ಬುಧವಾರ, ಜನವರಿ 24, 2018

ಕಾದಂಬಿನಿ ನಿರೂಪಿಸಿದ ನಾಟಿ ಕೋಳಿಯ ಆತ್ಮಕತೆ..

- ಕಾದಂಬಿನಿ
Image result for ಕೋಳಿ ಅಂಕ

ಮೊನ್ನೆ ಮುಂಜಾನೆ ಬಯಲುಸೀಮೆಯ ಕಡೆ ಹೊರಟಿದ್ದೆ. ದಾರಿಯಲ್ಲಿ ಒಂದು ಮನೆಯೆದುರು ಕಾಲು ಕಟ್ಟಿ ಬಿಟ್ಟ ಹುಂಜವೊಂದು ರೆಕ್ಕೆ ಫಡಫಡಿಸುತ್ತ ಬೇಲಿ ದಾಟಿಬಿಟ್ಟಿತ್ತೆಂದು ಕಾಣುತ್ತದೆ. ತರುಣಿಯೊಬ್ಬಳು ಅದರ ಹಿಂದಿನಿಂದಲೇ ಬಂದವಳೇ ಹುಂಜದ ರೆಕ್ಕೆಯೊಂದನ್ನು ಹಿಡಿದು ಹುಂಜದ ದೇಹವನ್ನು ಜೋತಾಡಿಸುತ್ತಾ ಅದು ಕೊಯ್ಯೋ ಕೊಯ್ಯೋ ಕೂಗುತ್ತಿದ್ದರೂ ಒಂದಿನಿತೂ ದಯಯಿಲ್ಲದೆ ಬೀಸುತ್ತ ಒಳಗೊಯ್ದ ದೃಶ್ಯ ಸಂಕಟಕ್ಕೀಡುಮಾಡಿತು. ಹೌದು, ಕೋಳಿ ನಮ್ಮ ಆಹಾರವೇ. ಆದರೆ ಅದನ್ನು ಕೊಲ್ಲುವ ಮೊದಲೇ ಹಿಂಸಿಸುವುದು ತರವೇ? ಸಂಜೆ ಅದೇ ಹಾದಿಯಾಗಿ ಹಿಂದಿರುಗುವಾಗ ಹೊನ್ನಾಳಿಯಲ್ಲಿ ಒಂದು ಮನೆಯ ಅಂಗಳಕ್ಕೆ ಹಾರಿದ ಕಾಗೆಯೊಂದು ರೆಕ್ಕೆ ಮೂಡತೊಡಗಿದ್ದ ಕೋಳಿಮರಿಯೊಂದನ್ನು ಕಚ್ಚಿಕೊಂಡು ಮಾಡೇರಿ ಕೂತದ್ದು ಕಂಡಿತು. ಈ ದೃಶ್ಯಗಳು ಕಣ್ಣ ಪರದೆಯ ಮೇಲೆ ಕಾಡುತ್ತಲೇ ಉಳಿದುಬಿಟ್ಟವು.

ಆಗೆಲ್ಲ ಪ್ರತಿಯೊಬ್ಬರ ಮನೆಯಲ್ಲೂ ಕೋಳಿ ಸಾಕುತ್ತಿದ್ದದ್ದು ನನಗೆ ನೆನಪಿದೆ. ನನ್ನ ಅಜ್ಜಿಯ ಮನೆಯಲ್ಲಿ ಜಗುಲಿಯ ಒಂದು ಪಕ್ಕದ ತಳದಲ್ಲಿ ದೊಡ್ಡ ಕೋಳಿಗೂಡಿತ್ತು. ಆ ಕೋಳಿಗೂಡಿನ ಮೇಲ್ಭಾಗವನ್ನೇ ಸೋಫಾದಂತೆ ಕೂರಲು ಎತ್ತರದ ಕಟ್ಟೆ ಮಾಡಿದ್ದರು. ಆಗೆಲ್ಲ ಮಲೆನಾಡಿನ ಹಳ್ಳಿಯ ಎಲ್ಲರ ಮನೆಗಳಲ್ಲೂ ಇಂತಹದ್ದೇ ಕೋಳಿಗೂಡುಗಳಿರುತ್ತಿದ್ದವು. ಕೋಳಿಗೂಡಿನ ಬಾಗಿಲಿಗೆ ಮೇಲೆ ಮತ್ತು ಕೆಳಗೆ ಎರಡೆರಡು ರೀಪಿನ ತುಂಡುಗಳನ್ನು ಇರಿಸಿ ಅದರ ನಡುವಿನ ಹಲಗೆ ಇಳಿಸುವಷ್ಟೇ ಅಗಲದ ಜಾಗದಲ್ಲಿ ಹಲಗೆಯನ್ನು ಇಳಿಸಿ ಕೋಳಿ ಗೂಡನ್ನು ಮುಚ್ಚುವ ಕ್ರಮವಿರುತ್ತಿತ್ತು. ಕೋಳಿಯ ಮಲದಿಂದ ಗೂಡು ಕಿಚಿಪಿಚಿ ಆಗದಿರಲೆಂದು ಗೂಡಿನ ಒಳಗಡೆ ಬೂದಿಯನ್ನು ಹರವಲಾಗುತ್ತಿತ್ತು. ಸಂಜೆಯಾಗುತ್ತಲೇ ಕೋಳಿ, ಹುಂಜ, ಮರಿಗಳೆಲ್ಲ ಗೂಡು ಸೇರಿ ಕುತ್ತಿಗೆಯನ್ನು ಒಂದು ಪಕ್ಕಕ್ಕೆ ಹೊರಳಿಸಿ ತನ್ನದೇ ರೆಕ್ಕೆಯಲ್ಲಿ ಹುದುಗಿಸಿಕೊಂಡು ನಿದ್ದೆಮಾಡುತ್ತಿದ್ದವು. ಮರಿಕೋಳಿಗಳು ತಾಯಿಯ ರೆಕ್ಕೆಗಳಡಿಯಲ್ಲಿ ಬೆಚ್ಚಗೆ ಕೂರುತ್ತಿದ್ದವು.
Image result for ಕೋಳಿ ಅಂಕ

ಆಗೆಲ್ಲ ಅಂಗಳವನ್ನು ಸೆಗಣಿಯಿಂದ ಸಾರಿಸಿ ಇಡುತ್ತಿದ್ದರು. ಆದರೆ ಪ್ರತಿಯೊಬ್ಬರ ಮನೆಯ ಸುತ್ತಮುತ್ತ ಕೋಳಿಯ ಮಲ ಇರುತ್ತ ಎಲ್ಲರೂ ಅದನ್ನು ತುಳಿದುಕೊಂಡೇ ಓಡಾಡುವುದಿತ್ತು. ಕಾಲು ಕೆದರಿಕೊಂಡು ಒಂದು ರೆಕ್ಕೆ ಕೆಳಮುಖ ಇಳಿಸಿ ವೃತ್ತಾಕಾರವಾಗಿ ತಿರುಗುತ್ತಾ ಒಂದಕ್ಕೊಂದು ರಕ್ತ ಬಸಿಯುವ ತನಕ ಕಚ್ಚಾಡಿಕೊಳ್ಳುವ ಹುಂಜ ಹುಂಜಗಳ ನಡುವಿನ ಕಾದಾಟ ತೀರಾ ಸಾಮಾನ್ಯವಾಗಿ ನೋಡಲು ಸಿಕ್ಕುತ್ತಿತ್ತು. ಇದರಿಂದಲೇ ಕಾಲು ಕೆದರಿಕೊಂಡು ಜಗಳಕ್ಕೆ ಬರುವುದು ಎಂಬ ನುಡಿಗಟ್ಟು ರೂಢಿಗೆ ಬಂದಿರಬಹುದು. ಅಂತೆಯೇ ತಾಯಿಕೋಳಿ ಮರಿಗಳನ್ನು ಮೇಯಿಸುವ ನೋಟ ಕೂಡ. ತಾಯಿಕೋಳಿ ಕೀಟವೋ ಹುಳುವೋ ಸಿಕ್ಕಿದ್ದೇ ತಡ ಕುಕುಕ್ ಎನ್ನುತ್ತಿತ್ತು. ಕೂಡಲೇ ಮರಿಗಳು ತಾಯಿಯ ಕೊಕ್ಕಿನ ಬಳಿಗೋಡಿ ಆ ಹುಳುವನ್ನು ತಾಯಿಯ ಕೊಕ್ಕಿನಿಂದ ಕಿತ್ತುಕೊಂಡು ತಿನ್ನುತ್ತಿದ್ದವು. ಗಿಡುಗವೋ ಕಾಗೆಯೋ ಬಂದ ಸಣ್ಣ ಸೂಚನೆ ಸಿಕ್ಕರೂ ಕರರ್ರ್ ಎಂದು ತಾಯಿಕೋಳಿ ಸದ್ದುಮಾಡುತ್ತಿತ್ತು. ಮಿಂಚಿನ ವೇಗದಲ್ಲಿ ಮರಿಗಳು ಗಿಡ, ಪೊದೆಗಳ ಮರೆಯಲ್ಲಿ ಅಡಗಿಬಿಡುತ್ತಿದ್ದವು.

ಯಾರ ಅಂಗಳದಲ್ಲಾದರೂ ಕನ್ನೆ ಕೋಳಿ (ಮೊದಲ ಸಲ ಮೊಟ್ಟೆಗೆ ಬಂದ ಹೆಣ್ಣು ಕೋಳಿ) ಕಾಂ ಕಾಂ ಮಾಡುತ್ತ ತಿರುಗುತ್ತಿದೆಯೆಂದರೆ ಅದು ಪ್ರಾಯಕ್ಕೆ ಬಂದು ಸಂಗಾತಿಯನ್ನು ಅರಸಿ, ಮೊಟ್ಟೆ ಇಡಲು ಜಾಗ ಹುಡುಕುತ್ತಿದೆ ಎಂದು ಅರ್ಥೈಸಲಾಗುತ್ತಿತ್ತು. ಮೊಟ್ಟೆ ಇಡುವ ಕೋಳಿ ಸಾಮಾನ್ಯವಾಗಿ ನಡುಮಧ್ಯಾಹ್ನ ಜಾಗ ಹುಡುಕತೊಡಗುತ್ತಿದ್ದವು. ಕೆಲವು ಗೂಡಲ್ಲಿ ಮೊಟ್ಟೆ ಇಡುತ್ತಿದ್ದವು. ಅಥವಾ ಮನೆಯಲ್ಲಿ ಅವುಗಳನ್ನು ಹಿಡಿದು ಬುಟ್ಟಿ ಕವುಚಿ ಇಟ್ಟು ಅದು ಒಂದರ್ಧ ಗಂಟೆ ಕೂತು ಮೊಟ್ಟೆ ಇಟ್ಟಾದ ಮೇಲೆ ಹೊರಕ್ಕೆ ಬಿಡುತ್ತಿದ್ದರು. ಎಷ್ಟೋ ಸಲ ಈ ಕೋಳಿಗಳು ಅಕ್ಕಪಕ್ಕದವರ ಮನೆಯಲ್ಲಿ ಮೊಟ್ಟೆಯಿಟ್ಟು ಆ ಕಾರಣಕ್ಕೆ ದೊಡ್ಡ ದೊಡ್ಡ ಕಲಹಗಳೇ ನಡೆಯುತ್ತಿದ್ದುದಿತ್ತು. ನನಗೆ ತಿಳಿದಂತೆ ನಲ್ಲಿಕಟ್ಟೆ ಜಗಳಕ್ಕೆ ಸರಿಸಮನಾದ ಇನ್ನೊಂದು ಜಗಳವೆಂದರೆ ಅದು ಕೋಳಿಜಗಳವಾಗಿರುತ್ತಿತ್ತು. ಆದ್ದರಿಂದಲೇ ಇವತ್ತಿಗೂ ಚಿಲ್ಲರೆ ಸಂಗತಿಗಳಿಗಾಗಿ ನಡೆಯುವ ಜಗಳಗಳೆಲ್ಲ ಕೋಳಿಜಗಳಗಳೇ!
Image result for ಕೋಳಿ ಅಂಕ

ಒಂದೊಂದು ಕೋಳಿ ದಿನಕ್ಕೊಂದರಂತೆ ಇಪ್ಪತ್ತು ಮೂವತ್ತು ಮೊಟ್ಟೆ ಇಟ್ಟು ನಂತರ ಕಾವಿಗೆ ಬರುತ್ತಿದ್ದವು. ಈ ಕಾವಿಗೆ ಬಂದ ಕೋಳಿ ಲೊಟ್ ಲೊಟ್ ಸದ್ದು ಮಾಡುತ್ತ ರೆಕ್ಕೆಯರಳಿಸಿ ತಿರುಗುವುದನ್ನು ಅಹಂಕಾರಿ ಹೆಂಗಸು/ಹುಡುಗಿಗೆ ಹೋಲಿಸುವುದೂ ಇತ್ತು. ಹುಂಜಗಳು ಸಾಮಾನ್ಯವಾಗಿ ಪುಟ್ಟ ಪುಟ್ಟ ಗಿಡಮರಗಳ ಮೇಲೆ ಹಾರಿ ಕೂರುತ್ತಿದ್ದವು. ಅದೇ ಹೇಂಟೆಯೊಂದು ಹಾರಿ ಮರವೇರಿದರೆ, ಹುಂಜನಂತೆ ಹೇಂಟೆಯೊಂದು ಕೊಕ್ಕೋಕ್ಕೋ ಎಂದು ಕೂಗಿದರೆ ಏನೋ ಕೇಡುಗಾಲ ವಕ್ಕರಿಸುತ್ತದೆ ಎನ್ನುವ ನಂಬಿಕೆಗಳಿದ್ದವು.

ಕೋಳಿ ಸಾಕಣೆ ಆಕಾಲದ ಹೆಂಗಸರ ಆರ್ಥಿಕತೆಯ ಮೂಲವೆಂದರೆ ತಪ್ಪಲ್ಲ. ಹಣಕೊಟ್ಟು ಕೋಳಿಮರಿಗಳನ್ನು ಕೊಂಡು ಸಾಕಲು ಸಾಧ್ಯವಾಗದ ಹೆಂಗಸರು ಸಮಪಾಲಿಗೆ ಕೋಳಿ ಸಾಕುವ ಪ್ರಕ್ರಿಯೆಯೊಂದು ಆ ವ್ಯವಸ್ಥೆಯಲ್ಲಿ ಬೆರೆತಿತ್ತು. ಇದು ಹೇಗೆಂದರೆ ಒಬ್ಬಾಕೆ ತನ್ನ ಒಂದು ಕನ್ನೆಕೋಳಿಯನ್ನೋ ಮರಿಯನ್ನೋ ಸಮಪಾಲಿಗೆ ಕೊಟ್ಟಳೆಂದರೆ ಆ ಕೋಳಿಯನ್ನು ದೊಡ್ಡದಾಗುವ ತನಕ ಮುಂಗುಸಿಯ ಬಾಯಿಗೋ ಗಿಡುಗ, ಕಾಗೆ, ನಾಯಿಯ ಬಾಯಿಗೋ ಕೋಳಿ ರೋಗಕ್ಕೋ ತುತ್ತಾಗದಂತೆ ಜತನದಿಂದ ಸಾಕಿ ಕಾವಿಗೆ ಕೂರಿಸಿ ಅದು ಮರಿಮಾಡಿದ ಬಳಿಕ ಆ ಮರಿಗಳನ್ನೂ ಜೋಪಾನವಾಗಿ ಸಾಕಿ, ಒಟ್ಟು ಎಂಟು ಮರಿಗಳಾದರೆ ಅದರ ನಾಲ್ಕು ಮರಿಗಳನ್ನು ಸಮಪಾಲಿನ ಲೆಕ್ಕಕ್ಕೆ ಉಳಿಸಿಕೊಂಡು ಉಳಿದ ನಾಲ್ಕು ಮರಿಗಳನ್ನೂ ತಾಯಿಕೋಳಿಯನ್ನೂ ಹಿಂದಿರುಗಿಸುವ ಕ್ರಮವದು.

ಈ ಕಾವಿಗೆ ಕೂರಿಸುವ ಕ್ರಮವನ್ನೂ ಇಲ್ಲಿ ಹೇಳಬೇಕು ನಾನು. ಒಂದು ಕೋಳಿ ಪ್ರತಿದಿನ ಇಡುವ ಮೊಟ್ಟೆಗಳನ್ನು ಅವು ಒಡೆಯದಂತೆ ತೌಡು, ನುಚ್ಚು ಅಥವಾ ಅಕ್ಕಿಯ ಡಬ್ಬಿಯಲ್ಲಿ ಹಾಕಿ ಸಂಗ್ರಹಿಸಿ ಕೋಳಿ ಲೊಟ್ ಲೊಟ್ ಕೂಗುತ್ತ ಕಾವಿಗೆ ಬಂತೆಂದರೆ, ಒಂದು ಬುಟ್ಟಿಯ ತಳದಲ್ಲಿ ‘ಸಿಡಿಲು ಬಡಿದರೆ ಮೊಟ್ಟೆಗಳು ಹಾಳಾಗುತ್ತವೆ’ ಎಂಬ ನಂಬಿಕೆ ಇದ್ದುದರಿಂದ ಹಾಗಾಗದಂತೆ ಇದ್ದಿಲು, ಕಬ್ಬಿಣದ ತುಣುಕನ್ನು ಇರಿಸಿ ಅದರ ಮೇಲ್ಪದರದಲ್ಲಿ ಕೋಳಿಹೇನು ಆಗಬಾರದೆಂದು ಲಕ್ಕಿ ಸೊಪ್ಪನ್ನು ಹರವುತ್ತಿದ್ದರು. ಆದರೂ ಕಾವಿಗೆ ಕೂರಿಸಿದ ಪ್ರತಿ ಮನೆಯಲ್ಲೂ ಕೋಳಿಹೇನಾಗಿ ಪರಪರ ಮೈ ಕೈ ತುರಿಸಿಕೊಳ್ಳುತ್ತ ಇರುವುದು ಅಂದಿನ ಬದುಕಿನ ಸಹಜ ಭಾಗವೇ ಆಗಿಬಿಟ್ಟಿತ್ತು.
Image result for ಕೋಳಿ ಅಂಕ

ಕಾವಿನ ಬುಟ್ಟಿಯಲ್ಲಿ ಹರವಿದ ಲಕ್ಕಿಸೊಪ್ಪಿನ ಮೇಲೆ ಮೆತ್ತನ್ನೆ ಭತ್ತದ ಹುಲ್ಲು ಹರವಿ ಹಳೆಯ ಸೀರೆಯ ತುಂಡು ಹಾಸಿ ಅದರ ಮೇಲೆ ಇಪ್ಪತ್ತೊಂದು, ಮೂವತ್ತೊಂದು ಹೀಗೆ ಬೆಸ ಸಂಖ್ಯೆಯ ಮೊಟ್ಟೆಗಳನ್ನು ಇಟ್ಟು ಕೋಳಿಯನ್ನು ಕಾವಿಗೆ ಕೂರಿಸಲಾಗುತ್ತಿತ್ತು. ಕೋಳಿಗೆ ಇಡೀ ದಿನ ಬುಟ್ಟಿಯಲ್ಲಿ ಅಗಲವಾಗಿ ರೆಕ್ಕೆ ಹರವಿ ಕೂರುವುದೊಂದೇ ಕೆಲಸ. ದಿನಕ್ಕೆ ಒಂದು ಸಲ ಎದ್ದು ಮಲವಿಸರ್ಜಿಸಿ ಹೊಟ್ಟೆತುಂಬ ಕಾಳು ತಿಂದು ಕೂತಿತೆಂದರೆ ಮತ್ತೆ ಅದು ಏಳುವುದು ಮರುದಿನವೇ. ಹೀಗೆ ಮೊಟ್ಟೆಗಳ ಮೇಲೆ ಕೂತ ಕೋಳಿ ತನ್ನ ರೆಕ್ಕೆಗಳಿಂದಲೇ ಮೊಟ್ಟೆಗಳಿಗೆ ಸಮಾನ ಕಾವು ಸಿಗಲೆಂದು ಅವುಗಳನ್ನು ಮಗ್ಗುಲು ಮಗ್ಗುಲಾಗಿ ಹೊರಳಿಸಿಕೊಳ್ಳುತ್ತಿತ್ತು. ಸರಿಯಾಗಿ ಕಾವು ಸಿಗದ ಮೊಟ್ಟೆಗಳು ಮರಿಯಾಗದೆ ಕೆಟ್ಟುಹೋಗುತ್ತಿದ್ದವು. ಹೀಗೆ ಇಪ್ಪತ್ತೊಂದರಿಂದ ಇಪ್ಪತ್ತನಾಲ್ಕು ದಿನಗಳ ಅವಧಿಯಲ್ಲಿ ಮೊಟ್ಟೆಗಳಿಗೆ ಒಂದೊಂದು ಚುಕ್ಕೆ ಮೂಡಿ, ಆ ಚುಕ್ಕೆ ತೂತಾಗಿ, ಆ ತೂತು ಬಿರಿದು ಮೊಟ್ಟೆಯ ಓಡನ್ನು ಸೀಳಿ ಬಣ್ಣ ಬಣ್ಣದ ಹೂಮರಿಗಳು ಚಿಂಯೋಂ ಪೀಂಯೋಂ ಎನ್ನುತ್ತ ಹೊರಬರುತ್ತಿದ್ದವು. ಇದೊಂದು ಅದ್ಭುತ ವಿಸ್ಮಯವೇ ಆಗಿರುತ್ತಿತ್ತು. ಮಹಿಳೆಯರು ಮೊಟ್ಟೆಯಿಡುವ ಪ್ರತಿಯೊಂದು ಕೋಳಿಯನ್ನೂ ಕಾವಿಗೆ ಕೂರಿಸುತ್ತಿರಲಿಲ್ಲ. ಮೊಟ್ಟೆ ಸಾರಿಗೋ ಮಾರಾಟಕ್ಕೋ ಬಳಕೆಯಾಗಬೇಕಲ್ಲ! ಹೀಗಾದಾಗ ಕಾವಿಗೆ ಬಂದ ಕೋಳಿಯ ಕಾವನ್ನು ಇಳಿಸಲು ಅದರದೇ ರೆಕ್ಕೆಯಿಂದ ಒಂದು ಪುಕ್ಕವನ್ನು ಕಿತ್ತು ಕೋಳಿಯ ಮೂಗಿನ ಈ ತೂತಿನಿಂದ ತೂರಿಸಿ ಆ ತೂತಿನಿಂದ ಹೊರಬರುವಂತೆ ಸುರಿದು ಬಿಟ್ಟುಬಿಡುತ್ತಿದ್ದರು. ಮೂಗಿನಲ್ಲಿ ಸುರಿದ ಪುಕ್ಕ ಉಂಟು ಮಾಡುವ ನೋವು, ಕಿರಿಕಿರಿಯಿಂದ ಅದಕ್ಕೆ ಏರಿದ ಕಾವು ಇಳಿಯುತ್ತಿತ್ತು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಂಥ ಹಿಂಸೆಗಳನ್ನು ಆರಾಮವಾಗಿ ಮಾಡಿಬಿಡುತ್ತಿದ್ದ!
Image result for ಕೋಳಿ ಅಂಕ

ಆಗೆಲ್ಲ ಪ್ರತಿ ಊರಲ್ಲೂ ತಲೆಯ ಮೇಲೆ ಕುಕ್ಕೆಯನ್ನು ಹೊತ್ತು ಒಣಮೀನು ಮಾರುವ ಹೆಂಗಸರು ತೌಡಿನ ಚೀಲದಲ್ಲಿ ಕಂತ್ರಿ ಕೋಳಿಯ ಮೊಟ್ಟೆಗಳನ್ನೂ ಇಟ್ಟುಕೊಂಡು ಮಾರುತ್ತಿದ್ದರು. ಕೋಳಿ ಸಾಕುವ ಮನೆ ಮನೆಯಲ್ಲೂ ಕೋಳಿ, ಕೋಳಿ ಮೊಟ್ಟೆಗಳ ವ್ಯಾಪಾರ ಇರುತ್ತಿತ್ತು. ಕೋಳಿ, ಮೊಟ್ಟೆಗಳ ಮಾರಾಟದಿಂದ ಹೆಂಗಸರ ಕೈಲಿ ನಾಲ್ಕು ಕಾಸು ಬರುತ್ತಿತ್ತು.

ಕಾಳು ಹಾಕಲು ಗತಿ ಇಲ್ಲದ ಮನೆಗಳಲ್ಲೂ ಕೋಳಿ ಸಾಕಲಾಗುತ್ತಿತ್ತು. ಅವು ಹಿತ್ತಲ ಬಸಳೆ, ತೊಂಡೆ ಬುಡಗಳಲ್ಲಿ, ಬಚ್ಚಲ ನೀರಲ್ಲೆ ಕೆದರಿ ಸಿಕ್ಕ ಹುಳು ಹುಪ್ಪಟೆ ತಿನ್ನುತ್ತ ಹೇಗೋ ಇರುತ್ತಿದ್ದವು. ಆದರೆ ಮುಂಗುಸಿ, ಕಾಗೆ, ಗಿಡುಗ, ನರಿ, ನಾಯಿ, ಕಳ್ಳಕಾಕರುಗಳ ಕಾಟದಿಂದ ಬಚಾವು ಮಾಡುವುದು ದೊಡ್ಡ ಸಮಸ್ಯೆಯೇ ಆಗಿರುತ್ತಿತ್ತು. ಇದೆಲ್ಲದರಿಂದ ಹೇಗೂ ಬದುಕುಳಿದವು ಎಂದರೆ ಕೋಳಿ ಜ್ವರ, ಮಂಡೆ ರೋಗಗಳೆಂಬ ಮಹಾಮಾರಿಗಳಿಂದ ಇಡೀ ಊರಿನ ಕೋಳಿ ಸಂತತಿಯೇ ನಾಶವಾಗಿ ಹೋಗುತ್ತಿದ್ದುದೂ ಇತ್ತು. ಎಷ್ಟೋ ಸಲ ಕೋಳಿಗೆ ಜ್ವರ ಬಂದಾಗ ಪಶುವೈದ್ಯರು ರೆಕ್ಕೆಗಳಿಗೆ ಇಂಜೆಕ್ಷನ್ ಚುಚ್ಚುತ್ತಿದ್ದರಾದರೂ ಕೋಳಿಗಳ ಸಾವನ್ನು ತಪ್ಪಿಸಲಾಗುತ್ತಿರಲಿಲ್ಲ. ಜನ ಕೊಬ್ಬರಿ ಎಣ್ಣೆ ಕುಡಿಸುವುದು ಮುಂತಾದ ನಾಟಿ ಮದ್ದು ಮಾಡಿದರೂ ಪ್ರಯೋಜನ ಕಂಡದ್ದನ್ನು ನಾನು ಕಂಡಿಲ್ಲ. ಹೀಗೆ ಕೋಳಿ ಜ್ವರ ಬಂದಾಗ ಅವು ಕುಗುರುತ್ತ ಅಲ್ಲಲ್ಲೇ ಕೂತು ಸತ್ತುಹೋಗುತ್ತಿದ್ದವು. ಮಂಡೆರೋಗ ಎಂದರೆ ಕೋಳಿಗಳ ಮಂಡೆಗಳಿಗೆ ಕೆಂಪು ಕೆಂಪು ಹುಣ್ಣುಗಳಾಗುತ್ತಿದ್ದವು. ಏನೇ ಹಚ್ಚಿದರೂ ಅವು ವಾಸಿಯಾಗದೆ ಕೋಳಿಗಳು ಸತ್ತುಹೋಗುತ್ತಿದ್ದವು.

ಆಗೆಲ್ಲ ಮನೆಯಲ್ಲೇ ಹಿಂಡು ಹಿಂಡು ಕೋಳಿ ಸಾಕಿದರೂ ಕೋಳಿ ಸಾರು ಮಾಡಬೇಕೆಂದರೆ ನೆಂಟರು ಬರಬೇಕು, ಇಲ್ಲವೇ ಹಬ್ಬಗಳು. ಇಲ್ಲಿ ಒಂದು ತಮಾಷೆಯೂ ಇದೆ. ಆಗೆಲ್ಲ ನೆಂಟರು ಬಂದರೆ ಕೋಳಿ ಸಾರು ಮಾಡದೆ ಅವರು ತಮ್ಮ ಊರಿಗೆ ಮರಳುತ್ತಿರಲಿಲ್ಲ. ಒಂದು ವೇಳೆ ನಾಳೆ ಊರಿಗೆ ವಾಪಸ್ ಹೋಗ್ತೇನೆ ಎಂದರೆ ಬೇಡ ಇರಿ ನಾಳೆ ಕೋಳಿ ಕಡಿಯುವ ಎಂದು ನೆಂಟರನ್ನು ಉಳಿಸಿಕೊಳ್ಳುತ್ತಿದ್ದರು. ‘ಹೋಗ್ತೇನೆ ಹೋಗ್ತೇನೆ ಅಂತ ಹದಿನಾರು ಕೋಳಿ ತಿಂದಿದ್ದನಂತೆ’ ಎಂಬ ಗಾದೆಯೊಂದು ಹುಟ್ಟಿದ್ದೂ ಹೀಗೆಯೇ.

ಬೆಳಿಗ್ಗೆ ಗೂಡಿನಿಂದ ಕತ್ತರಿಸುವ ಕೋಳಿಯೊಂದನ್ನು ಹೊರತುಪಡಿಸಿ ಉಳಿದವನ್ನು ಮಾತ್ರ ಮೇಯಲು ಬಿಡುತ್ತಿದ್ದರು. ಕತ್ತರಿಸಲು ಆಯ್ಕೆ ಮಾಡಿದ ಕೋಳಿಯನ್ನು ಜಲ್ಲೆಯಲ್ಲಿ ಕವುಚಿಟ್ಟು ಸಾರು ಮಾಡುವ ವೇಳೆಗೆ ಬಿಸಿನೀರು ಕಾಯಿಸಿ ನಂತರ ಕೋಳಿಯ ಕತ್ತುಕೊಯ್ದು ಬಿಸಿ ನೀರಿಗೆ ಅದ್ದಿ ಪುಕ್ಕ ಕೀಳುತ್ತಿದ್ದರು. ನಂತರ ಒಲೆಯ ಜ್ವಾಲೆಗೆ ಪುಕ್ಕತರಿದ ಕೋಳಿಯನ್ನು ಹಿಡಿದು ಸಣ್ಣ ಪುಟ್ಟ ಪುಕ್ಕಗಳನ್ನೂ ಸುಟ್ಟು ನಂತರ ಅದರ ಹೊಟ್ಟೆ ಬರೆದು ಪಿತ್ತಕೋಶವನ್ನು ಒಡೆಯದಂತೆ ಜಾಗ್ರತೆಯಾಗಿ ತೆಗೆದು ಕೋಳಿಯ ಲಿವರ್, ಹೃದಯ ಪ್ರತ್ಯೇಕಿಸಿ ಮಾಂಸವನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ, ಒಲೆಯ ಮೇಲೆ ತವಾ ಇಟ್ಟು ಹೆಚ್ಚಿದ ಈರುಳ್ಳಿ, ಗಸಗಸೆ, ಒಣಮೆಣಸು, ಮಸಾಲೆ ಪದಾರ್ಥಗಳನ್ನು ಹುರಿದು ತೆಂಗಿನ ತುರಿಯೊಡನೆ ಕಾರಕಡೆದು ಈರುಳ್ಳಿ ಒಗ್ಗರಣೆಯಲ್ಲಿ ಮಾಂಸವನ್ನು ಬೇಯಿಸಿ ಸಾರು ಮಾಡಿದರೆಂದರೆ ಊರಿಡೀ ಕೋಳಿಸಾರಿನಿಂದ ಘಮಗುಡುತ್ತಿತ್ತು. ಅಂಥ ಸಾರಿಗಾದರೋ ಅಮೃತದ ರುಚಿ. ಆ ದಿನವಿಡೀ ಮನೆಯ ಮಕ್ಕಳಿಗೆ ಸಡಗರವೋ ಸಡಗರ. ಕೋಳಿ ಕತ್ತರಿಸುವಾಗ ಬೊಬ್ಬೆ ಹೊಡೆದ ಮಕ್ಕಳ ಅಳು ಸಾರಾದಾಗ ಮಾಯ! ಇಂಥ ಸಾರು ಅಕ್ಕಪಕ್ಕದ ನಾಲ್ಕು ಮನೆಗಳಿಗೂ ತಲುಪಬೇಕು. ಮನೆಯ ಜನರ ಜೊತೆ ಅಕ್ಕಪಕ್ಕದ ಕೆಲವರೂ ಊಟದ ಪಂಕ್ತಿಯಲ್ಲಿ ಕೂರಬೇಕು. ಸಂಭ್ರಮದಿಂದ ಉಂಡು ಡರ್ರನೆ ತೇಗಬೇಕು. ಈಗ ನಿತ್ಯ ಕೋಳಿ ಮಾಂಸ ಉಂಡರೂ ಆ ರುಚಿ ಇಲ್ಲ.
Image result for ಕೋಳಿ ಅಂಕ

ನನ್ನ ಮನೆಯಲ್ಲಿ ನಾನೂ ತಮ್ಮನೂ ಕೋಳಿ ಸಾಕುತ್ತಿದ್ದೆವು. ಅಂದರೆ ಮನೆಯಲ್ಲಿ ಇರುವ ಇಂತಿಷ್ಟು ಕೋಳಿ ನನ್ನವು, ಇಂತಿಷ್ಟು ಅವನವು. ಸಾರಿಗೆ ನಮ್ಮ ಕೋಳಿ ಕತ್ತರಿಸಿದರೋ ಮುಗಿಯಿತು ಕಥೆ. ಚಂಡಿಹಿಡಿದು ಅತ್ತು, ಊಟ ಮಾಡದೆ ಮೊಂಡುಹಿಡಿದು ಕೂತು, ‘ಕೊಂದ ಪಾಪ ತಿಂದು ಪರಿಹಾರ’ ಎಂಬ ಗಾದೆ ಹೇಳಿದ ಮೇಲೆ ರಾಜಿಯಾಗಿ ಊಟ ಮಾಡುವುದಿತ್ತು. ಮನೆಯಲ್ಲೇ ಅಷ್ಟು ಕೋಳಿ ಸಾಕುತ್ತಿದ್ದರೂ ಬೇಕೆನಿಸಿದಾಗೆಲ್ಲ ಕೋಳಿ ಕತ್ತರಿಸದೆ ಕಂಜೂಸು ಮಾಡುವ ಆಗಿನ ಜನ ಕೋಳಿ ರೋಗ ಬಂದು ಎಲ್ಲ ಕೋಳಿ ಸಾಯುವಾಗ ಅಯ್ಯೋ ಕತ್ತರಿಸಿ ತಿಂದಿದ್ದರೂ ಆಗುತ್ತಿತ್ತಲ್ಲ.., ಎಲ್ಲ ಸತ್ತವಲ್ಲ ಎಂದು ಸಂಕಟಪಡುತ್ತಿದ್ದರು. ತಮಾಷೆಯೆಂದರೆ ಪ್ರತಿಸಲವೂ ಇದೇ ಪುನರಾವರ್ತನೆಯಾಗುತ್ತಿತ್ತು.

ಕಳುವಾದಾಗ, ಸುಳ್ಳು ಹೇಳುವಾಗ, ಅಪ್ರಾಮಾಣಿಕವಾಗಿ ಜನ ನಡೆದುಕೊಳ್ಳುವಾಗ ಮೊಟ್ಟೆಯ ಮೇಲುಭಾಗಕ್ಕೆ ಇದ್ದಲಿಂದ ಏನೋ ಗೊಂಬೆಯ ಚಿತ್ರ ಬರೆದು ನೀನು ಇಂಥ ತಪ್ಪನ್ನು ಮಾಡಿಲ್ಲವೆಂದರೆ ಮೊಟ್ಟೆಯನ್ನು ಮುಟ್ಟು. ಸುಳ್ಳು ಹೇಳಿದೆಯಾದರೆ ರಕ್ತಕಾರಿಕೊಂಡು ಸಾಯುತ್ತೀಯಾ ಎಂದು ಮೊಟ್ಟೆ ಮುಟ್ಟಿಸುವ ಪ್ರಕ್ರಿಯೆ ಇತ್ತು. ಮಕ್ಕಳಿಗೆ ಹೊಟ್ಟೆ ಸಂಬಂಧಿ ತೊಂದರೆಗಳಾದಾಗ ಮೊಟ್ಟೆಯಿಂದ ದೃಷ್ಟಿ ನಿವಾಳಿಸುವ ಸಂಪ್ರದಾಯವೂ ಇತ್ತು. ಮುಂಜಾನೆ ಎಬ್ಬಿಸಲು ಅವರವರ ಮನೆಯ ಹುಂಜಗಳೇ ಅಲಾರಾಂನಂತೆ ಕೂಗಬೇಕು. ‘ತನ್ನ ಕೋಳಿಯಿಂದಲೇ ಬೆಳಗಾಗುತ್ತೆ ಅಂದುಕೊಂಡಿದಾರೆ’ ಎಂಬ ಗಾದೆಯೊಂದು ಇದರಿಂದಲೇ ಹುಟ್ಟಿಕೊಂಡದ್ದು. ಕೋಳಿಗಳನ್ನು ದೇವರಿಗೆ ಬಿಡುವುದೂ ರೂಢಿಯಲ್ಲಿ ಇತ್ತು.

ಆಗೆಲ್ಲ ಕಂತ್ರಿಕೋಳಿ ಸಾಕುತ್ತಿದ್ದರು. ಇವುಗಳಲ್ಲಿ ಕೆಲವಕ್ಕೆ ಕತ್ತಿನಲ್ಲಿ ಕೂದಲಿರದೆ ಬೋಳಾಗಿರುತ್ತಿತ್ತು. ನಮ್ಮ ಪಕ್ಕದ ಮನೆಯಾಕೆ ಸಂಜೆ ಸಮಯ ಕೋಳಿಯೊಂದನ್ನು ಹಿಡಿಯಲು ಕೈಹಾಕಿ ಬೋಳು ಕತ್ತಿನ ಕೋಳಿಯೆಂದು ಹಾವನ್ನು ಹಿಡಿದುಬಿಟ್ಟಿದ್ದಳು. ಹಿಂದಿಯ ಬಾಂಬೆ ಟು ಗೋವಾ ಸಿನೆಮಾದಲ್ಲೂ ಇಂಥದ್ದೇ ದೃಶ್ಯವನ್ನು ನೋಡಿದ್ದ ನನಗೆ ಬೋಳು ಕತ್ತಿನ ಕೋಳಿ ಎಂದರೆ ನಗು!

ಆ ದಿನಗಳಲ್ಲಿ ಬಣ್ಣದಲ್ಲಿ ಅದ್ದಿದ ಫಾರಮ್ ಕೋಳಿ ಮರಿಗಳೂ, ಗಿರಿರಾಜ ಕೋಳಿಮರಿಗಳೂ ಮಾರಾಟಕ್ಕೆ ಬರುತ್ತಿದ್ದವು. ಈಗ ಕೋಳಿ ಸಾಕಣೆ ತೀರಾ ಅಪರೂಪ. ಒಮ್ಮೆ ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಬೊಳುವಾರು ಮಹಮದ್ ಕುಂಜ್ಞಿಯವರು, ‘ನನ್ನ ಮೊಮ್ಮಗುವಿಗೆ ಕೋಳಿ ತೋರಿಸಬೇಕು ಎಂದುಕೊಳ್ಳುತ್ತೇನೆ, ಆದರೆ ಸೈಕಲ್ಗೆ ಕಟ್ಟಿ ಅಥವಾ ವಾಹನಗಳಲ್ಲಿ ಕಿಕ್ಕಿರಿದು ತುಂಬಿಕೊಂಡು ಹೋಗುವ ಕೋಳಿಗಳನ್ನು ತೋರಿಸಲಾರೆ’ ಎಂದಿದ್ದು ನನಗೆ ನೆನಪಿದೆ.

ಈಗ ಎಲ್ಲರನ್ನೂ ಎಬ್ಬಿಸಲು ಮೊಬೈಲ್ ಅಲಾರಾಂ ಕೂಗುತ್ತದೆ. ಕೋಳಿ ಕೂಗುವುದಿಲ್ಲವೇ ಎಂದರೆ ಕೂಗುತ್ತದೆ. ನಮ್ಮ ಮನೆಯ ಹತ್ತಿರ ಯಾರೋ ಕೋಳಿ ಸಾಕಿದ್ದಾರೆ. ಬೀದಿ ದೀಪದ ಬುಡದಲ್ಲೇ ಇರುವ ಮನೆಯ ಕೋಳಿಯದು ರಾತ್ರಿ ಹನ್ನೆರಡು, ಒಂದು ಗಂಟೆಗೆಲ್ಲ ಕೊಕ್ಕೊಕ್ಕೋ ಎಂದು ಕೂಗುತ್ತದೆ. ಅಷ್ಟು ಹೊತ್ತಾದರೂ ನಿದ್ದೆಮಾಡದೆ ಏನೋ ಮಾಡುತ್ತಿರುವ ನನ್ನ ಹಣೆಯಲ್ಲಿ ವಿಷಾದದ ಗೆರೆಯೊಂದು ಮೂಡುತ್ತದೆ. ನಿಟ್ಟುಸಿರೊಂದನ್ನು ದಬ್ಬಿ ಮಲಗಲು ಅಣಿಯಾಗುತ್ತೇನೆ.

ಒಂದು ಬಯಲಾಟ

Image result for ಬಯಲಾಟ




-ರಹಮತ್ ತರೀಕೆರೆ

ಬಳ್ಳಾರಿ ಸೀಮೆಗೆ ಹೊಸ ಬದುಕನ್ನರಸಿ ಬಂದು ನೆಲೆಸಿದ ತರುವಾಯ, ಈ ಭಾಗದ ಜನರ ದುಡಿಮೆ, ವಿಶ್ರಾಂತಿಯ ಪರಿ, ಕಲಾಸಕ್ತಿ, ವ್ಯಸನ, ಜಗಳಗಳನ್ನು ಆಸ್ಥೆಯಿಂದ ನೋಡಲಾರಂಭಿಸಿದೆ. ಜನಪದ ಕಲೆಗಳಲ್ಲಿ ಬುರ್ರಕಥಾ, ತೊಗಲುಗೊಂಬೆ, ಚೌಡಿಕೆಹಾಡು, ಸವಾಲ್-ಜವಾಬ್ ಪದ, ದೊಡ್ಡಾಟಗಳು ನನ್ನನ್ನು ಸೆಳೆದಕೊಂಡವು. ಅನೇಕ ದೊಡ್ಡಾಟಗಳನ್ನು ನೋಡಿದೆ. ಅವುಗಳಲ್ಲಿ ಮೊದಲನೆಯದು ಯಾಕೊ ಸ್ಮರಣೆಯಲ್ಲಿ ಉಳಿದುಬಿಟ್ಟಿದೆ.

ನಮ್ಮ ಬಿಡಾರವಿರುವ ಹೊಸಪೇಟೆಗೆ ಕೂಗಳತೆ ದೂರದಲ್ಲಿ ಹತ್ತಾರು ಹಳ್ಳಿಗಳಿವೆ. ಇವೆಲ್ಲ ಶಾಸನೋಕ್ತ ಪ್ರಾಚೀನ ಗ್ರಾಮಗಳು. ಕುರುಬರು ಬೇಡರು ಮುಸ್ಲಿಮರು ದಲಿತರು ಲಿಂಗಾಯತರು ವಾಸಿಸುವ ಇಲ್ಲಿ ಹೆಚ್ಚಾನ್ಹೆಚ್ಚು ಮಂದಿ ರೈತರು ಮತ್ತು ಕೂಲಿಗಾರರು; ನಸುಕಿಗೇ ಎದ್ದು ಮಾಗಾಣಿ ಕೆಲಸಕ್ಕೆ ಹೋದರೆ ಸಂಜೆ ನಾಲ್ಕೈದಕ್ಕೆ ಮರಳುವರು; ಉಳಿದ ಹೊತ್ತನ್ನು ಕೊಳ್ಳುಬಿಟ್ಟು ನಿಂತಿರುವ ಬಂಡಿಯ ಮೂಕಿ ಮೇಲೊ, ರಸ್ತೆಬದಿಯ ಕಟ್ಟೆ ಮೇಲೊ ಕುಳಿತು ಬೀಡಿ ಎಳೆಯುತ್ತ, ಮಂಡಾಳು ಮಿರ್ಚಿ ತಿನ್ನುತ್ತ, ಲೋಕದ ಸಮಸ್ತ ವಿಷಯಗಳ ಮೇಲೆ ಕೊಟ್ಟಣ ಕುಟ್ಟುವರು; ಬ್ಯಾಸರಾದರೆ ಸಿಟ್ಟಿಬಸ್ಸೇರಿ ಬಜಾರಿಗೆ ಹೋಗಿ ಮಸಾಲೆದೋಸೆ ತಿಂದು ತೆಲುಗು ಸಿನಿಮಾ ನೋಡಿ ಬರುವರು; ಆಷಾಢ ಕಳೆದ ಮೇಲೆ ರಸ್ತೆಯಲ್ಲಿ ಗುಂಡೆಸೆತ ಮಾಡಿಕೊಂಡು ಹಂಪಿತನಕ ಹೋಗುವರು; ಉಗಾದಿ ದಿನ ಅಹೋರಾತ್ರಿ ಇಸಪೀಟಿಗೆ ತಪಸ್ವಿಗಳಂತೆ ಕೂರುವರು; ಕಬ್ಬಿನರೊಕ್ಕ ಕೈಗೆ ಹತ್ತಿದ ದಿನಗಳಲ್ಲಿ ದರ್ಬಾರು ಮಾಡುವರು; ದುರುಗಮ್ಮನ ಜಾತ್ರೆಗೆ ಮರಿಕಡಿದು ಬಂಧುಗಳಿಗೆ ಉಣಿಸುವರು. ಈ ಜೀವನ ಲಯದಲ್ಲಿ ವರ್ಷಕ್ಕೊಮ್ಮೆ ಆಡುವ ಬಯಲಾಟವೂ ಸೇರಿದೆ.

ಹಬ್ಬಕ್ಕೊ ಜಾತ್ರೆಗೊ ಕಂದಗಲ್ ಹನುಮಂತರಾಯ ವಿರಚಿತ `ರಕ್ತರಾತ್ರಿ’ಯ ಅಥವಾ `ಗಿರಿಜಾಕಲ್ಯಾಣ' `ಕೀಚಕವಧೆ’ `ದ್ರೌಪದಿ ವಸ್ತ್ರಾಪಹರಣ’ `ಲಂಕಾದಹನ’ಗಳ ಆಟ ಏರ್ಪಡುತ್ತದೆ. ಹೆಚ್ಚಿನವು ಮಹಾಭಾರತದ ಪ್ರಸಂಗಗಳಾಗಿದ್ದು ವಧೆ, ದಹನ, ಅಪಹರಣ, ಕಲ್ಯಾಣಗಳಿಂದ ಕೂಡಿವೆ. ಈ ವಿಶೇಷಣಗಳಿಗೂ ವಿಜಯನಗರ ಸಾಮ್ರಾಜ್ಯದ ಈ ಮಾಜಿ ಪ್ರಜೆಗಳ ಬದುಕಿಗೂ ಯಾವುದೊ ನಂಟಿರಬೇಕು. ಹಂಪೆಯ ಹರಿಹರನ `ಗಿರಿಜಾಕಲ್ಯಾಣ’ದಲ್ಲೂ ಇವೇ ಅಂಶಗಳು ಪ್ರಧಾನ ತಾನೇ? ಅವನ ಕಾವ್ಯದಲ್ಲಿ ಕಾಮದಹನದ ಬಳಿಕ ಕಲ್ಯಾಣ ಬಂದರೆ, ಈ ಹಳ್ಳಿಗಳಲ್ಲಿ ಕಾಮ-ಕಲ್ಯಾಣಗಳ ಬಳಿಕ ದಹನ. ಟಿವಿ ಸಿನಿಮಾ ಮೊಬೈಲುಗಳ ಅಬ್ಬರದಲ್ಲೂ ಬಯಲಾಟಗಳಲ್ಲಿ ಜನರಿಗಿರುವ ತನ್ಮಯತೆ ಸಂಭ್ರಮ ಖುಶಿ ತರುತ್ತದೆ. ಆದರೆ ಈ ಆಟಗಳನ್ನು ಕಾಣುವಾಗ, ಒಂದು ಕಾಲಕ್ಕೆ ಸಂಪನ್ನವಾಗಿ ಬಾಳಿದ ಮನೆತನ, ಬಡತನಕ್ಕಿಳಿದಂತೆ ವಿಷಾದವೂ ಕವಿಯುತ್ತದೆ.

ನಾನು ನೋಡಿದ ಮೊದಲ ದೊಡ್ಡಾಟ ಹೀಗೆ ನಡೆಯಿತು: ಊರಮಧ್ಯದಲ್ಲಿ ಚಪ್ಪರ ಕಟ್ಟಿ ಬಾಳೆತರಗು ಮಾವಿನಸೊಪ್ಪು ಹರಡಿ ಮಾಡಿದ ವೇದಿಕೆ; ರಂಗಸ್ಥಳಕ್ಕೆ ಹಿನ್ನೆಲೆಯಾಗಿ ತಿರುಪತಿ ತಿಮ್ಮಪ್ಪನ ಚಿತ್ರವಿರುವ ದೊಡ್ಡ ಅಂಕಪರದೆ; ಕೆಳಗೆ ದಪ್ಪಹಲಗೆಯಿಂದ ಮಾಡಿದ ರಂಗಮಂಚ; ನಾಲ್ದೆಸೆಗೂ ಬೆಳಕಿನ ಚೌಕಟ್ಟು ಹಾಕಿದಂತೆ ಟೂಬ್‍ಲೈಟು. ಜನ ರಾತ್ರಿಯೂಟ ಮುಗಿಸಿ, ಗೋಣಿಚೀಲ ಪ್ಲಾಸ್ಟಿಕ್‍ಹಾಳೆ, ಈಚಲುಚಾಪೆ, ತಲೆದಿಂಬು ಹೊದಿಕೆ ಹೊತ್ತುತಂದು, ನಡುಬೀದಿಯಲ್ಲೇ ಸೀಟುಹಿಡಿದು, ಎಲೆ ಅಡಿಕೆ ಜಗಿಯುತ್ತ ಗುಜುಗುಜು ಗೈಯುತ್ತ ಕುಳಿತರು. ಮಂಡಾಳು ಮಿರ್ಚಿ ವಗ್ಗಾಣಿ ಚಹದ ಅಂಗಡಿಗಳು ಆಟಕ್ಕಿಂತಲೂ ಹೆಚ್ಚಿನ ಗಿರಾಕಿಗಳನ್ನು ಸೆಳೆಯುತ್ತಿದ್ದವು. ಪಾತ್ರಧಾರಿಗಳ ನಂಟರು ಆಗಮಿಸಿದ್ದರಿಂದ ಊರ ಜನಸಂಖ್ಯೆ ದಿಢೀರನೆ ಏರಿತ್ತು. ಅತೀವ ಸಂತೋಷದಲ್ಲೊ ಅರ್ಥವಾಗದ ದುಗುಡದಲ್ಲೊ ಕೆಲವರು ಟೈಟಾಗಿದ್ದು, ನಾಟಕ ಶುರುವಾಗುವ ಮೊದಲೇ ಮಧ್ಯಂತರ ವಿರಾಮ ತೆಗೆದುಕೊಂಡು ಜಗಲಿಗಳಲ್ಲಿ ಅನಂತಶಯನರಾಗಿದ್ದರು. ವೇದಿಕೆ ಸಮೀಪದಲ್ಲಿ ಕೆಲವು ಗಣ್ಯರನ್ನು ಕುರ್ಚಿ ಹಾಕಿ ಕೂರಿಸಲಾಗಿತ್ತು. ಗಲಭೆಪೀಡಿತ ಸಭೆ ಸ್ಥಳೀಯ ಶಾಸಕರ ಆಗಮನವನ್ನು ಎದುರು ನೋಡುತ್ತಿತ್ತು. ಮಾನ್ಯ ಶಾಸಕರು, ಬಹುಶಃ ನಾಟಕದ ಖರ್ಚನ್ನು ವಹಿಸಿಕೊಂಡಿದ್ದರೆಂದು ಕಾಣುತ್ತದೆ, ಬಂದೊಡನೆ ಸೀಟಿ ಉಘೆಗಳಾದವು. ಅವರನ್ನು ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಹಾರಹಾಕಿ ಅವರ ದಾನಗುಣದ ಬಗ್ಗೆ ಕೊಂಡಾಟ ನಡೆಯಿತು. ಶಾಸಕರು ನಾಳೆ ಚುನಾವಣೆಯಲ್ಲಿ ಉಪಯೋಗಕ್ಕೆ ಬರುವ ಸಮಾಜದ ಯಜಮಾನರನ್ನು ಕರೆದು ಹಾರಹಾಕಿದರು. ಇದಕ್ಕೆ ಒಂದು ತಾಸು ಹಿಡಿಯಿತು. ಆಟ ನೋಡಬಂದ ನಾನು ಕಿರಿಕಿರಿ ಪಡುತಿದ್ದರೆ, ಜನ ಇದನ್ನು ಆಟದ ಮೊದಲ ಅಂಕದಂತೆ ಉತ್ಸಾಹದಿಂದ ನೋಡಿದರು.
Image result for ಬಯಲಾಟ

ರಾತ್ರಿ 11ಕ್ಕೆ ಆಟ ಶುರುವಾಯಿತು. ಪಾತ್ರಧಾರಿಗಳ ಪ್ರಸಾದನಕ್ಕೆ ದೂರದಲ್ಲಿದ್ದ ಗುಡಿಯ ಪಡಸಾಲೆಯೇ ಬಣ್ಣದ ಮನೆಯಾಗಿತ್ತು. ಇದರ ಫಾಯದೆಯನ್ನು ಪಾತ್ರಧಾರಿಗಳು ರಂಗಸ್ಥಳದವರೆಗೆ ಹಲಗೆ ಬಾರಿಸಿಕೊಂಡು ಮೆರವಣಿಗೆ ಬರುವ ಮೂಲಕ ಪಡೆದರು. ಕೆಲವರು ಪ್ರೇಕ್ಷಕ ಸಾಗರ ಸೀಳಿಕೊಂಡು ರಂಗಪ್ರವೇಶ ಮಾಡಿದರು. ಅವರ ಪ್ರವೇಶದುದ್ದಕ್ಕೂ `ಪಟಾಕ್ಷಿ’. ಹಲಗೆ ಸದ್ದಿಗೆ ಗಾಬರಿಯಾಗಿದ್ದ ಊರನಾಯಿಗಳು, ಪಟಾಕಿ ಸದ್ದಿಗೆ ದಿಕ್ಕೆಟ್ಟು ಓಡಿದವು. ಹಾಗೆ ಓಡುವಾಗ ಯಾವುದೊ ಒಂದು ಒಬ್ಬಳ ಕಾಲನಡುವೆ ನುಸುಳಿ, `ಏಯ್ ತಿಕ್ಕ, ಥೂ' ಎಂದು ಬೈಸಿಕೊಂಡಿತು.

ಪಾತ್ರಧಾರಿಗಳು ರಂಗಕ್ಕೆ ಏರಿದೊಡನೆ ಆಹೇರಿ ಶುರುವಾಯಿತು. ಪಾತ್ರಧಾರಿಯ ಹೆಂಡತಿ ಕಡೆಯವರು ಉಂಗುರ ಮುಯ್ಯಿ ಮಾಡಲಾರಂಭಿಸಿದರು. ಗೆಳೆಯರು ಹೂಹಾರ ಹಾಕಿದರು. ಅದರ ವ್ಯವಸ್ಥೆಯನ್ನು ಪಾತ್ರಧಾರಿಯೇ ಮಾಡಿದ್ದನೆಂದು ಕೆಲವರು ಅಂಬೋಣ. ಭುಜಕೀರ್ತಿ ಕಿರೀಟಗಳ ವಜನದಿಂದ ಜಾತ್ರೆಯ ಗೊಂಬೆಯಂಗಡಿಯಂತೆ ಕಾಣುತ್ತಿದ್ದ ಪಾತ್ರಧಾರಿ, ಹಾರದ ಭಾರಕ್ಕೆ ಮತ್ತಷ್ಟು ಕುಸಿದುಹೋದನು. ಹಾರದ ಭಾರಕ್ಕೂ, ಬಳಿದುಕೊಂಡ ಬಣ್ಣಕ್ಕೂ, ಪ್ರಖರ ಲೈಟಿನ ಬೆಳಕಿಗೂ, ರೇಷ್ಮೆಸೀರೆಯನ್ನು ಕಚ್ಚೆಹಾಕಿ ಉಟ್ಟುಕೊಂಡಿದ್ದಕ್ಕೂ, ನೆರೆದ ಸಂದಣಿಗೂ, ಪಾತ್ರಧಾರಿಗಳ ದೇಹದಿಂದ ಬೆವರು ಕೆರೆಕೆಳಗಿನ ಗದ್ದೆಯಲ್ಲಿ ಬಸಿನೀರು ಉಕ್ಕುವಂತೆ ಉಕ್ಕುತ್ತಿತ್ತು. ಅದನ್ನು ಒರೆಸಲು ದಸ್ತಿ ಹಿಡಿದು ಸಹಾಯಕರು. ಆಹೇರಿಯ ಕಾರ್ಯಕ್ರಮ ಕೊನೆಗೊಳ್ಳುವ ಸೂಚನೆಯೇ ಕಾಣದಿರಲು, ನಾಟಕ ಮುಂದುವರೆಸಲು ಭಾಗವತನು ತಟ್ಟನೆ ಕಂದಪದ್ಯ ಹಾಡಲು ಶುರುಮಾಡುತ್ತಿದ್ದನು. ಆಗ ನಟರು ಅನ್ಯ ಮಾರ್ಗವಿಲ್ಲದೆ ಕುಣಿತ ಆರಂಭಿಸುತ್ತಿದ್ದರು. ಕುಣಿತಕ್ಕೆ ಹಾರಗಳು ತೊಡಕನ್ನು ಒಡ್ಡುತ್ತಿದ್ದವು. ಆನೆಕಿವಿಯಂತಿದ್ದ ಭುಜಕೀರ್ತಿ, ಗುಡಿಯ ಕಳಸವನ್ನೇ ತಂದಿಟ್ಟಂತಹ ಕಿರೀಟಗಳು ಗಲಗಲ ಅಲುಗುತ್ತಿದ್ದವು. ಇವು ಕುಣಿವಾಗ ಬೀಳದಂತೆ ದೇಹದ ಬೇರೆಬೇರೆ ಭಾಗಕ್ಕೆ ಸೆಣಬಿನ ಸುತ್ತಲಿಗಳಲ್ಲಿ ಕಟ್ಟಲಾಗಿತ್ತು. ಅವು ಕುಣಿತದಲ್ಲಿ ಸಡಿಲಗೊಂಡಾಗ, ಸಹಾಯಕರು ಹುಲ್ಲಹೊರೆಯನ್ನು ಅಂಬಳ್ಳಿಯಲ್ಲಿ ಬಿಗಿಯುವಂತೆ ಪುನಃ ಕಟ್ಟುತ್ತಿದ್ದರು. ಕರಾವಳಿಯ ಯಕ್ಷಗಾನದಲ್ಲೂ ಕೇರಳದ ಕಥಕ್ಕಳಿಯಲ್ಲೂ ಭೂತದ ಕೋಲಗಳಲ್ಲೂ ವೇಷಗಾರಿಕೆ ಕುಣಿತಕ್ಕೆ ಅಡ್ಡಿಯಾಗದಂತೆ ರೂಪುಗೊಂಡಿದೆ. ಇಲ್ಲಿ ನಡೆದಾಡುವುದಕ್ಕು ಅವು ತೊಡರೊಡ್ಡುತ್ತಿದ್ದವು. ಕೀಚಕ-ಭೀಮರ ಯುದ್ಧಕ್ಕೆ ಜಾಗವಿಲ್ಲದಾಗ, ಒಬ್ಬ ಮಾಜಿ ಪೈಲವಾನನು, ರಂಗಮಂಚದ ಮೇಲೆ ಜಮಾಯಿಸಿದ್ದ ಅಭಿಮಾನಿಗಳನ್ನೆಲ್ಲ ಕೆಳಗೆಳೆದು ಹಾಕಿದನು. ಆದರೂ ನಟರ ಬಂಧುಗಳು ಆದಷ್ಟೂ ವೇದಿಕೆಯಲ್ಲೆ ಜಾಗಮಾಡಿಕೊಂಡು ಕಿಕ್ಕಿರಿದು ನಿಲ್ಲುತ್ತಿದ್ದರು. ಆತ ಕುಣಿದು ಸುಸ್ತಾಗಿ ಫೈಬರ್ ಚೇರಿನಲ್ಲಿ ಕುಳಿತೊಡನೆ, ಬಾಕ್ಸಿಂಗಿನಲ್ಲಿ ಕೋಚು ಬಾಕ್ಸರನಿಗೆ ಮಾಡುವ ಸೇವೆಯಂತೆ, ಸಿಟ್ರಾ ಕುಡಿಸುವುದು, ಗಾಳಿ ಹಾಕುವುದು, ನಿಂಬೆಹಣ್ಣು ಮೂಗಿಗೆ ಹಿಡಿವುದು, ಎದೆಗೆ ಪಿನ್ನಿನಿಂದ ಲಗತ್ತಿಸಿದ ನೋಟುಗಳನ್ನು ಸರಿಮಾಡುವುದು ಮುಂತಾಗಿ ಶೈತ್ಯೋಪಚಾರ ನಡೆಸುತ್ತಿದ್ದರು.

ನಾಟಕದ ಹಸ್ತಪ್ರತಿ ಹಿಡಿದಿದ್ದ ಕಾಲೇಜು ತರುಣನೊಬ್ಬ ಪಾತ್ರಧಾರಿಗಳ ಹಿಂದೆ ಸುಳಿಯುತ್ತ, ಡೈಲಾಗಿನ ಮೊದಲ ಪದವನ್ನು ನೆನಪಿಸಿಕೊಡುತ್ತಿದ್ದನು. ಹಾಡಿನ ಅಥವಾ ಸಂಭಾಷಣೆಯ ಸಾಹಿತ್ಯವು ಪ್ರೇಕ್ಷಕರಿಗೆ ತಿಲಮಾತ್ರವೂ ಕೇಳಿಸುತ್ತಿರಲಿಲ್ಲ. ನಾಟಕದ ಕಥೆಯ ಬಗ್ಗೆ ಪ್ರೇಕ್ಷಕರಲ್ಲಿ ಯಾರಿಗೂ ಆಸಕ್ತಿಯಿದ್ದಂತೆ ಕಾಣಲಿಲ್ಲ. ತಮ್ಮ ನಟನೆಯ ಗುಣಮಟ್ಟದ ಬಗ್ಗೆ ನಟರಿಗೂ ಅರಿವಿರಲಿಲ್ಲ. ಮೊಳಕಾಲನ್ನು ಗಲ್ಲದವರೆಗೆ ಎತ್ತಿತಂದು, ಹಲಗೆಗೆ ಪಾದವನ್ನು ಅಪ್ಪಳಿಸಿ ``ಎಲೆಲೆಲೆಲೆ ಭೀಮಾ ನರಕುಲ ಅಧಮಾ, ಎಲೆಲೆಲೆಲೆಲೆ ದುಶ್ಯಾಸನಾ ಕುರುಕುಲ ಅಪಮಾನಾ...'' ಮುಂತಾದ ಪ್ರಾಸಬದ್ಧ ಹೇಳಿಕೆಗಳನ್ನು ಮಾತ್ರ ಚೆನ್ನಾಗಿ ಹೇಳುತ್ತಿದ್ದರು. ಕೆಲವೊಮ್ಮೆ ಪ್ರೇಕ್ಷಕರೇ ನಿರ್ದೇಶನದ ಹೊಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದರು. ಭಾಗವತನು ಸರಿಯಾಗಿ ಪಾತ್ರಧಾರಿಗಳಿಗೆ ನಾಟಕ ಕಲಿಸಿಲ್ಲವೆಂದೂ ಮೂರು ತಿಂಗಳ ಖರ್ಚು ಕೊಟ್ಟಿದ್ದು ವ್ಯರ್ಥವಾಯಿತೆಂದೂ ಒಬ್ಬ ಎದ್ದುನಿಂತು ಆಪಾದಿಸಿದನು. ಇದೊಂದು ಸಲ ಸುಧಾರಿಸಿಕೊಳ್ಳಬೇಕೆಂದೂ, ಶಾಂತರೀತಿಯಿಂದ ವರ್ತಿಸಬೇಕೆಂದೂ ಭಾಗವತನು ಪರಿಪರಿಯಾಗಿ ವಿನಂತಿಸಿದನು. ಟಿವಿ ಸೀರಿಯಲ್ಲುಗಳಲ್ಲಿ ಕಥೆ ಕಮ್ಮಿ ಜಾಹಿರಾತು ಜಾಸ್ತಿ ಎನ್ನುವಂತೆ, ಆಟದ ಆಜುಬಾಜು ಜರುಗುತ್ತಿದ್ದ ಘಟನೆಗಳೇ ಇಲ್ಲಿ ಪ್ರಧಾನವಾಗಿದ್ದವು.

ಇಲ್ಲಿನ ದೊಡ್ಡಾಟಗಳು ಬೆಳವಣಿಗೆ ನಿಂತ ವ್ಯಕ್ತಿಯಂತಾಗಿವೆಯೇ? ಹೊಸಕಾಲದ ಪ್ರತಿಭೆಗಳು ಸೇರಿ, ಪರಂಪರೆಯನ್ನು ಅನುಸಂಧಾನ ಮಾಡಿ ಸಮಕಾಲೀನಗೊಳಿಸದಿದ್ದರೆ, ಅದರ ಚೈತನ್ಯವೆಲ್ಲ ಸೋರಿಹೋಗಿ ಕಂಕಾಲವಷ್ಟೆ ಉಳಿಯುತ್ತದೆ. ಕರಾವಳಿಯ ಯಕ್ಷಗಾನಗಳು ತಮ್ಮ ಪ್ರಯೋಗಶೀಲತೆಯಿಂದ ವೃತ್ತಿಪರತೆ ಮೈಗೂಡಿಸಿಕೊಂಡು ಎಷ್ಟು ಜೀವಂತವಾಗಿವೆ. ಅಲ್ಲಿ ಕೆಲವು ಮೇಳಗಳಿಗೆ ಈಗ ಬುಕಿಂಗ್ ಮಾಡಿದರೆ, ಹತ್ತು ವರ್ಷ ಕಾಯಬೇಕೆಂದು ಹೇಳಲಾಗುತ್ತದೆ. ವ್ಯವಹಾರ ಪ್ರಜ್ಞೆ ಜಾಗೃತವಾಗಿರುವ ಕರಾವಳಿಯಲ್ಲಿ, ಯಕ್ಷಗಾನ `ಕಲೋದ್ಯಮ’ವೂ ಆಗಿದೆ. ಆದರೆ ಇಷ್ಟೆ ಜೀವಂತವಾಗಿದ್ದ ಬಯಲಾಟ ಅಳವಿನಂಚಿಗೆ ನಿಂತಿದೆ. ಇದು ಮಾರುಕಟ್ಟೆಯ ಯುಗದಲ್ಲಿ ಸಾಂಪ್ರದಾಯಿಕ ರೈತಾಪಿತನ ಹಿಂದುಳಿದು ಸ್ವಹತ್ಯೆಯ ಹಾದಿ ಹಿಡಿದಿರುವಂತೆ ತೋರುತ್ತದೆ.

ಬಳ್ಳಾರಿ ಜಿಲ್ಲೆಯ ವೃತ್ತಿರಂಗಭೂಮಿ ಬಳ್ಳಾರಿ ರಾಘವ, ಜೋಳದರಾಶಿ, ದುರ್ಗಾದಾಸ್, ಸುಭದ್ರಮ್ಮ ಮನ್ಸೂರ್, ಬೆಳಗಲ್ ವೀರಣ್ಣ ಮುಂತಾದ ಪ್ರತಿಭಾವಂತ ಕಲಾವಿದರನ್ನು ಕಂಡಿದೆ. ಆದರೆ ಇಲ್ಲಿ ಕಂಪನಿ ಮತ್ತು ಜನಪದ ರಂಗಭೂಮಿಗಳ ನಡುವೆ ಕಲಾ ವಿನಿಮಯ ನಡೆಯಲಿಲ್ಲ. ರೈತಾಪಿಗಳೂ ಕೂಲಿಕಾರರೂ ಆದವರು, ನಾಟಕದ ಮೇಷ್ಟರನ್ನು ನೇಮಿಸಿಕೊಂಡು, ದುಡಿತದ ಏಕತಾನತೆಯಿಂದ ಹೊರಬರಲು ಬಿಡುವಿನಲ್ಲಿ ತಾಲೀಮು ಮಾಡಿ ಹವ್ಯಾಸಿ ನಟರಾಗಿ ದೊಡ್ಡಾಟ ಆಡುವರು. ಈ ಆಟಗಳಲ್ಲಿ ವೃತ್ತಿಪರ ರಂಗಭೂಮಿಯ ಕಲಾತ್ಮಕ ಶಿಸ್ತನ್ನು ನಿರೀಕ್ಷಿಸಲಾಗದು. ಆದರೆ ವಾದ್ಯಗಳ ಅಬ್ಬರದಲ್ಲಿ ಹಾಡಿನೊಳಗಿನ ಸಾಹಿತ್ಯವೇ ಸಂವಹನವಾಗುತ್ತಿಲ್ಲ.

ಕಾರಂತರಂತಹ ಆಧುನಿಕ ಪ್ರಜ್ಞೆಯ ಪ್ರಯೋಗಶೀಲ ಕಲಾವಿದನ ಸಹವಾಸದಿಂದ ಯಕ್ಷಗಾನದಲ್ಲಿ ಹೊಸ ಜೀವರಸ ಆಡಿತು. ಅದರಂತೆ ದೊಡ್ಡಾಟಗಳಿಗೂ ಇಲ್ಲಿ ಅನೇಕ ವಿದ್ವಾಂಸರು ಹೊಸನೆತ್ತರು ಕೂಡಿಸಲು ಯತ್ನಿಸಿದರು. ಆದರೂ ಅವು ಪಡೆಯಬೇಕಾದಷ್ಟು ಚೈತನ್ಯವನ್ನು ಪಡೆಯುತ್ತಿಲ್ಲ. ಹೊರಗಿನ ರಕ್ತಕ್ಕೆ ಪುನಶ್ಚೇತನಗೊಳಿಸುವ ಕಸುವಿಲ್ಲವೊ, ಪಡೆದ ರಕ್ತವನ್ನು ತನ್ನದಾಗಿಸಿಕೊಳ್ಳುವ ಒಳತಾಕತ್ತು ಈ ರಂಗಪ್ರಕಾರಕ್ಕೆ ಇಲ್ಲವೊ ಅಥವಾ ಯಕ್ಷಗಾನದ ಕಣ್ಣಲ್ಲಿ ಇವನ್ನು ನಿಸ್ಸತ್ವವೆಂದು ನಾನೇ ತಪ್ಪು ತಿಳಿದಿರುವೆನೊ? ಆಟವೊಂದು ತನ್ನ ಕಲಾವಂತಿಕೆ ಕಳೆದುಕೊಂಡೂ ಮುಂದುವರೆಯುತ್ತಿದ್ದರೆ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆಯಂತೂ ಕಾಡುತ್ತಿದೆ.

ಮಂಗಳವಾರ, ಜನವರಿ 23, 2018

ತಾಜಮಹಲ್


Image result for taj mahal


ಉತ್ತರಪ್ರದೇಶ ರಾಜ್ಯದ ಆಗ್ರಾ ಜಿಲ್ಲೆಯಲ್ಲಿ ಹರಿಯುವ ಯಮುನೆಯ ತಡದಲ್ಲಿ ಸುಮಾರು 17 ಹೆಕ್ಟೇರ್ ಪ್ರದೇಶದಲ್ಲಿ  ಮೊಘಲ್ ಗಾರ್ಡನ್ ಪ್ರದೇಶದಲ್ಲಿ ನಿರ್ಮಿಸಲಾದ ತಾಜಮಹಲ್ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಮೊಘಲ್ ದೊರೆ ಷಹಜಹಾನ್ ತಮ್ಮ ಪತ್ನಿ ಮುಮ್ತಾಜ್ ಮಹಲ್ ನೆನಪಿಗೆ ಕಟ್ಟಿಸಿದ ಈ ಪ್ರೇಮಸೌಧದ ನಿರ್ಮಾಣವನ್ನು 1632ರಲ್ಲಿ ಆರಂಭಿಸಿ 1648ರಲ್ಲಿ ಪೂರ್ಣಗೊಳಿಸಲಾಯಿತು.

ತಾಜ್ ಮಹಲ್ ಕಟ್ಟಡದ ದಕ್ಷಿಣಾಪಥ, ಹೊರಾಂಗಣ, ಮತ್ತು ಪ್ರಾರ್ಥನಾ ಗೃಹಗಳನ್ನು 1653ರಲ್ಲಿ ಸೇರ್ಪಡೆಗೊಳಿಸಲಾಯಿತು. ಪವಿತ್ರ ಕುರಾನ್ ಗ್ರಂಥದ ಹಲವಾರು ಉಲ್ಲೇಖಗಳನ್ನು ಶಿಲಾಲೇಖದಲ್ಲಿ ಮೂಡಿಸಲಾಗಿದ್ದು, ಈ ಸ್ಮಾರಕಭವನಕ್ಕೆ ಧಾರ್ಮಿಕ ಆಯಾಮವನ್ನು ನೀಡಿದೆ.  ಈ ಭವನ ನಿರ್ಮಾಣಕ್ಕೆ ಇಡಿಯ ಮೊಘಲ್ ಪ್ರಾಂತ್ಯದ ಖ್ಯಾತ ಶಿಲ್ಪಿಗಳು ಮತ್ತು ಕೆಲಸಗಾರರನ್ನು ಕರೆಸಲಾಗಿತ್ತು. ಅಷ್ಟೇ ಅಲ್ಲದೆ, ಮಧ್ಯ ಏಷಿಯಾ ಮತ್ತು ಇರಾನ್ ದೇಶಗಳಿಂದಲೂ ತಜ್ಞ ನಿರ್ಮಾಣ ತಜ್ಞರು ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಉಸ್ತಾದ್ ಅಹ್ಮದ್ ಲಾಹೋರಿ ಎಂಬ ವಿನ್ಯಾಸಕಾರ ನೇತೃತ್ವದಲ್ಲಿ ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಲಾಯಿತು.

ತಾಜ್ಮಹಲ್ ಕಟ್ಟಡದ ವಿನ್ಯಾಸ ನೈಸರ್ಗಿಕ ಸೊಬಗಿಗೆ ಇನ್ನಷ್ಟು ಇಂಬು ನೀಡುವಂತೆ ರೂಪಿಸಲಾಗಿದ್ದು, ಹಸಿರು ಹುಲ್ಲಿನ ಹಾಸು, ಕೆಂಪು ಪಾದಚಾರಿ ಮಾರ್ಗಗಳು, ಸುತ್ತ ನಿಂತ ಮಿನಾರು ಮತ್ತು ಕಮಾನುಗಳು,  ಕಟ್ಟಡದ ಸುತ್ತಲೂ ಆವರಿಸಿ ನಿಂತ ನೀಲಾಗಸ, ವಿವಿಧ ಕಾಲಮಾನಗಳಲ್ಲಿ ಬದಲಾಗುವ ವಾತಾವರಣಕ್ಕೆ ತಕ್ಕಂತೆ ತನ್ನ ವಿಶಿಷ್ಟತೆಯನ್ನು ಮೆರೆಯುತ್ತದೆ. ಅಮೃತ ಶಿಲೆಗಳ ಮೇಲೆ ಮೂಡಿಸಿರುವ ಚಿತ್ತಾರಗಳು ಕಟ್ಟಢದ ಹೊರಾಂಗಣವನ್ನು ಇನ್ನಷ್ಟು ಸುಂದರವಾಗಿಸಿದೆ. ಇಂಡೋ ಇಸ್ಲಾಮಿಕ್ ಶೈಲಿಯ ಅನೇಕ ಸಾಧ್ಯತೆಗಳನ್ನು ಒಳಗೊಂಡಿರುವ ಈ ಸ್ಮಾರಕವು ತನ್ನ ವಿನ್ಯಾಸದಲ್ಲಿ ಮೂಡಿಸಿರುವ ಗೋಡೆಗಳು ಮತ್ತು ವಿನ್ಯಾಸಗಳು ನೆರಳು ಬೆಳಕಿನ ಒಟ್ಟಂದದ ಅಮೂರ್ತ ನಿರ್ಮಾಣವಾಗಿದೆ.

ತಾಜಮಹಲ್ ಕಟ್ಟಡದ ಗುಮ್ಮಟವನ್ನು ಕಟ್ಟಡದ  ಕೇಂಧ್ರವಾಗಿರಿಸದೆ ಹಿನ್ನೆಲೆಯಲ್ಲಿ ರೂಪಿಸಿರುವುದು ಕಟ್ಟಡವನ್ನು ಹೊರಾಂಗಣದಿಂದ ವೀಕ್ಷಿಸುವವರಿಗೆ ಹೆಚ್ಚಿನ ದೃಶ್ಯ ವಿಸ್ತಾರವನ್ನು ಒದಗಿಸಿಕೊಡುತ್ತದೆ. ಕಟ್ಟಡದ ಸುತ್ತಲೂ ಅಷ್ಟ ಭುಜಾಕೃತಿಯ ಮಿನಾರುಗಳು ಈ ಕಟ್ಟಡದ ಒಟ್ಟಾರೆ ಸೊಬಗನ್ನು ಚೌಕಟ್ಟಿನಲ್ಲಿ ಕಟ್ಟಿಕೊಡುತ್ತವೆ.  ಈ ಕಟ್ಟಡವು ಮೊಘಲ್ ದೊರೆ ಷಹಾಜಹಾನ್ ಮತ್ತು ಆತನ ಪತ್ನಿ ಮುಮ್ತಾಜ್ ಮಹಲ್ ಅವರ ಸಮಾಧಿಗಳನ್ನು ಒಳಗೊಂಡಿದ್ದು, ಕುಶಲ ಕರ್ಮಿಗಳಿಂದ ಚಂದವಾದ ವಿನ್ಯಾಸಗಳಿಂದ ಹೂವಿನ ಅಲಂಕಾರಗಳ ಕುಸುರಿ ಕೆಲಸಗಳಿಂದಾಗಿ ಮನ ಸೆಳೆಯುತ್ತವೆ. ಸಮಾಧಿಯ ಮೇಲೆ ಅಲಂಕರಿಸಲಾದ ಹೂವಿನ ಮತ್ತು ಎಲೆಗಳ ವಿನ್ಯಾಸವು ಸಹಜವಾದುದೇನೋ ಎಂಬಷ್ಟು ಸುಂದರವಾಗಿ ಮೂಡಿದ್ದು, ನೋಡುಗರ ಮನಸೆಳೆಯುತ್ತವೆ. ಮುಮ್ತಾಜ್ ಮಹಲ್ ಅವರ ಸಮಾಧಿಯ ಪಶ್ಚಿಮಕ್ಕೆ ಷಹಜಹಾನ್ ಅವರ ಸಮಾಧಿಯನ್ನು 30 ವರ್ಷಗಳ ನಂತರ  ನಿರ್ಮಿಸಲಾಗಿದ್ದು, ಈ ಕಟ್ಟಡಗಳ ಸುತ್ತ ನಿರ್ಮಿಸಲಾಗಿರುವ ನಾಲ್ಕು ಮಿನಾರುಗಳು ಕಟ್ಟಡಕ್ಕೆ ವಿಸ್ತಾರವಷ್ಟೇ ಅಲ್ಲದೆ ದೃಶ್ಯ ಸೊಬಗಿಗೆ ಚೌಕಟ್ಟನ್ನು ರೂಪಿಸಿದೆ.

ತಾಜಮಹಲ್ ಕಟ್ಟಡವು ವಾಸ್ತುಶಿಲ್ಪ ಅಧ್ಯಯನಕಾರರಿಗೆ ಒಂದು ಅಧ್ಯಯನಶೀಲ ನಿರ್ಮಾಣವಾಗಿದ್ದು, ಕಟ್ಟಡದ ಕೇಂದ್ರಕ್ಕೆ ಪೂರಕವಾಗಿ ವಿನ್ಯಾಸಗಳನ್ನು ರೂಪಿಸಲಾಗಿರುತ್ತದೆ. ಕಟ್ಟಡವನ್ನು ಸುಣ್ಣ- ಕೆಂಪು ಮರಳುಗಲ್ಲು, ಇಟ್ಟಿಗೆ ಅಚ್ಚುಗಾರೆಯಿಂದ ನಿರ್ಮಾಣ ಮಾಡಲಾಗಿದ್ದು, ಕಟ್ಟಡದ ಹೊರಮೈಯ್ಯನ್ನು ಅಮೃತಶಿಲೆಯಿಂದ ಆವರಿಸಲಾಗಿದ್ದು, ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದೆ.

ತಾಜಮಹಲ್ ಇಂದಿಗೂ ಪ್ರೇಮಿಗಳ ಕನಸಿನ ಸೌಧವಾಗಿದೆ, ಮತ್ತು ಪ್ರೇಮದ ಆದರ್ಶಕ್ಕೆ ರೂಪಕವಾಗಿದೆ. ತಾಜಮಹಲ್ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರರು  ‘ಕಾಲಘಟ್ಟದ ಕೆನ್ನೆಯ ಮೇಲೆ ಸರಿದ ಸಮಯದ ಅಶ್ರುಬಿಂದು’ (The Tear Drop on the Cheek of Time)  ಎಂದು ವರ್ಣಿಸಿದ್ದಾರೆ.

ಈ ಕಟ್ಟಡವನ್ನು  ವಿಶ್ವ ಸಂಸ್ಥೆಯ ಅಂಗವಾದ ಯುನೆಸ್ಕೋ 1983ರಲ್ಲಿ ವಿಶ್ವ ಪರಂಪರೆಯಲ್ಲಿ ಸೇರಿಸಿ ಜಗತ್ತಿನ ಮಾನ್ಯತೆಯನ್ನು ಒದಗಿಸಿ ಕೊಟ್ಟಿದೆ. ಈ ಪ್ರೇಮಸೌಧವು ಕಳೆದ ಐದು ಶತಮಾನಗಳಿಂದಲೂ ದೇಶಕಾಲದ ಜನರ ಕುಶಲತೆ, ಆಡಳಿತಗಾರರ ಕಲಾಪ್ರೇಮ, ಮತ್ತು ನಿರ್ಮಾಣ ಕೌಶಲ್ಯಗಳಿಗೆ ಸಾಕ್ಷಿಯಾಗಿ ನಿಂತಿದೆ.

ಸೌಜನ್ಯ: http://kanaja.in/?p=128002

ಶ್ರೇಯಾಂಕಗಳ ದಬ್ಬಾಳಿಕೆ



ಅನುಶಿವಸುಂದರ್ 
ಸುಲಭವಾಗಿ ವ್ಯವಹಾರೋದ್ಯಮ ಮಾಡಬಲ್ಲ ಸೂಚ್ಯಂಕವು (ಈಸ್ ಆಫ್ ಡೂಯಿಂಗ್ ಬಿಸಿನೆಸ್- ಇಡಿಬಿ) ಏಕೆ ಇನ್ನೂ ಅಸ್ಥಿತ್ವದಲ್ಲಿದೆ?
Image result for survey

ವಿಶ್ವಬ್ಯಾಂಕು ಪ್ರಕಟಿಸುವ ಜನಪ್ರಿಯವಾದ  ಆದರೆ ಗಟ್ಟಿತರ್ಕವಿಲ್ಲದ ಸುಲಭವಾಗಿ ಉದ್ಯಮ ಮಾಡಬಲ್ಲ ಸೂಚ್ಯಂ (ಈಸ್ ಆಫ ಡೂಯಿಂಗ್ ಬಿಸಿನೆಸ್ ಇಂಡೆಕ್ಸ್- ಇಡಿಬಿ)ವು ಮತ್ತೊಮ್ಮೆ ತೀವ್ರವಾದ ವಿಮರ್ಶೆಗೆ ಗುರಿಯಾಗಿದೆ. ವಿಶ್ವಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ನ ಪಾಲ್ ರೋಮೆರ್ ಅವರು ಇಡಿಬಿ ಸೂಚ್ಯಂಕವನ್ನು ಒಳಗೊಂಡಂತೆ ವಿಶ್ವಬ್ಯಾಂಕು ಹೊರತರುವ ವ್ಯವಹಾರೋದ್ಯಮ ನಿರ್ವಹಣೆ (ಡೂಯಿಂಗ್ ಬಿಸಿನೆಸ್)ವರದಿಯ ಬಗ್ಗೆ ತೀವ್ರವಾದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ವಿಶೇಷವಾಗಿ ಸೂಚ್ಯಂಕದಲ್ಲಿ ಚಿಲಿಯ ಸ್ಥಾನಮಾನ ಕುಸಿದಿರುವ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಒಂದಷ್ಟು ಕಾರಣ ಕಳೆದ ಕೆಲವು ವರ್ಷಗಳಲ್ಲಿ ಸೂಚ್ಯಂಕವನ್ನು ತಯಾರು ಮಾಡುವ ವಿಧಾನದಲ್ಲಿ ಬಂದಿರುವ ಬದಲಾವಣೆಗಳು. ೨೦೦೬ರಿಂದ ಸೂಚ್ಯಂಕದಲ್ಲಿ ಚಿಲಿಯ ಸ್ಥಾವು ೨೫-೫೭ರ ನಡುವೆ ಹೊಯ್ದಾಡುತ್ತಿದೆ. ಚಿಲಿಯ ಸಮಾಜವಾದಿ ಪಕ್ಷದ ಮಿಚೆಲ್ ಬ್ಯಾಷೆಲಿಯ ಅಧಿಕಾರವಿದ್ದಾಗ ಸೂಚ್ಯಂಕವು ಕುಸಿದಿದ್ದು, ಸಾಂಪ್ರದಾಯಿಕ ಪಕ್ಷದ ಸೆಬಾಸ್ಟಿನ್ ಪಿನೇರಾದ ಆಡಳಿತದಲ್ಲಿ ಸೂಚ್ಯಂಕವು ಸುಧಾರಣೆಯನ್ನು ತೋರಿಸಿದೆ. ರೋಮೆರ್ ನಿರೀಕ್ಷಿತವಾದದ್ದನ್ನೇ ಪ್ರತಿಪಾದಿಸಿದ್ದಾರೆ: ಒಂದು ಸೂಚ್ಯಂಕದ ಲೆಕ್ಕಾಚಾರವನ್ನು ಮಾಡುವ ಅಂಶಗಳು ಬದಲಾದರೆ ಅಂದರೆ ಗಣನೆ ಮಾಡುವ ವಿಧಾನವು ಬದಲಾದರೆ ಅಂಥಾ ಶ್ರೇಯಾಂಕವನ್ನು ಹಳೆಯ ಪದ್ಧತಿಯನ್ನು ಆಧರಿಸಿರುವ ಹಿಂದಿನ ವರ್ಷಗಳ ಶ್ರೇಯಾಂಕಗಳ ಜೊತೆ ಹೋಲಿಸಲು ಸಾಧ್ಯವಿಲ್ಲ. ಆದ್ದರಿಂದ ವಿಶ್ವಬ್ಯಾಂಕು ಒಂದು ನಿರ್ದಿಷ್ಟ ಪದ್ಧತಿಯನ್ನೇ ಅನುಸರಿಸಿ ಕಳೆದ ನಾಲ್ಕು ವರ್ಷಗಳ ಸೂಚ್ಯಂಕಗಳನು ತಯಾರಿಸಿ ಆಯಾ ದೇಶಗಳ ನಾಲ್ಕು ವರ್ಷಗಳ ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ. ರೋಮರ್ ಅವರು ವ್ಯಕ್ತಪಡಿಸಿರುವ ಅನುಮಾನವು ಸ್ವಾಗತಾರ್ಹವಾದುದಾಗಿದೆ. ಆದರೂ ವಿಶ್ವಬ್ಯಾಂಕ್ ಹೊರತರುವ ವರದಿಯ ಬಗ್ಗೆ  ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಇಡಿಬಿ ಸೂಚ್ಯಂಕದ ಲೆಕ್ಕಾಚಾರದಲ್ಲಿ ಗಂಭೀರವಾದ ಸಮಸ್ಯೆಗಳಿರುವ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ.

ವ್ಯವಹಾರೋದ್ಯಮ ನಿರ್ವಹಣೆ (ಡೂಯಿಂಗ್ ಬಿಸಿನೆಸ್) ವರದಿಯನ್ನು ವಿಶ್ವಬ್ಯಾಂಕು ಮೊಟ್ಟಮೊದಲು ಪ್ರಕಟಿಸಿದ್ದು ೨೦೦೩ರಲ್ಲಿ. ಒಂದು ದೇಶzಲ್ಲಿ ಉದ್ಯಮ ನಡೆಸಲು ಸೂಕ್ತವಾದ ಸನ್ನಿವೇಶವಿದೆಯೇ ಎಂಬುದನ್ನು ಅಳೆಯಲು ಅದು ಆಯಾ ದೇಶಗಳ ಉದ್ಯಮಗಳ ಬಗೆಗಿನ ಕಾನೂನುಗಳು ಮತ್ತು ಇತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಒಂದು ದೇಶದಲ್ಲಿನ ಅತಿದೊಡ್ಡ ಅಥವಾ ಎರಡನೇ ಅತಿದೊಡ್ಡ ಉದ್ಯಮ ನಗರಿಯಲ್ಲಿ ಒಂದು ಮಧ್ಯಮ ಗಾತ್ರದ ಉದ್ಯಮವೊಂದಕ್ಕೆ ಅನ್ವಯವಾಗುವ ನೀತಿ ನಿಯಮಗಳನ್ನು ವರದಿಯು ಗಣನೆಗೆ ತೆಗೆದುಕೊಳ್ಳುತ್ತದೆ. ಅದು ಸಂಘಟಿತ ಕ್ಷೇತ್ರದ ಬಗ್ಗೆ ಘೋಷಿತವಾದ ನೀತಿಗಳನ್ನು ಅಭ್ಯಸಿಸುತ್ತದೆಯೇ ವಿನಃ ದೇಶ-ದೇಶಗಳ ನಡುವೆ ಇರುವ ಭಿನ್ನತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀತಿಗಳ ಅನುಷ್ಠಾನದ ಪರಿಯನ್ನೂ ಅಥವಾ  ಉದ್ಯಮಗಳ ದೈನಂದಿ ರೂಢಿಪದ್ಧತಿಯನ್ನು ಪರಿಗಣಿಸುವುದಿಲ್ಲ. ಎಲ್ಲಾ ಸೂಚ್ಯಂಕಗಳನ್ನು ಒಟ್ಟುಮಾಡಿ ಪ್ರತಿದೇಶಕ್ಕೆ ಸುಲಭವಾಗಿ ವ್ಯವಹಾರೋದ್ಯಮ ನಡೆಸಬಲ್ಲ - ಇಡಿಬಿ- ಶ್ರೇಯಾಂಕಗಳನ್ನು ಕೊಡುವುದನ್ನು  ವಿಶ್ವಬ್ಯಾಂಕು ೨೦೦೬ರಿಂದ ಪ್ರಾರಂಭಿಸಿತು. ತಾನು ವಿವಿಧ ದೇಶಗಳಿಗೆ ಕೊಡುತ್ತಿದ್ದ ಶರತ್ತಿನ ಸಾಲ ಸಹಕಾರಕ್ಕೂ ವಿಶ್ವಬ್ಯಾಂಕು ಶ್ರೇಯಾಂಕಗಳನ್ನೇ ಆಧರಿಸಲು ಪ್ರಾರಂಭಿಸಿತು. ಆದರೆ ಇದರ ಬಗ್ಗೆ ತೀವ್ರವಾದ ವಿಮರ್ಶೆಗಳು ಪ್ರಾರಂಭವಾದ ಮೇಲೆ ೨೦೦೯ರಿಂದ ಪದ್ಧತಿಯನ್ನು ನಿಲ್ಲಿಸಿತು. ವಾಸ್ತವವಾಗಿ ೨೦೧೩ರಲ್ಲಿ ವಿಶ್ವಬ್ಯಾಂಕಿನ ಆಗಿನ ಅಧ್ಯಕ್ಷರಾದ ಜಿಮ್ ಯಾಂಗ್ ಕಿಮ್ ಅವರು ವ್ಯವಹಾರ ನಿರ್ವಹಣಾ ವರದಿಯ ಕ್ಷಮತೆಯ ಬಗ್ಗೆ ಅಧ್ಯಯನ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ನೇಮಿಸಿದರು ಮತ್ತು ಇನ್ನುಮುಂದೆ ಡೂಯಿಂಗ್ ಬಿಸಿನೆಸ್ವರದಿಯನ್ನು ಪ್ರಕಟಿಸಬಾರದೆಂದೂ ಹೇಳಿದ್ದರು. ಬಗೆಯ ಸೂಚ್ಯಂಕಗಳು ದೇಶಗಳ ನಡುವಿನ ಪರಿಸ್ಥಿಗಳನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸಲು ಸಹಕಾರಿಯಾಗಬಲ್ಲದೇ ವಿನಃ, ಎಲ್ಲಾ ಸೂಚ್ಯಂಕಗಳನ್ನು ಒಟ್ಟುರಾಶಿಮಾಡಿ ಯಾವುದೇ ಶ್ರೇಯಾಂಕ ಕೊಡುವುದು ಸರಿಯಾದುದಲ್ಲ ಎಂದು ಸ್ವತಂತ್ರ ವರದಿಯು ಸ್ಪಷ್ಟವಾಗಿ ಹೇಳಿತ್ತು. ಆದರೂ ಶ್ರೇಯಾಂಕಗಳನ್ನು ಕೊಡುವ ಪದ್ಧತಿ ಮುಂದುವರೆಯಿತು.

ಅರ್ಥಶಾಸ್ತ್ರದಲ್ಲಿ ಮತ್ತು ಅಂಕಿಅಂಶ ಶಾಸ್ತ್ರದಲ್ಲಿ ಸೂಚ್ಯಂಕಗಳನ್ನು ರೂಪಿಸುವುದು ಒಂದು ಬಗೆಯ ಜಾಣತಂತ್ರವಾಗಿದೆ. ವಿಭಿನ್ನ ಬಗೆಯ ಗುಣಾಂಶಗಳುಳ್ಳ ವಿದ್ಯಮಾನದ ಬಗ್ಗೆ ಒಟ್ಟಂದದ ಚಿತ್ರಣವನ್ನು ಶ್ರೇಯಾಂಕಗಳು ನೀಡುತ್ತವೆ. ಪ್ರತಿಯೊಂದು ಗುಣಾಂಶದ ಆಯಾಮ ಮತ್ತು ತೂಕಗಳ ಬಗ್ಗೆ ಭಿನ್ನಭಿನ್ನ ಅಂದಾಜುಗಳು ಸಾಧ್ಯವಿರುವುದರಿಂದ ಎರಡು ಅಂಶಗಳ ಹೋಲಿಕೆಯಲ್ಲಿ ವಸ್ತುನಿಷ್ಟತೆ ಕಷ್ಟವಾಗುತ್ತದೆ. ಹಾಗೆಂದ ಮಾತ್ರಕ್ಕೆ ಎರಡು ಭಿನ್ನ ಅಂಶಗಳನ್ನು ಹೋಲಿಸುವ ಉತ್ತಮ ಹಾದಿಯಿಲ್ಲವೆಂದಲ್ಲ. ಆದರೂ ವ್ಯಕ್ತಿಯ ಮನೋನಿಷ್ಟ ಧೋರಣೆಗಳು ಪರಿಣಾಮಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಅದೇನೇ ಇದ್ದರೂ ಸೂಚ್ಯಂಕಗಳ ಶಕ್ತಿಯೇನೆಂದರೆ ಒಂದು ಸಂಕೀರ್ಣ ವಿದ್ಯಮಾನವನ್ನು ಅದು ತುಲನಾತ್ಮಕವಾಗಿ ಹೋಲಿಸಬಹುದಾದ ಸಂಖ್ಯೆಗಳಾಗಿ ಸರಳೀಕರಿಸುತ್ತದೆ. ಇದರ ಸರಳತೆಯೇ ಅದನ್ನು ಜನಪ್ರಿಯಗೊಳಿಸಿದೆ ಮತ್ತು ಶಕ್ತಿಶಾಲಿಯಾಗಿಸಿದೆ. ಆದರೆ ಅದೇ ವೇಳೆಯಲ್ಲಿ ಅಪಾಯಕಾರಿಯೂ ಆಗಿದೆ ಮತ್ತು ಹಲವೊಮ್ಮೆ ನೀತಿನಿರ್ಣಯಗಳನ್ನು ಕೈಗೊಳ್ಳುವ ಸಮಯದಲ್ಲಿ ತಪ್ಪಾದ ಉಪಕರಣವಾಗಿಯೂ ಬಳಸಲ್ಪಡುತ್ತಿದೆ. ಇದರರ್ಥ ಸಂಬಂಧಪ್ಪಟ್ಟವರೆಲ್ಲಾ ಶ್ರೇಯಾಂಕಗಳನ್ನು ನಂಬುತ್ತಾರೆಂದೇನೂ ಅಲ್ಲ. ಆದರೂ ಇದನ್ನು ಎಷ್ಟು ವಿಸ್ತೃತವಾಗಿ ಪ್ರಚಾರ ಮಾಡಲಾಗುತ್ತದೆಯೆಂದರೆ ಅದನ್ನು ಉಪೇಕ್ಷೆ ಮಾಡಲು ಸಾಧ್ಯವೇ ಆಗುವುದಿಲ್ಲ. ಶ್ರೇಯಾಂಕಗಳಲ್ಲಿ  ಆಗುವ ಅರ್ಥರಹಿತ ಬದಲಾವಣೆಗಳು ಎಷ್ಟು ಪ್ರಚಾರವನ್ನು ಪಡೆದುಕೊಳ್ಳುತ್ತವೋ ಅಷ್ಟು ಪ್ರಚಾರವನ್ನು ಶ್ರೇಯಾಂಕಗಳನ್ನು ನಿರ್ಧರಿಸುವ ಪದ್ಧತಿಯ ಬಗ್ಗೆ ನಡೆಯುವ ಚರ್ಚೆಗಳು ಪಡೆದುಕೊಳ್ಳುವುದಿಲ್ಲ.

ಶ್ರೇಯಾಂಕಗಳಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸರ್ಕಾರಗಳು ತಮ್ಮನೀತಿಗಳಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಇವೆಲ್ಲಕ್ಕಿಂತ ಆತಂಕಕಾರಿ ಸಂಗತಿಯಾಗಿದೆ. ಭಾರತ ಸರ್ಕಾರವು ತನ್ನ ೨೦೧೭-೧೮ರ ಕೈಗಾರಿಕಾ ನೀತಿ ಮತ್ತು ಪ್ರಚಾರದ ದಸ್ತಾವೇಜಿನಲ್ಲಿ ತನ್ನ ಮುಖ್ಯ ಗುರಿಯು ಇಡಿಬಿ ಸೂಚ್ಯಂಕದಲ್ಲಿ ೨೦೧೭-೧೮ರಲ್ಲಿ ೯೦ನೇ ಸ್ಥಾನವನ್ನು ಮತ್ತು ೨೦೨೦ರ ವೇಳೆಗೆ ೩೦ನೇ ಸ್ಥಾನವನ್ನೂ ಪಡೆಯುವುದಾಗಿದೆ ಎಂದು ಘೋಷಿಸಿಕೊಂಡಿದೆ. ಶ್ರೇಯಾಂಕದಲ್ಲಿ ಕಳೆದ ವರ್ಷ ಭಾರತದ ಸ್ಥಾನ ೧೩೦ ಇತ್ತು. ಈಗಾಗಲೇ ವರದಿಯಾಗಿರುವಂತೆ ವರ್ಷ ಭಾರತ  ೧೦೦ನೇ ಸ್ಥಾನಕ್ಕೆ ಬಡ್ತಿಯನ್ನು ಪಡೆದುಕೊಂಡಿದೆ. ಈಗ ಉದಾಹರಣೆಗೆ  ಉದ್ಯಮ ವ್ಯವಹಾರ ನಿರ್ವಹಣೆ ವರದಿಯಲ್ಲಿ ಉದ್ಯಮಿಗಳು ಸಾಲವನ್ನು ಸಲೀಸಾಗಿ ಪಡೆದುಕೊಳ್ಳುವ ಸೂಚ್ಯಂಕದಲ್ಲಿ ಭಾರತದ ಸ್ಥಾನ ೨೯ನೆಯದು. ಸೂಚ್ಯಂಕವು ಭಾರತದಲ್ಲಿ ಉದ್ಯಮಗಳಿಗೆ ಸುಲಭವಾಗಿ ಸಾಲ ದೊರೆಯುತ್ತದೆಂಬ ಅಭಿಪ್ರಾಯವನ್ನು ಮೂಡಿಸುತ್ತದೆ. ಆದರೆ ವ್ಯವಹಾರೋದ್ಯಮಿಗಳ  ಸಮೀಕ್ಷೆಯಲ್ಲಿ ಮತ್ತು ಸಂಶೋಧನಾತ್ಮಕ ಅಧ್ಯಯನಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಸಂಗತಿ ಕಂಡುಬಂದಿದೆ. ವಾಸ್ತವವಾಗಿ ಸೂಚ್ಯಂಕವು ಸಾಲದ ಲಭ್ಯತೆಯನ್ನು ಮಾಪನ ಮಾಡುವ ಸೂಚ್ಯಂಕವೇ ಅಲ್ಲ. ಅದು ಸಾಲ ನೀತಿಗಳ ವರದಿಗಾರಿಕಾ ವ್ಯವಸ್ಥೆಗಳ ಮತ್ತು ಸಾಲವನ್ನು ನೀಡುವಲ್ಲಿ ಸಹಪ್ರಮಾಣದ ಮತ್ತು ದಿವಾಳಿತನಕ್ಕೆ ಸಂಬಂಧಪಟ್ಟ ಕಾನೂನುಗಳ ಮಾಪನವನ್ನಷ್ಟೇ ಮಾಡುತ್ತದೆ. ವರದಿಯ ಬಗ್ಗೆ ನಡೆದ ಸ್ವತಂತ್ರ ಅಧ್ಯಯನವೂ ಸಹ ಅದು ದಾರಿತಪ್ಪಿಸುವಂಥ ಶೀರ್ಷಿಕಗಳನ್ನು ಬಳಸುವ ಮೂಲಕ ಆರ್ಥಿಕತೆಗಳ ಬಗ್ಗೆ ಜನರಲ್ಲಿ ತಪಾದ ಅಭಿಪ್ರಾಯವನ್ನು ಮೂಡಿಸುತ್ತಿದೆ ಎಂದು ದೂರಿದೆ ವರದಿಯಲ್ಲಿ ಬಳಸಲಾಗಿರುವ ಶೀರ್ಷಿಕೆಗಳನ್ನು ನೋಡಿದರೆ ಅವು ಆಯಾ ದೇಶಗಳ ಉದ್ಯಮ ಸಂಬಂಧೀ ವಾತಾವರಣದ ಬಗ್ಗೆ ಸಮಗ್ರ ಚಿತ್ರಣವನ್ನು ಕೊಡುತ್ತದೆಂಬ ಅಭಿಪ್ರಾಯವನ್ನು ಮೂಡಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಆಯಾ ದೇಶಗಳ ಅಧಿಕೃತ ನೀತಿನಿಯಮಗಳ ಬಗ್ಗೆಯಷ್ಟೇ ಹೇಳುತ್ತದೆ. ಶ್ರೇಯಾಂಕಗಳಲ್ಲಿ ಮೇಲ್ಚಲನೆಯನ್ನು ಪಡೆಯಬೇಕೆಂಬ ಉಮೇದಿನಲ್ಲಿ ಸರ್ಕಾರಗಳು ತಮ್ಮ ದೇಶದ ಜನತೆಯ ಆರ್ಥಿಕ ಅಗತ್ಯಗಳನ್ನು ಮರೆತು ಶ್ರೇಯಾಂಕದ ಸೂಚ್ಯಂಕಗನ್ನು ಉತ್ತಮಗೊಳಿಸಿಕೊಳ್ಳುವ ಕಡೆ ಮಾತ್ರ ಗಮನ ನೀಡುತ್ತವೆ. ಉತ್ತಮ ಶ್ರೇಯಾಂಕವಿದ್ದರೆ ಸುಲಭವಾಗಿ ವಿದೇಶಿ ನೇರ ಹೂಡಿಕೆಗಳು ಹರಿದು ಬರುತ್ತವೆ ಎಂಬ ತಿಳವಳಿಕೆಯೂ ಸಹ ಬಗೆಯ ಶ್ರೇಯಾಂಕದ ಅಡ್ಡಪರಿಣಾಮವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ದೇಶದಲ್ಲಿ ಸುಲಭವಾಗಿ ವ್ಯವಹಾರ ಉದ್ಯಮ ನಡೆಸಲು ಜಗತ್ತಿನಾದ್ಯಂತ ಒಂದೇ ನಿರ್ದಿಷ್ಟ ಬಗೆಯ ನೀತಿಯಿರಬೇಕು ಎಂಬ ತಿಳವಳಿಕೆಯು ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಬಗೆಯ ಅಭಿವೃದ್ಧಿ ಸನ್ನಿವೇಶಗಳಿರುತ್ತವೆ ಎಂಬುದನ್ನು ಕಡೆಗಣಿಸುತ್ತದೆ. ಒಂದು ವೇಳೆ ದೇಶಗಳು ತಮ್ಮ ದೇಶಗಳ ಅಗತ್ಯವನ್ನು, ಅಭಿವೃದ್ಧಿ ಮಾದರಿಯನ್ನೂ ಮರೆತು ಸೂಚ್ಯಂಕಗಳ ಅಗತ್ಯವನ್ನು ಪೂರಸಿದರೆ ಉತ್ತಮ ಶ್ರೇಯಾಂಕವು ದೊರೆಯಬಹುದು. ಇದು ಒಂದು ಫೂಟ್ಬಾಲ್ ಪಂದ್ಯದಲ್ಲಿ ಜಗತ್ತಿನ ಎಲ್ಲಾ ದೇಶಗಳು ಒಂದೇ ಬಗೆಯ ನಿಯಮವನ್ನು ಪಾಲಿಸಬೇಕು ಎಂದು ಕಡ್ಡಾಯ ಮಾಡಿದಂತಿದೆ. ವ್ಯವಹಾರ ಉದ್ಯಮ ನಿರ್ವಹಣೆ ವರದಿಯು ನೀತಿಗಳು ಒಂದು ದೇಶದ ನೀತಿ ಹೀಗೆ ಇರಬೇಕೆಂದಾಗಲೀ, ಮತ್ತು ಒಟ್ಟಾರೆ ಧೋರಣೆಯನ್ನಾಗಲೀ ಕಡ್ಡಾಯ ಮಾಡುವುದಿಲ್ಲವಾದರೂ ಶ್ರೇಯಾಂಕಗಳು ಮಾತ್ರ ನಿರ್ದಿಷ್ಟವಾಗಿ ಅದನ್ನೇ ಮಾಡುತ್ತವೆ. ಈಗ ಹುಟ್ಟಿಕೊಂಡಿರುವ ಹೊಸ ವಿವಾದದಿಂದಾಗಿ ವಿಶ್ವಬ್ಯಾಂಕು ತನ್ನ ಪದ್ಧತಿಯ ಬಗ್ಗೆ ಮತ್ತೊಮ್ಮೆ ಪುನರಾವಲೋಕನಮಾಡಿ ಇಡಿಬಿ ಸೂಚ್ಯಂಕವನ್ನೇ ಸಾರಾಸಗಟಾಗಿ ಕೈಬಿಡುವಂತಾಗಬೇಕು.

 ಕೃಪೆ: Economic and Political WeeklyJan 20,  2018. Vol. 53. No. 3
     (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )