ಭಾನುವಾರ, ಜೂನ್ 11, 2017

ಗೋಹತ್ಯೆಗೆ ನಿಷೇಧ-ನರಹತ್ಯೆಗೆ ಪರವಾನಗಿ!



-ಶಿವಸುಂದರ್
ಹಸು ಗೆ ಚಿತ್ರದ ಫಲಿತಾಂಶ

The Karnataka Prevention Of Cow Slaughter And Cattle Preservation (Amendment) Bill, 2009


ಈ ದೇಶವನ್ನು ಮತ್ತು ಈ ದೇಶದ ಅಗತ್ಯಗಳನ್ನು ಬ್ರಾಹ್ಮಣ್ಯದ ಕಣ್ಣಿಂದಲ್ಲದೆ ರೈತಾಪಿಯ ಮತ್ತು ದಮನಿತರ ಕಣ್ಣಿಂದ ಎಂದಿಗೂ ಅರ್ಥಮಾಡಿಕೊಳ್ಳದ ಬಿಜೆಪಿಗೆ ಈ ದೇಶ ಎಂದಿಗೂ ಅರ್ಥವಾಗಿಲ್ಲ. ಹೀಗಾಗಿ ಈ ದೇಶದ ಸಂಸ್ಕೃತಿಯನ್ನು ಉಳಿಸುವ ಹೆಸರಲ್ಲಿ ಅವರು ರೂಪಿಸುತ್ತಿರುವ ಕಾನೂನುಗಳೆಲ್ಲಾ ಈ ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಅವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸುತ್ತಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದ ನಂತರ ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಾ ನಾಡಿನ ತಿಜೋರಿಯನ್ನು ಲೂಟಿ ಹೊಡೆಯುತ್ತಿದ್ದರೆ ಇನ್ನೊಂದೆಡೆ ದಲಿತ, ಶೂದ್ರ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸಾಂಸ್ಕ?ೃತಿಕ ಸಂಪನ್ಮೂಲಗಳ ಮೇಲೂ ದಾಳಿ ಮಾಡುತ್ತಾ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತವಾದ ಬ್ರಾಹ್ಮಣೀಯ ಸಂಸ್ಕೃತಿಯನ್ನು ಸಮಾಜದ ಮೇಲೆ ಹೇರಲು ಸತತ ಪ್ರಯತ್ನ ನಡೆಸುತ್ತಿದೆ. 

ಈ ನಿಟ್ಟಿನಲ್ಲಿ ಫೆಬ್ರವರಿಯ ಕೊನೆಗೆ ಪ್ರಾರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಅದು ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡುವ ಮತ್ತು ಜಾನುವಾರುಗಳ ಸಂರಕ್ಷಣೆ ಮಾಡುವ ಸಲುವಾಗಿ 1964ರಲ್ಲೇ ಜಾರಿಮಾಡಲಾಗಿದ್ದ The Karnataka Prevention of Cow Slaughter And Cattle Preservation Act-1964 ಗೆ ಹಲವಾರು ದುರುದ್ದೇಶಗಳಿಂದ ಕೂಡಿದ ತಿದ್ದುಪಡಿಗಳನ್ನು ತರಲು The Karnataka Prevention of Cow Slaughter And Cattle Preservation (Amendment) Bill, 2009 ಎಂಬ ಮಸೂದೆಯನ್ನು ಪಾಸುಮಾಡುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಉದ್ದೇಶ ಗೋಹತ್ಯೆಯನ್ನು ನಿಷೇಧ ಮಾಡುವುದಕ್ಕಿಂತ ಹೆಚ್ಚಾಗಿ ಅದರ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಈಗ ಕಾನೂನು ಬಾಹಿರವಾಗಿ ರಾಜ್ಯದೆಲ್ಲೆಡೆ ಭಜರಂಗಿಗಳು ನಡೆಸುತ್ತಿರುವ ಆಕ್ರಮಗಳನ್ನು ಸಕ್ರಮಗೊಳಿಸುವುದೇ ಆಗಿದೆ. ಮಾಂಸಾಹಾರಿ ಆಹಾರ ಪದ್ಧತಿ- ಅದರಲ್ಲೂ ಗೋಮಾಂಸ ಭಕ್ಷಣೆ ಮಾಡುವ ಮುಸ್ಲಿಂ, ಕ್ರಿಶ್ಚಿಯನ್, ದಲಿತ ಹಾಗೂ ಶೂದ್ರ ಜನಾಂಗಗಳ ಪದ್ಧತಿಗಳ ಮೇಲೆಯೇ ಸಾಂಸ್ಕೃತಿಕ ಆಕ್ರಮಣ ನಡೆಸುವ ಮತ್ತು ನಿರ್ದಿಷ್ಟವಾಗಿ ಮಾಂಸಾಹಾರ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಮುಸ್ಲಿಮರ ಮೇಲೆ ನಡೆಸುವ ಹಲ್ಲೆಯನ್ನು ಶಾಸನಬದ್ಧಗೊಳಿಸುವ ಉದ್ದೇಶವನ್ನೇ ಈ ಮಸೂದೆ ಹೊಂದಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. 

ಆದರೆ ಈ ಭರತವರ್ಷದಲ್ಲಿ ವಿವಿಧ ಆಹಾರ ಮತ್ತು ಅನನ್ಯ ಸಂಸ್ಕೃತಿಗಳು ವಿಕಸನಗೊಂಡ ಪ್ರಕ್ರಿಯೆ ಅರ್ಥವಾಗದೆ ಈ ಮಸೂದೆಯ ಹಿಂದಿನ ಕರಾಳ ಕಾರಾಸ್ಥಾನಗಳನ್ನು ಅರ್ಥವಾಗುವುದಿಲ್ಲ. 

ಒಂದು ಜನಾಂಗ ತನ್ನದೇ ನಿರ್ದಿಷ್ಟ ಪರಿಸರದಲ್ಲಿ ವಿಕಸನಗೊಳ್ಳುವ ಪ್ರಕ್ರಿಯೆಯಲ್ಲಿ ತನದೇ ಅನನ್ಯವಾದ ಸಂಸ್ಕೃತಿ, ಧಾರ್ಮಿಕ ಶ್ರದ್ಧೆ ಮತ್ತು ಆಹಾರಾಭ್ಯಾಸಗಳನ್ನು ರೂಢಿಸಿಕೊಳ್ಳುತ್ತದೆ. ಅದಕ್ಕೆ ಭಿನ್ನವಾದ ಪರಿಸರದಲ್ಲಿ ಅರಳುವ ಸಂಸ್ಕೃತಿಗಳು ಅದಕ್ಕಿಂತ ಭಿನ್ನವಾದ ಆಹಾರ ಪದ್ಧತಿಗಳನ್ನು ಮತ್ತು ಸಂಸ್ಕೃತಿಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಒಂದು ದೇಶವಾಗಿ ಮತ್ತು ಅದರ ನಾಗರಿಕರಾಗಿ ಈ ವಿಭಿನ್ನ ಸಂಸ್ಕೃತಿಯ ಜನಾಂಗಗಳು ಐಕ್ಯಜೀವನ ನಡೆಸುವಾಗ ಪರಸ್ಪರರ ಸಂಸ್ಕೃತಿಯನ್ನು ಗೌರವಿಸುವ ಮತ್ತು ಸಹಬಾಳ್ವೆ ನಡೆಸುವ ಪ್ರಜಾತಾಂತ್ರಿಕ ಸಂಸ್ಕೃತಿ ಅತ್ಯಗತ್ಯವಾಗುತ್ತದೆ. ಅಂಥಾ ಬಹುಸಂಸ್ಕೃತಿ ರಾಷ್ಟ್ರವೊಂದರ ಪ್ರಭುತ್ವಕ್ಕೆ ಈ ಸಾಂಸ್ಕ?ೃತಿಕ ಬಹುತ್ವವನ್ನು ಕಾಪಾಡಿಕೊಂಡು ಬರುವ ಹೊಣೆಗಾರಿಕೆ ಇರುತ್ತದೆ.

 ನಮ್ಮ ದೇಶದಲ್ಲಿ ವಿವಿಧ ಐತಿಹಾಸಿಕ ಕಾರಣಗಳಿಂದ ಬಗೆಬಗೆಯ ಆಹಾರ ಸಂಸ್ಕೃತಿಗಳು ನೆಲೆಗೊಂಡಿವೆ. ಈ ದೇಶದ ಹಲವು ಸಹಸ್ರ ವರ್ಷಗಳ ನಾಗರಿಕತೆಯಲ್ಲಿ ಶುದ್ಧ ಶಾಖಾಹಾರಿ ಸಂಸ್ಕೃತಿಯಿಂದ ಮೊದಲುಗೊಂಡು ಗೋಮಾಂಸ ಭಕ್ಷಣೆಯವರೆಗಿನ ವೈವಿಧ್ಯಮಯ ಆಹಾರ ಸಂಸ್ಕೃತಿಗಳು ವಿಕಸನಗೊಂಡಿವೆ. ಇವೆಲ್ಲವೂ ಈ ದೇಶದ ಆಹಾರ ಪದ್ಧತಿಗಳೇ ಆಗಿದ್ದು ಯಾವುದೂ ಮತ್ತೊಂದಕ್ಕಿಂತ ಮೇಲೂ ಅಲ್ಲ, ಕೀಳೂ ಅಲ್ಲ. ಬಹುತ್ವವನ್ನು ಗೌರವಿಸುವ ಪರಂಪರೆಯುಳ್ಳ ನಮ್ಮ ದೇಶದಲ್ಲಿ ಯಾವುದೇ ಆಹಾರಪದ್ಧತಿಯನ್ನು ಹೀನಾಯವಾಗಿ ನೋಡುವ ಅಥವಾ ಯಾವುದಾದರು ಒಂದು ಆಹಾರ ಪದ್ಧತಿಯನ್ನು ಪುರಸ್ಕರಿಸಿ ಮತ್ತೊಂದು ಆಹಾರ ಪದ್ಧತಿಯನ್ನು ನಿಷೇಧಿಸಿದ ಉದಾಹರಣೆಯೂ ಇಲ್ಲ.

ಇಷ್ಟಾಗಿಯೂ ಭಾರತದಲ್ಲಿ ಕೆಲವು ಸಮುದಾಯ ದವರು ಗೋವನ್ನು ಪವಿತ್ರ ಎಂದು ಭಾವಿಸುತ್ತಿರುವುದನ್ನು ಸಮಾಜ ಗೌರವಿಸುತ್ತಲೇ ಬಂದಿದೆ. ಹಾಗೆಯೇ ಗೋವನ್ನು ಒಂದು ಆಹಾರವಾಗಿ ಬಳಸುವವರೂ ಬಹುದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿಯೇ ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶದ ಬಹುತ್ವ ಸಂಸ್ಕೃತಿಯ ಆಶಯವನ್ನು ಧ್ಯೇಯವಾಗಿಟ್ಟುಕೊಂಡು ಸಂವಿಧಾನ ರಚನಾ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದವು.

1948ರ ನವಂಬರ್ 24ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯಲ್ಲಿ ಪಂಡಿತ್ ಠಾಕೂರ್ ದಾಸ್ ಭಾರ್ಗವ, ಸೇಠ್ ಗೋವಿಂದ್ ದಾಸ್ ಹಾಗೂ ಇನ್ನಿತರ ಕೆಲವು ಹಿಂದೂ ಮೂಲಭೂತವಾದಿಗಳು ಗೋಹತ್ಯಾ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಇವರೊಂದಿಗೆ ಆಗಿನ ಯುನೈಟೆಡ್ ಪ್ರಾವಿನ್ಸ್ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಮುಸ್ಲಿಮ್ ಪ್ರತಿನಿಧಿ ಜೆಡ್.ಹೆಚ್. ಲಾರಿ ಮತ್ತು ಅಸ್ಸಾಮಿನ ಮೊಹಮ್ಮದ್ ಸೈದುಲ್ಲಾ ಎಂಬುವರೂ ಧ್ವನಿಗೂಡಿಸಿದ್ದರು. ಆದರೆ ಡಾ. ಅಂಬೇಡ್ಕರ್, ಅಂದಿನ ಪ್ರಧಾನಿ ನೆಹರೂ ಹಾಗೂ ಇನ್ನಿತರರು ಅದರ ದೂರಗಾಮಿ ಪರಿಣಾಮದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅಂಥಾ ಒಂದು ಕಾನೂನು ಜಾರಿಗೆ ಬಂದರೆ ರೈತಾಪಿಗಳಿಗೆ ಧಕ್ಕೆ ಬರುವುದರಿಂದ ರೈತಾಪಿಯ ಹಿತಾಸಕ್ತಿಗೂ, ಗೋಮಾಂಸ ಆಹಾರ ಪದ್ಧತಿ ಉಳ್ಳವರ ಆಸಕ್ತಿಗೂ ಮತ್ತು ಗೋವನ್ನು ಪವಿತ್ರ ಎಂದು ಭಾವಿಸುವವರ ಭಾವನೆಗೂ ಧಕ್ಕೆ ಬರದಂತೆ 48ನೇ ಪರಿಚ್ಛೇಧವನ್ನು ಸಂವಿಧಾನದ ನಿರ್ದೇಶನಾ ತತ್ವದಡಿಯಲ್ಲಿ ಸೇರಿಸಲಾಯಿತು.
ಹಸು ಗೆ ಚಿತ್ರದ ಫಲಿತಾಂಶ

48 ನೇ ಪರಿಚ್ಛೇಧ:
“The State shall endeavour to organise agriculture and animal husbandry on modern and scientific lines and shall in particular take steps for preserving and improving the breeds of cattle and prohibit the slaughter of cow and other useful cattle, specially milch and draught cattle and their young stock.”

ಎಂದಷ್ಟೇ ಹೇಳುತ್ತದೆ. ಅಂದರೆ ದೇಶದ ಕೃಷಿಕ್ಷೇತ್ರ ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪುನರ್‍ಸಂಘಟಿಸಬೇಕು ಹಾಗೂ ಪ್ರಭುತ್ವವು ಕೃಷಿಸೇವೆಯಲ್ಲಿ ಮತ್ತು ಹೈನುಗಾರಿಕೆಯಲ್ಲಿ ಬಳಸಲಾಗುವ ಜಾನುವಾರುಗಳಾದ ಹಸು, ದನ, ಕೋಣ, ಎಮ್ಮೆಯಂಥ ರಾಸುಗಳ ಮತ್ತವುಗಳ ಕರುಗಳ ಹತ್ಯೆ ತಡೆಗಟ್ಟಲು ಮತ್ತು ರಕ್ಷಿಸಲು ಕಾನೂನನ್ನು ರಚಿಸಬೇಕು. ಹಾಗೆಯೇ ಇದರಲ್ಲಿ ಸ್ಪಷ್ಟವಾಗಿ ಕಾಣುವಂತೆ ಈ ಕಲಮಿನಲ್ಲಿ ಗೋಹತ್ಯಾ ನಿಷೇಧವನ್ನು ಸಾರಾಸಗಟಾಗಿ ಮಾಡಬೇಕೆಂಬ ಅಥವಾ ಗೋವು ಮಾತ್ರ ಪವಿತ್ರವೆಂಬ ದೃಷ್ಟಿಯಾಗಲೀ ಇಲ್ಲ.

ಅದೇರೀತಿ 1948ರಲ್ಲಿ ರಚಿಸಲಾದ ದಾತಾರ್ ಸಮಿತಿ `ಸಂಪೂರ್ಣ ಗೋಹತ್ಯಾ ನಿಷೇಧ ಅಪೇಕ್ಷಣೀಯವಾದರೂ ಅದನ್ನು ಎರಡು ಹಂತದಲ್ಲಿ ಮಾಡಬೇಕು. ಮೊದಲ ಹಂತದಲ್ಲಿ 14 ವರ್ಷಕ್ಕೆ ಮೇಲ್ಪಟ್ಟ ಹಸುಗಳನ್ನು ಒಳಗೊಂಡಂತೆ ಇತರ ಜಾನುವಾರುಗಳ ಹತ್ಯೆಗೆ ಅವಕಾಶ ನೀಡಬೇಕು. ಆ ನಂತರ ಕ್ರಮೇಣ, ಸಾಧ್ಯವಾದರೆ ಎರಡು ವರ್ಷಗಳಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಜಾರಿಗೆ ತರಬೇಕು’ ಎಂದು ಶಿಫಾರಸ್ಸು ಮಾಡಿತ್ತು. ಅದರಂತೆ ಮೊದಲ ಹಂತದ ನಿಷೇಧ ಅಂದರೆ 14 ವರ್ಷಗಳಾಗದ ಗೋವುಗಳ ಹತ್ಯೆಯನ್ನು ನಿಷೇಧಿಸುವ ಕಾನೂನು ಕರ್ನಾಟಕವನ್ನೂ ಒಳ ಗೊಂಡಂತೆ ಹಲವು ರಾಜ್ಯಗಳು ಜಾರಿಗೆ ತಂದವು.

ಆದರೆ 1954ರಲ್ಲಿ ಕೇಂದ್ರ ಕೃಷಿ ಇಲಾಖೆಯ ಆಯುಕ್ತ ನಂದಾರವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ `ಭಾರತದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಭಾರತದಲ್ಲಿ ಹಸಿರು ಹುಲ್ಲು ಮತ್ತು ಪಶು ಆಹಾರದ ಕೊರತೆ ಇರುವುದರಿಂದ ಶೇ.40ರಷ್ಟು ಜಾನುವಾರುಗಳನ್ನು ಮಾತ್ರ ಸಾಕಲು ಸಾಧ್ಯ. ಉಳಿದ ಶೇ. 60 ರಾಸುಗಳನ್ನು ಗೊಡ್ಡು ಮಾಡಬೇಕು’ ಎಂದು ಸಲಹೆ ನೀಡಿತ್ತು. ಈ ವರದಿ ನೀಡಿದ್ದು ಮುಸ್ಲಿಮರೂ ಅಲ್ಲ, ಕೃಷಿಯ ಬಗ್ಗೆ ಜ್ಞಾನ ಇಲ್ಲದವರೂ ಅಲ್ಲ ಎಂಬುದನ್ನು ಇಲ್ಲಿ ಒತ್ತಿಹೇಳಲೇ ಬೇಕು. 1976ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ನೀಡಿದ್ದ ವರದಿಯಲ್ಲೂ ಎಮ್ಮೆ ಹಾಗೂ ಇತರ ಹಾಲು ನೀಡುವ ಜಾನುವಾರುಗಳ ಗುಣಮಟ್ಟವನ್ನು ಹೆಚ್ಚಿಸಬೇಕು ಮತ್ತು ಎಮ್ಮೆಗಳನ್ನು ಕೇವಲ ಹಾಲಿಗಾಗಿ ಮಾತ್ರವಲ್ಲದೆ ಉತ್ತಮ ಮಾಂಸ ಪಡೆಯುವ ದೃಷ್ಟಿಯಿಂದಲೂ ಸಾಕಾಣಿಕೆಗೆ ಉತ್ತೇಜನ ನೀಡಬೇಕೆಂದು ವರದಿ ನೀಡಿತ್ತು. ಇದಲ್ಲದೆ ಮೊದಲನೆ ಪಂಚವಾರ್ಷಿಕ ಯೋಜನೆಯಿಂದ ಹಿಡಿದು 11ನೇ ಪಂಚವಾರ್ಷಿಕ ಯೋಜನೆಯವರೆಗೆ ಎಲ್ಲಾ ಯೋಜನೆಗಳು ಜೀವಂತವಿರುವ ಎಲ್ಲಾ ಜಾನುವಾರುಗಳನ್ನು ಸಾಕುವಷ್ಟು ಮೇವು ಹಾಗೂ ಪಶು ಆಹಾರವಿಲ್ಲವೆಂದು ಸ್ಪಷ್ಟವಾಗಿಯೇ ಹೇಳುತ್ತಲೇ ಬಂದಿವೆ.

ಇಂದು ಗೋಹತ್ಯೆಯಿಂದ ಜಾನುವಾರುಗಳ ಸಂಖ್ಯೆ ಇಳಿಯುತ್ತದೆಯೆಂದು ಸಂಘಪರಿವಾರ ಬೊಬ್ಬೆ ಹಾಕುತ್ತಿದೆಯಾದರೂ 1977ರಲ್ಲಿ 17 ಕೋಟಿಯಷ್ಟಿದ್ದ ಜಾನುವಾರುಗಳ ಸಂಖ್ಯೆ ಈಗ 20 ಕೊಟಿಯಷ್ಟಾಗಿದೆಯೆಂದು ಸರ್ಕಾರಿ ಅಂಕಿಅಂಶಗಳೇ ಹೇಳುತ್ತಿವೆ. ಆದರೆ ಪಶು ಸಂರಕ್ಷಣೆಗೆ ನೀಡುತ್ತಿದ್ದ ಹಣ ಮಾತ್ರ 9ನೇ ಯೋಜನೆಯಲ್ಲಿ ಯೋಜನಾ ವೆಚ್ಚದ ಶೇ.1.1ರಷ್ಟಿದ್ದದ್ದು 10ನೇ ಆಯೋಗದಲ್ಲಿ ಶೇ.0.6ಕ್ಕೆ ಇಳಿದಿದೆ. ಹೀಗಾಗಿ ಪಶು ಸಾಕಣೆ ಎಂಬುದು ರೈತನ ಪಾಲಿಗೆ ಮತ್ತೊಂದು ನೇಣುಕುಣಿಕೆಯೇ ಆಗುತ್ತಿದೆ. 
ಹಸು ಗೆ ಚಿತ್ರದ ಫಲಿತಾಂಶ

1950ರಿಂದೀಚೆಗೆ ದೇಶದ ಹಲವಾರು ರಾಜ್ಯಗಳು ಉಪಯುಕ್ತ ಗೋವು, ಜಾನುವಾರುಗಳು ಮತ್ತು ಅವುಗಳ ಕರುಗಳನ್ನು ರಕ್ಷಿಸುವ ಕಾನೂನನ್ನು ಜಾರಿಗೆ ತಂದಿವೆ. ದೇಶದಲ್ಲಿ ಎಲ್ಲೂ ಸಂಪೂರ್ಣವಾಗಿ ಗೋಹತ್ಯಾ ನಿಷೇಧದ ಕಾನೂನು ಜಾರಿಗೆ ಬಂದಿಲ್ಲ. ಏಕೆಂದರೆ ಅಂಥಾ ಕಾನೂನು ಗೋಮಾಂಸ ತಿನ್ನುವವರನ್ನಷ್ಟೇ ಅಲ್ಲದೆ ಕೃಷಿ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡುತ್ತದೆ. ಅಲ್ಲದೆ ಸರ್ಕಾರ ರೈತನಿಗೆ ನೀಡುತ್ತಿದ್ದ ಎಲ್ಲಾ ಸಹಾಯ ಮತ್ತು ಸಹಕಾರಗಳನ್ನು ಹಿಂತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅನುಪಯುಕ್ತ ಜಾನುವಾರುಗಳ ಕಡ್ಡಾಯ ರಕ್ಷಣೆಯು ರೈತನನ್ನು ಇನ್ನಷ್ಟು ಆತ್ಮಹತ್ಯೆ ಕಡೆಗೆ ದೂಡುತ್ತದೆ.

ಆದರೆ ಅಲ್ಪಸಂಖ್ಯಾತ ದ್ವೇಷವನ್ನೇ ತಮ್ಮ ರಾಜಕೀಯದ ತಿರುಳನ್ನಾಗಿ ಮಾಡಿಕೊಂಡಿರುವ ಹಿಂದೂತ್ವವಾದಿಗಳು ಈ ದೇಶದ ಇತಿಹಾಸವನ್ನು, ಜನತೆಯ ನಂಬಿಕೆ, ವಿಶ್ವಾಸ ಮತ್ತು ಪುರಾಣಗಳನ್ನು ವಿಕೃತವಾಗಿ ತಿರುಚುತ್ತಾ ಬಂದಿದ್ದಾರೆ. ಈ ದೇಶದಲ್ಲಿ ಗೋಮಾಂಸ ಭಕ್ಷಣೆ ಪ್ರಾರಂಭವಾಗಿದ್ದೇ ಮುಸ್ಲಿಂ ದೊರೆಗಳ ದಾಳಿಯ ನಂತರ ಎಂದು ಹೇಳುತ್ತಾ ಇತಿಹಾಸವನ್ನು ವಿಕೃತಗೊಳಿ ಸುತ್ತಿರುವ ಈ ಹಿಂದೂತ್ವವಾದಿಗಳು ಈ ದೇಶದಲ್ಲಿ ಬುದ್ಧಧರ್ಮ ಅಸ್ತಿತ್ವಕ್ಕೆ ಬರುವ ಮುನ್ನ ಆರ್ಯರು ಎಂದು ಹೇಳಿಕೊಳ್ಳುವ ಎಲ್ಲರೂ ಗೋಮಾಂಸ ಭಕ್ಷಕರೇ ಆಗಿದ್ದರೆಂಬುದನ್ನು ಮರೆಮಾಚುತ್ತಿದ್ದಾರೆ. ಮನುಸ್ಮೃತಿ, ತೈತ್ತರೀಯ ಬ್ರಾಹ್ಮಣ, ಹಲವು ವೇದಸ್ಮೃತಿಗಳೂ ಸಹ ಗೋಮಾಂಸ ಭಕ್ಷಣೆಯನ್ನು ನಿಷೇಧಿಸಿರಲಿಲ್ಲ ಎಂಬುದನ್ನು ಸಹ ಮುಚ್ಚಿಡುತ್ತಿದ್ದಾರೆ. ತಮ್ಮ ಶ್ರೇಣಿಕೃತ ಸಾಮಾಜಿಕ ನೀತಿಗೆ ವಿರುದ್ಧವಾಗಿದ್ದ ಬೌದ್ಧ ಧರ್ಮದದಿಂದ ಜನತೆಯನ್ನು ಆಕರ್ಷಿಸಲು ಆವರೆಗೆ ಗೋಮಾಂಸ ಭಕ್ಷಣೆಯನ್ನೇ ಪ್ರಚಾರ ಮಾಡುತ್ತಿದ್ದ ಬ್ರಾಹ್ಮಣಧರ್ಮವು ಗೋಮಾಂಸವನ್ನೇ ಅಲ್ಲದೆ ಮಾಂಸಾಹಾರವನ್ನೇ ತ್ಯಜಿಸಿತೆಂಬುದನ್ನು ಡಾ. ಅಂಬೇಡ್ಕರ್‍ರವರು ತಮ್ಮ “BRAHMIN AND THE DEAD COW” ಎಂಬ ಲೇಖನದಲ್ಲಿ ಸ್ಪಷ್ಟಪಡಿಸುತ್ತಾರೆ. ಹಾಗೆಯೇ ಗೋಮಾಂಸ ಭಕ್ಷಣೆಯನ್ನು ಮುಂದುವರೆಸಿದ್ದರಿಂದಲೇ ದಲಿತರನ್ನು ಹಿಂದೂ ಸಮಾಜ ಅಸ್ಪೃಶ್ಯರನ್ನಾಗಿ ಕಾಣಲು ಕಾರಣವಾಯಿತೆಂದು ವಾದಿಸುತ್ತಾರೆ. ಇಂದಿಗೂ ದಲಿತ, ಆದಿವಾಸಿ ಮತ್ತು ಶೂದ್ರ ಸಮುದಾಯಗಳಿಗೆ ಸುಲಭದಲ್ಲಿ ಸಿಗಬಹುದಾದ ಪೌಷ್ಠಿಕ ಆಹಾರ ಗೋಮಾಂಸವೇ ಆಗಿದೆ. ಈ ಎಲ್ಲಾ ಹಿನ್ನೆಲೆಯಿಂದಲೇ ಡಾ. ಅಂಬೇಡ್ಕರ್‍ರವರು ಗೋಹತ್ಯಾ ನಿಷೇಧವನ್ನು ಸಂವಿಧಾನ ದಲ್ಲಿ ಮೂಲಭೂತ ಹಕ್ಕಾಗಿ ಸೇರಿಸಬಾರದೆಂದೂ ಅಥವಾ ಗೋಮಾಂಸ ಭಕ್ಷಣೆಯನ್ನು ಹೀನಾಯವಾಗಿ ನೋಡಬಾರದೆಂದೂ ಬಲವಾಗಿ ವಾದಿಸಿದ್ದರು. ಆದರೂ ಗೃಹಮಂತ್ರಿ ವಿ.ಎಸ್.ಆಚಾರ್ಯ ಡಾ. ಅಂಬೇಡ್ಕರ್‍ರವರು ಗೋಹತ್ಯಾ ನಿಷೇಧದ ಪರವಾಗಿದ್ದರೆಂದು ಅಧಿಕೃತ ಹೇಳಿಕೆ ನೀಡುತ್ತಾ ಇತಿಹಾಸವನ್ನೇ ತಿರುಚುತ್ತಿದ್ದಾರೆ.

ಕರ್ನಾಟಕದಲ್ಲೂ ಉಪಯುಕ್ತ ಗೋವುಗಳ ರಕ್ಷಣೆ ಮಾಡುವ ಶಾಸನವೊಂದು 1964ರಲ್ಲಿ ಜಾರಿಗೆ ಬಂದಿದೆ.THE KARNATAKA PREVENTION OF COW SLAUGHTER AND CATTLE PRESERVATION ACT,  1964 ಪ್ರಕಾರ ಗೋಹತ್ಯೆಯನ್ನು ತಡೆಗಟ್ಟುವ ಬಗ್ಗೆ ಅಸ್ಪಷ್ಟವಾದ ಆದೇಶವಿದ್ದರೂ ಕಾಯಿದೆಯ 5 (1) ಮತ್ತು (2) ನೇ ಕಲಮುಗಳಲ್ಲಿ 12 ವರ್ಷಕ್ಕೆ ಮೇಲ್ಪಟ್ಟ ರಾಸುಗಳನ್ನು ಹತ್ಯೆ ಮಾಡಲು ಪರವಾನಗಿ ನೀಡಲಾಗಿದೆ. ಅದಕ್ಕೆ ಪಶುವೈದ್ಯರ ಪರವಾನಗಿಯಷ್ಟೇ ಬೇಕಾಗುತ್ತದೆ. ಈವರೆಗೆ ಕರ್ನಾಟಕದಲ್ಲಿರುವ ಕಸಾಯಿಖಾನೆಗಳೂ ಸಹ ಇದೇ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಕಸಾಯಿಖಾನೆಗಳಲ್ಲಿ ವ್ಯವಹಾರದಲ್ಲಿರುವ ವ್ಯಾಪಾರಿಗಳ್ಯಾರೂ ಕರುಗಳ ನ್ನಾಗಲಿ, 12 ವರ್ಷ ವಯಸ್ಸಾಗದ ರಾಸುಗಳನ್ನಾಗಲಿ ಕೊಲ್ಲುವುದಿಲ್ಲ. ಎಲ್ಲಾ ವ್ಯವಹಾರಗಳಲ್ಲಿ ಇರುವಂತೆ ಅಲ್ಲಿಯೂ ಕೆಲವರು ಈ ನಿಯಮವನ್ನು ಉಲ್ಲಂಘಿ ಸುತ್ತಾರಾದರೂ ಅಂಥವರ ಮೇಲೆ ಕ್ರಮ ತೆಗೆದು ಕೊಳ್ಳುವುದಕ್ಕೆ ಈ ಕಾಯಿದೆಯಲ್ಲಿ ಅವಕಾಶವಿದೆ.

ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಹಾರ ಸಂಸ್ಕೃತಿಯ ಮೇಲೂ ದ್ವೇಷ ರಾಜಕಾರಣ ಮಾಡುತ್ತಾ ಗೋಹತ್ಯೆಯನ್ನಿರಲಿ ಗೋಮಾಂಸ ಭಕ್ಷಣೆಯನ್ನೇ ದೇಶದ್ರೋಹದಷ್ಟು ಅಪರಾಧ ಎಂದು ಬಣ್ಣಿಸುತ್ತಿದೆ. ಅದರ ಮೂಲಕ ಅಲ್ಪಸಂಖ್ಯಾತರ ಮೇಲೆ ಮಾತ್ರವಲ್ಲ ದಲಿತ ಮತ್ತು ಶೂದ್ರರ ಆಹಾರ ಸಂಸ್ಕೃತಿಯ ಮೇಲೂ ಸಾಂಸ್ಕೃತಿಕ ದಾಳಿಯನ್ನು ನಡೆಸುತ್ತಿದೆ.

The Karnataka Prevention Of Cow Slaughter And Cattle Preservation (Amendment) Bill, 2009 ಎಂಬ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿ ರುವ ತಿದ್ದುಪಡಿಯ ಪ್ರಕಾರ ಸರ್ಕಾರ ಯಾವುದೇ ವ್ಯಕ್ತಿಯನ್ನು ಈ ಕಾನೂನನ್ನು ಜಾರಿಗೆ ತರಲು “ಅಧಿಕೃತ ವ್ಯಕ್ತಿ”ಯನ್ನಾಗಿ ನೇಮಿಸಬಹುದು. ಆ ವ್ಯಕ್ತಿಗೆ ಎಲ್ಲಿಯಾದರೂ ಈ ಕಾನೂನು ಉಲ್ಲಂಘನೆಯಾಗುತ್ತಿದೆ ಎಂಬ ಮಾಹಿತಿ ದೊರಕಿದರೆ ಅಂಥ “ಜಾಗವನ್ನು ತಪಾಸಣೆ ಮಾಡುವ”, “ಆ ಜಾನುವಾರುಗಳನ್ನು ಮತ್ತು ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ಜಫ್ತಿ ಮಾಡುವ” ಅಧಿಕಾರವನ್ನು ನೀಡುತ್ತಿದೆ. ಅಲ್ಲದೆ ಜಫ್ತಿಯಾದ ವಾಹನವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹರಾಜು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡುತ್ತದೆ. ಇದರ ವಿರುದ್ಧ ಜಿಲ್ಲಾ ನ್ಯಾಯಾಲಯದಾಚೆಗೆ ದಾವೆಯನ್ನು ಹೂಡುವ ಅವಕಾಶವನ್ನೂ ತಿದ್ದುಪಡಿಯು ನಿರಾಕರಿಸುತ್ತದೆ.

ಇವಿಷ್ಟೂ ಸರ್ಕಾರ ಮುದ್ರಿತ ಮಾಹಿತಿಯಲ್ಲಿ ಸೂಚಿಸಿರುವ ತಿದ್ದುಪಡಿಗಳು. ಆದರೆ ಮಂತ್ರಿಗಳು ತಾವು ತರಲಿರುವ ತಿದ್ದುಪಡಿಯು ಗೋಹತ್ಯೆಯನ್ನು ಮಾತ್ರವಲ್ಲ ಗೋಮಾಂಸ ಭಕ್ಷಣೆಯನ್ನೇ ಅಪರಾಧವನ್ನಾಗಿಸುತ್ತದೆ ಎಂದು ಘೋಷಿಸಿದ್ದಾರೆ. ಭಜರಂಗದಳವನ್ನು ಅಧಿಕೃತ “ಗೋ ಸೇವಾ ಸಮಿತಿ”ಗಳನ್ನಾಗಿ ರಚಿಸಿ ಅಧಿಕಾರ ಕೊಡುವ ಮಾತನ್ನಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಪತ್ರಿಕಾ ವರದಿಗಳು ಹೇಳುವಂತೆ ಇಂಥಾ ನಿಯಮಗಳ ಉಲ್ಲಂಘನೆ ಮಾಡುವ ಮೂಲಕ ಘಟಿಸಲಾಗುವ ಅಪರಾಧಕ್ಕೆ 25,000 ರೂ. ಇಂದ 50,000 ರೂವರೆಗೆ ದಂಡ ಮತ್ತು 3-7 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಪ್ರಸ್ತಾಪವಿದೆ (ಡೆಕ್ಕನ್ ಹೆರಾಲ್ಡ್, ಡಿಸೆಂಬರ್ 13, 2009).

ಅಂದರೆ ಗೋಹತ್ಯೆ ಮಾತ್ರವಲ್ಲ ಗೋ ಸಾಗಾಟ ಮತ್ತು ಗೋಮಾಂಸ ಭಕ್ಷಣೆಯೂ ಸಹ ದೇಶದ್ರೋಹದಂಥ ಅಪರಾಧವಾಗಿಬಿಡುತ್ತದೆ. ಹಾಗಾದಲ್ಲಿ ಅದು ಇಡೀ ಸಮಾಜದ ಮೇಲೆ ಸಂಘಪರಿವಾರಕ್ಕೆ ಅಮಿತವಾದ ಅಧಿಕಾರವನ್ನು ಕೊಟ್ಟು ಕಂಡರಿಯದ ಅರಾಜಕತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಇದು ಕೇವಲ ಮುಸ್ಲಿಮರ ವಿರುದ್ಧದ ಕಾಯಿದೆ ಮಾತ್ರವಲ್ಲ. ಗೋಮಾಂಸ ಭಕ್ಷಣೆಯನ್ನು ಮಾಡುವ ದಲಿತರ, ಶೂದ್ರರ ಎಲ್ಲಾ ಅಬ್ರಾಹ್ಮಣರನ್ನು ಅಪರಾಧಿ ಗಳನ್ನಾಗಿ ಮಾಡುವ ಕಾಯಿದೆಯಾಗಿದೆ.

ಗೋವನ್ನು ಪವಿತ್ರ ಎಂದು ಭಾವಿಸುವ ಸಮುದಾಯದ ಭಾವನೆಗಳೂ ಗೌರವಾರ್ಹವೇ. ಆದರೆ ಈ ತಿದ್ದುಪಡಿಗಳು ಅವರ ಭಾವನೆಗಳ ದುರುಪಯೋಗ ಮಾಡಿಕೊಂಡು ದಲಿತ, ಶೂದ್ರ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಭೌತಿಕ ಮತ್ತು ಸಾಂಸ್ಕೃತಿಕ ಹಲ್ಲೆಯನ್ನು ಮಾಡುವ ಉದ್ದೇಶ ಹೊಂದಿದೆ. ಆದ್ದರಿಂದ ಗೋಮಾಂಸ ಭಕ್ಷಣೆ ಮಾಡುವವರೂ, ಮಾಡದವರೂ, ಗೋವನ್ನು ಪವಿತ್ರ ಎಂದು ಭಾವಿಸುವವರು, ಮನುಷ್ಯರ ವಿವಿಧ ಆಹಾರದ ಸಂಸ್ಕೃತಿಗಳೂ ಮುಖ್ಯ ಎಂದು ನಂಬಿರುವವರು ಎಲ್ಲರೂ ಈ ತಿದ್ದುಪಡಿಗಳನ್ನು ವಿರೋಧಿಸಲೇ ಬೇಕಿದೆ.

ಏಕೆಂದರೆ ಇದು ಗೋಹತ್ಯೆಯನ್ನು ನಿಷೇಧಿಸಿ ನರಹತ್ಯೆಯನ್ನು ಪ್ರಚೋದಿಸುವ ಫ್ಯಾಸಿಸ್ಟ್ ಕಾಯಿದೆಯಾಗಿದೆ.



ಗೋಹತ್ಯೆ, ಸುಪ್ರೀಂ ಕೋರ್ಟು ಮತ್ತು ಸಂವಿಧಾನ :ಬಿಜೆಪಿ ಹೇಳುತ್ತಿರುವ ಹಸಿಸುಳ್ಳುಗಳು ಮತ್ತು ಅರ್ಧ ಸತ್ಯಗಳು


  -ಶಿವಸುಂದರ್
ಹಸು ಗೆ ಚಿತ್ರದ ಫಲಿತಾಂಶ

  ಬಿಜೆಪಿ ಪಕ್ಷದ ಪ್ರಣಾಳಿಕೆ, ಸಂವಿಧಾನ ಮತ್ತು ತತ್ವ ಸಿದ್ಧಾಂತಗಳು ನಿಂತಿರುವುದೇ ಹಸಿಸುಳ್ಳುಗಳು ಮತ್ತು ಅರ್ಧಸತ್ಯಗಳ ಮೇಲೆ. ಆದರೆ ಹಿಟ್ಲರನ ಪಕ್ಕಾ ಅನುನಾಯಿಗಳಾಗಿರುವ ಈ ಆಧುನಿಕ ಫ್ಯಾಸಿಸ್ಟರು ಸುಳ್ಳುಗಳನ್ನೇ ಸಾವಿರ ಬಾರಿ ಪಲುಕುತ್ತಾ ಅದನ್ನೇ ಪರಮಸತ್ಯವೆಂದು ಜನರನ್ನು ನಂಬಿಸಿ ದಾರಿತಪ್ಪಿಸು ತ್ತಿದ್ದಾರೆ. ಇವರು ಎಂಥಾ ನೀತಿಹೀನ ಮತ್ತು ಲಜ್ಜೆಗೆಟ್ಟ ಸುಳ್ಳುಕೋರರು ಎಂದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸವನ್ನೂ, ಸಂವಿಧಾನವನ್ನೂ ಮತ್ತು ಕೋರ್ಟುಗಳ ತೀರ್ಮಾನಗಳನ್ನೂ ತಿರುಚಬಲ್ಲರು ಮತ್ತು ಹಸಿಹಸಿ ಸುಳ್ಳುಗಳನ್ನು ಹೇಳಬಲ್ಲರು.

ಇದೀಗ ತಮ್ಮ ಈ ಗೋಬೆಲ್ಸ್ ಶಸ್ತ್ರಾಸ್ತ್ರಗಳನ್ನು ಅವರು ಸಂಪೂರ್ಣ ಗೋಹತ್ಯಾ ನಿಷೇಧಕ್ಕಾಗಿ ನಡೆಸುತ್ತಿರುವ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಜನತೆಯ ಸತತ ಪ್ರತಿರೋಧ ಮತ್ತು ನಿರಂತರ ಹೋರಾಟಕ್ಕೆ ಮಣಿದು ಸಂಪೂರ್ಣ ಗೋಹತ್ಯೆ ನಿಷೇಧಕ್ಕಾಗಿ ಬಿಜೆಪಿ ಸರ್ಕಾರ ತರುತ್ತಿರುವ ಮಸೂದೆಯನ್ನು ರಾಜ್ಯಪಾಲರು “ಶಾಸನವಾಗಲು ಅನರ್ಹವಾಗಿರುವ ಮತ್ತು ದೇಶದ ಜನತೆಯ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳಿವೆ” ಎಂಬ ಟಿಪ್ಪಣಿಯೊಂದಿಗೆ ರಾಷ್ಟ್ರಪತಿಯವರ ಅವಗಾಹನೆಗಾಗಿ ಕಳಿಸಿಕೊಟ್ಟಿದ್ದಾರೆ. ಇದಾಗಿ ವಾರಗಳೇ ಉರುಳಿದಿದ್ದರೂ ಸುಮ್ಮನಿದ್ದ ಬಿಜೆಪಿ ಉಪಚುನಾವಣೆಗಳು ಘೋಷಣೆಯಾದೊಡನೆ ಸತ್ತ ಗೋವನ್ನು ಬಡಿದೆಬ್ಬಿಸಿ ತಮ್ಮ ಚುನಾವಣಾ ಪ್ರಚಾರಕ್ಕೆ ಅಟ್ಟಿಕೊಂಡು ಬರುತ್ತಿದ್ದಾರೆ. ಈ ಮೊದಲು ತಮ್ಮ ಸಾಧನೆಯ ಆಧಾರದ ಮೇಲೆ ಜನರ ಬಳಿ ಹೋಗುತ್ತೇವೆ ಎನ್ನುತ್ತಿದ್ದ ಈ ಕೋಮುವಾದಿಗಳು ತಮ್ಮ ಸಾಧನಾ ಸಮಾವೇಶಕ್ಕೆ ಜನರು ಬರುವುದೇ ಕಷ್ಟ ಎಂಬುದು ಅರ್ಥವಾದೊಡನೆ ಗೋಹತ್ಯೆ ನಿಷೇಧ ಎಂಬ ಕೋಮುವಾದಿ ವಿಷಯವನ್ನೇ ಎಲೆಕ್ಷನ್ ಅಜೆಂಡಾ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸೆಪ್ಟೆಂಬರ್ 1 ರಿಂದ  5ರವರೆಗೆ ರಾಜ್ಯಾದ್ಯಂತ ಹೋರಾಟ ಮತ್ತು ಪ್ರದರ್ಶನಗಳನ್ನೂ ಮತ್ತು ಸೆಪ್ಟೆಂಬರ್ 6 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನೂ ಆಯೋಜಿಸಿದ್ದಾರೆ. ಆ ಮೂಲಕ ಈ ಮಸೂದೆಯನ್ನು ವಿರೋಧಿಸುವ ಪಕ್ಷಗಳು ಹಿಂದೂ ವಿರೋಧಿಗಳೆಂದೂ ಮತ್ತು ತಾವು ಮಾತ್ರ ಹಿಂದೂಪರ ಪಕ್ಷವೆಂದೂ ಪ್ರಚಾರ ಮಾಡುತ್ತಾ ಹಿಂದೂ ಓಟ್ ಬ್ಯಾಂಕನ್ನು ತನ್ನೆಡೆಗೆ ಸೆಳೆದುಕೊಳ್ಳುವ ತನ್ನ ಹಳೆ ತಂತ್ರಕ್ಕೆ ಮರಳಿದೆ. ಆದರೆ ಈ ಪ್ರಚಾರದಲ್ಲಿ ಸಂವಿಧಾನದ ಬಗ್ಗೆ ಮತ್ತು ಕೋರ್ಟು ಹಾಗೂ ಕಾನೂನುಗಳ ಬಗ್ಗೆ ಹತ್ತು ಹಲವು ಸುಳ್ಳುಗಳನ್ನು ಮತ್ತು ಅಪವ್ಯಾಖ್ಯಾನಗಳನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಗೋಹತ್ಯೆ ನಿಷೇಧದ ಕುರಿತು ಮತ್ತು ಬಿಜೆಪಿ ನಡೆಸುತ್ತಿರುವ ಪ್ರಚಾರದಲ್ಲಿ ಇರುವ ಹಸಿಸುಳ್ಳುಗಳನ್ನು ಮತ್ತು ಅರ್ಧಸತ್ಯಗಳನ್ನು ಬಯಲುಗೊಳಿ ಸುವ ತುರ್ತು ಅಗತ್ಯವಿದೆ.

ಮೊದಲನೆಯದಾಗಿ ಸದರಿ ಮಸೂದೆಯನ್ನು “ಗೋಹತ್ಯಾ ನಿಷೇಧ ಮಸೂದೆ” ಎಂದು ಕರೆಯುತ್ತಿರುವುದೇ ತಪ್ಪು. 1964ರಲ್ಲಿ ಕರ್ನಾಟಕ ಸರ್ಕಾರ ಗೋಹತ್ಯೆಯನ್ನು ನಿಷೇಧಿಸಲು ಕಾಯಿದೆಯನ್ನು ಮಾಡಿತ್ತು. ಅದರ ಹೆಸರು “Karnataka Prevention of Cow slaughter abd Preservation of Cattle Act -1964” (“ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ”). ಈ ಕಾಯಿದೆಯ ಪ್ರಕಾರ ಹಸು ಮತ್ತು ಕರುಗಳನ್ನು ಹೊರತುಪಡಿಸಿ 12 ವರ್ಷಕ್ಕೆ ಮೇಲ್ಪಟ್ಟ ದನ, ಗೂಳಿ, ಎಮ್ಮೆ ಮತ್ತು ಕೋಣಗಳನ್ನು ಸೂಕ್ತ ಪರವಾನಗಿಯೊಂದಿಗೆ ಕಡಿಯಬಹುದಾಗಿತ್ತು. ಅಂದರೆ ಸ್ಪಷ್ಟವಾಗಿ ಕಾಣುವಂತೆ 1964ರ ಕಾನೂನಿನಲ್ಲೇ ಗೋಹತ್ಯಾ ನಿಷೇಧದ ಎಲ್ಲಾ ಅಂಶಗಳೂ ಇದ್ದವು. ವಾಸ್ತವವಾಗಿ 1964ರ ಈ ಕಾನೂನೂ ಸಹ ಸಮಸ್ಯಾತ್ಮಕವಾಗಿದ್ದು ಅದನ್ನೇ ಪ್ರಶ್ನಿಸಬೇಕಾದ ಅಗತ್ಯವಿದೆ. ವಿಷಯ ಹೀಗಿರುವಾಗ 2009ರ ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರ ಈ ಮೂಲ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ತರಲು ಯತ್ನಿಸಿತು. ಅದರಲ್ಲಿ ಮುಖ್ಯವಾದದ್ದು ಖಾಸಗಿ ವ್ಯಕ್ತಿಗಳನ್ನು ಸಹ ಗೋಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ಅಧಿಕೃತವಾಗಿ ನೇಮಿಸುವುದು ಮತ್ತು ಈ ಕಾಯಿದೆಯನ್ವಯ ಜಿಲ್ಲಾ ಕೋರ್ಟೇ ಈ ವಿಷಯದಲ್ಲಿ ಅಂತಿಮ ಅಪೀಲು ಎಂಬುದು ಬಹುಮುಖ್ಯವಾದ ಮತ್ತು ಅತ್ಯಂತ ಅಪಾಯಕಾರಿಯಾದ ತಿದ್ದುಪಡಿಗಳಾಗಿತ್ತು. ಇದರ ವಿರುದ್ಧವೇ ರಾಜ್ಯಾದ್ಯಂತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಜನತೆ ಹೋರಾಟ ಪ್ರಾರಂಭಿಸಿದ್ದರು. ಇದನ್ನೆಲ್ಲಾ ಗಮನಿಸಿದ ಬಿಜೆಪಿ ಸರ್ಕಾರ ಕಾನೂನು ಪಂಡಿತರ ಸಲಹೆಯನ್ನೂ ತೆಗೆದುಕೊಂಡು 2010ರ ಮಾರ್ಚ್ 4ರಂದು ಈ ತಿದ್ದುಪಡಿ ಮಸೂದೆಯನ್ನೂ ವಾಪಸ್ ತೆಗೆದುಕೊಂಡು ಅದರ ಬದಲಿಗೆ “Karnataka Prevenetion of Slaughter And Preservation of Cattle Bill- 2010” (“ಕರ್ನಾಟಕ ಜಾನುವಾರು ಹತ್ಯಾ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ-2010”) ಎಂಬ ಮಸೂದೆಯನ್ನು ಮಾರ್ಚ್ 10ರಂದು ಸದನದಲ್ಲಿ ಮಂಡಿಸಿತು. ವಿರೋಧ ಪಕ್ಷಗಳ ಒಕ್ಕೊರಲ ವಿರೋಧದ ನಡುವೆಯೂ ಮಾರ್ಚ್ 19ರಂದು ಅದಕ್ಕೆ ಮಂಜೂರಾತಿ ಪಡೆದುಕೊಂಡಿತು. ನಂತರ ಅದನ್ನು ವಿಧಾನ ಪರಿಷತ್ತಿನಲ್ಲೂ ಮಂಡಿಸಲಾಯಿತಾದರೂ ಆಗ ಬಿಜೆಪಿಗೆ ಪರಿಷತ್ತಿನಲ್ಲಿ ಬಹುಮತವಿರಲಿಲ್ಲವಾದ್ದ ರಿಂದ ಅದನ್ನು ಚರ್ಚೆಗೆ ತರಲಿಲ್ಲ. ಜೂನ್ ತಿಂಗಳಲ್ಲಿ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆದು ಅಲ್ಲಿಯೂ ಬಿಜೆಪಿಗೆ ಬಹುಮತ ಸಿಕ್ಕ ಮೇಲೆ ಸಕಲ ವಿರೋಧದ ನಡುವೆಯೂ ಅಲ್ಲಿಯೂ ಈ ಮಸೂದೆಯನ್ನು ಬಿಜೆಪಿ ಸರ್ಕಾರ ಪಾಸು ಮಾಡಿಸಿಕೊಂಡಿತು.

ಹೀಗಾಗಿ ಈಗ ಬಿಜೆಪಿ ಸರ್ಕಾರ ತರಬೇಕೆಂದಿರುವುದು ಕೇವಲ “ಗೋಹತ್ಯಾ ನಿಷೇಧ” ಮಸೂದೆಯಲ್ಲ. ಬದಲಿಗೆ ಕರ್ನಾಟಕ ಜಾನುವಾರು ಹತ್ಯಾ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ-2010! ಇಲ್ಲಿ ಜಾನುವಾರು ಎಂದರೆ ಗೋವು ಮಾತ್ರವಲ್ಲ. ಹಸು, ದನ, ಕರುಗಳು ಮತ್ತು ಇವುಗಳ ಜೊತೆಗೆ ಎಮ್ಮೆ, ಕೋಣಗಳನ್ನು ಸೇರಿಸಿ ಜಾನುವಾರು ಎಂದು ಕರೆಯಲಾಗಿದೆ. ಹೀಗಾಗಿ ಇದು ಕೇವಲ ಗೋಹತ್ಯಾ ನಿಷೇಧ ಮಸೂದೆಯಲ್ಲ. ಬದಲಿಗೆ ಎಲ್ಲಾ ಜಾನುವಾರುಗಳ ಹತ್ಯೆಯನ್ನೂ ನಿಷೇಧಿಸುವ ಕಾಯಿದೆಯಾಗಿದೆ. ಮಾತ್ರವಲ್ಲ ಈ ಯಾವುದೇ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನೂ ಈ ಮಸೂದೆ ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಅಂದರೆ ಇದು ಕೇವಲ ಹತ್ಯೆಯನ್ನು ನಿಷೇಧಿಸುವ ಮಸೂದೆಯಲ್ಲ. ಬದಲಿಗೆ ಇಲ್ಲಿ ಜಾನುವಾರು ಎಂದು ಕರೆಯಲ್ಪಡುವ ಯಾವುದೇ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನೇ ನಿಷೇಧಿಸುತ್ತದೆ.

ಎರಡನೆಯದಾಗಿ ಈ ಮಸೂದೆಯನ್ನು ಬಿಜೆಪಿ ಸರ್ಕಾರ ರೈತರ ಹಿತದೃಷ್ಟಿಯಿಂದಲೇ ತರುತ್ತಿದೆ ಎಂಬುದು ಬಿಜೆಪಿಯ ಬಹುಮುಖ್ಯ ಅಪಪ್ರಚಾರ. ಈ ಜಾನುವಾರು ಸಂರಕ್ಷಣಾ ಮಸೂದೆಯಲ್ಲಿರುವ ಪ್ರತಿ ಕಲಮೂ ರೈತರನ್ನು ಬೀದಿಪಾಲು ಮಾಡುತ್ತದೆ ಮತ್ತು ಜೈಲುಪಾಲು ಮಾಡುತ್ತದೆ.

ಈ ಕಾಯಿದೆಯ ಅತಿಘೋರ ರೈತವಿರೋಧೀ ಅಂಶವು ಮಸೂದೆಯ ಸೆಕ್ಷನ್ (8) ರಲ್ಲಿದೆ. ಅದರ ಪ್ರಕಾರ ಈ ಮಸೂದೆಯು ಕಾನೂನಾದರೆ “ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು ಅಥವಾ ಪರಭಾರೆ ಮಾಡುವುದುನ್ನು ನಿಷೇಧಿಸುತ್ತದೆ”. ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಅಂದರೆ ಇನ್ನು ಮುಂದೆ ಮುದಿಗೊಡ್ಡಾಗಿರುವ ದನಗಳನ್ನು ಪರಭಾರೆ ಮಾಡುವ ರೈತನೂ ಅಪರಾಧಿಯಾಗಲಿದ್ದಾನೆ. ಏಕೆಂದರೆ ಸೆಕ್ಷನ್ (8)ರ ವಿವರಣೆಯ ಪ್ರಕಾರ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಮಾರಿದರೆ ಮಾತ್ರವಲ್ಲ ಆ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಕೊಳ್ಳಲಾಗುತ್ತಿದೆ ಎಂದು “ಗೊತ್ತಿದ್ದರೆ, ಅಥವಾ ದನಗಳನ್ನು ಕೊಲ್ಲಲೆಂದೇ ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿದ್ದೂ” ಮಾರಿದರೂ ಸಹ ಈ ಕಾಯಿದೆ ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಆದರೆ ರೈತನಿಗೆ ಗೊತ್ತಿದ್ದೂ ಮಾರಿದ್ದಾನೆ ಎಂದು ಮತ್ತು ಕೊಲ್ಲಲೆಂದು ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿತ್ತು ಎಂಬುದನ್ನು ನಿರ್ಧರಿಸುವವರು ಯಾರು? ಅಪರಾಧವನ್ನು ತಡೆಗಟ್ಟಲು ಬರುವ ಸಬ್ ಇನ್‍ಸ್ಪೆಕ್ಟರ್ ಅಥವಾ ಇತರ ಅಧಿಕಾರಿಗಳು! ಅಂದರೆ ಈಗಾಗಲೇ ಆತ್ಮಹತ್ಯೆಯ ಅಂಚಿನಲ್ಲಿರುವ ರೈತನ ಬದುಕು ಪೋಲೀಸ್ ಅಧಿಕಾರಿಗಳ ಮತ್ತು ಸರ್ಕಾರದ ಮರ್ಜಿಗೆ ಬೀಳುತ್ತದೆ.

ಇದರಿಂದಲೇ ಈ ಪುರೋಹಿತರ ಸರ್ಕಾರಕ್ಕೆ ರೈತ ಬದುಕಿನ ಕಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲವೆಂಬುದು ಗೊತ್ತಾಗುತ್ತದೆ. ಒಂದು ಹಾಲುಕೊಡುವ ಹಸು ಅಥವಾ ಉಳುಮೆಗೆ ಹೆಗಲಾಗುವ ದನ ಎರಡೂ ರೈತನ ಬದುಕನ್ನು ಪೋಷಿಸುತ್ತವೆ. ಆದರೆ ಹಾಲು ಕೊಡದ ಹಸ ಮತ್ತು ಉಳುಮೆಗೆ ಈಡಾಗದ ದನವನ್ನು ಸಾಕುವುದು ಈಗಾಗಲೇ ಸಾಯುತ್ತಾ ಸಾಯುತ್ತಾ ಬದುಕಿರುವ ರೈತನಿಗೆ ಎಷ್ಟು ಹೊರೆಯಾಗುತ್ತದೆಂಬುದರ ಅರಿವೇ ಈ ಸರ್ಕಾರಕ್ಕಿಲ್ಲ. ಸರ್ಕಾರದ ಅಂಕಿಅಂಶಗಳ ಪ್ರಕಾರ ನಮ್ಮ ಹಳ್ಳಿಗಾಡಿನಲ್ಲಿ ಬದುಕುತ್ತಿರುವ ಮುಕ್ಕಾಲುವಾಸಿ ಜನರ ದಿನದ ಸರಾಸರಿ ಆದಾಯ ಕೇವಲ 20 ರೂಪಾಯಿ. ಇದರಲ್ಲಿ ಮನೆಮಂದಿಯೆಲ್ಲಾ ಮೂರುಹೊತ್ತು ಅರೆಹೊಟ್ಟೆ ಊಟಮಾಡಲೂ ಆಗುವುದಿಲ್ಲ. ಇದರ ಜೊತೆಗೆ ಯಾವರೀತಿಯಲ್ಲೂ ಉಪಯೋಗವಿಲ್ಲದ ದನ-ಹಸುಗಳನ್ನು ಸಾಕಬೇಕೆಂದರೆ ದಿನಕ್ಕೆ ಏನಿಲ್ಲವೆಂದರೂ 30-50 ರೂ. ಖರ್ಚಾಗುತ್ತದೆ. ಇದನ್ನು ಭರಿಸುವವರು ಯಾರು?

ಅದಕ್ಕಿಂತ ಮುಖ್ಯವಾದದ್ದು ಮತ್ತೊಂದಿದೆ. ಗೊಡ್ಡಾದ ದನ-ಹಸುಗಳನ್ನು ಮಾರದಿದ್ದರೆ ಬೇಸಾಯಕ್ಕೆ ಬೇಕಾದ ಹೊಸ ಜಾನುವಾರುಗಳನ್ನು ಕೊಂಡುಕೊಳ್ಳಲು ರೈತನಿಗೆ ಎಲ್ಲಿಂದ ದುಡ್ಡು ಬರಬೇಕು? ಒಂದು ಕಡೆ ಗೊಡ್ಡಾದ ದನಗಳನ್ನೂ ಸಾಕಬೇಕು, ಮತ್ತೊಂದು ಕಡೆ ಬೇಸಾಯ ಮುಂದುವರೆಸಲೂ ಬೇಕಾದ ಹೊಸ ರಾಸುಗಳನ್ನು ಕೊಳ್ಳಲೂ ಹಣವಿಲ್ಲ. ಈ ಇಕ್ಕಟ್ಟಿನ ಸಂದರ್ಭದಲ್ಲಿ ರೈತ ಒಂದು ವೇಳೆ ದನವನ್ನು ಮಾರಿದರೆ ಅವನನ್ನು ಮುಲಾಜಿಲ್ಲದೆ ಜೈಲಿಗೆ ಹಾಕಿ ಎನ್ನುತ್ತದೆ ಈ ಕಾಯಿದೆ!

ಇಷ್ಟು ಮಾತ್ರವಲ್ಲ. ಈ ರಾಜ್ಯದ ಬಹುಪಾಲು ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಹೈನುಗಾರಿಕೆಯಲ್ಲಿ ನಾಟಿ ಹಸುಗಳಿಗಿಂತ ಹೆಚ್ಚು ಹಾಲು ಕೊಡುವ ಜರ್ಸಿ ಅಥವಾ ಸೀಮೆ ಹಸುಗಳೇ ಮುಖ್ಯ. ಇವುಗಳು ಹಾಲನ್ನು ಕೊಟ್ಟರೂ ಕೊಡದಿದ್ದರೂ ನಾಟಿ ಹಸುಗಳ ಮೂರುಪಟ್ಟು ಮೇವನ್ನು ತಿನ್ನುತ್ತವೆ. ಎಲ್ಲಿಯತನಕ ಅವು ಹಾಲನ್ನು ಕೊಡುತ್ತಿರುತ್ತವೋ ಅಲ್ಲಿಯವರೆಗೆ ಅವುಗಳನ್ನು ಸಾಕುವುದು ಅಷ್ಟು ಕಷ್ಟವಲ್ಲ. ಆದರೆ ಒಮ್ಮೆ ಅವು ಗೊಡ್ಡಾದ ನಂತರ ಅವುಗಳು ಮೇವು ತಿನ್ನುವ ಪ್ರಮಾಣವೇನೂ ಕಡಿಮೆಯಾಗುವುದಿಲ್ಲ. ಹೀಗಾಗಿ ಆದಾಯವಿರಲಿ, ಇಲ್ಲದಿರಲಿ ರೈತ ಆ ಸೀಮೆಹಸುಗಳನ್ನು ಸಾಕಲೇ ಬೇಕೆಂದರೆ ರೈತಾಪಿಯ ಕುಟುಂಬದ ಆರ್ಥಿಕತೆಯ ಮೇಲೆ ಎಂಥಾ ದುಷ್ಟ ಪ್ರಭಾವ ಬೀರಬಹು ದೆಂಬುದನ್ನು ಸರ್ಕಾರ ಯೋಚಿಸಿದೆಯೇ?

ಈ ಸೀಮೆಹಸುಗಳ ಗಂಡುಕರುಗಳು ಬೇಸಾಯದ ಬಳಕೆಗೂ ಬರುವುದಿಲ್ಲ, ಹಾಲನ್ನೂ ಕೊಡುವುದಿಲ್ಲ. ಮೇವನ್ನು ಮಾತ್ರ ನಾಟಿ ಹಸುಗಳ ಮೂರುಪಟ್ಟು ತಿನ್ನುತ್ತಲೇ ಇರುತ್ತವೆ. ಇವನ್ನು ರೈತ ಮಾರದಿದ್ದರೆ ಅವನಿಗೆ ಬರುವ ಲಾಭವೆಲ್ಲಾ ಇವುಗಳನ್ನು ಸಾಕಲೆಂದೇ ಖರ್ಚಾಗುತ್ತದೆ. ಅಥವಾ ಅದಕ್ಕಿಂತ ಜಾಸ್ತಿಯಾಗುತ್ತದೆ. ಈ ಕಷ್ಟಗಳಿಂದ ತಪ್ಪಿಸಿಕೊಳ್ಳಲು ರೈತನೇನಾದರೂ ಗಂಡುಕರುವನ್ನು ಮಾರಿದರೆ ಆತನಿಗೆ ಈ ಕಾಯಿದೆಯ ಪ್ರಕಾರ ಜೈಲುಶಿಕ್ಷೆ ಕಟ್ಟಿಟ್ಟಬುತ್ತಿ!

ಈ ಮಸೂದೆಯೇನಾದರೂ ಶಾಸನವಾದರೆ ಮೇಲೆ ಹೇಳಿದ ಯಾವುದೇ ಸಂದರ್ಭದಲ್ಲೂ ರೈತನನ್ನು ಸ್ಥಳೀಯ ಸಬ್ ಇನ್ಸ್‍ಪೆಕ್ಟರ್ ಬಂಧಿಸಬಹುದು. ಈ ಮಸೂದೆಯ ಪ್ರಕಾರ ಇವೆಲ್ಲವೂ ಶಿಕ್ಷಾರ್ಹ ಅಪರಾಧವಾದ್ದರಿಂದ ಅವು ಜಾಮೀನು ರಹಿತ ಅಪರಾಧಗಳಾಗಿವೆ. ಇವುಗಳಿಗೆ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲದಲ್ಲೇ ಜಾಮೀನು ಸಿಗಲು ಸಾಧ್ಯ. ಅಂದರೆ ಒಮ್ಮೆ ರೈತನನ್ನು ಯಾವುದಾದರೂ ಹಳ್ಳಿಯಲ್ಲಿ ಮೇಲಿನ ಆರೋಪದಲ್ಲಿ ಬಂಧಿಸಿದರೆ ಅವನನ್ನು ಜಿಲ್ಲಾಕೇಂದ್ರಕ್ಕೆ ಕರೆತರಬೇಕು. ಅಂದರೆ ಸುಮ್ಮನೆ ಅನುಮಾನದ ಮೇಲೆ ಬಂಧನವಾದರೂ ಕನಿಷ್ಟ ಎರಡು ಮೂರು ದಿನಗಳವರೆಗೆ ಜಾಮೀನು ಸಿಗುವುದಿಲ್ಲ. ಈಗಾಗಲೇ ಸಂಕಷ್ಟದಲ್ಲಿರುವ ರೈತ ಜಿಲ್ಲಾ ಕೇಂದ್ರದಲ್ಲಿ ವಕೀಲರಿಗೆ ದುಬಾರಿ ಫೀಸು ತೆತ್ತು ಜಾಮೀನು ಮಾಡಿಸಿಕೊಳ್ಳಬೇಕು. ಇದೆಲ್ಲ ಎಷ್ಟು ರೈತರಿಗೆ ಸಾಧ್ಯ?

ರೈತರ ಕಷ್ಟ ಇಲ್ಲಿಗೇ ಮುಗಿಯಲಿಲ್ಲ. ಈ ಮಸೂದೆಯ ಅಂಶಗಳು ರೈತನು ಆತ್ಮಹತ್ಯೆ ಮಾಡಿಕೊಳ್ಳುವ ತನಕ ಬಿಡುವಂತೆ ಕಾಣುವುದಿಲ್ಲ. ಈಗಾಗಲೇ ವಿವರಿಸಿದಂತೆ ರೈತ ಮುದಿಗೊಡ್ಡು ದನಗಳನ್ನು ಯಾವ ಕಾರಣಕ್ಕೂ ಮಾರುವಂತಿಲ್ಲ. ಹಾಗಿದ್ದರೆ ಅವುಗಳನ್ನು ಏನು ಮಾಡಬೇಕು? ಈ ಮಸೂದೆಯ ಸೆಕ್ಷನ್ (18)ರ ಪ್ರಕಾರ ಇಂಥಾ ದನಗಳನ್ನು ನೋಡಿಕೊಳ್ಳಲು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆ ಆಶ್ರಮಗಳನ್ನು ಸ್ಥಾಪಿಸುತ್ತವೆ. ರೈತರು ತಮ್ಮ ಗೊಡ್ಡುದನಗಳನ್ನು ಕಡ್ಡಾಯವಾಗಿ ಈ ಆಶ್ರಮದಲ್ಲೇ ಬಿಡಬೇಕು. ಅಷ್ಟುಮಾತ್ರವಲ್ಲ, ಅವುಗಳನ್ನು ನೋಡಿಕೊಳ್ಳಲು ರೈತ ಸರ್ಕಾರ ಅಥವಾ ಆ ಸಂಸ್ಥೆ ನಿಗದಿಪಡಿಸಿದಷ್ಟು ಶುಲ್ಕವನ್ನೂ ಪಾವತಿಸಬೇಕು!

ತಮ್ಮ ಮಕ್ಕಳ ಶಾಲಾ ಫೀಸನ್ನೆ ಪಾವತಿಸಲಾಗದಷ್ಟು ಸಂಕಷ್ಟದಲ್ಲಿರುವ ರೈತ ಈ ಶುಲ್ಕವನ್ನು ಹೇಗೆ ಭರಿಸಬಲ್ಲ? ಒಂದು ವೇಳೆ ರೈತ ಅಷ್ಟು ಶುಲ್ಕವನ್ನು ಪಾವತಿಸಲಾಗದಿದ್ದರೆ ಸರ್ಕಾರದ ಕಣ್ಣಿನಲ್ಲಿ ಆತ ಅಪರಾಧಿಯಾಗುತ್ತಾನೆ. ಅಕಸ್ಮಾತ್ ರೈತ ಬದುಕಿನ ಬೇಗುದಿ ತಡೆಯದೆ ತನ್ನ ದನಗಳನ್ನು ಮಾರೇ ಬಿಟ್ಟರೆ ಎಷ್ಟು ಶಿಕ್ಷೆ? ಈ ಮಸೂದೆಯ ಸೆಕ್ಷನ್ (12) ಯಾವ ಯಾವ ಅಪರಾಧಕ್ಕೆ ಎಷ್ಟೆಷ್ಟು ಶಿಕ್ಷೆಯೆಂಬುದನ್ನು ನಿಗದಿಪಡಿಸುತ್ತದೆ. ಸೆಕ್ಷನ್ 4ರ ಅಡಿ ಜಾನುವಾರು ಹತ್ಯೆ ಮಾಡಿದ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ಗಳಿಂದ 1,00,000 ರೂ.ವರೆಗೆ ಜುಲ್ಮಾನೆಯನ್ನೂ ವಿಧಿಸಬಹುದಾಗಿದೆ. ಭಯೋತ್ಪಾದನೆ, ಉದ್ದೇಶ ಪೂರ್ವಕ ಕೊಲೆ, ಬಲಾತ್ಕಾರ, ಕಳ್ಳಸಾಗಣೆ, ಭ್ರಷ್ಟಾಚಾರಗಳಿಗೂ ಈ ಪ್ರಮಾಣದ ಶಿಕ್ಷೆಯನ್ನು ಇಂಡಿಯನ್ ಪೀನಲ್ ಕೋಡ್ ವಿಧಿಸುವುದಿಲ್ಲ.

ಅದೇ ರೀತಿ ಈ ಮಸೂದೆಯಡಿ ಎಸಗಲಾಗುವ ಇತರ ಅಪರಾಧಗಳಿಗೆ- ಅಂದರೆ ದನದ ಸಾಗಾಟ ಮಾಡುವುದು, ಹಸು-ದನವನ್ನು ಮಾರಾಟ ಮಾಡುವುದು, ದನದ ಮಾಂಸ ತಿನ್ನುವುದು, ತಿನ್ನಲು ಪ್ರೋತ್ಸಾಹಿಸುವುದು ಹಾಗೂ ಇನ್ನಿತರ ಅಪರಾಧಗಳಿಗೆ - ಒಂದು ವರ್ಷದಿಂದ ಮೂರು ವರ್ಷದ ಸಜೆ ಮತ್ತು 10,000 ರೂ. -25,000 ರೂ.ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ.

ಅಂದರೆ ಸಾರಾಂಶದಲ್ಲಿ ಇದರ ಅರ್ಥವೇನೆಂದರೆ ರೈತ ತನ್ನೆಲ್ಲಾ ಕಷ್ಟವನ್ನು ನುಂಗಿಕೊಂಡು ಹೇಗಾದರೂ ಬೇಸಾಯದಲ್ಲಿ ಮುಂದುವರೆಯುವುದೇ ದೊಡ್ಡ ಅಪರಾಧ. ಹೀಗಾಗಿ ಮಾನ್ಯ ಯಡಿಯೂರಪ್ಪನವರ ಬಿಜೆಪಿ ಸರ್ಕಾರದಲ್ಲಿ ಈ ನಾಡಿನ ಎಲ್ಲಾ ರೈತರೂ ಇಂದಲ್ಲ ನಾಳೆ ಜೈಲು ಸೇರುವುದನ್ನು ತಪ್ಪಿಸಲಾಗುವುದಿಲ್ಲ!! ಏಕೆಂದರೆ ಈ ಸರ್ಕಾರಕ್ಕೆ ಕುರುಡು ಕೋಮುದ್ವೇಷ ಬಿಟ್ಟರೆ ಬೇರೆ ಅಜೆಂಡಾಗಳೇ ಇಲ್ಲ. ರೈತನ ಕಷ್ಟ ಅರ್ಥವಾಗುವುದೂ ಇಲ್ಲ. ತಮ್ಮ ಗುಪ್ತ ಕೇಸರಿ ಅಜೆಂಡಾವನ್ನು ಜಾರಿಗೆ ತರಲು ಈ ಬಿಜೆಪಿ ಸರ್ಕಾರ ಇಡೀ ರೈತಾಪಿ ಸಮುದಾಯವನ್ನೇ ಆತ್ಮಹತ್ಯೆಯತ್ತ ದೂಡುತ್ತಿದೆ ಅಥವಾ ಸೆರೆಮನೆಗೆ ದೂಡುತ್ತಿದೆ.

ಹಸಿರುಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನ ಸರ್ಕಾರ ರೈತರ ಹಿತವನ್ನು ಕಾಪಾಡುವುದು ಅವರನ್ನು ಜೈಲಿಗೆ ತಳ್ಳುವ ಮೂಲಕ. ಇದು ರೈತ ದ್ರೋಹವಲ್ಲದೆ ಮತ್ತಿನ್ನೇನು?ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರಿಗೆ ಗೋವುಗಳನ್ನು ಸಾಕುವುದು ಕಷ್ಟವಾದರೆ ಅವರಿಗೆ ಶೇ.6ರ ಬಡ್ಡಿಯಲ್ಲಿ 70,000 ರೂ. ಸಾಲವನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ ಇದು ರೈತರನ್ನು ಇನ್ನಷ್ಟು ಸಾಲಗಾರರನ್ನಾಗಿ ಮಾಡುವ ಹುನ್ನಾರವೇ ಹೊರತು ಬಚಾವು ಮಾಡುವ ಉಪಾಯವಲ್ಲ. ಏಕೆಂದರೆ ಯಾವುದೇ ರೀತಿಯಿಂದಲೂ ರೈತನ ಆದಾಯವನ್ನು ಹೆಚ್ಚಿಸದೆ ಅವರ ವೆಚ್ಚವನ್ನು ಮಾತ್ರ ಹೆಚ್ಚಿಸುವ ಅನುಪಯುಕ್ತ ಹಸು ಅಥವಾ ದನಗಳನ್ನು ಸಾಕಲು ಸಾಲ ಮಾಡುವುದರಿಂದ ರೈತನ ಸಾಲ ಮತ್ತು ಬವಣೆ ಇನ್ನಷ್ಟು ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ.

ಇದೇ ಬಗೆಯ ಕಾಯಿದೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‍ಘಡ್ ಇತ್ಯಾದಿ ಏಳು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆಯೆಂಬ ಅರ್ಧ ಸತ್ಯ. ಈ ರಾಜ್ಯಗಳಲ್ಲಿ ಇರುವುದು ಸಂಪೂರ್ಣ “ಗೋ ಸಂತತಿ” ಹತ್ಯಾ ನಿಷೇಧದ ಕಾಯಿದೆಯೇ ವಿನಃ ಎಮ್ಮೆ, ಕೋಣಗಳನ್ನೂ ಒಳಗೊಂಡಂತೆ “ಸಕಲ ಜಾನುವಾರು” ಹತ್ಯಾ ನಿಷೇಧ ಕಾಯಿದೆಯಲ್ಲ.

ಹಾಗೆಯೇ ಗುಜರಾತಿನಲ್ಲಿ ಜಾರಿಗೆ ಬಂದಿರುವ ಇದೇ ಬಗೆಯ ಕಾಯಿದೆ ಯನ್ನು ಸುಪ್ರಿಂಕೋರ್ಟಿನ ಏಳು ಸದಸ್ಯರ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ ಎನ್ನುವ ಅಪಪ್ರಚಾರ. ವಾಸ್ತವ ಇದಕ್ಕೆ ತದ್ವಿರುದ್ಧವಾದದ್ದು. 1994ರಲ್ಲಿ ಆಗಿನ ಗುಜರಾತ್ ಸರ್ಕಾರವೇ ಆವರೆಗೆ ಅಸ್ತಿತ್ವದಲ್ಲಿದ್ದ Bombay Animal Preservation Act  ಗೆ ತಿದ್ದುಪಡಿ ತರಲು Bombay Animal Preservation (Gujarat Amendment) Act, 1994 ಆದರೆ ಈ ಕಾಯಿದೆಯೂ ಹಲವಾರು ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿತ್ತು. ಆ ಕಾರಣದಿಂದಲೇ ಖುರೇಷಿ ಸಮುದಾಯದವರು ಹೈಕೋರ್ಟಿನಲ್ಲಿ ಇದರ ವಿರುದ್ಧ ಹಾಕಿದ್ದ ಅಪೀಲನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟು ಈ ಮಸೂದೆ ಸಂವಿಧಾನ ವಿರೋಧಿ ಎಂದು ಆ ಕಾಯಿದೆಯನ್ನು ರದ್ದುಗೊಳಿಸಿತ್ತು. ಆನಂತರ ನರೇಂದ್ರ ಮೋದಿ ಆಡಳಿತದಲ್ಲಿ ಕೆಲವು ಚೆಡ್ಡಿ ಸಂಘಟನೆಗಳು ಈ ಪ್ರಕರಣವನ್ನು 2002ರಲ್ಲಿ ಸುಪ್ರೀಂ ಕೋರ್ಟಿಗೆ ಕೊಂಡೊಯ್ದರು. ಈ ಪ್ರಕರಣದಲ್ಲಿ ಹಲವಾರು ಸಂವಿಧಾನಾತ್ಮಕ ಅಂಶಗಳಿದ್ದರಿಂದ ಇದನ್ನು ಏಳು ನ್ಯಾಯಾಧೀಶರ ಬೆಂಚಿಗೆ ವರ್ಗಾಯಿಸಲಾಯಿತು.

ಅಂತಿಮವಾಗಿ ಸುಪ್ರೀಂಕೋರ್ಟಿನ ಏಳು ಜನರ ಪೀಠದಲ್ಲಿ ಆರು ನ್ಯಾಯಾಧೀಶರು 1994ರ “ಗುಜರಾತ್ ಕಾಯಿದೆ”ಯನ್ನು ಎತ್ತಿ ಹಿಡಿದದ್ದು ನಿಜ. ಆದರೆ ಅದು “ಗೋ ಸಂತತಿ ಹತ್ಯಾ ನಿಷೇಧ”ವನ್ನೇ ವಿನಃ “ಸಂಪೂರ್ಣ ಜಾನುವಾರು ಹತ್ಯೆ ನಿಷೇಧ”ವನ್ನಲ್ಲ. ಏಕೆಂದರೆ ಗುಜರಾತ್ ಕಾಯಿದೆಯಲ್ಲೇ ಸಂಪೂರ್ಣ ಜಾನುವಾರು ಹತ್ಯಾ ನಿಷೇಧದ ಪ್ರಸ್ತಾಪವಿರಲಿಲ್ಲ. ಅಷ್ಟು ಮಾತ್ರವಲ್ಲ, ಈ ಮಸೂದೆಯಲ್ಲಿ ಎಮ್ಮೆ ಮತ್ತು ಕೋಣಗಳನ್ನು ಕಡಿಯುವುದರ ಬಗ್ಗೆ ನಿಷೇಧವಿಲ್ಲದಿದ್ದರಿಂದಲೇ “ಸಂಪೂರ್ಣ ಗೋ ಸಂತತಿ ಹತ್ಯಾ ನಿಷೇಧ”ಕ್ಕೆ ಸುಪ್ರೀಂ ಕೋರ್ಟು ಅನುಮತಿ ನೀಡಿದೆ. ತಾನು ಈ ನಿರ್ಣಯಕ್ಕೆ ಬರಲು ಕಾರಣವೇನೆಂದು ಸ್ಪಷ್ಟಪಡಿಸುತ್ತಾ ಸಾಂವಿಧಾನಿಕ ಪೀಠದ ಮುಖ್ಯಸ್ಥ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಲಹೋಟಿಯವರು:
“In the present case, we find the issue relates to a total prohibition imposed on the slaughter of cow and her progeny. The ban is total with regard to the slaughter of one particular class of cattle. The ban is not on the total activity of butchers (kasais); they are left free to slaughter cattle other than those specified in the Act. It is not that the writ petitioner respondents survive only by slaughtering cow progeny. They can slaughter animals other than cow progeny and carry on their business activity.” ((2005) 8 SCC 534) ಎಂದು ಸ್ಪಷ್ಟವಾಗಿ ತಮ್ಮ ನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ.
ಅಂದರೆ:
“ಗುಜರಾತಿನ ಕಾಯಿದೆಯು ಜಾನುವಾರುಗಳಲ್ಲಿ ಗೋ-ಸಂತತಿಯೆಂಬ ಒಂದು ವಿಭಾಗದ ಹತ್ಯೆಯನ್ನು ಮಾತ್ರ ನಿಷೇಧಿಸುತ್ತದೆಯೇ ಹೊರತು ಸಂಪೂರ್ಣ ಜಾನುವಾರು ಹತ್ಯೆಯನ್ನಲ್ಲ. ಇದು ಕಸಾಯಿಗಳ ವೃತ್ತಿಯ ಮೇಲೆ ಸಂಪೂರ್ಣ ನಿಷೇಧವನ್ನೇನೂ ಹೇರುವುದಿಲ್ಲ. ಅವರು ಈ ಮಸೂದೆಯಲ್ಲಿ ಉಲ್ಲೇಖಿತವಲ್ಲದ ಇತರೆ ಜಾನುವಾರುಗಳ ಹತ್ಯೆಯನ್ನು ಮುಂದುವರೆಸಬಹುದು. ಏಕೆಂದರೆ ಅವರು ಗೋಸಂತತಿಯ ಹತ್ಯೆಯನ್ನು ಮಾಡುವುದರಿಂದ ಮಾತ್ರ ತಮ್ಮ ವ್ಯಾಪಾರ-ವಹಿವಾಟನ್ನು ಮಾಡಬೇಕೆಂದಿಲ್ಲ. ಗೋ-ಸಂತತಿಯಲ್ಲದ ಇತರ ಜಾನುವಾರುಗಳನ್ನು ಹತ್ಯೆ ಮಾಡುವ ಮೂಲಕ ಅವರು ತಮ್ಮ ವ್ಯಾಪಾರವನ್ನು ಮುಂದುವರೆಸಬಹುದು.”

ಅಲ್ಲದೆ ಈ ಬಹುಸಂಖ್ಯಾತ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಏಳನೇ ನ್ಯಾಯಾಧೀಶರಾದ ಜಸ್ಟೀಸ್ ಮಾಥುರ್‍ರವರು ಗೋ ಹತ್ಯೆ ನಿಷೇಧದ ಮಸೂದೆ ಯಲ್ಲಿ ದನ ಮತ್ತು ಗೂಳಿಗಳ ಹತ್ಯೆಯ ನಿಷೇಧವನ್ನೂ ಸೇರಿಸಿದ್ದಕ್ಕೆ ತೀವ್ರ  ವಿರೋಧವನ್ನು ವ್ಯಕ್ತಪಡಿಸಿ ತಮ್ಮ ಪ್ರತ್ಯೇಕ ನಿರ್ಣಯ ನೀಡಿದ್ದರು. ಹೀಗಾಗಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ನಿರ್ಣಯ “ಸಂಪೂರ್ಣ ಗೋ ಸಂತತಿ ಹತ್ಯಾ ನಿಷೇಧ”ವನ್ನು ಎತ್ತಿ ಹಿಡಿದಿದೆಯೇ ವಿನಃ “ಸಂಪೂರ್ಣ ಜಾನುವಾರು ಹತ್ಯಾ ನಿಷೇಧ”ವನ್ನಲ್ಲ. ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ತಾವು ತಂದಿರುವ ಮಸೂದೆಯ ಪರವಾದ ತೀರ್ಮಾನವನ್ನು ನೀಡಿದೆ ಎಂಬುದು ಶುದ್ಧಸುಳ್ಳು.

ಅದೇ ತೀರ್ಮಾನದಲ್ಲಿ ಸಾಂವಿಧಾನಿಕ ಪೀಠ ಸತ್ತ ದನಗಳ ಚರ್ಮ ಮತ್ತಿತ್ಯಾದಿಗಳನ್ನು ಬಳಸಿಕೊಳ್ಳಲು ಸಂಪೂರ್ಣ ಪರವಾನಗಿ ನೀಡಿದೆ:
“In so far as trade in hides, skins and other allied things (which are derived from the body of dead animal) are concerned, it is not necessary that the animal must be slaughtered to avail these things. The animal, whose slaughter has been prohibited, would die a natural death even otherwise and in that case their hides, skins and other parts of body would be available for trade and industrial activity based thereon.”

ಅಂದರೆ: “ದನದ ಚರ್ಮ ಹಾಗು ದೇಹದ ಇತರ ಭಾಗಗಳ ವ್ಯಾಪಾರವನ್ನು ಕುರಿತಂತೆ ಹೇಳುವುದಾದರೆ ಇವುಗಳ ವ್ಯಾಪಾರ ನಡೆಸಬೇಕೆಂದರೆ ಅವುಗಳನ್ನು ಹತ್ಯೆ ಮಾಡಲೇ ಬೇಕೆಂದೇನೂ ಇಲ್ಲ. ಹೇಗಿದ್ದರೂ ಅವು ಸಹಜ ಸಾವನ್ನಪ್ಪುವು ದರಿಂದ ಅವುಗಳ ಚರ್ಮ ಮತ್ತು ದೇಹದ ಇತರ ಭಾಗಗಳ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಏನೂ ಬಾಧಕವಾಗುವುದಿಲ್ಲ.”

ಆದರೆ ಕರ್ನಾಟಕದ ಬಿಜೆಪಿ ಸರ್ಕಾರದ ಮಸೂದೆಯ ಸೆಕ್ಷನ್ 5 ದನದ ಮಾಂಸವನ್ನು ವ್ಯಾಪಾರ ಮಾಡುವುದಿರಲಿ ಅದನ್ನು ಇಟ್ಟುಕೊಳ್ಳುವುದನ್ನೇ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತದೆ. ಹೀಗಾಗಿ ಈ ಕಾರಣಕ್ಕೂ ಬಿಜೆಪಿ ಮಸೂದೆಗೆ ಸುಪ್ರೀಂಕೋರ್ಟಿನ ಬೆಂಬಲವಿಲ್ಲ. ಅಂಬೇಡ್ಕರ್ ಮತ್ತು ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಸಂವಿಧಾನವೂ ಸಹ ಸಂಪೂರ್ಣ ಗೋಹತ್ಯಾ ನಿಷೇಧದ ಪರವಾಗಿದೆ ಎಂಬ ಬಿಜೆಪಿ ಹೇಳುತ್ತಿರುವುದೂ ಮತ್ತೊಂದು ಸುಳ್ಳು.

ಸಂವಿಧಾನದ ರಚನಾ ಸಭೆಯಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧವನ್ನು ಮೂಲಭೂತ ಹಕ್ಕನ್ನಾಗಿಯೇ ಮಾಡಬೇಕೆಂಬ ಒತ್ತಾಯವನ್ನು ಕೆಲವು ಹಿಂದೂ ಮಹಾಸಭ ಮತ್ತು ಕಾಂಗ್ರೆಸ್ ಸದಸ್ಯರು ಮಾಡಿದ್ದು ನಿಜ. ಆದರೆ ಅಂಬೇಡ್ಕರ್‍ರವರ ಸತತ ವಾದ ಮತ್ತು ಪರಿಶ್ರಮದಿಂದಾಗಿ ಈ ಉಗ್ರವಾದಿಗಳು ತಮ್ಮ ನಿಲುವಿನಿಂದ ಕೊನೆಗೂ ಹಿಂದೆ ಸರಿದದ್ದು ಈಗ ಇತಿಹಾಸ. ಇದಲ್ಲದೆ ಅಂಬೇಡ್ಕರ್‍ರವರು ತಮ್ಮ ಬರಹದ ಉದ್ದಕ್ಕೂ ದನದ ಮಾಂಸ ಭಕ್ಷಣೆಯನ್ನು ಕೀಳಾಗಿ ಚಿತ್ರಿಸಿದ ಬ್ರಾಹ್ಮಣ್ಯದ ಕುತಂತ್ರವನ್ನು ಬಯಲುಗೊಳಿಸುತ್ತಲೇ ಇದ್ದರು. ಇಂಥಾ ಜನನಾಯಕ, ಮಹಾನ್ ದಾರ್ಶನಿಕ ಬುದ್ಧವಾದಿ ಅಂಬೇಡ್ಕರ್‍ರನ್ನು ಈ ಹಿಂದೂತ್ವವಾದಿಗಳು ತಮ್ಮ ಗೋವು ಪವಿತ್ರ ಎಂಬ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದೇ ಅವರ ಕೀಳು ಮನಸ್ಸಿಗೆ ಒಂದು ನಿದರ್ಶನ.

ಈ ಎಲ್ಲಾ ಚರ್ಚೆಗಳ ಹಿನ್ನೆಲೆಯಲ್ಲಿ ಗೋ ಸಂರಕ್ಷಣೆ ಮತ್ತು ಹತ್ಯಾ ನಿಷೇಧದ ಬಗ್ಗೆ ಸಂವಿಧಾನದಲ್ಲಿ 48ನೇ ಕಲಮನ್ನು ಸೇರಿಸಲಾಯಿತು. ಅದು ಹೇಳುವುದಿಷ್ಟು:
“The State shall endeavour to organise agriculture and animal husbandry on modern and scientific lines and shall, in particular, take steps for preserving and improving the breeds, and prohibiting the slaughter, of cows and calves and other milch and draught cattle.”

ಅಂದರೆ: “ದೇಶದ ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪುನರ್‍ಸಂಘಟಿಸಬೇಕು ಹಾಗೂ ಪ್ರಭುತ್ವವು ಗೋವು ಮತ್ತು ಇತರ ಹಾಲು ಕರೆಯುವ ಮತ್ತು ಕೃಷಿ ಉಪಯೋಗಿ ಜಾನುವಾರುಗಳ ಹತ್ಯೆಯನ್ನು ತಡೆಗಟ್ಟಲು ಕಾನೂನನ್ನು ರಚಿಸಬೇಕು." ಇಲ್ಲಿ ಸ್ಪಷ್ಟವಾಗಿ ಕಾಣುವಂತೆ ಈ ಕಲಮಿನಲ್ಲಿ ಹಾಲು ಕರೆಯುವ ಹಸುಗಳು ಮತ್ತು ಕೃಷಿಗೆ ಉಪಯೋಗಕಾರಿ ಜಾನುವಾರುಗಳನ್ನು ರಕ್ಷಿಸಬೇಕೆಂಬ ಆಶಯವಿದೆಯೇ ವಿನಃ ರೈತರಿಗೆ ಉಪಯೋಗಕ್ಕೆ ಬರದ ಗೋವನ್ನಾಗಲೀ, ಇತರ ಜಾನುವಾರುಗಳನ್ನಾಗಲೀ ಪವಿತ್ರವೆಂಬ ಅಥವಾ ಅನುಕಂಪದ ದೃಷ್ಟಿಯಿಂದ ಸಾಕಲೇಬೇಕೆಂಬ ಆದೇಶವಿಲ್ಲ.

ಇದರ ಬಗ್ಗೆಯೂ ಸುಪ್ರೀಂಕೋರ್ಟು ಸ್ಪಷ್ಟವಾದ ವ್ಯಾಖ್ಯಾನ ನೀಡಿದೆ. 1959ರ ಮೊಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ್ ರಾಜ್ಯದ (AIR 1959 SCR 629 ಪ್ರಕರಣದಲ್ಲಿ ನಿರ್ಣಯವನ್ನು ನೀಡುವಾಗ ವರಿಷ್ಠ ನ್ಯಾಯಾಲಯವು ಈ ಬಗ್ಗೆ ಹೀಗೆ ಹೇಳಿದೆ:
“(i) that a total ban on the slaughter of cows of all ages and calves of cows and calves of she-buffaloes, male or female, was quite reasonable and valid and is in consonance with the Directive Principles laid down in Article 48; (ii) that a total ban on the slaughter of she-buffaloes or breeding bulls or working bullocks (cattle as well as buffaloes) as long as they are capable of being used as milch or draught cattle was also reasonable and valid; and (iii) that a total ban on slaughter of she-buffaloes, bulls and bullocks (cattle or buffalo) after they ceased to be capable of yielding milk or of breeding or working as draught animals could not be supported as reasonable in the interests of the general public and was invalid.”

ಪ್ರಸ್ತುತ ಆರ್ಥಿಕ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ ಜಾನುವಾರುಗಳು ಸಮಾಜಕ್ಕೆ ಒಂದು ಹೊರೆಯಾಗುವುದರಿಂದ ಅದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸಂಪೂರ್ಣ ಜಾನುವಾರು ಹತ್ಯಾ ನಿಷೇಧ ಸಾಧ್ಯವಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ಮುಖ್ಯ ನ್ಯಾಯಮೂರ್ತಿ ಸಿ.ಆರ್. ದಾಸ್‍ರವರು ಮೂರು ಮುಖ್ಯಾಂಶಗಳನ್ನು ಪ್ರಸ್ತಾಪಿಸಿದ್ದರು.

“1. ಎಲ್ಲಾ ವಯಸ್ಸಿನ ಹಸುಗಳ ಮತ್ತು ಎಲ್ಲಾ ಕರುಗಳ ಹತ್ಯೆಯ ಮೇಲಿನ ನಿಷೇಧ ಸಿಂಧುವಾದದ್ದು. 2. ಹಾಲು ನೀಡುವ ಎಮ್ಮೆಗಳ ಮತ್ತು ಉಳುವ ಯೋಗ್ಯ ಎತ್ತುಗಳ ಹತ್ಯೆಯ ಮೇಲಿನ ನಿಷೇಧವೂ ಸರಿಯಾದದ್ದೇ. 3. ಆದರೆ ಹಾಲು ನೀಡದ ಎಮ್ಮೆಗಳ ಮತ್ತು ಉಳುಮೆಗೆ ಸಹಕಾರಿಯಾಗದ ಎತ್ತು ಮತ್ತು ದನಗಳ ಹತ್ಯೆಯ ಮೇಲಿನ ನಿಷೇಧವೂ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಾದದ್ದಲ್ಲ.”

ಇದರ ಬಗ್ಗೆ 2005ರಲ್ಲಿ ಏಳು ಸದಸ್ಯರ ಸಾಂವಿಧಾನಿಕ ಪೀಠ ತನ್ನ ಅಭಿಪ್ರಾಯವನ್ನು ಬದ ಲಾಯಿಸಿದ್ದು ನಿಜ. ಆದರೆ ಅದಕ್ಕೆ ಕಾರಣ ಗುಜರಾತ್ ಸರ್ಕಾರ ಒದಗಿಸಿದ ಸುಳ್ಳುಪೆÇಳ್ಳೂ ಅಂಕಿಅಂಶಗಳು. ಗುಜರಾತ್ ಸರ್ಕಾರ ತನ್ನ ವಾದದಲ್ಲಿ ``ದನ ಮತ್ತು ಹಸುಗಳು ಸಾಯುವ ತನಕ ಗಂಜಲ ಮತ್ತು ಸಗಣಿ ಹಾಕುತ್ತವೆ. ಪ್ರತಿ ಹಸು ಮತ್ತು ದನಗಳನ್ನು ಸಾಕಲು ದಿನಕ್ಕೆ 25 ರೂ. ಖರ್ಚಾದರೆ ಈ ಸಗಣಿ ಮತ್ತು ಗಂಜಲ ಮಾರಿದರೆ 35 ರೂ. ದುಡ್ಡು ಸಿಗುತ್ತದೆ. ಆದ್ದರಿಂದ ಹಸು ಮತ್ತು ದನಗಳನ್ನು ಉಪಯುಕ್ತ ಮತ್ತು ಅನುಪಯುಕ್ತ ಎಂದು ವಿಭಾಗೀಕರಿಸುವುದೇ ತಪ್ಪು” ಎಂದು ಹೇಳಿತ್ತು. ಅಲ್ಲದೇ ಪ್ರತಿ ದನವು 16 ವರ್ಷಕ್ಕೆ ಮುಂಚೆ 0.8 ಅಶ್ವಶಕ್ತಿಯಷ್ಟು ಶಕ್ತಿ ಹೊಂದಿದ್ದರೆ 16 ವರ್ಷದ ನಂತರವು ಸಾಯುವ ತನಕ 0.6 ಅಶ್ವಶಕ್ತಿಯನ್ನು ಹೊಂದಿರುತ್ತಾದ್ದರಿಂದ ಅವು ಸಾಯುವ ತನಕ ಉಪಯುಕ್ತವೇ ಎಂದೆಲ್ಲ ಮೋದಿ ರಾಜ್ಯದ ಪಶುಸಂಗೋಪನಾ ಇಲಾಖೆ ಕಾಗಕ್ಕ ಗುಬ್ಬಕ್ಕನ ಕಥೆ ಕಟ್ಟಿತ್ತು.

ಸುಪ್ರೀಂಕೋರ್ಟಿನ ಎದುರು ಇದನ್ನು ವಿರೋಧಿಸಲು ರೈತ ಸಂಘಟನೆ ಯಾಗಲೀ, ಮಾನವ ಹಕ್ಕು ಸಂಘಟನೆಯಾಗಲೀ ಪ್ರತಿವಾದಿಗಳಾಗಿರಲಿಲ್ಲ. ಹೀಗಾಗಿ ಸುಪ್ರೀಂಕೋರ್ಟು ಸಾಯುವ ತನಕವೂ ಎಲ್ಲಾ ಹಸು, ದನ ಹಾಗೂ ಗೂಳಿಗಳು ರೈತನಿಗೆ ಉಪಕಾರಿಯೇ ಆಗಿರುತ್ತವಾದ್ದರಿಂದ ದನ ಮತ್ತು ಗೂಳಿಗಳನ್ನು 16 ವರ್ಷದ ನಂತರ ಹತ್ಯೆ ಮಾಡುವುದಕ್ಕೆ ನಿಷೇಧ ಹೇರಿರುವುದು ಸೂಕ್ತವೆಂದು ಅಭಿಪ್ರಾಯ ಪಟ್ಟಿತು. ಆದರೆ ಒಂದು ದನವನ್ನು ಸಾಕಲು ತಗಲುವ ವೆಚ್ಚ 100 ರೂ. ಅನ್ನು ಮೀರುತ್ತಿರುವ ಈ ಹೊತ್ತಿನಲ್ಲಿ ಹಾಲು ಕರೆಯದ ಮತ್ತು ಉಳುಮೆಗೆ ಬಾರದ ಜಾನುವಾರುಗಳನ್ನು ಸಾಕುವುದರಿಂದ ರೈತನಿಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಸುಪ್ರೀಂಕೋರ್ಟಿನ ಈ ನಿರ್ಧಾರದ ಬುನಾದಿ ಬಿಜೆಪಿಯ ವಾದಕ್ಕೆ ವ್ಯತಿರಿಕ್ತವಾಗಿಯೇ ಇದೆ ಎನ್ನುವುದು ವಾಸ್ತವ. ಏಕೆಂದರೆ ಇಲ್ಲಿ ಕೋರ್ಟು ಸಂಪೂರ್ಣ ಗೋ ಸಂತತಿ ನಿಷೇಧ ಸರಿಯಾದದ್ದು ಎಂದು ಅಭಿಪ್ರಾಯಕ್ಕೆ ಬರಲು ಕಾರಣ ಅದು ಸಾಯುವ ತನಕ ರೈತನಿಗೆ ಸಹಕಾರಿ ಎಂಬ ಕಾರಣಕ್ಕೆ ಹೊರತು ಗೋವು ಪವಿತ್ರ ಅಥವಾ ಗೋವು ಮಾತ್ರ ಪವಿತ್ರ ಎಂಬ ಕಾರಣಕ್ಕಾಗಿಯಲ್ಲ. ಒಂದು ವೇಳೆ ಮುದಿ ದನ ಮತ್ತು ಹಸುಗಳು ರೈತನಿಗೆ ಸಹಕಾರಿಯಲ್ಲ ಎಂದು ಕೋರ್ಟಿಗೆ ಸಾಬೀತಾದರೆ ಮುದಿ ಎಮ್ಮೆ, ಕೋಣಗಳ ಹತ್ಯೆಯ ಜೊತೆಗೆ ಮುದಿ ಹಸು ಮತ್ತು ಎತ್ತುಗಳ ಹತ್ಯೆಗೂ ಸಮ್ಮತಿ ನೀಡುವುದು ಖಚಿತ.

ಹೀಗೆ ಬಿಜೆಪಿ ಸರ್ಕಾರದ ಮಸೂದೆಗೆ ಸಂವಿಧಾನದ, ನ್ಯಾಯಾಲಯದ ಮತ್ತು ಕಾನೂನಿನ ಸಮರ್ಥನೆಯಿಲ್ಲ. ಬಿಜೆಪಿ ಸರ್ಕಾರ ಹಸಿಸುಳ್ಳುಗಳನ್ನು ಹೇಳುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದೆ. ರೈತರ ಹಿತದೃಷ್ಟಿಯಿಂದಲೂ, ಸಂವಿಧಾನದ ಆಶಯದ ದೃಷ್ಟಿಯಿಂದಲೂ, ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ನಿರ್ದೇಶನದ ದೃಷ್ಟಿಯಿಂದಲೂ ಬಿಜೆಪಿ ಸರ್ಕಾರದ ಈ ಮಸೂದೆ ತಿರಸ್ಕಾರಕ್ಕೆ ಯೋಗ್ಯವಾಗಿದೆ.






ಎನ್‌ಡಿಟಿವಿಯ ಮೇಲೆ ಸಿಬಿಐ ದಾಳಿ: ಟೀಕೆಯನ್ನು ಸಹಿಸದ ಸರ್ಕಾರ

    ಅನುಶಿವಸುಂದರ್
ndtv logo ಗೆ ಚಿತ್ರದ ಫಲಿತಾಂಶ
ಎನ್ಡಿಟಿವಿ ಯಂಥ ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ ಮಾಡುವ ಮೂಲಕ ಸರ್ಕಾರವು ಯಾವ ಸಂದೇಶವನ್ನು ನೀಡುತ್ತಿದೆ?

ಎಲ್ಲಾ ಆಳುವ ದೊರೆಗಳಿಗೂ ತಮ್ಮ ಸುತ್ತಾ ತಮ್ಮನ್ನು ಹಾಡಿಹೊಗಳುವ ಭಟ್ಟಂಗಿಗಳಿರಬೇಕೆಂಬ ಬಯಕೆ ಇರುತ್ತದೆ. ಏಕೆಂದರೆ ಅದು  ಅವರ ಆಡಳಿತವನ್ನು ಸುಸೂತ್ರಗೊಳಿಸುತ್ತದೆ. ನೀವು ಮಾಡಬೇಕಾದದ್ದೆಲ್ಲಾ ಇಷ್ಟೆ. ಉಪ್ಪರಿಗೆಯ ಮೇಲೆ ನಿಂತು ಘೋಷಣೆಗಳನ್ನು ಮಾಡಿ. ನಿಮ್ಮ ಅನುಚರರು ಅದನ್ನು ಹಾಡಿಹೊಗಳುತ್ತಾರೆ. ಮುಠಾಳರು ಮಾತ್ರ ವಂದಿಮಾಗಧರ ಗುಂಪಿನಿಂದ ಹೊರಬಂದು ಪ್ರಶ್ನೆಗಳನ್ನು ಕೇಳುತ್ತಾರೆ ಅಥವಾ ವಿಮರ್ಶೆಗಳನ್ನು ಮಾಡಲು ಮುಂದಾಗುತ್ತಾರೆ. ಹಾಗೆ ಮಾಡಿದವರಿಗೆ ಅದರ ಪರಿಣಾಮಗಳ ಅಂದಾಜು ಇರುತ್ತದೆ. ಇವೆಲ್ಲಾ ಒಂದು ಕಲ್ಪನಾ ವಿಲಾಸವೆಂದು ತೋರಿದರೂ ಭಾರತದ ಪ್ರಜಾಪ್ರಭುತ್ವವು ನಿಧಾನಕ್ಕೆ ಕಲ್ಪನೆಯ ಲೋಕವನ್ನು ಸಾಕಾರಮಾಡುವೆಡೆ ಸಾಗುತ್ತಿದೆ. ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರವು ಒಂದು ಕಾಲದಲ್ಲಿ ಸ್ವತಂತ್ರವಾಗಿ ಸತ್ವಯುತವಾಗಿದ್ದ ದೃಶ್ಯ ಮಾಧ್ಯಮವನ್ನು ತಾನು ಮಾಡಿದ್ದೆಲ್ಲವನ್ನು ಸಮರ್ಥಿಸುವ ಮತ್ತು ಹಾಡಿಹೊಗಳುವ ಭಟ್ಟಂಗಿಯನ್ನಾಗಿಸಿಬಿಟ್ಟಿದೆ, ಮತ್ತೊಂದೆಡೆ ಅಳಿದುಳಿದಿರುವ ಸಣ್ಣಪುಟ್ಟ ಪ್ರತಿರೋಧವನ್ನೂ ಸಹ ಬೇಟೆಯಾಡಿ ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದೆ.

ತನ್ನೆಲ್ಲಾ ಲೋಪದೋಷಗಳ ನಡುವೆಯೂ ಎನ್ಡಿಟಿವಿಯಂಥ ಸುದ್ದಿ ಮಾಧ್ಯಮವು ಭಿನ್ನವಾಗಿ ನಿಲ್ಲುವುದು ಕಾರಣಕ್ಕೆ. ಜೂನ್ ರಂದು ಎನ್ಡಿಟಿವಿಯ ಸಂಸ್ಥಾಪಕರಾದ ಪ್ರಣೋಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿತು. ದಾಳಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಲಾದ ನೇರ ದಾಳಿಗಳೇ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಎನ್ಡಿಟಿವಿಯ ಹಣಕಾಸು ನಿರ್ವಹಣೆಗಳು ೨೦೦೯ರಿಂದಲೂ ತನಿಖೆಗೆ ಒಳಪಟ್ಟಿವೆ. ಆದರೂ ಖಾಸಗಿ ವ್ಯಕ್ತಿಯೊಬ್ಬ ವಾಹಿನಿಯು ಖಾಸಗಿ ಬ್ಯಾಂಕ್ ಒಂದಕ್ಕೆ  ಮೋಸ ಮಾಡಿದೆ ಎಂದು ನೀಡಿದ ದೂರನ್ನೇ ಆಧರಿಸಿದ ಸಿಬಿಐ ಪ್ರಕರಣ ದಾಳಿ ನಡೆಸಲು ಯೋಗ್ಯವಾದದ್ದು ಎಂಬ ತೀರ್ಮಾನಕ್ಕೆ ಬಂದದ್ದು ಮಾತ್ರ ಸೋಜಿಗದ ಸಂಗತಿಯಾಗಿದೆ. ಸಹಜವಾಗಿಯೇ ದಾಳಿ ನಡೆದ ಸಮಯ ಮತ್ತು ದಾಳಿಯ ಗುರಿಗಳು  ದಾಳಿಯ ಉದ್ದೇಶದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತವೆ.

ಹಿಂದಿನ ಸರ್ಕಾರಗಳು ಸಹ ತಮ್ಮ ವಿರೋಧಿಗಳ ಮತ್ತು ಮಾಧ್ಯಮಗಳ ಬಾಯಿ ಮುಚ್ಚಿಸಲು ಸಿಬಿಐ ಅನ್ನು ಬಳಸಿಕೊಂಡಿದ್ದವೆಂಬುದು ನಿಜವಾದರೂ ಸರ್ಕಾರದ ಕ್ರಮಗಳಲ್ಲಿ ಒಂದು ನಿರ್ದಿಷ್ಟ ವಿನ್ಯಾಸವಿದೆ. ತನ್ನ ವಿರೋಧಿಗಳ ಮೇಲೆ ಹಣಕಾಸು ದುರ್ವ್ಯವಹಾರಗಳ ಆರೋಪವನ್ನು ಹೊರಿಸುವ ಮೂಲಕ ಸರ್ಕಾರವು ಒಂದೇ ಕಲ್ಲಿನಲ್ಲಿ ಎರದು ಹಕ್ಕಿಗಳನ್ನು ಹೊಡೆಯುತ್ತಿದೆ. ಆರೋಪಗಳ ಮೂಲಕ ಅದು ಒಂದೆಡೆ ತನ್ನ ವಿರೋಧಿಗಳ- ವಿರೋಧ ಪಕ್ಷಗಳ ನಾಯಕ, ಅಥವಾ ಮಾನವ ಹಕ್ಕು ಕಾರ್ಯಕರ್ತ, ಅಥವಾ ಒಂದು ಸರ್ಕಾರೇತರ ಸಂಸ್ಥೆ ಅಥವಾ ಒಂದು ಮಾಧ್ಯಮ ಸಂಸ್ಥೆಯ- ಮೇಲೆ  ಗೂಬೆ ಕೂರಿಸುತ್ತಿದೆ ಮತ್ತೊಂದೆಡೆ ಇಂಥ ಪ್ರತೀಕಾರದ ಕ್ರಮಗಳ ಬಗ್ಗೆ ಭೀತಿ ಹುಟ್ಟಿಸಿ ಇನ್ನಿತರರನ್ನೂ ಮೌನವಾಗಿಸುತ್ತಿದೆ. ಮಾಧ್ಯಮಗಳ ವಿಷಯದಲ್ಲಿ ತಂತ್ರ ಇನ್ನೂ ಸಲೀಸಾಗಿ ಕೆಲಸ ಮಾಡುತ್ತದೆ. ಏಕೆಂದರೆ ಸರ್ಕಾರಗಳು ತಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತೇವೆ ಎಂಬ ಮಂತ್ರ ಜಪಿಸುತ್ತಲೇ ಮಾಧ್ಯಮ ಸಂಸ್ಥೆಗಳ ಒಡೆಯರ ಮೇಲೆ ದಾಳಿ ಮಾಡುತ್ತಾ ಅದನ್ನು ಹಣಕಾಸು ವ್ಯವಹಾರಗಳಲ್ಲಿನ ಅಪಾರದರ್ಶಕತೆಯ ಕಾರಣಕ್ಕಾಗಿ ಮಾಡಲಾಯಿತೆಂದು ಸಮರ್ಥಿಸಿಕೊಳ್ಳಬಹುದು. ಸಮರ್ಥನೆಯನ್ನು ಸಾರ್ವಜನಿಕರು ಸಹ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಸರ್ಕಾರವನ್ನು ಟೀಕಿಸುವ ಮಾಧ್ಯಮಗಳು ಒಂದೋ ನಂಬಲರ್ಹವಲ್ಲವೆಂದೂ, ಅಥವಾ ಸುಳ್ಳುಗಳನ್ನು ಹೇಳುತ್ತವೆಂದೂ ಅಥವಾ ಅಂಥಾ ವಾಹಿನಿಗಳಿಗೆ ದುರುದ್ದೇಶಗಳಿರುತ್ತವೆಂಬ ಅಭಿಪ್ರಾಯಗಳನ್ನು ಸಾರ್ವಜನಿಕರ ತಲೆಗಳಲ್ಲಿ ಸತತವಾಗಿ ತುರುಕಲಾಗಿದೆ. ಕೆಲವು ದಿನಗಳ ಹಿಂದೆ ಭಾರತೀಯ ಜನತಾ ಪಕ್ಷದ ವಕ್ತಾರನೊಬ್ಬ ಎನ್ಡಿಟಿವಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಇದನ್ನೇ.

ಮಾಧ್ಯಮ ಸಂಸ್ಥೆಗಳ ಕಾರ್ಪೊರೇಟ್ ಒಡೆಯರ ಮೇಲೆ ಒತ್ತಡ ಸೃಷ್ಟಿಸುವುದರ ಜೊತೆಜೊತೆಗೆ ಸರ್ಕಾರವು ಪತ್ರಕರ್ತರನ್ನು ಬೆದರಿಸುವ ಕಲೆಯಲ್ಲೂ ಪರಿಣಿತಿ ಸಾಧಿಸಿದೆ. ಸಿಬಿಐ ದಾಳಿಯ ಮರುದಿನ ಎನ್ಡಿಟಿವಿ-ಇಂಡಿಯಾದ ರವೀಶ್ ಕುಮಾರ್ ಅವರು ತಾವು ನಡೆಸಿಕೊಟ್ಟ ಅದ್ಭುತ ಕಾರ್ಯಕ್ರಮದಲ್ಲಿ ಹೇಳಿದಂತೆ ದೇಶದ ರಾಜಧಾನಿಯಲ್ಲಿ ಮತ್ತು ಇತರೆಡೆಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ತಮ್ಮ ನಡಾವಳಿಗಳ ಮೇಲೆ ನಿಗಾ ಇಡಲಾಗಿದೆ ಎಂಬುದು ತಿಳಿದಿದೆ ಮತ್ತು ಅದು ಅವರನ್ನು ಭಯಭೀತಗೊಳಿಸಿದೆ. . ಅವರು ಸರ್ಕಾರವನ್ನು ಟೀಕಿಸುತ್ತಾರೆಂದು ತಿಳಿದೊಡನೆ ಸರ್ಕಾರದ ವಲಯದಲ್ಲಿ ಅವರಿಗೆ ಸುದ್ದಿಮೂಲಗಳು ಬಂದ್ ಆಗುತ್ತವೆ. ಸರ್ಕಾರದ ಸುದ್ದಿಗಳನ್ನು ಸಂಗ್ರಹಿಸುವಲ್ಲಿ ಇಂಥಾ ಸುದ್ದಿಮೂಲಗಳು ಪತ್ರಕರ್ತರಿಗೆ ತುಂಬಾ ಅವಶ್ಯಕವಾಗಿರುತ್ತದೆ. ಆದರೆ ದೆಹಲಿ ಮತ್ತು ಇತರ ರಾಜಧಾನಿಗಳ ಅಧಿಕಾರ ವರ್ತುಲಗಳಲ್ಲೂ ಭೀತಿಯು ತಾಂಡವವಾಡುತ್ತಿದೆ. ಮಾಧ್ಯಮಗಳ ಮೇಲೆ ನೇರ ನಿರ್ಬಂಧ ಹೇರುವುದು ಎಷ್ಟು ಪರಿಣಾಮಕಾರಿಯೋ ಪರೋಕ್ಷವಾಗಿ ಮಾಧ್ಯಮಗಳ ಬಾಯಿಮುಚ್ಚಿಸುವ ಕ್ರಮಗಳು ಅಷ್ಟೇ ಪರಿಣಾಮಕಾರಿಯಾಗಿರುತ್ತವೆ.

ಪರಿಸ್ಥಿತಿ ಹೀಗಿರುವಾಗ ಸರ್ಕಾರವು ಎನ್ಡಿಟಿವಿಯ ಮೇಲೆ ನಡೆಸಿದ ದಾಳಿಯ ವಿರುದ್ಧ ಇನ್ನೂ ತೀವ್ರವಾದ ಪ್ರತಿಕ್ರಿಯೆಗಳು ಬರಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸರ್ಕಾರದ ದುರುದ್ದೇಶಗಳನ್ನು ಬಲ್ಲವರ ನಡುವೆಯೂ ಇರಬೇಕಾದಷ್ಟು ಸೌಹಾರ್ದತೆ ಇಲ್ಲವೆಂಬುದು ಕಂಡುಬರುತ್ತಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ, ಬಹುಪಾಲು ಮಾಧ್ಯಮಗಳು ತಾವೂ ಕೂಡಾ ಮುಂದೆ ಇದೇ ರೀತಿಯ ಪ್ರತೀಕಾರದ ಕ್ರಮಗಳಿಗೆ ಗುರಿಯಾಗಬಹುದೆಂಬ ಭೀತಿಯಿಂದ ಎನ್ಡಿಟಿವಿಯ ಮೇಲಿನ ದಾಳಿಯನ್ನು ವಿರೋಧಿಸದೆ ದೂರ ಉಳಿದಿವೆ. ಎಡಿಟರ್ಸ್ ಗಿಲ್ಡ್ನಂಥಾ ವೃತ್ತಿಪರ ಸಂಘಟನೆಗಳು ವಾಹಿನಿಯ ಬೆಂಬಲಕ್ಕೆ ನಿಂತದ್ದು ಬಿಟ್ಟರೆ ಬೇರೆ ಯಾವ ಮೂಲಗಳಿಂದಲೂ ಬೆಂಬಲಗಳು ವ್ಯಕ್ತವಾಗಿಲ್ಲ್ಲ. ಎನ್ಡಿಟಿವಿಯ ಮೇಲೆ ಸರ್ಕಾರ ನಡೆಸಿರುವ ದಾಳಿಯ ಹಿಂದಿನ ದುರುದ್ದೇಶಗಳನ್ನು ಚೆನ್ನಾಗಿ ಬಲ್ಲ ಇತರರು ಸಹ ವಾಹಿನಿಗೆ ಬೇಷರತ್ ಬೆಂಬಲವನ್ನು ನೋಡಲು ಹಿಂದೆಮುಂದೆ ನೋಡುತ್ತಿದ್ದಾರೆ. ಏಕೆಂದರೆ ಇತರ ಮಾಧ್ಯಮ ಸಂಸ್ಥೆಗಳ ಮೇಲೆ ಹಿಂದೆ ಇದೇ ರೀತಿಯ ದಾಳಿಗಳು ನಡೆದಾಗ ವಾಹಿನಿಯು ಅವರ ಬೆಂಬಲಕ್ಕೆ ನಿಲ್ಲಲಿಲ್ಲ ಎನ್ನುವುದು ಅವರ ಮನಸ್ಸಿನಲ್ಲಿರುವ ಆಕ್ಷೇಪವಾಗಿದೆ. ರಾಜಧಾನಿಗಳಲ್ಲಿ ನೆಲೆಯೂರಿರುವ ದೊಡ್ಡದೊಡ್ಡ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆದಾಗ ಹರಿಯುವಷ್ಟು ಗಮನ ಅಥವಾ ವ್ಯಕ್ತವಾಗುವಷ್ಟು ಆಕ್ರೋಶಗಳು ಮತ್ತು ಸೌಹಾರ್ದತೆಗಳು ಕಾಶ್ಮೀರ ಅಥವಾ ಈಶಾನ್ಯ ಭಾರತಗಳಲ್ಲಿ ಕೆಲಸ ಮಾಡುವ ಸಣ್ಣ ಪತ್ರಿಕೆ ಮತ್ತು ನಿಯತಕಾಲಿಕೆಗಳು ಸರ್ಕಾರದ ನೇರ ದಾಳಿಗೆ ಗುರಿಯಾದಾಗ ಅಥವಾ ಸರ್ಕಾರದ ಅಕ್ರಮಗಳನ್ನು ತನಿಖೆ ಮಾಡಿ ಬಯಲಿಗೆಳದ ಪತರ್ಕರ್ತರು ದೈಹಿಕ ದಾಳಿಗಳಿಗೆ ಗುರಿಯಾದಾಗ ಅಥವಾ ಕೊಲೆಯಾದಾಗ ಕಂಡುಬರುವುದಿಲ್ಲವೇಕೆ ಎಂಬ ವಿಮರ್ಶಾತ್ಮಕ ತಿಳವಳಿಕೆಯು ನಿಧಾನವಾಗಿ ಮೂಡುತ್ತಿದೆ. ಭಾರತದಲ್ಲಿನ ಮಾಧ್ಯಮ ಸಂಸ್ಥೆಗಳಲ್ಲಿ ಒಡಕಿದೆ. ಒಡಕಿನ ದುರ್ಬಳಕ್ಕೆ ಮಾಡಿಕೊಳ್ಳುತ್ತಲೇ ಅಧಿಕಾರಸ್ಥರು ಮಾಧ್ಯಮಗಳನ್ನು ಸರ್ಕಾರದ ತುತ್ತೂರಿಗಳನ್ನಾಗಿ ಮಾಡಿಕೊಳ್ಳುತ್ತಿವೆ. ವಿದ್ಯಮಾನವೇ ಮತ್ತೊಮ್ಮೆ ನಮ್ಮೆದುರು ಅನಾವರಣಗೊಳ್ಳುತ್ತಿದೆ.

ಎನ್ಡಿಟಿವಿ ಮೇಲೆ ಸಿಬಿಐ ನಡೆಸಿದ ದಾಳಿಯನ್ನು ಕೆಲವರು ಇಂದಿರಾಗಾಂಧಿಯವರು ೧೯೭೫ರಲ್ಲಿ ಹೇರಿದ ತುರ್ತುಪರಿಸ್ಥಿತಿ ಮತ್ತು ಮಾಧ್ಯಮಗಳ ಮೇಲೆ ಹೇರಿದ ಸಂಪೂರ್ಣ ನಿರ್ಭಂಧದ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿ ಅಂದಿಗಿಂತಾ ಭಿನ್ನವಾಗಿದ್ದರೂ ಕಾಲದ ಪಾಠಗಳನ್ನು ಬಿಜೆಪಿ ಕಲಿತರೆ ಒಳ್ಳೆಯದು. ಮಾಧ್ಯಮಗಳ ಮೇಲೆ ನಿರ್ಭಂಧ ವಿಧಿಸಿದ್ದಕ್ಕೆ ಇಂದಿರಾಗಾಂಧಿ ತಕ್ಕ ಪಾಠವನ್ನು ಕಲಿಯಬೇಕಾಯಿತು. ಸರ್ಕಾರ ಸೆನ್ಸಾರ್ ಮಾಡಿ ಬಿಡುಗಡೆ ಮಾಡುತ್ತಿದ್ದ ಸುದ್ದಿಯನ್ನೇ ಆಕೆ ನಿಜವೆಂದು ನಂಬಿದ್ದರು. ಆಕೆಯ ನೀತಿಗಳು ಬಡಜನತೆಯಲ್ಲಿ ಉಂಟುಮಾಡಿದ ಹತಾಷೆಯ ಬಗ್ಗೆ ಅವರು ಕುರುಡಾಗಿದ್ದರು. ಅಲ್ಲದೆ ಸಾಮಾನ್ಯ ಜನರು ಇಂದಿರಾಗಾಂಧಿಯವರ ನೀತಿಗಳ ಬೆಂಬಲಕ್ಕಿರುವುದರಿಂದ ೧೯೭೭ರ ಚುನಾವಣೆಯಲ್ಲಿ ಆಕೆಯೇ ಗೆಲ್ಲುತ್ತಾರೆಂದು ಬೇಹುಗಾರಿಕಾ ಸಂಸ್ಥೆಗಳು ನೀಡಿದ ವರದಿಯನ್ನುವರು ನಂಬಿಕೊಂಡಿದ್ದರು. ಆದರೆ ಚುನಾವಣೆಗಳಲ್ಲಿ ಇಂದಿರಾಗಾಂಧಿಯವರು ಹೀನಾಯವಾಗಿ ಸೋಲನ್ನಪ್ಪಿದರು. ಬಡಜನರು ಆಕೆಯ ವಿರುದ್ಧ ಮತ ಚಲಾಯಿಸಿದರು. ವಿಪರ್ಯಾಸವೆಂದರೆ ಅವರ ಸೋಲೇ ಜನತಾ ಪಕ್ಷದ ಭಾಗವಾಗಿದ್ದ ಭಾರತೀಯ ಜನತಾ ಪಕ್ಷಕ್ಕೆ ಕೇಂದ್ರದಲ್ಲಿ ಒಂದು ನೆಲೆಯನ್ನು ಕೂಡಾ ಒದಗಿಸಿತು.

ಇತಿಹಾಸವು ಈಗ ಸಂಪೂರ್ಣವಾಗಿ ಒಂದು ಸುತ್ತು ಸುತ್ತಿ ಬಂದಿದೆ. ಅಂದಿನ ಇಂದಿರಾಗಾಂಧಿಯಂತೆ ಇಂದಿನ ಬಿಜೆಪಿಯು ತನ್ನ ಸಾಕು ಮಾಧ್ಯಮಗಳ ಮಾತುಗಳನ್ನು ನಂಬುತ್ತಾ ತನ್ನನ್ನು ಟೀಕೆ ಮಾಡುವವರ ಬಾಯಿಮುಚ್ಚಿಸುವ ಯತ್ನ ನಡೆಸಿದೆ. ಇತಿಹಾಸವು ಸಾಬೀತುಪಡಿಸುವಂತೆ ಕುರುಡಿಗೆ ತಕ್ಕ ಬೆಲೆಯನ್ನು ತೆರಲೇ ಬೇಕಾಗುತ್ತದೆ. ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಹತ್ತಿ ಉರಿಯುತ್ತಿರುವ ರೈತ ಹೋರಾಟಗಳು ಮಾಧ್ಯಮಗಳು ಆಳುವವರಲ್ಲಿ ಉಂಟುಮಾಡುವ ಕುರುಡಿಗೆ ಒಂದು ಉದಾಹರಣೆಯಾಗಿರಬಹುದೇ?

                                                                 
ಕೃಪೆ: Economic and Political Weekly
     June 10, 2017. Vol.52. No.23