ಬುಧವಾರ, ಏಪ್ರಿಲ್ 26, 2017

ವಿಶ್ವವಿದ್ಯಾಲಯಗಳನ್ನು ಪಳಗಿಸುವ ಪ್ರಯತ್ನಗಳು


ಅನು: ಶಿವಸುಂದರ್

university ಗೆ ಚಿತ್ರದ ಫಲಿತಾಂಶ


ಸಮಾಜ ವಿಜ್ನಾನ ಸಂಶೋಧನೆಗೆ ನಿಧಿ ಕಡಿತ ಮಾಡಿರುವುದು ದೂರದೃಷ್ಟಿ ಇಲ್ಲದ ಕ್ರಮ.


ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲೆ ಅದರಲ್ಲೂ ಅದರ ಸಮಾಜ ವಿಜ್ನಾನದ ಶಿಕ್ಷಣದ ಮೇಲೆ ಇದೀಗ ಮತ್ತೊಂದು ಪ್ರಹಾರ ನಡೆದಿದೆ. ವಿಶ್ವವಿದ್ಯಾಲಯ ಅನುದಾನ ಅಯೋಗ (ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್- ಯು.ಜಿ.ಸಿ)ವು ಸಮಾಜ ವಿಜ್ನಾನ ಶಿಕ್ಷಣಕ್ಕೆ ಕೊಡುತ್ತಿದ್ದ ಅನುದಾನವನ್ನು ಕಡಿತ ಮಾಡಿದೆ. ಪಂಚವಾರ್ಷಿಕ ಯೋಜನೆಗಳು ಸ್ಥಗಿತಗೊಂಡ ಮೇಲೆ  ೧೧ನೇ ಪಂಚವಾರ್ಷಿಕ ಯೋಜನೆಯಡಿ ಯುಜಿಸಿಯು ಸ್ಥಾಪಿಸಿದ್ದ ಹಲವಾರು ಸಮಾಜ ವಿಜ್ನಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಹಣಕಾಸಿನ ಕೊರತೆಯಿಂದ ಕೊನೆಯುಸಿರೆಳೆಯುತ್ತಿವೆ. ಈ ಸಂಸ್ಥೆಗಳಿಗೆ ಹಣಕಾಸು ಅನುದಾನ ನೀಡುವ ಬಗ್ಗೆ ಯುಜಿಸಿ ಯ ದ್ವಂದ್ವಾತ್ಮಕ ನಿಲುವುಗಳು ಹಲವಾರು ಅಧ್ಯಾಪಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಹಾಗೂ ಉದಯೋನ್ಮುಖವಾದ ಹಲವಾರು ಅಧ್ಯಯನ ಶಿಸ್ತು ಮತ್ತು ಸಂಕಥನಗಳ ಭವಿಷ್ಯಗಳನ್ನೇ ಪ್ರಶ್ನೆಗೊಳಪಡಿಸಿವೆ.

ಭಾರತದ ಹಲವಾರು ಪ್ರಮುಖ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹರಡಿಹೋಗಿರುವ ಈ ಸಂಶೋಧನಾ ಸಂಸ್ಥೆಗಳು ವಿವಿಧ ಮಟ್ಟಗಳಲ್ಲಿ ಯೋಜನಾ ಅನುದಾನವನ್ನೇ ನೆಚ್ಚಿಕೊಂಡಿವೆ. ಕೆಲವು ಕಡೆ ಈ ಸಂಸ್ಥೆಗಳನ್ನು ವಿಶ್ವವಿದ್ಯಾಲಯಗಳ ವಿಭಾಗಗಳನ್ನಾಗಿಸಲಾಗಿದೆ. ಇನ್ನೂ ಕೆಲವು ಕಡೆ ಅವು ರಾಜ್ಯ ಸರ್ಕಾರದ ಹಾಗು ಮತ್ತಿತರ ಮೂಲಗಳ ಹಣಕಾಸು ನೆರವನ್ನೇ ಆಧರಿಸಿವೆ. ಆದೇನೇ ಇದ್ದರೂ ಎಲ್ಲೆಲ್ಲಿ ಅವು ಸಂಪೂರ್ಣವಾಗಿ ಯೋಜನಾ ಅನುದಾನವನ್ನೇ ನೆಚ್ಚಿಕೊಂಡಿವೆಯೋ ಅಲ್ಲೆಲ್ಲಾ ಒಂದೋ ಮುಚ್ಚಿಹೋಗುವ ಅಥವಾ ಸಿಬ್ಬಂದಿ/ಸಾಮರ್ಥ್ಯ ಕಡಿತದ ಅಪಾಯವನ್ನು ಎದುರಿಸುತ್ತಿವೆ.

ಈ ಅನುದಾನದ ಕಡಿತದ ತತ್ಕ್ಷಣದ ಪರಿಣಾಮಗಳೇನೆಂಬ ಸೂಚನೆ ಹೋದ ತಿಂಗಳೇ ದೊರೆತಿತ್ತು. ಕಳೆದ ತಿಂಗಳು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆಯು ತನ್ನ ಆಡ್ವಾನ್ಸ್ಡ್ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ (ಮಹಿಳಾ ಅಧ್ಯಯನಗಳ ಉನ್ನತ ಕೇಂದ್ರ), ಸೆಂಟರ್ ಫಾರ್ ಸ್ಟಡಿಸ್ ಆಫ್ ಸೊಷಿಯಲ್ ಎಕ್ಸ್ಲೂಷನ್ ಅಂಡ್ ಇನ್ಕ್ಲೂಸೀವ್ ಪಾಲಿಸೀಸ್ (ಸಾಮಾಜಿಕ ಹೊರದೂಡುವಿಕೆ ಮತ್ತು ಒಳಗೊಳ್ಳುವಿಕೆ ನೀತಿಗಳ ಅಧ್ಯಯನ ಕೇಂದ್ರ), ನೋಡಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಫಾರ್ ಹ್ಯೂಮನ್ ರೈಟ್ ಎಜುಕೇಷನ್ (ಮಾನವ ಹಕ್ಕುಗಳ ಶಿಕ್ಷಣದ ಶ್ರೇಷ್ಠ ಸಂಯೋಜನಾ ಕೇಂದ್ರ)ಗಳ ಹಲವಾರು ಅಧ್ಯಾಪಕರು ಮತ್ತು ಸಂಶೋಧಕರಿಗೆ ಸೇವೆಯಿಂದ ಬಿಡುಗಡೆ ಮಾಡುವ ಪತ್ರಗಳನ್ನು ರವಾನಿಸಿತ್ತು. ಆದರೆ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ಬಂದ ಅಪಾರ ವಿಮರ್ಶೆಗಳಿಂದ ಮತ್ತು ಇತರ ಕಾರಣಗಳಿಂದ ಯುಜಿಸಿಯು ಯೋಜನಾ ಬಾಬತ್ತಿನಲ್ಲಿ ಅನುದಾನವನ್ನು ಪಡೆಯುತ್ತಿದ್ದ ಎಲ್ಲಾ ಯೋಜನೆಗಳನ್ನು ಒಂದು ವರ್ಷಗಳ ಕಾಲ ಅಂದರೆ ೨೦೧೮ರ ಮಾರ್ಚ್ ೩೧ರವರೆಗೆ ವಿಸ್ತರಿಸಿತು. ಹೀಗಾಗಿ ಟಾಟಾ ಸಾಮಾಜಿಕ ಅಧ್ಯಯನಗಳ ಸಂಸ್ಥೆಯೂ ಬಹುಪಾಲು ಅಧ್ಯಾಪಕರ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದುವರೆಸಿದೆ. ಈ ತುಂಡು ತುಂಡು ಕ್ರಮವು ಸದ್ಯದ ಹೋರಾಟಗಳನ್ನು ತಣ್ಣಗಾಗಿಸಿದ್ದರೂ ಇಂಥಾ ಕೇಂದ್ರಗಳ ದೀರ್ಘಕಾಲೀನ ಭವಿಷ್ಯವೇನು ಎಂಬ ಪ್ರಶ್ನೆಯನ್ನೇನು ಬಗೆಹರಿಸಿಲ್ಲ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು ೧೯೭೦ರ ಮೊದಲ ಭಾಗದಲ್ಲೇ ಸ್ಥಾಪಿತವಾಗಿದ್ದರೂ ಯುಜಿಸಿ ಅವಕ್ಕೆ ಅನುದಾನ ನೀಡಿದ್ದು ೧೯೮೦ರ ದಶಕದ ಮಧ್ಯಭಾಗದಲ್ಲಿ. ಹಾಗಿದ್ದರೂ ಇಂಥಾ ವಿಶೇಷ ಅಧ್ಯಯನ ಕೇಂದ್ರಗಳನ್ನು ಅಧ್ಯಾಪನ, ಸಂಶೋಧನೆ ಮತ್ತು ವಿಸ್ತರಣೆಗಳನ್ನು ಒಳಗೊಂಡಂಥ ಒಂದು ಪರಿಪೂರ್ಣ ವಿಭಾಗಗಳನ್ನಾಗಿ ಬೆಳೆಸಲು ಮತ್ತು ವಿಸ್ತರಿಸಲು ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಅಗತ್ಯವಿದೆಯೆಂದು ೧೧ನೇ ಪಂಚವಾರ್ಷಿಕ ಯೋಜನೆಯಲ್ಲಿ ಬಲವಾದ ಪ್ರತಿಪಾದನೆ ಮಾಡಲಾಗಿತ್ತು. ಉದಾಹರಣೆಗೆ ಮಹಿಳಾ ಅಧ್ಯಯನ ಕೇಂದ್ರಗಳಿಗೆ ಅಂತರ್ ಶಿಸ್ತೀಯ ಅಧ್ಯಯನ ಚೌಕಟ್ಟನ್ನು ಅಭಿವೃದ್ಧಿಪಡಿಸುವ, ಇತರ ಶಿಸ್ತುಗಳನ್ನು ಪರಿವರ್ತನೆ ಮಾಡುವಂಥಾ ದೃಷ್ಟಿಕೋನವನ್ನು ರೂಪಿಸುವ, ನೀತಿಗಳನ್ನು ರೂಪಿಸುವ ಮತ್ತು  ಸಂಶೋಧನೆಯಲ್ಲಿ ಮತ್ತು ನೀತಿಗಳಲ್ಲಿ  ದಲಿತ, ಆದಿವಾಸಿ, ದುಡಿಯುವ ಮತ್ತು ಧಾರ್ಮಿಕ ಸಮುದಾಯಗಳಿಗೆ ಸೇರಿದ ಮಹಿಳೆಯರು ಎದ್ದು ಕಾಣುವಂಥ ಅಧ್ಯಯನಗಳನ್ನು ರೂಪಿಸುವ ನಿರ್ದೇಶನಗಳನ್ನು ನೀಡಲಾಗಿತ್ತು. ಅಂಥಾ ಕೇಂದ್ರಗಳು ಹೊಸ ಅಂತರ್ ಶಿಸ್ತೀಯ ವಿಧಾನಗಳಿಂದ ಸಬಲರಾದ ಅಧ್ಯಾಪನಾ ಸಿಬ್ಬಂದಿಗಳೊಂದಿಗೆ ಜಾತಿ, ವರ್ಗ ಮತ್ತು ಲಿಂಗಸಂಬಂಧೀ ಅಧ್ಯಯನಗಳಲ್ಲಿ ಹೊಸ ಮತ್ತು ವಿಮರ್ಶಾತ್ಮಕ ಸಂಶೋಧನಾ ಕಾರ್ಯಸೂಚಿಗಳನ್ನೇ ಮುಂದಕ್ಕೆ ತಂದರು.

ಈ ಪತ್ರಿಕೆಯ ೨೦೦೨ರ ಡಿಸೆಂಬರ್ ೧೫ರ ಸಂಚಿಕೆಯಲ್ಲಿ ಸಮಾಜಶಾಸ್ತ್ರಜ್ನ ಗೋಪಾಲ್ ಗುರು ಅವರು  ಸಮಾಜ ವಿಜ್ನಾನಗಳು ಎಷ್ಟರಮಟ್ಟಿಗೆ ಆದರ್ಶಮಯವಾಗಿವೆ (ಹೌ ಎಗಿಲಟೇರಿಯನ್ ಆರ್ ದಿ ಸೊಷಿಯನ್ ಸೈನ್ಸಸ್) ಎಂದು ಪ್ರಶ್ನಿಸಿದ್ದರು. ಅವರು ನಮ್ಮ ಅಕಡೆಮಿಕ್ ಮತ್ತು ಸಾಂಸ್ಥಿಕ ರಚನೆಗಳ ಗುಣಲಕ್ಷಣಗಳಲ್ಲಿ ಅಡಕವಾಗಿರುವ ಸಾಂಸ್ಕೃತಿಕ ಶ್ರೇಣೀಕರಣಗಳನ್ನು ಖಂಡಿಸಿದ್ದಲ್ಲದೆ ನಮ್ಮ ಸಮಾಜ ವಿಜ್ನಾನಗಳ ಪರಿಕಲ್ಪನಾತ್ಮಕ ಕಾಣ್ಕೆಗಳ ಸಾಮಾಜಿಕ ತಳಹದಿಯನ್ನೇ ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದರು. ನಿರ್ದಿಷ್ಟವಾಗಿ ಇಂಥಾ ಅಕೆಡೆಮಿಕ್ ವಾತಾವರಣದಲ್ಲಿಯೇ ಈ ಕೇಂದ್ರಗಳು ಸ್ಥಾಪಿತಗೊಂಡು ತಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ್ದವು. ಅವು ಸಾಂಪ್ರದಾಯಿಕ ಸಮಾಜ ಶಾಸ್ತ್ರೀಯ ಶಿಸ್ತುಗಳಿಗೆ ಮತ್ತು ವಿದ್ವತ್ತುಗಳ ಜ್ನಾನ ಮೀಮಾಂಸೆಗಳಿಗೆ ಸವಾಲು ಹಾಕಿದವು.  ಸಿದ್ಧಾಂತ ಮತ್ತು ಆಚರಣೆ, ರಚನೆ ಮತ್ತು ಏಜೆನ್ಸಿ ಮತ್ತು ಎಡ ಮತ್ತು ಬಲಪಂಥೀಯ ರಾಜಕೀಯಗಳೆಂಬ, ಆವರೆಗೆ ಚಾಲ್ತಿಯಲ್ಲಿದ್ದ ಧ್ರೃವೀಕೃತ ಇಬ್ಬಗೆ ಪರಿಕಲ್ಪನೆಗಳನ್ನು ಮತ್ತೊಮ್ಮೆ ಪರೀಕ್ಷೆಗೊಡ್ಡಿದವು. ಉದಾಹರಣೆಗೆ ಪುಣೆಯ ಕ್ರಾಂತಿಜ್ಯೋತಿ ಸಾವಿತ್ರಿಭಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರವು ಈವರೆಗೆ ಕೇವಲ ಅಧ್ಯಯನಗಳ ವಸ್ತುವಾಗಿದ್ದ ಅಲಕ್ಷಿತ ಸಮುದಾಯಗಳ ವಿದ್ವಾಂಸರನ್ನು ಒಳಗೊಳ್ಳಲು ಬೇಕಾಗುವ ಪರ್ಯಾಯ ಶಿಕ್ಷಣಶಾಸ್ತ್ರ ಮತ್ತು ಸಂಪನ್ಮೂಲಗಳನ್ನು ಒಟ್ಟುಮಾಡಿತು.

ಈಬಗೆಯ ಅಂತರ್ಶಿಸ್ತೀಯ ಕೇಂದ್ರಗಳು ಸ್ಥಾಪನೆಯಾಗುತ್ತಿರುವ ಕಾಲದಲ್ಲೇ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಮೀಸಲಾತಿ ಕಾಯಿದೆ-೨೦೦೬ ಕೂಡ ಜಾರಿಗೆ ಬಂದಿತ್ತು. ಇದರಿಂದಾಗಿ ೨೦೦೭ರಿಂದ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ಜಾತಿಗಳ ಮೀಸಲಾತಿಯೂ ಜಾರಿಗೆ ಬಂದಿತು ಮತ್ತು ಒಟ್ಟಾರೆಯಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯು ಹೆಚ್ಚಿತು. ಈ ಮೀಸಲಾತಿಯು ಉನ್ನತ ಶಿಕ್ಷಣದಲ್ಲಿನ ವಿದ್ಯಾರ್ಥಿ ಸಮುದಾಯದ ಹಿನ್ನೆಲಗಳ ವೈವಿಧ್ಯತೆಯನ್ನು ವಿಸ್ತರಿಸಿತು. ಹೊಸದಾಗಿ ಸ್ಥಾಪಿತವಾದ ಈ ಸಂಸ್ಥೆಗಳು ಜಾತಿ, ಪಿತೃಪ್ರಾಧಾನ್ಯತೆ, ಮುಖ್ಯಧಾರೆ ಸಂಕಥನಗಳನ್ನು ಮತ್ತು ಪ್ರಭುತ್ವ ದಮನಗಳನ್ನು ಪ್ರಶ್ನಿಸಲು ಬೇಕಾದ ಸೈದ್ಧಾಂತಿಕ ಪ್ರೇರಣೆಯನ್ನು ಒದಗಿಸಿತು. ಇದು ಜಸ್ಟೀಸ್ ಫಾರ್ ರೋಹಿತ್ ವೇಮುಲ (ದಮನಿತ ಸಮುದಾಯಗಳು ಎದುರಿಸುವ ಸಾಂಸ್ಥಿಕ ತಾರತಮ್ಯಗಳ ವಿರುದ್ಧ), ಪಿಂಜಿರಾ ಥೋಡ್ (ವಿದ್ಯಾರ್ಥಿನಿ ನಿಲಯಗಳಲ್ಲಿ ಮತ್ತು ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿನಿಯರು ಮಾತ್ರ ಎದುರಿಸುವ ಲಿಂಗ ತಾರತಮ್ಯ ಮತ್ತು  ಕಣ್ಗಾವಲುಗಳ ವಿರುದ್ಧ), ಹೋಕ್ ಕೋಲೋರೋಬ್ (ಜಾಧವ್ಪುರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಎದುರಿಸಬೇಕಾಗಿಬಂದ ಲೈಂಗಿಕ ಕಿರುಕುಳದ ವಿರುದ್ಧ), ಮದ್ರಾಸಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳು ಕಟ್ಟಿಕೊಂಡಿದ್ದ  ಅಂಬೇಡ್ಕರ್ ಸ್ಟಡಿ ಸರ್ಕಲ್ಗೆ ಆಡಳಿತ ಮಂಡಳಿ ಮಾನ್ಯತೆ ರದ್ದುಪಡಿಸಿದರ ವಿರುದ್ಧದ ವಿದ್ಯಾರ್ಥಿಗಳು ರಚಿಸಿಕೊಂಡ ವಿದ್ಯಾರ್ಥಿ ಗುಂಪುಗಳಂಥಾ ಹೊಸ ವಿದ್ಯಾರ್ಥಿ  ಗುಂಪುಗಳು ಹೆಚ್ಚಿನ ರೀತಿಯಲ್ಲಿ ಪ್ರಸರಣವಾಗುತ್ತಿರುವುದಕ್ಕೆ ಕೂಡಾ ಒಂದು ಕಾರಣವಾಗಿದೆ. ಈ ಚಳವಳಿಗಳು ಇಂದು ವಿದ್ಯಾರ್ಥಿ ರಾಜಕಾರಣದಲ್ಲಿ ಮತ್ತು ಪ್ರತಿಪಾದನೆಗಳಲ್ಲಿ ಲಿಂಗ ಮತ್ತು ಜಾತಿ ಸಂಬಂಧೀ ಸಂಗತಿಗಳನ್ನು ಮುನ್ನೆಲೆಗೆ ತಂದಿವೆ, ಅಸ್ಥಿತ್ವದಲ್ಲಿರುವ ವಿದ್ಯಾರ್ಥಿ ಸಂಘಗಳ ನಾಯಕತ್ವವನ್ನೂ ಮತ್ತು ಸಂಘಟನಾ ತತ್ವಗಳನ್ನು ಪ್ರಶ್ನಿಸಿವೆ, ಮತ್ತು ಅವು ತಮಗೆಂದೇ ಒಂದು ಪ್ರತ್ಯೇಕ ಸ್ವಾಯತ್ತ ಎಡೆಯೊಂದನ್ನು ಗಳಿಸಿಕೊಂಡಿರುವುದಲ್ಲದೆ ಇತರ ಕೇಂದ್ರೀಯ ಮತ್ತು ರಾಜ್ಯ ವಿಶ್ವದ್ಯಾಲಯಗಳ ವಿದ್ಯಾರ್ಥಿಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಮೈತ್ರಿ ಮತ್ತು  ಸಹಕಾರವನ್ನು ರೂಢಿಸಿಕೊಂಡಿವೆ.

ಸಮಾಜವಿಜ್ನಾನ ಸಂಸ್ಥೆಗಳಿಗೆ ನೀಡಲಾಗಿರುವ ಈ ಒಂದು ವರ್ಷದ ವಿಸ್ತರಣೆ ವಿದ್ಯಾರ್ಥಿಗಳು-ಅಧ್ಯಾಪಕ ಸಿಬ್ಬಂದಿಗಳು ಹಾಗು ಯುಜಿಸಿಯ ನಡುವಿನ ಬಿಕ್ಕಟ್ಟಿನಲ್ಲಿ ಒದಗಿಬಂದಿರುವ ಒಂದು ತಾತ್ಕಾಲಿಕ ಪರಿಹಾರವಷ್ಟೇ ಆಗಿದೆ. ಆದರೆ ಇನ್ನೂ ಹೆಚ್ಚಿನ ಸಮಾನತೆ ಮತ್ತು ಪ್ರಾತಿನಿಧ್ಯಗಳ ಪರವಾಗಿರುವಂತೆ ಅಸ್ಥಿತ್ವದಲ್ಲಿರುವ ಶೈಕ್ಷಣಿಕ ಸಂಕಥನಗಳನ್ನು ಮತ್ತು ಸಂಸ್ಥೆಗಳನ್ನು ಮಾರ್ಪಾಡು ಮಾಡಬಯಸುವ ವಿಮರ್ಶಾತ್ಮಕ ಸಂಶೋಧನಾ ಕಾರ್ಯಸೂಚಿಗಳು ನಿಜವಾದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಇಂಥಾ ಸಂಶೋಧನಾ ಕಾರ್ಯಸೂಚಿಗಳನ್ನು ಯೋಜನಾ ಅವಧಿ  ಮುಗಿದುಹೋದರೂ ಪ್ರಭುತ್ವವೇ ನೇರ ಅನುದಾನಗಳ ಮೂಲಕ ರಕ್ಷಿಸ್ಸಬೇಕು. ಇಂಥಾ ಸಂಸ್ಥೆಗಳು ಅತ್ಯಂತ ಅಲಕ್ಷಿತ ಸಮುದಾಯಕ್ಕೆ ಸಂಬಂಧಪಟ್ಟ ಮತ್ತು ಅಲಕ್ಷಿತ ಸಮುದಾಯಗಳೇ ಸೃಷ್ಟಿಸುವ ಜ್ನಾನವನ್ನು ಒಳಗೊಳ್ಳುವುದರಿಂದ ಅವುಗಳ ಅಸ್ಥಿತ್ವ ಮತ್ತು ವಿಸ್ತರಣೆಗಳು ವಿಶ್ವವಿದ್ಯಾಲಯಗಳನ್ನು ಬೌದ್ಧಿಕವಾಗಿ ಇನ್ನಷ್ಟು ಸಂಪದ್ಭರಿತಗೊಳಿಸುತ್ತವೆ. ಹಾಗೆ ಮಾಡುವ ಮೂಲಕ ಅವು ಸಾಂಪ್ರದಾಯಿಕ ಕಲಿಕಾ ಪದ್ಧತಿಗಳಿಗೆ ಸವಾಲು ಹಾಕುವುದಲ್ಲದೆ, ಮತ್ತಷ್ಟು ವಿಮರ್ಶಾತ್ಮಕವಾಗಿ ನೋಡುವುದಕ್ಕೂ ಮತ್ತು ತಿಳಿಯುವುದಕ್ಕೂ ವಿದ್ಯಾರ್ಥಿಗಳ ಮನಸ್ಸನ್ನು ಮುಕ್ತಗೊಳಿಸುತ್ತದೆ. ಒಂದು ವಿಶ್ವವಿದ್ಯಾಲಯ ಮತ್ತು ಒಟ್ಟಾರೆಯಾಗಿ ಶಿಕ್ಷಣ ಮಾಡಬೇಕಿರುವುದು ಇದನ್ನೇ ಅಲ್ಲವೇ?

 ಕೃಪೆ: Economic and Political Weekly  
April 22, 2017. Vol.52. No.16


ಬುಧವಾರ, ಏಪ್ರಿಲ್ 19, 2017

ಸಾಲಮನ್ನಾಗಳು ಕೃಷಿ ಬಿಕ್ಕಟ್ಟನ್ನು ನಿವಾರಿಸುವ ಸಂಜೀವಿನಿಯಲ್ಲ


 ಅನುಶಿವಸುಂದರ್
ಕೃಷಿ ಸಾಲ ಗೆ ಚಿತ್ರದ ಫಲಿತಾಂಶ

ಆಳವಾಗಿ ಬೇರುಬಿಟ್ಟಿರುವ ಭಾರತದ ರೈತಾಪಿಯ ಸಮಸ್ಯೆಗಳನ್ನು ಸಾಲರದ್ಧತಿಗಳು ಮಾತ್ರ ಬಗೆಹರಿಸುವುದಿಲ್ಲ.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ, ಮುಂಗಾರು ಮಳೆಗಳ ವೈಪರೀತ್ಯ ಮತ್ತು ಅದರಿಂದ ಸಂಭವಿಸುವ ಬರ ಅಥವಾ ನೆರೆ-ಪ್ರವಾಹ, ಅಥವಾ ಅಪಾರ ಸಂಖ್ಯೆಯಲ್ಲಿ ರೈತಾಪಿಯನ್ನು ಮತ್ತು  ರೈತ ಕೂಲಿಗಳನ್ನು ಬೀದಿಪಾಲು ಮಾಡುವ ಬೆಳೆ ವೈಫಲ್ಯ ಇತ್ಯಾದಿಗಳು ಇಂದಿಗೂ ಅನುದಿನದ ಸಂಗತಿಗಳಾಗಿಯೇ ಮುಂದುವರೆದಿವೆ. ನಿಜ ಹೇಳಬೇಕೆಂದರೆ ವರ್ಷಗಳು ಕಳೆದಂತೆ ಕೃಷಿ ಬಿಕ್ಕಟ್ಟು ಇನ್ನೂ ಆಗೊಳ್ಳುತ್ತಲೇ ಸಾಗಿದೆವ್ಯವಸ್ಥೆಯೊಳಗಿನ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸಲು ಬೇಕಾದ ಕೃಷಿ ನೀತಿಯೇ ಇಲ್ಲದಿರುವುದರಿಂದ ಗ್ರಾಮೀಣ ಭಾರತ ತೀರದ ಬವಣೆಗೀಡಾಗಿದೆ. ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿಭಟನೆ ಮಾಡುತ್ತಿರುವ ತಮಿಳುನಾಡಿನ ರೈತರು ಇತೀಚೆಗೆ ಸತ್ತ ಹಾವುಗಳನ್ನು ಮತ್ತು ಇಲಿಗಳನ್ನು ತಮ್ಮ ಬಾಯಲ್ಲಿ ಕಚ್ಚಿಕೊಂಡು (ಹಸಿವನ್ನು ನೀಗಿಸಿಕೊಳ್ಳಲು ತಮ್ಮ ಹೊಲಗದ್ದೆಗಳಲ್ಲಿ ಉಳಿದಿರುವುದು ಅವುಗಳಷ್ಟೇ ಎಂದು ತೋರಿಸಿಕೊಡುತ್ತಾ), ದಾರಿದ್ರ್ಯದಿಂದ ಸಾವನ್ನಪ್ಪಿದ ತಮ್ಮ ನಿಕಟ ಬಂಧುಗಳ ತಲೆಬುರುಡೆಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಚಿತ್ರಗಳು ಕೃಷಿ ಬಿಕ್ಕಟ್ಟು ಎಷ್ಟು ಆಳವಾಗುತ್ತಿದೆ ಎಂಬುದನ್ನು ತಿಳಿಯಪಡಿಸುತ್ತದೆ.

ನೈರುತ್ಯ ಮಾರುತವು ಭಾರತದ ಬಹುಪಾಲು ಕಡೆಗಳಲ್ಲಿ ಒಳ್ಳೆಯ ಮಳೆಯನ್ನು ತಂದಿದ್ದರೂ ಈಶಾನ್ಯ ಮಾರುತದ ವೈಫಲ್ಯದಿಂದಾಗಿ ಈಗಾಗಲೇ ಸತತ ಎರಡು ಬರವನ್ನು ಎದುರಿಸಿರುವ ಭಾರತದ ಹಲವು ಪ್ರದೇಶಗಳು ತೀವ್ರ ಕ್ಷಾಮದ ಪರಿಸ್ಥಿತಿಯನ್ನು ಅನುಭವಿಸಬೇಕಾಗಿದೆ. ಕೇಂದ್ರ ಸರ್ಕಾರವು ಎಂಟು ರಾಜ್ಯಗಳನ್ನು- ಕೇರಳ, ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಖಂಡ್ ಮತ್ತು ಮಧ್ಯಪ್ರದೇಶ-ಬರ ಪೀಡಿತ ರಾಜ್ಯಗಳೆಂದು ಘೋಷಿಸಿದೆ. ೨೦೧೭ರ ಜನವರಿಯಲ್ಲಿ ತಮಿಳು ನಾಡು ಸರ್ಕಾರವು ಇಡೀ ರಾಜ್ಯವೇ ಬರಪೀಡಿತವೆಂದು ಘೋಷಿಸಿ ಸಣ್ಣ ಮತ್ತು ಮಧ್ಯಮ ರೈತರು (ಇವರು ರಾಜ್ಯದ ರೈತಾಪಿಯ ಶೇ.೯೨ ರಷ್ಟಾಗುತ್ತಾರೆ) ಸಹಕಾರಿ ಬ್ಯಾಂಕುಗಳಿಂದ ಮಾಡಿದ್ದ ಸಾಲವನ್ನೆಲ್ಲಾ ಮನ್ನಾ ಮಾಡಿತು. ನಂತರ, ತಮಿಳುನಾಡು ಉಚ್ಚನ್ಯಾಯಾಲಯವು ಸಹಕಾರಿ ಬ್ಯಾಂಕುಗಳಲ್ಲಿ ರಾಜ್ಯದ ಎಲ್ಲಾ ಬಗೆಯ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಲು ಆದೇಶಿಸಿತು. (ಸಹಕಾರಿ ಬ್ಯಾಂಕುಗಳು ರೈತಾಪಿಗೆ ಕೊಡುವ ಸಾಲದ ಶೇ. ೩೦ ರಷ್ಟು  ಸಾಲವನ್ನು ದೊಡ್ಡ ರೈತಾಪಿಯು ಪಡೆದುಕೊಳ್ಳುತ್ತಾರೆ). ಈಗ ತಮಿಳುನಾಡು ರೈತರು ತಾವು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾಡಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸುತ್ತಿರುವುದಲ್ಲದೇ ಬೆಳೆ ವೈಫಲ್ಯಕ್ಕೆ ಸೂಕ್ತವಾದ ಪರಿಹಾರವನ್ನು ನೀಡಬೇಕೆಂದೂ ಕೇಳುತ್ತಿದ್ದಾರೆ. ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ಉತ್ತರ ಪ್ರದೇಶ ಸರ್ಕಾರವು ರೈತಾಪಿಯ ಕೃಷಿ ಸಾಲವನ್ನು ರದ್ದು ಮಾಡುವುದಾಗಿ ಘೋಷಿಸಿದೆ. ಇದರಿಂದ ಉತ್ತರ ಪ್ರದೇಶದ ಸರ್ಕಾರಕ್ಕೆ ೩೬,೩೫೯ ಕೋಟಿಯಷ್ಟು ಹೆಚ್ಚುವರಿ ವೆಚ್ಚವಾಗಲಿದೆ

ಕ್ರಮಗಳು ರೈತಾಪಿಗೆ ಸ್ವಲ್ಪ ಪರಿಹಾರವನ್ನು ನೀಡುವುದು ನಿಜವಾದರೂ ಇವ್ಯಾವುದೂ ಆಳವಾಗಿ ಬೇರುಬಿಟ್ಟಿರುವ ಕೃಷಿ ಬಿಕ್ಕಟ್ಟಿಗಾಗಲೀ, ಗ್ರಾಮೀಣ ಭಾರತ ಎದುರಿಸುತ್ತಿರುವ ಸಾಲದ ಭಾರಗಳಿಗಾಗಲೀ ಯಾವುದೇ ರೀತಿಯ ಸಂಜೀವಿನಿಯನ್ನೇನೂ ಒದಗಿಸುವುದಿಲ್ಲ. ಸಾಲಮನ್ನಾಗಳು ಹೆಚ್ಚೆಂದರೆ ಒಂದು ತುರ್ತಿಸ್ಥಿತಿಯನ್ನು ಎದುರಿಸಲು ಬೇಕಾದ ತಕ್ಷಣದ ಕಾರ್ಯಕ್ರಮವಷ್ಟೇ ಆಗಿರುತ್ತದೆ. ೨೦೦೮ರಲ್ಲಿ ಯುಪಿಎ ಸರ್ಕಾರವು ದೊಡ್ಡ ಮಟ್ಟದ ಸಾಲಮನ್ನಾ ಕಾರ್ಯಕ್ರಮವನ್ನು ಜಾರಿಮಾಡಿತು. ಭಾರತದ ಬೊಕ್ಕಸಕ್ಕೆ ೭೦,೦೦೦ ಕೋಟಿಗೂ ಹೆಚ್ಚು ವೆಚ್ಚವನ್ನು ಹೊರಿಸಿದ ಕ್ರಮದ ಅನುಭವ ಏನು ಹೇಳುತ್ತದೆ? ಕೆಲವೊಮ್ಮೆ ಅನಿವಾರ್ಯವಾಗುವ ಇಂಥಾ ಕ್ರಮಗಳು ಸಾಲದ ಹೊರೆಯಿಂದ ಭಾಗಶಃ ಮಾತ್ರ ವಿಮುಕ್ತಗೊಳಿಸುವ ಮತ್ತು ಒಂದು ಬಾರಿ ಮಾತ್ರ ಕೈಗೊಳ್ಳಬಹುದಾದ ಕ್ರಮವಷ್ಟೇ ಆಗಿದ್ದು ಮತ್ತೆ ಮತ್ತೆ ಮರುಕಳಿಸುವ ವ್ಯಾಪಕ ಗ್ರಾಮೀಣ ಸಾಲದ ಭಾರವನ್ನು ತಡೆಯುವಲ್ಲಿ ಏನನ್ನೂ ಮಾಡುವುದಿಲ್ಲ.

ಸಾಮಾನ್ಯವಾಗಿ ಬಾಯಿಯನ್ನೇ ಬಿಚ್ಚದ ರಿಸರ್ವ ಬ್ಯಾಂಕಿನ ಗವರ್ನರ್ ಮತ್ತು ನಬಾರ್ಡ್ ಮುಖ್ಯಸ್ಥರು ವಿಷಯದಲ್ಲಿ ಸ್ವಪ್ರೇರಿತರಾಗಿ ಹೇಳಿಕೆಯನ್ನು ನೀಡಿದ್ದಾರೆ. ಸಾಲ ಮನ್ನಾಗಳು ಪ್ರಾಮಾಣಿಕ ಸುಸ್ತಿದಾರರು ತಮ್ಮ ಸಾಲವನ್ನು ಮರು ಪಾವತಿ ಮಾಡದಿರುವಂತೆ ನಿರುತ್ತೇಜನಗೊಳಿಸಿಬಿಡುವ ನೈತಿಕ ಅವಘಡವನ್ನು ಉಂಟುಮಾಡಬಹುದೆಂದು ಅವರು ಎಚ್ಚರಿಸಿದ್ದಾರೆ. ಇದರ ಜೊತೆಗೆ ಸಾಲಮನ್ನಾಗಳು ಮರುಪಾವತಿ ಶಿಸ್ತನ್ನು ಕಡೆಗಣಿಸುವುದರಿಂದ ಸರ್ಕಾರದ ಋಣಭಾರ ಹೆಚಿಸುತ್ತದೆಂದೂ ಮತ್ತದು ಇತರರ ಸಾಲದ ವೆಚ್ಚವನ್ನು ಹೆಚ್ಚು ಮಾಡಿ ಕೊನೆಗೆ ರಾಷ್ಟ್ರದ ಬ್ಯಾಲೆನ್ಸ್ ಶೀಟ್ ಮೇಲೆಯೇ ಪ್ರಭಾವ ಬೀರಬಹುದು ಎಂದು ಕೂಡಾ ಅವರಿಬ್ಬರೂ ಎಚ್ಚರಿಸಿದ್ದಾರೆ.

ವಿಷಯ ಸರಳವಾಗಿದೆ. ನೈತಿಕ ಅವಘಡವೋ ಮತ್ತೊಂದೋ ಒತ್ತಟ್ಟಿಗಿರಲಿ. ರಾಜಕಾರಣಿಗಳು ಸಾಲಮನ್ನಾಗಳು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. ೨೦೦೯ರಲ್ಲಿ ಯುಪಿಎ ಸರ್ಕಾರ ಸಾಲಮನ್ನಾ ಮಾಡದೇ ಹೋಗಿದ್ದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲವೆಂದು ಕೆಲವರು ವಾದಿಸುತ್ತಾರೆ. ಕೃಷಿ ಸಾಲಮನ್ನಾಗಳು ಮತ್ತು ಸಬ್ಸಿಡಿಗಳು ಗ್ರಾಮಿಣ ಪ್ರದೇಶದ ಬಡವರಿಗೆ ಯಾವುದೇ ರೀತಿಯ ಲಾಭವನ್ನೂ ತರುವುದಿಲ್ಲ. ನಿಜ ಹೇಳಬೇಕೆಂದರೆ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಅತಂತ್ರರಾಗಿರುವ ಸಣ್ಣ ಮತ್ತು ಭೂಹೀನ ರೈತಾಪಿಯ ಋಣಭಾರವನ್ನು ಸಾಲಮನ್ನಾಗಳು ಯಾವುದೇ ರೀತಿಯಿಂದಲೂ ಕಡಿಮೆ ಮಾಡುವುದಿಲ್ಲ. ಅತಂತ್ರ ರೈತರನ್ನು ಬ್ಯಾಂಕುಗಳು ಸಾಲ ಪಡೆಯಲು ಅನರ್ಹರೆಂದು ಪರಿಗಣಿಸುವುದರಿಂದ ಅವರಿಗೆ ಸಾಂಸ್ಥಿಕ ಮೂಲಗಳಿಂದ ಸಾಲಗಳು ದೊರೆಯುವುದೇ ಇಲ್ಲ. ಅವರು ತಮ್ಮ ಸಾಲದ ಅಗತ್ಯಗಳಿಗೆ ಅತಿ ಹೆಚ್ಚು ಬಡ್ಡಿದರವನ್ನು ವಿಧಿಸುವ ಬಡ್ಡಿ ವ್ಯಾಪಾರಸ್ಥರನ್ನೇ ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ. ಸಬ್ಸೀಡಿ ಲಭ್ಯತೆಯಲ್ಲಿ ತಾರತಮ್ಯ, ಭೂ ಹಿಡುವಳಿಗಳಲ್ಲಿ ಅಸಮಾನತೆ, ಮತ್ತು ಹಾದಿತಪ್ಪಿರುವ ಸರ್ಕಾರಿ ಬೆಂಬಲಿತ ಕೃಷಿ ವಿಸ್ತರಣಾ ಕಾರ್ಯಕ್ರಮಗಳನ್ನೂ ಒಳಗೊಂಡಂತೆ  ಭಾರತದ ಆರ್ಥಿಕತೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ಕೃಷಿ ಬಿಕ್ಕಟ್ಟನ್ನು ಸಾಲಮನ್ನಾಗಳು ಉದ್ಧರಿಸುವುದಿಲ್ಲ.

ಮತ್ತೊಂದೆಡೆ ಕೃಷಿ ಬಿಕ್ಕಟ್ಟು ಮುಂದುವರೆದಿರುವುದು ಮಾತ್ರವಲ್ಲ, ಇನ್ನಷ್ಟು ಬಿಗಡಾಯಿಸಿದೆ. ಹವಾಮಾನ ಬದಲಾವಣೆ ಮತ್ತು ಅತಿರೇಕದ ವಾತಾವರಣ ವೈಪರೀತ್ಯಗಳು ರೈತಾಪಿಯ ಆತಂಕಗಳನ್ನು ಮತ್ತಷ್ಟು ಹೆಚ್ಚಿಸಿದೆ. ಮೇಲ್ಮೈ ನೀರಾವರಿ ಮತ್ತು ಮಳೆಕೊಯ್ಲುಗಳಲ್ಲಿ ಗುಣಮಟ್ಟದ ಬಂಡವಾಳ ಹೂಡಿಕೆಯ ಕೊರತೆಗಳು ಸವಾಲಾಗಿ ಪರಿಣಮಿಸಿವೆ. ಇದರಿಂದಾಗಿ ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲವೇ ನೀರಾವರಿಯ ಪ್ರಧಾನ ಮೂಲವಾಗಿಬಿಡುತ್ತಿದೆ. ಈಗಲೂ ದೇಶದ ಅರ್ಧಕ್ಕೂ ಹೆಚ್ಚಿನ ಬೆಳೆ ಬೆಳೆಯುವ ಪ್ರದೇಶಗಳಿಗೆ ವಿಶ್ವಾಸಾರ್ಹ ನೀರಾವರಿ ಮೂಲಗಳಿಲ್ಲ. ಬರಪೀಡಿತ ಎಂದು ಘೋಷಿಸಲಾದ ಎಂಟು ರಾಜ್ಯಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಉದ್ಯೋಗದ ದಿನಗಳನ್ನು ೧೫೦ಕ್ಕೆ ಹೆಚ್ಚಿಸಬೇಕೆಂದು ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹವಾದುದು. ನೀರನ್ನು ಸಂರಕ್ಷಿಸುವ, ನೀರಾವರಿಯನ್ನು ಸುಧಾರಿಸುವ ಮತ್ತು ಬರದಂಥ ಪರಿಸ್ಥಿತಿಯನ್ನು ತಡೆಗಟ್ಟುವಂಥ ಸಮುದಾಯ ಸಂಪತ್ತುಗಳನ್ನು ತ್ವರಿತವಾಗಿ  ಸೃಷ್ಟಿಸಬೇಕಿದೆ.

ಭಾರತೀಯ ರೈತರ ಬ್ಯಾಲೆನ್ಸ್ ಶೀಟು ಅಸ್ತವ್ಯಸ್ತವಾಗಿರುವುದಕ್ಕೆ ಇನ್ನೂ ಹತ್ತುಹಲವು ಕಾರಣಗಳಿವೆ. ಒಂದೆಡೆ ಉತ್ಪಾದನೆಯ ವೆಚ್ಚ ಹೆಚ್ಚುತ್ತಿದ್ದರೂ ಆದಾಯ ಕಡಿಮೆಯಾಗುತ್ತಿರುವುದು ಮಾತ್ರವಲ್ಲ ಅನಿಶ್ಚಿತವೂ ಆಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿಶ್ವ ಮಾರುಕಟ್ಟೆಯಲ್ಲೂ ಸಹ ಕೃಷಿ ಉತ್ಪನ್ನಗಳ ಮಾರುಕಟ್ಟೆ ಅತ್ಯಂತ ದೋಷಯುಕ್ತವಾಗಿದೆ ಮತ್ತು ಭಯಂಕರ ಏರುಪೇರುಗಳಿಂದ ಕೂಡಿದೆ. ಕುಸಿಯುತ್ತಿರುವ ಕೃಷಿ ಆದಾಯ ಮತ್ತು ಗ್ರಾಮೀಣ ರೈತಾಪಿಯ ಸಾಲಗಳನ್ನು ಹಿನ್ನೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ವ್ಯವಸ್ಥೆಯ ಒಳಗೇ ಬೇರುಬಿಟ್ಟಿರುವ ಸಮಸ್ಯೆಗಳನ್ನು ನಿವಾರಿಸಲು ಸಮಗ್ರ ಪ್ರಯತ್ನಗಳನ್ನು ಮಾಡದೇ ವಿಷಚಕ್ರವನ್ನು ಬೇಧಿಸಲು ಸಾಧ್ಯವಿಲ್ಲ. ಸಾಲಮನ್ನಾಗಳು ಹೆಚ್ಚೆಂದರೆ ಗಾಯಕ್ಕೆ ಮುಲಾಮನ್ನು-ಬ್ಯಾಂಡೇಜನ್ನು ಹಚ್ಚಬಲ್ಲವು. ಅವು ತಾತ್ಕಾಲಿಕ ಪರಿಹಾರಗಳನ್ನಷ್ಟೇ ನೀಡಬಲ್ಲವು. ಹೀಗಾಗಿ ಶಾಶ್ವತ ಪರಿಹಾರದ ಕಡೆ ಈಗಲಾದರೂ ಗಮನ ನೀಡಬೇಕಿದೆ.
 ಕೃಪೆ: Economic and Political Weekly
   April 15, 2017. Vol. 52. No. 15
                                                                                               



ಸಿರಿಯಾ ಬಗ್ಗೆ ಅಮೆರಿಕದ ಭಂಡ ನೀತಿಗಳು


 ಅನುಶಿವಸುಂದರ್  
siria ಗೆ ಚಿತ್ರದ ಫಲಿತಾಂಶ

ಸಿರಿಯಾದಲ್ಲಿ  ಅಮೆರಿಕದ ಮಾಡುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಸಲಫಿ ಜೆಹಾದಿ ಶಕ್ತಿಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದಷ್ಟೆ.

ಸಾಮ್ರಾಜ್ಯವಾದವು ಯಾವಾಗಲೂ ಮಾನವತಾವಾದವೆಂಬ ನೈತಿಕ ನಿಲುವಂಗಿಯನ್ನು ಧರಿಸಿರುತ್ತದೆ. ಹೀಗಾಗಿ ಸೈನಿಕ ಕಾರ್ಯಾಚರಣೆಗಳ ಮಾರ್ಗವನ್ನು, ಜನಾಂಗೀಯವಾದವನ್ನು, ಭಾವೋನ್ಮಾದದ ದೇಶಪ್ರೇಮಗಳನ್ನು ಸದಾ ಪ್ರತಿಪಾದಿಸುವ ಅಮೆರಿಕದ ಅಧ್ಯಕ್ಷ ಟ್ರಂಪ್ ಸಹಕಾಲಾನುಕಾಲದಿಂದ ಅಮೆರಿಕ ಸಾಮ್ರಾಜ್ಯವಾದವು ಯಶಸ್ವಿಯಾಗಿ ಬಳಸಿಕೊಂಡುಬಂದಿರುವ ನೈತಿಕ ಬಾವುಟವನ್ನು ಪ್ರದರ್ಶಿಸುವ ಮೂಲಕ ತನ್ನ ಯುದ್ಧಕೋರ ನೀತಿಗೆ ಉಭಯಪಕ್ಷದ ಸಮ್ಮತಿಯನ್ನು ದಕ್ಕಿಸಿಕೊಂಡುಬಿಟ್ಟರು. ವಿಷಯವೇನೆಂದರೆ ೧೯೬೧-೭೧ರ ಅವಧಿಯಲ್ಲಿ ವಿಯೆಟ್ನಾಮ್ ಮೇಲೆ ಅಮೆರಿಕದ ನಡೆಸಿದ ದುರಾಕ್ರಮಣದಲ್ಲಿ ಆಪರೇಷನ್ ರಾಂಚ್ ಹ್ಯಾಂಡ್   ಭಾಗವಾಗಿ ಅಮೆರಿಕ ಏಜೆಂಟ್ ಆರೆಂಜ್ ಅನ್ನು ಬಳಸಿದ್ದನ್ನು ಈಗ ಯಾರೂ ನೆನಪಿಸಿಕೊಳ್ಳಬಾರದಷ್ಟೆ! (ಏಜೆಂಟ್ ಆರೆಂಜ್ ಎಂಬುದು ಒಂದು ಸಸ್ಯನಾಶಕ ರಾಸಾಯನಿಕ. ಅಮೆರಿಕವು ಇದನ್ನು ವಿಯೆಟ್ನಾಂ ಮೇಲೆ ನಡೆಸಿದ ಆಕ್ರಮಣದಲ್ಲಿ ಬಳಸಿತು. ಇದರಿಂದ ವಿಯೆಟ್ನಾಂನ  ೪೦ ಲಕ್ಷಕ್ಕೂ ಹೆಚ್ಚು ಅಮಾಯಕ ನಾಗರೀಕರು ಹಲವು ಬಗೆಯ ಖಾಯಿಲೆಗಳಿಗೆ ತುತ್ತಾಗಿದ್ದು ಮಾತ್ರವಲ್ಲದೆ . ಲಕ್ಷ ಹೆಕ್ಟೇರಿನಷ್ಟು ಕಾಡು ಸಹ ನಾಶವಾಗಿ ಅಪಾರ ಪರಿಸರ ಅಸಮತೋಲನವನ್ನೂ ಉಂಟಾಯಿತು- ಅನುವಾದಕನ ಟಿಪ್ಪಣಿ ). ತನ್ನ ಕ್ರಮಗಳನ್ನು ಸಮಥಿಸಿಕೊಳ್ಳಲು ಅಮೆರಿಕದ ರಾಷ್ಟ್ರಾಧ್ಯಕ್ಷರ ಕಛೇರಿ ಮಾಡಬೇಕಿರುವುದಿಷ್ಟೆ. ಯಾವುದೇ ನಿಷ್ಪಕ್ಷಪಾತ ತನಿಖೆಗೆ ಅಥವಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯದೆ, ಸಿರಿಯಾ ದೇಶವು ಒಂದು ರಾಸಾಯನಿಕ ಶಸ್ತ್ರಾಸ್ತ್ರ ದಾಳಿಗೆ ತಯಾರಾಗುತ್ತಿತ್ತೆಂದು ಏಕಪಕ್ಷೀಯವಾಗಿ ಘೋಷಿಸಿಬಿಡುವುದುಹಾಗೂ ಅಪರಾಧದ ಬಗ್ಗೆ ತನ್ನ ತೀರ್ಪನ್ನು ಕಾರ್ಪೊರೇಟ್ ಮಾಧ್ಯಮಗಳಲ್ಲಿ ಆದಷ್ಟು ವಿಸ್ತಾರವಗಿ ಬಿತ್ತರಿಸಿ ಆದಷ್ಟು ಬೇಗ ಶಿಕ್ಷೆಯನ್ನು ಜಾರಿಗೊಳಿಸುವುದು.

ಕಳೆದ ಆರು ವರ್ಷಗಳಿಂದ ಸಿರಿಯಾದಲ್ಲಿ ಅಂತರ್ಯುದ್ಧ ನಡೆಯುತ್ತಿದ್ದು ಇದೇ ಏಪ್ರಿಲ್ ರಂದು ಬಂಡುಕೋರರ ಹಿಡಿತದಲ್ಲಿರುವ ಇದ್ಲಿಬ್ ಪ್ರಾಂತ್ಯದ ಖಾನ್ ಶೆಕೌನ್ ಪಟ್ಟಣದ ಮೇಲೆ ಒಂದು ರಾಸಾಯನಿಕ ಅಸ್ತ್ರದ ದಾಳಿ ನಡೆಯಿತು. ತತ್ ತಕ್ಷಣವೇ ವೈಟ್ಹೌಸ್ ಕಛೇರಿಯು ದಾಳಿಯ ಹೊಣೆಯನ್ನು ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸಾದ್ ಅವರ ಮೇಲೆ ಹೊರಿಸಿ ತೀವ್ರವಾಗಿ ಖಂಡಿಸಿತು. ಹೆಚ್ಚೂಕಡಿಮೆ ಇಡೀ ಜಾಗತಿಕ ರಾಜಕೀಯ ವ್ಯವಸ್ಥೆ ಮತ್ತು ಮಾಧ್ಯಮಗಳು ಸಿರಿಯಾ ಸರ್ಕಾರವನ್ನೇ ಅಪರಾಧಿಯೆಂದು ತೀರ್ಮಾನಿಸಿ ಖಂಡತುಂಡವಾಗಿ ಖಂಡಿಸಿದವು. ಮರುದಿನ ಅಧ್ಯಕ್ಷ ಟ್ರಂಪ್ ಅವರು ವಿಷಾನಿಲ ಸೇವನೆಯಿಂದ ಉಸಿರುಗಟ್ಟಿ ಸತ್ತ ಅಮಾಯಕ ಮಕ್ಕಳ ಬೀಭತ್ಸ ದೃಶ್ಯಗಳನ್ನು ನೋಡಿ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಲ್ಲದೆ ಸಿರಿಯಾ ಹದ್ದುಮೀರಿದೆಯೆಂದು ಘೋಷಿಸಿದರು. ಕೂಡಲೇ ಟ್ರಂಪ್ ಅವರು ಇದರ ವಿರುದ್ಧ ಯಾವ ಬಗೆಯ ಸೈನಿಕ ಕಾರ್ಯಾಚರಣೆಯನ್ನು ಕೈಗೊಳ್ಳಬಹುದೆಂಬ ಬಗ್ಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯನ್ನು ಕರೆದರು. ಮರುದಿನವೇ ಮೆಡಿಟರೇನಿಯನ್ ಸಮದ್ರದಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಎರಡು ಯುದ್ಧ ನೌಕೆಗಳು ಹಾಮ್ಸ್ ಪಟ್ಟಣದ ಸಮೀಪವಿರುವ ಸಿರಿಯಾದ ಶಾಯರತ್ ಸೈನಿಕ ನೆಲೆಯ ಮೇಲೆ ೫೯ ಕ್ರೂಸ್ ಕ್ಷಿಪಣಿ ದಾಳಿಗಳನ್ನು ನಡೆಸಿತು.

ತಮ್ಮ ಸರ್ಕಾರವೇ ರಾಸಾಯನಿಕ ಅಸ್ತ್ರ ದಾಳಿ ಮಾಡಿತು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಿರಿಯಾದ ವಿದೇಶಾಂಗ ಮಂತ್ರಿ ವಲ್ಲಿದಾಲ್ ಮುವಲ್ಲೆಮ್ ಅವರು  ನಮ್ಮ ಸರ್ಕಾರ ನಮ್ಮ ಜನರ ಮೇಲೆ ದಾಳಿ ಮಾಡುತ್ತಿರುವ ಭಯೋತ್ಪಾದಕರ ಮೇಲೆ ಕೂಡಾ ಎಂದಿಗೂ ರಾಸಾಯನಿಕ ಅಸ್ತ್ರಗಳಿಂದ ದಾಳಿ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರೂ ಅಧಿಕಾರಸ್ಥರೂ ಮತ್ತು ವ್ಯವಸ್ಥಾಪರ ಮಾಧ್ಯಮಗಳು ಹೇಳಿಕೆಗೆ ಕವಡೆ ಕಿಮ್ಮತ್ತನ್ನೂ ನೀಡಲಿಲ್ಲ. ಬದಲಿಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹೇಲಿಯವರ ಹೇಳಿಕೆಗೆ ಮಾಧ್ಯಮಗಳು ವಿಸ್ತೃತವಾದ ಪ್ರಚಾರ ನೀಡಿದವು. ಆಕೆ ನೀಡಿದ ಹೇಳಿಕೆಯ ಸಾರವೇನೆಂದರೆ ಸಿರಿಯಾದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಸಾಮೂಹಿಕವಾಗಿ ಕ್ರಮ ತೆಗೆದುಕೊಳ್ಳುವ ಕರ್ತವ್ಯವನ್ನು ಪಾಲಿಸದೇ ಇದ್ದಾಗ ಅದರ ವಿರುದ್ಧ ಏಕಪಕ್ಷೀಯವಾಗಿ ಯುದ್ಧ ನಡೆಸುವ ಹಕ್ಕು ಅಮೆರಿಕಕ್ಕಿದೆ ಎನ್ನುವುದಾಗಿತ್ತು. ನಿರೀಕ್ಷೆಯಂತೆ ಅಮೆರಿಕದ ಇಡೀ ರಾಜಕೀಯ ವ್ಯವಸ್ಥೆ ಮತ್ತು ಕಾರ್ಪೊರೇಟ್ ಮಾಧ್ಯಮಗಳು ಸಿರಿಯಾದ ಮೇಲೆ ದಾಳಿ ನಡೆಸಿದ್ದಕ್ಕೆ ಟ್ರಂಪ್ ಸರ್ಕಾರವನ್ನು ಕೊಂಡಾಡಿದವು. ಈವರೆಗೆ ಟ್ರಂಪ್ ಸರ್ಕಾರವನ್ನು ಸದಾ ಜರೆಯುತ್ತಿದ್ದ ಸಿಎನ್ಎನ್ ವಾಹಿನಿಯ ಅತ್ಯಂತ ಜನಪ್ರಿಯ ವಿದೇಶ ವ್ಯವಹಾರಗಳ ಕಾರ್ಯಕ್ರಮವನ್ನು ನಡೆಸಿಕೊಡುವ ಫರೀದ್ ಝಕಾರಿಯಾ ಅಂತೂ ಸಿರಿಯಾ ಮೇಲೆ ಕ್ರೂಸ್ ಕ್ಷಿಪಣಿ ದಾಳಿ ಮಾಡುವ ಮೂಲಕ ಟ್ರಂಪ್ ಅವರು ನಿಜಕ್ಕೂ ಅಮೆರಿಕದ ಅಧ್ಯಕ್ಷರಾದರು ಎಂದು ಬಣ್ಣಿಸಿಬಿಟ್ಟರು.

ನಿಜ ಹೇಳಬೇಕೆಂದರೆ ಅಮೆರಿಕದ ಸಾಮ್ರಾಜ್ಯವಾದವು ಈವರೆಗೆ ಆಡುತ್ತಲೇ ಬಂದ ಅದೇ ಹಳೆಯ ನಾಟಕವೇ ಇದೀಗ ಸಣ್ಣ ರಂಗಮಂಚವೊಂದರಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳುತ್ತಿದೆ. ಅಪಾರ ತೈಲ ಸಂಪತ್ತಿನ ಒಡೆಯನಾಗಿದ್ದ ಇರಾಕ್ ಮೇಲೆ ೧೯೯೧ರಲ್ಲಿ ಅಮೆರಿಕ ನಡೆಸಿದ ಯುದ್ಧಕ್ಕೆ ಕಾರಣ ಇರಾಕೀ ಸೈನ್ಯವು ಕುವೈತ್ ಜನರ ಮೇಲೆ ನಡೆಸಬಹುದಾಗಿದ್ದ  ಅತ್ಯಾಚಾರಗಳನ್ನು ತಡೆಯುವುದೇ ಆಗಿತ್ತು. ೧೯೯೯ರಲ್ಲಿ ನ್ಯಾಟೋ ಪಡೆಗಳು ಯುಗೋಸ್ಲಾವಿಯಾದ ಮೇಲೆ ನಡೆಸಿದ ದಾಳಿಯನ್ನು ದೇಶದ ಅಧ್ಯಕ್ಷ ಸ್ಲೊಬೊಡಾನ್ ಮಿಲಿಸೋವಿಚ್ ತನ್ನ ದೇಶದ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ನಡೆಸಬೇಕೆಂದುಕೊಂಡಿದ್ದ ಜನಾಂಗೀಯ ನರಹತ್ಯೆಯನ್ನು ತಡೆಯಬೇಕಾಗಿತ್ತೆಂಬ ಕಾರಣವೊಡ್ಡಿ ಎಂದು ಸಮರ್ಥಿಸಿಕೊಳ್ಳಲಾಗಿತ್ತು. ೨೦೦೧ರಲ್ಲಿ ಅಫ್ಘಾನಿಸ್ತಾನದ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ದೇಶದ ತಾಲಿಬಾನ್ ಆಡಳಿತವು ೨೦೦೧ ಸೆಪ್ಟೆಂಬರ್ ೧೧ರ ದಾಳಿಕೋರರಿಗೆ ಆಶ್ರಯ ನೀಡಿತ್ತೆಂಬ ಕಾರಣವೊಡ್ಡಿ ಸಮರ್ಥಿಸಿಕೊಳ್ಳಲಾಯಿತು. ೨೦೦೩ರಲ್ಲಿ ಇರಾಕ್ ಮೇಲೆ ನಡೆಸಿದ ದಾಳಿಯನ್ನು ದೇಶದ ಅಧ್ಯಕ್ಷ ಸದ್ದಾಂ ಹುಸೇನ್ ಬಳಿ ಸಮೂಹ ವಿನಾಶಕ ಶಸ್ತ್ರಾಸ್ತ್ರ ಗಳಿತ್ತೆಂಬ ಕಾರಣವೊಡ್ಡಿ ಸಮರ್ಥಿಸಿಕೊಳ್ಳಲಾಯಿತು. ೨೦೧೧ರಲ್ಲಿ ನ್ಯಾಟೋ ಪಡೆಗಳು ಲಿಬ್ಯಾದ ಮೇಲೆ ನಡೆಸಿದ ದಾಳಿಗೆ  ಮತ್ತವರ ಇಸ್ಲಾಮಿಕ್ ಕೈಗೊಂಬೆ ಪಡೆಗಳು ಅಧ್ಯಕ್ಷ ಗದಾಫಿಯನ್ನು ಕೊಂದುಹಾಕಿದ್ದಕ್ಕೆಬೆಂಗಾಜಿಯಲ್ಲಿ ಗದಾಫಿ ಪಡೆಗಳು ಮಾಡಲು ಯೋಜಿಸಿದ್ದ ಸಾಮೂಹಿಕ ನರಹತ್ಯೆಯನ್ನು ತಡೆಯಬೇಕಾಗಿತ್ತೆಂಬ ನೈತಿಕ ಸಮರ್ಥನೆಯನ್ನು ನೀಡಲಾಯಿತು.

ತನ್ನ ಜಾಗತಿಕ ಮಹತ್ವಾಕಾಂಕ್ಷೆಯನ್ನು ಸಾಧಿಸಿಕೊಳ್ಳಲು ಅಮೆರಿಕವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಹಣಕಾಸು, ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿ ತಮ್ಮ ಪರವಾಗಿ ಅವರನ್ನು ಎತ್ತಿಕಟ್ಟುತ್ತಿರುವುದರಲ್ಲಿ ದೀರ್ಘಕಾಲದಿಂದ ಒಂದು ಸ್ಪಷ್ಟವಾದ ಪದ್ಧತಿಯನ್ನು ಅನುಸರಿಸುತ್ತಿದೆ. ೧೯೫೦ರಲ್ಲಿ ಅರಬ್ ರಾಷ್ಟ್ರೀಯವಾದಿಗಳ ವಿರುದ್ಧ ಅಮೆರಿಕದ ಸಿಐಎ ಯುಮುಸ್ಲಿಂ ಬ್ರದರ್ಹುಡ್ ಜೊತೆ ಒಂದಾಗಿದ್ದು ಮತ್ತು ೧೯೮೦ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಮುಜಾಹಿದ್ದೀನ್ಗಳಿಗೆ ಅಮೆರಿಕ ಶಸ್ತ್ರಾಸ್ತ್ರ ಬೆಂಬಲವನ್ನು ನೀಡಿದ್ದು ತಕ್ಷಣಕ್ಕೆ ನೆನಪಿಗೆ ಬರುತ್ತದೆ. ಅದೇ ಬಗೆಯ ಕುತಂತ್ರವನ್ನು ಇದೀಗ ಆರುವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಜರ್ಝರಿತವಾಗಿರುವ ಸಿರಿಯಾದಲ್ಲಿ ಅಮೆರಿಕ ಪ್ರಯೋಗಿಸುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಸುನ್ನಿ ಇಸ್ಲಾಮಿನ ಒಂದು ಪಂಥವಾಗಿರುವ, ಅತ್ಯಂತ ಸಂಪ್ರದಾಯವಾದಿ ಮತ್ತು ಅತ್ಯಂತ  ಪರಿಶುದ್ಧ ಇಸ್ಲಾಮನ್ನು ಪ್ರತಿಪಾದಿಸುವ ಮತ್ತು ಸೌದಿ ಅರೇಬಿಯಾದ ಪ್ರಭುತ್ವ ಧರ್ಮವಾದ ವಹಾಬಿವಾದದ ವಿಸ್ತರಣೆಯ ಆಕಾಂಕ್ಷೆಗಳೇ ಸಲಾಫಿ ಜಿಹಾದಿ ಗುಂಪುಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಮತ್ತು ಅಲ್ಖೈದಾಗಳಿಗೆ ಮತ್ತು ಇರಾಕ್ ಮತ್ತು ಸಿರಿಯಾದಲ್ಲಿರುವ ಅವರ ಸಹವರ್ತಿಗಳಿಗೆ ಸ್ಪೂರ್ತಿ ನೀಡುವ ಮತೀಯ ಸೆಲೆಗಳಾಗಿವೆ. ಉದಾಹರಣೆಗೆ, ಇಂದು ಸಿರಿಯಾದಲ್ಲಿ ಅಸ್ಸಾದ್ ಅವರ ಆಳ್ವಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಅಲ್ಖೈದಾದ ಜಭಾತ್ ಅಲ್ ನುಸ್ರಾ ಬಂಡುಕೋರರ ಬೆನ್ನಿಗೆ ಅಮೆರಿಕದ ಸಿಐಎ ಇದೆ

ಸಮಸ್ಯೆ ಕೇವಲ ವಹಾಬಿವಾದದ್ದಲ್ಲ. ಬದಲಿಗೆ ಅಮೆರಿಕದ ಸಾಮ್ರಾಜ್ಯವಾದದ ಸಂಕುಚಿತ ಗುರಿಗಳನ್ನು ಈಡೇರಿಸಿಕೊಳ್ಳಲು ಇಂಥಾ ಸಲಾಫಿ ಜಿಹಾದಿ ಗುಂಪುಗಳಿಗೆ ನೀಡಲಾಗುತ್ತಿರುವ ಬೆಂಬಲವೂ ಸಹ ದೊಡ್ಡ ಸಮಸ್ಯೆಯೇ. ಸಿರಿಯಾದಲ್ಲಿ ಅಮೆರಿಕಾ ಸಾಮ್ರಾಜ್ಯವಾದದ  ಕೈಗೊಂಬೆಗಳಾಗಿ ವರ್ತಿಸುತ್ತಿರುವ ಸಲಾಫಿ ಜೆಹಾದಿ ಮಿಲಿಷಿಯಾಗಳಿಗೆ ಅಮೆರಿಕ, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ಸರ್ಕಾರಗಳು ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕೆಂದು ಈಗಲಾದರೂ ವಿಶ್ವಸಂಸ್ಥೆಯು ದೇಶಗಳಿಗೆ ತಾಕೀತು ಮಾಡಬೇಕಿದೆ. ಇಂದು ಸಿರಿಯಾ ಎದುರಿಸುತ್ತಿರುವ ತಲ್ಲಣ ಮತ್ತು ಅದರಿಂದ ಉದ್ಭವಿಸಿರುವ ೨೧ನೇ ಶತಮಾನದ  ಅತ್ಯಂತ ದಾರುಣವಾದ ನಿರಾಶ್ರಿತರ ಸಮಸ್ಯೆಗಳ ಕುರಿತಾದ ಯಾವುದೇ ಪ್ರಾಮಾಣಿಕ ವಿಶ್ಲೇಷಣೆಯು ವಿದ್ಯಮಾನಗಳ ಮೂಲ ಇಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಟ್ರಂಪ್ ಅವರ ಸೈನಿಕ ಕಾರ್ಯಾಚರಣೆಗಳು ಸಲಾಫಿ ಜೆಹಾದಿ ಶಕ್ತಿಗಳ ಸೈನಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಜೊತೆಗೆ ಸಿರಿಯಾದ ಅಂತರ್ಯುದ್ದದಲ್ಲಿ ರಷಿಯಾ ಮತ್ತು ಇರಾನ್ಗಳು ಸಿರಿಯಾದ ಅಧ್ಯಕ್ಷ ಅಸಾದ್ ಗೆ ನೀಡುತ್ತಿರುವ ಬೆಂಬಲವನ್ನು ಗಾಢಗೊಳಿಸುತ್ತದೆ. ಪರಿಣಾಮ: ನಾಗರಿಕರ ಮೇಲೆ ಮತ್ತಷ್ಟು ಅತ್ಯಾಚಾರಗಳು. ಮತ್ತಷ್ಟು ನಿರಾಶ್ರಿತರ ಬವಣೆಗಳು

  ಕೃಪೆ: Economic and Political Weekly
    April 15, 2017. Vol 52. No. 15