ಗುರುವಾರ, ಜೂನ್ 23, 2016

ಸಿದ್ದರಾಮಯ್ಯ‘ಮರುಹುಟ್ಟು’ಪಡೆಯಲಿ-ದೇವನೂರು


angala

ಸಿದ್ದರಾಮಯ್ಯ‘ಮರುಹುಟ್ಟು’ಪಡೆಯಲಿ-ದೇವನೂರ ಮಹಾದೇವ

-ಕನ್ನಡಪ್ರಭ ಸಂದರ್ಶನ

ಸಂದರ್ಶನ- ಪಿ. ಓಂಕಾರ್, ಮೈಸೂರು 

*ಅಧಿಕಾರದ ಗೋಜಲಿಗೆ ಬೀಳದೆ ಇಂದೇ ಕೊನೆಯ ದಿನವೆಂದು ಕೆಲಸ ಮಾಡಿ:ದೇಮ ಸಲಹೆ

ಮೂರು ವರ್ಷ ಪೂರೈಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಮರ್ಥಕರು ‘ಉತ್ತಮ ಆಡಳಿತ’ಎಂದರೆ, ಟೀಕಾಕಾರರು ಕೆಟ್ಟ ಆಡಳಿತಕ್ಕೆ ನಿದರ್ಶನಗಳನ್ನು ನೀಡಿದ್ದಾರೆ. ನೀತಿ-ನಿರ್ಧಾರ-ನಿಲುವುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದವರು ಅನೇಕ. ಸಿದ್ದರಾಮಯ್ಯಬಗ್ಗೆ ತಮ್ಮ ಎಂದಿನ ವಿಶ್ವಾಸವನ್ನು ಉಳಿಸಿಕೊಂಡೆ, ಅವರು ವಹಿಸಬೇಕಾದ ಮುನ್ನೆಚ್ಚರಗಳನ್ನು ಗುರುತಿಸಿದ್ದಾರೆ ಸ್ನೇಹಿತರೂ ಆದ ಸಾಹಿತಿ ದೇವನೂರ ಮಹಾದೇವ.‘‘ಸಿದ್ದರಾಮಯ್ಯ ವರ್ಚಸ್ಸು ಮಸುಕಾಗುತ್ತಿದೆ.ಈ ಕ್ಷಣದಲ್ಲೆ ಅವರು ಮರುಹುಟ್ಟು ಪಡೆಯಬೇಕು.ಇದು ಅಧಿಕಾರದ ಕೊನೆಯ ದಿನ ಎಂದುಕೊಂಡೆ ನೆನಪಿನಲ್ಲುಳಿಯುವಂತ ಕೆಲಸ ಮಾಡಬೇಕು’’ಎಂದು ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆಶಿಸಿದ್ದಾರೆ.


*ಸಿದ್ದರಾಮಯ್ಯಆಡಳಿತದ ಬಗ್ಗೆ ಆರಂಭದಲ್ಲಿ ದೊಡ್ಡ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಮೂರು ವರ್ಷ ಪೂರೈಸಿದ್ದಾರೆ. ಈಗೇನನ್ನಿಸುತ್ತೆ?
-ಅಧಿಕಾರ ವಹಿಸಿಕೊಂಡ ಮೊದಲ ದಿನವೇ ದೊಡ್ಡ ಭರವಸೆಯನ್ನು ನಾಡಿಗೆ ಕೊಟ್ಟರು ಮತ್ತು ಮುಖ್ಯಮಂತ್ರಿಯಾಗಿ ಯಾವ ದಿಕ್ಕಿನಲ್ಲಿ ನಡೆಯುತ್ತೇನೆ ಎನ್ನುವ ಸೂಚನೆಯನ್ನೂ ನೀಡಿದರು. ಆರಂಭದ ಎರಡೂವರೆ ವರ್ಷದವರೆಗೂ ಈ ದಿಕ್ಕಿನಲ್ಲೇ ಅವರ ಚಲನೆ ಇತ್ತು. ತದನಂತರ ಯಾಕೋ ಆ ವರ್ಚಸ್ಸು ಮಸುಕಾಗುತ್ತಿದೆ ಎನ್ನಿಸುತ್ತಿದೆ. ಆ ಕಾರಣಕ್ಕಾಗಿ ಅವರು ಈ ಕ್ಷಣದಲ್ಲೇ ಮರು ಹುಟ್ಟು ಪಡೆಯಬೇಕಾಗುತ್ತದೆ. ಅವರೊಳಗೆ ಸತ್ವ ಇರುವುದರಿಂದ ಇದು ಸಾಧ್ಯ ಆಗಲಿ ಎಂದು ಆಸೆ ಪಡುತ್ತೇನೆ.

* ಮರು ಹುಟ್ಟು ಅಂದರೆ ಹೇಗೆ?
– ಹೇಗೋ ಅಧಿಕಾರಾವಧಿಯನ್ನು ಪೂರ್ಣ ಮಾಡಬೇಕು ಅಂತ ಆ ಗೋಜಲಿಗೆ ಸಿಕ್ಕಿ ಹಾಕಿಕೊಂಡರೆ, ಅದು ದಿನೇ ದಿನೇ ದುರ್ಬಲಗೊಳಿಸುತ್ತಾ ಹೋಗುತ್ತದೆ ಮತ್ತು ಈ ಉಸಾಬರಿಯಲ್ಲೇ ಸುಸ್ತಾಗಬೇಕಾಗುತ್ತದೆ. ಬದಲಾಗಿ, ಇವತ್ತೆ ನನ್ನ ಅಧಿಕಾರದ ಕೊನೆಯ ದಿನ ಅಂತ ನಿರ್ಧರಿಸಿಕೊಂಡು ಕೆಲಸ ಮಾಡಿದರೆ- ಸಿದ್ದರಾಮಯ್ಯ ಮೂಲತಃ ಸಮಾಜ ಮುಖಿಯಾದ್ದರಿಂದ-ನೆನಪಿನಲ್ಲಿ ಉಳಿಯುವಂತ ಸಾಧನೆ ಅವರದಾಗಬಹುದು.

* ಮೂರು ವರ್ಷ ಪೂರೈಸಿದ್ದಾರಷ್ಟೆ ಎಂದು ಒಂದು ಕಡೆ ಹೇಳಿದ್ದೀರಿ?
-ಅದು ಹಾಗಲ್ಲ. ಕೇಳಿಸಿಕೊಂಡ ಪತ್ರಕರ್ತನ ಗ್ರಹಿಕೆಯ ಸಮಸ್ಯೆಯಿಂದ ಈ ಅರ್ಥ ಹೊಮ್ಮಿದೆ. ಮೂರು ವರ್ಷದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಅವರ ವೈರಿಗಳೂ ಹೇಳಲಾರರು.

* ಸಿದ್ದರಾಮಯ್ಯಅವರನ್ನು ಸುತ್ತಲಿದ್ದವರು ದಿಕ್ಕು ತಪ್ಪಿಸಿದರು ಎಂಬ ಆರೋಪವಿದೆ. ಇನ್ನಾದರೂ ಹೇಗೆ ಎಚ್ಚರ ವಹಿಸಬೇಕೆನ್ನುತ್ತೀರಿ?
– ಅವರಿಗೆ ದಿನದಲ್ಲಿ ಒಂದು ಗಂಟೆಯಾದರೂ ಏಕಾಂತ ಅಗತ್ಯ ಇದೆ ಅನ್ನಿಸುತ್ತೆ. ತನ್ನ ಸುತ್ತಮುತ್ತ ವಿಮರ್ಶೆ ಮಾಡುವವರು ಇದ್ದರೆ ಮಾತ್ರ ಅದರಲ್ಲಿ ತನ್ನ ಹಿತ ಮತ್ತು ಮುಖ್ಯಮಂತ್ರಿಯಾಗಿ ನಾಡಿನ ಹಿತ  ಅಡಗಿರುತ್ತದೆ ಎನ್ನುವ ಅರಿವನ್ನು ಪಡೆದುಕೊಳ್ಳುವ ಅಗತ್ಯ ತುರ್ತಾಗಿದೆ.

*ದೇವರಾಜ ಅರಸು ನಂತರ ಸಿದ್ದರಾಮಯ್ಯ ಎನ್ನುವ ಮಾತಿದೆ. ಈ ಹೊತ್ತಿನಲ್ಲಿ ನಿಜ ಎನ್ನಿಸುತ್ತಾ?
– ಮೊದಲೇ ಹೇಳಿದಂತೆ,ಸಿದ್ದರಾಮಯ್ಯಅವರಿಗೆ ಆ ಸತ್ವ ಇದೆ. ಆದರೆ,ಅವರೊಳಗಿನ ಅಳಕು ಅದಾಗಲು ಬಿಡುತ್ತಿಲ್ಲ. ಉದಾಹರಣೆಗೆ, ಅರಸು ಅವರ ಕ್ಯಾಬಿನೆಟ್‌ನಲ್ಲಿದ್ದ ಘಟಾನುಘಟಿ ಸಚಿವರನ್ನು ನೆನಪು ಮಾಡಿಕೊಳ್ಳಿ. ಎನ್.ರಾಚಯ್ಯ, ಬಿ.ಬಸವಲಿಂಗಪ್ಪ, ಸಿದ್ದವೀರಪ್ಪ, ಕೆ.ಎಚ್.ಪಾಟೀಲ್, ಎಲ್.ಜಿ.ಹಾವನೂರ್,ಕೆ.ಎಚ್.ರಂಗನಾಥ್. ಅರಸು ಅವರಿಗೆ ಸಮಬಲರು; ಪ್ರತಿಸ್ಪರ್ಧಿಗಳಾಗುವಂತಿದ್ದವರೆಲ್ಲ ಸಂಪುಟದಲ್ಲಿದ್ದರು. ಪರ್ಯಾಯ ಶಕ್ತಿ ಕೇಂದ್ರ ಆಗಬಹುದಾದ ವ್ಯಕ್ತಿತ್ವ ಹೊಂದಿದ್ದ ಇವರನ್ನೆಲ್ಲ ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ಅರಸು ಅವರಿಗೆ ಅಧೈರ್ಯ ಇರಲಿಲ್ಲ. ಇದರಿಂದ,ಮುಖ್ಯಮಂತ್ರಿಯ ಸಾಮರ್ಥ್ಯ ವೃದ್ಧಿಸಿತು.ಜೊತೆಗೆ, ಎಲ್ಲರೂ ಸಮರ್ಥರಿದ್ದುದರಿಂದ ಅವರವರ ಕೆಲಸ ಕಾರ್ಯಗಳು ಪ್ರಭಾವಶಾಲಿಯಾಗಿದ್ದವು. ಹೀಗಿದ್ದಾಗ, ಒಟ್ಟಾರೆ ನಾಡಿನ ಹಿತದ ಕೆಲಸ ಕಾರ್ಯಗಳು ತಮ್ಮಷ್ಟಕ್ಕೆ ಚೆನ್ನಾಗಿ ನಡೆದುಕೊಂಡು ಹೋಗುತ್ತವೆ. ಅರಸು ಅವರ ಈ ಧೈರ್ಯವನ್ನು ಸಿದ್ದರಾಮಯ್ಯ ತಮ್ಮ ಮೊದಲ ಸಂಪುಟ ರಚನೆ ಸಂದರ್ಭವೇ ತೋರಿಸಿದ್ದರೆ ಇವತ್ತು ಅರಸು ಅವರನ್ನೇ ಮೀರಿಸುತ್ತಿದ್ದರೇನೋ.

* ಸಿದ್ದರಾಮಯ್ಯಅವರನ್ನು ಅಹಿಂದ ನಾಯಕ ಎನ್ನಲಾಗುತ್ತೆ. ಅಹಿಂದ ಪರವಾಗೇನಿಲ್ಲ ಎನ್ನುವವರೂ ಇದ್ದಾರೆ?
– ಅವರೊಳಗೆ ಅಹಿಂದ ಭಾವನೆ ಇದ್ದರೂ,‘ಅಹಿಂದ’ದೊಳಗಿನ ಬಹುಸಂಖ್ಯಾತ ಸಮುದಾಯ ಸುತ್ತುವರಿದು,ಅವರನ್ನು ಅಹಿಂದ ನಾಯಕನನ್ನಾಗಲು ಬಿಡುವುದಿಲ್ಲ. ಅಹಿಂದ ಸಮುದಾಯದಲ್ಲೆ ಸಂಖ್ಯಾ ಬಲದಲ್ಲಿ ಕಡಿಮೆಯಿರುವ ಸಮುದಾಯದಿಂದ ಬಂದ ಅರಸು, ಬಂಗಾರಪ್ಪ ಅವರನ್ನು ಸುತ್ತುವರಿದವರಲ್ಲಿ ಅವರ ಜಾತಿಯವರ ಸಂಖ್ಯೆ ಎದ್ದು ಕಾಣುವಂತಿರಲಿಲ್ಲವಾದ್ದರಿಂದ ಅವರು ಅಹಿಂದ ನಾಯಕರಾದರು ಮತ್ತು ಆ ಸಮುದಾಯಕ್ಕೆ ಎಷ್ಟೋ ಕೆಲಸ ಮಾಡಿದರು. ಇನ್ನೊಂದು ಗಮನಿಸಬೇಕಾದ ಸಂಗತಿ. ಅಹಿಂದ ನಾಯಕತ್ವವನ್ನುನಿರ್ಧರಿಸುವುದು ಮತ್ತು ಅಭಿಪ್ರಾಯ ರೂಪಿಸುವುದು ಆ ಸಮುದಾಯದ ನೌಕರಶಾಹಿ. ಸಂಖ್ಯಾಬಲದಲ್ಲಿ ಹೆಚ್ಚಿರುವ ಸಮುದಾಯದಿಂದ ಬಂದರೂ ಅಹಿಂದ ನಾಯಕನಾಗಬೇಕೆಂದರೆ, ಆತ ಉಳಿದ ಅಹಿಂದ ನೌಕರಶಾಹಿಯನ್ನು ತೃಪ್ತಿಪಡಿಸಬೇಕಾಗುತ್ತೆ. ಇದರೊಳಗಿನ ತೊಡಕನ್ನು ನಾವು ಅರ್ಥಮಾಡಿಕೊಳ್ಳಬೇಕು.

* ಈ ಗಳಿಗೆಯಲ್ಲಿ ಸಿದ್ದರಾಮಯ್ಯ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕೆನ್ನುತ್ತೀರಿ?
– ಕುಡಿಯುವ ನೀರು,ಉಸಿರಾಡ್ತಿರೋ ಗಾಳಿ ಎಲ್ಲ ವಿಷವಾಗಿದೆ. ಎಷ್ಟೋ ಕಡೆ ಕುಡಿಯಲು ನೀರೇ ಇಲ್ಲ. ಇಂಥ ಸಂದರ್ಭದಲ್ಲಿ ನಾವು ತಿಂಗಳು ತಿಂಗಳು ಎಷ್ಟೆಷ್ಟೋ ಮಹಾತ್ಮರ ದಿನಾಚರಣೆ ಅಂತ ಮಾಡ್ತಿದ್ದೇವೆ. ಇದಕ್ಕೆಲ್ಲ ರಜಾ ನೀಡುತ್ತಿರುವುದರಿಂದ ಅವೆಲ್ಲ ‘ಮಜಾತ್ಮರ’ ದಿನಾಚರಣೆ ಆಗ್ತಿವೆ. ಇದಕ್ಕೆ ಬದಲು,ಮಹಾತ್ಮರ ದಿನಾಚರಣೆಗಳಲ್ಲಿ ಅವರ ಹೆಸರಿನಲ್ಲಿ ಒಂದು ದಿನ ಹೆಚ್ಚು ಕೆಲಸ ಮಾಡುವಂತಾಗಬೇಕು. ಇದು ನಿಜವಾದ ನೆನಪಿಸಿಕೊಳ್ಳುವಿಕೆ. ಅದೆಲ್ಲ ಕಷ್ಟ ಎನ್ನುವುದಾದರೆ, ಮಹಾತ್ಮರ ಹೆಸರಿನಲ್ಲಿ ಮರಗಿಡಗಳನ್ನು ನೆಡುವ, ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೊನೆಯ ಪಕ್ಷ, ಇದು ಬಸವಣ್ಣನ ಮರ, ಅಂಬೇಡ್ಕರ್ ವೃಕ್ಷ, ಕನಕದಾಸರ ಮರ, ಭಗೀರಥ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮ ಅಂತ ಮಹಾತ್ಮರು ನೆನಪಾದರೆ ಎಷ್ಟೊಂದು ಅರ್ಥಪೂರ್ಣವಲ್ಲವೇ? ಇನ್ನೊಂದು ಮುಖ್ಯ ಸಂಗತಿ.ನಮ್ಮ ಮಕ್ಕಳಿಗೆ ನಾವು ತಾರತಮ್ಯದ,ಪಂಕ್ತಿಬೇಧ ಶಿಕ್ಷಣವನ್ನು ನೀಡುತ್ತಿದ್ದೇವೆ. ನಾಳೆ ಆ ಮಕ್ಕಳು ದೊಡ್ಡವರಾದ ಮೇಲೆ ತಾರತಮ್ಯವನ್ನೇ ವೌಲ್ಯ ಮಾಡಿಕೊಂಡರೆ ಅವರದ್ದೇನು ತಪ್ಪಿದೆ ಅದರಲ್ಲಿ? ಆದ್ದರಿಂದ, ಕನಿಷ್ಠ ಪ್ರಾಥಮಿಕ ಶಿಕ್ಷಣದಲ್ಲಾದರೂ ‘ಸಮಾನ ಶಿಕ್ಷಣ ’ಪದ್ಧತಿಯನ್ನು ಅನುಷ್ಠಾನಗೊಳಿಸುವ ವಿವೇಕ,ವಿವೇಚನೆ ಮತ್ತು ಧೈರ್ಯವನ್ನು ಸಿದ್ದರಾಮಯ್ಯ ಅವರು ಪ್ರದರ್ಶಿಸಬೇಕು.

ಮಂಗಳವಾರ, ಜೂನ್ 21, 2016

ಇಂಗ್ಲಿಷ್ ಮತ್ತು ಜನನುಡಿಗಳ ಸೆಣಸಾಟದ ಕಥನಗಳು

-ರಂಗನಾಥ ಕಂಟನಕುಂಟೆ


“ನಿನ್ನ ಕಣ್ಣೀರು ನನ್ನ ಕಣ್ಣೀರು
ಕಣ್ಣೀರ ಹಿಂದಿನ ಕಥೆಯೂ ಒಂದೇ
ಒಂಟಿಯಾಗಿ ಕಣ್ಣೀರಿಡುವ
ನನ್ನ ಚಿಕ್ಕ ತಂಗ್ಯಮ್ಮ”
tenkananudi

ಎಂಬ ಮಹಿಳಾ ಹೋರಾಟದ ಹಾಡಿದೆ. ಇದು ಒಂದು ಹೆಣ್ಣು ಮತ್ತೊಂದು ಹೆಣ್ಣಿಗೆ ಸಮಾಧಾನ ಹೇಳುವ ದಾಟಿಯಲ್ಲಿದೆ. ಇಲ್ಲಿ ಸಾಂತ್ವನ ಹೇಳುವ ಮತ್ತು ಕೇಳಿಸಿಕೊಳ್ಳುವ ಇಬ್ಬರೂ ಹೆಣ್ಣುಗಳು ಒಂದೇ ಬಗೆಯ ಕಾರಣಗಳಿಂದ ನೋವಿಗೆ ಒಳಗಾಗಿರುವ ಇಂಗಿತವಿದೆ. ಇಬ್ಬರ ನೋವಿನ ನೆಲೆ ಸ್ಥಾಯಿಯಾಗಿದ್ದು ಸಮಾನವಾಗಿರುವುದು ತಿಳಿಯುತ್ತದೆ. ಹೆಣ್ಣಿನ ನೋವಿನ ಈ ನೆಲೆ ನಮ್ಮ ದೇಶದ, ಇಡೀ ಜಗತ್ತಿನ ಎಲ್ಲ ದೇಶಗಳ ಮಹಿಳೆಯರ ಸಂಕಟದ ನೆಲೆಯು ಒಂದೇ ಆಗಿದೆ. ಇದರಲ್ಲಿ ಕೊಂಚ ಏರುಪೇರಿದ್ದರೂ ಒಟ್ಟಾರೆ ಮಹಿಳೆಯರ ನೋವಿನ, ಅವರ ಮೇಲಿನ ಹಿಂಸೆಯ ನೆಲೆಗಳು ಒಂದೇ ಆಗಿರುವುದನ್ನು ಮೇಲಿನ ಹಾಡು ತಿಳಿಸುತ್ತದೆ.

ಇದು ಮಹಿಳೆಯರ ವಿಚಾರದಲ್ಲಿ ಎಷ್ಟು ನಿಜವೋ ಭಾರತೀಯ ಮತ್ತು ಆಫ್ರಿಕಾದ ಜನಭಾಷೆಗಳ ವಿಚಾರದಲ್ಲಿಯೂ ಅಷ್ಟೇ ನಿಜ. ‘ಹೆಣ್ಣಿನ ಕಣ್ಣೀರಿನ ಹಿಂದಿನ ಕಾರಣಗಳ ಕಥೆ’ ಒಂದೇ ಆಗಿರುವಂತೆ, ಇಂಗ್ಲಿಷ್ ಎದುರು ಸೆಣಸಾಡುತ್ತಿರುವ ಎಲ್ಲ ಜನಭಾಷೆಗಳ ಕಣ್ಣೀರಿನ ಕಥೆಯೂ ಒಂದೇ ಆಗಿದೆ. ಹಾಗೆ ಒಂದೇ ಆಗಿರುವುದನ್ನು ಇದುವರೆಗೆ ನಡೆದಿರುವ ಹಲವು ಅಧ್ಯಯನಗಳೂ ತೋರಿಸಿಕೊಟ್ಟಿವೆ. ಅಂತಹ ಅಧ್ಯಯನಗಳ ಕುರುಹಾಗಿ ಡಾ. ಮೇಟಿ ಮಲ್ಲಿಕಾರ್ಜುನ ಸಂಪಾದಿಸಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಹೊರತಂದಿರುವ ‘ತೆಂಕಣದ ನುಡಿಗಳು ಮತ್ತು ಇಂಗ್ಲಿಷ್’ ಎಂಬ ಕೃತಿ ಈಚೆಗೆ ಪ್ರಕಟವಾಗಿದೆ.

ಇದು ತೆಂಕಣ ಭಾರತದ ನುಡಿಗಳನ್ನು ಒಳಗೊಂಡಂತೆ ಇಡೀ ಭಾರತದ ಎಲ್ಲ ನುಡಿಗಳು ಇಂಗ್ಲಿಷ್ ಎದುರು ನರಳುವ ಕಥೆಯನ್ನೇ ತೆರೆದಿಡುತ್ತಿದೆ. ಮಹಿಳೆಯರ ಸಂಕಟಗಳಂತೆ ಭಾರತದ ಜನಭಾಷೆಗಳ ಸಂಕಟದ ಕಥೆಯೂ ಒಂದೇ ಆಗಿರುವುದನ್ನೂ ಇಲ್ಲಿ ನಿರೂಪಿತವಾಗಿದೆ. ಹೆಣ್ಣು, ಹೆಣ್ಣಿನ ನುಡಿಯು ತುಳಿತಕ್ಕೆ ಒಳಗಾದಂತೆ ಜನಸಮುದಾಯಗಳ ನುಡಿಗಳು ತುಳಿತಕ್ಕೆ ಒಳಗಾಗಿರುವುದನ್ನು ಈ ಕ್ರುತಿ ತೋರಿಸಿಕೊಟ್ಟಿದೆ.

  ಈ ಕ್ರುತಿಯು ತೆಂಕಣ ಭಾರತದ ನುಡಿಗಳು ಇಂಗ್ಲಿಷ್‍ನ ಪ್ರಾಬಲ್ಯದಿಂದ ಎದುರಿಸುತ್ತ್ತಿರುವ ಬೇರೆ ಬೇರೆ ಸವಾಲುಗಳನ್ನು ಚಾರಿತ್ರಿಕವಾಗಿ ಪರಿಶೀಲಿಸಿದೆ. ಮುಖ್ಯವಾಗಿ ಇಂಗ್ಲಿಷ್‍ನ ಎದುರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳು ಎದುರಿಸುತ್ತಿರುವ ಸವಾಲುಗಳನ್ನು ನಿರೂಪಿಸುವ ಕೆಲಸ ಮಾಡಿದೆ. ಇಂಗ್ಲಿಷ್ ಎದುರು ದೇಸೀನುಡಿಗಳು ಸೊರಗಿರುವ, ಸೆಣೆಸಿರುವ ಮತ್ತು ಹೊಂದಾಣಿಕೆ ಮಾಡಿಕೊಂಡಿರುವ ಬಗೆಗಳನ್ನು ಗುರುತಿಸಿದೆ. ಕನ್ನಡದ ಆತಂಕಗಳ ಬಗೆಗೆ ಕೆ. ವಿ. ನಾರಾಯಣ, ಮೇಟಿ ಮಲ್ಲಿಕಾರ್ಜುನ, ಕಿರಣ್ ಕುಮಾರ್, ತಮಿಳಿನ ಬಗೆಗೆ ಖ್ಯಾತ ಭಾಷಾವಿಜ್ಞಾನಿಗಳಾದ ಇ. ಅಣ್ಣಾಮಲೈ, ಎಲ್. ರಾಮಮೂರ್ತಿ, ತುಳು ಬಗೆಗೆ ದುರ್ಗಾಪ್ರವೀಣ್, ತೆಲುಗು ಬಗೆಗೆ ಗಾರಪಾಟಿ ಉಮಾಮಹೇಶ್ವರ್ ರಾವ್, ಅಯಿನವೋಲು ಉಷಾದೇವಿ, ಮಲಯಾಳಂ ಬಗೆಗೆ ಎ. ಶ್ರೀಕುಮಾರ್ ಮತ್ತು ಎ. ಪಿ. ಆಂಡ್ರ್ಯೂಕುಟಿ ಲೇಖನಗಳನ್ನು ಬರೆದಿದ್ದಾರೆ. ತೆಂಕಣದ ಬೇರೆ ಬೇರೆ ಭಾಷೆಗಳಲ್ಲಿ ಬರೆದ ಲೇಖನಗಳನ್ನು ಅಚ್ಚುಕಟ್ಟಾಗಿ ಅನುವಾದಿಸಿ ಪ್ರಕಟಿಸಲಾಗಿದೆ.

ಈ ಕ್ರುತಿಗೆ ತೆಂಕಣ ಭಾರತದ ನುಡಿಗಳು ಇಂಗ್ಲಿಷ್‍ನ ಜೊತೆಗೆ ನಡೆಸಿರುವ ಸೆಣಸಾಟದ ನಂಟನ್ನು ಶೋಧಿಸುವ ಸಾಮಾನ್ಯ ಆಶಯವಿದೆ. ಅಂತಹ ಆಶಯವನ್ನು ಇಟ್ಟುಕೊಂಡೇ ವಸಾಹತುಶಾಹಿ ಭಾಷಾ ರಾಜಕಾರಣದ ಹಲವು ಮಗ್ಗುಲುಗಳನ್ನು ಗುರುತಿಸಿದೆ. ಇದರಿಂದ ಕಳೆದ ಇನ್ನೂರು ವರುಶಗಳಲ್ಲಿ ಭಾರತದಲ್ಲಿ ಇಂಗ್ಲಿಷ್ ನುಡಿಯಾಗಿ ಬೆಳೆದು ಬರದೆ ಅದು ವಸಾಹತುಶಾಹಿ ರಾಜಕಾರಣದ ಒಂದು ಆಯುಧವಾಗಿ ಬೆಳೆದು ಬಂದಿರುವುದು ತಿಳಿಯುತ್ತದೆ. ಈ ದೃಷ್ಟಿಯಿಂದ ನೋಡಿದರೆ ಭಾರತದ ಯಾವುದೇ ನುಡಿ ಎದುರಿಸುತ್ತಿರುವ ಸವಾಲನ್ನು ಕುರಿತು ಅಧ್ಯಯನ ನಡೆಸಿದರೆ ಸಾಕು; ಅದು ಇತರೆ ನುಡಿಗಳಿಗೂ ಸಮನಾಗಿ ಹೊಂದಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಭಾರತೀಯ ಭಾಷೆಗಳ ಸವಾಲುಗಳು ಸಮಸ್ಯೆಗಳು ಸಮನಾಗಿವೆ.

ಮೇಲೆ ಹೇಳಿದಂತೆ ಇಂಗ್ಲಿಷ್ ಕೇವಲ ಒಂದು ಭಾಷೆಯಲ್ಲ. ಅದು ವಸಾಹತುಶಾಹಿಗಳ ಒಂದು ಆಯುಧ. ಮತ್ತು ಅದು ಇಂದಿನ ಮಾರುಕಟ್ಟೆ ಕೇಂದ್ರಿತ ಜಾಗತೀಕರಣದ ಪ್ರಬಲ ಆಯುಧವಾಗಿ ಮತ್ತೂ ಮುಂದುವರೆದಿರುವುದು ತಿಳಿಯುತ್ತದೆ. ಇಂಗ್ಲಿಷ್ ಬಗೆಗೆ ಈಗಾಗಲೇ ಇದ್ದ ಈ ನಂಬಿಕೆಯನ್ನು ಇದು ಇದು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಂತಹ ಆಯುಧದ ದಾಳಿಯ ಪರಿಣಾಮವಾಗಿ ತೆಂಕಣ ಭಾರತದ ನುಡಿಗಳೂ ಇಂಗ್ಲಿಷ್ ಜೊತೆಗೆ ಸೆಣಸುತ್ತ ಸೊರಗುತ್ತ ಪರದಾಡುತ್ತಲೇ ಬೆಳೆದು ಬರುತ್ತಿರುವುದನ್ನು, ಇಂಗ್ಲಿಷ್‍ನ ಯಜಮಾನಿಕೆಯನ್ನು ದೃಢಪಡಿಸುತ್ತದೆ. ವಸಾಹತುಶಾಹಿ ಆಗಮಿಸಿ ಭಾರತವನ್ನು ಹಿಡಿತಕ್ಕೆ ತೆಗೆದುಕೊಂಡ ಆರಂಭದ ದಿನಗಳಲ್ಲಿ ವಿದೇಶಿ ವಿದ್ವಾಂಸರು ದೇಸೀನುಡಿಗಳ ಬೆಳವಣಿಗೆಗೆ ನೆರವಾಗಿದ್ದಾರೆ. ಇದು ವಸಾಹತುಶಾಹಿಯು ಸ್ಥಳೀಯ ಸಮುದಾಯಗಳನ್ನು ಅರಿತು ಅವುಗಳನ್ನು ನಿಯಂತ್ರಿಸುವ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಿರುವ ಸಂಗತಿಯನ್ನು ಇಲ್ಲಿನ ಲೇಖನಗಳು ತಿಳಿಸುತ್ತವೆ. ಇದು ವಿದೇಶಿ ವಿದ್ವಾಂಸರು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿರುವುದು ದಿಟವಾದರು ವಸಾಹತುಶಾಹಿ ಭಾಷಿಕ ರಾಜಕಾರಣ ಅದನ್ನು ಸಂಶಯಿಸುವಂತೆ ಮಾಡುತ್ತದೆ.

ಅಲ್ಲದೆ ಇಲ್ಲಿ ತಿಳಿಯುವ ಇನ್ನೊಂದು ವಿಚಾರವೆಂದರೆ ಜಾಗತೀಕರಣದ ಈ ದಿನಗಳಲ್ಲಿ ಲಾಭದಾಹಿ ಮಾರುಕಟ್ಟೆಯ ಪ್ರಾಬಲ್ಯವು ತನ್ನ ಸಂವಹನದ ಭಾಷೆಯಾದ ಇಂಗ್ಲಿಷ್‍ನ ಪ್ರಭಾವವನ್ನು ವ್ಯಾಪಕವಾಗಿ ಹೆಚ್ಚಿಸಿರುವುದು. ಇತರೆ ಅನುಭೋಗಿ ಸರಕುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ ಇಂಗ್ಲಿಷ್‍ಅನ್ನು ಒಂದು ಸರಕಾಗಿಸಿ ಅದರ ಬೇಡಿಕೆಯನ್ನು ಹೆಚ್ಚಿಸಿರುವುದು. ನೇರ ವಸಾಹತುಶಾಹಿಯ ಕಾಲದಲ್ಲಿ ಇಂಗ್ಲಿಷ್‍ಗೆ ಇದ್ದ ಬೇಡಿಕೆಗಿಂತ ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವುದು. ಅಂದು ಸಮುದಾಯದ ಕೆಲವರು ಇಂಗ್ಲಿಷ್ ಕಲಿಕೆಯ ಬಗೆಗೆ ಆಸಕ್ತಿ ತೋರಿಸುತ್ತಿದ್ದರೆ ಇಂದು ದೇಶದ ಬಹುಸಂಖ್ಯಾತ ಸಮಾಜವೇ ಇಂಗ್ಲಿಷ್ ಕಲಿಕೆಯ ಬೇಡಿಕೆಯನ್ನು ಮುಂದಿಡುತ್ತಿರುವುದು. ಇಎಲ್ ಟಿಯಂತಹ ಕೋರ್ಸುಗಳ ಮಾರಾಟ ವಹಿವಾಟು ಹಲವು ಬಿಲಿಯನ್‍ಗಳ ಮೊತ್ತವನ್ನು ದಾಟಿರುವುದು. ಇಂತಹ ಬೇಡಿಕೆಯನ್ನು ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಕಂಡುಬರುವುದನ್ನು ಕೃತಿಯು ತೆರೆದಿಟ್ಟಿದೆ. ಇದು ತೆಂಕಣ ನುಡಿಗಳು ಮತ್ತು ಇಂಗ್ಲಿಷ್ ಸಂಬಂಧವು ಒಂದೇ ಬಗೆಯಾಗಿರುವುದನ್ನು ಇಲ್ಲಿ ಗುರುತಿಸಲಾಗಿದೆ.

ಅಲ್ಲದೆ ಇದುವರೆಗೂ ಯಾವುದನ್ನು ಕನ್ನಡದ ಸಮಸ್ಯೆ ಮಾತ್ರವೆಂದು ಚರ್ಚಿಸಲಾಗುತ್ತಿತ್ತೋ ಅದನ್ನು ಈ ಕೃತಿಯು ಸುಳ್ಳಾಗಿಸುತ್ತದೆ. ಬದಲಿಗೆ ಕನ್ನಡದಂತೆಯೇ ತೆಂಕಣದ ನುಡಿಗಳು ಅದೇ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಿಳಿದು ಬರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ನುಡಿಗಳೂ ಒಂದೇ ಬಗೆಯ ಸಮಸ್ಯೆಯನ್ನು ಎದುರಿಸುತ್ತಿರುವುದು ಖಚಿತವಾಗುತ್ತದೆ. ಎಲ್ಲ ನುಡಿಗರಿಗೂ ಇಂಗ್ಲಿಷ್ ಲಾಭದ, ಸಾಮಾಜಿಕ ಮುಂಚಲನೆಯ ನುಡಿಯಾಗಿಯೇ ಕಾಣಿಸಿಕೊಂಡಿದ್ದು ಇಂಗ್ಲಿಷ್‍ನ ಬೇಡಿಕೆ ಹೆಚ್ಚಿರುವುದನ್ನು ತೋರಿಸಿಕೊಟ್ಟಿವೆ. ಜಾಗತಿಕ ಮಾರುಕಟ್ಟೆ ಹೇರಿರುವ ಒತ್ತಡವು ಕನ್ನಡದ ಮೇಲೆ ಮಾತ್ರವಲ್ಲದೆ ಎಲ್ಲ ನುಡಿಗಳ ಮೇಲೆ ಬಿದ್ದಿರುವುದು ತಿಳಿಯುತ್ತದೆ. ಮತ್ತು ಇದರಿಂದ ಬಿಡುಗಡೆಗೊಳ್ಳುವ ಸುಲಭದ ದಾರಿಗಳೂ ಇಲ್ಲದೆ ಪರದಾಡುತ್ತಿರುವುದು ನಿಚ್ಚಳವಾಗಿ ಕಂಡುಬರುತ್ತದೆ.

ಇದು ಎಲ್ಲ ಭಾರತೀಯ ಭಾಷೆಗಳ ವಿಚಾರದಲ್ಲಿಯೂ ದಿಟವಾಗಿದೆ. ಇದುವರೆಗೂ ತಮಿಳರ ತಮಿಳು ಅಭಿಮಾನದ ಮಿತ್ ಬಗೆಗೆ ಹೇರಳವಾಗಿ ಮಾತನಾಡಿದರೂ ಇಂದು ತಮಿಳು ಮಾಧ್ಯಮ ಶಾಲೆಗಳಿಗಿಂತ ಹೆಚ್ಚು ಇಂಗ್ಲಿಷ್ ಮಾಧ್ಯಮ ಶಾಲೆಗಳು ತಮಿಳುನಾಡಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವುದನ್ನು ತೋರಿಸಿಕೊಟ್ಟಿದೆ. ಜಾಗತೀಕರಣದ ಈ ದಿನಗಳಲ್ಲಿ ತಮಿಳರ `ತಮಿಳು ಅಭಿಮಾನ’ವು ಕುಸಿಯುತ್ತಿರುವುದು ಇದರಿಂದ ತಿಳಿಯುತ್ತದೆ. ಇದು ನುಡಿ ಮತ್ತು ರಾಷ್ಟ್ರೀಯತೆಯ ಚಿಂತನೆಗಳು ಸಿಡಿದುಹೋಗಲು ಕಾರಣವಾಗಿರುವುದನ್ನು ಸೂಚ್ಯವಾಗಿ ತಿಳಿಸುತ್ತವೆ.

   ಸಮುದಾಯಗಳಿಗೆ ಇದ್ದ ನುಡಿಯ ಮೇಲಿನ ಅಭಿಮಾನವು ಕುಸಿದು ಇಂಗ್ಲಿಷ್ ಕಲಿಕೆ ಬಗೆಗೆ ವಿಪರೀತ ಬೇಡಿಕೆ ಹುಟ್ಟಿಕೊಂಡಿದೆ. ಈ ಹೊತ್ತಿನಲ್ಲಿ ಅದನ್ನು ಇತರೆ ಸರಕುಗಳಂತೆಯೇ ಖರೀದಿಸದಿದ್ದರೆ ವ್ಯಕ್ತಿ ಮತ್ತು ಸಮಾಜ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಿಲ್ಲ; ಇಂಗ್ಲಿಷ್ ಕಲಿಯದಿರುವುದು ಎಲ್ಲ ಬಗೆಯ ಹಿಂದುಳಿವಿಕೆ ಕಾರಣವಾಗುತ್ತದೆ ಎಂಬ ಭೀತಿ ಎಲ್ಲ ಸಮಾಜದಲ್ಲಿರುವುದನ್ನು ಇದು ತೋರಿಸಿಕೊಡುತ್ತದೆ. ಇಂತಹ ಭೀತಿಯ ಪರಿಣಾಮವಾಗಿ ನೂರು, ಸಾವಿರ, ಹತ್ತು ಸಾವಿರ ಜನರು ಮಾತನಾಡುವ ನುಡಿಗಳಿಂದ ಹಿಡಿದು ಹಲವು ಕೋಟಿ ಜನರು ಮಾತನಾಡುವ ಕನ್ನಡ, ತಮಿಳು, ತೆಲುಗು, ಬಂಗಾಳಿ, ಸ್ವಾಹಿಲಿ, ಗೀಕೂಯುನಂತಹ ಭಾಷೆಗಳನ್ನು ಬಳಸುವ ನುಡಿಸಮುದಾಯಗಳು ತೀವ್ರವಾದ ಆತಂಕವನ್ನು ಎದುರಿಸುವಂತಾಗಿದೆ. ತಮ್ಮ ಭಾಷೆಗಳು ಮುಂದಿನ ದಿನಗಳಲ್ಲಿ ನಶಿಸಿಹೋಗಬಹುದು ಎಂದು ಒಂದು ವರ್ಗ ಆತಂಕಿತಗೊಳ್ಳುವಷ್ಟರ ಮಟ್ಟಿಗೆ ತೀವ್ರವಾಗಿದೆ. ಮೇಲಿನ ಹಾಡಿನ ಆಶಯದಂತೆ ಭಾರತದಲ್ಲಿ, ಆಫ್ರಿಕಾದಲ್ಲಿ ಎಲ್ಲ ಜನನುಡಿಗಳ ಆತಂಕಗಳು; ಹೆಣ್ಣಿನ ನೋವಿನ ಸಮಾನ ಕಾರಣಗಳಂತೆಯೇ ಇರುವುದು ಇಲ್ಲಿ ತಿಳಿಯುತ್ತದೆ.

ಇದಲ್ಲದೆ ಕ್ರುತಿಯು ಇಂಗ್ಲಿಷ್‍ನ ವರ್ಗಸ್ವಭಾವ, ಇಂಗ್ಲಿಷ್ ಭಾಷಾಬೋಧನೆಯಲ್ಲಿರುವ ದೋಷಗಳು, ಇಂಗ್ಲಿಷ್‍ಅನ್ನು ಕಲಿಸಲು ತಾಯ್ನುಡಿಗಳ ಅಗತ್ಯ ನೆರವು. ಎಲ್ಲರಿಗೂ ಇಂಗ್ಲಿಷ್‍ಅನ್ನು ಕಲಿಸಲು ಬೇಕಾದ ಸಂಪನ್ಮೂಲವೇ ದೇಶದಲ್ಲಿ ಇಲ್ಲದಿರುವುದು, ತರಗತಿಗಳಲ್ಲಿ ದ್ವಿಭಾಷಾ ಬೋಧನಾ ವಿಧಾನದ ಅಳವಡಿಕೆ ಅಗತ್ಯ. ಇಂಗ್ಗಿಷ್‍ನ ಭಾರತೀಕರಣದ ಚರ್ಚೆಗಳ ಮುಖಾಮುಖಿ ಹೀಗೆ ಹಲವು ಸಂಗತಿಗಳ ಸುತ್ತ ಚರ್ಚೆಯನ್ನು ಬೆಳೆಸಿವೆ. ಒಟ್ಟಾರೆ ಜನಭಾಷೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಡುವುದರಿಂದ ಈ ಬಗೆಗೆ ತಿಳಿಯಲು ಬಯಸುವವರಿಗೆ ಅಗತ್ಯ ನೆರವು ನೀಡುವ ಕೃತಿಯಿದು. ಹಾಗಾಗಿ ನುಡಿಯ ಬಗೆಗೆ ಆಸಕ್ತಿಯುಳ್ಳವರಿಗೆ ಉಪಯುಕ್ತ ಹೊತ್ತಗೆಯಿದು.

ಕೊನೆಗೆ ಒಂದು ಮಾತು. ಒಟ್ಟಾರೆ ಕೃತಿಯನ್ನು ಅವಲೋಕಿಸಿದಾಗ ಕೃತಿ ಸಂಯೋಜನೆಗೆ ಇರಿಸಿಕೊಂಡ ವಿಧಾನದ ಪರಿಣಾಮವಾಗಿ ವಿಚಾರಗಳ ಪುನರಾವರ್ತನೆಯ ಸಮಸ್ಯೆ ಕಾಡಿಸಿದೆ. ಒಂದೇ ಬಗೆಯ ಕೇಳ್ವಿಗಳೊಂದಿಗೆ ಎಲ್ಲ ತೆಂಕಣ ನುಡಿಗಳ ಸಮಸ್ಯೆಗಳನ್ನು ಪರಿಶೀಲಸಿ ಇದನ್ನು ಸಿದ್ದಪಡಿಸಲು ಪ್ರಯತ್ನಿಸಿದ್ದರಿಂದ ಹಲವೆಡೆ ಒಂದೇ ವಿಚಾರ ಪುನರಾವರ್ತನೆಯಾಗಿದೆ. ಬೇರೆ ಬೇರೆಯ ಉದಾಹರಣೆಗಳಿಂದ ಒಂದೇ ವಿಷಯವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದಂತೆ ಕಾಣುತ್ತದೆ. ಬೇರೆ ಬೇರೆ ನುಡಿಗಳ ಲೇಖಕರು ಒಂದೇ ವಿಷಯದ ಬಗೆಗೆ ಬರೆದ ಕಾರಣ ಈ ಸಮಸ್ಯೆ ಉಂಟಾಗಿದೆ. ಆದರೂ ಇದರಲ್ಲಿ ತೀರ ವೈರುಧ್ಯಗಳಿಂದ ಕೂಡಿದ ಬರೆಹಗಳೇನೂ ಇಲ್ಲ. ಕಾರಣ ಎಲ್ಲ ನುಡಿಗಳ ಸಮಸ್ಯೆಗಳು ಒಂದೇ ಆದ ಕಾರಣ ಅವುಗಳ ಶೋಧನೆಯ ನೆಲೆಗಳು ಒಂದೇ ಆದ ಕಾರಣ ವಿರುದ್ಧ ನಿಲುವುಗಳು ಹುಟ್ಟಿಲ್ಲ. ಅಣ್ಣಮಲೈ, ಕೆ. ವಿ ನಾರಾಯಣ, ಮೇಟಿ ಮಲ್ಲಿಕಾರ್ಜುನ ಅವರು ತಾತ್ವಿಕವಾದ ಪ್ರಶ್ನೆಗಳನ್ನು ವಿಶ್ಲೇಷಿಸಿದರೆ; ತೆಲುಗು, ತುಳು ಮಲಯಾಳಂ, ತಮಿಳು ನುಡಿಗಳ ಕುರಿತಾದ ಲೇಖನಗಳು ಸಮೀಕ್ಷರೂಪದ ಬರೆಹಗಳು. ಈ ಬರೆಹಗಳು ಚಾರಿತ್ರಿಕ ನಿರೂಪಣೆ ಮತ್ತು ಭಾಷೆಯ ಸಮಸ್ಯೆಗಳನ್ನು ವಿವರಿಸಲು ಆರಿಸಿಕೊಂಡಿರುವ ತಾತ್ವಿಕತೆಯು ಒಂದೇ ಆಗಿರುವುದರಿಂದ ಇಂತಹ ಪುನರಾವರ್ತನೆಯ ಸಮಸ್ಯೆ ಎದುರಾಗಿದೆ. ಈ ಸಂಪುಟದಲ್ಲಿ ಇದನ್ನು ಸುಲಭವಾಗಿ ನಿವಾರಿಸಲು ಸಾಧ್ಯವಾಗದ ಸಮಸ್ಯೆಯು ಆಗಿದ್ದು ಇದನ್ನು ತಾಳಿಕೊಂಡೇ ಓದಬೇಕಾಗುತ್ತದೆ. ಕ್ರುತಿಯ ತಾತ್ವಿಕತೆಯ ಬಗೆಗೆ ಜನನುಡಿಗಳ ಬಗೆಗೆ ಕೊಂಚ ಕಾಳಜಿಯಿದ್ದವರಿಗೆ ಅಂತಹ ತಕರಾರುಗಳೇ ಹುಟ್ಟುವುದಿಲ್ಲ.

ಉಳಿದಂತೆ ಕೃತಿಯ ಆಶಯ ಕಾಳಜಿಗಳು ಕೇವಲ ಬೌದ್ಧಿಕ ಕಸರತ್ತಾಗಿರದೆ ಅದು ಸಮುದಾಯಗಳ ಪರವಾದ ಕಾಳಜಿಗಳಿಂದ ರೂಪುಗೊಂಡಿದೆ. ಕನ್ನಡದ ಸಂದರ್ಭದಲ್ಲಿ ಒಂದು ಮಾತು ಮತ್ತೆ ಮತ್ತೆ ಕೇಳಿಬರುತ್ತದೆ. ಅದೆಂದರೆ ಎಂತಹದೇ ಹೊಸ ವಿಚಾರಗಳು ಸಮಾಜದಲ್ಲಿ ಮೂಡಿಬಂದರೂ ಅವು ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಿ, ಜನರ ವಿವೇಕವಾಗಿ, ಕ್ರಿಯಾಯೋಜನೆಗಳಾಗಿ ಸಮಾಜ ಬದಲಾವಣೆಗೆ ನೆರವಾಗದೆ ಗ್ರಂಥಾಲಯದಲ್ಲಿ ಪೂಜೆಗೊಳ್ಳುತ್ತವೆ. ಹಾಗೆ ಪೂಜೆಗೊಳ್ಳುವುದರಿಂದ ಯಾವ ವಿಚಾರಗಳಿಗೂ ಬೆಲೆಯಿಲ್ಲ ಎಂಬ ಭಾವನೆಯಿದೆ.

ಇಂತಹ ಅಪಾಯಕ್ಕೆ ಇಲ್ಲಿನ ವಿಚಾರಗಳು ಬಲಿಯಾಗಬಾರದೆಂದರೆ, ಶಿಕ್ಷಣದಲ್ಲಿ ಭಾಷೆಗಳನ್ನು ಅಳವಡಿಸುವ ನೀತಿನಿರೂಪಕರು, ಶೈಕ್ಷಣಿಕ ಕಾನೂನು ರೂಪಿಸುವ ಜನಪ್ರತಿನಿಧಿಗಳು, ಶಿಕ್ಷಣದ ಆಡಳಿತಾಧಿಕಾರಿಗಳು, ಶೈಕ್ಷಣಿಕ ವಲಯದಲ್ಲಿ ಸೇವೆ ಮಾಡುವ ನೆಪದಲ್ಲಿ ನಾಯಿಕೊಡೆಗಳಂತೆ ಆರಂಭಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು, ಇಂಗ್ಲಿಷ್ ಬಗೆಗೆ ಭ್ರಮೆ ಹೊಂದಿರುವ ಪೋಷಕರು, ನ್ಯಾಯಾಲಯಗಳಲ್ಲಿ ಕೆಲಸ ಮಾಡುವವರು, ಇತರೆಲ್ಲರೂ ಈ ಕೃತಿಯನ್ನು ಓದಬೇಕಾಗಿದೆ. ಮತ್ತು ಇಲ್ಲಿ ವಿಚಾರಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಿಯಾಯೋಜನೆಗಳಾಗಿ ರೂಪುಗೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಇಂತಹ ಕೃತಿಗಳನ್ನು ಸಿದ್ದಪಡಿಸಿದವರ ಶ್ರಮ ಸಾರ್ಥಕವಾಗುವುದು. ಅಂತಹ ಮಹತ್ವ ಈ ಕೃತಿಗೆ ಪ್ರಾಪ್ತವಾಗಲಿ ಎಂಬುದು ಇಲ್ಲಿನ ಅಪೇಕ್ಷೆ.

ಅಂತಹ ಅಪೇಕ್ಷೆ ಸುಲಭವಾಗಿ ಈಡೇರುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮೊದಲಿಗೆ ಉದಾಹರಿಸಿದ ಹಾಡಿನ ಮುಂದಿನ ವಾಕ್ಯವು ‘ಜಂಟಿಯಾಗಿ ಹೋರಾಡುವ ಬಾರೆ ನನ್ನ ಚಿಕ್ಕ ತಂಗ್ಯಮ್ಮ’ ಎಂದು ಕೊನೆಗೊಳ್ಳುತ್ತದೆ. ಅದರ ಆಶಯದಂತೆಯೇ ಇಂದು ಎಲ್ಲ ತೆಂಕಣದ ಸೋದರ ಸೋದರಿ ನುಡಿಗಳು ಮತ್ತು ಭಾರತದ ಎಲ್ಲ ಜನನುಡಿಗಳು ಒಗ್ಗೂಡಿ ಹೋರಾಡದಿದ್ದರೆ ಉಳಿವಿಲ್ಲ. ಅಂತಹ ನುಡಿಹೋರಾಟಕ್ಕೆ ಇಂತಹ ಸಾವಿರಾರು ಹೊತ್ತಗೆಗಳು ಹುಟ್ಟಿ ನೆರವಾಗಲಿ ಎಂದು ಅಪೇಕ್ಷಿಸೋಣ.

(ಪುಸ್ತಕದ ವಿವರಗಳು : ಹೆಸರು : ತೆಂಕಣ ನುಡಿಗಳು ಮತ್ತು ಇಂಗ್ಲಿಷ್ , ಸಂಪಾದನೆ: ಡಾ. ಮೇಟಿ ಮಲ್ಲಿಕಾರ್ಜುನ : ಪ್ರಕಟಣೆ; ಕುವೆಂಪು ಭಾಷಾಭಾರತಿ ಪ್ರಾಧಿಕಾರ ಕರ್ನಾಟಕ ಸರಕಾರ, ಬೆಲೆ-200, ಪ್ರಥಮ ಮುದ್ರಣ:2015)

ಸೋಮವಾರ, ಜೂನ್ 20, 2016

ದಲಿತ ಅಭಿವೃದ್ಧಿ ‘ಕಳಪೆ’ ಮಟ್ಟದಲ್ಲಿದೆ : ಚಂದ್ರ ಪೂಜಾರಿ


-ಚಂದ್ರ ಪೂಜಾರಿ

ಸೌಜನ್ಯ:http://janashakthi.co.in



2014 ರಲ್ಲಿ ಕರ್ನಾಟಕದ 30 ಜಿಲ್ಲೆಗಳಿಗೂ ತಯಾರಿಸಲಾದ ಜಿಲ್ಲಾ ಮಟ್ಟದ ಮಾನವ ಅಭಿವೃದ್ಧಿ ವರದಿಯಲ್ಲಿ, ದೇಶದಲ್ಲೇ ಮೊದಲ ಬಾರಿಗೆ ದಲಿತ ಅಭಿವೃದ್ಧಿ ಸೂಚ್ಯಂಕವನ್ನು ರೂಪಿಸಿ ಅಳೆಯಲಾಗಿದೆ. ರಾಜ್ಯದ ಸರಾಸರಿ ದಲಿತ ಅಭಿವೃದ್ಧಿ ಸೂಚ್ಯಂಕ 0.3 ಆಗಿದೆ. ಈ ಸೂಚ್ಯಂಕದ ಗರಿಷ್ಟ ಮಟ್ಟ 1 ಆಗಿದ್ದು, 0.3 ‘ಕಳಪೆ’ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಇದು ರಾಜ್ಯದಲ್ಲಿ ದಲಿತರ ಅಭಿವೃದ್ಧಿಯ ಮಟ್ಟವನ್ನು ಬಿಚ್ಚಿಟ್ಟಿದೆ. ಆದ್ದರಿಂದಲೇ ಏನೋ, ಎಲ್ಲಾ ಜಿಲ್ಲಾ ಮಟ್ಟದ ಮಾನವ ಅಭಿವೃದ್ಧಿ ವರದಿಗಳ ಸಾರಾಂಶ ಕೊಡುವ ರಾಜ್ಯ ಮಟ್ಟದ ವರದಿಯಲ್ಲಿ ಅದನ್ನು ಮರೆಮಾಚಲಾಗಿದೆ ಎಂದು ಹಂಪಿ ವಿ.ವಿ.ದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರೊ. ಚಂದ್ರ ಪೂಜಾರಿ ಹೇಳಿದರು. ಅವರು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಬೆಂಗಳೂರಿನ ಸೆನೆಟ್ ಹಾಲ್ ನಲ್ಲಿ ಸಂಘಟಿಸಿದ್ದ “ದಲಿತ ಮಾನವ ಅಭಿವೃದ್ಧಿ : ಸಮಸ್ಯೆ, ಸವಾಲುಗಳು ಮತ್ತು ಪರಿಹಾರಗಳು” ಎಂಬ ವಿಚಾರ ಸಂಕಿರಣದಲ್ಲಿ ‘ದಲಿತ ಮಾನವ ಅಭಿವೃದ್ಧಿ’ ಬಗ್ಗೆ ಮಾತನಾಡುತ್ತಿದ್ದರು.

ಈಗ ಬಳಸಲಾಗುತ್ತಿರುವ ಅಭಿವೃದ್ಧಿ ಸೂಚ್ಯಂಕ ಜಾತಿ-ಲಿಂಗ ತಾರತಮ್ಯಗಳು, ಅಸ್ಪøಶ್ಯತೆ, ಹಾಗೂ ಇವುಗಳಿಂದ ಜಾತಿ ಏಣಿಯಲ್ಲಿ ಕೆಳಗಿರುವವರ ಅಭಿವೃದ್ಧಿಯ ಮೇಲೆ ಆಗುವ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇದಕ್ಕಾಗಿ ದಲಿತ ಅಭಿವೃದ್ಧಿಯ ಮಟ್ಟ ಅಳೆಯುವ ಸೂಚ್ಯಂಕವನ್ನು ಅಭಿವೃಧ್ಧಿ ಪಡೆಸಲಾಗಿದೆ ಆದರೆ ಈ ಬಗ್ಗೆ ಜನಗಣತಿಯಲ್ಲಾಗಲಿ ಇತರ ಸಮೀಕ್ಷೆಗಳಲ್ಲಾಗಲಿ ಅಂಕೆ ಸಂಖ್ಯೆ ದೊರೆಯುವುದಿಲ್ಲ. ಇದಕ್ಕಾಗಿ ಪ್ರತಿ ಜಿಲ್ಲೆಯ ಒಂದು ಗ್ರಾಮ ಪಂಚಾಯತ್ ಪ್ರದೇಶದಲ್ಲಿ 50 ದಲಿತ ಕುಟುಂಬಗಳಲ್ಲಿ ಈ ಬಗ್ಗೆ ಕ್ಷೇತ್ರ ಸಮೀಕ್ಷೆ ನಡೆಸಲಾಯಿತು. ಈ ಮಾಹಿತಿಯನ್ನು ದಲಿತ ಅಭಿವೃದ್ಧಿಯ ಸೂಚ್ಯಂಕ ಅಳೆಯಲು ಬಳಸಲಾಗಿದೆ ಎಂದು ಪ್ರೊ.  ಪೂಜಾರಿ ಅವರು ಹೇಳಿದರು. (ಈ ಸೂಚ್ಯಂಕವನ್ನು ಪ್ರೊ. ಪೂಜಾರಿ ಅವರೇ ಅಭಿವೃಧ್ಧಿ ಪಡೆಸಿದ್ದಾರೆ.) ಈ ಸೂಚ್ಯಂಕಗಳನ್ನು ಮಾಡಿದರೆ ಸಾಲದು. ಈ ಸೂಚ್ಯಂಕಗಳನ್ನು ಬಳಸಿ ಅಭಿವೃದ್ಧಿ ನೀತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಇದಕ್ಕೆ ದಲಿತರಿಗೆ ಶಿಕ್ಷಣ, ಉದ್ಯೋಗ, ಭೂಮಿ, ಸಾಲಗಳು ಆದ್ಯತೆಯಲ್ಲಿ ದೊರಕಬೇಕು. ಆದರೆ ಯಾವ ಪಕ್ಷದ ಸರಕಾರ ಬಂದರೂ ಜಾಗತೀಕರಣದ ನೀತಿಗಳನ್ನು ಅನುಸರಿಸುತ್ತಿರುವಾಗ, ಈ ನಿಟ್ಟಿನಲ್ಲಿ ಪ್ರಗತಿ ಆಗುವ ಬದಲು ಹಿನ್ನಡೆ ಆಗುತ್ತಿದೆ ಎಂದು ಪ್ರೊ. ಪೂಜಾರಿ ಅವರು ಅಂಕೆಸಂಖ್ಯೆಗಳ ಸಮೇತ ವಿವರಿಸಿದರು. ಇದು ಬದಲಾಗಬೇಕಾದರೆ ದಲಿತರು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಬದಲಿ ನೀತಿಗೆ ಹೋರಾಡಬೇಕು. ಅವನ್ನು ಜಾರಿ ಮಾಡಬಲ್ಲ ರಾಜಕೀಯ ಶಕ್ತಿಗಳಿಗೆ ಬೆಂಬಲ ಕೊಡಬೇಕು ಎಂದು ಕರೆ ಕೊಟ್ಟರು.

‘ಗೋಳೀಕರಣದ ದಲಿತ ವಿಮರ್ಶೆ ಬೇಕು’: ಚೆನ್ನಿ

ಜಾಗತೀಕರಣವನ್ನು ಲೇಖಕ ಚಿಂತಕ ಎಚ್.ಎಸ್.ಶಿವಪ್ರಕಾಶ್ ‘ಗೋಳೀಕರಣ’ (‘ಗೋಳ’ಎಂದರೆ ಜಗತ್ತು, ಎಲ್ಲರ ಗೋಳಿಗೆ ಕಾರಣವಾಗುತ್ತದೆ ಎಂಬ ಎರಡೂ ಅರ್ಥದಲ್ಲಿ) ಎಂದು ಕರೆದಿದ್ದರು. ಜಾಗತೀಕರಣ ‘ಸರ್ವರಿಗೂ ಸಮಗೋಳು’ ಹಂಚುತ್ತಿದೆ ಎಂಬುದರ ಬಗ್ಗೆ ಈಗ ಯಾರಿಗೂ ಸಂಶಯ ಉಳಿದಿಲ್ಲ. ಜಾಗತೀಕರಣವನ್ನು ಕಾರ್ಮಿಕರ, ಪರಿಸರದ, ಮಹಿಳೆಯರ ದೃಷ್ಟಿಕೋಣದಿಂದ ಗಂಭೀರವಾಗಿ ವಿಮರ್ಶೆ ಮಾಡಲಾಗುತ್ತಿದೆ. ಅದೇ ರೀತಿ ದಲಿತರ  ದೃಷ್ಟಿಕೋಣದಿಂದ ಗಂಭೀರವಾಗಿ ವಿಮರ್ಶೆ ಮಡುವ ತುರ್ತು ಇದೆ ಎಂದು ಶಿವಮೊಗ್ಗದ ಕುವೆಂಪು ವಿ.ವಿ.ದ ಇಂಗ್ಲಿóಷ್ ವಿಭಾಗದ ಮುಖ್ಯಸ್ಥ ಪ್ರೊ. ರಾಜೇಂದ್ರ ಚೆನ್ನಿ ಅವರು ಹೇಳಿದರು. ಅವರು  ಇದೇ ವಿಚಾರ ಸಂಕಿರಣದಲ್ಲಿ ‘ಜಾತಿಪದ್ಧತಿ-ಅಸ್ಪøಶ್ಯತೆಯ ಬೆಳವಣಿಗೆ : ಜಾಗತೀಕರಣದ ಪರಿಣಾಮಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಬಹುರಾಷ್ಟ್ರೀಯ ವಿದೇಶಿ ಕಂಪನಿಗಳು ದಲಿತರ ವಿರುದ್ಧ ತಾರತಮ್ಯ ತೋರಲಿಕ್ಕಿಲ್ಲ. ಆದ್ದರಿಂದ ಜಾಗತೀಕರಣ ದಲಿತರಿಗೆ ಸಮಾನ ಅವಕಾಶಗಳನ್ನು ಒದಗಿಸಬಹುದು ಎಂಬ ನಿರೀಕ್ಷೆ ಕೆಲವರಲ್ಲಿ ಇತ್ತು. ಆದರೆ ಜಾಗತೀಕರಣ ಎಲ್ಲ ರೀತಿಯ ಅಸಮಾನತೆಗಳನ್ನು ಇನ್ನಷ್ಟು ತೀವ್ರಗೊಳಿಸುವ ಮತ್ತು ಹೊಸ ಅಸಮಾನತೆಗಳನ್ನು ಸೃಷ್ಟಿಸುವಂತಹುದು ಎಂಬುದು ಅನುಭವದಿಂದ ಸಿದ್ಧವಾಗಿದೆ. ಪ್ರೊ. ಥೋರಟ್ ಅವರು ನಡೆಸಿದ ಒಂದು ಪ್ರಯೋಗದಿಂದ ಇದು ಪ್ರಾಯೋಗಿಕವಾಗಿಯೂ ಸಿದ್ಧವಾಯಿತು. ಜಾಗತೀಕರಣ ನಾಲ್ಕು ರೀತಿಯಲ್ಲಿ ಜಾತಿಪದ್ಧತಿ-ಅಸ್ಪøಶ್ಯತೆ ಮತ್ತು ದಲಿತರ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎಂದು ಪ್ರೊ. ಚೆನ್ನಿ ಅವರು ವಾದಿಸಿದರು.

ಅವುಗಳಲ್ಲಿ ಮೊದಲನೆಯದು ಜಾಗತೀಕರಣ ನೀತಿಗಳ ಪರಿಣಾಮವಾಗಿ ಅಭಿವೃದ್ಧಿಯಲ್ಲಿ ಪ್ರಭುತ್ವಕ್ಕೆ ಯಾವುದೇ ಪಾತ್ರ ಇರಬಾರದು. ಅದನ್ನು ಪೂರ್ಣವಾಗಿ ಮಾರುಕಟ್ಟೆಗೆ ಬಿಟ್ಟುಕೊಡಬೇಕು ಎಂಬ ನೀತಿಯನ್ನು ಸರಕಾರಗಳು ಅನುಸರಸಬೇಕಾಗಿರುವುದು. ಸಣ್ಣ ರೈತರು, ಕೃಷಿಕೂಲಿಕಾರರರು, ದಲಿತರು, ಆದಿವಾಸಿಗಳಂತಹ ದುರ್ಬಲ ಜನವಿಭಾಗಗಳ ಅಭಿವೃದ್ಧಿಗೆ ವಿಶೇಷ ಗಮನ ಕೊಡುವ ಸರಕಾರಗಳಿಗಿರುವ ಅವಕಾಶಗಳಿಗೆ ಜಾಗತೀಕರಣ ಕಡಿವಾಣ ಹಾಕಿದೆ. ಇದು ಅಂತರ್ರಾಷ್ಟ್ರೀಯ ಸಾಲ, ವಾಣಿಜ್ಯ ಒಪ್ಪಂದಗಳ ಭಾಗವಾಗಿದ್ದು ಯಾವುದೇ ಸರಕಾರ ಇದಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಇರುತ್ತದೆ. ಎರಡನೇಯದಾಗಿ ಜಾಗತೀಕರಣ ನೀತಿಗಳ ಪರಿಣಾಮವಾಗಿ ಬಂದಿರುವ ಶಿಕ್ಷಣ, ಉದ್ಯಮಗಳ ವ್ಯಾಪಕ ಖಾಸಗೀಕರಣ ಮೀಸಲಾತಿಯನ್ನು ಅಪ್ರಸ್ತುತ ಮತ್ತು ಅರ್ಥಹೀನವಾಗಿಸಿದೆ. ಮೂರನೇಯದಾಗಿ ಶಿಕ್ಷಣದಲ್ಲಿ (ಅದರಲ್ಲೂ ಉನ್ನತ ಶಿಕ್ಷಣದಲ್ಲಿ) ಮೀಸಲಾತಿಯ ಅಭಾವ ಮತ್ತು ವಿಪರೀತ ವ್ಯಾಪಾರೀಕರಣ, ಜಾಗತೀಕರಣ ಸೃಷ್ಟಿಸುತ್ತಿರುವ ಐಟಿ-ಬಿಟಿ ಮುಂತಾದ ಹೊಸ ಉದ್ಯೋಗಗಳು ಬೇಡುವ ಶಿಕ್ಷಣ ಕೌಶಲ್ಯ ದಲಿತರಿಗೆ ದಕ್ಕದಂತೆ ಮಾಡಿದೆ. ನಾಲ್ಕನೇಯದಾಗಿ ಜಾಗತೀಕರಣದಿಂದಾಗಿ ದಲಿತರ ಒಂದು ವಿಭಾಗ ಹೊಂದಿರುವ ಸಣ್ಣ ಹಿಡುವಳಿಗಳಲ್ಲಿ ಕೃಷಿ ಜೀವನೋಪಾಯವಾಗಿ ಅಸಾಧ್ಯ ಎಂಬ ಸ್ಥಿತಿ ಉಂಟಾಗಿರುವುದು. ಆದ್ದರಿಂದ ದಲಿತರು ಇದ್ದ ಬದ್ದ ಕೃಷಿ ಭೂಮಿಯನ್ನು ಮಾರಿ ನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ ಬಂದಿರುವುದು. ನಗರಗಳಲ್ಲೂ ಯಾವುದೇ ಹಕ್ಕು ಸವಲತ್ತುಗಳಿರದ ಅಸಂಘಟಿತ ಕಾರ್ಮಿಕರ ಕೊನೆಯ ಶ್ರೇಣಿಯಲ್ಲಿ ದಯನೀಯ ಪರಿಸ್ಥಿತಿಯಲ್ಲಿ ಬದುಕುವಂತಾಗಿರುವುದು. ಇಂತಹ ಪರಿಸ್ಥಿತಿಯಲ್ಲಿ ದಲಿತರ ಬದುಕಿನ ಮೇಲೆ ಜಾಗತೀಕರಣದ ದುಷ್ಪರಿಣಾಮಗಳ ಅಧ್ಯಯನ, ವಿಮರ್ಶೆಗಳನ್ನು ದಲಿತ ದೃಷ್ಟಿಕೊಣದಿಂದ ಮಾಡುವುದು ಸಾವು-ಬದುಕಿನ ಪ್ರಶ್ನೆ ಎಂದು ಪ್ರೊ. ಚೆನ್ನಿ ಹೇಳಿದರು.

ದಲಿತ ಉಪಯೋಜನೆಯ ದೌರ್ಬಲ್ಯಗಳು : ಟಿ.ಆರ್.ಸಿ.

‘ದಲಿತ ಉಪಯೋಜನೆ ಬಗ್ಗೆ ಸರಕಾರದ ಧೋರಣೆ ಮತ್ತು ಜಾರಿ’ ಬಗ್ಗೆ ಮಾತನಾಡುತ್ತಾ ಹಂಪಿ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ.ಆರ್. ಚಂದ್ರಶೇಖರ್ ದಲಿತ ಉಪಯೋಜನೆಗಳ ಜಾರಿಯ ಪ್ರಮುಖ ದೌರ್ಬಲ್ಯಗಳ ಬಗ್ಗೆ ಮಾತನಾಡಿದರು. ಮೊದಲನೇಯದಾಗಿ ದಲಿತ ಉಪಯೋಜನೆಗೆ ಕೊಟ್ಟ ಹಣ ಹತ್ತಾರು ಇಲಾಖೆಗಳ ನೂರಾರು ಕಾರ್ಯಕ್ರಮಗಳಿಗೆ 30 ಜಿಲ್ಲೆಗಳಿಗೆ ಹರಿಹಂಚಿ ಹೋಗುತ್ತದೆ. ಈ ರೀತಿ ಹರಿಹಂಚಿ ಹೋದಾಗ ವಿನಿಯೋಗವಾಗುವ ಹಣ ತೀರಾ ಕಡಿಮೆಯಾಗಿದ್ದು ಪರಿಣಾಮಕಾರಿ ಆಗಿರುವುದಿಲ್ಲ. ಇದರ ಬದಲಾಗಿ ನಿರ್ದಿಷ್ಟ ಗುರಿ ಇರುವ ದಲಿತರನ್ನು ಮುಟ್ಟುವ ವ್ಯಾಪಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಎರಡನೇಯದಾಗಿ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಉಪಯೋಜನೆಯ ಶೇ. 82 ಹಣ ಹೋದರೆ, ಶೇ. 18 ಮಾತ್ರ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಹೋಗುತ್ತದೆ. ಪ್ರಾದೇಶಿಕ ಅಗತ್ಯಗಳೂ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಯಾಂತ್ರಿಕವಾಗಿ ಜಿಲ್ಲೆಗಳಿಗೆ ಹಣ ಹಂಚಿಕೆಯಿಂದಲೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ ಕಲಬುರ್ಗಿ ವಿಭಾಗದಲ್ಲಿ ದಲಿತರ ಪ್ರಮಾಣ ಶೇ. 26 (ರಾಜ್ಯ ಸರಾಸರಿ ಶೇ. 18) ಇದ್ದರೂ ಉಳಿದ ಜಿಲ್ಲೆಗಳಷ್ಟೇ ಹಣ ಪಡೆಯುತ್ತದೆ.  ಕಲಬುರ್ಗಿ ವಿಭಾಗದ ಜಿಲ್ಲೆಗಳಿಗೆ ಅತ್ಯಂತ ಹಿಂದುಳಿದುರುವಿಕೆ ಹಾಗೂ ದಲಿತರ ಪ್ರಮಾಣ ಹೆಚ್ಚಿರುವುದು - ಈ ಎರಡೂ  ಕಾರಣಗಳಿಗೆ ಹೆಚ್ಚು ಹಣ ಕೊಡಬೇಕಾಗುತ್ತದೆ. ಮೂರನೇಯದಾಗಿ ಈಗ ಕಾರ್ಯಕ್ರಮಗಳಿಗೆ ಹಣಕಾಸಿನ (ಕೊಟ್ಟ ಹಣ ಖರ್ಚಾಗಬೇಕು ಎಂಬ) ಮತ್ತು ಭೌತಿಕ (ಇಷ್ಟು ರಸ್ತೆ ಅಥವಾ ಹಾಸ್ಟೆಲ್ ಕಟ್ಟಿರಬೇಕು, ಇಷ್ಟು ಜನಕ್ಕೆ ಸ್ಕಾಲರ್ ಶಿಪ್ ಹಂಚಿರಬೇಕು) ಗುರಿಗಳು ಮಾತ್ರ ಇವೆ. ಇವನ್ನು ಮುಟ್ಟಿದರೆ ಸಾಕು. ಆದರೆ ಕಾರ್ಯಕ್ರಮಗಳ ಮೂಲ ಉದ್ದೇಶದ ಫಲಶ್ರ್ರುತಿ ಎಷ್ಟರ ಮಟ್ಟಿಗೆ ಆಗಿದೆ? ಇದನ್ನು ಅಳೆಯುವ ಒರೆಗಲ್ಲು ಏನು? ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಹಾಸ್ಟೆಲ್ ಕಟ್ಟಿಸಿ ಸ್ಕಾಲರ್ ಶಿಪ್ ಕೊಟ್ಟು ದಲಿತ ವಿದ್ಯಾರ್ಥಿಗಳ ಶಾಲಾ ಹಾಜರಾತಿ, ಶಿಕ್ಷಣದ ಗುಣಮಟ್ಟ ಮೇಲೆ ಎಷ್ಟು ಪರಿಣಾಮ ಬೀರಿದೆ? ಆರೋಗ್ಯ ಸಂಬಂಧಿ ಕಾರ್ಯಕ್ರಮವಾದರೆ ಶಿಶು ಪ್ರಮಾಣ, ಗರ್ಭಿಣಿ ಮಹಿಳೆಯರ ರಕ್ತಹೀನತೆ ಎಷ್ಟರ ಮಟ್ಟಿಗೆ ಇಳಿದಿದೆ? - ಇಂತಹ ಒರೆಗಲ್ಲುಗಳು ಬೇಕಾಗುತ್ತವೆ.

ಈ ಪ್ರಮುಖ ದೌರ್ಬಲ್ಯಗಳನ್ನು ಸರಿಪಡಿಸಿದರೆ ಉಪಯೋಜನೆಗಳು ಪರಿಣಾಮಕಾರಿಯಾಗಬಲ್ಲವು ಎಂದು ಪ್ರೊ. ಟಿ.ಆರ್.ಚಂದ್ರಶೇಖರ್ ವಾದಿಸಿದರು. ಅವರು ದಲಿತ ಅಭಿವೃಧ್ಧಿ ಯೋಜನೆಯನ್ನು ‘ಉಪಯೋಜನೆ’ ಎಂದು ಕರೆಯುವ ಧೋರಣೆಯನ್ನು ಶಿಷ್ಟರ ಮತ್ತು ಪರಿಶಿಷ್ಟರ ನಡುವೆ ತಾರತಮ್ಯ ತೋರುವ ಮನೋಧರ್ಮದ ಬಗ್ಗೆ ಆಕ್ಷೇಪವೆತ್ತಿದರು.

‘ಇನ್ನೆಂದು ಬೆಳಗು ನಿಮಗೆ’

ಕೃಷಿ ಕೂಲಿಕಾರರ ಸಂಘಟನೆಯ ಅಧ್ಯಕ್ಷ ಕಾ. ನಿತ್ಯಾನಂದಸ್ವಾಮಿ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥ ಹಾಗೂ ದಲಿತ ಯೋಜನೆ ಜಾರಿಗೆ ವಿಶೇಷ ಸಲಹೆಗಾರರಾದ ಇ. ವೆಂಕಟಯ್ಯ ಅವರು ಮಾತನಾಡುತ್ತಾ ದಲಿತ ಸಂಘಟನೆಗಳು ಯೋಜನೆಯನ್ನು ರೂಪಿಸುವಲ್ಲಿ ಮತ್ತು ಜಾರಿ ಮಾಡುವಲ್ಲಿ ಭಾಗವಹಿಸಬೇಕು ಎಂದು ಕರೆಯಿತ್ತರು. ಸಭಿಕರಾಗಿ ಭಾಗವಹಿಸಿದ್ದ ಖ್ಯಾತ ಹಾಡುಗಾರ ಅಪ್ಪಗೆರೆ ತಿಮ್ಮರಾಜು ‘ನಾನು ಕಳೆದ 40 ವರ್ಷಗಳಲ್ಲಿ ಕಂಡ ದಲಿತ ಸಂಘಟನೆಗಳು ಆಯೋಜಿಸಿದ ವಿಚಾರ ಸಂಕಿರಣಗಳಲ್ಲಿ ಇದೊಂದು ಅತ್ಯುತ್ತಮ ಅರ್ಥಪೂರ್ಣ ಕಾರ್ಯಕ್ರಮ’ ಎಂದು ಹೊಗಳಿ ಸಂಘಟಕರನ್ನು ಅಭಿನಂದಿಸಿದರು, ‘ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ಇದನ್ನು ಪುಸ್ತಕವಾಗಿ ತನ್ನಿ’ ಎಂದು ಒತ್ತಿ ಒತ್ತಿ ಹೇಳಿದರು. ಅವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ಇನ್ನೆಂದು ಬೆಳಗು ನಿಮಗೆ’ ಹಾಡನ್ನು ಅತ್ಯಂತ ಭಾವಪೂರ್ಣವಾಗಿ ಹಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆಯವರು ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಉಪಸ್ಥಿತರಿದ್ದರು. ಬಿ. ರಾಜಶೇಖರ ಮೂರ್ತಿ ಅವರು ನಿರೂಪಣೆ ಮಾಡಿದರು. ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಅವರು ವಂದನಾರ್ಪಣೆ ಮಾಡಿದರು.

ಕಾರ್ಯಾಗಾರದ ನಿರ್ಣಯಗಳು

ವಿಚಾರ ಸಂಕಿರಣದ ನಂತರ ನಡೆದ ಕಾರ್ಯಾಗಾರದಲ್ಲಿ ದಲಿತ ಉಪಯೋಜನೆಯ ಅನುಷ್ಠಾನ ಕುರಿತು ಒಂದು ದಸ್ತಾವೇಜನ್ನು ಮಂಡಿಸಲಾಯಿತು. ಅದರಲ್ಲಿ ಪ್ರಸ್ತುತ ದಲಿತ ಉಪಯೋಜನೆ ಮತ್ತು ಅದರ ಅನುಷ್ಟಾನದ ಕುರಿತು ಒಟ್ಟಾರೆ ಮತ್ತು ಇಲಾಖಾವಾರು ಕಾರ್ಯಕ್ರಮಗಳ ವಿಮರ್ಶೆ ಮಾಡಲಾಗಿದೆ. ಈ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು. ಈ ಚರ್ಚೆಯ ಫಲವಾಗಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:

ಎಸ್.ಸಿ/ಎಸ್.ಟಿ. ಉಪಯೋಜನೆ ಕಾಯಿದೆಯಲ್ಲಿ ಉಪಯೋಜನೆಯ ಹಣವನ್ನು ಬೇರೆ ಕೆಲಸಗಳಿಗೆ ವರ್ಗಾಯಿಸಲು ಅವಕಾಶ ಮಾಡುವ ಕಲಮನ್ನು ತೆಗೆದುಹಾಕಬೇಕು ಎಂದು ಸರಕಾರವನ್ನು ಒತ್ತಾಯಿಸಬೇಕು.

ಎಸ್.ಸಿ/ಎಸ್.ಟಿ. ಉಪಯೋಜನೆ ಕಾಯಿದೆಯ ಜಾರಿಗೆ ಅನುವಾಗುವಂತೆ ಕೂಡಲೇ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಬೇಕು.

ದಲಿತ ಉಪಯೋಜನೆಯಲ್ಲಿ - ದಲಿತ ಕಾಲೋನಿಗಳಿಗೆ ಮೂಲ ಸೌಕರ್ಯ ಒದಗಿಸುವ ಮತ್ತು ಮನುಷ್ಯ ಕೇಂದ್ರಿತ ಎಂಬ - ಎರಡು ರೀತಿಯ ಕಾರ್ಯಕ್ರಮಗಳಿವೆ. ಮನುಷ್ಯ ಕೇಂದ್ರಿತ ಕಾರ್ಯಕ್ರಮಗಳಿಗೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ, ಸಾವಿರಾರು ಅರ್ಜಿಗಳನ್ನು ಹಾಕಿಸಿ ‘ಏಕಗವಾಕ್ಷಿ’ ಮೂಲಕ ಅರ್ಜಿಗಳನ್ನು ಇತ್ಯಾರ್ಥ ಪಡಿಸುವಂತೆ ಒತ್ತಾಯಿಸಬೇಕು. ಜೂನ್-ಜುಲೈ ತಿಂಗಳಲ್ಲಿ ಅರ್ಜಿ ಹಾಕುವ ಆಂದೋಲನ ನಡೆಸಬೇಕು.

ವರದಿ: ವಸಂತರಾಜ ಎನ್. ಕೆ.

ಕರಿ ಹರಿಯುವ ಕಾರ ಹುಣ್ಣಿಮೆ

ಕಾರ ಹುಣ್ಣಿಮೆ ಬಿಸಿ ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ತಂದ ಹಬ್ಬ. ಮುಂಗಾರು ಆರಂಭದ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆ. ಇದಾದ ನಂತರ ಪ್ರತಿ ಅಮಾವಾಸ್ಯೆಗೊಂದು ಹಬ್ಬಗಳ ಸಾಲು ಸಾಲು ಶುರುವಾಗುತ್ತವೆ. ಕಾರ ಹುಣ್ಣಿಮೆಗೂ ಮುನ್ನ ಬಿಸಿಲಿಗೆ ಬಾಯ್ದೆರೆದ ನೆಲವನ್ನು ಉತ್ತು ಹದ ಮಾಡಿದ ಎತ್ತುಗಳಿಗೆ ವಿಶ್ರಾಂತಿ ನೀಡುವ ಹಬ್ಬ.

ಹೈದರಾಬಾದ್ ಕರ್ನಾಟಕದಲ್ಲಿ ನೆತ್ತಿ ಸುಡುವ ಬಿರು ಬಿಸಿಲಿನ ಅಬ್ಬರ. ಇಂಥ ಸಂದರ್ಭಗಳಲ್ಲಿ ರಾಸುಗಳು ಅಷ್ಟೇ ಅಲ್ಲ ಮನುಷ್ಯರು ಕೂಡಾ ನೀರಿಗಾಗಿ ಹೈರಾಣಾಗುವ ಸ್ಥಿತಿ. ಕಾರ ಹುಣ್ಣಿಮೆಯ ಅಬ್ಬರದ ಬಿರು ಬಿಸಿಲಿನ ಸಮಯವನ್ನು ನೆನೆಪಿಸಿಕೊಳ್ಳುವ ವರ್ತಮಾನ ಕಾಲ. ಇಂಥ ಸಮಯದಲ್ಲಿ ಕಾರ ಹುಣ್ಣಿಮೆ ಸಂಭ್ರಮವನ್ನು ಮಾಡುವ ಮೂಲಕ ಈ ಭಾಗದ ರೈತ ವಲಯ ಖುಷಿ ಪಡುತ್ತದೆ. ಬಾಣಲೆಯಂಥ ನೆತ್ತಿ ಸುಡುವ ಬಿಸಿಲಿನಲ್ಲಿ ಅನ್ನದಾತನೊಂದಿಗೆ ದುಡಿಯುವ ಈ ಜೀವಗಳಿಗೆ ಧನ್ಯವಾದ ನೀಡಲು ಆಚರಿಸುವ ಸಂಭ್ರಮದ ಹಬ್ಬವಿದು. ರಾಸುಗಳಿಗೆ ಸ್ನಾನ ಮಾಡಿಸಿ ಔಷಧ ಗುಣಗಳುಳ್ಳ ಘೊಟ್ಟ ಕುಡಿಸಿ, ಬಣ್ಣ ಬಳಿದು, ಅಲಂಕಾರ ಮಾಡಿ ಓಡಿಸಿ ಖುಷಿ ಪಡುವ ಮೂಲಕ ರೈತ ಖುಷಿ ಪಡುತ್ತಾನೆ.

ಹೈದರಾಬಾದ್ ಕರ್ನಾಟಕದ ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಸೇರಿದಂತೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿ ರೈತನ ಮನೆಯಲ್ಲಿ ಅಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಭಕ್ತಿ ಸಮರ್ಪಣೆ ಮಾಡುವ ಮೂಲಕ ತಮ್ಮ ಬದುಕಿನ ಉದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುವ ರಾಸುಗಳಿಗೆ ನಮಸ್ಕರಿಸುತ್ತಾರೆ. ಬಂಡಿ, ಚಕ್ಕಡಿಗಳನ್ನು ಎತ್ತುಗಳಿಗೆ ಕಟ್ಟಿ ಓಡಿಸುವ ಮೂಲಕ ಸಂಭ್ರಮಿಸುತ್ತಾರೆ.

ಬೀದಿಗಳಲ್ಲಿ ಹಬ್ಬದ ವಾತಾವರಣಕ್ಕೆ ಕಳೆ ಕಟ್ಟುವಂತೆ ಎತ್ತುಗಳ ಅಂದ, ಚಂದದ ಶೃಂಗಾರಕ್ಕೆ ಬೇಕಾಗುವ ವಿವಿಧ ಬಣ್ಣಗಳ ಬಾಸಿಂಗ, ಜತ್ತಿಗೆ, ಹಣೆಕಟ್ಟುಗಳು, ಹಗ್ಗ, ಬಾರಕೋಲು, ಕೊಬ್ಬರಿ, ಗೊಂಡೆ, ಗಾಜುಮಣಿ, ಮಿಂಚು, ಬಣ್ಣ, ಕೊಣಸುಗಳಿಂದ ಎತ್ತುಗಳನ್ನು ಶೃಂಗಾರ ಮಾಡಿ ಸಿಂಗರಿಸಲಾಗುತ್ತದೆ.ಹುಣ್ಣಿಮೆ ದಿನ ಜೋಡೆತ್ತುಗಳನ್ನು ಅಲಂಕಾರ ಮಾಡಿ ಊರಿನ ಪ್ರಮುಖ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುತ್ತದೆ. ನಂತರ ರಾಸುಗಳನ್ನು ಓಡಿಸುವ ಸ್ಪರ್ಧೆ ನಡೆಸಲಾಗುತ್ತದೆ. ವೇಗವಾಗಿ ಓಡುವ ರಾಸುಗಳಿಗೆ ಬಹುಮಾನ ನೀಡುವ ಪದ್ಧತಿಯೂ ಇದೆ.

ಇದೆಲ್ಲ ಎತ್ತುಗಳಿಗೆ `ವಾರ್ಮ್ ಅಪ್~ ಮಾಡುವ ಕ್ರಿಯೆ. ಋತು ಬದಲಾವಣೆಯ ಈ ಕಾಲದಲ್ಲಿ ಕಾಲುಗಳು, ಹಾಗೂ ಸ್ನಾಯುಗಳಿಗೆ ಬಲವರ್ಧನೆ ಮಾಡುವಂಥ ಔಷಧಯುಕ್ತ ಘೊಟ್ಟವನ್ನೂ ನೀಡಲಾಗುತ್ತದೆ. ಅಳವಿ, ಅರಿಶಿಣ ಮುಂತಾದ ಮಸಾಲೆಯುಕ್ತ ಔಷಧಿಯದು.

ಮುಂಗಾರು ಬರುವ ಮುಂಚೆಯೇ ಹೊಲದಲ್ಲಿ ಉಳುಮೆ ಮಾಡಿ ಹೈರಾಣಾದ ಎತ್ತುಗಳಿಗೆ ಪುನಃಶ್ಚೇತನ ನೀಡುವ ಹಬ್ಬ ಇದು. ರೈತರಿಗೂ ಈ ಹಬ್ಬದ ಆಚರಣೆ ಮನಕ್ಕೆ ಮುದ ಕೊಡುತ್ತದೆ. ರೈತರು ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಾರೆ.ಸಿಹಿಯಾದ ಹೋಳಿಗೆ, ಪಾಯಸ ಖಾದ್ಯಗಳನ್ನು ಮಾಡಿ ಜೋಡೆತ್ತುಗಳಿಗೆ ಪೂಜಿಸಿ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ಇದೆಲ್ಲವೂ ಜೋಡಿ ನಂದಿಗೆ ಕೃತಜ್ಞರಾಗಿರುವ ಪರಿ. ಕುಟುಂಬದ ಸದಸ್ಯರೆಲ್ಲ ಜೊತೆಗೂಡಿ ಊಟ ಸವಿಯುವ ಸಂಪ್ರದಾಯ ರೈತರಲ್ಲಿ ಬೆಳೆದು ಬಂದಿದೆ.

ಸಕಾಲದಲ್ಲಿ ಆಗದ ಮಳೆರಾಯ, ಕೈ ಕೊಟ್ಟ ಬೆಳೆ, ಹೆಚ್ಚಿದ ಬೆಲೆ ಇ್ದ್ದದಾಗಲೂ ರೈತರು ವಿಜೃಂಭಣೆಯಿಂದ ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ.ಎತ್ತುಗಳನ್ನು ಅಲಂಕಾರ ಮಾಡಿ ಖುಷಿ ಪಡುವ ರೈತರಿಗೆ ಹುಣ್ಣಿಮೆಯಲ್ಲಿ ಪ್ರವೇಶ ಮಾಡುವ ಮೃಗಶಿರಾ ಮಳೆ ರೈತರ ಹೊಲಗಳನ್ನು ಉತ್ತು ಬಿತ್ತುವ ಚಟುವಟಿಕೆಗೆ ಹಸಿರು ನಿಶಾನೆ ನೀಡುತ್ತದೆ. ಕಾರ ಹುಣ್ಣಿಮೆ ಆಚರಣೆ ಉತ್ತರ ಕರ್ನಾಟಕದ ರೈತರ ನೈಜ ಆಚರಣೆಗೆ ಜೀವಂತಿಕೆ ನೀಡುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.

ಕೃಪೆ:ಪ್ರಜಾವಾಣಿ ಲೇಖನ: ರಾಸು ಶೃಂಗಾರದ ಕಾರ ಹುಣ್ಣಿಮೆ
Sun, 06/10/2012

ನಾವು ಅಲೆಮಾರಿಗಳು ಬದುಕಿಗಾಗಿ ಹೋರಾಟ, ಅವರು ಶಾಸಕರು ಮಂತ್ರಿ ಪದವಿಗೆ ಕಿತ್ತಾಟ


- ಅಶ್ವ ರಾಮು, ಬುಡ್ಗಜಂಗಮ.
ಇಲ್ಲಿ ಅಲೆಮಾರಿಗಳು ಸಾವು ಮತ್ತು ಬದುಕಿನ ಮಧ್ಯ ಹೋರಾಡುತ್ತಿದ್ದರೆ, ಅಲ್ಲಿ ಸರಕಾರದಲ್ಲಿ ಇಂದು ವಿಧಾನಸೌಧದಲ್ಲಿ ಶಾಸಕರು ತಮ್ಮ ಭದ್ರತೆಗಾಗಿ ಸಚಿವ ಸ್ಥಾನಮಾನಕ್ಕಾಗಿ ಹೋರಾಡುತ್ತಿದ್ದಾರೆ. ಇಡೀ ಸರಕಾರ ಬರೀ ಚುನಾವಣೆಯಲ್ಲೇ ಕಾಲ ಹರಣ ಮಾಡಿದರು.

ಅಲೆಮಾರಿ ಬುಡಕಟ್ಟು ಬುಡ್ಗಜಂಗಮ ಸಮುದಾಯದ ಬದುಕಿನ ಚಿತ್ರ:













ಶನಿವಾರ, ಜೂನ್ 18, 2016

ಅವರೆಕಾಯಿ ಕಳ್ಳರು


-ಎಸ್ ಗಂಗಾಧರಯ್ಯ
sgangadharaiah



ಸೌಜನ್ಯ:http://connectkannada.com
ಹೊಲಗಳ ಅಕ್ಕಡಿ ಸಾಲುಗಳ ಅವರೆಗಿಡದ ಕಾಯಿ ಬಲಿಯ ತೊಡಗಿದಂತೆ ಹಳ್ಳಿಯ ಬಹುತೇಕ ಮಕ್ಕಳಿಗೆ ಅವುಗಳನ್ನು ಕಾಯುವ ಕೆಲಸ ಶುರುವಾಗುತ್ತಿತ್ತು. ಬೆಳಿಗ್ಗೆ ಸ್ಕೂಲಿಗೆ ಹೋಗುವುದಕ್ಕೆ ಮುಂಚೆ, ಸಂಜೆ ಸ್ಕೂಲಿನಿಂದ ಬಂದ ನಂತರ, ಈ ಕೆಲಸವಿರುತ್ತಿತ್ತು. ಅದಕ್ಕಾಗಿ ನಾವುಗಳೇ ಹೊಲದ ಬದುವಿನಲ್ಲೊಂದು ಪುಟ್ಟ ಸೋಗೆಯ ಗುಡಿಸಲನ್ನು ಹಾಕಿಕೊಳ್ಳುತ್ತಿದ್ದೆವು. ಸಂಜೆಯಾಗುತ್ತಿದ್ದಂತೆ ಹೊಲದ ಕಡೆ ನಡೆಯುತ್ತಿದ್ದ ನಮಗೆ, ಆ ಹೊತ್ತಿನಲ್ಲಿ ದನಕರುಗಳನ್ನು ಮೇಸಲು ಹೋದವರು ಹೊಲಗಳಿಗೆ ಅವುಗಳ ಬಾಯಾಕಿಸಿ ಲೇವಡಿ ಮಾಡದ ಹಾಗೆ ನೋಡಿಕೊಳ್ಳುತ್ತಿದ್ದುದು ಹಾಗೂ ಸಂಜೆಯನ್ನು ಮೈಗಾಕಿಕೊಂಡು ಕಂಡವರ ಹೊಲಗಳಲ್ಲಿ ಅವರೆಕಾಯಿಗಳನ್ನು ಕದಿಯುತ್ತಿದ್ದವರ ಮೇಲೆ ನಿಗಾ ಇಡುವುದು ಕಡ್ಡಾಯದ ಕೆಲಸವಾಗಿರುತ್ತಿತ್ತು. ಹಾಗೆ ನೋಡಿದರೆ, ಸಾಮಾನ್ಯವಾಗಿ ಈ ಕಳ್ಳತನವನ್ನು ಮಾಡುತ್ತಿದ್ದವರು ಹೊಲಗಳಿದ್ದವರು ಹಾಗೂ ತಾವೂ ಅವರೆಗಿಡಗಳನ್ನು ಬೆಳೆಯುತ್ತಿದ್ದವರೇ. ಜೊತೆಗೆ, ಹೀಗೆ ಕಾಯಲು ಹೋಗುತ್ತಿದ್ದವರೇ, ತಮ್ಮ ತಮ್ಮ ಹೊಲಗಳನ್ನು ಜೋಪಾನ ಮಾಡಿಕೊಂಡು ಅಕ್ಕಪಕ್ಕದ ಹೊಲಗಳಿಗೆ ಮುಗಿ ಬೀಳುತ್ತಿದ್ದೆವು.

ಕಾರಣ, ಹದವಾಗಿ ಬಲಿತ, ಬೆಂಕಿಯಲ್ಲಿ ಸುಟ್ಟ, ಅವರೆಕಾಯಿಯ ರುಚಿ ಹಾಗೆ ಮಾಡುತ್ತಿತ್ತು. ಈ ಅವರೆ ಕಾಯಿಯ ಕಾಲ ಒಳ್ಳೆ ಚಳಿಗಾಲಕ್ಕೆ ಬರುತ್ತಿದ್ದುದರಿಂದ, ಸಂಜೆ ಹೊಲದ ಹತ್ತಿರ ಹೋಗುತ್ತಿದ್ದಂತೆ ಸಣ್ಣಪುಟ್ಟ ಕಡ್ಡಿಗಳನ್ನೆಲ್ಲಾ ಕೂಡಿಸಿ ಸಣ್ಣಗೆ ಬೆಂಕಿ ಹಾಕಿಕೊಳ್ಳುತ್ತಿದ್ದೆವು.ಆ ಬೆಂಕಿ ಕೆಂಡವಾದ ಮೇಲೆ, ಸೊಗಡವರೆಕಾಯಿಗಳನ್ನು ಅದರ ಮೇಲೆ ಕೆಂಡ ಆರದಂತೆ ಇಷ್ಟಿಷ್ಟೇ ಹಾಕಿ, ಹದವಾಗಿ ಬೇಸುತ್ತಿದ್ದೆವು. ಬೆಂದ ಅವರೆಕಾಯಿಗಳನ್ನು ಒಂದೊಂದೇ ತೆಗೆದು ತಿನ್ನುತ್ತಿದ್ದೆವು. ಆಗ ಅದರ ರುಚಿ, ಚಳಿಗೆ ಅದರ ಬಿಸಿ, ಆ ನಾಟಿ ಅವರೆಯ ಸೊಗಡು, ಇನ್ನಿಲ್ಲದ ಖುಷಿಕೊಡುತ್ತಿತ್ತು. ಆದರೆ, ಇದಕ್ಕೆ ನಮ್ಮ ಹೊಲಗಳ ಅವರೆಕಾಯಿಗಳನ್ನು ಬಳಸುತ್ತಿದ್ದುದು ತುಂಬಾ ಅಪರೂಪಕ್ಕೆ. ಆಗಿನ ಅವರೆಕಾಯಿಯ ಸೊಗಡು ಎಷ್ಟಿರುತ್ತಿತ್ತೆಂದರೆ, ಒಮ್ಮೆ ಅವರೆಕಾಯಿಗಳನ್ನು ಮುಟ್ಟಿದರೆ, ಸೋಪು, ಸೀಗೇಪುಡಿಗಳನ್ನು ಹಾಕಿ ತೊಳೆದುಕೊಂಡರೂ, ಅದರ ಘಮಲು ಮತ್ತು ಜಿಡ್ಡು ಹೋಗುತ್ತಿರಲಿಲ್ಲ. ಕೆಲವೊಮ್ಮೆ ಈ ಘಮಲು ಮತ್ತು ಜಿಡ್ಡುಗಳು ನಮ್ಮ ಕಳ್ಳತನವನ್ನು ಎತ್ತಿ ತೋರಿಸಿ ಬಿಡುತ್ತಿದ್ದವು. ಏಕೆಂದರೆ, ಕತ್ತಲಿನಲ್ಲಿ ಕದಿಯಲು ಪ್ರಾರಂಭಿಸುತ್ತಿದ್ದ ನಮಗೆ, ಅವಸರ ಮತ್ತು ಗಾಬರಿಯಲ್ಲಿ, ಅವರೆಗಿಡಗಳ ಮೇಲೆಲ್ಲಾ ರಾಪಾಡುತ್ತಿದ್ದುದರಿಂದ, ಸೊಗಡು ನಮ್ಮ ಕೈಗಳಿಗೆ ಮಾತ್ರವಲ್ಲದೆ, ಬಟ್ಟೆಗಳಿಗೆಲ್ಲಾ ಆಗಿ ಬಿಡುತ್ತಿತ್ತು. ಮಾಲು ಕಳೆದುಕೊಂಡ ಹೊಲದವರಿಗಿಂತ ಮುಂಚೆ, ನಮ್ಮ ಮನೆಯವರುಗಳಿಗೇ ಈ ಕಳ್ಳತನ ಗೊತ್ತಾಗಿ ಬಿಡುತ್ತಿತ್ತು. ಹಾಗಾಗಿ, ಮನೆಯಿಂದ ಹೊರಡುವಾಗ,’ಬೇಕಾದರೆ ನಮ್ಮ ಹೊಲದಲ್ಲೇ ಒಂದಷ್ಟು ಕಿತ್ತುಕೊಳ್ಳಿ, ಕಂಡವರ ಹೊಲಕ್ಕೆ ಕೈ ಕಾಕಿದ್ರೆ ಅಷ್ಟೇ’ ಅನ್ನುವ ಎಚ್ಚರಿಕೆಯ ಮಾತುಗಳು ಸಾಮಾನ್ಯವಾಗಿರುತ್ತಿದ್ದವು. ಆದರೆ, ಅವರ ಮಾತುಗಳಿಗೆ ವಿನಯವಾಗಿರುತ್ತಿದ್ದದ್ದು, ಕದಿಯಲು ಸಾಧ್ಯವಾಗದ ದಿನಗಳಲ್ಲಿ ಮಾತ್ರ.

ನಾನು ಹೈಸ್ಕೂಲು ಓದುವ ದಿನಗಳಲ್ಲಿ ನನ್ನ ಸಂಬಂಧಿಕರ ಮೂರ್ತಿ ಅನ್ನುವ ಹುಡುಗನೊಬ್ಬ ನಮ್ಮ ಮನೆಯಿಂದಲೇ ನನ್ನದೇ ಕ್ಲಾಸಿಗೆ ಸ್ಕೂಲಿಗೆ ಬರುತ್ತಿದ್ದ. ನಾನು ಮತ್ತು ಮೂರ್ತಿ ಸಂಜೆಯಲ್ಲಿ ಚಳಿಗೆಂದು ಟವೆಲ್ಲುಗಳನ್ನು ಹೆಗಲಿಗೇರಿಸಿಕೊಂಡು, ಚೆಡ್ಡಿ ಜೇಬಿನಲ್ಲಿ ಬೆಂಕಿಪೊಟ್ಟಣವಿರುವುದನ್ನು ಖಾತ್ರಿ ಪಡಿಸಿಕೊಂಡು ಹೋದರೆ, ಮತ್ತೆ ಹೆಚ್ಚೂ ಕಡಿಮೆ ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದೆವು. ಕತ್ತಲಾಗುತ್ತಿದ್ದಂತೆ ನನಗೆ ಪುಕ್ಕಲು ಶುರುವಾಗುತ್ತಿತ್ತು. ಆದರೆ ಮೂರ್ತಿಗೆ ನನಗಿಂತ ಧೈರ್ಯ. ನಮಗೆ ಊರಿನ ಪಕ್ಕದಲ್ಲಿ ಎರಡು ಎಕರೆಯಷ್ಟು ‘ಮಳ್ಳೊಲ’ ಅಂತ ಕರೆಯುತ್ತಿದ್ದ ಹೊಲವಿತ್ತು. ಸಾಮಾನ್ಯವಾಗಿ ಈ ಹೊಲದಲ್ಲಿ ಅವರೆಕಾಯಿಗಿಡವನ್ನು ಹೆಚ್ಚಾಗಿ ಹಾಕುತ್ತಿದ್ದರು. ಅಲ್ಲಿ ಅವರೆಯ ಫಸಲು ಚೆನ್ನಾಗಿ ಬೆಳೆಯುತ್ತಿದ್ದುದು ಒಂದು ಕಾರಣವಾದರೆ, ಜಾಸ್ತಿ ಲೇವಡಿ ಆಗುವುದಿಲ್ಲ, ಅನ್ನುವುದು ಮತ್ತೊಂದು ಕಾರಣವಾಗಿತ್ತು. ಕೊಂಚ ದೂರಲ್ಲಿ ಮನೆಗಳಿದ್ದುದರಿಂದ, ಹೆಚ್ಚುಕಮ್ಮಿ ಆದರೆ ಕೂಗಾಕಿದರೆ ಸಾಕು, ಯಾರಾದರೂ ಬಂದು ಬಿಡುತ್ತಾರೆ ಅನ್ನುವ ಕಾರಣ ಕೂಡ ನಮ್ಮ ಕಾವಲಿಗೆ ಧೈರ್ಯ ತುಂಬುತ್ತಿತ್ತು.

ಹೀಗೆ ಸೊಗಡವರೆಯ ಸವಿಯನ್ನೂ, ಕೆಲವೊಮ್ಮೆ ಸಂಜೆಯ ಚಂದಿರನ ಸೊಬಗನ್ನೂ ಸವಿಯುತ್ತಾ, ಈ ಕಾವಲು ಕೆಲಸ ಅನ್ನುವುದು ವರ್ಷವಿಡೀ ಹೀಗೆ ಇದ್ದರೆ ಎಷ್ಟು ಚಂದ ಅಂದುಕೊಳ್ಳುತ್ತಿದ್ದೆವು. ಇಲ್ಲವಾದಲ್ಲಿ ಕನಿಷ್ಟ ಊಟದ ಹೊತ್ತಿನವರೆಗಾದರೂ ನಾವು ಇಷ್ಟವಿರಲಿ, ಬಿಡಲಿ ಪುಸ್ತಕಗಳ ಮುಂದೆ ಕೂರಬೇಕಿತ್ತು. ಆದರೆ ಹೀಗೆ ನಾವು ಕಾವಲಿಗೆ ಬಂದ ದಿನಗಳಲ್ಲಿಯೂ ಆಗೊಮ್ಮೆ ಈಗೊಮ್ಮೆ ನಮ್ಮ ಹೊಲದಲ್ಲಿಯೇ ಕಳ್ಳತನವಾಗಿ ಬಿಡುತ್ತಿತ್ತು. ಆಗ ಮಾತ್ರ ಮನೆಯವರಿಗೆ ನಮ್ಮ ಕಾವಲಿನ ಮೇಲೆ ಅನುಮಾನ ಬರುತ್ತಿತ್ತು. ಅವತ್ತೊಂದು ದಿನ ಸಂಜೆಗೇ ಕಾವಲಿಗೆಂದು ನಾವಿಬ್ಬರೂ ಹೋಗಿದ್ದರೂ, ಬೆಳಿಗ್ಗೆ ನೋಡಿದರೆ, ನಮ್ಮ ಗುಡಿಸಲಿನ ಎದುರಿಗೆ ಆಚೆ ಬದಿಯ ಬದುವಿನ ಪಕ್ಕದ ಒಂದೆರಡು ಸಾಲುಗಳಲ್ಲಿ ಕಾಯಿ, ಈಚು ಅಂತ ನೋಡದೆ ನುಣ್ಣಗೆ ತರೆದುಕೊಂಡು ಹೋಗಿ ಬಿಟ್ಟಿದ್ದರು. `ನೀವು ಇನ್ನೊಬ್ರುದಾಗೆ ಕದ್ಯಾಕೆ ಹೋದಾಗ, ಅವ್ರು ನಿಂಬುದ್ರಾಗೆ ಎಗರಿಸ್ಕಂಡು ಹೋಗ್ವರೆ ಬಿಡು’ ಅಂದ ಅಜ್ಜನ ಹುಸಿನಗುವಿನ ವಗ್ಗರಣೆಯ ಮಾತುಗಳು ನಮ್ಮನ್ನು ಇನ್ನೂ ಪೇಚಿಗೆ ಸಿಕ್ಕಿಸಿದ್ದವು. ಇದು ಹೇಗಾದರೂ ಮಾಡಿ ಕಳ್ಳನನ್ನು ಹಿಡಿಯಲೇ ಬೇಕು ಅನ್ನುವ ಹಠಕ್ಕೆ ತಳ್ಳಿತ್ತು.

ಅದಾದ ಮೇಲೆ ಕೆಲವು ದಿನ ದಿನ ನಮ್ಮ ಕಾಯುವಿಕೆಯ ತಂತ್ರವನ್ನು ಬದಲಿಸಿಕೊಂಡೆವು. ಹೊಲದ ಬಳಿ ಹೋಗುತ್ತಿದ್ದಂತೆ ಬೆಂಕಿಯನ್ನು ಹಾಕಿ, ಕಾಯಲು ಬಂದಿದ್ದಾರೆ ಅನ್ನುವ ಸೂಚನೆಯನ್ನು ಕೊಟ್ಟು, ಅದರ ಮುಂದೆ ಕೂರದೆ, ಅಲ್ಲೇ ಹೊಲದ ಮತ್ತೊಂದು ತುದಿಯ ಬದುವಿನಲ್ಲಿದ್ದ ಮುರುಕು ಹಲಸಿನ ಮರವನ್ನು ಹತ್ತಿ ಕೂರುತ್ತಿದ್ದೆವು.ಹೀಗೆ ಒಂದು ದಿನ ಕಾಯುತ್ತಿದ್ದಾಗ, ಇನ್ನೇನು ಮನೆಯ ಕಡೆ ಹೊರಡಬೇಕು ಅನ್ನುತ್ತಿರುವಾಗ, ನಾವು ಕೂತಿದ್ದ ಹಲಸಿನ ಮರದ ಎದುರಿಗೆ ಕೊಂಚ ದೂರದಲ್ಲಿ, ಒಂಚೂರು ಮುಖವಷ್ಟೇ ಕಾಣುವಂತೆ, ಮೈ ತುಂಬಾ ರಗ್ಗೊಂದನ್ನು ಹೊದ್ದಿದ್ದ ಆಕೃತಿಯೊಂದು ನಮ್ಮ ಗುಡಿಸಲು ಕಡೆಯಿಂದ ಹೊಲದೊಳಕ್ಕೆ ಪ್ರವೇಶಿಸಿತು. ಅವತ್ತು ಸಂಜೆಗೇ ಚಂದ್ರ ಬಂದಿದ್ದರಿಂದ ಹಲಸಿನ ಮರದ ಕೊಂಬೆಗಳಲ್ಲಿ ಕೂತಿದ್ದ ನಮಗೆ ಚೆನ್ನಾಗಿ ಕಾಣಿಸುತ್ತಿತ್ತು. ಹಾಗೆ ಬಂದ ಆ ಆಕೃತಿ, ಸುತ್ತ ಮುತ್ತ ಕಣ್ಣಾಡಿಸುತ್ತಾ, ಹೆಚ್ಚೂ ಕಡಿಮೆ ಹೊಲದ ನಡೂಮಧ್ಯದವರೆಗೂ ಬರುತ್ತಾ, ಅವಸರ ಅವಸರವಾಗಿ ಕೈಗೆ ಸಿಕ್ಕ ಅವರೆಕಾಯಿಗಳನ್ನು ಕೊಯ್ಯುತ್ತಾ, ಬಗಲಿನಲ್ಲಿದ್ದ ಚೀಲವೊಂದಕ್ಕೆ ಹಾಕಿಕೊಳ್ಳುತ್ತಿತ್ತು. ತಕ್ಷಣಕ್ಕೆ ನಮಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಒಬ್ಬರ ಮುಖವನ್ನೊಬ್ಬರು ಸುಮ್ಮನೆ ನೋಡಿಕೊಂಡೆವು.

ಕಡೆಗೆ ಮೂರ್ತಿಯೇ ಧೈರ್ಯ ಮಾಡಿ, ನಾನು ಅವನ ಹಿಂದುಗಡೆಯಿಂದ ಬರುತ್ತೇನೆ, ನೀನು ಅವನ ಪಕ್ಕದಲ್ಲಿ ಅಕ್ಕಡಿ ಸಾಲುಗಳ ನಡುವಲ್ಲಿ ಹುದುಗಿಕೊಂಡು ಬಾ, ಅಂತ ಹೇಳಿದವನೇ ಮೆಲ್ಲಗೆ ಮರದಿಂದ ಕೆಳಗಿಳಿದು ಹೋದ. ನಾನೂ ಇಳಿದವನೇ ಹಲಸಿನ ಮರದ ನೆರಳಿನ ಅಕ್ಕಡಿ ಸಾಲುಗಳ ನಡುವೆ ಕೂತುಕೊಂಡು ಹಾಗೇ ಮೆಲ್ಲಗೆ ತೆವಳ ತೊಡಗಿದೆ. ಆ ಕಳ್ಳ ಮಾತ್ರ ಇನ್ನೂ ಕದಿಯುವ ಧಾವಂತದಲ್ಲೇ ಇದ್ದ. ಮೂರ್ತಿ ಕಳ್ಳನ ಹತ್ತಿರತ್ತಿರಕ್ಕೇ, ಅಕ್ಕಡಿ ಸಾಲುಗಳ ನಡುವೆ ಅಡಗಿಕೊಂಡು ಹೋಗುತ್ತಿದ್ದರೆ, ನಾನು ಮಾತ್ರ ಆಮೆಯಂತೆ ಮೆಲ್ಲಗೆ ತೆವಳುತ್ತಿದ್ದೆ. ಇದಕ್ಕೆ ನನ್ನೊಳಗಿನ ಭಯವೂ ಕಾರಣವಾಗಿತ್ತು. ಮೂರ್ತಿ ಇನ್ನೇನು ಹತ್ತಿರಕ್ಕೆ ಹೋಗಿ, ಅವನ ಮೇಲೆ ಹಾರಿ ಹಿಡಿದುಕೊಳ್ಳಬೇಕು ಅನ್ನುವಷ್ಟರಲ್ಲಿ, ಕಳ್ಳನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೇ ಉಸುರಿಗೆ ಓಡತೊಡಗಿದ. ಮೂರ್ತಿ ಜೋರಾಗಿ ನನ್ನನ್ನು ಆ ಕಡೆಯಿಂದ ಬಾರೋ ಅಂತ ಕೂಗುತ್ತಾ, ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಅವರತ್ತ ಓಡತೊಡಗುವ ಹೊತ್ತಿಗೆ ಅವರಿಬ್ಬರೂ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. ‘ಬಡ್ಡಿ ಮಗ ತಪ್ಪಿಸ್ಕಂಡ್ ಬಿಟ್ಟ’ ಅಂತ ಏದುಸಿರು ಬಿಡುತ್ತಾ, ಕೈಯ್ಯಲ್ಲಿದ್ದ ಕಳ್ಳನ ರಗ್ಗನ್ನು ತೋರಿಸಿದ. ‘ಈ ರಗ್ಗು ಇರಲಿಲ್ಲ ಅಂದಿದ್ರೆ, ಸಿಗಾಕ್ಕಂಡು ಬಿಡ್ತಿದ್ದ, ಕೊನೆ ಪಕ್ಷ ಯಾರು ಅಂತನಾದ್ರೂ ಗೊತ್ತಾಗಿ ಬಿಡ್ತಿತ್ತು’ ಅಂತ ಒಂದೇ ಉಸುರಿಗೆ ಬಡಬಡಿಸಿದ.

ಮಾರನೆಯ ದಿನ, ಆ ರಗ್ಗು ಯಾರದು, ಅದನ್ನು ಹೊದ್ದಿದ್ದ ಕಳ್ಳ ಯಾರು ಎಂಬುದೂ ಗೊತ್ತಾಯ್ತು. ಆದರೆ ಅದನ್ನು ಹೇಳುವ ಧೈರ್ಯ ಮಾತ್ರ ನಮಗಿರಲಿಲ್ಲ. ಏಕೆಂದರೆ, ನಾವು ಆಗಾಗ ನಮ್ಮ `ಸುಟ್ಟವರೆ’ಗಾಗಿ ಕದಿಯುತ್ತಿದ್ದುದು ಅವನ ಹೊಲದಲ್ಲಿಯೇ.

ಜಾನಪದ ನಿಂತ ನೀರಲ್ಲ...

ಜಾನಪದ ಪರಿಧಿಯೊಳಗೆ ಅಡಗಿರುವ ಎಲ್ಲವೂ ಜನಪದ

-ಪದ್ಮ ಶ್ರೀಧರ

    ‘ಜಾನಪದ ಜನವಾಣಿಯ ಬೇರುಕವಿವಾಣಿಯ ಹೂ’ ಎಂಬ ಹಾಡುವಕ್ಕಿ ಶ್ರೀಯವರ ನುಡಿಯಲ್ಲಿ ಜಾನಪದ ಸ್ವರೂಪಅರ್ಥಗರ್ಭಿತವಾಗಿ ಅಡಕವಾಗಿದೆ. ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳಿಂದ ರಚಿತವಾದ ಜಾನಪದವುತುಂಬಾ ಪ್ರಾಚೀನವೂಆಧುನಿಕ ಬದುಕಿಗೆ ಪ್ರೇರಕವೂ ಆಗಿದೆಸಮಸ್ತ ಜೀವನಾನುಭವದ ಮೊತ್ತವಾದ ಜನಪದವು ಹಲವರಅನುಭವವು ಒಬ್ಬನ ಜಾಣ್ಮೆಯಿಂದ ಕಲಾತ್ಮಕ ರೂಪವನ್ನು ಪಡೆದು ಎಲ್ಲರ ಸೊತ್ತಾಗಿದೆಜನಪದ ಸಾಹಿತ್ಯರೂಪಗಳುಸಂಸ್ಕೃತಿಯಲ್ಲಿ ರೂಪುಗೊಂಡು ಪಕ್ವವಾಗಿವೆ.
   ಸಮಾಜ ಸಮ್ಮತಿಸಿದ ಕಲಿಕೆಯಿಂದ ಬಂದ ನಡವಳಿಕೆಗಳೆಲ್ಲವೂ ಸಂಸ್ಕೃತಿಯ ಅಂಗವೆಂದು ಪರಿಗಣಿಸುವುದರಿಂದ ಜಾನಪದವುಸಂಸ್ಕೃತಿಯ ಪ್ರಮುಖ ಅಂಗವೇ ಆಗಿದೆಮಾನವ ತನ್ನ ಬಗೆಗೆಮನುಕುಲದ ಬಗೆಗೆಒಟ್ಟು ಸಮುದಾಯದ ಬಗೆಗೆಸಮಷ್ಟಿಬದುಕಿನ ಬಗೆಗೆ,  ಲೋಕದ ಬಗೆಗೆ ತಳೆದ ನಿಲುವುಗಳುಶೇಖರಗೊಂಡಿರುವ ಪರಂಪರಾಗತ ತಿಳಿವೇ ಜಾನಪದಕೇಳಿದ್ದನ್ನುನೆನಪಿನಲ್ಲಿಡುವುದುನೋಡಿದ್ದನ್ನು ಅನುಕರಣೆ ಮಾಡುವುದುಮೌಖಿಕ ಪರಂಪರೆಯಲ್ಲಿ ಅನೂಚಾನವಾಗಿ ಸಾಗಿಬರುವನಡವಳಿಕೆಗಳ ಒಟ್ಟು ಮೊತ್ತವೇ ಜಾನಪದ ಸಾಮಗ್ರಿಮಾನವನ ಬದುಕಿನ ಸಮಸ್ತವೂ ಅದರಲ್ಲಿ ಸಮಾವೇಶವಾಗುತ್ತದೆ.
   ಮಾನವ ತನ್ನ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಯಿಂದ ನಿಸರ್ಗವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಜ್ಞಾನ ವಿಜ್ಞಾನವನ್ನುಸಂವರ್ಧನೆ ಮಾಡಿಕೊಂಡು ಸುಖ ಸಂತೋಷವನ್ನು  ಅನುಭವಿಸತೊಡಗಿದನುಮಾತು-ಕಥೆಹಾಡು-ಪಾಡುಕುಣಿತ-ಮೆರೆತ,ಹಬ್ಬ-ಹರಿದಿನಆಟೋಟಗಳು ನಂಬಿಕೆ ಸಂಪ್ರದಾಯಗಳುಆಚರಣೆ ಆರಾಧನೆಗಳೆಲ್ಲವನ್ನೂ ಬದುಕಿನೊಂದಿಗೆ ಬೆಸೆದುಕೊಂಡನು.ಬದುಕಿನ ಪ್ರತಿಯೊಂದು ಕ್ರಿಯೆಯೂ ಸಹ್ಯವಾಗುವಂತೆ ತನ್ನನ್ನು ತಾನು ತೊಡಗಿಸಿಕೊಂಡನುಅದರ ಫಲವೋ ಎಂಬಂತೆ ಮೌಖಿಕ,ವಾಚಿಕಕಂಠಸ್ಥಥೋಡೀ ಸಂಪ್ರದಾಯವು ಎಲ್ಲಿಯೂ ಸ್ಥಗಿತವಾಗದೆ ಪರಂಪರಾಗತವಾಗಿ ಮುಂದುವರಿಯಿತುಪುರಾಣಐತಿಹ್ಯ,ಗೀತೆಕಥೆಗಾದೆಒಗಟುಲಾವಣಿಭಾಷೆನಂಬಿಕೆವಿಭಿನ್ನ ಆಚರಣೆವೈದ್ಯವ್ಯವಸಾಯಅಡಿಗೆಬೇಟೆಆಟಮಂತ್ರ-ಮಾಟ ಮುಂತಾದ ಕಲೆಗಳು ಸಮೃದ್ಧವಾಗಿ ಬೆಳೆಯುತ್ತಾಅವಿನಾಭಾವವಾಗಿ ಬದುಕಿನೊಂದಿಗೆ ಬೆರೆತು ಪಿತ್ರಾರ್ಜಿತ ಆಸ್ತಿಯಂತೆಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿತು
     ಬಾಳಪಯಣದ ನೋವು-ನಲಿವುಸೋಲು-ಗೆಲುವುಎತ್ತರ-ಬಿತ್ತರಸುಖ-ದುಃಖಕಷ್ಟ-ಕಾರ್ಪಣ್ಯ ಎಲ್ಲಾ ಭಾವನೆಗಳುಅನುಭವದ ಮೂಸೆಯಲ್ಲಿ ಬೆಂದು ಪರಿಶುದ್ಧವಾಗಿ ಅಲ್ಲಲ್ಲಿಯ ಪರಿಸರಕ್ಕೆ ಅನುಗುಣವಾಗಿ ಹಾಡುಹಸೆಕಥೆಕುಣಿತಮೆರೆತ,ಗಾದೆಒಗಟು ಮುಂತಾದ ರೂಪವನ್ನು ತಳೆದು ಆಯಾಯ  ಜನಪದ ಸಮುದಾಯದ ಆತ್ಮಚರಿತ್ರೆಯಂತಾಯಿತುಜನಪದವುಅಪ್ಪಟ ಸಂಸ್ಕೃತಿಯ ಪ್ರತಿನಿಧಿಯಂತೆ ರೂಪು ತಳೆಯಿತು.     
    ಅನಾದಿ ಕಾಲದಿಂದಲೂ ಭಾರತದಲ್ಲಿ ‘ಜನಪದ’ ಎಂಬ ಪದ ಬಳಕೆಯಲ್ಲಿದೆಬುದ್ಧಮಹಾವೀರರ ಕಾಲದಲ್ಲಿ ರಾಷ್ಟ್ರಗಳನ್ನುಜನಪದವೆಂದು ಪರಿಭಾವಿಸಿದ್ದರುಜನಪದ ಎನ್ನುವುದು ಸಮುದಾಯಜನ ಸಮೂಹಜನ ಸಮುದಾಯಗಳನ್ನು ಒಳಗೊಂಡಆಡಳಿತವೆಂದು ಅರ್ಥೈಸಬಹುದುಕೋಸಲ ಜನಪದವಿದರ್ಭ ಜನಪದಕರ್ನಾಟಕ ಜನಪದ ಇತ್ಯಾದಿ.ಕವಿರಾಜಮಾರ್ಗದಲ್ಲಿಯೂ  ಪದ ಬಳಕೆಯಾಗಿದೆ.
                                          ಕಾವೇರಿಯಿಂದ ಮಾ ಗೋ
                                          ದಾವರಿವರಮಿರ್ದ ನಾಡದಾ ಕನ್ನಡದೊಳ್ 
                                          ಭಾವಿಸಿದ ‘ಜನಪದಂ’ ವಸು
                                          ಧಾವಳಯವಿಲೀನ ವಿಶದ ವಿಷಯವಿಶೇಷಂ
   ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಜನ ಸಮುದಾಯವನ್ನು ‘ಜನಪದವೆಂದು ಕರೆಯಬಹುದುಸಂಕೀರ್ಣ ಸ್ವಭಾವದನಾಗರಿಕ ಸಮಾಜದಲ್ಲಿ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಮೂಲ ಸಂಸ್ಕೃತಿಯನ್ನು ಪರಂಪರಾಗತವಾಗಿ ಒಯ್ಯುವಸಾಮಾಜಿಕ ವರ್ಗ ಅಥವಾ ಸಂಪ್ರದಾಯದೊಂದಿಗೆ ಹೆಣೆದುಕೊಂಡಿರುವ ಒಂದು ಗೊತ್ತಾದ ವರ್ಗದ ಜನಸಾಮಾನ್ಯರ ಸಮೂಹನ್ನುಜನಪದ ಎನ್ನಬಹುದುಒಂದು ಜನಾಂಗಕೆಳಗಿನ ಸ್ತರಸಂಕೀರ್ಣ ಸ್ವಭಾವದ ನಾಗರಿಕ ಸಮಾಜದ ಹಳೆಯ ಗುಂಪು,ಮುಂತಾಗಿಯೂ ಅರ್ಥೈಸುತ್ತಾರೆFolk ಪದಕ್ಕೆ ಸಂವಾದಿಯಾಗಿ ‘ಜನಪದ’ ಎಂಬ ಪದವನ್ನು ಡಾ ಹಾ.ಮಾನಾಯಕ್ ಬಳಕೆಗೆತಂದಿದ್ದಾರೆ
ಕನ್ನಡದಲ್ಲಿ ಜನಪದರು ಎಂದರೆ ಗ್ರಾಮೀಣರುಹಳ್ಳಿಗಾಡಿನ ಜನರುಹಳ್ಳಿಗರು ಮುಂತಾಗಿ ಅತ್ಯಂತ ಸರಳವಾಗಿ ಹೇಳಿಬಿಡಬಹುದುಜನಪದ ಎಂಬ ಪದವು ಎಷ್ಟು ಸರಳವಾಗಿ ಕಾಣುತ್ತದೆಯೋ ಅಷ್ಟೇ ಸಂಕೀರ್ಣವೂ ಆಗಿದೆ
ಆಕ್ಸ್ಫರ್ಡ್ ಅರ್ಥಕೋಶದ ಪ್ರಕಾರ ಜನಪದವೆಂದರೆ
  • ಒಂದೇ ಮೂಲಕ್ಕೆ ಸೇರಿದತಮ್ಮದೇ ಆದ ಪ್ರದೇಶ ಅಥವಾ ರಾಜ್ಯವನ್ನು ಪಡೆದ ಒಂದು ಜನಾಂಗದ ಗುಂಪು,ಮೂಲ ನಿವಾಸಿಗಳ ಸ್ಥಿತಿಯಿಂದ ರಾಜಕೀಯ ಅಥವಾ ಸಾಮಾಜಿಕ ವ್ಯವಸ್ಥೆಯತ್ತ ಹೊರಳುತ್ತಿರುವ ಜನ.
  • ಜನಾಂಗಭಾಷೆಧರ್ಮಗಳಿಗೆ ಬದ್ಧರಾದದ ಒಂದು ಪ್ರಜಾ ಸಮೂಹದ ಸಮಾಜದ ಕೆಳಗಿನ ಸ್ತರತನ್ನದೇ ಆದಒಂದು ಸಮೂಹದ ಗುಣವನ್ನು ಪಡೆದುಕೊಂಡು ತನ್ನದೇ ಸಂಪ್ರದಾಯಕಲೆಕೈಗಾರಿಕೆಐತಿಹ್ಯನಂಬಿಕೆಗಳನ್ನುತಲೆಮಾರಿಗೆ ಬದಲಾಗದಂತೆ ಉಳಿಸಿಕೊಂಡು ಬಂದ ಜನ ಸಮೂಹ.
  • ಒಂದು ರಾಜ್ಯದ ಒಂದು ದೈವದ ಒಂದು ಮತದ ಒಬ್ಬ ಸರ್ವಾಧಿಕಾರಿಯ ಒಬ್ಬ ನಾಯಕನ ಪ್ರಭಾವ ವಲಯಕ್ಕೆಅಧಿಕಾರ ವ್ಯಾಪ್ತಿಗೆ ಒಳಗಾದ ಜನತೆಯ ಮೊತ್ತ.
  • ದೇಶದ ಜನಪದ ಎಂದು ಕರೆಸಿಕೊಳ್ಳುವ ಪ್ರಜಾಸಮೂಹ.
  • ಒಂದು ಕುಟುಂಬದ ಸದಸ್ಯರು ಬಂಧು-ಬಳಗ ಇತ್ಯಾದಿ.
     ಸಮಾನ ಅಂಶ ಅಥವಾ ಅಂಶಗಳುಳ್ಳ ಜನರ ಗುಂಪನ್ನು ‘ಜನಎನ್ನಬಹುದುತಮ್ಮದೇ ಆದ ಪರಂಪರೆಯನ್ನು ಹೊಂದಿದಧರ್ಮಮತಜಾತಿಭಾಷೆಕಸುಬು ಯಾವುದಾದರೂ ಸಮಾನ ಅಂಶವಾಗಿರಬಹುದುಪರಂಪರೆ  ಗುಂಪಿನ ಆರಾಧನೆ,ಆಚಾರ ವಿಚಾರನಂಬಿಕೆಧೋರಣೆಗಳನ್ನು ವ್ಯಕ್ತಪಡಿಸುತ್ತದೆಇದು ತಾವು ಇನ್ನೊಂದು ಗುಂಪಿನವರಿಗಿಂತ ಬೇರೆ ಎನ್ನುವಸಮೂಹ ಪ್ರಜ್ಞೆಯನ್ನು ಮೂಡಿಸುತ್ತದೆದೇವರಿಗೆ ನಡೆದುಕೊಳ್ಳುವುದುಆಚರಿಸುವ ಆರಾಧನೆಉತ್ಸವಹಬ್ಬಹರಿದಿನಗಳು,ಮದುವೆಯ ಪದ್ಧತಿಗಳನ್ನು ಒಳಗೊಂಡಂತೆ ಪುರಾಣಐತಿಹ್ಯಕಟ್ಟುಕಥೆಕಥೆಚೇಷ್ಟೆಗಾದೆಒಗಟುಧಾರ್ಮಿಕವ್ಯಾವಹಾರಿಕಹಾಗೂ ಮೂಢನಂಬಿಕೆಗಳುಹಾಡುಕುಣಿತಆಟಪಾಟಬಯಲಾಟಸಂಗೀತಔಷಧಿಹೆಸರುಉಪನಾಮಉಪಭಾಷೆ,ಬೈಗಳುಅವಮಾನಿಸುವಾಗಅಭಿನಂದಿಸುವಾಗಆಣೆಮಾಡುವಾಗಬೇಟಿಯಾದಾಗಅಗಲುವಾಗ ಹೇಳುವ ಮಾತುಗಳುಇತ್ಯಾದಿ ಇತ್ಯಾದಿ ಅನೇಕ ವಿಚಾರಗಳನ್ನು ಪ್ರತಿ ಗುಂಪಿನಲ್ಲೂ ಕಾಣಬಹುದುಒಂದು ನಿರ್ದಿಷ್ಟ ಜನಸಮುದಾಯದಲ್ಲಿತಲೆಮಾರಿನಿಂದ ತಲೆಮಾರಿಗೆ ಮೌಖಿಕ ರೂಪದಲ್ಲಿ ಸಾಗಿಬರುವ ಸಂಗೀತಸಾಹಿತ್ಯಕರಕುಶಲ ಕಲೆನಡವಳಿಕೆಸಂಪ್ರದಾಯ,ಆಚರಣೆಆಟಪಾಠಮೊದಲಾದ ಜನಪದದ ಸಮಗ್ರ ಮೊತ್ತವೇ ಜಾನಪದ’ 
ಪರಂಪರಾನುಗತವಾಗಿ ಬಂದ ಆಚಾರವಿಚಾರಪದ್ಧತಿರೂಢಿಉಡುಗೆ ತೊಡುಗೆಆಟ ಪಾಠಹಾಡು ಹಸೆ ಎಲ್ಲವೂ ಜನಪದ. ಎಲ್ಲವನ್ನೂ ಒಳಗೊಂಡಿದ್ದು ಜಾನಪದಹಾಮಾನಾಯಕರು ಹೇಳುವಂತೆ ಜಾನಪದ ಒಂದು ಚಕ್ರದ ಪರಿಧಿಯಾದರೆಅದರಒಳಗಿನ ಪ್ರತಿಯೊಂದು ಪುಟಿಗಳು(ಅರಗಳುಜನಪದಅಂದರೆ ಜಾನಪದ ಪರಿಧಿಯೊಳಗೆ ಎಲ್ಲಾ ಜನಪದವೂ ಅಡಕವಾಗಿದೆ.
ಜಾನಪದ ಎಂದರೇನುಎಂಬ ಪ್ರಶ್ನೆಗೆ ಖಚಿತವಾದ ವ್ಯಾಖ್ಯಾನವನ್ನು ವಿದ್ವಾಂಸರು ಮಾಡುವುದಿಲ್ಲಪ್ರಾರಂಭದ ದಿನಗಳಲ್ಲಿಜನಪ್ರಿಯ ನಡಾವಳಿ (Popular Antiquities), ಜನಪ್ರಿಯ ಸಾಹಿತ್ಯ (Popular literatureಹಿಂದಿನ ನಾಶಹೊಂದಿದ ಗುರುತುಗಳು (Fast perishing Relies) ಎಂದು ಜಾನಪದವನ್ನು ಕರೆದಿದ್ದಾರೆ.
ಬಿ.ಎಂ.ಶ್ರೀಕಂಠಯ್ಯ : ಮೊದಲು ಹುಟ್ಟಿದುದು ಜನವಾಣಿಅದು ಬೆಳೆದುಪರಿಷ್ಕೃತವಾಗಿ ವೃದ್ಧಿಯಾದುದು ಕವಿವಾಣಿಜನವಾಣಿಬೇರುಕವಿವಾಣಿ ಹೂವುಶಾಸ್ತ್ರಕಾವ್ಯಗಳ ಪರಿಚಯವೇ ಇಲ್ಲದ ಜನಸಾಮಾನ್ಯರೆಲ್ಲರೂ ಹಾಡಿನ ಮಟ್ಟನ್ನು  ಅಂದರೆ ಅಷ್ಟುಮಟ್ಟಿಗೆ ಛಂದಸ್ಸನ್ನು ಬಲ್ಲವರು.’

ವರಕವಿ ಬೇಂದ್ರೆ : ಜೀವನವೇ ದೇವತೆಯಾದತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡುಗಳ ಕರ್ತೃಗಳಾದ ಹೆಣ್ಣುಮಕ್ಕಳು ನಮ್ಮ ತಾಯಿತಂಗಿಯರುಅಮ್ಮ ಅಕ್ಕಂದಿರುಮಡದಿ ಮಕ್ಕಳು ನಿಜ ಅರ್ಥದಲ್ಲಿ ಋಷಿಗಳುಹಾಗೆ ನೋಡಿದರೆ ಅವರದೇನಿಜವಾದ ಕಾವ್ಯ ಜನಪದ ವೇದವೇ ಎಲ್ಲ ಕನ್ನಡಿಗರಿಗೂ ಸಾಮಾನ್ಯವಾದ ತಾಯ ಮೊಲೆಹಾಲು ಎಂಬುದು ಇದನ್ನೋದಿದವರಅನುಭವಕ್ಕೆ ಬಾರದೆ ಇರದು.’
ದೇವುಡು ನರಸಿಂಹ ಶಾಸ್ತ್ರಿಗಳು : ಪ್ರಾಚೀನ ಕಾಲದವರ ಮನೋಭಾವನೆಯ ಪ್ರಕಟರೂಪವೇ  ಜನತೆಯ ಸಂಸ್ಕೃತಿಜನತೆಯಸಂಸ್ಕೃತಿಯು ಅಪಂಡಿತನ ಪ್ರಪಂಚವನ್ನೆಲ್ಲ ಒಳಗೊಂಡಿದೆ.
ದೇಜವರೇ ಗೌಡ : ಜಾನಪದ ಸಂಪ್ರದಾಯ ಒಂದು ಜನಸಮುದಾಯದ ಸಮಷ್ಟಿ ಸೃಷ್ಟಿಸಾಮಾಜಿಕ ಜೀವನದ ಸಂಕೇತ,ರಾಷ್ಟ್ರೀಯ ಸಂಸ್ಕೃತಿಯ ತಾಯಿಬೇರುಅದು ಜನಸಾಮಾನ್ಯರ ಶ್ರುತಿಯೂ ಅಹುದುಸ್ಮೃತಿಯೂ ಅಹುದು
ವ್ಯಾಪಕವೂ ವಿಶ್ವಮೌಲಿಕವೂ ಆದ ವಿದ್ವಾಂಸರ  ಅಭಿಪ್ರಾಯಗಳು ಅವಿನಾಶಿಯೂ ಚಲನಶೀಲವೂ ಆದ ಜಾನಪದವನ್ನುಸೂತ್ರೀಕರಿಸಿ ಹೀಗೆ ಹೇಳಬಹುದು.
  • ಜಾನಪದ ನಿಂತ ನೀರಲ್ಲಸ್ವಾರ್ಥಮೂಲವಾದದ್ದೂ ಅಲ್ಲಸಂಚಲನೆಪರಿವರ್ತನೆಸ್ವೀಕಾರಕೊಳ್ಳುಕೊಡು ಅದರಮೂಲ ಮಂತ್ರ.
  • ಜಾನಪದ ಎನ್ನುವುದು ಒಂದು ಜನತೆಯ ಗ್ರಂಥಸ್ಥವಲ್ಲದ ಮೊತ್ತ ಹಾಗೂ ಅದನ್ನು ಕುರಿತ ವಿಜ್ಞಾನಅಂದರೆಸಂಪ್ರದಾಯವನ್ನು ಕುರಿತ ವಿಜ್ಞಾನ.
  • ಮೌಖಿಕತೆಪರಂಪರೆಅನಾಮಧೇಯತೆ ಜಾನಪದದ ಮುಖ್ಯ ಲಕ್ಷಣಗಳುಜಾನಪದದಲ್ಲಿ ಕಂಠಸ್ಥ ಸಂಪ್ರದಾಯಮತ್ತು ಅದರ ಪ್ರಭಾವ ಪ್ರಮುಖವಾಗಿದೆ.
  • ಕೇಳುವುದು-ನೆನಪಿಡುವುದುನೋಡುವುದು-ಅನುಕರಣೆ ಮಾಡುವುದು – ಎರಡು ಸೂತ್ರಗಳ ಮೇಲೆ ಜಾನಪದನಿಂತಿರುತ್ತದೆ.
  • ಜಾನಪದವು ವ್ಯಕ್ತಿಯ ಸೃಷ್ಟಿಯಾಗಿರದೆ ಸಮಷ್ಟಿಯ ಸೃಷ್ಟಿಯಾಗಿರುತ್ತದೆಒಬ್ಬನ ಸೃಷ್ಟಿ ಜನಪದರ ಕೈಯಲ್ಲಿಪುನರ್ಸೃಷ್ಟಿಯಾಗುತ್ತದೆ.
  • ಜಾನಪದ ಪ್ರಾಚೀನ ಹಾಗೂ ನಾಗರಿಕ ಸಮಾಜಗಳೆರಡರಲ್ಲೂ ಇರುತ್ತದೆ.

    ಭಾರತದಲ್ಲಿ ಜಾನಪದದ ಸಂಗ್ರಹ ಮತ್ತು ಅಧ್ಯಯನ ಕಾರ್ಯ ಆರಂಭವಾದುದು ಬ್ರಿಟಿಷರಿಂದ ಭಾರತದ ಜಾನಪದದ ಮೊದಲಸಂಗ್ರಹ ಕೃತಿಯಾದ Annals and Antiquities of Rajasthanಅನ್ನು ಕ್ರಿ..1829 ಕರ್ನಲ್ ಟಾಡ್ಪ್ರಕಟಿಸಿದನುಕ್ರಿ..1816ರಲ್ಲಿ ಅಬ್ಬೆ ಡುಬಾಯ್ Hindu Manners, Customs and Ceremonies ಎಂಬಗ್ರಂಥವನ್ನು ಪ್ರಕಟಿಸಿದರುಭಾರತೀಯ ಸಂಸ್ಕೃತಿ ಮತ್ತು ಜಾನಪದ ಅಧ್ಯಯನದ ದೃಷ್ಟಿಯಿಂದ ಗಮನಾರ್ಹ ಕೃತಿಯಾದಬಂಗಾಳದ ಗಾದೆಗಳು’ ಕೃತಿಯನ್ನು ಕ್ರಿ.. 1932ರಲ್ಲಿ ರೆವೆರೆಂಡರ್ ಮಾರ್ಡಿನ್ ಪ್ರಕಟಿಸಿದರುಅದೇ ವರ್ಷ ಸಿ.ಗೋವರ್ಇಂಡಿಯಾದ ಜನಪದ ಗೀತೆಗಳು ಎಂಬ ಕೃತಿಯನ್ನು ಪ್ರಕಟಿಸಿದರು.
     ಕರ್ನಾಟಕದಲ್ಲೂ ಜಾನಪದದ ಸಂಗ್ರಹ ಮತ್ತು ಅಧ್ಯಯನ ಕಾರ್ಯಕ್ಕೆ ಮೊದಲು ಚಾಲನೆ ನೀಡಿದವರು ಆಂಗ್ಲ ಪಾದ್ರಿಗಳೇ.ಕನ್ನಡದ ಮೊದಲ ಜನಪದ ಸಾಹಿತ್ಯ ಸಂಗ್ರಹ ‘ಜನಪದಗೀತೆಯನ್ನು ಕ್ರಿ.. 1871ರಲ್ಲಿ ಚಾಲ್ರ್ಸ್  ಗೋವರ್ ಪ್ರಕಟಿಸಿದರು.ಕ್ರಿ.. 1885ರಲ್ಲಿ ಫ್ಲೀಟರ್ ಲಾವಣಿಗಳನ್ನು ಸಂಗ್ರಹಿಸಿ ಪ್ರಕಟಿಸಿದರುಕನ್ನಡಿಗರ ಪ್ರಥಮ ಹಾಗೂ ಉತ್ಕøಷ್ಟ ಗೀತಗಳಸಂಗ್ರಹವಾದ ‘ಗರತಿಯ ಹಾಡು’ ಕೃತಿಯನ್ನು ಕ್ರಿ..1931ರಲ್ಲಿ ಹಲಸಂಗಿ ಸೋದರರಾದ ಕಾಪಸೆರೇವಣ್ಣಸಿಂಪಿಲಿಂಗಣ್ಣ ಮತ್ತುಮಧುರಚನ್ನರು ಜನಪದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದರುಕ್ರಿ.. 1933ರಲ್ಲಿ ‘ಹಳ್ಳಿಯ ಹಾಡುಗಳು’ ಸಂಗ್ರಹವನ್ನುವಿಠೋಭ ವೆಂಕನಾಯಕರು, ‘ಹುಟ್ಟಿದ ಹಳ್ಳಿ ಹಳ್ಳಿಯ ಹಾಡು’ ಸಂಗ್ರಹವನ್ನು ಅರ್ಚಕ ಬಿರಂಗಸ್ವಾಮಿ ಅವರು ಪ್ರಕಟಿಸಿದರು.ಗೊರೂರು ಮತ್ತು ಬಿಎಂರಂಗಸ್ವಾಮಿಯವರಿಂದ ಕ್ರಿ.. 1938ರಲ್ಲಿ ‘ಹಳ್ಳಿಯ ಹಾಡುಗಳು’ ಜನಪದ ಗೀತೆಗಳ ಸಂಗ್ರಹಪ್ರಕಟವಾಯಿತುಮತಿಘಟ್ಟ ಕೃಷ್ಣಮೂರ್ತಿಜೀ.ಶಂ.ಪರಮಶಿವಯ್ಯಗೊ.ರು.ಚನ್ನಬಸಪ್ಪಹೆಚ್.ಎಲ್.ನಾಗೇಗೌಡ,ಮುದೇನೂರು ಸಂಗಣ್ಣಕ್ಯಾತನಹಳ್ಳಿ ರಾಮಣ್ಣ ಮುಂತಾದ ಅನೇಕ ವಿದ್ವಾಂಸರು ಜಾನಪದ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದುಡಿದರುಕ್ರಿ. 1966 ಕನ್ನಡ ಜಾನಪದ ಇತಿಹಾಸದಲ್ಲಿ ಅತಿ ಪ್ರಮುಖವಾದ ವರ್ಷವಾಗಿದೆಪ್ರೊ.ದೇ.ಜವರೇಗೌಡರಪ್ರಯತ್ನದಿಂದ ಜಾನಪದ ಅಧ್ಯಯನ ಖಚಿತ ರೂಪುರೇಷೆಯನ್ನು ಪಡೆದುಕೊಂಡಿತುಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಲೇಖಕರ ಸಮ್ಮೇಳನವು ನಡೆದ ‘ಜನಪದ ಸಾಹಿತ್ಯಗೋಷ್ಠಿಯಲ್ಲಿ’ ಡಾಹಾ.ಮಾ ನಾಯಕರು ‘ಜನಪದ ಸಾಹಿತ್ಯ ಅದರ ಸ್ವರೂಪ’ ಎಂಬ ಪ್ರಬಂಧವನ್ನು ಮಂಡಿಸಿದರು.  ವೈಜ್ಞಾನಿಕದೃಷ್ಟಿಯಿಂದ ಇದು ಮಹತ್ವದ್ದೆನಿಸಿದೆಫೋಕ್ಲೋರ್(Folk Loreಎಂಬ ಆಂಗ್ಲ ಭಾಷೆಯ ಪದಕ್ಕೆ ಪರ್ಯಾಯವಾಗಿಜಾನಪದ’ ಎಂಬ ಖಚಿತವಾದ ಪದವನ್ನು ಸೂಚಿಸಿ ಜಾನಪದ ಅಧ್ಯಯನಕ್ಕೆ ದಾರಿದೀಪವಾದರುಅದೇ ವರ್ಷ ಮೈಸೂರುವಿಶ್ವವಿದ್ಯಾನಿಲಯದಲ್ಲಿ ‘ಜಾನಪದ’ ಐಚ್ಛಿಕ ವಿಷಯವಾಗಿ ಜಾರಿಗೆ ಬಂದಿತು.
   ಸಾಮಾನ್ಯತೆಸಾಮೂಹಿಕತೆಸರಳತೆಸಜೀವತೆಸೋಪಜ್ಞತೆಯಿಂದ ಕೂಡಿರುವ ಜಾನಪದದ ಮುಖ್ಯ ಲಕ್ಷಣಗಳು ಇಂತಿವೆ.
     ಕಂಠಸ್ಥ ಸಂಪ್ರದಾಯ : ಜನಪದ ಸಾಹಿತ್ಯ ನೋಡಿ ಕಲಿಯುವಂಥದಲ್ಲಕೇಳಿಯೇ ಕಲಿಯುವಂಥದ್ದುತೋಂಡಿತನ ಇದರಜೀವವಾಚಿಕಮೌಖಿಲಥೋಡೀ ಎಂದೆಲ್ಲಾ ಹೆಸರುಗಳಿದೆಅನಕ್ಷರಸ್ಥರ ಸಮಾಜದಲ್ಲಿ ಕಂಠಸ್ಥ ಸಂಪ್ರದಾಯದ ಪಾತ್ರ ಹಿರಿದು.ಗೀತೆಕಥೆಗಾದೆಒಗಟುಪುರಾಣಐತಿಹ್ಯಭಾಷೆನಂಬಿಕೆಆಚರಣೆಕಲೆವೈದ್ಯಮಾಟಮಂತ್ರವೃತ್ತಿ ಎಲ್ಲವೂಅನುಕರಣೆಯಿಂದ ಕಲಿತು ಮತ್ತು ನೆನಪಿನಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆ.
ಸಾಮೂಹಿಕ ಪುನರ್ಸೃಷ್ಟಿಜಾನಪದ ವ್ಯಷ್ಟೀಕೃತವಾದರೂ ಸಮಷ್ಟಿಯ ಸ್ವತ್ತುಅಜ್ಞಾತ ಕವಿಯೊಬ್ಬನ ರಚನೆ ನೂರು ಜನರಬಾಯಲ್ಲಿ ಮಾರ್ಪಾಡಾಗಿ ಜನತೆಯ ಕೃತಿಯಾಗಿ ಬಿಡುತ್ತದೆನಿರಂತರ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಿರುತ್ತದೆ.
   ವ್ಯಾಪಕತೆ : ಜಾನಪದ ಜನತೆಯ ಸರ್ವತೋಮುಖ ಅಭಿವ್ಯಕ್ತಿಯಾದ್ದರಿಂದ ಬದುಕಿನಲ್ಲಿ ಹಾಸುಹೊಕ್ಕಾಗಿದೆನಿಖರವಾಗಿ ಇದರವ್ಯಾಪ್ತಿಯನ್ನು ಗುರುತಿಸಲು ವಿದ್ವಾಂಸರಿಗೇ ಸಾಧ್ಯವಾಗಿಲ್ಲಇದು ಸಮುದ್ರದಷ್ಟು ವಿಸ್ತಾರವಾಗಿಯೂ ಆಕಾಶದಷ್ಟು ಎತ್ತರವಾಗಿಯೂಇದೆ.
   ಅವಿನಾಶಿ : ಜಾನಪದಕ್ಕೆ ಸಾವಿಲ್ಲಅದು ಚಿರಂತನತನ್ನಲ್ಲಿ ಒಳಗೊಂಡಿರುವ ಸಾಂಸ್ಕೃತಿಕ ಚೈತನ್ಯದಿಂದಾಗಿ ಅತ್ಯಾಧುನಿಕಸಂಸ್ಕೃತಿಯಲ್ಲಿಯೂ ತನ್ನ ರೂಪವನ್ನು ಉಳಿಸಿಕೊಳ್ಳುವ ಅಂತಃಶಕ್ತಿಯನ್ನು ಹೊಂದಿದೆ.
   ಪರಂಪರೆ : ರಾಹುಕಾಲ ನೋಡುವುದುವಿನಾಯಕನನ್ನು ಪೂಜಿಸಿ ಕೆಲಸ ಆರಂಭಿಸುವುದುಹೀಗೆ ಹಿಂದಿನಿಂದರೂಢಿಯಲ್ಲಿರುವುದನ್ನು ಅನೂಚಾನವಾಗಿ ಮುಂದುವರಿಸಿಕೊಂಡು ಬರುತ್ತಿರುವುದೇ ಇದಕ್ಕೆ ಸಾಕ್ಷಿ.
    ಸರಳತೆ-ಸ್ಪಷ್ಟತೆ : ಮುಚ್ಚು ಮನಸ್ಸಲ್ಲಬಿಚ್ಚುಮನಸ್ಸುನೇರ ಮಾತಿನ ಅಭಿವ್ಯಕ್ತಿಎಲ್ಲವೂ ಸರಳಕೃತಕತೆನಯ ನಾಜೂಕು,ತಂತ್ರ ಕುತಂತ್ರಗಳು ಇಲ್ಲಿಲ್ಲಕೊಂಕುವ್ಯಂಗ್ಯಕಟಕಿಬೌದ್ಧಿಕ ಚಮತ್ಕಾರ ಇಲ್ಲ.
    ಪರಿವರ್ತನಶೀಲತೆ : ಜನಪದ ಹಾಡು ಹಾಡುವುದಕ್ಕಾಗಿ ರಚಿಸಿದ ಗೀತೆಗಳಲ್ಲಹಾಡುವಾಗಲೇ ಸೃಷ್ಟಿಗೊಳ್ಳುತ್ತದೆಹಾಡುಗಾರ,ಪ್ರದರ್ಶನಕಾರಕವಿ ಮೂರೂ ಒಬ್ಬನೇ ಆಗಿರುತ್ತಾನೆಇಷ್ಟವಾಗುವ ಅಂಶಗಳನ್ನು ಅನಂತರದ ಹಾಡುಗಾರಿಕೆಯಲ್ಲಿ ಹೆಚ್ಚಾಗಿಸೇರಿಸುತ್ತ ಹೋಗುತ್ತಾರೆಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಮತ್ತಷ್ಟು ಮಾರ್ಪಾಡುಗಳಾಗುತ್ತಾಹೋಗುತ್ತವೆ.  ಸಾಮೂಹಿಕಪುನರ್ಸೃಷ್ಟಿಗೆ ಒಳಗಾಗುವುದರಿಂದ ಪರಿವರ್ತನೆ ಮತ್ತು ರೂಪಾಂತರ ಸಹಜ.
   ವಿಶ್ವಮೌಲಿಕತೆ : ಜಗದ್ವ್ಯಾಪಿಯಾದುದುಜಾನಪದ ಸ್ವರೂಪಲಕ್ಷಣಸ್ವಭಾವಗುಣಧರ್ಮಗಳನ್ನು ಕುರಿತು ವಿಶ್ವದಾದ್ಯಂತವಿದ್ವಾಂಸರು  ಹಿಂದಿನಿಂದಲೂ ಚಿಂತಿಸುತ್ತಾ ಬಂದಿದ್ದಾರೆ.  ಭಾರತದ ಕಥೆಗಳು ಯುರೋಪಿನಲ್ಲಿ ಸಂಚಾರ ಮಾಡ ಬಲ್ಲವು.
    ಸಾಮಾನ್ಯರ ವೇದವೆಂದೇ ಹೇಳುವ ಜಾನಪದ ಸಾಮಾನ್ಯರ ಸಾರ್ವಕಾಲಿಕ ವಿಶ್ವಕೋಶವೇ ಆಗಿರುವುದರಿಂದ ಇದರಅಧ್ಯಯನ ತುಂಬಾ ಮಹತ್ವದಾಗಿದೆಯಾವುದೇ ವಿಷಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವಾಗ  ಕ್ಷೇತ್ರಕಾರ್ಯ(ಸಾಮಗ್ರಿಗಳ ಸಂಗ್ರಹ), ವರ್ಗೀಕರಣ (ವಿಂಗಡಣೆ), ವಿಶ್ಲೇಷಣೆ (ವ್ಯಾಖ್ಯಾನ ಮೂರು ಹಂತಗಳನ್ನು ಬಳಸಬೇಕಾಗುತ್ತದೆ,ಜಾನಪದ ಕ್ಷೇತ್ರವೂ ಇದಕ್ಕೆ ಹೊರತಲ್ಕಜಾನಪದವನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಲು ಜಾನಪದದ ವರ್ಗೀಕರಣ ಅತ್ಯಂತಮುಖ್ಯವಾಗುತ್ತದೆಹೆಚ್ಚು ಸಂಕೀರ್ಣವೂಬಹು ವೈವಿಧ್ಯಮಯವೂ ಆದ ಜಾನಪದವನ್ನು ವರ್ಗೀಕರಿಸುವುದು ಬಹಳ ಕಠಿಣಕಾರ್ಯವಾಗಿದೆಯಾವ ಆಧಾರದ ಮೇಲೆ ವಿಂಗಡಿಸಿದರೂ ಸಮರ್ಪಕವಾಗಿ ವಿಂಗಡಿಸಲು ಸಾಧ್ಯವೇ ಇಲ್ಲ.
   ಸಾಮೂಹಿಕ ಪುನರ್ಸೃಷ್ಟಿಜಾನಪದ ವ್ಯಷ್ಟೀಕೃತವಾದರೂ ಸಮಷ್ಟಿಯ ಸ್ವತ್ತು.  ಅಜ್ಞಾತ ಕವಿಯೊಬ್ಬನ ರಚನೆ ನೂರು ಜನರಬಾಯಲ್ಲಿ ಮಾರ್ಪಾಡಾಗಿ ಜನತೆಯ ಕೃತಿಯಾಗಿ ಬಿಡುತ್ತದೆ.  ನಿರಂತರ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಿರುತ್ತದೆ.       
    ಕತೆಗಳು ಮತ್ತು ಸಂಪ್ರದಾಯಗಳು, ಹಾಡುಗಳು – ಕಥಾನಾತ್ಮಕ ಲಾವಣಿಗಳು, ಭಾವಗೀತೆಗಳು, ಕೆಲಸದ ಹಾಡುಗಳು-ಆಟದ ಹಾಡುಗಳು-ಮಕ್ಕಳ ಹಾಡುಗಳು, ಒಗಟು-ಗದೆ-ಹೇಳಿಕೆಗಳು-ಮಾಂತ್ರಿಕ ನುಡಿಗಳನ್ನು ಒಳಗೊಂಡ ಶಾಬ್ದಿಕ ಜಾನಪದ ಎಂದೂ, ನಿರ್ದಿಷ್ಟ ಕಾಲದ ಆಚರಣೆಗಳು(ಕೆಲವು ಹಬ್ಬಗಳು), ವ್ಯವಸಾಯ ಸಂಬಂಧಿ ಆಚರಣೆಗಳು, ಮೂಢನಂಬಿಕೆಗೆ ಸಂಬಂಧಿಸಿದನ್ನು ಆಚರಣೆಗಳು ಎಂದು ಕರೆದರು.
     ನಿರಂತರವಾಗಿ ಚಲನಶೀಲತೆಯುಳ್ಳ ಸಂವಹನ ಮಾಧ್ಯಮವಾಗಿರುವ ಜನಪದ ಸಾಹಿತ್ಯ ಭಾಷಾ ಸಾಹಿತ್ಯ ಚರಿತ್ರೆಯಲ್ಲೇ ಪ್ರಾಚೀನವಾದುದು. ವಾಚಿಕ ಜಾನಪದ, ಜಾನಪದದ ವಾಙ್ಮಯ ರೂಪ ಎಂದು ಗುರುತಿಸುವ ಜನಪದ ಸಾಹಿತ್ಯ ಜಾನಪದ ಕ್ಷೇತ್ರದ ಒಂದು ವಿಭಾಗ ಮಾತ್ರವಾಗಿದೆ. ಜನಪದ ಸಾಹಿತ್ಯದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳನ್ನು ಕಾಣುತ್ತೇವೆ
                                                                  ಜನಪದ ಗೀತೆ
                                                                  ಜನಪದ ಕಥೆಗಳು
                                                                  ಒಗಟುಗಳು
                                                                  ಗಾದೆಗಳು       
       ವಸ್ತು ವೈವಿಧ್ಯ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಜನಪದ ಸಾಹಿತ್ಯದಲ್ಲಿ ವೈವಿಧ್ಯಮಯವಾ ಜೀವನಾನುಭವವು ಗದ್ಯ ಮತ್ತು ಪದ್ಯಗಳೆರಡರಲ್ಲೂ ರಚಿತವಾಗಿದೆ. ಅಭಿವ್ಯಕ್ತಿಯ ವೈವಿಧ್ಯತೆಯನ್ನು ಹೊಂದಿರುವ ಜನಪದ ಸಾಹಿತ್ಯದ ವರ್ಗೀಕರಣ ಅಷ್ಟು ಸುಲಭವಲ್ಲ. 
       ಆರ್.ಎಸ್.ಬಾಗ್ಸ್ ನ ಚತುರ್ಮುಖ ವಿಭಜನೆಯ ವಿಭಜನಾ ಕ್ರಮದಲ್ಲಿ 
                                                                 ಸಾಹಿತ್ಯದ ಬಗೆ, 
                                                                 ಭಾಷಿಕ ಬಗೆ, 
                                                                 ವೈಜ್ಞಾನಿಕ ಬಗೆ, 
                                                                  ಕ್ರಿಯಾತ್ಮಕ ಬಗೆ
       ಇವುಗಳಲ್ಲಿ ಜನಪದ ಸಾಹಿತ್ಯದ ರೂಪಗಳು ಗೋಚರಿಸುತ್ತವೆ. ಸಾಹಿತ್ಯದ ಬಗೆಗಳಲ್ಲಿ ಗೀತೆ, ಕಥೆ, ಪುರಾಣ, ಐತಿಹ್ಯಗಳು ಸೇರಿದರೆ, ಭಾಷಿಕ ಬಗೆಯಲ್ಲಿ ಗಾದೆ, ಒಗಟು, ಒಡಪು ಇತ್ಯಾದಿಗಳು, ವೈಜ್ಞಾನಿಕ ಬಗೆಯಲ್ಲಿ ನಂಬಿಕೆ, ಸಂಪ್ರದಾಯ, ಮಾಟ ಮಂತ್ರ, ವೈದ್ಯ ಮುಂತಾದವು ಸೇರುತ್ತವೆ.
      ರವೀಂದ್ರನಾಥ ಠಾಕೂರರು ಹೇಳಿರುವಂತೆ ‘ಎಲ್ಲಾ ಕಾವ್ಯಗಳಂತೆ ಜನಪದ ಗೀತೆಗಳ ಗುಣದಲ್ಲಿ ಬೇರೆ ಬೇರೆ ಮಟ್ಟಗಳಿವೆ. ಪೌರಾಣಿಕ ನದಿ ಮಂದಾಕಿನಿಯಂತೆ ನಿಜವಾದ ಕವಿ ಪ್ರತಿಭೆಯಿಂದ ಹೊರಹೊಮ್ಮುವ ಜೀವವಾಹಿನಿ ಅಪ್ರಾಪ್ಯಲೋಕದಲ್ಲಿ ಉಗಮಗೊಳ್ಳುತ್ತದೆ.’
      ವಸ್ತು ವೈವಿಧ್ಯತೆಯಿಂದ ಕೂಡಿ ಪೂರ್ವಾರ್ಜಿತ ಆಸ್ತಿಯಂತಿರುವ ಕಥಾಕೋಶವು  ಡಾ. ದೇ. ಜವರೇಗೌಡರು ಹೇಳಿರುವಂತೆ ಚಂಡಿ ಹಿಡಿಯುವ ಕಣ್ಣಿಗೆ ನಿದ್ದೆ ಹತ್ತದಿರುವ ದೇಹಾಲಸ್ಯದಿಂದ ನರಳುವ ಮಗುವಿಗೆ ಕಥೆ ಸನ್ಮೋಹನಾಂಜನವಾಗುತ್ತದೆ. ಕಥಾಶ್ರವಣ ರೋಗಿಗೆ ವೈದ್ಯವಾಗುತ್ತದೆ. ದಡ್ಡನಿಗೆ ವಿದ್ಯೆಯಾಗುತ್ತದೆ. ದುಡಿಮೆಗಾರನಿಗೆ ಚೇತೊಹಾರಿಯಾಗುತ್ತದೆ. ದುಷ್ಟನಿಗೆ ಶಿವಶಕ್ತಿಯಾಗುತ್ತದೆ. ಸೋಮಾರಿಗೆ ಚೈತನ್ನದಾಯಿಯಾಗುತ್ತದೆ. ರಸಿಕನಿಗೆ ರಸಾಯನವಾಗುತ್ತದೆ. ಒಡೆಯ-ಆಳು, ದೊರೆ-ಮಂತ್ರಿ, ರೈತ-ಯೋಧ, ಸನ್ಯಾಸಿ-ಸಂಸಾರಿ, ಹೆಂಗಸು-ಗಂಡಸು ಎಂಬ ಭೇದವಿಲ್ಲದೆ ಕಥೆ ಸರ್ವರನ್ನು ಏಕರೀತಿಯಾಗಿ ತೃಪ್ತಿಪಡಿಸುತ್ತದೆ. ಅದು ಬಾಳಿನ ಬವಣೆಯನ್ನು ಮರೆಸುತ್ತದೆ. ಮಾನಸಿಕ ಯಾತನೆಯನ್ನು ಒರೆಸುತ್ತದೆ. ಕೇಳುಗನಿಗೆ ಕೇಳುವ ಕುತೂಹಲವಿರುವಂತೆ ಹೇಳುಗನಿಗೆ ಹೇಳುವ ಹವ್ಯಾಸವಿರುತ್ತದೆ.
ಜನಪದ ಸಾಹಿತ್ಯದಲ್ಲಿ ಜನಪ್ರಿಯವಾದ ಪ್ರಮುಖವಾದ ಮತ್ತೆರಡು ಪ್ರಕಾರವಿದೆ. ಅವೇ ಗಾದೆ ಮತ್ತು ಒಗಟುಗಳು.
ಪ್ರತಿನಿತ್ಯ, ಪ್ರತಿಕ್ಷಣ ವೈವಿಧ್ಯಮಯವಾದ ಅನುಭವವನ್ನು ನೀಡುತ್ತಿರುವ ಚಲನಶೀಲ ಬದುಕಿನ ಪರಿಣಾಮ ಹಲವರ ಮೇಲಾಗಿ, ಹಲವರ ಅನುಭವ ಒಬ್ಬರ ಬಾಯಲ್ಲಿ ಹರಳುಗಟ್ಟಿ ಸಮುದಾಯದ ಸ್ಮøತಿಪಟಲದಲ್ಲಿ ಭದ್ರವಾಗಿ ನಿಂತು ಬಿಡುತ್ತದೆ. ಅನುಭವಾಧಾರಿತವಾದನುಡಿಗಳು  ಗಹನವಾದ ಅರ್ಥ ಶ್ರೀಮಂತಿಕೆಯಿಂದ ಹೊರಹೊಮ್ಮುತ್ತವೆ. ನಿತ್ಯದ ಬದುಕಿನಲ್ಲಿ ಬಳಕೆಯಾಗುವ ಈ ಮಾತುಗಳನ್ನು ಜನಪದರು ಗಾದೆ ಎಂದು ಕರೆದರು. ನೂರಾರು ಮಾತುಗಳಲ್ಲಿ ಹೇಳಬಹುದಾದ ಬದುಕಿನ ಅನುಭವವು ಸಾರವತ್ತಾಗಿ, ಸಂಕ್ಷಿಪ್ತವಾಗಿ, ನೀತಿಬೋಧಕವಾಗಿ ಕೇಳುಗರ ಮನಸ್ಸಿಗೆ ಆಹ್ಲಾದಕರವಾಗಿಯೂ ಮನಮುಟ್ಟುವಂತೆಯೂ ಒಂದೆರಡು ಮಾತಿನಲ್ಲಿ ನಿರೂಪಣೆಯಾಗಿರುತ್ತದೆ.
     ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು,’ ಆಡುಮುಟ್ದ ಸೊಪ್ಪಲ್ಲ ಗಾದೆ ಹೇಳದ ವಿಷಯವಿಲ್ಲ,’ ‘ಹಸಿಗೋಡೆಯಲ್ಲಿ ಹರಳು ಮೆಟ್ಟಿದಂತೆ,’ ‘ಆಕಾರದಲ್ಲಿ ಬಿಂಧು ಅರ್ಥದಲ್ಲಿ ಸಿಂಧೂ,’ ‘ರೂಪದಲ್ಲಿ ವಾಮನ ಅರ್ಥದಲ್ಲಿ ತ್ರಿವಿಕ್ರಮ,’ ಮುಂತಾದ ಗಾದೆಯನ್ನು ಕುರಿತಾದ ಗಾದೆಗಳೇ ಗಾದೆಯ ಮಹತ್ವವನ್ನು ಎತ್ತಿ ಹಿಡಿಯುತ್ತವೆ. 
       ವೇದಗಳು ಅಕ್ಷರ ಬಲ್ಲವರಿಗೆ ಮಾತ್ರ ಸೀಮಿವಾದರೆ, ಗಾದೆ ಸಕಲರ ಸೊತ್ತು. ಗಾದೆಗಳು ವೇದದ ಜ್ಞಾನದಂತೆ ನಿರ್ದಿಷ್ಟವಾದುದಲ್ಲ, ಕಾಲ ಕಾಲಕ್ಕೆ ಬೆಳೆಯುತ್ತಾ ಹೋಗುವ ಜ್ಞಾನ ಶಾಖೆಯಾಗಿದೆ.
       ಡಾ. ದೇ.ಜವರೇಗೌಡರು ತಮ್ಮ ‘ಜಾನಪದ ಅಧ್ಯಯನ’ ಎಂಬ ಗ್ರಂಥದಲ್ಲಿ ಹೇಳುವಂತೆ ಕೆಲವೇ ಕೆಲವು ಅರ್ಥಗರ್ಭಿತವಾದ ಮಾತುಗಳುಳ್ಳ ಚಿಕ್ಕದೂ ಚೊಕ್ಕವಾದದ್ದು ಆದ ವಾಕ್ಯವೇ ಗಾದೆ. ಗದ್ಯ ಮತ್ತು ಪದ್ಯಗಳ ಲಕ್ಷಣವನ್ನು ಅರ್ಥಪೂರ್ಣವಾಗಿ ಮೇಳೈಸಿಕೊಂಡ ವಿಶಿಷ್ಟ ಪ್ರಕಾರವದು.’
       ಸಂಸಂಸ್ಕೃತದ ‘ಗಾಥಾ’ ಶಬ್ದದ ತದ್ಭವವೇ ‘ಗಾದೆ’ಯಾಗಿದೆ ಎನ್ನುತ್ತಾರೆ. ನಾಣ್ಣುಡಿ ಎಂಬ ಅಚ್ಚ ಕನ್ನಡ ಶಬ್ದ ‘ಗಾದೆ’ಯ ಅರ್ಥವನ್ನು ಧ್ವನಿಸುತ್ತದೆ. ಗಾದೆಗೆ ಬಳಕೆಯಲ್ಲಿರುವ ಸಂವಾದಿ ಶಬ್ದಗಳು ಹೀಗಿವೆ: ಲೋಕೋಕ್ತಿ, ಪ್ರಾಚೀನೋಕ್ತಿ, ಸಾಮತಿ, ಸೂಕ್ತಿ, ಸೂತ್ರ, ಸಾರೋಕ್ತಿ, ಹೇಳಿಕೆ, ಉದ್ಧರಣೆ, ವಿಧಿ, ನಿಯಮ, ಪ್ರಮಾಣ, ಸುಭಾಷಿತ, ನಾಣ್ನುಡಿ ಇತ್ಯಾದಿ. 
ಮಾನವ ಜಗತ್ತನ ಸಮಸ್ತವನ್ನೂ ಅಡಗಿಸಿಕೊಂಡು ವಿಶಾಲವ್ಯಾಪ್ತಿಯನ್ನು ಹೊಂದಿರುವ ಗಾದೆಯ ಅರ್ಥ ಹಾಗೂ ಲಕ್ಷಣಗಳನ್ನು ಒಂದೇ ಸೂತ್ರದಲ್ಲಿ ಹಿಡಿದಿಡುವುದು ಕಷ್ಟ. ಬೇರೆ ಬೇರೆ ದೇಶದ ಜನತೆಯ ಹಾಗೂ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ನೋಡಿದಾದ ಗಾದೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. 
      ಕನ್ನಡದ ಜನತೆ: ‘ಗಾದೆ ವೇದಕ್ಕೆ ಸಮಾನ’
      ದ.ರಾ. ಬೇಂದ್ರೆ : ‘ಗಾದೆ ಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳಲ್ಲ, ವಿವೇಕ ಜಾಗೃತಿ ಮಾಡುವ ಸುಭಾಷಿತಗಳು.’
      ರಾಗೌ- ‘ಗಾದೆಯೆಂದರೆ ಸದ್ಯೋಜಾತ ನುಡಿಗಟ್ಟು; ಸೂಕ್ತ ಸಂದರ್ಭದಲ್ಲಿ ತಾಳಿದ ಯೋಗ್ಯ ನಿರ್ಣಯಗಳು.’
      ಮಾಸ್ತಿ ವೆಂಕಟೇಶ್ ಅಯ್ಯಂಗಾರ್ : ‘ಜನಾಂಗದಲ್ಲಿ ಪ್ರಚಾರದಲ್ಲಿರುವ ತಿಳಿವು ತನ್ನ ಮನಸ್ಸಿನಲ್ಲಿ ಬಿದ್ದಾಗ ನಾಲ್ಕು ಮಾತಿನಲ್ಲಿ ಘನಿಸಿ ಮುತ್ತಿನಂತಾಗುತ್ತದೆ. ಹಲವರ ಭಾವ ಒಬ್ಬನ ಮಾತಿನಲ್ಲಿ ಕಂಡು ಆ ಮಾತು ಹಲವರ ಮಾತಾಗುತ್ತದೆ.  ಗಾದೆಗಳನ್ನು ನೋಡಿದರೆ ಜನಾಂಗಗದ ಮನಸ್ಸು ಎಂಥದೆಂದು ಊಹಿಸಲು ಸಾಧ್ಯವಾಗುವುದಕ್ಕೆ ಇದೇ ಕಾರಣ.’
      ಗೊರೂರು ರಾಮಸ್ವಾಮಿ ಅಯ್ಯಂಗಾರ್ ; ಸತ್ಯ, ಗಾದೆ, ಮೂರ್ಖ ಈ ಮೂರನ್ನೂ ಎದುರಿಸಲಾಗದು. ಗಾದೆ ದೇವ ಭೇರಿ’ 
      ಎ.ಕೆ. ರಾಮಾನುಜಂ ಅವರು ‘ಗಾದೆ’ ಮಾತು ಜನತೆಯ ಮನಸ್ಸನ್ನು ಒಂದು ಮುಖದಲ್ಲಿ ಬಿಂಬಿಸುತ್ತದೆ. ಮತ್ತೊಂದು ಮುಖದಲ್ಲಿ ಆಳುತ್ತದೆ. ಅವರ ಅನುದಿನದ ನಂಟುಗಳನ್ನು ನಡೆಸುತ್ತದೆ. ಗಂಟುಗಳನ್ನು ಬಿಡಿಸುತ್ತದೆ.’
      ಅರಿಸ್ಟಾಟಲ್ ; ಗಾದೆಗಳು ಪ್ರಾಚೀನ ತತ್ವಶಾಸ್ತ್ರದ ಪಳೆಯುಳಿಕೆಗಳು’
      ಸ್ಕಾಟ್ ಜನತೆ : ಕೆಲವರು ಹೇಳಿದಾಗ ಅದು ಸತ್ಯವಿರಬಹುದು, ಆದರೆ ಎಲ್ಲರೂ ಹೇಳುತ್ತಿರುವಾಗ ಅದು ಸತ್ಯವಿರಲೇ ಬೇಕು’.
      ಐರಿಷ್ ಜನತೆ: ಗಾದೆಗಳನ್ನು ಯಾವ ಶಬ್ದಗಳೂ ಸೋಲಿಸಲಾರವು. ಗಾದೆಗಳು ದೊಡ್ಡ ಪುಸ್ತಕವಿದ್ದಂತೆ. ಅವುಗಳಿಂದ ಜನರ ಗುಣಧರ್ಮಗಳನ್ನು ಸುಲಭವಾಗಿ ಓದಬಹುದು. 
      ಫ್ರಾನ್ಸಿಸ್ ಬೇಕನ್ : ಜನಾಂಗದ ಕುಶಾಗ್ರತೆ, ಚತುರತೆ ಮತ್ತು ಶಕ್ತಿಯನ್ನು ಗಾದೆಗಳಲ್ಲಿ ಕಾಣಬಹುದು. 
ಜೆ.ಎ.ಕೆಲ್ಸೊ : ಸಂಕ್ಷಿಪ್ತತೆ, ವಿವೇಕಪೂರ್ಣತೆ ಅಥವಾ ಸಂವೇದನಾಶೀತೆ, ತೀಕ್ಷಣತೆ ಮತ್ತು ಜನಪ್ರಿಯತೆ –ಇವು ಗಾದೆಯ ನಾಲ್ಕು ಗುಣಗಳಾಗಿವೆ.
      ಥಾಮಸ್ ಫುಲ್ಲರ್ –‘ಸರ್ವೇಸಾಮಾನ್ಯವಾದ ಮತ್ತು ಗಮನಾರ್ಹವಾದ ಉಪಯೋಗದಲ್ಲಿನ ಅಡಕವೂ ಸಾರಭೂತವೂ ಆದ ಮಾತು ಅಥವಾಹೆಚ್ಚು ವಿಷಯಗಳನ್ನು ಕೆಲವೇ ಮಾತುಗಳಲ್ಲಿ ಭಟ್ಟಿ ಇಳಿಸಿದುದು ಗಾದೆ’
ಲಾರ್ಡ್ ಜಾನ್ ರಸೆಲ್ : ‘ಗಾದೆ ಹಲವರ ಜ್ಞಾನ, ಒಬ್ಬನ ವಿವೇಕ’
      ಗಾದೆಗಳನ್ನು ವಸ್ತುವಿನ ಆಧಾರದ ಮೇಲೆ ಹೀಗೆ ವರ್ಗೀಕರಿಸಬಹುದು. ಪೌರಾಣಿಕ ಗಾದೆಗಳು, ಚಾರಿತ್ರಿಕ ಗಾದೆಗಳು, ಐತಿಹ್ಯ ಗಾದೆಗಳು, ಸಾಮಾಜಿಕ ಗಾದೆಗಳು, ಸಾಹಿತ್ಯದ ಗಾದೆಗಳು, ವೃತ್ತಿಪರಗಾದೆಗಳು, ವೈದ್ಯಕೀಯ ಗಾದೆಗಳು, ಹವಾಮಾನ ಗಾದೆಗಳು, ಕೃಷಿ ಸಂಬಂಧಿ ಗಾದೆಗಳು. ಕೌಟುಂಬಿಕ ಗಾದೆಗಳು, ಸಾಂಪ್ರದಾಯಿಕ ಗಾದೆಗಳು, ನೀತಿ ಗಾದೆಗಳು, ಕಥನಾತ್ಮಕ ಗಾದೆಗಳು ಇತ್ಯಾದಿ.  
      ಸುಲಭವಾಗಿ ಅಳೆಯಲಾಗದ ಪ್ರಭಾವ, ಆಳ, ಅಗಲ, ಸೂಕ್ಷ್ಮಗಳನ್ನು ಹೊಂದಿರುವ ಗಾದೆಗಳು ಎಲ್ಲಾ ಕ್ಷೇತ್ರಗಳ ವಿದ್ವಾಂಸರಿಗೂ ಅಧ್ಯಯನಕ್ಕೆ ವಿಪುಲ ಸಾಮಗ್ರಿಯನ್ನು ಒದಗಿಸುತ್ತದೆ. ಧ್ವನಿಪೂರ್ಣವಾದ ಶಬ್ದಸಂಪತ್ತು ಗಾದೆಗಳ ಕಸುವಾದ ಮಾತಿನಲ್ಲಿ ತುಂಬಿಕೊಂಡಿದೆ. ಕುರಿತೋದದೆಯು ಕಾವ್ಯ ಪ್ರಯೋಗ ಪರಿಣತಮತಿಗಳಾದ ಜನತೆ ಕಿರಿದರಲ್ಲಿ ಹಿರಿದರ್ಥವನ್ನು ಹೂರಣವಾಗಿಟ್ಟು ತೋರಿಸಲು ಬಳಸಿಕೊಂಡ ಸಾಧನವಾದ ಗಾದೆಯು ದೇಶ, ಕಾಲ, ಭಾಷೆ, ಸಂಸ್ಕøತಿ ಹಂಗಿಲ್ಲದೆ ಜನತೆಯ ವಿಶ್ವಕೋಶವಾಗಿದೆ.
     ಸೂತ್ರೀಕೃತ ಆಲೋಚನಾ ಪ್ರಕಾರವಾದ ಒಗಟುಗಳು ಜನಪದರ ವಿವೇಕ, ಜಾಣ್ಮೆ, ಸೃಜನಶೀಲತೆ, ಚತುರತೆ, ಪ್ರತಿಭೆ ಮತ್ತು ಕಲ್ಪನಾಶಕ್ತಿಗೆ ಹಿಡಿದ ಕನ್ನಡಿಯಂತಿವೆ. ಆಬಾಲವೃದ್ಧರೆಲ್ಲರನ್ನೂ ಆಕರ್ಷಿಸುತ್ತದೆ. ಇತರ ಜನಪದ ಸಾಹಿತ್ಯ ಪ್ರಕಾರಗಳಂತೆ ಒಗಟೂ ಸಹ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಎಲ್ಲರ ಮನೆಯಂಗಳದಲ್ಲೂ ರಾರಾಜಿಸುತ್ತಿದೆ. 
      ಸಮಸ್ಯಾತ್ಮಕವಾದ ಅಭಿವ್ಯಕ್ತಿ ಯಾಗಿರುವ ‘ಒಗಟು’ ಪದವು ಸಂಸ್ಕøತದ ಮುಂಡಿಗೆ, ಪ್ರಹೇಳಿಕಾ, ಪ್ರಶ್ನೆ,ಕೂಟ, ಬ್ರಹ್ಮೋದ್ಯ, ವಿವಾದ, ಸಮಸ್ಯಾ ಇತ್ಯಾದಿ ಪದಗಳಿಗೆ ಸಂವಾದಿಯಾಗಿದೆ. ಒಗಟಿನ ಭಾಷೆ ಸರಳವದುದಲ್ಲ, ಸಾಂಕೇತಿಕವಾದದ್ದು, ರಹಸ್ಯವನ್ನು ಕಾಪಾಡಿಕೊಂಡಿರುತ್ತದೆ. ಸುಲಭವಾಗಿ ಅರ್ಥವಾಗದ, ಜಟಿಲವಾದ, ನಿಗೂಡವಾದ ಸಮಸ್ಯೆಯಂತಿರುತ್ತವೆ. 
      ಒಗಟು ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಒಡಗತೆ, ಒಂಟು, ಒಡಚುಕತೆ ಇತ್ಯಾದಿ ಪದಗಳು ರೂಢಿಯಲ್ಲದ್ದರೂ ‘ಒಗಟು’ ಪದವೇ ಜನಪ್ರಿಯವಾಗಿರುವುದು. ‘ಒಗಟು’ ‘ಒಗೆ’ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ‘ಒಗೆ’ ಎಂದರೆ ಎಸೆ. ಒಡ್ಡು, ಹಾಕು ಇತ್ಯಾದಿ ಅರ್ಥಗಳಿವೆ. ಸಮಸ್ಯೆಯನ್ನು ಒಡ್ಡು, ಪ್ರಶ್ನೆಯನ್ನು ಎಸೆ, ಸವಾಲು ಹಾಕು ಎಂದರ್ಥದಲ್ಲಿ ಒಗಟು ಬಳಕೆಯಾಗುತ್ತಿದೆ.
       ಡಾ. ಸೊಮಶೇಖರ ಇಮ್ರಾಪುರರ ಅಭಿಪ್ರಾಯದಲ್ಲಿ ‘ ಗೂಡಾರ್ಥದ್ಯೋತಕವಾದ, ಸಾಂಕೇತಿಕತೆ, ಪ್ರತಿಮೆ, ರೂಪಕ ಇಲ್ಲವೆ ಸರಮಾಲೆ ಅನ್ಯೋಕ್ತಿಪ್ರಧಾನವಾದ, ಉಪಮಾನ ವಾಚ್ಯ ಉಪಮೇಯ ಗೌಪ್ಯವಾದ, ಉತ್ತಾರಾಪೇಕ್ಷಿಯಾದ ಚಿನ್ಮನಶೀಲ ಪರಂಪರಾಗತ ಅಭಿವ್ಯಕ್ತಿಯೇ ಒಗಟು’
        ಅಲೆಕ್ಸಾಂಡರ್ ಎಚ್. ಕ್ರಾಪೆಯವರು ವಾಕ್ ಸಂಪ್ರದಾಯದಲ್ಲಿ ಒಗಟೇ ಕೊನೆಯದು ಎಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಿ.ಎಫ್.ಪಾಟರ್ ಅವರು ‘ಪುರಾತನ ಮನಸ್ಸಿನ ಪ್ರಾಥಮಿಕ ಅಭ್ಯಾಸದ ಫಲವೇ ಒಗಟು ಎಂದಿದ್ದಾರೆ. ‘ಮಾನವನ ಶೈಶವಾವಸ್ಥೆಯಲ್ಲಿಯೇ ಒಗಟುಗಳು ಸೃಷ್ಟಿಯಾದವು’ ಎನ್ನುವ ಜೇಮ್ಸ್ ಎ. ಕೆಲ್ಸೋ ಅವರು ಹೇಳಿಕೆಯೂ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತದೆ. ಅರಿಸ್ಟಾಟಲ್ ‘ಒಗಟಿಗೂ ರೂಪಕಕ್ಕೂ ನಿಕಟ ಸಂಬಂಧ. ರೂಪಕಗಳ  ಸರಣಿಯೇ ಒಗಟು ಎಂದಿದ್ದಾನೆ. 
        ದೇವುಡು ನರಸಿಂಹ ಶಾಸ್ತ್ರಿಗಳು ‘ಕಣ್ಣಾಮುಚ್ಚಾಲೆಯ ಕಾವ್ಯದ ಸ್ವರೂಪವೇ ಒಗಟು’ ಎಂದಿದ್ದಾರೆ.
       ಸಿ.ಪಿ. ಕೃಷ್ಣಕುಮಾರ್ ಅವರು ‘ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ವ್ಯಾಜದಿಂದ ಚಮತ್ಕಾರವಾಗಿ ವರ್ಣಿಸುವುದು, ಆವಸ್ತುವನ್ನು ಕಂಡು ಹಿಡಿಯುವಂತೆ ಹೇಳುವುದು ಒಗಟು’ ಎಂದಿದ್ದಾರೆ.
ಹಾ.ಮಾ.ನಾಯಕರು ‘ಇದು ಪ್ರಾಚೀನವಾದ ಸುವ್ಯವಸ್ಥಿತಗೊಂಡ ಆಲೋಚನೆಯ ಪಲವಾಗಿದೆ. ಒಗಟುಗಳ ಪ್ರಾಧಾನ ಗುರಿ ಬುದ್ಧಿಯ ಕಸರತ್ತು’ ಎಂದಿದ್ದಾರೆ.
       ರಾಮೇಗೌಡರು (ರಾಗೌ) ‘ಒಗಟು ಪ್ರಯತ್ನಪೂರ್ವಕ ಸೃಷ್ಟಿ ಪ್ರಜ್ಞಾಪೂರ್ವಕವಾದ ಸಾಹಿತ್ಯ ಕ್ರಿಯೆ. ವಾಸ್ತವ ಅರ್ಥವನ್ನು ಮುಚ್ಚಿಸುವ ವ್ಯಾಖ್ಯೆಯೇ ಒಗಟು. ಅನುಮಾನದ ಮೂಲಕ ಅರ್ಥಾನ್ವೇಷಣೆಗೆ ಹೊರಡಲು ಪ್ರೇರೇಪಿಸುವ ಸಂದಿಗ್ದಪ್ರಾಸಬದ್ಧ ರಚನೆ, ಕೂಡಲೇ ಕಾರಣ ಕೊಡಲಾಗದ ಸಮಸ್ಯೆ’ ಎಂದಿದ್ದಾರೆ.
ಗಾದೆಗಳು ಸಾಮಾನ್ಯವಾಗಿ ಉಪದೇಶವನ್ನು ಮುಖ್ಯ ಉದ್ದೇಶವಾಗಿಸಿಕೊಂಡರೆ, ಒಗಟುಗಳು ಜನಪದರ ಜಾಣ್ಮೆಯನ್ನು ಬಿಂಬಿಸುವ ಸಾಧನವಾಗಿವೆ.
       ಮಾತಿಗೆ ಮಾಧ್ಯಮವಾದ ಜನಪದ ಕಥೆ, ನೀತಿ, ಗಾದೆ, ಒಗಟು, ಲಾವಣಿ, ಮೊಲಾದ ಶಾಬ್ದಿಕ ಪ್ರಕಾರಗಳು, ಕ್ರಿಯೆಗೆ ಮಾಧ್ಯಮವಾದ ಸಂಪ್ರದಾಯ, ಆಚರಣೆ, ಕುಣಿತ, ಆಟಪಾಟ, ನಂಬಿಕೆ, ಪೂಜೆ ಮುಂತಾದವುಗಳು ಜನಪದ ಸಂಸ್ಕøತಿಯ ಅಂಗವಾಗಿವೆ. ಸಮಸ್ತ ಜನಪದ ಸಂಸ್ಕøತಿಯ ತಿಳುವಳಿಕೆಯೇ ಜಾನಪದ. ಜಾನಪದದ ಅರಿವು ಮನುಕುಲದ ಅರಿವೇ ಆಗಿದೆ.
ಪ್ರಾಕ್ತನ ಶಾಸ್ತ್ರಜ್ಞ ಫ್ರಾನ್ಸಿಸ್ ಗ್ರಾಸ್ ಹೇಳಿರುವಂತೆ ‘ಒಂದು ದೇಶದ ಜಾನಪದ ಇತಿಹಾಸವನ್ನು ತಿಳಿಯದವ ರಾಜನೂ ಆಗಲಾರ, ರಾಜಕಾರಣಿಯೂ ಆಗಲಾರ’
         ನಾವು ಎಷ್ಟೇ ಮುಂದುವರಿದವರಾದರೂ ನಮ್ಮ ಪೂರ್ವೀಕರ ಪ್ರಾಚೀನ ಜನತೆಯ ಸಾಹಿತ್ಯ, ಸಂಸ್ಕøತಿ, ಸಂಪ್ರದಾಯ, ಪರಂಪರೆಯನ್ನು ಕಡೆಣಿಸಲಾಗದು. ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋಗಿರುವ ಅಮೂಲ್ಯವದ ಜಾನಪದ ಸಂಪತ್ತು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ. ನಿತ್ಯ ನಿರಂತರ ಕೆಲಸದ ಶ್ರಮದ ತೀವ್ರತೆಯನ್ನು ಕುಗ್ಗಿಸಿ, ಬದುಕಿನ ಏಕತಾನತೆಯನ್ನು  ಹೋಗಲಾಡಿಸಿ ಮನಸ್ಸನ್ನು ಮುದಗೊಳಿಸುತ್ತದೆ. ಮಲ್ಲಿಗೆಯಂತೆ ಮನವನ್ನು ಅರಳಿಸಿ ಶ್ರೀಗಂಧದಂತೆ ಸುವಾಸನೆಯನ್ನು ಪಸರಿಸುವಂತೆ ಮಾಡಿ ಸಾಮರಸ್ಯದಿಂದ ಬದುಕಿ ಬಾಳಲು ನೆರವಾಗುವಂತೆ ವ್ಯಕ್ತಿತ್ವವನ್ನು ರೂಪಿಸುತ್ತದೆ. 
ಬದುಕಿನ ಎಲ್ಲಾ ಮುಖಗಳನ್ನು ಒಳಗೊಂಡ ಸಮಷ್ಟಿ ಪ್ರಜ್ಞೆಯ ಸೃಷ್ಟಿಯೇ ಆಗಿರುವ ಜಾನಪದದ ಅಧ್ಯಯನ ಊಹಾತ್ಮಕ ಶಾಸ್ತ್ರವಲ್ಲ; ವಾಸ್ತವಿಕ ಆಧಾರಗಳ ಮೇಲೆ ನಿಂತಿರುವ ವಿಜ್ಞಾನ. ಆಧುನಿಕ ಬದುಕನ್ನು ವ್ಯವಸ್ಥೆಯನ್ನಾಗಿ ರೂಪಿಸಿಕೊಳ್ಳಲು  ಜಾನಪದದ ಅರಿವು ಸಹಾಯಕವಾಗುತ್ತದೆ.
         ಮನುಷ್ಯನ ಸಂಸ್ಕøತಿಯ ಪರಿಪೂರ್ಣ ಅರಿವಿಗೆ ಜಾನಪದ ಅಧ್ಯಯನ ಅತ್ಯಗತ್ಯ.  ಸಂಸ್ಕøತಿಯ ಅಧ್ಯಯನದಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಜಾನಪದವನ್ನು ಹೊರತುಪಡಿಸಿ ಸಂಸ್ಕøತಿಯ ಅಧ್ಯಯನ ಸಾಧ್ಯವೇಯಿಲ್ಲ ಎನ್ನುವುದು ನಿರ್ವಿವಾದ. 
        ಜಾನಪದವು ಕಲೆಯೂ ಹೌದು, ಶಾಸ್ತ್ರವೂ ಹೌದು. ಜಾನಪದ ಅಧ್ಯಯನ ಒಂದು ಶಾಸ್ತ್ರವಲ್ಲ; ಹಲವು ಶಾಸ್ತ್ರಗಳ ಸಮಷ್ಟಿ. ಯಾರೂ ತಮ್ಮ ಶಾಖೆಯದೆಂದು ಹಕ್ಕು ಚಲಾಯಿಸುವಂತಿಲ್ಲ. ಎಷ್ಟೋ ವಿಷಯಗಳ ಮೇಲೆ ಜಾನಪದ ಅಮೂಲ್ಯವಾದ ಬೆಳಕು ಚೆಲ್ಲುತ್ತದೆ. ಸಾಂಪ್ರದಾಯಿಕ ಶಿಕ್ಷಣದ ಸಾಧನವಾಗಿರುವ ಜಾನಪದ ಪುರಾಣ, ಐತಿಹ್ಯಗಳ ಅರಿವಿಗೆ ಸಹಾಯಕವಾಗಿದೆ. ಸಾಹಿತ್ಯ ವಿದ್ವಾಂಸರು, ಭಾಷಾ ವಿದ್ವಾಂಸರು, ಮಾನವ ಶಾಸ್ತ್ರೀಯ ವಿದ್ವಾಂಸರು ಜಾನಪದವನ್ನೇ ಅವಲಂಬಿಸಿದ್ದಾರೆ.
ಜಾನಪದದೊಂದಿಗೆ ಸಾಹಿತ್ಯಯು ಬಿಡಿಸಲಾಗದ ಅತ್ಯಂತ ಗಾಢವಾದ ಸಂಬಂಧವನ್ನು ಹೊಂದಿದೆ. ಜಗತ್ತಿನ ಶ್ರೇಷ್ಟ ಕೃತಿಗಳಾದ ರಾಮಾಯಣ, ಮಹಾಭಾರತ, ಇಲಿಯಡ್, ಗಿಲ್ಗಮೇಶ್, ಕಥಾಸರಿತ್ಸಾಗರ---ಮುಂತಾದವುಗಳಲ್ಲಿ ಜನಪದ ಸಾಹಿತ್ಯದ ಹಿನ್ನೆಲೆಯನ್ನು ಗುರುತಿಸಬಹುದು.
        ಶ್ರಮಿಕ ವರ್ಗಗಳ ವಾಸ್ತವಗಳು ಮತ್ತು ಆಕಾಂಕ್ಷೆಗಳ ಅಭಿವ್ಯಕ್ತಿಯೇ ಆಗಿರುವ ಜಾನಪದವು ಗ್ರಾಂಥಿಕ ಸಾಹಿತ್ಯರಚನೆಯು ಸೊರಗಿ ಸತ್ವಹೀನವಾದಾಗಲೆಲ್ಲಾ ಸಾಹಿತ್ಯಕ್ಕೆ ಚೈತನ್ಯವನ್ನು ನೀಡಿ ಪುನರುಜ್ಜೀವನಗೊಳ್ಳುವಂತೆ ಮಾಡಿದೆ.  
ನಾಗರಿಕತೆಯ ಕೆಳಹಂತದ ಜನರ ಪಾಲಿಗೆ ಜಾನಪದ ವಿಶ್ವಕೋಶವೇ ಆಗಿದ. ಎಲ್ಲಾ ವರ್ಗದ ಬಾಹ್ಯ ಮತ್ತು ಆಂತರಿ ಜೀವನವ್ಯಾಪಾರಗಳು, ನಂಬಿಕೆ ನಡವಳಿಕೆಗಳು, ಆಚಾರ ವಿಚಾರಗಳು ಜಾನಪದ ಪರಿಧಿಯಲ್ಲಿ ಸಮಾವೇಶಗೊಳ್ಳುತ್ತವೆ. 
ಸಂಸ್ಕøತಿಯನ್ನು ಊರ್ಜಿತಗೊಳಿಸುವಲ್ಲಿ ಜಾನಪದವು ಪ್ರಮುಖ ಪಾತ್ರವಹಿಸುತ್ತದೆ. ಸಂಸ್ಕøತಿಯ ಎಲ್ಲಾ ಅಂಶಗಳನ್ನೂ ಸೂಕ್ಷವಾಗಿ ಅಭಿವೃದ್ಧಿಗೊಳಿಸುತ್ತದೆ. ಗಾದೆಗಳು ಸಂಸ್ಕøತಿಯ ಮೌಲ್ಯವನ್ನು ಬಿತ್ತರಿಸುತ್ತವೆ. ಒಗಟುಗಳು ನಿಸರ್ಗದ ನಿಗೂಢ ಲಕ್ಷಣಗಳನ್ನು ಅರಿಯುವಲ್ಲಿ, ಭೌತಿಕ ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಕøತಿಯ ಲಕ್ಷಣವನ್ನು ತಿಳಿಯುವಲ್ಲಿ ಸಹಕಾರಿಯಾಗಿವೆ. ಆಬಾಲವೃದ್ಧರಿಗೆ ನೈತಿಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸು ಜನಪದ ಕಥೆಗಳು, ಸಾಂಸ್ಕøತಿಕ ಮೌಲ್ಯಗಳನ್ನು ಎತ್ತಿ ಹಿಡಿದು, ಜನಸಮುದಾಯ ದಾರಿತಪ್ಪದಂತೆ ಎಚ್ಚರಿಸಿ ಸಮಾಜವನ್ನು ನಿಯಂತ್ರಿಸುವ, ಆಪತ್ತಿನಿಂದ ಪಾರುಮಾಡುವ ಚೈತನ್ಯವನ್ನು ಹೊಂದಿವೆ. 
        ಜನಪದ ಗೀತೆಗಳು, ಲಾವಣಿಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿವೆ.ಪರಕೀಯರ ದಾಳಿಯನ್ನು, ದಬ್ಬಾಳಿಕೆಯನ್ನು ವಿರೋಧಿಸಿ, ಐಕ್ಯತೆ, ಪ್ರಾಂತೀಯತೆ, ರಾಷ್ಟ್ರೀಯತೆ ಮುಂತಾದ ಭಾವನೆಗಳನ್ನು ಉದ್ದೀಪನಗೊಳಿಸಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಿಂದ ಪಾರಾಗುವಲ್ಲಿ ಉಪಯುಕ್ತವಾಗಿವೆ. 
ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ನೀಡಬಲ್ಲ, ನಿಸರ್ಗದ ವಿಚಿತ್ರಗಳನ್ನು ಗುರುತಿಸಿ ಅಪಾಯದಿಂದ ಪಾರುಮಾಡಬಲ್ಲ ಜ್ಞಾನಸಂಪತ್ತು ಜಾನಪದದಲ್ಲಡಗಿದೆ. ಸುನಾಮಿ ದುರಂತದಿಂದ ಪಾರಾದ ಅಂಡಮಾನ್ ನಿಕೋಬಾರ್ ದ್ವೀಪದ ಬುಡಕಟ್ಟಿನವರೇ ಇದಕ್ಕೆ ಸಾಕ್ಷಿ.
        ಪ್ರೇಮ, ತ್ಯಾಗ, ಮಾತ್ಸರ್ಯ, ಸಾಹಸ, ಛಲ, ದ್ವೇಷ, ಬಂಜೆತನ, ಹೆಣ್ಣಿನ ಪಾತಿವ್ರತ್ಯ, ಮನುಷ್ಯನ ಜಿಪುಣತನ, ಕಷ್ಟ ಕಾರ್ಪಣ್ಯ, ಸೋಲು, ನಿರಾಸೆ ಇತ್ಯಾದಿ ಮನುಷ್ಯನ ನಿತ್ಯ ಜೀವನದ ಸಮಸ್ತವನ್ನೂ ಅಭಿವ್ಯಕ್ತಗೊಳುತ್ತದೆ. ಜೀವನದ ಆದರ್ಶವನ್ನು ಉಳಿಸುವ, ನೈತಿಕ ಮೌಲ್ಯವನ್ನು ಎತ್ತಿ ಹಿಡಿಯುವ ಮೌಲ್ಯಾನುಸರಣೆಯ ಸಂದೇಶನ್ನು ಸಾರುವ, ಆದರ್ಶ ಸಮಾಜವನ್ನು ಉಳಿಸಿ ಬೆಳೆಸುವ ಸಾಮಥ್ರ್ಯವು ಜಾನಪದ ಸಂಸ್ಕøತಿಯಲ್ಲಿ ಅಡಕವಾಗಿದೆ.
       ಜಾನಪದದಲ್ಲಿರುವುದೆಲ್ಲ ಜೀವನದಲ್ಲಿದೆ. ಜೀವನದ ಸಮಸ್ತವೂ ಜಾನಪದದಲ್ಲಿದೆ. ಜೀವನವೇ ಜಾನಪದ ಜಾನಪದವೇ ಜೀವನವೆಂದಾದರೆ, ಯಾವ ಸಂಕಷ್ಟಗಳೂ ಹತ್ತಿರ ಸುಳಿಯವು. ಮೋಹ-ದಾಹ, ಮದ-ಮತ್ಸರ, ತಳಮಳ-ತಲ್ಲಣಗಳು ತಾವಾಗಿಯೇ ದೂರ ಸರಿಯುತ್ತವೆ. ಬಾಳು ಬಂಗಾರವಾಗುತ್ತದೆ.
                                               ಆಚಾರಕರಸಾಗು ನೀತಿಗೆ ಪ್ರಭುವಾಗು
                                               ಮಾತಿನಲ್ಲಿ ಚೂಡಮಣಿಯಾಗು ನನಕಂದ 
                                               ಜ್ಯೋತಿಯೆ ಆಗು ಜಗಕೆಲ್ಲ||
      ನಮ್ಮ ಜನಪದ ಮಾತೆಯರ ಮುತ್ತಿನಂತಹ ಮಾತಿನ ಆಶೀರ್ವಾಚನಗಳ ಜನಪದ ಭಂಡಾರವೇ ಹೇರಳವಾಗಿರುವಾಗ ನಮ್ಮ ಬಾಳು ಬಂಗಾರವಾಗದೆ ಇನ್ನೇನು. 
                                               ಮುತ್ತು ಮಾಣಿಕ ಬೇಡ ಮತ್ತೆ ಸಂಪದ ಬೇಡ
                                               ಸುತ್ತ ಕೋಟೆಯ ವೈಭವ ಬೇಡ ನನ್ನವ್ವ
                                               ಸುತ್ತೆಲ್ಲ ಜನಪದ ಹಾಡಿರಲಿ||
ಎಂದು ಹಾಡುತ್ತಾ ಜನಪದ ಸೊಗಡನ್ನು ಸುತ್ತೆಲ್ಲ ಪಸರಿಸ ಬಯಸಿದ್ದಾರೆ ನಮ್ಮ ಜನಪದರು.