟರ್ ನ್ಯಾಷನಲ್ ಓಲಂಪಿಕ್ ಕಮಿಟಿಯು (ಐ.ಓ.ಸಿ) ಲಿಂಗ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದು ಮಹಿಳಾ ಅಥ್ಲೆಟಿಕ್ಸ್ ಗೆ ಮಾತ್ರ ಮಾಡುವ ಒಂದು ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಒಳಪಡಿಸಲಾಗುತ್ತದೆ. ಈ ಪರೀಕ್ಷೆ ಇರುವುದೇ ಇವಳು ನಿಜವಾಗಲೂ ಮಹಿಳೆಯೇ? ಎಂದು ಪರೀಕಷಿಸುವ ಸಲುವಾಗಿ. ಕಾರಣ ಟ್ರಾನ್ಸ್ ಜೆಂಡರ್ ವಿಮೆನ್ಸ್ ಈ ಕೋಟದಲ್ಲಿ ಬರಬಹುದು ಎನ್ನುವುದು ಈ ಪರೀಕ್ಷೆಯ ಮೂಲ ಕಾರಣವಾದರೂ, ಹೆಣ್ಣಿನೊಳಗೆ ಗಂಡಿನ ಅಂಶ ಅಡಗಿದ್ದರೂ ಆಕೆಯನ್ನು ಗಂಡಿನಂಶ ಇರುವ ಹೆಣ್ಣು ಎಂದು ಕ್ರೀಡೆಯಿಂದ ಹೊರಗಿಡುವ ಪ್ರಕ್ರಿಯೆ ನಡೆದಿದೆ.

2000 ರ ಸಿಡ್ನಿ ಓಲಂಪಿಕ್ ಗೇಮ್ಸ್ ನಲ್ಲಿ ಲಿಂಗ ಪರೀಕ್ಷೆಯನ್ನು ನಿಲ್ಲಿಸಲಾಗಿದೆ. ಮೇ 17, 2004 ರಲ್ಲಿ ಇಂಟರ್ ನ್ಯಾಷನಲ್ ಓಲಂಪಿಕ್ ಕಮಿಟಿಯು ಲಿಂಗ ಬದಲಾದ ಪುರುಷ ಅಥವಾ ಮಹಿಳೆಯರು ಓಲಂಪಿಕ್ ಆಟಗಳಿಗೆ ಅರ್ಹರು ಎನ್ನುವ ಚಾರಿತ್ರಿಕ ನಿಲುವು ತಳೆದಿದೆ. ಹಾರ್ಮೋನ್ಸ್ ಥೆರಪಿ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿ ಕನಿಷ್ಟ 2 ವರ್ಷದ ನಂತರ ಗಂಡಿನಿಂದ ಹೆಣ್ಣಾದವರನ್ನು (ಒಣಈ) ಹುಡುಗಿ ಅಥವಾ ಹೆಣ್ಣು ಎಂತಲೂ, ಹೆಣ್ಣಿನಿಂದ ಗಂಡಾದ( ಈಣಒ) ವರನ್ನು ಗಂಡು ಎಂತಲೂ ಪರಿಗಣಿಸಲಾಗುತ್ತಿದೆ. ಆದರೆ ಇದಕ್ಕೆ ವೈದ್ಯಕೀಯ ದಾಖಲೆಗಳು ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರ, ಮನೋವೈದ್ಯರ ಪ್ರಮಾಣ ಪತ್ರಗಳು ಬೇಕಾಗುತ್ತದೆ. ಕಾನೂನಾತ್ಮಕ ಬೆಂಬಲದ ದಾಖಲೆಗಳೂ ಬೇಕಾಗುತ್ತದೆ. ಇದು ಭಾರದಲ್ಲಿ ಇನ್ನು ಕಾನೂನಿನ ಮಾನ್ಯತೆ ಸಿಗದ ಕಾರಣ ಭಾಗವಹಿಸುವುದು ಕಷ್ಟಕರವಾಗಿದೆ.

The Science of Transgenderism

ಇಂದು ಜಾಗತಿಕವಾಗಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳಾಗಿವೆ. ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ವೈದ್ಯರೇ ಟ್ರಾನ್ಸ್ ಜೆಂಡರ್ ಸಮುದಾಯವು ನೈಸರ್ಗಿಕವಾಗಿ ರೂಪುಗೊಂಡಿರುವುದೆಂದು ಸಬೀತುಪಡಿಸುತ್ತಿದ್ದಾರೆ. ಈ ಸಂಗತಿಯನ್ನು ವೈದ್ಯರ ಅಸೋಷಿಯೇಷನ್ಸ್‍ಗಳು ಬಹಿರಂಗ ಹೇಳಿಕೆಗಳನ್ನು ಕೊಡುವ ಮೂಲಕ ಈ ಸಮುದಾಯದ ಬಗ್ಗೆ ಜನರಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲಾಗುತ್ತಿದೆ. ಆದರೆ ಭಾರತದಂತಹ ದೇಶಕ್ಕೆ ಹೋಲಿಸಿಕೊಂಡರೆ ವೈದ್ಯರಿಗೂ ಮಡಿವಂತಿಕೆ ಇರುವುದು ಗೋಚರಿಸುತ್ತದೆ. ಲೈಂಗಿಕತೆ ಬಗ್ಗೆ ಬರೆಯುವವರನ್ನು ಸಲಹೆಗಳನ್ನು ಕೊಡುವ ವೈದ್ಯರನ್ನು ಜನರು ಲೈಂಗಿಕ ವೈದ್ಯರು ಎಂದು ತುಚ್ಚವಾಗಿ ನೋಡುವ ಕ್ರಮವೂ ಇದೆ. ಹಾಗಾಗಿ ಇಂಡಿಯಾದಲ್ಲಿನ ವೈದ್ಯರು ಟ್ರಾನ್ಸ್ ಜೆಂಡರ್ ನಂತಹ ಸಮುದಾಯದ ಬಗ್ಗೆ ಮುಕ್ತವಾಗಿ ಮಾತನಾಡುವುದೂ ಸಾದ್ಯವಾಗಿಲ್ಲ.

ಹಾಗೆ ನೋಡಿದರೆ ಜೆಂಡರ್ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ವೈದ್ಯಕೀಯ ಶಾಸ್ತ್ರವೇ ರೂಪುಗೊಂಡಿದೆ. The Science of Transgenderism ರು ಎಂಬ ವಿಜ್ಞಾನದ ವಿಭಾಗವೊಂದು ಆರಂಭವಾಗಿದೆ. ಇದು ಜೆಂಡರ್ ವೇರಿಯೇಷನ್ ಕು ವಿಷಯಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವಾಗಿದೆ. ಈ ಶಾಸ್ತ್ರದ ಮುಖ್ಯ ಉದ್ದೇಶವೆ ಜನರಲ್ಲಿ ಜೆಂಡರ್ ವೇರಿಯೇಷನ್‍ಗೆ ಒಳಗಾದ ಸಮುದಾಯವನ್ನು ತುಚ್ಚವಾಗಿ ನೋಡುವ ಮತ್ತು ಕೀಳಾಗಿ ಕಾಣುವ ಸಂಗತಿಯನ್ನು ಇಲ್ಲವಾಗಿಸುವುದು. ಜೆಂಡರ್ ವಿಷಯದಲ್ಲಿ ಸೂಕ್ಷ್ಮಸಂವೇದನೆಗೊಳಿಸುವುದಾಗಿದೆ. ಈ ನೆಲೆಯ ಬೆಳವಣಿಗೆ ಟ್ರಾನ್ಸ್ ಜೆಂಡರ್ ಸಮುದಾಯದ ಹೋರಾಟಕ್ಕೂ ಸ್ಪೂರ್ತಿಯಾಗಿದೆ.

ಲಿಂಗಾಂತರಿ ವಲಸಿಗರು
ಇದು ಲಿಂಗ ಬದಲಾವಣೆಯ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಿ ಬದುಕುವ ಕ್ರಮವನ್ನು ಅಥವಾ ಲಿಂಗದ ಕಾರಣಕ್ಕೆ ವಲಸೆ ಹೋಗುವ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ದೊಡ್ಡಮಟ್ಟದ ಹೋರಾಟ ನಡೆಯುತ್ತಿದೆ. ಅಂತೆಯೇ ಲಿಂಗ ಬದಲಾವಣೆಯೇ ವಲಸೆಯನ್ನು ಅನಿವಾರ್ಯ ಮಾಡುತ್ತದೆ ಎನ್ನುವುದನ್ನು ಈ ಹೋರಾಟ ಮನವರಿಕೆ ಮಾಡುತ್ತಿದೆ. ಮನೆಯಲ್ಲಿ ಲಿಂಗ ಬದಲಾವಣೆಯ ಪ್ರಕ್ರಿಯೆ ಶುರುವಾದಾಗ ಮನೆ ಅಂತವರನ್ನು ಹೊರ ಹಾಕುತ್ತದೆ. ಹೀಗೆ ಮನೆಯಿಂದ ಹೊರ ಹಾಕಲ್ಪಟ್ಟ ಸಮುದಾಯವು ಅನುಭವಿಸುವ ಅನಾಥಪ್ರಜ್ಞೆ, ನೋವು, ಹಿಂಸೆ, ಮುಂತಾದ ಅಮಾನವೀಯ ನರಕಕ್ಕೆ ದೂಕಲ್ಪಡುತ್ತಾರೆ. ಈ ಬಗೆಯ ವಲಸೆಯ ಕಾರಣಕ್ಕೆ ಈ ಸಮುದಾಯ ಅನುಭವಿಸುವ ಯಾತನೆಯನ್ನು ಹೋರಾಟದ ಭಾಗವಾಗಿಯೂ ವಿವರಿಸುವ, ವಿಶ್ಲೇಷಿಸುವ ಪ್ರಕ್ರಿಯೆಗಳು ಜಾಗತಿಕವಾಗಿ ನಡೆಯುತ್ತಿವೆ.
**
ಆರಂಭಕ್ಕೆ ಚರ್ಚಿಸಿದಂತೆ ಕರ್ನಾಟಕದ ಸಂದರ್ಭದಲ್ಲಿಯೂ ಲಿಂಗಾಂತರಿಗಳ ಹಕ್ಕುಗಳ ರಕ್ಷಣೆಗಾಗಿ ದೊಡ್ಡಮಟ್ಟದ ಹೋರಾಟಗಳು ನಡೆಯುತ್ತಿವೆ. ಮನೋಹರ, ಅಕ್ಕೈ ಪದ್ಮಶಾಲಿ, ಚಾಂದಿನಿ, ಉಮೇಶ್, ಮಲ್ಲಪ್ಪ ಮುಂತಾದವರು ಮುಂದಾಳತ್ವ ವಹಿಸಿದ್ದಾರೆ. ಸಂಗಮ ಸಂಸ್ಥೆ ಒಳಗೊಂಡಂತೆ ಕರ್ನಾಟಕ ಟ್ರಾನ್ಸ್ ಜೆಂಡರ್ ಸಮಿತಿ, ಕರ್ನಾಟಕ ಮಂಗಳಮುಖಿ ಸಂಘಟನೆ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಜೀವ, ಒಂದೆಡೆ, ಸಮರ, ಸಾರಥ್ಯ, ಸ್ವಾತಂತ್ರ್ಯ, ಮುಂತಾದ ಸಂಘಟನೆಗಳು ಜಂಟಿಯಾಗಿ ಹೋರಾಟಗಳನ್ನು ಆಯೋಜಿಸುತ್ತಿವೆ. ಈ ಹೋರಾಟದ ಫಲವಾಗಿ ಹಲವು ಯೋಜನೆಗಳ ಜಾರಿಗೂ ಕಾರಣವಾಗಿವೆ. ಕರ್ನಾಟಕ ಸರಕಾರದ ಮೈತ್ರಿ ಅಂತಹ ಯೋಜನೆಗಳಲ್ಲೊಂದು. 2009 ರಲ್ಲಿ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ, ಹಿಜಿಡಾ/ಮಂಗಳಮುಖಿ ಸಮುದಾಯವನ್ನು ಪ್ರವರ್ಗ 2 ಬಿ ನಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ನೆರವಾಗಿದ್ದರು.

ಕರ್ನಾಟಕದ ಸಂದರ್ಭದಲ್ಲಿನ ಲಿಂಗಾಂತರಿ ಸಮುದಾಯಗಳ ಹೋರಾಟಗಳು ಕೆಲವು ಮುಖ್ಯ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ವಯಸ್ಕರರ ಒಪ್ಪಿಗೆಯ ಸೆಕ್ಸ್ ಅಪರಾಧವಲ್ಲ. ಐ.ಪಿ.ಸಿ ಸೆಕ್ಷನ್ 377 ರದ್ದುಮಾಡಿ ಎಲ್ಲಾ ಬಗೆಯ ಲೈಂಗಿಕ ಕಿರುಕುಳ ಅಪರಾಧವೆಂದು ಕಾನೂನಿನಲ್ಲಿರಬೇಕು, ಮುಖ್ಯವಾಗಿ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ನಿಗಾ ಇಡಬೇಕು. ಲೈಂಗಿಕ ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣದ ತಾರತಮ್ಯ ಆಗಬಾರದು. ತಾರತಮ್ಯವಿಲ್ಲದ ಸಾಮಾಜಿಕ ಸವಲತ್ತುಗಳು ಸಿಗಬೇಕು. ಉದಾ: ರೇಷನ್ ಕಾರ್ಡ್, ವಸತಿ, ವೋಟಿಂಗ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಉಳಿತಾಯ ಮತ್ತು ಸಾಲ ಸೌಲಭ್ಯಗಳು, ವಿಮೆ ಮತ್ತು ವೃದ್ದಾಪ್ಯ ವೇತನ, ವೃದ್ದಾಪ್ಯಾದವರಿಗೆ ಉಳಿಯಲು ಮನೆ (ಶೆಲ್ಟರ್) ಇತ್ಯಾದಿ. ಈ ಸಮುದಾಯದ ಬಗ್ಗೆ ಪೂರ್ವಾಗ್ರಹವಿಲ್ಲದ ಮನೋಭಾವವನ್ನು ಬೆಳೆಸಲು ಸಾರ್ವಜನಿಕ ಪ್ರಚಾರ ಮಾಡಬೇಕು. ಶಿಕ್ಷಣದ ಪಠ್ಯಕ್ರಮಗಳಲ್ಲಿ ಈ ವಿಷಯವನ್ನು ಅಳವಡಿಸಬೇಕು. ಪೋಲೀಸ್/ಗೂಂಡಾ ದೌರ್ಜನ್ಯ ತಡೆಯಬೇಕು. ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು.
1111

ವಯಸ್ಕರ ಸ್ವಇಚ್ಚೆಯ ಲೈಂಗಿಕ ಚಟುವಟಿಕೆ ಅಪರಾಧವಲ್ಲ. ಹಾಗಾಗಿ ಐ.ಟಿ.(ಪಿ).ಎ. ಕಾನೂನು ರದ್ದುಪಡಿಸಿ ಲೈಂಗಿಕ ಕಾರ್ಮಿಕರೆಂದು ಗುರುತಿಸಿ ಅವರ ಹಕ್ಕುಗಳನ್ನು ರಕ್ಷಿಸಬೇಕು. ಈ ಸಮುದಾಯದ ಅಂಚಿಗೆ ತಳ್ಳಲ್ಪಟ್ಟವರಿಗೆ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸಬೇಕು. ಈ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸುವ ಕಾನೂನುಗಳ ತಿದ್ದುಪಡಿ ಮಾಡಬೇಕು. ಈ ಸಮುದಾಯದ ಮದುವೆ ಹಕ್ಕು, ಆಸ್ತಿಹಕ್ಕು, ಭವಿಷ್ಯನಿಧಿ, ಪಿಂಚಣಿ ಮತ್ತು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕುಗಳಲ್ಲಿ ಬದಲಾವಣೆಯಾಗಬೇಕು. ಲಿಂಗ ಬದಲಾವಣೆಯನ್ನು ಕಾನೂನುಬದ್ಧಗೊಳಿಸಿ ಶಸ್ತ್ರಚಿಕಿತ್ಸೆ ಸಾರ್ವತ್ರಿಕವಾಗಿ ಲಭ್ಯವಿರಬೇಕು. ಲಿಂಗ ಬದಲಾವಣೆಯಾದ ಬಳಿಕ ಹೊಸ ಲಿಂಗತ್ವ/ಲಿಂಗದ ಆಯ್ಕೆಗೆ ಸ್ವತಂತ್ರ್ಯವಿರಬೇಕು. ಲಿಂಗಾಂತರಿ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಮಿನಿಸ್ಟ್ರಿಯನ್ನೂ, ಸಮಾಜೋರಾಜಕೀಯಾರ್ಥಿಕ ಶೈಕ್ಷಣಿಕ ಸೌಲಭ್ಯಗಳಿಗಾಗಿ ಪ್ರತ್ಯೇಕ ಅಕಾಡೆಮಿ ಅಥವಾ ನಿಗಮ ಮಂಡಳಿಯನ್ನು ರಚಿಸಬೇಕು.

ಮುಂತಾದ ಹಕ್ಕೊತ್ತಾಯಗಳನ್ನು ಈ ಸಮುದಾಯ ಮಂಡಿಸುತ್ತಿದೆ. ಈ ಸಮುದಾಯದ ಹೋರಾಟಕ್ಕೆ ಇತರೆ ಪ್ರಗತಿಪರ ಸಂಘಟನೆಗಳೂ ಬೆಂಬಲವಾಗಿ ನಿಲ್ಲಬೇಕಿದೆ. ಕಾರಣ ಈಚಿನ ಉಡುಪಿ ಚಲೋದಲ್ಲಿ ಲಿಂಗಾಂತರಿ ಸಮುದಾಯ ಸಕ್ರಿಯವಾಗಿ ಭಾಗವಹಿಸಿತ್ತು. ಇವರೂ ದಮನಿತ ಸಮುದಾಯವಾದ ಕಾರಣ, ದಮನಿತರ ಪರವಾದ ಮನಸ್ಸುಗಳು ಲಿಂಗಾಂತರಿಗಳ ಹೋರಾಟಕ್ಕೂ ಜತೆಯಾಗಬೇಕಿದೆ.

ಮಂಗಳವಾರ, ನವೆಂಬರ್ 22, 2016

ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್‌


-ಅರುಣ್ ಜೋಳದಕೂಡ್ಲಿಗಿ



ಅಮೆರಿಕದ ಸಾರ್ವಕಾಲಿಕ ಹಾಡುಗಾರನೆಂಬ ಖ್ಯಾತಿಗೆ ಒಳಗಾದ ಕವಿಯೊಬ್ಬನಿದ್ದರೆ ಆತನೇ ಬಾಬ್ ಡಿಲಾನ್. ಈತನ ಪ್ರಭಾವ ಎಷ್ಟೆಂದರೆ ‘ಬಾಬ್ ಡಿಲಾನ್ ಮ್ಯೂಜಿಕ್’ ಮಾದರಿಯೊಂದು ರೂಪುಗೊಂಡಿದೆ. ಇದನ್ನು ಕಲಿಯುವ ಮತ್ತು ಹಾಡುವ ಶಿಷ್ಯಕೋಟಿ ಜಗತ್ತಿನಾದ್ಯಂತ ಹರಡಿದೆ. ಈತ ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್‌ ಈ ಬಾರಿ, ನೊಬೆಲ್‌ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕದ ಸಾರ್ವಕಾಲಿಕ ಹಾಡುಗಾರನೆಂಬ ಖ್ಯಾತಿಗೆ ಒಳಗಾದ ಕವಿಯೊಬ್ಬನಿದ್ದರೆ ಆತನೇ ಬಾಬ್ ಡಿಲಾನ್. ಈತನ ಪ್ರಭಾವ ಎಷ್ಟೆಂದರೆ ‘ಬಾಬ್ ಡಿಲಾನ್ ಮ್ಯೂಜಿಕ್’ ಮಾದರಿಯೊಂದು ರೂಪುಗೊಂಡಿದೆ. ಇದನ್ನು ಕಲಿಯುವ ಮತ್ತು ಹಾಡುವ ಶಿಷ್ಯಕೋಟಿ ಜಗತ್ತಿನಾದ್ಯಂತ ಹರಡಿದೆ. ಈತ ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್‌ ಈ ಬಾರಿ, ನೊಬೆಲ್‌ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯ ಡಿಲಾನ್, ಅಮೆರಿಕದ ಜನಪ್ರಿಯ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಸತತ ಆರು ದಶಕಗಳ ಕಾಲ ಇನ್ನಿಲ್ಲದ ಪ್ರಭಾವವನ್ನು ಬೀರಿದ ಏಕೈಕ ಸಂಗೀತಗಾರ. ಇವರ ‘ಬ್ಲೋವಿನ್ ಇನ್ ದ ವಿಂಡ್’ ಮತ್ತು ‘ದ ಟೈಮ್ಸ್ ದೆ ಆರ್ ಎ ಚೇಂಜಿನ್’ ಎನ್ನುವ ಹಾಡುಗಳು ಅಮೆರಿಕದ ನಾಗರಿಕ ಹಕ್ಕು ಮತ್ತು ಯುದ್ಧವಿರೋಧಿ ಚಳವಳಿಗಳ ರಾಷ್ಟ್ರಗೀತೆಗಳಂತಿವೆ. ಅವರ ನೂರಾರು ಹಾಡುಗಳು ಹೋರಾಟಕ್ಕೆ ಪ್ರೇರಣೆಯಾಗಿವೆ. ಅಮೆರಿಕದಂತಹ ಯುದ್ಧದಾಹದ ದೇಶದಲ್ಲಿದ್ದೂ ಇದೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವ ಅಚ್ಚರಿಯ ಕಾರಣಕ್ಕೂ ಇವರು ಜಾಗತಿಕ ಸಾಹಿತ್ಯ ವಲಯದಲ್ಲಿ ಚರ್ಚೆಯ ಕುತೂಹಲ ಹುಟ್ಟಿಸಿದ್ದಾರೆ. ನೊಬೆಲ್‌ ಪ್ರಶಸ್ತಿಯ ಮೂಲಕ ‘ಗೀತ ರಚನೆ’ ಮತ್ತು ‘ಜನತೆಯ ನುಡಿಗಟ್ಟಿನ ಹಾಡುಗಾರಿಕೆ’ಗೆ ಮೊತ್ತಮೊದಲು ಮನ್ನಣೆ ತಂದುಕೊಡುವ ಮೂಲಕ, ಜಗದ ಮೌಖಿಕ ಪರಂಪರೆಯ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಅಬ್ರಹಾಂ ಜಿಮ್ಮೆರ್‌ಮ್ಯಾನ್ ಮತ್ತು ಬೆಟ್ಟಿಸ್ಟೋನ್‌ರ ಮಗನಾಗಿ ಮಿನ್ನೆಸೋಟದ ದಲತ್‌ನಲ್ಲಿ 1941ರ ಮೇ 24ರಂದು ಡಿಲಾನ್‌ ಜನಿಸಿದರು. ಇವರ ಮೂಲ ಹೆಸರು ರಾಬರ್ಟ್ ಅಲೆನ್ ಜಿಮ್ಮೆರ್‌ಮ್ಯಾನ್. ಜೆವಿಷ್ ಎನ್ನುವ ಪುಟ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಟರ್ಕಿ ಮೂಲದ ಪೂರ್ವಜರು ಯುದ್ಧಕಾಲದಲ್ಲಿ ವಲಸೆ ಬಂದವರು. ಡಿಲಾನ್ ಮುಂದೆ ಜನಪ್ರಿಯತೆಗೆ ಬಂದಾಗ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಗೊಂಡರು. ಸಾರಲೋಂಡ್ಸ್‌ ಎಂಬಾಕೆಯೊಂದಿಗೆ 1965ರಲ್ಲಿ ಮದುವೆಯಾದ ಡಿಲಾನ್‌, 1977ರ ಹೊತ್ತಿಗೆ ವಿಚ್ಛೇದನ ಪಡೆದರು. ನಂತರ ಕೆರೋಲಿನ್ ಡೆನ್ನಿಸ್‌ ಎಂಬುವವರನ್ನು 1986ರಲ್ಲಿ ಮದುವೆಯಾಗಿ 1992ರಲ್ಲಿ ಬೇರ್ಪಟ್ಟರು. ಹೀಗೆ ಸಾಂಸಾರಿಕ ಜೀವನ ಏರುಪೇರಿನಿಂದ ಕೂಡಿರುವ ಡಿಲಾನ್‌ ಅವರಿಗೆ ಜೆಸ್ಸಿ ಬೈರನ್, ಅನ್ನಾ ಲಿ, ಸ್ಯಾಮ್ಯುಯಲ್, ಜಾಕೊಬ್, ಡೆಸ್ಸಿರಿ ಎಂಬ ಐವರು ಮಕ್ಕಳಲ್ಲದೆ, ವಿಚ್ಛೇದಿತ ಮಡದಿ ಸಾರಾ ಅವರಿಂದ ದತ್ತು ಪಡೆದ ಮಗಳು ಮಾರಿಯಾ ಸಹ ಜೊತೆಗಿದ್ದಾಳೆ. ಮಗ ಜಾಕೊಬ್ ತಂದೆಯಂತೆ ಸಂಗೀತದ ಹಾದಿಯಲ್ಲಿದ್ದಾನೆ. ‘ದ ವಾಲ್ ಫ್ಲವರ್ಸ್‌್’ ಎನ್ನುವ ಬ್ಯಾಂಡ್‌ನಲ್ಲಿ ಗಾಯಕನಾಗಿ ಅಮೆರಿಕದಲ್ಲಿ ಖ್ಯಾತನಾಗಿದ್ದಾನೆ. ಜೆಸ್ಸಿ ಬೈರನ್‌ ಸಿನಿಮಾ ನಿರ್ದೇಶಕನಾಗಿ, ಮಾರಿಯಾ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.

ನೆಲದ ನುಡಿಗಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಲಯವನ್ನು ರೂಪಿಸಿಕೊಂಡಿರುವ ಡಿಲಾನ್‌ ಅವರ ಬರಹ ಮತ್ತು ಸಂಗೀತದ ಎಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡದ ವರಕವಿ ಬೇಂದ್ರೆಯವರ ಜತೆ ಇವರನ್ನು ಹೋಲಿಸಬಹುದು. ಕನ್ನಡದ ಸಂದರ್ಭದಲ್ಲಿ ‘ಕ್ಯಾಸೆಟ್ ಕವಿಗಳು’ ಎಂದು ಕೆಲವರನ್ನು ವ್ಯಂಗ್ಯ ಮಾಡುವಂತೆ, ಅಮೆರಿಕದ ಕೆಲವು ಕ್ಲಾಸಿಕಲ್ ಕವಿಗಳು ಕೂಡ ಡಿಲಾನ್‌ ಅವರನ್ನು ‘ಬೀದಿಯ ಹಾಡುಗಾರ’ ಎಂದು ವ್ಯಂಗ್ಯದಿಂದ ಜರಿದಿದ್ದರು. ಇಂತಹವರೇ ಡಿಲಾನ್‌ಗೆ ನೊಬೆಲ್ ನೀಡಿರುವುದರಿಂದ ಪ್ರಶಸ್ತಿ ಕಳೆಗುಂದಿತು ಎಂದು ರಗಳೆ ತೆಗೆದಿದ್ದಾರೆ.

ಡಿಲಾನ್‌ ಅವರ ಸಂಗೀತದ ವಿಸ್ತರಣೆಯು ಅವರ ಕಲಾಕೃತಿಗಳಲ್ಲೂ ಮುಂದುವರಿದಿದೆ. ಅವರ ರೇಖೆ ಮತ್ತು ಚಿತ್ರಕಲೆಯನ್ನು ಒಳಗೊಂಡ ಆರು ಪುಸ್ತಕಗಳು ಪ್ರಕಟವಾಗಿವೆ. ಜಗತ್ತಿನ ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಅವರ  ಕಲಾಕೃತಿಗಳಿವೆ. ಅವರ ಸಂಗೀತದಲ್ಲಿ ಅಡಕವಾದ ಭಗ್ನಪ್ರೇಮ, ಯುದ್ಧದ ನಿರರ್ಥಕತೆ, ಸ್ವಾರ್ಥ, ವಿಶ್ವಾಸದ್ರೋಹ, ವೇದನೆ, ಸಾವು, ನೈತಿಕ ಅಧಃಪತನ, ಪರಿಶುದ್ಧ ಪ್ರೇಮ ಮುಂತಾದವುಗಳನ್ನು ಗುರುತಿಸಲು ಈ ಕಲಾಕೃತಿಗಳು ನೆರವಾಗುತ್ತವೆ. ಸಂಗೀತದ ಲಯದೊಳಗೆ ಬೆರೆತ ಸಂವೇದನೆ ಅವರ ಕಲಾಕೃತಿಗಳಲ್ಲಿ ಚಿತ್ರರೂಪ ಪಡೆದಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಡಿಲಾನ್ ಅವರು ಸಂಯೋಜಿಸಿದ ಲಕ್ಷಾಂತರ ಆಲ್ಬಮ್‌ಗಳು ಜಗತ್ತಿನಾದ್ಯಂತ ಮಾರಾಟವಾಗಿವೆ. ಹೀಗೆ ಜನಸಾಮಾನ್ಯರ ಮನದಲ್ಲಿ ನೆಲೆಸಿರುವ ಡಿಲಾನ್ ‘ಪ್ರಶಾಂತ ಪರ್ವತವೊಂದರಲ್ಲಿ ವಿರಮಿಸುವಿಕೆಯೇ ನನ್ನ ಸಂಗೀತದ ಎಳೆ. ಸಂಗೀತದ ಆಳದಲ್ಲಿ ನನಗೊಂದು ಬೆಳಕು ಕಾಣುತ್ತದೆ, ಅದೇ ನನ್ನ ಧರ್ಮ’ ಎಂದು ವಿವರಿಸುತ್ತಾರೆ. ಅಮೆರಿಕದ ಸಂಗೀತ ತಜ್ಞರು ‘ಹಳ್ಳಿಗಾಡಿನ ಜನಪದ ಸಂಗೀತ ಮತ್ತು ಬ್ಲೂಸ್ ಮ್ಯೂಜಿಕ್‌ ಅನ್ನು ರಾಕ್ ಹಿನ್ನೆಲೆಯಲ್ಲಿ ಸಂಯೋಜಿಸುವುದು ಬಹುದೊಡ್ಡ ಸವಾಲು. ಇಂತಹ ಸಂಯೋಜನೆಯೇ ಡಿಲಾನ್‌ ಅವರ ಮಹತ್ವದ ಕೊಡುಗೆ. ಅದುವೇ ಆತನನ್ನು ಸರ್ವಶ್ರೇಷ್ಠ ಸಂಗೀತಗಾರನನ್ನಾಗಿಸಿದೆ’ ಎಂದು ಹೇಳುತ್ತಾರೆ. ಹೀಗೆ ಜನಸಾಮಾನ್ಯರ ನುಡಿಗಟ್ಟನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ದು ಅದರ ಬಗೆಗೆ  ಕ್ಲಾಸಿಕಲ್ ಕವಿಗಳು ಮತ್ತು ಸಂಗೀತಗಾರರಿಗಿದ್ದ ತಾತ್ಸಾರದ ಮನಸ್ಥಿತಿಗೆ ಸೆಡ್ಡು ಹೊಡೆದದ್ದು ಡಿಲಾನ್‌ ಅವರ ಶಕ್ತಿಯಾಗಿದೆ.

‘ಟೈಮ್ಸ್’ ಪತ್ರಿಕೆ ಸಿದ್ಧಪಡಿಸಿದ ‘ಶತಮಾನದ ನೂರು ಶ್ರೇಷ್ಠ ವ್ಯಕ್ತಿಗಳ’ ಪಟ್ಟಿಯಲ್ಲಿ ಡಿಲಾನ್‌ ಅವರನ್ನೂ ಸೇರಿಸಿ ಒಂದು ಟಿಪ್ಪಣಿ ಬರೆದು ‘ಡಿಲಾನ್‌ ಮಾಸ್ಟರ್ ಪೊಯಟ್, ಸಾಮಾಜಿಕ ವಿಮರ್ಶೆಯ ತೀಕ್ಷ್ಣಮತಿ, ಪ್ರತಿಸಂಸ್ಕೃತಿಯ ಪ್ರೇರಕ ಶಕ್ತಿ’ ಎಂದು ಬಣ್ಣಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಅನ್ನು ಡಿಲಾನ್‌ ಅವರಿಗೆ ನೀಡುತ್ತಾ ‘ಈತನಿಗಿಂತ ದೊಡ್ಡ ಸಂಗೀತಗಾರ ಅಮೆರಿಕದ ಚರಿತ್ರೆಯಲ್ಲಿ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಲಿಂಗ್ ಸ್ಟೋನ್ ಎಂಬ ಸಂಸ್ಥೆ 2011ರಲ್ಲಿ ಮಾಡಿದ ‘ಸಾರ್ವಕಾಲಿಕ ನೂರು ಶ್ರೇಷ್ಠ ಕಲಾವಿದರ’ ಪಟ್ಟಿಯಲ್ಲಿ ಡಿಲಾನ್‌ ಎರಡನೆಯವರು. ‘ಲೈಕ್ ಎ ರೋಲಿಂಗ್ ಸ್ಟೋನ್’ ಎನ್ನುವ ಅವರ ಹಾಡು ‘ಎಲ್ಲಾ ಕಾಲದ ಸರ್ವಶ್ರೇಷ್ಠ ಗೀತೆ’ ಎನ್ನುವ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೆಲ್ಲಾ ಕಾರಣಗಳಿಂದಾಗಿ ಅಮೆರಿಕದ ಪ್ರಜ್ಞಾವಂತರು ಕಳೆದ 20 ವರ್ಷಗಳಿಂದ ಡಿಲಾನ್‌ ಅವರಿಗೆ ನೊಬೆಲ್ ಬರಬೇಕೆಂದು ‘ಸ್ವೀಡಿಷ್ ಅಕಾಡೆಮಿಗೆ’ ಸಾರ್ವಜನಿಕ ಒತ್ತಡ ತಂದಿದ್ದರು. ಅದರ ಪ್ರತಿಫಲ 2016ರಲ್ಲಿ ದಕ್ಕಿದೆ.

‘ಜೀವಂತವಿರುವಾಗ ನೀವು ಬಿಡುವಿಲ್ಲದ ಕೆಲಸಗಾರರಾಗದಿದ್ದರೆ ಸತ್ತಾಗ ಆಗುತ್ತೀರಾ’ ಎನ್ನುವ ಡಿಲಾನ್‌ ಅವರ ಹಾಡಿನ ಸಾಲೊಂದು ತಮ್ಮನ್ನು ಪ್ರಭಾವಿಸಿದ ಬಗ್ಗೆ ಆ್ಯಪಲ್ ಜನಕ ಸ್ಟೀವ್ ಜಾಬ್ಸ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಡಿಲಾನ್‌ ಅವರ ಗೀತೆಯ ಸಾಲುಗಳು ಲಕ್ಷಾಂತರ ಜನರನ್ನು ಪ್ರಭಾವಿಸಿ ಅವರ ಬದುಕಿನ ದಿಕ್ಕನ್ನು ಬದಲಿಸಿವೆ.

‘ಡಿಲಾನ್ ನೊಬೆಲ್ ಪ್ರಶಸ್ತಿಯ ಸಾಹಿತ್ಯದ ವ್ಯಾಖ್ಯಾನವನ್ನು ಬದಲಿಸಿದ್ದಾರೆ. ಅಮೆರಿಕದ ಸಂಗೀತ ಕ್ಷೇತ್ರದ ದಂತಕತೆಯಂತಿರುವ ಅವರಿಗೆ ಪ್ರಶಸ್ತಿ ಬಂದಿರುವುದು ನನಗೆ ಅತೀವ ಸಂತಸ ಉಂಟುಮಾಡಿದೆ’ ಎಂದು ಲೇಖಕ ಸಲ್ಮಾನ್ ರಶ್ದಿ ಶ್ಲಾಘಿಸಿದ್ದಾರೆ. ಹೀಗೆ ಜನನುಡಿಯನ್ನು ನೊಬೆಲ್‌ ಪಟ್ಟಕ್ಕೇರಿಸಿದ ಡಿಲಾನ್ ತಮ್ಮ ಇನ್ನಷ್ಟು ಗೀತೆಗಳ ಮೂಲಕ ನೆಲದ ಸಂವೇದನೆಯ ಕಂಪನ್ನು ಜಗದಗಲ ಪಸರಿಸಬೇಕಿದೆ.

ಮನಸ್ಸುಗಳ ಬೆಸೆಯುವ ಜನಪದ ಕವಿ ಇಬ್ರಾಹಿಂ ಸುತಾರ



-ಅರುಣ್ ಜೋಳದಕೂಡ್ಲಿಗಿ
06
ಉತ್ತರ ಕರ್ನಾಟಕ ಬೌಗೋಳಿಕವಾಗಿಯೂ ಸಾಂಸ್ಕøತಿಕವಾಗಿಯೂ ಭಿನ್ನ ಚಹರೆಗಳನ್ನು ಹೊಂದಿವೆ. ಇಲ್ಲಿ ಧೀರ್ಘಕಾಲದ ಮುಸ್ಲಿಂ ಆಳ್ವಿಕೆಯ ಕಾರಣಕ್ಕೆ ಹಿಂದು ಮುಸ್ಲಿಂ ಸಾಮರಸ್ಯ ಬೆಸೆದಂತಿದೆ. ಧರ್ಮ ಬೇಧವಿಲ್ಲದೆ ಹಿಂದು ಮುಸ್ಲಿಂಮರು ಕೂಡಿ ಮಾಡುವ ಮೊಹರಂ ಆಚರಣೆ, ಉರುಸುಗಳನ್ನು ನೋಡಿದರೆ ತಿಳಿಯುತ್ತದೆ. ಅಂತೆಯೇ ಈ ಸಾಮರಸ್ಯದ ಪರಂಪರೆಗೆ ಈ ಭಾಗದಲ್ಲಿ ಹುಟ್ಟಿದ ವಚನ ಚಳವಳಿ, ತತ್ವಪದಕಾರರ ಹಾಡಿಕೆಗಳು ಪ್ರೇರಣೆಯಾಗಿದೆ. ಹೀಗೆ ಆದ್ಯಾತ್ಮ ಭಕ್ತಿಗಳನ್ನು ಬಳಸಿಕೊಂಡೆ ಸಮಸಮಾಜವನ್ನು ನಿರ್ಮಿಸಲು, ಅಂತೆಯೇ ಜಾತಿಧರ್ಮ ರಹಿತ ಸಮಾಜವನ್ನು ಕಟ್ಟಲು ಈ ಪರಂಪರೆಗಳು ಶ್ರಮಿಸಿವೆ. 18 ನೇ ಶತಮಾನದ ಅಂಚಿನಲ್ಲಿ ಶಿಶುನಾಳ ಶರೀಫರು ಕೂಡ ಅಂತಹ ಸಾಧ್ಯತೆಯನ್ನು ತೋರಿದ್ದರು.

ನಾವು ಬದುಕುತ್ತಿರುವ ಈ ಕಾಲದಲ್ಲಿ ಆಧ್ಯಾತ್ಮ ಭಕ್ತಿ ಎನ್ನುವ ಸಂಗತಿಗಳು ಮಾರುಕಟ್ಟೆಯ ಸರಕಾಗಿವೆ. ಇವುಗಳು ಜನರನ್ನು ಕಂದಾಚಾರಗಲ್ಲಿ ಮುಳುಗಿಸುತ್ತಿವೆ. ಇದು ಮುಂದುವರಿದು ಜಾತೀಯತೆ, ಧಾರ್ಮಿಕ ಮೂಲಭೂತವಾದವನ್ನು ಹೆಚ್ಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಚನ, ಆಧ್ಯಾತ್ಮ, ಭಕ್ತಿಯ ದಾರಿಯಲ್ಲಿ ಸಮಾಜಿಕ ಸುಧಾರಣೆಯ ಕನಸನ್ನು ಹೊತ್ತವರೂ ಇದ್ದಾರೆ. ಹೀಗೆ ಪ್ರವಚನದ ಮೂಲಕ ಸಮಾಜ ಸೇವೆ, ಸಮಸಮಾಜದ ಕನಸು, ಧಾರ್ಮಿಕ ಸಾಮರಸ್ಯವನ್ನು ಹೆಚ್ಚಿಸುವ, ಜಾತಿಯ ತರತಮಗಳನ್ನು ಕಡಿಮೆ ಮಾಡುವ ನೆಲೆಯಲ್ಲಿ ಸಾಮುದಾಯಿಕ ಬದಲಾವಣೆಗೆ ತಮ್ಮದೇ ಆದ ಪುಟ್ಟ ಕಾಣಿಕೆ ಸಲ್ಲಿಸುತ್ತಿರುವವರಲ್ಲಿ ಹಿಬ್ರಾಹಿಂ ಸುತಾರರು ಗಮನಸೆಳೆಯುತ್ತಾರೆ.

ಸುತಾರ ಅವರನ್ನು ನೇರವಾಗಿ ಸಾಮಾಜಿಕ ಚಳವಳಿಯ ಚೌಕಟ್ಟಿನಲ್ಲಿ ಇರಿಸಲಾಗದು. ಆದರೆ ಅವರ ಬದುಕಿನ ತಿರುವುಗಳನ್ನು ನೋಡುತ್ತಾ ಹೋದರೆ, ಸಾಮಾಜಿಕ ಜೀವನದಲ್ಲಿ ಅವರ ಮಹತ್ವ ಅರಿವಾಗುತ್ತದೆ. ಬಾಗಲಕೋಟೆ ಜಿಲ್ಲೆಯ ಮಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ನೆಲೆಸಿದ ಇವರು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಬಹುಪಾಲು ಹಳ್ಳಿಗಳು ವರ್ಷಕ್ಕೆ ಒಮ್ಮೆಯಾದರೂ ಸುತಾರ ಅವರ ಪ್ರವಚನ ಕೇಳಬೇಕು ಎನ್ನುವುದು ವಾರ್ಷಿಕ ಆಚರಣೆಯಾಗಿದೆ. ಅಂತೆಯೇ ಸುತಾರರ ದಿನಚರಿಯನ್ನು ಗಮನಿಸಿದರೆ ಬಿಡುವಿಲ್ಲದ ಓಡಾಟವೂ ಕಾಣುತ್ತದೆ. ಇಂತಹ ಹಿಬ್ರಾಹಿಂ ಸುತಾರರ ಒಟ್ಟು ತಿಳಿವನ್ನು ರೂಪಿಸಿದ ಬಾಲ್ಯದ ಅನುಭವಗಳು ಕುತೂಹಲಕಾರಿಯಾಗಿವೆ. ಅವರದೇ ಮಾತಿನಲ್ಲಿ ಉತ್ತರಕರ್ನಾಟಕದ ಶೈಲಿಯಲ್ಲಿ ಅವರದೇ ದಾಟಿಯಲ್ಲಿ ಹೇಳುವ ನಿರೂಪಣೆ ಹೀಗಿದೆ:

`ಸಾರ್ ನಮ್ಮ ಕುಟುಂಬದವರು ಸಾತ್ವಿಕರು ಧರ್ಮವಂತರು ಇದ್ದರು. ನಂತರದಲ್ಲಿ ನನ್ನ ಬಾಲ್ಯದೊಳಗರಿ..ನಾನು ನಮಾಜ ಮಾಡಾದು, ಖುರಾನ್ ಅಭ್ಯಾಸ ಮಾಡಾದು, ಆರಂಭದೊಳಗ ನಮ್ ಗುರುಗಳಿಂದ ನಾನು ಧೀಕ್ಷೆ ಪಡಕೊಂಡು ಇಸಲಾಮ್ ಧರಮದ ಪರಿಪಾಲನೆಯೊಳಗ ಖಡ್ಡಾಯವಾಗಿ ಇದ್ನಿ. ನಂತರದಲ್ಲಿ ನನಗೂ ಗೊತ್ತಾಗಲಾರದಂಗ ನನ್ನ ಮನಸ್ಸಿನೊಳಗ ಒಂದು ಸುಪ್ತವಾದ ಬಯಕೆ ಏನು ಇತ್ತು ಅಂದ್ರ, ಎಲ್ಲಾ ಧರ್ಮದ ತತ್ವ ತಿಳಕೋಬೇಕು ಅನ್ನೋದು. ಅದು ನನಗೂ ಗೊತ್ತಿದ್ದಿದ್ದಿಲ್ಲ. ಆದ್ರು ಅದು ಮನಸ್ಸಿನ್ಯಾಗ ಇರೋದು. ಹಿಂಗಾಗಿ ನಾನು ಇಸಲಾಮ ಧರ್ಮದ ಖುರಾನ ಅಧ್ಯಯನ ಮಾಡಿದ ಬಳಿಕ, ವಚನ ಸಾಹಿತ್ಯದೊಳಗ ಅಲ್ಲಾನ ಬಗ್ಗೆ ಏನ್ ಇರಬಹುದು? ಮತ್ತು ಧರ್ಮದ ವ್ಯಾಖ್ಯಾನ ಅವರು ಏನ್ ಮಾಡ್ತಿರಬೇಕು. ಉಪನಿಷತ್‍ಕಾರ ಏನ್ ಮಾಡ್ತಿರಬಹುದು? ಗೀತದೊಳಗೆ ಏನು ಹೇಳಿರಬಹುದು? ಇನ್ನುಳಿದ ಧರ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಏನು ವ್ಯಾಖ್ಯಾನ ಇರಬೇಕು ಅನ್ನೋದನ್ನು ತಿಳುಕೋಬೇಕು ಅನ್ನೋ ಹಂಬಲ ಇತ್ತು. ಆದರ ಅದಕ್ಕ ಅವಕಾಶ ಇರ್ತಿದ್ದಿಲ್ಲ. ಅದು ಹಂಗೆ ಎಂಟತ್ತು ವರ್ಷ ನನ್ನ ಮನಸ್ಸಿನ್ಯಾಗ ಇರ್ತಿತ್ತು.
ಎಂ.ಎಂ.ಕಲ್ಬುರ್ಗಿ ಅವರನ್ನು ಸುತಾರ ಸ್ವಾಗತಿಸುತ್ತಿರುವುದು.

ಎಂ.ಎಂ.ಕಲ್ಬುರ್ಗಿ ಅವರನ್ನು ಸುತಾರ ಸ್ವಾಗತಿಸುತ್ತಿರುವುದು.


ನನ್ನ ಬಾಲ್ಯದ ಹೊತ್ತಲ್ಲಿ ಮಸೀದಿ ಒಳಗ ಮೈಕದ ವ್ಯವಸ್ಥೆ ಇರಲಿಲ್ಲ. ಹಂಗಾಗಿ ರಂಜಾನ್ ತಿಂಗಳು ಬಂತು ಅಂತಂದ್ರೆ ನಾವು ಏಳೆಂಟು ಹುಡುಗರು ಗುಂಪು ಮಾಡಿಕೊಂಡು ಬೆಳಗ್ಗೆ ನಾಲ್ಕು ಗಂಟೆ ಹೊತ್ತಿಗೆ ಎದ್ದು ಇಡೀ ಮಹಾಲಿಂಗಪುರದ ಎಲ್ಲಾ ಮುಸ್ಲೀಮರ ಮನಿ ಮನಿಗೋಗಿ ಎಚ್ಚರ ಮಾಡತಿದ್ವಿ. ನಾವು ನಮಾಜ್ ಕೆ ಲಿಯೇ ಉಟೋ..ರೋಜ ಕೆ ಲಿಯೇ ಉಟೋ ಎಂದು ಹಾಡಿಕೊಳ್ಳುತ್ತಾ ಅಡ್ಡಾಡ್ತಿದ್ವಿ. ಇದೇ ರೀತಿ ಎಂಟತ್ತು ವರ್ಷ ಮಾಡಿದ್ವಿ. ಅಷ್ಟರೊಳಗ ಮೈಕದು ಬಂದುಬಿಟ್ವು ಆಗ ನಾವು ಹೋಗೋದು ನಿಲ್ತು.

ಈ ಮಧ್ಯೆ ನನ್ನೊಳಗ ಸುಪ್ತವಾಗಿ ಇನ್ನೊಂದು ಧರ್ಮದ ಬಗ್ಗೆ ತಿಳಕೋಬೇಕು ಅನ್ನೋದು ಇತ್ತಲ್ಲ, ಅಕಸ್ಮಾತ್ ಒಂದು ಪ್ರಸಂಗ ಬಂತು. ಒಂದು ಭಜನಾ ಸಂಘದವರು ಸಾಧು ನಿರಂಜನ ಅವಧೂತರ ಗುಡಿಯೊಳಗ ದಿನಾಲು ಭಜನಾ ಮಾಡತಾ ಇರುವಂತಹ ಒಂದು ಸಂಘ ಅದು. ಈ ಗುಡಿಯನ್ನು ಹಾದು ಹೋಗುವಂತಹ ಟೈಮದಾಗ ಅವರು ಭಜನಾ ಪದ್ಯಗಳನ್ನು ಹಾಡ್ತಾ ಇದ್ರು. ನನಗ ಒಂದಷ್ಟು ಹಾಡೋ ರೂಢಿ ಇರೋದರಿಂದ, ನಾನು ಕೂತುಗೊಂಡು ಅವರು ಏನು ಆಡ್ತಾಡ ನೋಡೋಣ ಅಂತ ಗುಡಿಯ ಕಟ್ಟಿಯ ಮುಂದೆ ಕೂತಗೊಂಡೆ.
ಆಗ ಮಹಾಲಿಂಗ ರಂಗರ ಒಂದು ಪದ್ಯ ಹಾಡುತ್ತಿದ್ದರು. ಅದೇನಂದರ ,
`ಮಾತು ಮಾತಿಗೆ ಶಂಕರಾ..
ಸ್ನಾನವ ಮಾಡುವಾಗ,
ನೇಮದಿ ಆತ್ಮ ಧ್ಯಾನವ ಮಾಡುವಾಗ
ಜಾಣತನದಿ ಅನ್ನ ಉಂಡು
ಗಂಗಾಮೃತ ಪಾನವ ಮಾಡುವಾಗ
ಮಾತು ಮಾತಿಗೆ ಶಂಕರ ಅನಬೇಕು..
ಬೆಟ್ಟವನೇರುವಾಗ,
ಕಾಲು ಜಾರಿದಲ್ಲಿ ಥಟ್ಟನೆ ಬೀಳುವಾಗ
ಅಷ್ಟಭೋಗದಿ ನಿತ್ಯಲೋಲುಪ್ತತೆ ಪಡೆಯುವಾಗ
ದಟ್ಟದಾರಿದ್ರ್ಯ ಬಂದಾಗ ಮನವೇ
ಮಾತು ಮಾತಿಗೆ ಶಂಕರಾ ಅನಬೇಕು…

ಈ ಪದ್ಯದ ಉಪದೇಶ ಇತ್ತಲ್ಲ ಅದು ನನಗೆ ತುಂಬಾ ಪರಿಣಾಮ ಮಾಡಿತು. ಯಾಕಂತ ಕೇಳಿದ್ರ ನಾವು ಇದನ್ನೆ ಮಸೂದಿಯೊಳಗ ಅಭ್ಯಾಸ ಮಾಡ್ತಿದ್ವಿ. ನಮಗ ಗುರುಗಳು ಏನು ಹೇಳ್ತಾ ಇದ್ರು. `ಹರ ಕಾಮ್ ಬಿಸಿಮಿಲ್ಲಾಕೆ ಸಾತ್ ಶುರುಕರೋ.. ಪ್ರತಿಯೊಂದು ಕೆಲಸ ಮಾಡುವಾಗ ಬಿಸ್ಮಿಲ್ಲಾ ರಹೀಮ್ ಅಲ್ಲಾ ಅನಬೇಕು ಅನ್ನೋದಾಗಿತ್ತು. ಭಗವಂತನ ಸ್ಮರಣೆಯೊಂದಿಗೇ ನಿಮ್ಮ ಕೆಲಸವನ್ನು ಆರಂಬಿಸಬೇಕು ಅನ್ನೋದನ್ನು ನಮಗ ಹೇಳಿಕೊಡ್ತಾ ಇದ್ರು. ಅವರು ಇಡೀ ಜೀವನದೊಳಗ ಊಟ ಮಾಡುವಾಗ ಖಾತೆವತ್ತು, ಸೋತೆವತ್ತು, ಪೀತೆಹೊತ್ತು, ಹರ್ ಕಾಮ ಹೇ… ಅಂತ ಅವರು ಅಂದಿಲ್ಲ ಆದ್ರ ನನಗ ಇದು ಭಜನೆ ಪದದ ನೀತಿನೆ ಹೇಳಾಕ ಹತ್ತಿತು. ಅಂದಕೂಡಲೆ ಇದು ಎಷ್ಟು ಹೊಂದಾಣಿಕೆ ಐತೆಲ್ಲಾ? ನಾವು ಅಲ್ಲಾ ಅಂತೀವಿ ಇವರು ಶಂಕರ ಅಂತಾರ, ಅನವಲ್ಲರ್ಯಾಕ..ಪ್ರತಿಯೊಂದು ಧರ್ಮದೊಳಗ ಭಗವಂತನ ಸ್ಮರಣೆ ಮಾಡಬೇಕು ಅನ್ನೋದೊಂದೈತಲ್ಲ ಅನ್ನಿಸಿತು.
03
ಹಂಗಾಗಿ ಈ ಪದ್ಯ ಕೇಳಿದ ಬಳಿಕ ನಾನು ಅವರ ಬಳಿ ಹೋಗಿ ನೀವು ನಿಮ್ಮ ಪದ್ಯಗಳನ್ನ ಕಲಿಸ್ತಿರೇನು ಅಂತ ಕೇಳಿದೆ. ಅವ್ರು ಅದೇನ್ ಮಾರಾಯ ಅವಶ್ಯ ಕಲಿಸ್ತೀವಿ ಬಾ ಅಂದ್ರು. ಅವರಿಗೆ ಕಲಿಸುವಂತಹ ಗುರುಗಳು ಒಬ್ರಿದ್ರು ಅವ್ರ ಹೆಸ್ರು ಬಸಪ್ಪ ಮಾಸ್ತರ ಅಂತ. ಆಗ ಅವರ ಬಳಿ ನಾನು ಬಹಳಾ ಪ್ರೀತಿಯಿಂದ ಭಜನಾ ಪದ್ಯಗಳನ್ನು ಕಲಿತೆ. ಮಾಲಿಂಗ ರಂಗ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ, ಶಿಶುನಾಳ ಶರೀಫ ಮುಂತಾದವರ ಹಾಡುಗಳನ್ನೆಲ್ಲಾ ಕಲಿತುಕೊಂಡೆ. ಹೀಗೆ ಕಲಿತುಕೊಂಡ ಬಳಿಕ ಏನಾರ ಸಣ್ಣಪುಟ್ಟ ಕಾರ್ಯಕ್ರಮ ಇದ್ರ ಅವರು ನನ್ನ ಕರೀತಿದ್ರು.’ ಎನ್ನುತ್ತಾರೆ.

03ಹೀಗೆ ಸುತಾರರು ಪ್ರವಚನದ ದಾರಿಗೆ ತೆರೆದುಕೊಂಡನ್ನು ವಿಶಿಷ್ಠವಾಗಿದೆ. ನಾನು ಮೊದಲು ಅವರ ಬಗ್ಗೆ ತಿಳಿದಿದ್ದೆನಾದರೂ ಬೇಟಿಯಾಗಿರಲಿಲ್ಲ. ಸಂದರ್ಶನಕ್ಕಾಗಿ ಮಹಾಲಿಂಗಪುರದಲ್ಲಿ ಬೇಟಿ ವಿಫಲವಾಯಿತು. ನಂತರ ಅವರು ಪ್ರವಚನ ಮಾಡುವ ಹಳ್ಳಿಗೆ ಹೋದೆನು. ಗೋಕಾಕ ತಾಲೂಕಿನ ಕೃಷ್ಣನದಿ ದಂಡೆಯ ಊರು ಹಳ್ಯಾಳ. ಅಲ್ಲೊಂದು ಮಠದಲ್ಲಿ ಪ್ರವಚನ ಆಯೋಜನೆಗೊಂಡಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಇಡೀ ಊರಿನ ಜನರು ಸೇರಿದರು. ಕನಿಷ್ಠ ಐದುನೂರರಷ್ಟು ಜನರಿದ್ದರು. ಸಾಂಪ್ರದಾಯಿಕವಾಗಿ ಸ್ಥಳೀಯ ಸ್ವಾಮೀಜಿಯೊಬ್ಬರು ಉದ್ಘಾಟಿಸಿದರು. ಸುತಾರ ಮತ್ತವರ ತಂಡದ ಪ್ರವಚನ ಆರಂಭವಾಯಿತು. ಅಂದು ಗುರುಶಿಷ್ಯರಲ್ಲಿ ಜಾತಿಬೇಧ ಇರಬಾರದು ಎನ್ನುವ ಚರ್ಚೆ, ಕಾಯಕ ನಿಷ್ಠೆ, ಶ್ರೀಮಂತಿಕೆಯ ಅಪಮೌಲ್ಯೀಕರಣದ ವ್ಯಾಖ್ಯಾನ, ಮೇಲು ಕೀಳಿನ ಆಚರಣೆಯ ನಿರರ್ಥಕ ಸಂಗತಿಗಳನ್ನು ಒಳಗೊಂಡಂತೆ ನವಿರಾಗಿ, ಹಾಸ್ಯಮಿಶ್ರಿತ ನಿರೂಪಣೆಯನ್ನು ಸಂವಾದಿರೂಪಿಯಾಗಿ ಮಂಡಿಸುತ್ತಾ ಹೋದರು. ಮಧ್ಯರಾತ್ರಿಯವರೆಗೆ ಈ ಚರ್ಚೆ ನಡದೇ ಇತ್ತು. ಜನರು ಕದಲದೆ ಈ ಸಂವಾದವನ್ನು ಕೇಳಿಸಿಕೊಂಡರು. ನಂತರ ಮಧ್ಯರಾತ್ರಿಯಲ್ಲಿ ಪ್ರಸಾದ ಸ್ವೀಕರಿಸಿ ತಮ್ಮ ಮನೆಗಳಿಗೆ ನಡೆದರು.

ಈ ಚರ್ಚೆಯಲ್ಲಿ ಸುತಾರ ಅವರು ಜನಪದ ಗಾದೆ, ವೇದ ಉಪನಿಷತ್ ಭಗವದ್ಗೀತೆಯ ಶ್ಲೋಕಗಳು, ಕುರಾನಿನ ಉಲ್ಲೇಖಗಳು, ಬೈಬಲ್ಲಿನ ಸಂಗತಿಗಳು, ದೈನಂದಿನ ಚಟುವಟಿಕೆಗಳು, ಜನಸಾಮಾನ್ಯರ ನಂಬಿಕೆಗಳು ಹೀಗೆ ಈ ಎಲ್ಲವನ್ನೂ ಒಳಗೊಂಡ ಕೊಲಾಜ್ ಮಾದರಿಯ ತಮ್ಮದೇ ಆದ ಒಂದು ವಿಶಿಷ್ಠ ಪಠ್ಯವನ್ನು ಮಂಡಿಸುತ್ತಿದ್ದರು. ಈ ಎಲ್ಲದರ ಉಲ್ಲೇಖ ಜನರಲ್ಲಿ ಒಂದು ಬಗೆಯ ಅಚ್ಚರಿಯನ್ನೂ, ಬೆರಗನ್ನೂ ಮೂಡಿಸುತ್ತಿತ್ತು. ಇಲ್ಲಿ ನೆರೆದ ಮಕ್ಕಳ ಮೇಲಂತೂ ಈ ಮಾತುಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಕಾಣುತ್ತಿತ್ತು. ಆದರೆ ಹೊತ್ತು ಮೀರುತ್ತಿದ್ದಂತೆ ರಾತ್ರಿ ಮಕ್ಕಳೆಲ್ಲಾ ನಿದ್ದೆಗೆ ಶರಣಾದರು. ಒಮ್ಮೆಯೂ ವೈಚಾರಿಕ ಭಾಷಣ ಕೇಳಲು, ಲೇಖನ ಓದಲು ಸಾದ್ಯವಿಲ್ಲದ ಸಣ್ಣ ಹಳ್ಳಿಗಳಲ್ಲಿ ಸುತಾರರ ನಿರೂಪಣೆಗಳು ತನ್ನದೇ ಆದ ಪ್ರಭಾವ ಬೀರುತ್ತಿರುವುದು ಕಾಣಿಸಿತು.
**
ಸುತಾರರು ತಮ್ಮ ಪ್ರವಚನದ ಜತೆ ಸಾಮಾಜಿಕ ಕಾಳಜಿಯ ಕಡೆ ಮುಖ ಮಾಡಿರುವುದು ಮುಖ್ಯವಾಗಿದೆ. ಇಲ್ಲಿ ಅವರು ಸಾಮೂಹಿಕ ಹಿತದ ಕೆಲಸಗಳಿಗೆ ಹೆಚ್ಚು ಗಮನಹರಿಸಿದ್ದಾರೆ. ರಸ್ತೆ ಮಾಡಿಸಿದ್ದು, ಶಾಲೆ ಕಟ್ಟಿಸಿದ್ದು, ಕುಡಿಯುವ ನೀರಿನ ಟ್ಯಾಂಕ್ ಕಟ್ಟಿಸಿದ್ದು ಇತ್ಯಾದಿಗಳು. ಇಂತಹ ಕೆಲಸಗಳಿಗೆ ಬಂದೊದಗಿದ ಸಂದರ್ಭಳೂ, ಇಂತಹ ಸಂದರ್ಭವನ್ನು ಸುತಾರರು ನಿಭಾಯಿಸಿದ ಬಗೆ ಎರಡೂ ಭಿನ್ನವಾಗಿದೆ. ಸುತಾರರು ಇಂತಹ ಸಂದರ್ಭವನ್ನು ಅವರದೇ ಮಾತಿನಲ್ಲಿ ಆತ್ಮೀಯವಾಗಿ ರಸ್ತೆ ಮಾಡಿದ ಘಟನೆಯನ್ನು ಹೇಳುತ್ತಾರೆ:
`ನಾವು ಕೆಲವು ಊರುಗಳಿಗೆ ಶ್ರಾವಣಕ್ಕ ಪ್ರತಿ ವರ್ಷ ಹೋಗತಿದ್ದೆವು. ಹಂಗ ಬೆಳಗಾಂ ಜಿಲ್ಲೆ ಅಥಣಿ ತಾಲೂಕು ಶೇಗುಣಸಿ ಅಂತಾ ಊರಿದೆ. ಅಲ್ಲಿಗೆ 15 ವರ್ಷದಿಂದ ಶ್ರಾವಣಕ್ಕ ಹೋಗತಿದ್ವಿ. ಈ ಸಿದ್ದೇಶ್ವರ ಸ್ವಾಮೀಜಿ ಇದಾರಲ್ಲ ಅವರ ಗುರುಗಳು ಮಲ್ಲಿಕಾರ್ಜುನ ಸ್ವಾಮಿಗಳು. ಅವರೇನು ಮಾಡ್ತಾ ಇದ್ರು ಯಾವುದೇ ಊರಿಗೆ ಹೋದ್ರನೂ ಪ್ರವಚನ ಮಾಡಿದ ಬಳಿಕ, ಆ ಊರಿನವರು ಕೊಟ್ಟ ದುಡ್ಡನ್ನೆಲ್ಲಾ ಸಮಾಜ ಸೇವೆಗೆ ಬಿಟ್ಟು ಬರ್ತಾ ಇದ್ರು ಅಂತ ನಾವು ಕೇಳಿದ್ವಿ. ನಮಗ ಬಡತನದ ಜೀವನ ಇದ ಅವರೇನು ಕಾಣಿಕೆ ಅಂತ ಕೊಡತಾರ ಅದಕ್ಕೆ ವ್ಯತಿರಿಕ್ತವಾಗಿ ನಾವು ಸಮಾಜಕ್ಕೆ ಏನಾರ ಕೊಡಬೇಕಲ್ಲಾ ಅನ್ನಿಸಿತು.

ಹಿಂಗ ಇರಬೇಕಾದ್ರೆ, ಶ್ರಾವಣಕ್ಕೆ ಸೀಗುಣಸಿಗೆ ಹೋದಾಗ ಒಂದು ಘಟನ ಸಂಭವಿಸಿತು. ಅತ್ಯಂತ ಬಡಕುಟುಂಬದ ಒಂದೇ ತಾಯಿಯ ಎರಡು ಮಕ್ಕಳು ಎಂಟೇದಿನದ ಒಳಗ ತೀರಿಕೊಂಡವು. ನಾವು ದಿನಾಲು ಅವರ ಮನೆಮುಂದೆ ಹೋಗೋದು ಬರೋದು ಮಾಡ್ತಾ ಇದ್ದೆ. ಒಂದು ಮಗು ತೀರಿಕೊಂಡಾಗ ಅಳತಿದ್ದದ್ದನ್ನ ನಾನು ನೋಡಿದ್ದೆ. ಇದಾಗಿ ಎಂಟು ದಿನ ಆದ ಮ್ಯಾಲೆ ಇದೇ ರೀತಿಯ ದುಃಖ ಅದೇ ಮನಿಯಾಗ ಸಂಭವಿಸಿತು. ಅಂದ್ರ ಮತ್ತೊಂದು ಮಗು ತೀರಿಕೊಂಡಿತ್ತು. ಇದು ನನ್ನ ಮನಸ್ಸಿನ ಮೇಲೆ ಬಾಳ ಪರಿಣಾಮ ಬೀರಿತು. ಹಿಂಗ ಮಕ್ಕಳು ಯಾಕ ತೀರಿಕೊಳ್ಳಾಕ ಹತ್ಯಾವ ಅನ್ನೋ ಬಗ್ಗೆ ಚಿಂತನಾ ನಡೆಸಿದ್ವಿ. ಆಗ ತಿಳಿದದ್ದು ಏನಂದ್ರ, ಮಕ್ಕಳಿಗೆ ವಾಂತಿ ಬೇದಿ ಆರಂಭವಾಗಿತ್ತು. ಆಗ ದವಾಖಾನೆಗೆ ಕರಕೊಂಡು ಹೋಗಾಕ ಅಂದ್ರ ತೇರದಾಳಕ್ಕ ಹೋಗಬೇಕು. ರೋಡಿಲ್ಲ, ಮಳಿಯಿಂದಾಗಿ ಎರಿನೆಲ (ಕಪ್ಪು ಭೂಮಿ) ಕೆಸರಲ್ಲಿ ಕಾಲು ಸಿಕ್ಕಿಕೊಂತಾವ, ಮಕ್ಕಳನ್ನು ಎತ್ತಿಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಸಲಿಲ್ಲದ್ದಕ್ಕ ಈ ಮಕ್ಕಳು ತೀರಿದ್ವಿ ಅಂದ್ರು. ಯಾರಿಗಾರ ಕೇಳಿದ್ರ ಚಕ್ಕಡಿ ಊಡಿಕೊಂಡು ಹೋಗಬೇಕು, ಅವರು ನೂರ ಇನ್ನೂರ ಬಾಡಿಗಿ ಕೇಳೋವರು, ಹಿಂಗಾಗಿ ಹೋಗಲಾರದಕ್ಕ ಮಗು ತೀರಿಕೊಳ್ತು ಎಂದರು. ಇದನ್ನ ಕೇಳಿ ಬಾಳ ಬೇಸರ ಆಯ್ತು. ಅರೆ ಈ ಊರಿಗೆ ರೋಡು ಇಲ್ವಲ್ಲಾ ಅನ್ನಿಸ್ತು.

ಈ ಊರಾಗ ಶ್ರೀಮಂತರು ಸಾಕಷ್ಟು ಜನ ಇದಾರ ಇವರೆಲ್ಲಾ ಒಟ್ಟಾಗಿ ಸರಕಾರದಿಂದ ಒಂದು ರೋಡ್ ಯಾಕ ಮಾಡಿಸಬಾರದು? ಅನ್ನಿಸ್ತು. ಶ್ರಾವಣಕ್ಕೆ ಹೋದ ನಮ್ಮ ಗೆಳೆಯರ ಗುಂಪನ್ನು ಸೇರಿಸಿಕೊಂಡು ಈ ಊರಿನ ಪ್ರಮುಖರನ್ನು ಒಂದು ಕಡೆ ಕೂಡಿಸೋಣ. ಅವರ ಮುಂದೆ ಈ ಊರಿಗೆ ದಾರಿ ಇಲ್ಲದ್ದನ್ನು ಹೇಳೋಣ. ಬಡತಾಯಿಯ ಮಕ್ಕಳು ಎಂಟು ದಿನದಲ್ಲಿ ತೀರಿಕೊಂಡವು. ಶ್ರೀಮಂತರು ಚಕ್ಕಡಿ ಹೂಡಿಕೊಂಡೋ, ಟ್ರಾಕ್ಟರ್ ಗಾಡಿ ತೊಗೊಂಡೋ ಹೋಗ್ತೀರಿ. ಆದರ ಈ ಬಡವರ ಪಾಡೇನು? ಅಂತ ಕೇಳಿದ್ವಿ. ಅದಕ್ಕ ಈ ಊರಿಗೆ ಒಂದು ರೋಡು ಆಗಬೇಕು ಇದಕ್ಕ ಬೇಡಿಕೆ ಇಡೋಣು ಅಂತ ತೀರ್ಮಾನ ಮಾಡಿದ್ವಿ. ಈ ಸಂಕಲ್ಪ ಮಾಡಿ ಊರನ್ನೆಲ್ಲಾ ಅಡ್ಡಾಡಿ ಹಿರೇರನ್ನ ಕೂಡಿಸಿದ್ವಿ. ಹೀಗೆ ಕೂಡಿಸಿದ ಬಳಿಕ ನಾವು ಎದ್ದು ನಿಂತು ವಿನಂತಿ ಮಾಡಿಕೊಂಡ್ವಿ. ದಾರಿ ಇಲ್ಲದ ಕಾರಣಕ್ಕ ಎರಡು ಮಕ್ಕಳು ತೀರಿ ಹೋದ್ವು. ದಾರಿನಾದ್ರೂ ಇದ್ದದ್ರ, ನಡಕೊಂಡಾದ್ರೂ ಹೋಗಿ ಮಕ್ಕಳ ಪ್ರಾಣಾನ ಉಳಿಸಿಕೊಳ್ತಾ ಇದ್ರು. ಈ ಊರು ದಾರಿ ಇಲ್ಲದ ನಡುಗಡ್ಡೆ ಇದ್ದಂಗ ಐತಿ. ನಾವು ನೀವು ಇದೀವಿ. ಈ ಊರಿಗೆ ದಾರಿ ಮಾಡ್ಸಾಮು.

ಊರವರೆಲ್ಲಾ ಸೇರಿ ಸರಕಾರದ ಮುಂದೆ ಬೇಡಿಕೆ ಇಡ್ರಿ. ನೀವು ಯಾವ ಆಫೀಸಿನ ಮುಂದೆ ಹೇಳ್ತೀರೋ ಆ ಆಫೀಸಿನ ಮುಂದೆ ನಾವು ಹೋಗಿ ಕೂತಕೊಂತೀವಿ. ನಾವು ಕೆಲಸ ಆಗೋತನಕ ಉಪವಾಸ ಸತ್ಯಾಗ್ರಹ ಮಾಡ್ತೀವಿ. ಅಧಿಕಾರಿಗಳ ಜತೆ ನೀವು ಸಂಪರ್ಕ ಮಾಡರಿ. ನಾವು ಉಪವಾಸ ಮಾಡ್ತೀವಿ. ಒಂದು ವೇಳೇ ಇದಕ್ಕ ನೀವು ಒಪ್ಪಲಿಲ್ಲ ಅಂದ್ರ ನಾವು ನಿಮ್ಮ ಮನಿ ಮುಂದೆ ಇವತ್ತು ಉಪವಾಸ ಕೂಡತೀವಿ ಅಂದ್ವಿ. ನಾವು ಸಿದ್ಧಾರೂಢರ ಪ್ರತಿಮೆ ಮುಂದೆ ಹೀಗಂತ ನಾವು ಪ್ರತಿಜ್ಞೆ ಮಾಡಿನ ಬಂದೀವಿ. ನಿಮ್ಮ ಮಕ್ಕಳ ಹಿಂಗ ತೀರಿ ಹೋಗಿದ್ರ ಏನ್ ಮಾಡತಿದ್ರಿ ನೀವು ಯೋಚನೆ ಮಾಡರಿ’ ಅಂದ್ವಿ.

ಇದು ಊರವರ ಮೇಲೆ ಪರಿಣಾಮ ಬೀರಿತು. ಊರವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರು. ಈಗ ಶ್ರಮಧಾನದಿಂದ ಕಾರ್ಯಕ್ರಮವನ್ನು ಆರಂಭಿಸೋಣ. ಮಣ್ಣು ಅಡ್ಡಿ ಹೊಗೆಯುವುದು. ಈ ಕೆಲಸ ಶುರುಮಾಡುವುದು. ಒಂದೊಂದು ದಿವಸ ಒಂದು ಓಣಿಯವರು ಶ್ರಮಧಾನ ಮಾಡೋದು ಅಂತ ಕೆಲಸ ಶುರು ಮಾಡಿಕೊಂಡ್ರು. ಹೀಗೆ ಶುರುಮಾಡಿ ಆಫೀಸಕ್ಕ ಹೋಗೋಣು ಅಂತ ಹೋದ್ವಿ. ಸ್ವಲ್ಪನಾರ ನಾವು ಮಾಡಿದ ಕೆಲಸ ತೋರ್ಸೋಣು ಅಂತ ಟೀಮ್ ತಯಾರಾಯ್ತು. ಮರು ದಿವಸ ಕೆಲಸ ಶುರುವಾಯ್ತು. ನಾವು ಭಜನಾ ಸಂಘದವರು ಇಡೀ ಊರೆಲ್ಲಾ ಓಂ ನಮಃ ಶಿವಾಯ ಅಂತಾ ಹೇಳಿಕೊಳ್ತಾ ಸುತ್ತುವರಿತಾ ಇದ್ವಿ. ಈ ಓಣಿಯಾಗ ಶ್ರಮಧಾನದ ಪಾಳ್ಯ ನಿಮ್ಮದು ಅದಾ ಅಂತಾ ಹೇಳ್ತಾ ಇಡೀ ಊರನ್ನು ಎಚ್ಚರಿಸಿದ್ವಿ. ಅದೊಂದು ರೀತಿಯಲ್ಲಿ ಎಲ್ಲರಿಗೂ ಉಮ್ಮಸ್ಸು ಬಂತು ಅನಸ್ತದ. ಹಿಂಗಾ ಮಾಡಿ ಐದಾರು ತಿಂಗಳು ಭಜನಾ ಮಾಡತನಕ, ಅಲ್ಲೇ ನಾವು ಉಳಿದ ಬಿಟ್ವಿ. ಅಲ್ಲಿ ಊರವರು ಒಂದು ಟನ್ ಕಬ್ಬಿಗೆ ಇಷ್ಟು ಅಂತ ಸಕ್ಕರಿ ಪ್ಯಾಕ್ಟರಿಯಾಗ ಹಣನೂ ಸಂಗ್ರಹ ಮಾಡಿಕೊಂಡು ಬಂದ್ರು. ಸರಕಾರವೂ ನೆರವು ನೀಡಿತು. ಈ ರಸ್ತೆ ತೇಗುಣಿಸೆಯಿಂದ ತೇರದಾಳದ ತನಕ ಒಟ್ಟು ಎಂಟೂವರೆ ಕಿಲೋಮೀಟರ್ ಇದೆ. ಈಗ ಅದು ಬದಲಾವಣೆ ಆಗಿ ಡಾಂಬರು ರೋಡಾಗಿದೆ. ಅದೊಂದು ಕೆಲಸ ಶ್ರಾವಣ ಮಾಸಕ್ಕೆ ಹೋದಾಗ ಈಡೇರಿದ್ದು. ನಮಗ ದೊಡ್ಡ ನೆಮ್ಮದಿ ತಂದಾದ’ ಎನ್ನುತ್ತಾರೆ.

ಇಂತಹ ಸಾಮಾಜಿಕ ಚಟುವಟಿಕೆಗಳು ಭಿನ್ನವಾಗಿದ್ದರೂ, ಈ ದಾರಿಯಲ್ಲಿ ಹೆಚ್ಚು ದೂರ ಸುತಾರರಿಗೆ ಸಾಗಲು ಸಾಧ್ಯವಾಗಲಿಲ್ಲ. ಕಾರಣ ಈ ಬಗೆಯ ಸಾಮಾಜಿಕ ಕಾರ್ಯಗಳಿಗೆ ರಾಜಕೀಯ ಆಯಾಮವೊಂದು ಬರುವ ಅಪಾಯವೂ ಇರಬಹುದು. ಅಂತೆಯೇ ಪ್ರವಚನ ಕಾರ್ಯವಷ್ಟೇ ತಮ್ಮದು ಎನ್ನುವ ಸಂದೇಶ ಸಾರ್ವಜನಿಕರಿಂದಲೋ, ರಾಜಕಾರಿಣಿಗಳಿಂದಲೋ ಪರೋಕ್ಷವಾಗಿ ರವಾನೆಯಾಗಿರುವ ಸಾಧ್ಯತೆಯೂ ಇದೆ.

ಸುತಾರರು `ಪಾರಮಾರ್ಥ ಲಹರಿ ತತ್ವಪದಗಳು’ `ತತ್ವಜ್ಞಾನಕ್ಕೆ ಎಲ್ಲರೂ ಅಧಿಕಾರಿಗಳು’ `ನಾವೆಲ್ಲಾ ಭಾರತೀಯರು’ ಎಂಬ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ `ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ’ ಎನ್ನುವ ಪದ ಉತ್ತರ ಕರ್ನಾಟಕದ ಭಜನಾ ಮಂಡಳಿಗಳ ರಾಷ್ಟ್ರಗೀತೆಯಂತೆ ಜನಪ್ರಿಯವಾಗಿದೆ. ಸುತಾರರು ನವಮೌಖಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗಿದ್ದಾರೆ. ಹಾಗಾಗಿ ಈತನಕ 20 ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಇದರ ಪ್ರಭಾವದಿಂದ ಸುತಾರರ ಪ್ರವಚನ ಮತ್ತು ಪದಗಳು ಮೈಬೈಲ್‍ನಲ್ಲಿಯೂ, ಟಿವಿಗಳಲ್ಲಿಯೂ ವ್ಯಾಪಕವಾಗಿ ಹರಡಿವೆ. ಸುತಾರ ಅವರು ರಚಿಸುವ ಕಾವ್ಯ ಅಥವಾ ವಚನಗಳನ್ನು `ಬಸವ’ ಎಂಬ ಅಂಕಿತದಲ್ಲಿ ಬರೆಯುತ್ತಿದ್ದಾರೆ. ಪ್ರವಚನಗಳಲ್ಲಿ ಸಾಮಾಜಿಕ ಪ್ರಸಕ್ತ ವಿದ್ಯಮಾನದ ಸಂಗತಿಗಳನ್ನು ತರುವ ಕ್ರಮ ಕೂಡ ಇದೆ. ಈ ಅರ್ಥದಲ್ಲಿ ಅವರೊಬ್ಬ ಜನಪದ ಕವಿ. ಜನಪದ ಸಂವಹನದ ದಾರಿಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಈ ನೆಲೆಯಲ್ಲಿ ದೇವದಾಸಿ ಪದ್ದತಿಯ ವಿರುದ್ದ, ಜಾತಿ ಪದ್ದತಿಯ ವಿರುದ್ಧ ಜನಜಾಗೃತಿ ಮೂಡಿಸುವುದು, ಸಾಕ್ಷರತಾ ಕಾರ್ಯಕ್ರಮದಲ್ಲಿ ಶಿಕ್ಷಣದ ಮಹತ್ವ ಸಾರುವುದು ಇತ್ಯಾದಿ. ತೀರಾ ಸಾಂಪ್ರದಾಯಿಕ ಸಂಗತಿಗಳನ್ನು ಮಾತ್ರ ಸಂವಹನ ಮಾಡಲು ಸಾಧ್ಯವಿದ್ದ ದಾರಿಯಲ್ಲಿಯೇ ಈ ಬಗೆಯ ಪ್ರಯೋಗ ಮಾಡಿರುವುದು ಮುಖ್ಯವಾಗಿದೆ. ಅಂತೆಯೇ ಈ ಪ್ರಯೋಗ ಕೂಡ ಧರ್ಮಸೂಕ್ಷ್ಮದಿಂದ ಕೂಡಿದೆ. ಜಾತಿ ಪದ್ದತಿಯನ್ನು ವಿರೋಧಿಸುವಾಗ ಮೇಲುಜಾತಿಗಳನ್ನು ಗುರಿಯಾಗಿಟ್ಟುಕೊಳ್ಳುವಂತಿಲ್ಲ. ಬದಲಾಗಿ ಉದಾರವಾದಿ ನೆಲೆಯಲ್ಲಿ ಇದನ್ನು ನಿಭಾಯಿಸಿದ್ದಾರೆ. ಕಾರಣ ಸುತಾರರ ಪ್ರವಚನಗಳ ಪ್ರಾಯೋಜಕರು ಸಾಮಾನ್ಯವಾಗಿ ಮೇಲುಜಾತಿಯ ಮಠಗಳು ಎನ್ನುವುದನ್ನು ಗಮನಿಸಬೇಕು.
ಈ ಅರ್ಥದಲ್ಲಿ ಹಿಬ್ರಾಹಿಂ ಸುತಾರ ಅವರು ಮಾಡಿದ ಪ್ರವಚನದ ದಾರಿ ಒಂದು ಬಗೆಯ ಚಳವಳಿಯ ದಾರಿಯೂ ಆಗಿದೆ. ಇಲ್ಲಿ ಸಾಹಿತ್ಯ ಓದು ಬರಹದಿಂದ ದಕ್ಕುವ ವೈಚಾರಿಕತೆ ಮೂಡದಿರಬಹುದು, ಆದರೆ ಕೆಲವು ಬಿಗಿಯಾದ ಕಟ್ಟುಗಳು ಸಡಿಲವಾಗುವ ಅರ್ಥದಲ್ಲಿ ಈ ಬದಲಾವಣೆಯನ್ನು ಗ್ರಹಿಸಬೇಕಾಗಿದೆ. ಮುಖ್ಯವಾಗಿ ಸುತಾರ ತರಹದ ಪ್ರವಚನ ಮಾದರಿಯಲ್ಲಿ ಇತರರು ಎದುರಿಸದ ಕೆಲವು ಬಿಕ್ಕಟ್ಟುಗಳನ್ನು ಇವರೊಬ್ಬ ಮುಸ್ಲೀಂ ಆದ ಕಾರಣಕ್ಕೆ ಎದುರಿಸಬೇಕಿತ್ತು. ಆದರೆ ಅದನ್ನವರು ತುಂಬಾ ಜಾಗರೂಕತೆಯಿಂದ ದಾಟಿದ್ದಾರೆ. ಈ ಮಧ್ಯೆಯೂ ಅವರು `ನಿಮ್ಮನೊಡನಿದ್ದೂ ನಿಮ್ಮಂತಾಗದೆ’ ಎನ್ನುವಂತಹ ಕವಿ ನಿಸಾರ್ ಅಹಮದ್ ತರಹದ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಎದುರುಗೊಂಡಿದ್ದಾರೆ.
ಇಲ್ಲಿ ಮುಖ್ಯವಾಗಿ ಜನರ ನಂಬಿಕೆಯ ದಾರಿಗಳಲ್ಲಿ ನಡೆಯುತ್ತಲೇ ಅವರ ಲೋಕದೃಷ್ಠಿಯನ್ನು ತಿದ್ದುವ ರೀತಿ ಇದಾಗಿದೆ. ಅಂದರೆ ಜನರು ಸಾಂಪ್ರದಾಯಿಕವಾಗಿ ಭಕ್ತಿ, ಭಜನೆ, ಪ್ರವಚನಗಳ ಜತೆ ಬೆಸೆದುಕೊಂಡ ನಂಬಿಕೆಯ ಲೋಕಗಳನ್ನು ಬಳಸಿಕೊಂಡೇ ಧಾರ್ಮಿಕ ಕಟ್ಟಳೆಗಳನ್ನೂ, ಜಾತಿಯ ಕಟ್ಟಳೆಗಳನ್ನೂ, ಲಿಂಗದ ಕಟ್ಟಳೆಗಳನ್ನೂ, ವರ್ಗ ಶ್ರೇಣಿಯ ಕಟ್ಟಳೆಗಳನ್ನೂ, ಮೂಡನಂಬಿಕೆಗಳನ್ನು ಮೀರುವ ತಿಳಿವನ್ನು ಬಿತ್ತರಿಸುವುದಾಗಿದೆ.
05
**
ಸುತಾರ ಅವರಿಗೆ 75 ವರ್ಷ ಸಂದ ಕಾರಣ ಅವರ ಅಭಿಮಾನಿಗಳು, ಶಿಷ್ಯರು, ಬಂದು ಬಳಗ ಸೇರಿ ಒಂದು ಬೃಹತ್ತಾದ ಅಭಿನಂದನಾ ಕಾರ್ಯಕ್ರಮವನ್ನು ಮಹಾಲಿಂಗಪುರದಲ್ಲಿ ಆಯೋಜಿಸಿದ್ದರು. ನಾನೂ ಹಾಜರಿದ್ದೆ. ಇದರಲ್ಲಿ ಅವರಿಗೊಂದು ಅಭಿನಂದನಾ ಗ್ರಂಥವೂ ಸಮರ್ಪಣೆಯಾಯಿತು. ಸುಮಾರು ಮೂರು ಸಾವಿರದಷ್ಟು ಜನರು ಸೇರಿದ್ದರು. ಅದರಲ್ಲಿ ಹಿರಿಯ ತಲೆಮಾರಿನವರ ಸಂಖ್ಯೆ ದೊಡ್ಡದಿತ್ತು. ಈ ಎರಡೂ ದಿನಗಳು ಸುತಾರ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿಯಿತು. ಎಲ್ಲಾ ವರ್ಗದ ಜನರೂ ಬಂದಿದ್ದರು. ಅಂತೆಯೇ ಹಿಂದೂ ಮುಸ್ಲಿಂ ಬಾಂಧವರೂ ಸೇರಿದ್ದರು. ಮುಖ್ಯವಾದ ಸಂಗತಿಯೆಂದರೆ ನಾನು ಮಾತನಾಡಿಸಿದ ಕೆಲವರು ಪ್ರಾದೇಶಿಕವಾಗಿ ಅವರವರ ಭಾಗದಲ್ಲಿ ಸುತಾರ ಅವರ ಮಾದರಿಯಲ್ಲಿ ಭಜನೆ, ಪ್ರವಚನ ಮಾಡುವ ಕಲಾವಿದರಾಗಿದ್ದರು. ಅಂದರೆ ಸುತಾರ ಅವರ ಸುಧೀರ್ಘ ಪ್ರವಚನ, ಭಜನೆ, ಸಂವಾದದ ಮಾದರಿಗಳು ಅನೇಕರ ಮೇಲೆ ಪ್ರಭಾವ ಬೀರಿರುವುದು ಮತ್ತು ತನ್ನಂತಹದ್ದೇ ಸಂವಾದ ತಂಡಗಳನ್ನು ಸೃಷ್ಠಿಸಿರುವುದು ತಿಳಿಯಿತು. ಇದೆಲ್ಲಾ ಒಟ್ಟಾದ ಪರಿಣಾಮವು ಜನಸಮುದಾಯದಲ್ಲಿ ಒಂದು ಬಗೆಯ ಸೌಹಾರ್ಧ ನೆಲೆಸಲು, ಭಾವೈಕ್ಯ ಹರಡಲು ಕಾರಣವಾಗಿದೆ.

05ಸುತಾರ ಅವರ ಶ್ರೋತೃ ವರ್ಗದಲ್ಲಿ 40 ವರ್ಷದ ನಂತರದವರ ಸಂಖ್ಯೆ ದೊಡ್ಡದಿದೆ. ಇವರುಗಳೆಲ್ಲಾ ಒಂದು ಬಗೆಯ ಉದಾರವಾದ ಆಲೋಚನ ಕ್ರಮಕ್ಕೆ ಪಕ್ಕಾದವರು. ಆದರೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಕೋಮುವಾದದ ಅಫೀಮನ್ನು ತುಂಬುತ್ತಿರುವುದು ಸಾಮಾನ್ಯವಾಗಿ 18 ರಿಂದ 35 ವರ್ಷದ ಒಳಗಿನ ಯುವ ಜನತೆಗೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಸುತಾರ ಅವರ ಪ್ರವಚನದ ವ್ಯಾಪ್ತಿಗೆ ಇಂತಹ ಯುವಜನತೆಯೂ ಒಳಗಾಗಬೇಕಿದೆ. ಅಂತೆಯೇ ಲಿಂಗದ ಸೂಕ್ಷ್ಮತೆಯನ್ನೂ ಸತಾರರಿಗೆ ಗಟ್ಟಿಧ್ವನಿಯಲ್ಲಿ ಹೇಳಲು ಸಾಧ್ಯವಾಗಿಲ್ಲ. ಕಾರಣ ಪ್ರವಚನದಲ್ಲಿ ಈತನಕ ಒಬ್ಬ ಮಹಿಳೆಯ ಹಾಡಿಕೆಗೂ ಅವಕಾಶ ಸಿಕ್ಕಿಲ್ಲ. ಈ ಮಿತಿಯನ್ನು ಸುತಾರರು ಸ್ವತಃ ಒಪ್ಪಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜಮೀನ್ದಾರಿ ವ್ಯವಸ್ಥೆಯ ಬಗ್ಗೆ ಸುತಾರರು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ದಲಿತರ ಅಸ್ಪøಶ್ಯತಾ ಆಚರಣೆಯನ್ನು ಉದಾರ ನೆಲೆಯಲ್ಲಿ `ಎಲ್ಲರೂ ಒಂದೇ’ ಎನ್ನುವಂತೆ ವಿವರಿಸುತ್ತಾರೆಯೇ ವಿನಃ ಸ್ಥಳೀಯ ಅಸ್ಪøಶ್ಯರನ್ನು ನೇರ ಪ್ರಸ್ತಾಪಿಸುವುದಿಲ್ಲ. ಇನ್ನು ಕೆಲವು ಸ್ಥಳೀಯ ಮಠದ ಸ್ವಾಮಿಗಳ ಕಂದಾಚಾರ ಮತ್ತು ಜೀವವಿರೋಧಿ ಸಂಗತಿಗಳ ಬಗ್ಗೆಯೂ ಮೌನತಾಳುತ್ತಾರೆ.

ಸುತಾರರು ಆಳದಲ್ಲಿ ಸಮಾಜದ ತರತಮಗಳನ್ನು ಪ್ರಶ್ನಿಸದೆ, ಅಮೂಲಾಗ್ರವಾಗಿ ಜಾತಿಧರ್ಮದ ವಿನಾಶದ ಚಿಂತನೆ ಮಂಡಿಸದೆ, ಕ್ರಾಂತಿಕಾರಕ ಹೇಳಿಕೆಗಳನ್ನು ಕೊಡದೆ, ಇರುವ ವ್ಯವಸ್ಥೆಯ ಒಳಗೆ ಕೇಡುಗಳು `ದೊಡ್ಡ’ ದಾಗದಂತೆ, ಹೆಚ್ಚಾಗದಂತೆ ಜನಸಮುದಾಯಗಳ ಕೊಡುಕೊಳೆಯ ಬಾಂಧವ್ಯ ಗಟ್ಟಿಗೊಳಿಸುವ ಉದಾರವಾದಿ ಮಾದರಿಯೊಂದನ್ನು ರೂಪಿಸಿದ್ದಾರೆ. ಈ ಮಾದರಿಗೆ ಹಲವು ಮಿತಿಗಳಿವೆಯಾದರೂ, ಜಾತಿಯ, ಧರ್ಮದ ಕೇಡುಗಳು ಎಂದಿಗಿಂತ ಇಂದು ಬಲಗೊಳ್ಳುತ್ತಿರುವ ಹೊತ್ತಿನಲ್ಲಿ, ಧರ್ಮ ಜಾತಿಯ ನೆಲೆಯಲ್ಲಿ `ಜನರನ್ನು ಒಡೆದು’ ಮನಸ್ಸುಗಳನ್ನು ಕದಡುತ್ತಿರುವ ಹೊತ್ತಿನಲ್ಲಿ ಹಿಬ್ರಾಹಿಂ ಸುತಾರ ಅವರಂತಹ ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಕೆಲಸಕ್ಕೆ ಸಾಂಸ್ಕøತಿಕವಾಗಿ ಒಂದು ಬಗೆಯ ಮಹತ್ವವಿದೆ.
ಈ ಸೂಕ್ಷ್ಮಗಳ ಮಧ್ಯೆಯೂ ಅವರು ಮಂಡಿಸುವ ಜಾತಿಯ ಧರ್ಮದ ಕಟ್ಟುಗಳನ್ನು ಒಡೆಯುವ ಕಥನ ಮಾದರಿ ಜನರನ್ನು ಮತಾಂಧರಾಗದಂತೆಯೂ, ಜಾತಿವಾದಿಗಳಾಗದಂತೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತೆಯೇ ವ್ಯಕ್ತಿಗತ ಪ್ರವಚನದ ನೆಲೆಯನ್ನು ಸಾಮೂಹಿಕ ನೆಲೆಗೆ ದಾಟಿಸುವ ಶಕ್ತಿಯನ್ನೂ ಸುತಾರರು ದಕ್ಕಿಸಿಕೊಂಡಿದ್ದಾರೆ. ಇವರಿಗೆ ವೈಚಾರಿಕ ಓದಿನ ನೆರವು ದಕ್ಕಿದ್ದರೆ ಈ ಮಾದರಿಯನ್ನು ಇನ್ನಷ್ಟು ಸೂಕ್ಷ್ಮವಾಗಿ ಬಳಸಬಹುದಾಗಿದೆ. ಈ ಮಧ್ಯೆಯೂ ಕೋಮುವಾದ, ಜಾತಿವಾದ, ಪುರುಷವಾದ, ಬಂಡವಾಳಶಾಹಿ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇವುಗಳ ಅಪಾಯವನ್ನು ಉದಾರವಾಗಿ ಹೇಳಲು ಜನರ ಬಳಿಗೆ ಹೋಗುವ ಹಿಬ್ರಾಹಿಂ ಸುತಾರ ಅವರ ಮಾದರಿಯೂ ಇಂದು ಅಗತ್ಯವಿದೆ. ಹಾಗಾಗಿ ಸುತಾರರು ತಮಗಿರುವ ಕೆಲವು ಮಿತಿಗಳನ್ನು ಮೀರುತ್ತಲೇ ಜೀವಪರ ಸಂಗತಿಗಳನ್ನು ಹಂಚುವ ಕೆಲಸವನ್ನು ಇನ್ನಷ್ಟು ವಿಸ್ತರಿಸಬೇಕಿದೆ.

ಸುತಾರರನ್ನು ಉತ್ತರ ಕರ್ನಾಟಕದಲ್ಲಿ `ಕನ್ನಡದ ಕಬೀರ’ನೆಂದು ಗುರುತಿಸುತ್ತಾರೆ. ಈ ಬಗ್ಗೆ ರಂಜಾನ್ ದರ್ಗಾ ಅವರು `ಸಂತ ಕಭೀರ ದುಷ್ಟಶಕ್ತಿಗಳನ್ನು ಎದುರುಹಾಕಿಕೊಂಡು ವೈಚಾರಿಕತೆಯ ಮಾನವ ಏಕತೆಯನ್ನು ಸಾಧಿಸಿದರೆ, ಇವರು ಯಾರನ್ನೂ ಎದುರು ಹಾಕಿಕೊಳ್ಳದೆ ಮಾನವ ಏಕತೆಯನ್ನು ಸಾಧಿಸುವ ಕ್ರಮ ಆಪ್ಯಾಯಮಾನವಾಗಿದೆ’ ಎನ್ನುತ್ತಾರೆ.
**

ದಮನಿತ ಹೊಸ ತಲೆಮಾರಿನ ಎಚ್ಚೆತ್ತ ಪ್ರಜ್ಞೆ ಮತ್ತು ಚಲೋ ಉಡುಪಿ


-ಅರುಣ್ ಜೋಳದಕೂಡ್ಲಿಗಿ


CHALO-3 (1)

ದಲಿತರ ಶೋಷಣೆಯ ಚಿತ್ರಗಳು ಜಾತಿವಾದಿ ಭಾರತz ಅಮಾನವೀಯ ಮುಖಗಳನ್ನು ಬಯಲಿಗೆಳೆಯುತ್ತಿವೆ. ದಲಿತರ ಹಲ್ಲೆ, ಶೋಷಣೆ, ಬಹಿಷ್ಕಾರದ ಸುದ್ದಿಗಳಿಗೆ ಪ್ರತಿಯಾಗಿ ದಮನಿತ ಹೊಸ ತಲೆಮಾರು ಪ್ರತಿರೋಧವನ್ನೂ ಒಡ್ಡುತ್ತಿದೆ. ಈ ಪ್ರತಿರೋಧ ದೇಶದ ಆಳುವ ವರ್ಗವನ್ನು ಬೆಚ್ಚಿಬೀಳಿಸುತ್ತಿದೆ. ಮೇಲುಜಾತಿಗಳ ಅಹಮ್ಮಿನ ಕೋಟೆಗಳನ್ನು ಅಲುಗಾಡಿಸುತ್ತಿವೆ. ಇದು ನಮ್ಮ ಕಾಲದಲ್ಲಿ ಹುಟ್ಟಿಕೊಂಡ ಹೊಸ ಎಚ್ಚರದ ಪ್ರಜ್ಞೆಯಾಗಿದೆ. ಇದೊಂದು ದಮನಿತರ ಪಾಲಿನ ಆಶಾದಾಯಕ ಬೆಳವಣಿಗೆ. ಬಹುಶಃ ಭಾರತದ ಚರಿತ್ರೆಯಲ್ಲಿ ಹೀಗೆ ದೇಶವ್ಯಾಪಿ ದಲಿತ ಕೆಳಜಾತಿ ಕೆಳವರ್ಗ ಧಾರ್ಮಿಕ ಅಲ್ಪಸಂಖ್ಯಾತ, ಲೈಂಗಿಕ ಅಲ್ಪಸಂಖ್ಯಾತ, ಮಹಿಳಾ, ದಮನಿತ ಸಮುದಾಯಗಳು ತಮ್ಮ ಶೋಷಣೆಗಳ ವಿರುದ್ಧದ ಏಕರೂಪಿ ಕೂಗನ್ನು ಕೂಗಿದ್ದು ವಿರಳ.

ಹಾಗಾಗಿ ಭಾರತದಲ್ಲಿಂದು ದಲಿತ ಕೆಳಜಾತಿ ಕೆಳವರ್ಗ ಅಲ್ಪಸಂಖ್ಯಾತರ ಏಕೀಕಕರಣದ ಸಂದರ್ಭ ಒದಗಿದೆ. ಎಲ್ಲಾ ದಮನಿತ ಸಮುದಾಯಗಳಿಗೆ ತಾಯಿಯಂತಿರುವ ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಮೇಲುಜಾತಿ, ಮೇಲುವರ್ಗಗಳು ತಡೆಗೋಡೆಗಳನ್ನು ಹಬ್ಬಿಸುತ್ತಿವೆ. ಇಂತಹ ತಡೆಗೋಡೆಗಳನ್ನು ಹೊಡೆದು ಸಂವಿಧಾನದ ಸಮಸಮಾಜದ ಆಶಯಗಳ ಅನುಷ್ಠಾನದ ಹಕ್ಕೊತ್ತಾಯವನ್ನು ದೊಡ್ಡ ಧ್ವನಿಯಲ್ಲಿ ಎಚ್ಚರಿಸಬೇಕಿದೆ. ಅಂತಹ ಒಂದು ಪ್ರಯತ್ನದ ಭಾಗವಾಗಿ ಉಡುಪಿ ಚಲೋ ನಡೆಯುತ್ತಿದೆ. ಏಕೀಕರಣಗೊಂಡ ಪ್ರತಿಗಾಮಿ ಮೂಲಭೂತವಾದಿ ಶಕ್ತಿಯ ಎದುರು ಹಲವು ಕಾಲು ದಾರಿಗಳಲ್ಲಿ ಎದುರುಗೊಳ್ಳುತ್ತಿರುವ ಸಹ ಪಯಣಿಗರು ಹೆದ್ದಾರಿಯೊಂದಕ್ಕೆ ಬಂದು ಸೇರುತ್ತಿದ್ದಾರೆ, ಅದರ ಒಂದು ಪ್ರತಿಫಲ `ಉಡುಪಿ ಚಲೋ ಸ್ವಾಭಿಮಾನಿ ಜಾಥಾದಲ್ಲಿಯೂ ಕಾಣಲಿದೆ.

ಜಿಗ್ನೇಶ್ ಮೆವಾನಿ ಈಗ ದೇಶದ ದಲಿತರ ಪಾಲಿಗೆ ಭರವಸೆಯ ಹೊಸ ನಾಯಕ. ಕಳೆದ ಜುಲೈ ತಿಂಗಳಲ್ಲಿ ಗುಜರಾತಿನ ಊನಾದಲ್ಲಿ ಗೋರಕ್ಷಕರಿಂದ ದಲಿತರ ಮೇಲೆ ನಡೆದ ಅಮಾನವೀಯ ಹಲ್ಲೆಯನ್ನು ವಿರೋಧಿಸಿ ರಾಜ್ಯದಾದ್ಯಂತ ನಡೆದ ಚಳುವಳಿಗಳಲ್ಲಿ ಇವರದು ಸಕ್ರಿಯ ಪಾತ್ರ. ‘ಊನಾ ದಲಿತ ಅತ್ಯಾಚಾರ ಹೋರಾಟ ಸಮಿತಿ’ಯ ನಾಯಕರೂ ಆಗಿರುವ ಮೆವಾನಿ, ಇತ್ತೀಚೆಗೆ ಅಹಮದಾಬಾದ್‍ನಲ್ಲಿ ರಸ್ತೆ ತಡೆ ಚಳುವಳಿಯನ್ನು ಪ್ರಾರಂಭಿಸಿ ದಲಿತರಿಗೆ ಹಂಚಲಾದ ಭೂಮಿಯ ಖಾತೆ ಮಾಡಿಸಿ ಕೊಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲು ಕಾರಣರಾದರು. ‘ದಿ ಹಿಂದು’ ಪತ್ರಿಕೆಯ ಜಿ.ಸಂಪತ್ ಅವರು 23 ಸೆಪ್ಟಂಬರ್ 2016 ರಂದು ಜಿಗ್ನೇಶ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ದಲಿತ ಹೊಸತಲೆಮಾರಿನ ದೃಷ್ಠಿಕೋನದ ಸಂಕೇತದಂತೆ ಮಾತನಾಡಿದ್ದಾರೆ.

 ಸಂಪತ್ ಅವರು ಕೇಳಿದ `ಕಮ್ಯುನಿಸ್ಟರ ಬಗ್ಗೆ ದಲಿತರಲ್ಲಿ ಭಿನ್ನಾಭಿಪ್ರಾಯ ಇರುವಂತಿದೆ. ಕಮ್ಯುನಿಸ್ಟರು ಜಾತಿ ಪ್ರಶ್ನೆಯನ್ನ ಹಿನ್ನೆಲೆಗೆ ದೂಡಿಬಿಟ್ಟಿದ್ದಾರೆ ಅನ್ನೋದು ಅಂಬೇಡ್ಕರ್‍ವಾದಿಗಳ ಆರೋಪ. ಕಮ್ಯುನಿಸ್ಟರ ಬಗ್ಗೆ ನಿಮ್ಮ ನಿಲುವೇನು? ಎನ್ನುವ ಪ್ರಶ್ನೆಗೆ ಜಿಗ್ನೇಶ್ ಉತ್ತರಿಸುತ್ತಾ `ಕಮ್ಯುನಿಸ್ಟರನ್ನು ನಮ್ಮ ಹೋರಾಟದ ಜೊತೆಗಾರರು ಎಂದು ನಾನಾದರೂ ಭಾವಿಸುತ್ತೇನೆ. ಇದು ಕಮ್ಯುನಿಸ್ಟರು ದಲಿತರ ಜೊತೆ ಸೇರುವ ಅಥವಾ ದಲಿತರು ಕಮ್ಯುನಿಸ್ಟರೊಂದಿಗೆ ಹೋಗುವ ಪ್ರಶ್ನೆ ಅಲ್ಲ. ಇದನ್ನು ದಲಿತರ ಎಡಪಂಥೀಯತೆಯ ವಿಸ್ತರಣೆ ಅಂತ ಬೇಕಾದರೆ ಕರೆಯಿರಿ. ಅಂದರೆ ವರ್ಗ ಹೋರಾಟವನ್ನು ಅರ್ಥೈಸಿಕೊಳ್ಳುವ ತೀಕ್ಷ್ಣ ವಿಧಾನ ಇದು. ವರ್ಗ ರಹಿತ ಸಮಾಜವನ್ನು ಸೃಷ್ಟಿಸುವುದರಲ್ಲಿ ನಾವು ಸೋತರೂ ಕೊನೇ ಪಕ್ಷ ಈಗ ಇರುವುದಕ್ಕಿಂತ ಕಡಿಮೆ ಅಸಮಾನತೆಯಿರುವ ಸಮಾಜವನ್ನು ಸೃಷ್ಟಿಸುವ ಗುರಿಯನ್ನಾದರೂ ಇಟ್ಟುಕೊಳ್ಳಬೇಕಾಗುತ್ತದೆ. ‘ದನದ ಬಾಲ ನೀವೇ ಇಟ್ಟುಕೊಳ್ಳಿ, ನಮಗೆ ಭೂಮಿಕೊಡಿ’ ಎನ್ನುವ ನಮ್ಮ ಘೋಷಣೆ ಮತೀಯವಾದಿ ರಾಜಕಾರಣಕ್ಕೆ ವಿರುದ್ಧವಾಗಿರುವಂತೆ ನಮ್ಮ ಬದುಕಿನ ಪ್ರಶ್ನೆಗಳನ್ನೂ ಮುಂದಕ್ಕೆ ಒಡ್ಡುತ್ತಿದೆಯಲ್ಲ…

ಹಾಗೆ ನೋಡುವುದಾದರೆ, ಭಾರತದ ಕಮ್ಯುನಿಸ್ಟರೂ ಕಡೆಗಣಿಸಲಾಗದ ತಪ್ಪುಗಳನ್ನು ಮಾಡಿದ್ದಾರೆ. ಅಂಬೇಡ್ಕರ್‍ವಾದಿ ರಾಜಕಾರಣವೂ ಕೆಲವು ತಪ್ಪುಗಳನ್ನು ಮಾಡಿದೆ. ನಾವು ಕಮ್ಯುನಿಸ್ಟರನ್ನು ಅವರ ತಪ್ಪುಗಳಿಗೆ ಟೀಕೆ ಮಾಡೋರೇ. ಆದರೆ ಅವರು ನಮ್ಮಜೊತೆ ಬರುವುದಾದರೆ ಅವರನ್ನು ತಿರಸ್ಕರಿಸುವ ಮಟ್ಟಕ್ಕೆ ನಾನಂತೂ ಹೋಗುವುದಿಲ್ಲ. ಯಾವುದೇ ಜನಪರ ಚಳುವಳಿಗೆ ಅಷ್ಟರ ಮಟ್ಟಿಗಿನ ಮುಕ್ತ ಮನಸ್ಸು ಇರಬೇಕು. ನಮಗಂತೂ ಇದೆ. ದಲಿತರ ಸಮಸ್ಯೆಗಳನ್ನು ಗಂಭೀರವಾಗಿ ಮತ್ತು ನಿರಂತರವಾಗಿ ಕೈಗೆತ್ತಿಕೊಂಡು ಹೋರಾಟ ಮಾಡಿದಾಗ ಮಾತ್ರ ದಲಿತರು ಕಮ್ಯುನಿಸ್ಟರನ್ನು ನಂಬಲು ಶುರುಮಾಡಬಹುದು. ಇದಕ್ಕೆ ಸ್ವಲ್ಪ ಕಾಲ ಹಿಡಿಯಬಹುದು.’ ಎನ್ನುತ್ತಾರೆ. ಬಹುಶಃ ಈ ಮಾತು ಇಂದು ದಮನಿತ ಹೊಸ ತಲೆಮಾರಿನಲ್ಲಿ ಚರ್ಚೆಗೆ ಒಳಗಾಗಬೇಕಿದೆ. ಈ ಬಗ್ಗೆ ಒಂದು ದಿಟ್ಟ ನಿಲುವು ಪ್ರಕಟವಾಗಬೇಕಿದೆ.

ಊನಾ ಮದರಿ ಹೋರಾಟ
ಭಾರತದ ಪ್ರಧಾನ ಮಂತ್ರಿಗಳ ರಾಜ್ಯವಾದ ಗುಜರಾತಿನ ಊನಾ ಎಂಬ ಊರಿನಲ್ಲಿ ‘ಗೋರಕ್ಷಕ ಗೂಂಡಾಗಳು’ ಸತ್ತ ದನವನ್ನೊಯ್ಯುತ್ತಿದ್ದ ಏಳು ಜನ ದಲಿತರನ್ನು ಹಿಡಿದು, ಕಟ್ಟಿಹಾಕಿ ಅವರ ಮೇಲೆ ಕಬ್ಬಿಣದ ರಾಡುಗಳಿಂದ ಅಮಾನುಷ ಹಲ್ಲೆ ನಡೆಸಿದರು. ತಾವು ಕೊಂಡೊಯ್ಯುತ್ತಿದ್ದುದು ಸತ್ತ ದನ ಎಂದು ಅವರೆಷ್ಟು ಅಂಗಲಾಚಿದರೂ ಕರುಣೆ ತೋರದೆ ಹೊಡೆಯುತ್ತಾ ಬಟ್ಟೆ ಬಿಚ್ಚಿ ಊರಿನಲ್ಲಿ ಸಾರ್ವಜನಿಕವಾಗಿ ಎಳೆತಂದು ಅವಮಾನಿಸಿದರು. ಇದರಿಂದ ಆಕ್ರೋಶಗೊಂಡ ಗುಜರಾತಿನ ದಲಿತರು ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯ ಪ್ರತಿಭಟನೆಗೆ ತೊಡಗಿದರು. ‘ಇನ್ನು ಸತ್ತ ದನಗಳ ಸಂಸ್ಕಾರ ಮಾಡುವುದಿಲ್ಲ’ ಎಂದು ಘೋಷಿಸಿದರು. ನಿಮ್ಮ ದನಗಳನ್ನು ನೀವೇ ಸಂಬಾಳಿಸಿಕೊಳ್ಳಿ ಎಂದು ಸತ್ತ ದನಗಳ ಕಳೇಬರಗಳನ್ನು ಸರ್ಕಾರಿ ಕಚೇರಿಗಳಿಗೆ ಎಳೆದು ತಂದು ಪ್ರತಿಭಟಿಸಿದರು. ನಂತರ ಆಗಸ್ಟ್ ಮೊದಲ ವಾರ ಜಿಗ್ನೇಶ್ ಮೇವಾನಿ ಮುಂದಾಳತ್ವದಲ್ಲಿ ಆರಂಭವಾದ ‘ದಲಿತ ಅಸ್ಮಿತ ಜಾಥಾ’ ಆಗಸ್ಟ 15ರ ಸ್ವಾತಂತ್ರ್ಯ ದಿನಾಚರಣೆಯಂದು ಊನಾದಲ್ಲಿ ಲಕ್ಷಾಂತರ ದಲಿತರ ಬೃಹತ್ ಸಮಾವೇಶದ ಮೂಲಕ ದೇಶದ ಗಮನ ಸೆಳೆಯಿತು.

ದೇಶದ ಎಲ್ಲ ಕಡೆಗಳಿಂದ ಪ್ರಜ್ಞಾವಂತ ನಾಗರಿಕರು ಊನಾಗೆ ತೆರಳಿ ಬೆಂಬಲ ವ್ಯಕ್ತಪಡಿಸಿದರು. ಗುಜರಾತಿನ ಮುಸ್ಲಿಂ ಬಾಂಧವರೂ ಅಪಾರ ಸಂಖ್ಯೆಯಲ್ಲಿ ಜಾಥಾ ಹಾಗೂ ಸಮಾವೇಶದಲ್ಲಿ ಪಾಲ್ಗೊಂಡರು. ಸಂಘ ಪರಿವಾರದ ಹುನ್ನಾರಗಳನ್ನು ವಿರೋಧಿಸಿದರು. ದಲಿತರು ಇನ್ನು ಮುಂದೆ “ಸತ್ತ ದನಗಳನ್ನು ಮುಟ್ಟುವುದಿಲ್ಲ” ಎಂದು ಶಪಥಗೈದರು. ದಲಿತರಿಗೆ ಭೂಮಿ ಬೇಕೆಂದು ಆಗ್ರಹಪಡಿಸಿದರು. ಈ ಮಾದರಿ ಇಂದು ದೇಶದ ದಮನಿತ ಸಮುದಾಯಗಳ ಹೋರಾಟದ ಪ್ರಜ್ಞೆಯನ್ನು ಜಾಗೃತಗೊಳಿದೆ. ಈ ಜಾಗೃತಿ ಕರ್ನಾಟಕದ ಸಂದರ್ಭದಲ್ಲಿ ದಮನಿತ ಸಮುದಾಯಗಳ ಹೊಸ ತಲೆಮಾರಿನಲ್ಲಿಯೂ ಮೂಡಿದೆ. ಅದರ ಪ್ರತಿರೂಪವಾಗಿ ಇದೀಗ ಉಡುಪಿ ಚಲೋ ಎನ್ನುವ ಚಾರಿತ್ರಿಕ ಮಹತ್ವದ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

ಚಲೋ ಉಡುಪಿ
ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಮೂಲಕ ಆಹಾರ ನಮ್ಮ ಆಯ್ಕೆ; ಭೂಮಿ ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಇದೇ 2016 ರ ಅಕ್ಟೋಬರ್ 4 ರಿಂದ 9 ರವರೆಗೆ ಬೆಂಗಳೂರಿನಿಂದ ಉಡುಪಿಗೆ ಹಮ್ಮಿಕೊಂಡ ಸ್ವಾಭಿಮಾನಿ ಸಂಘರ್ಷ ಜಾಥಾ `ಚಲೋ ಉಡುಪಿ’ ಕರ್ನಾಟಕದ ಸಂದರ್ಭದಲ್ಲಿ ಚಾರಿತ್ರಿಕ ಮಹತ್ವ ಪಡೆಯುತ್ತಿದೆ. ಊನಾದ ದಲಿತ ಪ್ರತಿರೋಧ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಹೊತ್ತಿನಲ್ಲಿ, ಕರ್ನಾಟಕದಲ್ಲೂ ದಲಿತರು ಮತ್ತು ಎಲ್ಲಾ ದಮನಿತ ಸಮುದಾಯಗಳ ಜನರು ಸಾಮಾಜಿಕ, ಆರ್ಥಿಕ, ದೈಹಿಕ ಹಾಗೂ ಮಾನಸಿಕ ಹಲ್ಲೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ರಾಜ್ಯದಲ್ಲೇ ಕಳೆದ ಕೆಲವೇ ವರ್ಷಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳು ಇದಕ್ಕೆ ಕನ್ನಡಿ ಹಿಡಿಯುತ್ತಿವೆ.

2016ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಭಜರಂಗದಳದ ಮೂವತ್ತು ಜನರ ಗುಂಪು ದಲಿತರಾದ ಬಾಲರಾಜ್, ಧನು, ಸಂದೀಪ್ ಹಾಗೂ ಮುತ್ತಪ್ಪ ಇವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತು. ಈ ಗೂಂಡಾಗಳು ದನವನ್ನು ಕದ್ದು ಮಾಂಸ ತಿಂದಿದ್ದಾರೆ ಎಂದು ಆರೋಪಿಸಿ ಮಚ್ಚಿನಿಂದ ಹೊಡೆದು ಅಂಗವಿಕಲ ದಲಿತ ಬಾಲರಾಜ್ ಅವರ ಕೈ ಮುರಿದರು. ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಘಟನೆಯ ಬೆಳವಣಿಗೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವುದು ಜಾತಿ ಸಂವಿಧಾನವೇ ಹೊರತು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವಲ್ಲ ಎಂಬುದನ್ನು ನಿರೂಪಿಸಿತು.

2015ರ ಡಿಸೆಂಬರ್‍ನಲ್ಲಿ ರಾಯಚೂರಿನ ತುರುವೀಹಾಳದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ವಾಹನ ಡಿಕ್ಕಿ ಹೊಡೆಸಿದ್ದನ್ನು ಪ್ರಶ್ನಿಸಿದ್ದೇ ಅಪರಾಧವಾಗಿ ಅಲ್ಲಿಯ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ಯುವಕರು, ಮಹಿಳೆಯರು, ಮುದುಕರು ಮಕ್ಕಳೆನ್ನದೆ ಎಲ್ಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಮೂರು ತಿಂಗಳ ಗರ್ಭಿಣಿ ಹುಲಿಗೆಮ್ಮಳಿಗೆ ತೀವ್ರ ರಕ್ತಸ್ರಾವವಾಯಿತು. ಮೂವತ್ತು ಜನರಿಗೆ ಗಾಯಗಳಾದವು. ಪೊಲೀಸರು ಹಲ್ಲೆಕೋರರ ಮೇಲೆ ದೂರು ದಾಖಲಿಸಿಕೊಂಡರೂ ಮರುಗಳಿಗೆಯಲ್ಲಿಯೇ ಹಲ್ಲೆಗೊಳಗಾದ ದಲಿತರ ಮೇಲೆಯೇ ಪ್ರತಿದೂರು ದಾಖಲಿಸಿದ್ದರು. ಇದೇ ತುರುವೀಹಾಳ ವ್ಯಾಪ್ತಿಯ ಕರಕುಂದಿ ಗ್ರಾಮದಲ್ಲಿ ಜಾತ್ರೆಯಲ್ಲಿ ಕಾಲು ತುಳಿದರು ಎನ್ನುವ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿ ಹಲ್ಲೆ ನಡೆಸಲಾಯಿತು. ಇತರೆ ಐದು ಗ್ರಾಮಗಳಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ.

2015ರ ಅಕ್ಟೋಬರ್‍ನಲ್ಲಿ ದಾವಣೆಗೆರೆಯ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ದಲಿತ ಯುವ ಲೇಖಕ ಹುಚ್ಚಂಗಿ ಪ್ರಸಾದ್ ಮೇಲೆ ಸಂಘ ಪರಿವಾರದ ಗೂಂಡಾ ಗುಂಪೊಂದು ಹಲ್ಲೆ ನಡೆಸಿ, ಮೈಮೇಲೆಲ್ಲಾ ಕುಂಕುಮ ಎರಚಿ ಬರೆಯುವ ಬೆರಳುಗಳನ್ನೇ ಕತ್ತರಿಸುವ ಬೆದರಿಕೆ ಒಡ್ಡಿತ್ತು. 2015ರಲ್ಲಿ ಚಾಮರಾಜನಗರ ಜಿಲ್ಲೆ ಸಂತೆಮಾರಳ್ಳಿ ಗ್ರಾಮದ ಪೊಲೀಸ್ ಠಾಣೆಯ ಅರ್ಧ ಕಿಲೋ ಮೀಟರ್ ದೂರದ ಬಾಳೆತೋಟದಲ್ಲಿ ದಲಿತ ಕೂಲಿಗಳಿಬ್ಬರ ತಲೆ ಕಡಿದು ನರಬಲಿ ಕೊಟ್ಟ ಹೇಯ ಘಟನೆ ನಡೆಯಿತು. ಅಪರಾಧಿಗಳನ್ನು ರಕ್ಷಿಸುವ ಮತ್ತು ಈ ಘೋರ ಹತ್ಯೆಯ ಅಪರಾಧವನ್ನು ಮುಚ್ಚಿಹಾಕುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಅದೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ಮಹಿಳೆಯ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿ ದೇಹವನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಕೊಲೆಮಾಡಲಾಗಿದೆ. ಕೊಲೆಗಾರರನ್ನು ಪತ್ತೆಮಾಡಲು ಪೊಲೀಸರು ಕರೆತಂದ ಶ್ವಾನದಳದ ನಾಯಿ ಮೇಲ್ಜಾತಿ ವ್ಯಕ್ತಿಯನ್ನು ಸರಿಯಾಗಿ ಗುರುತಿಸಿದರೂ ಆ ಮಹಿಳೆಯ ಗಂಡನನ್ನೇ ಅರೋಪಿ ಎಂದು ಬಂಧಿಸಲಾಯಿತು. ಹೀಗೆ ಬಂಧನಕ್ಕೊಳಗಾದ ಅಮಾಯಕ ದಲಿತ ವ್ಯಕ್ತಿ ಇನ್ನೂ ಜೈಲಿನಲ್ಲಿದ್ದಾರೆ.

ಕೊಪ್ಪಳ ಜಿಲ್ಲೆಯ ಕಲಾಲಬಂಡಿ ಗ್ರಾಮದಲ್ಲಿ ಕ್ಷೌರಕ್ಕೆ ಸಂಬಂಧಿಸಿದಂತೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿ ದಲಿತರ ಮನೆಗಳ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಯಿತು. 2015ರ ಸೆಪ್ಟೆಂಬರ್‍ನಲ್ಲಿ ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದಲ್ಲಿ ದಲಿತ ಯುವಕ ಹಾಗೂ ಸವರ್ಣೀಯ ಯುವತಿ ಪ್ರೀತಿಸಿ ಮದುವೆಯಾದ ಕಾರಣಕ್ಕೆ ಆ ಗ್ರಾಮದ 50 ದಲಿತ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಬಂದ ಪೊಲೀಸರ ಮೇಲೂ ಕಲ್ಲು ಎಸೆಯಲಾಯಿತು. 2015ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸವರ್ಣೀಯರು ದಲಿತರಿಗೆ ಕೊಡಿಸಿದ್ದ ತಮಟೆಯನ್ನು ಪಕ್ಕದ ಗ್ರಾಮದ ದಲಿತರಿಗೆ ನೀಡಿದರೆಂಬ ಕಾರಣಕ್ಕೆ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ವಿಧಿಸಲಾಯಿತು. ತಮಟೆ ಕೊಡಿಸುವ ಮೊದಲು ಈ ಗ್ರಾಮದ ದಲಿತರೂ ಬೇರೆ ಗ್ರಾಮದಿಂದಲೇ ತಮಟೆ ತಂದು ಉಪಯೋಗಿಸುತ್ತಿದ್ದರು. ಕೆ.ಆರ್.ಪೇಟೆಯಲ್ಲಿ ದಲಿತ ಕಾಲೋನಿಗೆ ನೀರು ಪೂರೈಕೆ ಮಾಡುವ ಪೈಪ್ ಲೈನ್ ಒಡೆದು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ ನಡೆಸಲಾಯಿತು.

2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲೆ ಸವರ್ಣೀಯರು ದಾಳಿ ನಡೆಸಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು. ಅಪರಾಧಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದ ಕಾರಣ ಎರಡು ತಿಂಗಳ ನಂತರ ಮತ್ತೊಮ್ಮೆ ದಲಿತರ ಮೇಲೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ 30 ಮಂದಿ ದಲಿತರಿಗೆ ಗಾಯಗಳಾಗಿದ್ದವು. ಕೊಪ್ಪಳ ಜಿಲ್ಲೆಯ ಕನಕಗಿರಿ ವಿದ್ಯಾರ್ಥಿನಿಲಯದಲ್ಲಿ ಯಲ್ಲಾಲಿಂಗ ಎಂಬ ದಲಿತ ವಿದ್ಯಾರ್ಥಿಯ ಕೊಲೆಯಾಗಿತ್ತು. ಅದರ ಬೆನ್ನಲ್ಲೇ ವೀರೇಶ್ ಎಂಬ ದಲಿತ ಯುವಕನ ಆತ್ಮಹತ್ಯೆ ಅನುಮಾನಾಸ್ಪದ ರೀತಿಯಲ್ಲಿ ನಡೆಯಿತು. ಮಂಡ್ಯ ಜಿಲ್ಲೆಯಲ್ಲಿ ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಒಕ್ಕಲಿಗ ಯುವತಿಯೊಬ್ಬಳನ್ನು ಕುಟುಂಬದವರೇ ಹತ್ಯೆ ಮಾಡಿದ ‘ಮರ್ಯಾದೆಗೇಡು ಹತ್ಯೆ’ ಘಟನೆ ನಡೆಯಿತು. ಊರ ಮೇಲ್ಜಾತಿಗಳ ದುರಭಿಮಾನಿ ಜನರು ದಲಿತರ ಕೇರಿಗಳ ಮೇಲೆ ದಾಳಿ ನಡೆಸಲು, ದೌರ್ಜನ್ಯ ನಡೆಸಲು ಬಾಬಾಸಾಹೇಬರ ನಾಮಫಲಕಗಳೂ ಕಾರಣವಾಗುತ್ತಿವೆ ಎಂದರೆ ಮನುವಾದಿ, ಬ್ರಾಹ್ಮಣವಾದಿ ಚಿಂತನೆಗಳು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂದು ನೋಡಬಹುದು.

ಇವು ನಮ್ಮದೇ ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಕೆಲವೇ ಉದಾಹರಣೆಗಳಷ್ಟೇ. ಇನ್ನೂ ನೂರಾರು ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ ಕಾನೂನು ಪಾಲಕರಿಂದಾಗಲೀ, ನ್ಯಾಯಾಲಯಗಳಿಂದಾಗಲೀ ದಲಿತರಿಗೆ ನ್ಯಾಯ ಸಿಕ್ಕಿರುವ ಉದಾಹರಣೆ ಇಲ್ಲವೇ ಇಲ್ಲ ಎನ್ನಬಹುದು. ಕೋಲಾರದ ಕಂಬಾಲಪಲ್ಲಿಯಲ್ಲಿ ಏಳು ಮಂದಿ ದಲಿತರನ್ನು ಜೀವಂತ ಸುಟ್ಟು ಸಾಯಿಸಿದ ಘಟನೆ ಹಸಿಯಾಗಿರುವಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣವೇ ಬಿದ್ದುಹೋಗುವಂತೆ ಮಾಡಿದ ಘಟನೆ ಗಾಯಕ್ಕೆ ಉಪ್ಪು ಸುರಿದಂತೆ ಮಾಡಿದೆ. ದಲಿತರನ್ನು ಸುಟ್ಟು ಹಾಕಿದ ಘಟನೆಗೆ ಸಾಕ್ಷಿಗಳಾಗಿದ್ದವರನ್ನು ಸತ್ಯ ಹೇಳದಂತೆ ಮಾಡಲಾಯಿತು. ಇದಕ್ಕೆ ಜಾಣಕುರುಡುತನ ತೋರಿದ ನ್ಯಾಯಾಧೀಶರು ದಲಿತ ವೀರೋದಿ ತೀರ್ಪು ನೀಡುವ ಮೂಲಕ ನ್ಯಾಯಾಲಯಗಳೂ ಹೇಗೆ ಮೇಲ್ಜಾತಿಪರ ಧೋರಣೆ ಹೊಂದಿರುತ್ತವೆ ಎಂದು ಸಾಬೀತುಪಡಿಸಿದರು. ಚಿಂತಾಮಣಿಯ ನಾಗಲಾಪಲ್ಲಿಯ ದಲಿತ ಮಹಿಳೆ ಯಶೋದಮ್ಮ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗದಲ್ಲಿಯೂ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಇಡೀ ದೇಶದ ನ್ಯಾಯ ವ್ಯವಸ್ಥೆಯೇ ದಲಿತರ ಪಾಲಿಗೆ ಕಣ್ಣು ಕಿವಿ ಕಳೆದುಕೊಂಡು ಕುಳಿತಿದೆ. ಕಿಲ್ವೇಣ್ಮಣಿ, ಖೈರ್ಲಾಂಜಿ, ಜಜ್ಜಾರ್, ಚುಂಡೂರು, ಹೀಗೆ ದೇಶದ ಇತರೆಡೆಗಳಲ್ಲಿಯೂ ದೌರ್ಜನ್ಯಕ್ಕೊಳಗಾದ ದಲಿತರಿಗೆ ನ್ಯಾಯ ದೊರೆತಿಲ್ಲ. ಮನುವಾದಿ ಮನಸ್ಥಿತಿಯನ್ನು ಹೆಜ್ಜೆ ಹೆಜ್ಜೆಗೂ ಪೋಷಿಸುವ ಬಲಪಂಥೀಯ ಶಕ್ತಿಗಳು ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿರುವುದು ಮತ್ತಷ್ಟು ಕಳವಳಕಾರಿಯಾಗಿದೆ.

ರಾಷ್ಟ್ರೀಯ ಅಪರಾಧ ವರದಿ ಮಂಡಳಿಯ ದಾಖಲೆಯ ಪ್ರಕಾರ 2014ರಲ್ಲಿ ಇಡೀ ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.19ರಷ್ಟು ಹೆಚ್ಚಾಗಿದ್ದು, ಕರ್ನಾಟಕ ಒಂದರಿಂದಲೇ 2000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ದಾಖಲಾದ ದಲಿತರ ಮೇಲಿನ ದೌರ್ಜನ್ಯಗಳ ಒಟ್ಟು ಸಂಖ್ಯೆ 47,064. ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು 487. ಇವು ದಾಖಲೆಗೆ ಸಿಕ್ಕಿರುವುದು ಮಾತ್ರ. ದಾಖಲಾಗದೆ ಹೋದ ಪ್ರಕರಣಗಳು ಇನ್ನೂ ಹೆಚ್ಚಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
CHALO-5

ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮುಸ್ಲಿಂ, ಕ್ರೈಸ್ತರು ಯಾವತ್ತೂ ಆತಂಕದಲ್ಲಿಯೇ ಕಾಲಕಳೆಯುವಂತಾಗಿದೆ. ಕಳೆದ ನೂರು ವರ್ಷಗಳಿಂದ ಸಮಾಜದಲ್ಲಿ ಈ ಸಮುದಾಯಗಳ ಕುರಿತಾಗಿ ಬಿತ್ತಿರುವ ಪೂರ್ವಾಗ್ರಹಗಳು ಇಂದ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ. ಅದರ ಪರಿಣಾಮವಾಗಿಯೇ ಈ ಸಮುದಾಯಗಳ ಜನರ ಮೇಲೆ ಹಲ್ಲೆಗಳು ಹೆಚ್ಚಾಗಲು ಮತ್ತು ಈ ಹಲ್ಲೆಗಳಿಗೆ ಸಾರ್ವಜನಿಕ ಸಮ್ಮತಿ ದೊರಕುವಂತಾಗಿದೆ. 2005ರಲ್ಲಿ ಆದಿ ಉಡುಪಿಯಲ್ಲಿ ದನಸಾಗಣೆ ವಿಷಯಕ್ಕೆ ಸಂಬಂಧಿಸಿದಂತೆ ವಯೋವೃದ್ಧ ಹಾಜಬ್ಬ ಮತ್ತು ಆತನ ಮಗ ಹಸನಬ್ಬರನ್ನು ಅಮಾನವೀಯ ರೀತಿಯಲ್ಲಿ ಬೆತ್ತಲೆಗೊಳಿಸಿ ಥಳಿಸಲಾಗಿತ್ತು. ಅಲ್ಲಿಂದೀಚೆಗೆ ಎಡೆಬಿಡದೆ ಅಲ್ಪಸಂಖ್ಯಾತರ ಮೇಲೆ ಈ ಬಗೆಯ ಹಲ್ಲೆಗಳು ನಡೆಯುತ್ತಲೇ ಇವೆ. ದನದ ಸಾಗಾಣಿಕೆ ನೆಪದಲ್ಲಿ, ಲವ್ ಜಿಹಾದ್ ನೆಪದಲ್ಲಿ, ಧರ್ಮ ರಕ್ಷಣೆಯ ಸೋಗಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ಅನಾಚಾರಗಳಿಗೆ ಲೆಕ್ಕವಿಲ್ಲ. ಶೃಂಗೇರಿಯ ತನಿಕೋಡಿನಲ್ಲಿ ವಾಹನದಲ್ಲಿ ದನ ಸಾಗಿಸುತ್ತಿದ್ದ ಕಬೀರ್ ಎಂಬ ಯುವಕನನ್ನು ಎಎನ್‍ಎಫ್‍ನವರು ಎನ್‍ಕೌಂಟರ್‍ನಲ್ಲಿ ಕೊಂದು ಹಾಕಿದ ಘಟನೆ ಇದಕ್ಕೆ ನಿದರ್ಶನ. ಗೋಸಾಗಾಣಿಕೆಯ ಪ್ರಕರಣಗಳಲ್ಲಿ ರಕ್ಷಣಾ ಇಲಾಖೆಯೇ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿರುವ ಎಷ್ಟೋ ಪ್ರಕರಣಗಳಿವೆ.

ದನದ ರಾಜಕಾರಣ
ದೇಶದೆಲ್ಲೆಡೆ ಸಂಘಪರಿವಾರದ ಉಗ್ರಗಾಮಿ ಶಕ್ತಿಗಳು ದೇಶವಿರೋಧಿ ದನದ ರಾಜಕಾರಣದಲ್ಲಿ ತೊಡಗಿವೆ. ವಿನಾಕಾರಣ ಅಮಾಯಕರನ್ನು ಹಿಂಸಿಸುವ, ಕೊಲೆಗೈಯುವ, ಅತ್ಯಾಚಾರ ಎಸಗುವ ಕೆಲಸದಲ್ಲಿ ತೊಡಗಿವೆ. ನಾವು ಸೇವಿಸುವ ಆಹಾರದ ಮೇಲೂ ನಿರ್ಬಂಧ ಹೇರುವ ಕೆಲಸ ಅವ್ಯಾಹತವಾಗಿ ನಡೆದಿದೆ. ಜನರು ತಿನ್ನುವ ಆಹಾರಕ್ಕೂ, ಸಾಮಾನ್ಯ ನಂಬಿ ನಡೆಯುವ ದೇವರು – ಧರ್ಮಗಳಿಗೂ ಬೇಕೆಂದೇ ಸಂಬಂಧ ಕಲ್ಪಿಸಿ, ಜನಸಾಮಾನ್ಯರನ್ನು ಭಾವುಕವಾಗಿ ಕೆರಳಿಸಿ ರಾಜಕೀಯ ಸ್ವಾರ್ಥಕ್ಕಾಗಿ ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯವನ್ನು ಛೂಬಿಡುವ ಕೆಲಸ ನಡೆಯುತ್ತಿದೆ.
ಪ್ರತಿದಿನ ನಮ್ಮ ದೇಶದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ದನಗಳ ಹತ್ಯೆ ಮಾಡುವ ಗೋಮಾಂಸ ರಫ್ತಿನ ಉದ್ಯಮ ಹಾಗೂ ಮತ್ತು ದನದ ಚರ್ಮದ ಉದ್ಯಮದ ಮೇಲಿನ ಹಿಡಿತವಿರುವುದು ಬ್ರಾಹ್ಮಣ ಮತ್ತು ಬನಿಯಾಗಳಿಗೆ ಸೇರಿದ ಹಿಂದೂ ಮೇಲ್ವರ್ಗದ ಕುಟುಂಬಗಳ ಹಿಡಿತದಲ್ಲಿಯೇ. ಹಾಗಾದರೆ ಈ ಬಗ್ಗೆ ದೇಶದಲ್ಲಿ ಯಾವ ‘ಗೋರಕ್ಷಕ’ನಾದರೂ ಎಂದಾದರೂ ಧ್ವನಿ ಎತ್ತಿರುವ ಉದಾಹರಣೆ ಇದೆಯೇ? ದನದ ಮಾಂಸದ ಉದ್ಯಮಕ್ಕಾಗಿ ನಡೆಯುವ ಗೋ ಹತ್ಯೆಯ ಬಗ್ಗೆ ಒಂದೇ ಒಂದು ಸೊಲ್ಲೆತ್ತದ ಗೋರಕ್ಷಕರು ಅರ್ಧ ಕೆಜಿ ದನದ ಮಾಂಸ ತಿಂದಿದ್ದಕ್ಕಾಗಿ ಮನುಷ್ಯ ಜೀವನ್ನೇ ತೆಗೆಯುವುದನ್ನು ಅಸಹಾಯಕವಾಗಿ ನೋಡಬೆಕಾದ ಮಟ್ಟಕ್ಕೆ ಈ ದೇಶ ಬಂದು ನಿಂತಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳು
ಒಂದು ಕಡೆ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಗುರುತರವಾದ ಹೆಜ್ಜೆ ಇಡುತ್ತಿದ್ದಾರೆ. ರಿಯೋ ಓಲಂಪಿಕ್ಸ್ ನಲ್ಲಿ ಮಹಿಳಾ ಕ್ರೀಡಾಳುಗಳು ಜಗದೆದುರು ಈ ದೇಶದ ಮಾನ ಕಾಪಾಡಿದ್ದಾರೆ. ಮತ್ತೊಂದೆಡೆ ಇದೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಆಘಾತಕಾರಿ ಮಟ್ಟದಲ್ಲಿ ನಡೆಯುತ್ತಿರುವುದು ನಾಚಿಕೆಗೇಡು. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಸಹ ಜಾತಿ-ಧರ್ಮದ ಪೂರ್ವಾಗ್ರದಿಂದ ನಡೆಯುತ್ತಿರುವುದು ಇನ್ನಷ್ಟು ಕ್ರೂರ. ಇದಕ್ಕೆ ಸಮಾಜ ವ್ಯಕ್ತಪಡಿಸುವ ಪ್ರತಿಕ್ರಿಯೆ ಸಹ ಪೂವಾರ್ಗಗ್ರಹ ಪೀಡಿತವಾಗಿಯೇ ಇವೆ. ಹೀಗಾಗಿಯೇ ದಿನನಿತ್ಯ ದಲಿತ, ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ನಡೆಯುವ ಅದೆಷ್ಟೋ ಅತ್ಯಾಚಾರ, ದೌರ್ಜನ್ಯಗಳು ಯಾರ ಗಮನಕ್ಕೂ ಬಾರದಂತೆ ಹೋಗುತ್ತಿವೆ. ಇನ್ನು ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಿಗೆ ದೂರು ಕೊಡಲು ಹೋದಾಗ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಅಪರಾಧಿಗಳ ಮೇಲೆ ದಾಖಲಿಸುವ ಬದಲಾಗಿ ಅತ್ಯಾಚಾರಕ್ಕೊಳಗಾದ ಬಲಿಪಶುಗಳನ್ನೇ ಅನುಮಾನಿಸುತ್ತಾರೆ ಎಂಬ ಅಂಶವನ್ನು ಜಸ್ಟೀಸ್ ವರ್ಮಾ ಸಮಿತಿಯೇ ಗುರುತಿಸಿದೆ.

ಮಹಿಳೆಯರು ನಮ್ಮ ಗಂಡಾಳ್ವಿಕೆಯ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ-ಕೊಲೆ, ಆಸಿಡ್ ದಾಳಿ, ಕೌಟುಂಬಿಕ ಹಿಂಸೆ, ಸ್ತ್ರೀ ಭ್ರೂಣಹತ್ಯೆ, ನಾನಾ ಬಗೆಯ ಲೈಂಗಿಕ ದೌರ್ಜನ್ಯಗಳಿಗೆ, ಲಿಂಗ ಪೂರ್ವಾಗ್ರಹಗಳಿಗೆ ಒಳಗಾಗಿ ದಿನೇದಿನೇ ಕುಗ್ಗುತ್ತಲೇ ಹೋಗುತ್ತಿದ್ದಾರೆ. ಸಾಲದ್ದಕ್ಕೆ ಶ್ರೀರಾಮಸೇನೆ, ಹಿಂದೂ ಜಾಗರಣ ವೇದಿಕೆಯಂತಹ ಭ್ರಷ್ಟ ಗೂಂಡಾ ಪಡೆಗಳು ಹೆಣ್ಣುಮಕ್ಕಳ ಮೇಲೆ ಧರ್ಮ- ಸಂಸ್ಕøತಿ ರಕ್ಷಣೆ ಹೆಸರಲ್ಲಿ ನಡೆಸುವ ಅಮಾನವೀಯ ದಾಳಿಗಳನ್ನು, ಹಲ್ಲೆಗಳನ್ನು ಕಂಡಿದ್ದೇವೆ. ಇಡೀ ಸಮಾಜವನ್ನು ಮಹಿಳೆಯರ ಎದುರು ಎತ್ತಿಕಟ್ಟಿರುವುದು ಮನುವಾದ ಮತ್ತು ಧಾರ್ಮಿಕ ಕರ್ಮಠತನಗಳು. ಆದ್ದರಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮøತಿಯನ್ನು ಬಹಿರಂಗವಾಗಿ ದಹಿಸುವ ಮೂಲಕ ಮಹಿಳಾ ವಿಮೋಚನೆಯ ಸಭೆ ನಡೆಸಿದ್ದನ್ನು ಸ್ಮರಿಸಬಹುದು.
ಮೊದಲೇ ಸಮಾಜದಿಂದ ತಿರಸ್ಕøತವಾಗಿರುವ ಆದಿವಾಸಿ, ಅಲೆಮಾರಿ, ತಳಸಮುದಾಯಗಳ ಜನತೆಯ ಬದುಕು ಆತಂಕಮಯವಾಗಿದೆ. ಈ ಅಸಮುದಾಯಗಳು ಅತ್ತ ತಮ್ಮ ನೆಲೆಗಳಲ್ಲಿ ಉತ್ತಮ, ಸ್ವಾಭಿಮಾನದ ಬದುಕನ್ನೂ ಕಟ್ಟಿಕೊಳ್ಳಲಾರದೇ ಇತ್ತ ದುರಾಸೆ ಪೀಡಿತ ಬಂಡವಾಳಶಾಹಿ ಪ್ರಣೀತ ಅಧುನಿಕತೆಯನ್ನೂ ಅರಗಿಸಿಕೊಳ್ಳಲಾರದೆ ಇನ್ನಿಲ್ಲದ ಪಾಡು ಪಡುತ್ತಿದ್ದಾರೆ. ವರ್ಷದ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಕಾಟಾಜೆಯ ಸುಂದರ ಮಲೆಕುಡಿಯ ಎಂಬ ಆದಿವಾಸಿಯ ಮೇಲೆ ಅಮಾನುಷ ಹಲ್ಲೆ ನಡೆಸಿದ ಮೇಲ್ಜಾತಿ ಭೂಮಾಲಿಕರು ಆತನ ಕೈ ಬೆರಳುಗಳನ್ನೇ ಕತ್ತರಿಸಿದರು. ಈ ಪ್ರಕರಣದಲ್ಲಿ ಸುಂದರ ಮಲೆಕುಡಿಯ ಇಂದಿಗೂ ನ್ಯಾಯವಂಚಿತರಾಗಿದ್ದಾರೆ. ಹೀಗೆ, ಅಪರಾಧವೇ ಅಧಿಕಾರವಾಗಿ, ಅನ್ಯಾಯವೇ ಆಡಳಿತವಾಗಿರುವ ಈ ಸಂದಿಗ್ಧ ಕಾಲದಲ್ಲಿ ಈ ನೆಲದ ಜನಸಮಾನ್ಯರು ಬದುಕುತ್ತಿದ್ದಾರೆ. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತ ಲಿಂಗಾಂತರಿ ಸಮುದಾಯವೂ ಒಂದಿಲ್ಲೊಂದು ಹಲ್ಲೆಗೆ ಒಳಗಾಗುತ್ತಿದೆ. ಈ ಹಲ್ಲೆಯನ್ನೂ ಮನುವಾದಿ ಸ್ತ್ರೀದೃಷ್ಟಿಕೋನಗಳೇ ಪ್ರಭಾವಿಸುತ್ತಿವೆ.

ಭೂಮಿ ನಮ್ಮ ಹಕ್ಕು
ದಲಿತ, ಆದಿವಾಸಿ, ಅಲೆಮಾರಿ ಹಾಗೂ ಹಿಂದುಳಿದ ಸಮುದಾಯಗಳ ಕೋಟ್ಯಂತರ ಜನರು ಇಂದಿಗೂ ಸಹ ತುಂಡು ಭೂಮಿಯನ್ನೂ ಕಾಣದೇ ಬದುಕುತ್ತಿದ್ದಾರೆ. ದೇವರಾಜ ಅರಸು ಜಾರಿಗೆ ತಂದಿದ್ದ ಒಂದು ಭೂಸುಧಾರಣಾ ಕಾಯ್ದೆಯನ್ನೂ ಸರಿಯಾಗಿ ಜಾರಿಗೊಳಿಸಲು ಬಲಾಢ್ಯ ವರ್ಗಗಳು ಬಿಡುತ್ತಿಲ್ಲ. ಎಷ್ಟೋ ಜನರಿಗೆ ಜಮೀನಿದ್ದರೂ, ಉಳುಮೆ ಮಾಡುತ್ತಿದ್ದರೂ ಅದರ ಮೇಲೆ ಹಕ್ಕಿಲ್ಲದಂತಾಗಿದೆ. ಇತ್ತೀಚೆಗೆ ದಲಿತರ ಭೂಮಿಯ ಹಕ್ಕಿಗಾಗಿ ಹೋರಾಡಿದ್ದಕ್ಕಾಗಿ ಬಳ್ಳಾರಿಯಲ್ಲಿ ಕರಿಯಪ್ಪ ಗುಡಿಮನಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದನ್ನು ಗಮನಿಸಬಹುದು. ಈ ಹಿಂದೆ ಭೂಮಾಲೀಕರ ವಿರುದ್ಧ ಭೂ ಹೋರಾಟ ನಡೆದಿದ್ದರೆ ಈ ದಿನಗಳಲ್ಲಿ ಬಡವರ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳು ನುಂಗಿ ಹಾಕುತ್ತಿವೆ. ದಲಿತ-ದಮನಿತರಿಗೆ ಭೂಮಿ ಮತ್ತು ವಸತಿ ಹಕ್ಕುಗಳು ಸಿಗಬೇಕು ಎನ್ನುವ ಕೂಗು ಮತ್ತೊಮ್ಮೆ ಮೊಳಗಿದೆ. ಈ ಧ್ವನಿಗೆ ಇಡೀ ನಾಡಿನ ದಲಿತ, ದಮನಿತ ಸಮುದಾಯಗಳು ಧ್ವನಿ ಸೇರಿಸಬೇಕಾಗಿದೆ.

ಬೆನ್ನು ಬಗ್ಗಿಸಿದಷ್ಟೂ ಗುದ್ದುತ್ತಲೇ ಇರುತ್ತಾರೆ; ಎದೆ ಎತ್ತಿ ನಡೆದಾಗ ಮಾತ್ರ ಘನತೆ ಗೌರವಗಳನ್ನು ಉಳಿಸಿಕೊಳ್ಳಲು ಸಾಧ್ಯ. ಉಳ್ಳವರ, ಬಲಾಢ್ಯರ, ಅಧಿಕಾರಸ್ಥರ ದಮನಕಾರಿ ಧೋರಣೆಗಳಿಗೆ, ಹಲ್ಲೆ- ಹತ್ಯೆಗಳಿಗೆ, ನಮ್ಮ ನಮ್ಮಲ್ಲೇ ಜಗಳ ಹಚ್ಚುವ ಒಳ ಹುನ್ನಾರಗಳಿಗೆ ದಲಿತ-ದಮನಿತರೆಲ್ಲರೂ ಒಗ್ಗಟ್ಟಾಗಿ ತಿರುಗೇಟು ನೀಡಬೇಕಿದೆ. ದಮನಿತರ ಒಗ್ಗಟ್ಟಿನಲ್ಲಿಯೇ ಬಹುಜನರ ಪ್ರಗತಿ ಅಡಗಿದೆ ಎಂಬ ಸತ್ಯವನ್ನು ಅರಿತು ನಮ್ಮ ನಡುವಿನ ಬೇಧ-ಭಾವಗಳನ್ನು ಮೀರಿ ನಿಲ್ಲಬೇಕಿದೆ. `ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ಬಾಬಾಸಾಹೇಬ್ ಅಂಬೇಡ್ಕರ್, ನಾರಾಯಣ ಗುರು ಮುಂತಾದ ಮಹಾನ್ ಚೇತನಗಳು ನಡೆಸಿಕೊಂಡು ಬಂದ ವಿಮೋಚನಾ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ನಾವು ಪ್ರತಿಜ್ಞೆ ಮಾಡೋಣ, ನೋವೇ ನಾಯಕನಾಗಿ, ಸಹನೆಯೇ ಚಿಂತಕನಾಗಿ ಮತ್ತು ರೋಷವೇ ಸಂಘಟಕನಾಗಿಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರೆಲ್ಲರ ಶಕ್ತಿಯನ್ನು ಮೇಳೈವಿಸಿಕೊಂಡು ಈ ಹೋರಾಟವನ್ನು ಮುನ್ನಡೆಸೋಣ’ ಬನ್ನಿ ಎಂದು ಚಲೋ ಉಡುಪಿ ಸಂಗಾತಿಗಳು ಕರೆ ಕೊಟ್ಟಿದ್ದಾರೆ. ಇದೊಂದು ಜಾತಿವಾದಿ, ಪ್ರತಿಗಾಮಿ ಶಕ್ತಿಗಳ ದಮನ-ಹುನ್ನಾರಗಳಿಗೆದುರಾಗಿ ಈ ನೆಲದ ಜನಶಕ್ತಿ ನಡೆಸುತ್ತಿರುವ ಒಗ್ಗಟ್ಟಿನ ಸಾತ್ವಿಕ ಹೋರಾಟ.

`ಉಡುಪಿ ಚಲೋ’ ದ ಹಕ್ಕೊತ್ತಾಯಗಳು

CHALO-3 (1)1. ಆಹಾರದ ಆಯ್ಕೆ ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕು. ಗೋ ರಕ್ಷಣೆ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮೇಲೆ ಹಲ್ಲೆ, ಹತ್ಯೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾಯ್ದೆಯೊಂದನ್ನು ಕೂಡಲೇ ಜಾರಿಗೆ ತರಬೇಕು.

2. ರಾಜ್ಯದಲ್ಲಿ ವಿವಿಧ ಧರ್ಮಗಳ ಜನರ ನಡುವೆ ವೈಷಮ್ಯ ಬಿತ್ತುತ್ತಾ ಅನೈತಿಕ ಪೊಲೀಸ್‍ಗಿರಿ ನಡೆಸುತ್ತಿರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಈ ಕುಕೃತ್ಯಕಗಳಿಗೆ ಬೆಂಬಲಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

3. ದಲಿತರು ಮತ್ತು ಇತರೆ ದಮನಿತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನುಗಳನ್ನು ಆದ್ಯತೆಯ ಮೇರೆಗೆ ಸಕ್ರಮಗೊಳಿಸಿಕೊಡಬೇಕು. ಭೂಹೀನರಿಗೆ ಮತ್ತು ನಿವೇಶನರಹಿತರಿಗೆ ತಲಾ 5 ಎಕರೆ ಭೂಮಿ, ಘನತೆಯ ಬದುಕಿಗೆ ತಕ್ಕುದಾದಷ್ಟು ನಿವೇಶನಸಹಿತ ವಸತಿಯನ್ನು ಕೂಡಲೇ ಮಂಜೂರು ಮಾಡಬೇಕು. ಭೂಮಿಯ ಜೊತೆಗೆ ಕೃಷಿಕರಿಗೆ ಬೀಜ ಗೊಬ್ಬರ, ಇನ್ನಿತರೆ ಕೃಷಿ ಸಲಕರಣೆಗಳು ಹಾಗೂ ಮಾರುಕಟ್ಟೆಯ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನೂ ಸರ್ಕಾರವೇ ತೆಗೆದುಕೊಳ್ಳಬೇಕು.

4. ದಲಿತರು ಮತ್ತು ಎಲ್ಲಾ ಜಾತಿಗಳ ದಮನಿತ ಜನವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಲು ಅಗತ್ಯವಿರುವ ಕಾನೂನು ಕ್ರಮವನ್ನು ಕೂಡಲೇ ಆರಂಭಿಸಬೇಕು.

5. ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಸ್.ಸಿ.ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅದನ್ನು ಇನ್ನಷ್ಟು ಕಠಿಣಗೊಳಿಸಬೇಕು. ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ದಲಿತ-ದಮನಿತ ವಿದ್ಯಾರ್ಥಿಗಳು ಮತ್ತು ಸ್ಕಾಲರ್‍ಗಳ ಜೀವ ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ರೋಹಿತ್ ಕಾಯ್ದೆ ರಚಿಸಿ ಜಾರಿಗೊಳಿಸಬೇಕು.

6. ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯಗಳ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಖಾತ್ರಿಗೊಳಿಸುವ ಕ್ರಮಗಳಾಗಬೇಕು. ಅತ್ಯಾಚಾರ ಪ್ರಕರಣಗಳನ್ನು ದಾಖಲುಗೊಳಿಸದ ಪೊಲೀಸರ ಮೇಲೆ ಶಿಸ್ತುಕ್ರಮವಾಗುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಬೇಕು. ಅಮಾನವೀಯ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಾಲಮಿತಿ ಹಾಕಿ ಈ ಹೀನ ಪದ್ದತಿಯನ್ನು ನಿರ್ಮೂಲಿಸಲು ತ್ವರಿತಗತಿಯಲ್ಲಿ ಸರ್ಕಾರ ಮುಂದಾಗಬೇಕು.

7. ಆದಿವಾಸಿ ಬುಡಕಟ್ಟು, ಅಲೆಮಾರಿಗಳ ಹಕ್ಕುಗಳನ್ನು ರಕ್ಷಿಸುವ ಕೆಲಸವಾಗಬೇಕು. ಈ ತಳಸಮುದಾಯಗಳ ಜನರ ಮೇಲಿನ ದಮನ- ದೌರ್ಜನ್ಯಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬಲಿಪಶುಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು.

8. ಮಲಹೊರುವ ಕೆಲಸದಲ್ಲಿ ದಲಿತ – ದಮನಿತರು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳಲ್ಲಿ ತಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.  ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ತೆಗೆದುಕೊಳ್ಳಬೇಕು. ಮಲಹೊರುವ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಗೌರವಯುತವಾದ ಉದ್ಯೋಗಗಳನ್ನು ಸರ್ಕಾರ ಕೂಡಲೇ ಘೋಷಿಸಿ, ನೀಡಬೇಕು.

ಜಮೀನ್ದಾರಿಕೆ ವಿರುದ್ಧ ದಲಿತರ ಭೂಹೋರಾಟ

-ಅರುಣ್ ಜೋಳದಕೂಡ್ಲಿಗಿ.

ಅಂದು ಚಳವಳಿಯ ಸಂಗಾತಿ ಕರಿಯಪ್ಪ ಗುಡಿಮನೆ ಅವರ ಕಮಲಾಪುರದ ಮನೆಗೆ ಹೋದಾಗ ಅವರು ಪ್ರಯಾಣದಿಂದ ಬಳಲಿದ್ದರು. ಕಾರಣ ಹಿಂದಿನ ದಿನ ಬೆಂಗಳೂರಿನ ಟೌನ್ ಹಾಲ್ ಮುಂದೆ ತನ್ನ ಮೇಲಿನ ಕೊಲೆಯ ಯತ್ನ ವಿರೋಧಿಸಿ ಪ್ರಗತಿಪರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದಿದ್ದರು. ಇದರ ಹಿನ್ನೆಲೆ ನೋಡಿದರೆ, ಬಳ್ಳಾರಿ ಭಾಗದ ದಲಿತ ಕೆಳಜಾತಿಗಳೇ ಹೆಚ್ಚಿರುವ ಬಂಡೆಟ್ಟಿ ಮತ್ತು ದಾನಪ್ಪ ಬೀದಿಯ ಪೌರಕಾರ್ಮಿಕರಿರುವ ಫಲಾನುಭವಿಗಳಿಗೆ 1970-80 ರ ಸುಮಾರಿಗೆ ಭೂನ್ಯಾಯ ಮಂಡಳಿಯಿಂದ ಸುಮಾರು 140 ಎಕರೆ ಜಮೀನು ಮುಂಜೂರಾಗಿತ್ತು. ಈ ಎಲ್ಲಾ ಭೂಮಿ ಇಂದು ಎಲ್.ಪ್ರತಾಪ್ ರೆಡ್ಡಿ ಎಂಬ ಜಮೀನ್ದಾರನ ವಶದಲ್ಲಿದೆ. ಇದನ್ನು ಮೂಲ ಫಲಾನುಭವಿಗಳಿಗೆ ಕೊಡಿಸುವ ಹೋರಾಟ ರೂಪಿಸುತ್ತಿರುವ ಕರಿಯಪ್ಪನ ಮೇಲೆ ಜೂನ್ 27 ರಂದು ಬಳ್ಳಾರಿಯ ಎ.ಸಿ ಆಪೀಸು ಮುಂದೆ ಪ್ರತಾಪರೆಡ್ಡಿ ಕಡೆಯವರು ಮಾರಣಾಂತಿಕ ಹಲ್ಲೆ ಮಾಡಿದ್ದರು.

??????????

ಈ ಕುರಿತು ಪ್ರಗತಿಪರರಿಂದ ಸಾಕಷ್ಟು ಪ್ರತಿರೋಧವೂ ಬಂದಿತ್ತು. ಇಂದು ಭೂಮಿ ರಿಯಲ್ ಎಸ್ಟೇಟ್ ದಂದೆಗೆ ಒಳಗಾಗಿ ಒಂದು ಮಾಫಿಯಾವೇ ಸೃಷ್ಠಿಯಾಗಿರುವ ಸಂದರ್ಭದಲ್ಲಿ ಕರಿಯಪ್ಪನ ಮೇಲಿನ ಹಲ್ಲೆ ಭೂಚಳವಳಿಯ ಬಿಕ್ಕಟ್ಟಿನ ಒಂದು ಮುಖವನ್ನು ತೋರುತ್ತಿದೆ. ಹೀಗೆ ಕರಿಯಪ್ಪ ಗುಡಿಮನೆ ಅವರ ಜತೆ ಮಾತನಾಡುತ್ತಾ, ಕಳೆದ ವರ್ಷ ಎಸ್.ಆರ್.ಪುರದಲ್ಲಿ ನಡೆದ ರೈತ ಹೋರಾಟದ ಹಿನ್ನೆಲೆಯನ್ನು ಕೇಳತೊಡಗಿದೆ. ಅವರು ಹೋರಾಟದ ದಾಖಲೆಗಳನ್ನು ನನ್ನ ಮುಂದೆ ತಂದು ಹರಡಿದರು. ಒಂದೊಂದನ್ನು ನೋಡುತ್ತಾ ಹೋದಂತೆ ಹೋರಾಟದ ಚಿತ್ರಣವೊಂದು ಕಣ್ಣಮುಂದೆ ಬರತೊಡಗಿತು. ಇದನ್ನು ನೋಡುತ್ತಿದ್ದಂತೆ ನಾನು ಎಸ್.ಆರ್ ಪುರಕ್ಕೆ ಹೋಗಿ ಭೂಮಿ ಪಡೆದವರ ಜತೆ ಮಾತನಾಡಲು ಅವರ ಸಹಾಯ ಕೋರಿದೆ. ಆಗ ಎಸ್.ಆರ್.ಪುರದವರೇ ಆದ ಸ್ಥಳೀಯವಾಗಿ ಹೋರಾಟವನ್ನು ಸಂಘಟಿಸಿದ ರಾಮಚಂದ್ರಪ್ಪರ ಅವರ ಸಂಪರ್ಕ ಕಲ್ಪಿಸಿಕೊಟ್ಟರು.
**
ತನ್ನೂರಿನ ಹೆಸರನ್ನೇ ತನಗೆ ಅಂಟಿಸಿಕೊಂಡಂತಿದ್ದ ರಾಮಚಂದ್ರಪ್ಪನ ಜತೆ ಎಸ್.ಆರ್.ಪುರ ತಲುಪಿದಾದ ಸರಿಯಾಗಿ ಸಂಜೆ ನಾಲ್ಕುಗಂಟೆ. ನಮ್ಮ ಬರವು ಮೊದಲೆ ತಿಳಿದದ್ದರಿಂದ ಹತ್ತರಿಂದ ಹದಿನೈದು ಜನ ಕೇರಿಯ ರಾಮನಗುಡಿಯಲ್ಲಿ ಸೇರಿದ್ದರು. ಆರಂಭಕ್ಕೆ ಕೆಲವರು ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದಾಗ, ನಾನೆ ಪರಿಚಯಿಸಿಕೊಂಡು `ನಿಮ್ಮ ಹೊಲದ ಬಗ್ಗೆ ತಿಳಕೊಳ್ಳೋಕೆ ಬಂದಿರುವೆ’ ಎಂದೆ. ಬಿಗುವಿನ ವಾತಾವರಣ ಚೂರು ಬದಲಾಯಿತು. ಎಲ್ಲರ ಮುಖದಲ್ಲಿ ಒಂದು ಬಗೆಯ ಗೆಲುವಿನ ನಗು ಕಾಣುತ್ತಿತ್ತು. ಒಬ್ಬರಾದ ನಂತರ ಒಬ್ಬೊರಂತೆ ಇಡೀ ಹೋರಾಟದ ಕಥನವನ್ನು ಬಗೆಬಗೆಯಲ್ಲಿ ಬಣ್ಣಿಸತೊಡಗಿದರು. `ದೊಡ್ಡ ಕತಿ ಬಿಡ್ರಿ, ನಮ್ಮೂರಾಗ ಇಂಥದು ನಡೀತಾತಿ ಅಂತ ಕನ್ಸಲ್ಲೂ ಅನ್ಕಂಡಿರಲಿಲ್ಲ’ ಎಂದು ಮಾತಿಗೆ ಶುರುವಿಟ್ಟುಕೊಂಡರು. `ಆ ದಿನಾನ ನೆನಪಿಸಿಕೊಂಡ್ರ ಮೈ ಜುಂ ಅಂತಾತ ಸಾರ್, ಇದೆಲ್ಲಾ ಹೆಂಗಾತು.. ಕನಸೋ ನಿಜನೋ ಅಂತ ಒಂದೊಂದು ಸಲ ನಂಬಿಕಿ ಬರಲ್ಲ’ ಎಂದೊಬ್ಬರು ಅಚ್ಚರಿ ವ್ಯಕ್ತಪಡಿಸಿದರು.

`ನಮಿಗೆ ಹೊಲ ಕೊಡಸಾಕ ದೊಡ್ಡ ದೊಡ್ಡ ಸಾಹೇಬರು ಎಲ್ಲೆಲ್ಲಿಂದ ಬಂದುದ್ರೋ.. ನಮಿಗೂ ಅವ್ರಿಗೂ ಏನ್ ಋಣನೋ. ಅವರು ಯಾರು ಅಂತಾನ ನಮಿಗೊತ್ತಿಲ್ಲ, ಆದ್ರ ಅವರೆಲ್ಲ ಸೇರಿ ನಮ್ಮ ಹೊಲನ ನಮಿಗೆ ಕೊಡಿಸಿದ್ರು, ಈಗ ಬಿತ್ತಾಟ ಮಾಡಿದ್ರ ಇದು ಮೂರನೆ ಬೆಳಿ, ಅವರ ಹೊಟ್ಟೆ ತಣ್ಣಗಿರಲಿ’ ಎಂದು ಕೆಲವರು ಕೃತಜ್ಞತೆ ಸಲ್ಲಿಸಿದರು. ಇದನ್ನು ಕೇಳುತ್ತಿದ್ದರೆ, ದೇವನೂರರ `ಸಂಬಂಜ ಅನ್ನೊದು ದೊಡ್ದು ಕಣಾ’ಎನ್ನುವ ಮಾತು ನೆನಪಿಗೆ ಬಂತು. ಹೀಗೆ ನಾವು ರಾಮನಗುಡಿಯಲ್ಲಿ ಕೂತು ಮಾತಾಡ್ತಿದ್ರೆ, ಕೆಲವರು ದೂರದಲ್ಲೆ ಏನೋ ನಡೀತಿದೆ ಎನ್ನುವಂತೆ ಗುಮಾನಿಯಿಂದ ನಮ್ಮನ್ನು ನೋಡುತ್ತಿದ್ದರು. ಅವರ ಆ ನೋಟ `ಮತ್ತೇನ್ ಕತೆನೋ, ಮತ್ತೆ ಯಾರನ್ನೋ ಕರಕಂಡ್ ಬಂದಾರಲ್ಲ’ ಎನ್ನುವಂತಿತ್ತು. ಹೆಣ್ಣುಮಕ್ಕಳು ಸುಮ್ಮನೆ ಈ ಮಾತುಕತೆಯನ್ನು ಕೇಳಿಸಿಕೊಂಡು ಮೌನ ವ್ರತ ಹಿಡಿದವರಂತೆ ಕೂತಿದ್ದರು.

ಈಗ್ಗೆ ಮೂರು ವರ್ಷದಿಂದ ನಮ್ಮ ಕೇರಿಗೆ ಅಂಬೇಡ್ಕರ್ ಬಂದಾರ, ಹಂಗಾಗಿ ನಾವೀಗ ಅಂಬೇಡ್ಕರ್ ಜಯಂತಿ ಮಾಡ್ತೀವಿ ಎಂದು ಕೇರಿಯ ಹೊಸಬೆಳಕಿನ ಬಗ್ಗೆ ಮಾತನಾಡಿದರು. ಧಣಿ ವಶದಲ್ಲಿದ್ದ ಭೂಮಿಯನ್ನು ಜೀತಗಾರ ದಲಿತರು ಪಡೆದ ಬಗ್ಗೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹತ್ತಾರು ಕಥೆಗಳು ಹುಟ್ಟಿವೆಯಂತೆ. ಧಣಿ ಪರವಾದ ಕೆಲವರು `ನಂಬಿದ ಧಣಿಗೆ ಇವರು ಮೋಸ ಮಾಡಿದ್ರು, ಧಣಿ ಎದುರು ಯಾರ್ ಯಾರನ್ನೋ ಕರಕಂಡು ಬಂದು ದೌರ್ಜನ್ಯ ಮಾಡಿ ಹೊಲ ಕಸಕಂಡಾರ, ದೇವ್ರು ಇವ್ರಿಗೆ ಒಳ್ಳೇದ್ ಮಾಡಲ್ಲ’ ಎನ್ನುತ್ತಾರಂತೆ. ಇದಕ್ಕೆ ರಾಮಚಂದ್ರಪ್ಪ `ಅಲ್ರಿ ಸಾರ ನಮ್ಮ ಹೊಲನ ನಾವು ತಗಳ್ಳಾಕ ಇಷ್ಟು ರಾಮಾಯಣ ಆಗ್ಯಾತಿ, ಇನ್ನ ಅವರ ಹೆಸರಲ್ಲೆ ಪಟ್ಟ ಇದ್ದದ್ರ ನಾವ್ ದೌರ್ಜನ್ಯ ಮಾಡಿ ಹೊಲ ತಗಳ್ಳಾದು ಅಕ್ಕಿತ್ತೇನ್ರಿ’ ಎಂದು ಸಮಜಾಯಿಶಿ ಕೊಡುತ್ತಾರೆ.

ಹೀಗೆ ಕೂತು ಮಾತನಾಡುವಾಗ ಎಲ್ಲರ ಮುಖದಲ್ಲಿ ಗೆಲುವಿನ ನಗೆ, ಆತ್ಮವಿಶ್ವಾಸದ ಮಿಂಚು ಕಾಣುತ್ತಿತ್ತು. ಇಡೀ ಊರಿನ ಚರಿತ್ರೆಯಲ್ಲಿ `ಅಲ್ಲೋಲ ಕಲ್ಲೋಲ’ ಎಬ್ಬಿಸಿದ ಈ ಘಟನೆ ಬೀರಿದ ಪರಿಣಾಮ ಹಲವು. `ಈಗೇನು ಧಣಿ ಕಡೇರು ಸುಮ್ನಿದಾರ, ಏನ್ ತೊಂದ್ರಿ ಮಾಡಿಲ್ಲ. ಆದ್ರ ಇದೆಲ್ಲಾ ಮರೀಲಿ ಮುಂದೆ ನೋಡಾಣ ಒಂದು ಕೈ ಅಂತ ಸುಮ್ನಿದ್ದಂಗಿದೆ ಸಾರ್’ ಎನ್ನುವ ಸೇಡಿನ ಕಿಡಿ ಬೂದಿ ಮುಚ್ಚಿಕೊಂಡಿದೆ ಎನ್ನುವಂತಿರುವ ವಾತಾವರಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಈ ಬಗ್ಗೆ ಹೇಳುವಾಗ ದೂರದ ಆತಂಕದ ಸಣ್ಣ ಎಳೆಯೊಂದು ಕಾಣಿಸಿಕೊಂಡಿತು. ಆದರೂ `ಇರೋದ್ ಒಂದಿನ ಸಾಯೋದ್ ಒಂದಿನ ಬಿಡ್ರಿ ಸಾರ್, ಮುಂದೆ ನೋಡಾಣ’ ಎನ್ನುವ ದೈರ್ಯವನ್ನೂ ಕೆಲವರು ವ್ಯಕ್ತಪಡಿಸಿದರು.

ಈ ಭೂ ಹೋರಾಟ ಬೀರಿದ ಸಕಾರಾತ್ಮಕ ಪರಿಣಾಮವೆಂದರೆ, ಸುತ್ತಮುತ್ತಲ ಹಳ್ಳಿಗಳ ದಲಿತ ಕೆಳಜಾತಿಗಳ ರೈತರನೇಕರು `ನಮ್ ಹೊಲಾನು ಯಾವ್ ಯಾವ್ ಧಣೀ ಹೆಸ್ರಲ್ಲಿ ಐತೋ’ ಎಂದು ತಾಲೂಕು ಆಫೀಸಿನ ದಾಖಲಾತಿಗಳ ಪರಿಶೀಲಿಸುವ ಗುಪ್ತ ಕಾರ್ಯಾಚರಣೆಯಲ್ಲಿ ತೊಡಗಿದ್ದಾರಂತೆ. ಇವರೆಲ್ಲರಲ್ಲೂ ನಮ್ಮ ಹೊಲಾನೂ ಹಿಂಗೆ ಯಾರಾದ್ರೂ ವಶಪಡಿಸಿಕೊಂಡಿದ್ದು ಗೊತ್ತಾದ್ರೆ, ಕೊಡುಸೋ ಜನಾನೂ ಇದಾರೆ ಎನ್ನುವ ಕನಸಿನ ಬೀಜವೊಂದು ಮೊಳೆತಂತಿದೆ.
**
ಅಂದಹಾಗೆ ಪೀಠಿಕೆ ಇಲ್ಲದೆ ಶುರುಮಾಡಿದ ಭೂಮಿ ದಕ್ಕಿಸಿಕೊಂಡ ಈ ಕಥನ ಈಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗದ ದೊಡ್ಡದೊಂದು ಗೆಲುವಿನ ಹೋರಾಟದ್ದು. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ನುಗ್ಗೇನಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಬರುವ ಪುಟ್ಟ ಗ್ರಾಮ ನೆಲ್ಲೂಡು-ಕೊಟ್ಟಾಲ್. `ಕೊಟ್ಟಾಲ್’ ಎಂದರೆ ತೆಲುಗಿನಲ್ಲಿ `ಗುಡಿಸಲು’ ಎಂದರ್ಥ. ಗುಡಿಸಲೇ ಇರುವ ಜನವಸತಿಯನ್ನು ಗುರುತಿಸುವ ಈ ಪದ ಮರೆಯಾಗಿ ಕಾಲಾನಂತರದಲ್ಲಿ `ಶ್ರೀರಾಮರಂಗಾಪುರ’ ವಾಗಿದೆ. ಅದನ್ನೀಗ `ಎಸ್.ಆರ್.ಪುರ’ ವೆಂದು ಸಂಕ್ಷಿಪ್ತಗೊಳಿಸಿ ಕರೆಯುತ್ತಾರೆ. ಹೀಗಾಗಿ `ಎಸ್.ಆರ್.ಪುರದ ರೈತ ಹೋರಾಟ’ವು ಬಳ್ಳಾರಿ ಜಿಲ್ಲೆಯ ಜಮೀನ್ದಾರಿ ವ್ಯವಸ್ಥೆಗೆ ದೊಡ್ಡ ಪೆಟ್ಟುಕೊಟ್ಟ ಸಂಗತಿಯಾಗಿದೆ.

ಗುಡಿಸಲೆ ಇರುವ ಊರು ಎಂದ ಮೇಲೆ ದಲಿತರು, ಕೆಳಜಾತಿ, ಹಿಂದುಳಿದವರು ಹೆಚ್ಚಿದ್ದಾರೆಂದು ಬೇರೆ ಹೇಳಬೇಕಿಲ್ಲ. ಈ ಊರಿನಲ್ಲಿ ಆಂದ್ರದಲ್ಲಿ ಬಹುಸಂಖ್ಯಾತರಾದ `ಕಮ್ಮಾ’ ಕುಲವೊಂದು ಇಲ್ಲಿ ಜಮೀನ್ದಾರರಾಗಿ ಪಾಳೆಗಾರಿಕೆ ಮಾಡುತ್ತಿತ್ತು. ಭೀಮನೇನಿ ಸೋಮಪ್ಪ ಈ ಭಾಗದ ಆಗಿನ ದೊಡ್ಡ ಭೂಮಾಲೀಕ. ಇವರಿಗೆ 8 ಜನ ಮಕ್ಕಳಲ್ಲಿ ಒಬ್ಬ ಮಗ ಭೀಮನೇನಿ ಕೊಂಡಯ್ಯ ಒಮ್ಮೆ ಶಾಸಕನೂ ಆಗಿದ್ದ. ಈತನ ಗೂಂಡಾಗಿರಿ, ದೌರ್ಜನ್ಯ, ದರ್ಪ ಅಧಿಕಾರದ ಕಾರಣಗಳಿಂದಲೇ ಹತ್ಯೆಯಾದದ್ದು, ಇದಕ್ಕೆ ಪ್ರತಿಯಾಗಿಯೇ, ತಾ.ಪಂ. ಅದ್ಯಕ್ಷನಾಗಿದ್ದ ಸೂರ್ಯನಾರಾಯಣ ರೆಡ್ಡಿಯು ಹೊಸಪೇಟೆಯಲ್ಲಿ ಆಗಸ್ಟ್ 15ರಂದು ಧ್ವಜಾರೋಹಣದ ಸಂದರ್ಭದಲ್ಲಿ ಗುಂಡಿಕ್ಕಿ ಕೊಂದದ್ದು ಎನ್ನುವ ಮಾತಿದೆ. ಇವರ ದಬ್ಬಾಳಿಕೆ ದೌರ್ಜನ್ಯದ ಕತೆಗಳು ತೆಲುಗು ಸಿನೆಮಾದ ಜಮಿನ್ದಾರಿಕೆಯ ದೃಶ್ಯಗಳಂತೆ ಬಿಚ್ಚಿಕೊಳ್ಳುತ್ತವೆ. ಇಂತಹ ಬೀಮನೇನಿ ಕುಟುಂಬದ ಜಮೀನ್ದಾರಿಕೆ ವಿರುದ್ಧ ಮೊದಲಬಾರಿಗೆ ಅವರಲ್ಲಿಯೇ ಜೀತಕ್ಕಿದ್ದ ದಲಿತ ಕುಟುಂಬಗಳು ತಿರುಗಿ ಬಿದ್ದದ್ದು ಇದೀಗ ಹೊಸ ಇತಿಹಾಸ.
s.r.pura-4

ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ಭೂ ಸುಧಾರಣಾ ನೀತಿಯು ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಕಸಿದುಕೊಂಡಿತ್ತು. ಆದರೆ ವಾಸ್ತವದಲ್ಲಿ ಕೆಲವು ಜಮೀನ್ದಾರರು ಈ ನೀತಿಯನ್ನು ತುರುಮುರುಗು ಮಾಡಿ ಮಣ್ಣುಮುಕ್ಕಿಸಿದ್ದರು. ಕಾರಣ ಸರಕಾರದ ಲೆಕ್ಕದಲ್ಲಿ ಭೂಮಿ ಹಂಚಿಕೆಯಾಗಿದ್ದರೆ, ಹಾಗೆ ಹಂಚಲ್ಪಟ್ಟ ಭೂಮಿ ಮತ್ತದೇ ಜಮೀನ್ದಾರರ ಹದ್ದುಬಸ್ತಿನಲ್ಲೆ ಉಳಿಯಿತು. ಯಾರ ಹೆಸರಿಗೆ ಭೂಮಿ ಹಂಚಿಕೆಯಾಗಿತ್ತೋ ಅವರು ತಮ್ಮದೇ ಭೂಮಿಯಲ್ಲಿ ಅರಿವಿಲ್ಲದೆ ಜೀತಕ್ಕೆ ಆಳಾಗಿ ದುಡಿಯುತ್ತಿದ್ದರು. ಶ್ರೀರಾಮರಂಗಾಪುರದ ಬೀಮನೇನಿ ಜಮಿನ್ದಾರಿ ಕುಟುಂಬವು ಮಾಡಿದ್ದು ಇದೇ ಕುತಂತ್ರವನ್ನು.

ಸೆಪ್ಟಂಬರ್ 27, 1978 ರಂದು ಹೊಸಪೇಟೆ ಭಾಗದ ಭೂನ್ಯಾಯ ಮಂಡಳಿ ಕಂಪ್ಲಿ ಪ್ರವಾಸಿ ಮಂದಿರದಲ್ಲಿ ಜನರ ಸಭೆ ಸೇರಿಸಿ, ಈ ಗ್ರಾಮದ 12 ಮಾದಿಗರ ಕುಟುಂಬಗಳೂ ಒಳಗೊಂಡಂತೆ ಇನ್ನಿತರೆ ಕುರುಬರು, ಮುಸ್ಲೀಮರು, ಕಮ್ಮ, ರೆಡ್ಡಿ ಸಮುದಾಯದ 26 ಕುಟುಂಬಗಳಿಗೆ 229 ಎಕರೆಯಷ್ಟು ಜಮೀನು ಮಂಜೂರು ಮಾಡಿತ್ತು. ಆದರೆ ಭೂಮಾಲೀಕ ಭೀಮನೇನಿ ಕುಟುಂಬ ವರ್ಗವು ಭೂನ್ಯಾಯ ಮಂಡಳಿಯು ಹಂಚಿಕೆ ಮಾಡಿದ್ದ ಭೂಮಿಯನ್ನು ದಲಿತರಿಗೆ ಬಿಟ್ಟುಕೊಡಲೆ ಇಲ್ಲ. ಕಾರಣ ಭೂಮಿ ಪಡೆದ ಫಲಾನುಭವಿಗಳಲ್ಲಿ ಮಾದಿಗರು ಮೂರು ತಲೆಮಾರುಗಳಿಂದಲೂ ಇವರಲ್ಲಿ ಜೀತಗಾರರಾಗಿ ದುಡಿಯುತ್ತಿದ್ದರು. ಇವರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಅಜ್ಞಾನದಲ್ಲಿರಿಸಲಾಗಿತ್ತು. ಅಂತೆಯೇ ನಕಲಿ ಸಹಿ ಮಾಡಿ ಕೆಲವರ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಇವರ ಕಿರುಕುಳಕ್ಕೆ ಕೆಲವು ಕುಟುಂಬಗಳು ನಗರಕ್ಕೆ ವಲಸೆ ಹೋಗಿದ್ದರು.

ಕಳೆದ 36 ವರ್ಷಗಳಿಂದಲೂ ಪ್ರಭುತ್ವವು ಭೀಮನೇನಿ ಕುಟುಂಬಕ್ಕೆ ರಕ್ಷಣೆಗೆ ನಿಂತ ಕಾರಣ ಇವರಿಂದ ನಿರಂತರವಾಗಿ ದೌರ್ಜನ್ಯಕ್ಕೆ ನಲುಗಿದ ದಲಿತರು ಭೂಮಿ ಕೇಳುವ ಮಾತು ದೂರವೆ ಉಳಿದಿತ್ತು. ಮೂರು ವರ್ಷದ ಹಿಂದೆ ಅಸಲಿಗೆ ತಮ್ಮ ಹೆಸರಲ್ಲಿ ಭೂಮಿ ಇದೆ ಎಂದು ತಿಳಿದದ್ದು ಕೂಡ ಆಕಸ್ಮಿಕ. ಜೀತಕ್ಕಿದ್ದ ದಲಿತರ ಮೂರನೇ ತಲೆಮಾರಿನ ಅಕ್ಷರಸ್ಥ ರಾಮಚಂದ್ರಪ್ಪ ಇದರ ರುವಾರಿ.
**
ಒಮ್ಮೆ 2013 ರಲ್ಲಿ ಭೀಮನೇನಿ ಕುಟುಂಬದವರೊಬ್ಬರು ಎಸ್ಸಿಲೋನಲ್ಲಿ ಟ್ರಾಕ್ಟರ್ ತೊಗೋಬೇಕು, ನೀನು ಸಹಿ ಮಾಡಬೇಕೆಂದು ರಾಮಚಂದ್ರಪ್ಪನನ್ನು ಕೇಳಿಕೊಂಡಿದ್ದಾರೆ. ಒಂದಷ್ಟು ಓದಲು ಗೊತ್ತಿರುವ ರಾಮಚಂದ್ರಪ್ಪನಿಗೆ ನನ್ನ ಸಹಿ ಯಾಕೆ ಎನ್ನುವ ಅನುಮಾನವೊಂದು ಕಾಡಿದೆ. ಹೀಗೆ ಬ್ಯಾಂಕ್ ಸಾಲಕ್ಕೆ ಸಹಿ ಹಾಕಲು ಹೋದಾಗ ಹೊಸಪೇಟೆಗೆ ಪಹಣಿಯೊಂದನ್ನು ಝೆರಾಕ್ಸ್ ಮಾಡಿಸಲು ರಾಮಚಂದ್ರಪ್ಪನ ಬಳಿ ಕೊಟ್ಟಿದ್ದಾರೆ. ಈ ಪಹಣಿಯಲ್ಲಿದ್ದ ಪಟ್ಟದಾರರ ಹೆಸರು ನೋಡಿದ ರಾಮಚಂದ್ರಪ್ಪನಿಗೆ ಮೈ ಬೆವರಿದೆ. ಸುಮಾರು 8 ಎಕರೆಯಷ್ಟು ಭೂಮಿ ತನ್ನ ತಂದೆ ಹೆಸರಲ್ಲಿದೆ. ಇದನ್ನು ಗಮನಿಸಿದ ರಾಮಚಂದ್ರಪ್ಪ ಉಪಾಯವಾಗಿ ಈ ಪಹಣಿಯ ಒಂದು ಪ್ರತಿಯನ್ನು ಝೆರಾಕ್ಸ್ ಮಾಡಿಸಿ ತನ್ನಲ್ಲಿ ಉಳಿಸಿಕೊಂಡು, ಉಳಿದಂತೆ ಸಾಲಕ್ಕೆ ಸಹಿ ಮಾಡಿ ಏನು ತಿಳಿಯದಂತೆ ಮನೆಗೆ ಮರಳಿದ್ದಾನೆ.

ಈ ಕ್ಷಣದಿಂದ ರಾಮಚಂದ್ರಪ್ಪನಿಗೆ ಕಣ್ಣಿಗೆ ನಿದ್ದೆಯಿಲ್ಲದೆ ತಮ್ಮ ಹೊಲದ ಚಿಂತೆ ಶುರುವಾಗಿದೆ. ನಮ್ಮದೇ ಹೊಲ, ನಮಗೇ ಗೊತ್ತಿಲ್ಲವಲ್ಲ ಎಂದು ಅಚ್ಚರಿಗೊಂಡಿದ್ದಾನೆ. ತಲೆಯಲ್ಲಿ ನೂರಾರು ಪ್ರಶ್ನೆಗಳು ಕಿಕ್ಕಿರಿದು ಆತನನ್ನು ಇನ್ನಿಲ್ಲದಂತೆ ಕಾಡಿವೆ. ಹೀಗಿರುವಾದ ತಾನು ಝೆರಾಕ್ಸ್ ಪಡೆದ ಪಟ್ಟದ ಮಾಹಿತಿಯ ಎಳೆ ಹಿಡಿದು ಗುಟ್ಟಾಗಿ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾದ ರಾಮಚಂದ್ರಪ್ಪ ಮತ್ತಷ್ಟು ಬೆಚ್ಚಿಬಿದ್ದಿದ್ದಾನೆ. ತನ್ನ ಕೇರಿಯ ದಲಿತರ ಹೆಸರಲ್ಲಿ ಇಷ್ಟೊಂದು ಭೂಮಿ ಇದ್ದರೂ ಯಾರಿಗೂ ಗೊತ್ತಿಲ್ಲ. ಈ ಪ್ರತೀ ವಿವರಗಳು ರಾಮಚಂದ್ರಪ್ಪನಲ್ಲಿ ಒಳಗೊಳಗೇ ಖುಷಿಯನ್ನೂ ದಿಗಿಲನ್ನೂ ಹುಟ್ಟಿಸಿವೆ. ನಮ್ಮದೇ ಹೆಸರಲ್ಲಿದ್ದ ಭೂಮಿಯನ್ನು ಮರಳಿ ಪಡೆಯುವುದು ಹೇಗೆ? ಬೀಮನೇನಿ ಕುಟುಂಬದವರ ವಶದಲ್ಲಿದ್ದ ಈ ಭೂಮಿಯನ್ನು ಹೇಗೆ ಬಿಡಿಸಿಕೊಳ್ಳುವುದು ಮುಂತಾಗಿ ವೈದಾಟ ಶುರುವಾಗಿದೆ.
srpura1

ಈ ನಡುವೆ ತಾನೊಬ್ಬನೇ ಫಲಾನುಭವಿಯಲ್ಲದೆ ಯಾರ ಹೆಸರಲ್ಲಿ ಹೊಲವಿತ್ತೊ ಅವರೆಲ್ಲರನ್ನು ಒಟ್ಟಾಗಿಸಲು ಪ್ರಯತ್ನಿಸಿದ್ದಾನೆ. ಗುಟ್ಟಾಗಿಯೇ ಎಲ್ಲರಲ್ಲಿಯೂ ಒಗ್ಗಟ್ಟಾಗಿಸುವ ಮಾತುಕತೆ ಮಾಡಿದ್ದಾನೆ. ಕೆಲವರು ರಾಮಚಂದ್ರಪ್ಪನ ಮಾತಿಗೆ ಒಪ್ಪಿದರೆ ಇನ್ನು ಕೆಲವರು ಹೆದರಿ ಹಿಂದೆ ಸರಿದಿದ್ದಾರೆ. ಆದರೆ ಎಲ್ಲರ ಎದೆಯೊಳಗೆ ಸ್ವಂತ ಹೊಲದ ಕನಸು ಚಿಗುರೊಡೆಯತೊಡಗಿದೆ. ಇಡೀ ಕೇರಿಯೆಂಬ ಕೇರಿಯೇ ಹಗಲು ರಾತ್ರಿ ಹೊಲದ್ದೇ ಚಿಂತೆಯಲ್ಲಿ ಹೈರಾಣಾಗಿದೆ. ಇಂತಹ ಹೊತ್ತಲ್ಲಿ ರಾಮಚಂದ್ರಪ್ಪ ಈ ಸಂಗತಿಯನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಕರಿಯಪ್ಪ ಗುಡಿಮನಿ ಅವರಲ್ಲಿ ಹೇಳಿಕೊಂಡಿದ್ದಾರೆ. ಕರಿಯಪ್ಪ ದಾಖಲೆಗಳನ್ನು ಪರಿಶೀಲಿಸಿ ಇದೆಲ್ಲಾ ನಿಮ್ಮದೇ ಹೊಲ, ನಿಮ್ಮ ಹೊಲವನ್ನು ನಿಮಗೆ ಬಿಡಿಸಿಕೊಡಲು ಹೋರಾಟ ಮಾಡೋಣ ಎಂದು ತಿಳಿ ಹೇಳಿದ್ದಾರೆ.

ಕರ್ನಾಟಕ ಜನಶಕ್ತಿ ಸಂಘಟನೆಯ ಜತೆಗೂಡಿ ನಿರಂತರವಾಗಿ ಚಳವಳಿಯಲ್ಲಿ ತೊಡಗಿಸಿಕೊಂಡ ಕರಿಯಪ್ಪ ಗುಡಿಮನೆ ಈ ಸಂಗತಿಯನ್ನು ಜನಶಕ್ತಿ ಸಂಘಟನೆಯ ಶಿವಸುಂದರ್, ವಾಸು, ಮಲ್ಲಿಗೆ, ಕುಮಾರ ಸಮತಳ ಮೊದಲಾದವರೊಂದಿಗೆ ಚರ್ಚೆ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಈ ಹೋರಾಟವನ್ನು ರೂಪಿಸಲು ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಬಳ್ಳಾರಿ ಕೊಪ್ಪಳ ಭಾಗದಲ್ಲಿದ್ದ ದಲಿತ ಪ್ರಗತಿಪರ ಸಂಘಟನೆಗಳನ್ನು, ಚಳವಳಿಗಾರರನ್ನೂ ಪತ್ರಕರ್ತ ಲೇಖಕರನ್ನೂ ಒಟ್ಟಾಗಿಸಿದ ಹೋರಾಟದ ಸಮಿತಿಯೊಂದನ್ನು ರೂಪಿಸಿದ್ದಾರೆ. ಪೂರ್ವ ತಯಾರಿಯನ್ನು ಮಾಡಿದ್ದಾರೆ. ಶ್ರೀರಾಮರಂಗಾಪುರದ ರೈತರಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿ ಗಟ್ಟಿಯಾಗಿ ನಿಲ್ಲುವ ವಾತಾವರಣವನ್ನು ರೂಪಿಸಿದ್ದಾರೆ.

ಸತತ ಎರಡು ವರ್ಷಗಳ ಕಾಲ ಜನರನ್ನು ಹೋರಾಟಕ್ಕೆ ಅಣಿಗೊಳಿಸಲಾಗಿದೆ. ಪತ್ರಿಕಾ ಗೋಷ್ಠಿಗಳನ್ನು ಮಾಡುತ್ತಾ, ಈ ವಿಷಯಕ್ಕಾಗಿ ಎಸ್.ಪಿ.,ಡಿ.ಸಿ., ಕಂದಾಯ ಇಲಾಖೆಗಳಿಗೆ ಅಲೆದಾಡಿ ಮನವಿಪತ್ರಗಳನ್ನು ಕೊಟ್ಟು ಸರಕಾರದ ಕಣ್ಣು ತೆರೆಯುವಂತೆ ಮಾಡಲಾಗಿದೆ. ಇದರ ಪ್ರತಿಫಲವಾಗಿ ಭೀಮನೇನಿ ಕುಟುಂಬಗಳ ವಿರುದ್ಧ ಭೂಮಿಯ ಫೋರ್ಜರಿ ಕೇಸನ್ನು ಒಳಗೊಂಡಂತೆ ಕಂಪ್ಲಿ ಪೋಲಿಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾದವು. ಆದರೂ ಪೋಲಿಸರ ಕುಮ್ಮಕ್ಕಿನಿಂದ ಬಂಧನವಾಗದೆ ಬೇಲ್ ಪಡೆದು ರಾಜಾರೋಷವಾಗಿ ತಿರುಗಾಡತೊಡಗಿದರು. ಹೀಗಾಗಿ ಇದರ ತಾರ್ಕಿಕ ಅಂತ್ಯದಂತೆ `ನಾಡಿನ ಪ್ರಜ್ಞಾವಂತರು, ಬುದ್ದಿಜೀವಿಗಳು ಪ್ರಗತಿಪರ ಸಂಘಟನೆಗಳು ಎಲ್ಲರೂ ಇವರ ಬೆಂಬಲಕ್ಕೆ ನಿಲ್ಲಬೇಕಿದೆಯಲ್ಲದೆ, ಇವರ ಪರವಾಗಿ ದ್ವನಿ ಎತ್ತಬೇಕಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ’ ಎಂದು ಭೂಹೋರಾಟಕ್ಕೆ ಕರೆ ಕೊಡಲಾಯಿತು. ಈ ಹೋರಾಟದ ಶಕ್ತಿ ಮಂತ್ರವನ್ನಾಗಿ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯನ್ನು ಮುನ್ನಲೆಗೆ ತರಲಾಯಿತು.
**
ಅಂದು 29 ಜೂನ್ 2014. ನುಗ್ಗೇನಹಳ್ಳಿ-ಕೊಟ್ಟಾಲದಲ್ಲಿ ಚಾರಿತ್ರಿಕ ದಿನವೊಂದು ದಾಖಲಾಯಿತು. ಹೋರಾಟದ ಮುನ್ನಾದಿನ, ಊರಿನಲ್ಲಿ ಒಂದು ಬಗೆಯ ಆತಂಕ ದುಗುಡ ತುಂಬಿತ್ತು. ಕೇರಿಯ ಜನರಲ್ಲಿ ನಾಳೆ ಹೋರಾಟಕ್ಕೆ ಹೋಗಬೇಕೋ ಬೇಡವೋ ಎನ್ನುವ ಗೊಂದಲ ಮನೆ ಮಾಡಿತ್ತು. ಜಮೀನ್ದಾರಿ ಕುಟುಂಬ ಪರೋಕ್ಷವಾಗಿ ಹೋರಾಟಕ್ಕೆ ತಡೆಯೊಡ್ಡಬಹುದಾದ ಚಟುವಟಿಕೆಗಳಲ್ಲಿ ತೊಡಗಿತ್ತು. ಕೆಲವರು ಧಣಿಯನ್ನು ಎದುರು ಹಾಕಿಕೊಂಡು ಬದುಕುವುದು ಹೇಗೆ ಎಂಬ ಭಯದಲ್ಲಿ ಮುದುಡಿ ಕೂತಿದ್ದರೆ, ಮತ್ತೆ ಕೆಲವರು `ಇರೋದ್ ಒಂದ್ ದಿನ, ಸಾಯೋದ್ ಒಂದ್ ದಿನ’ ಎನ್ನುವ ದಿಟ್ಟ ನಿರ್ಧಾರವೊಂದಕ್ಕೆ ಮನಸ್ಸನ್ನು ಅಣಿಗೊಳಿಸಿ ಹೋರಾಟಕ್ಕೆ ಸಜ್ಜಾಗಿದ್ದರು.

ಆ ದಿನ ಎಂದಿನಂತೆಯೇ ಸೂರ್ಯ ಪೂರ್ವಕ್ಕೇ ಹುಟ್ಟಿದ್ದ. ಆದರೆ ಎಸ್.ಆರ್.ಪುರದ ಪಾಲಿಗೆ ಅಂದಿನ ಸೂರ್ಯ ಕ್ರಾಂತಿಸೂರ್ಯನಾಗಿದ್ದ. ಹೋರಾಟಕ್ಕೆ ಸಾವಿರಾರು ನದಿಗಳೆಂಬಂತೆ, ಎಲ್ಲೆಲ್ಲಿಂದಲೋ ನೂರಾರು ಜನರು ಎಸ್.ಆರ್.ಪುರಕ್ಕೆ ಬಂದಿಳಿದರು. ಹೋರಾಟಗಾರರು, ಅಧ್ಯಾಪಕರು, ಚಳವಳಿಗಾರರು, ಲೇಖಕರು, ಕವಿಗಳು, ವಿದ್ಯಾರ್ಥಿಗಳು, ಪತ್ರಕರ್ತರು, ಬೇರೆ ಬೇರೆ ಭಾಗದ ದಲಿತ ಯುವಕರು ಹೀಗೆ ನಾನಾ ಧಾರೆಗಳಿಂದ ಹರಿದು ಬಂದ ಜನರು ಊರಿನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದಂತಿತ್ತು. ಇಡೀ ಊರು ನೆಬ್ಬೆರಗಾಗಿ ನೋಡಿತು. ಊರಿನ ಮೈ ನಡುಗುವಂತೆ ಮಾಡಿದ ದಲಿತ ಕೇರಿಯು ಮೇಲುಜಾತಿಯವರ ಕಂಗೆಣ್ಣಿಗೆ ಗುರಿಯಾಗಿತ್ತು. ಆದರೆ ಯಾರೊಬ್ಬರು ಉಸಿರು ಬಿಡುವಂತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಪೋಲಿಸರ ಕಣ್ಗಾವಲು. ನೆರೆದ ಜನರಲ್ಲಿ ಅರ್ಧದಷ್ಟು ಖಾಕಿದಾರಿಗಳೇ ಕಾಣುತ್ತಿದ್ದರು. ಬಂದ ಜನರಿಗೆ ಊರವರು ನೀರು ಕೊಡದಾದರು. ಮುಖ ಕೊಟ್ಟು ಮಾತನಾಡಲು ಹಿಂಜರಿದರು. ಕ್ಷಣ ಕ್ಷಣವೂ ಏನಾದರೂ ಘಟಿಸೀತೆಂದು ಊರವರಲ್ಲಿ ಒಂದು ಬಗೆಯ ಕುತೂಹಲ.

ಊರಾಚೆಯಿಂದ ಊರನ್ನು ಪ್ರವೇಶಿಸದೆ ಮೆರವಣಿಗೆ ಆರಂಭವಾಯಿತು. `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆ ಎಲ್ಲರ ಎದೆಯೊಳಗಿಂದ ಮೊಳಗಿತು. ಊಳಬೇಕಿದ್ದ ಜಮೀನಿನತ್ತ ಹೆಜ್ಜೆಗಳು ಸಾಗತೊಡಗಿದವು. ಪ್ರತಿಹೆಜ್ಜೆಗಳು ಅರ್ಧಶತಮಾನದಷ್ಟು ಭೂಮಿಯನ್ನು ಆಕ್ರಮಿಸಿಕೊಂಡಿದ್ದ ಜಮೀನ್ದಾರಿಕೆಯ ಅಹಮ್ಮನ್ನು ತುಳಿದೇ ನಡೆದಂತಿತ್ತು. ಹೋರಾಟಕ್ಕೆ ಸಿಕ್ಕ ಬೆಂಬಲ ಇಡೀ ಊರಿನಲ್ಲಿ ವಿದ್ಯುತ್ ಸಂಚಾರವನ್ನು ಮೂಡಿಸಿತ್ತು. ಈ ಬೆಂಬಲದ ಶಕ್ತಿ ಸಂಚಲನೆ ಊರಿನ ದಲಿತ ಕೆಳಜಾತಿ ಯುವಕರಲ್ಲಿ ಎದ್ದು ಕಾಣುವಂತಿತ್ತು. ಅಂತೆಯೇ ಸ್ವತಃ ಭೂಮ್ತಾಯಿಯೇ ತನ್ನ ಮೂಲ ವಾರಸುದಾರರ ಬಳಿ ಸೇರಲು ಸಂಭ್ರಮದಲ್ಲಿದ್ದಂತೆ ನೆಲದ ಕಂಪನವಿತ್ತು.

ಆ ದಿನವನ್ನು ಚಳವಳಿಯ ಸಂಗಾತಿ ಬಿ.ಪೀರಬಾಷ ಅವರು ನೆನಪಿಸಿಕೊಳ್ಳುವುದು ಹೀಗೆ `ಜಮೀನಿನ ಮೇಲೆ ಹಕ್ಕು ಸಾದಿಸಲಾಯಿತೆಂಬ ಅರ್ಥದಲ್ಲಿ ನೇಗಿಲು ಹೂಡಬೇಕಿತ್ತು. ಆವರೆಗೂ ಕೂಲಿಕಾರರಾಗೇ ಬಾಳಿದ್ದ ಆ ರೈತರ ಬಳಿ ಎತ್ತುಗಳಿರಲಿಲ್ಲ. ಅವರ್ಯಾರೂ ಉಳ್ಳವರಲ್ಲದ್ದರಿಂದ ಯಂತ್ರದ ಉಳುಮೆಗೆ ಟ್ರ್ಯಾಕ್ಟರ್‍ಗಳೂ ಇರಲಿಲ್ಲ. ಬಾಡಿಗೆಗೂ ಕೇಳಿದರಂತೆ ಊರಲ್ಲಿ, ಧಣಿಗಳ ಭಯವಿತ್ತೋ ಏನೋ ಯಾರೂ ಕೊಡಲಿಲ್ಲ. ಕೊನೆಗೆ ಯುವಕರೇ ಕಟ್ಟಿಗೆಯ ನೇಗಿಲಿಗೆ ನೊಗಕಟ್ಟಿ ಕೊರಳು ಹೂಡಿದರು. ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯ ಬಲದಿಂದಲೇ ನೇಗಿಲೆಳೆದರು. ಬೀಳುಭೂಮಿ ಬಾಯಿಬಿಟ್ಟು ಸೂರ್ಯಕಿರಣಗಳ ನುಂಡಿತು. ಮಾಧ್ಯಮಗಳ ಕ್ಯಾಮೆರಾಗಳು ದೃಶ್ಯ ಸೆರೆಹಿಡಿದವು. ಯಾವ ಹೊತ್ತಿನಲ್ಲಿ ಏನಾಗುವುದೋ ಎಂಬ ದುಗುಡವಿತ್ತೇ ಹೊರತು ಕಳೆಯಂತೆ ಬೆಳೆದಿದ್ದ ಯಜಮಾನಿಕೆ ಕಿತ್ತುಹೋಯಿತು. ಅತೃಪ್ತ ಪೊಲೀಸರು ಫೊಟೋ ಕ್ಲಿಕ್ಕಿಸುತ್ತಲೇ ತಿರುಗಿದರು. ಸಮಾಧಾನವಾಗದೇ ಎಲ್ಲರ ಮುಖಗಳನ್ನೂ ಸಾಮಾನ್ಯವಾಗಿ, ಕೆಲವರ ಮುಖಗಳನ್ನು ವಿಶೇಷವಾಗಿ ರೆಕಾರ್ಡು ಮಾಡಿಕೊಂಡರು. ಪಾಪ ಅವರಿಗೇನು ಬೇಕಿತ್ತೋ, ಬಹುಶಃ ಅದು ಅವರಿಗೆ ಸಿಗಲೇ ಇಲ್ಲ. ಆದರೆ ಆ ಹೊತ್ತಿಗೆ ರೈತರು ತಮಗೆ ಬೇಕಾದದ್ದನ್ನು ಪಡೆದುಕೊಂಡಿದ್ದರು. ಅವರು ಕಳೆದುಕೊಳ್ಳುವುದೇನೋ ಇರಲಿಲ್ಲ. ಆ ಹೊತ್ತು ಊರಿಂದ ಪಲಾಯನಗೈದ ಜಮೀಂದಾರಿ ಯಾಜಮಾನ್ಯದ ‘ನಿರ್ಜೀವ ದೇಹದೊಳ ಪ್ರವೇಶಕ್ಕೆ ಆತನಕ ಬಿಟ್ಟುಹೋಗಿದ್ದ ಆತ್ಮವೆಂಬುದು ಹೊಸ್ತಿಲಬಳಿ ನಿಂತಿತ್ತು’. ಎನ್ನುತ್ತಾರೆ.

s.r.pura-4ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರಟಿಗಿಯ ಎ.ನರೇಂದ್ರ ಶೆಟ್ಟಿ ಅವರು `ಹೋರಾಟದ ಸ್ಥಳದಲ್ಲಿ ಕೇಳಿದ ಸಾಮಾಜಿಕ ಕಳಕಳಿಯ ಹಾಡುಗಳು, ಮಾತುಗಳು ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತಿವೆ. ನನ್ನ 27ವರ್ಷಗಳ ಜೀವನದಲ್ಲಿ ನಾನು ಮೊದಲ ಬಾರಿಗೆ ಪಾಲ್ಗೊಂಡಿದ್ದ ಈ ಹೋರಾಟ ನಿಜಕ್ಕೂ ಅದ್ಭುತ, ಅವಿಸ್ಮರಣೀಯ. ನನ್ನ ಜೀವನಕ್ಕೂ ಮುನ್ನುಡಿಯಾಗುವಂತೆ ನಾನು ಹೋರಾಟವನ್ನು ಇಂದಿಗೂ ಅವಲೋಕಿಸುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ. ಅಂದು ಬೆಂಗಳೂರಿನ ಹಿರಿಯ ಲೇಖಕರಾದ ಪ್ರೊ.ಶಿವರಾಮಯ್ಯ, ನಗರಿಬಾಬಯ್ಯ, ಶಿವಸುಂದರ್, ಡಾ.ವಾಸು, ಕುಮಾರ್ ಸಮತಳ, ಗೌರಿ, ಮಲ್ಲಿಗೆ, ಕೆ.ಎಲ್.ಅಶೋಕ, ನಗರಗೆರೆ ರಮೇಶ್, ಡಾ.ಲಕ್ಷ್ಮಿನಾರಾಯಣ, ಡಾ. ರತಿರಾವ್ ಮತ್ತು ಅನಂತಪುರದ ಜಾತಿ ನಿರ್ಮೂಲನ ಸಮಿತಿಯ ರಾಮಕುಮಾರ್ ವಕೀಲರು ಮತ್ತವರ ತಂಡ, ಸ್ಥಳೀಯವಾಗಿ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ, ಬಿ.ಪೀರಭಾಷಾ, ಭಾರಧ್ವಜ, ಪಂಪಾರೆಡ್ಡಿ, ಎಸ್.ಎನ್.ಬಡಿಗೇರ್, ಪ್ರತಾಪ ರೆಡ್ಡಿ ಹೀಗೆ ನೂರಾರು ಚಳವಳಿಯ ಸಂಗಾತಿಯಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಈ ಹೋರಾಟದಲ್ಲಿ ಕೆಲವು ಮೂಲಭೂತ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಮುಖ್ಯವಾಗಿ ಭೂನ್ಯಾಯ ಮಂಡಳಿ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಸೂಕ್ತ ಕಾರ್ಯಕ್ರಮ ತೆಗೆದುಕೊಳ್ಳುವುದು, 35 ವರ್ಷಗಳಿಂದ ದಲಿತರಿಗೆ ಭೂ ವಂಚನೆ ಮಾಡಿದ ಭೂಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೊಳಿಸುವುದು, ಭೂ ವಂಚಿತ ಎಲ್ಲಾ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡುವುದು, ಭೂ ನ್ಯಾಯಮಂಡಳಿಯ ಆದೇಶವನ್ನು ರಾಜ್ಯಾದ್ಯಂತ ಜಾರಿ ಮಾಡದೇ ನಿರ್ಲಕ್ಷ್ಯಿಸಿರುವ ಪ್ರಕರಣಗಳನ್ನು ಸರ್ಕಾರ ಪತ್ತೆಹಚ್ಚಿ ಫಲಾನುಭವಿಗಳಿಗೆ, ಭೂರಹಿತರಿಗೆ ಭೂಮಿ ನೀಡುವುದು ಎಂಬುದಾಗಿತ್ತು. ಈ ಚಳವಳಿ ಬದಲಾದ ರೈತ ಹೋರಾಟದ ಒಂದು ಮಾದರಿಯನ್ನು ಬಿಂಬಿಸುವಂತಿದೆ.

**
ಈ ಹೊತ್ತಿನ ಭೂ ಹೋರಾಟವನ್ನು ನೋಡುತ್ತಿದ್ದರೆ ಪಿ.ಲಂಕೇಶ್ ಅವರ ಮಾತು ಈಗಲೂ ಪ್ರಸ್ತುತವೆನ್ನಿಸುತ್ತದೆ. ಲಂಕೇಶರು ‘ಭೂಸುಧಾರಣೆ ಪ್ರಮಾಣಿಕವಾಗಿ ಜಾರಿಗೆ ಬಂದಿದೆ ಎಂದು ಇಟ್ಟುಕೊಂಡರೂ, ಕರ್ನಾಟಕದಲ್ಲಿ ಅವಿಭಕ್ತ ಕುಟುಂಬಗಳು, ಬೇನಾಮಿ ಸ್ವಾಮ್ಯ ಇತ್ಯಾದಿಗಳಿಂದಾಗಿ ದೊಡ್ಡ ಹಿಡುವಳಿದಾರ ರೈತರಿದ್ದಾರೆ. ಬಹುಸಂಖ್ಯಾತ ರೈತರು ಅಷ್ಟಿಷ್ಟು ಜಮೀನಿನ ಒಡೆತನ ಹೊಂದಿದ್ದಾರೆ. ಹಳ್ಳಿಯ ಸಂದರ್ಭದಲ್ಲಿ ಭೂಸ್ವಾಮ್ಯ ಪಡೆದ ರೈತರು ಇತರಿಗಿಂತ ಸ್ವಲ್ಪ ನೆಮ್ಮದಿ ಮತ್ತು ಪ್ರಭಾವ ಹೊಂದಿದವರು. ಹಳ್ಳಿಯಲ್ಲಿ ಶಿಕ್ಷಣ ಪಡೆದು ನಗರದತ್ತ ಹೋದ ಬಹುಪಾಲು ಹುಡುಗರು ಕೂಡ ಇಂಥ ರೈತ ಕುಟುಂಬದವರು. ಈ ರೈತ ಕುಟುಂಬದವರೇ ರಾಜಕೀಯವಾಗಿ ಕೂಡ ಸ್ಥಾನಮಾನಗಳನ್ನು ಗಳಿಸಿರುವವರು. ಇವತ್ತು ರೈತರು ತಮ್ಮ ಸಂಘಗಳನ್ನು ರೂಪಿಸಿಕೊಂಡು ಸರ್ಕಾರದ ಎದುರು ನಿಂತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಭೂಸ್ವಾಮ್ಯ ಹೊಂದಿದ ರೈತರ ಸ್ಥಿತಿವಂತಿಕೆ’ ಎನ್ನುತ್ತಾರೆ. ಈ ಮಾತು ಕರ್ನಾಟಕದ ಭೂಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಈಗಲೂ ನೆರವಾಗುತ್ತದೆ.

ಹಾಗೆ ನೋಡಿದರೆ ಭೂಮಿಗಾಗಿ ರೈತರು ಮಾಡಿದ ಹೋರಾಟಗಳಿಗೆ ಕರ್ನಾಟಕದಲ್ಲಿ ಒಂದು ಪರಂಪರೆಯೇ ಇದೆ. 1683ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಎದುರು ಭೂತೆ ರಿಗೆಯ ಹೇರಿಕೆ ವಿರೋದಿsಸಿ ನಡೆದ ಹೋರಾಟದಿಂದ, ಈ ಹೊತ್ತಿನ ಶ್ರೀರಾಮರಂಗಾಪುರದ ಭೂ ಹೋರಾಟದವರೆಗೆ ಅದರ ಹರವು ದೊಡ್ಡದು. ಮೊದಲ ಹಂತದ ಹೋರಾಟಗಳು ಭೂಮಿಯ ತೆರಿಗೆ, ಕಂದಾಯ, ಗೇಣಿಯನ್ನು ವಿರೋದಿsಸಿ ನಡೆದವು. 1947ರ ಈಚೆಗೆ ಭೂಮಿಯನ್ನು ಪಡೆಯುವ ಹಕ್ಕಿಗಾಗಿ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಉಳುವವನೆ ಭೂ ಒಡೆಯ ಎನ್ನುವ ನೆಲೆಯಲ್ಲಿ ಹೋರಾಟಗಳಾದವು. 1970 ರ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಜಾರಿಗೆ ತಂದ `ಉಳುವವನೆ ಭೂ ಒಡೆಯ’ ಎಂಬ ಕ್ರಾಂತಿಕಾರಿ ಯೋಜನೆಯ ಅನುಷ್ಠಾನದ ಕುರಿತಂತೆ ಹೋರಾಟಗಳಾದವು.

srpura1ಕರ್ನಾಟಕದ ಭೂಹೋರಾಟಗಳ ಮೇಲೆ ಭಾರತದ ಇತರೆ ಕಡೆಗಳಲ್ಲಿ ಆದ ಮಾಪಿಳ್ಳೆ ದಂಗೆಗಳು, ಬಾರ್ಡೋಲಿ ಸತ್ಯಾಗ್ರಹ, ವಾರಲಿ ಆದಿವಾಸಿಗಳ ಹೋರಾಟ, ಆಂಧ್ರದ ತೆಲಂಗಾಣ ಹೋರಾಟಗಳ ಪರಿಣಾಮವಾಗಿತ್ತು. ಭೂಮಾಲಿಕಶಾಹಿಯನ್ನು ನಾಶಗೊಳಿಸಬೇಕೆಂಬ ಕಮ್ಯುನಿಸ್ಟರು, ಆರ್ಥಿಕ ಸ್ವಾತಂತ್ರ್ಯದ ಮೂಲಕ ಸಮಾಜವಾದಿ ಸಮಾಜ ನಿರ್ಮಿಸಬೇಕೆಂಬ ಸೋಷಲಿಸ್ಟರು, ರೈತರ ಬಗ್ಗೆ ಆಳುವ ಸರ್ಕಾರದ ನಿರ್ಲಕ್ಷ್ಯ ವಿರೋದಿsಸಿ ರೈತ ಸಂಘದವರು ಬೇರೆ ಬೇರೆ ಆಯಾಮಗಳಲ್ಲಿ ರೈತ ಹೋರಾಟಗಳನ್ನು ರೂಪಿಸಿದರು.
ಈ ಹೊತ್ತಿನಲ್ಲಿ ರೈತ ಹೋರಾಟವನ್ನು ಅಧ್ಯಯನ ಮಾಡುವುದೆಂದರೆ ಭೂತದ ಮೂಲಕ ವರ್ತಮಾನವನ್ನು ಕಟ್ಟಿಕೊಳ್ಳುವ ಕಾಣ್ಕೆಗಳನ್ನು ಪಡೆಯುವುದು ಎಂದೇ ಅರ್ಥ. ನಡೆದಿದೆ ಎನ್ನಲಾಗುವ ಭೂಹೋರಾಟದ ಕಥನ ವರ್ತಮಾನದ ಕಥನವು ಕೂಡ. ಕರ್ನಾಟಕದಲ್ಲಿ ನಡೆದ ಭೂ ಹೋರಾಟಗಳ ಸಂಖ್ಯೆಗೆ ಹೋಲಿಸಿದರೆ ಆ ಕುರಿತು ನಡೆದ ಅಧ್ಯಯನಗಳು ತುಂಬ ಕಡಿಮೆ. ಹೆಚ್ಚಿನವು ಮಾಹಿತಿ ಪ್ರಧಾನವಾಗಿವೆ. ಹೋರಾಟದಲ್ಲಿ ಭಾಗವಹಿಸಿದವರು ಆತ್ಮಕಥನ ಮಾದರಿಯಲ್ಲಿ ನಿರೂಪಿಸುವ ಇನ್ನೊಂದು ಕ್ರಮವಿದೆ. ಅದು ಕನ್ನಡದಲ್ಲಿ ಪ್ರಯೋಗವಾದದ್ದು ಕಡಿಮೆ.

ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಬದುಕಿನ ಭಾಗವಾಗಿ ಭೂಹೋರಾಟ ಸಂಘಟಿಸಿದ್ದ ಗೋದಾವರಿ ಪರುಳೇಕಾರರ ಕಥನವನ್ನು (‘ಮಾನವ ಎಚ್ಚೆತ್ತಾಗ’) ಈ ನೆಲೆಯಲ್ಲಿ ನೋಡಬಹುದು.
ಹೋರಾಟ ನಡೆದ ಕಾಲಘಟ್ಟದ ಆಸುಪಾಸಿನವರು ಹೋರಾಟದಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ, ಪತ್ರಿಕಾ ಬರಹ, ಕರಪತ್ರ ಮುಂತಾದ ಆಕರಗಳನ್ನು ಬಳಸಿಕೊಂಡು ಒಂದು ಹೋರಾಟದ ಚರಿತ್ರೆಯನ್ನು ಕಟ್ಟುವ ಕ್ರಮ ಜನಪ್ರಿಯವಾಗಿದೆ. ಈ ನೆಲೆ ಕನ್ನಡದಲ್ಲಿ ಹೆಚ್ಚು ಬಳಕೆಯಾಗಿದೆ. ಇಂತಹ ನೆಲೆಯಲ್ಲಿಯೆ ವರ್ತಮಾನದ ಎಚ್ಚರಗಳ ಮೂಲಕ ಗತವನ್ನು ಪರಿಶೀಲಿಸುವ ಒಂದು ಮಾದರಿಯಿದೆ. ಕನ್ನಡದಲ್ಲಿ ಜಿ.ರಾಜಶೇಖರ ಅವರು ‘ಕಾಗೋಡು ಸತ್ಯಾಗ್ರಹ’ ಎಂಬ ತಮ್ಮ ಕೃತಿಯಲ್ಲಿ ಇಂತಹ ಪ್ರಯೋಗವನ್ನು ಮಾಡಿದ್ದಾರೆ. ಇದು ಭೂಹೋರಾಟದ ಅಧ್ಯಯನಗಳಿಗೆ ಒಂದು ಮಾದರಿ ಕೃತಿಯಾಗಿದೆ.

ಒಂದು ಭೂ ಹೋರಾಟವನ್ನು ಅದರ ವರ್ತಮಾನದ ಪರಿಣಾಮಗಳ ಮೂಲಕ ನೋಡುವ, ಹೋರಾಟ ಸಂದರ್ಭದ ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ಪರಿದಿsಯಲ್ಲಿಟ್ಟು ಪರೀಕ್ಷಿಸುವ, ಶುದ್ಧ ರಾಜಕೀಯ ಚರಿತ್ರೆಯ ಕಥನವನ್ನಾಗಿಸುವ, ಮಾಹಿತಿಯೊಂದಿಗೆ ಸರಿದೂರವನ್ನು ನಿರ್ಮಿಸಿಕೊಂಡು ವಿಶ್ಲೇಷಿಸುವ, ಒಂದು ಕಾಲಘಟ್ಟದ ಸಾಂಸ್ಕøತಿಕ ಕಥನವನ್ನಾಗಿಸುವ ಮೂಲಕ ಗತ ವರ್ತಮಾನವನ್ನು ಬೆಸೆಯುವ ಸೂಕ್ಷ್ಮತೆಯಲ್ಲಿ ಒಂದು ಹೋರಾಟವನ್ನು ದಾಖಲಿಸುವ ತುರ್ತು ಈ ಕಾಲಕ್ಕಿದೆ. ಇಂದಿನ ಭೂ ಹೋರಾಟಗಳನ್ನು ಕೂಡ ಹೀಗೆ ಕಾಲಕಾಲಕ್ಕೆ ದಾಖಲಿಸುವ ಅಗತ್ಯವಿದೆ.

-ಬರಹಕ್ಕೆ ಮಾಹಿತಿ ಒದಗಿಸಿದ ಕರಿಯಪ್ಪ ಗುಡಿಮನಿ, ರಾಮಚಂದ್ರಪ್ಪ, ಪಂಪರೆಡ್ಡಿ, ಕುಮಾರ ಸಮತಳ, ಪೀರ್ ಭಾಷಾ ಅವರಿಗೆ ಕೃತಜ್ಞತೆಗಳು
ಚಿತ್ರಗಳು: ಪಂಪರೆಡ್ಡಿ.

ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು.


--ಅರುಣ್ ಜೋಳದಕೂಡ್ಲಿಗಿ

ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ ಸಿಕ್ಕಿ ಅಲ್ಪಸಂಖ್ಯಾತ ಸಮುದಾಯಗಳು ತಬ್ಬಲಿತನವನ್ನು ಅನುಭವಿಸುತ್ತಾ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯಗಳು ಪ್ರಜಾಪ್ರಭುತ್ವದ ಬಗೆಗೆ ಭರವಸೆ ಇಲ್ಲದೆ ತಮ್ಮ ಪಾಡಿನ ಬದುಕೇ ನಿಜವೇನೋ ಎನ್ನುವ ಸ್ಥಿತಿಗೂ ಬಂದಿವೆ. ಹಾಗಾಗಿ ಸಮುದಾಯಗಳ ಅಧ್ಯಯನ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಜನರಲ್ಲಿ ಹೊಸ ಭರವಸೆ ಮೂಡಿಸುವ ಭಾಗವೂ ಆಗಿದೆ.
ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ

ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ


ಈ ಹಿನ್ನೆಲೆಯಲ್ಲಿ ಇಂತಹ ತಬ್ಬಲಿ ಸಮುದಾಯಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರಲ್ಲಿ ಹೊಸ ಚೈತನ್ಯವನ್ನು ತುಂಬುವಂತೆ ಸಮುದಾಯ ಅಧ್ಯಯನಗಳು ನಡೆಯಬೇಕಾಗಿದೆ. ಅಂತೆಯೇ ನಾವು ಸಮುದಾಯಗಳನ್ನು ಎದುರಾಗುವಾಗ ಹುಟ್ಟುವ ಪ್ರಶ್ನೆಗಳೂ ಬದಲಾಗಿದೆ. ಆಧುನಿಕ ಶ್ರೇಣೀಕರಣದ ತರತಮದ ವ್ಯವಸ್ಥೆಗಳಿಗೆ ಪೂರಕವಾಗಿ ಸಮುದಾಯಗಳಲ್ಲೂ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಹಲಬಗೆಯ ಏರಿಳಿತಗಳು ಸಂಭವಿಸಿದೆ. ಹಾಗಾಗಿ ಇಂದು ಸಮುದಾಯಗಳನ್ನು ಅಧ್ಯಯನ ಮಾಡುವವರು ಅವನ್ನು ಏಕರೂಪಿ ಆಕೃತಿಯನ್ನಾಗಿ ನೋಡುವಂತಿಲ್ಲ. ಯಾವೊಂದು ಸಂಗತಿಯನ್ನು ಇಡೀ ಸಮುದಾಯಕ್ಕೆ ಅನ್ವಯಿಸಿ ದುಂಡಾಗಿ ಗ್ರಹಿಸುವಂತಿಲ್ಲ.

ಕರ್ನಾಟಕದ ಸಂದರ್ಭದಲ್ಲಿನ ಸಮುದಾಯಗಳ ಅಧ್ಯಯನ ವಸಾಹತುಶಾಹಿ ರೂಪಿಸಿದ ಮಾದರಿಯ ಪ್ರಭಾವದಿಂದ ಸಂಪೂರ್ಣ ಬಿಡಿಸಿಕೊಂಡಿಲ್ಲ. ಹಾಗಾಗಿ ಸಮುದಾಯ ಅಧ್ಯಯನಗಳನ್ನು ಮಾಹಿತಿಗಳ ಆಕರವೆಂಬಂತೆ ಬಡಕಲಾಗಿಯೂ, ಕೃತಕವಾಗಿಯೂ ನಿರ್ಜೀವ ವಸ್ತುಸಂಗತಿಗಳಂತೆ ಮಂಡಿಸಲಾಗುತ್ತಿದೆ. ಈ ಬಗೆಯ ಅಧ್ಯಯನಗಳಲ್ಲಿ ಸಮುದಾಯದ ಜೀವಂತಿಕೆ ಗೈರುಹಾಜರಾಗಿರುತ್ತದೆ. ಇಂತಹ ಮಿತಿಯನ್ನು ಮೀರುವ ಸಣ್ಣ ಪ್ರಯತ್ನವನ್ನು ಈ ಸಂಶೋಧನೆಯಲ್ಲಿ ಮಾಡಲಾಗಿದೆ.
**
ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆರರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ.

ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ಠಕ್ಕರ ಲೂಟಿ ಕೊಲೆ ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಈ ಹಿನ್ನೆಲೆಯ ಒಂದೆಳೆ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರರ ಜತೆ ತಳಕು ಹಾಕಿಕೊಂಡಿದೆ. ಆದರೆ ಗಂಟಿಚೋರರ ಹೆಸರಲ್ಲೇ `ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರೂ ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಸಂತಕವಿ ಕನಕರು `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು. ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳೊಂದಿಗೆ ಸಂಶೋಧನೆಯಲ್ಲಿ ಚರ್ಚಿಸಲಾಗಿದೆ.

ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಈ ಹೆಸರಿನಿಂದ ಗುರುತಿಸಲ್ಪಟ್ಟ ಸಮುದಾಯವೊಂದು (ಮುಂಬೈಕರ್ನಾಟಕ ಪ್ರದೇಶದಲಿ)್ಲ ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿದೆ. ಅಂತೆಯೇ ಈ ಸಮುದಾಯದಲ್ಲಿನ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ ಈ ಸಮುದಾಯದ `ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಕಳ್ಳರ ಕಥೆಗಳು ಸಾಕ್ಷಿಯಂತಿವೆ. ಈ ಸಂಶೋಧನೆಯಲ್ಲಿ ಸಮುದಾಯದ ಶೇ 90 ರಷ್ಟು ಮನೆಗಣತಿ ಮಾಡಿ ಖಚಿತ ಅಂಕೆಸಂಖ್ಯೆಗಳನ್ನು ದಾಖಲಿಸಲಾಗಿದೆ. ಸಧ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5826 (ಗಂ-2892, ಹೆ-2934) ರಷ್ಟಿದೆ. ಗಂಟಿಚೋರರ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ.

**
ಮುಖ್ಯವಾಗಿ ಗಂಟಿಚೋರ್ಸ್ ಸಮುದಾಯ ಐಡೆಂಟಿಟಿ ಪ್ರಶ್ನೆಯನ್ನು ಎದುರಿಸುತ್ತಿದೆ. 1950ರ ಬಾಂಬೆ ಸರಕಾರದ ಸಮುದಾಯಗಳ ಪಟ್ಟಿಯಲ್ಲಿ ಗಂಟಿಚೋರ್ಸ್ ಮತ್ತು ಅದರ ಸಮನಾಂತರ ಪದಗಳಾದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್‍ನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿತು. 1975 ರಲ್ಲಿ ಕರ್ನಾಟಕ ಸರಕಾರವು ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಗಂಟಿಚೋರ್, ಉಚಲ್ಯಾ, ಭಾಮ್ಟಾ, ಟಕಾರಿ, ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಒಂದೇ ಗುಂಪಿಗೆ ಸೇರಿಸಿ, ಆಗ ಪಾತ್ರೂಟ್ ಒಂದನ್ನು ಕೈಬಿಡಲಾಯಿತು.

ಹೀಗಿರುವಾಗ ಕರ್ನಾಟಕ ಸರಕಾರವು 1976 ರಲ್ಲಿ ಮಾಡಿದ ಪರಿಶಿಷ್ಠ ಜಾತಿ, ಪಂಗಡದ ಪಟ್ಟಿಯಲ್ಲಿ `ಗಂಟಿಚೋರ್ಸ್’ನ್ನು ಪರಿಶಿಷ್ಟಜಾತಿಗೆ ಸೇರಿಸಿ ಅದರ ಸಮಾನಂತರ ಪದಗಳನ್ನು ಕೈಬಿಡಲಾಯಿತು. ಕಾರಣ ಒಂದೇ ಸಮುದಾಯಕ್ಕೆ ಸೇರಿದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗ ವಡ್ಡರ್, ಗಿರಣಿ ವಡ್ಡರ್, ಟಕಾರಿ, ಪಾತ್ರೂಟ್ ಹೊರಗುಳಿದು ತಬ್ಬಲಿಗಳಾದವು. ಮುಂದೆ ಕರ್ನಾಟಕ ಸರಕಾರವು 1986 ರಲ್ಲಿ ಇಂದುಳಿದ ವರ್ಗಗಳನ್ನು ಎ.ಬಿ.ಸಿ.ಡಿ.ಇ ಎಂದು ವಿಭಾಗಿಸಿ, `ಎ’ ಗುಂಪಿನಲ್ಲಿ ಭಾಮ್ಟಾ, ಟಕಾರಿ, ಉಚಲ್ಯಾ ಒಂದು ಗುಂಪಾಗಿಯೂ, ವಡ್ಡರ್, ಬೋವಿ ಜಾತಿಯ ಸಮಾನಾಂತರ ಪದಗಳಾಗಿ ಗಿರಣಿ ವಡ್ಡರ್, ತುಡುಗು ವಡ್ಡರ್ ಪದಗಳನ್ನು ಸೇರಿಸಿತು. ಇಲ್ಲಿ ಸ್ಪಷ್ಟವಾಗಿ `ಗಂಟಿಚೋರ್ಸ್’ನ್ನು ಪ್ರತ್ಯೇಕವಾಗಿಸಿತು. ಆಗ ಪಾತ್ರೂಟ್ ದಾಖಲೆಯೂ ಆಗದೆ ಇಲ್ಲವಾಯಿತು.

1994 ರಲ್ಲಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗದ ಸುಧಾರಿತ ಪಟ್ಟಿಯಲ್ಲಿ ಭಾಮ್ಟಾ, ಟಕಾರಿ, ಉಚಲ್ಯಗಳನ್ನು ಒಂದು ಗುಂಪಾಗಿಯೂ, ಬೋವಿ ಅಥವಾ ಬೋಯಿಯ ಸಮನಾಂತರ ಗುಂಪಾಗಿ ಗಿರಣಿವಡ್ಡರ್, ತುಡುಗು ವಡ್ಡರ್ ಪದವನ್ನಾಗಿಯೂ ಸೂಚಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮನಾಂತರ ಪದಗಳಾಗಿದ್ದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕಾದ ಬಿಕ್ಕಟ್ಟು ಗಂಭೀರವಾಗಿದೆ. ಈ ಬಿಕ್ಕಟ್ಟನ್ನು ಸಂಶೋಧನೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ.

ಮುಖ್ಯವಾಗಿ `ಗಂಟಿಚೋರ್ಸ್’ ಎಂಬ `ಕಳ್ಳತನದ’ ಸಾಮಾಜಿಕ ಅಪಮಾನದಿಂದ ಬಿಡುಗಡೆ ಹೊಂದಲು ಈ ಸಮುದಾಯ ಹಿಂದೆ ನಾನಾ ಹೆಸರುಗಳಲ್ಲಿ ಗುರುತಿಸಿಕೊಂಡು ರೂಪಾಂತರ ಹೊಂದಿದೆ. ಇಂದು ಇವರೆಲ್ಲಾ ಪರಿಶಿಷ್ಠ ಜಾತಿಯ ಸೌಲಭ್ಯದ ಕಾರಣಕ್ಕೆ ಯಾವ ಹೆಸರನ್ನು ಕಳಚಿಕೊಂಡು ನಿರಾಳವಾಗಿದ್ದರೋ, ಅದೇ ಸಮುದಾಯ ಮತ್ತೆ ಮರಳಿ ಮನೆಗೆ ಎನ್ನುವಂತೆ `ಗಂಟಿಚೋರ್ಸ್’ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

ಗಂಟಿಚೋರ್ಸ್ ಸಮುದಾಯದಲ್ಲಿ ಯುವಜನತೆಯಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಸಮೀಕ್ಷೆಯಲ್ಲಿ ಒಟ್ಟು 861 ಜನರು ನಿರುದ್ಯೋಗಿಗಳಿದ್ದಾರೆ. ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಶೇ 17 ರಷ್ಟಿದೆ. ಉಳಿದಂತೆ ಶೇ 6.4 ರಷ್ಟು ಗಂಡಸರು ನಿರುದ್ಯೋಗಿಗಳಿದ್ದಾರೆ. ಪ್ರಾದೇಶಿಕವಾಗಿ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ಪರಿಶಿಷ್ಟಜಾತಿಯ ಅಭಿವೃದ್ಧಿ ಯೋಜನೆಗಳಲ್ಲಿ ನಿರುದ್ಯೋಗವನ್ನು ಕೊನೆಗಾಣಿಸುವ ಪ್ರಯತ್ನಗಳು ನಡೆಯಬೇಕಿದೆ.


ಬಾಗಲಕೋಟೆ  ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.

ಈ ಸಮುದಾಯದಲ್ಲಿ ವಸತಿ ಸಮಸ್ಯೆ ದೊಡ್ಡದಿದೆ, ಸಮೀಕ್ಷೆಯ ಒಟ್ಟು 1549 ಕುಟುಂಬಗಳಲ್ಲಿ ಶೇ 0.2 ನಷ್ಟು ಟೆಂಟುಗಳಲ್ಲಿಯೂ, ಶೇ 17.5 ರಷ್ಟು ಗುಡಿಸಲುಗಳಲ್ಲಿಯೂ, ಶೇ 23 ರಷ್ಟು ಬಾಡಿಗೆ ಮನೆಯಲ್ಲಿಯೂ ವಾಸಿಸುತ್ತಿದ್ದಾರೆ. ಶೇ 9.9 ರಷ್ಟು ಮಾತ್ರ ಸರಕಾರಿ ಆಶ್ರಯ ಮನೆಗಳಿವೆ. ಸರಕಾರವು ಗುಡಿಸಲು ಮುಕ್ತ ಕರ್ನಾಟಕವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಾಗಿ ಈ ಯೋಜನೆಗಳಲ್ಲಿ ಗಂಟಿಚೋರರ ವಸತಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಸಮೀಕ್ಷೆಯಲ್ಲಿ ಸಮುದಾಯದ 1201 ರಷ್ಟು ಭೂರಹಿತ ಕುಟುಂಬಗಳು ದಾಖಲಾಗಿದೆ. ಸದ್ಯಕ್ಕೆ 1982 ಜನರು ಕೃಷಿ ಕೂಲಿಗಳಿದ್ದಾರೆ. ಈ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 50 ರಷ್ಟಿದೆ. ಹಾಗಾಗಿ ಭೂರಹಿತರಿಗೆ ಭೂಮಿಯನ್ನು ಕೊಡುವ ಅಗತ್ಯವಿದೆ. ಶೇ 22 ರಷ್ಟು ಈ ಸಮುದಾಯದ ಕುಟುಂಬಗಳ ಬಡವರಿಗೆ ಪಡಿತರ ಚೀಟಿ ಸೌಲಭ್ಯವನ್ನು ಒದಗಿಸಬೇಕಾಗಿದೆ.

ಗಂಟಿಚೋರರು ಇದೀಗ ಸಂಘಟಿತರಾಗುತ್ತಿದ್ದಾರೆ. ಸರಕಾರ ಸಂಘಟನೆಗಳ ಸಹಭಾಗಿತ್ವದ ಮೂಲಕ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕಿದೆ. ಇವರಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯ ಕ್ರೀಡಾಪಟುಗಳಿದ್ದರು, ಈ ಹಿನ್ನೆಲೆಯಲ್ಲಿ ಸಮುದಾಯದ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ. ಸಮುದಾಯವು ಗೋಕಾಕಪಾಲ್ಸ್, ಹುಬ್ಬಳ್ಳಿ, ಗದಗ-ಬೆಟಗೇರಿ, ಬಿಜಾಪುರ, ನರಗುಂದದಲ್ಲಿ ಸೆಟ್ಲಮೆಂಟ್ ವಸತಿಗಳ ತೆರವಿನಿಂದ ಆತಂಕದಲ್ಲಿದೆ. ಈ ವಸತಿಯನ್ನು ಸಮುದಾಯದ ಮೂಲ ನೆಲೆಸಿಗರಿಗೆ ಖಾಯಂ ನೊಂದಾಯಿಸಬೇಕಿದೆ. ಬೆಳಗಾಂ ಜಿಲ್ಲೆಯ ರಾಯಭಾಗ ತಾಲೂಕಿನ ಶಾಹುಪಾರ್ಕ ಎಂಬ ಹಳ್ಳಿಯಲ್ಲಿ 1955 ರಲ್ಲಿ ಸಮುದಾಯದ ಮಕ್ಕಳಿಗೆ ಆಶ್ರಮ ಶಾಲೆ ಆರಂಭವಾಗಿತ್ತು. ಅದೀಗ ಏಳೆಂಟು ವರ್ಷದಿಂದ ನಿಲುಗಡೆಯಾಗಿ ಈ ಭಾಗದ ಗಂಟಿಚೋರ ಮಕ್ಕಳ ಶಿಕ್ಷಣಕ್ಕೆ ತಡೆಯಾಗಿದೆ. ಇದನ್ನು ಸರಕಾರ ಕೂಡಲೆ ಆರಂಭಿಸಬೇಕಿದೆ. ಹೀಗೆ ಇಂತಹ ಹತ್ತಾರು ಫಲಿತಗಳನ್ನು ಸಮುದಾಯವನ್ನು ಸಬಲಗೊಳಿಸುವ ನೆಲೆಯಲ್ಲಿ ಗುರುತಿಸಲಾಗಿದೆ.

ವಯಕ್ತಿಕವಾಗಿ ಸಮುದಾಯ ಅಧ್ಯಯನದ ಮೊದಲ ಪ್ರಯತ್ನವಿದು. ಈ ಅಧ್ಯಯನವೇ ಸಮುದಾಯವನ್ನು ನೋಡುವ ಕಣ್ಣುಗಳನ್ನು ಒದಗಿಸಿದೆ. ಇಲ್ಲಿ ಒಂದು ಸಮುದಾಯದ ನಾಡಿಮಿಡಿತವನ್ನು ಕೇಳಿಸುವಂತಹ ಸಂರಚನೆಯ ವಿಧಾನವನ್ನು ಬಳಸಾಗಿದೆ. ಸಮುದಾಯವೊಂದರ ಚಾರಿತ್ರಿಕ ಪಲ್ಲಟಗಳು ಹೇಗೆ ನಿರಂತರ ರೂಪಾಂತರಕ್ಕೆ ಒಳಗಾಗುತ್ತವೆ, ಈ ಪಯಣದಲ್ಲಿ ಸಮುದಾಯವೊಂದು ಹೇಗೆ ಸಂಘರ್ಷಕ್ಕೆ ಒಡ್ಡಿಕೊಳ್ಳುತ್ತದೆ ಎನ್ನುವುದನ್ನು ಅರಿಯಲು ಪ್ರಯತ್ನಿಸಲಾಗಿದೆ. ಗಂಟಿಚೋರ ಸಮುದಾಯ ಒಂದು ಕಾಲಕ್ಕೆ ಅಪರಾಧಿ ಬುಡಕಟ್ಟೆಂದು ಗುರುತಿಸಿಕೊಂಡು ನಂತರದಲ್ಲಿ ಈ ಗುರುತಿನ ಪೊರೆಯನ್ನು ಕಾಲಕಾಲಕ್ಕೆ ಕಳಚುತ್ತಾ ಬಂದಿರುವ ಪಯಣವೇ ಕುತೂಹಲಕಾರಿಯಾಗಿದೆ.

ಮಂಗಳವಾರ, ಅಕ್ಟೋಬರ್ 18, 2016

ದಲಿತ ಸಾಹಿತ್ಯದ ತಾತ್ವಿತ ನೆಲೆಗಳು

ದಲಿತ ಸಾಹಿತ್ಯದ ತಾತ್ವಿತ ನೆಲೆಗಳು


-ಪ್ರೊ. ರಹಮತ್ ತರೀಕೆರೆ.

ಪ್ರವೇಶ
ಸೂಕ್ಷ್ಮಸಂವೇದನೆಯ ಕವಿತೆಗಳನ್ನು ಬರೆಯುತ್ತಿರುವ ಯುವಕವಿಗಳಲ್ಲಿ ಒಬ್ಬರಾದ, ಎನ್. ಕೆ. ಹನುಮಂತಯ್ಯ ಅವರು ಈಚೆಗೆ ಕನ್ನಡ ವಿಶ್ವವಿದ್ಯಾಲಯದ ದಲಿತಪೀಠದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅದರಲ್ಲಿ ಅವರು ದಲಿತ ಚಳುವಳಿಯ ಸದ್ಯಸ್ಥಿತಿಯನ್ನು ವಿವರಿಸಲು ಬಳಸಿದ ಒಂದು ರೂಪಕ ಬಹಳ ಡಿಸ್ಟರ್ಬಿಂಗ್ ಆಗಿತ್ತು. ಅದೊಂದು ನವಿಲಿನ ರೂಪಕ. ಅವರ ಪ್ರಕಾರ, ಒಂದು ಕಾಲಕ್ಕೆ ದಲಿತ ಲೇಖಕರು ಚಿಂತಕರು ನವಿಲುಗಳಂತೆ ಇದ್ದರು. ನಾಡಿನ ಯಾವ ಮೂಲೆಯಲ್ಲಾದರೂ ದಲಿತರ ಮೇಲೆ ಹಲ್ಲೆಯಾದರೆ, ಕೂಡಲೆ ಅಲ್ಲಿಗೆ ಓಡಿ ಹೋಗುತ್ತಿದ್ದರು. ಜನರ ಜತೆ ಬೆರೆಯುತ್ತಿದ್ದರು. ಅಲ್ಲಿ ಎಚ್ಚರದ ಸಂಘಟನೆಯ ಹೋರಾಟದ ಮೊಟ್ಟೆಗಳನ್ನು ಇಟ್ಟುಬರುತ್ತಿದ್ದರು. ಈಗ ಹಾಗಾಗುತ್ತಿಲ್ಲ. ಎಲ್ಲಿಯಾದರೂ ದಲಿತರ ಮೇಲೆ ದಮನದ ಸುದ್ದಿ ಬಂದರೆ, ಹಿಂದಿನಂತೆ ನವಿಲುಗಳು ಅಲ್ಲಿಗೆ ಹೋಗುವುದಿಲ್ಲ. ಮೊಟ್ಟೆಯಿಡುವುದಿಲ್ಲ. ಯಾಕೆಂದರೆ, ಅವನ್ನು ಕೊಯ್ದು ಮಾಂಸದಂಗಡಿಯಲ್ಲಿ ನೇತುಹಾಕಲಾಗಿದೆ. ಅವನ್ನು ಯಾರಾದರೂ ಈಗ ಖರೀದಿಸಬಹುದು. ಅವಕ್ಕೆ ಹಿಂದಿನಂತೆ ಜೀವವಿಲ್ಲ. ಸುಂದರವಾದ ಗರಿಗಳಿಲ್ಲ. ಮೊಟ್ಟೆಯಿಡುವ ಶಕ್ತಿಯಿಲ್ಲ. ಸಾವಿರಾರು ನದಿಗಲು ಸಂಕಲನದಲ್ಲಿ ಉಳ್ಳವರು ಬೀಸುವ ಬಲೆಗೆ ಸಿಕ್ಕಿಕೊಳ್ಳದೆ ಎತ್ತಿಕೊಂಡು ಹಾರುವ ದಲಿತಶಕ್ತಿಯ ರೂಪಕ ಚಿತ್ರಗಳಿವೆ. ಆದರೆ ಈಗ ಈ ಗರಿಕಳೆದ ನವಿಲುಗಳ ರೂಪಕ.
ಈ ಕತೆಯನ್ನು ಹೇಳುವಾಗ ಹನುಮಂತಯ್ಯನವರಲ್ಲಿ ತಿರಸ್ಕಾರವಿರಲಿಲ್ಲ. ವಿಷಾದ ವೇದನೆಗಳಿದ್ದವು. ಒಂದು ಸಲವಂತೂ ಅವರ ಗಂಟಲು ಕಟ್ಟಿಬಂದಿತು. ಇದಕ್ಕೆ ಒಂದು ಕಾರಣ, ಕವಿ ಸಹಜವಾದ ಭಾವುಕತೆ ಇರಬಹುದು. ಆದರೆ ಅನೇಕ ದಲಿತ ಲೇಖಕರಲ್ಲೂ ಚಿಂತಕರಲ್ಲೂ ಇಂತಹದೊಂದು ವಿಷಾದಯೋಗ ಆವರಿಸಿಬಿಟ್ಟಿದೆ. ಇದಕ್ಕೆ ಈಚೆಗೆ ಕಂಬಾಲಪಲ್ಲಿಯಲ್ಲಿ ಸೇರಿದ್ದ ದಲಿತ ಲೇಖಕರು ದಲೇಕ ಎಂಬ ಹೆಸರಿನಲ್ಲಿ ಪ್ರಕಟಿಸಿದ ಆತ್ಮ ವಿಮರ್ಶೆ ಹಾಗೂ ಹೊಸಹಾದಿಯ ಹುಡುಕಾಟದ ಪ್ರಣಾಳಿಕೆಯೂ ಉದಾಹರಣೆ ಆಗುತ್ತದೆ. ಪ್ರಶ್ನೆಯೆಂದರೆ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಇಂಥ ಹತಾಶೆ ನೋವು ಹುಟ್ಟಿಸುವಷ್ಟು ಪರಿಸ್ಥಿತಿ ಬಿಗಡಾಯಿಸಿದೆಯೋ? ದಲಿತ ಸಂಘಟನೆಗಳು ಶಕ್ತಿ ರಾಜಕಾರಣದಲ್ಲಿ ಮಾಡುತ್ತಿರುವ ಪ್ರಯೋಗಗಳ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲವೋ? ಅಥವಾ ಅತಿ ಸೂಕ್ಷ್ಮತೆ ಅತಿ ಆದರ್ಶವಾದವುಳ್ಳ ಲೇಖಕರು ದೇಶದ ಮತ್ತು ಜಗತ್ತಿನ ಸಾಮಾಜಿಕ ರಾಜಕೀಯ ಆರ್ಥಿಕ ಬದಲಾವಣೆಗಳನ್ನು ಅರಿಯಲಾಗದೆ ಓವರ್ ರಿಯಕ್ಷನ್ ಮಾಡುತ್ತಿದ್ದಾರೆಯೋ?

ಈ ಅನುಮಾನ ಯಾಕೆಂದರೆ, ಹೆಚ್ಚಿನ ದಲಿತ ರಾಜಕಾರಣಿಗಳಿಗೆ ಈ ಬಗೆಯ ವಿಷಾದ ಆವರಿಸಿಲ್ಲ. ಲೇಖಕರಿಗೇ ಯಾಕೆ ಇದು ಕಾಡುತ್ತಿದೆ. ಪರ್ಯಾಯಗಳ ಹುಡುಕಾಟದ ಮಾತಾಡುತ್ತಿದ್ದಾರೆ. ದಲಿತ ಚಳುವಳಿಗೆ ಮಾತ್ರ ದುರವಸ್ಥೆ ಬಂದಿಲ್ಲ. ಇನ್ನೂ ಅನೇಕ ಚಳುವಳಿಗಳಿಗೆ ಕೂಡ ಬಂದಿದೆ. ದಲಿತ ಸಂಘರ್ಷ ಸಮಿತಿ, ಅಥವಾ ದಲಿತ ಚಳುವಳಿ, ದಲಿತ ಸಾಹಿತ್ಯದ ಕಳೆದ ಮೂರು ದಶಕಗಳ ಬಗ್ಗೆ ದುರಂತ ರೂಪಗಳಲ್ಲಿ ಮಾತ್ರ ಹೇಳುವಂತಹದ್ದಿಲ್ಲ. ಅಲ್ಲಿ ವಿಜಯದ ಚಿತ್ರಗಳೂ ಇವೆ. ಕಳೆದ ಮೂರು ದಶಕಗಳಲ್ಲಿ ದಲಿತ ಚಿಂತನೆ, ಸಂಘಟನೆ, ಸಾಹಿತ್ಯಗಳು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಅತ್ಯಂತ ಮಹತ್ವದ ಅಧ್ಯಾಯಗಳು. ಅವು ಕನ್ನಡಕ್ಕೆ ಹೊಸ ಬಗೆ ಕೃತಿಗಳನ್ನು ಕೊಟ್ಟಿವೆ ಎನ್ನುವುದು ಸಾಹಿತ್ಯಕವಾದ ಸೀಮಿತ ಪ್ರಶ್ನೆ. ಅವು ಕನ್ನಡದ ಚಿಂತನ ಕ್ರಮದಲ್ಲಿ, ಕರ್ನಾಟಕದ ರಾಜಕೀಯ ಚಿಂತನೆಯಲ್ಲಿ ಯಾವ ಬಗೆಯ ಪಲ್ಲಟಗಳನ್ನು ತಂದಿವೆ, ಯಾವ ಅನುಭವ ಲೋಕಗಳನ್ನು ತಂದಿವೆ ಎನ್ನುವುದನ್ನು ಮರೆತರೆ ಸಿನಿಕತೆಯಾಗುತ್ತದೆ. ದಲಿತ ಚಳುವಳಿ, ದಲಿತ ಸಾಹಿತ್ಯ, ದಲಿತ ಚಿಂತನೆಗಳು ಇರದಿದ್ದರೆ ಕರ್ನಾಟಕದ ರಾಜಕಾರಣ ಸಮಾಜದ ಸಾಹಿತ್ಯ ಚಿಂತನೆಗಳು ಈಗಿರುವ ಸ್ವರೂಪದಲ್ಲಿ ಖಂಡಿತ ಇರುತ್ತಿರಲಿಲ್ಲ. ಸಾಹಿತ್ಯಕವಾಗಿಯೇ ಮಾತಾಡುವುದಾದರೆ, ಬಹುಶಃ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಈಗಿರುವಂತೆ ಇರುತ್ತಿರಲಿಲ್ಲ. ದಲಿತ ಸಾಹಿತ್ಯ ಸಂಘಟನೆಗಳು ಕಳೆದ ಮೂರು ದಶಕಗಳ ಕನ್ನಡ ಸಾಹಿತ್ಯದ ಸಾಮಾಜಿಕ ನೈತಿಕತೆ, ಪ್ರತಿರೋಧದ ಗುಣ, ನಿರ್ಲಕ್ಷಿತ ನೆಲೆಗಳ ಮೂಲಕ ಚಿಂತಿಸುತ್ತ ಲೋಕ ದೃಷ್ಟಿಯನ್ನೂ ರೂಪಿಸುವ ಗುಣಗಳಿಗೆ ದೊಡ್ಡ ಚೈತನ್ಯವನ್ನು ತುಂಬಿವೆ. ಅನುಮಾನವೇ ಇಲ್ಲ.

ಆದರೂ ಈ ಹೊತ್ತಿನಲ್ಲಿ ಯಾಕೆ ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಗತಕಲದ ಸಾಧನೆಗಳ ನೆನಪುಗಳಿಗಿಂತ, ವರ್ತಮಾನದ ಅವಸ್ಥೆ ತಲ್ಲಣಗಳು ಕಂಗಾಲು ಮಾಡಿವೆ. ಯಾಕೆ ಅವರು ಆತ್ಮಾವಲೋಕನದ ಪರಿಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅದರಲ್ಲೂ ಚಳುವಳಿಗೆ ರಾಜಕೀಯ ಪ್ರಜ್ಞೆಯ ಬರೆಹಕ್ಕೆ ಚಿಂತನೆಗೆ ಹೊಸದಗಿ ಆಗಮಿಸುವ ದಲಿತ ತರುಣ ಲೇಖಕರಿಗೆ ವರ್ತಮಾನವನ್ನು ಇಂಥಹದೊಂದು ವಿಷಾದ ರೂಪಕಗಳಲ್ಲೆ ಗ್ರಹಿಸುವಂತಹ ಪರಿಸ್ಥಿತಿ ಯಾಕಾಗಿ ಬಂದಿದೆ. ಈ ಪ್ರಶ್ನೆ ಉಳಿಯುತ್ತದೆ. ಇದಕ್ಕೆ ಉತ್ತರ ಸರಳವಾಗಿಲ್ಲ. ಆದರೆ ಇದಕ್ಕೆ ಉತ್ತರದ ಒಂದು ಭಾಗವು ಸಮಕಾಲೀನ ರಾಜಕೀಯ ಆರ್ಥಿಕ ಸಾಮಾಜಿಕ ವಿದ್ಯಮಾನಗಳಲ್ಲಿದೆ. ಇನ್ನೊಂದು ಭಾಗವು ಕಳೆದ ಕಾಲು ಶತಮಾನದ ದಲಿತ ರಾಜಕಾರಣ, ಸಾಹಿತ್ಯ, ಚಿಂತನೆಗಳ ಚರಿತ್ರೆಯಲ್ಲಿ ಇದೆ. ಕನ್ನಡದ ದಲಿತ ಸಾಹಿತ್ಯದ ತಾತ್ವಿಕತೆಯ ಚಿತ್ರವನ್ನು ಈ ಚರಿತ್ರೆ ಹಾಗೂ ವರ್ತಮಾನದ ಭಿತ್ತಿಯಿಲ್ಲದೆ ವಿವರಿಸಲು ಸಾಧ್ಯವಿಲ್ಲ. ಒಂದರ್ಥದಲ್ಲಿ ದಲಿತ ಸಾಹಿತ್ಯ ಹಾಗೂ ಸಂಘಟನೆಗಳ ಕೂಡು ಚರಿತ್ರೆ ಶುರುವಾಗುವುದು ೧೯೭೬ರಲ್ಲಿ ಭದ್ರಾವತಿಯಲ್ಲಿ ನಡೆದ ಒಂದು ಸಭೆಯಿಂದ ಅದರ ಹೆಸರು. ‘ದಲಿತ ಬರಹಗರರ ಕಲಾವಿದರ ಸಭೆ’ ದಲಿತ ಸಂಘರ್ಷ ಸಮಿತಿಯ ಸ್ಥಾಪನೆಗೆ ಕಾರಣವಾದ ಈ ಸಭೆಯಲ್ಲಿ ದಲಿತ ಲೇಖಕರೂ, ಚಿಂತಕರೂ ಆದ ದೇವನೂರು ಮಹಾದೇವ, ಬಿ. ಕೃಷ್ಣಪ್ಪ, ಸಿದ್ಧಲಿಂಗಯ್ಯ, ಇಂದೂಧರ ಹೊನ್ನಾಪುರ, ಕೆ. ರಾಮಯ್ಯ ಮುಂತಾದವರು ಇದ್ದರು. ಇದಾದ ಸುಮಾರು ೨೮ ವರುಷಗಳ ಬಳಿಕ. ಈಚೆಗೆ ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ದಲಿತ ಲೇಖಕರ ಕಲಾವಿದರ ಒಂದು ಪುಟ್ಟ ಸಭೆ ಸೇರಿತ್ತು. ಈ ಸಭೆಗೆ ನಾಗಲಾಪಲ್ಲಿ ಕಂಬಾಲಪಲ್ಲಿಗಳಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯಗಳು ಕಾರಣವಾಗಿದ್ದವು. ಇದರಲ್ಲಿ ಕೆ. ರಾಮಯ್ಯ, ಗೋವಿಂದಯ್ಯ, ಇಂಧೂದರ ಹೊನ್ನಾಪುರ, ಕೆ. ಬಿ. ಸಿದ್ಧಯ್ಯ, ದು. ಸರಸ್ವತಿ ಮುಂತದ ದಲಿತ ಲೇಖಕರಿದ್ದರು. ಈ ಸಭೆಯ ಸಂಘಟಕರು, ‘ದಲೇಕ’ ಎಂದು ಕರೆದುಕೊಂಡರು. ಮೊದಲನೆಯದು ಹುಟ್ಟಿನ ಸಭೆಯಾದರೆ, ಈ ಸಭೆಯನ್ನು ಲೇಖಕರು ‘ದಲಿತ ಚಳುವಳಿಯ ಮರುಹುಟ್ಟು’ ಎಂದು ಕರೆದುಕೊಂಡರು. ಕರ್ನಾಟಕದ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಾಹಿತ್ಯಗಳ ತಾತ್ವಿಕ ಸ್ವರೂಪವನ್ನು ಗುರುತಿಸಲು, ಎರಡು ಸಭೆಗಳನ್ನು ಸಾಂಕೇತಿಕವಾಗಿ ಗ್ರಹಿಸಬಹುದು. ಎರಡರಲ್ಲೂ ಲೇಖಕರೇ ಮುಖ್ಯ ಪಾತ್ರಧಾರಿಗಳು. ಅವರು ಚರ್ಚಿಸಿದ್ದು ಸಾಹಿತ್ಯಕ್ಕಿಂತ ಮಿಗಿಲಗಿ ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ವಿದ್ಯಮಾನಗಳನ್ನು; ಇದು ಸರಿ ಕೂಡ. ೧೯೭೬ರ ‘ದಬಕಸ’ ದಿಂದ ಡಿ. ಎಸ್. ಎಸ್. ಹುಟ್ಟಿದರೆ, ೨೦೦೨ರ ‘ದಲೇಕ’ ವು ಡಿ. ಎಸ್. ಎಸ್. ಛಿದ್ರವಾಗಿರುವ ನೋವಿನ ಹಿನ್ನೆಲೆ ಇಟ್ಟುಕೊಂಡು ಸಭೆ ಸೇರಿತ್ತು. ಮೊದಲನೆಯದು ಹುಟ್ಟುವ ಆಶಯದ್ದು. ಎರಡನೆಯದು ಮರುಹುಟ್ಟುವ ಆಶಯದ್ದು. ಈ ಎರಡು ಸಭೆಗಳ ನಡುವಿನ ಕಾಲಾವಧಿಯಲ್ಲಿ ಕರ್ನಾಟಕ, ಭಾರತಗಳನ್ನು ಒಳಗೊಂಡಂತೆ, ಜಗತ್ತಿನಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಈ ಲೇಖನದಲ್ಲಿ ಚಾರಿತ್ರಿಕವಗಿ ಈ ಕಾಲಾವಧಿಯನ್ನು ದಲಿತ ಸಾಹಿತ್ಯದ ತಾತ್ವಿಕ ಚಿಂತನೆ ಮಾಡಲು ಇಟ್ಟುಕೊಳ್ಳಲಾಗಿದೆ. ಈ ಕಾರಣಕ್ಕೆ ಈ ವಿಶ್ಲೇಷಣೆಯನ್ನು ‘ದಬಕಸದಿಂದ ದಲೇಕದವರೆಗೆ’ ಎಂದು ಕರೆಯಬಹುದು.

ದಲಿತ ಸಾಹಿತ್ಯ ಕಥನ
ದಲಿತ ಸಾಹಿತ್ಯದ ಸ್ವರೂಪಕ್ಕೂ ದಲಿತ ಸಮುದಾಯಗಳಲ್ಲಿ ಉಂಟಾಗಿರುವ ಪರಿವರ್ತನೆಗಳಿಗೂ ಇರುವ ಸಂಬಂಧ ಕಾರ್ಯಕಾರಣ ರೀತಿಯದ್ದಲ್ಲ. ಆದರೂ ಅವುಗಳ ನಡುವೆ ಒಂದು ಬಗೆಯ ಸಾವಯವ ಸಂಬಂಧವಿದೆ. ಸದ್ಯಕ್ಕಂತೂ ದಲಿತ ಲೇಖಕರ ವಿಷಾದಗಳಿಗೂ ದಲಿತ ಚಳುವಳಿಗೂ ಇರುವ ಸಂಬಂಧ ಅಂತಹದ್ದು. ಇದಕ್ಕೆ ದಲಿತ ಸಂಘಟನೆ ಛಿದ್ರವಾಗಿ, ಪರಸ್ಪರ ಬಣಗಳು ಕಿತ್ತಾಡುವುದು, ಅವು ವಿಶಾಲ ದಲಿತ ಸಮುದಾಯದ ಹಿತಾಸಕ್ತಿ ಪ್ರತಿನಿಧಿಸುವ ರಾಜಕೀಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವುದು, ದಲಿತ ನಾಯಕರು ನೈತಿಕತೆಯನ್ನು ಕಳೆದುಕೊಂಡಿರುವುದು, ಅವರನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು, ದಲಿತ ಚಳುವಳಿ ಎಡಗೈ ಬಲಗೈ ಎಂದು ಒಡೆದು ಹೋಗಿರುವುದು, ಕೋಮುವಾದವು ತಲೆಯೆತ್ತಿರುವುದು, ಜಾಗತೀಕರಣದ ಯುಗವು ಬಂದು ದಲಿತರಿಗೆ ಇದ್ದ ಮೀಸಲಾತಿಯ ಪರಿಕಲ್ಪನೆಯನ್ನೇ ಅಸಂಬದ್ಧ ಮಾಡಿರುವುದು ಇತ್ಯಾದಿ ಕಾರಣಗಳೆಂದು ಪಟ್ಟಿಮಾಡಬಹುದು. ಈ ಎಲ್ಲ ಬಿಕ್ಕಟ್ಟುಗಳ ಒಳಗೆ ಹೊಸ ದಲಿತ ಲೇಖಕರ ಚಿಂತಕರ ಕಾರ್ಯಕರ್ತರ ತಲೆಮಾರು ವಿಚಿತ್ರವಾದ ಗೊಂದಲ ಹಾಗೂ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಹನುಮಂತಯ್ಯನಂತಹ ತರುಣ ಕವಿಯದು ಅಂತಹ ಒಂದು ಪ್ರಾತಿನಿಧಿಕ ಪ್ರತಿಕ್ರಿಯೆ ಅಷ್ಟೆ.
ಪ್ರಶ್ನೆಯೆಂದರೆ, ಯಾಕೆ ಹೊಸತಲೆಮಾರಿನಲ್ಲಿ ಈ ಸಾಹಿತ್ಯ ಚಳುವಳಿ ಸಂಘಟನೆಗಳು ಯಾವುದೇ ಭರವಸೆಯನ್ನು ಕೊಡದಷ್ಟು ನಿರಾಶೆ ಹುಟ್ಟಿಸಿವೆ ಎನ್ನುವುದು ಅಥವಾ ದಲಿತ ಸಂಘಟನೆ ಚಳುವಳಿ ಸಾಹಿತ್ಯಗಳಿಗೆ ಗರಬಡಿದಂತಾಗಿದೆ ಎಂದು ವಿಷಾದ ಮಾಡುತ್ತಿರುವವರು ಮುಖ್ಯವಗಿ ಲೇಖಕರು ಯಾಕಾಗಿದ್ದಾರೆ ಎನ್ನುವುದು. ಯಾಕೆಂದರೆ ಕೆಲವು ದಲಿತ ರಾಜಕಾರಣಿಗಳು ಈ ಹೊತ್ತು ದಲಿತರು ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳನ್ನು ಕಟ್ಟುವಂಥ ಅಥವಾ ಅಧಿಕಾರಸ್ಥ ಪಕ್ಷಗಳ ಜತೆ ಚೌಕಾಸಿ ಕುದುರಿಸುವಂಥ ಶಕ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ವಾದಿಸುತ್ತಾರೆ. ಇದೊಂದು ವೈರುಧ್ಯ ಹಾಗಾದರೆ, ಸಾಮಾಜಿಕ ರಾಜಕೀಯ ಬೆಳವಣಿಗೆಯನ್ನು ರಾಜಕೀಯ ವಿಶ್ಲೇಷಕರು ಗ್ರಹಿಸುವುದಕ್ಕೂ ಕವಿ ಕಲಾವಿದರು ಗ್ರಹಿಸುವುದಕ್ಕೂ ವ್ಯತ್ಯಾಸಗಳು ಇವೆಯೇ? ವಾಸ್ತವದಲ್ಲಿ ದಲಿತ ಸಾಹಿತ್ಯ ಹಾಗೂ ಚಳುವಳಿಗೆ ಸಂಬಂಧಿಸಿದಂತೆ ಮೊದಲ ಘಟ್ಟದ ಲೇಖಕರ, ಚಿಂತಕರ, ಚಳುವಳಿಗಾರರ ನಡುವೆ ಅಂತಹ ವ್ಯತ್ಯಾಸಗಳಿರಲಿಲ್ಲ. ಯಾಕೆಂದರೆ ಎಲ್ಲ ದಲಿತ ಲೇಖಕರೂ ರಾಜಕೀಯ ಚಿಂತಕರೇ ಆಗಿದ್ದರು. ಚಳುವಳಿ ಪ್ರಧಾನವದ ಸಾಹಿತ್ಯದಲ್ಲಿ ಅಥವಾ ಸಾಹಿತ್ಯ ಪ್ರಧಾನವಾಗಿರುವ ಚಳುವಳಿಗಳಲ್ಲಿ ಅದರ ಚಿಂತಕರು (ಐಡಲಾಜಿಗಳು) ಹಾಗೂ ಲೇಖಕರು (ಕಲ್ಪನೆ ಅನುಭವ ಪ್ರಧಾನವಾದ ಸಾಹಿತ್ಯ ರಚಿಸುವವರು) ಬೆರೆಯಾಗಿರುವುದಿಲ್ಲ. ರಾಜಕೀಯ ಕ್ರಿಯೆಯನ್ನುಳ್ಳ ಎಲ್ಲ ಚಳುವಳಿ ಸಂಬಂಧಿ ಸಾಹಿತ್ಯಗಳಲ್ಲೂ ಈ ಸಂಬಂಧ ಹತ್ತಿರವಾಗಿರುತ್ತದೆ ಅಥವಾ ವ್ಯತ್ಯಾಸವೇ ಇರುವುದಿಲ್ಲ. ವಚನ ಚಳುವಳಿ ಇದಕ್ಕೆ ಹಳೆಯ ಉದಾಹರಣೆ. ಈ ಕಾರಣಕ್ಕೆ ದಲಿತ ರಾಜಕಾರಣ, ದಲಿತ ಸಾಹಿತ್ಯ, ದಲಿತ ಚಿಂತನೆ ಇವೆಲ್ಲವನ್ನು ಒಂದೆ ಪಾತಳಿಯಲ್ಲಿ ಇಟ್ಟು ಚರ್ಚಿಸುವುದು ಸರಿ ಮಾತ್ರವಲ್ಲ, ಅನಿವಾರ್ಯ ಕೂಡ. ಕನ್ನಡ ದಲಿತ ಸಾಹಿತ್ಯದ ಮಟ್ಟಿಗಂತೂ ಈ ರಾಜಕೀಯ, ಆರ್ಥಿಕ, ಸಾಮಾಜಿಕ ವಿದ್ಯಮಾನಗಳು ಬೇರೆ ಅಲ್ಲ. ದಲಿತ ರಾಜಕಾರಣದ ಭಾಗವಾಗಿಯೆ ದಲಿತ ಸಾಹಿತ್ಯ ಹುಟ್ಟಿ ಬಂದಿತು ಅಥವಾ ದಲಿತ ಸಾಹಿತಿಗಳ ಕ್ರಿಯಾಶೀಲ ಭಾಗವಹಿಸುವಿಕೆಯಿಂದಲೇ ದಲಿತ ರಾಜಕಾರಣ, ದಲಿತ ಚಿಂತನೆಗಳು ಹುಟ್ಟಿಬಂದವು. ಇದೊಂದು ಏಕೀಭವಿಸುವಿಕೆ. ೧೯೭೭ರ ದಬಕಸ ಹಾಗೂ ೨೦೦೨ರ ದಲೇಕ ಎರಡೂ ಸಮಾವೇಶಗಳಲ್ಲಿ, ದಲಿತ ಲೇಖಕರು ರಾಜಕೀಯ ಚರ್ಚೆಗಳನ್ನು ಮಾಡಿದರು. ಇದನ್ನು ಮೇಲೆ ಚರ್ಚಿಸಿದ ಏಕೀಭವಿಸುವಿಕೆಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ಹಾಗೆಂದು ದಲಿತ ಚಳುವಳಿ ಹಾಗೂ ಸಾಹಿತ್ಯ ಒಂದರ ಪಡಿನೆಳಲು ಇನ್ನೊಂದಲ್ಲ. ಇವುಗಳ ನಡುವೆ ಸಾಮ್ಯಗಳಿರುವುದಕ್ಕಿಂತ ವ್ಯತ್ಯಾಸಗಳೂ ಕಾಂತಿಹೀನವಾಗಿದೆ. ಹೆಚ್ಚಿನ ಸಲ ಈ ಶಿಥಿಲತೆಯ ಉದ್ಘಾಟನೆಯನ್ನು ದಲಿತ ಲೇಖಕರೇ ಉದ್ಫಾಟಿಸಿರುವುದುಂಟು. ಆದರೂ ಚಳುವಳಿಯ ಭಾಗವಾಗಿ ಜೀವಂತ ಸಾಹಿತ್ಯ ಸೃಷ್ಟಿಸಲು ಹವಣಿಸುವ ಸಾಹಿತ್ಯ ತನ್ನ ಕಾಂತಿಹೀನತೆ ನೀಗಿಕೊಂಡು ಜೀವಂತಿಕೆ ತುಂಬಿಕೊಳ್ಳಲು ಚಳುವಳಿಗಳನ್ನು ಚೈತನ್ಯಗೊಳಿಸುತ್ತದೆ. ಅದಕ್ಕಾಗಿ ಪರಿತಾಪ ಪಟ್ಟು ಆತ್ಮ ವಿಮರ್ಶೆಯ ಕರಕಿನಿಂದ ಹೊರಬಂದು ಹೆಚ್ಚು ನೈತಿಕ ಉರಿಯಿಂದ ಧಗಧಗಿಸಲು ಯತ್ನಿಸುತ್ತದೆ. ಇದು ದಲಿತ ಸಾಹಿತ್ಯ ಹಾಗೂ ಅದರ ರಾಜಕೀಯ ಸಾಮಾಜಿಕ ಚಳುವಳಿ ಸಂಘಟನೆಗಳ ನಡುವಣ ಸಂಕೀರ್ಣ ಸಂಬಂಧ. ಅದರಲ್ಲೂ ದಲಿತರು ಶಕ್ತಿ ರಾಜಕಾರಣದಲ್ಲಿ ಧುಮುಕಿದ ಬಳಿಕ, ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಒಳಗೆ ಗುರುತಿಸಿಕೊಳ್ಳಲಾರಂಭಿಸಿದಾಗ, ಚಳವಳಿ, ರಾಜಕಾರಣ, ಸಾಹಿತ್ಯ, ಚಿಂತನೆಗಳ ನಡುವೆ ಬಿಕ್ಕಟ್ಟು ಹುಟ್ಟಿಕೊಂಡು, ಕಂದರವಾಗಿ ಬಾಯ್ದೆರೆದು ನಿಂತಿತು. ನವಿಲುಗಳು ಮಾಂಸದಂಗಡಿಯಲ್ಲಿ ತೂಗುತ್ತಿರುವ ರೂಪಕದಲ್ಲಿರುವ ವಿಷಾದವು ಈ ಬಿಕ್ಕಟ್ಟನ್ನು ಉತ್ಪ್ರೇಕ್ಷೆಯಿಂದ ಸೂಚಿಸಿರುವ ಒಂದು ಕವಿ ಗ್ರಹಿಕೆಯಾಗಿದೆ. ಪ್ರಶ್ನೆಯೆಂದರೆ ಈ ಬಿಕ್ಕಟ್ಟಿನ ಸ್ವರೂಪವೇನು? ಈ ಬಿಕ್ಕಟ್ಟಿಗೆ ಕಾರಣವೇನು? ಇದು ದಲಿತ ಸಾಹಿತ್ಯದ ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ತಿಳಿವಳಿಕೆ.
ಯಾವುದೆ ಚಳವಳಿ ಸಾಹಿತ್ಯ ಅಥವಾ ಚಿಂತನೆಯ ಶಕ್ತಿ ಇರುವುದು ಅದರ ನೈತಿಕ ಬಲದಲ್ಲಿ ಮಾತ್ರವಲ್ಲ. ಅದು ತನ್ನ ಮುಂದೆ ಬರುವ ಹೊಸ ಹೊಸ ಸವಾಲಿನಂತಹ ವಿದ್ಯಮಾನಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ, ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಅದರ ಜತೆಗೆ ತನ್ನ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ ಎಂಬ ರಾಜಕೀಯ ಪ್ರಬುದ್ಧತೆ ಹಾಗೂ ವಿವೇಚನೆಯ ಮೇಲೆ ದಲಿತ ಸಂಘಟನೆ, ಚಳವಳಿ, ಸಾಹಿತ್ಯ ಹಾಗೂ ಚಿಂತನೆಗಳು ಈಗ ಕವಲುದಾರಿಯಲ್ಲಿ ಅಥವಾ ಗೊಂದಲದಲ್ಲಿ ನಿಂತಿರಲು ಬಹುಶಃ ಕೆಲವು ಕಾರಣಗಳಿದ್ದಂತಿವೆ. ಮೊದಲನೆಯದಾಗಿ, ಕಳೆದ ಕಾಲುಶತಮಾನದಿಂದ ನಡೆದಿರುವ ಕೋಮುವಾದ, ಜಾಗತೀಕರಣ, ಖಾಸಗೀಕರಣ, ದಲಿತರ ಆಧುನೀಕರಣ, ದಲಿತ ಸಂಘಟನೆಗಳು ಶಕ್ತಿರಾಜಕಾರಣದ ಭಾಗವಾಗಿದ್ದು ಇವೆಲ್ಲವೂ ಒಂದರೊಳಗೊಂದು ಕಲಿಸಿಕೊಂಡು ಸಂಕೀರ್ಣ ರೂಪದಲ್ಲಿ ನಿಂತಿರುವುದು. ಎರಡನೆಯದಾಗಿ ಇದನ್ನು ಅರ್ಥಮಾಡಿಕೊಳ್ಳಲು ಹಾಗೂ ಸೂಕ್ತ ನಿಲುವನ್ನು ತಾಳಲು ಬೇಕಾದ ಬೌದ್ಧಿಕ ತಾತ್ವಿಕ ಸಿದ್ಧತೆ ಹೆಚ್ಚಿನ ದಲಿತರಲ್ಲಿ ಇಲ್ಲದಿರುವುದು. ಮೂರನೆಯದಾಗಿ ಕಳೆದ ೫೦ ವರುಷಗಳಿಂದ ಬದಲಾಗುತ್ತಿದ್ದರೂ ಆಧುನೀಕರಣಗೊಳ್ಳುತ್ತಿದ್ದರೂ, ದಲಿತ ಸಮಾಜದಲ್ಲಿ ನಡೆದ ಬಿಡುಗಡೆ ಪ್ರಕ್ರಿಯೆಯೂ ಇನ್ನೂ ಪೂರ್ಣಗೊಂಡಿಲ್ಲದಿರುವುದು. ಅಲ್ಲಿ ಇನ್ನೂ ವಿವಿಧ ಬದಲಾವಣೆಯ ವಿವಿಧ ಹಂತಗಳಲ್ಲೇ ಉಳಿದುಬಿಟ್ಟಿರುವ ಗುಂಪುಗಳಿದ್ದು, ದಲಿತ ಚಳುವಳಿಯನ್ನು ಮಧ್ಯಮವರ್ಗದ ದಲಿತರ ಬಿಕ್ಕಟ್ಟುಗಳು ನಿರ್ದೇಶಿಸುತ್ತಿರುವುದು. ಹೀಗಾಗಿ ವರ್ತಮಾನದ ವಿದ್ಯಮಾನಗಳನ್ನು ಯಾವ ಹಂತದ ದಲಿತರ ನೆಲೆಯಿಂದ ಗ್ರಹಿಸಬೇಕು, ಮೌಲ್ಯಮಾಪನ ಮಾಡಬೇಕು ಎಂಬ ಸಮಸ್ಯೆಯಿದೆ. ಇದನ್ನು ದಲಿತರು ಕೋಮುವಾದ ಜಾತೀಕರಣ ಮುಂತಾದ ವಿದ್ಯಮಾನಗಳಿಗೆ ಮಾಡುತ್ತಿರುವ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ದಲಿತ ಲೇಖಕರು ಮತ್ತು ಕೋಮುವಾದದ ಕಲ್ಪನೆ

ಕೋಮುವಾದಕ್ಕೆ ಪ್ರತಿಕ್ರಿಯಿಸುವಲ್ಲಿ ದಲಿತ ಚಿಂತಕರು ಹಾಗೂ ಲೇಕಕರು ಒಂದು ಬಗೆಯ ಸ್ಪಷ್ಟತೆಯನ್ನು ಪ್ರಕಟಿಸಿದ್ದಾರೆ. ಆದರೂ ಹೆಚ್ಚಿನ ದಲಿತರಿಗೆ ಕೋಮುವಾದ ಒಂದು ಗಂಭೀರ ಸಮಸ್ಯೆಯಾಗಿ ಕಂಡಿಲ್ಲ. ಅವರಿಗೆ ಅದು ಹೆಚ್ಚೆಂದರೆ ದಲಿತ ವಿರೋಧಿಯಾದ ಬ್ರಾಹ್ಮಣ ಸನಾತನವಾದದ ಪುನರುತ್ಥಾನವಾದವಾಗಿ ಕಂಡಿದೆ. ಇದಕ್ಕೆ ಒಂದು ಕಾರಣ. ಕರ್ನಾಟಕದ ದಲಿತರಿಗೆ ದೈನಿಕ ಬದುಕಿನಲ್ಲು ಮೂರ್ತ ಮತ್ತು ನೇರ ಎದುರಾಳಿಯಾಗಿರುವುದು ಗ್ರಾಮೀಣ ಮಧ್ಯಮ ಜಾತಿಗಳ ಭೂಮಾಲಿಕ ವ್ಯವಸ್ಥೆ. ಅದ್ದರಿಂದ ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ದಲಿತರು ಒಗ್ಗೂಡಬೇಕು ಎಂಬ ಸಮುದಾಯವಾದಿ ರೂಪದಲ್ಲಿ ದಲಿತ ಚಳುವಳಿಯನ್ನು ಸಂಘಟಿಸಬಯಸುವವರಿಗೆ, ಕೋಮುವಾದವು ಮುಸ್ಲಿಮರ ಸಮಸ್ಯೆಯಾಗಿ ಕಂಡಿದ್ದರೆ ಆಶ್ಚರ್ಯವಲ್ಲ. ಅನೇಕ ದಲಿತರು ಕೋಮುವಾದಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು, ದಲಿತ ಚಳವಳಿಗಳ ಗೈರುಹಾಜರಾತಿಯನ್ನೇ ಸೂಚಿಸುತ್ತದೆಯೋ ಅಥವಾ ದಲಿತ ಚಳುವಳಿ ಸಮುದಾಯವಾದಿ ರಾಜಕಾರಣದಾಚೆ ಹೋಗಿ ವಿಶಾಲ ಎಡಪಂಥೀಯ ರಾಜಕಾರಣದ ಗುರುತಿಸಿಕೊಳ್ಲುವುದಕ್ಕೆ ಹಿಂಜರಿಕೆ ತೋರಿದ್ದರ ಪರಿಣಾಮವೋ. ಇದರ ಜತೆಗೆ ಶಕ್ತಿರಾಜಕಾರಣದ ಅವಕಾಶವಾದಿ ಒಪ್ಪಂದಗಳ ಪರವಾಗಿ ಚಿಂತಿಸುವ ದಲಿತರು ಕೋಮುವಾದದ ಬಗ್ಗೆ ತಟಸ್ಥರಂತೆ ಕಾಣುತ್ತಾರೆ. ಇದಕ್ಕೆ ಕಾರಣ ಉತ್ತರ ಭಾರತದಲ್ಲಿ ದಲಿತ ನೇತೃತ್ವದ ರಾಜಕೀಯ ಪಕ್ಷವಾದ ಬಹುಜನ ಸಮಾಜ ಪಕ್ಷವು ಕೋಮುವಾದಿ ರಾಜಕಾರಣದ ಜತೆ ಕೈಗೂಡಿಸಿರುವುದು. ಇದರಿಂದ ಕರ್ನಾಟಕದಲ್ಲಿ ಬಹುಜನ ಸಮಾಜ ಪಕ್ಷ ಬೆಳೆಸಲು ಉಂಟಾಗಿರುವ ತಾತ್ವಿಕ ಮುಜುಗರಗಳಿವೆ. ಇದರಿಂದ ಎಷ್ಟೋ ದಲಿತರು ಕೋಮುವಾದಿ ಸಂಘಟನೆಗಳಿಗೆ ಹೋಗುವುದನ್ನು ತಡೆಯಲು ಪರ್ಯಾವಾದ ದಲಿತ ಸಂಘಟನೆ ತಾತ್ವಿಕತೆಗಳು ಅಸಹಾಯಕವಾಗಿವೆ.

ಜಾಗತೀಕರಣ ಕುರಿತು ಒಟ್ಟು ಕನ್ನಡ ಚಿಂತನೆಯಲ್ಲಿ ಇರುವಂತೆ ದಲಿತ ಚಿಂತಕರಲ್ಲೂ ಸಾಮಾನ್ಯ ಗೊಂದಲಗಳಿವೆ. ಈಗ ಜಾಗತೀಕರಣ ಈ ದೇಶದ ಆರ್ಥಿಕತೆಯನ್ನು ಯಾವ ಬಗೆಯಲ್ಲಿ ಬದಲಿಸಬಲ್ಲದು ಎಂಬ ಮೊದಲ ಪ್ರಶ್ನೆಯನ್ನು ಬಿಟ್ಟುಕೊಟ್ಟು, ಜಾಗತೀಕರಣದ ಅಂಗಾಂಗಗಳಂತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದಲಿತರಿಗೆ ಮೀಸಲಾತಿ ಇರುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು ಕೂಡ ಚರ್ಚಿಸಲಾಗುತ್ತಿದೆ. ಜಾಗತೀಕರಣವನ್ನು ತಾತ್ವಿಕವಾಗಿ ಒಪ್ಪಕೊಂಡ ಬಳಿಕ ಹುಟ್ಟುವ ಪ್ರಶ್ನೆಯಿದು. ಇದು ದಲಿತ ಸಮುದಾಯಗಳು ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶಗಳಲ್ಲಿ ನಮಗಾಗುವ ಲಾಭವೇನು ಎಂಬ ನೆಲೆಯಲ್ಲಿ ರೋಚಿಸುತ್ತಿರುವುದರ ಪರಿ ಕೂಡ. ಇದು ಬೌದ್ಧಿಕ ಗೊಂದಲವಲ್ಲ. ಬದಲಾಗಿ ರಾಜಕೀಯವಾಗಿ ಸಾಮಾಜಿಕವಾಗಿ ದಲಿತರು ಚಿಂತಿಸಿರುವ ಅವಕಾಶವಾದಿ ವಿಧಾನ ಕೂಡ ರಾಜಕೀಯವಾಗಿ ಸಾಮಾಜಿಕವಾಗಿ ದಲಿತರು ಚಿಂತಿಸಿರುವ ಅವಕಾಶವಾದಿ ವಿಧಾನ ಕೂಡ ಆಗಿದೆ. ಜಾತಿಪದ್ದತಿಯ ದಬ್ಬಾಳಿಕೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಜಾತೀಕರಣವನ್ನು ಅರ್ಥಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ; ಅಷ್ಟೇ. ಬಸವಣ್ಣ, ಬುದ್ಧ, ಅಂಬೇಡ್ಕರ್, ಫುಲೆಯವರ ಚಿಂತೆನಗಳು ಹಾಗೂ ದಲಿತರ ಸ್ವತಃ ಅನುಭವಗಳು ಜಾತಿ ಹಾಗೂ ಭೂಮಾಲಿಕ ಪದ್ಧತಿಯ ಕ್ರೌರ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಆದರೆ ಅಂತಾರಾಷ್ಟ್ರೀಯ ಆರ್ಥಿಕ ರಾಜಕಾರಣದ ಭಾಗವಾಗಿರುವ ಜಾಗತೀಕರಣವನ್ನು ಆರ್ಥ ಮಾಡಿಕೊಳ್ಳುವುದಕ್ಕೂ ಅವಕ್ಕೆ ಪ್ರತಿಕ್ರಿಯಿಸುವುದಕ್ಕೂ ಅವು ಸಾಲುವುದಿಲ್ಲ. ಕೆಲವೇ ದಲಿತ ಚಿಂತಕರು ಮಾತ್ರ ಭಾರತದ ಬಂಡವಾಳಶಾಹಿ ವ್ಯವಸ್ಥೆಗೂ ಕೋಮುವಾದಕ್ಕೂ (ಆಂದರೆ ಮೇಲುಜಾತಿಗಳಿಗೂ) ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿಗೂ ಇರುವ ಆಂತರಿಕ ಸಂಬಂಧಗಳನ್ನು ಅರಿಯಬಲ್ಲವರಾಗಿದ್ದಾರೆ. ಆದರೆ ಕೆಲವು ದಲಿತ ಚಿಂತಕರಿಗೆ ಜಾಗತೀಕರಣವು ಬ್ರಿಟಿಷರ ಜತೆ ಬಂದ ವಸಾಹತುಶಾಹಿಯ ರೂಪದಲ್ಲಿ ಕಾಣುತ್ತಿದೆ. ಇದರ ಲಾಭವನ್ನು ನಾವ್ಯಾಕೆ ಪಡೆಯಬಾರದು ಎಂಬ ತರ್ಕವನ್ನು ಅದು ಹುಟ್ಟಿಸಿದೆ. ಮೀಸಲಾತಿಯನ್ನು ಜಾರಿ ಮಾಡಿ ಅಷ್ಟಿಷ್ಟು ನೆರವಾಗುತ್ತಿದ್ದ ಸರಕಾರಗಳೇ ಜಾಗತೀಕರಣ ಪರವಾಗಿ ಕೆಲಸ ಮಾಡುತ್ತಿರುವುದರಿಂದ ದಲಿತರ ಒಲವು ಅತ್ತ ಸರಿದಿದೆ. ಓದಿಯೂ ಕೆಲಸವಿಲ್ಲದ ಎಷ್ಟೋ ತರುಣ ದಲಿತರು ಜಾಗತೀಕರಣದ ಭಾಗವಾಗಿ ಬಂದಿರುವ ಎನ್‌ಜಿಓಗಳಲ್ಲಿ ಮುಜುಗರವಿಲ್ಲದೆ ಕೆಲಸ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಸಾಮಾಜಿಕ ಸಾಂಸ್ಕೃತಿಕ ಸಂವೇದನೆ ಅಧ್ಯಯನ ಹೆಸರಲ್ಲಿ ದಲಿತಲೋಕದ ಅಧ್ಯಯನಗಳು ಕೂಡ ಇದಕ್ಕೆ ಪೂರಕವಾಗಿವೆ. ದೇಶೀವಾದಿ ಪರಿಭಾಷೆಯಲ್ಲಿ ನಡೆಯುತ್ತಿರುವ ಈ ಅಧ್ಯಯನಗಳ ಹಿಂದೆ ಒಂದಿಲ್ಲ ಒಂದು ಬಗೆಯಲ್ಲಿ ವಿದೇಶಿ ಹಣಕಾಸು ಪ್ರತಿಷ್ಠಾನಗಳಿವೆ. ಅವುಗಳ ಹಿಂದೆ ಮುಂದುವರೆದ ದೇಶಗಳ ಕಾಣದ ಕೈಗಳಿವೆ. ಇವನ್ನು ಅರಿಯುವುದು ಮತ್ತು ರಾಜಕೀಯವಾಗಿ ವಿಶ್ಲೇಷಿಸುವುದಕ್ಕಿಂತ ಹೆಚ್ಚಾಗಿ ನಮಗೆ ಇದರಿಂದ ಏನು ಲಾಭ ಎಂಬ ನೀತಿ ಈ ಕೆಲವು ದಲಿತರಲ್ಲಿ ಇದ್ದಂತಿಗೆ.

ಜಾಗತಿಕ ವಿದ್ಯಮಾನಗಳನ್ನು ಹೀಗೆ ದಲಿತ ಸಮುದಾಯದ ಸ್ವಹಿತಾಸಕ್ತಿಯಿಂದ ಮಾತ್ರ ಗ್ರಹಿಸಲು ಹಾಗೂ ಪ್ರತಿಕ್ರಿಯಿಸಲು ಇನ್ನೊಂದು ಕಾರಣವಿರಬಹುದು. ಅದೆಂದರೆ, ದಲಿತ ಸಾಹಿತ್ಯ ಚಿಂತನೆಗಳು ಒಳಗೆ ಮೊದಲಿನಿಂದಲೂ ಇರುವ ಮಾರ್ಕ್ಸ್‌ವಾದದ ಬಗೆಗಿನ ಅಪನಂಬಿಕೆ ಇದಕ್ಕೆ ಕಾರಣ. ಮಾರ್ಕ್ಸ್‌ವಾದದ ಮೇಲೆ ಅಂಬೇಡ್ಕರ್ ಮಾಡಿ ಸೈದ್ಧಾಂತಿಕ ವಿಮರ್ಶೆಯಿರಬಹುದು. ಸಮಕಾಲೀನ ಮಾರ್ಕ್ಸ್‌ವಾದಿ ಪಕ್ಷಗಳ ಸಿದ್ಧಾಂತಗಳೂ ಕಾರಣವಿರಬಹುದು ಅಥವಾ ಕೇವಲ ವರ್ಗ ಹೋರಾಟಗಳಿಂದ ಬಿಡುಗಡೆಯಾದ ದಲಿತರ ಸಾಮಾಜಿಕ ಪರಿಸ್ಥಿತಿ ಇರಬಹುದು. ಅರ್ಥಿಕ ನೆಲೆಯಲ್ಲಿ ದಮನಿತರನ್ನು ಗುರುತಿಸುವ ಮಾರ್ಕ್ಸ್‌ವಾದಕ್ಕೆ ಹಳ್ಳಿಗಳಲ್ಲಿ ಜಾತಿಯ ಕಾರಣಕ್ಕೆ ಅಪಮಾನಿತರಾಗಿರುವ ದಲಿತರ ನೋವುಗಳು ಅರ್ಥವಾಗುವುದಿಲ್ಲ ಎಂಬ ಸಾಮಾನ್ಯ ದೂರು ಈಗಲೂ ಇದೆ. ಆದರೆ ಈ ಅನುಮಾನ ಅಂಬೇಡ್ಕರ್ ಮಾಡಿದಂತೆ ಗಂಭೀರ ತಾತ್ವಿಕ ವಾಗ್ವಾದದ ರೂಪದಲ್ಲಿ ಪ್ರಕಟವಾಗುವುದಕ್ಕಿಂತ ಹೆಚ್ಚಾಗಿ, ಸಾಮಾನ್ಯ ಆರೋಪ ರೂಪದಲ್ಲಿರುವುದೇ ಹೆಚ್ಚು. ಅಂಬೇಡ್ಕರ್ ವಾದ ಮಾರ್ಕ್ಸ್‌ವಾದಗಳು ಹೇಗೆ ಸಮಕಾಲೀನ ಪರಿಸ್ಥಿತಿಯಲ್ಲಿ ಕೂಡಿಕೊಂಡು ಹೊಸ ಪರ್ಯಾಯ ನಿರ್ಮಿಸಬಲ್ಲವು ಎಂಬ ಬಗ್ಗೆ ಕನ್ನಡದಲ್ಲಿ ಒಂದು ಬಲವಾದ ಸೈದ್ಧಾಂತಿಕ ವಾಗ್ವಾದ ನಡೆದಿದ್ದರೆ ಈ ಬಿರುಕುಗಳು ಕಡಿಮೆಯಾಗುತ್ತಿದ್ದವೋ ಏನೋ?

ಈ ಅಪನಂಬಿಕೆಯು ದಲಿತ ಲೇಖಕರು ವಿಶಾಲ ಎಡಪಂಥೀಯ ಸಾಹಿತ್ಯ ಸಂಘಟನೆಗಳ ಒಳಗೆ ಕೆಲಸ ಮಾಡುವುದಕ್ಕೆ ತೊಡಕಾದವು. ದಲಿತ ಸಂಸ್ಕೃತಿ ಸಾಹಿತ್ಯದ ಪ್ರತ್ಯೇಕತೆಯ ದನಿಗಳು ಮೂಡಿದವು. ವಿಶಾಲ ಎಡಪಂಥೀಯ ನೆಲೆಯ ಬಂಡಾಯ ಸಾಹಿತ್ಯ ಸಂಘಟನೆ ನಡುವೆ ಬಿರುಕು ಮೂಡುವುದಕ್ಕೆ ಇದು ಕೂಡ ಒಂದು ಕಾರಣ. ಇದಕ್ಕೆ ತಕ್ಕಂತೆ ಕೆಲವು ದಲಿತ ಲೇಖಕರು ಮಾರ್ಕ್ಸ್‌ವಾದಿಗಳೂ ಲೋಹಿಯಾವಾದಿಗಳೂ ಆದ ಲೇಖಕರ ಜತೆ ಬಹಳ ಕಾಲ ಹೋಗುವುದು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಅನೇಕ ದಲಿತರಲ್ಲಿ ಅನೇಕ ಜನ ಮಾರ್ಕ್ಸ್‌ವಾದಿಗಳಿದ್ದರೂ ಈ ಬಿರುಕು ಕಡಿಮೆಯಾಗಲಿಲ್ಲ. ದೇವನೂರರಂತಹ ಲೋಹಿಯಾವಾದಿಗಳು ಕೂಡ ತಾತ್ವಿಕವಾಗಿ ವರ್ಗಕಲ್ಪನೆಯ ಮಾರ್ಕ್ಸ್‌ವಾದದ ಬಗ್ಗೆ ಎನ್ನುವುದಕ್ಕಿಂತ ಭಾರತೀಯ ಕಮ್ಯುನಿಸ್ಟ್ ಮಾದರಿಗಳ ಬಗ್ಗೆ ಸಮ್ಮತಿಯುಳ್ಳವರಾಗಿದ್ದರು. (ಕುಸುಮಬಾಲೆಯಲ್ಲಿ ಕಮ್ಯುನಿಸ್ಟ್ ದಲಿತರ ವ್ಯಂಗ್ಯಚಿತ್ರ ಗಮನಿಸಬೇಕು) ಕರ್ನಾಟಕದಲ್ಲಿ ಮಾರ್ಕ್ಸ್‌ವಾದಿಗಳಾದ ಕೆಲವು ದಲಿತರು ದಲಿತ ಸಂಘರ್ಷ ಸಮಿತಿಯ ಸಮುದಾಯವಾದಿ ರಾಜಕಾರಣವನ್ನು ವಿಮರ್ಶೆ ಮಾಡುತ್ತ ೯೦ರ ದಶಕದ ನಂತರ ಬೇರೆ ಬೇರೆ ತೀವ್ರವಾದಿ ಎಡಪಂಥೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ದಲಿತ ಚಿಂತನೆ ರಾಜಕಾರಣ ಕೇವಲ ದಲಿತರಿಗಾಗಿ ಅದರಲ್ಲೂ ಅದರ ಒಳಗುಂಪುಗಳಿಗಾಗಿ ಘಟಿತವಾಗುತ್ತ ಈ ಬಿರುಕು ಮತ್ತಷ್ಟು ಹೆಚ್ಚಾಯಿತೆ ವಿನಾ ಕಡಿಮೆಯಾಗಲಿಲ್ಲ. ಎಡಪಂಥೀಯ ಲೇಖಕರು ಚಿಂತಕರಾಗಿದ್ದ ದಲಿತ ಲೇಖಕರಿಗೂ ಈ ಬಿರುಕನ್ನು ಬೆಸೆಯಲು ಸಾಧ್ಯವಾಗಲಿಲ್ಲ.

ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರವಾಗುವ ಮೂಲಕ ಪ್ರತಿಭಟನೆಯ ಒಂದು ಹಾದಿಯನ್ನು ಹಾಕಿದರು. ಅದು ಚಾರಿತ್ರಿಕವಾಗಿ ಅನಿವಾಂiiವೂ ಮಹತ್ವದ್ದೂ ಆಗಿದ್ದ ಪ್ರತಿಭಟನೆಯ ಮಾದರಿ. ನಂತರ ದಲಿತರು ಸವರ್ಣೀಯರಿಂದ ಹಲ್ಲೆಗಳಾದ ಹೊತ್ತಿನಲ್ಲೆಲ್ಲ ತಾವು ಬೌದ್ಧಧರ್ಮಕ್ಕೆ ಅಥವಾ ಇಸ್ಲಾಮಿಗೆ ಹೋಗುವ ಧಮಕಿ ಹಾಕತೊಡಗಿದರು. ದಲಿತರಲ್ಲಿ ಕೆಲವು ಜನರು ಜಾತಿಪದ್ಧತಿಯ ಹಿಂದೂ ಧರ್ಮದಿಂದ ಪಾರಾಗಲು ಬೌದ್ಧಧರ್ಮಕ್ಕೆ ಹೋಗಲೂ ಶುರುಮಾಡಿದರು. ಆದರೆ ಅಲ್ಲಿಗೆ ಹೋದಮೇಲೆ ತಮ್ಮ ದಲಿತ ಸಂಸ್ಕೃತಿಯನ್ನು ಮಾರಿಹಬ್ಬ, ಮಾಂಸದೂಟ, ಜಾತ್ರೆ, ಆಚರಣೆಗಳು ಇತ್ಯಾದಿಗಳನ್ನು ಉಳಿಸಿಕೊಳ್ಳಲು ಸಾಧ್ಯವೆ? ಬೌದ್ಧರಾದ ಬಳಿಕ ಮತಾಂತರವಾಗದ ದಲಿತರ ಜತೆ ತಮ್ಮ ಸಂಬಂಧ ಹೇಗಿರುತ್ತದೆ? ಈ ಪ್ರಶ್ನೆಗಳಿಗೆ ಖಚಿತ ಉತ್ತರವಿನ್ನೂ ಸಿಕ್ಕಿಲ್ಲ. ಬೌದ್ಧ ಧರ್ಮವು ಸಾಂಸ್ಕೃತಿಕವಾಗಿ ದಲಿತೇರವಾಗಿತ್ತು ಮಾತ್ರವಲ್ಲ, ಅದು ರಾಜಕೀಯವಾಗಿ ದಲಿತರ ಸಮಸ್ಯೆಗಳ ಹೋರಾಟವನ್ನು ಮುಂದುವರೆಸಲು ಉತ್ತೇಜಿಸಲಿಲ್ಲ. ಈ ನಡುವೆ ದಲಿತ ಸಂಸ್ಕೃತಿಯ ದೈವಗಳು, ಆಚರಣೆಗಳು, ಊಟ, ಉಡುಗೆ ಇವುಗಳ ಬಗ್ಗೆ ಕೀಳರಿಮೆಯಿಲ್ಲದ ಒಂದು ಸ್ವಾಭಿಮಾನ ನಿಲುವನ್ನು ತಳೆಯುವ ಸಾಂಸ್ಕೃತಿಕ ಪ್ರಜ್ಞೆಯು ದಲಿತರಲ್ಲಿ ಬೆಳೆಯಿತು. ಇದು ಎಲ್ಲ ಬಗೆಯ ಮತಾಂತರಗಳ ಮೂಲಕ ಬಿಡುಗಡೆಯಾಗುವ ಹಾದಿಯನ್ನು ನಿರಾಕರಿಸುವ ಚಿಂತನೆಯಾಗಿತ್ತು. ಹೀಗಾಗಿ ಬೌದ್ಧಧರ್ಮದ ಜತೆ ಕಲಿತ ಮಧ್ಯಮವರ್ಗದ ಬುದ್ಧಿಜೀವಿ ದಲಿತರು ತೋರಿದ ಭಾವನಾತ್ಮಕ ತಾತ್ವಿಕ ಒಲವನ್ನು ಇಡಿಯಾಗಿ ದಲಿತ ಸಮುದಾಯ ತೋರಲಿಲ್ಲ. ಈ ಬೆಳವಣಿಗೆಗಳು ಕೂಡ ದಲಿತರ ಮುಂಚಲನೆಯ ಹಾದಿಗಳನ್ನು ರೂಪಿಸಲಿಲ್ಲ. ದಲಿತರು ಎಂದರೆ ಯಾರು ಎಂಬ ಪ್ರಶ್ನೆಗೆ ೭೦ರ ದಶಕದಲ್ಲಿ ಬಹುಚರ್ಚಿತವಾಗಿತ್ತು. ಏನೆಲ್ಲ ಚರ್ಚೆ ನಡೆದು, ಕೊನೆಗೆ ಅಸ್ಪೃಶ್ಯತೆಯನ್ನು ಅನುಭವಿಸಿದ ಜಾತಿಗಳಿಂದ ಬಂದವರು ದಲಿತರು ಎಂಬ ಸಾಮಾಜಿಕ ನೆಲೆಯ ವ್ಯಾಖ್ಯೆ ಮಾನ್ಯವಾಯಿತು. ಸಾಹಿತ್ಯಿಕ ಕ್ಷೇತ್ರದಲ್ಲಿ ‘ದಲಿತರು’ ಎಂಬ ಶಬ್ದದಲ್ಲಿ ವಾಸ್ತವದಲ್ಲಿ ಸಾಮಾಜಿಕವಾಗಿ ಯಾವ ಯಾವ ಜಾತಿಗಳವರು ಬರುತ್ತಾರೆ ಎಂಬ ಬಗ್ಗೆ ಯಾರೂ ಪ್ರಶ್ನೆ ಮಾಡದಷ್ಟು ಈ ಪದ ಒಂದು ಸಾಂಸ್ಕೃತಿಕ ರಾಜಕೀಯ ಪರಿಭಾಷೆಯಾಯಿತು. ಆದರೆ ೯೦ರ ದಶಕದಲ್ಲಿ ಎಡಗೈ ಬಲಗೈ ಒಡಕು ಕಾಣಿಸಿಕೊಂಡಿತು. ದಲಿತರು ಎಂಬ ಸಂಯುಕ್ತ ಪರಿಕಲ್ಪನೆಯ ಮೀಸಲಾತಿ ಲಾಭವನ್ನು ಬಲಗೈ ಹೊಲೆಯರು ಹೆಚ್ಚು ಪಡೆದಿದ್ದಾರೆ. ತಮಗೆ ಅನ್ಯಾಯವಾಗಿದೆ. ತಮಗೆ ಬೇರೆ ಒಳಮೀಸಲಾತಿಬೇಕೆಂದು ಎಡಗೈಯವರು (ಮಾದಿಗರು) ಕೇಳಿದಾಗಲೇ ದಲಿತರಲ್ಲಿ ಈ ಎರಡು ಸಾಮಾಜಿಕ ಭೇದಗಳಿವೆ ಎಂಬು ಬಹಳ ಜನರಿಗೆ ಗೊತ್ತಾಗಿದ್ದು. ಎಡಗೈನವರ ವಾದದಲ್ಲಿ ಸತ್ಯವಿತ್ತು; ಅರ್ಥವಿತ್ತು. ಆದರೆ ಪರಿಣಾಮದಲ್ಲಿ ಈ ವಾದವು ದಲಿತ ಎಂಬ ಸಂಯುಕ್ತ ಪರಿಭಾಷೆಯನ್ನು ಒಡೆದುಬಿಟ್ಟಿತು. ಇದಕ್ಕೆ ಕಳೆದ ೧೦ ವರುಷಗಳಿಂದ ಎಡಗೈ ಬಲಗೈ ಗುಂಪುಗಳ ನಡುವೆ ನಡೆದ ಜಗಳಗಳು ಅಂಬೇಡ್ಕರ್ ಬಲಗೈಯವರು ಎಂಬ ಭೇದಗಳು ಹೆಚ್ಚು ಹೆಚ್ಚು ಹೊರಬಂದವು. ಇದು ದಲಿತರು ಒಟ್ಟಾಗಿ ಸಮಾಜದ ವಿದ್ಯಮಾನಗಳನ್ನು ತಮ್ಮ ಎದುರಾಳಿಗಳನ್ನು ಎದುರಿಸಲು ಬೇಕಾದ ಏಕತೆಯನ್ನು ತಾತ್ವಿಕ ಶೋಧವನ್ನು ರಾಜಕೀಯ ಕಾರ್ಯಕ್ರಮ ಹಾಕಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಮಾಡಿತು.

ದಲಿತರು ಮದ್ಯಮವರ್ಗಕ್ಕೆ, ಸರಕಾರಿ ನೌಕರಿಗೆ ಸೇರಿದ ಬಳಿಕ ಇನ್ನೂ ಹಿಂದುಳಿತ ಅವಸ್ಥೆಯಲ್ಲಿರುವ ಸಮುದಾಯದ ಆಶಯಗಳನ್ನು ಪ್ರತಿನಿಧಿಸದೆ, ತಮ್ಮ ವರ್ಗಹಿತಾಸಕ್ತಿಗಳನ್ನು ಮಾತ್ರ ರಕ್ಷಿಸಿಕೊಳ್ಳುವತ್ತ ಚಲಿಸಿದರು. ಇದು ತಾರ್ಕಿಕವಾಗಿ ದಲಿತ ಸಂಘರ್ಷ ಸಮಿತಿಯು ಶಕ್ತಿ ರಾಜಕಾರಣಕ್ಕೆ ಧುಮುಕಿ ಸೋತು ಛಿದ್ರತೆಯಲ್ಲಿ ಕೊನೆಗೊಂಡಿತು. ಅನೇಕ ಚಿಂತಕರು ಲೇಖಕರು ಅನೈತಿಕರಾದರು. ದಲಿತರ ಮೇಲೆ ಹಲ್ಲೆಗಳಾದಾಗ (ಬೆಲ್ಚಿ, ಪಿಪ್ರಾ ಬೆಂಡಿಗೇರಿ) ಹಿಂದೆ ನಡೆಯುತ್ತಿದ್ ಪ್ರತಿರೋಧಗಳು ಕಡಿಮೆಯಾದವು. ಈಚೆಗೆ ಹರಿಯಾಣದಲ್ಲಿ ಜಜ್ಝರ್ ಪ್ರಕರಣಕ್ಕೆ ಬಂದ ಕ್ಷೀಣ ಪ್ರತಿಕ್ರಿಯೆಯನ್ನು ಗಮನಿಸಬೇಕು. ಇದೇ ಹೊತ್ತಿನಲ್ಲಿ ದಲಿತರ ಮೇಲೆ ಮೊದಲಿನಿಂದಲೂ ಬಿಡುಗಡೆಯಾದ ಜೀತದಾಳಿನ ಮೇಲೆ ಧಣಿ ಬುಸುಗುಡುವಂತೆ ಬುಸುಗುಡುತ್ತಿದ್ದ ಸವರ್ಣೀಯ ಸಮಾಜ ದಲಿತರ ಮೇಲೆ ಮತ್ತೆ ಎರಗತೊಡಗಿತು. ದಲಿತರು ಅಸ್ಪೃಶ್ಯತೆಯ ಕೇಸನ್ನು ದುರುಪಯೋಗ ಮಾಡಿಕೊಂಡರು ಎಂದು ಪ್ರತಿಭಟನೆ ಮಾಡುವ ರ‍್ಯಾಲಿಗಳೂ ನಡೆಯತೊಡಗಿದವು. ಮೀಸಲಾತಿ ವಿರೋಧವಾದ ರ‍್ಯಾಲಿಗಳು ನಡೆಯಲು ಶುರುವಾದವು. ಇವು ಕಾನೂನು ಪ್ರಕಾರ ಹಾಗೂ ಸಾಮಾಜಿಕ ಬದಲಾವಣೆಗಳ ಕಾರಣದಿಂದ ಜಾತಿ ಆಸ್ತಿಗಳ ಯಜಮಾನಿಕೆಯನ್ನು ಈ ಸವರ್ಣೀಯರು ಮರಳಿ ಪಡೆಯುವ ಪುನರುತ್ಥಾನದ ಘಟ್ಟವನ್ನೂ ಸೂಚಿಸುತ್ತವೆ. ದಲಿತರ ಸಾಮಾಜಿಕ ನ್ಯಾಯದ ಬೇಡಿಕೆಯ ಬಗ್ಗೆ ಒಂದು ಬಗೆಯ ಸಾರ್ವಜನಿಕ ಸಹಾನುಭೂತಿ ಇದ್ದವರೂ ನೈತಿಕ ಬೆಂಬಲವನ್ನು ಒದಗಿಸಿದ್ದವರು ಕೂಡ ಈ ಹೊತ್ತಲ್ಲಿ ದಲಿತರ ಬಗ್ಗೆ ಕ್ರಿಟಿಕಲ್ ಆದರು. ಈ ಎಲ್ಲಚಾರಿತ್ರಿಕ ವಿದ್ಯಮಾನಗಳು ದಲಿತ ಸಾಹಿತ್ಯದ ಸ್ವರೂಪವನ್ನು ನಿರ್ಧರಿಸುತ್ತ ಬಂದವು. ಈ ವಿದ್ಯಮಾನಗಳು ದಲಿತ ಸಾಹಿತ್ಯದಲ್ಲಿ ನೈತಿಕ ಬಲವನ್ನು ಕಳೆಯಿತು ಎಂದು ಮಾತ್ರವಲ್ಲ. ಅದು ನೈತಿಕ ಬಲವನ್ನು ಮತ್ತೆ ಪಡೆಯಲು ಹೊಸಯತ್ನವನ್ನು ಮಾಡಲು ಪ್ರೇರೇಪಿಸಿತು. ದಲಿತ ಸಾಹಿತ್ಯ ತಾತ್ವಿಕತೆಯನ್ನು ಈ ಮೂರು ದಶಕಗಳ ಏರುಪೇರುಗಳ ನಡುವೆ ಹುಡುಕಬೇಕಿದೆ.

ದಲಿತ ಸಾಹಿತ್ಯದ ತಾತ್ವಿಕತೆ
ಮೇಲಿನ ಭಿತ್ತಿಯ ಹಿನ್ನೆಲೆಯಲ್ಲಿ ಚಿತ್ರಣಗೊಳ್ಳುವ ದಲಿತ ಸಾಹಿತ್ಯದ ತಾತ್ವಿಕತೆ ಎಂಬುದು ಸರಳವಾಗಿಲ್ಲ. ಅದು ಏಕರೂಪಿ ಕೂಡ ಅಲ್ಲ. ದಲಿತ ಚಳುವಳಿ ಸಂಘಟನೆ ರಾಜಕಾರಣ ಹಾಗೂ ದಲಿತ ಸಾಹಿತ್ಯಗಳ ನಡುವಣ ಈ ಸಾಮ್ಯ ಹಾಗೂ ವೈರುಧ್ಯಗಳ ಸಂಬಂಧವು ಬಹಳ ಮುಖ್ಯ. ಇದರಿಂದಲೇ ದಲಿತ ಸಾಹಿತ್ಯದ ಬಗ್ಗೆ ಏಕರೂಪದ ಪರಿಕಲ್ಪನೆಯನ್ನು ಕೊಡಲು ಆಗುವುದಿಲ್ಲ. ಇದರಿಂದಲೇ ದಲಿತ ಸಾಹಿತ್ಯದ ಬಗ್ಗೆ ಏಕರೂಪದ ಪರಿಕಲ್ಪನೆಯನ್ನು ಕೊಡಲು ಆಗುವುದಿಲ್ಲ. ವಿಭಿನ್ನ ಲೇಖಕರು ವಿಭಿನ್ನ ದೃಷ್ಟಿಕೋನಗಳಲ್ಲಿ ಬರೆಯುತ್ತಾರೆ. ಒಬ್ಬರೇ ಲೇಖಕರು ತಮ್ಮ ಒಂದೊಂದು ಕೃತಿಯಲ್ಲಿಯೂ ಭಿನ್ನವಾಗಿ ಪರಿವರ್ತನೆಯನ್ನು ವಿಕಾಸವನ್ನು ತೋರಿದ್ದಾರೆ. ಗ್ರಾಮದೇವತೆಗಳನ್ನು ಒಂದು ಬಗೆಯ ತಮಾಷೆಯಿಂದ ವೈಚಾರಿಕವಾಗಿ ನೋಡುತ್ತ ನಿರಾಕರಿಸುವ ಪುರಾಮಭಂಜಕ ದಲಿತ ಲೇಖಕರೂ ಇದ್ದಾರೆ; ಜನಸಮುದಾಯಗಳ ಜಾನಪದ ಸಂಸ್ಕೃತಿಯನ್ನು ಹೊಸಚೈತನ್ಯ ನೀಡುವ ಲೋಕವೆಂದು ಕಳಕಳಿಯಿಂದ ನೋಡುವ ಲೇಖಕರೂ ಇದ್ದಾರೆ. ಪುರಾಣ ಐತಿಹ್ಯಗಲನ್ನು ಸಮುದಾಯದ ಸೃಜನಶೀಲತೆ ಕಟ್ಟಿದ ರೂಪಕಗಳೆಂದು ಭಾವಿಸಿ, ಅವುಗಳನ್ನು ಅತ್ಯಂತ ಜವಾಬ್ದಾರಿ ಸೂಕ್ಷ್ಮತೆಯಿಂದ ಅನುಸಂಧಾನ ಮಾಡುವ ದಲಿತ ಲೇಖಕರುದಾರೆ. ಮಾರ್ಕ್ಸ್‌ವಾದವನ್ನು ಕಟುವಾದ ತಿರಸ್ಕಾರದಿಂದ ನೋಡುವ ದಲಿತರೂ, ಅದು ಇನ್ನೂ ನಮಗೆ ಸಹಾಯಕ್ಕೆ ಬಂದಿಲ್ಲ ಎಂಬ ವಿಷಾದವುಳ್ಳ ದಲಿತರು ಅದೊಂದೇ ಮಾರ್ಗ, ಅಂಬೇಡ್ಕರ್ ಅಲ್ಲ ಎನ್ನುವ ದಲಿತರೂ ಇದ್ದಾರೆ.

ದಲಿತ ಲೇಖಕರನ್ನು ಸಿದ್ಧಲಿಂಗಯ್ಯ ಮಾರ್ಕ್ಸ್‌ವಾದಿ, ದೇವನೂರು ಲೋಹಿಯಾವಾದಿ, ಮನಜ ಮಾಲಗತ್ತಿಯವರು ಅಂಬೇಡ್ಕರ್ ವಾದ ಎಂದು ವಿಂಗಡಿಸಬಹುದು. ಆದರೆ ಈ ವಿಂಗಡಣೆ ಅವರ ಸಾಹಿತ್ಯದ ವಿಶ್ಲೇಷಣೆಯಲ್ಲಿ ಉಪಯುಕ್ತವಲ್ಲ. ಈ ಹಿನ್ನೆಲೆಯಲ್ಲಿ ದಲಿತ ಚಳುವಳಿ ಸಾಹಿತ್ಯ, ಸಂಘಟನೆಗಳ ಪ್ರಮುಖ ತಾತ್ವಿಕ ಆಯಾಮಗಳನ್ನ ಅದು ಹಾದುಬಂದ ಚಾರಿತ್ರಿಕ ಘಟ್ಟಗಳ ಅವಲೋಕನದಿಂದ ಅರಿಯಬಹುದು. ಆ ಘಟ್ಟಗಳನ್ನು ಅರಿವಿನ ಆಸ್ಪೋಟನೆಯ ಘಟ್ಟ ಅಥವಾ ಮೊಳಕೆ ಘಟ್ಟ; ಕಟ್ಟುವಿಕೆ ಘಟ್ಟ; ಶೈಥಿಲ್ಯದ ಘಟ್ಟ; ಆತ್ಮ ವಿಮರ್ಶೆ, ಹೊಸ ಹುಡುಕಾಟ ಹಾಗೂ ಮರುಹುಟ್ಟಿನ ಘಟ್ಟ ಎಂದು ವಿಂಗಡಿಸಿ ನೋಡಬಹುದು. ಇವನ್ನು ಕ್ರಮವಾಗಿ ಚರಿತ್ರೆಯ ವಿಮರ್ಶಿಸುವ, ವರ್ತಮಾನದ ವಾಸ್ತವ ಅರ್ಥಮಾಡಿಕೊಳ್ಳುವ ಈ ಸ್ವವಿಮರ್ಶೆ ಹಾಗೂ ಅರಿವಿನ ಮೂಲಕ ಭವಿಷ್ಯದ ಸಮಾಜದ ಕಟ್ಟಿಕೊಳ್ಳುವಿಕೆಯ ಕ್ರಿಯೆಗಳ ಸಂಕೇತವಾಗಿಯೂ ಭಾವಿಸಬಹುದು. ಈ ಘಟ್ಟಗಳು ಒಂದರ ನಂತರ ಒಂದು ಕ್ರಮಬದ್ಧವಾಗಿ ಬಂದವೇನಲ್ಲ. ಒಂದು ಘಟ್ಟ ಇರುವಾಗಲೆ ಇನ್ನೊಂದು ಘಟ್ಟದ ಲಕ್ಷಣಗಳು ಅದರ ಹೊಟ್ಟೆ ಒಳಗಿಂದ ಮೂಡುತ್ತಿರುವ ರಹೀತಿಯಲ್ಲಿ ಇವು ಬಂದವು; ಮಾತ್ರವಲ್ಲ. ಈಗ ಈ ಮೂರು ಘಟ್ಟಗಳು ಏಕಕಾಲದಲ್ಲಿ ಇರುವ ಚಿತ್ರವೂ ಇದೆ. ಶೈಥಿಲ್ಯದ ಘಟ್ಟದಲ್ಲಿ ಕಟ್ಟಿಕೊಳ್ಳುವ ಘಟ್ಟ ಇದೆ. ಯಾಕೆಂದರೆ ಹೊಸಹೊಸ ತಲೆಮಾರಿನ ಲೇಖಕರು ಬರವಣಿಗೆಗೆ ಆಗಮಿಸುತ್ತಿದ್ದಾರೆ. ಅವರು ಮೊದಲ ಘಟ್ಟದಿಂದಲೇ ಅಂದರೆ ಅರಿವಿನ ಆಸ್ಫೋಟದ ಘಟ್ಟದಿಂದಲೇ ಶುರುಮಾಡುವುದುಂಟು.

ಮೊಳಕೆಯ ಘಟ್ಟ
ಈ ಮೊಳಕೆಯ ಘಟ್ಟ ‘ಅರಿವಿನ ಆಸ್ಫೋಟ’ದ ಘಟ್ಟ ಕೂಡ. ಅರಿವು ತರುವ ಅಪಮಾನದ ಭಾವವು ತಮ್ಮನ್ನು ಅಮಾನವೀಯವಾಗಿ ಗಮನಿಸಿರುವ ವ್ಯವಸ್ಥೆಯನ್ನು ಕಡೆಹುವ ಉಗ್ರಕೋಪಕ್ಕೆ ಕಾರಣವಾಗುತ್ತದೆ. ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಈ ಘಟ್ಟದ ಸಂಕೇತ. ಇಲ್ಲಿ ಮುಖ್ಯವಾದುದು ಆಸ್ಫೋಟ. ಎದುರಾಳಿಯನ್ನು ಧ್ವಂಸಮಾಡುವ ಸ್ವಭಾವವೇ ಮುಖ್ಯವಾಗಿ ಕೆಲಸ ಮಾಡುವ ಇಲ್ಲಿ ಕಟ್ಟುವ ಚಿಂತನೆ ಕಡಿಮೆ. ಭವಿಷ್ಯದಲ್ಲಿ ಪರ್ಯಾಯ ಸಮಾಜ ಕಟ್ಟಿಕೊಳ್ಳುವ ಹುಡುಕಾಟ ಕಡಿಮೆ. ಚರಿತ್ರೆಯ ಮೇಲೆ ವರ್ತಮಾನದ ಮೇಲೆ ರೇಗುವುದು ಪ್ರತಿಭಟಿಸುವುದು ಮುಖ್ಯ. ನೋವಿನ ಅಭಿವ್ಯಕ್ತಿಗಾಗಿ ಪ್ರಕಾರ ಭಾಷೆ ಮಾರ್ಗಗಳನ್ನು ದುಡುಕಿ ಹುಡುಕುವ ರೀತಿ ಇಲ್ಲಿನದು. ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಇಂತಹ ಅಭಿವ್ಯಕ್ತಿ. ಪುರಾಣಭಂಜಕ ವೈಚಾರಿಕತೆ ತೀವ್ರವಾಗಿ ಕೆಲಸ ಮಾಡುವ ಮನಸ್ಥಿತಿಯ ಪ್ರತಿಕ್ರಿಯೆಗಳನ್ನು ಇಲ್ಲಿ ಕಾಣಬಹುದು. ವೈಚಾರಿಕತೆಯು ಲೋಕವನ್ನು ಅರಿಯಲು ಅಂತಿಮವಾಗಿ ಅಸ್ತ್ರವಾಗಿ ಬಳಕೆಯಾಗ್‌ತದೆ ಇಲ್ಲಿ. ಸಿದ್ಧಲಿಂಗಯ್ಯನವರ ‘ಅವತಾರಗಳು’ ಕೃತಿಯ ವಿಡಂಬನೆ ತಮಾಷೆಗಲು ಇಂತಹವು. ರಾಜಮಾರ್ಗಧ ಚರಿತ್ರೆಯು ಶ್ರೇಷ್ಠ ಎಂದು ನಂಬಿರುವ ಸಂಕೇತಗಳನ್ನು ಒಳಪಡಿಸುವ ದಿಟ್ಟತನ ಇಲ್ಲಿ ಮುಖ್ಯ. ಬಿ. ಕೃಷ್ಣಪ್ಪ ಹಾಗೂ ದೇವಯ್ಯ ಹರವೆಯವರು ಕುವೆಂಪು ಬಗ್ಗೆ ಬರೆದ ಲೇಖನಗಳನ್ನು ಗಾಂಧಿಯವರ ಬಗ್ಗೆ ವಚನಕಾರರ ಬಗ್ಗೆ ಮನಜ ಬರೆದ ಲೇಖನಗಳನ್ನು ಇಲ್ಲಿ ನೆನೆಯಬೇಕು. ಅರಿವಿನ ಆಸ್ಫೋಟದ ಈ ಹಂತದಲ್ಲಿ ಕೆಲವೊಮ್ಮೆ ಅಕ್ಷರ ತೋರಿಸಿದ ಹೊಸ ಹೊಸ ದರ್ಶನಗಳ ವಿಸ್ಮಯವೂ ಇರುತ್ತದೆ. ಗೋವಿಂದಯ್ಯನವರ ಆ ಆ ಮತ್ತು ಪದ್ಯ ಇಂತಹದು. ಇಡೀ ಪದ್ಯವು ಕಪ್ಪು ಹಲಗೆಯ ಮೇಲೆ ಬಿಳಿಯ ಅಕ್ಷರಗಳು ಬೆಳಕಿನಂತೆ ಮೂಡಿದಾಗ ಉಂಟಾದ ವಿಸ್ಮಯ ನೋವು ಸಂತಸಗಳು ಮೊದಲ ಅನುಭವಗಳನ್ನು ಅಲ್ಲಿ ಕಾಣಬಹುದು.

ಬೆಳೆ ಕಟ್ಟುವ ಘಟ್ಟ
ಪ್ರತಿರೋಧದ ಘಟ್ಟವು ಮುಗಿಯಲಿಲ್ಲ. ಆದರೆ ಪ್ರತಿರೋಧದ ಜನತೆಯಲ್ಲಿಯೇ ಕಟ್ಟಿಕೊಳ್ಳುವಿಕೆಯ ಕೆಲಸ ಕೂಡ ಆಗಬೇಕಿತ್ತು. ಕಟ್ಟಿಕೊಳ್ಳುವಿಕೆ ಎಂದರೆ ಸಂಘಟನೆಗೆ ಸಂಗಾತಿಗಳನ್ನು ಸಮಾನ ಮನಸ್ಕರನ್ನು ಕಟ್ಟಿಕೊಳ್ಳುವುದು. ಸಮುದಾಯದ ರಂಗಚಟುವಟಿಕೆಗಳಲ್ಲಿ ಬಂಡಾಯ ಸಂಘಟನೆಗಳಲ್ಲಿ ದಲಿತರು ಸೇರಿದರು. ಅಥವಾ ದಲಿತರ ಜತೆ ಎಡಪಂಥೀಯರು ಸೇರಿದರು. ಕನಸಿನ ಸಮಾಜದ ಕಲ್ಪನೆಯನ್ನು ಕಟ್ಟಿಕೊಳ್ಳುವ, ದಲಿತ ಸಂಸ್ಕೃತಿಯಲ್ಲಿರುವ ಚೈತನ್ಯಶೀಲ ಸಂಗತಿಗಳನ್ನು ಕಟ್ಟಿಕೊಳ್ಳುವ ಈ ಘಟ್ಟವನ್ನು ಸಮರ್ಥವಾಗಿ ಸಂಕೇತಿಸುವ ಸಂಗತಿ ಎಂದರೆ ‘ಒಡಲಾಳ’ ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬರೆಯುವುದು. ಸಾಕವ್ವನು ತನ್ನ ಮೊಮ್ಮಗ ಶಿವು ರಾಜನಾಗುವ ಕನಸು ಕಾಣುವುದು. ಇಲ್ಲಿ ಇಕ್ರಲಾ ವದೀರ‍್ಲಾ ಎಂಬ ಕೋಪವುಳ್ಳ ‘ಒಂದು ಪದ’ದ ಕವನದ ಬಿರುಸು, ‘ನನ್ನ ಜನರು’ ಕವನದ ವೇದನೆಗಳು ಹಿಂಜರಿದು, ಅದರ ಜಾಗದಲ್ಲಿ ಅಥವಾ ಅದರ ಜನತೆಯಲ್ಲಿ ದಲಿತರ ರಾಜ್ಯದ ದಲಿತರು ಸುಖವಾಗಿರುವ ಅಪಮಾನಿತರಾಗುವ ಆದರ್ಶ ಸಮಾಜದ ಕನಸುಗಳನ್ನು ಕಾಣುವುದು ಶುರುವಾಗುತ್ತದೆ ‘ಸಾವಿರಾರು ನದಿಗಳು’ ಸಂಕಲನದ ಕವನಗಳು ಇಂತಹವು. ಮೊಗಳ್ಳಿ ಗಣೇಶ ಅವರ ‘ನನ್ನಜ್ಜನಿಗೊಂದು ಆಸೆಯಿತ್ತು’ ಕತೆಯನ್ನು ಇಲ್ಲಿ ನೆನೆಯಬಹುದು. ಕುಸುಮಾಬಾಲೆಯ ಚೆನ್ನನ ಅಪ್ಪ ಅಮ್ಮ ಕಾಣುವ ಕನಸುಗಳ ಚಿತ್ರಗಳನ್ನು ನೆನೆಯಬಹುದು.
ಶೈಥಿಲ್ಯ ಮತ್ತು ಅರಾಜಕತೆಯ ಘಟ್ಟ
ಆದರೆ ಬಹಳ ಬಿರುಸಿನಿಂದ, ಕಟ್ಟುವ ಉಮೇದಿನಿಂದ ಶುರುವಾದ ದಲಿತ ಚಳುವಳಿ ಮತ್ತು ಸಾಹಿತ್ಯ ಸೃಷ್ಟಿಯ ಒಂದು ಹಂತಕ್ಕೆ ಬಂದ ಮೇಲೆ ಅದರಲ್ಲಿ ಛಿದ್ರತೆಯ ಬಿರುಕುಗಳು ಕಾಣಿಸಿಕೊಂಡವು. ಇದಕ್ಕೆ ಕಾರಣ ದಲಿತರು ಮೊದಲ ಹಂತದಲ್ಲಿ ಆಗ ತಾನೆ ದುಡಿಯುವ ವರ್ಗದಿಂದ ಗ್ರಾಮಗಳಿಂದ ಬಂದವರಾಗಿದ್ದು. ಅವರ ಹಾಗೂ ಅವರು ಸಾಕಿಬೆಳೆಸಿದ ಗ್ರಾಮೀಣ ದಲಿತರ ನಡುವಣ ಸಂಬಂಧಗಳು ಕಡಿಯದ ರೀತಿಯಲ್ಲಿದ್ದವು. ಇವುಗಳ ನಡುವಣ ಸಂಬಂಧಗಳನ್ನು ಚಳುವಳಿಗಳು ಕೂಡ ಬೆಸೆದಿಟ್ಟಿದ್ದವು. ಆದರೆ ಯಾವಾಗ ದಲಿತರು ಮಧ್ಯಮವರ್ಗಕ್ಕೆ ಸೇರಿದ ಅನುಕೂಲಸ್ಥರಾದ ನಗರವಾಸಿಗಳಾದ ಆಧುನಿಕ ಶಿಕ್ಷಣ ಪಡೆದವರಾದರೋ, ಅವರಲ್ಲಿ ವೈಯಕ್ತಿಕವಾಗಿ ಸ್ವಾಭಿಮಾನ ಮುಂದುವರೆದ ಪ್ರಜ್ಞೆಗಳು ಜೀವಂತವಿದ್ದವು. ಆದರೆ ಹಳ್ಳಿಗಾಡಿನಲ್ಲಿ ಹಾಗೆಯೇ ಉಳಿದ ದಲಿತ ಸಮುದಾಯದ ಜತೆಗಿನ ಸಂಬಂಧ ಶಿಥಿಲವಾಯಿತು. ಇದಕ್ಕೆ ಚಳುವಳಿಗಳು ಕಡಿಮೆಯಾಗಿದ್ದು ಅಥವಾ ಅವು ಹೋರಾಟದ ಬದಲಾಗಿ ಈಗಿರುವ ಡೆಮಾಕ್ರಟಿಕ್ ವ್ಯವಸ್ಥೆಯಲ್ಲೂ ದಲಿತರಿಗೆ ಅನುಕೂಲಮಾಡುವ ಮಾದರಿಯನ್ನು ಒಪ್ಪಿದ್ದು ಕೂಡ ಕಾರಣವಿರಬಹುದು. ದಲಿತರಲ್ಲಿ ಹಳ್ಳಿಗಾಡಿನ ಸಮುದಾಯದ ಅನುಭವವಿಲ್ಲದ ತಲೆಮಾರು ಹುಟ್ಟಿತು. ಈಗಾಗಲೇ ಮುಂದುವರೆದ ಮಧ್ಯಮವರ್ಗದ ದಲಿತರಲ್ಲಿ ಸಮುದಾಯ ಪ್ರಜ್ಞೆಗೆ ಬದಲಾಗಿ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮೊಳೆತವು. ಸಮುದಾಯ ಪ್ರಾತಿನಿಧ್ಯದಲ್ಲಿ ತನಗೆ ಪಾಲುಬೇಕೆಂಬ ಸಿದ್ಧಾಂತಗಳು ಹುಟ್ಟಿದವು. ದಲಿತರ ಈ ಪರಿವರ್ತನೆಯು ತನ್ನ ಸ್ವರೂಪದಲ್ಲಿ ಅವಕಾಶವಾದಿಯೂ ವ್ಯಕ್ತಿವಾದಿಯೂ ಆಗಿತ್ತು. ಇದೇ ಹೊತ್ತಲ್ಲಿ ಆಳುವ ವ್ಯವಸ್ಥೆಗಳು ದಲಿತರನ್ನು ತಮ್ಮೊಳಗೆ ಅಳವಡಿಸಿಕೊಳ್ಳುವ ಕೆಲಸ ಶುರುಮಾಡಿದವು. ೮೦-೯೦ರ ದಶಕದ ಕರ್ನಾಟಕದ ಜನತಾಪಕ್ಷದ ಬುದ್ಧಿಜೀವಿಗಳಿಗೆ ಪ್ರಿಯವಾದ ರಾಜಕಾರಣವಾಯಿತು. ಲೇಖಕರು ಸರಕಾರಕ್ಕೆ ಹತ್ತಿರವಾದರು. ಆಗ ಜನತಾಪಕ್ಷಕ್ಕೆ ದಲಿತರ ಸೇರಾಟ ಶುರುವಾಯಿತು. ಕನ್ನಡ ಇಬ್ಬರು ದಲಿತ ಲೇಖಕರು ವಿಧಾನ ಪರಿಷತ್ತಿಗೆ ನಾಮಕರಣವಾದ ಬಳಿಕ, ತಮ್ಮನ್ನು ನೇಮಿಸಿದ ಮುಖ್ಯಮಂತ್ರಿಗಳಿಗೆ ತಮ್ಮ ಕೃತಿಗಳನ್ನು ಅರ್ಪಣೆ ಮಾಡಿದ್ದು ಸಾಂಕೇತಿಕವಾಗಿದೆ. ದಲಿತ ಸಂಘಟನೆಯು ಚುನಾವಣೆಯ ರಾಜಕಾರಣದಲ್ಲಿ ಭಾಗಿಯಾಗಲು ನಿರ್ಧರಿಸಿತು. ಬಿ. ಕೃಷ್ಣಪ್ಪನವರು ಕೋಲಾರದಲ್ಲಿ ಜನತಾಪಕ್ಷದ ಸಹಯೋಗದೊಂದಿಗೆ ಚುನಾವಣೆಗೆ ನಿಂತರು. ಇದನ್ನು ‘ತನ್ನ ಕಣ್ಣು ತಾನೇ ಚುಚ್ಚಿಕೊಂಡ ಘಟನೆ’ ದಲೇಕ ಬಣ್ಣಿಸುತ್ತದೆ. ಈ ಹಂತದಲ್ಲಿ ಹುಟ್ಟಿದ ಸಾಹಿತ್ಯದಲ್ಲಿ ಒಂದು ಬಗೆಯ ಕಲಾತ್ಮಕತೆಯ ಕಾಳಜಿಯ ತಣ್ಣನೆ ಅಭಿವ್ಯಕ್ತಿಗಳು ಕಂಡವು. ಲೇಖಕರು ಸೌಂದರ್ಯ ಪ್ರಜ್ಞೆಗಳ ಹುಡುಕಾಟದಲ್ಲಿ ಪ್ರತಿರೋಧದ ಸೊಲ್ಲು ಅಡಗಿತು. ಈ ತಣ್ಣನೆಯ ದನಿಯನ್ನು ಊರುಕೇರಿ ಎಂಬ ಸಿದ್ಧಲಿಂಗಯ್ಯನವರು ತಳಮಳ ರಹಿತವಾದ ಬರವಣಿಗೆಯಲ್ಲಿ ನೋಡಬಹುದು.

ಆತ್ಮವಿಮರ್ಶೆಹೊಸ ಹುಡುಕಾಟ ಹಾಗೂ ಮರುಹುಟ್ಟಿನ ಘಟ್ಟ
ಆದರೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿದ್ದ ಒಂದು ನೆಪವಾಗಿ ಬಿರುಕು ಬಿಡುತ್ತಿದ್ದ ದಲಿತ ಸಂಘರ್ಷ ಸಮಿತಿಯೂ ದಲಿತರೂ ಛಿದ್ರವಾದರು. ತಮಗೆ ವೈಯಕ್ತಿಕವಾಗಿ ಪಾಲು ಹುಡುಕುತ್ತ ಅವರು ಗುಂಪುಗಳಾಗಿ ಒಡೆದರು. ಅವರಲ್ಲಿ ಒಂದು ಬಗೆಯ ಅನೈಕ್ಯತೆ ಏರ್ಪಟ್ಟಿತು. ಇದಕ್ಕೆ ಕೆಲವು ಲೇಖಕರೂ ಒಲಿಯಾದರು. ಇದು ದಲಿತ ಚಿಂತಕರ ಮೇಲೂ ಲೇಖಕರ ಮೇಲೂ ಗಾಢವಾದ ಪರಿಣಾಮ ಬೀರಿತು. ಅದು ವಿಷಾದಕರ ಪರಿಣಾಮವೇ ಆಗಿತ್ತು’. ಇದು ವಿಷಾದಗಳನ್ನು ಹುಟ್ಟಿಸಿತು. ನವಿಲುಗಳು ಮಾಂಸದಂಗಡಿಯಲ್ಲಿ ತೂಗುಬಿದ್ದಿರುವ ರೂಪಕವು ಇಂಥ ವಿಷಾದದ ಸಂಕೇತ. ಇದು ಒಂದು ಬಗೆಯ ಆತ್ಮ ವಿಮರ್ಶೆಯನ್ನು ಹುಟ್ಟಿಸಿತು. ದಲೇಕದವರು ಉಲ್ಲೇಖಿಸಿದ ತನ್ನ ಕಣ್ಣನ್ನು ತಾನೆ ಚುಚ್ಚಿಕೊಂಡ ರೂಪಕವು ಆತ್ಮ ವಿಮರ್ಶೆಯ ಸಂಕೇತವಾಗಿದೆ. ಲಕ್ಷಣ್ ಅವರು ಈಚೆಗೆ ಬರೆದಿರುವ ತಮ್ಮ ಆತ್ಮಚರಿತ್ರೆಯಲ್ಲಿ (ಸಂಬೋಳಿ) ದಲಿತ. ಸಂಘಟನೆಗಳ ಡಿಮಾರಲೈಜೇಶನ ಕುರಿತು ಕಟುವಾಗಿ ವಿಮರ್ಶಿಸುತ್ತಾರೆ. ಈ ವಿಷಾದ ಆತ್ಮ ವಿಮರ್ಶೆಗಳು ಹೊಸ ಹುಟ್ಟಿನ ಹುಡುಕಾಟವನ್ನು ಕೂಡ ಪ್ರೇರಿಸಿವೆ. ಈ ಹುಡುಕಾಟವೂ ಇನ್ನೂ ನಿಂತಿಲ್ಲ. ಪರ್ಯಾಯವು ಸ್ಪಷ್ಟವಾಗಿ ಒಡಮೂಡಿಲ್ಲ.
ಪರ್ಯಾಯ ಹುಡುಕಾಟಗಳ ಪರಿಯಿದು. ಹೊಸ ಹುಡುಕಾಟದ ಪರಿಯನ್ನು ಹಾಗೂ ಮರು ಹುಟ್ಟಿನ ತವಕಗಳನ್ನು ಹೀಗೆ ಗುರುತಿಸಬಹುದು. ದಲಿತ ತತ್ವದಲ್ಲಿ ಹೊಸ ಪರ್ಯಾಯ ಹುಡುಕಾಡುತ್ತ, ಅಲ್ಲಿನ ಅನುಭಾವಿಕ ಪರಂಪರೆಗಳಲ್ಲಿ ನೆಲೆಯನ್ನು ಹುಡುಕುವ ಸಾಂಸ್ಕೃತಿಕ ಪರ್ಯಾಯದ ತುಡಿತ; ಎರಡು ದಲಿತತನದಿಂದ ಬಿಡುಗಡೆ ಹಾಗೂ ಕೂಡ ಹೋರಾಟಗಳಲ್ಲಿ ನಂಬಿಕೆಯಿಡುವ ವಿಶಾಲ ಹಾದಿ.

(ಅ) ದಲೇಕದವರು ಪ್ರಕಟಿಸಿರುವ ಪ್ರಣಾಳಿಕೆ ರೂಪದ ಕರಡು ಲೇಖನದ ಪ್ರಕಾರ ದಲಿತ ಸಂಘಟನೆ ಚಳುವಳಿ ಸಾಹಿತ್ಯಗಳಲ್ಲಿ ರಾಜಕೀಯ ಇದೆ. ಅದಕ್ಕೆ ಆ ನೆಲದ ಆನುಭಾವಿಕ ಆಧ್ಯಾತ್ಮಿಕ ನೈತಿಕ ತುಡಿತಗಳು ಇರಲಿಲ್ಲ. ಹೀಗಾಗಿ ಅದು ಬಹಳ ಬೇಗ ಕುಸಿಯಿತು. ಆದ್ದರಿಂದ ನೈತಿಕತೆಯುಳ್ಳ ಹಾಗೂ ಈ ಪ್ರತಿಭಟನಾ ಪರಂಪರೆಗಳ ಸತ್ವವನ್ನುಳ್ಳ ರಾಜಕಾರಣವನ್ನು ಮಾಡಬೇಕು. ಇದಕ್ಕಾಗಿ ಈ ನೆಲದ ಅನುಭಾವಿ ಪರಂಪರೆಗಳನ್ನು ಅನುಸಂಧಾನ ಮಾಡಬೇಕು. ಇದಕ್ಕೆ ತಕ್ಕಂತೆ ಅನೇಕ ದಲಿತ ಲೇಖಕರು ಕೋಟಗಾನಹಳ್ಳಿ ರಾಮಯ್ಯ, ಕೆ. ಬಿ. ಸಿದ್ದಯ್ಯ, ದೇವನೂರು ಮಹಾದೇವ, ಗೋವಿಂದಯ್ಯ, ಮಹಾದೇವ ಸಂಕನಪುರ, ಕುಕ್ಕರಹಳ್ಳಿ ಬಸವರಾಜ ಮುಂತಾದವರು ಮಂಟೇಸ್ವಾಮಿ ಪರಂಪರೆಯ ತಿರುಗಾಟ ಅಧ್ಯಯನಗಳಲ್ಲಿ ತೊಡಗಿರುವುದನ್ನೂ ಕಾಣಬಹುದು. ಇದರ ಭಾಗವಾಗಿಯೇ ಸ್ಥಳೀಯ ಜನಪದ ಪರಂಪರೆಗಳನ್ನು ಲೇಖಕರು ತಮ್ಮ ಹೊಸ ಹುಟ್ಟಿನ ಹೊಸಚೈತನ್ಯ ಅವಾಹಿಸುವುದಕ್ಕಾಗಿ ಅನುಸಂಧಾನ ಮಾಡುತ್ತಿದ್ದಾರೆ. ಹೀಗಾಗಿ ಅವರ ಬರವಣಿಗೆಯಲ್ಲಿ ಜನಪದ ಸಾಂಸ್ಕೃತಿಕ ನಾಯಕರು ಜನಪದ ಪರಂಪರೆಗಳು ಆಚರಣೆಗಳನ್ನು ಬಳಸಿಕೊಂಡು ಸಾಹಿತ್ಯ ನಿರ್ಮಾಣವಾಗುತ್ತಿದೆ. ‘ಕುಸುಮ ಬಾಲೆ’ ಕಾದಂಬರಿಯು ಪೂರ್ವಿಕ ಮಲೆಮಾದೇಶ್ವರನಿಗೆ ಅರ್ಪಿತವಾಗಿರುವುದನ್ನು ಉಲ್ಲೇಖಿಸಬೇಕು. ಒಡಲಾಳದಲ್ಲಿ ಇರದ, ಇರಲು ಸಾಧ್ಯವಿಲ್ಲದ ಕುರಿಯಯ್ಯನ ಪಾತ್ರ, ಅವನು ಮೈಮೇಲೆ ಬಂದು ನನ್ನಿ ಹೇಳುವ ಪ್ರಕರಣ, ಜೋತಮ್ಮಂದಿರ ಪಾತ್ರಗಳು, ಸೆಟಿಗವ್ವನಿಂದ ತನ್ನ ಕೂಸನ್ನು ಉಳಿಸಿಕೊಳ್ಳು ಕೆಂಪಿಯ ತಾಯಿ ರಾತ್ರಿಯಿಡಿ ನಾಗರಬೆತ್ತ ಮರುಜವಳಿ ಕಡ್ಡಿಯನ್ನು ಹಿಡಿದು ಮನೆಕಾವಲು ಮಾಡುವ ಚಿತ್ರ ಇವೆಲ್ಲ ವಾಸ್ತವವಾದಿ ಕಥನಕ್ರಮ ಹೇಳಲಾಗದ ಸತ್ಯಗಳನ್ನು ಹೇಳುವ ಹೊಸ ಕಥನಕ್ರಮದ ಪ್ರಯೋಗಗಳು. ಆದರೆ ಈ ಪ್ರಯೋಗದ ಹಿಂದೆ ಜನಸಮುದಾಯದ ಚಿಂತನೆಯನ್ನು ತನ್ನ ಆಧುನಿಕ ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳಿಗೆ ಬೆರೆಸಿಕೊಳ್ಳುವ ಚಿಂತನಾಕ್ರಮ ಕೆಲಸ ಮಾಡಿದೆ. ಕೆ. ಬಿ. ಸಿದ್ದಯ್ಯ ಅವರು ಬಕಾಲ ಎಂಬ ಆದಿಜಾಂಬವರ ಪುರಾಣದ ಮುನಿಯನ್ನು ಕುರಿತ ಪುರಾಣವನ್ನು ಬಳಸಿಕೊಂಡು, ದಕ್ಕಲ ಮಾದಿಗರ ಪುರಾಣದಲ್ಲಿ ಬರುವ ‘ದಕ್ಲದೇವಿ’ ಯ ಕಥೆಯನ್ನು ಬಳಸಿಕೊಂಡು ಕಾವ್ಯಗಳನ್ನು ಬರೆದರು. ಕೋಟಗಾನಹಳ್ಳಿ ರಾಮiಯ ಅವರು ರಚಿಸಿದ ‘ಸಿಂಧ್ ಮಾದಿಗರ ಸಂಸ್ಕೃತಿ’ ಕೃತಿಯ ದಲಿತರ ಸಂಸ್ಕೃತಿ ಪುರಾಣ ಐತಿಹ್ಯ ಸಾಹಿತ್ಯಗಳ ಲೋಕವನ್ನು ಹೊಸರಾಜಕೀಯ ಸಾಮಾಜಿಕ ಆಶಯಗಳಿಗಾಗಿ ಅನುಸಂಧಾನ ಮಾಡುವ ಕೆಲಸವನ್ನು ಮಾಡುತ್ತದೆ. ಸಿದ್ಧಲಿಂಗಯ್ಯನವರು ಗ್ರಾಮ ದೇವತೆಗಳನ್ನು ಕುರಿತು ಮಾಡಿರುವ ಅಧ್ಯಯನಗಳಲ್ಲಿ ಈ ಬಗೆಯ ಆಧುನಿಕ ರಾಜಕಾರಣಕ್ಕೆ ಆಧುನಿಕ ಚಿಂತನೆಗೆ ಸೃಷ್ಟಿಗೆ ಜನಸಮುದಾಯದ ಸಂಸ್ಕೃತಿಗೆ ಲೋಕದ ಜತೆ ಸಂಪರ್ಕ ಬೆಳೆಸಬೇಕು ಎಂಬ ಸಣ್ಣ ಉದ್ದೇಶವೂ ಇದ್ದಂತಿದೆ.

(ಆ) ಕೆಲವು ದಲಿತ ಲೇಖಕರು ಇನ್ನೂ ಸಮುದಾಯವಾದಿ ನೆಲೆಯಲ್ಲೇ ಇದ್ದಾರೆ. ದಲಿತರಿಂದ ಬರೆದುದೇ ದಲಿತ ಸಾಹಿತ್ಯ ಎಂಬ ವ್ಯಾಖ್ಯೆಯ ವಿಚಿತ್ರ ಚಟುವಟಿಕೆಗಳು ದಲಿತ ಸಾಹಿತ್ಯವನ್ನು ಮತ್ತಷ್ಟು ಜಾತಿನಿಷ್ಠ ಮಾಡುವ ಸಾಧ್ಯತೆಯಿದೆ. ಇದರಲ್ಲಿ ಹಿರಿಯ ದಲಿತ ಲೇಖಕರು ಚಿಂತಕರು ಭಾಗವಹಿಸುವಿಕೆ ಕಡಿಮೆ. ಇದರಲ್ಲಿರುವ ಲೇಖಕರು ಬಹಳ ದೊಡ್ಡ ಬರೆಹವನ್ನು ಸೃಷ್ಟಿ ಮಾಡಿದವರಲ್ಲ. ತಮ್ಮ ಬರೆಹಕ್ಕೆ ದಲಿತರು ಎಂಬ ಕಾರಣಕ್ಕೆ ಮಾನ್ಯತೆ ಒದಗಬೇಕು ಎಂಬ ಮನೋಭಾವ ಕೆಲಸ ಮಾಡುತ್ತಿರುವುದು ಕಾಣುತ್ತದೆ. ದಲಿತ ನೆಲೆಯಿಂದ ಕನ್ನಡ ಸಾಹಿತ್ಯವನ್ನು ಪುನರವಲೋಕ ಪುನರ್ ಮೌಲ್ಯೀಕರಣ ಮಾಡುವುದನ್ನು ಇಲ್ಲಿ ನೋಡಬಹುದು.

(ಇ) ಇನ್ನೊಂದು ದಲಿತ ಲೇಖಕರ ನೆಲೆಯಿದೆ. ಇದು ಮೇಲಿನಂತೆ ಸೆಕ್ಟೇರಿಯನ್ ಅಗದೆ ವಿಶಾಲನೆಲೆಯಲ್ಲಿ ಕನ್ನಡ ಲೇಖಕರ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತದೆ. ದಲಿತರಾಗಿ ಹುಟ್ಟಿದ್ದರಿಂದ ದಲಿತಾನುಭವವನ್ನು ತಮ್ಮ ಬರಹದಲ್ಲಿ ಸಹಜವಾಗಿ ಅನಿವಾರ್ಯವಾಗಿ ಬಳಸಿಕೊಂಡರೂ, ತಮ್ಮ ಸಾಹಿತ್ಯ ಸೃಷ್ಟಿ ಹಾಗೂ ಸಂವೇದನೆಯ ಪ್ರಕ್ರಿಯೆಯಲ್ಲಿ ಇದನ್ನು ಮೀರಿದಂತೆ ತಾವು ಒಟ್ಟು ಕನ್ನಡದ ಲೇಖಕರಾಗುವ ಹಂಬಲದವರು ಇವರು. ತಮ್ಮ ಸಾಹಿತ್ಯ ವಿಶಾಲ ಮಾನವತೆಯ ಭಾಗ ಎಂದು ಭಾವಿಸುವವರು. ದಲಿತ ಲೇಖಕ ಅನಿಸಿಕೊಳ್ಳಲು ಹಿಂಜರಿಕೆಯಿಲ್ಲ. ಆದರೆ ಕೇವಲ ದಲಿತ ಲೇಖಕ ಅನಿಸಿಕೊಳ್ಳುವುದು ತಮ್ಮನ್ನು ಸೀಮಿತ ನೆಲೆಗೆ ಇರಿಸುತ್ತದೆ ಎಂಬ ಪ್ರಜ್ಞೆಯುಳ್ಳವರು. ಅದರಲ್ಲೂ ಸಿದ್ಧಲಿಂಗಯ್ಯ ಅವರು ಈ ಬಗೆಯ ಹೇಳಿಕೆಗಳನ್ನು ನೀಡಿರುವುದು ಕಾಣುತ್ತದೆ. ಈ ಚಿಂತನೆಯಲ್ಲಿ ದಲಿತ ಸಂವೇದನೆ ಎಂಬುದು ಇದೆ. ಇದರಲ್ಲಿ ಕೇವಲ ದಲಿತ ಲೇಖಕರು ಮಾತ್ರವಲ್ಲ, ದಲಿತೇತರ ಲೇಖಕರೂ ಕೂಡ ಬರುತ್ತಾರೆ ಎಂದು ಭಾವಿಸಲಾಗುತ್ತದೆ. ಚೋಮನದುಡಿ ಬರೆದ ಶಿವರಾಮ ಕಾರಂತ, ಮಲೆಗಳಲ್ಲಿ ಮದುಮಗಳು ಬರೆದ ಕುವೆಂಪು, ಕತೆಗಾರರಾದ ಕುಂ. ವಿ. ಬೆಸಗರಹಳ್ಳಿ ರಾಮಣ್ಣ ಮುಂತಾದವರು ದಲಿತ ಸಂವೇದನೆಯುಳ್ಳವರು ಎಂದು ನಂಬುತ್ತದೆ. ಸಾಹಿತ್ಯ ವ್ಯಾಖ್ಯೆಯಲ್ಲಿನ ಈ ವಿಸ್ತಾರವು ಕ್ರಿಯಾಲೋಕಕ್ಕೂ ವಿಸ್ತರಿಸುತ್ತದೆ. ದಲಿತರ ಸಮಸ್ಯೆಗಳಿಗೆ ದಲಿತರು ಮಾತ್ರ ಹೋರಾಡಲಾಗದು. ಕೋಮುವಾದದಿಂದ ಪೀಡಿತರಾದ ಮುಸ್ಲಿಮರ ಬಿಡುಗಡೆಗಾಗಿ ಕೇವಲ ಮುಸ್ಲಿಮರು ಹೋರಾಟ ಮಾಡಲಾಗದು. ಮಹಿಳೆಯ ಬಿಡುಗಡೆಗೆ ಮಹಿಳೆಯರು ಮಾತ್ರ ಹೋರಾಡಲಾಗದು. ಇದು ಬಲಾಬಲದ ಪ್ರಶ್ನೆಗಿಂತ ಕೂಡು ಹೋರಾಟದ ತಾತ್ವಿಕತೆಯ ಪ್ರಶ್ನೆ. ದಲಿತ ಚಳುವಳಿಯಲ್ಲಿ ದಲಿತ ಸಂವೇದನೆ ಇರುವ ಇತರ ಸಮಾನಮನಸ್ಕರೂ ಸೇರಿಕೊಳ್ಳಬೇಕು ಎಂದು ಇದು ಭಾವಿಸಿದೆ. ಸಮಾನ ಶತ್ರುಗಳನ್ನು ಗುರುತಿಸಿಕೊಳ್ಳುವಿಕೆಯ ನೆಲೆಯಲ್ಲಿ ಸಮಾನ ಸಂಗಾತಿಗಳು ಇರಬೇಕು ಎಂದು ಇದು ಭಾವಿಸಿದೆ. ಎಂತಲೆ ಈಚೆಗೆ ಸೇರಿರುವ ದಲೆಕದಲ್ಲಿ ಕೂಡು ಹೋರಾಟದ ಕಲ್ಪನೆಯಿದೆ. ಸಮಾನ ಮನಸ್ಕರಾದ ಚಂಪಾ, ಕೆ. ಮರುಳಸಿದ್ದಪ್ಪ ಇದ್ದಾರೆ.

ಅಂತಿಮವಾಗಿ
ಹೀಗೆ ಅರಿವಿನ ಆಸ್ಫೋಟಗಳೂ ವರ್ತಮಾನದ ವಿದ್ಯಮಾನಗಳನ್ನು ಸರಿಯಾದ ತಕ್ಕ ರಾಜಕೀಯ ಪ್ರಜ್ಞೆಯಿಂದ ಅರಿಯಲಾಗದ ಗೊಂದಲಗಳು, ಅರಿಯುವ ತನ್ನದೇ ಕ್ರಮದಲ್ಲಿ ಪ್ರತಿಕ್ರಿಯಿಸುತ್ತಿರುವ ಸೃಜನಶೀಲ ಸಾಹಿತಿಗಳೂ ಇರುವ ಈ ಪರಿಸ್ಥಿತಿಯಲ್ಲಿ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ದಲಿತ ಸಮುದಾಯಕ್ಕೆ ಬೌದ್ಧಧರ್ಮದ ಸೆಳೆತ ಪರ್ಯಾಯವೇ, ಈ ಬಗ್ಗೆ ಸ್ಪಷ್ಟತೆಯಿಲ್ಲ. ಮೀಸಲಾತಿಯ ಪ್ರಶ್ನೆಯ ಕಾರಣದಿಂದ ಒಂದು ಗೂಡಿದ್ದ ಪ್ರಜ್ಞಾವಂತ ದಲಿತರನ್ನು ಇದೇ ಮೀಸಲಾತಿಯ ಅಸಮಾನ ಹಂಚಿಕೆಯ ಪ್ರಶ್ನೆ ಈಗ ವಿಭಜನೆ ಮಾಡಿದೆ. ಈ ನಡುವೆ ಮೀಸಲಾತಿಯ ಪರಿಕಲ್ಪನೆ ಈ ಜಾಗತೀಕರಣದ ವ್ಯವಸ್ಥೆಯಲ್ಲಿ ಅಸಂಬದ್ಧವೂ ಆಗುತ್ತಿದೆ. ಇಂತಹ ಸ್ಥಿತಿಯಲ್ಲಿ ದಲಿತರನ್ನು ಅವರ ಸಾಂಸ್ಕೃತಿಕ ನೆಲೆಗಳು ಹಿಡಿದಿಡುತ್ತವೆ ಎನ್ನುವುದು ಸುಳ್ಳಾಗಿದೆ. ಜನರನ್ನು ಉಪಪಂಗಡಗಳಾಚೆಯೂ ಹಿಡಿದಿಡಬಹುದಾದ ಒಂದು ಸಂಗತಿಯಾದ ಮಾರ್ಕ್ಸ್‌ವಾದದ ಬಗೆಗಿನ ಅಪನಂಬಿಕೆ ದಲಿತರಲ್ಲಿ ಇನ್ನೂ ಇದೆ. ಅಂಬೇಡ್ಕರ್ ಚಿಂತನೆಯೊಂದೇ ಈ ಹೊತ್ತು ಅವರನ್ನು ಬಹಳ ದೂರ ನಡೆಸಲಾರದು. ಹಳ್ಳಿಗಾಡಿನ ರೈತಕೂಲಿಗಳ ನೆಲೆಯ ದಲಿತರ ಜತೆ ಬೆಸೆಯುವ ಭೂಹೋರಾಟಗಳು ಈಗ ಇಲ್ಲವಾಗಿರುವ ಕಾರಣ, ಆ ಸಮುದಾಯವನ್ನು ಈ ಪ್ರಜ್ಞಾವಂತ ದಲಿತರ ಸಂಘಟನೆಗಳು ಪ್ರತಿನಿಧಿಸಲು ಆಗುತ್ತಿಲ್ಲ. ಸರಕಾರಿ ನೌಕರರ ಪಟ್ಟಣದ ಮಧ್ಯಮವರ್ಗದ ದಲಿತರ ನೆಲೆಯಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಇವೆ. ಹೀಗಾಗಿ ದಲಿತ ಚಿಂತನೆಯಲ್ಲಿ ತೀವ್ರವಾದ ರಾಜಕೀಯ ತಾತ್ವಿಕತೆ ರೂಪುಗೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ದಲಿತರನ್ನು ನಕ್ಸಲ್‌ವಾದವು ಕೆಲಮಟ್ಟಿಗೆ ಸೆಳೆದಿದೆಯಾದರೂ, ಅದು ವ್ಯಾಪಕವಾಗಿಲ್ಲ. ಕುದಿತವಿಲ್ಲದ ಸಿದ್ಧಲಿಂಗಯ್ಯ, ಕುದಿಯುತ್ತಿರುವ ಹನುಮಂತಯ್ಯ ಈ ಕಂದರವಂತೂ ಇದೆ. ಇದಕ್ಕೆ ತಲೆಮಾರುಗಳ ಅಂತರ ಕಾರಣವೆ? ನಿಷ್ಕಳಂಕವಾದ, ನೈತಿಕವಾಗಿ ಕೆಟ್ಟರಿರದ, ಆದರೆ ಗೊತ್ತುಗುರಿಯಿಲ್ಲದ ಹೊಸ ತಲೆಮಾರು ಹಾಗೂ ಭ್ರಷ್ಟವಾಗಿರುವ ಹಳೆತಲೆಮಾರುಗಳ ಅಂತರ ಹೀಗೆ ಮಾಡಿದೆಯೆ? ಎನ್. ಜಿ. ಓ. ಗಳು ದಲಿತರ ಜೀವನದಲ್ಲಿ ಪ್ರವೇಶಿಸಿ ಅವರ ರಾಜಕೀಯ ದೃಷ್ಟಿಕೋನದಲ್ಲಿ ಉಂಟುಮಾಡಿರುವ ಅರಾಜಕತೆಗಳೂ ಇವೆ; ಅವು ದಲಿತತ್ವವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿಕೊಂಡಿವೆ ತುಮಕೂರಿನ ಒಂದು ಎನ್. ಜಿ. ಓ. ದಲಿತತ್ವವನ್ನು ಕುರಿತು ಒಂದು ದೊಡ್ಡ ಪುಸ್ತಕ ಪ್ರಕಟಿಸಿತು. ಕ್ರೈಸ್ತ ಮಿಷನರಿಗಳು ಸ್ಥಾಪಿಸಿರುವ ಎನ್. ಜಿ. ಓ. ಗಳಲ್ಲಿ ದಲಿತರು ಬ್ರಾಹ್ಮಣವಿರೋಧಿ ಅಜೆಂಡಾಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿರುವುದು ಕಾಣುತ್ತದೆ. ದಲಿತ ಸಾಹಿತ್ಯ ಮತ್ತು ಚಿಂತನೆಯಲ್ಲಿ ಮಹಿಳೆಯರು ಕಾಲು ಶತಮಾನವಾದರೂ ಅತ್ಯಂತ ಕಡಿಮೆಯಿದ್ದಾರೆ. ಇಂತಹ ರಾಜಕೀಯ ಹತಾಶೆಯ ಪರಿಸ್ಥಿತಿಗಳು ಕರ್ನಾಟಕದಲ್ಲಿ ಇವೆ. ಇವು ಸಾಹಿತ್ಯ ರಚನೆಯ ಮೇಲೆ ಒಂದು ಮಂಕುತನವನ್ನು ಕವಿಸಿವೆ. ಆದರೆ ಇಂತಹ ಹತಾಶೆಯ ಪರಿಸ್ಥಿತಿಗಳೆ ಚೈತನ್ಯದ ಹೊಸ ಹಾದಿಗಳ ಹೊಳೆಯುವಿಕೆ ಕಾರಣವಾಗಬಲ್ಲವು. ಸಾಹಿತ್ಯದ ಒಂದು ಶಕ್ತಿಯಿರುವುದೇ ಹತಾಶೆಯ ಕತ್ತಲಲ್ಲಿ ಕಿಡಿಯಾಗಿ ಹೊಮ್ಮುವುದರಲ್ಲಿ ತಾನೆ.
ಪರಾಮರ್ಶನ ಗ್ರಂಥಗಳು
೧. ಸಾಹಿತ್ಯ ಮೀಮಾಂಸೆ (ಸಂ), ಡಾ. ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪.
೨. ಮರದೊಳಗಿನಕಿಚ್ಚು, ಡಾ. ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪.
—-ಕನ್ನಡ ದಲಿತ ಸಾಹಿತ್ಯಸಮಾಲೋಕನ. (ಸಂ) ಡಾ. ಅರ್ಜುನ ಗೊಳಸಂಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂ, ೨೦೦೩ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಸಂಪಾದಕರಿಗೆ ವಂದನೆಗಳು (ಸಂ. )
ಪುಸ್ತಕ: 
ಲೇಖಕರು: 
ಪ್ರಕಾಶಕರು: 
ಸಂಪುಟ ಸಂಪಾದಕರು: