ಸೋಮವಾರ, ಜನವರಿ 16, 2017

ನಮಗೆ ನಾವು ಹೇಳಿಕೊಳ್ಳಬೇಕಾದ ಎಚ್ಚರಿಕೆಯ 17 ಮಾತು


Image may contain: 1 person, sunglasses and outdoor

ಸುಗತ ಶ್ರೀನಿವಾಸರಾಜು


  ಸಮಾಜದ ಎಲ್ಲ ವರ್ಗಗಳ, ವೃತ್ತಿಗಳ, ವ್ಯಾಪಾರಗಳ ಎಚ್ಚರವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕಾಯುವ ಜವಾಬ್ದಾರಿಯನ್ನು ಹೊತ್ತ ಅಥವಾ ಹೊರಿಸಿಕೊಂಡ ಪತ್ರಿಕಾರಂಗ, ಅದರ ಹುಳುಕುಗಳನ್ನು, ಅದರ ವೃತ್ತಿಧರ್ಮ ಪಾಲನೆಯ ಹಾದಿಯನ್ನು ಆಗೊಮ್ಮೆ, ಈಗೊಮ್ಮೆ ಸ್ವವಿಮರ್ಶೆ ಮಾಡಿಕೊಳ್ಳುವುದು, ಸ್ವಎಚ್ಚರ ಕಾಯ್ದುಕೊಳ್ಳುವುದು ಬಹಳ ಜರೂರು. ಸಮಾಜ ಎಂಬ ಮೇಜನ್ನು ಸ್ವಚ್ಛ ಮಾಡಲು ಇರುವ ಬಟ್ಟೆಯೇ ಶುಚಿಯಾಗಿಲ್ಲದಿದ್ದರೆ ಅದು ಹಿಂಬಿಡುವ ದುರ್ನಾತ ಆ ಮೇಜಿನ ಮೇಲೆ ಊಟ ಬಡಿಸಲಾಗದಂತೆ ಮಾಡುತ್ತದೆ. ಮತ್ತೊಂದು ವರ್ಷದ ಹಾದಿ ಸವೆಸಿ, ಹೊಸ ವರ್ಷದ ಕದ ತೆರೆದು ನಿಂತಿರುವ ಈ ಸಂದರ್ಭದಲ್ಲಿ ಪತ್ರಕರ್ತರಾಗಿ ನಾವು ನೆನಪಿನಲ್ಲಿಡಬೇಕಾದ ಹದಿ​ನೇ​ಳು ಅಂಶಗಳನ್ನು ನಾನಿಲ್ಲಿ ದಾಖಲಿಸುತ್ತಿದ್ದೇನೆ. ಹದಿ​ನೇ​ಳು ಬೇಕೇ? ಹದಿ​ನೇ​ಳು ಸಾಕೇ? ಹದಿ​ನೇ​ಳೇ ಏಕೆ? ಎಂದು ಹುಟ್ಟಬಹುದಾದ ಪ್ರಶ್ನೆಗಳಿಗೆ ನನ್ನ ಉತ್ತರ ತುಂಬ ಸರಳ: ಕಡಿಮೆ ಎನಿಸಿದರೆ ನಿಮ್ಮದೂ ನಾಲ್ಕು ಸೇರಿಸಿಕೊಳ್ಳಿ, ಜಾಸ್ತಿ ಎನಿಸಿದರೆ ಈ ಪಟ್ಟಿಗೆ ಕತ್ತರಿ ಆಡಿಸಿ. ಕೂಡಿಸಿ, ಕಳೆಯಿರಿ, ವಿಮರ್ಶಿಸಿ ಆದರೆ, ಈ ಹದಿ​ನೇ​ಳು ಅಂಶಗಳೊಂದಿಗೆ ನೀವು ಏಕಾಂತದಲ್ಲಿ ಸಂವಾದಿಸಿದರೆ, ಆತ್ಮಾವಲೋಕನ ಮಾಡಿಕೊಂಡರೆ, ನನ್ನ ವರ್ಷಾಂತ್ಯದ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.

ಈ ಬರಹಕ್ಕೆ ವರ್ಷಾಂತ್ಯದ ಸಂದರ್ಭವಲ್ಲದೆ ಇನ್ನೆರಡು ಸಂದರ್ಭಗಳಿವೆ. ಮೊದಲು, ಹತ್ತಿರತ್ತಿರ ಐದು ವರ್ಷಗಳ ಕನ್ನಡ ಪತ್ರಿಕೋದ್ಯಮದಿಂದ ನಾನು ಕೊಂಚ ಬಿಡುವು ಪಡೆಯುತ್ತಿದ್ದೇನೆ. ಇಷ್ಟುದಿನ ನೋಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು, ಕಲಿತದ್ದನ್ನು, ಅತಿ ಸಂಕ್ಷಿಪ್ತ ರೀತಿಯಲ್ಲಿ ದಾಖಲಿಸಲು ಇದೊಂದು ಒಳ್ಳೆಯ ಮಾರ್ಗ. ಹಾಗಂತ, ಇದನ್ನು ನನ್ನ ವಿದಾಯ ಬರವಣಿಗೆ ಎಂದು ಪರಿಭಾವಿಸಬೇಕಿಲ್ಲ. ಏಕೆಂದರೆ, ಮಾತೃಭಾಷೆಗೆ ಬೆನ್ನು ತೋರಿಸಿ ಯಾರೂ ಹೊರಟುಹೋಗುವುದಿಲ್ಲ, ಹೋಗಲಿಕ್ಕೂ ಸಾಧ್ಯವಿಲ್ಲ. ನಮ್ಮ ಅಸ್ಥಿಮಜ್ಜೆಯ ಭಾಗವಾಗಿರುವ ಭಾಷೆ ನಮ್ಮ ಅಸ್ಮಿತೆಯೇ ಆಗಿರುತ್ತದೆ. ಇನ್ನಾವುದೇ ಪೋಷಾಕು ಧರಿಸಿದರೂ ಅದು ಪೋಷಾಕು ಮಾತ್ರ.

ಈ ಹದಿ​ನೇ​ಳು ಅಂಶಗಳಿಗೆ ಮತ್ತೊಂದು ಸಂದರ್ಭವೆಂದರೆ, ನನ್ನ ಅಂಕಣ ಬರವಣಿಗೆಯ ಪುಸ್ತಕ ಹೊರಬಂದಿರುವುದು. ಅದನ್ನು ‘ಕಿತ್ತಳೆ, ನೇರಳೆ, ಪೇರಳೆ: ಅವಸರಕ್ಕೆ ಎಟುಕಿದ ಮಾತು, ಬರಹ’ ಎಂದು ಕರೆದಿದ್ದೇನೆ. ಶೀರ್ಷಿಕೆಯಲ್ಲಿರುವ ಮೂರೂ ಹಣ್ಣುಗಳು ಜನಸಾಮಾನ್ಯರಿಗೆ ಎಟುಕುವಂಥವು. ಅವುಗಳ ರುಚಿ ಭಿನ್ನ. ಒಂದು ಹುಳಿಯಾದರೆ, ಮತ್ತೊಂದು ಒಗರು, ಇನ್ನೊಂದು ಸಿಹಿಯೊಂದಿಗೆ ಸಂಘರ್ಷವಿರುವಂತೆ ನಾಲಿಗೆಯ ಮೇಲೆ ಗಾಢ ಮಸಿಯನ್ನು ಹರಡುತ್ತದೆ. ಈ ಮೂರೂ ಹಣ್ಣುಗಳು ಪತ್ರಿಕೋದ್ಯೋಗದ ನೇರ, ನಿರ್ಭೀತ, ನಿಷ್ಠುರತೆಯ ಆದರ್ಶಕ್ಕೆ ಉಪಮೆಗಳ ಹಾಗೆ, ಹಾಗಂತ ನಾವು ನೋಡಬಹುದು. ನನ್ನ ಈ ಹೊಸ ಪುಸ್ತಕದಲ್ಲಿ ರಾಜಕೀಯ, ಸಂಸ್ಕೃತಿ, ಸಾಹಿತ್ಯದ ಜೊತೆಜೊತೆಗೆ ಪತ್ರಿಕೋದ್ಯೋಗ ಕುರಿತಂತೆ ಅನೇಕ ಲೇಖನಗಳಿವೆ. ಹಿರೀಕರಿಗೆ, ಸರೀಕರಿಗೆ, ತರುಣರಿಗೆ ಈ ಪುಸ್ತಕ ಇಷ್ಟವಾಗಲಿ ಎಂದು ಹಂಬಲಿಸಿದರೆ ಅದರಲ್ಲಿ ಆಕಾಂಕ್ಷೆ ಇದೆಯೇ ಹೊರತು ಸ್ವಾರ್ಥವಿಲ್ಲ ಎಂದು ನಂಬಿದ್ದೇನೆ.

ಇಲ್ಲಿವೆ ಪತ್ರಕರ್ತರಾಗಿ ನಾವೆಲ್ಲರೂ ಮನನ ಮಾಡಬೇಕಾದ ಹದಿ​ನೇ​ಳು ಅಂಶಗಳು:

01.ಪತ್ರಕರ್ತರಾದ ನಾವು ಪತ್ರಕರ್ತರಾಗಿ ವ್ಯವಹರಿಸಬೇಕು. ಜಾತಿ, ಧರ್ಮ, ಮಠ, ಮಾಲೀಕರ, ರಾಜಕಾರಣಿಗಳ ಪ್ರತಿನಿಧಿಗಳಾಗದಂತೆ ಎಚ್ಚರ ವಹಿಸಬೇಕು. ಸುದ್ದಿ, ಸಿದ್ಧಾಂತ, ವಿಚಾರ, ವಿಸ್ಮಯ ಮತ್ತು ವೃತ್ತಿ ಸಂಕಷ್ಟ ಹಂಚಿಕೊಳ್ಳಲು ನಾವು ಸ್ವತಂತ್ರ ಗುಂಪು, ಸಂಸ್ಥೆಗಳನ್ನು ಪೋಷಿಸಬೇಕೇ ಹೊರತು, ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನಾಧರಿಸಿದ ಗುಂಪುಗಳನ್ನಲ್ಲ. ಕಾಂಗ್ರೆಸ್‌ ಪತ್ರಕರ್ತ, ಬಿಜೆಪಿ ಪತ್ರಕರ್ತ, ದಲಿತ ಪತ್ರಕರ್ತ, ಬ್ರಾಹ್ಮಣ ಪತ್ರಕರ್ತ, ಹಿಂದುಳಿದ ವರ್ಗಗಳ ಪತ್ರಕರ್ತ, ಒಕ್ಕಲಿಗ ಪತ್ರಕರ್ತ, ಲಿಂಗಾಯಿತ ಪತ್ರಕರ್ತ ಇತ್ಯಾದಿಯಾಗಿ ಗುರುತಿಸಿಕೊಳ್ಳುವ ಬದಲು, ಸ್ವತಂತ್ರ ಪತ್ರಕರ್ತ ಎಂದು ಗುರುತಿಸಿಕೊಳ್ಳುವುದರಲ್ಲಿ ಹೆಮ್ಮೆ ಇದೆ.

02.ಒಂದು ಸುದ್ದಿಮನೆಯಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಅನೇಕ ಹಿನ್ನೆಲೆಗಳಿಂದ ಬಂದ ಪತ್ರಕರ್ತರನ್ನು ಒಟ್ಟುಗೂಡಿಸಬೇಕು ಮತ್ತು ಆ ವೈವಿಧ್ಯತೆಯನ್ನು ಸಂಭ್ರಮಿಸಬೇಕು. ಹೀಗೆ ಮಾಡಿದಾಗ ಪತ್ರಿಕೆಯ ಪ್ರಭೆ ಹೆಚ್ಚುತ್ತದೆ ಮತ್ತು ಓದುಗರಿಗೆ ಹತ್ತಿರವಾಗುತ್ತದೆ. ಇದು ವ್ಯವಹಾರ, ವ್ಯಾಪಾರದ ತಂತ್ರವಾಗಿಯೂ ಉತ್ತಮ.

03.ಪತ್ರಕರ್ತರಾದ ನಾವು, ಅಂಕಿ-ಅಂಶ, ವಿಚಾರ, ತರ್ಕದಿಂದ ಹೊರಹೊಮ್ಮುವ ಸತ್ಯದ ಬಗ್ಗೆ ಸದಾ ತಲೆಕೆಡಿಸಿಕೊಳ್ಳಬೇಕು. ಅಭಿಪ್ರಾಯ ಎಂಬುದು ಇದರ ಹಿಂದೆ ನಿಲ್ಲಬೇಕು ಅಥವಾ ಇದರಿಂದ ಹೊರಹೊಮ್ಮಬೇಕು. ಪರಿಶೀಲನೆಗೆ ಒಳಪಡದ ವಿಚಾರ ಅಥವಾ ಸುದ್ದಿಯನ್ನು ನಾವು ಬಿತ್ತರಿಸದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತಲ್ಪಡುವ ಫರ್ಜಿ ಸುದ್ದಿಗಳನ್ನು (fake news) ಪತ್ರಕರ್ತರು ಸುದ್ದಿಮನೆಗೆ ತಂದು, ಅದಕ್ಕೆ ಒಂದು ಬಗೆಯ ಘನತೆ, ಅಧಿಕೃತತೆಯ ಮೊಹರನ್ನು ಒತ್ತಬಾರದು.

04.ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗಲೂ ತಾವು ಮೊದಲು ಪತ್ರಕರ್ತರು ಎಂಬುದನ್ನು ಮರೆಯಬಾರದು. ಪತ್ರಕರ್ತರೇ ಗಾಳಿಸುದ್ದಿಗಳ, ಫರ್ಜಿ ಸುದ್ದಿಗಳ ಮೂಲವಾಗಬಾರದು. ಹೀಗಾದಾಗ ಆಗುವ ಅನಾಹುತ ಬಹಳ ದೊಡ್ಡದು.

05.ಪತ್ರಿಕೋದ್ಯಮ ಎಂಬುದು ಪಬ್ಲಿಕ್‌ ರಿಲೇಶನ್ಸ್‌ (ಪಿಆರ್‌) ಅಲ್ಲ ಎಂಬುದನ್ನು ಪತ್ರಕರ್ತರಾದ ನಾವು ಮರೆಯಬಾರದು. ಪ್ರತಿಯೊಂದು ಪುಸ್ತಕ ಬಿಡುಗಡೆ, ಪ್ರಶಸ್ತಿ ಸಮಾರಂಭ, ಮಠದ ಕಾರ್ಯಕ್ರಮ, ರಾಜ್ಯೋತ್ಸವ ಸಮಾರಂಭ, ರಾಜಕಾರಣಿಗಳು ಭಾಗವಹಿಸುವ ಶಿಲಾನ್ಯಾಸ ಕಾರ್ಯಕ್ರಮಗಳನ್ನು ವರದಿ ಮಾಡುವ ಅಗತ್ಯವಿಲ್ಲ. ಹೀಗೆ ವರದಿ ಮಾಡುವುದರ ಮೂಲಕ ಪ್ರಸರಣ ಹೆಚ್ಚುತ್ತದೆ ಎಂಬುದು ಭ್ರಮೆ. ಬದಲಿಗೆ, ಇವು ನಿಜವಾದ ಸುದ್ದಿಗಳ ಸ್ಥಳವನ್ನು ಕಸಿದುಕೊಳ್ಳುತ್ತವೆ. ಒಂದು ವೇಳೆ ಇವುಗಳನ್ನು ವರದಿ ಮಾಡಬೇಕಾದರೂ ಸುದ್ದಿ ಹೆಕ್ಕಿ ತೆಗೆಯುವ ಪತ್ರಿಕೋದ್ಯಮದ ಶಿಸ್ತನ್ನು ಮರೆಯಬಾರದು.

06.ರಾಷ್ಟ್ರಭಕ್ತಿ ತೋರಬೇಕು, ರಾಷ್ಟ್ರದ, ರಾಜ್ಯದ ಹಿತಾಸಕ್ತಿಯನ್ನು ಮರೆಯಬಾರದು ಎಂದು ಪತ್ರಕರ್ತರಿಗೆ ಬೋಧಿಸುವುದು ಹೊಸತಲ್ಲ, ಆದರೆ ಎಲ್ಲ ಭಕ್ತಿ ಮತ್ತು ಹಿತಾಸಕ್ತಿಗಳನ್ನು ಸೀಳಿನೋಡುವ, ನಿರ್ಮಮಕಾರದಿಂದ ವಿಶ್ಲೇಷಿಸುವ ಹಕ್ಕು ಪತ್ರಿಕೋದ್ಯೋಗದ ಆದರ್ಶಗಳಲ್ಲಿ ಬಹಳ ಎತ್ತರದ್ದು. ಬಹಳಷ್ಟುಬಾರಿ ಈ ‘ಭಕ್ತಿ’ ಮತ್ತು ‘ಹಿತಾಸಕ್ತಿ’ಯ ಭಾಷೆಯನ್ನು ರಾಜಕಾರಣಿಗಳು, ಉದ್ಯಮಿ­ಗಳು, ಸರ್ವಾಧಿಕಾರಿಗಳು ತಮ್ಮ ವ್ಯವಹಾರ­ಗಳನ್ನು, ಹುಳುಕುಗಳನ್ನು ಮರೆಮಾಚಲು ಬಳಸುತ್ತಿರುತ್ತಾರೆ. ಈ ಮುಖವಾಡಗಳನ್ನು ಕಳಚುವುದನ್ನು ನಾವು ಮರೆಯಬಾರದು.

07 .ಪತ್ರಿಕೋದ್ಯೋಗ ಎಂಬುದು ಅಧಿಕಾರವಲ್ಲ, ಜವಾಬ್ದಾರಿ ಎಂಬುದನ್ನು ನಾವು ಮರೆಯಬಾರದು. ಸರ್ಕಾರದಲ್ಲಿರುವ ಅಧಿಕಾರದ ವ್ಯವಸ್ಥೆಯನ್ನು (power structure) ಸುದ್ದಿಮನೆಯಲ್ಲಿ ನಾವು ಅನುಕರಿಸಬಾರದು. ಅಂದರೆ, ಸಂಪಾದಕನೊಬ್ಬ ತಾನು ಮುಖ್ಯಮಂತ್ರಿಯಂತೆ ಎಂಬ ಭ್ರಮೆಯಲ್ಲಿ ವ್ಯವಹರಿಸಬಾರದು, ತನ್ನ ಜೊತೆಗಾರರನ್ನು ಅಧಿಕಾರ ಹಂಚಿಕೆಯ ಸೂತ್ರಗಳಿಗೆ ಸಿಗಿಸಬಾರದು. ಸುದ್ದಿಮನೆಯ hierarchies ತೆಳುವಾದಷ್ಟೂ, ಚರ್ಚೆಯ ಕೂಟವಾದಷ್ಟೂ, ನಾವು ಪ್ರಕಟಿಸುವ ಪತ್ರಿಕೆಯ ಬೌದ್ಧಿಕ ಸಮೃದ್ಧತೆ ಹೆಚ್ಚುತ್ತದೆ.

08.ಸಾವು, ನೋವು, ಅತ್ಯಾಚಾರ, ಅನೈತಿಕ ಎಂದು ಕರೆಯಲ್ಪಡುವ ಸಂಬಂಧಗಳು, ಪ್ರೇಮ ವಿವಾಹ, ಪ್ರೀತಿಯ ಹುಚ್ಚು, ಬಡತನದ ಕ್ರೌರ್ಯ, ಸಿರಿತನದ ಅಹಂಕಾರ ಇತ್ಯಾದಿಗಳನ್ನು ವರದಿ ಮಾಡುವಾಗ ಪತ್ರಕರ್ತರಾದ ನಾವು ವಿಶೇಷ ಸೂಕ್ಷ್ಮತೆ ಪ್ರದರ್ಶಿಸಬೇಕು. ಮಾನವ ಸಂಬಂಧಗಳ ಬಗ್ಗೆ ಅಂತಃಕರಣದಿಂದ ಸ್ಪಂದಿಸಬೇಕು.

09.ಸಹಾನುಭೂತಿ ಜೊತೆಗೆ ಪರಾನುಭೂತಿ­ಯನ್ನು ಬೆಳೆಸಿಕೊಳ್ಳುವುದು ಪತ್ರಕರ್ತರ ತಪಸ್ಸಾಗಬೇಕು. ಮಾನವ ಸಂಬಂಧಗಳ ಬಗ್ಗೆ ಒಂದು ವಾಹಿನಿ ಅಥವಾ ಪತ್ರಿಕೆ ಅಸೂಕ್ಷ್ಮ­ವಾಗುವುದು ಎಂದರೆ ತನ್ನ ಬ್ರ್ಯಾಂಡ್‌ ಮೌಲ್ಯ­ವನ್ನು ನಿಧಾನವಾಗಿ ತ್ಯಜಿಸುವುದೇ ಆಗಿದೆ. ಅಲ್ಪಕಾಲದ ಗಳಿಕೆಗಾಗಿ ಬ್ರ್ಯಾಂಡ್‌ ಮೌಲ್ಯ ಕಳೆದು­ಕೊಂಡರೆ ದೀರ್ಘಾವಧಿ­ಯಲ್ಲಿ ಇದು ವ್ಯವಹಾರಕ್ಕೆ ಪೆಟ್ಟು ನೀಡುತ್ತದೆ. ಉತ್ತಮ ಮೌಲ್ಯ­ಗಳು ಉತ್ತಮ ವ್ಯವಹಾರವೂ ಆಗಿರು­ತ್ತದೆ ಎಂಬುದನ್ನು ನಾವು ಮರೆಯಬಾರದು.

10.ಪತ್ರಕರ್ತರಾದ ನಾವು ಎಡ, ಬಲದ ಸೈದ್ಧಾಂತಿಕ ಹಂಗಿಗೆ ಬೀಳಬಾರದು. ಎಡ, ಬಲದ ನಡುವೆ ಸ್ವತಂತ್ರ ಚಿಂತನೆಯ ವಿಚಾರಗಳ ವಿಶಾಲ ಮೈದಾನವಿದೆ, ಅದನ್ನು ನಾವು ಮಧ್ಯಮ ಮಾರ್ಗ ಎಂದು ಕರೆಯದೆ, ಕ್ರಿಯಾಶೀಲತೆಯ ಆಡುಂಬೋಲ ಎಂದು ತಿಳಿಯಬೇಕು. ಎಡ, ಬಲ ಎಂದು ಸರಳೀಕೃತ ಲೇಬಲ್‌ ಹಚ್ಚುವಿಕೆ ಒಂದರ್ಥದಲ್ಲಿ ರಾಜಕೀಯ ಪಿತೂರಿ, ಇನ್ನೊಂದರ್ಥದಲ್ಲಿ ಅಜ್ಞಾನ. ಈ ಪಿತೂರಿ ಮತ್ತು ಅಜ್ಞಾನದ ಬಗ್ಗೆ ನಾವು ಎಚ್ಚರ ವಹಿಸಬೇಕು.

11.ಈಚಿನ ದಿನಗಳಲ್ಲಿ ತಮ್ಮ ಉಳಿವಿಗಾಗಿ ಅಥವಾ ದುರಾಸೆಯಿಂದ ತಮ್ಮ ಆಡಳಿತ ಮಂಡಳಿಗಳಿಗೆ ಜಾಹೀರಾತು ತರುವ ವಾಮಮಾರ್ಗಗಳನ್ನು ಪತ್ರಕರ್ತರೇ ಹೇಳಿಕೊಡುತ್ತಾರೆ. ಪತ್ರಿಕೋದ್ಯೋಗ­ಕ್ಕಾಗಿ ಬೆಳೆಸಿಕೊಂಡ ಪರಿಚಯಗಳನ್ನು ಜಾಹೀರಾತಿಗಾಗಿ ಧಾರೆ ಎರೆಯುತ್ತಾರೆ. ಈ ದೊಡ್ಡ ರಾಜಿ, ಅಂತಿಮವಾಗಿ ಅವರನ್ನು ನಮ್ಮ ವೃತ್ತಿಯಿಂದ ಹೊರಹೋಗುವ ಹಾಗೆ ಮಾಡುತ್ತದೆ.

12.ಒಳ್ಳೆಯ ಸುದ್ದಿಮನೆ ಅಥವಾ ಪತ್ರಿಕೆ ಅಥವಾ ವಾಹಿನಿ ಎಂದರೆ, ಅಲ್ಲಿ ವಿಚಾರಗಳ ಮೇಲುಗೈ ಇರುತ್ತದೆ. ಈಚಿನ ದಿನಗಳಲ್ಲಿ ಸುದ್ದಿಮನೆ, ಪತ್ರಿಕೆ, ವಾಹಿನಿ ಎಂದರೆ ಜಾಹೀರಾತಿಗೆ ಅನ್ವರ್ಥ ಎಂಬಂತಾಗಿದೆ. ಉತ್ತಮ ವಿಚಾರ, ಶ್ರೇಷ್ಠ ವಿನ್ಯಾಸ, ಉತ್ಕೃಷ್ಟಬ್ರ್ಯಾಂಡ್‌ ಸೃಷ್ಟಿಸುತ್ತದೆ. ಈ ಉತ್ಕೃಷ್ಟಬ್ರ್ಯಾಂಡ್‌ಗೆ ಭರಪೂರ ಜಾಹೀರಾತು ಹರಿದುಬರುತ್ತದೆ. ಇದು ಪತ್ರಿಕೋದ್ಯಮದ ವರ್ತುಲ ಪಥವಾಗಿರಬೇಕು.

13.ನಮ್ಮ ಪತ್ರಿಕೋದ್ಯೋಗ ಸಾಹಿತ್ಯ ಮತ್ತು ರಾಜಕಾರಣ ಕೇಂದ್ರವಾಗುವ ಬದಲು, ಸಮಾಜ ಮತ್ತು ಜನಕೇಂದ್ರಿತವಾಗಿರಬೇಕು. ಸಾಹಿತ್ಯ ಮತ್ತು ರಾಜಕಾರಣಕ್ಕಿಂತ ಬದುಕು ದೊಡ್ಡದು.

14.ಪತ್ರಕರ್ತರಾದ ನಾವು ಪ್ರಶಸ್ತಿಗಳ ಬಗ್ಗೆ ಒಂದು ಆರೋಗ್ಯಕರ ಅನುಮಾನವನ್ನು ಇರಿಸಿಕೊಳ್ಳ­ಬೇಕು. ಪ್ರಶಸ್ತಿ ಸ್ವೀಕರಿಸುವುದು ತಪ್ಪಲ್ಲ, ಆದರೆ ಯಾರು ಕೊಡುತ್ತಿದ್ದಾರೆ, ಏಕೆ ಕೊಡುತ್ತಿದ್ದಾರೆ, ಯಾರ ಜೊತೆ ಕೊಡುತ್ತಿದ್ದಾರೆ ಎಂಬುದನ್ನು ಚಿಕಿತ್ಸಕವಾಗಿ ವಿಶ್ಲೇಷಣೆಗೆ ಒಳಪಡಿಸಬೇಕು. ಪ್ರಶಸ್ತಿ ಕೊಡುವ ಸಂಸ್ಥೆ ಪ್ರಶಸ್ತಿಗಳಿಗೆ ರೂಪಿಸಿರುವ ವೃತ್ತಿಶ್ರೇಷ್ಠತೆಯ ಮಾನದಂಡ­ಗಳಾವುವು ಎಂಬುದರ ಬಗ್ಗೆ ಸ್ಪಷ್ಟಕಲ್ಪನೆ ನಮಗಿರಬೇಕು. ಮಾನದಂಡಗಳಿಲ್ಲದೆ ಅದು ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದ್ದು ಅಥವಾ ಅದು ಮೀಸಲಾತಿಯ ಫಸಲು ಎಂದಾದರೆ ತಿರಸ್ಕರಿಸುವುದು ಉತ್ತಮ.

15.ನಾವು ನಮ್ಮ ಆಲೋಚನಾ ಕ್ರಮದ ಸಂಕುಚಿತತೆ­ಯಿಂದ ಹೊರಬರಬೇಕು. ನಾವು ಕನ್ನಡದಲ್ಲಿ ಪತ್ರಿಕೋದ್ಯೋಗ ಮಾಡುತ್ತಿದ್ದರೂ ವಿಶ್ವ­ದೊಂದಿಗೆ ವ್ಯವಹರಿಸಬೇಕು. ನಮ್ಮ ನೆಲ, ಜಲ, ಗಡಿಗಳನ್ನು ಗೌರವಿಸುತ್ತಲೇ ಲೋಕದೃಷ್ಟಿಯನ್ನು ಹಿಗ್ಗಿಸಿಕೊಳ್ಳುವ ಪ್ರಯತ್ನ ಸದಾ ಇರಬೇಕು.

16.ವಿಶ್ವಾಸಾರ್ಹತೆಯೊಂದೇ ನಮ್ಮ ಚಲಾವಣೆಯ ನಾಣ್ಯ.

17.ಪತ್ರಿಕೋದ್ಯೋಗ ಆದರ್ಶ ಮತ್ತು ಭರವಸೆಯ ಮೇಲೆ ನಿಂತಿದೆ. ಅದಕ್ಕೆ ಸಾವಿಲ್ಲ. ನಾವು ಸಿನಿಕರಾಗಬೇಕಿಲ್ಲ.
ಹೊಸ ವರ್ಷ ನಮ್ಮೆಲ್ಲರಿಗೂ ಹೊಸ ಅರಿವು, ವಿವೇಕ, ವಿಶಾಲ ಮನಸ್ಸು ಮತ್ತು ಹೃದಯ ದಯಪಾಲಿಸಲಿ

ಮಂಗಳವಾರ, ಜನವರಿ 10, 2017

ಜಾನಪದ ಮತ್ತು ಅರ್ಥ


ಪ್ರೊ.ಕಿಕ್ಕೇರಿ ನಾರಾಯಣ
profile
ಸೌಜನ್ಯ: http://kikkerinarayana.in/
ಪುಸ್ತಕ: ಸುವರ್ಣ ಜಾನಪದ
ಲೆವಿಸ್ತ್ರಾಸ್ ನ ಪ್ರಕಾರ ಮಿಥ್ ನ ಅರ್ಥ ಸೃಷ್ಟಿಯಾಗಿವುದು ಅವುಗಳ ಆಂತರಿಕ ವ್ಯವಸ್ಥೆಯಲ್ಲಿರುವ ದ್ವಿಧಾವೃತ್ತಿಯಲ್ಲಿ(binary opposition) (ಲೆವಿಸ್ತ್ರಾಸ್ ೧೯೭೮) ಈ ದ್ವಿಧಾವೃತ್ತಿಗಳು ಮಿಥ್ ನ ಆಂತರಿಕ ವ್ಯವಸ್ಥೆಯನ್ನು ವಿವರಿಸುತ್ತವೆ. ಭಾಷೆಯಲ್ಲಿ ಧ್ವನಿಗಳು ಹೇಗೋ ಜಾನಪದ ಪಠ್ಯಗಳಲ್ಲಿ ದ್ವಿಧಾವೃತ್ತಿಗಳು ಹಾಗೆ ವರ್ತಿಸುತ್ತಿರುತ್ತವೆ. ಈ ದ್ವಿಧಾವೃತ್ತಿಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ಅರಿತುಕೊಳ್ಳುವುದೇ ಸಾಂಸ್ಕೃತಿಕ ಪದ್ಯಗಳ ರಚನೆಯನ್ನು ಅರಿಯುವ ವಿಧಾನ. ಈ ದ್ವಿಧಾವೃತ್ತಿಗಳು ಸಂಧಿಸುವಲ್ಲೇ ಅರ್ಥ ಅಡಗಿ ಕುಳಿತ್ತಿರುತ್ತದೆ. ಇದನ್ನು ಲೆವಿಸ್ತ್ರಾಸ್ ಗುರುತಿಸುತ್ತಾನೆ.
ಆದರೆ, ದ್ವಿಧಾವೃತ್ತಿಗಳು ಯಾವುದೇ ಕಥಾನಕದಲ್ಲೂ ಒಂದರ ಮೇಲೊಂದು ಆಡುತ್ತಿರುತ್ತದೆ.ಈ ರೀತಿ ಆಡುವ ಕ್ರಿಯೆಯೇ ದ್ವಿಧಾವೃತ್ತಿಗಳು ಸಂಧಿಸುವ ತಾಣ. ದ್ವಿಧಾವೃತ್ತಿಗಳು ಒಂದರ ಮೇಲೊಂದು ಆಡುವುದರಿಂದ ರಚನೆಗೆ ಚಾಲನೆ ಸಿಗುತ್ತದೆ. ಈ ಚಲನೆಯಿಂದ ಅರ್ಥಗಳು ರೂಪಾಂತರಕ್ಕೆ ಒಳಗಾಗುತ್ತಿರುತ್ತವೆ. ಇದನು ಲೆವಿಸ್ತ್ರಾಸ್  ಹೇಳಲಿಲ್ಲ.
ಏಕೆಂದರೆ, ರಚನೆಗೆ ಕೆಲವು ಆಂತರಿಕ ಗುಣಗಳಿರುತ್ತವೆ. ಮೊದಲನೆಯದಾಗಿ, ಪ್ರತಿಯೊಂದು ರಚನೆಯೂ ಸ್ವಯಂಪರಿಪೂರ್ಣ ಘಟಕ. ಇದು ಬೇರೆ ಬೇರೆ ಮೂಲರೂಪಗಳ ಸಂಯೋಜನೆ ಅಲ್ಲ. ಎರಡನೆಯದಾಗಿ, ರಚನೆ ಸ್ಥಗಿತವಾಗಿರುವುದಿಲ್ಲ, ಯಾವಾಗಲೂ ಚಲನಶೀಲವಾಗಿರುತ್ತದೆ. ಆಂತರಿಕ ಗುಣಗಳಲ್ಲಿ ಬದಲಾವಣೆಯನ್ನು ಹೊಂದುತ್ತಿರುತ್ತದೆ.
ಈ ಪರಿಯೇ ಮಾನವ ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ  ಪರಿವರ್ತಿಸಲು ಪ್ರಾರಂಭಿಸಿದಾಗಿನಿಂದಲೂ ಮುಂದುವರಿಸಿಕೊಂಡು ಬರುತ್ತಿರುವ ಬೆಳವಣಿಗೆಯ ಕ್ರಮ. ಮಾನವನಲ್ಲಿ ಪರಿಕಲ್ಪನೆಗಳು ಮೂಡುವುದೇ ಈ ದ್ವಿಧಾವೃತ್ತಿಗಳು ಒಂದರ ಮೇಲೊಂದು ಆಡುವುದರಿಂದ, ನಿರಂತರ ‘ಲೀಲೆಗೆ’ ತೆಗೆದುಕೊಳ್ಳುವುದರಿಂದ. ಉದಾಹರಣೆಗೆ – ಮೈ-ಮನಸ್ಸು, ಆತ್ಮ-ದೇಹ, ಹಗಲು-ರಾತ್ರಿ , ಒಳ್ಳೆಯ-ಕೆಟ್ಟದ್ದು ಇತ್ಯಾದಿ. ಈ ರೀತಿಯ ದ್ವಿಧಾವೃತ್ತಿಗಳು ಒಂದಕ್ಕೊಂದು ಮುಖಾಮುಖಿಯಾದಾಗ ಸಂಘರ್ಷಕ್ಕೆ ಒಳಗಾಗುತ್ತವೆ.
ಈ ಸಂಘರ್ಷ ದ್ವಿಧಾವೃತ್ತಿಯ ಪರಿಕಲ್ಪನೆಗಳಿಗೆ ಚಾಲನೆ ಕೊಡುತ್ತದೆ. ಹೀಗೆ ಪಡೆಯುವ ಚಾಲನೆಯೇ ಮನುಷ್ಯನ ಗ್ರಹಿಕೆಯ ಅನುಭವದ ಆಳವನ್ನು ವಿಸ್ತರಿಸುತ್ತದೆ. ಹೊಸ ಹೊಸ ಅರ್ಥಗಳನ್ನು ಸೃಷ್ಟಿಸುತ್ತದೆ.
ಇನ್ನಷ್ಟು ಸ್ಪಷ್ಟಪಡಿಸುವುದಾದರೆ ಬಯಲು ಮತ್ತು ಆಲಯ ಎಂಬ ಎರಡು ದ್ವಿಧಾವೃತ್ತಿ ಪರಿಕಲ್ಪನೆಗಳನ್ನು ನೋಡಬಹುದು.
‘ಬಯಲು’ ಎನ್ನುವ ಪರಿಕಲ್ಪನೆ ಉಂಟಾಗಬೇಕಾದರೆ ‘ಆಲಯ’ದ ಕಲ್ಪನೆಯೂ ಇರಬೇಕಾಗುತ್ತದೆ. ‘ಆಲಯ’ವನ್ನು ಅರ್ಥೈಸಿಕೊಳ್ಳಲು  ‘ಬಯಲೂ’,’ಬಯಲ’ನ್ನು ಅರ್ಥಮಾಡಿಕೊಳ್ಳಲು ‘ಆಲಯ’ದ ಪರಿಕಲ್ಪನೆಯೂ ಪೂರಕವಾಗಿರುತ್ತದೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೋ’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದರ ಮೂಲಕ ಬಯಲು ಎಂಬ ಪರಿಕಲ್ಪನೆಗೆ ಚಾಲನೆ ಸಿಗುತ್ತದೆ.
ಮನುಷ್ಯನಲ್ಲಿ ಪರಿಕಲ್ಪನೆಯ ಸಂಜ್ಞೆಗಳು ಮೂಡುವುದು ಭಾಷ್ಯ ಮೂಲಕವೂ ಆಗಿರಬಹುದು ಅಥವಾ ಭಾಷೇತರ ಸಂಜ್ಞೆಗಳು ಮೂಲಕವೂ ಆಗಿರಬಹುದು. ಇಲ್ಲಿ ‘ಬಯಲು’ ಪ್ರಕೃತಿಗೆ ಸೇರಿದ. ಪರಿಕಲ್ಪನೆಯಾದರೆ ‘ಆಲಯ’ ಮಾನವ ನಿರ್ಮಿತ ವಸ್ತುವಿನ ಪರಿಕಲ್ಪನೆ. ಇಲ್ಲಿ ‘ಪ್ರಕೃತಿ; ಮತ್ತು ‘ಸಂಸ್ಕೃತಿ’ಯ ಮಿಲನವಾಗುತ್ತದೆ. ಈ ರೀತಿಯ ಮಿಲನದಲ್ಲಿ ಅರ್ಥ ಸೃಷ್ಟಿಯಾಗುತ್ತದೆ. ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ ಪರಿವರ್ತಿಸುವುದೇ ಮಾನವನ ಮನಸ್ಸು. ಈ ರೀತಿಯ ಚಲನೆಯನ್ನು ಅರಿಯುವುದು ಪ್ರಾಪ್(೧೯೬೫) ಅಥವಾ ಲೆವಿಸ್ತ್ರಾಸ್ ರ ಮಾದರಿಗಳಿಂದ ಸಾಧ್ಯವಿಲ್ಲ.
ಈ ರೀತಿ ರಚನಾವಾದದ ಇನ್ನೊಂದು ಪ್ರಮುಖ ಮಿತಿಯೆಂದರೆ ಎಲ್ಲಾ ಜಾನಪದ ಪಠ್ಯಗಳೂ ಸಾರ್ವತ್ರಿಕ ಅರ್ಥಕ್ಕಾಗಿ(universal meaning) ದುಡಿಯುವ ಅವತರಣಿಕೆಗಳಾಗಿ ಮಾತ್ರ ಕಾಣುತ್ತಿರುವುದು. ಇಂತಹ ವಿಶ್ಲೇಷಣೆಯಲ್ಲಿ ವ್ಯಕ್ತಿಗತವಾದ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ. ಸಮಾಜದ ಲೋಕದೃಷ್ಟಿ ಗೊತ್ತಾಗುವುದಿಲ್ಲ. ಜಾನಪದ ಪಠ್ಯಗಳನ್ನು ಸದ್ಯದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ದೃಷ್ಟಿಕೋನಗಳ ಅಭಿವ್ಯಕ್ತಿಯಾಗಿ ನೋಡಲು ಸಾಧ್ಯವಿಲ್ಲ.
ರಚನಾವಾದಿಗಳು ಅರ್ಥವನ್ನು ಹುಡುಕುವುದು ಚಾರಿತ್ರಿಕ ಕಾಲದಲ್ಲಲ್ಲವಾದ್ದರಿಂದ ಅವರಿಗೆ ಅರ್ಥದ ಮಜಲುಗಳು ದಕ್ಕುವುದು ಸಾಧ್ಯವಿಲ್ಲ. ( ಈ ಕಾರಣದಿಂದಲೇ ಡಿಸೆಂಬರ್ 6, ೧೯೯೨ರ ಬಾಬರಿ ಮಸೀದಿ ಘಟನೆಗೆ ಜಾನಪದೀಯವಾಗಿ ಥಟ್ಟನೆ ಪ್ರತಿಕ್ರಿಯಿಸಲು ಜಾನಪದ ವಿದ್ವಾಂಸರಿಗೆ ಸಾಧ್ಯವಾಗಲೇ ಇಲ್ಲ.)
ಹಾಗಾದರೆ ಜಾನಪದ ಚರಿತ್ರೆ ಎಂದರೇನು ಎಂಬುದನ್ನು ಗಮನಿಸೋಣ.
ಸಾಮಾನ್ಯವಾಗಿ ಚರಿತ್ರಕಾರರು ಬರೆಯುವ ಚರಿತ್ರೆ ಘಟನಾವಳಿಗಳ ಕಾರ್ಯ-ಕಾರಣ-ಪರಿಣಾಮದ್ದು. ಕಾಲಕ್ರಮಣಿಕೆಯಲ್ಲಿ ಆ ಚರಿತ್ರೆ ಬೆಳೆದಿರುತ್ತದೆ. ಅಂದರೆ ಭವಿಷ್ಯತ್ತಿನ ಕಡೆಗೆ ಮುಖಮಾಡಿರುವ ಭೂತದ ವಿಶ್ಲೇಷಣೆಯಾಗಿ ಬರೆಯಲ್ಪಟ್ತಿರುತ್ತದೆ.
ಜಾನಪದದಲ್ಲಿ ಮನುಷ್ಯನನ್ನು ಅರ್ಥಮಾಡಿಕೂಳುವ ಚಾರಿತ್ರಿಕ ಸನ್ನಿವೇಶ ಭಿನ್ನ ದೃಷ್ಟಿಯಿಂದಲೇ ಕೂಡಿರುತ್ತದೆ. ಅಂದರೆ ಇದು ಚರಿತ್ರಕಾರ ಬರೆಯುವ ಘಟನಾವಳಿಗಳ ಚರಿತ್ರೆಯಲ್ಲ. ಘಟನಾವಳಿ ಚರಿತ್ರೆಯ ಹಿಂದೆ ಆಗಿಹೋದ ದೊಡ್ಡ ವ್ಯಕ್ತಿಗಳ, ಸಂಸ್ಥೆಗಳ , ರಾಜಮಹಾರಾಜರ ಯುದ್ಧಗಳ ಪಂಚಾಂಗವಾಗಿರುತ್ತದೆ. ಇದು ಹೊರಡಿಸುವ ಅರ್ಥ ಒಂದು ಕಾಲ ಕ್ಷಣದಲ್ಲಿ ಒಬ್ಬ ವ್ಯಕ್ತಿ ಹೇಗೆ ವರ್ತಿಸಿದ ಎನ್ನುವುದಕ್ಕೆ ಒತ್ತು ಕೊಡುತ್ತಿರುತ್ತದೆ. ಈ ವಿಧಾನದಲ್ಲಿ ಆ ವ್ಯಕ್ತಿ ಆ ರೀತಿ ವರ್ತಿಸಲು ಅನುವು ಮಾಡಿಕೊಟ್ಟ ಸಮಾಜದ, ಜನಪದರ, ಚಾರಿತ್ರಿಕ ನೋಟ ಇರುವಿದಿಲ್ಲ. ಈ ರೀತಿಯ ಚರಿತ್ರೆಯಲ್ಲ ಸಾಮಾಜಿಕವಾದ, ಜನಪದವಾದ ಮನಸ್ಸನ್ನು ಅರ್ಥೈಸಲು ಸಾಧ್ಯವಿಲ್ಲ. ಇದಕ್ಕೆ ವಿರುದ್ದವಾಗಿ ಬನಾರಸಿ ಎಂಬ ಜೈನವರ್ತಕ ಬರೆದ ‘ಅರ್ಥ ಕಥಾನಕ’ ಒಂದು ಅಪೂರ್ವ ದಾಖಲೆಯಾಗಿದೆ.
“ಅರ್ಥ ಕಥಾನಕ, ಮಧ್ಯಮ ವರ್ಗದವನೊಬ್ಬನ ಕಥೆ. ಮೊಗಲರ ಕಾಲದ ಪಟ್ಟಣಗಳಲ್ಲಿ ಅಷ್ಟೇನೂ ಶ್ರೀಮಂತನಲ್ಲದ ವರ್ತಕನೊಬ್ಬನ ಬದುಕಿನ ಬಗೆಯನ್ನು ಸೂಕ್ಷ್ಮವಾಗಿ ಹೇಳುವ ಕಥೆ ಇದು. ಮೊಗಲ್ ಮಾರುಕಟ್ಟೆಗಳಲ್ಲಿ ನಡೆಯುತ್ತಿದ್ದ ಮಾರುವ ಕೊಳ್ಳುವ ಕ್ರಮಗಳು, ಮೊಗಲ್ ಹೆದ್ದಾರಿಗಳಲ್ಲಿ ಸಾಗುವಾಗಿನ ಸಾಹಸಮಯ ಅನುಭವಗಳು. ಭ್ರಷ್ಟಾಚಾರಿಗಳಾದ ಮೊಗಲ್ ಅಧಿಕಾರಿಗಳ ಮನಸ್ವೀ ವರ್ತನೆಯಿಂದ ಉಂಟಾಗುತಿದ್ದ ಹಠಾತ್ ಲಾಭ ನಷ್ಟಗಳು,ಇವೆಲ್ಲದರ ಬಗ್ಗೆಯೂ ನಮಗೆ ಬನಾರಸಿಯಿಂದ ಮಹತ್ವದ ವಿಷಯಗಳು ತಿಳಿಯುತ್ತವೆ.
ರಾಜಕೀಯ ಸ್ಥಿತಿಯ ಬಗ್ಗೆ ಬನಾರಸಿಯ ನಿರ್ಲಿಪ್ತ ಧೋರಣೆ ನಮಗೆ ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ”.
(ಅನಂತಮೂರ್ತಿ.ಯು.ಅರ. ೧೯೯೦ ಪುಟ ೧೧)
ಜನಪದ ಪಠ್ಯಗಳನ್ನು ಅರ್ಥೈಸ್ವುವಾಗ ಒಬ್ಬ ಮನುಷ್ಯ ಚರಿತ್ರಯನ್ನು ಸೃಷ್ಟಿಸುತ್ತಾನೆ ಎಂಬ ಅರ್ಥ ಸಾಧ್ಯವಿಲ್ಲ. ಇಲ್ಲಿ ಚರಿತ್ರೆ ಮನುಷ್ಯನನ್ನು ಸೃಷ್ಟಿಸುತ್ತದೆ. ಚರಿತ್ರೆಕಾರ ಘಟನೆಗಳ ಕಡೆ ದೃಷ್ಟಿ ಬೀರಿದರೆ ಜಾನಪದ ಪಠ್ಯ ಒಂದು ಕಾಲದ ಯಾವುದಾದರೂ ಘಟನೆ ನಡೆಗಾಗ ಆ ಘಟನೆಯ ರಾಚನೀಯ ಸಂವಿಧಾನವನ್ನು ತನ್ನದೇ ರೀತಿಯಲ್ಲಿ ಗಮನಿಸಿ ಮಿಥ್, ಪುರಾಣ ಮತ್ತು ಅವುಗಳ ಅವತರಣಿಗಳ ಮೂಲಕ ಸಾಮಾಜಿಕ ಸತ್ಯಗಳನ್ನು ಆರುಸುವುದು ಜಾನಪದ ಪಠ್ಯಗಳ ಚರಿತ್ರೆಯಾಗಿರುತ್ತದೆ.
ಚರಿತ್ರೆಕಾರರು ಬರೆಯುವ ಘಟನಾಪ್ರಧಾನ ಚರಿತ್ರೆಗಿಂತ ಭಿನ್ನವಾಗಿ ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಬರೆಯುವ ಇನ್ನೊಂದು ಬಗೆಯ ಚರಿತ್ರೆ ಡಾರ್ವಿನ್ನನ ವಿಕಾಸವಾದವನ್ನು ಮುಂದಿಟ್ಟುಕೊಂಡು ಬರೆಯುವ ಚರಿತ್ರೆ. ಈ ವಿಧಾನವನ್ನು ಅನುಸರಿಸಿ ಬರೆಯುವವರಿಗೆ ಚರಿತ್ರೆ ಸರಳರೇಖಾತ್ಮಕವಾದ ಸಮಾಜದ ಬೆಳವಣಿಗೆಯಾಗಿ ಕಾಣುತ್ತಿರುತ್ತದೆ. ಇವರ ಪ್ರಕಾರ ಮೌಢ್ಯ,
ಮೂಢನಂಬಿಕೆಗಳ ಅಗರವಾಗಿದ್ದವನು ಆದಿಮಾನವ. ಕಾಲಕ್ರಮಣಿಕೆಯಲ್ಲಿ ಈತ ಹಂತ ಹಂತವಾಗಿ ಈಗಿನ ‘ವೈಜ್ಞಾನಿಕ’ ಅಂದರೆ, ಭೌತವಾದಿ (materialist) ನೆಲೆಯನ್ನು ಮುಟ್ಟಿದವನು. ಇವರು ಒಂದು ಜನಾಂಗದಲ್ಲಿರುವ ಕ್ರಿಯಾವಿಧಾನ, ಮಿಥ್ ,ಪುರಾಣ, ಧರ್ಮ ಎಲ್ಲವನ್ನು ಅವೈಜ್ಞಾನಿಕವೆಂದು ತಳ್ಳಿ ಹಾಕುತ್ತಾರೆ. ಇವೆಲ್ಲವೂ ಮನುಷ್ಯನ ಮನಸ್ಸನ್ನು ಅರಿಯುವ ಪ್ರತೀಕಗಳೆಂಬುದೇ ಅರ್ಥವಾಗುವುದಿಲ್ಲ. ಜನಾಂಗದ ಮೌಖಿಕ ಚರಿತ್ರೆ ಈ ಮನಸ್ಸಿನ ಹಿಂದೆ ಕೆಲಸ ಮಾಡುತ್ತಿರುತ್ತದೆ ಎಂಬ ಅರಿವೂ ಇರುವುದಿಲ್ಲ.
ಈ ವಿಕಾಸವಾದಿ ಚರಿತ್ರಕಾರರು (rationalist) ಮಾನವನ ವಿಕಸನವನ್ನು ಬಹಳ ಸರಳೀಕೃತಗೊಳಿಸುತ್ತಾರೆ. ತಾಂತ್ರಿಕತೆ(technolog) ಧರ್ಮ , ವಿಜ್ಞಾನ ಇವುಗಳ ಮಾನದಂಡದಿಂದ ಚರಿತ್ರೆಯನ್ನು ಕಟ್ಟುತ್ತಿರುತ್ತಾರೆ. ಇವರ ಪ್ರಕಾರ ಒಂದು ಸಮಾಜ ಭೌತಿಕವಾಗಿ ಯಾವುದೋ ಒಂದು ವಿಷಯದಲ್ಲಿ ಹಿಂದೆ ಬಿದ್ದಿದ್ದರೆ ಉಳಿದೆಲ್ಲ ವಿಷಯಗಳಲ್ಲೂ ಆದಿಮವಾಗಿಯೇ ಇರುತ್ತದೆ ಎಂದು ನಂಬಿರುತ್ತಾರೆ. ಇವರಿಗೆ ಯೂರೋಕೇಂದ್ರಿತ(eurocentric)ವಾದ ಪರಿಕಲ್ಪನೆ ಉಳಿದ ಸಾಮಾಜಗಳನ್ನು ಅಳೆಯುವ, ಅರ್ಥೈಸುವ ಮಾನದಂಡವಾಗಿರುತ್ತದೆ. ಆದರೆ, ಭಾರತದಂತಹ ಕೈಗಾರೀಕರಣಕ್ಕೂ ಒಳಗಾದ ಸಮಾಜವೂ ಬದುಕುತ್ತಿರುವ ಕಾಲದಲ್ಲೇ ಅತಿ ಆದಿಮವಾದ ಜನಾಂಗಗಳು ಬದುಕುತ್ತಿರುತ್ತವೆ. ಅಂತೆಯೇ ಅತಿ ಆಧುನಿಕರ ಒಳಗೆ ಅತಿ ಅದಿಮವಾದ ಭಾವನೆಗಳು ಏಕಕಾಲದಲ್ಲಿ ಕಂಡು ಬರುತ್ತವೆ. ಈ ರೀತಿಯಾದ ಬಹುಮುಖೀ ಸಮಾಜವೂ ಒಂದೇ ಕಾಲದಲ್ಲಿ ಒಂದೇ ದೇಶದಲ್ಲಿ ಬದುಕುತ್ತಿರುವುದನ್ನು ಗ್ರಹಿಸಿಕೊಳ್ಳುವ ಅಭ್ಯಾಸದ ವಿಧಾನ ನಮ್ಮದಾಗಬೇಕು. ಲೆವಿಸ್ತ್ರಾಸ್ ನ ರಚನಾವಾದದ ರೀತಿಯಿಂದ ಪಠ್ಯವನ್ನು ಏಕಕಾಲಿಕ (synchronic) ದೃಷ್ಟಿಯಿಂದ ಮಾತ್ರ ನೋಡಬೇಕಾಗಿಲ್ಲ ಎಂಬುದು ವಿದಿತವಾಗುತ್ತದೆ. ಹೀಗೆ ನೋಡುವುದರಿಂದ ಸದ್ಯದ ‘ಈಗ’ ಮತ್ತು ‘ಇಲ್ಲಿ’ಯಾ ಘಟನೆಗಳಿಗೂ ಚಾರಿತ್ರಿಕವಾಗಿಯೂ ಸದ್ಯಕ್ಕೂ ಸ್ಪಂದಿಸುವ ಗುಣ ಒದಗಿ ಬರುತ್ತದೆ.
ಅಂದರೆ, ಯಾವುದೇ ಜಾನಪದ ಪಠ್ಯದ ಅರ್ಥ ಸ್ತಗಿತವಾಗಿರುವುದಿಲ್ಲ. ಕ್ಷಣ ಕ್ಷಣಕ್ಕೂ ಅದು ತನ್ನನ್ನು ತಾನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿರುತ್ತದೆ. ಪ್ರತಿ ಸಂಜ್ಞೆ (sign)ಯು ಪ್ರತಿಬಾರಿಯೂ ತನ್ನನ್ನು ತಾನು ಅವತಾರಕ್ಕೆ (realization) ಒಡ್ಡಿಕೊಳ್ಳುತ್ತಿರುತ್ತಾರೆ. ನಿಘಂಟಿನಲ್ಲಿ ಮಾತ್ರ ಅರ್ಥ ಹೂತು ಹೋಗಿರುತ್ತದೆ. ಭಾಷೆಯಲ್ಲಿ ಪ್ರತಿಬಾರಿಯೂ ಪದಗಳು ಪ್ರಯೋಗಕ್ಕೆ ಒಡ್ಡಿಕೊಂಡಾಗ ಸಂದರ್ಭಕ್ಕೆ ತಕ್ಕಂತೆ ಅವತಾರವೆತ್ತುತ್ತಿರುತ್ತದೆ. ಅಂತೆಯೇ ಜಾನಪದ ಪಠ್ಯಗಳು ಪ್ರತಿಬಾರಿಯೂ ಅರ್ಥ ಭಾಷೆಯಲ್ಲಿ ಹಾಜರಾಗುವಂತೆ ಜಾನಪದ/ಸಾಂಸ್ಕೃತಿಕ ಪಠ್ಯದಲ್ಲೂ ಹಾಜರಾಗುತ್ತಿರುತ್ತದೆ. ಈ ಜಾನಪದ ಪಠ್ಯ ಭಾಷಾ ಪಠ್ಯವಾಗಿರಬಹುದು (ಕಥೆ , ಕವನ ಇತ್ಯಾದಿ) ಅಥವಾ ಕ್ರಿಯೆವಿಧಿಗಳಾಗಿರಬಹುದು.
ಯಾವುದೇ ಪಠ್ಯದ ಅರ್ಥವನ್ನು ‘ಈ ಕ್ಷಣದ ಅರ್ಥ’ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪಠ್ಯದಲ್ಲಿ ಅರ್ಥ ಸಾಪೇಕ್ಷವಾಗಿರುತ್ತದೆ. ಪ್ರತಿಬಾರಿಯೂ ಪಠ್ಯ ಸೃಷ್ಟಿಯಾದಾಗ ಆ ಕ್ಷಣದ ಅರ್ಥ ಸೃಷ್ಟಿಯಾಗುತ್ತದೆ. ಆದ್ದರಿಂದ ಪಠ್ಯ ತಾನು ಸೃಜನವಾಗಿರುವಾಗಿನ ಅರ್ಥ ಮಾತ್ರ ದಕ್ಕುತ್ತದೆ. ಪಠ್ಯ ಪುನರಾವರ್ತನೆಗೊಂಡಂತೆಲ್ಲ ಅರ್ಥದ ವಿವಿಧ ಛಾಯೆಗಳು ಮಾತ್ರ ನಮಗೆ ಗೋಚರವಾಗುತ್ತದೆ. ಅಂದರೆ ಏಕಕಾಲಿಕವಾಗಿ ಕಂಡುಬಂದರೂ ಚಾರಿತ್ರಿಕವಾಗಿಯೂ ಇರುತ್ತದೆ. ಅಂತೆಯೇ ಈ ಛಾಯೆಗಳೇ ಅರ್ಥವೂ ಜೀವಂತವಾಗಿದೆ ಎಂಬುದನ್ನು ಸೂಚಿಸುವುದು. ಆದ್ದರಿಂದ ಪಠ್ಯದ ಅರ್ಥಕ್ಕೆ ಯಾವಾಗಲೂ ಚಾಲನೆ ಇರುತ್ತದೆ. ಅದು ಅಲ್ಲೇ ಹೂತು ಹೋಗುವುದಿಲ್ಲ. ಅನಂತವಾಗಿ ಮುಂದುವರಿಯುತ್ತಲೇ ಇರುತ್ತದೆ. ಪಠ್ಯವೂ ಅನಂತವಾಗಿ ಹುಟ್ಟುತ್ತಲೇ ಇರುವುದರಿಂದ ಪ್ರತಿಬಾರಿಯೂ ಅರ್ಥ ಮುಂದೂಡಲ್ಪಡುತ್ತಿರುತ್ತದೆ. ವ್ಯತ್ಯಾಸವನ್ನು ಸೂಚಿಸುತ್ತಲೇ ಇರುತ್ತಾ ಮುಂದುವರಿಯುತ್ತಿರುತ್ತದೆ. ಜಾನಪದ ಪಠ್ಯದಲ್ಲಿ ಅವತರಣಿಕೆಗಳು(versions) ಇರುವಂತೆ ಅರ್ಥದಲ್ಲೂ ಅವತರಣಿಕೆಗಳು ಉಂಟಾಗುತ್ತಿರುತ್ತವೆ ಅಥವಾ ಅರ್ಥ ಅವತರಿಸುತ್ತಿರುತ್ತದೆ.
ಜಾನಪದದಲ್ಲಿ, ಅಂದರೆ ನುಡಿಸಂಪ್ರದಾಯದಲ್ಲಿ ಕಾಲದಿಂದ ಅರ್ಥವನ್ನು ಅಮೂರ್ತದಲ್ಲಿ ಹಿಡಿದಿಡಲಾಗುವುದಿಲ್ಲ. ಶಿಷ್ಟ ಸಾಹಿತ್ಯದಲ್ಲಿ ಮಾತ್ರ ಅರ್ಥದ ಕಾಲ ಅವಕಾಶ (space)ವಾಗಿ ಪರಿವರ್ತನೆಗೊಳ್ಳುತ್ತಿರುತ್ತದೆ. ನುಡಿಸಂಪ್ರದಾಯದಲ್ಲಿ ಪಠ್ಯ ಕಾಲಕ್ರಮದ ಸರಣಿಯಲ್ಲಿ ಮಾತ್ರ ತನ್ನನು ತಾನು ತೆರೆದುಕೊಳ್ಳುತ್ತಿರುತದೆ. ಈ ಭಾಷಾ ಕಾಲವನ್ನು ಅವಕಾಶವಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಸಂಗ್ರಹಕಾರರು ಅದನ್ನು ಪರಿವರ್ತಿಸಿದರೂ ಅದು ಇನ್ನೊಂದು ಅವತರಣಿಕೆಯಾಗಿ ಮಾತ್ರ ಇರುತ್ತದೆ.
ಯಾವುದೇ ಜಾನಪದ ಪಠ್ಯದಲ್ಲೂ ಒಂದು ರಚನೆ ಇದೆ ಎಂದು ಹೇಳಿ, ಇದೇ ಅದರ ಅರ್ಥವೆಂದು ತೋರಿಸುವುದು ಬಹಳ ಸುಲಭ. ಸಂರಚನಾವಾದಿಗಳು ರಚನೆಯಲ್ಲೇ ಅರ್ಥವಿದೆ ಎಂದು ನಂಬಿದ್ದವರು. ಹೀಗೆ ತೋರಿಸಿಕೊಡುವುದರಿಂದ ಅರ್ಥವೂ ನಾವು ಪಠ್ಯವನ್ನು ‘ಓದು’ವುದಕ್ಕಿಂತ ಮುಂಚೆಯೇ ಅಲ್ಲಿ ಕುಳಿತಿದೆ ಎಂದು ಹೇಳಿದಂತಾಗುತ್ತದೆ. ಒಂದು ಮಟ್ಟದ ತನಕ ಪಠ್ಯ ಮೊದಲೇ ನಿರ್ಧರಿತವಾಗಿರುತ್ತದೆ ಎಂದು ಹೇಳಿದರೂ ಪಠ್ಯ ಬೆಳೆದಂತೆಲ್ಲ ಪಠ್ಯ ಸೃಜಿಸುವವನ ಕೈ ಮೀರಿ ಅರ್ಥ ಬೆಳೆದುಕೊಂಡು ಬಿಡುತ್ತದೆ. ಅರ್ಥ ಉಕ್ಕಿ ಹೋಗುತ್ತದೆ. ಆದ್ದರಿಂದ ಪದ್ಯ ಸೃಜನವಾಗುವ ಮುಂಚೆ ಅದರಲ್ಲಿ ಅರ್ಥವಿರುವುದಿಲ್ಲ. ಪಠ್ಯವೂ ಅರ್ಥಕ್ಕಾಗಿ ಕಾಯುತ್ತಿರಬೇಕಾಗುತ್ತದೆ. ಆದ್ದರಿಂದ ರಚನೆಯಲ್ಲಿ ಅರ್ಥ ಹುಡುಕುವುದಕ್ಕಿಂತ ರಚನಾಪ್ರಕ್ರಿಯೆಯಲ್ಲಿ (structuration) ಅರ್ಥವನ್ನು ಕಾಣಬೇಕು. ಜಾನಪದ ಪಠ್ಯ ಸೃಷ್ಟಿಸುವವನೂ ಸೃಷ್ಟಿಸಮಯದಲ್ಲಿ ತನ್ನ ಮನಸ್ಸಿನಲ್ಲೇ ಅರ್ಥವನ್ನು ಸೃಷ್ಟಿಸಿಕೊಳ್ಳುತ್ತಿರುತ್ತಾನೆ. ತನ್ನನು ತಾನೇ ಓದಿಕೊಳ್ಳುತ್ತಿರುತ್ತಾನೆ.
ಯಾವುದೇ ಸಾಂಸ್ಕೃತಿಕ ಪಠ್ಯದ ‘ಓದೂ’ ಪಠ್ಯವನ್ನು ಸೃಷ್ಟಿಸುವವನ ‘ಓದೇ’ ಆಗಬೇಕಾಗಿಲ್ಲ. ಜಾನಪದ ಪಠ್ಯಗಳು ನುಡಿಯಲ್ಲಿ ಮಾತ್ರ ಇರುವುದರಿಂದ ಪ್ರತಿ ಬಾರಿಯೂ ಸೃಷ್ಟಿಯಾಗುತ್ತಿರಬೇಕಾಗುತ್ತದೆ. ಪ್ರತಿಬಾರಿ ಸೃಷ್ಟಿಯಾದಾಗಲೂ ಹಿಂದಿನ ಅರ್ಥವನ್ನೇ ಹೊಂದಿರುವುದಿಲ್ಲ. ಹಿಂದಿನ ಪಠ್ಯಕ್ಕೆ ಪ್ರತಿಕ್ರಿಯೆಯಾಗಿ ಇಂದಿನ ಪಠ್ಯ ಸೃಷ್ಟಿಯಾಗಬಹುದು, ಪ್ರತಿಬಾರಿ ಈ ಪಠ್ಯವನ್ನು ಕೇಳುವಾಗಲೂ ‘ಓದು’ವಾಗಲೂ ಪಠ್ಯ ಸೃಷ್ಟಿಸುವವನ ಓದೇ ಆಗಬೇಕಾಗಿಲ್ಲ. ಈ ಅರ್ಥದಲ್ಲಿ ಜಾನಪದ ಪಠ್ಯಗಳು ದೃಷ್ಟಿಯಲ್ಲಿ ಮತ್ತು ಅರ್ಥದಲ್ಲಿ ಪ್ರತಿಬಾರಿಯೂ ಅಭಿನಯಕ್ಕೆ ಒಳಗಾಗುತ್ತಲೇ ಇರುತ್ತವೆ. ಅವತಾರಗಳನ್ನು ತಳೆಯುತ್ತಿರುತ್ತದೆ. ಬರಹದಲ್ಲಿರುವ ಪಠ್ಯದ(ಸಾಹಿತ್ಯ) ಓದಿಗಿಂತ ಜಾನಪದ ಪಠ್ಯದ ಓದು ಈ ರೀತಿಯಲ್ಲಿ ಭಿನ್ನವಾಗಿರುತ್ತದೆ. ಬರಹದಲ್ಲಿ ಪಠ್ಯ ಅಚ್ಚಾಗಿರುತ್ತದೆ. ಒಂದು ಕಾಲದಲ್ಲಿ ಹೂತು ಹೋಗಿರುತ್ತದೆ. ಓದುಗರಲ್ಲಿ ಮಾತ್ರ ಮಾತ್ರ ಅರ್ಥ ಬೇರೆ ಬೇರೆಯಾಗಿ ಕಾಣಬಹುದು. ಜಾನಪದದಲ್ಲಿ ಪಠ್ಯ ಸೃಷ್ಟಿಸುವವನ ಓದೂ ಅದರೊಳಗೆ ಪ್ರತಿಬಾರಿಯೂ ಬಂದು ಸೇರಿಕೊಳ್ಳುತ್ತಿರುತ್ತದೆ. ಈ ದೃಷ್ಟಿಯಲ್ಲಿ ನಮ ಜಾನಪದ ಪಠ್ಯಗಳ ಅಧ್ಯಯನವಾಗಿಲ್ಲ. ಒಬ್ಬ ಒಂದು ಕಾಲದಲ್ಲಿ ಹೇಳಿದ ಒಂದು ಜಾನಪದ ಕಥಾನಕವನ್ನು ಮತ್ತೆ ಕೆಲವು ಕಾಲಾಂತರದಲ್ಲಿ ಅವನಿಂದಲೇ ಹೇಳಿಸಿದರೆ ಹಿಂದೆ ಹೇಳಿದ ಅರ್ಥವೇ ನೂರಕ್ಕೆ ನೂರು ಇರುತ್ತದೆಂದು ಹೇಳಲು ಸಾಧ್ಯವಿಲ್ಲ. ಹೇಳಿಕೆಯ ಧಾಟಿ, ಲಯ, ವಕ್ರೋಕ್ತಿ ಬದಲಾದ ಲೋಕದೃಷ್ಟಿ – ಬಂದು ಸೇರಿಕೊಂಡು ಬಿಡಬಹುದು. ಭಾಷೆಯನ್ನೂ ಬಳಸುವವರ ಕೈ(ಬಾಯಿ) ಮೀರಿಬಿಡುವ ಶಕ್ತಿ ಅರ್ಥಕ್ಕಿರುತ್ತದೆ. ಭಾಷೆಯನ್ನೂ ಬಳಸುವವನಿಗೆ ಎದಿರೇಟು ಕೊಡಬಹುದು.
ಇಷ್ಟಾದರೂ ಪಠ್ಯ ಸೃಷ್ಟಿಸುವವನ ಅರ್ಥ ಮತ್ತು ‘ಓದು’ಗಳ ಅರ್ಥಗಳ ನಡುವೆ ಇನ್ನು ಕೆಲವು ಅರ್ಥಗಳು ಉಳಿದುಹೋಗುವ ಸಾಧ್ಯತೆಗಳಿವೆ. ನಾನು ಒಮ್ಮೆ ಜೇನು ಕುರುಬ ರಾಮಾಯಣವನ್ನು ಸಂಗ್ರಹಿಸುವಾಗಿನ ಒಂದು ಪ್ರಸಂಗ ಜ್ಞಾಪಕಕ್ಕೆ ಬರುತ್ತದೆ. ಆ ಪಠ್ಯಕಾರ್ತಿ , ‘ಕೋತಿ ಕಾಡಿನಲ್ಲಿ ತಾಕಸಿಯ ಗುಡಿಸಲಿಗೆ ಬೆಂಕಿ ಇಡುತ್ತದೆ’ ಎಂದು ಹೇಳಿ ತಕ್ಷಣ ‘ಆಗಿನ ಕಾಲದಲ್ಲಿ ಕಾಡಿನಲ್ಲಿ ಯಾವ ಪ್ರಾಣಿ ಪಕ್ಷಿಗಳು ಇರಲಿಲ್ಲ’ ಎಂದು ಸೇರಿಸಿಬಿಟ್ಟಳು. ಹಾಗೆ ಸೇರಿಸಿದ ಉದ್ದೇಶ ನನಗೆ ಅರಿವಾಯಿತು. ಆ ಹಾದಿಯ ಜನರನ್ನು ಕಾಡಿನಿಂದ ಹೊರಹಾಕಿದ್ದರು. ಆ ಸರಕಾರ ಅವರು ಕಾಡನ್ನು ನಾಶಮಾಡುವರೆಂಬ ಕಾರಣದಿಂದ ಕಾಡಿನ ಒಳಕ್ಕೆ ಹೋಗಲು ತಡೆಯುವ ಕ್ರಮಕ್ಕೆ ಪ್ರತಿಕ್ರಿಯೆಯಾಗಿತ್ತು.
ಇನ್ನು, ಸಾಂಸ್ಕೃತಿಕ ಪಠ್ಯಗಳು ಭಾಷಾ ಮಾಧ್ಯಮದಲ್ಲೂ ಇರಬಹುದು. ಭಾಷೇತರ ಮಾಧ್ಯಮದಲ್ಲೂ ಇರಬಹುದು ಅಥವಾ ಅವೆರಡೂ ಸೇರಿ ಇರಬಹುದು. ಜೇನು ಕುರುಬರ ‘ಬುಂಡೆ ಕರೆ’ಯುವ ಸಾಂಸ್ಕೃತಿಕ ಪಠ್ಯದಲ್ಲಿ ಭಾಷಾ ಮತ್ತು ಭಾಷೇತರ ಪಠ್ಯಗಳು ಬೆರೆತ್ತಿರುತ್ತವೆ. ಹಾಡಿಯಲ್ಲಿ ಯಾರಿಗಾದರೂ ಸಮಸ್ಯೆ ಬಂದಾಗ ಅವರು ಬುಂಡೆ ಕರೆಸುತ್ತಾರೆ. ಬುಂಡೆ ಕರೆಯುವವನ ಮೈಮೇಲೆ ‘ಗಾಳಿ’ ಬುಂಡೆ ಕರಸುವವನ/ಳ ಪುರಾತನನಾಗಿರುತ್ತಾನೆ. ಆಟ ಮೈಮೇಲೆ ಬಂದು ಏತಕ್ಕಾಗಿ ಕಷ್ಟ ಬಂದಿದೆ, ಅದಕ್ಕೆ ಪರಿಹಾರವೇನು ಎಂದು ಹೇಳುತ್ತಾನೆ. ಈ ಕ್ರಿಯಾವಿಧಿಯಲ್ಲಿ ಅರ್ಥವೂ ಕೆಲಸ ಮಾಡುವ ರೀತಿ ವಿಚಿತ್ರವಾಗಿರುತ್ತದೆ . ಗಾಳಿ ಮೈಮೇಲೆ ಬಂದಾಗ ಬುಂಡೆ ಕರಸುವವನು ‘ಉ ಹು ಹು ಹು ….’ ಎಂದು ಶಬ್ದವನ್ನು ಹೊರಡಿಸುತ್ತಿರುತ್ತಾನೆ. ಬುಂಡೆ ಬಾರಿಸುವಾಗ ಬರುವ ಶಬ್ದವನ್ನು ಆಗಾಗ್ಗೆ ಆಲಿಸುತ್ತಿರುತ್ತಾನೆ . ಅವನ ಹಿಂದೆ ಕುಳಿತ ನಾಲ್ಕಾರು ಹೆಂಗಸರು ‘ಸೊಲ್ಲು’ ಎಂಬ ರಾಗವನ್ನು ಎಳೆಯುತ್ತಿರುತ್ತಾರೆ. ಇಲ್ಲಿ ಭಾಷೆ ಇರುವುದೇ ಇಲ್ಲ. ಬರೀ ಶಬ್ದಗಳಿರುತ್ತವೆ. ಈ ಶಬ್ದಗಳನ್ನು ಆಲಿಸಿಕೊಂಡು ಸಹಾಯಕನೊಬ್ಬ ಸಮಸ್ಯೆಯನ್ನು ತಂದ ವ್ಯಕ್ತಿಗೆ ಗಾಳಿ ಏನು ಹೇಳಿತು ಎಂಬುದನ್ನು ಪರಿಹಾರವನ್ನು ಹೇಳುತ್ತಿರುತ್ತಾನೆ. ಇಲ್ಲಿ ಪಠ್ಯ ಎಲ್ಲಿ ಹುಟ್ಟುತ್ತದೆ? ಬುಂಡೆಯಲ್ಲೋ? ಬುಂಡೆ ಕರೆಯುವವನಲ್ಲೋ? ಪರಿಹಾರ ಹೇಳುವ ಮಧ್ಯವರ್ತಿಯಲ್ಲೋ? ಅಥವಾ ಪರಿಹಾರ ಕೇಳಿಸಿಕೊಳ್ಳುವ ವ್ಯಕ್ತಿಯಲ್ಲೋ?
ಇಂತಹ ಸಂದರ್ಭಗಳಲ್ಲಿ ಕೇವಲ ಬುಂಡೆ ಕರೆಯುವವನ ಶಬ್ದದಲ್ಲೇ ಭಾಷೆಯನ್ನೂ ಸಂದರ್ಭಕ್ಕೆ ತಕ್ಕಂತೆ ಕಂಡುಕೊಳ್ಳುವ ಮಧ್ಯವರ್ತಿಯು ಸೃಷ್ಟಿಸುವ ಪಠ್ಯವಾಗಿಯೂ ಇರುತದೆ. ಈ ಪಠ್ಯವನ್ನು ಕೇಳುಗ ತನ್ನ ಸಂದರ್ಭಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುತ್ತಾನೆ. ಅರ್ಥ ಸೃಷ್ಟಿಯಾಗುವ ಕ್ರಿಯೆ ಇಲ್ಲಿ ಸಂಕೀರ್ಣವಾಗಿರುತ್ತದೆ. ಇಲ್ಲೂ ಸಹ ಒಮ್ಮೆ ಬುಂಡೆ ಕರೆದಾಗಿನ ಸಾಂಸ್ಕೃತಿಕ ಪಠ್ಯ ಇನ್ನೊಮ್ಮೆ ಕರೆದಾಗ ಇರುವುದಿಲ್ಲ.
ಹೀಗೆ ಸಾಂಸ್ಕೃತಿಕ ಪಠ್ಯಗಳ ಅರ್ಥ ಸಂಕೀರ್ಣವಾಗಿರುವಾಗ ಪ್ರಾಪ್ ಅಥವಾ ಲೆವಿಸ್ತ್ರಾಸ್ ರಂತೆ ವಿಶ್ಲೇಷಣೆಗಾಗಿ ಕಥಾನಕಗಳನ್ನು ಸಂಕುಚಿತಗೊಳಿಸಿಕೊಂಡು ಅಥವಾ motif index ನ ಆಧಾರದ ಮೇಲೆ ಕಥಾನಕಗಳನ್ನು ಸಂಗ್ರಹಿಸಿಕೊಂಡು ವರ್ಗೀಕರಿಸಿಕೊಂಡಾಗ ಅವಕ್ಕೆ ಅರ್ಥಮಾಡುವಾಗ ಮೇಲೆ ಹೇಳಿದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಪ್ರಜ್ಞಾಪೂರ್ವಕವಾಗಿಯೇ , ಅಪ್ರಜ್ಞಾಪೂರ್ವಕವಾಗಿಯೋ ಕಥಾನಕದ ಅನೇಕ ಅರ್ಥಗಳು ನಾಶಗೊಂಡಿರುತ್ತವೆ. ಆದ್ದರಿಂದ ಪಠ್ಯದ ಅರ್ಥವನ್ನು ಸಾರಾಂಶ ರೂಪದಲ್ಲಿ ಹೇಳಿದಾಗ ಕಥಾನಕಗಳು ಸೊರಗಿ ಹೋಗಿರುತ್ತವೆ. ಒಂದು ರೀತಿಯಲ್ಲಿ ಕಥಾನಕದ ಪಠ್ಯದ ಆಧಾರದಲ್ಲಿ ಸೃಷ್ಟಿಸಿದ ಇನ್ನೊಂದು ಪಠ್ಯವಾಗಿರುತ್ತದೆ.
ಆದ್ದರಿಂದ, ರಚನಾವಾದಿಗಳು ತಿಳಿದಂತೆ ಪಠ್ಯದ ರಚನೆಯಲ್ಲೇ ಅದರ ಕೇಂದ್ರ ಅಡಗಿರುತ್ತದೆ ಎಂಬುದು ಮಿಥ್ಯೆ. ಭಾಷೆಗೆ ಕೇಂದ್ರ ಯಾವುದು? ಕೇಂದ್ರವು ಪ್ರತಿ ಬಾರಿಯೂ ಜಾನಪದ ಪಠ್ಯ ಸೃಸ್ತಿಸುವವನ ಮತ್ತು ಅದನ್ನು ‘ಓದುವವನ’ ದೃಷ್ಟಿಕೋನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಇದನ್ನೇ ‘ಲೀಲೆ’ ಎಂದು ಕರೆಯಬಹುದು. ಕೆಲವು ತಂಬೂರಿ ಜಾನಪದ ಸಂಪ್ರದಾಯದವರು ತಮ್ಮನ್ನು ತಾವೇ ಲೀಲೆಗಾರರೆಂದು ಕರೆದುಕೊಂಡಿರುವುದು ಬಹಳ ಅರ್ಥವತ್ತಾಗಿದೆ.
ಹೀಗೆಂದಾಕ್ಷಣ ಜಾನಪದ ಪಠ್ಯ ಗಳನ್ನೂ ಅರ್ಥಮಾಡಿಕೊಳ್ಳುವಾಗ ಅಥವಾ ಓದುವಾಗ ಎಷ್ಟೆಷ್ಟು ಅರ್ಥಗಳು ಆ ಪಠ್ಯದಲ್ಲಿವೆ ಎಂದು ನಾವು ಪಟ್ಟಿಮಾಡಬೇಕಾಗಿಲ್ಲ. ಇದರ ಉದ್ದೇಶ, ಪಠ್ಯವೂ ಎಲ್ಲೆಲ್ಲಿ ತನ್ನಿಂದ ತಾನು ಚೆಲ್ಲಿಕೊಳ್ಳುತ್ತದೆ, ಪಠ್ಯದಲ್ಲಿನ ಅರ್ಥ ಸಂಯೋಜನೆಯಾಗುತ್ತದೆ ಅಥಾವಾ ಆಗುವುದಿಲ್ಲ. ಎಲ್ಲಿ ಪಠ್ಯವೂ ಪಠ್ಯಕಾರಣ ಹಿಡಿತವನ್ನು ಮೀರಿ ಚೆಲ್ಲಿಕೊಳ್ಳುತ್ತದೆ ಎಂಬುದನ್ನು ಮನಗಾಣಬೇಕು. ಪಠ್ಯಗಳಿಗೆ ಈ ರೀತಿ ಅರ್ಥ ಕಂಡುಕೊಳ್ಳುವ ಓದುಗ ಪಠ್ಯದ ಬಾಯಿಯಾಗುತ್ತಾನೆ.
ಜಾನಪದ ಪಠ್ಯದ ಅವತರಣಿಕೆಗಳನ್ನು ಲೆವಿಸ್ತ್ರಾಸ್ ಅಥವಾ ಪ್ರಾಪ್ ಅವರು ತಮ್ಮ ವಿಶ್ಲೇಷಣೆಗಾಗಿ gap fillers   ನಂತೆ ಉಪಯೋಗಿಸಿಕೊಂಡರು. ಆದರೆ ಬೇರೆ ಬೇರೆ ಕಾಲ-ದೇಶಗಳಲ್ಲಿ ಒಂದೇ ಪಠ್ಯದ ನಾಲ್ಕಾರು ಅವತರಣಿಕೆಗಳು ಸಿಕ್ಕಿದಾಗ ಅವನ್ನು ಬೇರೆ ಬೇರೆ ಧ್ವನಿಗಳಾಗಿ (voices) ಪರಿಗಣಿಸಬೇಕು. ಬಹುಮುಖ ಅರ್ಥಗಳನ್ನು ಹೊರಡಿಸುವ ಪಠ್ಯವೆಂದು ಓದಿಕೊಳ್ಳಬೇಕು. ಉದಾಹರಣೆಗೆ, ಮಾರಿಯಮ್ಮನ ಜಾನಪದ ಕಥೆಯಲ್ಲಿ ಮಾರಿಯಾಗುವ ಬ್ರಾಹ್ಮಣ ಹುಡುಗಿ ಕೇಂದ್ರವಾಗಬಹುದು. ಮತ್ತೊಮ್ಮೆ ಅವಳ ಗಂಡ, ಮಾದಿಗ, ಕೇಂದ್ರವಾಗಬಹುದು. ಅಂತೆಯೇ ಮಾಂಸವನ್ನು ಬಯಸಿದ ಮಾದಿಗನ ತಾಯಿ ಕೇಂದ್ರವಾಗಬಹುದು. ಬೇರೆ ಬೇರೆ ಅವತರಣಿಕೆಗಳು ಬೇರೆ ಬೇರೆ ವ್ಯಕ್ತಿಗಳ ದೃಷ್ಟಿಯನ್ನು ಕೇಂದ್ರ ಮಾಡಿಕೊಳ್ಳಬಹುದು. ಈ ರೀತಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ದೃಷ್ಟಿಕೋನಗಳ ಅವತರಣಿಕೆಗಳಾಗಿ ಬೇರೆ ಬೇರೆ ಒತ್ತುಗಳನ್ನು ಗಳಿಸಬಹುದು . ಈ ರೀತಿ ನೋಡುವುದರಿಂದ ಯಾವ ಪಠ್ಯಕ್ಕೂ ಅರ್ಥ ಸಂಕುಚಿತತೆಯ ಸೋಂಕು ತಟ್ಟುವುದಿಲ್ಲ. ಭಾಷೆ ಎಲ್ಲಿ ನಿಲ್ಲುತ್ತದೆಯೋ ಅರ್ಥ ಅಲ್ಲಿಂದ ಆಚೆಗೂ ಚಾಚಿಕೊಂಡಿರುತ್ತದೆ. ಏಕಕಾಲಿಕ ಓದು ಇಲ್ಲಿ ಸಾಧ್ಯವಾಗುವುದಿಲ್ಲ. ಯಾವುದೇ ಮಿಥ್ ನ , ಕ್ರಿಯಾವಿಧಿಯ , ಕಥಾನಕಗಳ ವಿವಿಧ ಸ್ತರದಲ್ಲಿ ಪಠ್ಯವನ್ನು ನೋಡುವಂತಾಗಬೇಕು. ಇಲ್ಲಿ ಪಠ್ಯದ ‘ಓದು’ ಅಚಾರಿತ್ರಿಕವಾಗಿರುವುದಿಲ್ಲ . ಪಠ್ಯ ಸೃಷ್ಟಿಸಿದ ಸಮಾಜದ ವಿವಿಧಕಾಲಗಳ ಮನಸ್ಸು ಇಂತಹ ಓದಿನಿಂದ ತೆರೆದುಕೊಳ್ಳುತ್ತದೆ. ಹೀಗೆ ಜಾನಪದ ಅವತರಣಿಕೆಗಳು ಸೃಷ್ಟಿಸುವ ambivalance , ಜಾನಪದ ಪಠ್ಯದ ಅರ್ಥಗಳನ್ನು ಮುಕ್ಕಳಿಸುವ ಗುಣವನ್ನು ಹೊಂದಿರುತ್ತದೆ.
ಸಂರಚನಾವಾದಿಗಳು ಪಠ್ಯಗಳಲ್ಲಿ ಸಾರ್ವರ್ತಿಕ ಅರ್ಥವನ್ನು (universal meaning) ಕಂಡುಕೊಳ್ಳಲು ಮಾತ್ರ ಬಳಸುತ್ತಾರೆ. ಪಠ್ಯ ಸಾರ್ವತ್ರಿಕ ಅರ್ಥವನ್ನು ಹೊಂದಿರುವುದರ ಜೊತೆಗೇ, ಸ್ಥಳೀಯ ಅರ್ಥವನನ್ನೂ, ಪಠ್ಯ ಸೃಷ್ಟಿಸುವವನ ದೃಷ್ಟಿಕೋನವನ್ನು ಮೇಲೆ ವಿಶ್ಲೇಷಿಸಿದಂತೆ – ಹೊಂದಿರುತ್ತದೆ ಎಂಬುದೂ ಮುಖ್ಯ. ಈ ರೀತಿ ಓದಿನಿಂದ ಪಠ್ಯದಲ್ಲಿ ಮನುಷ್ಯ ಸ್ತಾಪಿತನಾಗುತ್ತಾನೆ. ಸಂಸ್ಕೃತಿಯ ಒಳಗಿನ – ಹೊರಗಿನವ ಎಂಬ ದ್ವಂದ್ವವಿರುವುದಿಲ್ಲ . ಸಂರಚನವಾದಿಗಳು ಕಂಡಂತೆ ಸಾಂಸ್ಕೃತಿಕ ಪಠ್ಯವೂ ಭಾಷಾ ಮಾದರಿಯ ಪಠ್ಯವಾಗಿ ಕಾಣಬೇಕಾಗಿಲ್ಲ. ಇಲ್ಲಿ ಭಾಷೆಯೇ ಪಠ್ಯ.
ಜಾನಪದ ಪಠ್ಯಗಳು ಯಾವಾಗಲೂ ಪರಿಪೂರ್ಣವಾಗಿರಬೇಕಾಗಿಲ್ಲ. ಇಲ್ಲಿ ‘ಖಾಲಿಜಾಗ’ಗಳಿಗೂ ಎಡೆ ಇರುತ್ತದೆ. ಮಧ್ಯೆ ಮಧ್ಯೆ ಕಾರ್ಯಕಾರೀ ಪರಿಣಾಮಗಳ ಕೊಂಡಿ ಕಳಚಿಕೊಂಡಿರಬಹುದು. ಖಾಲಿಜಾಗಗಳನ್ನು ಓದುಗ/ಕೇಳುಗ ತುಂಬಿಕೊಳ್ಳುತ್ತಾನೆ. ಕೊಂಡಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ . ಅರ್ಥ ವಿನಿಯೋಗಕ್ಕಾಗಿ ಕಾಯುತ್ತಿರುತ್ತಾನೆ. ಈ ದೃಷ್ಟಿಯಿಂದ ನೋಡಿದಾಗ ಪಠ್ಯಗಳಲ್ಲಿ ಅರ್ಥ ಬಾಯಿ ಕಟ್ಟಿಕೊಂಡಿರಲು ಸಾಧ್ಯವಿಲ್ಲ. ಎಲ್ಲಿ ಭಾಷೆ ಕಟ್ಟಿಹೊಗುತ್ತದೋ ಅಲ್ಲಿ ‘ಸಾವು’ ಇರುತ್ತದೆ. ಭಾಷೆಗಾಗಿ ಆಕಾಂಕ್ಷಿ (desire) ಪಡುವಾಗ ಜೀವ ತುಳುಕಾಡುತ್ತಿರುತ್ತದೆ. ಈ ಜೀವನವನ್ನು ಹಿಡಿಯುವುದು ಜಾನಪದ ಅಧ್ಯಯನದ ಗುರಿಯಾಗಬೇಕು. ಇದಕ್ಕೆ ಅತ್ಯುತ್ತಮ ಉದಾಹರಣೆ “ಮುಳ್ಳು ಬಿದ್ದಾವೆ ಮುಗುಲುದ್ದ” ಎಂಬ ಜಾನಪದ ಗೀತೆಯನ್ನು ನೋಡಬಹುದು(ಕಾಳೇಗೌಡ ನಾಗವಾರ(೧೯೭೩)

ಮುಳ್ಳು ಬಿದ್ದಾವೆ ಮುಗುಲುದ್ದ
ನವಿಲೇ ದುಂಬಕ್ಕಯ್ಯ ನವಿಲೇ ದುಂಬಿ
ನವಿಲೇ ದುಂಬವ್ವ ಜಾನಿ ನವಲೇ ದುಂಬಿ
ಅತ್ತಮ್ಮ ಅತ್ತಮ್ಮ
ಹಿತಳುಗೊಂದ್ಹಾವು ಬತ್ತು
ಹಾವಲ್ಲ ಕಾನಮ್ಮಿ
ಅದೊಂದು ಜಾತಿ ಮೀನು
ಅದ ಹಿಡಕೊಂಡೆ ಬಾರಮ್ಮಿ
ಹೆಡೆಗೇಲಿ ಕೌಚಮ್ಮಿ
ಅದರ ಕಣ್ಣಾನೆ ಮೀಟಮ್ಮಿ
ಕಡಿಯಳಕೆ ಮಾಡಮ್ಮಿ
ಅದರ ನಾಲಿಗೆಯ ಎಳಿಯಮ್ಮಿ
ಚಿಗುರೆಲೆ ಮಾಡಮ್ಮಿ
ಅದರ ವಿದುಲೇಯ ತಗಿಯಮ್ಮಿ
ಕೆನೆಸುಣ್ಣ ಮಾಡಮ್ಮಿ
ಅದ ತಕ್ಕೊಂಡು ಬಾರಮ್ಮಿ
ಕಡಿಯಾನೆ ಕುಯ್ಯಮ್ಮಿ
ಅಡಗೇಯ ಮಾಡಮ್ಮಿ
ಕಡಿಯಾನೆ ಕೂದಾಳು
ಎಸರಾನೆ ಮಾಡಾಳು
ಅತ್ತಮ್ಮ ಅತ್ತಮ್ಮ
ನೀವು ಉಣಬನ್ನಿ ಈಗ
ನನಗೆ ಆಯ್ತಾರದೊಪ್ಪತ್ತು
ನಿನ್ನ ಮಾವಯ್ಯ ಕರಡಿಕ್ಕೆ
ಮಾವಯ್ಯ ಮಾವಯ್ಯ
ಊಟಾನೆ ಮಾಡಬನ್ನಿ
ನನಗೆ ಮಂಗ್ಲಾರ್ದ ಒಪ್ಪತ್ತು
ನಾನು ಊಟ ಮಾಡುದಿಲ್ಲ
ನಿನ್ನ ಮೈದಾಳ 
ಮೈದಾಳೆ ಮೈದಾಳೆ
ನೀವು ಊಟಾನೇ ಮಾಡಬನ್ನಿ
ನನಗೆ ಸ್ವಾಮಾರ್ದ ಒಪ್ಪತ್ತು
ನಾವು ಊಟಾನೆ ಮಾಡೂದಿಲ್ಲ
ಅತ್ತಮ್ಮ ಅತ್ತಮ್ಮ
ಯಾರಿಗೆ ಉಣಿಲಿಕ್ಕಾಲಿ
ಯಾರೀಗೂ ಬ್ಯಾಡಮ್ಮ
ನೀನರಾ ಉಣ್ಣೋಗೆ
ನೀನರಾ ಉಣ್ಣೋಗೆ
ಅಂಗಂತ ಹೇಳುತಾಳೆ
ಯಾರಿಗೂ ಬೇಕಿಲ್ಲ
ನಿನ್ನೆಳೂರ ಗೌಡರಿಗಕ್ಕೆ
ಏಳೂರಗೌಡರಿಗೆ ಉಣಿಲಿಕ್ಕೆ ಬುಟ ತಾವು
ಮುಳ್ಳು ಬಿದ್ದವೆ ಮುಗುಲುದ್ದ/ಆ ಮುಳ್ಳು
ಮುಂದೆ ಬಾಕಳಿಗೆ ಕದವಾದೋ / ನಿಲುವಾದೋ
ಮುಂದಳಬಾಕಳಿಗೆ ಚಿಲುಕಾದೋ /ಮಾಶಿವನೆ
ಕುಚ್ಚಿನ ಮೀನಾಗಿ ಕುಣಿದಾವೋ
ತಂಬುಲ ಕೋಡಿ ಹೋಳಿಯಾಗಿ ಹರದಾವೋ
ಕತ್ತರಿಸಿ ಮಾರಿದೋ ಕಳಿಯಡಿಕೆ / ಆತಾವು
ಬಿತ್ತರಿಸಿ ಮಾರಿದೋ 
ಸುವ್ವು ಮಾರಿದೋ ಕೆನೆಸುಣ್ಣ ಆತಾವು
ಕಟ್ಟಿ ಮಾರಿದೋ ಹೊಗೆಸೊಪ್ಪು



ಗ್ರಂಥಸೂಚಿ
ಅನಂತಮೂರ್ತಿ.ಯು.ಆರ್(೧೯೯೦) ‘ರಾಜಭೀತಿ ರಾಜನಿಲ್ಲದ ಭೀತಿ; ಪೂರ್ವಾಪರ ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ, ಕರ್ನಾಟಕ
ಲೆವಿಸ್ತ್ರಾಸ್ ಕ್ಲಾಡ್(೧೯೭೮)  Myth and Meaning: University of Toronto Press, Canada.
ಪ್ರಾಪ್ ವ್ಲಾಡಮೀರ್(೧೯೬೫)  Morphology of Folk Tales, University of Texas , Ostin
ಕಾಳೇಗೌಡ ನಾಗವಾರ (೧೯೭೩) ಬಯಲು ಸೀಮೆಯ ಲಾವಣಿಗಳು , ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಕುವೆಂಪು ಅವರ ವೈಚಾರಿಕತೆ



ಪ್ರೊ.ಕಿಕ್ಕೇರಿ ನಾರಾಯಣ
profile


ಸೌಜನ್ಯ: http://kikkerinarayana.in/

ಪುಸ್ತಕ: ಕುವೆಂಪು ಅವರ ವೈಚಾರಿಕತೆ : ಕೆಲವು ಟಿಪ್ಪಣಿಗಳು

“Science is even more changeable than theology”

“Galileo said that the earth moves and that the sun is fixed. The inquistion said that the earth is fixed and the sun moves and newtonian astronomers adopting an absolute theory of space, said that both the sun and the earth move. But now we say that any one of these three statements are equally true, provided that you haved fixed your sense of ’rest’ and ‘motion’ in the way required by the statement adopted”.

Whitehead, “Religion and Science”, page 227, Cambridge University Press(1946)

ಹೀಗೆ ವಿಜ್ಞಾನ, ಧರ್ಮ ಇವುಗಳನ್ನು ತಮ್ಮ ಚಲನೆಯಲ್ಲಿ ಹಿಡಿಯುವ ಪ್ರಕ್ರಿಯೆಯೇ ವೈಚಾರಿಕತೆ ಎನಿಸುತ್ತದೆ. ಕಾಲಕಾಲಕ್ಕೆ ಈ ಪರಿಕಲ್ಪನೆಗಳು ರೂಪಾಂತರ ಹೊಂದುತ್ತಿರುತ್ತವೆ. ಸ್ಥಳಗಳನ್ನು, ಕೇಂದ್ರಗಳನ್ನು ಬದಲಾಯಿಸುತ್ತಿರುತ್ತವೆ. ಇವೆಲ್ಲವೂ ಒಂದು ಮನಃಸ್ಥಿತಿ ಒಂದರ್ಥದಲ್ಲಿ ವಿಜ್ಞಾನ ಮತ್ತು ಧರ್ಮಗಳು ಪರಿಕಲ್ಪನೆಗಳು ತಮ್ಮ ಚಲನ ಸ್ಥಿತಿಯಲ್ಲಿ ಯಾವುದೋ ಸ್ಥರದಲ್ಲಿ ಸಂಧಿಸುತ್ತವೆ. ಕುವೆಂಪುರಂಥ ಮಹಾಚೇತನ ಈ ಗ್ರಹಿಕೆಯತ್ತ ಚಲಿಸುತ್ತಿರುತ್ತದೆ.

‘ಧರ್ಮ ಎನ್ನುವುದು ಇಂಗ್ಲೀಷ್ ನ ‘religion’ ಎಂಬ ಸಂವಾದಿ ಅಲ್ಲ. ಪ್ರಾಣಿಧರ್ಮ, ಮನುಷ್ಯಧರ್ಮ, ವ್ಯಾಪಾರ ಧರ್ಮ, ಪ್ರಕೃತಿ ಧರ್ಮ ಈ ರೀತಿ ನಾನಾ ಅರ್ಥಗಳಲ್ಲಿ ‘ಧರ್ಮ’ದ ಪರಿಕಲ್ಪನೆಗಳು’ ನಾನಾ ಸ್ತರಗಳಲ್ಲಿ ಪ್ರಯೋಗಿಸಲ್ಪಡುತ್ತದೆ. ಕುವೆಂಪು ಸಾಹಿತ್ಯದಲ್ಲಿ ಅವರ ಧಾರ್ಮಿಕತೆ ಈ ಎಲ್ಲಾ ಸ್ಥರಗಳಲ್ಲೂ ನಿಕಷಕ್ಕೆ ಒಡ್ಡಿಕೊಳ್ಳುತ್ತದೆ.

ವೈಚಾರಿಕತೆ ಆನ್ನುವುದು ಒಂದು ವಿಷಯವನ್ನು ಕಾರಣ-ಪರಿಣಾಮಗಳ ಎಲ್ಲಾ ತಾರ್ಕಿಕ ಆಯಾಮಗಳಲ್ಲಿ ಪರಿವೀಕ್ಷಣೆ ಮಾಡುವುದು ಎಂಬ ಅರ್ಥದಲ್ಲಿ ಪ್ರಯೋಗಿಸಲ್ಪಡುತ್ತಿರುವ ಪರಿಕಲ್ಪನೆಯಾಗಿದೆ. ವೈಚಾರಿಕತೆಗೂ ಒಂದೇ ಮಗ್ಗುಲಿಲ್ಲ. ವೈಚಾರಿಕರು ಈ ಪರಿಕಲ್ಪನೆಯನ್ನು ತಮ್ಮ ಅನುಭವದ ಹಿನೆಲೆಯಲ್ಲಿ, ಪೂರ್ವಸೂರಿಗಳ ಆಲೋಚನಾ ಪದ್ದತಿಯಲ್ಲಿ ಹೊಸ ಅನುಭವದ ಹಿನ್ನೆಲೆಯಲ್ಲಿ ಒರೆಗೆ ಹಚ್ಚಿ ಮಂಡಿಸುವರು. ಈ ಮಂಡನೆ ಸಹ ಅವರವರ ಲೋಕದೃಷ್ಟಿಯನ್ನು ಅವಲಂಬಿಸಿರುತ್ತದೆ.

ವಿಜ್ಞಾನದಲ್ಲಿ ಬರುವ ವೈಚಾರಿಕತೆ, ಸಾಹಿತ್ಯದಲ್ಲಿ ಬರುವ ವೈಚಾರಿಕತೆ, ಕ್ರಿಯಾವಿಧಿಗಳಲ್ಲಿ (rituals) ಬರುವ ವೈಚಾರಿಕತೆ, ಧಾರ್ಮಿಕ ವೈಚಾರಿಕತೆ – ಇವು ಭಿನ್ನ ಭಿನ್ನ ದೃಷ್ಟಿಯಿಂದ ಮೈದಾಳುವ ವೈಚಾರಿಕತೆಗಳು, ಅಂತೆಯೇ ಸಾಮಾಜಿಕ ವಿಷಯಗಳಲ್ಲಿ ಬರುವ ವೈಚಾರಿಕತೆಯ ನೆಲೆಯೇ ಬೇರೆ, ಆದರೆ ಇವುಗಳು ಪರಸ್ಪರ ಪ್ರಭಾವಕ್ಕೆ ಒಳಗಾಗುತ್ತಾ ಹೋಗುತ್ತವೆ. ಕುವೆಂಪುರವರ ಸಾಹಿತ್ಯಕ ಸಂದರ್ಭದಲ್ಲಿ ಬರುವ ವೈಚಾರಿಕತೆಯನ್ನು ಈ ಎಲ್ಲಾ ಆಯಾಮಗಳಲಿ ಗಮನಿಸುವುದು ಈ ಲೇಖನದ ಉದ್ದೇಶವಾಗಿದೆ.
kuvempu ಗೆ ಚಿತ್ರದ ಫಲಿತಾಂಶ
ಕುವೆಂಪುರವರು ಕವನ-ಮಹಾಕಾವ್ಯ-ಖಂಡಕಾವ್ಯ-ನಾಟಕಗಳು ಮತ್ತು ಲೇಖನಗಳನ್ನು ಓದಿದಾಗ, ಈ ವೈಚಾರಿಕತೆಗಳು ಮೈದಾಳುವ ಮೂರ್ತರೂಪಗಳನ್ನು ಗಮನಿಸಿದಾಗ ಕುವೆಂಪುರವರು ರಾಷ್ತ್ರೀಯವಾದ ಹಿನ್ನೆಲೆಯಲ್ಲಿ ತಮ್ಮ ಆಲೋಚನಾ ಕ್ರಮವನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿ ಬೆಳೆಸಿದ್ದಾರೆ ಎನಿಸುತ್ತದೆ. ಮೇಲ್ಮಟ್ಟದಲ್ಲಿ ಕುವೆಂಪು ಅವರ ರಾಷ್ಟ್ರೀಯವಾದವು ದ್ವಂದ್ವದಿಂದ ಕೂಡಿದೆ ಎನಿಸಿದರೂ ರಾಷ್ಟ್ರೀಯತೆ ಮತ್ತು ಪ್ರಾಂತೀಯತೆಯ ಅವರ ಪರಿಕಲ್ಪನೆಗಳು ಒಂದಕ್ಕೊಂದು ಹಿರಿದು – ಕಿರಿದುಗಳ ವೈರುಧ್ಯದಲ್ಲಿ ಇಲ್ಲ. ರಾಷ್ಟ್ರೀಯತೆಯೆಂಬುದು ಒಂದು ಭಾವ ಸೃಷ್ಟಿ, ಪ್ರಾಂತೀಯತೆ ಎಂಬುದು ಕಣ್ಣಿಗೆ ಕಾಣುವ ಬದುಕಿನ ಸೃಷ್ಟಿ. ಇದೆ ವಾಸ್ತವ ದೃಷ್ಟಿ. ಆದ್ದರಿಂದಲೇ

ಭಾರತ ಜನನಿಯ ತನುಜಾತೆ

ಜಯಹೇ ಕರ್ನಾಟಕ ಮಾತೆ

ಕನ್ನಡದಂಥ ನಿಜರೂಪದ ಪ್ರಾಂತೀಯ ಭಾಷೆ ತನ್ನೆಲ್ಲ ಆಯಾಮಗಳಲ್ಲಿ ಬೆಳೆದು ನಿಲ್ಲುವುದು ಇತರ ಪ್ರಾಂತೀಯ ಭಾಷೆಗಳೂ ಸಹಮತದಲ್ಲಿದ್ದು ತಮ್ಮ ಉನ್ನತಿಯನ್ನು ಸಾಧಿಸಿದಾಗ ಮಾತ್ರ. ಈ ಬಹುಮುಖತೆಯ ಭಾರತದಲ್ಲಿ ಆದಿಕಾಲದಿಂದಲೂ ಬೆಳೆಸಿಕೊಂಡು ಬಂದ ಪರಿಕಲ್ಪನೆ. ಆದ್ದರಿಂದ ಅವರು ಇಡೀ ದೇಶಕ್ಕೆ ಏಕಭಾಷೆ, ಏಕ ಮತ, ಏಕ ದೃಷ್ಟಿಯನ್ನು ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ತಿರಸ್ಕರಿಸುತ್ತಾರೆ. ಆದ್ದರಿಂದ ಕುವೆಂಪು ಹೆಚ್ಚು ಪ್ರಜಾಸತ್ತಾತ್ಮಕ ನಿಲುವು ತಳೆಯುತ್ತಾರೆ. ಇದು ಪ್ರತಿಯೊಬ್ಬ ವಚನಕಾರನು ತನ್ನ ವಚನದ ಕೊನೆಯಲ್ಲಿ ತನ್ನ ಇಷ್ಟದೇವರನ್ನು ಸ್ಮರಿಸಿದಂತೆ. ಇದು ಪ್ರತಿಯೊಬ್ಬನ ಒಳಗಿ ಪ್ರಜಾಸತ್ತಾತ್ಮಕತೆಯನ್ನೂ, ಅನನ್ಯತೆಯನ್ನೂ ಗುರುತಿಸುವ ವಿಧಾನ. ಭಾರತ ಆಗಿರುವುದು ಏಕತೆಯಿಂದಲ್ಲ, ಅನೆಕತೆಯಿಂದ ಮಾತ್ರ ಅದು ಸಾಧ್ಯ ಎಂಬ ನಿಲುವಿನಿಂದ, ಅದಕ್ಕೆ ಅವರು

ಬಾರಮ್ಮ ದೇವಿ | ಓ ತಾಯಿ ಭಾರತಿಯೇ, ನಿನ್ನ ಮಗಳನ್ನು ಹರಸಿ |

ಹಾಡು ಓಂ, ಶಾಂತಿಯೇ | ನಿನ್ನ ಋಷಿ ಜನ ಬರಲಿ | ನಿನ್ನ ಕವಿಜನ ಬರಲಿ | ನಿನ್ನಖಿಲ ಶ್ರೀ

ವಿಭೂತಿಗಳೆಲ್ಲರೈತರಲಿ | ಕನ್ನಡಾಂಬೆಯ ಹರಸಿ ಹಾರೈಸಲಿ

ಎಂದೂ, ‘ಭಾರತಾಂಬೆಯ, ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಎಂದು ಪ್ರಾರ್ಥಿಸುವುದು. ಆದದ್ದರಿಂದ ಭಾರತಾಂಬೆ ಮತ್ತು ಕನ್ನದಾಮ್ಬೆಯರು ವೈರುಧ್ಯದಲ್ಲಿಲ್ಲ. ವೈರುಧ್ಯಗಳು ಪರಸ್ಪರ ಆಕರ್ಷಿಸಿ ಮುನ್ನಡೆವ ಪ್ರಕ್ರಿಯೆಯಲ್ಲಿ ಇರುವರು.

ಮತ್ತೊಂದೆಡೆ ಕುವೆಂಪುರವರು ವೈಚಾರಿಕತೆ ಗಾಂಧೀಜಿಯವರ ವೈಚಾರಿಕತೆಯನ್ನು ಹೋಲುತ್ತದೆ. ಬಡವರ, ಹೆಂಗಸರ, ದಲಿತರ ಬಗ್ಗೆ ಅಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಅಂಚಿಗೆ ದೂಡಲ್ಪಟ್ಟ ದುರ್ಬಲರನ್ನು ಮಾನಸಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆಂಬುದು ಗಾಂಧೀಜಿಯ ಆಶಯ. ಕುವೆಂಪುರವರೂ ಈ ವಿಷಯಕ್ಕೆ ಆದ್ಯತೆಯನ್ನು ತಮ್ಮ ಕ್ರಿಯಾಶೀಲ ಬರವಣಿಗೆಯಲ್ಲೂ ಕೊಡುತ್ತಾರೆ.

ಪರಂಪರಾಗತವಾಗಿ, ನೇತ್ಯಾತ್ಮಕವಾಗಿ ಸೃಷ್ಟಿಯಾದ ಕೈಕೆ, ಮಂಥರೆ, ಶಬರಿ ಮುಂತಾದ ಪಾತ್ರಗಳು ಧನಾತ್ಮಕವಾಗಿ ಚಿತ್ರಿಸಲ್ಪಟ್ಟಿದೆ. ಅವರ ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ, ಶಬರಿಯಂತೂ ‘ವಿಶ್ವಮಾತೆ’ಯಾಗಿ ಕಾಣುತ್ತಾಳೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯತನ ಹೇಗೆ ಸಹಜವೋ ಅವನಲ್ಲೇ ಕೆಟ್ಟತನವೂ ಸಹಜವಾಗಿರುತ್ತದೆ. ಹಾಗಾಗಿ ಈ ಪ್ರಕೃತಿದತ್ತವಾದುದನ್ನು ಸಂಸ್ಕೃತಿ ಪರವಾಗಿಸಿಕೊಳ್ಳುವ ಪ್ರಕ್ರಿಯೆಯಾಗಿ ರಾಮ-ರಾವಣರ ಪಾತ್ರ ಸೃಷ್ಟಿಯಾಗಿದೆ:

ಕೋಲಾಹಲದ ರುಚಿಯ ಮೋಹಕ್ಕೆ

ಮರುಳಾದ ಮಾನವರ್ ರಾವಣ ಕೊಲೆಗಾಗಿ

ರಾಮಾನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ

ತಾನೇಕೆ? ಮಣಿಯುವೆನು ರಾಮನಡಿದಾವರೆಗೆ

ದಶಶಿರನ ವಧೆಗಾಗಿ ಆಲ್ತು!

ಹೀಗೆ ಅವಿದ್ಯೆಯಿಂದ ವಿದ್ಯೆಯೆಡೆಗೆ ತುಡಿಯುವ ಎರಡು ಜೀವಗಳಾಗಿ ಕುವೆಂಪು ರಾಮ-ರಾವಣರನ್ನು ನೋಡಿದ್ದಾರೆ. ವಿದ್ಯೆ-ಅವಿದ್ಯೆಯ ಪ್ರಕ್ರಿಯೆಗಳಾಗಿ ಈ ಪಾತ್ರಗಳು ಬಂದಿವೆ. ತಮ್ಮ ಪ್ರಮುಖ ಕೃತಿಗಳಲ್ಲೆಲ್ಲ ಕುವೆಂಪು ಹೀಗೆ ವೈರುಧ್ಯಗಳನ್ನು ಮುಖಾಮುಖಿಗೊಳಿಸದೆ ಎರಡರ ಸಹಯೋಗದ ಪ್ರಕ್ರಿಯೆಯಲ್ಲಿ ಮಂಥನಗೊಳ್ಳುವ ಮತ್ತು ಅದರಿಂದ ಉಂಟಾಗುವ ಅಮೃತ-ವಿಷಗಳನ್ನು ಸೋಸಿ ಸೇವಿಸುವ ಪರಿಯನ್ನು ಕಟ್ಟಿ ತೋರಿಸುತ್ತಾರೆ. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಈ ಉದಾಹರಣೆಯನ್ನು ನೋಡೋಣ. ಜಿಂಕೆಯ ಮೈಯಿಂದ ಮಾರೀಚ ರಾಕ್ಷಸನ ಕಳೇಬರ ಬಯಲಿಗೆ ಬಿದ್ದದ್ದನು ಕವಿ ಈ ರೀತಿ ವರ್ಣಿಸುತ್ತಾರೆ:

ಶಾಶ್ವತನರಿಯಲೈ ನಶ್ವರದ ಹೃದಯವಂ

ಭೇದಿಸುವ ಕವಿಯ ದರ್ಶನದಂತೆ

ಮಿಥ್ಯೆ ಬಿರಿಯಲೈ ಸತ್ಯಂ ಪ್ರತ್ಯಕ್ಷಮಪ್ಪಂತೆವೋಲ್!

ಅಂತೆಯೇ ಸ್ಮಶಾನ ಕುರುಕ್ಷೇತ್ರಂ ದುರ್ಯೋಧನ ‘ಕೌರವ ಕೃಷ್ಣ’ನಾಗುತ್ತಾನೆ. ವಾಲ್ಮೀಕಿಯ ಭಾಗ್ಯದಲ್ಲಿ ರಾಮನಿಂದ ಪರಿತ್ಯಕ್ತೆಯಾದ, ಅಭಾಗ್ಯೆಯಾದ ಸೀತೆ ವಾಲ್ಮೀಕೀಯ ಕಾವ್ಯದ ನಾಯಕಿಯಾಗಿ ಒದಗಿ ಬರುವ ಸೌಭಾಗ್ಯ ಬರುತ್ತದೆ. ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆಯೂ ಇಂಥ ಒಂದು ಉದಾಹರಣೆ. ಇಲ್ಲಿ ಬ್ರಾಹ್ಮಣ –ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.

ಸ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ದ್ವಾಪರ ಮತ್ತು ಕಲಿಗಾಲಗಳು ಸಂಧಿಸುವ ರೀತಿ ಅತ್ಯಂತ ಮಾರ್ಮಿಕವಾಗಿ ಗ್ರಹಿಸಲ್ಪಟ್ಟಿದೆ. ದ್ವಾಪರ “ಈ ಯುಗದ ಸಂಸ್ಕೃತಿಯ ಚಲ್ವಿಕೆಯೆಲ್ಲ ತುತ್ತತುದಿಯನ್ನು ಸಂಧಿಸಿ ಅಳಿದು ಹೋಯ್ತೆ” ಎಂದಾಗ ಕಲಿ, “ಲೀಲೆಯೆಂಬುವುದೆಲ್ಲಿ ಮೂಡುವುದು ಮುಳುಗುವುದರಲ್ಲಿಹುದು , ಅದಕೇಕೆ ಮರುಗುವುದು ? ಸಾವಿನಲ್ಲಿ ಹೊಸಬಾಳು ಪುದುಗಿಹುದು, ನಾಶದಲ್ಲಿ ನವದೃಷ್ಟಿ ಪವಡಸಿದೆ” ಎಂದು ಹೇಳುತ್ತಾನೆ. ಇದೇ ನಾಟಕದಲ್ಲಿ ಸತ್ಯ ಎಂದರೇನು ಎಂಬ ಪರಿಕಲ್ಪನೆಯ ವ್ಯಾಖ್ಯಾನ ಬಹಳ ಮುಖ್ಯವಾದುದು. ಕೃಷ್ಣ ಹೇಳುತ್ತಾನೆ “ಕನಸೊಡೆದ ಮೇಲೆ ಅದರೊಳೇನಿಹುದು ಕೌರವ ಕೃಷ್ಣ ! ಅದೆಲ್ಲಂ ಸವಿ ಸುಳ್ಳುನಿಂ ಕೆತ್ತಿರುವ ಪುಸಿ ಸೊನ್ನೆಯಲ್ತೆ” ಅಂದರೆ ಸತ್ಯ ಎಂಬುದೂ ಒಂದು ಭ್ರಮೆ. ಸತ್ಯವೆಂಬುದು ನಿಂತಿ ನೋಡುವ ಭೂಮಿಕೆಯ ಮೇಲೆ ನಿಂತಿದೆ. ಸತ್ಯಕ್ಕೆ ಒಂದು ಮುಖವಿಲ್ಲ, ನಾನಾ ಮುಖಗಳಿವೆ ಎಂಬುದು ಕುವೆಂಪುರವರ ಗ್ರಹಿಕೆ.

ಇದೇ ರೀತಿ ಕುವೆಂಪು ಅಂಚಿಗೆ ತಳ್ಳಲ್ಪಟ್ಟವರ ಮೌನಕ್ಕೆ ಮಾತಿನ ರೂಪು ಕೊಟ್ಟಿದ್ದಾರೆ ಬೆರಳ್ಗೆ ಕೊರಳ್  ನಾಟಕದಲ್ಲಿ. ಇಲ್ಲಿ ಏಕಲವ್ಯ ಆಳುವವರ ಯಾವ ಕ್ರಮಕ್ಕೂ ಅಳವಡದ ಕಾಡಾಡಿ. ಅವನು “ಆ ಅರಸುಮಕ್ಕಳ ಕೂಳ್ಗೆ ಆಳಾಗಿ, ಬಾಳ್ ಗೋಣನೊಡ್ದುತಿರ್ಪಿರಿ ನರಕ ನಕ್ರದ ಬಾಯ್ಗೆ” ಎಂದು ಗುರು ದ್ರೋಣರಿಗೆ ಹೇಳುವ ರೀತಿಯಲ್ಲಿ ಇಲ್ಲಿ ಗಮನಿಸಿ.

ಮೇಲೆ ನೋಡಿದ ಈ ಕೃತಿಗಳಲ್ಲಿ ಹೆಚ್ಚಿನವು ಪರಂಪರಾಗತವಾಗಿ ಬಂದ ತಮ್ಮ ನಮ್ಮ ಪೌರಾಣಿಕ ಹಿನ್ನೆಲೆಯ ವಸ್ತುಗಳಲ್ಲಿಯೇ ಕುವೆಂಪು ಒಂದು ರೀತಿಯ ಸಾಮಾಜಿಕ ನ್ಯಾಯವನ್ನು ಕಟ್ಟಿಕೊಡುವ ಅವನ್ನು ವೈರುಧ್ಯಗಳನ್ನು ಪ್ರಕ್ರಿಯೆಯಲ್ಲಿ ನೋಡುವ ಮೂಲಕ ತಮ್ಮ ವೈಚಾರಿಕತೆಯನ್ನು ಮೆರೆದಿದ್ದಾರೆ.ಇಲ್ಲಿ ಮಾನವೀಯತೆಗೆ ಮಾತ್ರ ಬೆಲೆಯಿದೆ.

ಕುವೆಂಪುರವರು ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಸೃಷ್ಟಿಯ ಸಮಷ್ತಿಪ್ರಜ್ಞೆಯ ಸಾಮೂಹಿಕ ವಿಕಾಸದ ಮರ್ಮವನ್ನು ಸೂಚಿಸುವುದಕ್ಕಾಗಿ ರಚಿಸಿದ್ದಾರೆ ಈ ಕೃತಿ

ಇತಿಹಾಸಮಲ್ತು; ಬರಿ ಕಥೆಯಲ್ತು ; ಕಥೆ ತಾಂ

ನಿಮಿತ್ತ ಮಾತ್ರಂ , ಆತ್ಮಕೆ ಶರೀರೋದೊಲಂತೆ .

ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ

ರಾಮ್ರೂಪದ ಪರಾತ್ಪರನ್ ಪುರುಷೋತ್ತಮನ

ಲೋಕಲೀಲಾ ದರ್ಶನಂ….

ಈ ಲೋಕಲೀಲಾ ದರ್ಶನವೇ, ಕಾಲದ ಹರಿವನ್ನು ಒಂದು ಕ್ಷಣ ತನ್ನ ಪ್ರಕ್ರಿಯೆಯಲ್ಲಿ ಹಿಡಿಯುವ ಕುವೆಂಪು ಅವರ ಪ್ರಯತ್ನ. ಅಲ್ಲದೆ, ಇಲ್ಲಿ ತ್ರಿಕಾಲಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಭೂತ, ಭವಿಷ್ಯತ್ಗಳು ವರ್ತಮಾನವಾಗಿ ಕಂಡುಬರುವುದು ಪುನರ್ಜನ್ಮದ ಪರಿಕಲ್ಪನೆಯ ಹಿಂದಿರುವ ದಾರ್ಶನಿಕತೆಯ ಸಂಕೇತವಾಗಿದೆ. ಮಹಾಮಹಿಮನು ಮತ್ತೊಮ್ಮೆ ಈ ಭೂಮಿಯಲ್ಲಿ ಹುಟ್ಟಿ ಬರುವುದು ಮನುಷ್ಯನಾಗಿಯೇ. ಧನಾತ್ಮಕ ಮತ್ತು ಋಣಾತ್ಮಕ ನೆಲೆಗಳನ್ನು ಮೈಗೂಡಿಸಿಕೊಂಡ ಮನುಷ್ಯ ಋಣಾತ್ಮಕತೆಯನ್ನು ಕಳೆದುಕೊಂಡು ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ ರೂಪಿಸಿಕೊಳ್ಳುವುದೇ ಕುವೆಂಪು ಅವರ ಅವತಾರದ ಕಲ್ಪನೆ. ಆದ್ದರಿಂದ ಸೀತೆ ರಾಮನನ್ನು ಕೇವಲ ಆಕಸ್ಮಿಕವಾಗಿ ಕಂಡರೂ – ಆಕೆ ರಾಮನನ್ನೂ ನಿಜವಾಗಿ ನೋಡುವ ಮೊದಲೇ – ತನ್ನ ಪ್ರಜ್ಞೆಯಲ್ಲಿ ರಾಮನನ್ನು ದರ್ಶನ ಮಾಡಿರುತ್ತಾಳೆ.

ಪ್ರಜ್ಞೆ ನಿದ್ರಿಸಿರೆ,

ನಿಸಂಜ್ಞಳಾದೆನಗೆ ಕಣಸಾದುದಾ ದರ್ಶನದಿ

ಮೈದೊರ್ದುದೀ ಸರ್ವ ಲೋಕ ರಮಣೀಯತಾ

ನೀಲಮೇಘ ಶ್ಯಾಮಮೂರ್ತಿ

ಲೈಂಗಿಕ ವೈಚಾರಿಕತೆ ಮತ್ತು ದಾರ್ಶನಿಕ- ಧಾರ್ಮಿಕ ವೈಚಾರಿಕತೆಗಳು ಅವರ ಕೃತಿಗಳಲ್ಲಿ ಅಲ್ಲಲ್ಲಿ ಬಂದರೂ ಅದರ ಸ್ಪಷ್ಟರೂಪದ ವ್ಯಾಖ್ಯಾನ ಕಾಣುವುದು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ. ಲೈಂಗಿಕತೆ ಅಥವಾ ಹೆಣ್ಣು-ಗಂಡಿನ ಸಂಬಂಧಗಳು ಕನ್ನಡದ ಯಾವುದೇ ಕಾದಂಬರಿಯಲ್ಲೂ ಇಷ್ಟೊಂದು ಮಗ್ಗುಲುಗಳಲ್ಲಿ ವ್ಯಾಖ್ಯಾನವಾಗಿಲ್ಲ. ಕಾಮವು ಪ್ರಕೃತಿದತ್ತವಾದುದು. ಅದನ್ನ ಸಂಸ್ಕರಿಸಿಕೊಳ್ಳುವುದು ಪ್ರತಿಯೊಂದು ಸಮಾಜದ ಸಾಂಸ್ಕೃತಿಕ ಜವಾಬ್ದಾರಿ. ಮೂಲತಃ ಮನುಷ್ಯ ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿಸಿಕೊಳ್ಳುವ ಪ್ರಯತ್ನಗಳೇ ಈ ಕಾದಂಬರಿಯ ತುಂಬಾ ವಿವಿಧ ರೀತಿಯ ಕಾಮವಿನ್ಯಾಸಗಳಾಗಿ ಮೂಡಿರುವುದು. ಮುಟ್ಟದವರಾದ ತಮ್ಮ ಜೀತದಾಳುಗಳೇ ಆಗಿದ್ದರೂ ತಿಮ್ಮಪ್ಪ ಹೆಗ್ಗಡೆಯ ವಿಚಾರಾಲ್ಲಿ ಯಾವ ಜಾತಿ ಮಾತ್ರ ಸಂಪ್ರದಾಯದ ಕಟ್ಟೂ ನಡೆಯುವುದಿಲ್ಲ. ನಾಗತ್ತೆಯ ಲೈಂಗಿಕ ವಿಕ್ಷಿಪ್ತತೆ – ತನ್ನ ವಿಧವೆಯಾದ ಸೊಸೆ ನಾಗಕ್ಕನನ್ನು ಲೈಂಗಿಕತೆಗೆ ಇಳಿಸಲು ಬಳಸುವ ವಾಮ ಮಾರ್ಗ, ಪುಟ್ಟಣ ಅತ್ತೆ ಕಾಡಿ ಮುಂಡೆ ಬಸುರಾದದ್ದು, ವೆಂಕಟ್ಟಣನ ಸಂಸ್ಕೃತಿಯ ಅಭಾವ, ಅವನ ಪಶುಸದ್ರುಶ ಲೈಂಗಿಕತೆ, ಸೂಕ್ಷ್ಮಪ್ರಕೃತಿಯ ಚಿನ್ನಮ್ಮನ ಸ್ಫುರದ್ರೂಪಿ ತಾಯಿಯ ಎಳೆಯಹರೆಯದ ಸಾವಿನ ಹಿಂದಿನ ಕಥೆ, ಚೀಂಕ್ರ ಬಸುರಿ ಹೆಂಡತಿಯನ್ನೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಸಾಯಿಸಿದ್ದು, ಮುಕುಂದಯ್ಯನ ಅಣ್ಣ-ಮಹಾಭಾರತ ರಾಮಾಯಣಗಳನ್ನು ತಿಳಿದಿದ್ದವನೂ – ಒಮ್ಮೆ ನಾಗಕ್ಕನನ್ನು ಸೀರುಡಿಕೆ ಮಾಡಿಕೊಳ್ಳ ಬಯಸಿದ್ದು , ದೇವಯ್ಯ – ಕಾವೇರಿ – ಜ್ಯೋತಿರ್ಮಣಿಯವರ ಸಂಬಂಧಗಳು , ಶಿವ-ಶಿವಾನಿಯಂತೆ ಕಾಣುವ ಐತಾ-ಪೀಂಚಲು , ಇತ್ಯಾದಿ. ಅಂತೆಯೇ ಮಂಜುಭಟ್ಟರ ಸೊಸೆಯನ್ನು ಬಿಟ್ಟು ಅವರ ಮಗ, ಕಿತ್ತ ಐತಾಳ ಹೆಂಡತಿಯನ್ನು ಇಟ್ಟುಕೊಂಡಿದ್ದು, ಗೌಡರ ಜೀತದಾಳುಗಳು ಅವರ ಕಣ್ಣು ತಪ್ಪಿಸಿ ಬೇರೆ ತೋಟದ ಜೀತದಾಳುಗಳನ್ನು ಮದುವೆಯಾಗುವುದರಲ್ಲಿ – ಪ್ರೀತಿಸಲೂ ಆಗದಿರುವುದು ಇತ್ಯಾದಿಗಳಲ್ಲಿ ಲೈಂಗಿಕತೆಯ ವಿವಿಧ ಸ್ತರಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ನಿಯಂತ್ರಣಗಳಿಗೆ ಒಳಪಟ್ಟು ಬಹಳ ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಒಂದು ಮಟ್ಟದಲ್ಲಿ ಕೆಳಜಾತಿಯ, ಕೆಳವರ್ಗದ ಲೈಂಗಿಕತೆಯು ಜಮೀನ್ದಾರರ ಬಲಾಬಲಕ್ಕೆ ಅಧೀನವಾಗಿರುತ್ತದೆ. ಅವರ ಒಪ್ಪಿಗೆ ಇಲ್ಲದೆ ಕೆಳವರ್ಗದ ಜನರು ಮದುವೆಯಾಗುವುದಿರಲಿ, ಪ್ರೀತಿಸುವುದೂ ಸಾಧ್ಯವಿಲ್ಲ. ತಿಮ್ಮಿ ಮತ್ತು ಗುತ್ತಿ ಓಡಿ ಹೋದಾಗ ತಿಮ್ಮಿಯ ಅಣ್ಣ ಸಣ್ಣಬೀರನನ್ನು ಕಂಬಕ್ಕೆ ಕಟ್ಟಿ ಹೊಡೆದು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಜಮೀನ್ದಾರಿಕೆಯ ಬಲವು ಲೈಂಗಿಕತೆಯ ಸ್ಥಲವನ್ನು ಸೃಷ್ಟಿಸಿಕೊಳ್ಳಲು ಪಡುವ ಪ್ರಯತ್ನ ಸಣ್ಣ ಬೀರನ ಅವ್ವನ ಪ್ರಾಕೃತಿಕ  ಸ್ಥೈರ್ಯದ ಎದುರು ಕುಸಿದು ಬೀಳುವುದು ಕಂಡುಬರುತ್ತದೆ. ಆದರೆ ಇವೆಲ್ಲಕ್ಕೂ ಸಂವಾದಿಯಾಗಿ ಕಂಡುಬರುವ ಚಿನ್ನಮ್ಮ ಮತ್ತು ಮುಕುಂದಯ್ಯನ ಪ್ರೇಮವು ಮೇಲೆ ಹೇಳಿದ ಎಲ್ಲ ರೀತಿಯ ಕಾಮಕ್ಕೆ ತದ್ವಿರುದ್ದವಾಗಿದ್ದು – ಒಂದು ಆದರ್ಶವಾಗಿ ನಿಲ್ಲುತ್ತದೆ.

ಮುಖ್ಯವಾಗಿ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಪ್ರಮುಖ ತೊಡಕೆಂದರೆ ಪುನರ್ಜನ್ಮದ ಪ್ರಶ್ನೆ, ಇದು realistic ಬರವಣಿಗೆಗೆ ತದ್ವಿರುದ್ಧವಾದ, ವಿಚಾರವಾದಕ್ಕೆ ಸವಾಲೆಂಬಂತೆ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಈ ಕಾದಂಬರಿಯನ್ನು ಮಾನವ ಕೇಂದ್ರಿತ ಕಾದಂಬರಿಯಾಗಿ ನೋಡಿದಾಗಷ್ಟೆ ಈ ಸಮಸ್ಯೆ ಉದ್ಭವಿಸುತ್ತದೆ, ಪುನರ್ಜನ್ಮದ ಪರಿಕಲ್ಪನೆ ಅವೈಚಾರಿಕವೆನಿಸುತ್ತದೆ. ಆದರೆ ಇಡೀ ವಿಶ್ವ ಮತ್ತು ಅನಂತಕಾಲವನ್ನು ಕೇಂದ್ರವಾಗಿರಿಸಿಕೊಂಡು ನೋಡಿದಾಗ ಪುನರ್ಜನ್ಮದ – ಸ್ಮೃತಿಯ – ಅಸ್ಮ್ರುತಿಯ ಮತ್ತು ವಿಸ್ಮೃತಿಯ ವಿವಿಧ ಮಗ್ಗಲುಗಳು: ಪರಕಾಯಪ್ರವೇಶ – ಬೇರೊಬ್ಬರ ಮನಃಪ್ರವೇಶ – ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಅನಂತಕಾಲ ಅಂದರೆ ಭೂತ – ವರ್ತಮಾನ – ಭವಿಷ್ಯತ್ತನ್ನ ಒಳಗೊಂಡ ಒಂದು Mythical time ಸೃಷ್ಟಿಯಾಗುವುದನ್ನ ಕಥಿಸುವುದು ಕಾದಂಬರಿಯ ವೈಶಿಷ್ಟವಾಗಿದೆ. ಕಥನವನ್ನು ಕಾಲ ಮತ್ತು ದೇಶಗಳನ್ನು ಮೀರುವ ಕ್ರಿಯೆಯಾಗಿ ಪರಿಗಣಿಸಿದಾಗ ಮಾತ್ರ ಕುವೆಂಪರವರ ಪುನರ್ಜನ್ಮ ಮತ್ತು ಪರಕಾಯ ಪ್ರವೇಶಗಳ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಹಾಗೆ ನೋಡಿದರೆ ಈ ಕಾದಂಬರಿ ಕುವೆಂಪುರವರು ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ವಿಶ್ವಮಾನವ ಗೀತೆಗೆ ಬರೆದ ಬಹು ದೀರ್ಘ ವ್ಯಾಖ್ಯಾನವಾಗಿದೆ. ದಾರ್ಶನಿಕ ವೈಚಾರಿಕತೆ ಕುವೆಂಪರವರಿಗೆ ಮುಖ್ಯವಾದುದು. ಇದಕ್ಕಾಗಿಯೇ ಅವರು ಕ್ರಿಯಾವಿಧಿ ಶಾಸ್ತ್ರದಿಂದ ದಾರ್ಶನಿಕತೆಯನ್ನು ಬಿಡಿಸಿ ಸ್ವಚ್ಛಗೊಳಿಸುತ್ತಾರೆ. ಆದರಿಂದ ಅವರಿಗೆ :

ಯಾರೂ ಮುಖ್ಯರಲ್ಲ ಅಮುಖ್ಯರೂ ಅಲ್ಲ,

ಯಾವುದೂ ಯಃಕಷ್ಚಿತವಲ್ಲ

ಯಾವುದಕ್ಕೂ ಮೊದಲಿಲ್ಲ

ಯಾವುದಕ್ಕೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ,

ಕೊನೆ ಮುಟ್ಟುವುದೂ ಇಲ್ಲ,

ಎಲ್ಲಕ್ಕೂ ಇದೆ ಅರ್ಥ

ಯಾವುದೂ ಅಲ್ಲ ವ್ಯರ್ಥ

ನೀರೆಲ್ಲ ಊ ತೀರ್ಥ.

ಚದುರಂಗರ ಉಯ್ಯಾಲೆ- ತಂತ್ರ ನಿರ್ವಹಣೆ


ಪ್ರೊ.ಕಿಕ್ಕೇರಿ ನಾರಾಯಣ
profile

ಸೌಜನ್ಯ:http://kikkerinarayana.in/



ಪುಸ್ತಕ :ಚದುರಂಗ- ವ್ಯಕ್ತಿ ,ಅಭಿವ್ಯಕ್ತಿ

ಯಾವುದೇ ಒಂದು ಕೃತಿ ಮೈದಾಳುವುದು ಓದುಗ ಕೃತಿಯೊಡನೆ ಸಂವಾದ ನಡೆಸಲು ಪಾರಂಭಿಸಿದಾಗ ಮಾತ್ರ. ಕೃತಿಕಾರ ತನ್ನ ಕೃತಿ ರಚನೆಯೆ ಸಂದರ್ಭದಲ್ಲಿ ತನ್ನ ಸಮಾಜ ಇದುವರೆವಿಗೂ ಕಂಡಿರದ ಹೊಸ ಅನುಭವವನ್ನು ಭಾಷೆಯು ಮೂಲಕ ಹಿಡಿದುಕೊಡಲು ಯತ್ನಿಸುತ್ತಾ ನೆ. ಇದುವರೆವಿಗೂ ಭಾಷೆಯು ಮೂಲಕ ಕಂಡರಿಯದ ಅನುಭವವನ್ನೂ ತನ್ನ ಸಮಾಜ ಸಂಸ್ಕೃತಿಗೆ ಅಂದರೆ ‘ಸಂಭವನೀಯ ಓದುಗನಿಗೆ ‘ ಕೊಡಲು ಕೃತಿಕಾರ ಪ್ರಯತ್ನಿಸುತ್ತಾನೆ. ಕೃತಿಕಾರ ಕಂಡ ಹೊಸಕಾಣ್ಕೆ , ಕೃತಿಯ ಮೂಲಕವಾದುದರಿಂದ -ಅಂದರೆ, ಭಾಷೆಯ ಮೂಲಕವಾದುದರಿಂದ – ಈ ಕಾಣ್ಕೆಯನ್ನು ಭಾಷೆಯಲ್ಲಿಯೂ ತುಂಬಿಕೊಡಲು ಯತ್ನಿಸುತ್ತಾನೆ. ಆದ್ದರಿಂದ ಭಾಷೆಯು ಯಾವಾಗಲು ಬರಹಗಾರನಿಗೆ ಸವಾಲಾಗಿಯೇ ಉಳಿಯುತ್ತದೆ. ಒಂದು ಹೊಸ ಕೃತಿಯನ್ನು ರಚಿಸುವಾಗ ಲೇಖಕ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾಪಿತವಾಗಿರುವ ಕೆಲವು ನಿಯಮಗಳನ್ನು ಮುರಿಯುತ್ತಾನೆ. ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ವಿಷಯ ವಸ್ತುಗಳನ್ನು ಕೂಡಿಸಾಡುತ್ತಾನೆ. ಹೊಸ ರೀತಿಯಲ್ಲಿ ಜೋಡಿಸಲು ಪ್ರಯತ್ನಿಸುತ್ತಾನೆ. ಕೃತಿಗೆ ಹೊಸ ಬಂಧ ಕೊಡುತ್ತಾನೆ. ಹೀಗೆ ಹೊಸ ಕೃತಿ ಸೃಷ್ಟಿಯಾಗುವುದೆಂದರೆ ಹೊಸ ದಿಗಂತದ ನಿರಂತರ ಹುಡುಕಾಟವಾಗುತ್ತದೆ.

ಅಂತೆಯೇ ಒಂದು ಕೃತಿಯೊಡನೆ ಓದುಗ ಸಂವಾದ ನಡೆಸುವಾಗ ಆ ಕೃತಿ ತಂದುಕೊಡುವ ಹೊಸ ಅನುಭವ, ಹೊಸ ಲೋಕ ‘ದೃಷ್ಟಿ’ಯನ್ನು ಪಡೆದುಕೊಳ್ಳುವುದೇ ಆಗಿರುತ್ತದೆ. ಕೃತಿಕಾರ ಒಂದು ಕಡೆಯಿಂದ ಕೃತಿಯನ್ನು ಕಟ್ಟಿಕೊಂಡು (encode) ಬಂದರೆ ಓದುಗ ಕೃತಿಯನ್ನು ಓದುವುದರ ಮೂಲಕ ಬಿಚ್ಚಿಕೊಂಡು (decode) ಹೋಗಲು ಪ್ರಯತ್ನಿಸುತ್ತಾನೆ. ಕೃತಿಕಾರ ಕೃತಿಯನ್ನು ಕಟ್ಟಿಕೊಂಡು ಹೋಗುವಾಗ ‘ವ್ಯಕ್ತಿನಿಷ್ಟ’ವಾಗಿದ್ದು ಓದುಗ ಅದನ್ನು ಬಿಚ್ಚಿಕೊಂಡು ಹೋಗುವುದರ ಮೂಲಕ ಆ ಕೃತಿ ವಸ್ತುನಿಷ್ಟವಾಗುತ್ತಾ ಬರುತ್ತದೆ, ಸಾರ್ವತ್ರಿಕವಾಗುತ್ತಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಇಡೀ ಕೃತಿಯೇ ಆಳದಲ್ಲಿ ಒಂದು ಹೊಸ ಅನುಭವ ವನ್ನು ಹೇಳುವ ತಂತ್ರವಾಗಿ ಮಾರ್ಪಡುತ್ತದೆ. ಉಳಿದೆಲ್ಲ ತಂತ್ರಗಳೂ ಮೇಲ್ಮೈ ಲಕ್ಷಣಗಳಾಗಿ ಕೆಲಸ ಮಾಡುತ್ತಿರುತ್ತವೆ.

ಒಂದು ಕೃತಿಯ ಸ್ಥಾನ  ಕೃತಿಯನ್ನು ಓದು ಸಮಾಜ, ಸಂಸ್ಕೃತಿ ಅದಕ್ಕೆ  ಇರುವ ಸಾಹಿತ್ಯಕ ಚರಿತ್ರೆಯ ಹಿನ್ನೆಲೆ, ಕೃತಿ ಮೂಡಿಸಿದ ಕಾಣ್ಕೆ ಇವುಗಳ ಮೂಲಕ ನಿರ್ಧಾರಿತವಾಗುತ್ತದೆ.

ಮೇಲಿನ ಕೆಲವು ಮಾತುಗಳನ್ನು ಗಮನದಲ್ಲಿಟ್ಟುಕೊಂಡು ‘ಉಯ್ಯಾಲೆ ‘ಯ ತಂತ್ರ ನಿರ್ವಹಣೆಯನ್ನು ಈ ಲೇಖನದಲ್ಲಿ ಗಮನಿಸಲಾಗಿದೆ. ಈ ವಿಶ್ಲೇಷಣೆಯ ಉದ್ದೇಶ ಕೇವಲ ಕೃತಿಯಲ್ಲಿ ಇರುವ ರಚನೆಯನ್ನು ಮಾತ್ರ ಬಿಡಿಸಿ ತೋರಿಸುವುದಿಲ್ಲ. ಏಕೆಂದರೆ ಪ್ರತಿಯೊಂದು ‘ವಸ್ತು’ವಿನಲ್ಲೂ ರಚನೆ ಒಂದಿಲ್ಲೊಂದು ರೀತಿಯಲ್ಲಿ ಇದ್ದೇ ಇರುತ್ತದೆ. ರಚನೆಯನ್ನು ತೋರಿಸಿಕೊಡುವುದರ ಜೊತೆಗೇ ಈ ರಚನೆ ಕಲಾಕೃತಿಯಲ್ಲಿ ಮೂಡಿದಾಗ ಅದು ಉಂಟುಮಾಡುವ ಕರ್ಷಣೆ ಮತ್ತು ಈ ಕರ್ಷಣೆಯಿಂದ ಕೃತಿ ಚಾಲನೆ ಪಡೆಯುವ ರೀತಿ ಮುಖ್ಯ ಎಂದು ಪರಿಗಣಿಸಲಾಗಿದೆ.

ಉಯಾಲೆ ಕಾದಂಬರಿಯ ಬಂಧ (structure ) ವಸ್ತು , ಪಾತ್ರ, ಚಿತ್ರಣ ಕಾದಂಬರಿಯಲ್ಲಿ ಬಳಸಿಕೊಂಡಿರುವ ಕಾಲ ಉಯ್ಯಾಲೆಯ ಸಂಕೇತ ಇವೆಲ್ಲವೂ ಕಾದಂಬರಿಯ ಕೇಂದ್ರ ಪ್ರಜ್ಞೆಯ ಕಡೆಗೆ ಯಾವ ರೀತಿಯಲ್ಲಿ ದುಡಿಯುತ್ತವೆ ಎಂಬದನ್ನು ಗಮನದಲ್ಲಿಟ್ಟುಕೊಂಡು ಕಾದಂಬರಿಯ ತಂತ್ರ ನಿರ್ವಹಣೆಯ ಬಗ್ಗೆ ವಿಶ್ಲೇ ಷಣೆ ಮಾಡುವುದು ಈ ಲೇಖನದ ಉದ್ದೇಶ. ಹೀಗೆ ಮಾಡುವುದರ ಮೂಲಕ ಈ ಕಾದಂಬರಿ ಪಡೆಯುವ ಯಶಸ್ಸನ್ನು ಚರ್ಚೆಗೆ ಒಳಪಡಿಸುವುದು ಈ ಲೇಖನದ ಹಂಬಲ.

ಉಯ್ಯಾಲೆ ಕಾದಂಬರಿಯ ಪ್ರಮುಖ ಆಶಯವನ್ನು ಈ ವಾಕ್ಯಗಳು ಪ್ರತಿನಿಧಿಸುತ್ತವೆ:

‘ರಾಧೆಯ ಜೀವನವೇ ಒಂದು ಉಯ್ಯಾಲೆ……. ಇಡೀ ಸ್ತ್ರೀವರ್ಗವೇ ಒಂದು ಉಯ್ಯಾಲೆ…… ರಾಧೆಯೇ ಉಯಾಲೆ…….. ಅವಳ ಮನಸ್ಸು – ಅತ್ತ – ಇತ್ತ-ಎರಡು ದಂಡೆ : ಉಯ್ಯಾಲೆಯ ತೂಗಾಟದ ಎರಡು ದಂಡೆ. ಒಂದು ದಂಡೆಯಲ್ಲಿ ವೈವಾಹಿಕ ಜೀವನದ ಮಡಿವಂತಿಕೆ, ಗೌರವ, ಸನ್ಮಾನಿತ ಪ್ರತಿಷ್ಮೆ ; ಇನ್ನೊಂದರಲ್ಲಿ ವಿವಾಹದ ಹೊರಗೆ ಕಣ್ಣು ಮಿಟುಕಿಸುವ ಆಕರ್ಷಣೆ-ಪ್ರೇಮ. ಒಂದರಲ್ಲಿ ವೈವಾಹಿಕ ಪ್ರೇಮದ ಆದರ್ಶ ಜೋಡಿ, ರಾಮ -ಸೀತೆ. ಇನ್ನೊಂದರಲ್ಲಿ ಅವಿವಾಹಿತ ಅನುರಾಗದ ಅಮರ ಸಂಕೇತ :ರಾಧಾ-ಕೃಷ್ಣ . ಒಂದು ಪರಂಪರೆಯೊಡನೆ ಹೊಂದಾಣಿಕೆ , ಇನ್ನೊಂದು ಪರಂಪರೆಯೊಡನೆ ಎದ್ದ ದಂಗೆ “(ಪುಟ 287)*

ಹೀಗೆ ಕಾದಂಬರಿ ಎರಡು ವೈರುಧ್ಯಗಳ ಅತಿಯ ನಡುವೆ ತೂಗಾಡುವ ನಾಯಕಿಯ ತೊಳಲಾಟವನ್ನು ಚಿತ್ರಿಸುತ್ತದೆ. ಈ ತೊಳಲಾಟದ ಆಶಯವನ್ನು ಹೊಂದಿರುವ ಕಾದಂಬರಿಯ ತಂತ್ರ ನಿರ್ವಹಣೆ ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿದೆ. ಇದು ಕಾದಂಬರಿಯ ಮೂಲ ದ್ರವ್ಯಗಳಾದ ವಸ್ತು, ಪಾತ್ರ, ಚಿತ್ರಣ, ಕಾದಂಬರಿಯ ಕಾಲ ಮತ್ತು ‘ಉಯ್ಯಾಲೆ ‘ಯ ಸಂಕೇತ ಈ ಎಲ್ಲ ಮಟ್ಟಗಳಲ್ಲಿಯೂ ನಡೆಯುವುದನ್ನು ಗಮನಿಸಬಹುದು. ವರಿದುಧ್ಯದ ತುತ್ತ ತುಟಿಗಳಾಗಿ ಚಿತ್ರಿತವಾದ ಈ ಅಂಶಗಳು ಈ ಕಾದಂಬರಿಯ ಆಶಯದ ಬಗ್ಗೆ ದುಡಿಯುತ್ತವೆ. ಈ ವೈರುಧ್ಯ ಗಳ ನಡುವೆ ನಡೆಯುವ ತೊಳಲಾಟ ‘ ಉಯ್ಯಾಲೆ’ಯಾಗುತ್ತದೆ. ಆದ್ದರಿಂದ ಈ  ನಾಲ್ಕು ವಾಕ್ಯಗಳಂತೆ ಪರಸ್ಪರ ವೈರುಧ್ಯಗಳ ಮಾಲೆಯಾಗಿ ಕಾದಂಬರಿಯ ಉದ್ದಕ್ಕೂ ಕಂಡುಬರುತ್ತವೆ.

ವಸ್ತುವಿನಲ್ಲಿ ವೈರುಧ್ಯ : ಮದುವೆ ಇಲ್ಲದ ಪ್ರೀತಿ-ಪ್ರೀತಿ ಇಲ್ಲದ ಮದುವೆ

ಉಯ್ಯಾಲೆ ಕಾದಂಬರಿಯ ಮುಖ್ಯ ವಸ್ತು ‘ಮದುವೆಯಿಲ್ಲದ ಪ್ರೀತಿ—ಪ್ರೀತಿಯಿಲ್ಲದ ಮದುವೆ’ಯ ಬಗ್ಗೆಯಾದ್ದರಿಂದ ಇದು ಈ ಕಾದಂಬರಿಯ ಪ್ರಮುಖ ಪರಿಕಲ್ಪನೆಯಾಗುತ್ತದೆ. ಈ ಎರಡೂ ರೀತಿಯ ಪ್ರೀತಿಗಳನ್ನು ಮುಖಾಮುಖಿಯಾಗಿಸಿಕೊಂಡು ಆ ಮೂಲಕ ಒಂದು ಕಾಲ-ದೇಶ-ಸಮಾಜದ ಚೌಕಟ್ಟಿನೊಳಗೇಳುವೆ ಘರ್ಷಣೆಯನು ಉಯ್ಯಾಲೆ ಚಿತ್ರಿಸುತ್ತದೆ.

ರಾಧೆ ಕಾಲೇಜಿನಲ್ಲಿ ಕಲಿಯುವಾಗ ಟೆನ್ಸಿಸ್ ಆಟಗಾರ, ಸಹಪಾಠಿ ನಾರಾಯಣನನ್ನ ಮನಸಾರೆ ಪ್ರೀತಿಸುತ್ತಾಳೆ. ನಾರಾಯಣನೂ ಇವಳನ್ನು ಪ್ರೀತಿಸುತ್ತಾನೆ. ಆದರೆ ನಾರಾಯಣ ಆಗಲೇ ಮದುವೆಯಾಗಿರುವ ಕಾರಣಕ್ಕಾಗಿ ರಾಧೆ ಆವವನ್ನು ಮದುವೆಯಾಗಲು ಸಾಧ್ಯವಾಗುವುದಿಲ್ಲ.

ರಾಧೆ ಸವಾಜದ ಕಟ್ಟುಕಟ್ಟಳೆ ಗನುಸಾರವಾಗಿ, ಕೆಲವು ಒತ್ತಡಗಳಿಗಾಗಿ ಆಗಲೇ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡ ಶೇಷಗಿರಿರಾಯನನ್ನು ಮದುವೆಯಾಗುತ್ತಾಳೆ. ಆದರೆ ಶೇಷಗಿರಿರಾಯನಿಂದ ರಾಧೆಗೆ ಯಾವ ಪ್ರೀತಿಯೂ ದಕ್ಕುವುದಿಲ್ಲ.

ರಾಧೆ ಮದುವೆಯಾದ ನಂತರ ಶೇಷಗಿರಿರಾಯನ ಸ್ನೇಹಿತ ಮತ್ತು ಒಂದು ಕಾಲಕ್ಕೆ ಸಹಪಾಠಿಯಾಗಿದ್ದ ಕೃಷ್ಟೇಗೌಡ ತಾನು ನಿಲ್ಲಿಸಿದ ಓದನ್ನು ಮುಂದುವರೆಸಲು ಇವರ ಮನೆಯಲ್ಲೇ ನಿಲ್ಲುತ್ತಾನೆ. ಈ ಮದುವೆಯಾಗಿರದ ಕೃಷ್ಟೇಗೌಡ ರಾಧೆಯ ಮನಸ್ಸನ್ನು ತನ್ನ ನಡವಳಿಕೆಯಿಂದ, ರೂಪಿನಿಂದ ಆಕರ್ಷಿಸುತ್ತಾನೆ. ಈ ಸಂದರ್ಭದಲ್ಲಿ ರಾಧೆ ಮತ್ತೊಮ್ಮೆ ‘ಮದುವೆಯಿಲ್ಲದ ಪ್ರೀತಿ’ಗೆ ಒಳಗಾಗುತ್ತಾಳೆ. ಹೀಗೆ ‘ಮಾಡುವೆ ಇಲ್ಲದ ಪ್ರೀತಿ- ಪ್ರೀತಿ ಇಲ್ಲದ ಮದುವೆ’ಗಳ ವೈರುಧ್ಯದ ನಡುವೆ ನಡೆಯುವ ಮಾನಸಿಕ ಸಂಘರ್ಷ ಅಥವಾ ಹೊಯ್ದಾಟ ಕಥೆಯ ಮುಖ್ಯ ವಸ್ತುವಾಗುತ್ತದೆ.

ಸಾತಂತ್ರ -ಸ್ವೇಚಾಚಾರ

ರಾಧೆ ನಾರಾಯಣನೊಡನೆ ಪ್ರೀತಿಯನ್ನು ಬೆಳೆಸಿಕೊಂಡಾಗ ಕಾಲೇಜಿನ ಹುಡುಗ ಹುಡುಗಿಯರಿಗೆ, ಅವಳ ಭಾವನಿಗೆ, ಕೊನೆಗೆ ತಾಯಿಗೂ ಅವಳ ಪ್ರೀತಿ ಸ್ವೇಚ್ಛ್ರಚಾರವಾಗಿ ಕಂಡುಬರುತ್ತದೆ. ಅಂತೆಯೇ ಕೃಷ್ಣೇಗೌಡನ ತಾಯಿ ಮತ್ತು ತಂಗಿಯರಿಗೆ ಸ್ವೇಚ್ಛಾಚಾರದಂತೆ ಕಂಡುಬರುತ್ತದೆ .

ರಾಧೆಯ ಮದುವೆಗೆ ಮುನ್ನ ಬರುವ ಪಾತ್ರವಾದ ಆಂಗ್ಲೋ-ಇಂಡಿಯನ್ ಯುವತಿ ಸ್ವೇಚ್ಚಾಚಾರಕ್ಕೆ ನಿದರ್ಶನವಾದರೆ, ಅವಳ ಮದುವೆಯ ನಂತರ ಬರುವ ಕನಕನ ಪಾತ್ರ ಸ್ವೇಚಾಚಾರದ ಪ್ರೀತಿಗೆ ಉದಾಹರಣೆಯಾಗಿ ನಿಲ್ಲುತ್ತದೆ. “ಕನಕ ತನ್ನ ಮಾತೆಂದು ವಿವೇಕದ ನುಡಿಯನ್ನು ಮರೆತವಳು, ಹೈಸ್ಕೂಲಿನ ಗಡಿ ದಾಟುವಷ್ಟರಲ್ಲಿ ಕನಕ ಸಾಕಷ್ಟ ಹೆಸರು ಸಂಪಾದನೆ ಮಾಡಿದ್ದಳು. ಇಂಟರ್ ವಿಡಿಯೆಟ್ ಕಾಲೇಜಿನಲ್ಲಂತೂ ಅವಳು ಯಾರಿಗೋ ಗರ್ಭಧಾರಣೆ ಮಾಡಿ ಅದನ್ನು ನಿವಾರಿಸಿಕೊಂಡಿದ್ದಳು”.

ಆದರೆ ರಾಧೆಯ ಪ್ರೀತಿ ಅಂತಹುದಲ್ಲ. “ಪರಸ್ತ್ರೀಯರನ್ನು ಇನ್ನಿಬ್ಬರು ಮಾನಿನಿಯರೆದುರು ಸರಸವಾಡುತ್ತ ಮುಟುವುದೆಂದರೇನು ?… .ಹೀಗೆ ಮಾನ ಬಿಟ್ಟು ನಡೆಯಬೇಕೆ ?” (ಪುಟ 4.8) ಈ ರೀತಿಯ ಮನೋಭಾವಕ್ಕೆ ರಾಧೆ ಬೆಚ್ಚುತಾಳೆ? ಉಸಿರು ಕಟ್ಟಿದಂತೆ ಚಡಪಡಿಸುತಾಳೆ.

ರಾಧೆಗೆ ಪ್ರೀತಿಯ ವಿಷಯದಲ್ಲಿ ತನ್ನದೇ ಆದ ಒಂದು ಪರಿಕಲ್ಪನೆ ಇರುತ್ತದೆ. “ವಿವಾಹದಲ್ಲಿ ಮುಕ್ತಾಯವಾಗದ ಪ್ರೇಮ” ರಾಧೆಗೆ ಇಷ್ಟವಿಲ್ಲ (ಪುಟ 30), “… ಸ್ತ್ರೀಪುರುಷರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ವರಿಸುವುದರಲ್ಲಿ ಎಂತಹ ಸುಖವಿದೆ – ಪರಸ್ಪರರಲ್ಲಿ ಅನ್ಯೋನ್ಯತೆ ಬೆಳೆದು ದಾಂಪತ್ಯವನ್ನೂ ಸಾಮರಸ್ಯ ಸಾಧಿಸುತ್ತದೆ. ಬಾಳು ಹಸನಾಗುತ್ತದೆ. ಮದುವೆ ಎಂಬ ಸಂಬಂಧ ಸಾರ್ಥಕ್ಯ ಪಡೆಯುತ್ತದೆ.” (ಪುಟ 38) ಎಂಬುದು ರಾಧೆಯು ಪ್ರೀತಿಯು ಪರಿಕಲ್ಪನೆಯಾಗುತ್ತದೆ. ಹೀಗೆ ಸ್ವತಂತ್ರವಾದ ಪ್ರೀತಿಯ ಕಲ್ಪನೆಯನ್ನು ಕಾರ್ಯಗತಗೊಳಿಸುವದಕ್ಕೆ ನಡೆಸುವ ಹೋರಾಟ, ತೊಳಲಾಟ, ರಾಧೆಯ ಪ್ರೀತಿಯ ಬಗ್ಗೆ ಬೆಳೆಸಿಕೊಂಡಿರುವ ಅದನ್ನು ಕಾಪಾಡಿಕೊಳ್ಳಲು ಪಡುವ ಪಾಡು ಉಯ್ಯಾಲೆಯಾಗಿ ತೂಗುತ್ತಿರುತ್ತದೆ.

ರೂಪ-ಕುರೂಪ : ಶಿಖರ -ಪ್ರಪಾತ

ರಾಧೆ ಒಬ್ಬ ಸುಂದರ ಯುವತಿಯಾಗಿದ್ದೂ, ತನ್ನ ಕಲ್ಪನೆಯ ಪ್ರೀತಿಯನ್ನು ಪಡೆಯುವುದಕ್ಕೆ ಒದ್ದಾಡುವುದನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಇದಕ್ಕೆ ಉದಾಹರಣೆಯಾಗಿ ಕಾದಂಬರಿ ತೆರೆದುಕೊಳ್ಳುವುದೇ ಈ ಚಿತ್ರವನ್ನು ಮನಗಾಣಿಸುವ ವಾಕ್ಯಗಳಲ್ಲಿ :

“ಮೇಲೆ ಮೇಲೆ ಎತ್ತರ ಎತ್ತರ ಏರಿದಂತೆ ನಮ್ಮ ಪತನವೂ ಅಷ್ಟೇ ದೂರ ಮತ್ತು ಮಹತ್ತರವಾಗುತ್ತದೆ. ಕೇವಲ ನೆಲದ ಮೇಲೆ ನಿಂತವರು ಅಥವಾ ಒಂದೆರಡು ಮೆಟ್ಟಿಲು ಹತ್ತಿದವರು ಕೆಳಗುರುಳಿದರೆ ಅವರಿಗೆ ಬೀಳುವ ಪೆಟ್ಟು ಅಂತಹ ಮಹತ್ವದ್ದೇನೂ ಅಲ್ಲ. ಆದರೆ ಎತ್ತರದಿಂದ ಬಿದ್ದವರು ಮಾತ್ರ ಮೇಲೇಳುವುದೇ ಕಷ್ಟ…ಸುಂದರಿಯರಿಗೆ ವಿಶೇಷ ಆಕರ್ಷಣೆಯನ್ನಿತ್ತು ಅವರನ್ನು ಜೀವನದ ಏಣಿಯ ಮೇಲಿರಿಸಿದ್ದಾನೆ ದೇವರು. ಆ ಎತ್ತರದಿಂದ ಉರುಳಿಬಿದ್ದರೆ ಹಿಂದಿರುಗಲಾಗದ ಸಂಕಟದ ಪ್ರಪಾತಕ್ಕೆ ಅವರು ಹೋಗಬೇಕು. ಆದರೆ ಕುರೂಪಿಗಳು ಮಾತ್ರ ಈ ಪ್ರಮಾಣದಲ್ಲಿ ಅಪಘಾತಕ್ಕೀಡಾಗುವುದು ಅಪರೂಪ.” (ಪುಟ 1)

ಆಂಗ್ಲೋ ಇಂಡಿಯನ್ ಹುಡುಗಿಯಾಗಲೀ, ಸ್ವಲ್ಪ ಬಣ ಕಪ್ಪಾದ ಸ್ಥೂಲ ಕಾಯದ ಸುಂದರಾ೦ಬಾಳ್ ಆಗಲೀ, ಕಾಲೇಜಿನ ಚೆಲ್ಲು ಹುಡುಗಿ ಕನಕ ಆಗಲಿ – ಪ್ರೇಮದ ಪ್ರಪಾತದಲ್ಲಿ ಬಿದ್ದರೂ ಅಂತಹ ಗಹನವಾದ ವಿಷಯವಲ್ಲ ಎಂಬುದನ್ನು ಚಿತ್ರಿಸುತಾ, ಸುಂದರಿ ರಾಧೆಯ ತೊಳಲಾಟವನ್ನು ಕಾದಂಬರಿಕಾರರು ಕೃತಿಯಲ್ಲಿ ಹೆಚ್ಚಿಸುತಾರೆ.

ಉತ್ಸಾಹ, ಸಂಭ್ರಮ-ಶೋಕ, ಸಂಕಟ

ರಾಧೆಯು ತಂದೆ ಸಂಪ್ರದಾಯಬದ್ದವಾಗಿ ಮದುವೆಗೆ ಗೊತ್ತುಮಾಡಿದ ಗಂಡಿನ ಬಗ್ಗೆ ರಾಧೆ ಉತ್ಸಾಹ ವ್ಯಕ್ತಪಡಿಸುತಾಳೆ. ಆದರೆ ಮದುವೆಮನೆಯಲ್ಲಿ ರಾಧೆಯ ತಂದೆಯ ಅನಿರೀಕ್ಷಿತ ಸಾವಿನಿಂದ ಉತಾಹ, ಸಂಭ್ರಮಗಳನ್ನು ಕಳೆದುಕೊಂಡು ಸ್ಮಶಾಣಸದೃಶವಾಗಿ ಪರಿಣಮಿಸುತ್ತದೆ.

ರಾಧೆ ನಾರಾಯಣನೊಡನೆ ಟೆನ್ಸಿಸ್ ಆಟದಲ್ಲಿ ಸಿಕ್ಕ ಸಾಹಚರ್ಯೆಯಿಂದ ಪುರುಷಾಧರದ ಸ್ಪರ್ಶದ ಸವಿಯನ್ನು ಪ್ರಥಮಬಾರಿಗೆ ಪಡೆದು ಪುನಃ ಉತ್ಸಾಹ ಸಂಭ್ರಮಗಳನ್ನು ಪಡೆಯುತ್ತಾಳೆ. ಅವನ ಮದುವೆಯಾಗಿದೆ ಎಂದು ತಿಳಿದ ಬಳಿಕ “ರಾಧೆಯ ಹೃದಯ ಶರಾಘಾತದಂತೆ ಗಡಗಡ ನಡುಗುತ್ತದೆ. ಅವಳ ಮನಸ್ಸಿನಲ್ಲಿ ಶಾಂತಿ ಉಳಿಯುವುದಿಲ್ಲ”.

ಶೇಷಗಿರಿರಾಯನನ್ನು ಮದುವೆಯಾದ ಮೇಲೆ ರಾಧೆಯು ಉತ್ಸಾಹ ಮತ್ತೆ ಕುಂಠಿತವಾಗುತ್ತದೆ. “ಪತಿಗಾಗಿ ಅರಳಿದ ಪುಷ್ಪ’ ಪತಿಗೇ ಬೇಡವಾಗಿ ಮುದುಡಿಕೊಂಡು ಸಂಕಟವನ್ನು ಅನುಭವಿಸುತ್ತದೆ.

ಕೃಷ್ಣೇಗೌಡನ ಸ್ನೇಹವಾದ ಮೇಲೆ ಅವಳಲ್ಲಿ ಮತ್ತೊಮ್ಮೆ ಉತ್ಸಾಹ ಸಂಭ್ರಮಗಳು ತುಂಬಿಕೊಳ್ಳುತ್ತವೆ. ಆದರೆ ಅದನ್ನು ಪಡೆಯಲು ಬರುವ ಅಡ್ಡಿ ಆತಂಕಗಳು ಶೋಕವಾಗಿ, ಸಂಕಟವಾಗಿ ಮಾರ್ಪಡುತ್ತವೆ . ಹೀಗೆ ಉತಾಹ, ಸಂಭ್ರಮ,ಶೋಕ, ಸಂಕಟಗಳ ಉಯ್ಯಾಲೆಯಲ್ಲಿ ರಾಧೆ ದೇಕುತಾಳೆ.

ಮುಗ್ದತೆ -ಅರಿವು

ಮುಗ್ದತೆ ಮತ್ತು ಅರಿವಿನಲ್ಲಿ ಬೆಳೆಯುವ ಪ್ರೇಮಗಳ ನಡುವೆ ರಾಧೆ ತೊಳಲಾಡುತ್ತಾಳೆ. ಅಪ್ಪ ಗೊತ್ತು ಮಾಡಿದ ಗಂಡನನ್ನು ಮುಗ್ದವಾಗಿಯೇ ಒಪ್ಪಿಕೊಳ್ಳುತ್ತಾಳೆ. ಸಹಪಾಠಿ ನಾರಾಯಣನನ್ನು ಮುಗ್ದವಾಗಿಯೇ ಪ್ರೀತಿಸಿರುತ್ತಾಳೆ. (“ಆತನಿಗಾಗಲೇ ವಿವಾಹವಾಗಿದೆ ಎನ್ನುವ ಮಾತು ದಿಟವಾಗಿದ್ದರೆ ತನ್ನಂತಹ ಮುಗ್ಧಳಾದ … ಕಪಟವರಿಯದ ತರಳೆಯನ್ನು ಮೋಸಗೊಳಿಸುವುದು ಮಹಾ ಅಪರಾಧ.” ಪುಟ 40).

ಶೇಷಗಿರಿರಾಯನನ್ನು ಮದುವೆಯಾದಾಗ ಅವಳ ಮುಗ್ದತೆ ಮಾಯವಾಗುತ್ತದೆ. “ತನ್ನ ಸೌಂದರ್ಯ ತನ್ನ ಪತಿಗಾಗಿ, ತನ್ನ ಪತಿಗೆಂದೇ ಅರಳಿದ ಪುಷ್ಪ. ಉಳಿದ ಗಂಡಸರು ಅದನ್ನು ಮೆಚ್ಚಿದರೆಷ್ಟು ಬಿಟ್ಟರೆಷ್ಟು ?” (ಪುಟ ೬) ಎಂಬ ಅರಿವಿರುತ್ತದೆ

ಈ ಅರಿವಿದಸ್ಸೂ, ಕೃಷ್ಟೆಗೌಡನನ್ನು ಪ್ರೀತಿಸುವಾಗ, ಅದು ಮುಗ್ದವಾಗದೆ, ತಾನೊಬ್ಬ ವಿವಾಹಿತಳು, ಮಗುವಿನ ತಾಯಿ, ಎಂಬ ತಿಳಿವಿದ್ದೂ ಪ್ರೀತಿಯ ಆಕರ್ಷಣೆಗೆ ಒಳಗಾಗುತ್ತಾಳೆ.

ಸಂಪ್ರದಾಯ-ಹೊಸ ಮೌಲ್ಯ

ರಾಧೆ ಒಂದು ಸಂಪ್ರದಾಯಸ್ಥ ಮನೆತನದಿಂದ ಬಂದ ಹುಡುಗಿ. ಅವಳು ಸಂಪ್ರದಾಯಬದ್ದವಾಗಿಯೇ ತನ್ನ ಉಳಿದ ಅಕ್ಕಂದಿರಂತೆ ಮದುವೆಯಾಗಿ ಗಂಡನ ಮನೆಯಲ್ಲಿ ಜೀವನಸಾಗಿಸಿಕೊಂಡು ಹೋಗಬೇಕೆಂಬುದೇ ಅವಳ ತಂದೆ, ತಾಯಿ ಅಕ್ಕಂದಿರು ಮತ್ತೆ ನೆಂಟರ ಆಸೆ. ಹೆಣುಮಕ್ಕಳು ಕಾಲೇಜು ವೆುಟ್ಟಿಲು ಹತ್ತುವುದೇ ಸಂಪ್ರದಾಯವನ್ನು ಮುರಿದಂತೆ. ಜನ ಏನಾದರೊಂದು ಆಡಿಬಿಡುತಾರೆ. ಇನ್ನು ಓದುವುದು ಬೇಡ ಎಂದು ರಾಧೆಯು ತಾಯಿ. ಆದರೆ ರಾಧೆ ಗಂಡಸಿನ ಸಮಕ್ಕೂ ಟೆನ್ನಿಸ್ ಆಡುತ್ತಾಳೆ,ಓದುತ್ತಾಳೆ. ಮಾಡುವೆ ಎಂಬ ಸಂಪ್ರದಾಯಬದ್ಧವಾದ ಸಂಸ್ಥೆಯ ಬಗ್ಗೆ ಸಿಡಿದೇಳಬೇಕು. ಮದುವೆ, ಗಂಡು-ಹೆಣ್ಣಿನ ಪರಸ್ಪರ ಅರಿವಿನ ಕೂಟವಾಗಬೇಕೆಂಬುದೇ ರಾಧೆಯ ಆಶಯ. ಅದಕ್ಕಾಗಿ ಮದುವೆಯಾದ ಗಂಡನನ್ನ ಬಿಡಲು ರಾಧೆಯ ಮನಸ್ಸು ನಿರ್ಧರಿಸುತ್ತದೆ. ಪ್ರೀತಿಯ ಹೊಸ ಮೌಲ್ಯದ ಬಗ್ಗೆ ಹುಡುಕಾಟದ ಪ್ರತೀಕವಾಗಿ ರಾಧೆ ತೊಳಲಾಡುತ್ತಾಳೆ.

ಬ್ರಾಹ್ಮಣ-ಶೂದ್ರ

ರಾಧೆ ಪುತು ಕೃಷ್ಟೇಗೌಡರ ಪ್ರೀತಿಯು ಸಂದರ್ಭದಲ್ಲಿ ಜಾತಿ ಅಡ್ಡ ಬರುವದಿಲ್ಲ. ಕೃಷ್ಣೇಗೌಡ ರಾಧೆಗೆ ಮೊದಲ ಪರಿಚಯದಲ್ಲೇ “ಥೇಟ್ ಬ್ರಹ್ಮಣನಂತೆ” ಕಾಣುತ್ತಾನೆ. ಅದೇ ರೀತಿ ಕೃಷ್ಟೇಗೌಡನಿಗೂ ಸಹ ರಾಧೆ “ಬ್ರಾಹ್ಮಣರು ಒಕ್ಕಲಿಗನಾದ ತನ್ನನ್ನು ಶೂದ್ರನೆಂದು ಕನಿಷ್ಠವಾಗಿ ಕಾಣುತ್ತಾರೆ. ಈಕೆ ಬ್ರಾಹ್ಮಣ ಕುಲದಲ್ಲಿ ಜನಿಸಿದವಳು. ಹಾಗಿದ್ದುವು ಭೇದ ತೋರಿಸದೆ” ಇರುವಂತೆ ಕಾಣುತ್ತಾಳೆ. ಆದರೆ ಕಾದಂಬರಿಯಲ್ಲಿ ರಾಧೇ ಈ ರೀತಿ ವರ್ತಿಸುವುದು ಕೃಷ್ಣೇಗೌಡನ ಜೊತೆ ಮಾತ್ತ್ರ. “ಶೇಷಗಿರಿರಾಯನ ಇತರ ಕಾಲೇಜಿನ ಬ್ರಾಹ್ಮಣೇತರ ಮಿತ್ರರ ಎಂಜಲೆಲೆ ಎತ್ತುವ ತಂಟೆಗೆ ಹೋಗುವುದಿಲ್ಲ” (ಪುಟ ೮೭)

ಪಾತ್ರಗಳ ಚಿತ್ರಣದಲ್ಲಿ ವೈರುಧ್ಯ : ರಾಧೇ-ಶೇಷಗಿರಿರಾಯ

ರಾಧೇ ಅನುಪಮ ಸುಂದರಿಯಾದರೆ ಶೇಷಗಿರಿರಾಯ ಅಷ್ಟು ಸುರೂಪಿಯಲ್ಲದಿದ್ದರೂ ಕುರೂಪಿನವನಲ್ಲ. ಆದರೆ ಅವನ ಹಣೆಯ ಮೇಲೆ ಎಡಭಾಗದಲ್ಲಿದ್ದ ಮೂರು ಕಾಸಿನಗಲದ ಸುಟ್ಟ ಗುರುತಿನ ಕಲೆ ಅವನ ಮುಖವನನ್ನು ಸ್ವಲ್ಪ ಮಟ್ಟಿಗೆ ವಿಕಾರಗೊಳಿಸಿತ್ತು. ಅವನು ಕೋಪಾವಿಷ್ಟನಾದಾಗ ಇಲ್ಲವೆ ದುಃಖಭಾರದಿಂದ ಪರಿತಪಿಸಿದಾಗ ಶೇಷಗಿರಿರಾಯನ ಹಣೆಯ ಮೇಲಿನ ಸುಟ್ಟ ಗಾಯದ ಗುರುತು ಇನ್ನೂ ಅಗಲವಾಗಿ ಇನ್ನೂ ವಿಕಾರವಾಗಿ ಕಾಣುತ್ತಿತ್ತು, ರಾಧೆಯು ದೃಷ್ಟಿಗೆ.

ರಾಧೆ ಮದುವೆಗೆ ಮುನ್ನ ತಾನು ಪ್ರೀತಿಸಿದವನ ಪ್ರೀತಿಯಿಂದ ವಂಚಿತಳಾದರೆ ಶೇಷಗಿರಿರಾಯು ಆಗಲೆ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡಿದ್ದವನು. ಶೇಷಗಿರಿಗೆ ಸಿನೆಮಾ ನಾಟಕಗಳೆಂದರೆ ತಲೆ ಚಿಟ್ಟು. ಅವು ಆಧುನಿಕ ಯುಗದ ಪಾಪ ಕೂಪಗಳೆಂದು ಅವನ ಕಲ್ಪನೆ. ರಾಧೆಗಾದರೋ ಸಿನೆಮಾ ನಾಟಕಗಳೆಂದರೆ ಪಾಣ. ಶೇಷಗಿರಿರಾಯ ಎಂದೂ ರಾಧೆಯ ಅಲಂಕಾರದಲ್ಲಿ ಆಸ್ಥೆ ವಹಿಸಿದವನಲ್ಲ. “ಅಂತೂ. ಆ ದಂಪತಿಗಳನ್ನು ನೋಡಿದ ಯಾರಿಗಾದರೂ ಪ್ರಥಮ ಪರಿಚಯದಲ್ಲೆ -ರಾಧೆ ಶೇಷಗಿರಿರಾಯ ಪರಸ್ಪರ ವಿರುದ್ಧ ಗುಣವುಳ್ಳವರು, ಇವರ ಜೊತೆ ಸರಿಯಲ್ಲ ಎಂದು ಹೇಳಿಬಿಡುವಂತಿತ್ತು. ಅವರ ಸಂಸಾರದ ಜೋಡಿಗೆ ಅವೆರಡು ಇಜ್ಯೋಡಿ ಎತ್ತು ಗಳನ್ನು ಕುರುಡು ದೈವ ಕಾಣದೆ ಕಟ್ಟಿದೆ ಎನಿಸುವಂತಿತ್ತು .” (ಪುಟ 54)

ರಾಧೆ-ನಾರಾಯಣ

ನಾರಾಯಣ ರಾಧೆಯು ಹೃದಯವನ್ನೂ ತನ್ನ ‘ಸಭ್ಯ’ತನದಿಂದ ಗೆದ್ದಿದ್ದ. ಅವಳ ಹೃದಯದಲ್ಲಿ ಅವನ ಬಗ್ಗೆ ಕೃತಜ್ಞತೆ ತುಂಬಿ ಬಂದಿತ್ತು. ಅವಳಿಗೆ ನಾರಾಯಣನನ್ನು ನೋಯಿಸುವ ಮನಸ್ಸಿರಲಿಲ್ಲ. ನಾರಾಯಣನಿಗೆ ಅಸಂತುಷ್ಟಿಯಾದರೆ ರಾಧೆಗೆ ತೀವ್ರ ಯಾತನೆಯಾಗುತ್ತಿತ್ತು. ನಾರಾಯಣನ ಮೂಖದಲ್ಲಿ ನಗು ಬೆಳಗುವುದನ್ನು ಕಾಣಲು ಅವಳ ಹೃದಯ ಆಶಿಸುತ್ತಿತ್ತು. ಅವರ ಜೋಡಿ ಹೇಗಿತ್ತೆಂದರೆ ಅವರು “ಮಿಶ್ರಿತ ಜೋಡಿಗಳ ಟೆನ್ನಿಸ್ ” ಆಟದಲ್ಲಿನ ವಿವರಣೆಯಲ್ಲಿ ಬರುವ ಭಾಷೆಯನ್ನೇ ನೋಡಬಹುದು. “ನಾರಾಯಣನೂ ರಾಧೆಯ ಆಟವನ್ನು ಅನುಸರಿಸಿ ಕೌಶಲದಿಂದ ಆಡಿದ್ದನು. “ಅವರಿಬ್ಬರ ಆಟದ ರೀತಿಯೂ ಅಷ್ಟೆ. ಸಮಪ೯ಕವಾಗಿ ಹೊಂದಿಕೊಂಡು ಅವರಿಗೆ ಜಯಗಳಿಸಿಕೊಡುವುದರಲ್ಲಿ ತುಂಬ ನೆರವಾಗಿತ್ತು”.  “ಒಳೆಯ ಜೊತೆ ಎತ್ತುಗಳಂತೆ ಅವರು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಆಡಿದ್ದರು”. ಪ್ರೇಕ್ಷಕರಾಗಿ ನೋಡುತ್ತಿದ್ದ ಕಾಲೇಜಿನ ಇತರ ಆಟಗಾರ ಮಿತ್ರರು “ಕಂಗ್ರಾಚ್ಯುಲೇಷನ್ಸ್ ನಿಮ್ಮಿಬ್ಬರದೂ ಒಳ್ಳೇ ಜೋಡಿ” ಎಂದು ಹೊಗಳಿದರು. (ಪುಟ 27) ಹೀಗೆ ಕಾಣಿಸಿಕೊಂಡ ನಾರಾಯಣ ‘ಕಪಟವನ್ನರಿಯದ ತರಲೆ, ಮುಗ್ದೆಯಾದ ರಾಧೆ’ಗೆ ವಂಚನೆ ಕ್ಷತ್ರಿಮ ಸಂಧಾನ ಮಾಡಿ ಮೋಸ ಗೊಳಿಸುತ್ತಾನೆ.

ರಾಧೆ-ಕ್ಕಷ್ಟೇಗೌಡ

ಕೃಷ್ಣೇಗೌಡ ‘ಮೈ ತೆಳುವಾಗಿದ್ದರೂ ಅವನ ನಿಲುವು ನೇರವಾಗಿ ಶಕ್ತಿ ಸೂಚಕವಾಗಿತ್ತು’.  “ತುಟಿಗಳಲ್ಲಿ ಸದಾ ಹುಸಿನಗು ಆಡುತ್ತಿದ್ದ ಅವನ ಮುಖ ಯಾವ ಹೆಣ್ಮನವನ್ನಾದರೂ ಒಂದು ನೋಟದಲ್ಲಿಯೇ ಆಕರ್ಷಿಸಿಬಿಡುವಂತಿತ್ತು” ಥೇಟ್ ಬ್ರಾಹ್ಮಣನಂತೆಯೇ ಇದ್ದ ಇವನ ಗುಣವನ್ನೂ ನೋಡಿ ರಾಧೆ “ಎಂತಹ ಸುಗುಣಿ ಈತ” ಎಂದು ಚಕಿತಳಾಗುತ್ತಾಳೆ. ನಾರಾಯಣನೆಂಬ ವಿವಾಹಿತ ತರುಣ ಇವಳೊಡನೆ ಕ್ರುತಿಮದಿಂದ ನಡೆದುಕೊಂಡ ರೀತಿಗೂ ಕೃಷ್ಟೇಗೌಡನ ಘನವರ್ತನೆಗೂ ಅಂತರವನ್ನು ಕಾಣುತ್ತಾಳೆ. ಶೇಷಗಿರಿಗಿಂತ ಕೃಷ್ಟೇಗೌಡನಿಗೆ ರಾಧೆಯು ವ್ಯಕ್ತಿತ್ವದಲ್ಲಿ ಆಸಕ್ತಿ ಕೇಂದ್ರಿಕೃತವಾಗಿತ್ತು. ರಾಧೆಯ ಒಂದೊಂದು ನುಡಿಯಲ್ಲೂ ಕೃಷ್ಟೇಗೌಡನನ್ನೂ ಮುಗ್ದ ಗೊಳಿಸುತ್ತಿತ್ತು.

ಪತಿ ಶೇಷಗಿರಿರಾಯನಲ್ಲಿ ದೊರೆಯದ ಸರಸ ಮಾತುಕತೆ ಕೃಷ್ಟೇಗೌಡನಲ್ಲಿ ದೊರೆಯುತ್ತಿದ್ದರಿಂದ ಅವನೊಡನೆ ಸಂಭಾಷಿಸುವ ಸದಾವಕಾಶಕ್ಕಾಗಿ ಯಾವಾಗಲೂ ಅವಳು ಕಾತರಗೊಂಡು ನಿರೀಕ್ಷಿಸುತ್ತಿದ್ದಳು. ಕೃಷ್ಟೇಗೌಡ ರಾಧೆಯ ದೃಷ್ಟಿಗೆ ಸಹೃದಯ. “ತಾನು ಕಷ್ಟಪಡುತ್ತಾಳೆಂದು ಪರಕೀಯನಾದ ಈತನಿಗೆಷ್ಟು ಮರುಕ ? ಅದೇ ತನ್ನ ಪತಿ ಎನಿಸಿಕೊಂಡ ಪ್ರಭೃತಿಯು ವರ್ತನೆಯಲ್ಲಿ ಅದೆಷ್ಟು ಕಾಠಿಣ್ಯ” ಎಂದು ಕೊಳ್ಳುತ್ತಾಳೆ ರಾಧೆ.

ಹೀಗೆ ರಾಧೆಯ ಪ್ರೇಮ ಜೀವನದಲ್ಲಿ ಬರುವ ಮೂವರು ಪುರುಷರನ್ನು ಕಥೆಗಾರ ಪಾತ್ರ ಚಿತ್ರಣದಲ್ಲಿ ಮುಖಾಮುಖಿಯಾಗಿಸಿ, ರಾಧೆಯು ಪ್ರೇಮ ಜೀವನದ ತೂಗುಯ್ಯಾಲೆಯಾಡಿಸುತ್ತಾರೆ. ನಾರಾಯಣ ತೂಗುಯ್ಯಾಲೆಯ ಒಂದು ದಂಡೆಯಾದರೆ, ಕೃಷ್ಟೇಗೌಡ ಮತ್ತೊಂದು ದಂಡೆಯಾಗುತ್ತಾನೆ. ಇವೆರಡು ದಂಡೆಗಳ ಮಧ್ಯದಲ್ಲಿ ಗಂಡ ಶೇಷಗಿರಿರಾಯ ಪ್ರೇಮದ ಪರಿಯನ್ನು ಅರಿಯಲು ಮೀಟು ಗೋಲಾಗಿ ನಿಲ್ಲುತ್ತಾನೆ.

ರಾಧೆ-ಪ್ರಭಾವತಿ

ರಾಧೆಯ ಮಗಳು ಪ್ರಭಾವತಿ ರಾಧೆಯು ಮನಸ್ಸಿನ ಉಯ್ಯಾಲೆಯನ್ನು ತಡೆದು ನಿಲ್ಲಿಸುವ ಸಾಧನೆ (ರಾಧೆಯು ತೂಗುಯ್ಯಾಲೆಯಲ್ಲಿ ಕುಳಿತುಕೊಂಡು ತೂಗಿ ಕೊಳ್ಳುತ್ತಿದಾಗ ಬಂದ ಪ್ರಭಾವತಿ, ರಾಧೆ ತನ್ನ ಪಾದಗಳನ್ನು ನೆಲದ ಮೇಲೆ ಊರಿ ತೂಗುವ ಉಯ್ಯಾಲೆಯನ್ನು ತಡೆದು ನಿಲ್ಲಿಸುವಂತೆ ಮಾಡುತ್ತಾಳೆ. (ಪುಟ ) ಅಂತೆಯೇ ಕ್ಷಣಕಾಲವಾದರೂ ಪ್ರಭಾವತಿ ರಾಧೆಯ ಪುನದ ಉಯ್ಯಾಲೆಯನ್ನು ನಿಲ್ಲಿಸುವ ಸಾಧನವಾಗಿರುತ್ತಾಳೆ. ಪ್ರಭಾವತಿ ತಾಯಿಯಂತೆ ದ್ವಂದ್ವಚಿತ್ತಳಾಗದೆ ಬೆಳೆಯುವ ಸೂಚನೆ ಕೊಡುವ ಪಾತ್ರ. ಈ ಪುಟ್ಟ ಹುಡುಗಿಗೆ ಸ್ವಾಭಾವಿಕವಾಗಿ ಬಂದಂಥ ಗುಣವೆಂದರೆ ಯಾವುದೇ ಹಾಡಿಗೆ ಸ್ವೇಚ್ಛೆಯಾಗಿ,  ಯಾವುದೋ ಚಿತ್ತಾಕರ್ಷಕ ಪ್ರೇರಣೆಗೆ ಮಣಿದು ಕುಣಿಯುವ ಗುಣ. ಏಕೆಂದರೆ ಯಾವ ನಾಟಾಚಾರ್ಯನೂ ಶೇಷಗಿರಿರಾಯನ ಗೃಹವನ್ನು ಹೊಕ್ಕದಿಲ್ಲ. ಇಲ್ಲ, ಅವಳನ್ನು ಶಿಕ್ಷಣಕಾಗಿ ಯಾವ ನಾಟ್ಯಪಟುವಿನ ಬಳಿಗೂ ಕಳುಹಿದ್ದಿಲ್ಲ. ಆದರೂ ಪ್ರಭೆ ಯಾವ ಪ್ರೇಕ್ಷಕನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನರ್ತಿಸುತ್ತಿದ್ದಳು. (ಪುಟ. 149). ಹೀಗೆ ಸ್ವಾಭಾವಿಕವಾಗಿ ತನ್ನಿಚ್ಛೆಯಂತೆ ಯಾವ ಹೊಯ್ದಾಟವೂ ಇಲ್ಲದೆ ತಾಯಿ ರಾಧೆಗಿಂತ ಭಿನ್ನವಾಗಿ ಬೆಳೆಯಬೇಕಾದ ಪಾತ್ರ ಅಕಾಲಮೃತ್ಯುವಿಗೆ ತುತಾಗುತ್ತದೆ.

ಕಾಲದ ವೈರುಧ್ಯ

ಒಂದು ಕೃತಿಯಲ್ಲಿ ಬರುವ ಕಾಲವನ್ನು ನಾಲ್ಕ ವಿಭಾಗಗಳಾಗಿ ವಿಂಗಡಿಸಿಕೊಳ್ಳಬಹುದು : (1) ಕೃತಿ ರಚನೆಯ ಕಾಲ, (2) ನಿರೂಪಕನ ಕಾಲ, (3) ಪಾತ್ರದ ಕಾಲ, (4) ಭಾಷಾಕಾಲ. ಇವು ಪಠ್ಯದ ಜೊತೆ ನಡೆಸುವ ಸಂವಾದಕ್ಕೆ ಪೂರಕವಾಗಿ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳನ್ನು ದೊರಕಿಸಿಕೊಟ್ಟ ಕೃತಿಯ ಜೊತೆ ಓದುಗ ಇನ್ನಷ್ಟು ಆಳವಾಗಿ ಅರ್ಥಪೂರ್ಣವಾಗಿ ಸಂವಾದ ನಡೆಸಲು ಸಹಕಾರಿಯಾಗುತ್ತದೆ.

ಕೃತಿಕಾರ ‘ಉಯ್ಯಾಲೆ’ಯನ್ನು 1960ರಲ್ಲಿ ರಚಿಸಿದರೂ ನಿರೂಪಕನ ಕಾಲ (ಈ ಕಾದಂಬರಿಯಲ್ಲಿ ನಿರೂಪಕನ ಕಾಲ(ರಾಧೆ) ಇಬ್ಬರೂ ಒಬ್ಬರೇ ಆದ್ದರಿಂದ) ಪಾತ್ರದ ಕಾಲ ಕಾದಂಬರಿಯು ಒಂದು ಭಾಗದಲ್ಲಿ ಬರುವ ವಿವರಣೆಯಿಂದ ಎರಡನೆ ಮಹಾಯುದ್ಧದ ಕಾಲ ಎಂದು ತಿಳಿಯಬಹುದು. “ಅಷ್ಟರಲ್ಲಿ ಖಾಕಿ ಬಟ್ಟೆ ಧರಿಸಿದ ಪೊಲೀಸ್ ಇನ್ಸ್ಪೆಕ್ಟರನೊಬ್ಬ ದರ್ಪದಿಂದ ಬಂದು ರಾಧೆಯು ಪಕ್ಕದಲ್ಲಿ ಕುಳಿತು ಬಿಟ್ಟ. ಯುದ್ಧದ ದಿನಗಳಲ್ಲವೇ ? ಸೈನಿಕರಂತೆ ಪೋಷಾಕು ಧರಿಸಿದ ಪೊಲೀಸರಿಗೂ ಕೋಡು ಮೂಡಿದ್ದ ಕಾಲ ಅದು. ತಾತ್ಕಾಲಿಕವಾಗಿ ನಮ್ಮ ದೇಶದಲ್ಲಿ ಬಿಡಾರಬಿಟ್ಟ ಅಮೆರಿಕನ್ ಮತ್ತು ಬ್ರಿಟಿಷ್ ಸೈನಿಕರ ದುರ್ಗುಣಗಳನ್ನೆಲ್ಲಾ ನಮ್ಮ ಪೊಲೀಸಿನವರೂ ಸ್ವಲ್ಪ ಸ್ವಲ್ಪ ಕಲಿಯುತ್ತಿದ್ದರು.” (ಪುಟ 125)

ಪಾತ್ರದ ಕಾಲ: ವರ್ತಮಾನ – ಭೂತಗಳು ಮತ್ತು ವರ್ತಮಾನ – ಭವಿಷ್ಯತ್

ವರ್ತಮಾನ ಮತ್ತು ಭೂತಗಳ ನಡುವೆ ನಡೆಯುವ ಸಂಘರ್ಷ ಉಯ್ಯಾಲೆಯಾಗಿ ಪಾತ್ರದ ಕಾಲ ಕಾದಂಬರಿಯ ಒಂದನೇ ಭಾಗದಿಂದ ನಾಲ್ಕನೇ ಭಾಗದವೆರೆಗೆ ಚಿತ್ರಿತವಾಗಿದೆ. ಇಲ್ಲಿಯವರೆಗೆ ರಾಧೆಯು ಶೇಷಗಿರಿರಾಯನನ್ನು ಮದುವೆಯಾಗಿ ಅವಳಿಗೊಂದು ಎರಡು ವರ್ಷದ ಮಗುವಾಗಿ ,ಕೃಷ್ಣೇಗೌಡನ ಪರಿಚಯವಾಗುವವರೆಗಿನ ಕಾಲ. ರಾಧೆಯ ದೇಹವು ಉಯ್ಯಾಲೆಯ ಮೇಲೆ ಕುಳಿತು ಉಯ್ಯಾಲೆ ಮೀಟುತ್ತಾ ಅವಳ ಇಂದಿನ ಸ್ಥಿತಿ ಮತ್ತು ಹಿಂದಿನ ಸ್ಥಿತಿಯ ವೈರುಧ್ಯದ ಉಯ್ಯಾಲೆಯಾಡುತ್ತಿರುವುದನ್ನು ಸೂಚಿಸುವುದರ ಮೂಲಕ ರಾಧೆಯ ವರ್ತಮಾನ ಮತ್ತು ಭೂತದ ಮನಸ್ಸಿನ ತೂಗಾಟವನ್ನು ಕಾದಂಬರಿಕಾರರು ಚಿತ್ರಿಸುತ್ತಾರೆ.

ರಾಧೆಯು ಕೃಷ್ಣೇಗೌಡನನ್ನು ಸಂಧಿಸಿದಾಗಿನಿಂದ ಅವಳ ಮನಸ್ಸು ಭೂತದ ಕಡೆಗೆ ಚಲಿಸದೆ ವರ್ತಮಾನದಲ್ಲಿ ಕೃಷ್ಟೇಗೌಡನನ್ನು ಪಡೆದು ಬದುಕನನ್ನು ನಿರೂಪಿಸಿಕೊಳ್ಳುವ ಭವಿಷ್ಯದ ಕಡೆಗೆ ತುಡಿಯುತ್ತ ನಿರಂತರವಾಗುತ್ತದೆ. ಕಥೆಗಾರರು ವರ್ತಮಾನ – ಭೂತ, ವರ್ತಮಾನ-ಭವಿಷ್ಯತ್ಗಳ ವೈರುಧ್ಯದ ಆಧಾರದ ಮೇಲೆ ಕಥಾ ನಾಯಕಿಯ ಮನಸ್ಸು ಉಯ್ಯಾಲೆಯಾಡುವುದನ್ನು ಚಿತ್ರಿಸಿರುವುದರ ಕಡೆ ಗಮನ ಹರಿಸಬಹುದು. ಹೀಗೆ ಉಯ್ಯಾಲೆ ಕಾಲದ ಹೊಯ್ದಾಟದ ಉಯ್ಯಾಲೆಯಾಗಿ ಕಾದಂಬರಿಯ ಉದ್ದಕ್ಕೂ ತೂಗಾಡುತ್ತಿರುತ್ತದೆ.

ಆದರೆ, ಈ ಕಾದಂಬರಿಯಲ್ಲಿ ಬರುವ ಶೇಷಗಿರಿರಾಯನ ಗತ ಜೀವನವೇ ಆಗಲೀ, ಕೃಷ್ಣೇಗೌಡನ ಗತ ಜೀವನವೇ ಆಗಲೀ ಚಿತ್ರಣವಾಗಿರುವುದು ‘ಉಯ್ಯಾಲೆ’ಯ ಮೂಲಕ ಅಲ್ಲ. ಆದ್ದರಿಂದ ಕಾದಂಬರಿಕಾರರು ರಾಧೆಯ ಪಾತ್ರದ ಕಾಲದ ಮೂಲಕ ‘ಉಯ್ಯಾಲೆ’ಯನ್ನು ಧ್ವನಿಸುತ್ತಿರುವುದು ಹೆಚ್ಚು ಅರ್ಥವತ್ತಾಗುತ್ತದೆ.

ಭಾಷಾಕಾಲ

ರಾಧೆಯ ಮನಸ್ಸಿನ ಆಳದಲ್ಲಿರುವ ಉಯ್ಯಾಲೆಯನ್ನು ಚಿತ್ರಿಸಿರುವಾಗ ಆ ಮನಸ್ಸಿನ ಮೇಲ್ಮೈ ಲಕ್ಷಣವನ್ನು ಚಿತ್ರಿಸುವ ಭಾಷೆಯ ಕಾಲದ ಬಳಕೆಯೂ ಇಲ್ಲಿ  ಕಾದಂಬರಿಯ ಧ್ವನಿಯ ಕಡೆಗೆ ತುಡಿಯುವುದನ್ನೂ ಗಮನಿಸಬಹುದು.

ರಾಧೆಯು ವರ್ತಮಾನದಿಂದ ಗತಕಾಲಕ್ಕೆ ಹೋಗುತ್ತಿರುವುದೆಲ್ಲವೂ ಭೂತಕಾಲ ಪ್ರತ್ಯಯದಿಂದ ವ್ಯಕ್ತವಾಗುವ ವಾಕ್ಯಗಳಾಗಿವೆ.

ರಾಧೆಯು ಕೃಷ್ಟೇಗೌಡನ ಬಗ್ಗೆ ಯೋಚಿಸುವಾಗ ನಡೆಯುವ ಹೋರಾಟ ವರ್ತಮಾನ ಕಾಲದಲ್ಲಿ ಸೂಚಿತವಾಗಿದೆ. ಆದರೆ ರಾಧೆಯ ಈ ಉಯ್ಯಾಲೆಯಾಟ ನಿರಂತರವಾಗಿ ಸಾಗತ್ತದೆ ಎಂದು ಸೂಚಿಸುವಾಗ (ಕಾದಂಬರಿಯ ಕೊನೆಯಲ್ಲಿ) ನಿರಂತರ ಕಾಲು ಸೂಚಿ ಪ್ರತ್ಯಯದಿಂದ ಕೊನೆಗೊಂಡಿದೆ. (ಇವುಗಳ ಉದಾಹರಣೆಯನ್ನು ‘ಉಯ್ಯಾಲೆ’ಯ ‘ಸಂಕೇತ’ದ ಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ ಕೊಟ್ಟಿರುವ ಪದಗಳನ್ನು ಗಮನಿಸಿದರೆ ಗೊತಾಗುತ್ತದೆ.

ಹೀಗೆ ವರ್ತಮಾನ-ಭೂತ, ವರ್ತಮಾನ-ಭವಿಷ್ಮತ್ ಗಳ ವೈರುಧ್ಯವನ್ನು ಕಾದಂಬರಿಕಾರ ಕಾದಂಬರಿಯ ಕೇಂದ್ರಪ್ರಜ್ಞೆಯಾದ ಹೊಯ್ದಾಟವನ್ನು ಸೂಚಿಸುವ ಕಡೆಗೆ ಧ್ವನಿಪೂರ್ಣವಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ.

‘ಉಯ್ಯಾಲೆ’ ಕಾದಂಬರಿಯಲ್ಲಿ ಪಡೆದುಕೊಳ್ಳುವ ಸಂಕೇತಾರ್ಥಗಳು

೧. ಉಯ್ಯಾಲೆ ಕೇವಲ ಉಯ್ಯಾಲೆಯಾಗಿ:

“ಅವಳ ಉಂಗುಷ್ಥ ನೆಲವನ್ನು ಮೃದುವಾಗಿ ಮೀಟಿತು. ಅದರ ಮಿಡಿತಕ್ಕೆ ಉಯ್ಯಾಲೆ ಮೆಲ್ಲನೆ ತೂಗಲಾರಂಭಿಸಿತು” (ಪುಟ ೭)

“ರಾಧೆಯು ಉಯ್ಯಾಲೆಯಾ ಮೇಲೆ ಕುಳಿತು ಯೋಚಿಸುತ್ತಿದ್ದಳು” (ಪುಟ ೧೨)

“ತೂಗುಯ್ಯಾಲೆ ತಡೆದು ತಡೆದು ನಿಧಾನವಾಗಿ ತೂಗುತ್ತಿತ್ತು”(ಪುಟ ೧೪)

೨. ಉಯ್ಯಾಲೆ ಗತಕಾಲಕ್ಕೆ ಹೋಗುವುದರ ಸಂಕೇತವಾಗಿ:

“ಉಯ್ಯಾಲೆ ಮೃದುವಾಗಿ ತೂಗುತ್ತಲೇ ಇತ್ತು. ರಾಧೆಯ ಚಿತ್ತ ಗತಕಾಲಕ್ಕೆ ಸರಿದು ಯೋಚಿಸಲಾರಂಭಿಸಿತು” (ಪುಟ ೭)

“ರಾಧೆ ಬಲಗಾಲಿನ ಉಂಗುಷ್ಹದಿಂದ ಬಿರುಸಾಗಿ ನೆಲವನ್ನೊಮ್ಮೆ ಮೀಟಿದಳು…. ಅದರ ವೇಗಕ್ಕೆ ಅವಳ ಮನಸ್ಸು ವಿವಾಹ ಪೂರ್ವದ ಸುಖದ ದಿನಗಳನ್ನು ಸಂಕಟದಿಂದ ಸ್ಮರಿಸತೊಡಗಿತು” (ಪುಟ ೯)

“ರಾಧೆ ಉಯ್ಯಾಲೆಯಲ್ಲಿ ಕುಳಿತು ತಾಯಿ ಅಂದು ಮಾಡಿದ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಳು”(ಪುಟ ೧೭)

“ಹಿಂದಿನ ಕಥೆಯನ್ನೆಲ್ಲ ಉಯ್ಯಾಲೆಯಲ್ಲೇ ಕುಳಿತು ರಾಧೆ ಚಿಂತಿಸುತ್ತಿದ್ದಳು” (ಪುಟ ೪೩)

“ಉಯ್ಯಾಲೆಯಲ್ಲಿ ಕುಳಿತ ರಾಧೆಗೆ ನಡೆದು ಹೋದ ಮದುವೆಯ ನೆನಪು ಕಹಿ ಔಷಧ ಕುಡಿದಂತಾಗಿತ್ತು” (ಪುಟ ೫೨)

(ಇಲ್ಲಿಯವರೆಗೂ ಪ್ರಯೋಗಿಸಿರುವ ಕಾಲ ಭೂತಕಾಲ ಪ್ರತ್ಯಯದಿಂದ ಕೂಡಿದೆ)

“ರಾಧೆ ಅಡುಗೆಕೋಣೆಯಿಂದ ಬಂದು ಹಜಾರದ ತೂಗುವ ಮಂಚದ ಮೇಲೆ ಕುಳಿತು ಉಂಗುಷ್ಟದಿಂದ ನೆಲವನ್ನು ಮೀಟಿದಳು. ಉಯ್ಯಾಲೆ ಮೆಲ್ಲನೆ ತೂಗಲಾರಂಭಿಸಿತು”(ವರ್ತಮಾನ)

“—ಕಣ್ಣೀರು ಸುರಿಯುತ್ತಲೇ ಇತ್ತು. ಉಯ್ಯಾಲೆ ತೂಗುತ್ತಲೇ ಇತ್ತು”(ನಿರಂತರ ಕಾಲ ಸೂಚಕ)

೩. ಉಯ್ಯಾಲೆ ತೂಗುತಕ್ಕಡಿಯಾಗಿ ಬದಲಾಗುವುದು:

ಉಯ್ಯಾಲೆಯ ಮೇಲೆ ಕಾದಂಬರಿಯ ಉದ್ದಕ್ಕೂ ಕುಳಿತುಕೊಳ್ಳುವ ವ್ಯಕ್ತಿ ರಾಧೆ. ಆದರೆ ಒಮ್ಮೆ ಮಾತ್ರ ಕುಳಿತುಕೊಳ್ಳುವ ವ್ಯಕ್ತಿಗಳು ಶೇಷಗಿರಿರಾಯ ಮತ್ತು ಕೃಷ್ಣೇಗೌಡ – ಜೊತೆಯಾಗಿ”ಸ್ನೇಹಿತರಿಬ್ಬರೂ ಹಜಾರಕ್ಕೆ ಬಂದು ಉಯ್ಯಾಲೆಯಾ ಮೇಲೆ ಕುಳಿತರು. ರಾಧೆ ಕೆಲ ನಿಮಿಷಗಳಲ್ಲಿ ತಟ್ಟೆಯಲ್ಲಿ ವೀಲ್ಯವಿಟ್ಟು ತಂದಳು. ಅದನ್ನವಳಿಂದ ತೆಗೆದುಕೊಂಡು ಶೇಷಗಿರಿ ತಮ್ಮಿಬ್ಬರ ನಡುವೆ ಮಣೆಯ ಮೇಲೆ ಇರಿಸಿದ. ರಾಧೆ ಯಾರನ್ನೂ ನಿರ್ದಿಷ್ಟವಾಗಿ ಉದ್ದೇಶಿಸದೆ ಹೇಳಿದಳು:

“ಅಬ್ಬಾ, ಇಷ್ಟು ದಿವಸಕ್ಕೆ ಈವತ್ತೇ ಇವರು ಉಯ್ಯಾಲೆಯಲ್ಲಿ ಕೂತಿರೋದು, ಉಯ್ಯಾಲೆ ಇಲ್ಲಿರುವುದೇ ಮರೆತುಹೋದಂತಿತ್ತು, ಇವರಿಗೆ. ಹೋಗಲಿ ಸ್ನೇಹಿತರ ಜೊತೆಯಲ್ಲಾದರೂ ಕುಲಿತರಲ್ಲ – ಅಷ್ಟೇ ಸಂತೋಷ”.

ಹೀಗೆ ಹೇಳುವ ಕ್ಷಣದಿಂದ ರಾಧೆ ಶೇಷಗಿರಿರಾಯನನ್ನೂ , ಕೃಷ್ಣೇಗೌಡನನ್ನೂ ತೂಗಿ ನೋಡಲು ಪ್ರಾರಂಭಿಸುತ್ತಾಳೆ.

೪. ರಾಧೆಯ ‘ಉಯ್ಯಾಲೆ’ ಕೃಷ್ಣೇಗೌಡನಿಗೆ ವರ್ಗಾವಣೆಯಗುವುದು:

ಮೇಲಿನ ಘಟನೆ ನಡೆದ ನಂತರವೇ, ಅಂದರೆ, ಕೃಷ್ಣೇಗೌಡ ಉಯ್ಯಾಲೆಯಾ ಮೇಲೆ ಕುಳಿತ ನಂತರ ಮಾತ್ರ ಕೃಷ್ಣೇಗೌಡನ ಮನಸ್ಸು ರಾಧೆಯ ಮನಸ್ಸಿನಂತೆ ಚಂಚಲವಾಗತೊಡಗುತ್ತದೆ. ಅಲ್ಲಿಯವರೆಗೂ ಅವನು ಕಾದಂಬರಿಯಲ್ಲಿ ಚಂಚಲಚಿತ್ತನಾಗಿ ಚಿತ್ರಿತನಾಗಿಲ್ಲ. ಈ ಘಟನೆಯಾದ ಮಾರನೆ ದಿನದಿಂದಲೇ ಕೃಷ್ಣೇಗೌಡನ ಮನಸ್ಸು “ಸ್ತ್ರೀ ರೂಪು ಎಂತಹ ಉಗ್ರ ತಪಸ್ವಿಯನ್ನಾದರೂ ತನ್ನ ಸೆಲೆಯಲ್ಲಿ ಸಿಕ್ಕಿಸಿಕೊಂಡು ನಿರಾಯಾಸವಾಗಿ ತೂಗುಯ್ಯಾಲೆಯಾಡಿಸುವಂತಿತ್ತು” ಎಂದು ಅಂದುಕೊಳ್ಳುತ್ತದೆ. ಇಲ್ಲಿಂದ ಮುಂದೆ ರಾಧೆಯಿಂದ ಆಕರ್ಷಿತ – ವಿಕರ್ಷಿತಗೊಳ್ಳುವ ಉಯ್ಯಾಲೆಯಾಗಿ ಕೃಷ್ಣೇಗೌಡನ ಮನಸ್ಸು ರಾಧೆಯನ್ನು ಮಾಡುವೆ ಮಾಡಿಕೊಳ್ಳುವುದೇ. ಸನ್ಯಾಸ ತೆಗೆದುಕೊಳ್ಳುವುದೇ ಎನ್ನುವವರೆಗೂ ಹೊಯ್ದಾಡುತ್ತದೆ.

ಉಯ್ಯಾಲೆ ಅಸ್ತವ್ಯಸ್ತ ಮನಸ್ಸಿನ ಸಂಕೇತವಾಗುವುದು:
ರಾಧೆಯ ಮಗಳು ಪ್ರಭಾವತಿ ಸತ್ತ ಮೇಲೆ ಕೃಷ್ಣೇಗೌಡನ ಕಡೆಗೆ ಮನಸ್ಸು ಸಂಪೂರ್ಣವಾಲಿದಾಗ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದಾಗ ಖಾಯಿಲೆ ಬಂದಾಗ ರಾಧೆಯ ಅಸ್ತವ್ಯಸ್ತ ಮನಸ್ಸಿನ ಸಂಕೇತವಾಗಿ ಉಯ್ಯಾಲೆ ಮಾರ್ಪಡುತ್ತದೆ.

ಉಯ್ಯಾಲೆಯ ಚಲನೆ ಭಾವದ ಚಲನೆಯ ಸಂಕೇತವಾಗುವುದು:
ಕುದುರೆ ಗಾಡಿಯಲ್ಲಿ, ರೈಲಿನಲ್ಲಿ ಪ್ರಯಾಣ ಮಾಡುವಾಗ (ಕೃಷ್ಣೇಗೌಡನ ಜೊತೆ) ರಾಧೆಯ ಮನಸ್ಸು ತೂಗುಯ್ಯಾಲೆಯಾದುವುದರ ಸಂಕೇತವಾಗುತ್ತದೆ.(ಪುಟ ೧೨೭)

೭. ಉಯ್ಯಾಲೆ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ನಿರ್ಧಾರಗಳ ನಡುವೆ ‘ತೂಗುಯ್ಯಾಲೆ’ಯಾಗುವುದು:

ಕೃಷ್ಣೇಗೌಡನ ಸಂಗದ ಹೋಗಿ ಬದುಕುವುದೇ ಅಥವಾ ಬಿಡುವುದೇ ಎಂಬ ನಿರ್ಧಾರ ತೆಗೆದುಕೊಳ್ಳುವಾಗ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ನಡುವಿನ ತೂಗುಯ್ಯಾಲೆಯಾಗುತ್ತದೆ.

“ಪರಪುರುಷನಾದ ಕೃಷ್ಣೇಗೌಡನ ಬಗೆಗೆ ತನ್ನಲ್ಲಿ ಅನುರಾಗ ಉದಯಿಸಿದಂತಿದೆ. ಆದರೆ ಸಮಾಜದ ಘೋರ ಸರಪಳಿಗಳಿಂದ ಬಂಧಿತಳಾದ ತನಗೆ ಇದನ್ನೊಪ್ಪುವುದೂ ಶಕ್ಯವಿಲ್ಲ. ಸಂಪ್ರದಾಯದ ಕರಾಳಮೇಘ ಈ ಪ್ರಣಯಾರುಣವನ್ನು ಯಶಸ್ವಿಯಾಗಿ ಕವಿದು ಮರೆಮಾಡಬಲ್ಲದು”(ಪುಟ ೧೪೧)

“ಸಂಸಾರ – ಇಷ್ಟ ಬಂದಾಗ ಕಳಚಿ ಇಡುವ, ಬೇಕಾದಾಗ ಕೈಗೆ ತೊಡುವ ಅಂದದ ಬಳೆಯಲ್ಲ, ಅದು ಜನ್ಮಜನ್ಮಾಂತರದ ವೈಶಿಷ್ಟ್ಯಪೂರ್ಣ ಸಂಬಂಧ. ಅದರಲ್ಲಿ ಎಷ್ಟೇ ಒಡಕಿದ್ದರೂ, ಅದರ ಬೆಚ್ಚಗಿನ ಆಶ್ರಯದಲ್ಲಿ ಹೇಗೋ ಕಾಲ ಹಾಕುವುದು ಶ್ರೇಯಸ್ಸು”(ಪುಟ ೨೫೦)

“ತಟ್ಟನೆ ಇನ್ನೊಂದು ವಿಚಾರ ಸುಳಿಯಿತು.

ಹೌದ ಕೃಷ್ಣೇಗೌಡನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆಯೇ?…ಹೇಗೆ ಹೇಳಲಿ?- ನನ್ನ ಚೇತನದಲ್ಲಿಯೇ ತನಗರಿವಿಲ್ಲದೆ ಅನೇಕ ವಿಷಯಗಳು ಸುಪ್ತವಾಗಿದ್ದು ಆಗಾಗ ಹೊರಗಿಣುಕಿ ನನ್ನನ್ನು ಸೋಜಿಗಗೊಳಿಸುತ್ತವೆ. ಹೀಗಿರುವಾಗ ಆತನನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳುವುದು ಹೇಗೆ? ಅಂದರೆ – ಒಂದು ಪಕ್ಷ ಅವನ ಜೊತೆಗೆ ನಾನು ಹೊರಟುಬಿಟ್ಟರೆ ನನಗೆ ಒಳ್ಳೆಯದೇ ಆಗುತ್ತದೆಂದು ಯಾವ ಭರವಸೆ ಇದೆ”(ಪುಟ ೨೮೪)

“ಏನಾದರೂ ಆಗಲಿ – ಎಷ್ಟು ಕಷ್ಟವಾದರೂ ಬರಲಿ – ಪ್ರೀತಿ ದೊಡ್ಡದು – ಆತನ ಜೊತೆಗೆ ಹೊರಟುಹೋಗಿ ಪ್ರತ್ಯೇಕವಾಗಿ ಬೇರೆ ಒಂದು ಮನೆ ಮಾಡಿಕೊಳ್ಳುವುದು.. ಹಾಗೆನಿಸಿದೊಡನೆಯೇ ಕೃಷ್ಣನ ರೂಮಿನತ್ತ ಗಕ್ಕನೆ ತಿರುಗಿದಳು. ಉಯ್ಯಾಲೆಯಲ್ಲಿ ಕುಳಿತಂತೆಯೇ….

ಆಗ ಮೂರು ತಿಂಗಳ ಗರ್ಭ – ತನ್ನ ಪತಿಯ ಪ್ರತಿರೂಪ”(ಪುಟ ೨೮೫)

ಕಾದಂಬರಿಯಲ್ಲಿ ಮೊದಲ ನೋಟಕ್ಕೆ ಎದ್ದು ಕಾಣುವ ಗುಣವೆಂದರೆ ಪಾತ್ರಗಳು ತಾವಾಗಿಯೇ ಬೆಳೆದು ಓದುಗನ ಮನಸ್ಸಿನಲ್ಲಿ ಒಂದು ನಿರ್ಣಯ ಮೂಡುವ ವೇಳೆಯಲ್ಲಿ ಬರಹಗಾರ ಹೊರಗಿನಿಂದ ಬಂದು ಪಾತ್ರಗಳ ಮೇಲೆ ತನ್ನ ಅನಿಸಿಕೆಗಳನ್ನು ಹೇರಿ ಹೋಗುವುದು. ಕಾದಂಬರಿಕಾರನ ಈ ಕ್ರಿಯೆ ಓದುಗರು ಮೂಡಿಸಿಕೊಳ್ಳಬಹುದಾದ ಚಿತ್ರಣವನ್ನು ಮೊಟಕುಗೊಳಿಸಿಬಿಡುತ್ತದೆ. ಉದಾಹರಣೆಗೆ–ರಾಧೆ ಮತ್ತು ಶೇಷಗಿರಿರಾಯರ ಪಾತ್ರ ಚಿತ್ರಣಗಳು ಓದುಗನ ಮನಸ್ಸಿನಲ್ಲಿ ಮೂಡುತ್ತಿರುವ ವೇಳೆಯಲ್ಲೇ ಲೇಖಕ ಪ್ರವೇಶವಾಗುವುದನ್ನು ಈ ಸಾಲುಗಳು ಸೂಚಿಸುತ್ತವೆ. “ಅಂತಲೂ ಈ ದಂಪತಿಗಳನ್ನು ನೋಡಿದ ಯಾರಾದರೂ ಪ್ರಥಮ ಪರಿಚಯದಲ್ಲೇ ರಾಧೆ – ಶೇಷಗಿರಿರಾಯ ಇಬ್ಬರೂ ಪರಸ್ಪರ ವಿರುದ್ಧ ಗುಣವುಳ್ಳವರು. ಇವರ ಜೊತೆ ಸರಿಯಲ್ಲ ಎಂದು ಹೇಳಿಬಿಡುವಂತಿತ್ತು. ಅವರ ಸಂಸಾರದ ಗಾಡಿಗೆ ಅವೆರಡು ಇಜ್ಜೋಡಿ ಎತ್ತುಗಳನ್ನು ಕುರುಡು ದೈವ ಕಾಣದೆ ಕಟ್ಟಿರಬೇಕು, ಎನಿಸುವಂತಿತು.” (ಪುಟ 54) ಇದರಿಂದ ಲೇಖಕರೇ ಪಾತ್ರ ಬೆಳವಣಿಗೆಯನ್ನು ‘ಟೈಪ್’ ಮಾಡಿ ತಮ್ಮ ತೀರ್ಮಾನವನ್ನು ಸೂತ್ರ ರೂಪದಲ್ಲಿ ಕೊಟ್ಟುಬಿಡುತ್ತಾರೆ. ಈ ರೀತಿ ಲೇಖಕರು ಹೊರಗಿನಿಂದ ಆಗಮಿಸಿ “ಉಯ್ಯಾಲೆ” ಸಂಕೇತವನ್ನು ಆಗಾಗ್ಗೆ ಓದುಗರಿಗೆ ಜ್ಞಾಪಿಸಿ ಕೊಡುತ್ತಾರೆ.

ಕಾದಂಬರಿಯ ಪಾತ್ರ ತನಗೆ ತಾನೇ ಸಾಭಾವಿಕವಾಗಿ ಬೆಳೆದುಕೊಂಡು ಹೋಗುವಾಗ ಅವು ಲೇಖಕನಿಗೆ ಅನೇಕ ರೀತಿಯ ಸವಾಲುಗಳನ್ನು ಒಡ್ಡುತ್ತವೆ. ಲೇಖಕನನ್ನು ಕಾಡಿಸುತ್ತವೆ. ಉಯ್ಯಾಲೆ ಕಾದಂಬರಿಯಲ್ಲಿ ಕಾದಂಬರಿಕಾರರಿಗೆ ಸವಾಲೊಡ್ಡಬೇಕಾದ ಸಮಸ್ಯೆಗಳು ಮತು ಪಾತ್ರಗಳು ಬಂದಾಗ ಲೇಖಕರು ಅವುಗಳನ್ನು ಸುಲಭದಲ್ಲಿ ನಿವಾರಿಸಿಕೊಂಡುಬಿಡುತ್ತಾರೆ. ಅಂದರೆ ಕಾದಂಬರಿಯ ಬೆಳವಣಿಗೆಯನ್ನು ಲೇಖಕರೇ ತಮ್ಮ ಹಿತಕ್ಕೆ ತೆಗೆದುಕೊಂಡುಬಿಡುತ್ತಾರೆ. ಉದಾಹರಣೆಗೆ ನಿಜವಾಗಿಯೂ ಸವಾಲೊಡ್ಡಬೇಕಾಗಿದ್ದ, ರಾಧೆಯಂತೆ ತೊಳಲಾಟವಿಲ್ಲದ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಬೆಳೆಯುವ ಸೂಚನೆಗಳನ್ನು ಬಲವಾಗಿ ಹೊಂದಿದ್ದ ರಾಧೆಯ ಮಗಳು-ಪ್ರಭಾವತಿಯನ್ನು-ಅಕಾಲಮರಣಕ್ಕೆ ತುತ್ತಾಗಿಸುವುದು.

ಈ ಪಾತ್ರವನ್ನಂತೂ ಕಥೆಗಾರರು ಬೇಂದ್ರೆಯವರ ‘ಕುಣಿಯೋಣು ಬಾರ? ಕವನದ ಸಹಾಯದಿಂದ ಅನ್ಯಪಠ್ಯ (intertextuals) ಸಾಂದರ್ಭಿಕತೆಯನ್ನು ಸೃಷ್ಟಿಸಿ ಬಹಳ ಚೆನ್ನಾಗಿ ಬೆಳೆಸಿರುತ್ತಾರೆ. ಆದರೆ ಈ ಪಾತ್ರ ಇನ್ನೂ ಬೆಳೆದಿದ್ದರೆ ಲೇಖಕರಿಗೆ ನಿಜವಾದ ಸವಾಲನ್ನೊಡುತ್ತಿತು. ಈ ಪಾತ್ರವನ್ನೂ ಸಾಯಿಸಿಬಿಡುವುದರಿಂದ ಲೇಖಕರು ಬಹಳ ಸಲೀಸಾಗಿ ಸವಾಲನ್ನು ನಿವಾರಿಸಿಕೊಂಡುಬಿಡುತ್ತಾರೆ. ಏಕೆಂದರೆ ಕಾದಂಬರಿಕಾರರು ಉಯ್ಯಾಲೆ” ಸಂಕೇತವನ್ನು ಕಾದಂಬರಿಯ ಕೊನೆಯವರೆಗೂ ಬಳಸಿಕೊಳ್ಳಬೇಕಾಗಿದೆ. ಮತ್ತು ಅದು ನಿರಂತರ ಎಂಬ ಸೂಚನೆಯನ್ನು ಕೊಡಬೇಕಾಗಿದೆ. ಈ ಪಾತ್ರ ನಿವಾರಣೆಗೆ ಇನ್ನೂ ಒಂದು ಕಾರಣ ಈ ರೀತಿ ಇದೆ. ಅದು, ರಾಧೆ ಕೃಷ್ಣೇಗೌಡರ ಪ್ರೀತಿಯ ಉತ್ಕಟತೆಗೆ ಮಗಳು ಅಡ್ಡ ಬರದಂತೆ ನೋಡಿಕೊಳ್ಳುವುದು ಲೇಖಕರ ಆಶಯವಾದಂತಿದೆ.

ಕಾದಂಬರಿಯ ಕೊನೆಯಲ್ಲಿ ಕೃಷ್ಟೇಗೌಡನ ಜೊತೆಯಲ್ಲಿ ಹೋಗಿಬಿಡಬೇಕೆ-ಬೇಡವೆ ಎಂಬ ಇತ್ಯಾತ್ಮಕ ಮತ್ತು ನೇತಾತ್ಮಕ ಹೊಯ್ದಾಟಗಳ ನಡುವೆ ಇದ್ದಾಗ ಮತ್ತೆ ರಾಧೆ ಶೇಷಗಿರಿರಾಯನಿಂದ ಎರಡು ತಿಂಗಳ ಗರ್ಭವತಿಯನ್ನಾಗಿಸಿಬಿಡುತ್ತಾರೆ. ಹೆಣ್ಣುಗಂಡಿನ ಪ್ರೀತಿಯ ಸಮಸ್ಯೆ ಸಾರ್ವಕಾಲಿಕ ಎಂಬುದನ್ನು ಸೂಚಿಸಲು ಬಹುಬೇಗ ಸುಲಭದಲ್ಲಿ ಈ ಸಮಸ್ಯೆಯನ್ನು ಪುನಃ ಆಹ್ವಾನಿಸಿಬಿಡುತ್ತಾರೆ. ‘ಉಯ್ಯಾಲೆ’ಯನ್ನೇ ಸಂಕೇತವಾಗಿ ನಿಲ್ಲಿಸಿಬಿಡುತಾರೆ. ಆದ್ದರಿಂದ ಈ ಕೃತಿಯಲ್ಲಿ ‘ಸಂಕೇತ’ವನ್ನು ಆಳವಾಗಿ ನೋಡಿದಾಗ ಒಂದು ತಂತ್ರವಾಗಿಯೇ ಉಳಿದುಬಿಡುತ್ತದೆ. ಕಾದಂಬರಿಯು ಬೆಳೆಯದೆ ಪ್ರಾರಂಭದಲ್ಲಿ ಯಾವ ರೀತಿ ಇರುತ್ತದೆಯೋ ಕೊನೆಯಲ್ಲೂ ಅದೇ ಜಾಗದಲ್ಲಿ ಉಳಿದುಬಿಡುತ್ತದೆ. “ಪ್ರೀತಿ ಇಲ್ಲದ ಮದುವೆ—ಮದುವೆ ಇಲ್ಲದ ಪ್ರೀತಿಯ” ಸಮಸ್ಯೆಯುಳ್ಳ ಟಾಲ್ಸಾಯ್ ಅವರ ‘ಅನ್ನಾಕರನೀನ’ (ಇದಕ್ಕೆ ಇನ್ನೂ ಬೇರೆ ಬೇರೆ ಆಯಾಮಗಳಿವೆ) ಕಾದಂಬರಿಯಲ್ಲಿ ಅನ್ನಾ ಮದುವೆಯ ನಂತರ ಪ್ರೀತಿಗೆ ಒಳಗಾಗಿ ಎದುರಿಸುವ ಸಮಸ್ಯೆ (ಇಲ್ಲಿಯಂತೆ ಗಂಡ-ಮಕ್ಕಳಿದ್ದು ) ಕೊನೆಗೆ ಸಾರ್ವತ್ರಿಕವಾಗುತ್ತ ಸಂಕೇತವೂ ಆಗುತ್ತಾ ಉತ್ತಮವಾಗಿ ಬೆಳೆಯುವುದನ್ನು ಗಮನಿಸಬಹುದು. ಉಯ್ಯಾಲೆ ಕಾದಂಬರಿಯಲ್ಲಿ ಸಂಕೇತವೇ ದೈತ್ಯವಾಗಿ ಬೆಳೆದು ಕಾದಂಬರಿಯ ಬೆಳವಣಿಗೆಯನ್ನು ತನ್ನ ಕಬಂಧಬಾಹುಗಳಿಂದ ಅದುಮಿ ಹಿಡಿದು ಕುಂಠಿತಗೊಳಿಸಿಯೂ ಬಿಡಬಹುದು ಎಂಬುದನ್ನು ಗಮನಿಸಬಹುದು.

ಇದಕ್ಕೆ ವಿರುದ್ಧವಾಗಿ ಇದೇ ಕಾದಂಬರಿಯಲ್ಲಿ ಲೇಖಕರು ಕೊಡುವ ಒಂದು ಪ್ರತಿಮೆ ಬೆಳೆಯುವ ರೀತಿಯನ್ನು ಗಮನಿಸಬಹುದು. “ಶೇಷಗಿರಿರಾಯ ಅಷ್ಟೇನೂ ಎತ್ತರವಿಲ್ಲದಿದ್ದರೂ, ದೃಢಕಾಯ, ಅಂತಹ ಸುರೂಪವೇನಲ್ಲದಿದ್ದರೂ ಕುರೂಪಿಯೇನಲ್ಲ, ಆದರೆ ಅವನ ಹಣೆಯಮೇಲೆ ಎಡಭಾಗದಲ್ಲಿದ್ದ ಮೂರುಕಾಸಿನಗಲದ ಸುಟ್ಟಗುರುತಿನ ಕಲೆ ಅವನ ಮುಖವನ್ನು ಸ್ವಲ್ಪಮಟ್ಟಿಗೆ ವಿಕಾರಗೊಳಿಸಿತ್ತು. ಅವನು ಕೋಪಾವಿಷ್ಟನಾದಾಗ ಇಲ್ಲವೆ ದುಃಖಭಾರದಿಂದ ಪರಿತಪಿಸಿದಾಗ ಶೇಷಗಿರಿರಾಯನ ಹಣೆಯ ಮೇಲಿನ ಸುಟ್ಟ ಗಾಯದ ಗುರುತು ಇನ್ನೂ ಅಗಲವಾಗಿ ಇನ್ನೂ ವಿಕಾರ ವಾಗಿ ಕಾಣುತ್ತಿತು-ರಾಧೆಯು ದೃಷ್ಟಿಗೆ.”

ಶೇಷಗಿರಿರಾಯನ “ಮೂರು ಕಾಸಿನಗಲದ ಸುಟ್ಟ ಗುರುತಿನ ಕಲೆ” ರಾಧೆ ಯೊಡನೆ, ಕೃಷ್ಟೇಗೌಡನೊಡನೆ, ಮಗಳು ಪ್ರಭಾವತಿಯೊಡನೆ ಪ್ರತಿಕ್ರಿಯಿಸುವಾಗಲೆಲ್ಲ ಹೇಗಾಗುತ್ತಿರಬಹುದೆಂದು ಓದುಗನಿಗೆ ಅನ್ನಿಸುತ್ತಲೇ ಶೇಷಗಿರಿರಾಯನ ಪಾತ್ರ ಹೆಚ್ಚುವರಿ ಪಡೆಯುವುದರಲ್ಲಿ, ಓದುಗನ ಗಮನ ಸೆಳೆಯುವುದರಲ್ಲಿ ಯಶಸ್ವಿಯಾದಂತೆ, ಈ ಕಾದಂಬರಿಯಲ್ಲಿ ಬರುವ ಸಂಕೇತ ಒಮ್ಮೆ ಒಗಟು ಬಿಡಿಸಿ ಓದುಗನಿಗೆ ಅರ್ಥವಾದಾಕ್ಷಣ ಮಾಯವಾಗಿ ಬಿಡುತ್ತದೆ ಎನಿಸುತ್ತದೆ. ಇಲ್ಲಿ ಒಂದು ಪ್ರತಿಮೆ ಪಡೆಯುವ ವೈಶಾಲ್ಯತೆಯನ್ನು, ಶಕ್ತಿಯನ್ನು ಕಾದಂಬರಿಯ ಸಂಕೇತ ಪಡೆಯುವುದರಲ್ಲಿ ಸೋಲುತ್ತದೆಯಲ್ಲವೇ?

ಕಾದಂಬರಿಯೊಳಗೆ ಲೇಖಕರಿಗೆ ಅಡ್ಡಬರಬೇಕಾಗಿದ್ದ ಮತ್ತೊಂದು ಸಮಸ್ಯೆ ಜಾತಿಪದ್ದತಿಯದು, ಇದನ್ನು ಕೂಡ ಲೇಖಕರು ಸುಲಭವಾಗಿ ಪರಿಹರಿಸಿಕೊಂಡುಬಿಟ್ಟಿದ್ದಾರೆ. ರಾಧೇ ಒಬ್ಬ ಶೂದ್ರನನ್ನು ತನ್ನೊಳಗೆ ಬರಮಾಡಿಕೊಳ್ಳುವ ಮೊದಲು ಆ ಪಾತ್ರ ಎಷ್ಟರಮಟ್ಟಿಗೆ ತಯಾರಿ ಮಾಡಿಕೊಂಡಿದೆ ಎಂಬುದು ಕಾದಂಬರಿಯಲ್ಲಿ ಇಲ್ಲ. ಕೃಷ್ಣೇಗೌಡನ ಪರಿಚಯವಾಗುವುದಕ್ಕೆ ಮುಂಚೆ ಶೂದ್ರರ ಬಗ್ಗೆ ರಾಧೆಗಿದ್ದ ಪ್ರಜ್ಞೆ ಕಾದಂಬರಿಯಲ್ಲಿ ಕಾಣುತ್ತದೆ. “ಶೇಷಗಿರಿರಾಯನ ಇತರ ಕಾಲೇಜಿನ ಬ್ರಾಹ್ಮಣೇತರ ಮಿತ್ರರ ಎಂಜಲೆಲೆ ಎತ್ತುವ ತಂಟೆಗೇ ಹೋಗುವುದಿಲ್ಲ .” (ಪುಟ ೮೫) ಎಂದು ಲೇಖಕರೇ ಕಾದಂಬರಿಯಲ್ಲಿ ಬಂದು ಹೇಳಿಬಿಡುತ್ತಾರೆ. ಕೃಷ್ಣೇಗೌಡನನ್ನು ಕಂಡಕೂಡಲೇ ಅವಳ ಭಾವ “ಥೇಟ್ ಬ್ರಾಹ್ಮಣನಂತೆಯೇ ಕಾಣುತ್ತಿರುವನಲ್ಲ” (ಪುಟ 84) ಎಂಬುದು. ಈ ಎರಡೂ ಅನಿಸಿಕೆಗಳು ಕಾದಂಬರಿಯಲ್ಲಿ ಪಕ್ಕಪಕ್ಕದಲ್ಲೇ ಬರುತ್ತವೆ. ಇದೇ ರೀತಿ ರಾಧೆ ಕೃಷ್ಟೇಗೌಡನ ಮನಸ್ಸಿನಲ್ಲಿಯೂ ಜಾತಿಯ ಭೇದಭಾವವಿಲ್ಲ ಎಂಬುದನ್ನು ತಕ್ಷಣ ಮೂಡಿಸುವುದರಲ್ಲಿ ಯಶಸ್ವಿಯಾಗಿ ಬಿಡುತ್ತಾಳೆ. “ಬ್ರಾಹ್ಮಣರು ಒಕ್ಕಲಿಗನಾದ ತನ್ನನ್ನು ಶೂದ್ರನೆಂದು ಕನಿಷ್ಟವಾಗಿ ಕಾಣುತ್ತಾರೆ. ಈಕೆ ಬ್ರಾಹ್ಮಣ ಕುಲದಲ್ಲಿ ಜನಿಸಿದವಳು. ಹಾಗಿದ್ದೂ ಭೇದ ತೋರಿಸದೆ ತನ್ನ ಎಂಜಲೆಲೆ ಎತ್ತುವಳಲ್ಲ.” (ಪುಟ 84)

ಅಂತೆಯೇ ರಾಧೆ ಕೃಷ್ಟೇಗೌಡನ ಮನೆಗೆ (ಶ್ರೀರಂಗಪಟ್ಟಣದಲ್ಲಿ) ಹೋದಾಗ ಬಹಳ ಸಲೀಸಾಗಿ ಅವರ ಮನೆಯಲ್ಲಿ ಒಂದಾಗಿಬಿಡುತ್ತಾಳೆ, ಎರಡನೇ ಬಾರಿ ಹೋದಾಗ ತಿರಸ್ಕೃತಳಾಗುವುದು (ಕೃಪ್ಲೇಗೌಡನ ತಾಯಿ ಮತ್ತು ತಂಗಿಯಿಂದ) ಬ್ರಾಹ್ಮಣ ಹೆಣ್ಣಾಗಿ ಅಲ್ಲ, ಕೃಷ್ಟೇಗೌಡನನ್ನು ಮರುಳು ಮಾಡಿದ ಹೆಣ್ಣಾಗಿ. ಇವೆಲ್ಲ ನಡೆಯುವುದು ಸ್ವಾತಂತ್ರಾಪೂರ್ವ ಸಮಾಜದಲ್ಲಿ ಎಂಬುದನ್ನು ಗಮನದಲ್ಲಿಡಬೇಕಾಗಿದೆ.

ಮೇಲೆ ಚರ್ಚಿಸಲಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡರೆ ಪ್ರಗತಿಶೀಲ ಪಂಥದ ಬರಹಗಾರರ ಗುಣ ಈ ಕಾದಂಬರಿಯಲ್ಲೂ ಎದು ಕಾಣುತ್ತದೆ. ಅದೆಂದರೆ ಕೃತಿಕಾರ ಪಾತ್ರಗಳ ಜಗತ್ತನ್ನು ಹೊಕ್ಕು ಅವುಗಳ ಜೀವನವನ್ನು ಕಾಣದೆ ಅವುಗಳನ್ನೂ ಕೃತಿಕಾರನ ಜಗತ್ತಿನಿಂದ ಹೊರಗೆ ನಿಂತು ಕಾಣುವುದು ಮತ್ತು ಮೇಲೆ ಚರ್ಚಿಸಿದ ಕಡೆಗಳಲ್ಲಿ ಅನುಭವದ ಸರಳೀಕರಣವೂ ಆಗಿಬಿಟ್ಟಿದೆ ಎನ್ನುವದು.

ಈ ಅಂಶಗಳನ್ನೊಳಗೊಂಡಿದ್ದೂ ಈ ಕಾದಂಬರಿ ಪ್ರಗತಿಶೀಲ ಬರಹಗಾರರ ಕೃತಿಗಳಿಗಿಂತ ಭಿನ್ನವಾಗಿದೆ ಎಂದು ಅನ್ನಿಸದೆ ಇರುವುದಿಲ್ಲ. ಪ್ರಗತಿಶೀಲರ ಕೃತಿಯಲ್ಲಾಗಿದ್ದರೆ ಇಲ್ಲಿಯ ಪಾತ್ರಗಳು ಸಂಪೂರ್ಣ ‘ಟೈಪ್’ ಆಗಿ ಬಂದುಬಿಡಬಹುದಾಗಿತ್ತು. ರಾಧೆಯು ಯಾವ ಅಡೆತಡೆ, ತೊಳಲಾಟಗಳು ಇಲ್ಲದೆ ಕೃಷ್ಣೇಗೌಡನ ಜೊತೆ ಓಡಿ ಹೋಗಿಬಿಡಬಹುದಾಗಿತ್ತು. ಆದರೆ ಚದುರಂಗರ ಕೈಯಲ್ಲಿ ರಾಧೆಯ ಪಾತ್ರ ಹೆಚ್ಚು ಸೂಕ್ಷ್ಮವಾಗಿಯೇ ಚಿತ್ರಿತವಾಗಿದೆ , ತೊಳಲಾಟವಾಗಿಯೇ ಉಳಿದುಕೊಂಡಿದೆ.

ನವ್ಯ ಸಾಹಿತ್ಯದ ಪ್ರಮುಖ ಧೋರಣೆಯಾದ ‘ವ್ಯಕ್ತಿ ಮುಖ್ಯ’ ಚಿತ್ರಣ ಈ ಕಾದಂಬರಿಯ ಉದ್ದಕ್ಕೂ ಕೆಲಸ ಮಾಡುತ್ತದೆ. ಪ್ರಶ್ನೆಗೆ ಪರಿಹಾರ ಒದಗಿಸಿ ಬಿಡದೆ ಪ್ರಶ್ನೆಯನ್ನು ತನ್ನ ಎಲ್ಲ ಕ್ಲಿಷ್ಟತೆಯ ಆಯಾಮಗಳಲ್ಲಿಯೂ ತೂಗಿನೋಡುವ ಗುಣ ಈ ಕಾದಂಬರಿಯಲ್ಲಿದೆ. 1960ರ ವರೆಗೆ ಬಂದಿದ್ದ ನವ್ಯ ಕಾವ್ಯ ಮತ್ತು ನವ್ಯದ ಸಣ್ಣಕಥೆಗಳಲ್ಲಿ ಪ್ರಯೋಗಿಸಲ್ಪಟ್ಟಂತಹ ಸಂಕೇತ ಪ್ರಾಧಾನ್ಯತೆಯನ್ನು ಕಾದಂಬರಿಗೆ, ಪ್ರಾಯಶಃ ಮೊದಲಿಗೆ ಅಳವಡಿಸಿದ್ದು , ಉಯ್ಯಾಲೆಯ ಕೆಲವು ಪ್ರಮುಖ ಗುಣಗಳಾದಂತೆಯೇ ನವ್ಯ ಕಾದಂಬರಿಯ ಪ್ರಕಾರಕ್ಕೆ ಓದುಗರನ್ನು ಬರಮಾಡಿಕೊಳ್ಳುವ , ಸಿದ್ದಪಡಿಸುವ ಕೆಲಸವನ್ನು ಮಾಡುತ್ತದೆ. ಇದನ್ನು ಈಕಾದಂಬರಿಯ ವಿಶ್ಲೇಷಣೆ ಸಿದ್ಧಪಡಿಸುತ್ತದೆ ಎಂದುಕೊಂಡಿದ್ದೇನೆ. ಏಕೆಂದರೆ ಉಯ್ಯಾಲೆಯ ಸಂಕೇತದ ಮೂಲಕ ಕಾದಂಬರಿಕಾರರ ಪ್ರಜ್ಞೆ ವಿವಿಧ ಸ್ತರಗಳಲ್ಲಿ ಕೆಲಸಮಾಡುವುದನ್ನು ಗಮನಿಸಬಹುದು.

ಈ ವಿಷಯದಲ್ಲಿ ಚದುರಂಗರು ಆ ಕಾಲಕ್ಕೆ ಕಾದಂಬರಿ ಓದುಗರಿಗಿದ್ದ ಅಭಿರುಚಿಗಿಂತ ಭಿನ್ನವಾದ ಅಭಿರುಚಿಯನನ್ನು ಬೆಳೆಸಿಕೊಳ್ಳುವಂತೆ ,ಆಗಲೇ ಕಾದಂಬರಿಯಲ್ಲಿ ಸ್ಥಾಪಿತವಾದ ಕೆಲವು ನಿಶ್ಚಿತ ಧೋರಣೆ ಮತ್ತು ಅನಿಸಿಕೆಗಳನ್ನು ಕಲಕಿರುವುದರಲ್ಲಿ ಅನುವಾನವಿಲ್ಲ ಮತ್ತು ಮುಂದೆ ಹುಟ್ಟಿದ ಸಾಂಕೇತಿಕ ನವ್ಯ ಕಾದಂಬರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಲ್ಲಿ ಒಂದು ಭೂಮಿಕೆ ಸೃಷ್ಟಿಸಿರುವ ಪ್ರಮುಖ ‘ಮೈನರ್’ ಬರಹಗಾರರಾಗಿ ಕಾಣುತ್ತಾರೆ.