ಶನಿವಾರ, ಆಗಸ್ಟ್ 20, 2016

ರೈತ ಚಳವಳಿಗೆ ಹೊಸ ಜೀವ ಬರಲಿದೆಯೆ?





-ನಟರಾಜ ಹುಳಿಯಾರ

ಸೌಜನ್ಯ:ಪ್ರಜಾವಾಣಿ

ಕರ್ನಾಟಕದ ರೈತ ಚಳವಳಿಯ ಎತ್ತರದ ದಿನಗಳಲ್ಲಿ ‘ಪ್ರಜಾವಾಣಿ’ಯ ವರದಿಗಾರರಾಗಿದ್ದ ಕೆ. ಪುಟ್ಟಸ್ವಾಮಿ ಕನಕಪುರದಲ್ಲಿ ರೈತ ಚಳವಳಿಯಲ್ಲಿ ಭಾಗಿಯಾಗಿದ್ದ ರೈತರನ್ನು ಕುರಿತು ಬರೆಯುತ್ತಾರೆ: ‘ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ವಿಶೇಷವಾಗಿ ಪೊಲೀಸರು, ಸಹಕಾರಿ ಇಲಾಖೆಯ ಸಿಬ್ಬಂದಿಯನ್ನು ಕಂಡರೆ ಹೆದರಬಾರದೆಂಬ ಮನೋಭಾವನೆ ಅವರಲ್ಲಿ ಮೂಡಿತ್ತು.

ಜೈಲಿಗೆ ಹೋಗಿಬಂದದ್ದು ಅವರ ಆತ್ಮಸ್ಥೈರ್ಯಕ್ಕೆ ಕುಂದುಂಟು ಮಾಡಿರಲಿಲ್ಲ. ಬದಲಿಗೆ, ಅದನ್ನು ಹೇಳಿಕೊಳ್ಳುವುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಅನ್ಯಾಯ ಪ್ರತಿಭಟಿಸಿ ಸೆರೆಮನೆಗೆ ಹೋಗುವಾಗ ಸಜ್ಜೆ ಮನೆಗೆ ಹೋಗುವಂತೆ ಕಾತರ, ಉತ್ಸಾಹದಿಂದ ಹೋಗಬೇಕೆಂಬ ಗಾಂಧೀಜಿಯ ಮಾತುಗಳು ಅವರಿಗೆ ಮನನವಾಗಿದ್ದವು’.

ಮೊನ್ನೆ, ಭಾನುವಾರ ಮಹಾದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾಗಿ, ಜೈಲಿನಿಂದ ಬಿಡುಗಡೆಗೊಂಡ ರೈತರು ಹಸಿರು ಟವಲ್ಲುಗಳನ್ನು ಬೀಸುತ್ತಿದ್ದ ಫೋಟೊಗಳನ್ನು ನೋಡಿದಾಗ ಈ ಮಾತುಗಳು ನೆನಪಾದವು. ಆದರೆ ಒಂದು ವ್ಯತ್ಯಾಸವಿತ್ತು.

ಮೊನ್ನೆ ಜೈಲಿನಿಂದ ಬಿಡುಗಡೆಯಾದ ಕಾರ್ಯಕರ್ತರನ್ನು ಸ್ವಾಗತಿಸಿದವರು ಜೆಡಿಎಸ್ ನಾಯಕರು. ಹಿಂದೊಮ್ಮೆ ಗುಂಡೂರಾವ್ ನೇತೃತ್ವದ ಸರ್ಕಾರದ ವಿರುದ್ಧ ರೈತ ಚಳವಳಿ ಸೃಷ್ಟಿಸಿದ ಆಡಳಿತವಿರೋಧಿ ಅಲೆಯಿಂದಲೂ ಅಧಿಕಾರಕ್ಕೆ ಬಂದ ಜನತಾಪಕ್ಷದ ನಾಯಕರುಗಳು ಮುಂದೆ ರೈತ ಚಳವಳಿಯನ್ನೇ ಮುರಿಯಲೆತ್ನಿಸಿದ್ದು ಈಗ ಇತಿಹಾಸದ ಭಾಗವಾಗಿದೆ.

ಇದೀಗ ಮತ್ತೆ ಜೆಡಿಎಸ್ ರೈತರನ್ನು ಹುಡುಕಿಕೊಂಡು ಹೊರಟಿರುವುದು ಕುತೂಹಲಕರ. ಅದೇನೇ ಇರಲಿ, ಎಂಬತ್ತರ ದಶಕದಲ್ಲಿ ಗುಂಡೂರಾವ್ ನೇತೃತ್ವದ ಸರ್ಕಾರ ಮಾಡಿದ ತಪ್ಪನ್ನೇ ಮೊನ್ನೆ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಕೊನೆಗೂ ರೈತರನ್ನು ಬಿಡುಗಡೆ ಮಾಡಿ ಇನ್ನಷ್ಟು ಅಪಾಯದಿಂದ ತಪ್ಪಿಸಿಕೊಳ್ಳಲೆತ್ನಿಸಿದೆ.

ಮೊನ್ನೆ ರೈತರನ್ನು ಭೇಟಿ ಮಾಡಲು ಹೋಗಿದ್ದ ದಿನೇಶ್ ಗುಂಡೂರಾವ್ ಹಾಗೂ ಎಚ್.ಕೆ.ಪಾಟೀಲರಿಗೆ ರೈತ ಮಹಿಳೆಯೊಬ್ಬರು ‘ಅವತ್ತು ಸಿಕ್ಕಿದ್ದರೆ ನಿಮಗೇ ಬಡೀತಿದ್ವಿ’ ಎಂದು ರೇಗಿದಾಗ, ಈ ಕಾಲದ ರೈತ ಚಳವಳಿಯ ಝಳ ಅವರಿಗೂ ಸರ್ಕಾರಕ್ಕೂ ಸರಿಯಾಗಿ ತಾಗಿರಬಹುದು.

ಮಹಾದಾಯಿ ರೈತ ಸ್ಫೋಟದ ಬೆನ್ನಹಿಂದೆಯೇ ಕಳೆದ ವಾರ ತಿಪಟೂರಿನಿಂದ ಹಿರಿಯ ರೈತರು ಹಾಗೂ ಹೊಸ ತಲೆಮಾರಿನ ರೈತರು ರಾಜ್ಯ ರೈತಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವದಲ್ಲಿ ಕಾಲ್ನಡಿಗೆಯಲ್ಲಿ ಬೆಂಗಳೂರಿನತ್ತ ಹೊರಟಿದ್ದರು.

ಅವರು ಕೊಬ್ಬರಿಗೆ ಕ್ವಿಂಟಾಲಿಗೆ ₹ 15000  ಹಾಗೂ ಅಡಿಕೆಗೆ ₹ 45000 ಬೆಂಬಲ ಬೆಲೆ ಕೇಳುತ್ತಿದ್ದರು. ಜೊತೆಗೆ, ಆನ್‌ಲೈನ್ ಟ್ರೇಡಿಂಗನ್ನು ಕರಾರುವಾಕ್ಕಾಗಿ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದರು.

ಎರಡು ವರ್ಷಗಳ ಕೆಳಗೆ ಕರ್ನಾಟಕ ಸರ್ಕಾರ ಆನ್‌ಲೈನ್ ಟ್ರೇಡಿಂಗ್ ಶುರು ಮಾಡಿದಾಗ ದಲ್ಲಾಳಿಗಳ ಮೋಸಕ್ಕೆ ಕಡಿವಾಣ ಬೀಳತೊಡಗಿತ್ತು. ಆನ್‌ಲೈನ್ ಟ್ರೇಡಿಂಗಿನಲ್ಲಿ ಒಂದು ಮಟ್ಟದ ಪಾರದರ್ಶಕ ವ್ಯವಸ್ಥೆಯಿದೆ. ರೈತರ ಉತ್ಪನ್ನಗಳಿಗೆ ಇದು ಸ್ಪರ್ಧಾತ್ಮಕ ಬೆಲೆಯನ್ನು ತಂದುಕೊಡಬಲ್ಲದು. ವ್ಯಾಪಾರಿಗಳ ಬಡ್ಡಿದಂಧೆಯಿಂದ ರೈತರನ್ನು ಪಾರುಮಾಡಬಲ್ಲದು.

ಕಳೆದ ಬಜೆಟ್ ಮಂಡಿಸಿದಾಗ ಮುಖ್ಯಮಂತ್ರಿಗಳು ಆನ್‌ಲೈನ್ ಟ್ರೇಡಿಂಗ್ ತಮ್ಮ ಸರ್ಕಾರದ ಮಹತ್ವದ ಪ್ರಯೋಗವೆಂಬಂತೆ ಬಣ್ಣಿಸಿದ್ದರು. ಇಡೀ ದೇಶದಲ್ಲೇ ಇದು ಮೊದಲ ಬಾರಿಗೆ ಕರ್ನಾಟಕದ ತಿಪಟೂರು, ಅರಸೀಕೆರೆ, ಚಾಮರಾಜನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು.

ಕೇಂದ್ರ ಸರ್ಕಾರ ಈ ಪ್ರಯೋಗವನ್ನು ಅಧ್ಯಯನ ಮಾಡಲು ಅಧಿಕಾರಿಗಳ ತಂಡವನ್ನು ಕರ್ನಾಟಕಕ್ಕೆ ಕಳಿಸಿತ್ತು. ತಿಪಟೂರಿನಲ್ಲಿ ಒಬ್ಬ ರೈತಪರ ಕಾಳಜಿಯ ಎಪಿಎಂಸಿ ಅಧಿಕಾರಿ ನ್ಯಾಮಗೌಡ ಈ ಪ್ರಯೋಗವನ್ನು ದಕ್ಷವಾಗಿ ಜಾರಿ ಮಾಡಲೆತ್ನಿಸಿದ್ದರು.

ಆದರೆ ಇ-ಟ್ರೇಡಿಂಗ್ ಜೊತೆಗೆ ಇ-ಬ್ಯಾಂಕಿಂಗ್ ಇಲ್ಲದೆ ರೈತರ ಖಾತೆಗೆ ಹಣ ವ್ಯಾಪಾರಿಗಳಿಂದ ನೇರವಾಗಿ ಪಾವತಿಯಾಗುತ್ತಿಲ್ಲ. ವ್ಯಾಪಾರಿಗಳ ಬಡ್ಡಿ ಕುಣಿಕೆಯಿಂದ ರೈತರು ಪಾರಾಗಲು ಆಗುತ್ತಿಲ್ಲ. ಆನ್‌ಲೈನ್ ಟ್ರೇಡಿಂಗ್ ಪೂರ್ಣವಾಗಿ ಜಾರಿಯಾಗದಂತೆ ನೋಡಿಕೊಳ್ಳಲೆತ್ನಿಸುತ್ತಿರುವ ಮಧ್ಯವರ್ತಿಗಳ ಗುಂಪು ರೈತರಿಗೆ ನ್ಯಾಯಬೆಲೆ ಸಿಗುವಲ್ಲಿ ಅಡ್ಡಿಯಾಗಿ ನಿಂತಿದೆ.

ಕಳೆದ ವರ್ಷ ಭೇಟಿಯಾದ ರೈತನಿಯೋಗಕ್ಕೆ ‘ಯಾವ ಕಾರಣಕ್ಕೂ ಆನ್‌ಲೈನ್ ಟ್ರೇಡಿಂಗ್ ಕೈ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಅದು ಎಲ್ಲ ಕಡೆ ದಕ್ಷವಾಗಿ ಜಾರಿಗೆ ಬರುವಂತೆ ಕಾಣುತ್ತಿಲ್ಲ. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಕಳ್ಳಮೌನಕ್ಕೆ ಶರಣಾದಂತಿದೆ.

ರೈತ ಚಳವಳಿ ಶುರುವಾದಾಗಿನಿಂದಲೂ ರೈತರು ತಾವು ಬೆಳೆದ ಬೆಳೆಗೆ ತಕ್ಕ ಬೆಲೆಗಾಗಿ ಒತ್ತಾಯಿಸುತ್ತಲೇ ಇದ್ದಾರೆ. ಕಳೆದ ವರ್ಷ ರೈತಪರ ಚಿಂತಕ ದೇವಿಂದರ್ ಶರ್ಮ ಗೋಧಿ ಬೆಲೆಯ ಸುತ್ತ ಕೊಟ್ಟಿರುವ ಅಂಕಿಅಂಶಗಳನ್ನು ಗಮನಿಸಿದರೂ ಸಾಕು, ರೈತರಿಗೆ ಆಗುತ್ತಿರುವ ಅನ್ಯಾಯದ ಪ್ರಮಾಣ ಅರ್ಥವಾಗುತ್ತದೆ:‘1970ರಲ್ಲಿ ಒಂದು ಕ್ವಿಂಟಲ್ ಗೋಧಿಗೆ ರೈತರಿಗೆ 76 ರೂಪಾಯಿ ಸಿಗುತ್ತಿದ್ದರೆ, 2015ರಲ್ಲಿ ಕ್ವಿಂಟಲ್‌ಗೆ 1450 ರೂಪಾಯಿ. ಅಂದರೆ, 19 ಪಟ್ಟು ಹೆಚ್ಚಳ.

ಆದರೆ ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಬಳ 120 ಪಟ್ಟು, ಶಾಲಾಕಾಲೇಜುಗಳ ಶುಲ್ಕ 280ರಿಂದ 320 ಪಟ್ಟು ಹೆಚ್ಚಾಗಿದೆ. ಗೋಧಿ ಬೆಳೆಗಾರರ ಕುಟುಂಬದ ತಿಂಗಳ ಆದಾಯ 1800 ರೂಪಾಯಿ. ಕೇಂದ್ರ ಸರ್ಕಾರಿ ನೌಕರರ ಸಂಬಳದಂತೆ ಗೋಧಿ ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಕ್ಕಿದ್ದರೆ ಕ್ವಿಂಟಲ್‌ಗೆ ಕೊನೆಯಪಕ್ಷ 7650 ರೂಪಾಯಿ ಇರಬೇಕಾಗಿತ್ತು’ (‘ನೆಲದ ಸತ್ಯ’, ಕನ್ನಡಕ್ಕೆ: ಕೆ.ಎನ್. ನಾಗೇಶ್).

ಈ ಲೆಕ್ಕಾಚಾರವನ್ನು ತೆಂಗು, ಜೋಳ, ರಾಗಿ ಹೀಗೆ ಎಲ್ಲ ಬೆಳೆಗಳಿಗೂ ಅನ್ವಯಿಸಿದರೆ, ರೈತರು ಬೆಳೆದದ್ದನ್ನು ಉಣ್ಣುವವರಿಗೆಲ್ಲ ರೈತರ ಬೇಡಿಕೆಗಳ ಬಗ್ಗೆ ಕೊನೆಯಪಕ್ಷ ಸಹಾನುಭೂತಿಯಾದರೂ ಮೂಡಬಲ್ಲದು.

ಮೊನ್ನೆ ತೆಂಗು, ಅಡಿಕೆಗೆ ಬೆಂಬಲ ಬೆಲೆಗಾಗಿ ಒತ್ತಾಯಿಸಿ ತಿಪಟೂರಿನಿಂದ ಆರಂಭವಾಗಿದ್ದ ರೈತರ ಕಾಲ್ನಡಿಗೆ ಜಾಥಾವನ್ನು ಸರ್ಕಾರ  ನಿಜಕ್ಕೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾಕೆಂದರೆ ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ 1000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಯ ಸರಣಿಗೆ ತಡೆಯೊಡ್ಡಿ, ರೈತರು ಕೊಂಚ ಆತ್ಮವಿಶ್ವಾಸದಿಂದ ಯೋಚಿಸುವಂತೆ ಮಾಡುವ ಪ್ರಯತ್ನವೆಂಬಂತೆಯೂ ರೈತ ಚಳವಳಿಯನ್ನು, ರೈತಜಾಥಾಗಳನ್ನು ನೋಡಬೇಕು. ಮೊನ್ನೆ ಬೆಂಗಳೂರಿನತ್ತ ನಡೆದುಬರುತ್ತಿದ್ದ ರೈತರನ್ನು ಹಾದಿಮಧ್ಯೆಯೇ ಭೇಟಿಯಾದ ಇಬ್ಬರು ಮಂತ್ರಿಗಳು ಹಾಗೂ ಆನಂತರ ರಾಜಧಾನಿಯಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ಸರ್ವಪಕ್ಷ ನಿಯೋಗ ಒಯ್ಯುತ್ತೇವೆಂದೂ, ಕೇಂದ್ರ ಸರ್ಕಾರ ಘೋಷಿಸಿದಷ್ಟು ಬೆಂಬಲ ಬೆಲೆಯನ್ನು ಖಂಡಿತಾ ಕೊಡುತ್ತೇವೆಂದೂ ಮಾತು ಕೊಟ್ಟಿದ್ದಾರೆ.

ಈ ಭರವಸೆಯನ್ನು ನಂಬಿ ರೈತರು ಜಾಥಾವನ್ನು ಹಿಂತೆಗೆದುಕೊಂಡಿದ್ದಾರೆ. ಮೊನ್ನೆ ಕಾಂಗ್ರೆಸ್ ಸದಸ್ಯರು ಸಂಸತ್ ಭವನದ ಎದುರು ಈ ಬಗ್ಗೆ ಒತ್ತಾಯಿಸಿದ್ದಾರೆ. ಸಂಸದ ಮುದ್ದಹನುಮೇಗೌಡರು ಈ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಆದರೆ ಇದೆಲ್ಲ ರಾಜಕೀಯ ಪಕ್ಷಗಳ ಹಾಗೂ ಸರ್ಕಾರಗಳ ಯಾಂತ್ರಿಕ ಕಸರತ್ತಾಗಿಯಷ್ಟೆ ಕೊನೆಗೊಂಡರೆ, ಹೊಸ ತಲೆಮಾರಿನ ರೈತರ ಸಿಟ್ಟು ಯಾವ ಕಡೆಗೆ ತಿರುಗುತ್ತದೋ ಹೇಳುವುದು ಕಷ್ಟ.

ಮೊನ್ನೆ ನರಗುಂದ, ನವಲಗುಂದದಲ್ಲಿ ರೈತರ ಸಿಟ್ಟು ಸ್ಫೋಟಗೊಂಡದ್ದು ಹಾಗೆಯೇ. ಆಗ ನಮ್ಮ ಪೊಲೀಸರು ನಡೆದುಕೊಂಡ ರೀತಿ ಬರ್ಬರವಾಗಿತ್ತು. ಬ್ರಿಟಿಷರ ಕಾಲದಲ್ಲಿ ಬಿಳಿಯರ ಸೇವೆ ಮಾಡುತ್ತಾ, ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನೇ ಹಿಂಸಿಸಿದ ಮನಸ್ಥಿತಿಯಿಂದ ನಮ್ಮ ಪೊಲೀಸರು ಇವತ್ತಿಗೂ ಹೊರಬಂದಂತಿಲ್ಲ. ಈ ಪೊಲೀಸರಲ್ಲಿ ಬಹುತೇಕರು ಹಳ್ಳಿಯಿಂದ ಬಂದವರು; ರೈತರ ಮಕ್ಕಳು.

ಅವರೇ ರೈತರನ್ನು ಶತ್ರುಗಳಂತೆ ಕಾಣುತ್ತಾರೆನ್ನುವುದು ನಿಜಕ್ಕೂ ಕ್ರೂರವ್ಯಂಗ್ಯ. ಹಾಗೆಯೇ ಮೊನ್ನೆಯ ಪ್ರತಿಭಟನೆಯನ್ನೇ ನೋಡಿ: ಮಹಾದಾಯಿ ನೀರು ನಾಡಿನ ಅನೇಕ ಭಾಗಗಳಿಗೆ ಬೇಕು ತಾನೆ? ಆದರೆ ಈ ನೀರಿಗಾಗಿ ಹೋರಾಟ ನಡೆಸಿ ರೈತರು ಮಾತ್ರ ಜೈಲಿಗೆ ಹೋಗುತ್ತಾರೆ. ರೈತರು ಬೆಳೆದದ್ದಕ್ಕೆ ಅರ್ಧ ಬೆಲೆಯನ್ನೂ ಕೊಡದ ಅನಾಗರಿಕ ಸಮಾಜ ತನಗೆ ಬೇಕಾದ ಸೌಲಭ್ಯಗಳಿಗಾಗಿ ರೈತರು ಕಾಲಾಳುಗಳಂತೆ ಹೋರಾಡಬೇಕೆಂದು ಬಯಸುತ್ತದೆ; ಅವರ ಹೋರಾಟಕ್ಕೆ ಬೆಂಬಲ ಕೊಡಲು ಮಾತ್ರ ಹಿಂಜರಿಯುತ್ತದೆ.

ರೈತ ಹೋರಾಟದ ದೌರ್ಬಲ್ಯಗಳ ಬಗ್ಗೆ ಇನ್ನಿತರ ಸಂಘಟನೆಗಳ ನಾಯಕರು, ವಿಶ್ಲೇಷಕರು ಶರಾ ಬರೆಯುತ್ತಲೇ ಇರುತ್ತಾರೆ; ಆದರೆ ರೈತರ ಮೇಲೆ ಹಲ್ಲೆ ನಡೆದಾಗ ಮೌನವಾಗುತ್ತಾರೆ. ಮೊನ್ನೆ ತಾನೇ ರೈತನಾಯಕ ಕುರುಬೂರು ಶಾಂತಕುಮಾರ್ ರೈತರ ಮೇಲೆ ನಡೆಯುತ್ತಿರುವ ಹಿಂಸೆಗಳ ಬಗ್ಗೆ ಸಾಹಿತಿಗಳ ಮೌನ ಕುರಿತು ಸಿಟ್ಟಿನಿಂದ ಮಾತಾಡಿರುವುದರಲ್ಲಿ ಅರ್ಥವಿದೆ.

ಯಾಕೆಂದರೆ, ‘ಸಾಂಸ್ಕೃತಿಕ’ ಎನ್ನಲಾಗುವ ವಿಚಾರಗಳಿಗೆ ಬೇಗ ಪ್ರತಿಕ್ರಿಯಿಸುವ ಲೇಖಕವರ್ಗ ರೈತಹೋರಾಟಗಳ ಬಗ್ಗೆ ಮೌನ ತಾಳುತ್ತದೆ. ಅಂದರೆ, ಲೇಖಕರು ತಮ್ಮ ವರ್ಗಹಿತಗಳನ್ನು ಕುರಿತೇ ಯೋಚಿಸುತ್ತಿರುತ್ತಾರೆ ಎಂದು ಇದರ ಅರ್ಥ. ಕೊನೆಯ ಪಕ್ಷ ರೈತರಿಗೆ ಬೇಕಾದ ಬರಹ, ಪುಸ್ತಕ, ಚಿಂತನೆ ಇವುಗಳ ಬಗ್ಗೆ ತಾನು ಮಾಡಬಹುದಾದ ಸಣ್ಣಪುಟ್ಟ ಕೆಲಸಗಳನ್ನೂ ಈ ವರ್ಗ ಮಾಡುತ್ತಿಲ್ಲ.

ಈಚೆಗೆ ಕನ್ನಡಕ್ಕೆ ಬಂದಿರುವ ರೈತಪರ ಚಿಂತಕ ದೇವಿಂದರ್ ಶರ್ಮ ಥರದವರ ಪುಸ್ತಕಗಳಲ್ಲಿರುವ ವಿಚಾರಗಳನ್ನು ರೈತರಿಗೆ ಮುಟ್ಟಿಸಬೇಕೆಂಬ ಕರ್ತವ್ಯಪ್ರಜ್ಞೆ ಕೂಡ ನಮ್ಮ ಗ್ರಾಮಾಂತರ ಲೇಖಕರಲ್ಲಿ ಕಾಣುತ್ತಿಲ್ಲ. ಇದೆಲ್ಲದರ ನಡುವೆ, ಹೊಸ ಮಾಧ್ಯಮಗಳನ್ನು ಬಳಸಬಲ್ಲ ತಲೆಮಾರೊಂದು ರೈತರಿಗಾಗಿ ತನ್ನ ಕೈಲಾದ್ದನ್ನು ಮಾಡಲು ತಿಪಟೂರಿನಂಥ  ಪುಟ್ಟ ಊರಿನಲ್ಲಿ ಕೆಲಸ ಶುರು ಮಾಡಿರುವುದು ಎಲ್ಲ ಕಾಲದಲ್ಲೂ ಕಾಳಜಿಯ ತರುಣರು ಸೃಷ್ಟಿಯಾಗುವುದರ ಬಗ್ಗೆ ಹೊಸ ಆಸೆ ಹುಟ್ಟಿಸುತ್ತದೆ.

ಕಾರ್ಲ್ ಮಾರ್ಕ್ಸ್ ಹೇಳಿದ ಪ್ರಖ್ಯಾತ ಮಾತೊಂದಿದೆ: ‘ನಮ್ಮ ಹಳೆಯ ಗೆಳೆಯ, ನಮ್ಮ ಹಳೆಯ ಮೋಲ್‌ಗೆ (ನೆಲ ಕೊರೆಯುವ ಹೆಗ್ಗಣಕ್ಕೆ) ಒಳಗೊಳಗೇ, ನೆಲದಡಿಯಲ್ಲೇ ಚೆನ್ನಾಗಿ ಕೆಲಸ ಮಾಡುವುದು, ಇದ್ದಕ್ಕಿದ್ದಂತೆ ಮೇಲೆದ್ದು ಚಿಮ್ಮಿ ಬರುವುದು ಗೊತ್ತಿದೆ’. ರೈತರು ‘ಅಂಡರ್ ಗ್ರೌಂಡ್’ ಆಗಿ ಕೆಲಸ ಮಾಡುವ ಗೆರಿಲ್ಲಾ ಹೋರಾಟಗಾರರಲ್ಲದಿರಬಹುದು. ಆದರೆ ಅವರ ಒಳಗಿನ ಸಿಟ್ಟು ಹೊರಚೆಲ್ಲಿದಾಗ ರಾಜ್ಯಗಳಳಿದಿವೆ, ರಾಜ್ಯಗಳುರುಳಿವೆ ಎಂಬುದು ರಾಜಕಾರಣಿಗಳಿಗೆ ಗೊತ್ತಿರಲಿ.

ಅದರ ಜೊತೆಗೇ, ತಮ್ಮ ಹೋರಾಟದ ಫಲವಾಗಿ ಒಂದು ಪಕ್ಷ ಹೋಗಿ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆಯೇ ಹೊರತು, ತಮ್ಮ ಸ್ಥಿತಿ ಮಾತ್ರ ಹಾಗೇ ಉಳಿಯುತ್ತದಲ್ಲ; ಹಾಗಾದರೆ ತಮ್ಮ ಹೋರಾಟಕ್ಕೆ, ಚಿಂತನೆಗಳಿಗೆ, ಕೃಷಿಗೆ ಯಾವಬಗೆಯ ದೀರ್ಘಕಾಲದ ಯೋಜನೆಗಳನ್ನು ತಯಾರಿಸಬೇಕು ಎಂಬ ಬಗ್ಗೆ ರೈತರು, ರೈತ ನಾಯಕರು, ರೈತಪರ ಚಿಂತಕರು ಒಟ್ಟಾಗಿ ಕೂತು ಆಳವಾಗಿ ಯೋಚಿಸಬೇಕಾದ ಕಾಲ ಇದು.

ಕೊನೆ ಟಿಪ್ಪಣಿ: ಚಳವಳಿ ಮತ್ತು ನಕಲಿ ಟವಲ್ಲುಗಳು!
ನಕಲಿಗಳೇ ಅಸಲಿಯಂತೆ ಆಡುವ ಈ ಕಾಲದಲ್ಲಿ ರೈತ ಚಳವಳಿಗಳ ಸಂಘಟಕರು ಗಮನಿಸಬೇಕಾದ ಅಂಶವೊಂದಿದೆ: ರಾಜಕೀಯ ಪಕ್ಷಗಳು ಇದ್ದಕ್ಕಿದ್ದಂತೆ ಹೊಸ ಹಸಿರು ಶಾಲು ಹೊದಿಸಿ, ರೈತ ಮೆರವಣಿಗೆಗಳಿಗೆ ದಿಢೀರ್ ರೈತರನ್ನು ಛೂ ಬಿಡಬಲ್ಲವು. ಕಳೆದ ವರ್ಷ ದೊಡ್ಡಬಳ್ಳಾಪುರದ ದಾರಿಯಲ್ಲಿ ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಯಿತು.

ರಸ್ತೆ ತೆರವಾದ ನಂತರ, ನಾನು ನೋಡನೋಡುತ್ತಿರುವಂತೆಯೇ, ಒಂದು ಗುಂಪಿನ ‘ರೈತರು’ ಸೀದಾ ಬಿಜೆಪಿಯ ವ್ಯಾನ್ ಹತ್ತಿ ಹೊರಟರು. ವಿಧಾನಸಭೆಯ ಅಧಿವೇಶನ ನಡೆಯುತ್ತಿರುವಾಗ ರೈತರ ರಸ್ತೆ ತಡೆಯ ಅಸ್ತ್ರ ಆ ಪಕ್ಷಕ್ಕೆ ಬೇಕಾಗಿತ್ತು. ಅದಕ್ಕೇ ಅದು ಏಕಾಏಕಿ ಕೇಸರಿ ತೊಡೆದು ಹಸಿರಾಗಿತ್ತು!

ಇನ್ನೊಂದು ಘಟನೆ: ಕಳೆದ ತಿಂಗಳು ತಿಪಟೂರಿನಲ್ಲಿ ನಡೆದ ಭಾರಿ ರೈತ ಸಮಾವೇಶದ ದಿನ ಎಲ್ಲವೂ ಶಾಂತಿಯುತವಾಗಿ ನಡೆದಿತ್ತು. ಆದರೆ ಸಂಜೆ ಹತ್ತು ಜನ ಹುಡುಗರು ಬೈಕಿನಲ್ಲಿ ಬಂದು ಪೆಟ್ರೋಲ್ ಬಂಕ್ ಒಂದರ ಬಳಿ ಕಲ್ಲೆಸೆದು ಹೋದರು. ಅವರಲ್ಲಿ ಯಾರೂ ಸಮಾವೇಶಕ್ಕೆ ಬಂದವರಾಗಿರಲಿಲ್ಲ. ಅಂದ ಮೇಲೆ, ಅವರು ಬೇರೆ ಯಾವುದೋ ಪಕ್ಷಗಳ, ಗುಂಪುಗಳ ಗುಪ್ತ ಏಜೆಂಟರಾಗಿರಲೇಬೇಕು. ಸಂಘಟನೆಗಳು ಇಂಥ ನುಸುಳುಕೋರರ ವಿರುದ್ಧ ಎಚ್ಚರವಾಗಿರಬೇಕಾಗುತ್ತದೆ.

ಜಾನಪದ ಅಕಾಡೆಮಿಯ ವಿಶ್ವಜಾನಪದ ದಿನಾಚರಣೆ

ಹೊಸ ತಲೆಮಾರಿನ ಭೂ ಹೋರಾಟಕ್ಕೆ ಯಶಸ್ವಿ ಮುನ್ನುಡಿ

ಹೊಸ ತಲೆಮಾರಿನ ಭೂ ಹೋರಾಟಕ್ಕೆ ಯಶಸ್ವಿ ಮುನ್ನುಡಿ
  
   ದೇವರಾಜ್ ಜನ್ಮ ಶತಮಾನೋತ್ಸವದ ದಿನವಾದ ಆಗಸ್ಟ ೨೦ ಹೊಸ ತಲೆಮಾರಿನ ಭೂ ಹೋರಾಟದ ಹುಟ್ಟಿಗೆ ಸಾಕ್ಷಿಯಾಯಿತು. ರಾಜ್ಯದ ಬಹುತೇಕ ಜಿಲ್ಲೆಗಳಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ  ಬೆಂಗಳೂರಿಗೆ ಬಂದಿಳಿದ ಹಳ್ಳಿ ಮತ್ತು ಪಟ್ಟಣದ ಬಡಜನರು ಸಹಸ್ರಾರು ಸಂಖ್ಯೆಯಲ್ಲಿ ಧೃಡಚಿತ್ತದ ಹೋರಾಟವನ್ನು ಆರಂಭಿಸಿದರು.

ಸಾವಿರಾರು ಸಂಖ್ಯೆಯಲ್ಲಿ ರೈಲ್ವೆ ನಿಲ್ದಾಣದೆದುರು ಅಣಿನೆರೆದಿದ್ದ ಜನರ ರ್ಯಾಲಿಯನ್ನುದ್ದೇಶಿಸಿ. ನೂರ್ ಶ್ರೀಧರ್  ಪ್ರಾಸ್ತಾವಿಕವಾಗಿ ಮಾತನಾಡಿದರು. ಅತ್ಯಾಂತ ಶಿಸ್ತಿನ,  ಶಾಂತವಾದ ಆದರೆ ಅಷ್ಟೇ ಧೃಡ ಚಿತ್ತದ ಹೋರಾಟ ಇಂದು ನಡೆಯಲಿದೆ. ನಾವು ಯಾವ ರೀತಿಯ ತೊಂದರೆಯನ್ನೂ ಮಾಡುವುದಿಲ್ಲ ಆದರೆ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ಖಚಿತ ಮಾರ್ಗಸೂಚಿಯನ್ನು ಮುಂದಿಡದೆ ಹಿಂದಿರುಗುವುದೂ ಇಲ್ಲ. ನೀವು ಎಲ್ಲಿ ತಡಿಯುತ್ತೀರೋ ಅಲ್ಲೇ ಮಧ್ಯ ರಾತ್ರಿಯಾದರೂ ಸರಿ, ನಾಳೆ ನಾಡಿದ್ದಾದರೂ ಸರಿ ಕೂರುತ್ತೇವೆ ಎಂದು ಸಮಿತಿಯ ಪ್ರಸ್ತಾಪವನ್ನು ಜನರ ಮುಂದಿಟ್ಟು ಅದಕ್ಕೆ ಜನರಿಂದ ಒಕ್ಕೊರಲಿನ ಅನುಮೋದನೆಯನ್ನು ಪಡೆಯಲಾಯಿತು. ನಂತರ ರಾಜ್ಯದ ವಿವಿಧ ಪ್ರದೇಶಗಳಿಗೆ ಸೇರಿದ ಸಂತ್ರಸ್ತರ ಪ್ರತಿನಿಧಿಗಳು ಸಾಲಾಗಿ ನಿಂತು "ಘನತೆಯಿಂದ ಬದುಕುವಷ್ಟು ಭೂಮಿ - ಗೌರವದಿಂದ ಬಾಳುವಂಥ ವಸತಿ ನಮ್ಮ ಸಂವಿಧಾನಬದ್ಧ ಹಕ್ಕು" ಎಂಬ ಭ್ಯಾನರ್ ಅನ್ನು ಬಿಚ್ಚುವುದರ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು. "ಬೇಕೇಬೇಕು ಭೂಮಿ ಬೇಕು - ಬೇಕೇಬೇಕು ವಸತಿ ಬೇಕು" ಎಂಬ ಘೋಷಣೆಗಳು ಘರ್ಜನೆಗಳಂತೆ ಮೊಳಗಿದವು.


ನೂರಾರು ಬಾವುಟ ಮತ್ತು ಪ್ಲಕಾರ್ಡುಗಳನ್ನು ಹಿಡಿದು ಬಹಳ ವ್ಯವಸ್ಥಿತ ರೀತಿಯಲ್ಲಿ ಮೆರವಣಿಗೆ ವಿಧಾನಸೌಧ ಕಡೆಗೆ ಹೆಜ್ಜೆಹಾಕತೊಡಗಿತು. ಮೆರವಣಿಗೆ ಆನಂದ್ ರಾವ್ ವೃತ್ತವನ್ನು ದಾಟಿ ಫ್ರೀಡಂ ಪಾರ್ಕಿನ ಬಳಿ ಬಂದ ಕೂಡಲೆ ನಿರೀಕ್ಷಿಸಿದಂತೆ ಬ್ಲಾಕೇಡ್ ನಿರ್ಮಿಸಿ ಪೋಲೀಸರು ಅದನ್ನು ತಡೆದರು. ಮುಖ್ಯ ರಸ್ತೆಯನ್ನು ಬಿಟ್ಟು ಫ್ರೀಡಂ ಪಾರ್ಕಿನಲ್ಲಿ ಅಥವ ಅದರ ಪಕ್ಕದ ಅಡ್ಡ ರಸ್ತೆಯಲ್ಲಿ ಕೂರಲು ಒತ್ತಾಯಿಸತೊಡಗಿದರು. ನಾವು ವಿಧಾನ ಸೌಧದ ಬಳಿ ಇರುವ ದೇವರಾಜು ಅರಸು ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲು ಹೊರಟವರು ಅಲ್ಲಿಯ ತನಕ ಬಿಡಿ ಅಥವ ಸರ್ಕಾರದ.ಪ್ರತಿನಿಧಿಗಳು ಬಂದು ಸಮಸ್ಯೆಯ ಇತ್ಯಾರ್ಥಕ್ಕೆ ಸಮಂಜಸ ಉತ್ತರ ಕೊಡಲಿ ಎಂದು ಪಟ್ಟು ಹಿಡಿದು ಮುಖ್ಯಬೀದಿಯಲ್ಲೇ ಕೂರಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಸ್ವತಂತ್ರ ಹೋರಾಟದ ಚೇತನ ದೊರೆಸ್ವಾಮಿಯವರು, ಎಸ್.ಆರ್.ಹಿರೇಮಠರು, ರವಿಕೃಷ್ಣರೆಡ್ಡಿ, ದೊಡ್ಡಿಪಾಳ್ಯ ನರಸಿಂಹ ಮೂರ್ತೀ ಮುಂತಾದವರು ಬಹಳ ಚೈತನ್ಯಭರಿತ ಮಾತುಗಳನ್ನಾಡಿದರು. ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಕಾಗೋಡು ತಿಮ್ಮಪ್ಪನವರು ಸ್ಥಳಕ್ಕೆ ಆಗನಿಸಿದರು.ಆರ್.ಮಾನಸಯ್ಯ ಬಹಳ ಸವಿಸ್ತಾರವಾಗಿ ಸಮಿತಿಯ

 ೧೦ ಹಕ್ಕೋತ್ತಾಯಗಳನ್ನು ಮಾನ್ಯ ಮಂತ್ರಿಗಳಿಗೆ ವಿವರಿಸಿದರು. ಅದರ ಸಾರಾಂಶ ಹೀಗಿದೆ:

೧. ಘನತೆಯಿಂದ ಬದುಕುವಷ್ಟು ಭೂಮಿ-ಗೌರವದಿಂದ ಬಾಳುವಂಥ ವಸತಿ ಎಂಬುದು ಈ ಸಂದರ್ಭದ ಸರ್ಕಾರದ ಧ್ಯೇಯ ಘೋಷಣೆಯಾಗಬೇಕು. 

೨. ಈ ಘೋಷಣೆಯನ್ನು ೨ ವರ್ಷದೊಳಗೆ ಅನುಷ್ಠಾನಕ್ಕಿಳಿಸುವ ಗುರಿಯೊಂದಿಗೆ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳ ನೇತೃತ್ವದಲ್ಲಿ ಹೈಪವರ್ ಕಮಿಟಿಯನ್ನು ರಚಿಸಬೇಕು. ಈ ಸಮಿತಿಯು ಜನಚಳವಳಿಗಳ ಪ್ರತಿನಿಧಿಗಳನ್ನು ಸಹ ಒಳಗೊಂಡಿರಬೇಕು. 

೩. ಈ ಸಮಿತಿಯು ಕರ್ನಾಟಕದ ಎಲ್ಲಾ ರೀತಿಯ ಭೂಮಿಯ ಕುರಿತು ಸಮಗ್ರ ಲ್ಯಾಂಡ್ ಆಡಿಟಿಂಗ್ ನಡೆಸಬೇಕು. ಒಟ್ಟು ಲಭ್ಯವಿರುವ ಭೂಮಿ, ಬಲಾಢ್ಯರ ಒಡೆತನ ಮತ್ತು ಕಬಳಿಕೆ, ಬಲಹೀನ ಒಡೆತನಗಳು ಮತ್ತು ಆಸ್ತಿಹೀನರ ಖಚಿತ ಚಿತ್ರಣವನ್ನು ಜನತೆಯ ಮುಂದಿಡಬೇಕು.

೪. ಅಲ್ಲದೆ ಜನಸಾಮಾನ್ಯರ ಹಿತವನ್ನು ಆದ್ಯತೆ ಮಾಡಿಕೊಂಡಿರುವಂಥ ಭೂ ಬಳಕೆ ನೀತಿಯನ್ನು ಜಾರಿಗೆ ತರಬೇಕು. ಬಡವರಿಗೆ ಮನೆ, ಉಳುಮೆ ಮಾಡಿ ಬದುಕುವವರಿಗೆ ಭೂಮಿ, ಗ್ರಾಮೀಣ ಸಣ್ಣ ಕೈಗಾರಿಕೆ, ಸಾಮುದಾಯಿಕ ಅಗತ್ಯ, ಪರಿಸರ ಸಮತೋಲನ ಭೂ ಬಳಕೆ ನೀತಿಯ ಆದ್ಯತೆಗಳಾಗಿರಬೇಕು. 

೫. ಮೇಲೆ ಉಲ್ಲೇಖಿತ ಹೈಪವರ್ ಕಮಿಟಿಯ ಮೇಲ್ವಿಚಾರಣೆಯಲ್ಲಿ ಭೂನ್ಯಾಯ ಮಂಡಳಿಗಳನ್ನು ಪುನರ್ರಚಿಸಬೇಕು. ಅದರಲ್ಲೂ ಚಳವಳಿಗಳ ಪ್ರಾತಿನಿಧ್ಯ ಇರಬೇಕು. 

೬. ಯಾವುದೇ ಕಾರಣಕ್ಕೂ ಸಣ್ಣ ರೈತರನ್ನು ಹಾಗೂ ಬಡವರನ್ನು ಅವರ ನೆಲ ಮತ್ತು ನೆಲೆಯಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸರ್ಕಾರ ಘೋಷಿಸಬೇಕು. 
೭. ೫ ಎಕರೆ ಒಳಗಿನ ಬಗರ್ ಹುಕುಂ ರೈತರಿಗೆ ಕಡ್ಡಾಯವಾಗಿ ತಕ್ಷಣವೇ ಭೂಮಿಯನ್ನು ಮಂಜೂರು ಮಾಡಬೇಕು. ದಾಖಲೆ ಪತ್ರಗಳ ಸಬೂಬು ನೀಡಿ ಅವರನ್ನು ಹಕ್ಕುವಂಚಿತರನ್ನಾಗಿ ಮಾಡಬಾರದು. ಅರ್ಜಿ ಹಾಕದವರಿಗೆ ಅರ್ಜಿ ಹಾಕಲು ಮತ್ತೆ ಆರು ತಿಂಗಳ ಕಾಲಾವಕಾಶ ನೀಡಬೇಕು. ಅದೇ ಸಂದರ್ಭದಲ್ಲಿ ೩೦ ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳಬೇಕು. ಅದನ್ನು ಬಡವರಿಗೆ ಹಂಚಲಿಕ್ಕೆ ಮತ್ತು ಅರಣ್ಯ ಅಭಿವೃದ್ಧಿಗೆ ಬಳಸಬೇಕು. 

೮. ಯಾವ ರೀತಿಯ ಭೂಮಿಯೂ ಇಲ್ಲದ, ಆದರೆ ಸ್ವಯಂ ಕೃಷಿ ಮಾಡಿ ಬದುಕಲು ಬಯಸುವ ಭೂಹೀನ ಕೃಷಿ ಕೂಲಿ ಕುಟುಂಬಗಳಿಗೆ ಘನತೆಯಿಂದ ಬದುಕುವಷ್ಟು ಭೂಮಿಯನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಈ ಹಂಚಿಕೆಯಲ್ಲಿ ಸಮಾಜದ ’ಅಂತ್ಯಜ’ ಸಮುದಾಯಗಳಾದ ಅಸ್ಪಶ್ಯ, ಆದಿವಾಸಿ, ಅಲೆಮಾರಿ, ಅತಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಜನರಿಗೆ ಆದ್ಯತೆ ಇರಬೇಕು.

೯. ನಗರ ಮತ್ತು ಗ್ರಾಮಗಳ ಪ್ರತಿ ಕುಟುಂಬವೂ ಸ್ವಂತದ ನಿವೇಶನ ಸಹಿತ ಮನೆ ಹೊಂದುವ ಹಕ್ಕನ್ನು ಸರ್ಕಾರ ಮಾನ್ಯಗೊಳಿಸಬೇಕು. 

೧೦. ಬಲಾಢ್ಯರು ಕಾನೂನುಬಾಹಿರವಾಗಿ ಕಬಳಿಸಿರುವ ಲಕ್ಷಾಂತರ ಎಕರೆ ಭೂಮಿಯನ್ನು ಈ ಕೂಡಲೇ ಮರುವಶಪಡಿಸಿಕೊಳ್ಳಬೇಕು. ಅಭಿವೃದ್ಧಿಯ ಮುಸುಕಿನಲ್ಲಿ ಕಾರ್ಪೊರೇಟ್, ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ಕಬಳಿಸಿರುವ ಭೂಮಿಯನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಭೂ ಮಿತಿ ಕಾಯ್ದೆಯನ್ನು ಇಂದಿನ ಅಗತ್ಯಕ್ಕನುಸಾರ ಮರುಪರಿಷ್ಕರಿಸಬೇಕು. ಭೂಮಿತಿಯನ್ನು ಇಳಿಸಬೇಕು. ಇದರಿಂದ ದೊರಕುವ ಹೆಚ್ಚುವರಿ ಭೂಮಿಯನ್ನು ಕ್ರೋಢೀಕರಿಸಿ ಬಡವರಿಗೆ ಹಂಚುವ ದಿಟ್ಟ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು.

ಹಕ್ಕೊತ್ತಾಯಗಳನ್ನು ತಾಳ್ಮೆಯೊಂದಿಗೆ ಆಲೀಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಫನವರು ಭೂಮಿ ಸಮಸ್ಯೆಯನ್ನು ಕೈಗೆತ್ತಿಕೊಂಡು ಜನರನ್ನು ಜಾಗೃತಗೊಳಿಸಿ ಸಂಘಟಿಸುತ್ತಿರುವುದಕ್ಕಾಗಿ ಸಂಘಟಕರುಗಳಿಗೆ ಅಭಿನಂದನೆ ತಿಳಿಸಿದರು. ಸಮಿತಿ ಮುಂದಿಟ್ಟ ಒಂದೊಂದು  ಹಕ್ಕೊತ್ತಾಯಕ್ಕೂ ಪ್ರತಿಕ್ರಿಯಿಸಿ ಮಾತನಾಡಿದರು. ಕಾಳಜಿ, ಜವಬ್ದಾರಿ, ದರ್ಪ ಮತ್ತು ಕೊಂಚ ಲೇವಡಿ ಮಿಶ್ರಿತ ಶೈಲಿಯ ಅವರ ಮಾತಿಗೆ ಸಭೆಯಲ್ಲಿ ಮಿಶ್ರ ಸಂವೇದನೆ ಇತ್ತು.ಅವರ ಮಾತಿನ ರೀತಿ ಮತ್ತು ನೀತಿಯಲ್ಲಿ ಅಕ್ಷೇಪಾರ್ಹ ವಿಚಾರಗಳಿದ್ದವಾದರೂ ಅವರು ಸಾರಾಂಶದಲ್ಲಿ ಸ್ಪಷ್ಟ ಮಾತುಗಳಲ್ಲಿ ನಮ್ಮೆಲ್ಲಾ ಹಕ್ಕೊತ್ತಾಯಗಳು ಸರಿಯಾಗಿವೆ ಎಂದು ಒಪ್ಪಿಕೊಂಡರು ಹಾಗೂ ಕೂಡಲೇ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಹಾಗೂ ಸಮಿತಿಯನ್ನು ಮಾತುಕತೆಗೆ ಬರಮಾಡಿಕೊಳ್ಳಾಗುವುದು ಎಂಬುದನ್ನು ತಿಳಿಸಿದರು. ಭೂಮಿಯ ಸಕ್ರಮಕ್ಕೆ ಅರ್ಜಿ ಹಾಕುವ ಕಾಲಾವಧಿಯನ್ನು ವಿಸ್ತರಿಸುತ್ತೇವೆ. ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಿ ಅದನ್ನು ಉಪಯೋಗಿಸಿಕೊಳ್ಳುವಂತೆ ಜನರನ್ನು ಸಜ್ಜುಗೊಳಿಸಬೇಕು ಎಂದರು. ರಾಜ್ಯದಲ್ಲಿ ಒಂದು ಬಡ ಕುಟುಂಬವನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಹಾಗೇನಾದರೂ ಯಾರಾದರೂ ತೊಂದರೆ ಕೊಟ್ಟರೆ ನನ್ನ ಬಳಿ ಬನ್ನಿ ಎಂದರು.
ಮಂತ್ರಿಗಳ ಈ ಮುಕ್ತ ಬೆಂಬಲಕ್ಕಾಗಿ ಸಮಿತಿ ಅವರನ್ನು ಅಭಿನಂದಿಸಿತು, ಆದರೆ ಕಾಗೋಡು ತಿಮ್ಮಪ್ಪನವರ ಕಮಿಟ್ಮೆಂಟ್ ಕ್ಯಾಬಿನೆಟ್ ಕಮಿಟ್ಮೆಂಟಾಗಿ ಹೊರಬರಬೇಕು ಎಂದು ಒತ್ತಿ ಹೇಳಿ ಅವರನ್ನು ಬೀಳ್ಕೊಡಲಾಯಿತು.
ದೇವರಾಜ್ ಜನ್ಮಶತಮಾನೋತ್ಸವಕ್ಕೆ ಸರ್ಕಾರ ಯಾವ ಗೌರವವನ್ನೂ ತೋರಲಿಲ್ಲ ಗಾಂಧಿ ಜಯಂತಿಗಾದರೂ ತೋರುತ್ತದಾ ನೋಡೋಣ.ಅಕ್ಟೋಬರ್ ೨ ರ ಹೊತ್ತಿಗಾದರೂ ಸರ್ಕಾರ ನಿರ್ಧಿಷ್ಟ ದಿಟ್ಟ ಹೆಜ್ಜೆಗಳ ಜೊತೆ ಜನರ ಭೂಮಿ ಮತ್ತು ವಸತಿಯ ಸಮಸ್ಯೆಗಳನ್ನು ಬಗೆಹರಿಸಲು ಮುಂದೆ ಬರದಿದ್ದರೆ ಆ ಇಡೀ ತಿಂಗಳನ್ನು ಹೋರಾಟದ ತಿಂಗಳನ್ನಾಗಿ ಪರಿವರ್ತಿಸುವ, ಅದುವರೆತನಕ ಸಂಘಟನೆಯನ್ನು ವಿಸ್ತರಿಸುತ್ತಾ ಹೊಸ ಹಂತದ ಹೋರಾಟಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವ ತೀರ್ಮಾನದ ಜೊತೆ ಪ್ರತಿಭಟನಾ ಸಭೆ ಯಶಸ್ವಿಯಾಗಿ ಮುಕ್ತಾಯವಾಯಿತು.
ಹೋರಾಟದಲ್ಲಿ ಹೆಜ್ಜೆ ಹಾಕಿದ ಮತ್ತು ದೂರದಿಂದಲೇ ಅದರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಹೋರಾಟದ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಮಂಗಳವಾರ, ಆಗಸ್ಟ್ 9, 2016

ಕಿರಣ್ ಬೇಡಿಯವರು ದೇಶದ ಡಿನೋಟಿಫೈಡ್ ಸಮುದಾಯಗಳಿಗೆ ಕ್ಷಮಾಪಣೆ ಯಾಚಿಸಬೇಕು

ಪತ್ರಿಕಾ ಪ್ರಕಟಣೆ

 ಮಾನ್ಯರೇ, 

ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿಯವರು ಇತ್ತೀಚೆಗೆ ವಸಾಹತು ಆಡಳಿತದ ಸಂದರ್ಭದಲ್ಲಿ 'ಅಪರಾಧಿ ಬುಡಕಟ್ಟುಗಳು' ಎಂದು ಪಟ್ಟಿ ಮಾಡಲಾದ ಸಮುದಾಯಗಳನ್ನು ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ. 'ಮಾಜಿ ಕ್ರಿಮಿನಲ್ ಟ್ರೈಬ್‌ಗಳು ಅತ್ಯಂತ ಕ್ರೂರಿಗಳೆಂದೇ ಹೆಸರಾಗಿದ್ದಾರೆ. ಅಪರಾಧಗಳನ್ನು ನಡೆಸುವುದರಲ್ಲಿ ಅವರು ನಿಷ್ಣಾತರಾಗಿದ್ದಾರೆ. ಅವರನ್ನು ಹಿಡಿಯುವುದಾಗಲೀ, ಶಿಕ್ಷೆ ನೀಡುವುದಾಗಲೀ ಆಗುತ್ತಿಲ್ಲ'


 ಕಿರಣ್ ಬೇಡಿಯವರ ಈ ಮಾತುಗಳು ಈ ದೇಶದಲ್ಲಿ 'ಕ್ರಿಮಿನಲ್ ಬುಡಕಟ್ಟುಗಳೆಂದು' ಹಣೆಪಟ್ಟಿ ಪಡೆದು, ಬ್ರಿಟಿಷ್ ಮತ್ತು ಭಾರತದ ಸರ್ಕಾರಗಳಿಂದ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿರುವ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳ ಮನಸ್ಸಿನಲ್ಲಿ ಅತ್ಯಂತ ನೋವನ್ನುಂಟುಮಾಡುವ ಮಾತುಗಳಾಗಿವೆ. ಕನಿಷ್ಠ ನಾಗರೀಕ ಪ್ರಜ್ಞೆ ಇರುವ ಯಾರೂ ಇಂತಹ ಮಾತುಗಳನ್ನು ಉಚ್ಛರಿಸಲಾರರು. ಭಾರತದ ಸಂ"ಧಾನವುಜಾತಿ, ಧರ್ಮ, ಲಿಂಗ ಮತ್ತು ಭಾಷೆಗಳ ಆಧಾರದಲ್ಲಿ ತಾರತಮ್ಯ ಕೂಡದು ಎಂದು ಹೇಳುತ್ತದೆ. ಆದರೆ ಕಿರಣ್ ಬೇಡಿಯವರು ಬುಡಕಟ್ಟುಗಳನ್ನು, ಅಲೆಮಾರಿಗಳನ್ನು ಕ್ರಿಮಿನಲ್‌ಗಳೆಂದು ಕರೆದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯೂ,  ಹಾಲಿ ರಾಜಕಾರಣಿಯೂ ಆಗಿರುವ ಕಿರಣ್ ಬೇಡಿ ಅವರ ಈ ಜಾತಿ ನಿಂದನೆಯ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕಿರಣ್ ಬೇಡಿ ಅವರು ಈ ಕೂಡಲೇ ತಮ್ಮ ಮಾತುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ. ಕಿರಣ್ ಬೇಡಿ ಅವರು ಈ ಕೂಡಲೇ ಡಿನೋಟಿಫೈಡ್ ಸಮುದಾಯಗಳ ಕ್ಷಮೆ ಯಾಚಿಸಿ, ತಾವು ಆಡಿದ ಮಾತುಗಳನ್ನು ಹಿಂಪಡೆಯಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವ ಮತ್ತು ಸರಕಾರಿ ನೌಕರರಾಗಿ ಅವರು ಆಡಿರುವ ಮಾತುಗಳು ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ ೩ (೧) ಮತ್ತು ಸೆಕ್ಷನ್ ೪(೨)ಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದಕ್ಕೆ ಐದು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.

ಕಿರಣ್ ಬೇಡಿಯವರು ಮೇಲಿನ ಮಾತುಗಳನ್ನು ಹೇಳಿದ್ದು ಇತ್ತೀಚೆಗೆ ಉತ್ತರಪ್ರದೇಶದ ಬುಲಂದ್ ಶಹರ್‌ನಲ್ಲಿ ನಡೆದ‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ. ಈ ಘಟನೆಯಲ್ಲಿ `ಬವಾರಿಯಾ ಬುಡಕಟ್ಟು ಸಮುದಾಯದ ಪಾತ್ರವಿದೆ' ಎಂದು ಅತ್ಯಂತ ಪೂರ್ವಾಗ್ರಹಪೀಡಿತವಾಗಿ ಉತ್ತರಪ್ರದೇಶದ ಪೊಲೀಸರು ತಿಳಿಸಿದ್ದರು. ಇದನ್ನನುಸರಿಸಿ ಕೆಲ ಮಾಧ್ಯಮಗಳೂ ಸಹ ಇಡೀ ಬವಾರಿಯಾ ಸಮುದಾಯವನ್ನು ರಾಕ್ಷಸೀಕರಿಸುವ ಪ್ರಯತ್ನ ನಡೆಸಿದವು. ಇಲ್ಲಿ ಒಂದು ಪ್ರಶ್ನೆಯನ್ನು ಕೇಳಲಿಚ್ಛಿಸುತ್ತೇವೆ. ಇದೇ ಸಮಯದಲ್ಲಿ ದಲಿತ ದಂಪತಿಗಳನ್ನು ಕೇವಲ ೧೫ ರೂಪಾಯಿ ವಿಚಾರದಲ್ಲಿ ಕೊಲೆ ಮಾಡಿದ ವ್ಯಕ್ತಿಯೊಬ್ಬನ ಹೆಸರಿನಲ್ಲಿ `ಮಿಶ್ರಾ' ಎಂದು ಇತ್ತು. ಹಾಗಂತ ಮಿಶ್ರಾ ಎಂದು ಹೆಸರಿಟ್ಟುಕೊಳ್ಳುವ ಸಮುದಾಯದವರೆಲ್ಲರೂ ಕೊಲೆಗಡುಕರೇ? ಮೇಲೆ ತಿಳಿಸಿದ ಅತ್ಯಾಚಾರ ಪ್ರಕರಣದಲ್ಲಿ ನಿಜವಾದ ಆಪರಾಧಿಗಳು ಯಾರೆಂದು ಇನ್ನೂ ಪತ್ತೆಯಾಗುವುದರೊಳಗಾಗಿ ಬವಾರಿಯಾ ಬುಡಕಟ್ಟು ಸಮುದಾಯವನ್ನು ಗುರಿಪಡಿಸಿರುವುದರಲ್ಲಿ ಜಾತಿವಾದಿ ಮತ್ತು ಜನಾಂಗ ದ್ವೇಷದ ಮನಸ್ಥಿತಿ ಕೆಲಸ ಮಾಡಿದೆ. 'ಕ್ರಿಮಿನಲ್ ಬುಡಕಟ್ಟುಗಳೆಂದು' ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿದ್ದು ವಸಾಹತು ಆಡಳಿತ. ವಸಾಹತು ಆಡಳಿತ ಈ ಕುರಿತು ೧೮೭೧ರಲ್ಲಿ ಕ್ರಿಮಿನಲ್ ಬುಡಕಟ್ಟು ಕಾಯ್ದೆ ರಚಿಸಿ ಜಾರಿಗೆ ತಂದಿತು. ವಸಾಹತು ಆಡಳಿತದ ಸಂದರ್ಭದಲ್ಲಿ ರೂಪುಗೊಂಡ ಒಂದು ಅಮಾನವೀಯ ಮತ್ತು ಶುದ್ಧ ಸಾಮ್ರಾಜ್ಯಶಾಹಿ ಮನೋಭಾವದ ಕಾಯ್ದೆ ಇದು. ಈ ಕಾಯ್ದೆಯು ಮುಖ್ಯವಾಗಿ ಭಾರತದ ವ್ಯವಸಾಯ ಸಂಬಂಧಗಳನ್ನು ಬೆಸೆಯುತ್ತಿದ್ದ, ಕುಶಲಕರ್ಮಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸುವ ಸಲುವಾಗಿ ರೂಪುಗೊಂಡಿತು. ವಸಾಹತು ಆಡಳಿತ ತನ್ನ 'ಕಾನೂನು ಸುವ್ಯವಸ್ಥೆಯ' ಕಾರಣಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿತು ಎಂದು ಹೇಳಲಾಗುತ್ತಿದೆಯಾದರೂ ಈ ಕಾಯ್ದೆಯನ್ನು ರೂಪಿಸುವುದರ ಹಿಂದೆ ವಸಾಹತು ಆಡಳಿತಕ್ಕೆ ತನ್ನದೇ ಆದ ರಾಜಕೀಯಾರ್ಥಿಕ ಕಾರಣಗಳೂ ಇದ್ದವು. ವಸಾಹತು ಆಡಳಿತ 'ಕ್ರಿಮಿನಲ್‌ಗಳು' ಎಂದು ಬೇಟೆಯಾಡಿದ್ದು, ವಾಸ್ತವದಲ್ಲಿ ತಮ್ಮ ಕರಾಳ ಆಡಳಿತ ಮತ್ತು ಕಾನೂನುಗಳಿಗೆ ಪ್ರತಿರೋಧ ಒಡ್ಡಿದ್ದ ಆದಿವಾಸಿ, ಅಲೆಮಾರಿ ಸಮುದಾಯಗಳನ್ನು. 

೧೭೭೪ ಮತ್ತು ೧೮೭೧ರ ನಡುವಿನ ಭಾರತದ ಇತಿಹಾಸ ಅತ್ಯಂತ ರಕ್ತಪಾತದಿಂದ ಕೂಡಿದ ಇತಿಹಾಸವಾಗಿದೆ. ಭಾರತದ ಸ್ಥಳೀಯ ರಾಜ್ಯಗಳ ವಿರುದ್ಧ ಈ ಅವದಿಯಲ್ಲಿ ಕಂಪನಿ ಮತ್ತು ವಸಾಹತು ಆಡಳಿತವು ಅತ್ಯಂತ ಕ್ರೂರ ಯುದ್ಧಗಳನ್ನು ಮಾಡಿತು. ಆಂಗ್ಲೋ ಮರಾಠ ಯುದ್ಧ, ಮೈಸೂರು ಯುದ್ಧ, ಹೋಳ್ಕರ ಶರಣಾಗತಿ, ಪೇಶ್ವೇಗಳ ಸೋಲು, ವೆಲ್ಲೂರಿನ ಸಿಪಾಯಿದಂಗೆ, ಮೈಸೂರು ಮತ್ತು ಕೂರ್ಗ್‌ಗಳನ್ನು ವಶಪಡಿಸಿಕೊಂಡದ್ದು, ಸಿಂಧ್, ಸಿಖ್, ಔಧ್ ಪ್ರದೇಶಗಳನ್ನು ಯುದ್ಧಗಳ ಮೂಲಕ ವಶಪಡಿಸಿಕೊಂಡದ್ದು ಮತ್ತು ೧೮೫೭ರಲ್ಲಿ ನಡೆದ ಸಿಪಾಯಿ ದಂಗೆಗಳು ಹಲವು ಸ್ಥಳೀಯ ಸಮುದಾಯಗಳನ್ನು ನೆಲೆ ಇಲ್ಲದಂತೆ ಮಾಡಿದವು. ಈ ಸಮುದಾಯಗಳೇ ಮುಂದೆ ಅಲೆಮಾರಿಗಳಾಗಿ ಪರಿವರ್ತಿತವಾದವು. ಮುಖ್ಯವಾಗಿ ಆಧುನಿಕಪೂರ್ವ ಭಾರತದ ಅನೇಕ ಪಾಳೆಪಟ್ಟುಗಳು ಮತ್ತು ಸ್ಥಳೀಯ ರಾಜರು ಅನಿವಾರ್ಯವಾಗಿ ಕಂಪನಿ ಆಡಳಿತದ ಜೊತೆ ಕೈಜೋಡಿಸಬೇಕಿತ್ತು. ಇಲ್ಲವೆ ಅವರೊಡನೆ ಕಾದಾಡಬೇಕಿತ್ತು. ಈ ಎರಡೂ ಸಂದರ್ಭದಲ್ಲಿ ದೇಶೀಯ ಶ್ರಮಜೀವಿಗಳು ಆರ್ಥಿಕವಾಗಿ ಕುಸಿದು ಹೋದರು. ಕಂಪನಿ ಆಡಳಿತವನ್ನು ಒಪ್ಪಿಕೊಂಡರೆ ಅದರ ಸೈನ್ಯವನ್ನು ಸ್ಥಳೀಯ ರಾಜರು ಸಾಕಬೇಕಿತ್ತು. ಅಕಸ್ಮಾತ್ ಕಂಪನಿ ಆಡಳಿತದ ವಿರುದ್ಧ ತಿರುಗಿ ಬಿದ್ದು ಕಾದಾಡಿದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿ ಇಂಡಿಯಾದ ಎಲ್ಲ ಸ್ಥಳೀಯ ಸಂಸ್ಥಾನಗಳು ಸಿಲುಕಿ ಕೊಂಡವು. ಆದರೆ ಬಹುತೇಕ ಎಲ್ಲ ಸಂಸ್ಥಾನಗಳನ್ನು ಬ್ರಿಟೀಷ್ ಆಡಳಿತ ತನ್ನ ತಂತ್ರಗಳ ಮೂಲಕ ವಶಪಡಿಸಿಕೊಳ್ಳುತ್ತಲೇ ಹೋಯಿತು. ತಿರುಗಿಬಿದ್ದ ಸಮುದಾಯಗಳನ್ನು ಕಾನೂನುಗಳ ಮೂಲಕ ಹತ್ತಿಕ್ಕಲು ಕೆಲವು ನಿಯಮಗಳನ್ನು ರೂಪಿಸಿತು. ಈ ಹಂತದಲ್ಲಿಯೇ Criminal Tribes Act  ಜಾರಿಗೆ ಬಂದಿತು.

೧೮೭೧ರಲ್ಲಿ Criminal Tribes Act ಜಾರಿಗೆ ಬಂದರೂ, ಉತ್ತರ ಭಾರತದಲ್ಲಿ ಕಂಪನಿ ಸರಕಾರವು ೧೭೯೩ರಲ್ಲಿಯೇ ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿ ಇವು ತಮ್ಮ ಆಡಳಿತಕ್ಕೆ ಅಪಾಯಕಾರಿಗಳೆಂದು ಗುರುತಿಸಿತು. ಆ ಪಟ್ಟಿ ನಮಗೆ ಈಗ ಲಭ್ಯವಿಲ್ಲ. ಆದರೆ ಅತ್ಯಂತ ಶಾಂತವಾಗಿದ್ದ, ಶ್ರಮಜೀವಿಗಳೇ ಬದುಕುತ್ತಿದ್ದ ರೋಹಿಲ್‌ಖಂಡ್‌ನ್ನು ವಶಪಡಿಸಿಕೊಳ್ಳಲು ಬ್ರಿಟೀಷ್‌ರು ೧೭೭೦ರಲ್ಲಿ ಒಂದು ಭೀಕರ ಯುದ್ಧವನ್ನೇ ನಡೆಸಿದರು. ಭಯಂಕರ ರಕ್ತಪಾತ ಮತ್ತು ಸಾವುನೋವುಗಳು ಸಂಭವಿಸಿದವು. ರೋಹಿಲ್‌ಖಂಡ್ ಬ್ರಿಟೀಷ್ ವಶವಾಯಿತು. ಆದರೆ ಅಲ್ಲಿ ಮುಗ್ಧವಾಗಿ ಬದುಕಿ ಬಂದಿದ್ದ ದುಡಿಮೆಗಾರರು ದಿಕ್ಕೆಟ್ಟು ಹೋದರು. ಅಲ್ಲದೆ ಇವರು ಕಂಪನಿ ಆಡಳಿತದ ಮೇಲೆ ಉಗ್ರವಾದ ಸಿಟ್ಟನ್ನು ಬೆಳೆಸಿಕೊಂಡರು. ಬ್ರಿಟೀಷರ ಮೇಲೆ ಸೇಡುತೀರಿಸಿಕೊಳ್ಳಲು ಹವಣಿಸಲಾರಂಬಿಸಿದರು. ಮತ್ತು ಇಲ್ಲಿನ ಬಹುತೇಕ ಶ್ರಮಜೀವಿಗಳು ಮತ್ತು ಆದಿವಾಸಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡು ಅಲೆಮಾರಿಗಳಾದರು. ಕಂಪನಿ ಆಡಳಿತ ಪ್ರಬಲವಾಗುತ್ತಿದ್ದಂತೆ ಈ ದೇಶದ ಸ್ಥಳೀಯ ರಾಜರು ನಿವೃತ್ತರಾಗಿ ಪಿಂಚಣಿ ಪಡೆಯಲಾರಂಬಿಸಿದರು. ಭೂಮಾಲಿಕರು ರಾಜಿ ಮಾಡಿಕೊಂಡು ತಮ್ಮ ಆಸ್ತಿಗಳನ್ನು ರಕ್ಷಿಸಿಕೊಂಡರು. ಆದರೆ ಎಲ್ಲವನ್ನೂ ಕಳೆದುಕೊಂಡದ್ದು ಶ್ರಮಜೀವಿ ವರ್ಗ ಮಾತ್ರ. ಕಂಪನಿ ಆಡಳಿತದ ವಿರುದ್ಧ ಇವರು ಹೋರಾಡಲೇಬೇಕಾದ ಚಾರಿತ್ರಿಕ ಅನಿವಾರ್ಯತೆ ಏರ್ಪಟ್ಟಿತು. ಮತ್ತು ಈ ಹೋರಾಟ ಸ್ಪಷ್ಟ ರಾಜಕೀಯ ತಳಹದಿಯ ಮೇಲೆ ರೂಪಗೊಂಡಿತ್ತು. ಮನುಷ್ಯನ ಸಹಜ ಹಕ್ಕುಗಳಾದ, ಮಾತನಾಡುವ, ಪ್ರಶ್ನಿಸುವ, ಸ್ವತಃ ತಮ್ಮನ್ನು ತಾವು ಆಳಿಕೊಳ್ಳುವ, ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳುವ ಮತ್ತು ತಮ್ಮ ಅನನ್ಯತೆಗಳನ್ನು ಉಳಿಸಿಕೊಳ್ಳುವ ಜನತಾಂತ್ರಿಕ ಆಶಯಗಳಿಂದಲೇ ಈ ಹೋರಾಟಗಳು ರೂಪಗೊಂಡಿದ್ದವು. ಆದರೆ ಅರಾಜಕಗೊಂಡಿದ್ದ ಭಾರತದ ರಾಜಕೀಯ ಸಂದರ್ಭವು ನಿತ್ರಾಣಗೊಂಡಿತ್ತು. ಆದರೆ ಅಲ್ಲಲ್ಲಿ ಜೀವಂತವಿದ್ದ ಸ್ವಾಬಿಮಾನಿ ಸಂಸ್ಥಾನಗಳು ಮಾತ್ರ ಬ್ರಿಟೀಷ್ ಆಡಳಿತದ ವಿರುದ್ಧ ಉಗ್ರವಾಗಿಯೇ ತಿರುಗಿ ಬೀಳುತ್ತಿದ್ದವು. ಯಾವ ಸಮುದಾಯಗಳು ಸ್ಥಳೀಯ ರಾಜರ ಸೈನ್ಯದಲ್ಲಿದ್ದು ಕಂಪನಿ ಆಡಳಿತದ ವಿರುದ್ಧ ಹೋರಾಡುತ್ತಿದ್ದವೋ ಆ ಎಲ್ಲ ಸಮುದಾಯಗಳನ್ನು ಕಂಪನಿ ಸರಕಾರ ಯುದ್ಧಾನಂತರ ಅನೇಕ ಬಗೆಯಲ್ಲಿ ಹಿಂಸಿಸುತ್ತಿತ್ತು. ಉದಾ. ಹೈದರ್ ಆಲಿ ಮತ್ತು ಟಿಪ್ಪುವಿನ ಸೋಲಿನ ನಂತರ ಅವರ ಸೈನ್ಯವನ್ನು ಬ್ರಿಟೀಷರು ಇನ್ನಿಲ್ಲದಂತೆ ನಾಶಮಾಡಿದರು. ಅವರಿಗೆ ಭಾರತದ ಸಮಾಜದ ಕುರಿತು ಸರಿಯಾದ ಕಲ್ಪನೆಯೇ ಇರಲಿಲ್ಲ. ಅಲೆಮಾರಿ ಪಶುಪಾಲಕರು, ವೃತ್ತಿ ಸಂಗೀತಗಾರರು, ಆದಿವಾಸಿಗಳು, ದೊಂಬರಾಟದವರು, ಜಿಪ್ಸಿಗಳು, ಹಾವಾಡಿಸುವವರು, ಅಲೆಮಾರಿ ವೈದ್ಯರು, ಈ ಸಮುದಾಯಗಳನ್ನು ಬ್ರಿಟೀಷ್‌ರು ಅರ್ಥಮಾಡಿಕೊಳ್ಳಲಿಲ್ಲ. ಈ ಸಮುದಾಯಗಳನ್ನು ಅವರು ಸದಾ ಅನುಮಾನಿಸುತ್ತಲೇ ಬಂದರು. ಸಹಜವಾಗಿಯೇ ಈ ಸಮುದಾಯಗಳು 'ಅಪರಾದಿ ಸಮುದಾಯಗಳ ಪಟ್ಟಿಗೆ ಸೇರಿಸಲ್ಪಟ್ಟವು.

೧೮೭೧ರ Criminal Tribes Act  ಕಂಪನಿ ಆಡಳಿತದ ಅದಿಕಾರಿಗಳಿಗೆ ಒಂದು ಅಸ್ತ್ರವಾಗಿ ಪರಿಣಮಿಸಿತು. ಈ ಕಾಯ್ದೆಯು ಅಲೆಮಾರಿ ಸಮುದಾಯಗಳನ್ನು, ಕಾಡಿನ ಅಂಚಿನಲ್ಲಿರುವ ಆದಿವಾಸಿಗಳನ್ನು ನಿಯಂತ್ರಿಸಲು ಮತ್ತು ಈ ಸಮುದಾಯಗಳ ಮೇಲೆ ವಿನಾಕಾರಣ ಕ್ರಮ ತೆಗೆದುಕೊಳ್ಳುವ ಅದಿಕಾರವನ್ನು ಕಂಪನಿ ಆಡಳಿತದ ಅದಿಕಾರಿಗಳಿಗೆ ನೀಡಿತು. ಅಲೆಮಾರಿತ್ವ ಎನ್ನುವುದು ಅಪರಾಧವಾಗಿ ಪರಿಗಣಿತವಾಗಿಬಿಟ್ಟಿತು. ಮೂಲತಃ ಅಲೆಮಾರಿಗಳಾಗಿದ್ದ ಸಮುದಾಯಗಳನ್ನು ನೆಲೆ ನಿಲ್ಲಿಸಲು ಒತ್ತಾಯ ಮಾಡಲಾಯಿತು. ಹಳ್ಳಿಗಳಲ್ಲಿ ಗೌರವಾನ್ವಿತವಾಗಿ ಬದುಕಲು ಇಚ್ಚಿಸುವ ಸಮುದಾಯಗಳಿಗೆ ಲೈಸೆನ್ಸ್ ಕೊಡಲು ನಿರ್ಧರಿಸಲಾುತು. ಯಾರಾದರೂ ಲೈಸೆನ್ಸ್ ಇಲ್ಲದೆ ಅಲೆಮಾರಿಗಳಾಗಿ ತಿರುಗಲಾರಂಬಿಸಿದರೆ ಅವರನ್ನು ತಕ್ಷಣವೇ ಬಂದಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. ತಮ್ಮದೇ ನೆಲದಲ್ಲಿ ಸ್ವಚ್ಚಂದವಾಗಿ ಬದುಕುತ್ತಿದ್ದ ಸಮುದಾಯಗಳು ಈ ಹೊಸ ಕಾಯ್ದೆುಂದ ಅನ್ಯರಾಗಿ, ಅಪರಾದಿಗಳಾಗಿ ಬದುಕುವಂತಾುತು. ಜೊತೆಗೆ ತಮ್ಮ ಹಕ್ಕುಗಳ ಕುರಿತು ಈ ಸಮುದಾಯಗಳು ಎಚ್ಚೆತ್ತುಕೊಂಡವು. ಕಾಡಿನ ಅಂಚಿನಲ್ಲಿ ಬದುಕುತ್ತ ಅಲೆಮಾರಿ ವ್ಯಾಪಾರಿಗಳಿಂದ ಮುಖ್ಯವಾಹಿನಿಯ ಜೊತೆಗೆ ವಾಣಿಜ್ಯ ಸಂಬಂಧಗಳನ್ನಿಟ್ಟುಕೊಂಡಿದ್ದ ಆದಿವಾಸಿಗಳೂ ಸಹ ಈ ಕಾಯ್ದೆಯ ಕೆಂಗಣ್ಣಿಗೆ ಗುರಿಯಾದರು. ವಸಾಹತು ಆಡಳಿತಕ್ಕೂ ಮುನ್ನ ಭಾರತದ ಆದಿವಾಸಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಮುಕ್ತವಾದ ಮತ್ತು ತಮ್ಮದೇ ಆದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದರು. ಜೊತೆಗೆ ಆಯಾ ಸಾಮ್ರಾಜ್ಯಗಳ ಗಡಿಗಳನ್ನು ರಕ್ಷಿಸುವ ಹೊಣೆಯನ್ನು ಹೊತ್ತ ಆದಿವಾಸಿಗಳು ಕಾಡಿನಲ್ಲಿದ್ದುಕೊಂಡೇ ತಾವು ವಾಸಿಸುವ ಪ್ರದೇಶದ ರಕ್ಷಣೆ ಮಾಡುತ್ತಿದ್ದರು. ಶಿವಾಜಿಯ ಸೈನ್ಯದಲ್ಲಿ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದವರು ಆದಿವಾಸಿಗಳು. ಆದರೆ ಕಂಪನಿ ಆಡಳಿತದ ಸಂದರ್ಭದಲ್ಲಿ ಯಾವುದೇ ದೇಶಿ ಸಂಸ್ಥಾನವನ್ನು ಬ್ರಿಟೀಷ್ ಸೈನ್ಯ ವಶಪಡಿಸಿಕೊಳ್ಳಲು ಹೊರಟಾಗ ಮೊದಲು ಈ ಸೈನ್ಯಕ್ಕೆ ಮುಖಾಮುಖಿಯಾಗುತ್ತಿದ್ದುದು ಈ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳು.  ಮುಖ್ಯವಾ"ನಿಯ ಸಮಾಜವು ಅನೇಕ ಅನಿವಾರ್ಯತೆಗಳಿಂದಾಗಿ ಕಂಪನಿ ಆಡಳಿತದ ಜೊತೆಗೆ ರಾಜಿ ಒಪ್ಪಂದಗಳನ್ನು ಮಾಡಿಕೊಂಡರೂ ಈ ಸೇವಕ ವರ್ಗ ಮತ್ತು ಆದಿವಾಸಿಗಳು ಪ್ರತಿ ಹೋರಾಟ ನಡೆಸಲೇಬೇಕಿತ್ತು. ಹೀಗೆ ವಸಾಹತು ಆಡಳಿತದ ವಿರುದ್ಧ ತಿರುಗಿ ಬಿದ್ದ ಆದಿವಾಸಿಗಳನ್ನು ಮತ್ತು ಸೇವಕ ವರ್ಗಕ್ಕೆ ಸೇರಿದ ಸಮುದಾಯಗಳನ್ನು ನಿಯಂತ್ರಿಸಲೆಂದೇ ಈ ಕ್ರಿಮಿನಲ್ ಟ್ರೈಬ್ಸ್ ಆಕ್ಟ್‌ನ್ನು ರೂಪಿಸಲಾಯಿತು ಮತ್ತು ಈ ಕಾಯ್ದೆಯನ್ನು ಮುಂದಿಟ್ಟುಕೊಂಡು ವಸಾಹತು ಸೈನ್ಯವು ಈ ಸಮುದಾಯಗಳನ್ನು ಹಿಂಸಾತ್ಮಕವಾಗಿಯೂ ಹತ್ತಿಕ್ಕಿತು.

 ವಸಾಹತು ಆಡಳಿತದ ಸಂದರ್ಭದಲ್ಲಿ ಈ ಸಮುದಾಯಗಳಿಗೆ ಕನಿಷ್ಠಮಟ್ಟದ ನಾಗರಿಕ ಹಕ್ಕುಗಳನ್ನೂ ನಿರಾಕರಿಸಲಾಗಿತ್ತು. ದುರಂತವೆಂದರೆ ಈ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಕಂಪನಿ ಸರಕಾರವು ಜನ್ಮತಃ ಅಪರಾದಿಗಳು (Born criminals) ಎಂದು ಪರಿಗಣಿಸಿಬಿಟ್ಟಿತ್ತು. ಪೊಲೀಸರಿಗೆ ತರಬೇತಿ ಕೊಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಪಠ್ಯಕ್ರಮದಲ್ಲಿ, 'ಅಪರಾಧಿ ಬುಡಕಟ್ಟುಗಳನ್ನು' ಗುರುತಿಸುವುದು ಮತ್ತು ಕಾನೂನಿನ ಮೂಲಕ ಅವರನ್ನು ಹೇಗೆ ನಿಯಂತ್ರಿಸುವುದು ಎಂಬ ಕುರಿತು ಪಾಠಗಳನ್ನು ಸೇರಿಸಿತು.

ದುರಂತದ ಸಂಗತಿಯೆಂದರೆ, ಭಾರತಕ್ಕೆ ಅಧಿಕಾರ ಹಸ್ತಾಂತರವಾದ ನಂತರ ೧೯೫೨ರಲ್ಲಿ ಬ್ರಿಟಿಷರ ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ' ಭಾರತದಲ್ಲಿ ರದ್ದಾದರೂ ಸಹ ಪೊಲೀಸ್ ತರಬೇತಿಯ ಪಠ್ಯಕ್ರಮದಿಂದ `ಅಪರಾಧಿ ಬುಡಕಟ್ಟು ಕಾಯ್ದೆ'ಯ ಪಾಠಗಳು ತೊಲಗಲಿಲ್ಲ. ಅವರನ್ನು ಸ್ವತಂತ್ರ ಭಾರತದ ಸರಕಾರವು `ಪಾರಂಪರಿಕ ಅಪರಾಧಿ ಕಾಯ್ದೆ'ಯ (Habitual offender Act)  ಅಡಿಯಲ್ಲಿ  ಗುರುತಿಸಬೇಕೆಂದು ತಮ್ಮ ಪೊಲೀಸರಿಗೆ ಬೋಧಿಸಲಾಯಿತು. ಈ ಕಾಯ್ದೆ `ವ್ಯಕ್ತಿ ಅಥವಾ ಸಮುದಾಯವೊಂದನ್ನು ಅಪರಾಧಿ ಎಂದು ಗುರುತಿಸಲು ರೂಪುಗೊಂಡಂತೆ ಕಂಡರೂ, ವಸಾಹತೋತ್ತರ ಕಾಲಘಟ್ಟದ ನಂತರ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ಮೇಲೂ ೧೨೭ ಡಿನೋಟಿಫೈಡ್ ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡಿತು. ಈ ಕಾಯ್ದೆಯು ಅಪರಾಧವನ್ನು ಒಂದು ಕಾುಲೆಯೆಂದೂ, ಅಪರಾಧಿಯನ್ನು ರೋಗಿಯೆಂದೂ ಪರಿಗಣಿಸಿದೆ. 
ಇಲ್ಲಿ ನಮಗೆ ನಿಚ್ಚಳವಾಗುವ ವಿಷಯವೇನೆಂದರೆ ನಾವೀಗ ೭೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಯ ಹೊಸ್ತಿಲಿನಲ್ಲಿ ನಿಂತಿದ್ದರೂ ಸಹ ಬ್ರಿಟಿಷರು ರೂಪಿಸಿದ್ದ ಕರಾಳ ಕಾನೂನುಗಳ ಪ್ರಭಾವದಿಂದ ನಮ್ಮ ಸರ್ಕಾರ, ಪೊಲೀಸ್ ವ್ಯವಸ್ಥೆ ಹೊರಕ್ಕೆ ಬಂದಿಲ್ಲ. ಯಾವ ಹಿಂದುಳಿದ, ಆದಿವಾಸಿ, ಅಲೆಮಾರಿ ಸಮುದಾಯಗಳನ್ನು ಮುಖ್ಯವಾಹಿನಿಯೊಂದಿಗೆ ಕರೆದುಕೊಂಡು ಹೋಗುವ ಮಾತನಾಡುತ್ತಾ, ಅಭಿವೃದ್ಧಿಯಲ್ಲಿ ಒಳಗೊಳ್ಳುವ ಮಾತನಾಡುತ್ತಿದ್ದೇವೆಯೋ ಅದೇ ಸಂದರ್ಭದಲ್ಲಿ ಒಬ್ಬ ಹಿರಿಯ ಮಾಜಿ ಪೊಲೀಸ್ ಅಧಿಕಾರಿಯಿಂದ ಇಂತಹ ಮಾತುಗಳು ಬರುತ್ತಿರುವುದು ವಿಪರ್ಯಾಸ. ಭಾರತದ ಸಂವಿಧಾನವು ಜಾತಿ, ಧರ್ಮ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡಕೂಡದೆಂದು ಹೇಳುತ್ತದೆ. ಆದರೆ ಇಲ್ಲಿ ಕಿರಣ್ ಬೇಡಿಯವರು ಬುಡಕಟ್ಟುಗಳನ್ನು ಕ್ರಿಮಿನಲ್‌ಗಳು ಎಂದು ಹೇಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಿರಣ್ ಬೇಡಿಯದು ಕೇವಲ ಕ್ಷುಲ್ಲಕ ರಾಜಕೀಯ ಹೇಳಿಕೆಯಲ್ಲ. ಈ ಹೇಳಿಕೆಯ ಹಿಂದೆ ಜಾತಿವಾದಿ ಮತ್ತು ಅಖಂಡ ಜನಾಂಗ ದ್ವೇಶಿ ನಿಲುವುಗಳಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. 

ಅದು ಕಿರಣ್ ಬೇಡಿಯವರೇ ಇರಲಿ, ಉತ್ತರ ಪ್ರದೇಶದ ಪೊಲೀಸರೇ ಇರಲಿ ಯಾರೇ ಇರಲಿ; ಯಾರೋ ಮಾಡಿದ ಅಪರಾಧಕ್ಕೆ ಚಾರಿತ್ರಿಕವಾಗಿ ನೊಂದು, ಬೆಂದು ಈ ನಾಗರಿಕ ಜಗತ್ತಿನೊಂದಿಗೆ ಹೊಂದಿಕೊಂಡು ಹೋಗಲು ಹೆಣಗುತ್ತಿರುವ ತಳಸಮುದಾಯಗಳನ್ನು 'ಕ್ರಿಮಿನಲ್ ಬುಡಕಟ್ಟುಗಳು', 'ಅಪರಾಧಿಗಳು', ಎಂದೆಲ್ಲಾ ಅಪಮಾನಿಸುತ್ತಿರುವುದನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತಿದ್ದೇವೆ. 

ನಮ್ಮ ಬೇಡಿಕೆಗಳು
೧. ಕಿರಣ್ ಬೇಡಿಯವರು ಈ ಕೂಡಲೇ ಇಡೀ ದೇಶದ ಡಿನೋಟಿಫೈಡ್ ಸಮುದಾಯಗಳಿಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಯಾಚಿಸಬೇಕು. ಜೊತೆಗೆ ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು. ತಮ್ಮ ಟ್ವೀಟರ್ ಖಾತೆಯಲ್ಲಿರುವ ಈ ಟ್ವೀಟನ್ನು ಕೂಡಲೇ ತೆಗೆದು ಹಾಕಬೇಕು.
೨. ಕಿರಣ್ ಬೇಡಿಯವರು ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿರುವುದರಿಂದ ಮಾನ್ಯ ರಾಷ್ಟ್ರಪತಿಗಳು ಇವರನ್ನು ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಅವರನ್ನು ವಜಾ ಮಾಡಬೇಕು. 


ಡಾ. ಸಿ ಎಸ್ ದ್ವಾರಕಾನಾಥ್, ಡಾ. ಟಿ ಎನ್ ಚಂದ್ರಕಾಂತ್
ಡಾ. ಎ ಎಸ್ ಪ್ರಭಾಕರ, ಶ್ರೀ ಹರ್ಷಕುಮಾರ್ ಕುಗ್ವೆ,ಅರುಣ್ ಜೋಳದಕೂಡ್ಲಿಗಿ
ಶ್ರೀ ಲೋಹಿತ್ ಮತ್ತು ತಳಸ್ತರದ ವೇದಿಕೆಯ ಸದಸ್ಯರು