ಮಂಗಳವಾರ, ಆಗಸ್ಟ್ 29, 2017

ಮಕ್ಕಳನ್ನು ಅನುತ್ತೀರ್ಣಗೊಳಿಸಿ ಕಲಿಕೆಯನ್ನು ಖಾತರಿಗೊಳಿಸಬಹುದೇ?


ಅನುಶಿವಸುಂದರ್
Image result for education policy
Image result for education policy

ಶಿಕ್ಷಣದ ಹಕ್ಕು ಕಾಯಿದೆಗೆ ತರಬೇಕೆಂದು ಉದ್ದೇಶಿಸಿರುವ ತಿದ್ದುಪಡಿಯು ಕಾಯಿದೆಯ ಆಶಯವನ್ನೇ ಕೊಲ್ಲಲಿದೆ.

ಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡದೆ ತಡೆಹಿಡಿಯಬಾರದೆಂಬ ಪ್ರಗತಿಪರ ನೀತಿಯನ್ನು (ನೋ ಡಿಟೆನ್ಷನ್ ಪಾಲಿಸಿ- ಎನ್ಡಿಪಿ) ಕೇಂದ್ರ ಸರ್ಕಾರ ಹಿಂತೆದುಕೊಂಡಿದೆ. ಕ್ರಮವು ಶಾಲಾ ಶಿಕ್ಷಣ ಸುಧಾರಣಾ ಯೋಜನೆ ಮತ್ತು ಅನುಷ್ಠಾನದಲ್ಲಿ ಒಂದು ಹೆಜ್ಜೆ ಮುಂದೆ- ಎರದು ಹೆಜ್ಜೆ ಹಿಂದೆ ಎಂಬಂತಿದೆ. ಶಿಕ್ಷಣದ ಹಕ್ಕಿನ ನೀತಿಯಡಿ (ಆರ್ಟಿಇ) ಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳನ್ನು ಎಂಟನೇ ತರಗತಿಯತನಕ ಎಲ್ಲಿಯೂ ಅನುತ್ತೀರ್ಣಗೊಳಿಸದೆ ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕೆಂಬ ನೀತಿ (ಎನ್ಡಿಪಿ) ಗೆ ಸೂಚಿಸಲಾಗಿದ್ದ ತಿದ್ದುಪಡಿಯನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ತಿದ್ದುಪಡಿಯು ವರ್ಷಾಂತ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ನಪಾಸಾದ ಮಕ್ಕಳನ್ನು ಐದು ಮತ್ತು ಎಂಟನೇ ತರಗತಿಯ ಹಂತದಿಂದ ಮುಂದಕ್ಕೆ ತೇರ್ಗಡೆ ಮಾಡದೆ ಉಳಿಸಿಕೊಳ್ಳುವಂಥ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ಕಲ್ಪಿಸಿಕೊಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಮುಂದಿನ ತರಗತಿಗೆ ಹೋಗದಂತೆ ಅನುತ್ತೀರ್ಣಗೊಳಿಸುವ ಮುನ್ನ ಮಕ್ಕಳಿಗೆ ಇನ್ನೊಂದು ಅವಕಾಶವನ್ನು ನೀಡಬೇಕೆಂಬ ಅವಕಾಶವು ಪ್ರಸ್ತಾಪಿತ ತಿದ್ದುಪಡಿಯಲ್ಲಿದೆ. ಆದರೆ ಯಾವ ತರಗತಿಯಲ್ಲಿ ನಪಾಸಾದರೆ ಮುಂದಿನ ಹಂತಕ್ಕೆ  ಹೋಗದಂತೆ ಅನುತ್ತೀರ್ಣಗೊಳಿಸುವುದು ಕಾನೂನುಬದ್ಧವಾಗುತ್ತದೆಂಬುದರ ಬಗ್ಗೆ ಅದರಲ್ಲಿ ಸ್ಪಷ್ಟತೆ ಇಲ್ಲ. ಇದರಿಂದಾಗಿ ಶಾಲಾ ಶಿಕ್ಷಣದ ಪ್ರವೇಶದ ಹಂತದಲ್ಲೇ ಮಕ್ಕಳನ್ನು  ತಡೆಹಿಡಿಯುವ ಅವಕಾಶಗಳೂ ಇವೆ.

ಪ್ರಸ್ತುತ ಶಿಕ್ಷಣ ಹಕ್ಕು ಕಾಯಿದೆಯಡಿ ಮಕ್ಕಳು ಎಂಟನೇ ತರಗತಿಯನ್ನು ತಲುಪುವವರೆಗೆ ತನ್ನಂತೇ ತಾನೇ ಮುಂದಿನ ತರಗತಿಗೆ ತೇರ್ಗಡೆಯಾಗುತ್ತಾ ಹೋಗುತ್ತಾರೆ. ಎನ್ಡಿಪಿ (ನೋ ಡಿಟೆನ್ಷನ್ ಪಾಲಿಸಿ- ತೇರ್ಗಡೆಯನ್ನು ತಡೆಹಿಡಿಯಕೂಡದೆಂಬ ನೀತಿ) ಯೆಂದೇ ಪ್ರಖ್ಯಾತವಾಗಿದ್ದ ಅಂಶವು ಶಿಕ್ಷಣ ಹಕ್ಕು ಕಾಯಿದೆಯಲ್ಲಿರುವ ಅತ್ಯಂತ ಪ್ರಗತಿಪರ ಅಂಶವೆಂದು ಬಹಳಷ್ಟು ಶಿಕ್ಷಣ ತಜ್ನರು ಮೆಚ್ಚಿಕೊಂಡಿದ್ದರು. ಆದರೆ ಅಂಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯತಿರಿಕ್ತವಾದ ಅಭಿಪ್ರಾಯ ಉಂಟಾಯಿತು ಮತ್ತು ಅದರ ಬಗ್ಗೆ ಅಪಾರ ವಿಮರ್ಶೆಗಳು ಮತ್ತು ಪ್ರತಿರೋಧಗಳು ಬಹಳ ಬೇಗನೇ ಹುಟ್ಟಿಕೊಂಡವು. ಇದರಿಂದಾಗಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಬಿಎಸ್)ಯು ಪ್ರಗತಿಪರ ನೀತಿಯನ್ನು ಹಿಂತೆಗೆದುಕೊಂಡು ಅನುತ್ತೀರ್ಣಗೊಳ್ಳದೆ ಮುಂದುವರೆಯುವ ಅವಕಾಶವನ್ನು ಐದನೇ ತರಗತಿಯವರೆಗೆ ಮಾತ್ರ ಸೀಮಿತಗೊಳಿಸಿತು. ಕುತೂಹಲಕಾರಿ ವಿಷಯವೇನೆಂದರೆ, ತೀರ್ಮಾನವು ಶಾಲಾ ಶಿಕ್ಷಣದ ಬಗ್ಗೆ ಪೋಷಕರ ಮತ್ತು ಶಿಕ್ಷಕರ ಕಾಳಜಿಯನ್ನು ಪ್ರತಿನಿಧಿಸುತ್ತದೆಂದೂ, ಶಾಲೆಗಳಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ವರದಿಯಾಗುವ ಕಲಿಯಲಾಗದ ಮಕ್ಕಳ ಸಮಸ್ಯೆಯನ್ನು ಬಗೆಹರಿಸುತ್ತದೆಂದು ಭಾವಿಸಲಾಗಿದೆ.

ಯಾವರೀತಿಯಲ್ಲಿ ನೋಡಿದರೂ ಇದೊಂದು ಅತ್ಯಂತ ಪ್ರತಿಗಾಮಿ ಹೆಜ್ಜೆಯಾಗಿದೆ. ಇದು ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ ಶಾಲಾ ಕಲಿಕೆ ಮತ್ತು ಕಲಿಕೆ ಪ್ರಕ್ರಿಯೆಗಳ ಹಿಂದಿನ ಪರಿಕಲ್ಪನೆಗಳ ಮೂಲೂ ಪ್ರಭಾವ ಬೀರಲಿದೆ. ತೀರ್ಮಾನದ ಹಿಂದೆ ಪರೀಕ್ಷೆಗಳಲ್ಲಿ ಅನುತ್ತೀರ್ಣವಾಗುವುದಕ್ಕೆ  ಸ್ವಯಂ ವಿದ್ಯಾರ್ಥಿಯೇ  ಕಾರಣವೆಂಬ ತಿಳವಳಿಕೆಯಿದೆ. ಹಾಗೆಯೇ ನಪಾಸಾದವರನ್ನು ಮತ್ತೊಮ್ಮೆ ಅದೇ ತರಗತಿಯಲ್ಲಿ ಓದುವಂತೆ ಮಾಡುವಮೂಲಕ ಮಾತ್ರ ಮಕ್ಕಳು ಎದುರಿಸುವ ಕಲಿಕೆಯ ಅಂತರವನ್ನು ಕಡಿಮೆ ಮಾಡಬಹುದು ಎಂಬ ಗ್ರಹಿಕೆ ಇದೆ. ಆದರೆ ಬಗೆಯ ತಿಳವಳಿಕೆಗಳು ಶಾಲೆಯ ಗುಣಮಟ್ಟದ ಬಗ್ಗೆ ಮಾತ್ರ ಯಾವ ಪ್ರಶ್ನೆಗಳನ್ನು ಎತ್ತುವುದಿಲ್ಲ. ಅಷ್ಟು ಮಾತ್ರವಲ್ಲ. ಇದರ ಹಿಂದಿರುವ ಆಲೋಚನೆಗಳು ಇನ್ನೂ ಎರಡು ತಪ್ಪು ತಿಳವಳಿಕೆಗಳಿಗೆ ದಾರಿಮಾಡಿಕೊಡುತ್ತದೆ; ಅನುತ್ತೀರ್ಣವಾಗುವ ಮತ್ತು ಅದೇ ತರಗತಿಯಲ್ಲಿ ಮತ್ತೊಂದು ವರ್ಷ ಕಳೆಯಬೇಕಾಗುವ ಭಯದಿಂದಾಗಿ ಮಕಳು ಕಲಿಕೆಯನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ; ಹಾಗೂ ಅದೇ ತರಗತಿಯಲ್ಲಿ ಮತ್ತೊಮ್ಮೆ ಮುಂದುವರೆಯುವುದರಿಂದ ಕಲಿಕೆ ಸುಲಭವಾಗುವಂಥ ಸಕಾರಾತ್ಮಕ ಪರಿಣಾಮಗಳುಂಟಾಗುತ್ತವೆ. ವಾಸ್ತವವಾಗಿ ರೀತಿ ಅನುತ್ತೀರ್ಣಗೊಳಿಸುವ ಮತ್ತು ಅದೇ ತರಗತಿಯಲ್ಲಿ ಮುಂದುವರೆಯುವಂತೆ ಮಾಡುವ ಕ್ರಮಗಳು ಉತ್ತಮವಾದ ಕಲಿಕೆಯನ್ನು ಸಾಧ್ಯಗೊಳಿಸುತ್ತದೆಂಬ ಸಿದ್ಧಾಂತವನ್ನು ಸಮರ್ಥಿಸಬಲ್ಲ ಯಾವುದೇ ಅಧ್ಯಯನಗಳಿಲ್ಲ. ಆದರೆ ಇಂಥಾ ಕ್ರಮಗಳು ಮಕ್ಕಳ ಆತ್ಮ ವಿಶ್ವಾಸಕ್ಕೆ ಮತ್ತು ನೈತಿಕ ಬಲಕ್ಕೆ ಧಕ್ಕೆ ಉಂಟುಮಾಡಿ ಮಕ್ಕಳು ಶಾಲೆಯನ್ನು ತೊರೆಯಲು ಕೂಡಾ ಕಾರಣವಾಗುತ್ತದೆಂದು ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ.

ಶಿಕ್ಷಣ ಹಕ್ಕು ಕಾಯಿದೆಯು -೧೪ ವಯೋಮಾನದ ಮಕ್ಕಳಿಗೆ ಕಡ್ಡಾಯ ಮತ್ತು ಭೀತಿಮುಕ್ತ ಕಲಿಕೆಯ ವಾತಾವರಣವನ್ನು ಒದಗಿಸಲು ಮತ್ತು ಪ್ರಾಥಮಿಕ ಶಾಲಾ ಕಲಿಕೆಯ ವೃತ್ತದಿಂದ ಮಕ್ಕಳು ಹೊರಬೀಳದಂತೆ ಸಕ್ರಿಯವಾಗಿ ತಡೆಗಟ್ಟಲು ನಡೆದ ಪ್ರಯತ್ನವಾಗಿತ್ತು. ಇದನ್ನು  ಶಾಲಾ ಶಿಕ್ಷಣದ ಎಂಟನೆಯತ ತರಗತಿವರೆಗಿನ  ಹಂತದ ತನಕ ಮಕ್ಕಳನ್ನು ಅನುತ್ತೀರ್ಣಗೊಳಿಸುವ ವ್ಯವಸ್ಥೆಯನ್ನೇ ಸಾರ್ವತ್ರಿಕವಾಗಿ ರದ್ದುಗೊಳಿಸುವ ಮೂಲಕ ಮತ್ತು ಕಲಿಕೆಯ ಮೌಲ್ಯಮಾಪನದ ಅರ್ಥ, ಸ್ವಭಾವ ಮತ್ತು ಸ್ವರೂಪಗಳನ್ನು ಬದಲಾಯಿಸುವ ಮೂಲಕ ಸಾಧಿಸಬಹುದೆಂದು ಭಾವಿಸಲಾಗಿತ್ತು. ವಾರ್ಷಿಕ ಪರೀಕ್ಷಾ ಪದ್ಧತಿಯ ಮೂಲಕ ಮಕ್ಕಳ ಮೌಲ್ಯಮಾಪನವನ್ನು ಮಾಡುವ ಮತ್ತು ಪುರಸ್ಕರಿಸುವ (ಮುಂದಿನ ಹಂತಕ್ಕೆ ತೇರ್ಗಡೆ) ಹಾಗೂ ದಂಡನೆ ವಿಧಿಸುವ  (ಉಳಿದವರು ಉನ್ನತಹಂತಕ್ಕೆ ಮುಂದುವರೆದರೂ ನಪಾಸಾದವರನ್ನು ಅದೇ ತರಗತಿಯಲ್ಲೇ ಮತ್ತೊಮ್ಮೆ ಕಲಿಯುವಂತೆ ಮಾಡುವ) ಕ್ರಮಗಳು ರದ್ದಾಗಿ ಜಾಗದಲ್ಲಿ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ವ್ಯವಸ್ಥೆಯು ಜಾರಿಯಾಗಬೇಕಿತ್ತು.

ವ್ಯವಸ್ಥೆಯನ್ನು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಕೂಡಲೇ ಜಾರಿಗೆ ತಂದವು. ಆದರೆ ಕಲಿಕೆಗೆ ಪ್ರಧಾನ ಪ್ರೇರಣೆ ನೀಡುವುದು ಪರೀಕ್ಷೆಯ ಭಯವೇ ಎಂದು ನಂಬಿಕೊಂಡವರಿಗೆ ಅದರಿಂದ ಹೊರಬರಲು ತುಂಬಾ ಕಷ್ಟವಾಯಿತು. ಕಲಿಕೆಯ ಸ್ಥಿತಿಗತಿಗಳ ವಾರ್ಷಿಕ ವರದಿಗಳಂಥ ನಿಯಮಿತವಾದ ಕಲಿಕೆ-ಮೌಲ್ಯಮಾಪನ ಸಮೀಕ್ಷೆಗಳು, ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ ಪದ್ಧತಿಗಳಿಗೂ ಹಾಗೂ ಕಡ್ಡಾಯ ತೇರ್ಗಡೆಯ ನೀತಿಗಳಿಗೂ ಇರುವ ಸಂಬಂಧಗಳನ್ನು ಸಾಬೀತುಮಾಡತೊಡಗಿದ್ದು ಸಹ ಅಂಥವರ ಆತಂಕವನ್ನು ಮತ್ತಷ್ಟು ಹೆಚ್ಚುಮಾಡಿತು. ನೀತಿಯ ವಿಶಾಲ ಭಿತ್ತಿಯನ್ನು ಅರ್ಥಮಾಡಿಕೊಳ್ಳದೆ ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ ಪದ್ಧತಿಗಳಿಗೂ ಹಾಗೂ ಕಡ್ಡಾಯ ತೇರ್ಗಡೆಯ ನೀತಿಗಳಿಗೂ ನಡುವೆ ಇರುವ ಸಂಬಂಧಗಳನ್ನು ಏಕಪಕ್ಷೀಯ ವಾಗಿ ಅರ್ಥಮಾಡಿಕೊಂಡಿದ್ದು ಅನಾಹುತವನ್ನೇ ಉಂಟುಮಾಡಿತು. ಮತ್ತು  ಮಕ್ಕಳನ್ನು ಮತ್ತಷ್ಟು ಬಲಿಪಶುಗಳನ್ನಾಗಿಸಿತು. ಮಕ್ಕಳು ಕಲಿಕೆಯಲ್ಲಿ ಸರಿಯಾಗಿ ತೊಡಗದಿರಲು ಮತ್ತು ಆಶಿಸಿದ ರೀತಿಯಲ್ಲಿ ಕಲಿಕೆಗಳನ್ನು ಮುಂದುವರೆಸದಿರಲು ಕಾರಣಗಳು ಸ್ಪಷ್ಟವಾಗಿವೆ. ಆಸಕ್ತಿ ಹುಟ್ಟಿಸದ ಪಠ್ಯಕ್ರಮಗಳು, ಕಳಪೆ ಗುಣಮಟ್ಟದ ಪಠ್ಯಗಳು, ಸೂಕ್ತ ತರಬೇತಿಯಿಲ್ಲದ ಶಿಕ್ಷಕರು ಮತ್ತು ದುರ್ಭರವಾದ ಮೂಲಸೌಕರ್ಯಗಳು ನಿಸ್ಸಂಶಯವಾಗಿ ಮಕ್ಕಳ ಕಲಿಕೆಗಿರುವ ದೊಡ್ಡ ಅಡೆತಡೆಗಳಾಗಿವೆ.

ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ ಪದ್ಧತಿಗಳಿಗೂ ಹಾಗೂ ಕಡ್ಡಾಯ ತೇರ್ಗಡೆಯ ನೀತಿಗಳಿಗೂ ನಡುವೆ ಇರುವ ಕಾರ್ಯಕಾರಣ ಸಂಬಂಧಗಳ ಬಗ್ಗೆ ಅವಿಮರ್ಶಾತ್ಮಕ ಗ್ರಹಿಕೆಗಳೇ ಮುಂದುವರೆದವು. ಇದು ಕಲಿಕೆಯ ತೊಡಕುಗಳ ಬಗ್ಗೆ ತುಂಬಾ ಬೋಳೆ ಬೋಳೆ ಪರಿಹಾರಗಳನ್ನು ಅರಸುವಂತೆ ಮಾಡಿತು. ಇಂಥಾ ಸಂಕುಚಿತ ಗ್ರಹಿಕೆಗಳು ಕಲಿಕೆಯನ್ನು ವಸ್ತೂರೂಪಿಯಾಗಿಸಬಹುದು, ಪ್ರದರ್ಶನ ಮಾಡಬಹುದು ಮತ್ತು ಅಳತೆಯೋಗ್ಯವನ್ನಾಗಿಯೂ ಮಾಡಬಹುದು. ಮಕ್ಕಳನ್ನು ಅದೇ ತರಗತಿಯಲ್ಲಿ ಮತ್ತೊಮ್ಮೆ ಓದುವಂತೆ ಅನುತ್ತೀರ್ಣಗೊಳಿಸದೇ ಇದ್ದದ್ದೇ ಕಲಿಕೆ ಸರಿಯಾಗಿ ಆಗದೇ ಇದ್ದದ್ದಕ್ಕೆ ಕಾರu ಎನ್ನುವ ಗ್ರಹಿಕೆ ತನ್ನದೇ ಪರಿಹಾರವನ್ನು ಒಡಲಲ್ಲಿ ಇಟ್ಟುಕೊಂಡಿರುತ್ತದೆ. ಆಗ ಮಕ್ಕಳನ್ನು ಅದೇ ತರಗತಿಯಲ್ಲಿ ಉಳಿಸಿಕೊಂಡು, ಕಾಲಾನುಕಾಲದಿಂದ ಪ್ರಮಾಣೀಕೃತವಾದ ಪದ್ಧತಿಂiiಲ್ಲಿ ಕಲಿಕೆ (ಅಥವಾ ನೆನಪಿಟ್ಟುಕೊಳ್ಳುವುದು ಎನ್ನಿ)ಯನ್ನು ಮಾಡಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹಂತಕ್ಕೆ ತೇಗಡೆಯಾಗುವಂತೆ ಮಾಡುವುದೇ ಅವರ ಕಲಿಕೆಯನ್ನು  ಖಾತರಿಗೊಳಿಸುವ ಮಂತ್ರದಂಡವಾಗುತ್ತದೆ.

ಶಿಕ್ಷಣದ ಹಕ್ಕಿನ ಕಾಯಿz ಪ್ರಸ್ತಾಪಿತ ತಿದ್ದುಪಡಿಗಳು ಜಾರಿಗೆ ಬಂದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವಂಚಿತ ಸಮುದಾಯಗಳ ಮಕ್ಕಳು ಶಾಲೆಗಳಲ್ಲಿ ಅಪಮಾನಕ್ಕೀಡಾಗುತ್ತಾ ಅಂತಿಮವಾಗಿ ಶಾಲೆಯಿಂದಲೇ ಹೊರಗುಳಿಯುಂತಾಗುತ್ತದೆ. ಶಿಕ್ಷಣ ಹಕ್ಕಿನ ಕಾಯಿದೆಯಲ್ಲಿದ್ದ ಎಂಟನೆಯ ತರಗತಿಯವರೆಗಿನ ಸತತ ತೇರ್ಗಡೆಯ ನೀತಿಯು ಇಂಥಾ ಮಕ್ಕಳನ್ನು ಕನಿಷ್ಟ ಎಂಟನೇ ತರಗತಿಯವರೆಗಾದರೂ ಶಾಲೆಯಲ್ಲಿ ಹಿಡಿಡಿಟ್ಟುಕೊಳ್ಳುವ ಉದ್ದೇಶವನ್ನು ಹೊಂದಿತ್ತುಅವರ ಕಲಿಕೆಯ ಮೌಲ್ಯಮಾಪನ ನೀತಿಯ  ಪ್ರಮುಖ ಉದ್ದೇಶವಾಗಿರಲಿಲ್ಲ. ಮೌಲ್ಯಮಾಪನವು ಕೂಡಾ ಪ್ರಮುಖವಾದ ಅಂಶವೇ ಆಗಿದ್ದರೂ ಅದನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಮಕ್ಕಳನ್ನು ಅನುತ್ತೀರ್ಣಗೊಳಿಸಿ ಅಪಮಾನಿಸುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬಹುದೆಂಬುದು ಅತ್ಯಂತ ವಿವೇಚನಾಶೂನ್ಯವಾದ ತಿಳವಳಿಕೆಯಾಗಿದೆ. ಈಗಂತೂ ಐದನೇ ತರಗತಿಯ ಹಂತದಲ್ಲೇ ಬೋರ್ಡ್ ಪರೀಕ್ಷೆಯಂಥ ಸಾಂಪ್ರದಾಯಿಕ ಮೌಲ್ಯಮಾಪನ ಪದ್ಧತಿಯನ್ನು ಜಾರಿಮಾಡಲಾಗುತ್ತಿದೆ. ಇದು ಬೋಧನಾ ಪದ್ಧತಿಯ ಮೂಲಕ ಕಲಿಕೆಯ ಸಾರವನ್ನು ವರ್ಗಾಯಿಸುವ, ಪಠ್ಯವಿಚಾರಗಳನ್ನು ಬಾಯಿಪಾಠ ಮಾಡಿ ನೆನಪಿಟ್ಟುಕೊಳ್ಳುವ ಮತ್ತು ಅವುಗಳನ್ನು ಯಾಂತ್ರಿಕವಾಗಿ ಪುನರುಚ್ಚರಿಸುವ ವಿಧಾನಗಳಿಗೆ ಮಾತ್ರ ಬೋಧನೆ-ಕಲಿಕೆ-ಹಾಗೂ ಮೌಲ್ಯಮಾಪನಗಳನ್ನು ಸೀಮಿತಗೊಳಿಸಬೇಕೆಂಬ ನಂಬಿಕೆಗಳಿಗೆ ಮತ್ತಷ್ಟು ನೀರೆರೆಯಲಿದೆ

       ಕೃಪೆ: Economic and Political Weekly
                Aug 26, 2017. Vol. 52. No. 34
                                                                                                 
                                                                                        












ಪ್ರೀತಿಯಿಲ್ಲದ ಪಿತೃಸ್ವಾಮ್ಯ


 ಅನುಶಿವಸುಂದರ್
Image result for feminist judicial activism

ಪಿತೃಸ್ವಾಮ್ಯದ ಬೃಹತ್ ಸಂಕೀರ್ಣವಾದ ಪ್ರಭುತ್ವ, ಸಮಾಜ ಮತ್ತು ಕುಟುಂಬಗಳೆಲ್ಲಾ ಒಟ್ಟುಗೂಡಿ ಹಾದಿಯಾ ಎಂಬ ಮಹಿಳೆಯ ಸ್ವಂತಿಕೆಯನ್ನು ಹಾಗೂ ಘನತೆಯನ್ನೂ ನಿರಾಕರಿಸಿವೆ.

ಭಾರತದ ನ್ಯಾಯಾಂಗವು ಹಿಂದೂ ಬಲಪಂಥೀಯ ರಾಜಕೀಯದೆಡೆಗೆ ಹೆಚ್ಚೆಚ್ಚು ವಾಲುತ್ತಿರುವುದು ಮಹಿಳಾವಾದಿ ನ್ಯಾಯಿಕ ಕ್ರಿಯಾಶೀಲತೆಯ (ಫೆಮಿನಿಸ್ಟ್ ಜುಡಿಷಿಯಲ್ ಆಕ್ಟಿವಿಸಮ್)ಮೇಲೆ ಕಳವಳಕಾರಿ ಪರಿಣಾಮಗಳನ್ನು ಬೀರುತ್ತಿದೆ. ಇದು ಕೇರಳದ ಪ್ರಾಪ್ತ ವಯಸ್ಸಿನ ಯುವತಿಯಾದ ಹಾದಿಯಾಳ ಪ್ರಕರಣದ ಬಗ್ಗೆ  ಸುಪ್ರೀಂ ಕೋರ್ಟು ಕೊಟ್ಟ ಆದೇಶದಲ್ಲಿ ಮತ್ತಷ್ಟು ನಿಚ್ಚಳವಾಗಿ ವ್ಯಕ್ತವಾಗಿದೆ. ಯುವತಿಯು ಶಫೀನ್ ಜಹಾನ್ ಎಂಬ ಪ್ರಾಪ್ತ ವಯಸ್ಸಿನ ಯುವಕನನ್ನು ಪರಸ್ಪರ ಸಮ್ಮತಿಯ ಮೇರೆಗೆ ಮದುವೆಯಾದರೂ ಆಕೆಯನ್ನು ತವರಿನಲ್ಲಿ ಬಂಧಿಸಿಡಲಾಗಿತ್ತು. ಮತ್ತು ಮದುವೆಯನ್ನು ಕೇರಳ ಉಚ್ಚ ನ್ಯಾಯಾಲಯ ಅಸಿಂಧು ಎಂದು ಘೋಷಿಸಿತ್ತು. ಅತ್ಯಂತ ಆಶ್ಚರ್ಯದ ವಿಷಯವೆಂದರೆ, ಸುಪ್ರೀಂ ಕೋರ್ಟು ಪ್ರಕರಣಕ್ಕೆ  ರಾಷ್ಟ್ರೀಯ ತನಿಖಾ ಸಂಸ್ಥೆ (ನ್ಯಾಷನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ-ಎನ್ಐಎ)ಯನ್ನು ಎಳೆತಂದಿದೆ. ಹಾದಿಯಾಳ ಮದುವೆಯು ನಿಜಕ್ಕೂ ಪರಸ್ಪರ ಸಮ್ಮತಿಯಿಂದ ನಡೆದಿದೆಯೋ ಅಥವಾ ಇದರ ಹಿಂದೆ ಭಯೋತ್ಪಾದಕ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಸ್ಥೆಯು ಯುವಜನರನ್ನು ತನ್ನತ್ತ ಸೆಳೆಯಲು ಹೆಣೆದಿರುವ ಸಾಮೂಹಿಕ ಮತಾಂತರದದ ಅಸ್ತ್ರದ ಅರ್ಥಾತ್ ಲವ್ ಜಿಹಾದಿನ ಕುರುಹುಗಳೇನಾದರೂ ಇವೆಯೋ ಎಂದು ತನಿಖೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ  ಆದೇಶಿಸಿದೆ. ಇದರಿಂದಾಗಿ ನ್ಯಾಯಾಂಗವು ಸಾಂವಿಧಾನಾತ್ಮಕ ಮೌಲ್ಯಗಳನ್ನೂ ಮತ್ತು ಮಹಿಳಾ ಸ್ವಾತಂತ್ರ್ಯವನ್ನೂ ಎತ್ತಿಹಿಡಿಯುವ ಅಂತಿಮವಾದ ಹಾಗೂ ಬಲವಾದ ಆಸರೆಯೆಂದು ಭಾವಿಸಿದ್ದ ಕಾರ್ಯಕರ್ತರೆಲ್ಲರಿಗೂ ದೊಡ್ಡ ನಿರಾಸೆಯುಂಟಾಗಿದೆ.

ಹಾದಿಯಾ ಹುಟ್ಟಿದ್ದು ಹಿಂದೂ ಕುಟುಂಬವೊಂದರಲ್ಲಿ. ಆಗ ಆಕೆಯ ಹೆಸರು ಅಖಿಲಾ ಅಶೋಕನ್. ಆಕೆ ಫಿಸಿಯೋಥೆರಪಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ತನ್ನ ಮುಸ್ಲಿಂ ಸ್ನೇಹಿತರೊಂದಿಗಿನ ಒಡನಾಟದಿಂದಾಗಿ ಇಸ್ಲಾಮಿನ ಕಡೆಗೆ ಆಕರ್ಷಿತಳಾದಳು. ತನ್ನ ತಂದೆ-ತಾಯಿಗಳ ಪ್ರತಿರೋಧದ ನಡುವೆಯೂ ಇಸ್ಲಾಮಿಗೆ ಮತಾಂತರಗೊಂಡು ಹಾದಿಯಾ ಎಂಬ ಹೊಸ ಹೆಸರು ಮತ್ತು ಗುರುತಿನೊಂದಿಗೆ ಪ್ರತ್ಯೇಕವಾಗಿ ವಾಸಿಸತೊಡಗಿದ್ದಳು. ಆಗ ಆಕೆಯ ತಂದೆ ಹಾಕಿದ್ದ ಎರಡು ಹೇಬಿಯಸ್ ಕಾರ್ಪಸ್ (ಅಕ್ರಮ ಬಂಧನದಲ್ಲಿದ್ದಾರೆ ಎಂದು ಭಾವಿಸಲಾದ ವ್ಯಕ್ತಿಯನ್ನು ಖುದ್ದಾಗಿ ಹಾಜರು ಪಡಿಸಬೇಕೆಂದು ನ್ಯಾಯಲಯವನ್ನು ಕೋರುವ ಅರ್ಜಿ- ಅನುವಾದಕನ ಟಿಪ್ಪಣಿ) ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು. ಮತ್ತು ತನ್ನ ಬದುಕನ್ನೇ ಬದಲಿಸುವಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಕೆಯ ಹಕ್ಕನ್ನು ಅನುಮೋದಿಸಿದ್ದವು. ಆದರೆ ಆಕೆ ಜಹಾನ್ನನ್ನು ಮದುವೆಯಾದ ನಂತರ ಎಲ್ಲವೂ ಬದಲಾಗಿಬಿಟ್ಟಿತು.. ಕೇರಳದ ಉಚ್ಚ ನ್ಯಾಯಾಲಯವು ಮದುವೆಯನ್ನು ಅಸಿಂಧು ಎಂದು ಘೋಷಿಸಿದ್ದಲ್ಲದೆ ಹಾದಿಯಾಳನ್ನು ಆಕೆಯ ಪೋಷಕರ ವಶಕ್ಕೆ ಒಪ್ಪಿಸಿಬಿಟ್ಟಿತು.
Image result for feminist judicial activism

ಷಡ್ಯಂತ್ರದ ದಾವನಲವನ್ನು ಹಬ್ಬಿಸುವ  ಮೂಲಕ ನ್ಯಾಯಾಲಯಗಳು, ಹಾದಿಯಾಳ ಪೋಷಕರು ಮತ್ತು ಬಲಪಂಥೀಯ ಸಮಾಜೋ-ರಾಜಕೀಯ ಸಂಘಟನೆಗಳು ಹಾದಿಯಾಳ ಜೀವಿಸುವ ಮತ್ತು ಬಯಸಿದವರೊಡನೆ ಒಟ್ಟುಗೂಡುವ ಮೂಲಭೂತ ಹಕ್ಕನ್ನೇ ಹರಣಮಾಡಿಬಿಟ್ಟಿವೆ. ನ್ಯಾಯಾಲಯಗಳು  ಮತ್ತು ಆಕೆಯ ಪೋಷಕರು ಪದೇ ಪದೇ ನೀಡುತ್ತಿರುವ ಹೇಳಿಕೆಗಳು ಆಕೆಯು ಸ್ವಂತ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಾಪ್ತ ವಯಸ್ಕಳಾಗಿದ್ದಾಳೆಂಬುದನ್ನೇ ಮರೆಸಿ ಅವಳನ್ನು ಬಲವಂತದ ಶೈಶವತೆಗೆ ದೂಡಿವೆ. ಸ್ವತಂತ್ರ ನಿರ್ಧಾರಗಳನ್ನುಅದರಲ್ಲೂ ತನ್ನ ಮೇಲೆ ಪೋಷಕರ ಅಧಿಕಾರವನ್ನು ನಿರಾಕರಿಸುವಂಥ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಆಕೆಯ ಸಾಮರ್ಥ್ಯವನ್ನೇ ತಿರಸ್ಕರಿಸಿವೆ. ಮಹಿಳೆಯ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ನ್ಯಾಯಾಲಯಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗಿದ್ದು ಮಾತ್ರವಲ್ಲದೆ, ಇಚ್ಚೆಯ ವಿರುದ್ಧವಾಗಿ ಪೋಷಕರ ವಶಕ್ಕೆ ಒಪ್ಪಿಸಿ ಆಕೆಯನ್ನು ಬಲವಂತದ ಬಂಧನದ ಶಿಕ್ಷೆಗೂ ಗುರಿಮಾಡಿದೆ. ಆಕೆಯ ಮೇಲೆ ತನ್ನ ಗಂಡನನ್ನು ಸಂಪರ್ಕಿಸದಂತೆ ನಿರ್ಬಂಧ ಹೇರಲಾಗಿದೆ. ಮತ್ತು ಆಕೆ ಅನಿವಾರ್ಯವಾಗಿ ತನ್ನ ವೃತ್ತಿಯನ್ನು ಸಹ ಕೈಬಿಡುವಂತಾಗಿದೆ.

ಹಿಂದಿನ ತಥಾಕಥಿತ ಲವ್ ಜೆಹಾದ್ ಪ್ರಕರಣಗಳಲ್ಲಿ ಪ್ರೇಮವೆಂದರೆ ಆಕರ್ಷಣೆ, ಮುಗ್ಧತೆ ಮತ್ತು ಹುಚ್ಚುಧೈರ್ಯದ ಮನಸ್ಥಿತಿಯೆಂದೇ ಪರಿಗಣಿಸಲಾಗಿತ್ತು. ಆದರೆ ಹಾದಿಯಾಳದು ಅಂಥ ಪ್ರಕರಣವೇನಲ್ಲ. ಆಕೆ ಜಹಾನ್ನನ್ನು ಮೊದಲೇ ಪ್ರೀತಿಸುತ್ತಿರಲಿಲ್ಲ. ಇಸ್ಲಾಮಿಗೆ ಮತಾಂತರಗೊಂಡ ನಂತರ, ಮುಸ್ಲಿಂ ವಿವಾಹ ಸಂಬಂಧಗಳ ಜಾಲತಾಣವೊಂದರಲ್ಲಿ ಹಾದಿಯಾ ತನ್ನ ಹೆಸರನ್ನು ದಾಖಲಿಸಿದ್ದಳು. ಅದರ ಮೂಲಕವೇ ಆಕೆಗೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಜಹಾನ್ ಪರಿಚಯವಾಯಿತು. ಮತ್ತು ನಂತರವೇ ಆಕೆ ಆತನನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದಳು.

ವಾಸ್ತವವೇ ಹಲವರನ್ನು ಗೊಂದಲಕ್ಕೀಡುಮಾಡುತ್ತಿದೆ. ಸ್ವಬುದ್ಧಿ ಇರುವ ಯಾವ ಹೆಂಗಸು ಸಮಾಜದ ರೀತಿನೀತಿಗಳಿಗೆ ಭಿನ್ನವಾದ ಇಂಥಾ ಅಪಾಯಕಾರಿ ನಡಿಗೆಗೆ ಮುಂದಾಗುತ್ತಾಳೆ? ಪ್ರಾಯಶಃ ಪ್ರಶ್ನೆಗೆ ನಮ್ಮ ಮುಖಕ್ಕೆ ರಾಚುವಂಥಾ ಉತ್ತರಗಳು ಸಿಗಬಹುದು; ಬದುಕಿನಲ್ಲಿ ಮುನ್ನಡೆಯನ್ನು ಸಾಧಿಸಬಯಸುವ ಮಹಿಳೆಯರು ಭಾರತೀಯ ಕುಟುಂಬ ಮತ್ತು ಸಮಾಜಗಳು ಎಷ್ಟು ಪ್ರೀತಿರಹಿತವಾಗಿವೆಯೆಂಬುದನ್ನು ಅರಿತುಕೊಳ್ಳುತ್ತಿದ್ದಾರೆ ಮತ್ತು ಅವೆಲ್ಲವನ್ನು ತಿರಸ್ಕರಿಸುತ್ತಿದ್ದಾರೆ. ಹಾಗೂ ಅಂಥಾ ಸಮಾಜವು ಎಂದೆಂದಿಗೂ ಒಪ್ಪದಂಥ ಕ್ರಾಂತಿಕಾರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸಮಾಜವು ರೂಪುಗೊಂಡಾಗಿನಿಂದಲೂ ಸಮಾಜದ ಸಾಂಪ್ರದಾಯಿಕ ರೀತಿನೀತಿಗಳನ್ನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಲೇ ಬಂದಿವೆ. ಆದರೆ ಜಾಗತೀಕರಣವು ಅದಕ್ಕೆ ಇನ್ನು ತ್ವರಿತವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆಯಷ್ಟೆ. ಹೀಗಾಗಿಯೇ ಹೊಸ ಸಂಘರ್ಷಕ್ಕೆ ಲವ್ ಜೆಹಾದ್ ವಿರೋಧಿ ಸೇನೆಗಳೂ, ರೋಮಿಯೋ ವಿರೋಧಿ ದಳಗಳು ಕ್ರಿಯಾಶೀಲವಾಗಿರುವ ಕೇರಳ, . ಬಂಗಾಳ, ಕರ್ನಾಟಕ ಮತ್ತು ಉತ್ತರಪ್ರದೇಶಗಳ ಸಣ್ಣಪುಟ್ಟ ಪಟ್ಟಣಗಳು ಭೂಮಿಕೆಯನ್ನು ಒದಗಿಸುತ್ತಿವೆ. ಎಲ್ಲಾ ವಿವರಣೆಗಳನ್ನು ಒಪ್ಪದವರು ಸುಪ್ರೀಂ ಕೋರ್ಟು ತನಿಖಾ ವರದಿಯನ್ನು ಕೇಳಿದೆಯೇ ಹೊರತು ಹಾದಿಯಾಳ ಮದುವೆಯನ್ನು ಅಸಿಂಧುಗೊಳಿಸಿದ ತೀರ್ಪನ್ನೇನೂ ಎತ್ತಿಹಿಡಿಲ್ಲವೆಂದು ವಾದಿಸಬಹುದು. ಆದೇನೇ ಇದ್ದರೂ ಅಂಥಾ ತನಿಖೆಯು ಹಾದಿಯಾಳ ಗೃಹಬಂಧನದ ಮೇಲೇನೂ ಆಧರಿಸಬೇಕಿರಲಿಲ್ಲ. ಮೂಲಕ ಹಾದಿಯಾಳ ಸ್ವಂತಿಕೆ ಮತ್ತು ಘನತೆ ಎರಡನ್ನೂ ನಿರಾಕರಿಸುವ ಕ್ರಿಯೆಯಲ್ಲಿ ಸುಪ್ರೀಂ ಕೋರ್ಟಿನ ಆದೇಶವು ಭಾಗಿಯಾಗಿದೆ. ಮತ್ತು ಅದರಿಂದಾಗಿಯೇ ಎಲ್ಲೆಡೆ ಆದೇಶವು ಖಂಡನೆಗೆ ಗುರಿಯಾಗಿದೆ.

ಹಾದಿಯಾಳ ಗಂಡ ಜಹಾನ್ ಇಸ್ಲಾಮಿಕ್ ಸ್ಟೇಟ್ ಸಂಸ್ಥೆಯ ಬೆಂಬಲಿಗನಿದ್ದಿರಬಹುದು. ಹಾಗೆಯೇ ಪುರುಷ ಪ್ರಧಾನ ಧೋರಣೆಯುಳ್ಳವನೂ ಆಗಿರಬಹುದು. ಅದೇನೇ ಇರಬಹುದು. ಹಾಗೆ ನೋಡಿದರೆ ಮಹಿಳೆಯರ ಬದುಕು ಸದಾ ವಿವಿಧ ಬಗೆಯ  ಪಿತೃಸ್ವಾಮ್ಯಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಅದರ ನಡುವೆಯೇ ಮಹಿಳೆಯು ತನ್ನ  ಆಯ್ಕೆಯನ್ನು ಮಾಡಿಕೊಳ್ಳುತ್ತಾ ತನ್ನ ಅಧಿಕಾರಕ್ಕಾಗಿ ಸದಾ ಮತ್ತು ಸತತ ಅನುಸಂಧಾನವನ್ನು ನಡೆಸುತ್ತಿರುತ್ತಾಳೆ. ಹಾದಿಯಾಳ ಪ್ರಕರಣದಲ್ಲಿ ಅಂಥಾ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶವನ್ನಿ ನಿರಾಕರಿಸುವ ಮೂಲಕ ಅಥವಾ ಆಕೆಯ ಆಯ್ಕೆ ಮಾಡುವ ಶಕ್ತಿಯನ್ನು ದುರ್ಬಲಗೊಳಿಸುವ ಮೂಲಕ ಭಾರತದ ಪ್ರಭುತ್ವವು ಇನ್ನಷ್ಟು ಕೆಳಕ್ಕೆ ಜಾರಿದೆ.

ಇದು ಹೇಗೆ ಸಂಭವಿಸಲು ಸಾಧ್ಯವಾಯಿತು?

ಮಹಿಳಾವಾದಿಗಳು ಮತ್ತು ವಕೀಲ ಸಮುದಾಯ ನಿಜಕ್ಕೂ ದಿಗ್ಭ್ರಾಂತಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಉನ್ನತ ಹಂತದ ನ್ಯಾಯಾಲಯಗಳು ಮಹಿಳೆಯರ ಮೇಲೆ ನಡೆಯುವ ಸಾಮಾಜಿಕ, ಶಾರೀರಿಕ/ಲೈಂಗಿಕ ಹಿಂಸಾಚಾರಗಳನ್ನು ಶಿಕ್ಷಿಸುವಲ್ಲಿ ಧೀರೋದ್ಧಾತ್ತ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಾ ಬಂದಿರುವುದಕ್ಕಾಗಿ ಅತ್ಯಂತ ಮೆಚ್ಚುಗೆಯನ್ನು ಪಡೆದುಕೊಂಡಿದ್ದವು. ವಂಚಿತ ಸಮುದಾಯದ ಹಕ್ಕುಗಳನ್ನು ಪರಿರಕ್ಷಿಸುವ ವಿಷಯದಲ್ಲಿ ನ್ಯಾಯಾಂಗವನ್ನು ದೇಶದ ಸಾಕ್ಷಿಪ್ರಜ್ನೆಯೆಂದು ಪದೇಪದೇ ಬಣ್ಣಿಸಲಾಗುತ್ತಿತ್ತು. ನ್ಯಾಯಾಂಗ ಕ್ರಿಯಾಶಿಲತೆಯ ಹೊಸ ಪರ್ವವೇ ಪ್ರಾರಂಭಗೊಂಡಿದ್ದರಿಂದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಹೆಚ್ಚಿನ ವಿಶ್ವಾಸ ಮತ್ತು ಭರವಸೆಗಳು ಮೂಡಿದ್ದವು.

ಹಾಗೆ ನೋಡಿದರೆ, ಹಾದಿಯಾಳ ಪ್ರಕರಣವು ಮಹಿಳಾವಾದಿಗಳು ನ್ಯಾಯಾಂಗದ ಮೇಲೆ ಅತಿಹೆಚ್ಚು ಅವಲಂಬಿತವಾಗಿದ್ದರ ಪರಿಣಾಮವೂ ಆಗಿರಬಹುದು. ವಯಸ್ಕ ಮಹಿಳೆಯೊಬ್ಬಳು ತಾನು ಆಯ್ಕೆ ಮಾಡಿಕೊಂಡ ವ್ಯಕ್ತಿಯೊಂದಿಗೆ ಮಾಡಿಕೊಂಡ ವಿವಾಹದ  ಹಣೆಬರಹವನ್ನು ಆತನ ಹಿನ್ನೆಲೆಯನ್ನು ತನಿಖೆ ಮಾಡಿದ ನಂತರವೇ ನಿರ್ಧರಿಸುವ ತನ್ನ ಅಧಿಕಾರವು ಪ್ರಭುತ್ವಕ್ಕಿರುವ ರಾಷ್ಟ್ರದ ಪೋಷಕನ ಸ್ಥಾನದಿಂದ ಪ್ರವಹಿಸುತ್ತದೆಂದು ನ್ಯಾಯಾಂಗವು ಹೇಳಿಕೊಂಡಿದೆ. ಇದೂ ಕೂಡ ಮಹಿಳೆಯರ ಹಕ್ಕುಗಳ ರಕ್ಷಣೆಯ ಬಗ್ಗೆ ಮಹಿಳಾವಾದಿ ಕಾರ್ಯಕರ್ತರೂ ಮತ್ತು ಪಂಡಿತರು ನ್ಯಾಯಾಂಗದ ಮೇಲಿಟ್ಟ ಭರವಸೆಗಳ ಪರಿಣಾಮವೇ. ನ್ಯಾಯಾಂಗ ಕ್ರಿಯಾಶೀಲತೆಯು ತಳಮಟ್ಟದ ಹೊರಾಟಗಳಿಗೆ, ಜನಸಮೂಹಗಳ ಸಂಘಟನೆಗಳಿಗೆ ಮತ್ತು ಸಮುದಾಯದೊಳಗೆ ವಿಮರ್ಶಾತ್ಮಕ ಸಂವಾದಗಳನ್ನು ನಡೆಸುವ ಮೂಲಕ ಒಳಗಿನಿಂದಲೇ ಬದಲಾವಣೆ ತರುವ ಪ್ರಯತ್ನಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಇವೆಲ್ಲವು ಒಂದಕ್ಕೊಂದು ಪೂರಕವಾಗಿ ನಡೆಯುತ್ತಾ ಮಹಿಳೆಗೆ ಹೆಚ್ಚಿನ  ಭದ್ರತೆಯನ್ನು ಒದಗಿಸಬೇಕೇ ವಿನಃ ಆಕೆಯ ಮೇಲೆ ಹೆಚ್ಚೆಚ್ಚು ಬೇಹುಗಾರಿಕೆ ನಡೆಸುವಂತಾಗಬಾರದು

ಕೃಪೆ: Economic And Political Weekly, Aug 26, 2017. Vol. 52. No. 34