ಗುರುವಾರ, ಏಪ್ರಿಲ್ 21, 2016

ಮೇಟಿ ಮಲ್ಲಿಕಾರ್ಜುನ ಅವರ ಅಂಬೇಡ್ಕರ್ ಜಯಂತಿ ಭಾಷಣದ ಪೂರ್ಣ ಪಾಠ

  

  ಮೇಟಿ ಮಲ್ಲಿಕಾರ್ಜುನ ಅವರುಇತ್ತೀಚೆಗೆ ಅಂಬೇಡ್ಕರ್ ಜಯಂತಿಯಲ್ಲಿ ಭಾಷಣ ಮಾಡಿದ್ದರು. ಆ ಭಾಷಣದಲ್ಲಿ ದೇಶದ್ರೋಹಿ ಮಾತನಾಡಿದ್ದಾರೆ ಅವರನ್ನು ಬಂಧಿಸಬೇಕು ಎಂದು ಕೆಲವರು ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಾಗಾದರೆ ಭಾಷಣದಲ್ಲಿ ಏನಿತ್ತು.? ಇಲ್ಲಿದೆ ಅವರ ಭಾಷಣದ ಪೂರ್ಣ ರೂಪ.



 ರೂಪಪ್ರಕಾಶ್, ಗೌರಿ ಶಂಕರ್ ಬಿ.ಆರ್, ಭಾಸ್ಕರ ಟಿ.ಪಿ, ಕಿರಣ್ ಗಾಜನೂರುಎಲ್ಲರಿಗೂ ನಮಸ್ಕಾರ ಹಿರಿಯರೇ ಮತ್ತು ಸ್ನೇಹಿತರೆ, ಅಂಬೇಡ್ಕರ್ ಅವರ 125ನೇ ಜಯಂತಿಯ ಶುಭಾಷಯಗಳು. ಇವತ್ತು ಭಾರತಾದ್ಯಂತ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ.ಉತ್ಸವ ಎನ್ನುವುದು ಕೇವಲ ಉತ್ಸವವಾಗಿರದೆ ನಾವು ನಮ್ಮಸಮುದಾಯಗಳ ಮತ್ತು ನಮ್ಮ ಜನಸಾಮಾನ್ಯರ ಬದುಕಿನ ಒಂದುವಿಶಿಷ್ಟ ವಿದ್ಯಮಾನವಾಗಿ, ಕಾರ್ಯಕ್ರಮವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕಾಗಿದೆ. 

  ಬಹುತೇಕ ವರ್ಷಗಳಿಂದ ನಾನು ನೋಡಿದ ಹಾಗೆ ಅಂಬೇಡ್ಕರರ ಕುರಿತು ಆಚರಿಸುವ ದಿನಾಚರಣೆಗಳಾಗಿರಬಹುದು ಅಥವಾ ಸರ್ಕಾರಿ ಕಾರ್ಯಕ್ರಮಗಳಾಗಿರಬಹುದು ಒಂದು ಸಂಪ್ರದಾಯವಾಗಿ ಆಚರಿಸುತ್ತಾ ಬಂದಿದ್ದೇವೆ. ಅಂದರೆ ಅಂಬೇಡ್ಕರರ ಬಗೆಗೆ ನಮಗೆ ಇರಬಹುದಾದ ಗೌರವ ತೋರಿಕೆಯ ಗೌರವವಾಗಿ ಅಥವಾ ನಾವು ಅದನ್ನು ಅಂಬೇಡ್ಕರ್ ರವರಿಗೆ ನಮಗೆ ಗೌರವ ಇದೆ ಎನ್ನುವುದನ್ನು ತೋರ್ಪಡಿಸುವುದಕ್ಕಾಗಿ ನಾವು ಈ ದಿನಾಚರಣೆಯನ್ನು ಆಚರಿಸುವ ಒಂದು ಪರಿಪಾಠವನ್ನು ನೋಡುತ್ತಿದ್ದೇವೆ.ದಯವಿಟ್ಟು ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದೇನೆಂದರೆ ಅಂಬೇಡ್ಕರ್ ಅವರ ದಿನಾಚರಣೆಯನ್ನು ಆಚರಿಸುವ ಮತ್ತು ಅಂಬೇಡ್ಕರ್ ಅವರನ್ನು ಕುರಿತು ಉಪನ್ಯಾಸಗಳನ್ನು ಮಾಡುವ, ಅಂಬೇಡ್ಕರ್ ಅವರನ್ನು ಕುರಿತು ಚರ್ಚೆ ಮಾಡುವ ಹೊತ್ತಿನಲ್ಲಿ ಯಾಕೆ ನಾವು ಅಂಬೇಡ್ಕರ್ ಅವರನ್ನು ಕುರಿತು ಚರ್ಚೆ ಮಾಡಬೇಕು? ಮತ್ತು ಅವರ ವಿಚಾರಗಳನ್ನು ತಿಳಿಯಬೇಕು ಎಂದು ಹೇಳಿದರೆ ಅದು ಇವತ್ತು ನಾವು ಬದುಕುವುದಕ್ಕೆ ಬೇಕಾಗಿರುವ ದಾರಿಗಳನ್ನು ಅಲ್ಲಿ ಕಂಡುಕೊಳ್ಳಬಹುದು.

  ಅಂಬೇಡ್ಕರ್ ಅವರು ಚಿಂತಿಸಿದಂತಹ ವಿಚಾರಗಳು, ಅವರು ನಮ್ಮ ಭಾರತದ ಬಗೆಗೆ, ಇಲ್ಲಿಯ ಜನಸಾಮಾನ್ಯರ ಬಗೆಗೆ, ಇಲ್ಲಿಯ ಜನಸಮುದಾಯಗಳ ಬಗೆಗೆ ಇಲ್ಲಿಯ ಹಿಂದುಳಿದ ದಲಿತ ಆದಿವಾಸಿಗಳ ಹೆಣ್ಣುಮಕ್ಕಳ ಬಗೆಗೆ ಬಹಳ ಖಚಿತವಾಗಿ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ದಾರಿಯನ್ನು ತೋರಿಸಿದ್ದಾರೆ. ಹಾಗಾಗಿ ಆ ವಿಷಯಗಳನ್ನು ಮರೆಮಾಚಿ ನಾವು ಕೇವಲ ರಾಜಕೀಯವಾಗಿ ಅಥವಾ ರಾಜಕಾರಣದ ಬಗೆಯಾಗಿ ನಾವು ಅಂಬೇಡ್ಕರ್ ಜಯಂತಿಯನ್ನು ಆಚರಿಸುವುದು ಸರಿಯಲ್ಲ. ಹಾಗಾಗಿ ಹಿರಿಯರು ಮತ್ತು ಎಳೆಯರು ಇವರೆಲ್ಲರೂ ಸೇರಿ ಅಂಬೇಡ್ಕರರನ್ನು ಕುರಿತು ಅರ್ಥ ಮಾಡಿಕೊಳ್ಳುವ ತುರ್ತು ಒದಗಿದೆ.ನಮ್ಮ ಭಾರತದ ರಾಜಕಾರಣವನ್ನು ಮತ್ತು ಭಾರತದ ರಾಜಕಾರಣದ ಮುಖ್ಯ ಚುಕ್ಕಾಣಿ ಹಿಡಿದಂತಹ ವ್ಯವಸ್ಥೆ ನಮ್ಮ ದೇಶದ ಶಾಂತಿಯನ್ನು ಕದಡುವ, ನಮ್ಮ ದೇಶದ ಸೌಹಾರ್ದತೆಯನ್ನು ಕದಡುವ, ನಮ್ಮ ದೇಶದ ಸಮುದಾಯಗಳಲ್ಲಿರುವ ಮನಃಶಾಂತಿಯನ್ನು ಕೆಡಿಸುವ ನಿಟ್ಟಿನಲ್ಲಿ ಇವತ್ತು ಆ ರಾಜಕಾರಣ ನಡೀತಾ ಇದೆ. ಅದು ಧರ್ಮದ ಹೆಸರಿನಲ್ಲಿ, ರಾಷ್ಟ್ರೀಯತೆಯ ಹೆಸರಿನಲ್ಲಿ ನಡೀತಾ ಇದೆ. 

  ರಾಷ್ಟ್ರೀಯತೆ ಎನ್ನುವುದು, ಧರ್ಮ ಎನ್ನುವುದು ನಮ್ಮ ಬದುಕಿಗೆಹೊರತಾಗಿರುವ ಮತ್ತು ದಿನನಿತ್ಯದ ಬದುಕಿಗೆ ಸಂಬಂಧ ಪಡದಿರುವಂತಹ ವಿಚಾರಗಳನ್ನು ತಿಳುವಳಿಕೆಗಳನ್ನು ಅದು ಹರಡುತ್ತಿದೆ. ಹಾಗಾಗಿ ಯಾವುದು ನಮ್ಮ ಬದುಕಿಗೆ ಅಗತ್ಯವಾಗಿಲ್ಲವೋ, ಸಂಬಂಧ ಇಲ್ಲವೋ ಮತ್ತು ನಮ್ಮ ಬದುಕಿಗೆ ನೇರವಾಗಿ ಸಂಬಂಧಿಸಿಲ್ಲವೋ ಅಂತಹ ವಿಷಯಗಳ ಬಗೆಗೆ ಇವತ್ತಿನ ನಮ್ಮ ಕೇಂದ್ರ ಸರ್ಕಾರವನ್ನು ನಡೆಸುತ್ತಿರುವಂತಹ ಪಕ್ಷವು ಆ ಕೆಲಸವನ್ನು ಮಾಡುತ್ತಿದೆ.ಅಂದರೆ ಸಾಮಾಜಿಕ ನೆಮ್ಮದಿಯನ್ನು ಹಾಳುಮಾಡುವ, ಸಾಮಾಜಿಕ ಒಡಕನ್ನುಂಟು ಮಾಡುವ ಮತ್ತುಸಮಾಜದ ಸೌಹಾರ್ದತೆಯನ್ನು ಕೆಡಿಸುವ ನಿಟ್ಟಿನಲ್ಲಿ ನಮ್ಮನ್ನು ಆಳುವ ಸರ್ಕಾರ, ನಮ್ಮನ್ನು ಆಳುವ ಪ್ರಭುತ್ವಮುಂದಾದರೆ ಸಮಾಜಗಳ ಬದುಕು ಏನಾಗಬಹುದು ಅಥವಾ ಸಮಾಜದಲ್ಲಿ ಬದುಕುತ್ತಿರುವಂತಹ ಜನರ ಬದುಕುವ ಸ್ಥಿತಿ ಏನಾಗಬಹುದು ಎನ್ನುವುದನ್ನು ನಾವು ಯೋಚಿಸಬೇಕಾಗಿದೆ.

   ಅಂಬೇಡ್ಕರ್ ಅಂಥವರು ಯಾವತ್ತೂ ಕೂಡಾ ಧರ್ಮವನ್ನುಹದಗೆಡಿಸುವ, ಸಮಾಜದ ಮೌಲ್ಯಗಳನ್ನು ಅಪಮೌಲ್ಯಗೊಳಿಸುವಂತಹ ಹುನ್ನಾರದಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಈ ಸಮುದಾಯಗಳಲ್ಲಿ ಬದುಕುವ ಪ್ರತಿಯೊಬ್ಬ ಮನುಷ್ಯ, ಪ್ರತಿಯೊಂದು ಸಮುದಾಯ, ಪ್ರತಿಯೊಂದು ಜಾತಿ, ಪ್ರತಿಯೊಂದು ಧರ್ಮ ಸೌಹಾರ್ದತೆಯಿಂದ ಬದುಕುವುದಕ್ಕೆ ಹೊಂದಿಕೊಂಡು ಬದುಕುವುದಕ್ಕೆ, ಸಹಜೀವನ ಮಾಡುವುದಕ್ಕೆ ಬೇಕಾಗಿರುವಂತಹ ಚಿಂತನೆಗಳನ್ನು ಮಾಡಿದರು, ದಾರಿಗಳನ್ನು ತೋರಿಸಿದರೇ ಹೊರತಾಗಿ ನಮ್ಮ ನಮ್ಮೊಳಗೆ ಒಡಕನ್ನುಂಟು ಮಾಡುವಂತಹ, ನಾವು ನಾವೇ ಮನಸ್ತಾಪ ಮಾಡಿಕೊಳ್ಳುವ, ನಾವು ಒಬ್ಬರಿಗೊಬ್ಬರು ಬೆನ್ನು ಮಾಡಿ ಬದುಕುವ ಯಾವುದೇ ಚಿಂತನೆಯನ್ನು ಅಂಬೇಡ್ಕರ್ ಅವರು ಮಾಡಿರಲಿಲ್ಲ.

 ನಮಗೆ ಅಪನಂಬಿಕೆ ಏನು ಅಂದರೆ ಅಂಬೇಡ್ಕರ್ ಅವರು ದಲಿತರನ್ನು ಕುರಿತು ಹೆಚ್ಚು ಚಿಂತನೆಗಳನ್ನು ಮಾಡಿದ್ದಾರೆ, ದಲಿತರ ಪರವಾಗಿ ಚಿಂತನೆಗಳನ್ನು ಮಾಡಿದ್ದಾರೆ ಮತ್ತು ಕೇವಲ ದಲಿತರಿಗಾಗಿಯೇ ಮೀಸಲಿರುವ ಒಬ್ಬ ವ್ಯಕ್ತಿ ಎನ್ನುವ ಅಪನಂಬಿಕೆ ನಮಗೆಲ್ಲರಿಗೂ ಇದೆ.ಅವರು ಹುಟ್ಟಿನಿಂದ ದಲಿತ ಕುಟುಂಬದಲ್ಲಿ ಹುಟ್ಟಿರಬಹುದು ಆದರೆ ಅವರುಒಬ್ಬ ಭಾರತೀಯನಾಗಿ ಒಬ್ಬ ವಿಶ್ವಮಾನವನಾಗಿ ಬೆಳೆದಿದ್ದಾರೆ. ಕೇವಲ ಮಹಾರಾಷ್ಟ್ರದ ಯಾವುದೋ ಒಂದು ಹಳ್ಳಿಯಲ್ಲಿ ಹುಟ್ಟಿಬೆಳೆದು ಈ ಜಗತ್ತಿನಾದ್ಯಂತಸುತ್ತಿ ಮತ್ತು ಬೇರೆ ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸವನ್ನು ಪಡೆದು ಜಗತ್ತಿನಲ್ಲಿ ಚಿಂತಿಸುತ್ತಾ ಇರುವಂತಹ ಮಹಾನ್ ತತ್ವಶಾಸ್ತ್ರಜ್ಞರಿಂದ, ಚಿಂತಕರಿಂದ ಪ್ರಭಾವಿತರಾಗಿ ಮತ್ತು ಇಲ್ಲಿ ಕಬೀರ, ಸಂತರಿಂದ ಪ್ರಭಾವಿತರಾಗಿ ನಮ್ಮ ಭಾರತದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಬಾಳಲುಮತ್ತು ಸಹಬಾಳ್ವೆ ಹೇಗಿರಬೇಕು, ಸಮಾನತೆ ಹೇಗಿರಬೇಕು ಮತ್ತು ಸಹೋದರತೆಯಿಂದ ಹೇಗೆ ಬದುಕಿರಬೇಕು, ನಾವೆಲ್ಲರೂ ಒಟ್ಟಾಗಿ ಹೇಗೆ ಬದುಕಬೇಕು ಅನ್ನುವುದರ ಬಗೆಗೆ ಚಿಂತನೆಯನ್ನು ನಡೆಸಿದಂತವರು. 

ಹಾಗಾಗಿ ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಲ್ಲ, ದಲಿತರ ಪರವಾಗಿ ಮಾತನಾಡಿದವರಲ್ಲ, ಅವರು ಪ್ರತಿಯೊಬ್ಬ ಭಾರತೀಯನೂ ಕೂಡಾ ಸ್ವತಂತ್ರವಾಗಿ ಸಮಾನತೆಯಿಂದ ಮತ್ತು ಎಲ್ಲರೊಟ್ಟಿಗೆ ಸಹಬಾಳ್ವೆಯನ್ನು ನಡೆಸುವುದಕ್ಕೆ ಬೇಕಾಗಿರುವಂತಹ ಚಿಂತನೆಯನ್ನು ಮಂಡಿಸಿದವರು ಮತ್ತು ಹಾಗೆ ಬದುಕಿದವರು.ಹಾಗಾಗಿ ಇವತ್ತಿಗೂ ಕೂಡಾ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ ದೇಶದ ಸೌಹಾರ್ದತೆಯನ್ನು, ಸಮಾನತೆಯ ಹಕ್ಕುಗಳನ್ನು ನಾಶ ಮಾಡುವ, ಹದಗೆಡಿಸುವ, ಅಪಮಾನಗೊಳಿಸುವಂತಹ ನಿಟ್ಟಿನಲ್ಲಿ ಅವರು ಯಾವತ್ತೂ ಬದುಕಲಿಲ್ಲ. ಅಂಬೇಡ್ಕರ್ ಅವರಂತಹ ವ್ಯಕ್ತಿ ನಮ್ಮ ದೇಶಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ. ಪುಣ್ಯ-ಪಾಪದ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಅಂಬೇಡ್ಕರ್ ಅವರಂತಹ ವ್ಯಕ್ತಿತ್ವ ಒಂದು ಪುಣ್ಯದವ್ಯಕ್ತಿತ್ವ. ಅವರು ಎಲ್ಲವನ್ನೂ ಕುರಿತು ಮಾತನಾಡಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡಿದ್ದಾರೆ, ಸಮಾನತೆಯ ಬಗ್ಗೆ ಮಾತನಾಡಿದ್ದಾರೆ, ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ, ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದ್ದಾರೆ, ಪಾಕಿಸ್ತಾನ ಮತ್ತು ಭಾರತ ವಿಂಗಡನೆಯಾಗುವ ಸ್ವರೂಪದ ಬಗ್ಗೆ ಮಾತನಾಡಿದ್ದಾರೆ, ಅಸ್ಪೃಶ್ಯತೆಯನ್ನು ತೊಡೆದುಹಾಕುವ ಬಗ್ಗೆ ಮತ್ತು ಅಸ್ಪೃಶ್ಯತೆಯನ್ನು ನಾವು ಹೇಗೆ ನಿರ್ಮೂಲನೆಗೊಳಿಸಬೇಕು ಅನ್ನುವುದರ ಬಗ್ಗೆ ಮಾತನಾಡಿದ್ದಾರೆ.

  ಅವರ 125ನೇ ಜಯಂತಿಯನ್ನು ಆಚರಿಸುತ್ತಾ ಇದ್ದೇವೆ, ಅವರು ಭಾರತಕ್ಕೆ ಸಂವಿಧಾನವನ್ನು ಕೊಟ್ಟು 6 ದಶಕಗಳು ಕಳೆದರೂ ಕೂಡಾ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವ ಕುರಿತುಯಾವ ರಾಜಕೀಯ ಪಕ್ಷವೂ ಕೂಡಾ ತುದಿಗಾಲಲ್ಲಿ ನಿಂತು ಯೋಚನೆ ಮಾಡುತ್ತಿಲ್ಲ. ಅದು ಯಾವ ಪಕ್ಷವೇ ಇರಬಹುದು. ಇಂದು ಬಿಜೆಪಿ ಅತಿಯಾಗಿ ನಡೆದುಕೊಳ್ಳುತ್ತಾ ಇದೆ ಮತ್ತು ಬೇರೆ ಪಕ್ಷಗಳು ಸೌಮ್ಯವಾಗಿ ನಡೆದುಕೊಳ್ಳುತ್ತಾ ಇವೆ. ಇರುವ ವ್ಯತ್ಯಾಸ ಇಷ್ಟೆ, ಬೇರೆ ರಾಜಕೀಯ ಪಕ್ಷಗಳು ದಲಿತರ ಬಗೆಗೆ, ಹಿಂದುಳಿದವರ ಬಗೆಗೆ, ಮಹಿಳೆಯರ ಬಗೆಗೆ ಸೌಮ್ಯವಾಗಿ ನಡೆದುಕೊಂಡರೆ ಬಿಜೆಪಿಯಂತಹ ಪಕ್ಷಗಳು ಅತಿರೇಕದಿಂದ ತೀವ್ರವಾಗಿ ಮತ್ತು ಪ್ರತಿಗಾಮಿಯಾಗಿ ನಡೆದುಕೊಳ್ಳುತ್ತಿವೆ. ಅಂದರೆ ಮೇಲ್ವರ್ಗದವರು ದಲಿತರ ಬಗೆಗೆ, ಹಿಂದುಳಿದವರ ಬಗೆಗೆ ಯೋಚನೆಮಾಡುವುದನ್ನು ನೋಡಿದರೆ ಅಂದರೆ ಮೇಲ್ವರ್ಗದಲ್ಲಿ ಹುಟ್ಟಿ ಬೆಳೆದಂತಹ ವ್ಯಕ್ತಿಗಳು ವಿಚಾರ ಮಾಡುವಕ್ರಮವನ್ನು ಕುರಿತು ಯೋಚನೆಮಾಡಿದರೆ ಅವರು ದಲಿತರ ಪರವಾಗಿ ಮಾತನಾಡುತ್ತಾ ಇರುತ್ತಾರೆ ಮತ್ತು ಅವರಿಗೆದಲಿತರ ಬಗ್ಗೆ ಕಾಳಜಿ ಇರುತ್ತೆ, ಅವರ ಅಧಿಕಾರವನ್ನು ಮತ್ತು ಅವರ ರಾಜಕಾರಣವನ್ನು ಸಮರ್ಥಿಸಿಕೊಳ್ಳುವ ಒಂದು ಭಾವನೆಯನ್ನು ಹೊಂದಿರುತ್ತಾರೆ.

  ಆದರೆ ಬಿಜೆಪಿ ಆಲೋಚನಾ ಕ್ರಮ ಅಥವಾ ಆರ್ ಎಸ್ ಎಸ್ ನ ಆಲೋಚನಾ ಕ್ರಮ ಹೊಂದಿದಂತಹವರು ಇದನ್ನು ವಿರೋಧಿಸಿ ಮಾತನಾಡುತ್ತಾರೆ. ಇವರಿಬ್ಬರ ನಡುವಿನ ವ್ಯತ್ಯಾಸ ಏನೂ ಅಂದರೆ ಯಾರು ಉದಾರವಾಗಿ ಚಿಂತಿಸುವಮೇಲ್ವರ್ಗದ ಉದಾರವಾದಿಗಳಾಗಿ ಯಾರು ನಟಿಸ್ತಾ ಇರ್ತಾರೋ ಅವರು ಇವರ ಬಗೆಗೆ ಒಂದು ಸೌಮ್ಯ ಭಾವನೆಯನ್ನು ಹೊಂದಿರುತ್ತಾರೆ. ಇವರ ಬಗೆಗೆ ಒಂದು ಸಮರ್ಥನೆಯ ಭಾವನೆಯನ್ನು ಹೊಂದಿರುತ್ತಾರೆ. ಅಷ್ಟನ್ನು ಹೊರತುಪಡಿಸಿದರೆ ಇವರನ್ನು ಉದ್ದಾರ ಮಾಡುವ, ಇವರನ್ನು ಮುಖ್ಯಧಾರೆಗೆ ತರುವ ತುಡಿತದಲ್ಲಿ ಯಾವ ವರ್ಗದ ವ್ಯಕ್ತಿಗಳೂ ಪಾಲ್ಗೊಳ್ಳುವುದಿಲ್ಲ. ಹಾಗಾಗಿ ದಲಿತರು, ಹಿಂದುಳಿದವರು, ಮಹಿಳೆಯರು ಈ ದೇಶದಲ್ಲಿ ಹೆಚ್ಚು ಜನಸಂಖ್ಯೆಯಲ್ಲಿ ಇರುವುದರಿಂದ ಈ ದೇಶದ ಸಂಪನ್ಮೂಲ ಇರಬಹುದು, ಸಂಸ್ಕೃತಿ ಇರಬಹುದು, ರಾಜಕಾರಣ ಇರಬಹುದು, ಸಾಮಾಜಿಕತೆ ಇರಬಹುದು, ಸಾಹಿತ್ಯ ಇರಬಹುದು, ಇದರೆಲ್ಲದರಿಂದ ಹೊರಗುಳಿದಿದ್ದಾರೆ. ಇದರೆಲ್ಲದರ ಲಾಭವನ್ನು ಅವರು ಪಡೆದುಕೊಳ್ಳದೆ ಇನ್ನೊಬ್ಬರ ಲಾಭಕ್ಕಾಗಿ ಅವರು ದುಡಿಯುವ ಜನರಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

  ಇದಕ್ಕೆ ಒಂದು ಉದಾಹರಣೆಯನ್ನು ನಾವು ಕುವೆಂಪು ಅವರ ಸಾಹಿತ್ಯದಲ್ಲಿ ಹೇಳುವುದಾದರೆ ಶ್ರೀ ರಾಮಾಯಣ ದರ್ಶನಂನಲ್ಲಿ ಒಂದು ಮಾತು ಬರುತ್ತೆ. ಅಂದ್ರೆ ಕುವೆಂಪು ಬರೀತಾರೆ, ರಾಮ ಸೀತೆಯನ್ನು ಗೆದ್ದು ಮದುವೆಯಾಗುವುದಕ್ಕೆ ಪುಷ್ಪಕವಿಮಾನದಲ್ಲಿ ಹೋಗ್ತಾ ಇರ್ತಾನೆ, ಹೋಗ್ತಾ ಇರುವಾಗ ಕಾರ್ಮಿಕರು, ಕೃಷಿ ಕಾರ್ಮಿಕರು, ರೈತರು ಗದ್ದೆಯಲ್ಲಿ ಕೆಲ್ಸಾ ಮಾಡ್ತಾ ಇರ್ತಾರೆ. ಕೆಲ್ಸಾ ಮಾಡ್ತಾ ಇರುವಾಗ ಬೆಳಗಿನ ಜಾವ ಪುಷ್ಪಕವಿಮಾನದಲ್ಲಿ ಅವರೆಲ್ಲಾ ಹೋಗ್ತಾ ಇರುವಾಗಅವರ ವಜ್ರ, ವೈಢೂರ್ಯ, ಬಂಗಾರ ಇವೆಲ್ಲವನ್ನೂ ಬೆರೆಸಿ ಆ ಸೂರ್ಯನ ಪ್ರಖರತೆಗೆ ಅದರ ಛಾಯೆ ಇವರ ಮೇಲೆ ಬೀಳುತ್ತೆ. ಇವರೆಲ್ಲ ಬಾಯಿ ತೆರ್ಕಂಡು ನೋಡ್ತಾ ಇರ್ತಾರೆ, ಹೊಲದಲ್ಲಿ ಕೆಲಸ ಮಾಡುವವರು ಅಯ್ಯೋ ಇದೇನು ಅದ್ಭುತವಾಗಿದೆ, ಏನು ಬೆರಗು, ನಮ್ಮ ರಾಜ ಹೀಗೆ ಹಾಗೆ ಅಂತ ಬಹಳ ಉತ್ಸಾಹದಿಂದ, ಬೆರಗಿನಿಂದ ನೋಡ್ತಾ ಇರ್ತಾರೆ.ಆಗ ಕುವೆಂಪು ಒಂದು ಮಾತನ್ನು ಹೇಳ್ತಾರೆ. ಇದು ಈ ಸಂಭ್ರಮ ಮತ್ತು ಈ ವೈಭವ ಇದ್ಯಲ್ಲಾ ಅದು ನಿಮ್ಮ ಬೆವರಿನ ಫಲ ಅಂತ ಒಂದು ಮಾತನ್ನು ಹೇಳ್ತಾರೆ ಅಂದರೆಇವತ್ತು ಮೇಲ್ವರ್ಗದವರು, ರಾಜಕಾರಣಿಗಳು ಮತ್ತು ಈ ದೇಶದ ಕ್ಯಾಪಿಟಲಿಸ್ಟ್ ಸೆಕ್ಟರ್ ಇದೆಯಲ್ಲ ಎಲ್ಲವೂ ಅನುಭವಿಸ್ತಾ ಇರುವಂತಹ ಈ ಸಂಪನ್ಮೂಲ, ಸವಲತ್ತು, ಸೌಕರ್ಯ ನಮ್ಮ ಕೆಳಸ್ತರದ, ಹಿಂದುಳಿದ, ಬಡವರ, ರೈತರ, ಕೂಲಿಕಾರ್ಮಿಕರ ಬೆವರಿನ ಫಲಅದು.

  ಆ ಬೆವರಿನ ಫಲದಿಂದ ಇವರೆಲ್ಲರೂ ತಮ್ಮ ಸುಪ್ಪತ್ತಿಗೆಯಲ್ಲಿ ಕುಳಿತು ಇವೆಲ್ಲವನ್ನೂ ಸುಖಿಸ್ತಾ ಇದ್ದಾರೆ, ಅನುಭವಿಸ್ತಾ ಇದ್ದಾರೆ ಆದರೆ ಯಾರಿಗೆ ಈ ಬೆವರಿನ ಫಲ ದಕ್ಕಬೇಕಾಗಿತ್ತೋ ಅವರು ಸಂಕಷ್ಟದಲ್ಲಿ ಬಾಳ್ತಾ ಇದ್ದಾರೆ, ಸಂಕಷ್ಟದ ಜೀವನ ನಡೆಸ್ತಾ ಇದ್ದಾರೆ.ನಮ್ಮ ಬಹುತೇಕ ಹೆಣ್ಣು ಮಕ್ಕಳಿಗೆ ತಾವು ಸ್ವತಂತ್ರವಾಗಿ ಯೋಚಿಸುವ, ಸ್ವತಂತ್ರವಾಗಿ ಬದುಕುವ ಹಕ್ಕುಗಳು ಇವತ್ತಿಗೂ ಸಿಕ್ಕಿಲ್ಲ. ಸಿಗಬೇಕು ಎನ್ನುವುದು ಅಂಬೇಡ್ಕರರ ಮುಖ್ಯವಾದ ಚಿಂತನೆಯಾಗಿತ್ತು. ಆದರೆ ಇವತ್ತಿಗೂ ಯಾಕೆ ಸಿಕ್ಕಿಲ್ಲ ಎಂದರೆ ಅಧಿಕಾರಗಳು ಸಮನಾಗಿ ಹಂಚಿಕೆಯಾಗದೆ ಅಧಿಕಾರದ ಸೂತ್ರಗಳು ಎಲ್ಲರಿಗೂ ಸಿಕ್ಕದೆ ಇಲ್ಲಿ ಈ ತಾರತಮ್ಯ ಇದೆಯಲ್ಲ, ಈ ಶ್ರೇಣೀಕರಣ ಇದೆಯಲ್ಲ ಅದು ಯಾವತ್ತೋ ಅಳಿಸಿ ಹೋಗ್ತಾ ಇತ್ತು. ಆ ತಾರತಮ್ಯ ಯಾವತ್ತಿಗೂ ಅಳಿಸಿ ಹೋಗಬಾರದು, ಆ ತಾರತಮ್ಯ ಮುಂದುವರೆಯಬೇಕು. ಮೇಲು-ಕೀಳು ಎನ್ನುವುದು ಹಾಗೇ ಮುಂದುವರೆದರೆ ಈ ಸವಲತ್ತುಗಳು ಕೆಲವರ ಪರವಾಗಿರುತ್ತೆ, ಸುಖ ಅನ್ನೋದು ಕೆಲವರ ಪರವಾಗಿರುತ್ತೆ, ಬದುಕು ಅನ್ನೋದು ಕೆಲವರಿಗೆ ಮಾತ್ರಸಿಗುತ್ತೆ, ಅದು ಕೆಲವರಿಗೆ ಮಾತ್ರ ಇರಬೇಕು, ಕೆಲವರ ಸ್ವತ್ತಾಗಿ ಮಾತ್ರ ಈ ದೇಶದ ರಾಜಕಾರಣ, ಸಂಪನ್ಮೂಲ ಇರಬೇಕು ಅನ್ನುವ ಕಾರಣಕ್ಕಾಗಿ ಅಂಬೇಡ್ಕರರ ಚಿಂತನೆಗಳನ್ನು ನೆಪವಾಗಿ ಮಾತ್ರ ಚರ್ಚೆ ಮಾಡ್ತಾ ಇದ್ದೇವೆ ಹೊರತು ಅವುಗಳನ್ನು ನಮ್ಮ ಬದುಕಿನ ಭಾಗವಾಗಿ ಒಂದು ಸಮಾಜದ ವಿವೇಕವಾಗಿ, ಒಂದು ಸಾಮಾಜಿಕ ವಾಸ್ತವವಾಗಿ ನಾವು ಅದನ್ನು ಪರಿಗಣಿಸ್ತಾಇಲ್ಲ.

  ಅದು ಸಾಮಾಜಿಕ, ವಾಸ್ತವ ಮತ್ತು ಸಾಮಾಜಿಕ ವಿವೇಕ ಅಂತ ಹೇಳಿದರೆ ಒಬ್ಬ ರೈತನಿಗೆ ಯಾವಾಗ ಮಳೆಯಾಗುತ್ತೆ, ಯಾವಾಗ ಬೆಳೆಯಾಗುತ್ತೆ, ಭೂಮಿಯ ಸ್ಥಿತಿಗತಿಯೇನು, ಅದರ ಫಲವಂತಿಕೆಯೇನು, ಅದರ ಸ್ವರೂಪವೇನು ಅನ್ನೋದು ಅವನಿಗೆ ಅರ್ಥ ಆಗುತ್ತಲ್ವಾ? ಅದು ಯಾವುದೇ ಶಿಕ್ಷಣದ ಒಂದು ಛಾಯೆ ಅಂದರೆ ಶಿಕ್ಷಣದ ಒಂದು ಸ್ಪರ್ಶವಿಲ್ಲದೆ ಒಬ್ಬ ರೈತಆಯಾ ಕುಶಲಕರ್ಮಿಗಳು ಎಷ್ಟುನಿಷ್ಠೆಯಿಂದ, ಶ್ರದ್ಧೆಯಿಂದ, ಅಷ್ಟೇ ವಿಚಾರವಂತಿಕೆಯಿಂದ ಆ ಕೆಲಸವನ್ನು ಮಾಡುವ ಶಕ್ತಿ ದಕ್ಕಿರುತ್ತಲ್ವಾ, ಅದು ಸಾಮಾಜಿಕ ವಿವೇಕ ಮತ್ತು ಸಾಮಾಜಿಕ ವಾಸ್ತವ. ಅಂಬೇಡ್ಕರರ ಚಿಂತನೆ ಆ ಬಗೆಯ ಚಿಂತನೆಯಾಗಿ ನಮ್ಮಲ್ಲಿ ಮೂಡಬೇಕು ಅಂದ್ರೆ ನಮ್ಮ ಬದುಕಿನ ದಾರಿಗಳು ಸ್ಪಷ್ಟವಾಗುತ್ತವೆ ಮತ್ತು ಒಂದು ಊರುಗೋಲಾಗಬೇಕು ಅಂತ ಪ್ರತಿಯೊಬ್ಬ ಮನುಷ್ಯನಿಗೆ, ಪ್ರತಿಯೊಂದು ಸಮುದಾಯಕ್ಕೆ ಊರುಗೋಲಾಗಬೇಕು. ಆ ಊರುಗೋಲು ಮೂಲಕ ನಾವು ನಮ್ಮ ಬದುಕನ್ನು ನಡೆಸಲಿಕ್ಕೆ ಮತ್ತು ಆ ಊರುಗೋಲಿನ ಮೂಲಕ ನಮ್ಮ ಬದುಕಿನ ದಾರಿಗಳನ್ನುಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತೆ.

  ಈ ನಿಟ್ಟಿನಲ್ಲಿ ಅಂಬೇಡ್ಕರರನ್ನು ಗ್ರಹಿಸುವ, ತಿಳಿದುಕೊಳ್ಳುವ ಮತ್ತು ಅಂಬೇಡ್ಕರರ ಬಗೆಗೆ ನಮ್ಮ ನಂಬಿಕೆಯೇನಾದರೂ ಉಂಟಾದರೆ ಅದು ಖಂಡಿತವಾಗಿಯೂ ಕೂಡಾ ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವಕ್ಕಿಂತ ನಾವು ಭಾರತೀಯರು, ಭಾರತ ಅನ್ನುವುದು ಮಹಾನ್ ರಾಷ್ಟ್ರ, ಭಾರತ ಅನ್ನುವಂತಹದ್ದು ವಿಶ್ವಕ್ಕೆ ಮಾದರಿಯಾಗುವಂತಹ ರಾಷ್ಟ್ರ ಅಂತ ಏನು ಬೊಂಬಡ ಕೊಚ್ತಾ ಇದ್ದೀವಲ್ಲಾ ನಾವು ಅದಕ್ಕೆಒಂದು ಸರಿಯಾದ ಜಸ್ಟಿಸ್ ಕೊಡಲು ಸಾಧ್ಯವಾಗುತ್ತದೆ. ಅದು ಅಂಬೇಡ್ಕರರಿಗೆ ಗೌರವ ಕೊಡಬೇಕಾದರೆ ನಾವು ಸರಿಯಾಗಿ ಬದುಕಿ ಸರಿಯಾಗಿ ಬಾಳುವುದಕ್ಕೆ ದಾರಿಗಳನ್ನು ಹುಡುಕಿಕೊಂಡರೆ ನಿಜವಾದ ಗೌರವ ಅವರಿಗೆ ಸಿಗುತ್ತದೆ. ಅದು ಕೇವಲ ಅವರ ಫೋಟೋಗೆ ಹೂ ಹಾಕುವ, ಅವರ ಬಗೆಗೆ ಮೆಚ್ಚುಗೆ ಮಾತನಾಡುವ ಅಥವಾಅವರನ್ನು ಕುರಿತು ಒಂದಷ್ಟುಮಾತಾಡಿದರೆ ಅದು ಅಂಬೇಡ್ಕರರಿಗೆ ಗೌರವ ಸಲ್ಲಿಸುವುದಲ್ಲ, ಅವಮಾನ ಮಾಡಿದ ಸಂಗತಿಯಾಗುತ್ತದೆ.ಯಾಕೆ ಅಂತ ಹೇಳಿದರೆ ಅಂಬೇಡ್ಕರ್ ಅವರು ಏನ್ ಆಗಬೇಕು ಮತ್ತು ಈ ದೇಶದಲ್ಲಿ ಏನ್ ನಡೀಬೇಕು, ಯಾವ ಬಗೆಯ ಪ್ರಾಂತ್ಯ ಆಗಬೇಕು ಅನ್ನುವುದರ ಬಗೆಗೆಅವರು ಹೆಚ್ಚು ಚರ್ಚೆಗಳನ್ನು ಮಾಡಿದ್ದಾರೆ.

 ಅದು ನಿಜವಾಗಿಯೂ ಬದುಕಿನಲ್ಲಿ ನಡೆದರೆ ಅವರಿಗೆ ಖಂಡಿತವಾಗಿಯೂ ಸಂತೋಷವಾಗುತ್ತೆ ಮತ್ತು ಆ ಸಂತೋಷ ಸಮುದಾಯಕ್ಕೆ ಸಿಗುತ್ತದೆ. ಆ ನಿಟ್ಟಿನಲ್ಲಿ ನಾವು ಅಂಬೇಡ್ಕರರನ್ನು ಪರಿಗಣಿಸಬೇಕು ಮತ್ತು ಅಂಬೇಡ್ಕರರ ಚಿಂತನೆಗಳನ್ನು ಪರಿಗಣಿಸಬೇಕು. ಹಾಗಾಗಿ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಬಗೆಗೆ ಯೋಚನೆ ಮಾಡಿದ್ದಾರೆ. ಎಲ್ಲರಿಗೂ ಎಲ್ಲಾ ಹಕ್ಕುಗಳು ಸಿಗಬೇಕು, ಎಲ್ಲರಿಗೂ ಎಲ್ಲಾ ಸಂಪನ್ಮೂಲಗಳೂ ಸಿಗಬೇಕು, ಎಲ್ಲರೂ ಸಮಾನರಾಗಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ನಿನ್ನೆ ದಲಿತ ಕೇರಿಗೆ ಹೋಗಿ ನಮ್ಮ ಸ್ವಾಮೀಜಿಯೊಬ್ಬರು ಊಟ ಮಾಡಿದ್ದಾರೆ. ಅವರ ಮನೆಗೆ ಹೋಗಿ ಅವರ ಬಚ್ಚಲು ಕೋಣೆಗೆ ಹೋಗಿ ಸ್ನಾನ ಮಾಡಿದ್ದಾರೆ, ಅವರ ನಡುಮನೆಯಲ್ಲಿ ಕುಳಿತುಇಷ್ಟಲಿಂಗ ಪೂಜೆ ಮಾಡಿದ್ದಾರೆ, ಎಲ್ಲರೂ ಕೆಳಗಡೆ ಕುಳಿತಿದ್ದಾರೆ, ಸ್ವಾಮೀಜಿ ಮಂಚದ ಮೇಲೆ ಕೂತಿದ್ದಾರೆ. ಅಲ್ಲಿಯೂ ಕೂಡಾ ಒಂದು ಶ್ರೇಣೀಕರಣ. ದಲಿತರ ಮನೆಗೆ ಹೋಗಿ ದಲಿತರ ಮಧ್ಯೆ ಮತ್ತು ನಮ್ಮ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ ಅನ್ನುವುದನ್ನು ಸಾಬೀತುಪಡಿಸುವುದಕ್ಕೆ ಹೋಗಿರುವ ಸ್ವಾಮಿಯು ಶ್ರೇಣೀಕರಣವನ್ನೇ ಮಾಡಿದ್ದಾರೆ.ಅಂದ್ರೆ ನಾವು ಮಾಡ್ತಾಯಿರೋದೇನಂದ್ರೆ ದಲಿತರ ಕೇರಿಗೆ ನಾವು ಹೋಗ್ತೀವಿ, ದಲಿತರ ಮನೆಯಲ್ಲಿ ನಾವು ಊಟ ಮಾಡ್ತೀವಿ, ದಲಿತರ ಪರವಾಗಿ ಮಾತನಾಡ್ತೀವಿ ಆದ್ರೆ ದಲಿತರನ್ನು ನಮ್ಮ ಲೋಕದೊಳಗೆ ನಮ್ಮ ಜಗತ್ತಿನೊಳಗೆ ನಾವು ಬಿಟ್ಕೊಳೋದಿಲ್ಲ. 


  ನಮ್ಮ ಮನೆಗೆ ದಲಿತರನ್ನು ಕರೆದು ನಮ್ಮ ಮಠಕ್ಕೆ ದಲಿತರನ್ನು ಕರೆದು ಅಲ್ಲಿ ಅವರನ್ನು ಸ್ನಾನ ಮಾಡಿಸಿ ನಡುಮನೆಯಲ್ಲಿ ಊಟ ಮಾಡಿಸಿ ನಾವೆಲ್ಲರೂ ಸಹಭೋಜನವನ್ನು ಮಾಡುವುದಾದರೆ ಆವಾಗ ಅಂಬೇಡ್ಕರರ ಚಿಂತನೆಗಳು ನಮಗೆ ಪ್ರಸ್ತುತವಾಗುತ್ತವೆ. ಇಲ್ಲದೆ ಹೋದರೆ ಅಂಬೇಡ್ಕರ್ನಮಗೆ ಪ್ರಸ್ತುತವಾಗುವುದಿಲ್ಲ. ಇವು ಕೇವಲ ನೆಪಗಳು ಮಾತ್ರ. ನಾವು ಕೇವಲ ಏನ್ಮಾಡ್ತಾ ಇದೀವಿ ಅಂದ್ರೆ ಇಲ್ಲಿ ನಾವೆಲ್ಲ ಒಟ್ಟಾಗಿ ಬದುಕ್ತಾ ಇದೀವಿ ಅನ್ನೋದಕ್ಕೆ ನಾವು ಅವರ ಬಾಗಿಲಿಗೆ ಹೋಗ್ತಾ ಇದೀವಿ ಅಂದ್ರೆ ಅಸ್ಪೃಶ್ಯತೆ ಅನ್ನೋದು ಅಲ್ಲೇ ಇರುತ್ತೆ, ನಾವು ಹತ್ತಿರ ಹೋಗಿ ವಾಪಸ್ ಬರ್ತಾ ಇದೀವಿ. ಅಸ್ಪೃಶ್ಯತೆಯನ್ನು ನಮ್ಮೊಳಗೆ ಬಿಟ್ಕೊಳ್ತಾ ಇಲ್ಲ. ಅವರಿ ಸ್ಪೃಶ್ಯರಾಗುವುದು ಯಾವಾಗ? ಮುಟ್ಟಿಸ್ಕೊಳೋರಾಗೋದು ಯಾವಾಗ? ಅವರು ನಮ್ಮ ಮನೆಗೆ ಬಂದಾಗ ನಮ್ಮ ದೇವರ ಮನೆಗೆ ಬಂದಾಗ, ನಮ್ಮ ಬಚ್ಚಲು ಮನೆಗೆ ಬಂದಾಗ, ನಮ್ಮ ಅಡುಗೆಮನೆಗೆ ಬಂದಾಗ ಮಾತ್ರಸ್ಪೃಶ್ಯರಾಗ್ತಾರೆ ಹೊರತಾಗಿ ಅವರ ಅಡುಗೆಮನೆಗೆನಾವು ಹೋದರೆ ಅವರು ಸ್ಪೃಶ್ಯರಾಗುವುದಿಲ್ಲ.ಈ ಚಾಳಿಗಳನ್ನು, ಈ ಅಭ್ಯಾಸಗಳನ್ನು ದೂರ ಇಡುವುದಕ್ಕೆ ಬೇಕಾಗಿರುವಂತಹ ಕ್ರಾಂತಿಯನ್ನು ನಾವು ಮಾಡಬೇಕು. ಆ ಕ್ರಾಂತಿ ಮಾಡಿದರೆ ಮಾತ್ರ ಅಂಬೇಡ್ಕರರಿಗೆ ಗೌರವ ಸಲ್ಲುತ್ತೆ, ಅವರ ಚಿಂತನೆಗೆ ಅರ್ಥ ಸಿಗುತ್ತೆ. ಇಲ್ಲದೆ ಹೋದರೆ ಖಂಡಿತವಾಗಿಯೂ ಅಂಬೇಡ್ಕರರ ಚಿಂತನೆಗಳನ್ನು ನಾವು ಅವರ ಜನ್ಮದಿನದ ಅಥವಾ ಪುಣ್ಯತಿಥಿಯ ದಿವಸ ಮಾತಾಡ್ಬಿಟ್ಟು ಕೈತೊಳೆದುಕೊಂಡು ಹೋಗ್ತಾ ಇರ್ತೀವಿ. 

ಈ ಸಕರ್ಾರ ಕೂಡಾ ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಹಾಗಾಗಿ ಈ ದಿನಾಚರಣೆಗಳನ್ನು ಆಚರಿಸಬೇಕು. ಈ ಜವಾಬ್ದಾರಿಯ ಕಾರಣಕ್ಕಾಗಿ ಅವರು ಮಾಡ್ತಾ ಇರ್ತಾರೆ, ಕೆಲವರು ನಿಷ್ಠೆಯಿಂದ ಮಾಡ್ತಾ ಇರಬಹುದು ಆದರೆ ನಿಷ್ಠೆಯು ವ್ಯಕ್ತಿಗತವಾಗಿರುತ್ತದೆ ಹೊರತಾಗಿ ಸಾಂಸ್ಥಿಕವಾಗಿರುವುದಿಲ್ಲ. ಇಡೀ ಸರ್ಕಾರಕ್ಕೆ ನಿಷ್ಠೆಯಿರಬೇಕು, ಇಡೀ ಸರ್ಕಾರಕ್ಕೆ ಆ ತರಹದ ಒಂದು ಬದ್ಧತೆಯಿದ್ದು ಕೆಲಸ ಮಾಡುವುದಾದರೆ ಅದು ಖಂಡಿತವಾಗಿಯೂ ನಿಷ್ಠೆಯಿಂದ, ಬದ್ಧತೆಯಿಂದ ಈ ದಿನಾಚರಣೆಯನ್ನು ಆಚಾರಿಸ್ತಾಯಿದಾರೆ ಅನ್ನೋದು ನಮಗೆ ಗೊತ್ತಾಗುತ್ತೆ. ಅದು ಕೇವಲ ಯಾವುದೋ ಒಬ್ಬ ವ್ಯಕ್ತಿಗೆ ಆ ಬದ್ಧತೆಯಿದ್ದು ಸಾಮಾಜಿಕನ್ಯಾಯದ ಪ್ರಜ್ಞೆಯಿತ್ತು ಅಂದ್ರೂ ಕೂಡಾ ಅದು ಖಂಡಿತವಾಗಿಯೂ ಸಮುದಾಯದ ಪ್ರಜ್ಞೆಯಾಗಿ, ಸಮುದಾಯದ ಜವಾಬ್ದಾರಿಯಾಗಿ ನಮಗೆ ಕಾಣಿಸೋದಿಲ್ಲ.ಇವತ್ತು ಜವಾಬ್ದಾರಿ ಬೇಕಾಗಿರೋದು ರಾಜಕಾರಣಿಗಳಿಗೆ, ಜವಾಬ್ದಾರಿ ಬೇಕಾಗಿರೋದು ಸಂಸ್ಥೆಗಳಿಗೆ, ಕಛೇರಿಗಳಿಗೆ ಅದು ಕೇವಲ ವ್ಯಕ್ತಿಗಲ್ಲ, ಕೆಲಸ ಮಾಡುವ ಯಾವುದೋ ಒಬ್ಬ ವ್ಯಕ್ತಿಗಲ್ಲ. ಆ ಒಟ್ಟು ವಾತಾವರಣದಲ್ಲಿ ಪರಿಸರದಲ್ಲಿ ಜವಾಬ್ದಾರಿ ಎನ್ನುವುದು ಇರಬೇಕು. ಇದು ನಮ್ಮೆಲ್ಲರ ಕೆಲಸ, ನಾವೆಲ್ಲರೂ ಮಾಡಬೇಕಾಗಿರುವುದು. ಇದು ನಾವು ಹೀಗೆ ಮಾಡಬೇಕು, ಹೀಗೆ ಮುನ್ನಡೆಸಬೇಕು, ನಾವೆಲ್ಲರೂ ಒಂದು ಎನ್ನುವ ಭಾವನೆಯನ್ನು ಅದು ಏಕತ್ರವಾಗಿ ಎಲ್ಲರಲ್ಲಿಯೂ ಮೂಡಿದರೆ ಮಾತ್ರ ಅಂಬೇಡ್ಕರ್ ಯೋಚಿಸಿದ ದಾರಿಯಲ್ಲಿ ನಾವು ನಡೀತಾ ಇದೀವಿ ಅನ್ನೋದು ನಮಗೆ ಗೋಚರವಾಗುತ್ತೆ. ಮತ್ತು ಅಂಬೇಡ್ಕರರ ಬಗೆಗೆ ನಾವು ಭಜನೆ ಮಾಡುವ, ದಿನಾಚರಣೆ ಮಾಡುವ ಅಗತ್ಯವೂ ಕೂಡಾ ಇರೋದಿಲ್ಲ. 

ನಮಗೆ ಅಂಬೇಡ್ಕರರ ಬಗೆಗೆ ನಾವು ನೆನಪು ಮಾಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ ಸರಿ ಆದರೆ ನೆನಪು ಮಾಡಿಕೊಂಡು, ನೆನಪು ಮಾತ್ರವಾಗಿ ಅಂಬೇಡ್ಕರ್ ರನ್ನು ಉಳಿಸೋದಾದ್ರೆ ಇದನ್ನು ಯಾತಕ್ಕಾಗಿ ಮಾಡಬೇಕು ಅನ್ನುವಂತಹ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತೆ.ಹಾಗಾಗಿ ನಾವು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ಕ್ರಮ, ದಲಿತರನ್ನು, ಆದಿವಾಸಿಗಳನ್ನು ನಡೆಸಿಕೊಳ್ಳುವಂತಹ ಕ್ರಮ, ಹಿಂದುಳಿದವರನ್ನು, ಜನಸಾಮಾನ್ಯರನ್ನು ನಡೆಸಿಕೊಳ್ಳುವಂತಹ ಕ್ರಮ ಇದೆಯಲ್ಲ ಅದು ಅಮಾನುಷವಾದಂತಹ ಮತ್ತು ಜೀವವಿರೋಧಿಯಾಗಿರುವ ಸಮಾಜವನ್ನು ವಿಘಟಿಸುವ ಚಟುವಟಿಕೆಗಳು ಎಲ್ಲಾ ಪ್ರಕ್ರಿಯೆಗಳು ದೇಶದಾದ್ಯಂತ ನಡೀತಾ ಇದೆ. 

 ಈಗ ನಮ್ಮ ವಿದ್ಯಾರ್ಥಿ ಮಿತ್ರ ರೋಹಿತ್ ವೇಮುಲ ಅನ್ನುವಂತಹ ವಿದ್ಯಾರ್ಥಿ ಅಂಬೇಡ್ಕರರ ಬಗೆಗೆ ಅಪಾರ ಕಾಳಜಿ ಹೊಂದಿ ತನ್ನ ವಿದ್ಯಾರ್ಥಿ ಬದುಕಿನಲ್ಲಿಯೇ ಆ ಚಿಂತನೆಗಳನ್ನು ರೂಢಿಸಿಕೊಂಡು ಅದು ಎಲ್ಲರಲ್ಲಿಯೂ ಬರಬೇಕು ಎನ್ನುವಂತಹ ಆಶಯವನ್ನು ಹೊಂದಿರುವಂತಹ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಏನು ಕಾರಣ ಅಂತ ಹೇಳಿದ್ರೆ ದುಷ್ಟಶಕ್ತಿಗಳು ನಮ್ಮನ್ನು ನಿಯಂತ್ರಿಸುತ್ತಾ ಇದ್ದಾವಲ್ಲಾ, ಆ ದುಷ್ಟಶಕ್ತಿಗಳು ನಿಯಂತ್ರಿಸುತ್ತಾ ಇರುವ ಆ ಕ್ರಮವನ್ನು, ಬಗೆಯನ್ನು ನೋಡಿ ಜಿಗುಪ್ಸೆಯಿಂದ ತನ್ನಪ್ರಾಣತ್ಯಾಗ ಮಾಡಿದ್ದಾನೆಯೇ ಹೊರತು ತನ್ನ ಇಚ್ಛೆಯಿಂದ ತನ್ನ ವೈಯುಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ.ಅಂದರೆ ಈ ದೇಶ ಎದುರಿಸುತ್ತಾ ಇರುವ ಈ ಸಮಸ್ಯೆಗಳಿದ್ದಾವಲ್ಲಾ ನಮ್ಮ ಯುವಕರನ್ನು, ನಮ್ಮ ಯುವಜನತೆಯನ್ನು ಹೇಗೆ ಕಾಡ್ತಾ ಇದ್ದಾವೆ ಮತ್ತು ಹೇಗೆ ದಿಕ್ಕುಗೆಡುಸ್ತಾ ಇದ್ದಾವೆ ಅನ್ನೋದಕ್ಕೆ ಇದುಒಂದು ದೊಡ್ಡ ಜ್ವಲಂತ ನಿದರ್ಶನ. ಹಾಗಾಗಿ ಕನ್ನಯ್ಯ ಇವತ್ತು ಅಷ್ಟು ಕ್ರಾಂತಿಕಾರಿಯಾಗಿ ಮಾತನಾಡೋದನ್ನು ಬಹುತೇಕ ಪ್ರತಿಶತ 90ರಷ್ಟು ಜನ ಅದಕ್ಕೆ ಸಪೋರ್ಟ್ ಮಾಡ್ತಾರೆ. ಏಕೆ ಅಂತ ಹೇಳಿದ್ರೆ ನಮ್ಮೆಲ್ಲ ಧ್ವನಿಯಾಗಿ ನಮ್ಮ ಯುವಜನತೆಯ ಆಕ್ರೋಶದ ಧ್ವನಿಯಾಗಿ ಮತ್ತು ಅದರ ಸೂಚ್ಯಕವಾಗಿ ನಮಗೆ ಕಾಣಿಸ್ತಾ ಇದ್ದಾನೆ. ನಾವೆಲ್ಲರೂ ಅದನ್ನು ಬೆಂಬಲಿಸ್ತಾ ಇದೀವಿ ಮತ್ತುಅದೆಲ್ಲವನ್ನೂ ನೋಡ್ತಾ ಇದೀವಿ. 

  ಹಾಗಾಗಿ ರಾಷ್ಟ್ರೀಯತೆ ಅನ್ನೋದು, ರಾಷ್ಟ್ರ ವಿರೋಧ ಅನ್ನೋದು ಅದು ನಮ್ಮ ಸಂಸ್ಕೃತಿಯ ಬದುಕಿಗೆ ಹೊರತಾಗಿರುವ ಕಲ್ಪನೆ. ಯಾವುದು ರಾಷ್ಟ್ರೀಯತೆಯ ಬಗೆಗೆ ಮಾತಾಡ್ತಾ ಇದಾರೋ ಅದು ಯಾವುದು ರಾಷ್ಟ್ರ ವಿರೋಧ ಕಲ್ಪನೆಗಳನ್ನು ಅಂತ ಕಲ್ಪನೆಗಳನ್ನು ಕುರಿತು ಮಾತಾಡ್ತಾ ಇದಾರೋ ಅದು ನಮ್ಮ ಬದುಕಿಗೂ ನಮ್ಮ ಬದುಕಿನ ಕ್ರಮಕ್ಕೂ ನಾವು ಉಣ್ಣುವ ಅನ್ನಕ್ಕೂ, ನಾವು ಮಾಡುವ ಕೆಲಸಕ್ಕೂ ಹೊರತಾಗಿರುವ ತಿಳುವಳಿಕೆಯಾಗಿದೆ. ಆ ತಿಳುವಳಿಕೆಗೆ ಹೊರತಾಗಿರುವ ನಿಟ್ಟಿನಲ್ಲಿ ಇವರೆಲ್ಲ ಯೋಚನೆ ಮಾಡ್ತಾ ಇದ್ದಾರೆ.ರಾಷ್ಟ್ರೀಯತೆ ಅನ್ನೋದು ಮನುಷ್ಯನ ಬದುಕಿಗೆ ಮೀರಿದ ಸಂಗತಿಯಲ್ಲ. ಮನುಷ್ಯನ ಬದುಕಿಗೆ ಬದ್ಧವಾಗಿರುವ ಮನುಷ್ಯನ ಬದುಕನ್ನು ಹಸನಾಗಿಸಲಿಕ್ಕೆ ಬೇಕಾಗಿರುವ ಒಂದು ಕಲ್ಪನೆಯಾಗಿದ್ದರೆ ರಾಷ್ಟ್ರೀಯತೆಯ ಬಗೆಗೆ ಭಾರತ್ ಮಾತಾ ಕಿ ಜೈ ಎನ್ನುವ ಬಗೆಗೆ ಒಕ್ಕೊರಲಿನಿಂದ, ಒಗ್ಗಟ್ಟಿನಿಂದ ಕೂಗುವುದರಲ್ಲಿ ಅರ್ಥವಿದೆ. ನಮ್ಮೆಲ್ಲರನ್ನು ದಿಕ್ಕೆಡಿಸುವ, ಹಾಳುಮಾಡುವ ನಮ್ಮ ಬದುಕನ್ನು ನಾಶಗೊಳಿಸುವುದಕ್ಕೆ ಭಾರತ್ ಮಾತಾ ಕಿ ಜೈ ಅನ್ನೋದು ಯಾಕೆ ಬೇಕಾಗಿದೆ. ಯಾವ ಪುರುಷಾರ್ಥಕ್ಕಾಗಿ ಕೂಗಬೇಕು? ಯಾಕೆ ಹಾಗೆ ನಾವುಮಾತಾಡಬೇಕು ಅನ್ನೋದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ ಅಲ್ವಾ? ಆ ಪ್ರಶ್ನೆ ಮಾಡುವ ಒಂದು ಧ್ವನಿಯಾಗಿ ಈ ಕನ್ನಯ್ಯನಂತಹ ಹುಡುಗ ನಮ್ಮಮುಂದೆ ಇರೋದ್ರಿಂದ ಅವನಿಗೆಆ ಬೆಂಬಲ ಸಿಗ್ತಾ ಇದೆ ಮತ್ತು ಆ ವಿದ್ಯಾರ್ಥಿ ಕೇವಲ ವಿದ್ಯಾರ್ಥಿಯಾಗಿಲ್ಲ. 

  ಅವನು ನಮ್ಮ ಸಾಮಾಜಿಕ ವಿವೇಕ ಮತ್ತು ಸಾಮಾಜಿಕ ಪ್ರಜ್ಞೆಯ ರೂಪಕವಾಗಿ ನಮಗೆಅವನು ಕಾಣಿಸ್ತಾ ಇದ್ದಾನೆ.ಅವನು ಆವೇಶದಲ್ಲಿ ಕೆಲವು ಮಾತುಗಳನ್ನು ಅಪ್ಪಿತಪ್ಪಿ ಮಾತಾಡಿರಬಹುದು, ನಾವೆಲ್ಲರೂ ಮಾತಾಡ್ತಾ ಇರ್ತೀವಿ, ಈಗಷ್ಟೇ ಮಾತಾಡಿದಂತಹ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಅಂತಹ ಮಾತನ್ನು ಆಡಬಹುದು, ಅಷ್ಟು ವಯಸ್ಸಾದವರು. ಅದು ಮಾತು ಅದು ತಪ್ಪಿ ಆಡುವುದು ಬೇರೆ, ತಪ್ಪು ಮಾತಾಡುವುದೇ ಬೇರೆ, ತಪ್ಪಿ ಆಡಿದ ಮಾತನ್ನು ತಪ್ಪು ಮಾತಾಗಿ ಬದಲಾಯಿಸೋದಿದೆಯಲ್ಲಾ ಅದು ನಿಜವಾದ ದ್ರೋಹ ಮತ್ತು ಅದು ರಾಷ್ಟ್ರವಿರೋಧಿಯಾದಂತಹ ನಿಲುವು. ಹಾಗಾಗಿ ಈ ತಪ್ಪು ಮಾತನಾಡುವವರನ್ನು ಬಿಟ್ಟು ತಪ್ಪಿ ಆಡಿದ ಮಾತಿನ ಬಗೆಗೆ ತಪ್ಪಿಸ್ಥರನ್ನಾಗಿ ಮಾಡುವ ತಪ್ಪು ಅಂತ ತೋರಿಸುವಂತಹ ಮನೋಧರ್ಮ ಇದೆಯಲ್ಲಾ ಅದನ್ನು ಖಂಡಿಸಬೇಕು, ಅದನ್ನು ವಿರೋಧಿಸಬೇಕು.

 ಆ ನಿಟ್ಟಿನಲ್ಲಿ ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಅಂಬೇಡ್ಕರರ ತಿಳುವಳಿಕೆ ನಮಗೆ ಮುಖ್ಯವಾಗಬೇಕು ಮತ್ತು ಹಾಗೆ ನಾವು ಬದುಕಬೇಕು. ಹಾಗೆ ಬದುಕುವುದಕ್ಕೆ ಬೇಕಾಗಿರುವ ಚಿಂತನೆಗಳನ್ನು ದಾರಿಗಳನ್ನು ಅಂಬೇಡ್ಕರರು ನಮಗೆ ಕಲ್ಪಿಸಿ ಕೊಟ್ಟಿದ್ದಾರೆ. ಹಾಗಾಗಿ ಅಂಬೇಡ್ಕರರು ನಮಗೆ ಹೆಚ್ಚುಪ್ರಸ್ತುತವಾಗ್ತಾ ಇದ್ದಾರೆ. ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗ್ತಾ ಇವೆ. ಅವರು ಇನ್ನು ಮುಂದೆ ನಮ್ಮ ದೇಶಕ್ಕೆ ಮತ್ತು ಬಹುತೇಕ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಮಾದರಿಯಾಗಬಲ್ಲರು. ಅವರ ಚಿಂತನೆಗಳು ಮಾದರಿಯಾಗಬಲ್ಲವು.ಹಾಗಾಗಿ ಅವರೆಲ್ಲರಿಗೂ ಮಾದರಿಯಾಗುವುದಕ್ಕಿಂತ ಮೊದಲು ನಾವು ಅಂಬೇಡ್ಕರರ ದಾರಿಯಲ್ಲಿ ನಡೆಯುವ ಅಂಬೇಡ್ಕರರ ಚಿಂತನೆಗಳನ್ನು ರೂಢಿಸಿಕೊಳ್ಳೋಣ. ಆ ಚಿಂತನೆಗಳನ್ನು ರೂಢಿಸಿಕೊಳ್ಳೋದಕ್ಕೆ ಆ ದಾರಿ ಕಂಡುಕೊಳ್ಳುವುದಕ್ಕೆ ಕೇವಲ ಈ ತರಹದ ಬಯಲಿನಲ್ಲಿ ಷಾಮಿಯಾನ ಹಾಕಿ ಚಿಂತನೆಗಳನ್ನು ಮಾಡುವುದಕ್ಕಿಂತ ಶಾಲೆಗಳಿಗೆ, ಕಾಲೇಜುಗಳಿಗೆ ಹೋಗಿ ಅಂಬೇಡ್ಕರರ ಬಗ್ಗೆ ವಿಶೇಷ ಉಪನ್ಯಾಸ ಕೊಡುವ ಅಂಬೇಡ್ಕರರ ವ್ಯಕ್ತಿತ್ವ ಪರಿಚಯಿಸುವ ಅವರ ಚಿಂತನೆಗಳನ್ನು ಹರಡುವ ನಿಟ್ಟಿನಲ್ಲಿ ಈ ದಿನಾಚರಣೆಗಳು, ಕಾರ್ಯಕ್ರಮಗಳು ಹೆಚ್ಚು ಸೂಕ್ತ, ಹೆಚ್ಚು ಪ್ರಸ್ತುತ ಮತ್ತು ಸಮಂಜಸವಾದ ಕ್ರಿಯೆ. 

  ಏಕೆಂದರೆ, ಈ ದಿನವನ್ನು ವಿಶ್ವದ ಜ್ಞಾನದ ದಿನವನ್ನಾಗಿ ಪರಿಗಣಿಸಿದ್ದಾರೆ. ಕಾರಣ ವಿಶ್ವದ ಜ್ಞಾನವನ್ನು ವೃದ್ಧಿಸುವ, ವಿಶ್ವದ ಜ್ಞಾನವನ್ನು ಬೆಳೆಸುವ, ವಿಶ್ವದ ಜ್ಞಾನದ, ವಿವೇಕದ ಪರಿಧಿಯನ್ನು ವಿಸ್ತರಿಸುವ ಕ್ರಮವಾಗಿ ಅವರು ನಮಗೆ ಸಿಕ್ಕಿರುವುದರಿಂದ ಅದನ್ನು ನಾವು ಹಾಗೆ ಪರಿಗಣಿಸಬೇಕು.ಅವರು ಕೇವಲ ನಮ್ಮ ನಿಮ್ಮಂತೆ ಭಾಷಣ ಮಾಡಿಲ್ಲ. ಸ್ಥೂಲವಾಗಿ ಸಂಶೋಧನೆ ಮಾಡಿಅಧ್ಯಯನ ಶಿಸ್ತಿನಿಂದ ಶ್ರದ್ಧೆಯಿಂದ ಅಧ್ಯಯನ ಮಾಡಿ ಎಲ್ಲ ಚಿಂತನೆಗಳನ್ನುಹರಡಿದ್ದಾರೆ. ಅವರು ಕೇವಲ ಒಂದು ರಾಜಕೀಯ ಭಾಷಣ ಮಾಡಿದ ಚಿಂತನೆಗಳಲ್ಲ. ಅದಕ್ಕೆ ಹೆಚ್ಚು ಶ್ರಮವಿದೆ, ಹೆಚ್ಚು ಅಧ್ಯಯನವಿದೆ ಮತ್ತು ಹೆಚ್ಚು ಸಂಶೋಧನೆಯನ್ನು ಮಾಡಿ ತಮ್ಮೆಲ್ಲ ಚಿಂತನೆಗಳನ್ನು ಮಾಡಿದ್ದಾರೆ. ಅದು ಅಸ್ಪೃಶ್ಯತೆ ನಿವಾರಣೆಯಿರಬಹುದು, ಅಲ್ಪಸಂಖ್ಯಾತರು ಮತ್ತು ಪ್ರಭುತ್ವವಿರಬಹುದು, ಕ್ರಾಂತಿ ಮತ್ತು ಪ್ರತಿಕ್ರಾಂತಿಯಿರಬಹುದು,ಮತ್ತು ಹೆಣ್ಣುಮಕ್ಕಳ ಬಗೆಗಿನ ಚಿಂತನೆಯಿರಬಹುದು, ಬುದ್ಧನ ಬಗೆಗಿನ ಚಿಂತನೆಯಿರಬಹುದು, ಧರ್ಮದ ಬಗೆಗಿನ ಚಿಂತನೆಯಿರಬಹುದು, ಒಟ್ಟು ಈ ದೇಶದ ರಾಜಕಾರಣದ ಬಗೆಗಿನ ಚಿಂತನೆಯಿರಬಹುದು, ಸಂವಿಧಾನದ ತತ್ವಗಳಿರಬಹುದು, ನಿಯಮಗಳಿರಬಹುದು ಈ ಎಲ್ಲವೂಗಳು ಕೂಡಾ ಅವರ ಅಧ್ಯಯನದ ಫಲ ಮತ್ತು ಶ್ರಮದ ಫಲ. ಆ ಶ್ರಮ ಮತ್ತು ಅಧ್ಯಯನದಫಲ ನಮ್ಮೆಲ್ಲರಿಗೂ ದಕ್ಕಬೇಕು, ಆ ನಿಟ್ಟಿನಲ್ಲಿ ನಾವೆಲ್ಲರೂ ಬದುಕಬೇಕು, ಆ ರೀತಿ ಬದುಕುವುದಕ್ಕೆ ಅದು ಒತ್ತಾಸೆಯಾಗಿರಬೇಕು, ಊರುಗೋಲಾಗಿರಬೇಕು ಅಂತ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.ಎಲ್ಲರಿಗೂ ಧನ್ಯವಾದಗಳು.

#supportಮೇಟಿಮಲ್ಲಿಕಾರ್ಜುನ

ಮಂಗಳವಾರ, ಏಪ್ರಿಲ್ 19, 2016

ಅಂಬೇಡ್ಕರ್ ಅಭಿಯಾನ ಮತ್ತು ಭೀಮಯಾತ್ರೆ ಎತ್ತುವ ಪ್ರಶ್ನೆಗಳು

ಜನಕಥನ-೪


-ಡಾ.ಅರುಣ್ ಜೋಳದಕೂಡ್ಲಿಗಿ.

 ಡಾ.ಬಿ.ಆರ್.ಅಂಬೇಡ್ಕರ್ ರವರ ೧೨೫ ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಾಂತ ವಿವಿಧ ಬಗೆಗಳಲ್ಲಿ ಅಂಬೇಡ್ಕರ್ ಜಾಗೃತಿ ನಡೆಯುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿ ಈ ಕುರಿತ ಚಟುವಟಿಕೆಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಸಮಿತಿಗಳನ್ನು ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಅಂತೆಯೇ ದೇಶವ್ಯಾಪಿ ಎಲ್ಲಾ ಅಂಬೇಡ್ಕರವಾದಿಗಳು ಈ ಜನ್ಮದಿನಾಚರಣೆಯನ್ನು ಸಾರ್ಥಕಗೊಳಿಸಲು ವಿವಿಧ ಬಗೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಪುಟ್ಟ ಪುಟ್ಟ ಕೇರಿಗಳಲ್ಲಿಯೂ ಅಂಬೇಡ್ಕರ್ ಬೆಳಕನ್ನು ಕಾಣಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಕೆಲವು ದೂರದೃಷ್ಠಿಯ ಯೋಜನೆಗಳು ೨೦೧೫ ಏಪ್ರಿಲ್ ೧೪ ರಿಂದಲೇ ವರ್ಷಪೂರ್ತಿ ನಡೆಯುವ ಚಟುವಟಿಕೆಗಳನ್ನು ಆಯೋಜಿಸಿವೆ. ಈ ನೆಲೆಯಲ್ಲಿ ಕರ್ನಾಟಕ ಮತ್ತು ದೇಶವ್ಯಾಪಿ ಆಯೋಜನೆಗೊಂಡ ಎರಡು ಪ್ರಮುಖ ಕೆಲಸಗಳ ಕಡೆ ನಿಮ್ಮ ಗಮನ ಸೆಳೆಯುತ್ತೇನೆ.
**
 ಜೆ.ಎನ್.ಯುನ ಸಂಗಾತಿ ಕನ್ನಯ್ಯ ಕುಮಾರ್ `ಜೈಭೀಮ್ ಲಾಲ್ ಸಲಾಮ್' ಎನ್ನುವ ಮೂಲಕ ಇಂಡಿಯಾದಲ್ಲಿ ಕಮ್ಯುನಿಷ್ಟ್ ಚಳವಳಿ ಮತ್ತು ಅಂಬೇಡ್ಕರ್‌ವಾದಿ ಹೋರಾಟಗಳನ್ನು ಏಕತ್ರಗೊಳಿಸುವ ಅಥವಾ ಬೆಸೆಯುವ ಕೂಗನ್ನು ಎತ್ತಿದ್ದಾನೆ. ಈ ಕೂಗು ಮೊದಲಲ್ಲವಾದರೂ ಸದ್ಯಕ್ಕೆ ಇದು ಹೊಸ ರಾಜಕೀಯ ಪರಿಭಾಷೆಯಾಗಿ ಜೀವಪರ ಸಂಗಾತಿಗಳನ್ನು ಆಕರ್ಶಿಸಿದೆ. ಈ ಕೂಡುವಿಕೆಯು ಚಾರಿತ್ರಿಕ ಅಗತ್ಯದಂತೆ ಪರವಾಗಿಯೂ, ಅಸಾದ್ಯವೆಂಬಂತೆ ವಿರೋಧವಾಗಿಯೂ ಚರ್ಚೆ ನಡೆದಿದೆ. ಆದರೆ ಇದರ ಅಗತ್ಯದ ಬೆಂಬಲ ಒಕ್ಕೊರಲಿನ ಧ್ವನಿಯಾಗಿ ಹೊಮ್ಮುತ್ತಿದೆ. ಜೆ.ಎನ್.ಯು ಈ ಘಟನೆಗೂ ಮುಂಚೆ ಕರ್ನಾಟಕದಲ್ಲಿಯೂ `ಜೈಭೀಮ್ ಲಾಲ್ ಸಲಾಮ್' ಬೆಸೆಯುವ ಮಹತ್ವಪೂರ್ಣ ಯೋಜನೆಯೊಂದು ಅಘೋಷಿತವಾಗಿ ಆರಂಭವಾಯಿತು. ಆ ಯೋಜನೆಯೇ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಂಡ್ಕರ್ ಅಧ್ಯಯನ ಕೇಂದ್ರವು ಆಯೋಜಿಸಿದ `ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್' ಎಂಬ ಅಭಿಯಾನ.
 ಈ ಅಭಿಯಾನದಲ್ಲಿ ಅಂಬೇಡ್ಕರ್ ಅವರ ಚಾರಿತ್ರಿಕ ಮಹತ್ವದ ಪುಸ್ತಕಗಳಾದ `ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' `ಜಾತಿ "ನಾಶ' `ಪ್ರಭುತ್ವ ಮತ್ತು ಅಲ್ಪಸಂಖ್ಯಾತರು' ಕೃತಿಗಳನ್ನು ವರ್ತಮಾನದ ಕಣ್ಣೋಟದಿಂದ ಪರಿಚುಸುವ ಕೆಲಸ ನಡೆಯಿತು. ಅಂತೆಯೇ ಈ ಮೂರು ಪುಸ್ತಕಗಳ ಸಾರಸಂಗ್ರಹದ ಪುಟ್ಟ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಐದು ರೂಪಾಯಿಗೆ ಕೊಡಲಾಯಿತು. ಅಭಿಯಾನ ರಾಜ್ಯದ ೫೦೦ ಪದವಿ ಕಾಲೇಜುಗಳಲ್ಲಿ ನಡೆದು ಇದೀಗ ಜಿಲ್ಲಾವಾರು ಸಮಾರೋಪ ನಡೆಯುತ್ತಿವೆ. ಈ ಯೋಜನೆಯ ಸಂಚಾಲಕರುಗಳಲ್ಲಿ ಹೆಚ್ಚು ಕಮ್ಯುನಿಷ್ಟರಿದ್ದಾರೆ ಎಂಬ ಕಾರಣಕ್ಕೆ ದಲಿತಪರ ಸಂಘಟನೆಯ ಕೆಲವು ನಾಯಕರು ಟೀಕಿಸಿದರು.  ಅಂತೆಯೇ ಗಾಢವಾದ ಅನುಮಾನವೂ ವ್ಯಕ್ತವಾಯಿತು. 

  ಈ ಬಗೆಯ ವಿರೋಧವನ್ನು ಬದಿಗಿಟ್ಟು ನೋಡಿದರೆ, ಈ ಯೋಜನೆ ನಿಜಕ್ಕೂ ಮಹತ್ವಪೂರ್ಣವಾದುದು. ಪದವಿ ಕಾಲೇಜು ವಿದ್ಯಾರ್ಥಿಗಳ ಎದೆಯಲ್ಲಿ ಅಂಬೇಡ್ಕರ್ ಕ್ರಾಂತಿಯ ಬೀಜ ಬಿತ್ತುವ ಪ್ರಕ್ರಿಯೆಯ ಭಾಗವಾಗಿ ಅದರ ಮಹತ್ವವಿದೆ. ಆಶಾವಾದವೆಂದರೆ ಈ ಬೀಜಗಳು ಇಂದಲ್ಲಾ ನಾಳೆ ಮೊಳಕೆಯೊಡೆಯುತ್ತವೆ. ಈ ಅರ್ಥದಲ್ಲಿ ಕರ್ನಾಟಕದ ಪದವಿ ಕಾಲೇಜುಗಳ ಯುವಜನತೆಯಲ್ಲಿ ಅಂಬೇಂಡ್ಕರರ ಮರುಹುಟ್ಟು ಸಂಭವಿಸಿದೆ. ಈ ಯೋಜನೆಯ ಕೊಪ್ಪಳ ಜಿಲ್ಲಾ ಸಂಚಾಲಕನಾಗಿದ್ದ ನಾನು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ನಡೆದ ಅಭಿಯಾನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. 

 ಈ ಅಭಿಯಾನದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿದ್ದ ಅಂಬೇಡ್ಕರ್ ಮತ್ತು ಮೀಸಲಾತಿ ಬಗೆಗಿನ ತಪ್ಪು ತಿಳುವಳಿಕೆಯನ್ನು ತಿದ್ದುವ ಪ್ರಯತ್ನ ನಡೆದಿದೆ. ಅಂತೆಯೇ ಅಂಬೇಡ್ಕರ್ ಬಗೆಗೆ ಹೊಸ ಬಗೆಯ ಅಭಿಮಾನ ಮೂಡುವಂತೆ ಅವರ ಚಿಂತನೆಗಳನ್ನು ವರ್ತಮಾನದ ಸಂಕಟಗಳ ಬಿಡುಗಡೆಯ ಆಕರಗಳಂತೆ ವಿವರಿಸಲಾಗಿದೆ. ಹಾಗಾಗಿ ಅಭಿಯಾನದ ದೂರದೃಷ್ಠಿಯ ಕಾರಣಕ್ಕೆ ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರೊ.ಜಾಫೆಟ್, ವಿ.ಎಸ್.ಶ್ರೀಧರ್, ಶಿವಸುಂದರ್, ಲಕ್ಷ್ಮಿನಾರಾಯಣ, ರಮಾಕಾಂತ ಮತ್ತು ರಾಜ್ಯವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಿದ ವಲಯ ಸಂಚಾಲಕರು ಮತ್ತು ಜಿಲ್ಲಾ ಸಂಚಾಲಕರುಗಳು ಅಭಿನಂದನಾರ್ಹರು. ಅಂತೆಯೇ ಈ ಅಭಿಯಾನವನ್ನು ೨೦೧೬-೧೭ ರಲ್ಲಿಯೂ ಮತ್ತಷ್ಟು  ಕಾಲೇಜುಗಳಿಗೆ ವಿಸ್ತರಿಸುವ ಅಗತ್ಯವಂತೂ ಇದೆ.
 ೨೦೧೬-೧೭ ರ ಸಾಲಿನಲ್ಲಿ ಕಾನೂನು ಶಾಲೆ ಈ ಅಭಿಯಾನವನ್ನು ಮುಂದುವರೆಸುವುದಾದರೆ ಈಗಿನ `ಭಾಷಣ-ಸಂವಾದ' ಮಾದರಿಗಿಂತ ಕಮ್ಮಟದ ಮಾದರಿ ಹೆಚ್ಚು ಉಪಯುಕ್ತ. ಕುವೆಂಪು ಭಾಷಾ ಭಾರತಿ ಪ್ರಾಧೀಕಾರವು ಈಗ್ಗೆ ಎರಡು ವರ್ಷದಿಂದ ಆಯೋಜಿಸುವ `ಕುವೆಂಪು ಓದು' ಮಾದರಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಪ್ರೊ. ಕೆ.ವಿ ನಾರಾಯಣ ಅವರು ಇದನ್ನು ತುಂಬಾ ವೈಜ್ಞಾನಿಕವಾಗಿ ರೂಪಿಸಿದ್ದಾರೆ. ವಯಕ್ತಿಕವಾಗಿಯೂ ಕುವೆಂಪು ಓದುವಿನ ಎರಡು ಕಮ್ಮಟವನ್ನು ಸಂಚಾಲಕನಾಗಿ ನಿರ್ವಹಿಸಿದ ಕಾರಣ ಇದರ ಮಹತ್ವ ಅರಿವಿಗೆ ಬಂದಿದೆ. ಇದರ ಸ್ವರೂಪ ಹೀಗಿದೆ, ಕನಿಷ್ಠ ಇನ್ನೂರು ಪುಟದ ಅಂಬೇಡ್ಕರರ ಪ್ರಮುಖ ಬರಹಗಳನ್ನು ಆಯ್ದು `ಅಂಬೇಡ್ಕರ್ ಓದು' ಕೃತಿಯನ್ನು ಎಡಿಟ್ ಮಾಡಿ, ಕನಿಷ್ಠ ಒಂದು ಕಾಲೇಜಿನಿಂದ ೩೦ ರಿಂದ ೫೦ ವಿದ್ಯಾರ್ಥಿಗಳನ್ನು ಆಯ್ದು ಆ ಆಯ್ದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಓದು ಕೃತಿಯನ್ನು ಒಂದು ತಿಂಗಳು ಮುಂಚೆಯೇ ಓದಲು ಕೊಡಬೇಕು. ನಂತರ ಈ ವಿದ್ಯಾರ್ಥಿಗಳಿಗೆ ಎರಡು ದಿನದ ಕಮ್ಮಟ ಮಾಡಿ ಅದರಲ್ಲಿ ವಿದ್ಯಾರ್ಥಿಗಳೇ ಅಂಬೇಡ್ಕರ್ ಬಗ್ಗೆ ಮಾತನಾಡಲು ಚರ್ಚಿಸಲು ವೇದಿಕೆ ಕಲ್ಪಿಸಬೇಕು. ಈ ಕಮ್ಮಟದ ಸಂಚಾಲಕರು ವಿದ್ಯಾರ್ಥಿಗಳ ಚರ್ಚೆಯನ್ನು ತಿಳಿವನ್ನು ವಿಸ್ತರಿಸುವ ಕೆಲಸವನ್ನಷ್ಠೇ ಮಾಡಬೇಕು. ಇದು ಈಗಿನ ಅಭಿಯಾನದ ಭಾಷಣ-ಸಂವಾದ ಮಾದರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಈ ಮಾದರಿಯನ್ನು ಕಾನೂನು ಶಾಲೆಯಲ್ಲದೆ ಇತರೆ ವಿವಿಗಳಲ್ಲಿರುವ ಅಂಬೇಡ್ಕರ್ ಅಧ್ಯಯನ ಸಂಸ್ಥೆಗಳೂ ಕೈಗೊಳ್ಳಬಹುದಾದ ಪರಿಣಾಮಕಾರಿ ಯೋಜನೆಯಾಗಿದೆ.
**
 ಅಂಬೇಡ್ಕರ್ ಅವರ ೧೨೫ ನೇ ಜನ್ಮ ದಿನಾಚರಣೆಯ ಅಂಗವಾಗಿ ದೇಶವ್ಯಾಪಿ ಸಂಚರಿಸಿದ ಭೀಮಯಾತ್ರೆ ನನ್ನನ್ನು ಕಾಡಿದ ಒಂದು ಬಗೆಯ ಯಾತನಾಮಯ ಪಯಣ. ಭೀಮಯಾತ್ರೆಯ ಬಗ್ಗೆ ಪ್ರಕಟವಾದ ಪತ್ರವೊಂದನ್ನು ನಾನು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಯಲ್ಲಿ ಗಮನಿಸಿದೆ. ಕೂಡಲೆ ಈ ಪತ್ರದಲ್ಲಿದ್ದ ವೆಬ್ ವಿಳಾಸದಿಂದ ಸಂಪರ್ಕಿಸಿದೆ. ಯಾತ್ರೆಯ ಮತ್ತಷ್ಟು ಮಾಹಿತಿಗಳು ಲಭ್ಯವಾದವು. ಅಂತೆಯೇ ಆಯೋಜಕರು ತತಕ್ಷಣವೇ ಪ್ರತಿಕ್ರಿಯಿಸಿ ಯಾತ್ರೆಯ ರೂಟ್ ಮ್ಯಾಪನ್ನು ಕಳಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು. 

  ದೆಹಲಿ ಮೂಲದ  ಸಫಾಯಿ ಕರ್ಮಚಾರಿ ಆಂದೋಲನ ಸಮಾನಾಸಕ್ತ ದಲಿತಪರ ನಿಜ ಕಾಳಜಿ ಇರುವ ಕೆಲವರ ಹಣಕಾಸಿನ ನೆರವಿನಿಂದ ನಡೆಯುತ್ತಿರುವ ಒಂದು ಸಂಸ್ಥೆ. ಇದು ಸಫಾಯಿ ಕರ್ಮಚಾರಿಗಳ ಪರವಾದ ಹಕ್ಕೊತ್ತಾಯಗಳಿಗಾಗಿ ಪ್ರಭುತ್ವವನ್ನು ಒತ್ತಾಯಿಸುವ ಮತ್ತು ಸಫಾಯಿ ಕರ್ಮಚಾರಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ೧೯೮೨ ರಿಂದ ಸಕ್ರಿಯವಾಗಿ ಮಾಡುತ್ತಾ ಬಂದಿದೆ.  ಈ ಆಂದೋಲನದ ಭಾಗವಾಗಿ ೨೦೧೦ ರಲ್ಲಿ ಸಾಮಾಜಿಕ ಪರಿವರ್ತನಾ ಬಸ್‌ಯಾತ್ರೆಯನ್ನು ಕೈಗೊಂಡಿತ್ತು. ಹೀಗಾಗಿ ಈ ಸಂಸ್ಥೆಯ ಸ್ವರೂಪವೇ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಹಕ್ಕೊತ್ತಾಯದ ಹೋರಾಟಗಳನ್ನು ಜೀವಂತಗೊಳಿಸುವುದು ಮತ್ತು ದೇಶದ ಜನತೆಯ ಗಮನಸೆಳೆಯುತ್ತಲೇ ಪ್ರಭುತ್ವದ ಮುಂದೆ ದೊಡ್ಡ ಪ್ರತಿರೋಧವನ್ನು ದಾಖಲಿಸುವುದಾಗಿದೆ. 

 ದೇಶವ್ಯಾಪಿ ಆಚರಣೆಯಲ್ಲಿರುವ ಒಣಶೌಚಾಲಯ, ಒಳಚರಂಡಿ, ಮಲದಗುಂಡಿ ಸ್ವಚ್ಚಮಾಡುವ ಸಫಾಯಿ ಕರ್ಮಚಾರಿಗಳ `ಕೊಲೆ ನಿಲ್ಲಿಸಿ' ಎಂದು ಆಗ್ರಹಿಸುವ `ಸಫಾಯಿ ಕರ್ಮಚಾರಿ ಆಂದೋಲನ' ಆಯೋಜಿಸಿದ `ಭೀಮಯಾತ್ರೆ'  ದೇಶವ್ಯಾಪಿ ನಡೆಯುತ್ತಿದೆ. ಈ ಬರಹ ಬರೆಯುವ ಹೊತ್ತಿಗೆ ೧೦೦ ನೇ ದಿನದ ಯಾತ್ರೆಯು ಉತ್ತರ ಭಾರತದಲ್ಲಿತ್ತು. ಇದೀಗ ಈ ಯಾತ್ರೆ ೩೦ ಸಾವಿರ ಕಿಲೋಮೀಟರ್ ಕ್ರಮಿಸಿದೆ. ಇದು ಸಫಾಯಿ ಕರ್ಮಚಾರಿಗಳ ರಾಷ್ಟ್ರಮಟ್ಟದ ಬಸ್‌ಯಾತ್ರೆ. ಈ ಯಾತ್ರೆಯ ಒಕ್ಕೊರಲಿನ ಕೂಗೊಂದೆ `ನಮ್ಮ ಕೊಲೆಯನ್ನು ನಿಲ್ಲಿಸಿ' ಎನ್ನುವುದು. ಇದೊಂದು ಯಾತನೆ ಮತ್ತು ದುಃಖದ ಪಯಣವಾಗಿದೆ. ೨೦೧೫ ಡಿಸೆಂಬರ್ ೧೦ ರಂದು ಆರಂಭವಾಗಿ ೨೦೧೬ ಏಪ್ರಿಲ್ ೧೩ ರವರೆಗೆ ದೇಶದ ೨೫ ರಾಜ್ಯಗಳ ೫೦೦ ಜಿಲ್ಲೆಗಳಲ್ಲಿ ಬಸ್ ಯಾತ್ರೆ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಏಪ್ರಿಲ್ ೧೪ ರಂದು ದೆಹಲಿಯಲ್ಲಿ ದೊಡ್ಡಮಟ್ಟದಲ್ಲಿ ಸಮಾವೇಶ ಆಯೋಜಿಸಿ ಸರಕಾರಕ್ಕೆ ಹಕ್ಕೊತ್ತಾಯದ ವರದಿಯೊಂದನ್ನು ಸಲ್ಲಿಸಲಿದೆ.
  ಈ ಯಾತ್ರೆ ಕರ್ನಾಟಕದಲ್ಲಿಯೂ ಸದ್ದಿಲ್ಲದೆ ಚಲಿಸಿತು. ಕರ್ನಾಟಕದ ದಲಿತ ಹೋರಾಟಗಳ ನೆಲೆಯಲ್ಲಿ ಈ ಯಾತ್ರೆಗೆ ದೊಡ್ಡಮಟ್ಟದ ಬೆಂಬಲ ವ್ಯಕ್ತವಾಗಬೇಕಿತ್ತು. ವಿಪರ್ಯಾಸವೆಂದರೆ ಈ ಯಾತ್ರೆ ಸದ್ದುಗದ್ದಲವಿಲ್ಲದೆ ಆಯಾ ಭಾಗಗಳ ದಲಿತ ಕೇರಿಗಳಿಗೆ ಹೋಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಹಾಸ್ಟೆಲ್ ಮೊದಲಾದ ಕಡೆಗಳಲ್ಲಿ ಉಳಿದು ಹೋದರು. ಈ ಯಾತ್ರೆಯ ಬಗ್ಗೆ ಕನಿಷ್ಠ ರಾಜ್ಯಮಟ್ಟದ ಒಂದು ಸುದ್ದಿ ಕೂಡ ಆಗಲಿಲ್ಲ. ಇದು ರಾಜ್ಯ ಸಂಚಾಲಕರ ದಲಿತಪರ ಸಂಘಟನೆಗಳ ಒಡನಾಟದ ಕೊರತೆಯೋ, ಅಥವಾ ಈ ಯಾತ್ರೆಯ ಸ್ವರೂಪವೇ ಈ ನೆಲೆಯದಾಗಿತ್ತೋ ತಿಳಿಯದು. 

 ಕರ್ನಾಟಕದಲ್ಲಿ ಯಾತ್ರೆಯ ಮೊದಲ ಸುತ್ತು ೪೩ ನೇ ದಿನ ಜನವರಿ ೨೧ ರಂದು ಆಂದ್ರದ ಮೂಲಕ ಕೋಲಾರ ಗೋಲ್ಡ್ ಫೀಲ್ಡ್‌ನ ಕೃಷ್ಣಗಿರಿುಂದ ಆರಂಭವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಕೃಷ್ಣರಾಜ ಸಾಗರ, ಕುಷಾಲನಗರ, ಸೋಮವಾರ ಪೇಟೆ, ಕೂಡ್ಲಿಪೇಟೆ, ಹಾಸನ, ಚಿಕ್ಕಮಗಳೂರು, ಕಡೂರು, ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ನವಲಗುಂದ, ನರಗುಂದ, ಬಾದಾಮಿ, ರೋಣ, ಗದಗ, ಕೊಪ್ಪಳ, ಹೊಸಪೇಟೆ, ಕೂಡ್ಲಿಗಿ, ಜಗಲೂರು, ಚಿತ್ರದುರ್ಗ, ಚಳ್ಳಕೆರೆ, ಪಾವಗಡದ ಮೂಲಕ ಆಂದ್ರದ ಹಿಂದೂಪುರವನ್ನು ಪ್ರವೇಶಿಸಿತು. ಎರಡನೇ ಸುತ್ತು: ೫೧ ನೇ ದಿನದ ಯಾತ್ರೆಯಲ್ಲಿ ಫೆಭ್ರವರಿ ೧ ರಿಂದ ಬೀದರಿನ ಹುಮನಾಬಾದ್ ಮೂಲಕ ಗುಲ್ಬರ್ಗಾ, ಚಿತಾಪುರ, ಯಾದಗಿರಿ, ದೇವದುರ್ಗ, ಶಾಹಾಪೂರ, ಸಿಂಧಗಿ, ಬಿಜಾಪುರ, ಅಥಣಿ ಮೂಲಕ ಸಾಂಗಲಿುಂದ ಮಹರಾಷ್ಟ್ರವನ್ನು ಪ್ರವೇಶಿಸಿತು. ಸಫಾು ಕರ್ಮಚಾರಿ ಆಂದೋಲನ ಬೆಂಗಳೂರು ಕಛೇರಿಯ ಡಿ.ಬಾಬುಲಾಲ, ಆರ್.ಸಿ.ಗವಾರಿಯ, ಪುಷ್ಪಲತಾ, ಮೋಸೆಸ್ ಅವರುಗಳು ಆಯಾ ಸ್ಥಳೀಯ ದಲಿತಪರ ಸಂಘಟನೆಗಳ ಸಹಾಯ ಪಡೆದು ಯಾತ್ರೆಯನ್ನು ಬರಮಾಡಿಕೊಂಡು ಅಲ್ಲಲ್ಲಿ ಸಭೆಗಳನ್ನು ಮಾಡಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

 ಈ ದೇಶದಲ್ಲಿ ಜಾತಿಪದ್ದತಿಯ ಅಮಾನವೀಯ ಪಾಲನೆ ಕೆಲವು ವಲಯಗಳಲ್ಲಿ ಈಗಲೂ ಜೀವಂತವಾಗಿದೆ. ಮಲಸ್ವಚ್ಚತ ಸಫಾಯಿ ಕೆಲಸಗಳನ್ನು ತಲೆತಲಾಂತರದಿಂದ ದಲಿತರಿಂದಲೇ ಮಾಡಿಸಲಾಗುತ್ತಿದೆ. ಈ ಕೆಲಸ ಇವರದು ಮಾತ್ರ ಎಂದು ಗಾಢವಾಗಿ ನಂಬಿಸಲಾಗಿದೆ. ಪ್ರಭುತ್ವ ಕೂಡ ವ್ಯವಸ್ಥಿತವಾಗಿ ಈ ಕೆಲಸವನ್ನು ದಲಿತರಿಂದಲೇ ಮಾಡಿಸುತ್ತಿದೆ. ಇದು ಉದ್ದೇಶ ಪೂರ್ವಕವಾಗಿ ನಡೆಯುತ್ತಿರುವ ದೌರ್ಜನ್ಯ ಮತ್ತು ತಾರತಮ್ಯ. ಅಂತೆಯೇ ಸಂವಿಧಾನದತ್ತವಾದ ಬದುಕುವ ಹಕ್ಕು ಮತ್ತು ಘನತೆಯ ಮೇಲಾಗುತ್ತಿರವ ನಿರಂತರ ಹಲ್ಯೆ ಎನ್ನುವುದನ್ನು ದೊಡ್ಡ ಧ್ವನಿಯಲ್ಲಿ ಹೇಳಬೇಕಾಗಿದೆ. ಇಂತಹ ಸಕ್ರಿಯಾತ್ಮಕ ಹೋರಾಟವನ್ನು ಸಫಾು ಕರ್ಮಚಾರಿ ಆಂದೋಲನ ಜೀವಂತವಾಗಿಟ್ಟಿದೆ. ಅಂತೆಯೇ ಇಂತಹ ಅಮಾನವೀಯ ಪ್ರಕರಣಗಳು ನಡೆದಾಗಲೆಲ್ಲ ಖಂಡಿಸುತ್ತಾ ಬಂದಿದೆ. 

  ೧೯೯೩ ರಲ್ಲಿ ಮಲಬಾಚುವ ಪದ್ದತಿಯನ್ನು ನಿಷೇಧಿಸಿದ ಕೇಂದ್ರ ಸರಕಾರದ ಕಾಯ್ದೆ ಸುಮಾರು ೨೦ ವರ್ಷಗಳು ಜಾರಿಯಲ್ಲಿತ್ತು, ಆದರೆ ಕಾಯ್ದೆಯ ಅಂತರ್ಗತ ಲೋಪದೋಷಗಳಿಂದ ಮತ್ತು ರಾಜಕೀಯ ಇಚ್ಚಾಶಕ್ತಿ ಕೊರತೆಯ ಕಾರಣಕ್ಕೆ ಇದು ಅನುಷ್ಟಾನಕ್ಕೆ ಬರಲಿಲ್ಲ. ನಂತರ ೨೦೧೩ ರಲ್ಲಿ ಮಲಬಾಚುವ ಪದ್ದತಿಯ ನಿಷೇಧ ಮತ್ತು ಪುನರ್ವಸತಿ ಯೋಜನೆಯನ್ನು ಒಳಗೊಂಡ ಹೊಸ ಕಾಯ್ದೆಯನ್ನು ಜಾರಿಮಾಡಲಾುತು. ದುರಾಧೃಷ್ಟವೆಂದರೆ, ಮಲದ ಗುಂಡಿಗಳಿಗೆ ಬಿದ್ದು ಸಾವನ್ನಪ್ಪುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಈ ಸಾವಿನ ಸಂಖ್ಯೆ ಏರುತ್ತಲೇ ಇವೆ. 
  
 ೧೯೯೩ ರ ಕಾನೂನನ್ನು ಸರಿಯಾಗಿ ಜಾರಿ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ಕೊಡಬೇಕು ಎಂದು ಕೋರಿ ಕಲಮು ೩೨ ರ ಪ್ರಕಾರ `ಸಫಾಯಿ ಕರ್ಮಚಾರಿ ಆಂದೋಲನ್' ೨೦೦೩ ರಲ್ಲಿ ರಿಟ್(ಸಂಖ್ಯೆ ೫೮೩) ಸಲ್ಲಿಸಿತ್ತು. ಈ ರಿಟ್ ಅರ್ಜಿಯ ದೀರ್ಘ ವಿಚಾರಣೆಯ ಫಲವಾಗಿ ೨೭ ಮಾರ್ಚ್೨೦೧೪ ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ ತೀರ್ಪು ನೀಡಿತು. ಮುಖ್ಯವಾಗಿ ೧೯೯೩ ರಿಂದ ಈತನಕ ಮಲದ ಗುಂಡಿಗೆ ಬಿದ್ದು ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ೧೦ ಲಕ್ಷ ಪರಿಹಾರವನ್ನು ಕೂಡಲೇ ನೀಡುವುದು ಮತ್ತು ೨೦೧೩ರ ಕಾಯ್ದೆಯ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿದೆ. ಸಫಾಯಿ ಕರ್ಮಚಾರಿಗಳು ಮಲದ ಗುಂಡಿಗೆ ಬಿದ್ದು ಸಾವನ್ನಪ್ಪದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಮುಂಜಾಗ್ರತೆ ವಹಿಸಲು ಸಹ ಆದೇಶ ನೀಡಿದೆ.

 ಈ ತೀರ್ಪಿನ ನಂತರವೂ ಮಲದ ಗುಂಡಿಯಲ್ಲಿ ಸಾವನ್ನಪ್ಪುವ ಪ್ರಕರಣಗಳು ನಿಂತಿಲ್ಲ. ದೇಶವ್ಯಾಪಿ ೧೩೨೭ ಸಾವುಗಳು ಸಂಭವಿಸಿವೆ. ಹೀಗೆ ಸತ್ತವರ ಪೈಕಿ ಶೇ ೩ ರಷ್ಟು ಮಾತ್ರ ಪರಿಹಾರ ಸಿಕ್ಕಿದೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯ ಕನ್ನಡಿಯಾಗಿದೆ. ಈ ನೆಲೆಯಲ್ಲಿ ಜಾತಿ ದೌರ್ಜನ್ಯ ಮತ್ತು ತಾರತಮ್ಯ ನಿಂತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ದುರಂತವೆಂದರೆ, ಈ ಎಲ್ಲಾ ವಿದ್ಯಮಾನಗಳ ನಡುವೆ ರಾಜಕಾರಣಿಗಳು ಮತ್ತು ಸಂಸದರು ಅಂಬೇಡ್ಕರರನ್ನು ಹಾಡಿ ಹೊಗಳುವುದು ವರದಿಯಾಗುತ್ತಿದೆ. ಬಲಪಂಥೀಯರು ಅಂಬೇಡ್ಕರರನ್ನು ಹೈಜಾಕ್ ಮಾಡಿ ಅವರ ಚಿಂತನೆಗಳನ್ನು ತಿದ್ದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಂಧೋಲನ, ದಲಿತರು ಮಲದ ಗುಂಡಿಗೆ ಬಿದ್ದು ಸಾವನ್ನಪ್ಪುತ್ತಿರುವುದಕ್ಕೆ ಸರಕಾರ ಹೊಣೆಯಲ್ಲವೇ? ಇದು ಪ್ರಭುತ್ವದ ವ್ಯವಸ್ಥಿತ ಕೊಲೆಯಲ್ಲವೆ? ಈ ಯಾತನಾಮಯ ಬದುಕಿಗೆ ಕೊನೆಯಿಲ್ಲವೇ? ಈ ಸಂಕೋಲೆಯಿಂದ ಬಿಡುಗಡೆಯಿಲ್ಲವೇ? ಈ ದೇಶದ ಪ್ರಜ್ಞಾವಂತ ಸುಶಿಕ್ಷಿತ ನಾಗರಿಕ ಬಂಧುಗಳು ಈ ಬಗ್ಗೆ ಬಾಯಿಮುಚ್ಚಿ ಕೂರುವುದು  ಸರಿಯೇ? ಎನ್ನುವಂಥಹ ಬಹುಮುಖ್ಯ  ಪ್ರಶ್ನೆಗಳನ್ನು ಭೀಮಯಾತ್ರೆ ತನ್ನ ಪಯಣದಲ್ಲಿ ದೇಶವ್ಯಾಪಿ ಎತ್ತುತ್ತಿದೆ.

 ಈ ದೌರ್ಜನ್ಯ ಸಾಕು, ಇನ್ನು ಮುಂದೆ ಸಹಿಸಲಾರೆವು. ಅಂಬೇಡ್ಕರ್ ಹೇಳಿದ `ಶಿಕ್ಷಣ, ಸಂಘಟನೆ, ಹೋರಾಟ' ವನ್ನು ಮೈಗೂಡಿಸಿಕೊಂಡು ಜಾತಿ ಕ್ರೌರ್ಯಗಳನ್ನು ಇಲ್ಲವಾಗಿಸೋಣ. ಮಲದಗುಂಡಿಗೆ ಇಳಿಯುವ ಅನಿವಾರ್ಯ ಬದುಕಿನ ನಮ್ಮ ದಿಕ್ಕನ್ನು ಬದಲಾಯಿಸೋಣ ಎಂದು ಭೀಮಯಾತ್ರೆ ಮನವರಿಕೆ ಮಾಡಿಕೊಡುತ್ತಲೇ ಹೊಸ ಬಗೆಯ ಆತ್ಮವಿಶ್ವಾಸವನ್ನೂ ದೈರ್ಯವನ್ನೂ ತುಂಬುತ್ತಿದೆ. ಇತ್ತ ಕಡೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು `ಡಿಜಟಲೀಕರಣ' ಮಂತ್ರವನ್ನು ಬಹುರಾಷ್ಟ್ರೀಯ ಕಂಪನಿಗಳ ದೊರೆಗಳ ಮುಂದೆ ಮಂಡಿಯೂರಿ ಉಲಿಯುತ್ತಿದ್ದಾರೆ. ಬೀಮಯಾತ್ರೆ ಪ್ರಧಾನಿಯವರಿಗೆ, ಈ ದೇಶದ ನೈರ್ಮಲ್ಯದ ವ್ಯವಸ್ಥೆ ಯಾಂತ್ರೀಕರಣವಾಗುವುದು ಯಾವಾಗ? ಸ್ವಚ್ಛಭಾರತದ ಮಾತುಗಳಲ್ಲಿ ಮಲದಗುಂಡಿಯಲ್ಲಿನ ಸಾವುಗಳು ಯಾವ ಲೆಕ್ಕಕ್ಕೆ ಸೇರುತ್ತವೆ? ಯಾಕೆ ಸಫಾಯಿ ಕರ್ಮಚಾರಿಗಳನ್ನು ಸ್ವಚ್ಛಭಾರತ ಮಿಷನ್ನಿನ ವ್ಯಾಪ್ತಿಯಲ್ಲಿ ತರುತ್ತಿಲ್ಲ? ಮುಂದೊಂದು ದಿನ ಮಲದಗುಂಡಿಯಲ್ಲಿನ ಸಾವುಗಳು ನಿಮ್ಮ ಡಿಜಿಟಲೀಕರಣದ ಕನಸನ್ನು ಭಗ್ನಗೊಳಿಸುತ್ತವೆ ಎನ್ನುವುದು ತಿಳಿದಿರಲಿ. ಮುಂತಾದ ಪ್ರಶ್ನೆಗಳನ್ನು ಕೇಳುತ್ತಿದೆ. ಈ ಎಲ್ಲಾ ಸಂಗತಿಗಳನ್ನು ಒಳಗುಮಾಡಿಕೊಂಡು ಕೇಂದ್ರ ಸರಕಾರದ ನೀತಿ ಮತ್ತು ಆದ್ಯತೆಗಳನ್ನು ಭೀಮಯಾತ್ರೆ ಪ್ರಶ್ನಿಸುತ್ತದೆ ಮತ್ತು ಖಂಡಿಸುತ್ತದೆ.

ಭೀಮಯಾತ್ರೆಯು ಮಂಡಿಸಿದ ಆಗ್ರಹಪೂರ್ವಕ ಹಕ್ಕೊತ್ತಾಯಗಳು ಹೀಗಿವೆ:
೧.ಶತಶತಮಾನಗಳಿಂದಲೂ ದಲಿತ ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಮಲಬಾಚುವ ಸಫಾು ಕೆಲಸಕ್ಕೆ ಸೀಮಿತಗೊಳಿಸಿ ಐತಿಹಾಸಿಕ ಅವಮಾನ ಅನುಭ"ಸುವಂತೆ ಮಾಡಿರುವ ಕಾರಣಕ್ಕಾಗಿ ಕೇಂದ್ರ ಸರಕಾರ ಭೇಷರತ್ ಕ್ಷಮೆ ಯಾಚಿಸಬೇಕು.

೨.ಇನ್ನಾದರೂ ಆಗ್ರಹಪೂರಕವಾಗಿ ೨೦೧೩ರ ಸಫಾುಕರ್ಮಚಾರಿ ಪುನರ್ವಸತಿ ಕಾಯ್ದೆ ಅನುಷ್ಠಾನಗೊಳಿಸಬೇಕು. ಆ ಮೂಲಕ ಮಲ ಎತ್ತುವ ದಾಸ್ಯದ ವಿಮೋಚನೆಯಾಗಬೇಕು.

೩.ಸಫಾಯಿ ಕರ್ಮಚಾರಿಗಳ ಕೊಲೆ ಕೂಡಲೇ ನಿಲ್ಲಬೇಕು. ಇನ್ನುಮುಂದೆ ಮಲದ ಗುಂಡಿ, ಒಳಚರಂಡಿಗಳಿಗೆ ಬಿದ್ದು ಸಾಯುವ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ನೈರ್ಮಲ್ಯ ವ್ಯವಸ್ಥೆಯನ್ನು ಕೂಡಲೇ ಯಾಂತ್ರಿಕರಣಗೊಳಿಸಬೇಕು.

೪.ಪ್ರಭುತ್ವದ ದಿವ್ಯ ನಿರ್ಲಕ್ಷ್ಯದಿಂದ ೧೯೯೩ರಿಂದ ಈತನಕ ಮಲದ ಗುಂಡಿಗೆ ಬಿದ್ದು ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಲಬ್ಯವಾಗಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ತಲಾ ೧೦ ಲಕ್ಷ ರೂಪಾಯಿ ಪರಿಹಾರವನ್ನು ಕೂಡಲೇ ವಿತರಿಸುವ ವ್ಯವಸ್ಥೆಯಾಗಬೇಕು.

೫.ಸಫಾಯಿ ಕರ್ಮಚಾರಿಗಳಿಗೆ ಸರಕಾರ ನೀಡುತ್ತಿರುವ ಒಂದು ಬಾರಿಗೆ (ಒನ್ ಟೈಂ) ನೀಡುವ ಪರಿಹಾರ ಧನ ೪೦ ಸಾವಿರ ರೂಗಳಿಂದ ೨ ಲಕ್ಷರೂಗಳಿಗೆ ಹೆಚ್ಚಿಸಿ ತತಕ್ಷಣವೇ ಪಾವತಿಯಾಗುವಂತೆ ಕ್ರಮವಹಿಸಬೇಕು.

 ಹೀಗೆ `ಭೀಮಯಾತ್ರಾ ಜಿಂದಾಬಾದ್/ಸಹಿಸುವುದಿಲ್ಲ/ಸಹಿಸುವುದಿಲ್ಲ/ನಮ್ಮ ಮೇಲಿನ ದೌರ್ಜನ್ಯವನು ಸಹಿಸುವುದಿಲ್ಲ' ಎಂಬ ಘೋಷಣೆಯೊಂದಿಗೆ ಭೀಮಯಾತ್ರೆ ತನ್ನ ಪಯಣವನ್ನು ಬೆಳೆಸಿದೆ. ಇದೀಗ ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರಿಗೆ ಈ ಯಾತ್ರೆಯ ವರದಿಯೊಂದಿಗೆ ಹಕ್ಕೊತ್ತಾಯದ ಪತ್ರವನ್ನು ಕೊಟ್ಟಿದೆ. ದೇಶದ ಗಮನ ಸೆಳೆಯುವಂತೆ ಏಪ್ರಿಲ್ ೧೪ ರಂದು ದೆಹಲಿಯಲ್ಲಿ ದೊಡ್ಡಮಟ್ಟದ ಸಮಾವೇಶವನ್ನೂ ಆಯೋಜಿಸಿದೆ. ಅಂಬೇಡ್ಕರರ ಜಾತಿ ವಿನಾಶ ಮತ್ತು ತಾರತಮ್ಯ ವಿರೋಧಿ ನಿಲುವಿಗೆ ಬದ್ಧರಿರುವ ಎಲ್ಲರೂ ಇನ್ನು ಮುಂದೆಯೂ ಭೀಮ ಯಾತ್ರೆಯನ್ನು ಆಯಾ ರಾಜ್ಯಗಳಲ್ಲಿ ನಡೆಸಲು ಕರೆ ನೀಡುತ್ತಾ, ಸಫಾಯಿ ಕರ್ಮಚಾರಿಗಳ ಯಾತನಾಮಯ ಪಯಣಕ್ಕೆ ಅಂತ್ಯವಾಡುವ ಆಶಯದ ಬೀಜಗಳನ್ನೂ ಈ ಯಾತ್ರೆ ಬಿತ್ತುತ್ತಾ ಹೋಗಿದೆ.
**
 ಕೇಂದ್ರದ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ-೨೦೧೧ರ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ೧೫,೪೩೦ ಸಫಾಯಿ ಕರ್ಮಚಾರಿ ಕುಟುಂಬಗಳಿವೆ. ಅದರಂತೆ ತುಮಕೂರಿನಲ್ಲಿ ಅತಿಹೆಚ್ಚು ೩,೨೮೭ ಹಾಗೂ ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ೨ ರಂತೆ ಅತಿ ಕಡಿಮೆ ಸಫಾಯಿ ಕರ್ಮಚಾರಿ ಕುಟುಂಬಗಳಿವೆ. ಉಳಿದಂತೆ ವಿಜಯಪುರ ಜಲ್ಲೆ ೨,೪೫೧,  ಬೀದರ್ ೧,೮೪೧,  ಚಿಕ್ಕಬಳ್ಳಾಪುರ ೧,೭೨೫, ರಾಮನಗರ೧,೪೯೯, ರಾಯಚೂರು ೧,೪೬೬, ಬೆಂಗಳೂರು ನಗರ ೨೮೯,  ಬಾಗಲಕೋಟೆ ೨೭೩, ಚಾಮರಾಜನಗರ ೨೩೦, ಗದಗ ೧೬೫,  ಕೋಲಾರ ೧೩೯,  ಬಳ್ಳಾರಿ ೬೧, ಕೊಪ್ಪಳ ೫೧,  ಮೈಸೂರು ೪೭, ಬೆಳಗಾ" ೪೧,  ಹಾವೇರಿ ೩೩, ಕೊಡಗು ೩೦, ಮಂಡ್ಯ ೧೧, ಬೆಂಗಳೂರು ಗ್ರಾಮಾಂತರ ೯,  ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ೯  ಸಫಾಯಿ ಕರ್ಮಚಾರಿ ಕುಟುಂಬಗಳಿವೆ. ಈ ಅಂಕೆಸಂಖ್ಯೆಯ ಮರು ಸಮೀಕ್ಷೆ ಇದೀಗ ನಡೆಯುತ್ತಿದೆ. ಇದರಲ್ಲಿ ಶೇ ೯೫ ರಷ್ಟು ದಲಿತರ ಕುಟುಂಬಗಳು ಎನ್ನುವುದನ್ನು ಗಮನಿಸಬೇಕು. ದಲಿತ ಕೆಳಜಾತಿಗಳಿಗೆ ಶಿಕ್ಷಣ ರಾಜಕೀಯ ಉದ್ಯೋಗದ ಮೀಸಲಾತಿಯ ಬಗ್ಗೆ ಸಿನಿಕರಾಗಿ ಮೀಸಲಾತಿಯನ್ನು ವಿರೋಧಿಸುವವರು ಸಫಾಯಿ ಕರ್ಮಚಾರಿಗಳ ಕೆಲಸದಲ್ಲಿನ ಶೇ ೯೫% "ುಸಲಾತಿಯನ್ನು ಇತರರಿಗೂ ಹಂಚುವ ಮಾತನಾಡಬೇಕಿದೆ. 

 ಕರ್ನಾಟಕದಲ್ಲಿಯೂ ಮಲದ ಗುಂಡಿಗೆ ಬಿದ್ದು  ಸಾವನ್ನಪ್ಪುವ ಪ್ರಕರಣಗಳು ದಾಖಲಾಗುತ್ತವೇ ಇವೆ. ಆಯಾ ಸಾ"ನ ಸಂದರ್ಭದಲ್ಲಿ ಧರಣಿ ಹೋರಾಟ ಪ್ರತಿಭಟನೆಗಳು ನಡೆದು ಈ ಸಾವಿಗೆ ಕಾರಣವಾದ ಇಡೀ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲಾಗುತ್ತದೆ. ವಿಪರ್ಯಾಸವೆಂದರೆ ಇಂತಹ ಧ್ವನಿಗೆ ವ್ಯಾಪಕತೆ ದೊರಕುವುದಿಲ್ಲ. ಈ ಸಾವು ಸೈನಿಕರ ಸಾವಿನಂತೆ, ಸರಕಾರಿ ಅಧಿಕಾರಿಗಳ ಸಾವಿನಂತೆ, ಕನಿಷ್ಠ ರೈತರ ಸಾವಿನಂತೆ ರಾಜ್ಯಮಟ್ಟದ ಸುದ್ದಿಯೂ ಆಗದೆ ಮರೆಯಾಗುತ್ತವೆ. ಈ ಸಾವುಗಳು ನ್ಯಾಯವೇ ಎಂಬ ಪ್ರಶ್ನೆಯೊಂದಿಗೆ ಪ್ರಜ್ಞಾವಂತರೂ ವ್ಯಾಪಕವಾಗಿ ಚರ್ಚೆ ಮಾಡದಿರುವುದೂ ಈ ಕಾಲದ ದುರಂತ. ಇನ್ನಾದರೂ ಈ ಸಾವುಗಳು ನಮ್ಮನ್ನು ಕಾಡಬೇಕಿದೆ, ಈ ಸಾವಿನ ವಿರುದ್ಧದ ಧ್ವನಿಗೆ ವ್ಯಾಪಕತೆ ದೊರಕಬೇಕಿದೆ.

ಗುರುವಾರ, ಏಪ್ರಿಲ್ 14, 2016

ಅಂಬೇಡ್ಕರ್‌ ಆಶಯಗಳ ಪ್ರಸ್ತುತತೆ


-ಡಾ.ಹೆಚ್.ಡಿ.ಉಮಾಶಂಕರ್
ಸೌಜನ್ಯ:ಪ್ರಜಾವಾಣಿ
ಅಂಬೇಡ್ಕರ್ 1951ರಲ್ಲಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ಇತ್ತರು. ಮೀಸಲಾತಿಯನ್ನು ಎಲ್ಲ ಹಿಂದುಳಿದ ವರ್ಗಗಳಿಗೂ ವಿಸ್ತರಿಸಬೇಕು.  ಹಿಂದೂ ಕೋಡ್‌ ಬಿಲ್ ಕಡ್ಡಾಯವಾಗಿ ಜಾರಿಗೆ ಬರಬೇಕು ಮತ್ತು ಸಂಪುಟದಲ್ಲಿನ ತಮ್ಮ ಸ್ಥಾನವನ್ನು ಗೌಣಗೊಳಿಸುವುದರ ಮೂಲಕ ಮುಖ್ಯ ಯೋಜನೆಗಳ ಚರ್ಚೆಯಿಂದ ಆಚೆ ಉಳಿಸಬಾರದು. ಇದು ಅಂಬೇಡ್ಕರ್ ಅವರ ಗಟ್ಟಿ ನಿಲುವು.
ಈ ನಿಲುವುಗಳನ್ನು ಅಂದಿನ ಸರ್ಕಾರ ಮೂಲೆಗುಂಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇವುಗಳನ್ನೇ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿ ಅಂಬೇಡ್ಕರ್ ಸಂಪುಟದಿಂದ ಹೊರನಡೆದರು. ಇದು ಜನತೆಯ ಪರ ದಿಟ್ಟ ನಿಲುವು. ಇಂತಹ ಮನುಷ್ಯಪರ ಚಿಂತನೆ ತೋರಿಸಿಕೊಟ್ಟ ಅಂಬೇಡ್ಕರ್ ಅವರ  125ನೇ ಜಯಂತಿ ಇಂದು.  ಈ ಜಯಂತಿಯ ಸಂದರ್ಭದಲ್ಲಿ ನಾವು ಇಡಬೇಕಾದ ಹೆಜ್ಜೆ ಮತ್ತು ತೊಡಬೇಕಾದ ಪ್ರತಿಜ್ಞೆಗಳ ಬಗ್ಗೆ ಒಂದು ಸಣ್ಣ ನೋಟ ಇಲ್ಲಿದೆ.
ಅಂಬೇಡ್ಕರ್ ಜಯಂತಿ 70ರ ದಶಕದಲ್ಲಿ ದಲಿತರ ಸ್ವಾಭಿಮಾನದ ಸೆಲೆ. ಇಂದು ಹಲವು ಹೋರಾಟಗಾರರ ಒಳಗೆ ಇದು ತನ್ನ ಬಾಹುಗಳನ್ನು ಬಹುವಿಧದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ದಲಿತ ಮತ್ತು ದಲಿತೇತರ ಎನ್ನುವ ಭಿನ್ನಭೇದವಿಲ್ಲದೆ ಇವರೊಳಗಿನ ಪ್ರಗತಿಪರರಲ್ಲಿ ಅಂಬೇಡ್ಕರ್ ಎನ್ನುವ ಶಕ್ತಿ ಪ್ರವೇಶ ಪಡೆದುಕೊಳ್ಳುತ್ತಿದೆ.
ಇಂದು ಜಾಗತೀಕರಣದ ಕೊಳ್ಳುಬಾಕ ಸಂಸ್ಕೃತಿ ಜಗತ್ತನ್ನು ನುಂಗಿ ನೀರು ಕುಡಿಯುತ್ತಿದೆ. ಅದರಲ್ಲೂ ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರದಲ್ಲಿರುವ ಬಡವರನ್ನು ಇದು ನಿರ್ನಾಮದೆಡೆಗೆ ಸಾಗಿಸುತ್ತದೆ. ಇದಕ್ಕೂ ಮಿಗಿಲೆಂಬಂತೆ ಈ ದೇಶದ ಜಾತಿಯ ಕ್ರೌರ್ಯ ತುಂಬಿದ ಇತಿಹಾಸವನ್ನೇ ಬುಡಮೇಲು ಮಾಡಲು ಹಲವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ ಇನ್ನಿಲ್ಲದಂತೆ ಕಾಡಲಿಕ್ಕೆ ಶುರುಮಾಡಿದೆ.
ಏಪ್ರಿಲ್ 14 ಬಂತೆಂದರೆ ದಲಿತರು ಹೊಸ ವರ್ಷದ ರೀತಿ ಸಂಭ್ರಮಿಸುತ್ತಿದ್ದರು. ಈ ಸಂಭ್ರಮದಲ್ಲೇ ಜಯಂತಿ ಸಾಗಿತ್ತು. ಊರೂರು ಕೇರಿಕೇರಿಗಳಲ್ಲಿ ಅಂಬೇಡ್ಕರ್ ಅವರನ್ನು ಪರಿಚಯಿಸುವ ಧ್ಯೇಯದೊಂದಿಗೆ ದಲಿತ ಸಂಘರ್ಷ ಸಮಿತಿ ಇದಕ್ಕಾಗಿ ಶ್ರಮಿಸುತ್ತಿತ್ತು. 90ರ ದಶಕದಿಂದೀಚೆಗೆ ಸರ್ಕಾರಗಳು ಅಂಬೇಡ್ಕರ್ ಜಯಂತಿಯನ್ನು ಗುತ್ತಿಗೆ ತೆಗೆದುಕೊಂಡವು.
ಅಲ್ಲಿಂದೀಚೆಗೆ ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸರ್ಕಾರಿ ಕೃಪಾಪೋಷಿತ ಜಯಂತಿಗಳು ಆಯೋಜಿಸಲಿಲ್ಲ. ಬದಲು ನಾಮಕಾವಸ್ತೆಗೆ ಜಯಂತಿ ಮಾಡುವ ತಯಾರಿ ನಡೆಸುತ್ತಾ ಬಂದವು. ದಲಿತರ ಮನೆಮನೆಯ ಹಬ್ಬವನ್ನು ಸರ್ಕಾರಿ ಹಬ್ಬವನ್ನಾಗಿ ಮಾಡಿದ ಕೀರ್ತಿ ಇದುವರೆಗೆ ಆಳಿದ ಸರ್ಕಾರಗಳಿಗೆ ಸಲ್ಲುತ್ತದೆ. 90ರ ದಶಕದಲ್ಲಿ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಜಾಗತೀಕರಣವನ್ನು ನುಸುಳಿಸಿತು ಅಂದಿನ ಕೇಂದ್ರ ಸರ್ಕಾರ.
ಇದರ ಹಾದಿಯಲ್ಲಿ ‘ಪಂಚತೀರ್ಥ ಯೋಜನೆ’ ಘೋಷಿಸಿರುವ ಇಂದಿನ ಸರ್ಕಾರಗಳವರೆಗೂ ಅಂಬೇಡ್ಕರ್ ಅವರನ್ನು ವಸ್ತುನಿಷ್ಠವಾಗಿ ಪರಿಚಯಿಸುವ ಕಾರ್ಯಕ್ರಮಗಳು ಮೂಡಿಬರುತ್ತಲೇ ಇಲ್ಲ. ಸರ್ಕಾರದ ಈ ತಂತ್ರಗಳನ್ನು ಕೆಲವು ದಲಿತ ಸಂಘಟನೆಗಳು ಅರಿಯದಾದವು. ಇದರಿಂದ ಸರ್ಕಾರದ ಈ ಹುಸಿ ಕಾರ್ಯಕ್ರಮಗಳನ್ನು ನಂಬಿ ಅದರೊಂದಿಗೆ ಕೈಜೋಡಿಸಿದವು. ಆ ಮೂಲಕ ತಮ್ಮ ಸ್ವಾಭಿಮಾನದ ಪ್ರಶ್ನೆ ಮರೆಮಾಚಿ ನಿಂತವು.
ಇನ್ನು ಕೆಲವು ಸಂಘಟನೆಗಳು ಮತ್ತು ಜಯಂತಿ ಸಂದರ್ಭದಲ್ಲಿ ಹುಟ್ಟುವ ಜಯಂತ್ಯುತ್ಸವ ಸಮಿತಿಗಳು ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಮುಂದಾಗಿವೆ. ಆರ್ಕೆಸ್ಟ್ರಾ ಮತ್ತು ಅದ್ಧೂರಿ ಮೆರವಣಿಗೆಗೆ ತಯಾರಿ ನಡೆಸಿಕೊಳ್ಳುತ್ತಿವೆ. ಮಾರವ್ವನ ಹಬ್ಬದಲ್ಲಿ ಪೂಜಾರಿ ಸಹಿತ ಮೆರವಣಿಗೆ ಹೊರಡುವ ಪಲ್ಲಕ್ಕಿಯಂತೆ ಅಂಬೇಡ್ಕರ್ ಪ್ರತಿಮೆ ಸಾಗಿಸಲು ತಯಾರಿ ನಡೆಸಿವೆ.
ಇದು ಒಂದು ಕಾಲದಲ್ಲಿ ಅತ್ಯಂತ ಅಗತ್ಯವಾದ ಕಾರ್ಯಕ್ರಮವಾಗಿದ್ದುದೇನೊ ನಿಜ. ಅದರಲ್ಲೂ ದಲಿತರೊಳಗೆ ಮತ್ತು ಸಮಾನತೆ ಬಯಸುವವರಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ಇದು ಅಂದಿಗೆ ಸರಿಯಾದ ಕಾರ್ಯಕ್ರಮವೆ. ಇದರ ತೀವ್ರತೆಯಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಕೇರಿಕೇರಿ ಗಲ್ಲಿಗಲ್ಲಿಗಳಲ್ಲಿ ನಡೆದ ಅಂಬೇಡ್ಕರ್ ಕುರಿತ ಯಾವುದೇ ಕಾರ್ಯಕ್ರಮ ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿರಬಹುದು.
ಆದರೆ ಇಂದು ಹಿಂದಿನ ಪರಿಸ್ಥಿತಿ ಇಲ್ಲ. ಅಪಾಯದ ಕರೆಗಂಟೆ ಮತ್ತೆ ಮತ್ತೆ ಎಚ್ಚರಿಸುತ್ತಿದೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಇಂತಹ ಜನಪ್ರಿಯ ಕಾರ್ಯಕ್ರಮಗಳಿಂದ ಹೊರಬರಬೇಕು. ಇಲ್ಲದಿದ್ದರೆ ಈ ದೇಶದ ಬಡವರ, ದಮನಿತರ, ಅಸಹಾಯಕರ, ಮಹಿಳೆಯರ ವಿನಾಶಕ್ಕೆ ಮುನ್ನುಡಿ ಬರೆದಂತೆಯೇ ಸರಿ.
125ನೇ ವರ್ಷದ ಮಹತ್ವದ ಜಯಂತಿಯ ಈ ಸಂದರ್ಭದಲ್ಲಿ ಬಲಪಂಥೀಯರು  ಅಂಬೇಡ್ಕರ್ ಕುರಿತು ಮಾತನಾಡಲು ಶುರುಮಾಡಿದ್ದಾರೆ. ಇದು ಸ್ವಾಗತಾರ್ಹ. ಆದರೆ ಇದ್ದಕ್ಕಿದ್ದಂತೆ ಮಾತನಾಡುತ್ತಿರುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅವರು ಮಾತನಾಡುತ್ತಿರುವುದರ ಪದಪದಗಳ ನಡುವಿನ ಇತಿಹಾಸದಲ್ಲೇ ಹಿಂದಿನ ಧೋರಣೆಯನ್ನು ಸ್ಪಷ್ಟವಾಗಿ ಗುರುತಿಸಬೇಕು.
ಇದನ್ನು ಗುರುತಿಸುತ್ತಾ ಅದರ ಸುತ್ತ ಚರ್ಚೆ ಮಾಡುವುದು ನಮ್ಮ ಕೆಲಸವಲ್ಲವೆಂದು ಅಂಬೇಡ್ಕರ್‌ವಾದಿ ಎನಿಸಿಕೊಂಡವರು ಭಾವಿಸಬಹುದು. ಹೀಗೆ ಉಪೇಕ್ಷೆ ಮಾಡಿದರೆ ಮುಂದೊಂದು ದಿನ ಇವರ ಹೇಳಿಕೆಗಳೇ ದೇಶವನ್ನಾಳುತ್ತವೆ. ಇದು ಅಪಾಯದ ಸರಮಾಲೆಯನ್ನು ತಂದೊಡ್ಡುತ್ತದೆ. ಇದಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕು.
ಇದರೊಂದಿಗೆ ನೀಲಿ ಮತ್ತು ಕೆಂಪು ಒಂದಾಗಬೇಕು ಎನ್ನುವ ಸಣ್ಣ ಚರ್ಚೆ ಇಂದು ಶುರುವಾಗಿದೆ. ಇದೇ ಸಂದರ್ಭದಲ್ಲಿ ಮಾರ್ಕ್ಸ್‌ವಾದಿಗಳು ಮತ್ತು ಎಡಪಂಥೀಯರು ಅಂಬೇಡ್ಕರ್ ಅವರ ಜಾತಿ ವಿನಾಶ, ವರ್ಗ ಸಿದ್ಧಾಂತ, ಪ್ರಭುತ್ವ ಕುರಿತಾದ ನಿಲುವು ಮುಂತಾದವುಗಳ ಬಗ್ಗೆ ಮಾತನಾಡಲು ಮುಂದಾಗಿದ್ದಾರೆ. ಇದು ಕೂಡ ಸ್ವಾಗತಾರ್ಹ. ಇಷ್ಟೇ ಸಾಲದೆಂಬಂತೆ ಕೆಲವರು ಸಂಸದೀಯ ರಾಜಕಾರಣವನ್ನಷ್ಟೇ ಕೇಂದ್ರೀಕರಿಸುತ್ತಿದ್ದಾರೆ.
ಅಂಬೇಡ್ಕರ್ ಅವರು ಇವತ್ತಿನ ಸಂಸದೀಯ ರಾಜಕಾರಣದ ಅಪಾಯವನ್ನು ಮೊದಲೇ ಗ್ರಹಿಸಿದ್ದರಿಂದ ಪ್ರತ್ಯೇಕ ಮತದಾನದ ಹಕ್ಕನ್ನು ಪಡೆಯಲು ಶತಾಯಗತಾಯ ಶ್ರಮಿಸಿದ್ದರು. ಆದರೆ ಇದು ಇಂದು ಮುಖ್ಯ ಚರ್ಚೆಯಾಗುವ ಬದಲು ಗೌಣವಾಗಿದೆ. ಇದನ್ನು ತೀವ್ರ ಚರ್ಚೆಗೆ ಒಳಪಡಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಮತ್ತೊಮ್ಮೆ ಮಗದೊಮ್ಮೆ ಪ್ರಭಾವ ಬೀರಬೇಕಾದ ಅನಿವಾರ್ಯ ಇದೆ. ಇದಕ್ಕಾಗಿ ಈ ಹೊತ್ತಿನಲ್ಲಿ ಸಮಾನತೆ ಬಯಸುವ ಮನಸ್ಸುಗಳು ಒಂದಾಗುವ ಪರಿಕಲ್ಪನೆಯ ಸುತ್ತ ಚರ್ಚೆ ಶುರುವಾಗುತ್ತಲೇ ಅಂಬೇಡ್ಕರ್ ಆಶಯಕ್ಕೆ ಮತ್ತೆ ಮತ್ತೆ ಹಿಂದಿರುಗಬೇಕಿದೆ.
ಇನ್ನು ವಿಶ್ವವಿದ್ಯಾಲಯಗಳಲ್ಲಿ ನಡೆದ ರೋಹಿತ್ ವೇಮುಲ, ಕನ್ಹಯ್ಯಾ ಅವರ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯನ್ನು ಮತ್ತೊಮ್ಮೆ ಎದ್ದು ನಿಲ್ಲಿಸಿದೆ. ಸಂವಿಧಾನವು ದೇಶದ ನರನಾಡಿಯಾಗಿ, ರಕ್ತ, ಮೆದುಳು, ಹೃದಯವಾಗಿ ಕೆಲಸ ಮಾಡಬೇಕಿದ್ದ ಸಂದರ್ಭದಲ್ಲಿ ಅಘೋಷಿತ ಸಂವಿಧಾನವೊಂದು ಮೆದುಳನ್ನು ನಿಯಂತ್ರಿಸುವಲ್ಲಿ ಫಲ ಕಾಣುತ್ತಿದೆ.
ರೈತರ ಆತ್ಮಹತ್ಯೆ ನಿಂತಿಲ್ಲ. ಮರ್ಯಾದೆಗೇಡು  ಹತ್ಯೆ ಜಾತಿಯ ಪೆಂಡಭೂತವಾಗಿ ಭಾರತದ ಉದ್ದಕ್ಕೂ ಹರಡುತ್ತಿದೆ. ಅಸ್ಪೃಶ್ಯತೆ ಈ ದೇಶಕ್ಕೆ ಅಂಟಿದ ರೋಗವಾಗೇ ಮುಂದುವರಿಯುತ್ತಿದೆ. ಈ ಎಲ್ಲವಕ್ಕೂ ಪರಿಹಾರ ಅಂಬೇಡ್ಕರ್ ಅವರ ಚಿಂತನೆಗಳಲ್ಲಿದೆ. ಇದನ್ನು ಜನಕ್ಕೆ ಮುಟ್ಟುವ ಹಾಗೆ ಕಾರ್ಯಕ್ರಮ ರೂಪಿಸಬೇಕಿದೆ.
ಒಂದು ಕಡೆ ಸರ್ಕಾರದ ವತಿಯಿಂದ ಅಂಬೇಡ್ಕರ್ ಹೆಸರಿನ ಪಂಚತೀರ್ಥ ಯೋಜನೆ ಸಾಗಿದೆ. ವಾಸ್ತವದಲ್ಲಿ ಅಂಬೇಡ್ಕರ್ ಕನಸಿದ ಸಮಸಮಾಜದ ಪರಿಕಲ್ಪನೆಯು ಮಣ್ಣುಪಾಲಾಗುತ್ತಿದೆ. ಇನ್ನೊಂದು ಕಡೆ ದಲಿತರ ಕೊಲೆ, ಸುಲಿಗೆ, ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆ ನಿಲ್ಲುತ್ತಿಲ್ಲ. ಮಗದೊಂದು ಕಡೆ ಸಂಸ್ಕೃತಿ ಹೆಸರಿನಲ್ಲಿ ಹೊಡಿ, ಬಡಿ, ತಲೆ ತೆಗಿ ಮುಂತಾದ ಕೊಲ್ಲುವ ಪರಿಭಾಷೆಗಳು ಅಸ್ತಿತ್ವಕ್ಕೆ ಬರುತ್ತಿವೆ.
ಇದರೊಂದಿಗೆ ಸಂವಿಧಾನದಿಂದಾಗಿ ತಳಸಮುದಾಯದವರು ಮೇಲೆ ಬಂದಿದ್ದಾರೆ, ಇದನ್ನು ಸಹಿಸದವರು ಇವರ ವಿರುದ್ಧ ಸಂಚು ನಡೆಸುತ್ತಿದ್ದಾರೆ. ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅನಿವಾರ್ಯ ಇದೆ. ಈ ಅನಿವಾರ್ಯ ಜನತೆಯ ಪರ ದಿಟ್ಟ ಹೋರಾಟ ಕಟ್ಟುತ್ತಿರುವವರು ಒಂದಾಗಬೇಕಾದ ತುರ್ತನ್ನೂ ಮುಂದಿಟ್ಟಿದೆ.
ಏಕೆಂದರೆ, ಅಂಬೇಡ್ಕರ್ ಆಶಿಸಿದ ಸಂವಿಧಾನವಾಗಲಿ, ಅವರ ಚಿಂತನೆಗಳಲ್ಲಿ ಅಡಗಿರುವ ವಸ್ತುಸ್ಥಿತಿಯಾಗಲಿ, ಆಳುವ ವರ್ಗಕ್ಕೆ ಬೇಕಿಲ್ಲ. ಇವರ ಹಾದಿಯಾಗಿ ಈ ದೇಶದ ಬಂಡವಾಳಶಾಹಿಗಳು ಅಂಬೇಡ್ಕರ್ ಆಶಯಗಳನ್ನು ಪ್ರಾಯೋಗಿಕವಾಗಿ ಮೂಲೆಗುಂಪು ಮಾಡುತ್ತಲೇ ಬರುತ್ತಿದ್ದಾರೆ. ಇದಕ್ಕೆ ತಕ್ಕನಾಗಿ ಕೋಮುವಾದ ತನ್ನ ಕರಾಳ ಛಾಯೆಯನ್ನು ಇನ್ನಷ್ಟು ಅಗಲಿಸುತ್ತಿದೆ.
ಇದೇ ಸಂದರ್ಭದಲ್ಲಿ ಈ ದೇಶವನ್ನು ಪ್ರೀತಿಸುವ ಬಗೆಯನ್ನು ಹೇಳಿಕೊಟ್ಟ ಅಂಬೇಡ್ಕರ್ ನೆನಪನ್ನು ಮಸುಕಾಗಿಸುವ ಯತ್ನ ಸಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ದೇಶಪ್ರೇಮದ ಚರ್ಚೆ ಕಾವೇರಿದೆ. ಇದೂ ಸಾಲದೆಂಬಂತೆ ‘ದೇಶ ಮತ್ತು ಸಮುದಾಯದ ಹಿತಾಸಕ್ತಿಯಲ್ಲಿ ಯಾವುದು ಮುಖ್ಯ ಎಂದರೆ ನನಗೆ ದೇಶವೇ ಮೊದಲು’ ಎಂದ ಅಂಬೇಡ್ಕರ್‌ರನ್ನು ತಮಗೆ ಬೇಕಾದ ಹಾಗೆ ರಾಜಕೀಯ ದಾಳಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಿರುವಾಗ 125ನೇ ಜಯಂತಿಯನ್ನು ವಸ್ತುಸ್ಥಿತಿಯ ತಳಪಾಯದಲ್ಲೇ ಕಟ್ಟಬೇಕಾದ ತುರ್ತಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ದಲಿತರ ಆರ್ಕೆಸ್ಟ್ರಾಗಳಿಂದ ಮತ್ತು ಆಳುವ ವರ್ಗದ ನೆಪಮಾತ್ರದ ಜಯಂತಿಗಳಿಂದ ಅಂಬೇಡ್ಕರ್ ಅವರನ್ನು ಹೊರತರಬೇಕಿದೆ. ಬಹುಶಃ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಈ ಮಣ್ಣಿನ ಮೂಲನೆಲೆಗೆ ಅನುಗುಣವಾಗಿ ಅಂಬೇಡ್ಕರ್ ಚಿಂತನೆ ಸಾಗಿದೆ. ಈ ಚಿಂತನೆಯ ಸಾರವನ್ನು ಗ್ರಹಿಸುವ ಯುವಪಡೆಯನ್ನು ಇಂದು ರೂಪಿಸಬೇಕಿದೆ.
ಇದಾಗಬೇಕಾದರೆ ಒಂದನೇ ತರಗತಿಯಿಂದಲೇ ಪಠ್ಯದ ಮೂಲಕ ಪರಿಚಯಿಸುವ ಅನಿವಾರ್ಯ ಇದೆ. ಕನಿಷ್ಠ ಇದನ್ನಾದರೂ ಆಳುವ ವರ್ಗ ದಿಟ್ಟವಾಗಿ ನಿರ್ಧರಿಸಬೇಕು. ಆದರೆ ಆಳುವ ವರ್ಗ ‘ಅಂಬೇಡ್ಕರ್ ಅವರು ಅಸ್ಪೃಶ್ಯತೆಯಿಂದ ನೊಂದು ಬೆಂದರು’ ಎಂದು ಹೇಳುವುದರಲ್ಲೇ ಪಠ್ಯ ರೂಪಿಸುತ್ತಾ ಬಂದಿದೆ. ಇದು ಬದಲಾಗಲೇಬೇಕು.
ಇದರ ಜೊತೆಗೆ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸುವ ಚಿಂತನೆ ಇಂದು ಹೆಚ್ಚೇ ನಡೆಯುತ್ತಿದೆ. ಇನ್ನು ಕೆಲವರಲ್ಲಿ ಅರುಣ್ ಶೌರಿಯಂತಹವರು ಅಂಬೇಡ್ಕರ್ ಅವರ ಬಗ್ಗೆ ಇಲ್ಲಸಲ್ಲದ್ದನ್ನು ಚರ್ಚಿಸುತ್ತಲೇ ಜನರನ್ನು ದಿಕ್ಕು ತಪ್ಪಿಸುವ ಹಾದಿಗೆ ಎಳೆಯುತ್ತಿದ್ದಾರೆ. ಇಂತಹ ಗೊಂದಲಗಳಿಂದ ಹೊರಬಂದು ಅಂಬೇಡ್ಕರ್ ಅವರ ಸ್ವತಂತ್ರ ಚಿಂತನೆಗಳನ್ನು ಜನತೆಯ ಮುಂದೆ ತಂದಿಡಬೇಕಿದೆ.
ಇವತ್ತು ಎಲ್ಲಾ ವಲಯಗಳಿಂದ ಅಂಬೇಡ್ಕರ್ ಅವರು ಪ್ರಸ್ತುತವಾಗಿದ್ದರೂ ಉಳ್ಳವರ ಬುಡಕ್ಕೆ ಕೊಡಲಿ ಕಾವಾಗುವ ಕಾರಣ ಅವರ ಚಿಂತನೆಗಳನ್ನು ಗೌಣವಾಗಿಸುತ್ತಲೇ ಬರಲಾಗುತ್ತಿದೆ. ಇದು ಈ ದೇಶದ ಏಕತೆಯ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ.
ಈ ನಿಟ್ಟಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕಿದೆ. ಅವರ ವಿಚಾರಧಾರೆಯನ್ನು ಮನಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಪ್ರಭುತ್ವ ಮತ್ತು ಅಲ್ಪಸಂಖ್ಯಾತರನ್ನು ಕುರಿತ ಅಂಬೇಡ್ಕರ್ ಬರಹಗಳು, ಭೂಮಿ ರಾಷ್ಟ್ರೀಕರಣದ ಪ್ರಶ್ನೆ ಹಾಗೂ ರೈತರ ಸರಣಿ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಅವರು ಅಂದೇ ಸೂಚಿಸಿದ ಪರಿಹಾರ.
ಸರ್ಕಾರ ರೈತರ ಪರ ವಿಮೆ ಮಾಡಿಸಬೇಕೆನ್ನುವ ಅವರ ನಿರ್ಧಾರ, ಕೃಷಿಯನ್ನು ಸರ್ಕಾರಿ ಉದ್ದಿಮೆಯನ್ನಾಗಿ ಪರಿಗಣಿಸಿ ಗೇಣಿ ರೂಪದಲ್ಲಿ ಕೃಷಿಗೆ ನೀಡಿ ಸಲಕರಣೆಗಳನ್ನು ಸರ್ಕಾರವೇ ಒದಗಿಸಬೇಕೆನ್ನುವುದರ ಹಿಂದಿನ ಕಾಳಜಿ, ಎಲ್ಲ ಅಸಮಾನತೆಗಳ ಮೂಲವಾಗಿರುವ ಜಾತಿಯ ಬುಡಕ್ಕೆ ಬೆಂಕಿ ಇಡಬೇಕೆನ್ನುವ ಅವರ ಖಚಿತ ನಿಲುವು, ಸಂಪತ್ತಿನ ಅಸಮಾನ ಹಂಚಿಕೆಯಿಂದ ಉಂಟಾಗುವ ಭೀಕರ ಪರಿಣಾಮ,
ರಾಜಕೀಯ ಅಧಿಕಾರದಲ್ಲಿ ಮೇಲುಗೈ ಸಾಧಿಸುತ್ತಿರುವ ಬಂಡವಾಳಶಾಹಿ ಮತ್ತು ಜಾತಿ ಕುರಿತ ಅವರ ನಿಲುವುಗಳು, ಸತತ ಸಂಶೋಧನೆಯ ಫಲವಾಗಿ ಹಿಂದೂ ಧರ್ಮದಿಂದ ಬೇಸತ್ತು ಬುದ್ಧ ಧಮ್ಮದೆಡೆಗಿನ ಅವರ ಖಚಿತ ಪಯಣದ ಹಿಂದಿನ ನೋವು, ಕಾಶ್ಮೀರಿ ಸಮಸ್ಯೆಗೆ ಪರಿಹಾರ ಇವೆಲ್ಲವುಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರನ್ನು ಮತ್ತೊಮ್ಮೆ ವಸ್ತುನಿಷ್ಠವಾಗಿ ಪರಿಚಯಿಸಬೇಕು.
ಆ ಮೂಲಕ ಇಂದಿನ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆಯನ್ನು ಹೆಚ್ಚು ಸನಿಹಗೊಳಿಸಬೇಕು.  ಇದು ಇಂದು ನಾವು ಬಹುಮುಖ್ಯವಾಗಿ ಇಡಬೇಕಾದ ಹೆಜ್ಜೆ. ಈ ಚಿಂತನೆಗಳನ್ನು ಜನತೆಯ ಬರೀ ಮೆದುಳಿಗಲ್ಲದೆ ಹೃದಯಕ್ಕೆ ತಲುಪಿಸುತ್ತೇವೆಂಬ ಪ್ರತಿಜ್ಞೆಯನ್ನೂ ಇಂದೇ ಕೈಗೊಳ್ಳಬೇಕಿದೆ.