ಶನಿವಾರ, ಮೇ 6, 2017

ಹಸುಗಳನ್ನು ಎಣಿಸಿ, ಮನುಷ್ಯರನ್ನು ಸಾಯಿಸಿ


ನರೇಂದ್ರ ಮೋದಿಯವರ ನವ ಭಾರತ ನಮೂನೆಗಳು.
  ಅನುಶಿವಸುಂದರ್
cow ಗೆ ಚಿತ್ರದ ಫಲಿತಾಂಶ

ರಾಜಸ್ಥಾನದ ಆಲ್ವಾರ್ ಪೆಹ್ಲೂ ಖಾನ್ ಎಂಬ ೫೫ ವರ್ಷದ ರೈತನೊಬ್ಬನನ್ನು ಗೋ ರಕ್ಷಕರ ಗುಂಪೊಂದು-ಅಥವಾ ಅವರನ್ನು ಕೊಲೆಗಡುಕರ ಗುಂಪೆಂದೇ ಕರೆಯಬಹುದು- ಕಳೆದ ಏಪ್ರಿಲ್ ರಂದು ಹಾಡುಹಗಲಿನಲ್ಲೇ ಹೊಡೆದು-ಬಡಿದು ಕೊಂದುಹಾಕಿತು. ಹಸುವಿನ ಹೆಸರಿನಲ್ಲಿ ೨೦೧೫ರ ಅಕ್ಟೋಬರ್ನಲ್ಲಿ ದಾದ್ರಿಯಲ್ಲಿ ಮೊಹಮ್ಮದ್ ಅಕ್ಲಾಕ್ ಕೊಲೆಯಿಂದ ಪ್ರಾರಂಭವಾದ ಅಪರಾಧಗಳ ಸರಣಿಗೆ ಇದು ಮತ್ತೊಂದು ಸೇರ್ಪಡೆಯಾಗಿದೆ. ಆಗಿನಿಂದ ಭಾರತದ ತಥಾಕಥಿತ ಗೋ ಪ್ರದೇಶ (ಕೌ ಬೆಲ್ಟ್) ದಲ್ಲಿ ಮಾನವ ಹಕ್ಕುಗಳಿಗಿಂತ ಗೋವುಗಳ ಹಕ್ಕುಗಳೇ ಪ್ರಮುಖವಾಗಿಬಿಟ್ಟಿದೆ. ಹೀಗಾಗಿ ಕೊಲೆಗಡುಕ ಗುಂಪುಗಳು ದನಗಳ ಅಥವಾ ಹಸುಗಳ ಸಾಗಾಟವನ್ನು ಪತ್ತೆಹಚ್ಚಿ ಅದರಲ್ಲಿ ತೊಡಗಿರುವ ಮುಸ್ಲಿಮರ ಮೇಲೆ ಮಾತ್ರ (ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ದಲಿತರ ಮೇಲೂ) ಪ್ರಾಣಾಂತಿಕ ದಾಳಿ ನಡೆಸುತ್ತಿದ್ದಾರೆ ಅಥವಾ ಕೊಲ್ಲುತ್ತಿದ್ದಾರೆ. ಕೊಲೆಗಳು ನಡೆಯಬೇಕಾದರೆ ಕಾನೂನು ಪಾಲಕರು ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನ ವೀಕ್ಷಕರಾಗುತ್ತಾರೆ. ಇದಕ್ಕೆ ಮತ್ತೊಂದು ಕರಾಳ ಮುಖವಿದೆ. ಇಂಥಾ ಬಹುಪಾಲು ಪ್ರಕರಣಗಳಲ್ಲಿ ದಾಳಿಗೆ ಬಲಿಯಾದವರನ್ನೇ ಬಂಧಿಸಲಾಗುತ್ತದೆಯೇ ವಿನಃ ದಾಳಿಕೋರರನ್ನಲ್ಲ. ದಾಳಿಕೋರರನ್ನು ಬಿಟ್ಟುಬಿಡಲಾಗುತ್ತದೆ ಅಥವಾ ಅಪರಿಚಿತ ವ್ಯಕ್ತಿಗಳು ಎಂದು ದೂರು ದಾಖಲಾಗುತ್ತದೆ.

ಅಕ್ಲಾಕ್ ಕೊಲೆಯ ನಂತರದಲ್ಲಿ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಕರ್ನಾಟಕದಂಥ ರಾಜ್ಯಗಳಲ್ಲಿ ಆಕ್ರಮಣಕಾರಿ ಗೋ ರಾಜಕಾರಣ ಚಲಾವಣೆಗೆ ಬಂದಿದೆ. ಇವುಗಳಲ್ಲಿ ಕರ್ನಾಟಕವೊಂದನ್ನು ಬಿಟ್ಟರೆ ಉಳಿದವೆಲ್ಲವೂ ಬಿಜೆಪಿ ಶಾಸಿತ ರಾಜ್ಯಗಳೇ ಆಗಿವೆ. ಸದ್ಯ ಸುಪ್ರಿಂ ಕೋರ್ಟಿನಲ್ಲಿ ೧೯೭೬ರ ಮಹಾರಾಷ್ಟ ಪ್ರಾಣಿ ರಕ್ಷಣಾ ಕಾಯಿದೆಯ ರೀತಿ ವಿವಿಧ ಪ್ರಾಣಿ ರಕ್ಷಣಾ ಕಾಯಿದೆಗಳಡಿಯಲ್ಲಿ ಇರುವ ಇಂಥಾ ಗೋ ರಕ್ಷಕ ಪುಂಡ ಗುಂಪುಗಳು ಬಚಾವಾಗಿಬಿಡುವಂಥ ಕಲಮುಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಹವಾಲಿನಲ್ಲಿ ಪ್ರಸ್ತಾಪಿಸಲಾಗಿರುವ ಆರು ರಾಜ್ಯಗಳನ್ನು  ಹೊರತುಪಡಿಸಿ ಮಧ್ಯಪ್ರದೇಶ ಮತ್ತು ಹರ್ಯಾಣಗಳಲ್ಲೂ ರೀತಿಯ ಪ್ರಕರಣಗಳು ಮರುಕಳಿಸಿದೆಯಲ್ಲದೆ ಕಳೆದ ಏಪ್ರಿಲ್ನಲ್ಲಿ ದೆಹಲಿ ಮತ್ತು ಜಮ್ಮು-ಕಾಶ್ಮೀರಗಳಲ್ಲೂ ಇಂಥದ್ದೇ ಪ್ರಕರಣಗಳು ದಾಖಲಾಗಿವೆ. ಕೊನೆಯ ಎರಡು ಪ್ರಕರಣಗಳಲ್ಲಂತೂ ಪೆಹ್ಲೂ ಖಾನ್ ಪ್ರಕರಣದಲ್ಲಿ ಲಭ್ಯವಾದಂತೆ ವಿಡಿಯೋ ಸಾಕ್ಷಿಗಳು ಸಹ ಲಭ್ಯವಾಗಿವೆ. ಅವು ಕೊಲಗಡುಕ ಗುಂಪುಗಳ ಕ್ರೌರ್ಯವನ್ನೂ ಮತ್ತು ಪೊಲೀಸರ ನಿಷ್ಕ್ರಿಯತೆಯನ್ನೂ ಸಾಬೀತುಪಡಿಸುತ್ತವೆ. ಜಮ್ಮು-ಕಾಶ್ಮೀರದ ಪ್ರಕರಣದಲ್ಲಿ ಲಭ್ಯವಾಗಿರುವ ಚಿತ್ರಣಗಳು ಅತ್ಯಂತ ಭೀಕರವಾಗಿದೆ. ಅಲೆಮಾರಿ ದನಗಾಹಿ ಕುಟುಂಬವೊಂದು ಕಟ್ಟಿಕೊಂಡಿದ್ದ, ಆಗಲೋ ಈಗಲೋ ಕುಸಿದುಬೀಳುವಂತಿದ್ದಟೆಂಟಿನ ಮೇಲೆ ಕೊಲೆಗಡುಕ ಗೋ ರಕ್ಷಕ ಗುಂಪು ದಾಳಿ ಮಾಡಿದಾಗ ಅದರೊಳಗಿದ್ದ ತನ್ನ ಮಗುವನ್ನು ಕಾಪಾಡಿಕೊಳ್ಳಲು ತಾಯಿಯೊಬ್ಬಳು ಅವರನ್ನು ಅಂಗಲಾಚುತ್ತಾ ಕೊನೆಯವರೆಗೂ ನಡೆಸುವ ಪ್ರಯತ್ನ ಹೃದಯವಿದ್ರಾವಕವಾಗಿದೆ.

ಇಂಥಾ ಬೆಳವಣಿಗೆಗಳು ಯಾವುದೇ ನಾಗರಿಕ ಸಮಾಜದಲ್ಲಿ ತಲ್ಲಣವನ್ನು ಮತ್ತು ಆಕ್ರೊಶವನ್ನು ಉಂಟುಮಾಡಬೇಕು. ಆದರೆ ಭಾರತದಲ್ಲಿ?

ಇದರ ವಿರುದ್ಧ ಅಲ್ಲಲ್ಲಿ ಪ್ರತಿರೋಧದ ಧ್ವನಿಗಳು ಎದ್ದಿವೆ. ಆದರೆ ಒಂದೆಡೆ ಅಧಿಕೃತ ಕಿವುಡು-ಮೌನ ಮತ್ತೊಂದೆಡೆ ಅಂಥಾ ಕ್ರೌರ್ಯಗಳ ಬಹಿರಂಗ ಸಮರ್ಥನೆಗಳ ಅಬ್ಬರದಲ್ಲಿ ಧ್ವನಿಗಳು ಕೊಚ್ಚಿಹೋಗುತ್ತಿವೆ. ಆಲ್ವಾರ್ನಲ್ಲಿ ನಡೆದ ಕಗ್ಗೊಲೆಯ ನಂತರ ಘಟನೆಯ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲವೆಂದು ಗ್ಯಾನ್ ದೇವ ಅಹೂಜನೆಂಬ ರಾಜಸ್ಥಾನದ ಬಿಜೆಪಿ ಶಾಸಕ ಹೇಳಿಕೆ ನೀಡಿದ. ಅಲ್ಲಿನ ಗೃಹಮಂತ್ರಿ ಗುಲಾಬ್ ಚಂದ್ ಅವರು ಪೆಹ್ಲೂ ಖಾನ್ ಒಬ್ಬ ದನಗಳ್ಳನಾಗಿದ್ದನೆಂದು ಶಾಸನಸಭೆಯಲ್ಲಿ ಹೇಳಿಕೆಯಿತ್ತರು. ಆದರೆ ಇದನ್ನು ಸ್ವಯಂ ರಾಜ್ಯದ ಪೊಲೀಸ್ ಮುಖ್ಯಸ್ಥರೇ ನಿರಾಕರಿಸಿದರು. ಬಗ್ಗೆ ರಾಜ್ಯಸಭೆಯಲ್ಲಿ ಕೋಲಾಹಲವೇ ನಡೆದು  ಸರ್ಕಾರದ ೨೩ ಮಾಜಿ ಉನ್ನತ ಅಧಿಕಾರಿಗಳು ಬಲವಾದ ಹೇಳಿಕೆಯನ್ನು ನೀಡಿದ ನಂತರದಲ್ಲಿ ರಾಜ್ಯದ ಮುಖ್ಯಮಂತ್ರಿ ವಸುಂಧರೇ ರಾಜೆ ಸಿಂಧಿಯಾ ಅವರು ಪ್ರಕರಣದ ಬಗ್ಗೆ ತಮ್ಮ ಮೌನ ಮುರಿದರು. ಇಂಥಾ ಆಷಾಢಭೂತಿತನ ಮತ್ತು  ನಿರ್ದಯತೆಗಳ ಎದುರು  ಸಾಮಾನ್ಯ ಮನುಷ್ಯರಾದ ಖಾನ್ ಆಗಲೀ ಅವರಂಥವರಾಗಲೀ ಏನು ಮಾಡಲು ಸಾಧ್ಯವಿದೆ?

ಹಸುವು ಹಿಂದೂತ್ವ ರಾಜಕಾರಣದ ಕೇಂದ್ರಬಿಂದುವೇ ಆಗಿದ್ದರೂ ವಿಷಯದ ಕೇಂದ್ರ ಹಸುವಲ್ಲ. ಏಕೆಂದರೆ ಅವರಿಗೆ ಹಸುವಿನ ರಾಜಕೀಯ ಎಷ್ಟು ಮುಖ್ಯವೆಂಬುದು ಎಲ್ಲರಿಗೂ ತಿಳಿದಿರುವಂಥದ್ದೇ. ಅದು ಎಷ್ಟು  ಮುಖ್ಯವೆಂದರೆ ಇದೀಗ ಕೇಂದ್ರ ಸರ್ಕಾರವು ದೇಶದ ಎಲ್ಲಾ ದನಕರುಗಳಿಗೂ ಆಧಾರ್ ರೀತಿಯ ಕಾರ್ಡೊಂದನ್ನು ನೀಡಲು ನಿರ್ಧರಿಸಿದೆ. ಇದು ನಂಬಲು ಅಸಾಧ್ಯವೆನಿಸಿದರೂ ನಿಜ. ಏಕೆಂದರೆ ಸಾಕ್ಷಾತ್ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಯ ನೇತೃತ್ವದಲ್ಲಿ ರಚಿಸಲಾದ ಸಮಿತಿಯೊಂದು ಇತ್ತೀಚೆಗೆ ಸಭೆ ಸೇರಿ ಬಾಂಗ್ಲಾದೇಶಕ್ಕೆ ನಡೆಯುವ ದನಗಳ ಕಳ್ಳ ಸಾಗಾಟವನ್ನು ತಡೆಯಬೇಕೆಂದರೆ ದೇಶದ ಎಲ್ಲಾ ದನಕರುಗಳಿಗೂ ತಿದ್ದಲು ಅಸಾಧ್ಯವಾಗಿರುವ ಪಾಲಿಯುರೇಥೀನ್ ಪಟ್ಟಿಯೊಂದನ್ನು ಹಚ್ಚುವುದೇ ಏಕೈಕ ಮಾರ್ಗವೆಂದು ತೀರ್ಮಾನಿಸಿದೆ. ಸರ್ಕಾರದ ಸಾಲಿಸಿಟರ್ ಜನರಲ್ ಅವರೇ ಸುಪ್ರಿಂ ಕೋರ್ಟಿನಲ್ಲಿ ಮುದ್ದಾಂ ಹೇಳಿಕೆಯನ್ನು ನೀಡಿರಲಿಲ್ಲವೆಂದರೆ ಇದೊಂದು ಕೇವಲ ವದಂತಿಯೆಂದು ಮಾತ್ರವಲ್ಲ ಸುಳ್ಳುಸುದ್ದಿಯೆಂದೇ ನಾವು ಭಾವಿಸಿಬಿಡುತ್ತಿದ್ದೆವು

ಪ್ರಾಣಿಗಳಿಗೆ ಗುರುತಿನ ಚೀಟಿಯನ್ನು ಲಗತ್ತಿಸುವ ತೀರ್ಮಾನ ರಂಜಕವೆನಿಸಿದರೂ ಇದರ ಆಳದಲ್ಲಿ ತನಗಿಚ್ಚೆ ಬಂದಂತೆ ಕಾನೂನು ಮತ್ತು ನ್ಯಾಯವನ್ನು ಬಗ್ಗಿಸಬಲ್ಲವೆಂಬ ಕಟು ಸಂದೇಶವಿದೆ. ಆಳುವ ಸರ್ಕಾರದ ಧೋರಣೆಗೆ ಪೂರಕವಾಗಿದ್ದರೆ ಮಾತ್ರ ಕಾನೂನು ಸಂಪೂರ್ಣವಾಗಿ  ಜಾರಿಯಾಗುತ್ತದೆ. ಒಂದು ವೇಳೆ ಅದರ ರಾಜಕೀಯ ಅಜೆಂಡಾಗೆ ಪೂರಕವಾಗಿರದಿದ್ದಲ್ಲಿ ಕಾನೂನು ಉಲ್ಲಂಘನೆಯನ್ನು ಬಹಿರಂಗವಾಗಿಯೇ ಪ್ರೋತ್ಸಾಹಿಸಲಾಗುತ್ತದೆ. ನೀತಿ ನಿಜಕ್ಕೂ ಆತಂಕಕಾರಿಯಾಗಿದೆ. ಹೀಗಾಗಿ ಕಾಶ್ಮೀರದ ಯುವಜನತೆ ಭಾರತದ ಪ್ರಭುತ್ವ ಬಗ್ಗೆ ತಮಗಿರುವ ಸಂಪೂರ್ಣ ತಿರಸ್ಕಾರವನ್ನು ಕಾಶ್ಮೀರದ ಬೀದಿಬೀದಿಗಳಲ್ಲಿ ಕಲ್ಲೆಸೆತದ ಮೂಲಕ ವ್ಯಕ್ತಪಡಿಸುವುದನ್ನು ಅಪರಾಧವೆಂದು ಪರಗಣಿಸಲಾಗುತ್ತದೆ. ಬಂಧಿಸಲಾಗುತ್ತದೆ. ಚಿತ್ರಹಿಂಸೆಗೆ ಗುರಿಮಾಡಲಾಗುತ್ತದೆ ಮತ್ತು ಗುಂಡಿಟ್ಟು ಕೊಲ್ಲಲಾಗುತ್ತದೆ. ಆದರೆ ಕಾನನನ್ನು ಕೈಗೆತ್ತಿಕೊಂಡು ಅಮಾಯಕ ಮುಸ್ಲಿಂ ಪುರುಷರನ್ನು ಬೀದಿಬೀದಿಗಳಲ್ಲಿ ಹೊಡೆದು-ಬಡಿದು ಕೊಲ್ಲುತ್ತಿರುವ ಗೋ ರಕ್ಷಕ ಕೊಲೆಗಡುಕ ಪಡೆಗನ್ನು ಮಾತ್ರ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ದೇಶಭಕ್ತರೆಂದು ಪರಿಗಣಿಸಲಾಗುತ್ತದೆ. ಸಾಧ್ವ್ವಿ ಕಮಾಲ್ ದೀದಿಯೆಂಬ ರಾಜಸ್ಥಾನದ ಪ್ರಮುಖ ಗೋರಕ್ಷಕರೊಬ್ಬರಂತೂ ಪಹ್ಲೂ ಖಾನ್ ಮೇಲೆ ದಾಳಿ ನಡೆಸಿದವರನ್ನು  ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ಗೆ ಹೋಲಿಸಿದ್ದಾರೆ.

ತನ್ನ ದೇಶದ ಅಲ್ಪಸಂಖ್ಯಾತ ಜನತೆ ಏನೆಂದು ಭಾವಿಸುತ್ತದೆ ಅಥವಾ ಆಲೋಚಿಸುತ್ತದೆ ಎಂಬುದನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸುವ ಸುಸ್ಪಷ್ಟ ಪಕ್ಷಪಾತಿತನದ ಸಂದೇಶವು ದೇಶದ ಪ್ರಜಾತಂತ್ರದ ಭವಿಷ್ಯಕ್ಕಿರುವ ಆತಂಕಗಳಿಗೆ ಹಿಡಿದಿರುವ ಕನ್ನಡಿಯಾಗಿದೆ. ಈಗಾಗಲೇ ಬಿರುಕುಬಿಟ್ಟಿರುವ ಸಮಾಜವನ್ನು ಛಿದ್ರಗೊಳಿಸುವುದಕ್ಕೆ ದೊಡ್ಡಮಟ್ಟದ ಕೋಮುಗಲಭೆಗಳ ಅಗತ್ಯವೇನೂ ಇಲ್ಲ. ಕೊಲೆಗಡುಕ ಗೋ ರಕ್ಷಕ ಗುಂಪು ತನ್ನ ದಾಳಿಗಳ ಬಗ್ಗೆ ಕೊಚ್ಚಿಕೊಳ್ಳುತ್ತಾ ನೀಡುವ ಪ್ರತಿ ಹೇಳಿಕೆಗಳೂ ಬಿರುಕನ್ನು ಹೆಚ್ಚಿಸುತ್ತಾ ಹೋಗುತ್ತದೆ. ಆಲ್ವಾರ್, ದೆಹಲಿ, ದಾದ್ರ, ಲತೇಹರ್, ಊನಾ, ಸೋನೆಪೆತ್, ಮಂಡ್ಸೌರ್ ಅಥವಾ ಬೇರೆಲ್ಲೋ ನಡೆದ ಇಂಥಾ ಪ್ರಕರಣಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ನಡೆಯುತ್ತಿರುವ ದಾಳಿಗಳಲ್ಲ. ಇವೆಲ್ಲವೂ ನರೇಂದ್ರ ಮೋದಿಯವರು ಇತ್ತೀಚೆಗೆ ಪದೇ ಪದೇ ಪ್ರಸ್ತಾಪಿಸುವ ನವ ಭಾರತದ ನಮೂನೆಗಳಾಗಿವೆ. ಅಲ್ಲಿ ಪವಿತ್ರ ಗೋವು ಮನುಷ್ಯರ ಪ್ರಾಣಕ್ಕಿಂತ ಮಿಗಿಲಾಗಿರುತ್ತದೆ.                                                                                                 
                                                                                 
ಕೃಪೆ: Economic and Political Weekly
       April 29, 2017. Vol. 52, No. 17.

                                                                                                                               









ಕಾಮೆಂಟ್‌ಗಳಿಲ್ಲ: